Saturday, November 29, 2008

ಬಿದ್ದೀಯಬೆ ಮುದುಕಿ

ಶರೀಫರ ಹಾಡಿನ ಪೂರ್ತಿಪಾಠ ಹೀಗಿದೆ:

ಬಿದ್ದೀಯಬೆ ಮುದುಕಿ
ನೀ ದಿನ ಹೋದಾಕಿ ಬಲು ಜೋಕಿ
ಬಿದ್ದೀಯಬೆ ಮುದುಕಿ ||ಪ||

ಸದ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದೀಯಬೆ ಮುದುಕಿ ||೧||

ಬುಟ್ಟಿಯೊಳು ಪಟ್ಟೇವನಿಟ್ಟಿ
ಉಟ್ಟರದನ ಚೀಲ ಜೋಕಿ
ಕೆಟ್ಟ ಗಂಟಿಚೌಡೇರ ಬಂದು
ಕತ್ತರಿಸಿಕೊಂಡು ಹೋದಾರ ಮುದುಕಿ
ಬಿದ್ದೀಯಬೆ ಮುದುಕಿ ||೨||

ಶಿಶುನಾಳಧೀಶನ ಮುಂದೆ
ಕೊಸರಿ ಕೊಸರಿ ಹೋಗದಿರು
ಹಸನವಿಲ್ಲ ಹರೆಯವು ಮೀರಿದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬಿದ್ದೀಯಬೆ ಮುದುಕಿ ||೩||

ಶರೀಫರು ೧೯ನೆಯ ಶತಮಾನದ ಹಳ್ಳಿಗಾಡಿನಲ್ಲಿ ಬೆಳೆದವರು.
ಅದಾಗಲೇ, ಧಾರವಾಡದ ಸುತ್ತಮುತ್ತಲಿನ ಪ್ರದೇಶವೆಲ್ಲ ಬ್ರಿಟಿಶರ ಆಡಳಿತಕ್ಕೆ ಒಳಪಟ್ಟಿತ್ತು.
ಹತ್ತಿಯ ಗಿರಣಿ, ರೇಲವೇ ಮೊದಲಾದ ಆಧುನಿಕ ಯಾಂತ್ರಿಕ ಸೌಕರ್ಯಗಳು ಆಗತಾನೇ ಪ್ರಾರಂಭವಾಗಿದ್ದವು.

ಶರೀಫರು ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆಲಕಾಲ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದರು.
ಆದರೆ ಇವರ ಮನೋಧೋರಣೆಗೆ ನೌಕರಿಯು ಒಗ್ಗದ ವಿಷಯವಾಗಿತ್ತು.
ಅದನ್ನೂ ಬಿಟ್ಟುಕೊಟ್ಟು,ಹಳ್ಳಿ ಹಳ್ಳಿ ತಿರುಗುತ್ತ, ಪಾರಮಾರ್ಥಿಕ ಚಿಂತನೆಯಲ್ಲಿಯೇ ಕಾಲ ಕಳೆಯತೊಡಗಿದರು.

ನಿಷ್ಠುರ ಸ್ವಭಾವದ ಶರೀಫರು ತಮಗೆ ಸರಿಕಾಣದ ಯಾವುದನ್ನು ಕಂಡರೂ ತಕ್ಷಣವೇ ಟೀಕಿಸುತ್ತಿದ್ದರು.
ತಮ್ಮ ಸಮಕಾಲೀನರಾದ ನವಲಗುಂದದ ಅಜಾತ ನಾಗಲಿಂಗಸ್ವಾಮಿಗಳು ಪಲ್ಲಕ್ಕಿಯಲ್ಲಿ ಕುಳಿತು ಹೋಗುತ್ತಿದ್ದಾಗ,
“ ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ
ನಾಗಲಿಂಗಯೋಗಿ ತಾನು ತಿರುಗುವದ್ಯಾತಕೆ”
ಎಂದು ಛೇಡಿಸಿದ್ದರು.

ಶರೀಫರ ಹಾಡುಗಳೂ ಸಹ ಹಳ್ಳಿಗರ ಹಾಡುಗಳೇ.
ಅದರಲ್ಲಿ ಶಿಷ್ಟಭಾಷೆಯ ಬಳಕೆ ಇಲ್ಲ.
ಸಹಜಸ್ಫೂರ್ತಿಯಿಂದ, ಹೃದಯದಿಂದ ಹೊರಹೊಮ್ಮಿದ ಹಾಡುಗಳು ಇವು.
ಅನೇಕ ವೇಳೆ ತಮ್ಮ ಕಣ್ಣೆದುರಿನಲ್ಲಿ ಕಂಡ ಘಟನೆಯಿಂದ ಈ ಹಾಡುಗಳು ಪ್ರೇರಿತವಾಗಿವೆ.
ಅಂತಹ ಹಾಡುಗಳಲ್ಲಿ ಒಂದು : “ಬಿದ್ದೀಯಬೆ ಮುದುಕಿ”.

ಹುಲಗೂರು ಇದು ಶಿಗ್ಗಾವಿ ತಾಲೂಕಿನಲ್ಲಿರುವ ಒಂದು ಹಳ್ಳಿ.
ಹಜರತ್ ಶಾ ಖಾದರಿ ಎನ್ನುವ ಸಂತರ ಗೋರಿ ಇಲ್ಲಿದ್ದು ಇದು ಮುಸಲ್ಮಾನರಿಗೆ ಯಾತ್ರಾ ಸ್ಥಳವಾಗಿದೆ.
ಪ್ರತಿ ರವಿವಾರ ಈ ಹಳ್ಳಿಯಲ್ಲಿ ಸಂತೆ ನಡೆಯುತ್ತಿತ್ತು.
ಇಂತಹ ಒಂದು ಸಂತೆಯಲ್ಲಿ ಶರೀಫರು ಒಬ್ಬ ಮುದುಕಿಯನ್ನು ನೋಡುತ್ತಾರೆ.
ವಯಸ್ಸಿಗೆ ಸಹಜವಾದ ಪಕ್ವತೆಯನ್ನು ತೋರದ ರೀತಿಯಲ್ಲಿ ಆ ಮುದುಕಿ ವ್ಯವಹರಿಸುವದನ್ನು ಕಂಡು ಶರೀಫರಿಗೆ ಬೇಸರವಾಗಿರಬಹುದು.
ಆಗ ಶರೀಫರು ಮುದುಕಿಗೆ ಎಚ್ಚರ ಕೊಡುವ ಧಾಟಿಯಲ್ಲಿ ಹಾಡುತ್ತಾರೆ:
“ಬಿದ್ದೀಯಬೇ ಮುದುಕಿ
ನೀ ದಿನ ಹೋದಾಕಿ ಬಲು ಜೋಕಿ!”

“ನೀನು ವಯಸ್ಸಾದ ಮುದುಕಿ, ನೀನು ಬಿದ್ದರೆ ಒಳ್ಳೆ ಪೆಟ್ಟು ತಿನ್ನುತ್ತೀ.
ಏಕೆ ಇಂತಹ ಅಸಹಜ ಹಾರಾಟ ನಿನ್ನದು?
ಮನೆಯಲ್ಲಿ ಕೂಡುವದನ್ನು ಬಿಟ್ಟು ಈ ಸಂತೆಗೆ ಏಕೆ ಬಂದೆ?
ಈ ಗದ್ದಲದಲ್ಲಿ ನೀನು ಬಿದ್ದರೆ ನಿನ್ನನ್ನು ಕೇಳುವವರು ಯಾರೂ ಇಲ್ಲ.
ಎಂತಹ ಬುದ್ಧಿಗೇಡಿ ಮುದುಕಿಯಾಗಿರುವೆ ನೀನು” ಎಂದು ಶರೀಫರು ಅವಳನ್ನು ಬೈಯುತ್ತಾರೆ.
“ಸದ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದೀಯಬೆ ಮುದುಕಿ”

ಈ ಮುದುಕಿಯು ಬಲು ಒಯ್ಯಾರದ ಮುದುಕಿ.
ತನ್ನ ಬುಟ್ಟಿಯಲ್ಲಿ ಜರದ ಪಟ್ಟೆಯ ಸೀರೆಯನ್ನು ಇಟ್ಟುಕೊಂಡು ಬಂದಿದ್ದಾಳೆ.
(ಪಟ್ಟಿ ಎಂದರೆ ರೇಶಮೆ ಸೀರೆ ಎನ್ನುವ ಅರ್ಥವೂ ಇದೆ.)
ಸಂತೆಯಲ್ಲಿ ನೆರೆದವರ ಎದುರಿಗೆ ತನ್ನ ಪಟ್ಟೆಯ ಸೀರೆಯನ್ನು ಉಟ್ಟುಗೊಂಡು ಜಂಭ ಪಡಬೇಕೆನ್ನುವದು ಅವಳ ಆಸೆ.
ಆದರೆ ಇವಳು ಸೀರೆಯನ್ನು ತೆಗೆಯುವ ಹೊತ್ತಿನಲ್ಲಿ ಗಂಟಿಚೌಡೇರು (=ಗಂಟುಕಳ್ಳರು) ಇವಳ ಚೀಲವನ್ನೇ ಕತ್ತರಿಸಬಹುದಲ್ಲ!
ಅದಕ್ಕಾಗಿಯೇ ಶರೀಫರು ಎಚ್ಚರಿಕೆ ನೀಡುತ್ತಾರೆ:
“ಬುಟ್ಟಿಯೊಳು ಪಟ್ಟೇವನಿಟ್ಟಿ
ಉಟ್ಟರದನ ಚೀಲ ಜೋಕಿ
ಕೆಟ್ಟ ಗಂಟಿಚೌಡೇರ ಬಂದು
ಕತ್ತರಿಸಿಕೊಂಡು ಹೋದಾರ ಮುದುಕಿ”

ಶರೀಫರು ಸಂತೆಯ ರೂಪಕವನ್ನು ಸಂಸಾರಕ್ಕೆ ಹೋಲಿಸುತ್ತ , ಈ ಸಂಸಾರಕ್ಕೆ ಬಂದ ಎಲ್ಲ ಜೀವಿಗಳಿಗೂ ಎಚ್ಚರಿಕೆ ನೀಡುತ್ತಿದ್ದಾರೆ.
ಸಂತೆಯಲ್ಲಿ ಹೇಗೊ, ಹಾಗೆಯೇ ಸಂಸಾರದಲ್ಲೂ ಸಹ, ಜೀವಿಯು ಎಚ್ಚರದಿಂದ ಇರಬೇಕು.
ಇಲ್ಲಿ ಜಾರಿ ಬಿದ್ದರೆ ಎಬ್ಬಿಸಲು ಯಾರೂ ಸಹಾಯ ಮಾಡುವದಿಲ್ಲ.
ಪೂರ್ವಜನ್ಮದ ಪುಣ್ಯದಿಂದಾಗಿ(= ತಲೆಯ ಮೇಲಿನ ಬುಟ್ಟಿ), ಈ ಜನ್ಮದಲ್ಲಿ ಇವಳಿಗೆ ಒಂದಿಷ್ಟು ಭೋಗ (=ಪಟ್ಟೆ ಸೀರೆ) ದೊರಕಿದೆ.
ಆದರೆ, ಇಳಿವಯಸ್ಸಾದರೂ ಸಹ ಸಂಸಾರದಲ್ಲಿಯೇ ಮಗ್ನರಾಗಿ, ತನ್ನ ದೊಡ್ಡಸ್ತಿಕೆಯನ್ನೇ ಮೆರೆಯುತ್ತ ಹೋದರೆ, ತಮ್ಮಲ್ಲಿರುವ ಈ ಜನ್ಮದ ಯತ್ಕಿಂಚಿತ್ ಪುಣ್ಯಬಲವೂ(=ಕೈಯಲ್ಲಿಯ ಚೀಲ) ಸಹ ಗಂಟುಕಳ್ಳರ(=ಪುಣ್ಯದಿಂದ ದೊರೆಯುವ ಫಲಗಳು) ಮೂಲಕ ಮಾಯವಾಗುವದು.

ಅದಕ್ಕಾಗಿ, ಮನಸ್ಸನ್ನು ದೇವರಲ್ಲಿ ಇಡಬೇಕೆ ಹೊರತು ಸಂಸಾರದ ವಾಸನೆಗಳಲ್ಲಿ ಅಲ್ಲ.
ಇದನ್ನು ತಿಳಿಯದ ಜೀವಿಯು ಪಿಸರುಗಣ್ಣಿನ, ಪಿಚ್ಚುಗಣ್ಣಿನ ಮುದುಕಿ ಇದ್ದಂತೆ.
ಅವಳಿಗೆ ಹಸನಾದ(=clear) ದೃಷ್ಟಿಯು ಇಲ್ಲ.
ಅಲ್ಲದೆ, ಸಾಧನೆಯನ್ನು ಕೈಕೊಳ್ಳುವ ವಯಸ್ಸೂ ಸಹ ಉಳಿದಿಲ್ಲ.
ಆದುದರಿಂದ, ಮನಸ್ಸನ್ನು ದೇವರ ಕಡೆಗೆ ತಿರುಗಿಸಿ ಜನ್ಮ ಸಾರ್ಥಕ ಮಾಡಿಕೊಳ್ಳುವದೇ ಲೇಸು.

“ಶಿಶುನಾಳಧೀಶನ ಮುಂದೆ
ಕೊಸರಿ ಕೊಸರಿ ಹೋಗದಿರು
ಹಸನವಿಲ್ಲ ಹರೆಯವು ಮೀರಿದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬಿದ್ದೀಯಬೇ ಮುದುಕಿ ||”

ಮುದುಕಿಯ ರೂಪಕದಿಂದ ಶರೀಫರು ನಮಗೆಲ್ಲರಿಗೂ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.

Sunday, November 23, 2008

ಎಲ್ಲರಂಥವನಲ್ಲ ನನ ಗಂಡ

ಶರೀಫರ ಹಾಡಿನ ಪೂರ್ತಿಪಾಠ ಹೀಗಿದೆ:

ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ ||ಪಲ್ಲ||

ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ ||ಅ.ಪ.||

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ ||೧||

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ
ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ
ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ ||೨||

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ ||೩||

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ
ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ ||೪||

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ ||೫||
………………………………………………………………………
ಭಕ್ತಿಮಾರ್ಗದಲ್ಲಿ ಭಕ್ತ ಮತ್ತು ಭಗವಂತನ ನಡುವೆ ಐದು ಬಗೆಯ ಸಂಬಂಧಗಳನ್ನು ಗುರುತಿಸಲಾಗಿದೆ:
೧) ದಾಸ ಭಾವ
೨) ಸಖ್ಯ ಭಾವ
೩) ಮಧುರ ಭಾವ
೪) ವಾತ್ಸಲ್ಯ ಭಾವ
೫) ವಿರೋಧ ಭಾವ

ಭಕ್ತಿಮಾರ್ಗದ ಸಾಧಕರು ಈ ಎಲ್ಲ ಪಥಗಳಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ.
ಶರೀಫರ ಹಾಡುಗಳಲ್ಲಿ ಸಹ ಈ ವಿಭಿನ್ನ ಪ್ರಕಾರಗಳ ವರ್ಣನೆಯನ್ನು ಕಾಣಬಹುದು.

“ಎಲ್ಲರಂಥವನಲ್ಲ ನನ ಗಂಡ” ಎನ್ನುವ ಹಾಡಿನಲ್ಲಿ ಶರೀಫರು ಪರಮಾತ್ಮನನ್ನು ಪತಿಗೆ ಹಾಗೂ ಜೀವಾತ್ಮರಾದ ತಮ್ಮನ್ನು ಸತಿಗೆ ಹೋಲಿಸಿಕೊಂಡು ಹಾಡಿದ್ದಾರೆ.
ಮಧುರ ಭಕ್ತಿಯ ಈ ಸಾಧನಾಮಾರ್ಗದಲ್ಲಿ ತಮಿಳುನಾಡಿನ ಆಂಡಾಳ್, ಕರ್ನಾಟಕದ ಅಕ್ಕ ಮಹಾದೇವಿ ಹಾಗೂ ರಾಜಸ್ಥಾನದ ಮೀರಾಬಾಯಿ ಪ್ರಸಿದ್ಧರಾಗಿದ್ದಾರೆ.
ವೀರಶೈವ ದರ್ಶನದಲ್ಲಿಯೂ ಸಹ “ ಶರಣ ಸತಿ, ಲಿಂಗ ಪತಿ” ಎನ್ನುವದು ಸುಪ್ರಸಿದ್ಧವಾದ ಹೇಳಿಕೆಯೇ ಆಗಿದೆ.
ಆಧುನಿಕ ಕಾಲದಲ್ಲಿ ಮಧುರಚೆನ್ನರೂ ಸಹ ಸಾಧನೆಯ ಪಥದಲ್ಲಿ ಪರಮಾತ್ಮನನ್ನು ತಮ್ಮ “ನಲ್ಲ” ಎಂದು ಗ್ರಹಿಸಿ ಬರೆದ “ನನ್ನ ನಲ್ಲ” ಕಾವ್ಯವು ಕನ್ನಡದ ಅದ್ಭುತ ಕಾವ್ಯಗಳಲ್ಲೊಂದಾಗಿದೆ.

