Showing posts with label ಚಲನಚಿತ್ರ. Show all posts
Showing posts with label ಚಲನಚಿತ್ರ. Show all posts

Tuesday, January 16, 2018

ಇತಿಹಾಸದ ತಳಮಳ



‘ಸೋತವರು ಇತಿಹಾಸವನ್ನು ಬರೆಯುವದಿಲ್ಲ’ ಎನ್ನುವ ಮಾತೊಂದಿದೆ. ಗೆದ್ದವರಾದರೊ ತಮ್ಮ ಇತಿಹಾಸವನ್ನು ವಿಜೃಂಭಿಸಿಕೊಂಡು ಬರೆಯುತ್ತಾರೆ. ಭಾರತದ ಮೇಲೆ ವಿದೇಶೀಯರ ಆಕ್ರಮಣಗಳು ನಡೆದಾಗಲೆಲ್ಲ, ಅಲ್ಲಿಯ ಇತಿಹಾಸಕಾರರು ತಮ್ಮ ಆಶ್ರಯದಾತರನ್ನು ‘ಜಗದೇಕ ವೀರ’ರೆಂದೂ, ‘ಪಾಖಂಡಿಕುಠಾರ’ರೆಂದೂ ಬಣ್ಣಿಸಿದ್ದಾರೆ. ಭಾರತದಲ್ಲಿಯ ಎಷ್ಟೆಲ್ಲ ಧನದೌಲತ್ತನ್ನು, ದಾಸ,ದಾಸಿಯರನ್ನು ತಮ್ಮ ಬಾದಶಹರು ಸೂರೆ ಹೊಡೆದು, ಗೆದ್ದುಕೊಂಡು ಬಂದರೆನ್ನುವುದನ್ನು ಹಾಡಿ ಹೊಗಳಿದ್ದಾರೆ.

ಸೋತು ಹೋದವರ ಇತಿಹಾಸವನ್ನು ಯಾರು ಬರೆಯಬೇಕು? ಸೋತು ಹೋದವರಲ್ಲಿಯೂ ಸಹ ದೇಶಾಭಿಮಾನಿಗಳು ಇರುತ್ತಾರಲ್ಲವೆ? ಇವರ ಎದೆಯಲ್ಲಿಯ ಕಿಚ್ಚು ಜೀವಂತವಾಗಿ ಉರಿಯುತ್ತ ಇರುವುದಲ್ಲವೆ? ಇವರು ತಮ್ಮ ಲಾವಣಿಗಳಲ್ಲಿ, ಜನಪದ ಕಾವ್ಯಗಳಲ್ಲಿ ತಮ್ಮ ಯೋಧರ, ರಾಜರ ಧೈರ್ಯ, ಶೌರ್ಯ, ಸ್ವಾಭಿಮಾನ. ಶರಣಾಗತ ವಾತ್ಸಲ್ಯ ಇವೆಲ್ಲವನ್ನು ಮನದುಂಬಿ ನೆನೆಸಿದ್ದಾರೆ. ಆದರೆ ಇದಷ್ಟೇ ಇತಿಹಾಸವಲ್ಲ. ಬರೆಯದೆ ಉಳಿದ ಇತಿಹಾಸ ಇನ್ನೂ ಸಾಕಷ್ಟಿದೆ. ಅದೇ ವಾಸ್ತವ ಇತಿಹಾಸ.

ವಾಸ್ತವ ಇತಿಹಾಸ: 
ವಿದೇಶೀ ದಾಳಿಕಾರರನ್ನು ‘ನರಹಂತಕರು, ಸೀಳುನಾಯಿಗಳು, ದರೋಡೆಖೋರರು’ ಎಂದು ಗುರುತಿಸುವುದು ವಾಸ್ತವಕ್ಕೆ ಹತ್ತಿರವಾದ ಮಾತು. ತಾವು ಆಕ್ರಮಿಸುತ್ತಿರುವ ಪ್ರದೇಶಗಳನ್ನು ಸುಡುತ್ತ, ಕಂಡವರನ್ನು ಕೊಲ್ಲುತ್ತ, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವೆಸಗುತ್ತ ಮುನ್ನುಗ್ಗುವುದು ಇವರ ರಣನೀತಿ. ಇದರ ಪರಿಣಾಮವೇನು? ಇಲ್ಲಿಯ ಪ್ರಜೆಗಳು ಹಾಗು ರಾಜರು ಇವರ ಕ್ರೌರ್ಯಕ್ಕೆ ಹೆದರಿರಬೇಕು; ಹೋರಾಟವಿಲ್ಲದೆ ತಮ್ಮ ಕಾಲಿಗೆ ಬೀಳಬೇಕು ಎನ್ನುವುದು ಈ ರಣನೀತಿಯ ಉದ್ದೇಶ. ಇಲ್ಲಿಯ ರಾಜರು ಮೊದಮೊದಲಿಗೆ ಪ್ರತಿಹೋರಾಟಕ್ಕೆ ಸಜ್ಜಾದರೂ ಸಹ, ತಮ್ಮ ಭೂತಾಯಿ ಹಾಗು ತಮ್ಮ ಪ್ರಜೆಗಳು ಭೀಕರ ಕ್ರೌರ್ಯಕ್ಕೆ ಒಳಗಾಗುವುದನ್ನು ನೋಡಲಾರದೆ ಮತ್ತು ಈ ಸೀಳುನಾಯಿಗಳ ಜೊತೆಗೆ ಹೋರಾಡುವ ಶಕ್ತಿ ಇಲ್ಲದೆ, ಅನಿವಾರ್ಯವಾಗಿ ಶರಣಾಗುತ್ತಿದ್ದರು. ತಮ್ಮ ಹೆಣ್ಣು, ಹೊನ್ನು ಹಾಗು ಮಣ್ಣಿನಲ್ಲಿಯ ಬಹುಭಾಗವನ್ನು ದರೋಡೆಖೋರರಿಗೆ ಒಪ್ಪಿಸಿ, ತಮ್ಮ ಕೈಲಾದಷ್ಟು ಶಾಂತಿಯನ್ನು ಕೊಂಡು ಕೊಳ್ಳುತ್ತಿದ್ದರು.

ಚಿತ್ತೂರಿನ ಇತಿಹಾಸದಲ್ಲಿ ಇನ್ನೂ ಒಂದು ದಾರುಣ ಅಂಶಇದೆ. ಅಲ್ಲಾಉದ್ದೀನ ಖಿಲಜಿಯು ರಾಣಿ ಪದ್ಮಿನಿಯ ಚೆಲುವಿನ ಖ್ಯಾತಿಯನ್ನು ಕೇಳಿ ಮರುಳಾದ ಎಂದು ಹೇಳುತ್ತಾರೆ. ತಮ್ಮ ಜನಾನಾವನ್ನು ವಿಸ್ತರಿಸುತ್ತಲೇ ಇರುವ ಈ ಬಾದಶಾಹರುಗಳಿಗೆ ಪರಸ್ತ್ರೀಯರು ಎಂದರೆ ತಮ್ಮ ದಾಸಿಯರು ಎನ್ನುವ ಭಾವನೆ ಸಹಜವಾದದ್ದೇ. ಸರಿ, ಖಿಲಜಿಯು ಚಿತ್ತೂರಿನ ಮೇಲೆ ದಾಳಿ ಮಾಡಿದ. ಮೊದಲನೆಯ ಸಲ ಸೋತು ಹೋದ. ಭೀಮಸಿಂಗನನ್ನು ವಂಚನೆಯಿಂದ ಬಂಧಿಸಿದ. ‘ಎರಡನೆಯ ಸಲದ ದಾಳಿಯಲ್ಲಿ ಖಿಲಜಿ ಗೆಲ್ಲುವುದು ನಿಶ್ಚಿತವಾದದ್ದರಿಂದ, ರಾಣಿ ಪದ್ಮಿನಿಯ ಜೊತೆಗೆ ಅರಮನೆಯ ಹೆಣ್ಣುಮಕ್ಕಳೆಲ್ಲ ‘ಜೋಹರ’ದಲ್ಲಿ ಸುಟ್ಟುಕೊಂಡು ಸತ್ತರು. ರಾಜಪೂತ ಯೋಧರು ಹೋರಾಡಿ ಮಡಿದರು’ ಇದಿಷ್ಟು ನಮಗೆ ಇತಿಹಾಸದ ಪುಟಗಳಲ್ಲಿ ಸಿಗುವ ಮಾಹಿತಿ. ಇತಿಹಾಸವು ಭೀಮಸಿಂಗನ ಹಾಗು ಆತನ ಪ್ರಜೆಗಳ ಮನದಲ್ಲಿ ನಡೆದ ತಳಮಳವನ್ನು, ಅವರ ಮಾನಸಿಕ ಹೋರಾಟವನ್ನು ಹೇಳುವುದಿಲ್ಲ. ಇತಿಹಾಸವು ಲೂಟಿಯಾದ, ಸುಟ್ಟು ಹೋದ ಚಿತ್ತೂರಿನ ಸಂಕಟವನ್ನು ಹೇಳುವುದಿಲ್ಲ.

ಮೊದಲನೆಯ ಸಲ ಭೀಮಸಿಂಗನು ಖಿಲಜಿಯನ್ನು ಸೋಲಿಸಿದಾಗಲೂ ಸಹ, ಚಿತ್ತೂರು ರಾಜ್ಯದ ಬಹುಭಾಗವು ನಾಶವಾಗಿತ್ತು. ಬೆಳೆನಾಶ, ಸಂಪತ್ತಿನ ಸೂರೆ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಇವು ರಾಜ್ಯದ ಅರಸನಾದ ರಾಣಾ ಭೀಮಸಿಂಗನನ್ನು ಮಾನಸಿಕವಾಗಿ ಜರ್ಜರಿಸಿರಲೇ ಬೇಕಲ್ಲವೆ? ರಾಜ್ಯದ ಪುನರ್ನಿರ್ಮಾಣ; ಪ್ರಜೆಗಳನ್ನು ಸಂತೈಸಿ, ಅವರ ನೆರವಿಗೆ ನಿಲ್ಲುವುದು ಇವೆಲ್ಲವನ್ನು ಮಾಡುವುದಲ್ಲದೆ, ಖಿಲಜಿಯ ಮರುದಾಳಿಗೆ ತಯಾರಿ ಮಾಡಿಕೊಳ್ಳುವುದು ಇವೆಲ್ಲ ಸಾಮಾನ್ಯವಾದ ಸಂಗತಿಗಳೆ?

ಖಿಲಜಿಗಾದರೊ ಎರಡನೆಯ ದಾಳಿ ಅನಿವಾರ್ಯ. ಅವನ ಸ್ತ್ರೀಲಾಲಸೆ ಇದಕ್ಕೆ ಒಂದು ಕಾರಣವಾದರೆ, ತಾನು ಪರಾಜಿತನಾದೆ ಎನ್ನುವ ಅವಮಾನವನ್ನು  ತೊಡೆದುಹಾಕುವುದೂ ಸಹ ರಾಜಕೀಯವಾಗಿ ಅವನಿಗೆ ಒಂದು ಮಹತ್ವದ ಮಾತೇ ಆಗಿರಬಹುದು.

ರಾಣಾ ಭೀಮಸಿಂಗನ ಎದುರಿಗೆ ಇರುವ ಆಯ್ಕೆಗಳು ಕಠಿಣವಾದಂತಹವು:
ಮೊದಲನೆಯ ಆಯ್ಕೆ: 
ಖಿಲಜಿಗೆ ಪದ್ಮಿನಿಯನ್ನು ಒಪ್ಪಿಸಿ, ರಾಜ್ಯದ ಸತ್ಯಾನಾಶವನ್ನು ತಡೆಯುವುದು; ಆತನಿಗೆ ಹೇರಳವಾಗಿ ಕಪ್ಪ ಕಾಣಿಕೆಗಳನ್ನು ಕೊಡುವುದು; ಆತ ಕರೆದಾಗೆಲ್ಲ ಆತನ ದರಬಾರಿಗೆ ಹೋಗಿ ಮುಜುರೆ ಹಾಕುವುದು; ಆತನ ಯುದ್ಧಗಳಲ್ಲಿ ಆತನ ಬೆಂಬಲಕ್ಕೆ ತನ್ನ ಸೈನ್ಯವನ್ನು ಒದಗಿಸುವುದು ಇತ್ಯಾದಿ.

