ಕತೆ, ಕಾದಂಬರಿಗಳಲ್ಲಿ ಒಂದು ಸನ್ನಿವೇಶವನ್ನು ಸೃಷ್ಟಿಸುವದು ಸುಲಭ.
ಲೇಖಕರು ಆ ಸನ್ನಿವೇಶವನ್ನು ಪುಟಗಟ್ಟಲೆ ವರ್ಣನೆ ಮಾಡಬಹುದು ಹಾಗು ಪಾತ್ರಗಳ ಅಭಿವ್ಯಕ್ತಿಯನ್ನು ವಿಸ್ತಾರವಾಗಿ ಬರೆಯಬಹುದು.
ಉದಾಹರಣೆಗೆ ಒಂದು ರೋದನ ಸನ್ನಿವೇಶದ ವರ್ಣನೆಯನ್ನು ಹತ್ತು ಪುಟದಷ್ಟು ವಿಸ್ತಾರವಾಗಿ ಬರೆಯಬಹುದು.
ಇಂತಹ ಒಂದು ಅನುಕೂಲತೆ ಚಲನಚಿತ್ರದ ನಿರ್ದೇಶಕನಿಗೆ ಇರುವದಿಲ್ಲ.
ಆತನೇನಾದರೂ ಹತ್ತು ನಿಮಿಷದವರೆಗೆ ರೋದನ ಸನ್ನಿವೇಶನವನ್ನು ತೋರಿಸಿದರೆ, ಪ್ರೇಕ್ಷಕರು ಥಿಯೇಟರ್ ಖಾಲಿ ಮಾಡುತ್ತಾರೆ ; ನಿರ್ಮಾಪಕ ರೋದನ ಪ್ರಾರಂಭಿಸುತ್ತಾನೆ.
ನಿರ್ದೆಶಕನ ಪ್ರತಿಭೆ ವ್ಯಕ್ತವಾಗುವದು ಇಂತಹ ಸನ್ನಿವೇಶಗಳಲ್ಲಿಯೇ.
ಮೂಕಿ ಚಿತ್ರಗಳ ಕಾಲದಿಂದಲೇ ಪ್ರತಿಭಾವಂತ ನಿರ್ದೇಶಕರು ತಮ್ಮ ಜಾಣ್ಮೆಯನ್ನು ಇಂತಹ ಸನ್ನಿವೇಶಗಳ ಸೃಷ್ಟಿಯಲ್ಲಿ ತೋರಿಸುತ್ತಿದ್ದಾರೆ.
Hollywoodದಲ್ಲಿ ಮೂಕಿ ಚಿತ್ರಗಳನ್ನು ನಿರ್ಮಿಸಿದ ಚಾರ್ಲಿ ಚಾಪ್ಲಿನ್ ಇಂತಹ ಪ್ರತಿಭಾವಂತರಲ್ಲೊಬ್ಬ.
ಆತ ನಿರ್ಮಿಸಿದ ‘The Kid’ ಎನ್ನುವ ಮೂಕಿ ಚಲನಚಿತ್ರ ಸಾರ್ವಕಾಲಿಕ ಸರ್ವಶ್ರೇಷ್ಠ ಚಿತ್ರಗಳಲ್ಲೊಂದು.
ಈ ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಹೊಟ್ಟೆ ಹೊರೆದುಕೊಳ್ಳಲು ಒದ್ದಾಡುತ್ತಿರುವ, ಕಿಮ್ಮತ್ತಿಲ್ಲದ, ಒಬ್ಬ ಪುಕ್ಕಲು ಮನುಷ್ಯ.
ಈತ ಒಂದು ದಿನ ರಸ್ತೆ ಬದಿಯ ಕಸದ ಕುಂಡೆಯಲ್ಲಿ ಪರಿತ್ಯಕ್ತ ಪುಟ್ಟ ಕೂಸೊಂದನ್ನು ನೋಡುತ್ತಾನೆ.
ಅದನ್ನು ತನ್ನ ಮುರುಕಲು ಮನೆಗೆ ಕರೆತಂದು ತಾನೇ ಪಾಲನೆ ಮಾಡುತ್ತಾನೆ.
ಅದು ದೊಡ್ಡದಾದಂತೆ, ಜನರ ಮನೆಗಳ ಖಿಡಕಿಗಳಿಗೆ ಕಲ್ಲು ಎಸೆದು ಕಾಜು ಒಡೆಯಲು ಕಲಿಸಿಕೊಡುತ್ತಾನೆ.
ಅದು ಕಾಜು ಒಡೆದು ಓಡಿ ಹೋದ ಬಳಿಕ, ಈತ ತನ್ನ ಉಪಕರಣಗಳೊಂದಿಗೆ, ಆ ರಸ್ತೆಯಲ್ಲಿ ಖಿಡಕಿ ಕಾಜು ದುರಸ್ತಿಗಾರನಾಗಿ ಬರುತ್ತಾನೆ.
ಈ ರೀತಿಯಾಗಿ ಇವರಿಬ್ಬರೂ ಹೊಟ್ಟೆ ತುಂಬಿಸಿಕೊಳ್ಳುತ್ತಿರುವಾಗ, ಅಮೇರಿಕಾದಲ್ಲಿದ್ದ ಕಾನೂನುಗಳ ಮೇರೆಗೆ, ಪೋಲೀಸರು ಆ ಅನಾಥ ಪೋರನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಹೋಗುತ್ತಾರೆ.
ಈಗ ನಿರ್ಮಿಸಬೇಕಾದ ಭಾವಪೂರ್ಣ ಸನ್ನಿವೇಶವನ್ನು ಗಮನಿಸಿರಿ:
Authority ವಿರುದ್ಧ ಚಾರ್ಲಿ ಚಾಪ್ಲಿನ್ ಅಸಹಾಯಕ.