ಶರೀಫರ ಕವನ ಪ್ರಾರಂಭವಾಗುವದು ತಮ್ಮ ಗಂಡನ ಬಗೆಗೆ ಅವರಿಗಿರುವ ಬೆರಗು ಹಾಗು ಮೆಚ್ಚುಗೆಯ ಸಾಲುಗಳಿಂದ:
“ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ”

ಈತ ಬಲ್ಲಿದನಾದ ಗಂಡ ಎಂದು ಇವನ ಹೆಂಡತಿಗೆ ಅಭಿಮಾನವಿದೆ.
ಯಾತರಲ್ಲಿ ಬಲ್ಲಿದ?
ತನ್ನ ಹೆಂಡತಿಯನ್ನು ತನಗೆ ಬೇಕಾದಂತೆ ತಿದ್ದುವದರಲ್ಲಿ ಈತ ಬಲ್ಲಿದ, ಅಂದರೆ ಜಾಣ!
ಅಷ್ಟೇ ಅಲ್ಲ. ಅವಳನ್ನು ಪರಿವರ್ತಿಸುವ ಈ ಕಾರ್ಯವನ್ನು ಆತ ‘ಪುಂಡ’ತನದಿಂದ, agressively ಮಾಡುತ್ತಾನೆ.
ಹೆಂಡತಿಗೆ ಈ ವಿಷಯದಲ್ಲಿ ಸ್ವಲ್ಪವೂ ಸ್ವಾತಂತ್ರ್ಯ ಎನ್ನುವದಿಲ್ಲ.
ಆದರೆ ಅವಳಿಗೆ ಅಸಮಾಧಾನವೂ ಇಲ್ಲ.
ಇದರಲ್ಲಿ ತನ್ನ ಹಿತವೇ ಇದೆ ಎಂದು ಅರಿತ ಅವಳು ಗಂಡನ ಇಂತಹ ವರ್ತನೆಯನ್ನು ಮೆಚ್ಚಿಕೊಂಡಿದ್ದಾಳೆ.

ತನ್ನ ಗಂಡನಾದ ಪರಮಾತ್ಮ ಯಾವ ರೀತಿಯಲ್ಲಿ ತನ್ನನ್ನು ತಿದ್ದಿದ ಎಂದು ಶರೀಫರು ಹೀಗೆ ಹೇಳುತ್ತಾರೆ.
ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ ||

ಹೊಸದಾಗಿ ಮದುವೆಯಾದ ಹೆಂಡತಿ (--ಹಳೆಯ ಸಾಂಪ್ರದಾಯಕ ಸಮಾಜದಲ್ಲಿ ಎನ್ನುವದನ್ನು ನೆನಪಿನಲ್ಲಿ ಇಟ್ಟುಕೊಳ್ಳಿರಿ—) ತನ್ನ ಪತಿಯೊಡನೆ ತನ್ನ ಚಿಕ್ಕ ಪುಟ್ಟ ಬಯಕೆಗಳನ್ನು ಹೇಳಿಕೊಳ್ಳಲು ಬಯಸುತ್ತಾಳೆ. ಅವಳಿಗೆ ಬಾಯಿ ತೆರೆಯಲೇ ಅವಕಾಶ ಕೊಡದಂತೆ, ಈ ಪುಣ್ಯಾತ್ಮ ಮಾತು ಮಾತಿಗೆ (=ಸೊಲ್ಲು ಸೊಲ್ಲಿಗೆ) ಇವಳನ್ನು ಬಯ್ಯುತ್ತಾನೆ. ಇವಳು ಮನೆಯ ಬಿಟ್ಟು ಹೊರಗೆ ಕಾಲಿಡಬಾರದೆನ್ನುವ ಉದ್ದೇಶದಿಂದ ಅವಳ ಕಾಲನ್ನೇ ಮುರಿದು ಬಿಟ್ಟಿದ್ದಾನೆ.

ಶರೀಫರು ಹೊಸದಾಗಿ ಪರಮಾತ್ಮನ ಜೊತೆ ಮದುವೆಯಾಗಿದ್ದಾರೆ.
ತನ್ನಂತಹ ನೆರೆಹೊರೆಯವರೊಡನೆ ಮಾತನಾಡುವ ಹಾಗು ತನ್ನ ಸಂಸಾರದ ದೊಡ್ಡಸ್ತನವನ್ನು ಹೆಮ್ಮೆಯಿಂದ ಹೇಳಿಕೊಂಡು, ಬೀಗುವ ಮನಸ್ಸು ಈ ಹೆಂಡತಿಗೆ ಇದೆ.
ಆದರೆ ಮನೆಯ ಯಜಮಾನನಿಗೆ ಇದು ಬಿಲ್ಕುಲ್ ಬೇಕಾಗಿಲ್ಲ.
ಸರಿ, ಆತ ಇವಳ ಕಾಲನ್ನೇ ಮುರಿದು ಬಿಟ್ಟ.
ಆಧ್ಯಾತ್ಮಿಕ ಅರ್ಥದಲ್ಲಿ ಹೇಳುವದಾದರೆ, ತನ್ನ ಸರಿಕರಾದ ಇತರ ಕೆಲವು ಸಂತರಿಗೆ (ಉದಾ: ಅಜಾತ ನಾಗಲಿಂಗ ಸ್ವಾಮಿಗಳಿಗೆ) ಬಂದಂತಹ ದೊಡ್ಡಸ್ತಿಕೆ ಹಾಗು ಪ್ರಸಿದ್ಧಿ ಶರೀಫರಿಗೆ ಬರದಂತೆ, ಆ ಪರಮಾತ್ಮ ನೋಡಿಕೊಂಡ.
ಇದು ಹೆಂಡತಿಗೂ ಒಪ್ಪಿಗೆಯಾದ ಸಂಗತಿಯೇ!

ಇಷ್ಟಾದ ಮೇಲೆ ಇಂತಹ ಸುಗುಣ ಸಂಪನ್ನ ಗಂಡನೊಡನೆ ತನ್ನ ಒಗೆತನ ಹೇಗೆ ಪ್ರಾರಂಭವಾಯಿತೆಂದು ಶರೀಫರು ಹೇಳುತ್ತಾರೆ:

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ||

ಶರೀಫರಿಗೆ ಇನ್ನೂ ಆಧ್ಯಾತ್ಮದ ಗಂಧ ಬಡೆದಿರಲಿಲ್ಲ.
ಅವರು ತಮ್ಮ ತಂದೆ ತಾಯಿಯ ಮನೆಯಲ್ಲಿ, ಅಂದರೆ ವಿಷಯ ಭಾವನೆ ತುಂಬಿದ ಸಂಸಾರದಲ್ಲಿಯೇ ಇದ್ದರು.
ಅವರಿಗೆ ಮೂವರು ಪ್ರೀತಿಯ ಗೆಳೆಯರು.
ಈ ಮೂವರೆಂದರೆ, ಪ್ರತಿಯೊಂದು ಜೀವಿಗೆ ಸಂಚಲನೆ ನೀಡುವ ಮೂರು ಗುಣಗಳು:
(೧) ತಮಸ್ (೨) ರಜಸ್ ಹಾಗು (೩) ಸತ್ವ
ಪ್ರತಿ ಜೀವಿಯ ಜನ್ಮಾಂತರಗಳಲ್ಲಿ ತಮೋಗುಣ ಕಡಿಮೆಯಾಗುತ್ತ, ಸತ್ವಗುಣ ಅಧಿಕವಾಗುತ್ತ ಹೋಗಬೇಕು.

ಅದಲ್ಲದೆ ಅವರ ಮೂರು ಪ್ರಕಾರದ ಕರ್ಮಗಳು ಅವರನ್ನು ಬೆಂಬತ್ತಿವೆ:
(೧) ಸಂಚಿತ (೨) ಪ್ರಾರಬ್ಧ ಹಾಗೂ (೩) ಆಗಾಮಿ

(ಟಿಪ್ಪಣಿ:
ಈ ಗುಣಗಳ ಮಿಶ್ರಣಕ್ಕೆ ಸರಿಹೋಗುವಂತೆ ಹಾಗೂ ಕರ್ಮಗಳಿಗೆ ಅನುಸಾರವಾಗಿ ಪ್ರತಿ ಜೀವಿಗೆ ಒಂದು ದೇಹ ದೊರಕುತ್ತದೆ.
‘ಗಣಪತಿ ಅಥರ್ವ ಶೀರ್ಷ’ದಲ್ಲಿ ಬರುವ ಈ ಸಾಲನ್ನು ಗಮನಿಸಿರಿ:
“ತ್ವಂ ಗುಣತ್ರಯಾತೀತಃ, ತ್ವಂ ದೇಹತ್ರಯಾತೀತಃ, ತ್ವಂ ಕಾಲತ್ರಯಾತೀತಃ”
ಗಣಪತಿಯು ಸತ್ವ, ರಜಸ್ ಹಾಗೂ ತಮಸ್ ಎನ್ನುವ ಮೂರೂ ಗುಣಗಳಿಗೆ ಅತೀತನಾಗಿರುವದರಿಂದ ಅವನು ಮೂರೂ ದೇಹಗಳಿಗೆ (=ಸ್ಥೂಲ, ಸೂಕ್ಷ್ಮ ಹಾಗೂ ಕಾರಣದೇಹಗಳಿಗೆ) ಅತೀತನಾಗಿದ್ದಾನೆ.
ದೇಹವಿಲ್ಲದವನಿಗೆ ಕಾಲವೆಲ್ಲಿಯದು?
ಆ ಕಾರಣದಿಂದ ಆತನು ಭೂತ, ವರ್ತಮಾನ ಹಾಗೂ ಭವಿಷ್ಯತ್ ಎನ್ನುವ ಮೂರು ಕಾಲಗಳಿಗೂ ಸಹ ಅತೀತನಾಗಿದ್ದಾನೆ.
ದೇಹ ಹಾಗೂ ಕಾಲಗಳಿಂದ ಬದ್ಧನಾಗದವನಿಗೆ ಕರ್ಮಬಂಧನವೆಲ್ಲಿಯದು?
ಹಾಗಾಗಿ ಪರಮಾತ್ಮನಿಗೆ ಕರ್ಮಬಂಧನವಿಲ್ಲ.)

ಈ ರೀತಿಯಾಗಿ ಶರೀಫರು ತಮ್ಮ ಮೂರು ಗುಣಗಳೊಡನೆ ಪ್ರೀತಿಯಿಂದ ಇರುತ್ತಿರಲು, ಈ ಗುಣಗಳಲ್ಲಿ ಸತ್ವಗುಣವೇ ಅಧಿಕವಾಗಿದ್ದರಿಂದ, ಅವರು ಮೈನೆರೆಯುವ ಸಮಯ ಬಂದಿತು.
ಅರ್ಥಾತ್, ಈ ವಿಷಯ ಸಂಸಾರವನ್ನು ಬಿಟ್ಟು, ಆಧ್ಯಾತ್ಮಿಕ ಸಂಸಾರ ಹೂಡುವ ಅವಸ್ಥೆ ಅವರಿಗೆ ಪ್ರಾಪ್ತವಾಯಿತು.
ಅದೂ ಹೇಗೆ? ಮಾಯದಿಂದ ಅಂದರೆ ಅವರಿಗೇ ಅರಿವಾಗದಂತೆ!
ಆದರೆ ಚಿಕ್ಕ ಹುಡುಗಿಯೊಬ್ಬಳು ಮದುವೆಯಾಗುವಾಗ ಸಂಭ್ರಮದ ಜೊತೆಗೇ ಹೆದರಿಕೆಯನ್ನೂ ಅನುಭವಿಸುತ್ತಾಳೆ.
ಅದಕ್ಕಾಗಿಯೇ ಶರೀಫರು,
“ಘಾತವಾಯಿತು ಯವ್ವನವು ಬರಲು”
ಎಂದು ಹೇಳುತ್ತಾರೆ.

ಶರೀಫರಿಗೇನೊ ಸ್ವಲ್ಪ apprehension ಇರಬಹುದು.
ಆದರೆ ತನಗೆ ತಕ್ಕ ಕನ್ಯೆಯನ್ನು ಶೋಧಿಸುತ್ತಿರುವ ವರಮಹಾಶಯ ಸುಮ್ಮನೇ ಕೂತಾನೆ?
‘ವೆಂಕಟೇಶ ಕಲ್ಯಾಣ’ದಲ್ಲಿ ವೆಂಕಟೇಶನು ಮದುವೆಯ ಪ್ರಸ್ತಾಪಕ್ಕಾಗಿ ತಾನೇ ದೂತೆಯಾಗಿ ಕೊರವಂಜಿಯ ವೇಷದಲ್ಲಿ ಬಂದದ್ದನ್ನು ನೆನಪಿಸಿಕೊಳ್ಳಿರಿ.
ಅದೇ ರೀತಿಯಾಗಿ, ಪರಮಾತ್ಮನೂ ಸಹ ಈ ಕನ್ಯೆಯೊಡನೆ ಮದುವೆಯಾಗಲು ಗುರುರೂಪದಲ್ಲಿ ಬರುತ್ತಾನೆ.
ಆ ಗುರುವೇ ಗೋವಿಂದ ಭಟ್ಟರು.

ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ||

ಗುರು ಗೋವಿಂದ ಭಟ್ಟರು ಶರೀಫರ ಮದುವೆಯನ್ನು ಪರಮಾತ್ಮನ ಜೊತೆಗೆ ಮಾಡಿದ್ದಷ್ಟೇ ಅಲ್ಲ, ಶೋಭನ ಶಾಸ್ತ್ರವನ್ನೂ ಸಹ ಮಾಡಿದರು.
ಪರಮಾತ್ಮನೊಡನೆ ಮೈಹೊಂದಿಕೆಯನ್ನು ಮಾಡಿಸಿಕೊಟ್ಟರು.
ಪರಮಾತ್ಮ ಹಾಗೂ ಶರೀಫರು ಪ್ರೀತಿಯಲ್ಲಿ ಒಂದಾದರು.

ಈ ವರ್ಣನೆಯು ಗುರು ಗೋವಿಂದ ಭಟ್ಟರು ಶಕ್ತಿಪಾತದ ಮೂಲಕ ಶರೀಫರಲ್ಲಿ ಕುಂಡಲಿನಿಯನ್ನು ಜಾಗೃತಗೊಳಿಸಿದುದರ ಸೂಚನೆಯಾಗಿದೆ.

ಇದೀಗ ಶರೀಫರ ಹೊಸ ಸಂಸಾರ (ಪರಮಾತ್ಮನೊಡನೆ) ಪ್ರಾರಂಭವಾಯಿತು.
ಸರಿ, ಶರೀಫರ ತವರು ಮನೆಯ ಸುದ್ದಿಯೇನು?
ಹೊಸ ಗಂಡ ಈ ವಿಷಯದಲ್ಲಿ ತುಂಬಾ possessive.
ಶರೀಫರಿಗೆ ಅರಿಷಡ್ವರ್ಗವೆನ್ನುವ ಆರು ಮಂದಿ ಅಕ್ಕ ತಂಗಿಯರಿದ್ದರು.
(ಕಾಮ, ಕ್ರೋಧ, ಮೋಹ, ಲೋಭ, ಮದ ಹಾಗು ಮಾತ್ಸರ್ಯ.)
ಅಲ್ಲದೆ ಅವರಿಗೆ ಐದು ಜನ ಪ್ರಿತಿಯ ಸೋದರರು.
(ಐದು ಕರ್ಮೇಂದ್ರಿಯಗಳು ಹಾಗು ಅವಕ್ಕೆ ಪೂರಕವಾದ ಐದು ಜ್ಞಾನೇಂದ್ರಿಯಗಳು:
ಕಣ್ಣು-ನೋಟ, ಕಿವಿ-ಶ್ರವಣ, ಮೂಗು-ವಾಸನೆ, ನಾಲಗೆ-ರುಚಿ, ಚರ್ಮ-ಸ್ಪರ್ಶ).
ಅವರೆಲ್ಲರನ್ನೂ ಈತ ಅಗಲಿಸಿಯೇ ಬಿಟ್ಟ.
ಅಂದರೆ, ಈ ಸಾಧನಗಳು ಅವರನ್ನು ವಿಷಯ ಸಂಸಾರಕ್ಕೆ ಎಳೆಯಲು ಸಾಧ್ಯವಾಗಲಿಲ್ಲ.