ಖಿಲಜಿಯು ರಾಣಿ ಪದ್ಮಿನಿಯ ಬದಲಾಗಿ ಬೇರಾವುದೋ ರಾಜಕುಮಾರಿಯನ್ನು ಬಯಸಿದ್ದರೆ, ಆಕೆಯನ್ನು ಈ ತುರಕನಿಗೆ ಮದುವೆ ಮಾಡಿಯೇ ಒಪ್ಪಿಸಬಹುದಾಗಿತ್ತು. ಆದರೆ, ಇವಳು ವಿವಾಹಿತಳು, ಚಿತ್ತೂರಿನ ರಾಣಿ. ಆದುದರಿಂದ, ಇದು ಚಿತ್ತೂರಿನ ಸ್ವಾಭಿಮಾನದ ಪ್ರಶ್ನೆಯೂ ಹೌದು. ರಾಣಿಯನ್ನು ಖಿಲಜಿಗೆ ಒಪ್ಪಿಸುವದೆಂದರೆ, ಖಿಲಜಿಗೆ ಶರಣಾಗಿ ನೆಲಕ್ಕೆ ಮೂಗು ತಿಕ್ಕಿದಂತೆ. ಇದು ಘೋರ ಅಪಮಾನ.

ಇಂತಹ ರಾಣಾನನ್ನು ಪ್ರಜೆಗಳು ಗೌರವಿಸಲು ಸಾಧ್ಯವೆ? ಅವರ ಕಣ್ಣಿನಲ್ಲಿ ಈತ ಷಂಢನಾಗುವುದಿಲ್ಲವೆ? ತನ್ನ ಹೆಂಡತಿಯನ್ನು, ಚಿತ್ತೂರಿನ ರಾಣಿಯನ್ನು ರಕ್ಷಿಸಲಾಗದವನು ರಾಜಪಟ್ಟಕ್ಕೆ ಅಯೋಗ್ಯನು ಎಂದು ಪ್ರಜೆಗಳು ಭಾವಿಸಲಿಕ್ಕಿಲ್ಲವೆ? ಈತ ಸಿಂಹಾಸನದ ಮೇಲೆ ಉಳಿಯುವುದು ಹಾಸ್ಯಾಸ್ಪದವಾಗುವುದಿಲ್ಲವೆ?

ಎರಡನೆಯ ಆಯ್ಕೆ:
ಖಿಲಜಿಯೊಡನೆ ಮರುಹೋರಾಟಕ್ಕೆ ಸಿದ್ಧನಾಗುವುದು.
ಮೊದಲನೆಯ ಯುದ್ಧದಿಂದಾಗಿಯೇ ಚಿತ್ತೂರು ಬಸವಳಿದು ಹೋಗಿದೆ. ಎರಡನೆಯ ಯುದ್ಧಕ್ಕೆ ಸೈನಿಕರನ್ನು, ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಲು ಚಿತ್ತೂರಿಗೆ ಸಾಧ್ಯವೆ? ಜಮೀನುಗಳು ಸುಟ್ಟು ಹೋಗಿರುವದರಿಂದ, ತಿನ್ನಲು ಕೂಳಿಲ್ಲದೆ, ಅನೇಕರು ಗುಳೆ ಹೋಗಿದ್ದಾರೆ. ಅಳಿದುಳಿದ ಪ್ರಜೆಗಳನ್ನು ಒಟ್ಟುಗೂಡಿಸಿ, ಸೋಲುವುದು ಖಚಿತವಿರುವ ಎರಡನೆಯ ಹೋರಾಟವನ್ನು ಮಾಡುವುದು ಸಾಧ್ಯವೆ?
ಇದು ಹುಚ್ಚುತನ, ಇದು ಆತ್ಮಾಹುತಿ.

ರಾಣಾ ಭೀಮಸಿಂಗನ ಎದುರಿಗೆ ಕಠಿಣವಾದ ಆಯ್ಕೆಗಳಿದ್ದವು: ಹೋರಾಡಿ ಸಾಯಿ ಅಥವಾ ಬದುಕಿ ಸಾಯಿ. ರಾಣಾ ಹಾಗು ಆತನ ಪ್ರಜೆಗಳಿಗೆ ಇದರಲ್ಲಿ ಯಾವುದೇ ಇಬ್ಬಗೆ ಕಾಣಲಿಲ್ಲ. ರಾಣಾನ ಮಾನವೇ ತಮ್ಮ ಮಾನ ಎಂದು ಅವರು ಅರಿತಿದ್ದರು. ಅವರು ಹೋರಾಡಿಯೇ ಸಾಯಲು ಒಮ್ಮತದಿಂದ ಸಿದ್ಧರಾದರು.

ಖಿಲಜಿ ಮತ್ತೊಮ್ಮೆ ದಂಡೆತ್ತಿ ಬಂದ. ಚಿತ್ತೂರಿನ ಹಳ್ಳಿಗಳು ಹಾಗು ಜಮೀನುಗಳು ಮತ್ತೊಮ್ಮೆ ಬೆಂಕಿಯ ಪಾಲಾದವು. ಅಲ್ಲೆಲ್ಲ ಕೈಗೆ ಸಿಕ್ಕ ಪದ್ಮಿನಿಯರು ತುರುಕರ ಪಾಲಾದರು. ಚಿತ್ತೂರ ಯೋಧರು ಸಾಯಲು ಸಿದ್ಧರಾಗಿಯೇ ಹೋರಾಡಿದರು, ಸತ್ತರು.

ಅರಮನೆಯ ಹೆಣ್ಣುಮಕ್ಕಳ ಆಯ್ಕೆಯೂ ಸ್ಪಷ್ಟವಾಗಿತ್ತು: ಜೋಹಾರ್!

ಇತಿಹಾಸವು ಭೀಮಸಿಂಗನ ಹಾಗು ಆತನ ಪ್ರಜೆಗಳ ಮಾನಸಿಕ ತಳಮಳವನ್ನು ಹೇಳುವುದಿಲ್ಲ; ರಾಣಿ ಪದ್ಮಿನಿಯ ಹಾಗು ಇತರ ಸ್ತ್ರೀಯರ ತಳಮಳವನ್ನು ಹೇಳುವುದಿಲ್ಲ. ಸಾಯುತ್ತಿರುವವರ ಹಾಗು ಸುಟ್ಟುಹೋಗುತ್ತಿರುವವರ ವೇದನೆಯನ್ನು ಹೇಳುವುದಿಲ್ಲ. ಬುದ್ಧಿಜೀವಿಗಳ ಮಟ್ಟಿಗಂತೂ ಇದು ಅಪರಾಧ!

ನಮ್ಮ ಚಿತ್ರನಿರ್ಮಾಪಕರೂ ಸಹ ಇವ್ಯಾವುದನ್ನೂ ಹೇಳುವುದಿಲ್ಲ.   ಗಲ್ಲಾಪೆಟ್ಟಿಗೆಯೇ ಅವರ ಏಕಮೇವ ಆಯ್ಕೆ. ಹೀಗಾಗಿ ರಾಣಿ ಪದ್ಮಿನಿಗೆ ಇದು ಎರಡನೆಯ ಜೋಹಾರ್!

ಇತಿಹಾಸದ ತಳಮಳವನ್ನು ಕೇಳುವವರು ಯಾರು?

Sunday, February 15, 2009

ನಿರ್ದೇಶಕರ ಆಶಯ

೧೯೫೦ರ ದಶಕದಲ್ಲಿ ರಾಜಕಪೂರ, ದಿಲೀಪಕುಮಾರ ಹಾಗೂ ದೇವ ಆನಂದ ಇವರು ಹಿಂದಿ ಚಿತ್ರಜಗತ್ತಿನಲ್ಲಿ ಹೆಸರಾಂತ ನಟರಾಗಿದ್ದರು.
ರಾಜಕಪೂರ ತನ್ನ ಸ್ವಂತ ಚಿತ್ರನಿರ್ಮಾಣ ಪ್ರಾರಂಭಿಸಿದ ಮೇಲೆ ಸಾಮಾಜಿಕ ಪ್ರಜ್ಞೆಯುಳ್ಳ ಹಲವು ಚಿತ್ರಗಳನ್ನು (ಉದಾ: ಬೂಟ್ ಪಾ^ಲಿಶ್, ಜಾಗತೇ ರಹೋ, ಜಿಸ್ ದೇಶ ಮೆ ಗಂಗಾ ಬಹತೀ ಹೈ ಇತ್ಯಾದಿ ಚಲನಚಿತ್ರಗಳನ್ನು ನಿರ್ಮಿಸಿದರು.
ಬಹುಶ: ಚಾರ್ಲಿ ಚಾಪ್ಲಿನ್ನನ Tramp ಇಮೇಜಿನಿಂದ ಪ್ರೇರಿತರಾದ ಇವರು ತಮ್ಮ ಅನೇಕ ಚಿತ್ರಗಳಲ್ಲಿ ಸದ್ಭಾವನೆಯಿಂದ ತುಂಬಿದ, ಆದರೆ ವ್ಯವಹಾರ ಬುದ್ಧಿಯಿಲ್ಲದ ಅಮಾಯಕ ತರುಣನ ಪಾತ್ರವನ್ನು ನಿರ್ಮಿಸಿದ್ದಾರೆ.

‘ಅನಾಡಿ’ ಚಲನಚಿತ್ರವು ಇಂತಹ ಒಂದು romantic film.
ರಾಜಕಪೂರ ಇದರಲ್ಲಿ ‘ಅನಾಡಿ’, ಅಂದರೆ ವ್ಯವಹಾರ ಬುದ್ಧಿ ಇಲ್ಲದ ಅಮಾಯಕನಾದ ಒಳ್ಳೆ ಹುಡುಗನ ಪಾತ್ರ ನಿರ್ವಹಿಸಿದ್ದಾರೆ.

ಸರಳ ಬುದ್ಧಿಯ ರಾಜಕಪೂರ ಹೊಟ್ಟೆಪಾಡಿಗಾಗಿ ಹೊಟೆಲ್ ಒಂದರಲ್ಲಿ ವೇಟರ್ ಕೆಲಸಕ್ಕೆ ಸೇರಿಕೊಳ್ಳುತ್ತಾನೆ.
ಅಡುಗೆ ಮನೆಯಿಂದ ತಿಂಡಿ ತಂದು ಗಿರಾಕಿಗಳಿಗೆ ಕೊಡಬೇಕಷ್ಟೆ.
ಆ ಸಮಯದಲ್ಲಿ ತಿಂಡಿ ತಯಾರಿಸುವ ಪದಾರ್ಥದಲ್ಲಿ ಜೊಂಡಿಗವೊಂದು ಬಿದ್ದದ್ದನ್ನು ನೋಡಿದ ಈತ, “ಜೊಂಡಿಗ” ಎಂದು ಗಲಾಟೆ ಮಾಡುತ್ತ ಹೊರಬರುತ್ತಾನೆ.
ಗಿರಾಕಿಗಳು ಬೈಯುತ್ತ ಎದ್ದು ಹೊರಗೆ ಹೋಗುತ್ತಾರೆ.
ಹೊಟೆಲ್ ಮಾಲಕ ಈತನನ್ನು ಒದ್ದು ಹೊರಗೆ ಹಾಕುತ್ತಾನೆ.

ಇಲ್ಲಿಗೆ ಈತನ ಅಮಾಯಕ ಬುದ್ಧಿಯನ್ನು ತೋರಿಸಿದಂತಾಯಿತು.
ಆದರೆ ನಿರ್ದೇಶಕರಿಗೆ ಇರುವ ಆಶಯ ಇನ್ನೂ ಹೆಚ್ಚಿನದು.
ಅವರಿಗೆ ಈ ದಡ್ಡ ವ್ಯಕ್ತಿಯ ಹೃದಯದಲ್ಲಿ ಇರುವ ಕರುಣೆಯನ್ನು , ಜಗದ ಎಲ್ಲ ಜೀವಿಗಳ ಬಗೆಗೆ ಇವನಿಗೆ ಇರುವ ಮರುಕವನ್ನು ತೋರಿಸಬೇಕಾಗಿದೆ.