ಆತನಿಗೆ ತಾನು ಸಾಕಿದ ಪೋರನ ಮೇಲೆ ಮಮತೆ.
ಆದರೆ ಈ ಕಿಮ್ಮತ್ತಿಲ್ಲದ ದರಿದ್ರ ವ್ಯಕ್ತಿಯ ಅಳಲು ಅರಣ್ಯರೋದನವೇ ಸೈ.
ತನ್ನ ಪೋರನನ್ನು ತಾನು ತಿರುಗಿ ಪಡೆದೇನೆ ಎನ್ನುವ ಹತಾಶೆಯ ಜೊತೆಗೆ, ಪಡೆಯುವ ತೀವ್ರ ಬಯಕೆ.
ಮೂಕಿ ಚಿತ್ರಗಳ ಆ ಕಾಲದಲ್ಲಿ, ಮಾತುಗಳ ಸಹಾಯವಿಲ್ಲದೆ, ಹಿನ್ನೆಲೆ ಸಂಗೀತದ ಸಹಾಯವಿಲ್ಲದೆ ಇಂತಹ ಸನ್ನಿವೇಶವನ್ನು ಸೃಷ್ಟಿಸುವದು ಹೇಗೆ?
ದಿನವೆಲ್ಲಾ ತಿರುಗಿ ದಣಿದ ಚಾಪ್ಲಿನ್ ರಾತ್ರಿ ವೇಳೆ ಒಂದು ಮನೆಯ ಮುಚ್ಚಿದ ಬಾಗಿಲಿನ ಮೆಟ್ಟಲುಗಳ ಮೇಲೆ ಕುಸಿದು ಕೂಡುತ್ತಾನೆ, ಹಾಗೆಯೇ ಜೊಂಪಿನಲ್ಲಿ ಇಳಿಯುತ್ತಾನೆ.
ಆಗ ಕನಸೊಂದನ್ನು ಕಾಣುತ್ತಾನೆ.
ಕನಸಿನಲ್ಲಿ ಆತನಿಗೆ ರೆಕ್ಕೆಗಳಿವೆ. ರೆಕ್ಕೆಗಳ ಸಹಾಯದಿಂದ ಆತ ತನ್ನ ಪೋರನನ್ನು ಎತ್ತಿಕೊಂಡು ಹಾರಾಡುತ್ತಾನೆ; ಪೋಲೀಸ ಅಧಿಕಾರಿಯನ್ನು ಅನಾಯಾಸವಾಗಿ evade ಮಾಡುತ್ತಾನೆ.
ತನ್ನ ಪೋರನನ್ನು ತಾನು ಮರಳಿ ಕಸಿದುಕೊಳ್ಳುವದರಲ್ಲಿ ಯಶಸ್ವಿಯಾಗುತ್ತಾನೆ.
ಅಷ್ಟರಲ್ಲಿ ಬೆಳಗಾಗುತ್ತದೆ.
ಈತ ಕುಸಿದು ಕುಳಿತ ಮನೆಯ ಬಾಗಿಲು ತೆರೆಯುತ್ತದೆ.
ಮನೆಯಾತ ಈತನನ್ನು ಗದರಿಸಿ ದಬ್ಬುತ್ತಾನೆ.
'The Kid' ಚಿತ್ರವನ್ನು ಅಭಿಜಾತ ಚಲನಚಿತ್ರವನ್ನಾಗಿ ಮಾಡಿದ ಶ್ರೇಯಸ್ಸು ಈ fantasy sceneಗೆ ಸಲ್ಲಬೇಕು.
ಈ ಚಲನಚಿತ್ರದ ಯಾವ ದೃಶ್ಯದಲ್ಲೂ ವಾಸ್ತವತೆಯ ಹೂಬಾಹೂಬ ನಕಲು ಇಲ್ಲ.
ತನ್ನ ಪೋರನನ್ನು ಕಾಡುತ್ತಿದ್ದ ಕಿಡಿಗೇಡಿ ಹುಡುಗರ ಜೊತೆಗೆ ಹೋರಾಡಬೇಕಾದಂತಹ ಅನಿವಾರ್ಯ ಸನ್ನಿವೇಶದಲ್ಲಿಯೂ, ಅವಾಸ್ತವತೆಯೇ ಚಿತ್ರದ moving ಅಂಶವಾಗಿದೆ.
ಮುಖ್ಯವಾಗಿ ಚಾಪ್ಲಿನ್ fantasyಯ ಮಾಸ್ಟರ್.
ತಮ್ಮ ಅನೇಕ ಮೂಕಿ ಚಲನಚಿತ್ರಗಳಲ್ಲಿ ಅವರು fantasyಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಭಾರತೀಯ ಚಿತ್ರಗಳಲ್ಲಿ ಸಂಕೇತವನ್ನು ಬಳಸಿದವರಲ್ಲಿ ಬಹುಶ: ಸತ್ಯಜಿತ ರಾಯರೇ ಮೊದಲಿಗರು.
‘ಪಥೇರ ಪಾಂಚಾಲಿ’ ಚಿತ್ರದ ಮುಂದಿನ ಭಾಗವಾದ ‘ಅಪರಾಜಿತೊ’ ಚಿತ್ರದಲ್ಲಿ ನಾಯಕಿಯ ಪತಿ ಹೃದಯಾಘಾತದಿಂದ ತೀರಿಕೊಳ್ಳುತ್ತಾನೆ.
ಆಕಾಶದಲ್ಲಿ ಹಕ್ಕಿಗಳು ಹಾರುವ ಮೂಲಕ ಆತ ನಿಧನ ಹೊಂದಿದ್ದನ್ನು ತೋರಿಸಲಾಗಿದೆ.
ಆ ಬಳಿಕ ಇದೊಂದು ಹಳಸಲು common scene ಆಗಿ ಹೋಯಿತು.