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ

ತನ್ನ ಹೆಂಡತಿ ತನ್ನ ನೆದರನ್ನು(=ನಜರನ್ನು, ನೋಟವನ್ನು) ಎಲ್ಲೂ ಹೊರಳಿಸಕೂಡದು;
ಅವಳು ತನ್ನನ್ನೇ ಸದಾಕಾಲ ನೋಡುತ್ತಿರಬೇಕು ಎನ್ನುವದು ಈ ಗಂಡನ ಅಭಿಲಾಶೆ.
ಹಾಗೆಂದು ಇದರಲ್ಲಿ ಆತನ ಬಲವಂತಿಕೆಯೇನಿಲ್ಲ.
ಅವನ ಆಟಕ್ಕೆ ಇವಳೇ ಮರುಳಾಗಿದ್ದಾಳೆ.

ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ||

ಪರಮಾತ್ಮನ ಜೊತೆಗಿನ ಸಂಸಾರದ ಸುಖವನ್ನು ಶರೀಫರು ಹೀಗೆ ಬಣ್ಣಿಸುತ್ತಾರೆ:

ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ ||

ಈ ಸಾಲುಗಳು ಆಧ್ಯಾತ್ಮಿಕ ಅನುಭವವನ್ನು ಸೂಚಿಸುತ್ತಿದ್ದು, ಅವುಗಳ ಅರ್ಥ ಆಧ್ಯಾತ್ಮಸಿದ್ಧಿ ಪಡೆದವನಿಗೆ ಮಾತ್ರ ಗೊತ್ತಾದೀತು.
(ಬಲ್ಲವನೇ ಬಲ್ಲ ಬೆಲ್ಲದ ಸವಿಯ!)
ಪರಮಾತ್ಮನು ತನ್ನ ಸಾಮರಸ್ಯದ ಸುಖವನ್ನು ಕೊಡುವದಲ್ಲದೇ, ತಾನು ಜಗಿದ ತಾಂಬೂಲದ ರಸದ ಗುಟುಕನ್ನು ಶರೀಫರ ಬಾಯಿಯಲ್ಲಿ ಅಕ್ಕರತೆಯಿಂದ ಇಡುತ್ತಿದ್ದಾನೆ.
ಅಂದರೆ ಪರಮಾತ್ಮನು ಪ್ರೇಮವನ್ನಲ್ಲದೆ, ಪೋಷಣೆಯನ್ನೂ(=ಜ್ಞಾನವನ್ನೂ) ಸಹ ನೀಡುವನು.
ಅಕ್ಕರತಿಯಿಂದ ಎನ್ನುವ ವಿಶೇಷಣವನ್ನು ಗಮನಿಸಿರಿ.
ಇದು ಗಂಡ ಹೆಂಡತಿಯ ಪ್ರೇಮಕ್ಕಿಂತ ಹೆಚ್ಚಾಗಿ ಪೋಷಕ-ಪೋಷಿತ ಭಾವವನ್ನು ತೋರಿಸುವದು.
ಆದುದರಿಂದ ಶರೀಫರು ಪರಮಾತ್ಮನಿಗೆ ‘ಬಹು ಸುಗುಣನೀತಾ’ ಎಂದು ಕರೆದಿದ್ದಾರೆ.

ಹೆಂಡತಿಗೆ ಅಚ್ಛಚ್ಛೆ ಮಾಡಿದರೆ ಸಾಕೆ?
ಈ ಚಿಕ್ಕ ಹುಡುಗಿಗೆ ಒಳ್ಳೆಯ ರೀತಿಯಲ್ಲಿ ಬದುಕು ಮಾಡುವದನ್ನು ಕಲಿಸಬೇಡವೆ?
ಪರಮಾತ್ಮನು ಶರೀಫರು ಎನ್ನುವ ತನ್ನ ಹೊಸ ವಧುವಿಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಿದನೆನ್ನುವದನ್ನು ನೋಡಿರಿ:

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ ||

ಪರಮಾತ್ಮನೇನೊ ಈ ಚಿಕ್ಕ ಹೆಂಡತಿಗೆ ಮನೆಯ ಮಾಡಿ ಕೊಟ್ಟ.
ಗಂಡನಿಲ್ಲದ ವೇಳೆ ಈಕೆ ಮನೆಯ ಹೊರಗೆ ಹೋಗಬಹುದಲ್ಲವೆ?
ಸರಿ, ಹೊರಗೆ ಹೋಗದಂತೆ ಅವಳ ಸೊಂಟವನ್ನೆ ಮುರಿದು ಬಿಟ್ಟ.
ಅವಳು ಹೋಗದಿದ್ದರೇನು?
ಅವಳನ್ನು ಭೆಟ್ಟಿಯಾಗಲು, ಸಮಯಸಾಧಕರು ಮನೆಯ ಒಳಗೆ ಬರಬಹುದಲ್ಲವೆ?
ಅದುದರಿಂದ ಈ ಚಿಕ್ಕ ಹುಡುಗಿಯ ಎದುರಿಗೆ ಪಂಟು ಮಾತನ್ನಾಡಿ(=bogus talk) ಇವಳನ್ನು ಹಾದಿ ತಪ್ಪಿಸುವವರು ಬರದಂತೆ ಆತ ವ್ಯವಸ್ಥೆ ಮಾಡಿದ.
(ಅಂದರೆ ಕ್ಷುದ್ರಸಾಧನೆಗಳು ಸಿಗದಂತೆ ಮಾಡಿದ.)
ಅದರಂತೆ ಗಂಟುಗಳ್ಳರು ಮನೆಗೆ ಬರದಂತೆ ಮಾಡಿದ.
ಈ ಚಿಕ್ಕ ಹುಡುಗಿ ತನ್ನ ಸಾಧನೆಯ ಮೂಲಕ ಒಂದಿಷ್ಟು ದುಡ್ಡನ್ನು (=ಸಾಧನಾಫಲವನ್ನು) ಜತನ ಮಾಡಿ ಇಟ್ಟುಕೊಂಡಿದ್ದಾಳೆ.
ಇವಳಿಗೆ ಏನೇನೊ ಕೊಡಿಸುವ ಆಸೆ ಹುಟ್ಟಿಸಿ, ಇವಳು ಕೂಡಿಸಿಟ್ಟುಕೊಂಡ ದುಡ್ಡನ್ನು ಹೊಡೆಯುವ ಗಂಟುಗಳ್ಳರು ದೂರವಿರುವಂತೆ ಆತ ವ್ಯವಸ್ಥೆ ಮಾಡಿದ.
ಈ ಪಂಟು ಮಾತಿನವರು ಹಾಗೂ ಗಂಟುಗಳ್ಳರು ಸಣ್ಣಪುಟ್ಟ ಕಳ್ಳರು.
ಆದರೆ ೧೮ ಜನ ಕುಂಟಲಗಿತ್ತಿಯರು (ಅಂದರೆ ಗಿರಾಕಿಗಳನ್ನು ಹೊಂದಿಸಿಕೊಡುವ pimp ಹೆಂಗಸರು) ಗಂಟು ಬಿದ್ದರೆ ಏನು ಮಾಡುವದು?

(ಟಿಪ್ಪಣಿ:
ಶ್ರೀಚಕ್ರಕ್ಕೆ ೯ ಆವರಣಗಳಿವೆ. ಮೊದಲನೆಯ ಆವರಣದಲ್ಲಿ ಅಂದರೆ ಭೂಪುರದಲ್ಲಿ ಅಣಿಮಾ, ಲಘಿಮಾ ಮೊದಲಾದ ೧೮ ಸಿದ್ಧಿಗಳು ಇರುತ್ತವೆ. ಈ ಚಕ್ರದಲ್ಲಿ ಸಿದ್ಧಿ ಪಡೆದವನಿಗೆ ಅಣಿಮಾ ಅಂದರೆ ಅತಿ ಸೂಕ್ಷ್ಮವಾಗುವ, ಲಘಿಮಾ ಅಂದರೆ ಭಾರವಿಲ್ಲದಂತಾಗುವ ಮೊದಲಾದ ಸಿದ್ಧಿಗಳು ಸಾಧಿಸುತ್ತವೆ.
ಈ ಸಿದ್ಧಿಗಳಲ್ಲಿಯೇ ಮೋಜು ಅನುಭವಿಸುತ್ತ ಕುಳಿತರೆ, ಮುಂದಿನ ಸಾಧನೆಗೆ ವ್ಯತ್ಯಯವಾಗುವದು.
ಈ ಸಿದ್ಧಿಗಳನ್ನು ಶರೀಫರು ಕುಂಟಲಗಿತ್ತಿಯರು ಎಂದು ಕರೆಯುತ್ತಾರೆ.
ಈ ಸಿದ್ಧಿಗಳು ಸಾಧಕನ ಮನಸ್ಸನ್ನು ಪರಮಾತ್ಮನಿಂದ ಬೇರೆಡೆಗೆ ಸೆಳೆಯುವವು.)

ಆದುದರಿಂದ ಈ ಸಿದ್ಧಿಗಳು ಶರೀಫರಿಗೆ ಲಭಿಸದಂತೆ ಮಾಡಿ, ಪರಮಾತ್ಮನು ತನ್ನ ಚಿಕ್ಕ ಪತ್ನಿಯಾದ ಶರೀಫರನ್ನು ರಕ್ಷಿಸಿದ.
ಅದಕ್ಕಾಗಿಯೇ ಶರೀಫರು “ಎನ್ನ ಕರವ ಪಿಡಿದಾ” ಎಂದು ಪ್ರೀತಿಯಿಂದ ಪರಮಾತ್ಮನನ್ನು ನೆನಸುತ್ತಾರೆ.
ಆತ ಇವಳ ಕರ ಪಿಡಿದದ್ದು ಇವಳಿಗೆ ಅವಲಂಬನ ಕೊಟ್ಟು ಇವಳನ್ನು ಮುನ್ನಡೆಸಲಿಕ್ಕಾಗಿ.

ಈ ಎಲ್ಲ ಸಿದ್ಧಿಗಳು ಸ್ವತಃ ಕುಂಟ ಹಾಗೂ ಕುರುಡರಿದ್ದಂತೆ.
ಅವು ಸಾಧಕನನ್ನು ಸಾಧನೆಯ ಮಾರ್ಗದಲ್ಲಿ ನಡೆಸಲಾರವು.
ಆದುದರಿಂದ ಈ ಸಿದ್ಧಿಗಳಿಗೆ ಆತ ಗಂಟಲಗಾಣನಾದ.
ಅಂದ ಮೇಲೆ, ಶರೀಫರಿಗೆ ತನ್ನ ಗಂಡನ ಮೇಲೆ ಅಭಿಮಾನಪೂರ್ವಕ ಪ್ರೇಮ ಉಕ್ಕದಿದ್ದೀತೆ?
ಆ ಸಂತೋಷ ಭಾವದಲ್ಲಿಯೇ ಶರೀಫರು ಹಾಡುತ್ತಾರೆ:
“ತಕ್ಕವನೆ ಸಿಕ್ಕಾ” !

ತವರು ಮನೆಯನ್ನು ಬಿಡಿಸಿ, ಅತ್ತೆಯ ಮನೆಗೆ ಕರೆತಂದ ಈ ಗಂಡ ಈಗ ಅತ್ತೆಮಾವರ ಮನೆಯನ್ನೂ ಸಹ ಬಿಡಿಸುತ್ತಿದ್ದಾನೆ.

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ

ತವರುಮನೆಯೆಂದರೆ ವಿಷಯ ಸುಖಗಳ ಮನೆಯಾಯಿತು. ಈ ಅತ್ತೆಮಾವರ ಮನೆ ಯಾವುದು?
ಸತ್ ಹಾಗೂ ಅಸತ್ ಇವು ದೇವರ ಎರಡು ಸೃಷ್ಟಿಗಳು. ಅಸತ್ ಅಂದರೆ unreal. ಸತ್ ಅಂದರೆ real.
ಅಸತ್ ಅಥವಾ unreal ಸೃಷ್ಟಿಯು ಕಾಲಮಿತಿಗೆ ಒಳಪಟ್ಟದ್ದು.

“ನಾನು ಕೆಲ ವರ್ಷಗಳ ಹಿಂದೆ ಚಿಕ್ಕ ಹುಡುಗನಾಗಿದ್ದೆ. ಆದರೆ ಈಗ ನಾನು ಚಿಕ್ಕ ಹುಡುಗನಲ್ಲ.”
ಆದುದರಿಂದ ನಾನು ಹುಡುಗ ಎನ್ನುವದು ಕಾಲಮಿತಿಗೆ ಒಳಪಟ್ಟ reality.ನಾನು ಸತ್ತೂ ಹೋಗುವೆ.
ಆದುದರಿಂದ ಈ ದೇಹವು ಕಾಲಮಿತಿಗೆ ಒಳಪಟ್ಟ reality. ಇದು ಅಸತ್ ಸೃಷ್ಟಿ.

ಆದರೆ ಆತ್ಮ ಎನ್ನುವದು ಯಾವಾಗಲೂ ಇರುವಂತಹದು.
ಆದುದರಿಂದ ಅದು ಸತ್ ಸೃಷ್ಟಿ.
ಆತ್ಮನಿಗೆ ಪುರುಷ ಎನ್ನುತ್ತಾರೆ.
(ಪುರುಷ ಅಂದರೆ ಗಂಡಸು ಅನ್ನುವ ಅರ್ಥ ಇಲ್ಲಿಲ್ಲ. ಪುರುಷ ಅಂದರೆ ಉಪಭೋಕ್ತಾ ಆತ್ಮ.)
ಪ್ರಕೃತಿ ಅಂದರೆ ಬದಲಾಗುತ್ತಿರುವ ಅಸತ್ ಸೃಷ್ಟಿ.
ಅಸತ್ ಸೃಷ್ಟಿಯು ಈ ಜೀವಿ ಇಳಿದು ಬಂದಿರುವ ತವರುಮನೆ.
ಅಲ್ಲಿಂದ ಈ ಜೀವಿ ದೈವಿ ಭಾವವೇ ನಿತ್ಯವಾಗಿರುವ ಸತ್ ಸೃಷ್ಟಿಗೆ ಪ್ರವೇಶಿಸುತ್ತದೆ.
ಈ ಸೃಷ್ಟಿಯು ಸತ್ ಸೃಷ್ಟಿಯೇ ಆಗಿರಲಿ, ನಿತ್ಯ ಸೃಷ್ಟಿಯೇ ಆಗಿರಲಿ, ಆದರೆ ಇದೂ ಸಹ ಆತ್ಮನ ಕೊನೆಯ ನಿಲ್ದಾಣ ಅಲ್ಲ.
ಪರಮಾತ್ಮನೊಳಗೆ ಒಂದಾಗುವದೇ ಜೀವಾತ್ಮನ ಕೊನೆಯ ಗತಿ.
ಆದುದರಿಂದ ಆತ ಜೀವಾತ್ಮನ ಮೂರು ವಾಸನಾಶರೀರಗಳಾದ ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಶರೀರಗಳನ್ನು ನಾಶ ಪಡಿಸುತ್ತಾನೆ. ಆ ಶರೀರಗಳ ಸಂಯೋಜಕರಾದ ಐದು ಕೋಶಗಳನ್ನು (ಅನ್ನಮಯ ಕೋಶ, ಪ್ರಾಣಮಯ ಕೋಶ, ಜ್ಞಾನಮಯ ಕೋಶ, ವಿಜ್ಞಾನಮಯ ಕೋಶ, ಆನಂದಮಯ ಕೋಶಗಳನ್ನು) ದೂರಪಡಿಸುತ್ತಾನೆ. ಬಳಿಕ ತನ್ನ ಭಕ್ತನನ್ನು ವಿದೇಹಿಯನ್ನಾಗಿ ಮಾಡಿ ತನ್ನ ಸಾನ್ನಿಧ್ಯಕ್ಕೆ ಕರೆದೊಯ್ಯುತ್ತಾನೆ.
ಅಲ್ಲಿ ದೇಹನಾಶವಾಗಿ ಕೇವಲ ಭಾವ ಮಾತ್ರ ಉಳಿದುಕೊಳ್ಳುತ್ತದೆ.
ಅದನ್ನು ಶರೀಫರು ಹೀಗೆ ವರ್ಣಿಸುತ್ತಾರೆ:

ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ ||

ಶಿವನು ಪ್ರಭೆಯ ಮೂಲ; ಶಕ್ತಿಯೇ ಪ್ರಭೆ.
ಪರಮಾತ್ಮನು ಶರೀಫರನ್ನು ಈಗ ಸತ್ ಲೋಕದಿಂದ ಮೇಲಕ್ಕೆ ಎತ್ತಿ ಪ್ರಭಾಲೋಕದಲ್ಲಿ ಇರಿಸುತ್ತಾನೆ.
ಈ ಲೋಕದಲ್ಲಿ ಪರಮಾತ್ಮನು ಶರೀಫರಿಗೆ ‘ಎನಗೊತ್ತಿನವನು’.
‘ಎನಗೊತ್ತಿನವನು’ ಎನ್ನುವ ಪದ ಅತ್ಯಂತ ಅನ್ಯೋನ್ಯತೆಯನ್ನು ಹಾಗು ವಿಶ್ವಾಸವನ್ನು ಸೂಚಿಸುವ ಪದ.
ಈ ಪದವು ಎನಗೆ ಗೊತ್ತಿನವನು ಹಾಗೂ ಎನಗೆ ಒತ್ತಿನವನು ಎನ್ನುವ ಎರಡೂ ಅರ್ಥಗಳನ್ನು ಸೂಚಿಸುತ್ತದೆ. ಎನಗೆ ಗೊತ್ತಿನವನು ಅಂದರೆ ನಾನು ಅವನನ್ನು ಸಂಪೂರ್ಣವಾಗಿ ಬಲ್ಲೆ ಎಂದು ಹೇಳಿದಂತೆ. ಎನಗೆ ಒತ್ತಿನವನು ಎಂದರೆ ನನಗೆ ಅತ್ಯಂತ ಹತ್ತಿರವಾದವನು ಎಂದು ಹೇಳಿದಂತೆ.

ಈ ಪ್ರಭಾಲೋಕದಲ್ಲಿ ಶರೀಫರ ಮನಸ್ಸು ಬೇರೆಲ್ಲೂ ಹೋಗದು; ಪರಮಾತ್ಮನನ್ನು ಒಂದು ಗಳಿಗೆ ಸಹ ಅಗಲಿ ಇರದು. ಪರಮಾತ್ಮನು ಶರೀಫರನ್ನು ತನ್ನ ಸಾನ್ನಿಧ್ಯದಲ್ಲಿಯೆ (=ಗೊತ್ತಿನಲ್ಲಿಯೆ) ಇಟ್ಟುಕೊಂಡು, ಅವರಿಗೆ ಮುತ್ತಿನ ಮೂಗುತಿಯ ಕೊಟ್ಟನು. ಅಂದರೆ ಶರೀಫರು ಈಗ ಪರಮ ಪತಿವ್ರತೆ ಎಂದು ಹೇಳಿದಂತಾಯಿತು.ತನ್ನನ್ನು ಇಷ್ಟೆಲ್ಲ ತಿದ್ದಿ ಇಂತಹ ಪತಿವ್ರತೆ ಹೆಂಡತಿಯನ್ನಾಗಿ ಮಾಡಿಕೊಂಡ ಪರಮಾತ್ಮನನ್ನು ಶರೀಫರು ‘ಅವನೇನು ದಿಟ್ಟನೇ’ ಎಂದು ಬಣ್ಣಿಸುತ್ತಾರೆ

ಶರೀಫರು ಈ ಪದವಿಯನ್ನು ಪಡೆಯುವ ಯೋಗ್ಯತೆಯುಳ್ಳ ಇತರ ಭಕ್ತರನ್ನು, ತನ್ನ ಸಖಿಯರೆಂದು ಗ್ರಹಿಸಿ ಹೀಗೆ
ಹೇಳುತ್ತಾರೆ:

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ ||

ತಮ್ಮ ಈ ಸಿದ್ಧಿಗೆ ತಮ್ಮ ಪೂರ್ವಪುಣ್ಯವು ಎಷ್ಟು ಕಾರಣವೋ, ಪರಮಾತ್ಮನ ಕರುಣೆಯೂ ಅಷ್ಟೇ ಕಾರಣವೆಂದು
ಶರೀಫರು ಹೇಳುತ್ತಾರೆ.
ಪರಮಾತ್ಮ ಬೇರೆ ಅಲ್ಲ, ಸದ್ಗುರು ಬೇರೆ ಅಲ್ಲ.
ಆತ ಕಾಲ ಕೂಡಿದಾಗ, ಭಕ್ತನನ್ನು ತಾನಾಗಿಯೇ ಏಕಾಂತ ಮಂದಿರದಲ್ಲಿ ಕರೆದೊಯ್ದು (---ಗುರುವು ಉಪದೇಶವನ್ನು ಏಕಾಂತದಲ್ಲಿ ಕೊಡುತ್ತಾನೆ---) ಸದ್ಗತಿಗೆ ಹಚ್ಚುತ್ತಾನೆ.
ಅದರಿಂದಾಗಿ ಭಕ್ತನ ಭ್ರಾಂತಿ ಹಾಗೂ ಈ ಜಗದ ದುರಿತ ಪರಿಹಾರವಾಗುತ್ತವೆ.
ಸದ್ಗತಿಯನ್ನು ಹೇಗೆ ಪಡೆದೇನು ಎನ್ನುವ ಭಕ್ತನ ಚಿಂತೆ ಮಾಯವಾಗುತ್ತದೆ.
…………………………………………………………………………………
ಕನ್ನಡ ನಾಡಿನಲ್ಲಿ ಓಡಾಡಿ, ಹಳ್ಳಿಯ ಕನ್ನಡದಲ್ಲಿಯೆ ಮಹತ್ತತ್ವ ಸಾರಿದ ಶರೀಫರ ಬೋಧನೆ ನಮ್ಮನ್ನೂ ಸದ್ಗತಿಗೆ ಹಚ್ಚಲಿ.

(ಟಿಪ್ಪಣಿ:
ಖ್ಯಾತ ಓಡಿಸ್ಸಿ ನರ್ತನ ವಿದುಷಿಯಾದ ಸಂಯುಕ್ತಾ ಪಾಣಿಗ್ರಾಹಿಯವರು ಬೆಂಗಳೂರಿನಲ್ಲಿ ಕೇಳಿದ ಒಂದು ಪ್ರಶ್ನೆಯನ್ನು ಇಲ್ಲಿ ಉದ್ಧರಿಸುವದು ಅಪ್ರಸ್ತುತವಾಗಲಾರದು:
“ ಎಲ್ಲಾ ಕಲೆಗಳಲ್ಲಿ ಪರಮಾತ್ಮನನ್ನು ಪತಿಗೆ ಹಾಗೂ ಭಕ್ತನನ್ನು ಸತಿಗೆ ಏಕೆ ಹೋಲಿಸುತ್ತಾರೆ; ಪರಮಾತ್ಮನನ್ನು ಪತ್ನಿಗೆ ಹಾಗೂ ಭಕ್ತನನ್ನು ಪತಿಗೆ ಏಕೆ ಹೋಲಿಸಬಾರದು? ”

ಇದಕ್ಕೆ ಉತ್ತರ ಸ್ಪಷ್ಟವಿದೆ:
ದುರ್ದೈವದಿಂದ ನಮ್ಮದು ಪುರುಷ ಪ್ರಧಾನ ಸಮಾಜ ಹಾಗೂ ಪಿತೃಪ್ರಧಾನ ಕುಟುಂಬ ವ್ಯವಸ್ಥೆ.
ಇಂತಹ ಸಮಾಜವ್ಯವಸ್ಥೆಯಲ್ಲಿ, ಗಂಡಸಿನದು super ordinate ಸ್ಥಾನ ಹಾಗೂ ಹೆಣ್ಣಿನದು
sub ordinate ಸ್ಥಾನ.
ಸಂಸ್ಕೃತದಲ್ಲಿ ಪತ್ನಿಗೆ ‘ಭಾರ್ಯಾ’ ಹಾಗೂ ಪತಿಗೆ ‘ಭರ್ತಾ’ ಎನ್ನುವ ಪದಗಳಿರುವದನ್ನು ಗಮನಿಸಿರಿ.
‘ಭಾರ’ ಅಂದರೆ load, ಒಜ್ಜೆ.
ಭರ್ತಾ ಅಂದರೆ ಒಜ್ಜೆ ಹೊರುವವನು. ಭಾರ್ಯಾ ಅಂದರೆ ಹೊರಬೇಕಾದ ಒಜ್ಜೆ.
ಸುಮಾರು ಎರಡು ಶತಮಾನಗಳ ಹಿಂದಿನ ಇಂತಹ ಒಂದು ಸಾಂಪ್ರದಾಯಕ ಸಮಾಜದಲ್ಲಿ ಬಾಳಿದ ಸಂತರು, ಆ ಸಮಾಜದ ಗುಣ,ಲಕ್ಷಣಗಳನ್ನು ಅಳವಡಿಸಿಕೊಂಡಿರುವ ಕವಿಗಳು, ಭಗವಂತನನ್ನು ಭರ್ತಾ(=ಪಾಲಕ) ಎಂದು ತಿಳಿದವರು, ತಮ್ಮನ್ನು ಭಾರ್ಯಾ ಎಂದೇ ಭಾವಿಸಬೇಕಲ್ಲವೆ?

ಭಾರತದಲ್ಲಿ ಮಾತ್ರ ಇಂತಹ conservative society ಇತ್ತು ಎಂದೇನಲ್ಲ.
ಸುಮಾರು ನೂರು ವರ್ಷಗಳ ಹಿಂದಿನ ಇಂಗ್ಲಿಶ್ ಲೇಖಕಿಯರನ್ನೇ ಗಮನಿಸಿರಿ.
ಅವರೆಲ್ಲರೂ male supremacyಯನ್ನು ಮನಃಪೂರ್ವಕವಾಗಿ ಒಪ್ಪಿಕೊಂಡವರೇ!
ಉದಾಹರಣೆಗೆ ಹೇಳಬೇಕೆಂದರೆ ಸುಪ್ರಸಿದ್ಧ ಇಂಗ್ಲಿಶ್ ಲೇಖಕಿಯಾದ Daphne du Maurier.
ಇವಳು ಬರೆದ Frenchman’s Creek ಕಾದಂಬರಿಯು ಈ ಧೋರಣೆಯ ಜ್ವಲಂತ ಉದಾಹರಣೆಯಾಗಿದೆ.

ಇಂತಹ ಒಂದು ಪರಿಸ್ಥಿತಿಗೆ ಕಾರಣವೇನು?
ಗಂಡಸು ಹೆಂಗಸಿಗೆ ಯಾವತ್ತು ಬಳೆ(=ಬೇಡಿ) ತೊಡಿಸಿದನೊ, ಆ ದಿನದಿಂದ ಹೆಂಗಸರ social conditioning ಪ್ರಾರಂಭವಾಯಿತು.
ಸೆರೆಯಾಳುಗಳು ತಮ್ಮನ್ನು ಸೆರೆ ಹಿಡಿದವರನ್ನೇ ಆರಾಧಿಸುವ Stockholm Complexಗೆ ಹೆಂಗಸರು ಬಲಿಯಾದರು.

ಈ ಲಕ್ಷಣವನ್ನು ಮೈಗೂಡಿಸಿಕೊಂಡಂತಹ ಒಂದು ಕಾದಂಬರಿ: Frenchman’s Creek;
ಈ ಸಾಮಾಜಿಕ ಲಕ್ಷಣವನ್ನು ಪ್ರದರ್ಶಿಸುವಂತಹ ಆಧ್ಯಾತ್ಮಿಕ ಕವನ: ಎಲ್ಲರಂಥವನಲ್ಲ ನನ ಗಂಡ.

Tuesday, November 18, 2008

ತರವಲ್ಲ ತಗಿ ನಿನ್ನ ತಂಬೂರಿ

ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ ||ಪಲ್ಲ||

ಸರಸ ಸಂಗೀತದ ಕುರುಹುಗಳನರಿಯದೆ
ಬರದೆ ಬಾರಿಸದಿರು ತಂಬೂರಿ ||ಅ.ಪ.||

ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ
ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ ||೧||

ಬಾಳ ಬಲ್ಲವರಿಗೆ ತಂಬೂರಿ ದೇವ-
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ ||೨||

ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕೆ ತಂಬೂರಿ ||೩||

ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಾಧೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ ||೪||

ಕನ್ನಡ ಕವಿಗಳು ಸುಸಂಯೋಜಿತ, ಸಮರಸಪೂರ್ಣ ಬದುಕನ್ನು ವರ್ಣಿಸಲು ತಂಬೂರಿಯ ಪ್ರತಿಮೆಯನ್ನು ಬಳಸುತ್ತಲೇ ಬಂದಿದ್ದಾರೆ.
ಶರೀಫರು ತಂಬೂರಿಯ ಪ್ರತಿಮೆಯನ್ನು ಸಾಧಕನ ಮನಸ್ಸಿಗೆ ಹೋಲಿಸಿ ಹಾಡಿದ್ದಾರೆ.

ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ ||ಪಲ್ಲ||
ಸರಸ ಸಂಗೀತದ ಕುರುಹುಗಳನರಿಯದೆ
ಬರದೆ ಬಾರಿಸದಿರು ತಂಬೂರಿ ||ಅ.ಪ.||

ದೇವರನ್ನು ಮನಸ್ಸಿನಲ್ಲಿ ತುಂಬಿಕೊಂಡು, ತನ್ನ ಬಾಳನ್ನು ದೇವರಿಗೆ ಅರ್ಪಿಸಿ ಬದುಕುವದೇ ನಿಜವಾದ ಸಾಧನೆ.
ಈ ರೀತಿಯಾಗಿ ಮಾಡಲು ಅರಿಯದವನು, ದೇವರು ಕೊಟ್ಟ ತಂಬೂರಿಯನ್ನು ಸರಿಯಾಗಿ, ಸುಸ್ವರದಲ್ಲಿ ಬಾರಿಸುತ್ತಿಲ್ಲ; ಆತನಿಗೆ ಸರಸ ಸಂಗೀತದ ಕುರುಹೇ ಗೊತ್ತಿಲ್ಲ! ಅವನು ತನ್ನ ಮನಸ್ಸೆಂಬ ತಂಬೂರಿಯನ್ನು ಅಪಸ್ವರದಲ್ಲಿ ಬಾರಿಸುತ್ತಾನೆ. ಅಂಥವನು ಸಾಧನೆಯಿಂದ ತನ್ನ ಮನಸ್ಸು ಪಕ್ವವಾಗುವ ತನಕ ಕಾಯಬೇಕು.