ಅದಕ್ಕಾಗಿ ಒಂದು ಹಾಡಿನ ದೃಶ್ಯವನ್ನು ತರಲಾಗಿದೆ:
“ಕಿಸೀಕೆ ಮುಸ್ಕುರಾಹಟೋಂಪೆ ಜೀ ಉಠಾ
ಕಿಸೀಕೆ ದರ್ದ ಹೋ ಸಕೇ ತೊ ಲೇ ಉಧಾರ
ಕಿಸೀಕೆ ವಾಸತೆ ಹೊ ದಿಲ್ ಮೆ ಪ್ಯಾರ
ಜೀನಾ ಇಸೀಕಾ ನಾಮ ಹೈ.”

(ಯಾರದೋ ನಗುವಿನಿಂದ ಮನವು ಅರಳಿದೆ,
ಯಾರದೋ ನೋವು ಕಡವಾಗಿ ಬಂದಿದೆ,
ಯಾರಿಗಾಗಿ ಏನೊ ಇಲ್ಲಿ ಪ್ರೀತಿ ತುಂಬಿದೆ,
ಇದೇ ನೋಡು ಜೀವನ ಎಂದು ಅಂದಿದೆ.)

ಈ ಹಾಡನ್ನು ಹಾಡುತ್ತ ರಾಜಕಪೂರ ಹೊರ ಸಾಗಿದಾಗ ಅವನ ಬೂಟಿನ ಕೆಳಗೆ ಒಂದು ಹುಳ ಕಾಣುತ್ತದೆ.
ರಾಜಕಪೂರ ತಕ್ಷಣವೆ ಬಾಗಿ, ಅದನ್ನೆತ್ತಿ ದಾರಿಯ ಬದಿಯಲ್ಲಿ ಬಿಡುತ್ತಾನೆ.
ಈ ಒಂದು ದೃಶ್ಯವನ್ನು ನಿರ್ಮಿಸಲು ನಿರ್ದೇಶಕರು ಎಷ್ಟು ಪರಿಶ್ರಮಪಟ್ಟಿದ್ದಾರು ಎನ್ನುವದನ್ನು ಊಹಿಸಲು ಸಾಧ್ಯವಿಲ್ಲ.
ಮೊದಲಿಗೆ, ಈ ದೃಶ್ಯದ ಕಲ್ಪನೆ, ಬಳಿಕ ಚಿತ್ರಕತೆಯ ಲೇಖಕರೊಂದಿಗೆ ಸನ್ನಿವೇಶದ ಚರ್ಚೆ ಹಾಗೂ ಬರಹ, ಸಂಗೀತಗಾರರು ಹಾಗೂ ಗೀತೆಯ ಲೇಖಕರ ಜೊತೆಗೆ ಚರ್ಚೆ ಹಾಗೂ ಗೀತೆಯ ರಚನೆ ಇವೆಲ್ಲವೂ perfect ಆಗಿ ಬಂದ ಮೇಲೆ, ರಾಜಕಪೂರನಿಂದ ಸನ್ನಿವೇಶದ ಅಭಿನಯ, ಕೆಮರಾ ನಿರ್ದೇಶನ ಆಗಬೇಕು.
ಇವೆಲ್ಲ ಮುಗಿದು ಚಿತ್ರಪ್ರದರ್ಶನದ ಸಮಯದಲ್ಲಿ ಪ್ರೇಕ್ಷಕರ ಸ್ಪಂದನವನ್ನು ನಿರೀಕ್ಷಿಸಬೇಕು.
ಪ್ರೇಕ್ಷಕರು ಶೈಲೇಂದ್ರ ಬರೆದ ಈ ಗೀತೆಯನ್ನು, ಮುಖೇಶ ಅವರ ಹಾಡುಗಾರಿಕೆಯನ್ನು, ಶಂಕರ-ಜೈಕಿಶನ್ ಅವರ ಸಂಗೀತವನ್ನು ಹಾಗೂ ರಾಜಕಪೂರರ ಅಭಿನಯವನ್ನು ಮೆಚ್ಚಿದರೆಂದು ಹೇಳಬೇಕಾಗಿಲ್ಲ.
ಆ ಚಿತ್ರದ ಅತ್ಯಂತ ಯಶಸ್ವೀ ದೃಶ್ಯವಾಯಿತಿದು.
ನಿರ್ದೇಶಕರ ಆಶಯ ಈ ರೀತಿಯಾಗಿ ಸಫಲವಾಯಿತು.

ಇದೇ ರೀತಿಯಾಗಿ ಇರಾಣಿ ನಿರ್ದೇಶಕ ಮಜೀದ ಮಜೀದಿಯವರ ಚಲನಚಿತ್ರಗಳಲ್ಲಿ ಯಾವಾಗಲೂ ಮರುಕದ ಸಂದೇಶವನ್ನು ನೋಡಬಹುದು.
ಅವರ ನಿರ್ದೇಶನದ ‘ಬಚೇಹಾ-ಏ-ಅಸೇಮಾನ್’ (Children of Heaven) ಚಿತ್ರವು ಇರಾಣ ದೇಶದ ಬದುಕನ್ನು ಕಟ್ಟಿಕೊಡುತ್ತದೆ.
ಆ ದೇಶದ ಸಂಪ್ರದಾಯ ಬದ್ಧ ಜೀವನ, ಬಡತನ, ಪುರುಷಪ್ರಧಾನ ಸಮಾಜವ್ಯವಸ್ಥೆ ಇವುಗಳ ಚೌಕಟ್ಟಿನಲ್ಲಿ ಬದಕುತ್ತಿರುವ ಬಡ ಕುಟುಂಬವೊಂದರ ಚಿತ್ರವಿದು.
ಈ ಕುಟುಂಬದಲ್ಲಿರುವ ೧೦-೧೨ ವಯಸ್ಸಿನ ಹುಡುಗ ಹಾಗೂ ಅವನ ೮-೧೦ ವರ್ಷದ ತಂಗಿ ಇವರ ಸುತ್ತ ಕತೆ ಹೆಣೆಯಲಾಗಿದೆ.
ತಂಗಿಯ ಶಾಲಾ ಬೂಟುಗಳನ್ನು ದುರಸ್ತಿಗಾಗಿ ಒಯ್ದ ಅಣ್ಣ ಆಕಸ್ಮಿಕವಾಗಿ ಅವುಗಳನ್ನು ಕಳೆದುಕೊಳ್ಳುತ್ತಾನೆ. ತಂದೆಯ ಎದುರಿಗೆ ಹೇಳಲು ಅವರಿಗೆ ಹೆದರಿಕೆ.
ತಂಗಿಯ ಶಾಲೆ ಬೆಳಗಿನಲ್ಲಿ; ಅಣ್ಣನ ಶಾಲೆ ಮಧ್ಯಾಹ್ನ.
ಆದುದರಿಂದ ತಂಗಿ ಅಣ್ಣನ ಸ್ವಲ್ಪ ದೊಡ್ಡವಿರುವ ಬೂಟುಗಳನ್ನೇ ಹಾಕಿಕೊಂಡು ತನ್ನ ಶಾಲೆಗೆ ಹೋಗಬೇಕು. ಶಾಲೆಯಿಂದ ಓಡೋಡಿ ಬಂದು, ಕಾಯುತ್ತಿರುವ ಅಣ್ಣನಿಗೆ ಬೂಟುಗಳನ್ನು ಕೊಟ್ಟ ಬಳಿಕ ಆತ ಶಾಲೆಗೆ ಹೋಗಬೇಕು.
ಈ ironic situationಅನ್ನು ಮಜೀದಿ ಸಾಕಷ್ಟು ಜಾಣ್ಮೆಯಿಂದ ನಿರ್ದೇಶಿಸಿದ್ದಾರೆ.
ಆದರೆ ಅಲ್ಲಿಗೇ ಅವರು ನಿಲ್ಲುವದಿಲ್ಲ.
Tight screen play ಇರಬೇಕೆನ್ನುವ ನಿರ್ದೇಶಕರ ಗುಂಪಿಗೆ ಅವರು ಸೇರಿದವರಲ್ಲ.
ತಮ್ಮ ಚಿತ್ರದ ಮೂಲಕ ಅನುಕಂಪದ ಸಂದೇಶವನ್ನು ಪ್ರೇಕ್ಷಕರಿಗೆ ತಲುಪಿಸಬೇಕೆನ್ನುವದಷ್ಟೇ ಅವರ ಕಳಕಳಿ. ಆದುದರಿಂದ ಅವರು ಚಿತ್ರದಲ್ಲಿ ಈ ಮುಂದಿನ ದೃಶ್ಯವನ್ನು ಸೇರಿಸಿದ್ದಾರೆ:
ಒಮ್ಮೆ ತಂಗಿಯು ಶಾಲೆಯಿಂದ ಬರುತ್ತಿರುವಾಗ ಧಾರಾಕಾರ ಮಳೆ ಪ್ರಾರಂಭವಾಗುತ್ತದೆ.
ಗಟಾರಗಳು ತುಂಬಿ ಹರಿಯುತ್ತವೆ.
ಈ ಹುಡುಗಿ ಗಟಾರವನ್ನು ದಾಟುವಾಗ, ಒಂದು ಬೂಟು ಕಳಚಿ ಗಟಾರದಲ್ಲಿ ಬಿದ್ದು ತೇಲಿ ಹೋಗುತ್ತದೆ.
ಅದನ್ನು ನೋಡಿದ ಪಕ್ಕದ ಅಂಗಡಿಯಾತ ಅದನ್ನು ಎತ್ತಿಕೊಡಲು ಧಾವಿಸುತ್ತಾನೆ.
ಅವನಿಗೆ ಸಹಾಯ ಮಾಡಲು ಮತ್ತಿಬ್ಬರು ಸೇರಿಕೊಳ್ಳುತ್ತಾರೆ.
ಕೊನೆಗೂ ಬೂಟು ಅವಳಿಗೆ ದೊರೆಯುತ್ತದೆ.

ಇಲ್ಲಿ ನಿರ್ದೇಶಕನಿಗೆ ತೋರಿಸಬೇಕಾದದ್ದು ಆ ಹುಡುಗಿಯ ತೊಂದರೆಗಳನ್ನಲ್ಲ.
ಸಾದಾ ಮನುಷ್ಯರ ಮನದಲ್ಲಿ ಮೂಲಭೂತವಾಗಿ ಇರುವ ಅನುಕಂಪವನ್ನು ತೋರಿಸಲು ಮಜೀದಿ ಪ್ರಯತ್ನಿಸುತ್ತಿದ್ದಾರೆ.
ಆದುದರಿಂದ ಈ ಒಂದು ಬೂಟನ್ನು ಎತ್ತಿಕೊಡಲು ಅದೆಷ್ಟು ಸಾಮಾನ್ಯ ಜನ ಪ್ರಯತ್ನಿಸುತ್ತಾರೆ ಎನ್ನುವದನ್ನು ಮಜೀದಿ ತೋರಿಸಿದ್ದಾರೆ.
ಆ ಚಿತ್ರದ ಹೃದಯಸ್ಪರ್ಶಿ ದೃಶ್ಯಗಳಲ್ಲಿ ಇದೂ ಒಂದು ಎಂದು ಹೇಳಬಹುದು.