ಆದರೆ ಇದರ ಪ್ರಥಮ ಶ್ರೇಯಸ್ಸು ಸತ್ಯಜಿತ ರಾಯರಿಗೆ ಸಲ್ಲಬೇಕು.
ಸತ್ಯಜಿತ ರಾಯರ ಸಹಾಯಕರಾದ ಎನ್. ಲಕ್ಷ್ಮೀನಾರಾಯಣ ಇವರು ಕನ್ನಡದಲ್ಲಿ ‘ನಾಂದಿ’ ಎನ್ನುವ ಚಿತ್ರವನ್ನು ನಿರ್ದೇಶಿಸಿದರು.
ಆ ಅವಧಿಯಲ್ಲಿ ತುಂಬಾ ಪ್ರಸಿದ್ಧಿ ಪಡೆದ ಚಿತ್ರವಿದು.
ರಾಜಕುಮಾರರು ಈ ಚಿತ್ರದ ನಾಯಕ.
ಇವರ ಮೊದಲ ಹೆಂಡತಿಯಾಗಿ ಕಲ್ಪನಾ ಅಭಿನಯಿಸಿದ್ದಾರೆ.
ಕಲ್ಪನಾ ದುರ್ಮರಣಕ್ಕೀಡಾಗುತ್ತಾರೆ ಹಾಗು ಕೆಲಕಾಲದ ನಂತರ ರಾಜಕುಮಾರ ಎರಡನೆಯ ಮದುವೆಯಾಗುತ್ತಾರೆ.
ಹರಿಣಿ ಇವರ ಎರಡನೆಯ ಹೆಂಡತಿ.
ಇವಳು ಕಿವುಡಿ ಹಾಗೂ ಮೂಕಿ.
ಈ ಮಾತನ್ನು ಪ್ರೇಕ್ಷಕರಿಗೆ ತಿಳಿಸುವದು ಹೇಗೆ?
ಈಗ ಲಕ್ಷ್ಮೀನಾರಾಯಣರ ಜಾಣ್ಮೆಯನ್ನು ನೋಡಿರಿ:
ಮದುವೆಯ ದೃಶ್ಯಗಳನ್ನು ತೋರಿಸದೆ, ಹರಿಣಿ ಹೆಂಡತಿಯಾಗಿ ರಾಜಕುಮಾರರ ಮನೆಗೆ ಬಂದಲ್ಲಿಂದ ದೃಶ್ಯ ಪ್ರಾರಂಭವಾಗುತ್ತದೆ.
ರಾಜಕುಮಾರರು ಮನೆಯ ಒಂದು ಕೋಣೆಯಲ್ಲಿ ನಿಂತಿದ್ದಾರೆ.
ಪಕ್ಕದ ಕೋಣೆಯಲ್ಲಿ ಹರಿಣಿ ನಿಂತಿದ್ದಾರೆ.
ಅಲ್ಲಿಯೆ ಮೂಲೆಯಲ್ಲಿ ಮೊದಲ ಹೆಂಡತಿ ಕಲ್ಪನಾ ಬಳಸುತ್ತಿದ್ದ ತಂಬೂರಿ ಇದೆ.
ಹರಿಣಿ ತಂಬೂರಿಯ ತಂತಿಗಳ ಮೇಲೆ ಬೆರಳು ಎಳೆಯುತ್ತಾರೆ.
ಅವಳಿಗೆ ಏನೂ ಕೇಳಿಸುವದಿಲ್ಲ , ಆದರೆ ಪಕ್ಕದ ಕೋಣೆಯಲ್ಲಿದ್ದ ರಾಜಕುಮಾರರಿಗೆ ತಂಬೂರಿಯ ನಾದ ಕೇಳಿಸುತ್ತದೆ.
ಇಲ್ಲಿಯವರೆಗೂ ನೇರ ನಿರ್ದೇಶನದ ಚಲನಚಿತ್ರಗಳನ್ನು ನೋಡಿದ ಕನ್ನಡ ಪ್ರೇಕ್ಷಕರಿಗೆ ಈ indirect suggestion ತಂತ್ರದ ದೃಶ್ಯದಿಂದ ರೋಮಾಂಚನವಾಯಿತು.
ಉತ್ತಮ ನಿರ್ದೇಶನದ ಕನ್ನಡ ಚಿತ್ರಗಳಿಗೆ ನಾಂದಿ pioneer ಆಯಿತು.
ಈ ಚಿತ್ರದಿಂದ ಲಕ್ಷ್ಮೀನಾರಾಯಣ ಕನ್ನಡಿಗರ ಮನೆಮಾತಾದರು.
ಇದೇ ಸಮಯದಲ್ಲಿ ಪುಟ್ಟಣ್ಣ ಕಣಗಾಲ ಸಹ ಚಿತ್ರರಂಗ ಪ್ರವೇಶ ಮಾಡಿದರು.
‘ಗೆಜ್ಜೆಪೂಜೆ’ ಚಿತ್ರದಲ್ಲಿ ಪುಟ್ಟಣ್ಣನವರು ಒಂದು reverse technique ಬಳಸಿದ್ದಾರೆ.
ಗೆಜ್ಜೆಪೂಜೆ ಸಮಾರಂಭಕ್ಕೆ ನಾಯಕಿ ಕಲ್ಪನಾ ಮನಸ್ಸಿಲ್ಲದೇ ಒಪ್ಪಿಕೊಂಡಿದ್ದಾರೆ.
ಪೂಜೆಯ ಅಂಗವಾಗಿ ಅವರು ಗುಡಿಯೊಂದರಲ್ಲಿ ನರ್ತಿಸುತ್ತಿದ್ದಾರೆ.