ಚಾಮರಸ ಕವಿ ಬರೆದ “ಪ್ರಭುಲಿಂಗ ಲೀಲೆ”ಯಿಂದ ತುಂಬಾ ಪ್ರಭಾವಿತರಾದ ಶರೀಫರು ತಮ್ಮ ಕವನಗಳಲ್ಲಿ ಮದ್ದಲೆಯ ಪ್ರತಿಮೆಯನ್ನು ಬಳಸಿದಾಗೆಲ್ಲ, ಆ ಮದ್ದಲೆಯನ್ನು ಬಾರಿಸುವವನು ಸ್ವತಃ ಪ್ರಭುವೇ ಎನ್ನುವ ಭಾವವನ್ನು ತಾಳಿರುತ್ತಾರೆ. ಆ ಕಾರಣದಿಂದಲೇ ಅವರು,
“ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ”
ಎಂದು ಹೇಳುವಾಗ, ಸ್ವತಃ ಭಗವಂತನೇ, ಈ ಬಾಳಿನ ಯೋಜನೆಯನ್ನು ರೂಪಿಸಿದವನು;ಆತ ಬಾರಿಸುತ್ತಿರುವ ಮದ್ದಲೆಗೆ ತಕ್ಕಂತೆ ನಾವು ತಂಬೂರಿಯನ್ನು ನುಡಿಸಬೇಕು ಎಂದು ಅಭಿಪ್ರಾಯ ಪಡುತ್ತಾರೆ.
“ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ”
ಈ ರೀತಿಯಾಗಿ ಸಾಧಕನು ತನ್ನ ಮನಸ್ಸಿನ ತಂಬೂರಿಯನ್ನು ದೇವನ ಮದ್ದಲೆಗೆ ಹೊಂದಿಸಿಕೊಂಡರೆ, ಆತ ಸಿದ್ಧ ಸಾಧಕನಾಗುತ್ತಾನೆ, ಬುದ್ಧಿವಂತನಾಗುತ್ತಾನೆ.

ಶರೀಫರು ಶಾಕ್ತ ಪಂಥದ ಸಾಧಕರು. ಈ ಪಂಥದಲ್ಲಿ “ವಿದ್ಯೆ” ಎಂದರೆ ಶಾಕ್ತವಿದ್ಯೆ.
ಈ ವಿದ್ಯೆಯನ್ನು ಸಾಧಿಸಿದವನಿಗೆ ಅನೇಕ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುವವು.
ಇಂತಹ ಸಿದ್ಧಿಗಳು ಶರೀಫರ ಸಮಕಾಲೀನರಾದ ನವಲಗುಂದದ ನಾಗಲಿಂಗ ಸ್ವಾಮಿಗಳಿಗೆ, ಗರಗದ ಮಡಿವಾಳಪ್ಪನವರಿಗೆ ಪ್ರಾಪ್ತವಾಗಿದ್ದವು.
ಶರೀಫರಿಗೆ ಬಹುಶಃ ಇಂತಹ ಸಿದ್ಧಿಗಳು ದೊರೆತಿರಲಿಕ್ಕಿಲ್ಲ. ಅವರ ಕವನ ಒಂದರಲ್ಲಿ ಇದರ ಸೂಚನೆ ದೊರೆಯುತ್ತದೆ:

“ಎಲ್ಲರಂಥವನಲ್ಲ ನನಗಂಡಾ
ಬಲ್ಲಿದನು ಪುಂಡಾ
.........
…………………..
ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟುಗಳ್ಳರ ಮನೆಗೆ ಬರಗೊಡದಾ”

ಆದುದರಿಂದ ಬುದ್ಧಿವಂತನಾದವನು, ಈ ಸಿದ್ಧಿಗಳನ್ನು ಮೋಜಿಗಾಗಿ ಅಥವಾ ಸ್ವಾರ್ಥಕ್ಕಾಗಿ ಬಳಸದೆ, ಆತ್ಮೋನ್ನತಿಗಾಗಿ ಬಳಸಬೇಕು.

ಬಾಳ ಬಲ್ಲವರಿಗೆ ತಂಬೂರಿ ದೇವ-
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ

ಈ ತಂಬೂರಿಯು ಬಾಳಾಕ್ಷದೇವನು ನಿರ್ಮಿಸಿದ ತಂಬೂರಿ. ಶರೀಫರು ಇಲ್ಲಿ pun ಉಪಯೋಗಿಸಿದ್ದಾರೆ. ಬಾಳಾಕ್ಷ ಅಂದರೆ ಭಾಲಾಕ್ಷ, ಅಂದರೆ ಶಿವ. ಇದು ನೇರವಾದ ಅರ್ಥ. ಒಳಗೆ ಹುದುಗಿದ ಅರ್ಥವೆಂದರೆ, ಬಾಳಿಗೆ ಅಕ್ಷನಾದ ಅಂದರೆ ಕಣ್ಣಾದ ದೇವನು. ಇದರ ಹಂಚಿಕೆಯನ್ನು ಅಂದರೆ ರಚನೆಯ ವಿಧಾನವನ್ನು, ಚಾತುರ್ಯವನ್ನು ತಿಳಿಯದೇ ಬಾರಿಸಲು ಹೊರಟವನು ತಾಳಗೇಡಿಯಾಗುತ್ತಾನೆ.

ಈ ಬಾಳು ದೇವನ ದೇಣಿಗೆ ಎನ್ನುವದನ್ನು ಅರಿತುಕೊಂಡು, ದೇವರು ನೀಡಿದ ಬುದ್ಧಿಶಕ್ತಿ, ಶ್ರದ್ಧೆ, ಭಕ್ತಿ ಇವುಗಳನ್ನು ಸಮರಸಗೊಳಿಸಿ, ಯಾವುದಕ್ಕೂ ಆಸೆಪಡದೆ ಬಾಳಿದರೆ, ಅದು ಸಮಂಜಸವಾದ ಬಾಳು.
ಇಂತಹ ಬಾಳಿನಲ್ಲಿ ಮಾತ್ರ ಬಾಳಾಕ್ಷ ಕೊಟ್ಟ ತಂಬೂರಿಯ ಸುನಾದ ಹೊರಡಲು ಸಾಧ್ಯ.

ಇಂತಹ ತಂಬೂರಿಯನ್ನು ಸತ್ಯವಂತರಿಗಲ್ಲದೆ ಬೇರೊಬ್ಬರಿಗೆ ನುಡಿಸಲು ಸಾಧ್ಯವಾದೀತೆ?
ಆದುದರಿಂದ ಉತ್ತಮರಿಗೆ ಮಾತ್ರ ಸರಿಯಾಗಿ ನುಡಿಸಲು ಸಾಧ್ಯವಾಗುವ ತಂಬೂರಿ ಇದು.

“ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕೆ ತಂಬೂರಿ”

ಬತ್ತೀಸ ರಾಗಗಳು ಅಂದರೆ ಶಾಸ್ತ್ರೀಯ ಸಂಗೀತದ ಮೂವತ್ತೆರಡು ಮೂಲರಾಗಗಳು.
ಈ ಎಲ್ಲ ರಾಗಗಳಲ್ಲಿ ಬಾರಿಸಲು ಪ್ರಯತ್ನಿಸಿದರೂ, ರಾಗದ ಬಗೆಯನ್ನು (=ಮನಸ್ಸು, ಲಕ್ಷಣ) ತಿಳಿಯದೆ, ಬಾರಿಸುವವನು ಕತ್ತೆ ಇದ್ದಂತೆ.

ಈ ತಂಬೂರಿಯು ಅಸಮ(=unequalled, matchless) ಸುಮೇಳದಲ್ಲಿ (=orchestra, harmony) ನುಡಿಸಬೇಕಾದ ತಂಬೂರಿ.
ಇದನ್ನು ಕುಶಲರೇ ನುಡಿಸಬಲ್ಲರು.
ಆ ಕೌಶಲ್ಯವನ್ನು ಪಡೆಯುವ ಬಗೆ ಹೇಗೆ?
ಶಿಶುನಾಳಧೀಶನಾದ ದೇವನಲ್ಲಿ ಮನಸ್ಸಿಟ್ಟು, ಅವನನ್ನೇ ಓದಿ, ಅವನನ್ನೇ ಅರಿತು, ಬಾಳನ್ನು ಹಸನಾದ(=clean) ರೀತಿಯಲ್ಲಿ ಬಾಳಿದರೆ, ಈ ತಂಬೂರಿ ಆ ಸಾಧಕನಿಗೆ ಕರಗತವಾಗುವದು.

ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಾಧೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ

(ಶರೀಫರು ಅಸಮ ಸುಮೇಳ ಎನ್ನುವಾಗ, ಒಂದು apparent ವಿರೋಧಾರ್ಥ ಬಳಸಿದ್ದಾರೆ:
ಅಸಮ ಸುಮೇಳ=Disharmonius orchestra)

ಹುಟ್ಟುತ್ತಲೆ, ಪ್ರತಿ ಜೀವಿಯೂ ಅಪಾರ ಸಾಧನೆ ಮಾಡಬಲ್ಲ ಮನಸ್ಸನ್ನು ದೇವರಿಂದ ಪಡೆಯುತ್ತಾನೆ.
ಅದು ದೇವರು ಆತನಿಗೆ ಕೊಟ್ಟ ತಂಬೂರಿ.
ಅದರಂತೆ ಈ ಬಾಳೂ ಸಹ ತಂಬೂರಿಯೆ.
ಬಾಳಿನ ಪ್ರತಿ ಕರ್ಮವೂ ಈ ತಂಬೂರಿಯನ್ನು ನುಡಿಸಿದಂತೆ.
ಬಾಳಿನಲ್ಲಿ ದೊರೆಯಬಹುದಾದ ಸಾಮರ್ಥ್ಯಗಳು ಹಾಗೂ ಸಿದ್ಧಿಗಳು ಈ ತಂಬೂರಿಯ ಭಾಗಗಳೇ.
ಇವೆಲ್ಲವನ್ನು ಸರಿಯಾಗಿ ಬಳಸಿ, ಪ್ರಭುವಿನ ಮದ್ದಲೆಗೆ ಸರಿಯಾಗಿ ತಂಬೂರಿ ನುಡಿಸಿದರೆ, ಸುಸ್ವರ ಹೊರಡುವದು.
ಈ ಸುಸ್ವರದಿಂದ ಮಹದಾನಂದ ದೊರೆಯುವದು.

ಅದರ ಬದಲಾಗಿ ತನ್ನ ಸಾಮರ್ಥ್ಯವನ್ನು ದುರುಪಯೋಗಿಸಿಕೊಂಡರೆ, ತಂಬೂರಿಯಲ್ಲಿ ಅಪಶ್ರುತಿ ಹೊರಡುವದು.
ಇದೇ ಶರೀಫರ ಸಂದೇಶ.

Saturday, November 8, 2008

ಸಾಚಾರ ಸಮಿತಿಯ ಒಡಕು ತಂಬೂರಿ

ಭಾರತೀಯ ಸಂಗೀತದಲ್ಲಿ ತಂಬೂರಿಗೆ ಮಹತ್ವದ ಸ್ಥಾನವಿದೆ. ಗಾಯಕನಿಗೆ ಸ್ವರ ಹೊಂದಿಸಿಕೊಳ್ಳಲು ತಂಬೂರಿ ಬೇಕೆ ಬೇಕು. ಇಂತಹ ತಂಬೂರಿಯಲ್ಲಿ ನಾಲ್ಕು ತಂತಿಗಳಿರುತ್ತವೆ. ತಂಬೂರಿಯಿಂದ ಸುಸ್ವರದ ಆಲಾಪ ಬರಬೇಕಾದರೆ, ಈ ನಾಲ್ಕೂ ತಂತಿಗಳಿಂದ ಮಧುರವಾದ ಒಂದೇ ಸ್ವರ ಬರಬೇಕು. ಹಾಗಿಲ್ಲದೆ, ಒಂದೊಂದು ತಂತಿಯಿಂದ ಒಂದೊಂದು ಸ್ವರ ಬಂದರೆ ಕರ್ಕಶ ಧ್ವನಿ ಕೇಳಿಸುವದು. ನಮ್ಮ ಭಾರತವೆನ್ನುವ ತಂಬೂರಿಗೆ ನಾಲ್ಕಲ್ಲ, ನೂರಾರು ತಂತಿಗಳಿವೆ. ಪ್ರತಿಯೊಂದು ತಂತಿಯೂ ಝೇಂಕಾರದ ಬದಲು ಠೇಂಕಾರವನ್ನು ಮಾಡುತ್ತಿದೆ. ಇಂತಹ ಅಪಲಾಪವನ್ನು ಬೆಂಬಲಿಸುವ ಬುದ್ಧಿಜೀವಿಗಳು, “ಭಾರತವು ಒಂದು ಬಹುಸಂಸ್ಕೃತಿಯ ರಾಷ್ಟ್ರ” ಎಂದು ಬೊಬ್ಬೆಯಿಡುತ್ತಿದ್ದಾರೆ.

ಭಾರತವು ಬಹುಸಂಸ್ಕೃತಿಯ ರಾಷ್ಟ್ರವಲ್ಲ, ಇದು ವೈವಿಧ್ಯಮಯವಾದ ರಾಷ್ಟ್ರ. ಭಾರತೀಯನೊಬ್ಬನು ಪರದೇಶಕ್ಕೆ ಹೋದರೆ, ಅವನ ಭಾಷೆ, ಧರ್ಮ, ವೇಷಭೂಷಣ ಏನೆ ಇರಲಿ, ಅವನನ್ನು ಭಾರತೀಯನೆಂದೇ ಗುರುತಿಸುತ್ತಾರೆಯೇ ಹೊರತು ಅವನನ್ನು ತಮಿಳಿಗ, ಬಂಗಾಲಿ, ಹಿಂದೂ ಅಥವಾ ಮುಸ್ಲಿಮ್ ಎಂದಲ್ಲ.

[ಟಿಪ್ಪಣಿ:
ಶಾಂತಿಯುತ ಸಹಬಾಳ್ವೆ ನಡೆಸುತ್ತಿದ್ದ ಜನಕುಲಗಳು ಪ್ರಾಚೀನ ಭಾರತದಲ್ಲಿ ಎಲ್ಲೆಡೆಯೂ ನೆಲೆಸಿದ್ದವು.
ಇಂದು ಓಡಿಸಾದಲ್ಲಿ ಜಗಳಾಡುತ್ತಿರುವ ಪಣ ಮತ್ತು ಕಂದ ಆದಿವಾಸಿಗಳು ಒಂದು ಕಾಲದಲ್ಲಿ ಭಾರತದಲ್ಲೆಲ್ಲ ಹರಡಿಕೊಂಡಿದ್ದರು. ಪಣರು ಕರ್ನಾಟಕ ಹಾಗು ಗೋವಾದಲ್ಲಿ ನೆಲೆಯಾಗಿದ್ದರೆನ್ನುವದಕ್ಕೆ ಸಾಕ್ಷಿಯಾಗಿ ‘ಪಣ’ (ಹನ)ಹೆಸರಿನಿಂದ ಪ್ರಾರಂಭವಾಗುವ ಅನೇಕ ಊರುಗಳು ಈ ಭಾಗದಲ್ಲಿವೆ. ಉದಾ: ಪಣಜಿ, ಪಣಂಬೂರು, ಪಣಗುತ್ತಿ, ಹನಸೋಗೆ, ಹಣಜಿ ಇತ್ಯಾದಿ.
ಕಂದರಂತೂ ಅಫಘಾನಿಸ್ತಾನದಿಂದ ಕರ್ನಾಟಕದವರೆಗೆ ಎಲ್ಲೆಡೆಯೂ ಇದ್ದರು. ‘ಕಂದ’ ಪದದಿಂದ ಪ್ರಾರಂಭವಾಗುವ ಊರುಗಳು: ಕಂದಹಾರ (ಅಫಘಾನಿಸ್ತಾನದಲ್ಲಿ), ಕಂದಹಾರ (ಮಹಾರಾಷ್ಟ್ರದಲ್ಲಿ), ಕಂದಕೂರು,ಕಂದಲಿ, ಕಂದಾಪುರ, ಖಂಡಾಲಾ ಇತ್ಯಾದಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿರಿ.]

ಪರಿಸ್ಥಿತಿ ಹೀಗಿರುವಾಗ, ಭಾರತೀಯರಲ್ಲಿ ಭಿನ್ನತೆ ಕಲ್ಪಿಸುವ ವಿಪರೀತ ಬುದ್ಧಿ ಯಾವಾಗ ಪ್ರಾರಂಭವಾಯಿತು? ಅದರಂತೆ ‘ಅಲ್ಪಸಂಖ್ಯಾತರು’ ಎನ್ನುವ concept ಯಾವಾಗ ಪ್ರಾರಂಭವಾಯಿತು? ಬಹುಶಃ ಬ್ರಿಟಿಶರು ಈ ಪರಿಕಲ್ಪನೆಯನ್ನು ಹುಟ್ಟುಹಾಕಿದರೆ? ಅದೇನೇ ಇದ್ದರೂ, ಅದರ ಲಾಭ(?)ವನ್ನು ಪಡೆದವರು ಹಾಗೂ ಪಡೆಯಲು ಯತ್ನಿಸುತ್ತಿರುವವರು ಮಾತ್ರ ಸ್ವಾರ್ಥಿಗಳಾದ ರಾಜಕಾರಣಿಗಳು ಹಾಗೂ ಈ ರಾಜಕಾರಣಿಗಳ ಎಂಜಲು ತಿಂದಿರುವ, ತಿನ್ನುತ್ತಿರುವ ಅಜ್ಞಾನಪೀಠಸ್ಥರು.