ಮಜೀದಿಯವರ ಮತ್ತೊಂದು ಚಿತ್ರ ‘ರಂಗ-ಏ-ಖೊದಾ’ (Color of Paradise)ದಲ್ಲಿ ೧೦-೧೨ ವರ್ಷದ ಕುರುಡ ಹುಡುಗನ ಸುತ್ತ ಕತೆ ಹೆಣೆಯಲಾಗಿದೆ.
ಈ ಕುರುಡ ಹುಡುಗ ಬೇಸಿಗೆಯ ರಜೆಗಾಗಿ ಶಾಲೆ ಬಿಟ್ಟ ಮೇಲೆ, ಕರೆದುಕೊಂಡು ಹೋಗಲು ಬರುವ ತಂದೆಗಾಗಿ ಕಾಯುತ್ತ ರಸ್ತೆಯ ಬೆಂಚಿನ ಮೇಲೆ ಕೂತಿದ್ದಾನೆ.
ರಸ್ತೆಯ ಮತ್ತೊಂದು ಭಾಗದಲ್ಲಿ ಅವನ ಎದುರಿಗೆ ಗಿಡ ಮರಗಳಿದ್ದು ಅಲ್ಲಿ ಹಕ್ಕಿಯೊಂದು ಗೂಡು ಕಟ್ಟಿದೆ. ಕಾಡು ಬೆಕ್ಕೊಂದು ಆ ಹಕ್ಕಿಯ ಮರಿಗಳನ್ನು ತಿನ್ನಲು ಬಂದದ್ದನ್ನು ಈ ಕುರುಡ ಹುಡುಗ ಧ್ವನಿಗಳ ಮೇಲೆ ಅರ್ಥ ಮಾಡಿಕೊಳ್ಳುತ್ತಾನೆ.
ತಕ್ಷಣವೇ ಅಲ್ಲಿ ಅಂದಾಜಿನ ಮೇಲೆ ಹೋಗಿ, ಅಂದಾಜಿನ ಮೇಲೆ ಆ ಮರವನ್ನು ಹತ್ತಿ, ಆ ಹಕ್ಕಿ ಮರಿಯನ್ನು ಉಳಿಸುವದರಲ್ಲಿ ಯಶಸ್ವಿಯಾಗುತ್ತಾನೆ.
ಅವನ ಕಣ್ಣು ಕುರುಡಾಗಿರಬಹುದು, ಆತನ ಮನಸ್ಸಲ್ಲ.

ಇವರ ಹಳ್ಳಿಯಲ್ಲಿ ಈ ಹುಡುಗನ ಅಜ್ಜಿಯೊಬ್ಬಳಿದ್ದಾಳೆ.
ಅವಳು absolutely orthodox.
ಅವಳು ಒಮ್ಮೆ ಮನೆಯ ಎದುರಿನ ತೊರೆಯನ್ನು ದಾಟುವಾಗ, ಅಲ್ಲಿ ಕೆಸರಲ್ಲಿ ಸಿಲುಕಿ ಒದ್ದಾಡುತ್ತಿರುವ ಮೀನನ್ನು ಎತ್ತಿ ಮತ್ತೆ ನೀರಿನಲ್ಲಿ ಬಿಡುವ ದೃಶ್ಯವನ್ನು ತೋರಿಸಲಾಗಿದೆ.

ಕತೆಗೆ ಈ ಎರಡೂ ದೃಶ್ಯಗಳ ಅವಶ್ಯಕತೆ ಏನು ಎಂದು ವಿಚಾರಿಸುವದು ಇಲ್ಲಿ ಅವಶ್ಯಕವಾಗಿದೆ.
ಕುರುಡ ಹುಡುಗನ ತಾಯಿ ತೀರಿಕೊಂಡಿದ್ದಾಳೆ.
ಅವನ ತಂದೆಗೆ ಎರಡನೆಯ ಮದುವೆಯಾಗಬೇಕಾಗಿದೆ.
ಎರಡನೆಯ ಸಂಬಂಧದ ಬೀಗರಿಗೆ ತನ್ನ ಕುರುಡು ಮಗನ ಬಗೆಗೆ ತಿಳಿಯುವದು ಆತನಿಗೆ ಬೇಕಾಗಿಲ್ಲ.
ಈ ವಿಷಯಕ್ಕೆ ಆತನಲ್ಲಿ ಮಾನವ ಸಹಜ ಸ್ವಾರ್ಥ ಅಡಗಿದೆ.
ತನ್ನ ಕುರುಡ ಮಗ ನೀರಲ್ಲಿ ಕೊಚ್ಚಿ ಹೋಗುವಾಗ ಸಹ, ಆತನನ್ನು ರಕ್ಷಿಸಲು ಒಂದು ಅರೆಕ್ಷಣದಷ್ಟು ವಿಳಂಬವನ್ನು ಆತ ಮಾಡುತ್ತಾನೆ.

ಇದಕ್ಕೆ contrast ಆಗಿ, ಕುರುಡ ಹುಡುಗನ ಹಾಗು ಅವನ ಅಜ್ಜಿಯ (ಅಂದರೆ ತಾಯಿಯ ತಾಯಿಯ) ಮಾನವೀಯ ಗುಣಗಳನ್ನು highlight ಮಾಡುವದು ಚಿತ್ರದ ನಿರ್ದೇಶಕನ ಆಶಯವಾಗಿದೆ.
ತನ್ಮೂಲಕ ಕರುಣೆಯ ಸಂದೇಶವನ್ನು ಆತ ಪ್ರೇಕ್ಷಕರಿಗೆ ತಲುಪಿಸಬಯಸುತ್ತಾನೆ.

ಸಂಕಟ, ತೊಂದರೆ ಇವು ಜಗತ್ತಿನ ಎಲ್ಲೆಡೆಯೂ ಇವೆ. ಆದರೆ ಬದುಕನ್ನು ಸುಂದರವಾಗಿ ಮಾಡಲು ಬೇಕಾದದ್ದು ಮಾನವೀಯ ಅನುಕಂಪ ಎನ್ನುವ ಸಂದೇಶವನ್ನು ಮಜೀದ ಮಜೀದಿ ನಮಗೆ ಹೇಳಬಯಸುತ್ತಾರೆ.
……………………………………………………………………….....
[ಟಿಪ್ಪಣಿ: ಮಜೀದ ಮಜೀದಿಯವರ ಚಿತ್ರಗಳ ಪ್ರತಿಗಳನ್ನು ಕೊಟ್ಟಿದ್ದಕ್ಕಾಗಿ ನಾನು
ಶ್ರೀ ಅಮರ ಅವರಿಗೆ ಋಣಿಯಾಗಿದ್ದೇನೆ.
-ಸುನಾಥ]

Wednesday, February 11, 2009

ನಿರ್ದೇಶಕನ ಪ್ರತಿಭೆ

ಕತೆ, ಕಾದಂಬರಿಗಳಲ್ಲಿ ಒಂದು ಸನ್ನಿವೇಶವನ್ನು ಸೃಷ್ಟಿಸುವದು ಸುಲಭ.
ಲೇಖಕರು ಆ ಸನ್ನಿವೇಶವನ್ನು ಪುಟಗಟ್ಟಲೆ ವರ್ಣನೆ ಮಾಡಬಹುದು ಹಾಗು ಪಾತ್ರಗಳ ಅಭಿವ್ಯಕ್ತಿಯನ್ನು ವಿಸ್ತಾರವಾಗಿ ಬರೆಯಬಹುದು.
ಉದಾಹರಣೆಗೆ ಒಂದು ರೋದನ ಸನ್ನಿವೇಶದ ವರ್ಣನೆಯನ್ನು ಹತ್ತು ಪುಟದಷ್ಟು ವಿಸ್ತಾರವಾಗಿ ಬರೆಯಬಹುದು.
ಇಂತಹ ಒಂದು ಅನುಕೂಲತೆ ಚಲನಚಿತ್ರದ ನಿರ್ದೇಶಕನಿಗೆ ಇರುವದಿಲ್ಲ.
ಆತನೇನಾದರೂ ಹತ್ತು ನಿಮಿಷದವರೆಗೆ ರೋದನ ಸನ್ನಿವೇಶನವನ್ನು ತೋರಿಸಿದರೆ, ಪ್ರೇಕ್ಷಕರು ಥಿಯೇಟರ್ ಖಾಲಿ ಮಾಡುತ್ತಾರೆ ; ನಿರ್ಮಾಪಕ ರೋದನ ಪ್ರಾರಂಭಿಸುತ್ತಾನೆ.

ನಿರ್ದೆಶಕನ ಪ್ರತಿಭೆ ವ್ಯಕ್ತವಾಗುವದು ಇಂತಹ ಸನ್ನಿವೇಶಗಳಲ್ಲಿಯೇ.
ಮೂಕಿ ಚಿತ್ರಗಳ ಕಾಲದಿಂದಲೇ ಪ್ರತಿಭಾವಂತ ನಿರ್ದೇಶಕರು ತಮ್ಮ ಜಾಣ್ಮೆಯನ್ನು ಇಂತಹ ಸನ್ನಿವೇಶಗಳ ಸೃಷ್ಟಿಯಲ್ಲಿ ತೋರಿಸುತ್ತಿದ್ದಾರೆ.
Hollywoodದಲ್ಲಿ ಮೂಕಿ ಚಿತ್ರಗಳನ್ನು ನಿರ್ಮಿಸಿದ ಚಾರ್ಲಿ ಚಾಪ್ಲಿನ್ ಇಂತಹ ಪ್ರತಿಭಾವಂತರಲ್ಲೊಬ್ಬ.
ಆತ ನಿರ್ಮಿಸಿದ ‘The Kid’ ಎನ್ನುವ ಮೂಕಿ ಚಲನಚಿತ್ರ ಸಾರ್ವಕಾಲಿಕ ಸರ್ವಶ್ರೇಷ್ಠ ಚಿತ್ರಗಳಲ್ಲೊಂದು.
ಈ ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಹೊಟ್ಟೆ ಹೊರೆದುಕೊಳ್ಳಲು ಒದ್ದಾಡುತ್ತಿರುವ, ಕಿಮ್ಮತ್ತಿಲ್ಲದ, ಒಬ್ಬ ಪುಕ್ಕಲು ಮನುಷ್ಯ.
ಈತ ಒಂದು ದಿನ ರಸ್ತೆ ಬದಿಯ ಕಸದ ಕುಂಡೆಯಲ್ಲಿ ಪರಿತ್ಯಕ್ತ ಪುಟ್ಟ ಕೂಸೊಂದನ್ನು ನೋಡುತ್ತಾನೆ.
ಅದನ್ನು ತನ್ನ ಮುರುಕಲು ಮನೆಗೆ ಕರೆತಂದು ತಾನೇ ಪಾಲನೆ ಮಾಡುತ್ತಾನೆ.
ಅದು ದೊಡ್ಡದಾದಂತೆ, ಜನರ ಮನೆಗಳ ಖಿಡಕಿಗಳಿಗೆ ಕಲ್ಲು ಎಸೆದು ಕಾಜು ಒಡೆಯಲು ಕಲಿಸಿಕೊಡುತ್ತಾನೆ.
ಅದು ಕಾಜು ಒಡೆದು ಓಡಿ ಹೋದ ಬಳಿಕ, ಈತ ತನ್ನ ಉಪಕರಣಗಳೊಂದಿಗೆ, ಆ ರಸ್ತೆಯಲ್ಲಿ ಖಿಡಕಿ ಕಾಜು ದುರಸ್ತಿಗಾರನಾಗಿ ಬರುತ್ತಾನೆ.
ಈ ರೀತಿಯಾಗಿ ಇವರಿಬ್ಬರೂ ಹೊಟ್ಟೆ ತುಂಬಿಸಿಕೊಳ್ಳುತ್ತಿರುವಾಗ, ಅಮೇರಿಕಾದಲ್ಲಿದ್ದ ಕಾನೂನುಗಳ ಮೇರೆಗೆ, ಪೋಲೀಸರು ಆ ಅನಾಥ ಪೋರನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಹೋಗುತ್ತಾರೆ.