ಪುರಂದರದಾಸರ “ಭಾಗ್ಯದಾ ಲಕ್ಷ್ಮೀ ಬಾರಮ್ಮಾ…” ಹಾಡನ್ನು ಹೆಂಗಸರು ಸಾಂಪ್ರದಾಯಕ ಶೈಲಿಯಲ್ಲಿ ಹಾಡುತ್ತಿದ್ದಾರೆ.
ಈ ದೃಶ್ಯಕ್ಕೆ ಪುಟ್ಟಣ್ಣನವರು ಯಾವುದೇ ಹಿನ್ನೆಲೆ ಸಂಗೀತ ಒದಗಿಸಿಲ್ಲ.
ಮತ್ತು ಆ ಕಾರಣಕ್ಕಾಗಿಯೇ ಈ ದೃಶ್ಯವು ತುಂಬಾ explosive ಆಯಿತು.
ಈ ದೃಶ್ಯವನ್ನು ನೋಡುತ್ತಿದ್ದಾಗ ಥಿಯೇಟರ್ ತುಂಬೆಲ್ಲ ಪ್ರೇಕ್ಷಕರು ಅಳುವದನ್ನು ನಾನು ಕೇಳಿದ್ದೇನೆ.
ಪುಟ್ಟಣ್ಣನವರು ನಿರ್ದೇಶಿಸಿದ ‘ಕಪ್ಪು ಬಿಳುಪು’ ಚಿತ್ರದಲ್ಲಿ ಕಲ್ಪನಾಗೆ double role.
ಒಬ್ಬಳು ಸಾತ್ವಿಕ ಹಳ್ಳಿಯ ಹುಡುಗಿ; ಇನ್ನೊಬ್ಬಳು ಪಟ್ಟಣದಲ್ಲಿದ್ದ ಅವಳ ಬಿನ್ದಾಸ್ ಸೋದರಿ.
ಒಳ್ಳೆ ಹುಡುಗಿ ಕಲ್ಪನಾಳ ಮುಗ್ಧತೆಯನ್ನು ಹಾಗೂ ಭೀರು ಸ್ವಭಾವವನ್ನು ಪ್ರೇಕ್ಷಕರಿಗೆ ಪರಿಚಯಿಸುವದು ಹೇಗೆ?
ಪುಟ್ಟಣ್ಣನವರ ಜಾಣ್ಮೆಯನ್ನು ಈ ದೃಶ್ಯದಲ್ಲಿ ನೋಡಿರಿ:
ಕಥಾನಾಯಕ ರಾಜೇಶರ ಮನೆಯ ಹಿತ್ತಿಲಿನಲ್ಲಿ, ಸಾತ್ವಿಕ ಹುಡುಗಿ ಕಲ್ಪನಾ ಹೂವು ಕೊಯ್ಯುತ್ತಿರುವಾಗ, ರಾಜೇಶ ಅಲ್ಲಿ ಬರುತ್ತಾರೆ ಹಾಗೂ ಕಲ್ಪನಾಳನ್ನು ಗದರಿಸುತ್ತಾರೆ.
ಕಲ್ಪನಾ ಗಡಗಡ ನಡಗುತ್ತಾಳೆ.
ಅವಳ ಕೈಯಿಂದ ಹೂವು ಜಾರಿ ಕೆಳಗೆ ಬೀಳುತ್ತದೆ.
ಗಾಬರಿಯಲ್ಲಿ ಅವಳು ಹೂವನ್ನು ಮರಳಿ ಬಳ್ಳಿಗೆ ಹಚ್ಚಲು ಪ್ರಯತ್ನಿಸುತ್ತಾಳೆ.
ಇಂತಹ ಒಂದೇ ದೃಶ್ಯದಿಂದ ನಿರ್ದೇಶಕರು ಕಲ್ಪನಾಳ ಮುಗ್ಧ ಹಾಗೂ ಭೀರು ಸ್ವಭಾವವನ್ನು ಪ್ರೇಕ್ಷಕರಿಗೆ ತೆರೆದಿಟ್ಟು ತೋರಿಸಿದರು.
‘ಸಂಸ್ಕಾರ’ ಚಿತ್ರವು ಕನ್ನಡದ ಪ್ರಥಮ ನವ್ಯ ಚಿತ್ರ.
ಅನಂತಮೂರ್ತಿಯವರು ತಮ್ಮ ಕಾದಂಬರಿಯಲ್ಲಿ ಸಂಸ್ಕಾರ vs ಮೂಲ ಪ್ರಕೃತಿ ಅಂದರೆ cultivated values versus basic instincts ಬಗೆಗೆ ಚರ್ಚೆ ಮಾಡಿದ್ದಾರೆ.
ಪ್ರಾಣೇಶಾಚಾರ್ಯರು ವೈದಿಕ ಸಂಸ್ಕಾರಗಳ ಪ್ರತಿನಿಧಿ.
ನಾರಣಪ್ಪನು ಸ್ವಚ್ಛಂದ ಪ್ರವೃತ್ತಿಯ ಪ್ರತಿನಿಧಿ.
ನಾರಣಪ್ಪ ಸತ್ತು ಹೋದಾಗ ಅವನ ಹೆಣದ ಸಂಸ್ಕಾರದ ಪ್ರಶ್ನೆ ಬರುತ್ತದೆ.
ಇದಕ್ಕೆ ಸಮಾಧಾನ ಕಂಡುಕೊಳ್ಳಲು ಪ್ರಾಣೇಶಾಚಾರ್ಯರು ಊರ ಹೊರಗಿನ ಹಣಮಪ್ಪನ ಗುಡಿಯಲ್ಲಿ , ಹಣಮಪ್ಪನ ಎದುರಿಗೆ ಕೂತು ಬಿಡುತ್ತಾರೆ.
ಮಧ್ಯರಾತ್ರಿಯಾದರೂ ಹಣಮಪ್ಪನಿಂದ ಯಾವ ಉತ್ತರವೂ ದೊರಕಿಲ್ಲ.