ಅಲ್ಪಸಂಖ್ಯಾತರೆನ್ನುವ pervert ಕಲ್ಪನೆಯ ಪ್ರಥಮ ಫಲಾನುಭವಿ ಎಂದರೆ ಜಿನ್ನಾ. ಭಾರತದಲ್ಲಿ ರಕ್ತದ ಓಕುಳಿ ಹರಿಸಿ, ಭಾರತವನ್ನು ಒಡೆದು, ತಾನೂ ಸಹ ‘ರಾಷ್ಟ್ರಪಿತ’ನಾದ. ಎರಡನೆಯ ಫಲಾನುಭವಿ ಅಂದರೆ ಭಾರತೀಯ ರಾಜಕಾರಣಿ ; ತನಗೆ ವೋಟುಗಳು ಸಿಗಬೇಕಾದರೆ, ತಾನು ಭಾರತವನ್ನು ಛಿದ್ರ ಛಿದ್ರವಾಗಿ ಒಡೆಯಬೇಕೆಂದು ತಿಳಿದುಕೊಂಡವ.

ಪಿ. ವಿ. ನರಸಿಂಹರಾಯರು ಭಾರತದ ಪ್ರಧಾನಿಯಾದಾಗ ವಿವಿಧ ಮಾಧ್ಯಮಗಳಲ್ಲಿ ಒಂದು ಜಾಹೀರಾತು ಪದೇ ಪದೇ ಬರುತ್ತಿತ್ತು. ಅದು ಹೀಗಿದೆ:
ಪಿ.ವಿ.ನರಸಿಂಹರಾಯರ ಚಿತ್ರ; ಅವರ ಪಕ್ಕದಲ್ಲಿ ಒಂದು ಬಸ್ಸು; ಕೆಳಗಡೆ ಒಂದು ಘೋಷಣೆ:
“ಪ್ರಯಾಣಿಕರು ಬಸ್ಸನ್ನು ಹತ್ತಬೇಕಾದರೆ, ಚಾಲಕನು ಪ್ರಯಾಣಿಕರ ಧರ್ಮವನ್ನು ಕೇಳುತ್ತಾನೆಯೆ?”

ಘೋಷಣೆಯೇನೊ ಸರಿಯಾದದ್ದೇ.
ಆದರೆ ಒಂದು ಸತ್ಯವನ್ನು ಇಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ:
ಬಸ್ಸಿನಲ್ಲಿ ಎಲ್ಲ ಪ್ರಯಾಣಿಕರು ಶಿಸ್ತಿನಿಂದ ಕೂಡಬೇಕು.
ಒಬ್ಬಾತ ನಿಂತುಕೊಂಡಾಗ, ಮತ್ತೊಬ್ಬಾತ ಮಲಗಿಕೊಂಡಿರಕೂಡದು, ಇನ್ನೊಬ್ಬಾತ ಸೀಟಿನ ಮೇಲೆ ಕುಣಿಯುತ್ತಿರಬಾರದು.
ಇತರ ಪ್ರಯಾಣಿಕರೊಂದಿಗೆ ಜಗಳ ತೆಗೆಯಬಾರದು.
ಬಸ್ಸಿಗೆ ಹಾನಿ ಮಾಡಬಾರದು.
ಇವೆಲ್ಲ ಬಸ್ಸಿನ ಪ್ರಯಾಣಿಕರು ಅನುಸರಿಸಬೇಕಾದ ಸಾಮಾನ್ಯ ನಿಯಮಗಳು.

ಆದರೆ ಭಾರತದಲ್ಲಿ ಒಬ್ಬೊಬ್ಬ ಪ್ರಯಾಣಿಕನಿಗೆ ಒಂದೊಂದು ನಿಯಮ.
ಏಕೆಂದರೆ, ಭಾರತವು ಬಹುಸಂಸ್ಕೃತಿಯ ದೇಶ ; ಭಾರತವು ಅಲ್ಪಸಂಖ್ಯಾತರ ದೇಶ !
ಅಲ್ಪಸಂಖ್ಯಾತರೆನ್ನುವ pervert concept ಅನ್ನು ಒಪ್ಪಿಕೊಳ್ಳೋಣ.
ಅಲ್ಪಸಂಖ್ಯಾತರಿಗೆ ಯಾವ ರೀತಿಯ ಸವಲತ್ತುಗಳನ್ನು ಕೊಡಬೇಕೆನ್ನುವದನ್ನು ಮಾತ್ರ ನಮ್ಮ ಸರಕಾರ ಅರ್ಥ ಮಾಡಿಕೊಂಡಿಲ್ಲ.
ಅಥವಾ ಮಾಡಿಕೊಂಡರೂ ಸಹ, ಉದ್ದೇಶಪೂರ್ವಕವಾಗಿ ತಿರುಚುತ್ತಿದೆ. (ಚುನಾವಣೆಯಲ್ಲಿ ಮತಗಳಿಕೆಗಾಗಿ).

ಅಲ್ಪಸಂಖ್ಯಾತರ ಸಂಸ್ಕೃತಿಯ ವೈಶಿಷ್ಟ್ಯಗಳು ಬಹುಸಂಖ್ಯಾತರ ಸಂಸ್ಕೃತಿಯಲ್ಲಿ ಮುಚ್ಚಿ ಹೋಗದಿರಲಿ ಎನ್ನುವದೇ ಅವರಿಗೆ ಕೊಡಬೇಕಾದ ರಕ್ಷಣೆಯ ಮುಖ್ಯ ಉದ್ದೇಶ. ನಮ್ಮಲ್ಲಿ ಅಲ್ಪಸಂಖ್ಯಾತರ ಧರ್ಮಾಚರಣೆಗೆ ಅಥವಾ ಸಂಸ್ಕೃತಿಯ ಪೋಷಣೆಗೆ ಏನಾದರೂ ಬಾಧಕಗಳಿವಿಯೆ?
In fact, contrary is the case.

ಮೊದಲಿನಿಂದಲೂ ನಮ್ಮ ಒಕ್ಕಲಿಗರೆಲ್ಲರೂ ಸೋಮವಾರದ ದಿನ ‘ಬಸವಣ್ಣನ ದಿನ’ ಎಂದು ತಮ್ಮ ಕೆಲಸಗಳಿಗೆ ಬಿಡುವು ಕೊಡುತ್ತಿದ್ದಾರೆ.
ಬ್ರಿಟಿಶರ ಆಡಳಿತಕ್ಕಿಂತ ಮೊದಲು ರವಿವಾರದ ರಜೆ ನಮ್ಮಲ್ಲಿ ಇರಲಿಲ್ಲ.
ಆದರೆ ಈಗ ನಮ್ಮಲ್ಲಿ ಶೇಕಡಾ ೧ಕ್ಕಿಂತ ಕಡಿಮೆ ಇರುವ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರಿಗಾಗಿ ಒಂದು ವರ್ಷದಲ್ಲಿ ೫೨ ರಜಾದಿನಗಳನ್ನು (ರವಿವಾರದ ಪ್ರಾರ್ಥನೆಗಾಗಿ) ಸರಕಾರವು ನೀಡಿದೆ.
ಮುಸ್ಲಿಮ್ ದೇಶಗಳಲ್ಲಿ ಶುಕ್ರವಾರದಂದು ವಾರದ ರಜೆ ಕೊಡುತ್ತಾರೆ. (ಭಾರತದಲ್ಲಿಯ ಮುಸ್ಲಿಮ್ ವಿದ್ಯಾಸಂಸ್ಥೆಗಳೂ ಸಹ ರವಿವಾರದ ಬದಲಾಗಿ ಶುಕ್ರವಾರವೇ ರಜೆ ಕೊಡುತ್ತಾರೆ.)
ಪರಿಸ್ಥಿತಿ ಹೀಗಿದ್ದಾಗ, ಭಾರತದಲ್ಲಿ ಬಹುಸಂಖ್ಯಾತ ಹಿಂದು ಧರ್ಮೀಯರು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವದು ಸರಿಯೆ?

[ಭಾರತದ ಸಂವಿಧಾನವು ಹೀಗೆ ಹೇಳುತ್ತದೆ:
Article 14:
The State shall not deny to any person equality before the law or the equal protection of the laws within the territory of India.
Article 15:
Prohibition of discrimination on grounds of religion, race, caste, sex or place of birth.
ಆದುದರಿಂದ ಭಾರತದ ಸಂವಿಧಾನಕ್ಕೆ ಧರ್ಮನಿರಪೇಕ್ಷ ಎನ್ನಬೇಕಾಗುತ್ತದೆ.

ಆದರೆ ಮುಸ್ಲಿಮ್ ರಾಷ್ಟ್ರವೊಂದರಲ್ಲಿ ಇರುವ ಶಾಸನವನ್ನು ಗಮನಿಸಿ:
ಸುಮಾರು ೪೦ ವರ್ಷಗಳ ಹಿಂದೆ The Illustrated Weekly of India ಎನ್ನುವ ವಾರಪತ್ರಿಕೆಯಲ್ಲಿ ಪ್ರಕಟವಾದ ವರದಿ ಹೀಗಿತ್ತು:
ಅರಬ ರಾಷ್ಟ್ರವೊಂದರ factory ಒಂದರಲ್ಲಿ ಕೆಲಸ ಮಾಡುತ್ತಿದ್ದ ಗ್ರೀಸ್ ದೇಶದ ಫೋರ್ಮನ್ನನು factoryಯ ಒಳಗಡೆ ವಾಹನ ಚಲಾಯಿಸುತ್ತಿದ್ದಾಗ, ಅಕಸ್ಮಾತ್ತಾಗಿ ಭಾರತೀಯ ಕಾರ್ಮಿಕನ ಮೇಲೆ ವಾಹನ ಚಲಾಯಿಸಿದ್ದರಿಂದ ಕಾರ್ಮಿಕನು ಸಾವಿಗೀಡಾದನು. ಪರಿಹಾರ ಕೊಡಿಸುವ ನ್ಯಾಯಾಲಯವು ಮೃತ ಕಾರ್ಮಿಕನು ಭಾರತೀಯನಾದದ್ದರಿಂದ ನಿಕೃಷ್ಟ ಪರಿಹಾರವನ್ನು ನಿಗದಿಗೊಳಿಸಿತು. ತೀರ್ಪು ನೀಡಿದ ಬಳಿಕ, ಆ ಭಾರತೀಯನು ಹಿಂದೂ ಧರ್ಮದವನು ಎಂದು ಮತ್ತೆ ತಿಳಿದು ಬಂದದ್ದರಿಂದ, ಈ ಮೊದಲು ನಿಗದಿ ಪಡಿಸಿದ ಪರಿಹಾರವನ್ನು ಎರಡು ಮೂರಾಂಶಕ್ಕೆ ಮರು ನಿಗದಿಪಡಿಸಲಾಯಿತು.

ಅರಬ ರಾಷ್ಟ್ರಗಳಲ್ಲಿ ಭಾರತೀಯರಿಗೆ ಹಾಗೂ ಹಿಂದೂಗಳಿಗೆ ಕೊಡುವ ನ್ಯಾಯ ಇದು!]

ಭಾರತದಲ್ಲಿ ಮಾತ್ರ ಅಲ್ಪಸಂಖ್ಯಾತರರೇ ಬಹುಸಂಖ್ಯಾತರರಿಗಿಂತ ಹೆಚ್ಚು ಸಮಾನರು! ಉದಾಹರಣೆಗಳನ್ನು ಕೊಡುತ್ತೇನೆ:
ಭಾರತ ದೇಶದಲ್ಲಿ ಈಗ ಅತ್ಯಂತ ಬಡತನದ ಸ್ಥಿತಿಯಲ್ಲಿ ಇರುವವನೆಂದರೆ ಒಕ್ಕಲಿಗ.
ಸುಮಾರಾಗಿ ಎಲ್ಲ ಒಕ್ಕಲಿಗರೂ ಹಿಂದುಗಳೇ.
ನೂರಾರು ಜನ ಒಕ್ಕಲಿಗರು ಪ್ರತಿ ವರ್ಷವೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಭಾರತ ಸರಕಾರ ರೈತರ ಸ್ಥಿತಿ ಸುಧಾರಣೆಗೆ ಏನು ಮಾಡಿದೆ? ಅವರಿಗೆ ಯಾವ ಸವಲತ್ತುಗಳನ್ನು ಕೊಟ್ಟಿದೆ?
(ಭಾರತದಲ್ಲಿ ಈಗಾಗಲೇ ೧,೨೫,೦೦೦ ರೈತರು ಕುಲಾಂತರಿ ಬೀಜಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು, ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ಇಲ್ಲಿ ಹೇಳಿದ್ದಾರೆ.
ನಮ್ಮ ಸಹಪ್ರಯಾಣಿಕ ಅಮರ ಅವರ ಕೃಪೆಯಿಂದ ಈ ಮಾಹಿತಿ ಲಭ್ಯವಾಗಿದೆ.)


ಆದರೆ, ಅಲ್ಪಸಂಖ್ಯಾತರು, ವಿಶೇಷತಃ ಮುಸಲ್ಮಾನರು ಬಡತನದಲ್ಲಿ ಬಳಲುತ್ತಿದ್ದಾರೆ ಎಂದು ಭಾಷಣ ಬಿಗಿಯುತ್ತ, ಅವರ ಸ್ಥಿತಿ ಸುಧಾರಣೆಯ ವರದಿಗಾಗಿ, ಭಾರತ ಸರಕಾರವು ‘ಸಾಚಾರ ಸಮಿತಿ’ಯನ್ನು ನಿಯಮಿಸಿತು.
ತನ್ನ ಯಜಮಾನನಿಗೆ ಏನು ಬೇಕೆನ್ನುವದು ಈ ಸಮಿತಿಗೆ ಚೆನ್ನಾಗಿ ಗೊತ್ತು.
ಅಂತೆಯೇ ಸಮಿತಿಯು ಸರಕಾರಕ್ಕೆ ಒಂದು tailor-made ವರದಿಯನ್ನು ಸಮರ್ಪಿಸಿತು.
ಈ ವರದಿಯು ಮುಸಲ್ಮಾನರ ಸ್ಥಿತಿಗತಿಗಳ ಬಗೆಗೆ ಮಾತ್ರ ವರದಿ ನೀಡುವ ಬದಲು, ಅವರು ಹೇಗೆ ಬಹುಸಂಖ್ಯಾತರಿಗಿಂತ ಭಿನ್ನರು ಎಂದು ಹೇಳುವದಕ್ಕೆ ಕಸರತ್ತು ಮಾಡಿದೆ.
ಉದಾಹರಣೆಗಾಗಿ ಆ ವರದಿಯ ಒಂದು ಭಾಗವನ್ನು ಇಲ್ಲಿ ನೋಡಿರಿ:

The three language formula too, has not been implemented properly. Students have to opt for Sanskrit as there is no provision for teaching other languages in many schools, despite the fact that Urdu has been declared a second language in some states. This, in effect, makes Sanskrit a compulsory subject, especially in the Hindi belt. The lack of interest in studying Sanskrit makes Muslim students perform badly thus pulling down their grades. Students are also unable to take their higher secondary examination in Urdu as there is no provision for it and they are forced to take their exams in Hindi.(page 40)

ತ್ರಿಭಾಷಾ ಸೂತ್ರದ ಪ್ರಕಾರ ಮಾತೃಭಾಷೆ ಅಥವಾ ರಾಜ್ಯ ಭಾಷೆಯು ಪ್ರಥಮ ಭಾಷೆಯಾಗಿರುತ್ತದೆ. ಅಂದ ಮೇಲೆ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಹಿಂದಿ ಹಾಗೂ ಉರ್ದು ಎರಡೂ ಪ್ರಥಮ ಭಾಷೆಗಳಾಗುತ್ತವೆ.
ಆದುದರಿಂದ ಸಾಚಾರರ ಮೊದಲನೆಯ ನೆಲೆಗಟ್ಟು ಸುಳ್ಳಿನ ನೆಲೆಗಟ್ಟು ಎಂದಂತಾಯಿತು.
ಈಗ ಸಾಚಾರರ ಮತ್ತೊಂದು ಪೂರ್ವಾಗ್ರಹದ ಹೇಳಿಕೆಯನ್ನು ನೋಡಿರಿ:
The lack of interest in studying Sanskrit makes Muslim students perform badly thus pulling down their grades.
ಮುಸಲ್ಮಾನ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಆಸಕ್ತಿ ಇರಬಾರದು ಎನ್ನುವ ಭಾವನೆ ತಪ್ಪಲ್ಲವೆ?
ನೂರಾರು ವರ್ಷಗಳ ಹಿಂದೆ, ಈ ವಿದ್ಯಾರ್ಥಿಗಳ ಪೂರ್ವಜರು, ಬಲಾತ್ಕಾರದಿಂದಲೊ ಅಥವಾ ಸ್ವಇಚ್ಛೆಯಿಂದಲೊ ಧರ್ಮಾಂತರಿತರಾಗಿರಬಹುದು.
ಆದರೆ ಅವರ ರಕ್ತ, ಅವರ ಸಂಸ್ಕೃತಿ ಹಾಗು ಅವರ ಜನಾಂಗ-ಸ್ಮೃತಿ ಬದಲಾಗಬೇಕೆ?
ನಮ್ಮ ತಾಯಿ ಭಾರತಮಾತೆ ಅಲ್ಲ, ಅವಳು ಅರಬಮಾತೆ ಅಥವಾ ಪರ್ಶಿಯಾಮಾತೆ ಎಂದು ಹೇಳುವದು ಶಕ್ಯವೆ?