ಈಗ ನಿರ್ಮಿಸಬೇಕಾದ ಭಾವಪೂರ್ಣ ಸನ್ನಿವೇಶವನ್ನು ಗಮನಿಸಿರಿ:
Authority ವಿರುದ್ಧ ಚಾರ್ಲಿ ಚಾಪ್ಲಿನ್ ಅಸಹಾಯಕ.
ಆತನಿಗೆ ತಾನು ಸಾಕಿದ ಪೋರನ ಮೇಲೆ ಮಮತೆ.
ಆದರೆ ಈ ಕಿಮ್ಮತ್ತಿಲ್ಲದ ದರಿದ್ರ ವ್ಯಕ್ತಿಯ ಅಳಲು ಅರಣ್ಯರೋದನವೇ ಸೈ.
ತನ್ನ ಪೋರನನ್ನು ತಾನು ತಿರುಗಿ ಪಡೆದೇನೆ ಎನ್ನುವ ಹತಾಶೆಯ ಜೊತೆಗೆ, ಪಡೆಯುವ ತೀವ್ರ ಬಯಕೆ.
ಮೂಕಿ ಚಿತ್ರಗಳ ಆ ಕಾಲದಲ್ಲಿ, ಮಾತುಗಳ ಸಹಾಯವಿಲ್ಲದೆ, ಹಿನ್ನೆಲೆ ಸಂಗೀತದ ಸಹಾಯವಿಲ್ಲದೆ ಇಂತಹ ಸನ್ನಿವೇಶವನ್ನು ಸೃಷ್ಟಿಸುವದು ಹೇಗೆ?

ದಿನವೆಲ್ಲಾ ತಿರುಗಿ ದಣಿದ ಚಾಪ್ಲಿನ್ ರಾತ್ರಿ ವೇಳೆ ಒಂದು ಮನೆಯ ಮುಚ್ಚಿದ ಬಾಗಿಲಿನ ಮೆಟ್ಟಲುಗಳ ಮೇಲೆ ಕುಸಿದು ಕೂಡುತ್ತಾನೆ, ಹಾಗೆಯೇ ಜೊಂಪಿನಲ್ಲಿ ಇಳಿಯುತ್ತಾನೆ.
ಆಗ ಕನಸೊಂದನ್ನು ಕಾಣುತ್ತಾನೆ.
ಕನಸಿನಲ್ಲಿ ಆತನಿಗೆ ರೆಕ್ಕೆಗಳಿವೆ. ರೆಕ್ಕೆಗಳ ಸಹಾಯದಿಂದ ಆತ ತನ್ನ ಪೋರನನ್ನು ಎತ್ತಿಕೊಂಡು ಹಾರಾಡುತ್ತಾನೆ; ಪೋಲೀಸ ಅಧಿಕಾರಿಯನ್ನು ಅನಾಯಾಸವಾಗಿ evade ಮಾಡುತ್ತಾನೆ.
ತನ್ನ ಪೋರನನ್ನು ತಾನು ಮರಳಿ ಕಸಿದುಕೊಳ್ಳುವದರಲ್ಲಿ ಯಶಸ್ವಿಯಾಗುತ್ತಾನೆ.
ಅಷ್ಟರಲ್ಲಿ ಬೆಳಗಾಗುತ್ತದೆ.
ಈತ ಕುಸಿದು ಕುಳಿತ ಮನೆಯ ಬಾಗಿಲು ತೆರೆಯುತ್ತದೆ.
ಮನೆಯಾತ ಈತನನ್ನು ಗದರಿಸಿ ದಬ್ಬುತ್ತಾನೆ.

'The Kid' ಚಿತ್ರವನ್ನು ಅಭಿಜಾತ ಚಲನಚಿತ್ರವನ್ನಾಗಿ ಮಾಡಿದ ಶ್ರೇಯಸ್ಸು ಈ fantasy sceneಗೆ ಸಲ್ಲಬೇಕು.
ಈ ಚಲನಚಿತ್ರದ ಯಾವ ದೃಶ್ಯದಲ್ಲೂ ವಾಸ್ತವತೆಯ ಹೂಬಾಹೂಬ ನಕಲು ಇಲ್ಲ.
ತನ್ನ ಪೋರನನ್ನು ಕಾಡುತ್ತಿದ್ದ ಕಿಡಿಗೇಡಿ ಹುಡುಗರ ಜೊತೆಗೆ ಹೋರಾಡಬೇಕಾದಂತಹ ಅನಿವಾರ್ಯ ಸನ್ನಿವೇಶದಲ್ಲಿಯೂ, ಅವಾಸ್ತವತೆಯೇ ಚಿತ್ರದ moving ಅಂಶವಾಗಿದೆ.
ಮುಖ್ಯವಾಗಿ ಚಾಪ್ಲಿನ್ fantasyಯ ಮಾಸ್ಟರ್.
ತಮ್ಮ ಅನೇಕ ಮೂಕಿ ಚಲನಚಿತ್ರಗಳಲ್ಲಿ ಅವರು fantasyಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಭಾರತೀಯ ಚಿತ್ರಗಳಲ್ಲಿ ಸಂಕೇತವನ್ನು ಬಳಸಿದವರಲ್ಲಿ ಬಹುಶ: ಸತ್ಯಜಿತ ರಾಯರೇ ಮೊದಲಿಗರು.
‘ಪಥೇರ ಪಾಂಚಾಲಿ’ ಚಿತ್ರದ ಮುಂದಿನ ಭಾಗವಾದ ‘ಅಪರಾಜಿತೊ’ ಚಿತ್ರದಲ್ಲಿ ನಾಯಕಿಯ ಪತಿ ಹೃದಯಾಘಾತದಿಂದ ತೀರಿಕೊಳ್ಳುತ್ತಾನೆ.
ಆಕಾಶದಲ್ಲಿ ಹಕ್ಕಿಗಳು ಹಾರುವ ಮೂಲಕ ಆತ ನಿಧನ ಹೊಂದಿದ್ದನ್ನು ತೋರಿಸಲಾಗಿದೆ.
ಆ ಬಳಿಕ ಇದೊಂದು ಹಳಸಲು common scene ಆಗಿ ಹೋಯಿತು.
ಆದರೆ ಇದರ ಪ್ರಥಮ ಶ್ರೇಯಸ್ಸು ಸತ್ಯಜಿತ ರಾಯರಿಗೆ ಸಲ್ಲಬೇಕು.

ಸತ್ಯಜಿತ ರಾಯರ ಸಹಾಯಕರಾದ ಎನ್. ಲಕ್ಷ್ಮೀನಾರಾಯಣ ಇವರು ಕನ್ನಡದಲ್ಲಿ ‘ನಾಂದಿ’ ಎನ್ನುವ ಚಿತ್ರವನ್ನು ನಿರ್ದೇಶಿಸಿದರು.
ಆ ಅವಧಿಯಲ್ಲಿ ತುಂಬಾ ಪ್ರಸಿದ್ಧಿ ಪಡೆದ ಚಿತ್ರವಿದು.
ರಾಜಕುಮಾರರು ಈ ಚಿತ್ರದ ನಾಯಕ.
ಇವರ ಮೊದಲ ಹೆಂಡತಿಯಾಗಿ ಕಲ್ಪನಾ ಅಭಿನಯಿಸಿದ್ದಾರೆ.
ಕಲ್ಪನಾ ದುರ್ಮರಣಕ್ಕೀಡಾಗುತ್ತಾರೆ ಹಾಗು ಕೆಲಕಾಲದ ನಂತರ ರಾಜಕುಮಾರ ಎರಡನೆಯ ಮದುವೆಯಾಗುತ್ತಾರೆ.
ಹರಿಣಿ ಇವರ ಎರಡನೆಯ ಹೆಂಡತಿ.
ಇವಳು ಕಿವುಡಿ ಹಾಗೂ ಮೂಕಿ.
ಈ ಮಾತನ್ನು ಪ್ರೇಕ್ಷಕರಿಗೆ ತಿಳಿಸುವದು ಹೇಗೆ?

ಈಗ ಲಕ್ಷ್ಮೀನಾರಾಯಣರ ಜಾಣ್ಮೆಯನ್ನು ನೋಡಿರಿ:
ಮದುವೆಯ ದೃಶ್ಯಗಳನ್ನು ತೋರಿಸದೆ, ಹರಿಣಿ ಹೆಂಡತಿಯಾಗಿ ರಾಜಕುಮಾರರ ಮನೆಗೆ ಬಂದಲ್ಲಿಂದ ದೃಶ್ಯ ಪ್ರಾರಂಭವಾಗುತ್ತದೆ.
ರಾಜಕುಮಾರರು ಮನೆಯ ಒಂದು ಕೋಣೆಯಲ್ಲಿ ನಿಂತಿದ್ದಾರೆ.
ಪಕ್ಕದ ಕೋಣೆಯಲ್ಲಿ ಹರಿಣಿ ನಿಂತಿದ್ದಾರೆ.
ಅಲ್ಲಿಯೆ ಮೂಲೆಯಲ್ಲಿ ಮೊದಲ ಹೆಂಡತಿ ಕಲ್ಪನಾ ಬಳಸುತ್ತಿದ್ದ ತಂಬೂರಿ ಇದೆ.
ಹರಿಣಿ ತಂಬೂರಿಯ ತಂತಿಗಳ ಮೇಲೆ ಬೆರಳು ಎಳೆಯುತ್ತಾರೆ.
ಅವಳಿಗೆ ಏನೂ ಕೇಳಿಸುವದಿಲ್ಲ , ಆದರೆ ಪಕ್ಕದ ಕೋಣೆಯಲ್ಲಿದ್ದ ರಾಜಕುಮಾರರಿಗೆ ತಂಬೂರಿಯ ನಾದ ಕೇಳಿಸುತ್ತದೆ.

ಇಲ್ಲಿಯವರೆಗೂ ನೇರ ನಿರ್ದೇಶನದ ಚಲನಚಿತ್ರಗಳನ್ನು ನೋಡಿದ ಕನ್ನಡ ಪ್ರೇಕ್ಷಕರಿಗೆ ಈ indirect suggestion ತಂತ್ರದ ದೃಶ್ಯದಿಂದ ರೋಮಾಂಚನವಾಯಿತು.
ಉತ್ತಮ ನಿರ್ದೇಶನದ ಕನ್ನಡ ಚಿತ್ರಗಳಿಗೆ ನಾಂದಿ pioneer ಆಯಿತು.
ಈ ಚಿತ್ರದಿಂದ ಲಕ್ಷ್ಮೀನಾರಾಯಣ ಕನ್ನಡಿಗರ ಮನೆಮಾತಾದರು.

ಇದೇ ಸಮಯದಲ್ಲಿ ಪುಟ್ಟಣ್ಣ ಕಣಗಾಲ ಸಹ ಚಿತ್ರರಂಗ ಪ್ರವೇಶ ಮಾಡಿದರು.
‘ಗೆಜ್ಜೆಪೂಜೆ’ ಚಿತ್ರದಲ್ಲಿ ಪುಟ್ಟಣ್ಣನವರು ಒಂದು reverse technique ಬಳಸಿದ್ದಾರೆ.
ಗೆಜ್ಜೆಪೂಜೆ ಸಮಾರಂಭಕ್ಕೆ ನಾಯಕಿ ಕಲ್ಪನಾ ಮನಸ್ಸಿಲ್ಲದೇ ಒಪ್ಪಿಕೊಂಡಿದ್ದಾರೆ.
ಪೂಜೆಯ ಅಂಗವಾಗಿ ಅವರು ಗುಡಿಯೊಂದರಲ್ಲಿ ನರ್ತಿಸುತ್ತಿದ್ದಾರೆ.
ಪುರಂದರದಾಸರ “ಭಾಗ್ಯದಾ ಲಕ್ಷ್ಮೀ ಬಾರಮ್ಮಾ…” ಹಾಡನ್ನು ಹೆಂಗಸರು ಸಾಂಪ್ರದಾಯಕ ಶೈಲಿಯಲ್ಲಿ ಹಾಡುತ್ತಿದ್ದಾರೆ.
ಈ ದೃಶ್ಯಕ್ಕೆ ಪುಟ್ಟಣ್ಣನವರು ಯಾವುದೇ ಹಿನ್ನೆಲೆ ಸಂಗೀತ ಒದಗಿಸಿಲ್ಲ.
ಮತ್ತು ಆ ಕಾರಣಕ್ಕಾಗಿಯೇ ಈ ದೃಶ್ಯವು ತುಂಬಾ explosive ಆಯಿತು.
ಈ ದೃಶ್ಯವನ್ನು ನೋಡುತ್ತಿದ್ದಾಗ ಥಿಯೇಟರ್ ತುಂಬೆಲ್ಲ ಪ್ರೇಕ್ಷಕರು ಅಳುವದನ್ನು ನಾನು ಕೇಳಿದ್ದೇನೆ.