ಆಗ ಸತ್ತ ನಾರಣಪ್ಪನ ಸೂಳೆ ಚಂದ್ರಿ ಅಲ್ಲಿಗೆ ಬರುತ್ತಾಳೆ.
ದಣಿವಿನಿಂದ ಬಳಲಿದ ಪ್ರಾಣೇಶಾಚಾರ್ಯರು ಇವಳ ತೊಡೆಯ ಮೆಲೆ ಬೀಳುತ್ತಾರೆ.
ಅಲ್ಲಿಂದ ಮುಂದೆ, ಅವರು ಕಾಲು ಜಾರುತ್ತಾರೆ.
ನಿರ್ದೇಶಕರು ಇಲ್ಲಿಗೆ ಸಂಸ್ಕಾರಕ್ಕಿಂತ ಮೂಲಪ್ರಕೃತಿ ಹೆಚ್ಚಿಗೆ ಎಂದು ಹೇಳಿದಂತಾಯಿತು.
ಬರಿ ಹೇಳಿದರೆ ಸಾಕೆ? ಈ ಚರ್ಚಾವಸ್ತುವನ್ನು ದೃಶ್ಯಮಾಧ್ಯಮದಲ್ಲಿ ತೋರಿಸಬೇಡವೆ?
ಪ್ರಾಣೇಶಾಚಾರ್ಯರು ಚಂದ್ರಿಯೊಂದಿಗೆ ಕ್ರೀಡೆಯನ್ನು ಪ್ರಾರಭಿಸಿದಾಗ ದೂರದಲ್ಲಿ, ಹಳ್ಳಿಯಲ್ಲಿ ನಡೆಯುತ್ತಿರುವ ಬಯಲಾಟದ ಪಾತ್ರಧಾರಿಗಳ ಅಬ್ಬರ ಕೇಳಬರುತ್ತದೆ.
ಬಯಲಾಟದ ಅಬ್ಬರ ಇಲ್ಲಿ ಮೂಲಪ್ರಕೃತಿಯ ಪ್ರತಿನಿಧಿಯಾಗುತ್ತದೆ.
ಕಾದಂಬರಿಯಲ್ಲಿ ಇಲ್ಲದೇ ಇದ್ದ ಈ ಬಯಲಾಟದ ಅಬ್ಬರ, ಕಾದಂಬರಿಯ ಆಶಯವನ್ನು perfect ಆಗಿ ಪೂರೈಸುತ್ತದೆ.
ಇದು ನಿರ್ದೇಶಕರ ಪ್ರತಿಭೆ.
‘ವಂಶವೃಕ್ಷ’ ಚಲನಚಿತ್ರದಲ್ಲಿ ಕಾತ್ಯಾಯಿನಿಯ death wish ತೋರಿಸಲು ಕನಸಿನ ದೃಶ್ಯವನ್ನು ಬಳಸಲಾಗಿದೆ.
ಚಲನಚಿತ್ರದಲ್ಲಿ ಹೆಣದ ಮೆರವಣಿಗೆ ದೂರದಿಂದ ಬರುತ್ತಿರುವ ದೃಶ್ಯವನ್ನು ತೋರಿಸಲಾಗುತ್ತಿದೆ.
ಹೆಣದ ಚಟ್ಟ ಪ್ರೇಕ್ಷಕನ ಕಣ್ಣೆದುರಿಗೆ ಬರುತ್ತಿದ್ದಂತೆಯೇ, ಹೆಣವು ಸಟ್ಟನೆ ತನ್ನ ಮುಖವನ್ನು ತನ್ನ ಎಡಕ್ಕೆ ಅಂದರೆ ಪ್ರೇಕ್ಷಕರಿಗೆ ಎದುರಾಗಿ ಹೊರಳಿಸುತ್ತದೆ.
ಅದು ಕಾತ್ಯಾಯನಿಯ ಮುಖ!
ಅವಳ death wish ಈ ರೀತಿಯಾಗಿ ಪ್ರೇಕ್ಷಕನ ಮನಸ್ಸನ್ನು ಮುಟ್ಟುತ್ತದೆ.
ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ’ ಚಿತ್ರದಲ್ಲಿ Cultural alienationದ ಚರ್ಚೆಯಿದೆ.
ಅಮೇರಿಕನ್ ಹುಡುಗಿಯನ್ನು ಮದುವೆ ಮಾಡಿಕೊಂಡು, ಕಥಾನಾಯಕ ತನ್ನ ಹಳ್ಳಿಗೆ ಮರಳುತ್ತಾನೆ.
ಅಲ್ಲಿ ಅವನ ಮೂಕಿ ಅವ್ವ ಮನೆತನವನ್ನು, ಒಕ್ಕಲುತನವನ್ನು ನೋಡಿಕೊಂಡು ಇರುತ್ತಿದ್ದಾಳೆ.
ನಾಯಕ ಹಾಗು ನಾಯಕನ ಹೆಂಡತಿ ಇಲ್ಲಿಯ ಪದ್ಧತಿಗಳನ್ನು ಬದಲಾಯಿಸಲು ಬಯಸುತ್ತಾರೆ.
ತಮ್ಮಲ್ಲಿದ್ದ ಆಕಳುಗಳನ್ನೆಲ್ಲ ನಾಯಕಿಯು ಕಟುಕರಿಗೆ ಮಾರಿ ಬಿಡುತ್ತಾಳೆ.
ನಾಯಕನ ಮನಸ್ಸು ಈಗ ಬದಲಾಗಿದೆ.
ಆತ ಆಕಳುಗಳನ್ನು ಮರಳಿ ಪಡೆಯಲು ಪಟ್ಟಣದ ಕಡೆಗೆ ಓಡುತ್ತಾನೆ.