ಇಂತಹ ಮಾತನ್ನು ಮುಸಲ್ಮಾನರು ಹೇಳುತ್ತಿಲ್ಲ. ಆದರೆ ಸಾಚಾರರು ಹೇಳುತ್ತಿದ್ದಾರೆ.
ಮುಸಲ್ಮಾನರಿಗೆ ಸಂಸ್ಕೃತ ಭಾಷೆಯಲ್ಲಿ ಆಸಕ್ತಿ ಇರಕೂಡದು ಎನ್ನುವದು ಸಾಚಾರರ ವೈಯಕ್ತಿಕ ನಿರ್ಣಯ.
ಏಕೆಂದರೆ ಸಂಸ್ಕೃತವು ಹಿಂದೂಗಳ ಭಾಷೆ ಹಾಗೂ ಅರೇಬಿಯನ್/ಪರ್ಶಿಯನ್ ಇವು ಮುಸಲ್ಮಾನರ ಭಾಷೆ ಎನ್ನುವದು ಸಾಚಾರರ ಪೂರ್ವಾಗ್ರಹಪೀಡಿತ ಅಭಿಮತ.
ಆದರೆ ನಿಜ ಪರಿಸ್ಥಿತಿ ಹಾಗಿದೆಯೇ?
ಕರ್ನಾಟಕವನ್ನೇ ತೆಗೆದುಕೊಳ್ಳಿರಿ:
ಕರ್ನಾಟಕದಲ್ಲಿ ಸಂಸ್ಕೃತ ಹಾಗೂ ಕನ್ನಡದಲ್ಲಿ ಪರಿಣತಿಯುಳ್ಳ ಎಷ್ಟು ಜನ ಮುಸ್ಲಿಮ್ ಲೇಖಕರಿಲ್ಲ?
ಉರ್ದು ಭಾಷೆಯಲ್ಲಿ ಇಲ್ಲದ ಪರಿಣಿತಿ ಇವರಿಗೆ ಕನ್ನಡ ಹಾಗೂ ಸಂಸ್ಕೃತದಲ್ಲಿದೆ.
ಪದ್ಮಶ್ರೀ ನಿಸಾರ ಅಹ್ಮದ, ನಮ್ಮ ಶ್ರೇಷ್ಠ ಲೇಖಕರಾದ ಕಟ್ಟಪಾಡಿ,ಬೋಳೂರು,ಸಾರಾ ಅಬೂಬಕ್ಕರ,ರಶೀದಾ,ರಹಮತ್ ತರೀಕೆರೆ ಇನ್ನೂ ಅನೇಕರೆಲ್ಲ ಮುಸಲ್ಮಾನರಲ್ಲವೆ?
ಈಗಲೂ ಸಹ ತಮಿಳುನಾಡಿನ ಮುಸಲ್ಮಾನರಿಗೆ ತಮಿಳೇ ಮಾತೃಭಾಷೆಯಾಗಿದೆಯೇ ಹೊರತು, ಉರ್ದು ಅಲ್ಲ.

ಮುಖ್ಯವಾಗಿ ಭಾಷೆ ಬೇಕಾದದ್ದು ಅಂತರ್-ಸಂವಹನೆಗಾಗಿ.
ಕರ್ನಾಟಕದಲ್ಲಿ ಇರುವ ಶೇಕಡಾ ೧೨ರಷ್ಟು ಮುಸಲ್ಮಾನರು ಕೇವಲ ತಮ್ಮ ತಮ್ಮಲ್ಲೇ ವ್ಯವಹರಿಸುತ್ತ ಕೂಡುತ್ತಾರೇನು?
ಉಳಿದ ಶೇಕಡಾ ೮೮ರಷ್ಟು ಜನರೊಡನೆ ಅವರಿಗೆ ವ್ಯವಹಾರ, ಸಂವಹನೆ ಬೇಡವೆ?

ಇದೇ ಮಾತು ಜನಾಂಗ-ಸ್ಮೃತಿಗೂ ಅನ್ವಯಿಸುತ್ತದೆ. ನಮ್ಮ ಪುರಾಣಗಳು ವಾಸ್ತವದಲ್ಲಿ ನಮ್ಮ ಜನಾಂಗದ ಸ್ಮೃತಿಕೋಶಗಳೇ ಆಗಿವೆ.
ಶ್ರೀರಾಮಚಂದ್ರ, ಶ್ರೀಕೃಷ್ಣ ಇವರು ದೇವತಾಪಟ್ಟಕ್ಕೇರಿದ ಐತಿಹಾಸಿಕ ಪುರುಷರು.
ಬೇತಾಳ-ವಿಕ್ರಮ ಕತೆಯಿಂದ ಪ್ರಸಿದ್ಧನಾದ ತ್ರಿವಿಕ್ರಮ ರಾಜನು ಅರಸನೆಂದರೆ ಹೇಗಿರಬೇಕು ಎನ್ನುವದಕ್ಕೆ model ಆದಂತಹ ದಂತಕತೆಯಾದ ರಾಜನು.
ಎಲ್ಲಾ ಭಾರತೀಯರಿಗೂ ಇವರೇ ಮೂಲಪುರುಷರು.
ನಮ್ಮ ಜನಾಂಗಸ್ಮೃತಿ ಇಂತಹ ಮಹಾಪುರುಷರಿಂದ ಆಗಿದೆ.

ಇತ್ತೀಚಿನ ಉದಾಹರಣೆಗಳೆಂದರೆ ತುರುಕರ ಹಾಗೂ ಪರ್ಶಿಯನ್ನರ ವಿರುದ್ಧ ಹೋರಾಡಿದ ಭಾರತೀಯ ರಾಜರು. ರಾಣಾ ಪ್ರತಾಪಸಿಂಹ, ಛತ್ರಪತಿ ಶಿವಾಜಿ, ಗುರು ಗೋವಿಂದಸಿಂಹ ಮೊದಲಾದವರು ಈ ನೆಲದ ಮಕ್ಕಳ ಸಲುವಾಗಿ ವಿದೇಶಿ ಆಕ್ರಮಣಕಾರರ ವಿರುದ್ಧ ಹೋರಾಡಿದ ಭಾರತೀಯರು. ಇವರನ್ನು ಕೃತಜ್ಞತೆಯಿಂದ ನೆನೆಯುವದು ಎಲ್ಲ ಭಾರತೀಯರ (-ಇವರಲ್ಲಿ ಅಲ್ಪಸಂಖ್ಯಾಕರೂ ಸೇರ್ಪಡೆಯಾಗುತ್ತಾರೆ-) ಕರ್ತವ್ಯವಲ್ಲವೆ? ಅದು ಬಿಟ್ಟು ರಾಣಾ ಪ್ರತಾಪಸಿಂಹನನ್ನು ಕೇವಲ ರಜಪೂತರು, ಶಿವಾಜಿಯನ್ನು ಕೇವಲ ಮರಾಠಿಗರು, ಗುರು ಗೋವಿಂದಸಿಂಹನನ್ನು ಕೇವಲ ಸೀಖರು, ವಿಜಯನಗರದ ಅರಸರನ್ನು ಕೇವಲ ಹಿಂದೂಗಳು ಗೌರವಿಸುವದು ಸರಿಯೆ?

ಈಗ ಸಾಚಾರರು ವರದಿಸುವದನ್ನು ನೋಡಿರಿ:
The “communal” content of school textbooks, as well as, the school ethos has been a major cause for concern for Muslims in some states. This is disconcerting for the school going Muslim child who finds a complete absence of any representation of her community in the school text.

ಸಾಚಾರರು ಯಾವುದಕ್ಕೆ communal content ಎಂದು ಕರೆಯುತ್ತಾರೆ?
ಶಿವಾಜಿಯು ಪ್ರಜಾವಿರೋಧಿಯಾದ ಮತಾಂಧ ಔರಂಗಜೇಬನ ವಿರುದ್ಧ ಹೋರಾಡಿದ್ದನ್ನು ಬರೆಯುವದು ಕೋಮುವಾದಿ ಪಠ್ಯವೆ?
ಅಥವಾ ಪುಸ್ತಕದಲ್ಲಿ ರಾಮ. ಕೃಷ್ಣ, ಕಮಲಾ, ವಿಮಲಾ ಎನ್ನುವ ಹೆಸರುಗಳು ಬಂದರೆ ಅದು ಕೋಮುವಾದವೆ? ಮುಸಲ್ಮಾನ ಹುಡುಗರು ಶಾಲೆಗೆ ಬಂದಾಗ (--ಅವರು ಸಾರ್ವಜನಿಕ ಶಾಲೆಗೆ ಬಂದರೆ--), ತಮ್ಮ ಸುತ್ತ ಮುತ್ತಲೂ ರಾಮ, ಕೃಷ್ಣ, ಕಮಲಾ, ವಿಮಲಾ ಇವರುಗಳನ್ನೇ ಕಾಣುತ್ತಾರೆ.
Communal contentಅನ್ನು ತೆಗೆದು ಹಾಕುವದಕ್ಕಾಗಿ ಈ ಹುಡುಗರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕೆ?

ನಿಜ ಹೇಳಬೇಕೆಂದರೆ, ಮುಸ್ಲಿಮರು ಕೇವಲ ಅರಬ್ಬಿ ಹೆಸರುಗಳನ್ನಷ್ಟೇ ಇಟ್ಟುಕೊಳ್ಳದೆ, ಭಾರತೀಯ ಹೆಸರುಗಳನ್ನು ಜೋಡಿಸಬಹುದು.
ಇದನ್ನು ಕ್ರಿಶ್ಚಿಯನ್ನರು ಮಾಡುತ್ತಿದ್ದಾರೆ.
ಉದಾಹರಣೆಗೆ ಅನೇಕ ಕ್ರಿಶ್ಚಿಯನ್ ಹೆಸರುಗಳು, ವಿಶೇಷತಃ ಹೆಣ್ಣು ಮಕ್ಕಳ ಹೆಸರುಗಳು ಜೋಡಿಸಿದ ಹೆಸರುಗಳಾಗಿವೆ.
ಉದಾ: ಕಮಲಾ ಮೇರಿ, ಹೇಮಾ ಗ್ರೇಸಿ ಇತ್ಯಾದಿ.
ಮುಸಲ್ಮಾನರೂ ಸಹ ಇದೇ ರೀತಿಯಲ್ಲಿ ತಮ್ಮ ಹೆಸರುಗಳನ್ನು ಫಾತಿಮಾ ಗೌರಿ, ಸಯೀದಾ ಲಕ್ಷ್ಮಿ ಎಂದೆಲ್ಲ ಇಟ್ಟುಕೊಂಡರೆ ಅವರನ್ನು ಬಾಧಿಸುತ್ತಿರುವ ಪರಕೀಯ ಪ್ರಜ್ಞೆ ತಪ್ಪಬಹುದು.


ಸಾಚಾರರ ತಿಪ್ಪರಲಾಗದ ಇನ್ನೊಂದಿಷ್ಟು ಉದಾಹರಣೆ ಇಲ್ಲಿವೆ:
….current research indicates that poverty and financial constraints are the major causes that prevent Muslim girls from accessing ‘modern/secular’ education. (p41)

ಯಾಕೆ? ಕೇವಲ ಮುಸಲ್ಮಾನ ವಿದ್ಯಾರ್ಥಿನಿಯರು ಮಾತ್ರ ಬಡತನದಿಂದಾಗಿ ಶಿಕ್ಷಣ ಪಡೆಯುತ್ತಿಲ್ಲವೆ?
ಹಳ್ಳಿಗಳಲ್ಲಿಯ ನಮ್ಮ ರೈತ ಕೂಲಿಕಾರ ಹೆಣ್ಣು ಮಕ್ಕಳು ಶಾಲೆ ಬಿಟ್ಟು ಹೊಲದಲ್ಲಿ ಕೂಲಿ ಮಾಡಲು ಹೋಗುವದಿಲ್ಲವೆ?
ನಗರಗಳಲ್ಲಿಯೂ ಸಹ ಎಷ್ಟು ಜನ ಮುಸ್ಲಿಮೇತರ ವಿದ್ಯಾರ್ಥಿನಿಯರು ಬಡತನದಿಂದಾಗಿ ಶಾಲೆ ಬಿಟ್ಟಿಲ್ಲ?
ನಗರಗಳಲ್ಲಿ ಕೊಳಚೆ ಹೆಕ್ಕುವ ಕೆಲಸ ಮಾಡುತ್ತಿರುವ rag pickerಗಳಲ್ಲಿ ಒಬ್ಬಳಾದರೂ ಮುಸ್ಲಿಮ್ ಹುಡುಗಿಯನ್ನು ಸಾಚಾರ ತೋರಿಸಲಿ !
ಇವೆಲ್ಲ ಅಂಕಿಸಂಖ್ಯೆಯ ಮಾತಾಯಿತು. ಈಗ ಸಾಚಾರರ ಈ ಹೇಳಿಕೆಯನ್ನು ನೋಡಿರಿ:
Muslim women often face overt discrimination from school authorities while trying to get admission or in availing of scholarships for their children. (p41)

ಇದಂತೂ ಸಾಚಾರರ ಕಲ್ಪನೆಯ ಮಹಾ ಅಪಲಾಪ.
ಏಕೆಂದರೆ, ಇಂತಹ overt discriminationದ ಒಂದಾದರೂ ಉದಾಹರಣೆಗಳನ್ನು ಸಾಚಾರರು ತಮ್ಮ ವರದಿಯಲ್ಲಿ ಉಲ್ಲೇಖಿಸಿಲ್ಲ.

ಇದೇ ರೀತಿಯಲ್ಲಿ ಸಾಚಾರರು ಮುಸಲ್ಮಾನರು ಉದ್ಯೋಗಕ್ಷೇತ್ರದಲ್ಲಿ ಅನುಭವಿಸುತ್ತಿರುವ ಬವಣೆಗಳ ಬಗೆಗೆ ದೀರ್ಘವಾದ ವರದಿ ನೀಡಿದ್ದಾರೆ.
ನಾನೇನೂ ಅವರಿಗೆ ದೀರ್ಘವಾದ ಪ್ರಶ್ನೆ ಹಾಕುವದಿಲ್ಲ. ಒಂದು ಅತಿ ಸಣ್ಣ ಪ್ರಶ್ನೆ.
ಭಾರತದಲ್ಲಿ ಸಾಲದ ಶೂಲಕ್ಕೆ ಸಿಲುಕಿದ ಅನೇಕ ರೈತರು, ತಮ್ಮ ಕುಟುಂಬಕ್ಕೆ ತುತ್ತು ಅನ್ನ ನೀಡಲಾರದ ಅನೇಕ ನಿಸ್ಸಹಾಯಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿಗಳು ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತಿವೆ.
ಇವರಲ್ಲಿ ಒಬ್ಬನಾದರೂ ಮುಸಲ್ಮಾನನು ಇದ್ದಾನೆಯೆ?
God forbid, ನಾನು ಅದನ್ನು ಬಯಸುತ್ತೇನೆ ಎಂದು ಹೇಳುತ್ತಿಲ್ಲ.
ಆದರೆ, suicide is the unfortunate barometer for judging the community that is really suffering ಎನ್ನುವದು ನನ್ನ ಅಭಿಪ್ರಾಯ.