ಪುಟ್ಟಣ್ಣನವರು ನಿರ್ದೇಶಿಸಿದ ‘ಕಪ್ಪು ಬಿಳುಪು’ ಚಿತ್ರದಲ್ಲಿ ಕಲ್ಪನಾಗೆ double role.
ಒಬ್ಬಳು ಸಾತ್ವಿಕ ಹಳ್ಳಿಯ ಹುಡುಗಿ; ಇನ್ನೊಬ್ಬಳು ಪಟ್ಟಣದಲ್ಲಿದ್ದ ಅವಳ ಬಿನ್ದಾಸ್ ಸೋದರಿ.
ಒಳ್ಳೆ ಹುಡುಗಿ ಕಲ್ಪನಾಳ ಮುಗ್ಧತೆಯನ್ನು ಹಾಗೂ ಭೀರು ಸ್ವಭಾವವನ್ನು ಪ್ರೇಕ್ಷಕರಿಗೆ ಪರಿಚಯಿಸುವದು ಹೇಗೆ?
ಪುಟ್ಟಣ್ಣನವರ ಜಾಣ್ಮೆಯನ್ನು ಈ ದೃಶ್ಯದಲ್ಲಿ ನೋಡಿರಿ:
ಕಥಾನಾಯಕ ರಾಜೇಶರ ಮನೆಯ ಹಿತ್ತಿಲಿನಲ್ಲಿ, ಸಾತ್ವಿಕ ಹುಡುಗಿ ಕಲ್ಪನಾ ಹೂವು ಕೊಯ್ಯುತ್ತಿರುವಾಗ, ರಾಜೇಶ ಅಲ್ಲಿ ಬರುತ್ತಾರೆ ಹಾಗೂ ಕಲ್ಪನಾಳನ್ನು ಗದರಿಸುತ್ತಾರೆ.
ಕಲ್ಪನಾ ಗಡಗಡ ನಡಗುತ್ತಾಳೆ.
ಅವಳ ಕೈಯಿಂದ ಹೂವು ಜಾರಿ ಕೆಳಗೆ ಬೀಳುತ್ತದೆ.
ಗಾಬರಿಯಲ್ಲಿ ಅವಳು ಹೂವನ್ನು ಮರಳಿ ಬಳ್ಳಿಗೆ ಹಚ್ಚಲು ಪ್ರಯತ್ನಿಸುತ್ತಾಳೆ.
ಇಂತಹ ಒಂದೇ ದೃಶ್ಯದಿಂದ ನಿರ್ದೇಶಕರು ಕಲ್ಪನಾಳ ಮುಗ್ಧ ಹಾಗೂ ಭೀರು ಸ್ವಭಾವವನ್ನು ಪ್ರೇಕ್ಷಕರಿಗೆ ತೆರೆದಿಟ್ಟು ತೋರಿಸಿದರು.

‘ಸಂಸ್ಕಾರ’ ಚಿತ್ರವು ಕನ್ನಡದ ಪ್ರಥಮ ನವ್ಯ ಚಿತ್ರ.
ಅನಂತಮೂರ್ತಿಯವರು ತಮ್ಮ ಕಾದಂಬರಿಯಲ್ಲಿ ಸಂಸ್ಕಾರ vs ಮೂಲ ಪ್ರಕೃತಿ ಅಂದರೆ cultivated values versus basic instincts ಬಗೆಗೆ ಚರ್ಚೆ ಮಾಡಿದ್ದಾರೆ.
ಪ್ರಾಣೇಶಾಚಾರ್ಯರು ವೈದಿಕ ಸಂಸ್ಕಾರಗಳ ಪ್ರತಿನಿಧಿ.
ನಾರಣಪ್ಪನು ಸ್ವಚ್ಛಂದ ಪ್ರವೃತ್ತಿಯ ಪ್ರತಿನಿಧಿ.
ನಾರಣಪ್ಪ ಸತ್ತು ಹೋದಾಗ ಅವನ ಹೆಣದ ಸಂಸ್ಕಾರದ ಪ್ರಶ್ನೆ ಬರುತ್ತದೆ.
ಇದಕ್ಕೆ ಸಮಾಧಾನ ಕಂಡುಕೊಳ್ಳಲು ಪ್ರಾಣೇಶಾಚಾರ್ಯರು ಊರ ಹೊರಗಿನ ಹಣಮಪ್ಪನ ಗುಡಿಯಲ್ಲಿ , ಹಣಮಪ್ಪನ ಎದುರಿಗೆ ಕೂತು ಬಿಡುತ್ತಾರೆ.
ಮಧ್ಯರಾತ್ರಿಯಾದರೂ ಹಣಮಪ್ಪನಿಂದ ಯಾವ ಉತ್ತರವೂ ದೊರಕಿಲ್ಲ.
ಆಗ ಸತ್ತ ನಾರಣಪ್ಪನ ಸೂಳೆ ಚಂದ್ರಿ ಅಲ್ಲಿಗೆ ಬರುತ್ತಾಳೆ.
ದಣಿವಿನಿಂದ ಬಳಲಿದ ಪ್ರಾಣೇಶಾಚಾರ್ಯರು ಇವಳ ತೊಡೆಯ ಮೆಲೆ ಬೀಳುತ್ತಾರೆ.
ಅಲ್ಲಿಂದ ಮುಂದೆ, ಅವರು ಕಾಲು ಜಾರುತ್ತಾರೆ.
ನಿರ್ದೇಶಕರು ಇಲ್ಲಿಗೆ ಸಂಸ್ಕಾರಕ್ಕಿಂತ ಮೂಲಪ್ರಕೃತಿ ಹೆಚ್ಚಿಗೆ ಎಂದು ಹೇಳಿದಂತಾಯಿತು.
ಬರಿ ಹೇಳಿದರೆ ಸಾಕೆ? ಈ ಚರ್ಚಾವಸ್ತುವನ್ನು ದೃಶ್ಯಮಾಧ್ಯಮದಲ್ಲಿ ತೋರಿಸಬೇಡವೆ?
ಪ್ರಾಣೇಶಾಚಾರ್ಯರು ಚಂದ್ರಿಯೊಂದಿಗೆ ಕ್ರೀಡೆಯನ್ನು ಪ್ರಾರಭಿಸಿದಾಗ ದೂರದಲ್ಲಿ, ಹಳ್ಳಿಯಲ್ಲಿ ನಡೆಯುತ್ತಿರುವ ಬಯಲಾಟದ ಪಾತ್ರಧಾರಿಗಳ ಅಬ್ಬರ ಕೇಳಬರುತ್ತದೆ.
ಬಯಲಾಟದ ಅಬ್ಬರ ಇಲ್ಲಿ ಮೂಲಪ್ರಕೃತಿಯ ಪ್ರತಿನಿಧಿಯಾಗುತ್ತದೆ.
ಕಾದಂಬರಿಯಲ್ಲಿ ಇಲ್ಲದೇ ಇದ್ದ ಈ ಬಯಲಾಟದ ಅಬ್ಬರ, ಕಾದಂಬರಿಯ ಆಶಯವನ್ನು perfect ಆಗಿ ಪೂರೈಸುತ್ತದೆ.
ಇದು ನಿರ್ದೇಶಕರ ಪ್ರತಿಭೆ.

‘ವಂಶವೃಕ್ಷ’ ಚಲನಚಿತ್ರದಲ್ಲಿ ಕಾತ್ಯಾಯಿನಿಯ death wish ತೋರಿಸಲು ಕನಸಿನ ದೃಶ್ಯವನ್ನು ಬಳಸಲಾಗಿದೆ.
ಚಲನಚಿತ್ರದಲ್ಲಿ ಹೆಣದ ಮೆರವಣಿಗೆ ದೂರದಿಂದ ಬರುತ್ತಿರುವ ದೃಶ್ಯವನ್ನು ತೋರಿಸಲಾಗುತ್ತಿದೆ.
ಹೆಣದ ಚಟ್ಟ ಪ್ರೇಕ್ಷಕನ ಕಣ್ಣೆದುರಿಗೆ ಬರುತ್ತಿದ್ದಂತೆಯೇ, ಹೆಣವು ಸಟ್ಟನೆ ತನ್ನ ಮುಖವನ್ನು ತನ್ನ ಎಡಕ್ಕೆ ಅಂದರೆ ಪ್ರೇಕ್ಷಕರಿಗೆ ಎದುರಾಗಿ ಹೊರಳಿಸುತ್ತದೆ.
ಅದು ಕಾತ್ಯಾಯನಿಯ ಮುಖ!
ಅವಳ death wish ಈ ರೀತಿಯಾಗಿ ಪ್ರೇಕ್ಷಕನ ಮನಸ್ಸನ್ನು ಮುಟ್ಟುತ್ತದೆ.

ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ’ ಚಿತ್ರದಲ್ಲಿ Cultural alienationದ ಚರ್ಚೆಯಿದೆ.
ಅಮೇರಿಕನ್ ಹುಡುಗಿಯನ್ನು ಮದುವೆ ಮಾಡಿಕೊಂಡು, ಕಥಾನಾಯಕ ತನ್ನ ಹಳ್ಳಿಗೆ ಮರಳುತ್ತಾನೆ.
ಅಲ್ಲಿ ಅವನ ಮೂಕಿ ಅವ್ವ ಮನೆತನವನ್ನು, ಒಕ್ಕಲುತನವನ್ನು ನೋಡಿಕೊಂಡು ಇರುತ್ತಿದ್ದಾಳೆ.
ನಾಯಕ ಹಾಗು ನಾಯಕನ ಹೆಂಡತಿ ಇಲ್ಲಿಯ ಪದ್ಧತಿಗಳನ್ನು ಬದಲಾಯಿಸಲು ಬಯಸುತ್ತಾರೆ.
ತಮ್ಮಲ್ಲಿದ್ದ ಆಕಳುಗಳನ್ನೆಲ್ಲ ನಾಯಕಿಯು ಕಟುಕರಿಗೆ ಮಾರಿ ಬಿಡುತ್ತಾಳೆ.
ನಾಯಕನ ಮನಸ್ಸು ಈಗ ಬದಲಾಗಿದೆ.
ಆತ ಆಕಳುಗಳನ್ನು ಮರಳಿ ಪಡೆಯಲು ಪಟ್ಟಣದ ಕಡೆಗೆ ಓಡುತ್ತಾನೆ.
ಹೋಗುತ್ತಿರುವಾಗಲೇ ಆತ ದನಗಳ ದೊಡ್ಡ ಮಂದೆ ಹೋಗುವದನ್ನು ನೋಡುತ್ತಾನೆ.
ಆದರೆ ಆತನಿಗೆ ತನ್ನ ದನಗಳ ಗುರುತೇ ಹತ್ತುವದಿಲ್ಲ!
ಇಷ್ಟೇ ಆಗಿದ್ದರೆ alienation ಎಂದು ಸುಮ್ಮನಾಗಿ ಬಿಡಬಹುದಿತ್ತು
ಆದರೆ ನಿರ್ದೇಶಕರ ಪ್ರತಿಭೆ ಮುಂದಿನ ನೋಟದಲ್ಲಿ ವ್ಯಕ್ತವಾಗಿದೆ.
ಈತನಿಗೆ ದನಗಳ ಗುರುತು ಹತ್ತದಿದ್ದರೇನಾಯ್ತು, ದನಗಳಿಗೆ ಈತನ ಗುರುತು ಹತ್ತಬಹುದಲ್ಲ; ಆದುದರಿಂದ ದನಗಳ ಹೆಸರನ್ನು ಹಿಡಿದು ಕೂಗಿ ಕರೆಯಿರಿ ಎಂದು ಒಬ್ಬರು ಸೂಚಿಸುತ್ತಾರೆ.
ಆತ “ಗಂಗೇ, ತುಂಗೇ, ಪುಣ್ಯಕೋಟಿ” ಎಂದು ಕೂಗುತ್ತಾನೆ.
ದನಗಳು ಈತನ ದನಿಯನ್ನು ಗುರುತಿಸದೆ ಹೋಗಿ ಬಿಡುತ್ತವೆ.
ಇಲ್ಲಿಗೆ alienation ಪೂರ್ಣವಾದಂತಾಯಿತು.
Neither he recognizes his cattle, nor the cattle recognize him.