ಹೋಗುತ್ತಿರುವಾಗಲೇ ಆತ ದನಗಳ ದೊಡ್ಡ ಮಂದೆ ಹೋಗುವದನ್ನು ನೋಡುತ್ತಾನೆ.
ಆದರೆ ಆತನಿಗೆ ತನ್ನ ದನಗಳ ಗುರುತೇ ಹತ್ತುವದಿಲ್ಲ!
ಇಷ್ಟೇ ಆಗಿದ್ದರೆ alienation ಎಂದು ಸುಮ್ಮನಾಗಿ ಬಿಡಬಹುದಿತ್ತು
ಆದರೆ ನಿರ್ದೇಶಕರ ಪ್ರತಿಭೆ ಮುಂದಿನ ನೋಟದಲ್ಲಿ ವ್ಯಕ್ತವಾಗಿದೆ.
ಈತನಿಗೆ ದನಗಳ ಗುರುತು ಹತ್ತದಿದ್ದರೇನಾಯ್ತು, ದನಗಳಿಗೆ ಈತನ ಗುರುತು ಹತ್ತಬಹುದಲ್ಲ; ಆದುದರಿಂದ ದನಗಳ ಹೆಸರನ್ನು ಹಿಡಿದು ಕೂಗಿ ಕರೆಯಿರಿ ಎಂದು ಒಬ್ಬರು ಸೂಚಿಸುತ್ತಾರೆ.
ಆತ “ಗಂಗೇ, ತುಂಗೇ, ಪುಣ್ಯಕೋಟಿ” ಎಂದು ಕೂಗುತ್ತಾನೆ.
ದನಗಳು ಈತನ ದನಿಯನ್ನು ಗುರುತಿಸದೆ ಹೋಗಿ ಬಿಡುತ್ತವೆ.
ಇಲ್ಲಿಗೆ alienation ಪೂರ್ಣವಾದಂತಾಯಿತು.
Neither he recognizes his cattle, nor the cattle recognize him.
ಇವೆಲ್ಲ ದೃಶ್ಯಗಳು cinema specific ದೃಶ್ಯಗಳು.
ಸಿನೆಮಾದ ವೈಯಕ್ತಿಕ ಚೌಕಟ್ಟನ್ನು ಮೀರಿದ ದೃಶ್ಯವೊಂದು ‘ಉಮರಾವ್ ಜಾನ್’ ಹಿಂದಿ ಚಲನಚಿತ್ರದಲ್ಲಿದೆ.
ಮೊಗಲರ ಕಾಲದ ಕತೆ ಇದು.
ಸುಮಾರು ಹನ್ನೆರಡು ಹದಿಮೂರು ವರ್ಷದ ಹಳ್ಳಿಯ ಹುಡುಗಿಯೊಬ್ಬಳು ತನ್ನ ಮನೆಯ ಅಂಗಳದಲ್ಲಿ ಇತರ ಪುಟ್ಟ ಹುಡುಗ ಹುಡುಗಿಯರೊಂದಿಗೆ ಆಡುತ್ತಿದ್ದಾಳೆ.
ಆ ಕುಟುಂಬದೊಡನೆ ದ್ವೇಷವಿರುವ ವ್ಯಕ್ತಿಯೊಬ್ಬ ಎತ್ತಿನ ಬಂಡಿಯಲ್ಲಿ ಅಲ್ಲಿ ಹಾಯ್ದು ಹೋಗುತ್ತಿರುವಾಗ ಇವರನ್ನು ನೋಡುತ್ತಾನೆ.
ದ್ವೇಷ ಸಾಧಿಸಲೆಂದು ಆ ಹುಡುಗಿಯನ್ನು ಪಟ್ಟನೆ ತನ್ನ ಬಂಡಿಯಲ್ಲಿ ಎತ್ತಿ ಹಾಕಿಕೊಂಡು ಹೋಗಿ ಬಿಡುತ್ತಾನೆ.
ಲಖನೌ ಮುಟ್ಟಿದ ಬಳಿಕ ಅವಳನ್ನು ವೇಷ್ಯಾಗೃಹವೊಂದಕ್ಕೆ ಮಾರುತ್ತಾನೆ.
ಆ ಹುಡುಗಿಯೇ ಮುಂದೆ ಹೆಸರುವಾಸಿ ವೇಷ್ಯೆ ಉಮರಾವ್ ಜಾನ್ ಆಗುತ್ತಾಳೆ.
ಹುಡುಗಿಯ ಅಪಹರಣದ ದೃಶ್ಯದ ನಂತರ ಅವಳನ್ನು ಮಾರುವ ದೃಶ್ಯವನ್ನು ತೋರಿಸಿದ್ದರೆ ಕತೆಯಲ್ಲಿ ಏನೂ ವ್ಯತ್ಯಾಸವಾಗುತ್ತಿರಲಿಲ್ಲ.
ಆದರೆ ಈ ಚಿತ್ರದ ನಿರ್ದೇಶಕರು ಚಿತ್ರದ ಆಶಯವನ್ನು ಮೀರಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.
ನಿರ್ಜನ ರಸ್ತೆಯಲ್ಲಿ ಬಂಡಿ ಸಾಗುತ್ತಿದೆ.
ಈಗಾಗಲೇ ಕತ್ತಲೆ ಕವಿದಿದೆ.
ಮಾರ್ಗಮಧ್ಯದಲ್ಲಿ ಬಂಡಿಯ ಹಿಂಭಾಗದಲ್ಲಿ ಆ ಹುಡುಗಿಯ ಮುಖವನ್ನು ಬಂಡಿಯ ಹೊರಗೆ ತೋರಿಸಲಾಗಿದೆ.
ಆ ಹುಡುಗಿಯ ಮುಖದ ಮೇಲೆ ಅಸಹಾಯಕತೆ ಹಾಗೂ resignation ಕೆತ್ತಿದಂತಿವೆ.