ವಸ್ತುಸ್ಥಿತಿ ಹೀಗಿದ್ದಾಗ, ಸಾಚಾರರು ಮುಸಲ್ಮಾನರಿಗೆ ವಿಶೇಷವಾಗಿ ಉದ್ಯೋಗ ನೀಡಬೇಕು, ಉದ್ಯೋಗಸಾಲ ನೀಡಬೇಕು; ಯಾಕೆಂದರೆ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಅನ್ಯಾಯ ನಡೆದಿದೆ ಎಂದು ನಿರ್ಣಯ ನೀಡುತ್ತಾರೆ.
ಇದು ಕಪೋಲಕಲ್ಪಿತವಲ್ಲವೆ?
ನಿಜ ಹೇಳಬೇಕೆಂದರೆ, ಅನೇಕ ಉದ್ಯೋಗಗಳು ಮುಸಲ್ಮಾನ-ಕೇಂದ್ರಿತವೇ ಆಗಿವೆ.
ಉದಾಹರಣೆಗೆ, ಕಾಯಿಪಲ್ಲೆ ಹಾಗೂ ಹಣ್ಣುಗಳನ್ನು ಬೆಳೆದು, ಸಾಲ ಮಾಡಿ, ಕೈ ಸುಟ್ಟುಕೊಂಡು, ಸಂಕಷ್ಟಕ್ಕೆ ಸಿಲುಕಿದಾಗ ಆತ್ಮಹತ್ಯೆಗೆ ಶರಣಾಗುವ ರೈತರು ಸಹಸಾ ಹಿಂದೂಗಳು.
ಕಾಯಿಪಲ್ಲೆ ಹಾಗೂ ಹಣ್ಣುಗಳನ್ನು ಪೇಟೆಯಲ್ಲಿ ಮಾರಿ, ಎಂತಹದೇ ಪರಿಸ್ಥಿತಿಯಲ್ಲಿಯೂ ಲಾಭ ಮಾಡಿಕೊಳ್ಳುವ ಬಾಗವಾನರು ಸಹಸಾ ಮುಸಲ್ಮಾನರು.

ನಾನು ಇಲ್ಲಿ ಮುಸಲ್ಮಾನರ ವಿರುದ್ಧ ಮಾತನಾಡುತ್ತಿಲ್ಲ.
ನಾನು ಬರೆಯುತ್ತಿರುವದು ಸಾಚಾರ ವರದಿ ಎಂತಹ ಕೆಲಸಕ್ಕೆ ಬಾರದ ಕಂತೆಯಾಗಿದೆ ಎನ್ನುವದರ ಬಗೆಗೆ ; ಅಂಕಿಅಂಶಗಳನ್ನು ಹೇಗೆ ಸಾಚಾರರು ತಿರುಚಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎನ್ನುವದರ ಬಗೆಗೆ.

ಸಾಚಾರ ವರದಿಯಲ್ಲಿ ಏನೂ ‘ಸಾಚಾ’ ಇಲ್ಲ ; ಇದು ನಿಜವಾಗಿಯೂ ‘ಅವಿಚಾರ ವರದಿ’.
ಸುಮಾರು ಎರಡು ಶತಕಗಳ ಹಿಂದೆ ಹಾಡಿದ ಶರೀಫರ ಹಾಡು ಸಾಚಾರ ವರದಿಗೆ ಸರಿಯಾಗಿ ಅನ್ವಯಿಸುತ್ತದೆ:

“ತರವಲ್ಲ ತಗಿ ನಿನ್ನ ತಂಬೂರಿ,
ಸ್ವರ ಬರದೆ ಬಾರಿಸದಿರು ತಂಬೂರಿ!”

Monday, November 3, 2008

ಸಂಯುಕ್ತ ಕರ್ನಾಟಕ: ಅಪಶಬ್ದಕೋಶ

‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಸಂಪಾದಕ ಶ್ರೀ ಕೃಷ್ಣಮೂರ್ತಿ ಹೆಗಡೆ ಇವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಶ್ರೀಯುತರಿಗೆ ಅಭಿನಂದನೆಗಳು.
ಸಂಯುಕ್ತ ಕರ್ನಾಟಕ ಪತ್ರಿಕೆಗೆ ೭೫ ವರ್ಷಗಳ ಇತಿಹಾಸವಿದೆ.
ಭಾರತದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣಕ್ಕಾಗಿ ಈ ಪತ್ರಿಕೆ ಸಾಕಷ್ಟು ದುಡಿದಿದೆ.
ಆದರೆ,ಇತ್ತೀಚಿನ ದಿನಗಳಲ್ಲಿ ಈ ಪತ್ರಿಕೆ ಕನ್ನಡ ಭಾಷೆಯನ್ನು ಕುಲಗೆಡಿಸುವದರಲ್ಲಿ ಅಪಾರ ಸಾಧನೆ ಮಾಡುತ್ತಿದೆ.

ಕಾಗುಣಿತದ ತಪ್ಪುಗಳ ಮೂಲಕ ‘ಕನ್ನಡ ಅಪಶಬ್ದ ಕೋಶ’ಕ್ಕೆ ಪ್ರತಿದಿನವೂ ಅಪಾರ ಕೊಡುಗೆಯನ್ನು ನೀಡುತ್ತಿರುವದಕ್ಕಾಗಿಯೇ ‘ಸಂಯುಕ್ತ ಕರ್ನಾಟಕ’ಕ್ಕೆ ಈ ಪ್ರಶಸ್ತಿ ಲಭಿಸಿರಬೇಕೆಂದು ನನ್ನ ಭಾವನೆ.
ನಿಜ ಹೇಳಬೇಕೆಂದರೆ ಕನ್ನಡದಲ್ಲಿ ಕಾಗುಣಿತದ ತಪ್ಪುಗಳನ್ನು ಸಂಶೋಧಿಸಲು ಹೊರಟವರಿಗೆ ‘ಸಂಯುಕ್ತ ಕರ್ನಾಟಕ’ ಅದ್ಭುತ ನಿಧಿಯಂತಾಗಿದೆ.

ಅಭಿನಂದನೆಗಳು, ಸಂಪಾದಕರೆ!
ಕನ್ನಡ ಸರಸ್ವತಿಯನ್ನು ಅಪಶಬ್ದಗಳ ಮೂಲಕ ದಿನವೂ ಚುಚ್ಚಿ ಕೊಲ್ಲುತ್ತಿರುವ ನಿಮ್ಮ ಪಾಂಡಿತ್ಯಕ್ಕೆ ಕನ್ನಡಿಗರು ಮೂಕವಿಸ್ಮಿತರಾಗಿದ್ದಾರೆ.
ಎಷ್ಟೇ ಪಾಂಡಿತ್ಯವಿದ್ದರೂ, ಅಪಶಬ್ದಗಳ ಬಗೆಗೆ ಕೆಲವೊಮ್ಮೆ ನಿಮಗೂ ಸಹ ಸಂಶಯ ಬರುವದುಂಟು.
ಅಂತಹ ಸಂದರ್ಭದಲ್ಲಿ ಅಪಶಬ್ದ ಹಾಗೂ ಸರಿಯಾದ ಶಬ್ದಗಳನ್ನು ಸಮಾನ ಪ್ರಮಾಣದಲ್ಲಿ ಬಳಸುವಂತಹ ಜಾಣತನವನ್ನು ನೀವು ತೋರಿಸುತ್ತಿದ್ದೀರಿ.
ಹೀಗೆ ಮಾಡುವದರಿಂದ, ಶೇಕಡಾ ೫೦ರಷ್ಟಾದರೂ ಅಪಶಬ್ದಗಳನ್ನು ಬಳಸಿದಂತಾಗುವದಿಲ್ಲವೆ?
ಉದಾಹರಣೆಗೆ ನವೆಂಬರ ೨ನೆಯ ದಿನಾಂಕದಂದು ಪ್ರಕಟಿಸಿದ ಸಂಯುಕ್ತ ಕರ್ನಾಟಕದ ೧೦ನೆಯ ಪುಟದಲ್ಲಿಯ ವರದಿಯನ್ನು ನೋಡಿರಿ:
’ಶಿಷ್ಟಾಚಾರ ಪಾಲಿಸದ ಜಿಲ್ಲಾಧಿಕಾರಿ’ಎನ್ನುವ ಈ ವರದಿಯಲ್ಲಿ ‘ಶಿಷ್ಟಾಚಾರ’ವನ್ನು ೪ ಬಾರಿ ಹಾಗೂ ‘ಶಿಷ್ಠಾಚರ’ವನ್ನು ೪ ಬಾರಿ ಬಳಸಿದ್ದೀರಿ.
ಎಂತಹ ಜಾಣತನ!
ಸರಿಯಾದ ಪದವು ಗೊತ್ತಿರಲಿ, ಇಲ್ಲದಿರಲಿ, ಅದರ ಬಳಕೆಯನ್ನು ಶೇಕಡಾ ೫೦ಕ್ಕೆ ಮಾತ್ರ ಪರಿಮಿತಗೊಳಿಸಿದಂತಾಗಲಿಲ್ಲವೇ!
ಇನ್ನು ಇದೇ ಪತ್ರಿಕೆಯ ೧೧ನೆಯ ಪುಟದಲ್ಲಿಯ ವರದಿಯನ್ನು ನೋಡಿರಿ.
‘ಗುರುವರ್’ ಪ್ರಶಸ್ತಿಗಾಗಿ ನಾಮಕರಣಗಳ ಪೂರ ಎಂದು ಪ್ರಕಟಿಸಿದ್ದೀರಿ.
ಸ್ವಾಮಿ ‘ವರ್’ ಎನ್ನುವ ಪದ ಕನ್ನಡದಲ್ಲಿ ಇಲ್ಲ.
‘ವರ’ ಎನ್ನುವ ಪದಕ್ಕೆ ಶ್ರೇಷ್ಠ ಎನ್ನುವ ಅರ್ಥವಿದೆ. ಇದು ‘ಗುರುವರ’ ಎಂದಾಗಬೇಕಿತ್ತು.
ಆದರೆ ಅಪಶಬ್ದಕೋಶವನ್ನು ಟಂಕಿಸಲು ಹೊರಟ ನೀವು ‘ಗುರುವರ್’ ಎನ್ನುವ ಪದವನ್ನು ಬಳಸಿದ್ದರಲ್ಲಿ ಅಚ್ಚರಿಯಿಲ್ಲ.

ಕಿಟ್ಟೆಲ್ ಕೋಶದಲ್ಲಿ ಬರೀ ತಪ್ಪುಗಳೇ ತುಂಬಿವೆ; ಆ ಶಬ್ದಕೋಶವನ್ನು ಸರಿಪಡಿಸುವ ಅಗತ್ಯವಿದೆ ಎಂದು ನೀವು ಭಾವಿಸಿದಂತಿದೆ.
ಅದಕ್ಕಾಗಿಯೇ, ಕಿಟ್ಟೆಲ್ ಕೋಶಕ್ಕೆ ಸಮಾಂತರವಾಗಿ ಒಂದು ಅಪಶಬ್ದಕೋಶವನ್ನು ನೀವು ನಿಮ್ಮ ಪತ್ರಿಕೆಯ ಮೂಲಕ ರೂಪಿಸುತ್ತಿರುವಿರಾ?
ನಿಮ್ಮ ಘನ ಪತ್ರಿಕೆಯಲ್ಲಿ ಪ್ರಸೂತವಾದ ಕೆಲವು ಅಪಶಬ್ದಗಳನ್ನು ಹೆಕ್ಕಿಕೊಂಡಿದ್ದೇನೆ.
ಇತರ ಕನ್ನಡಿಗರ ಕಣ್ಣಿಗೂ ಅವು ಬೀಳಲಿ ಎಂದು ಅವನ್ನು ಇಲ್ಲಿ ಕೊಡುತ್ತಿದ್ದೇನೆ.
(ಕನ್ನಡಿಗರೇ, ಎಚ್ಚರಿಕೆ; ಈ ಅಪಶಬ್ದಗಳನ್ನು ನೋಡಿ ಕಣ್ಣು ಕುರುಡಾದರೆ ನಾವು ಜವಾಬುದಾರರಲ್ಲ!)

ಕೆಳಗಿನ ಪಟ್ಟಿಯಲ್ಲಿ ಮೊದಲನೆಯದು ಅಪಶಬ್ದ, ಮುಂದಿನದು ಸರಿಯಾದ ಪದ.
ಉಚ್ಛ…………........ಉಚ್ಚ
ಸರ್ವೋಚ್ಛ………...... ಸರ್ವೋಚ್ಚ
ನಿಚ್ಛಳ…………....... ನಿಚ್ಚಳ
ಸಮುಚ್ಛಯ……....... ಸಮುಚ್ಚಯ
ದ್ರುವೀಕರಣ………...... ಧ್ರುವೀಕರಣ
ಅನುಗೃಹ………....... ಅನುಗ್ರಹ
ಭೋಗಸ್………....... ಬೋಗಸ್
ಥಳಕು ಹಾಕಿದ……...... ತಳಕು ಹಾಕಿದ
ಸೌಹಾರ್ದ್ರ………....... ಸೌಹಾರ್ದ
ಪ್ರಾಂಥ…………....... ಪ್ರಾಂತ
ಸೋಲ್ಲು………....... ಸೊಲ್ಲು
ಧೃವ……………........ ಧ್ರುವ
ಶೃತಿ……………........ ಶ್ರುತಿ
ಖೂಟ…………........ ಕೂಟ
ಛಾಳಿ……………........ ಚಾಳಿ
ನೈರುತ್ಯ…………....... ನೈಋತ್ಯ
ಜಾರ್ಕಂಡ………....... ಝಾರಖಂಡ
ಅಲ್ ಖೈದಾ……...... ಅಲ್ ಕೈದಾ
ಕೃತಗ್ನ…………........ ಕೃತಜ್ಞ
ಕೃತಗ್ನ…………........ ಕೃತಘ್ನ
ಡಾಬ……………....... ಧಾಬಾ
ಕಳ್ಳ ಬಟ್ಟಿ………....... ಕಳ್ಳ ಭಟ್ಟಿ
(ಬೆಳಗಾವಿಯ) ಕುಂದದಂತಹ….(ಬೆಳಗಾವಿಯ) ಕುಂದಾದಂತಹ
ಅಲ್ಲ……………....... ಅಲ್ಲಾ
ಶಿಲನ್ಯಾಸ………....... ಶಿಲಾನ್ಯಾಸ
ಢಾಕ……………........ ಡಾಕಾ

ಇಂತಹ ನೂರಾರು ಅಪಶಬ್ದಗಳನ್ನು ಅನಾಯಾಸವಾಗಿ ನೋಡಬೇಕೆಂದರೆ, ‘ಸಂಯುಕ್ತ ಕರ್ನಾಟಕ’ವನ್ನು ತಪ್ಪದೇ ಓದಿರಿ.
ಆದರೆ ಚಿಕ್ಕ ಮಕ್ಕಳ ಕೈಗೆ ಸಿಗದಂತೆ ಈ ಪತ್ರಿಕೆಯನ್ನು ಜೋಪಾನವಾಗಿ ತೆಗೆದಿರಿಸಿರಿ.
ಎಚ್ಚರ! (statutory warning:)
ಈ ಅಪಶಬ್ದಗಳನ್ನೇ ಸರಿಯಾದ ಶಬ್ದಗಳೆಂದು ಮಕ್ಕಳು ಭಾವಿಸಬಹುದು.