ಇವೆಲ್ಲ ದೃಶ್ಯಗಳು cinema specific ದೃಶ್ಯಗಳು.
ಸಿನೆಮಾದ ವೈಯಕ್ತಿಕ ಚೌಕಟ್ಟನ್ನು ಮೀರಿದ ದೃಶ್ಯವೊಂದು ‘ಉಮರಾವ್ ಜಾನ್’ ಹಿಂದಿ ಚಲನಚಿತ್ರದಲ್ಲಿದೆ.
ಮೊಗಲರ ಕಾಲದ ಕತೆ ಇದು.
ಸುಮಾರು ಹನ್ನೆರಡು ಹದಿಮೂರು ವರ್ಷದ ಹಳ್ಳಿಯ ಹುಡುಗಿಯೊಬ್ಬಳು ತನ್ನ ಮನೆಯ ಅಂಗಳದಲ್ಲಿ ಇತರ ಪುಟ್ಟ ಹುಡುಗ ಹುಡುಗಿಯರೊಂದಿಗೆ ಆಡುತ್ತಿದ್ದಾಳೆ.
ಆ ಕುಟುಂಬದೊಡನೆ ದ್ವೇಷವಿರುವ ವ್ಯಕ್ತಿಯೊಬ್ಬ ಎತ್ತಿನ ಬಂಡಿಯಲ್ಲಿ ಅಲ್ಲಿ ಹಾಯ್ದು ಹೋಗುತ್ತಿರುವಾಗ ಇವರನ್ನು ನೋಡುತ್ತಾನೆ.
ದ್ವೇಷ ಸಾಧಿಸಲೆಂದು ಆ ಹುಡುಗಿಯನ್ನು ಪಟ್ಟನೆ ತನ್ನ ಬಂಡಿಯಲ್ಲಿ ಎತ್ತಿ ಹಾಕಿಕೊಂಡು ಹೋಗಿ ಬಿಡುತ್ತಾನೆ.
ಲಖನೌ ಮುಟ್ಟಿದ ಬಳಿಕ ಅವಳನ್ನು ವೇಷ್ಯಾಗೃಹವೊಂದಕ್ಕೆ ಮಾರುತ್ತಾನೆ.
ಆ ಹುಡುಗಿಯೇ ಮುಂದೆ ಹೆಸರುವಾಸಿ ವೇಷ್ಯೆ ಉಮರಾವ್ ಜಾನ್ ಆಗುತ್ತಾಳೆ.
ಹುಡುಗಿಯ ಅಪಹರಣದ ದೃಶ್ಯದ ನಂತರ ಅವಳನ್ನು ಮಾರುವ ದೃಶ್ಯವನ್ನು ತೋರಿಸಿದ್ದರೆ ಕತೆಯಲ್ಲಿ ಏನೂ ವ್ಯತ್ಯಾಸವಾಗುತ್ತಿರಲಿಲ್ಲ.
ಆದರೆ ಈ ಚಿತ್ರದ ನಿರ್ದೇಶಕರು ಚಿತ್ರದ ಆಶಯವನ್ನು ಮೀರಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

ನಿರ್ಜನ ರಸ್ತೆಯಲ್ಲಿ ಬಂಡಿ ಸಾಗುತ್ತಿದೆ.
ಈಗಾಗಲೇ ಕತ್ತಲೆ ಕವಿದಿದೆ.
ಮಾರ್ಗಮಧ್ಯದಲ್ಲಿ ಬಂಡಿಯ ಹಿಂಭಾಗದಲ್ಲಿ ಆ ಹುಡುಗಿಯ ಮುಖವನ್ನು ಬಂಡಿಯ ಹೊರಗೆ ತೋರಿಸಲಾಗಿದೆ.
ಆ ಹುಡುಗಿಯ ಮುಖದ ಮೇಲೆ ಅಸಹಾಯಕತೆ ಹಾಗೂ resignation ಕೆತ್ತಿದಂತಿವೆ.
ಆ ದೃಶ್ಯವನ್ನು ನೋಡುತ್ತಿರುವ ಪ್ರೇಕ್ಷಕರಿಗೆ ಇದು ಕೇವಲ ಒಬ್ಬ ಉಮರಾವ್ ಜಾನ್ ಕತೆಯಾಗಿ ಉಳಿಯುವದಿಲ್ಲ.
ಭಾರತದಲ್ಲಿ ಪ್ರತಿ ದಿನವೂ ನೂರಾರು ಉಮರಾವ್ ಜಾನ್‌ಗಳು ಅಸಹಾಯಕರಾಗಿ ತಮ್ಮನ್ನು ಕ್ರೌರ್ಯಕ್ಕೆ ಒಪ್ಪಿಸಿಕೊಳ್ಳುತ್ತಿದ್ದಾರೆ.
ಇದನ್ನು ಹೇಳುವ ಮೂಲಕ ನಿರ್ದೇಶಕರು ಪ್ರೇಕ್ಷಕನ ಮನದ ತಂತಿಯೊಂದನ್ನು ಮಿಡಿಯುತ್ತಾರೆ.

ಉಮರಾವ್ ಜಾನ್ ಒಂದು specific ಕತೆಯುಳ್ಳ ಸಿನೆಮಾ.
ಆದರೆ social theme ಇರುವ ಕೆಲವು ಕತೆಗಳಿವೆ.
ಶ್ಯಾಮ ಬೆನಗಲ್ಲರ ಅಂಕುರ, ನಿಶಾಂತ ಮೊದಲಾದವುಗಳು ಇಂತಹ ಕತೆಗಳು.
ಬೆನಗಲ್ಲರಲ್ಲಿ ಕೆಮರಾಮನ್ ಆಗಿ ಕೆಲಸ ಮಾಡಿದ ಗೋವಿಂದ ನಿಹಲಾನಿ ಸ್ವತಃ ಒಂದು ಚಿತ್ರವನ್ನು ನಿರ್ದೇಶಿಸಿದರು.
ಅವರು ನಿರ್ದೇಶಿಸಿದ ಚಲನಚಿತ್ರ ‘ಆಕ್ರೋಶ’ದಲ್ಲಿ ಓಮ್ ಪುರಿ ಓರ್ವ ಅತಿ ಹಿಂದುಳಿದ communityಯ ಕೂಲಿ ಕೆಲಸಗಾರ.
ಊರಿನ ಪ್ರಮುಖ ವ್ಯಕ್ತಿಗಳಾದ ಜಮೀನುದಾರ, ನ್ಯಾಯಾಧೀಶ, ಪೋಲೀಸ ಅಧಿಕಾರಿ ಮೊದಲಾದವರೆಲ್ಲ ಆತನ ಹೆಂಡತಿಯ(ಸ್ಮಿತಾ ಪಾಟೀಲಳ) ಮೇಲೆ ಒಂದು ರಾತ್ರಿ ಅತ್ಯಾಚಾರ ಮಾಡುತ್ತಾರೆ.
(ಗಮನಿಸಿ: ಅತ್ಯಾಚಾರದ ದೃಶ್ಯವನ್ನು ತೋರಿಸಿಲ್ಲ!)
ಸಾಮೂಹಿಕ ಅತ್ಯಾಚಾರದಿಂದಾಗಿ ಅಕೆ ಸತ್ತು ಹೋಗುತ್ತಾಳೆ.
ಅವಳ ಹೆಣವನ್ನು ಬಾವಿಯಲ್ಲಿ ಒಗೆದು ಅವಳ ಗಂಡನ ಮೆಲೆ ಕೊಲೆಯ ಕೇಸನ್ನು ಹಾಕುತ್ತಾರೆ.
ಸಿನೆಮಾದ titles ಪ್ರಾರಂಭವಾಗುವದೇ ನ್ಯಾಯಾಲಯದ ದೃಶ್ಯದಿಂದ.
ಕೊಲೆಯಾದ ಸ್ಮಿತಾ ಪಾಟೀಲ ಹಾಗೂ ಓಮ್ ಪುರಿಯ ಶಿಶುವನ್ನು ಅವನ ತಂಗಿ ನ್ಯಾಯಾಲಯದಲ್ಲಿ ಎತ್ತಿಕೊಂಡು ಕೂತಿರುತ್ತಾಳೆ.
ನ್ಯಾಯಾಲಯದ scenes ಮುಗಿಯುತ್ತ ಬಂದಂತೆ, ಆ ಕೂಸು ಸಣ್ಣದಾಗಿ ಅಳಲು ಪ್ರಾರಂಭಿಸುತ್ತದೆ. ನ್ಯಾಯದಾನ ನೀಡುತ್ತಿದ್ದಂತೆಯೇ, ಆ ಕೂಸಿನ ಅಳು ಜೋರಾಗುತ್ತ, ಇಡೀ ನ್ಯಾಯಾಲಯವನ್ನು ತುಂಬಿಕೊಂಡು ಬಿಡುತ್ತದೆ.
ಭಾರತದ ಕನಿಷ್ಠ ಪ್ರಜೆಗಳು ಅಸಹಾಯಕ ಶಿಶುವಿನಂತೆ ಹೇಗೆ ನ್ಯಾಯವಂಚಿತರಾಗಿದ್ದಾರೆ, ಹೇಗೆ ಅವರು ಆಕ್ರೋಶಿಸುತ್ತಿದ್ದಾರೆ ಎನ್ನುವ ತಮ್ಮ ಕಥಾ-ಆಶಯವನ್ನು ಗೋವಿಂದ ನಿಹಲಾನಿ ಸಿನೆಮಾದ ಮೊದಲಲ್ಲೇ ತೋರಿಸಿಬಿಡುತ್ತಾರೆ.

ಬಹುಶ: ಈ ದೃಶ್ಯಕ್ಕೆ ಸ್ವಲ್ಪ ಮಟ್ಟಿನ ಪ್ರೇರಣೆ Alfred Hitchcock ಅವರ ಚಿತ್ರವೊಂದರಿಂದ ದೊರೆತಿರಬಹುದು.
ಆ ಚಿತ್ರದಲ್ಲಿ ಬರುವ ಯುವಕನೊಬ್ಬ rash ಆಸಾಮಿ, ತಲೆತಿರುಕ ಎನ್ನಬಹುದು.
ಆತನ ಮೇಲೆ ಕೊಲೆಯ ಆರೋಪವಿದೆ.
Scotland Yardನ ಅಧಿಕಾರಿಗಳು ಎಲ್ಲ ಸಾಕ್ಷ್ಯಗಳನ್ನು ಹುಡುಕಿ, ಪರಿಶೀಲಿಸಿ ಆತನ ಮೇಲೆ ಖಟ್ಲೆ ಹಾಕಿದ್ದಾರೆ.
ನ್ಯಾಯಾಲಯದಲ್ಲಿ ಖಟ್ಲೆ ನಡೆಯುತ್ತಿರುವಾಗ, ಮನೆಯಲ್ಲಿ ಊಟ ಮಾಡುತ್ತ ಕುಳಿತಿದ್ದ Yardನ ಅಧಿಕಾರಿಗೆ ತಟ್ಟನೆ ಈ ವ್ಯಕ್ತಿ ನಿರಪರಾಧಿ ಎಂದು ಹೊಳೆಯುತ್ತದೆ.
ತಾವು ಮಾಡಿದ ತಪ್ಪು ಆತನಿಗೆ ಗೊತ್ತಾಗುತ್ತದೆ.
ಆತ ನ್ಯಾಯಾಲಯಕ್ಕೆ ಧಾವಿಸುತ್ತಾನೆ.
ನ್ಯಾಯಾಲಯವನ್ನು ಆತ ತಲುಪಿದಾಗ, ಮುಚ್ಚಿದ ಕಾಜಿನ ಬಾಗಿಲುಗಳಿಂದ ಒಳಗಿನ ದೃಶ್ಯ ಗೋಚರವಾಗುತ್ತದೆ.
ಆರೋಪಿಯು ಜೋರಾಗಿ ಕೈಗಳನ್ನು ಅಲ್ಲಾಡಿಸುತ್ತಿರುತ್ತಾನೆ, ಬಹುಶ: ತಾನು ನಿರಪರಾಧಿಯೆಂದು ಹೇಳುತ್ತಿರಬಹುದು.
ಆತ ಹೇಳುವದು ಇವನಿಗೆ ಹಾಗೂ ಪ್ರೇಕ್ಷಕರಿಗೆ ಕೇಳುವದಿಲ್ಲ.
ಈತ ಗಾಜಿನ ಬಾಗಿಲನ್ನು ತೆರೆಯುತ್ತಿದ್ದಂತೆ, ನ್ಯಾಯಧೀಶರು ಆತನಿಗೆ ದಂಡನೆ ನೀಡುವ ತೀರ್ಪು ಕೇಳಿಸುತ್ತದೆ.
ಸಮಾಜದ ವ್ಯವಸ್ಥೆಯು ಆರೋಪಿಯ ಕೂಗಿಗೆ ಹೇಗೆ ಕಿವುಡಾಗಿದೆ ಎನ್ನುವ ಆಶಯವನ್ನು ವ್ಯಕ್ತಪಡಿಸುವ ಮೂಲಕ Alfred Hitchcock ಇವರು ಈ ಸಿನೆಮಾವನ್ನು ಸಾಮಾನ್ಯ ಪತ್ತೇದಾರಿ ಸಿನೆಮಾಗಿಂತ ಎತ್ತರದ ಸಾಮಾಜಿಕ ಸಿನೆಮಾ ಆಗಿ ಪರಿವರ್ತಿಸಿದ್ದಾರೆ.