ಆ ದೃಶ್ಯವನ್ನು ನೋಡುತ್ತಿರುವ ಪ್ರೇಕ್ಷಕರಿಗೆ ಇದು ಕೇವಲ ಒಬ್ಬ ಉಮರಾವ್ ಜಾನ್ ಕತೆಯಾಗಿ ಉಳಿಯುವದಿಲ್ಲ.
ಭಾರತದಲ್ಲಿ ಪ್ರತಿ ದಿನವೂ ನೂರಾರು ಉಮರಾವ್ ಜಾನ್ಗಳು ಅಸಹಾಯಕರಾಗಿ ತಮ್ಮನ್ನು ಕ್ರೌರ್ಯಕ್ಕೆ ಒಪ್ಪಿಸಿಕೊಳ್ಳುತ್ತಿದ್ದಾರೆ.
ಇದನ್ನು ಹೇಳುವ ಮೂಲಕ ನಿರ್ದೇಶಕರು ಪ್ರೇಕ್ಷಕನ ಮನದ ತಂತಿಯೊಂದನ್ನು ಮಿಡಿಯುತ್ತಾರೆ.
ಉಮರಾವ್ ಜಾನ್ ಒಂದು specific ಕತೆಯುಳ್ಳ ಸಿನೆಮಾ.
ಆದರೆ social theme ಇರುವ ಕೆಲವು ಕತೆಗಳಿವೆ.
ಶ್ಯಾಮ ಬೆನಗಲ್ಲರ ಅಂಕುರ, ನಿಶಾಂತ ಮೊದಲಾದವುಗಳು ಇಂತಹ ಕತೆಗಳು.
ಬೆನಗಲ್ಲರಲ್ಲಿ ಕೆಮರಾಮನ್ ಆಗಿ ಕೆಲಸ ಮಾಡಿದ ಗೋವಿಂದ ನಿಹಲಾನಿ ಸ್ವತಃ ಒಂದು ಚಿತ್ರವನ್ನು ನಿರ್ದೇಶಿಸಿದರು.
ಅವರು ನಿರ್ದೇಶಿಸಿದ ಚಲನಚಿತ್ರ ‘ಆಕ್ರೋಶ’ದಲ್ಲಿ ಓಮ್ ಪುರಿ ಓರ್ವ ಅತಿ ಹಿಂದುಳಿದ communityಯ ಕೂಲಿ ಕೆಲಸಗಾರ.
ಊರಿನ ಪ್ರಮುಖ ವ್ಯಕ್ತಿಗಳಾದ ಜಮೀನುದಾರ, ನ್ಯಾಯಾಧೀಶ, ಪೋಲೀಸ ಅಧಿಕಾರಿ ಮೊದಲಾದವರೆಲ್ಲ ಆತನ ಹೆಂಡತಿಯ(ಸ್ಮಿತಾ ಪಾಟೀಲಳ) ಮೇಲೆ ಒಂದು ರಾತ್ರಿ ಅತ್ಯಾಚಾರ ಮಾಡುತ್ತಾರೆ.
(
ಗಮನಿಸಿ: ಅತ್ಯಾಚಾರದ ದೃಶ್ಯವನ್ನು ತೋರಿಸಿಲ್ಲ!)
ಸಾಮೂಹಿಕ ಅತ್ಯಾಚಾರದಿಂದಾಗಿ ಅಕೆ ಸತ್ತು ಹೋಗುತ್ತಾಳೆ.
ಅವಳ ಹೆಣವನ್ನು ಬಾವಿಯಲ್ಲಿ ಒಗೆದು ಅವಳ ಗಂಡನ ಮೆಲೆ ಕೊಲೆಯ ಕೇಸನ್ನು ಹಾಕುತ್ತಾರೆ.
ಸಿನೆಮಾದ titles ಪ್ರಾರಂಭವಾಗುವದೇ ನ್ಯಾಯಾಲಯದ ದೃಶ್ಯದಿಂದ.
ಕೊಲೆಯಾದ ಸ್ಮಿತಾ ಪಾಟೀಲ ಹಾಗೂ ಓಮ್ ಪುರಿಯ ಶಿಶುವನ್ನು ಅವನ ತಂಗಿ ನ್ಯಾಯಾಲಯದಲ್ಲಿ ಎತ್ತಿಕೊಂಡು ಕೂತಿರುತ್ತಾಳೆ.
ನ್ಯಾಯಾಲಯದ scenes ಮುಗಿಯುತ್ತ ಬಂದಂತೆ, ಆ ಕೂಸು ಸಣ್ಣದಾಗಿ ಅಳಲು ಪ್ರಾರಂಭಿಸುತ್ತದೆ. ನ್ಯಾಯದಾನ ನೀಡುತ್ತಿದ್ದಂತೆಯೇ, ಆ ಕೂಸಿನ ಅಳು ಜೋರಾಗುತ್ತ, ಇಡೀ ನ್ಯಾಯಾಲಯವನ್ನು ತುಂಬಿಕೊಂಡು ಬಿಡುತ್ತದೆ.
ಭಾರತದ ಕನಿಷ್ಠ ಪ್ರಜೆಗಳು ಅಸಹಾಯಕ ಶಿಶುವಿನಂತೆ ಹೇಗೆ ನ್ಯಾಯವಂಚಿತರಾಗಿದ್ದಾರೆ, ಹೇಗೆ ಅವರು ಆಕ್ರೋಶಿಸುತ್ತಿದ್ದಾರೆ ಎನ್ನುವ ತಮ್ಮ ಕಥಾ-ಆಶಯವನ್ನು ಗೋವಿಂದ ನಿಹಲಾನಿ ಸಿನೆಮಾದ ಮೊದಲಲ್ಲೇ ತೋರಿಸಿಬಿಡುತ್ತಾರೆ.
ಬಹುಶ: ಈ ದೃಶ್ಯಕ್ಕೆ ಸ್ವಲ್ಪ ಮಟ್ಟಿನ ಪ್ರೇರಣೆ Alfred Hitchcock ಅವರ ಚಿತ್ರವೊಂದರಿಂದ ದೊರೆತಿರಬಹುದು.
ಆ ಚಿತ್ರದಲ್ಲಿ ಬರುವ ಯುವಕನೊಬ್ಬ rash ಆಸಾಮಿ, ತಲೆತಿರುಕ ಎನ್ನಬಹುದು.
ಆತನ ಮೇಲೆ ಕೊಲೆಯ ಆರೋಪವಿದೆ.
Scotland Yardನ ಅಧಿಕಾರಿಗಳು ಎಲ್ಲ ಸಾಕ್ಷ್ಯಗಳನ್ನು ಹುಡುಕಿ, ಪರಿಶೀಲಿಸಿ ಆತನ ಮೇಲೆ ಖಟ್ಲೆ ಹಾಕಿದ್ದಾರೆ.
ನ್ಯಾಯಾಲಯದಲ್ಲಿ ಖಟ್ಲೆ ನಡೆಯುತ್ತಿರುವಾಗ, ಮನೆಯಲ್ಲಿ ಊಟ ಮಾಡುತ್ತ ಕುಳಿತಿದ್ದ Yardನ ಅಧಿಕಾರಿಗೆ ತಟ್ಟನೆ ಈ ವ್ಯಕ್ತಿ ನಿರಪರಾಧಿ ಎಂದು ಹೊಳೆಯುತ್ತದೆ.
ತಾವು ಮಾಡಿದ ತಪ್ಪು ಆತನಿಗೆ ಗೊತ್ತಾಗುತ್ತದೆ.
ಆತ ನ್ಯಾಯಾಲಯಕ್ಕೆ ಧಾವಿಸುತ್ತಾನೆ.
ನ್ಯಾಯಾಲಯವನ್ನು ಆತ ತಲುಪಿದಾಗ, ಮುಚ್ಚಿದ ಕಾಜಿನ ಬಾಗಿಲುಗಳಿಂದ ಒಳಗಿನ ದೃಶ್ಯ ಗೋಚರವಾಗುತ್ತದೆ.
ಆರೋಪಿಯು ಜೋರಾಗಿ ಕೈಗಳನ್ನು ಅಲ್ಲಾಡಿಸುತ್ತಿರುತ್ತಾನೆ, ಬಹುಶ: ತಾನು ನಿರಪರಾಧಿಯೆಂದು ಹೇಳುತ್ತಿರಬಹುದು.
ಆತ ಹೇಳುವದು ಇವನಿಗೆ ಹಾಗೂ ಪ್ರೇಕ್ಷಕರಿಗೆ ಕೇಳುವದಿಲ್ಲ.
ಈತ ಗಾಜಿನ ಬಾಗಿಲನ್ನು ತೆರೆಯುತ್ತಿದ್ದಂತೆ, ನ್ಯಾಯಧೀಶರು ಆತನಿಗೆ ದಂಡನೆ ನೀಡುವ ತೀರ್ಪು ಕೇಳಿಸುತ್ತದೆ.
ಸಮಾಜದ ವ್ಯವಸ್ಥೆಯು ಆರೋಪಿಯ ಕೂಗಿಗೆ ಹೇಗೆ ಕಿವುಡಾಗಿದೆ ಎನ್ನುವ ಆಶಯವನ್ನು ವ್ಯಕ್ತಪಡಿಸುವ ಮೂಲಕ Alfred Hitchcock ಇವರು ಈ ಸಿನೆಮಾವನ್ನು ಸಾಮಾನ್ಯ ಪತ್ತೇದಾರಿ ಸಿನೆಮಾಗಿಂತ ಎತ್ತರದ ಸಾಮಾಜಿಕ ಸಿನೆಮಾ ಆಗಿ ಪರಿವರ್ತಿಸಿದ್ದಾರೆ.
ಇಲ್ಲಿ ಉದಾಹರಿಸಲಾದ ಕೆಲವು ಚಿತ್ರಗಳು ೪೦, ೫೦ ವರ್ಷಗಳಷ್ಟು ಹಳೆಯವು.
ಆ ಕಾಲದಲ್ಲಿ ಸಿನೆಮಾ ತಂತ್ರಜ್ಞಾನ ಅಷ್ಟಕ್ಕಷ್ಟೇ.
ಆದರೆ, ನಿರ್ದೇಶಕರು ಪ್ರತಿಭಾವಂತರಾಗಿದ್ದರು.
ಅಂತೆಯೇ ಇಷ್ಟು ವರ್ಷಗಳ ನಂತರವೂ ಇವು ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿ ನಿಂತಿವೆ.
ಇಂತಹ ಒಂದಾದರೂ ಪ್ರತಿಭಾವಂತ ದೃಶ್ಯವು Slumdog millionaire ಚಿತ್ರದಲ್ಲಿ ಇದೆಯೆ?
ಇಂತಹ ಪ್ರತಿಭೆಯ ಒಂದೇ ಉದಾಹರಣೆಯನ್ನಾದರೂ ಈ ಚಿತ್ರದಲ್ಲಿ ನೋಡಬಹುದೆ?
ಬಾಲಕ ಜಮಾಲ ಸಂಡಾಸದ ಹೊಲಸಿನಲ್ಲಿ ಹಾರುವ ಒಂದೇ ದೃಶ್ಯವಲ್ಲ, ಇಡೀ ಚಲನಚಿತ್ರವೇ ಸಂಡಾಸದ ಹೊಲಸಾಗಿದೆ!
Slumdog millionaire is just toilet shit.