ಇಲ್ಲಿ ಉದಾಹರಿಸಲಾದ ಕೆಲವು ಚಿತ್ರಗಳು ೪೦, ೫೦ ವರ್ಷಗಳಷ್ಟು ಹಳೆಯವು.
ಆ ಕಾಲದಲ್ಲಿ ಸಿನೆಮಾ ತಂತ್ರಜ್ಞಾನ ಅಷ್ಟಕ್ಕಷ್ಟೇ.
ಆದರೆ, ನಿರ್ದೇಶಕರು ಪ್ರತಿಭಾವಂತರಾಗಿದ್ದರು.
ಅಂತೆಯೇ ಇಷ್ಟು ವರ್ಷಗಳ ನಂತರವೂ ಇವು ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿ ನಿಂತಿವೆ.

ಇಂತಹ ಒಂದಾದರೂ ಪ್ರತಿಭಾವಂತ ದೃಶ್ಯವು Slumdog millionaire ಚಿತ್ರದಲ್ಲಿ ಇದೆಯೆ?
ಇಂತಹ ಪ್ರತಿಭೆಯ ಒಂದೇ ಉದಾಹರಣೆಯನ್ನಾದರೂ ಈ ಚಿತ್ರದಲ್ಲಿ ನೋಡಬಹುದೆ?
ಬಾಲಕ ಜಮಾಲ ಸಂಡಾಸದ ಹೊಲಸಿನಲ್ಲಿ ಹಾರುವ ಒಂದೇ ದೃಶ್ಯವಲ್ಲ, ಇಡೀ ಚಲನಚಿತ್ರವೇ ಸಂಡಾಸದ ಹೊಲಸಾಗಿದೆ!
Slumdog millionaire is just toilet shit.

Friday, January 30, 2009

Slumdog millionaire

Slumdog millionaire ಚಲನಚಿತ್ರವು ಕೊಳಚೆ ಪ್ರದೇಶದ ಹುಡುಗನೊಬ್ಬನು ಕೋಟ್ಯಾಧಿಪತಿಯಾಗುವ ಕತೆಯನ್ನು ಹೊಂದಿದೆ.
ಚಲನಚಿತ್ರಗಳಲ್ಲಿ ಕೊಳಚೆನಿವಾಸಿಯು ಕೋಟ್ಯಾಧಿಪತಿಯಾಗಬೇಕಾದರೆ ಅದಕ್ಕೆ ಎರಡು ಮಾರ್ಗಗಳಿವೆ.
ಒಂದು ಮಾರ್ಗವೆಂದರೆ, the hard criminal way.
ಈ ತರಹದ ಅನೇಕ crime movieಗಳು Hollywoodನಲ್ಲಿ ಹಾಗೂ Bollywoodನಲ್ಲಿ ನಿರ್ಮಾಣಗೊಂಡಿವೆ ; ಜನಪ್ರಿಯತೆಯನ್ನೂ ಪಡೆದಿವೆ.
ಉದಾಹರಣೆಗೆ ಹಿಂದೀ ಚಲನಚಿತ್ರ: ‘ದೀವಾರ’.
ಅಮಿತಾಭ ಬಚ್ಚನ್ ಈ ಚಿತ್ರದಲ್ಲಿ ಮಾಫಿಯಾ ಹೀರೊ.
ಈ ಚಲನಚಿತ್ರವು ಬಚ್ಚನ್ನನಿಗೆ ತುಂಬಾ ಜನಪ್ರಿಯತೆಯನ್ನು ತಂದು ಕೊಟ್ಟಿತು.

ಕೋಟ್ಯಾಧಿಪತಿಯಾಗಲು ಎರಡನೆಯ ಮಾರ್ಗವೆಂದರೆ, ಅದೃಷ್ಟದ ನೆರವು.
ಮೊದಲನೆಯ ವರ್ಗದ ಚಿತ್ರಗಳಲ್ಲಿ ಅಪರಾಧಿ ಜಗತ್ತಿನ ಕಟು ವಾಸ್ತವತೆಯನ್ನು ತೋರಿಸಬೇಕಾಗುತ್ತದೆ. ಕ್ರೌರ್ಯವನ್ನು ತೋರಿಸಬೇಕಾಗುತ್ತದೆ.
ಅನೇಕ ನಿರ್ದೇಶಕರು ತುಂಬಾ ಖುಶಿಯಿಂದ ಇಂತಹ ನಿರ್ದೇಶನ ಮಾಡಿದ್ದಾರೆ.
ಆದರೆ ಎರಡನೆಯ ವರ್ಗದ ಚಲನಚಿತ್ರಗಳ ನಿರ್ದೇಶನ ತುಂಬಾ ಕಷ್ಟದ್ದು.
ಇಂತಹ ಚಲನಚಿತ್ರಗಳಲ್ಲಿ ಹಗಲುಗನಸಿನ, ತೇಲುಗಣ್ಣಿನ ನಿರ್ದೇಶನ ಬೇಕು. ದೃಶ್ಯಗಳು soft ಆಗಿರಬೇಕು.
ಇಂತಹ ಚಲನಚಿತ್ರಗಳೂ ಸಹ ನಿರ್ಮಾಣವಾಗಿವೆ.
ಅತ್ಯುತ್ತಮ ಉದಾಹರಣೆ ಎಂದರೆ ನಮ್ಮ ಕನ್ನಡದ್ದೇ ಆದ ಚಲನಚಿತ್ರ : ‘ಮೇಯರ ಮುತ್ತಣ್ಣ’.
ಸಾಮಾನ್ಯ ರೈತನೊಬ್ಬ ಹಳ್ಳಿಯಿಂದ ಪಟ್ಟಣಕ್ಕೆ ಬಂದು, ಪ್ರಾಮಾಣಿಕ ಪರಿಶ್ರಮದಿಂದ ಮೇಲೆರುತ್ತ ಕೊನೆಗೆ ಮೇಯರ ಆದ ಕತೆ ಇಲ್ಲಿದೆ.

Slumdog millionaire ಎರಡನೆಯ ವರ್ಗಕ್ಕೆ ಸೇರಬೇಕಾದ ಚಲನಚಿತ್ರ.
ಕೊಳಚೆಪ್ರದೇಶದ ಹುಡುಗನೊಬ್ಬ, ಅಪರಾಧಿ ಜಗತ್ತಿನಿಂದ ತಪ್ಪಿಸಿಕೊಂಡು, ಚಾಯವಾಲಾ ಕೆಲಸ ಮಾಡುತ್ತಲೇ “ ಕೌನ ಬನೇಗಾ ಕರೋಡಪತಿ ” ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ.
ಅಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ, ಕರೋಡಪತಿ ಸ್ಪರ್ಧೆಯಲ್ಲಿ ಗೆಲ್ಲುತ್ತಾನೆ.
ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುವ ಸಂದರ್ಭದಲ್ಲಿ ಈತನ ಹಳೆಯ ಇತಿಹಾಸದ ಯಾತನಾಮಯ ಘಟನೆಗಳು ಈತನಿಗೆ ಉತ್ತರವನ್ನು ಹೇಳಲು ಸಹಾಯಕವಾಗುತ್ತವೆ.
ಇಂತಹ ಘಟನೆಗಳನ್ನು ಚಿತ್ರಿಸುವಾಗ, ಈ ಚಿತ್ರದ ನಿರ್ದೇಶಕರು ಹಗಲುಗನಸಿನ ಶೈಲಿಯಲ್ಲಿ ನಿರ್ದೇಶಿಸುವ ಬದಲು, ವಾಸ್ತವವಾದಿ ಶೈಲಿಯಲ್ಲಿ ನಿರ್ದೇಶಿಸಿದ್ದಾರೆ.
ಆದರೆ criminal ಆಗಬೇಕಾದ ಹುಡುಗನು ಪ್ರಾಮಾಣಿಕನಾಗಿದ್ದಕ್ಕೆ ಇಲ್ಲಿ ಯಾವುದೇ ಸಮರ್ಥನೆ ಸಿಗುವದಿಲ್ಲ.
ಇಲ್ಲಿ ಕತೆಯೇ ಅವಾಸ್ತವವಾಗಿರುವದರಿಂದ ವಾಸ್ತವಾದಿ ನಿರ್ದೇಶನವು ನಿರರ್ಥಕವಾಗಿದೆ.
ಇದೇ ಕತೆಯನ್ನೇ ಹಗಲುಗನಸಿನ ಶೈಲಿಯಲ್ಲಿ ನಿರ್ದೇಶಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ.

ಚಿತ್ರಜಗತ್ತಿನಲ್ಲಿ ಇಲ್ಲಿಯವರೆಗೆ ಅನೇಕ crime movies ಬಂದಿವೆ.
Alfred Hitchcock ನಿರ್ದೇಶಿಸಿದ ‘psycho’ ಒಂದು ಅತ್ಯುತ್ತಮ crime film. ಈ ಚಿತ್ರದಲ್ಲಿ ಅಪರಾಧಕ್ಕಿಂತ ಹೆಚ್ಚಾಗಿ ಆಪರಾಧಿಯ ಮನೋವಿಶ್ಲೇಷಣೆ ಮಹತ್ವದ್ದಾಗಿದೆ.
ನಿಜ ಹೇಳಬೇಕೆಂದರೆ, ಕುರೊಸಾವೊ ನಿರ್ದೇಶಿಸಿದ ‘ರಾಶೊಮನ್’ ಕೂಡ ಒಂದು ರೀತಿಯಲ್ಲಿ crime film ಎಂದೇ ಹೇಳಬೇಕು.
ಏಕೆಂದರೆ ಇಲ್ಲಿಯೂ ಸಹ ಒಂದು ಅಪರಾಧದ ಸುತ್ತಲೂ ಕತೆ ಹೆಣೆಯಲಾಗಿದೆ.
ಆದರೆ ಈ ಚಿತ್ರದಲ್ಲಿ ಮಹತ್ವವಿರುವದು ಸತ್ಯದರ್ಶನಕ್ಕೆ ಹಾಗೂ ಮಾನವೀಯ ಅನುಕಂಪಕ್ಕೆ.
ಹೀಗಾಗಿ ಈ ಚಿತ್ರವು ಚಿತ್ರಜಗತ್ತಿನ ಶ್ರೇಷ್ಠ ಚಿತ್ರಗಳಲ್ಲಿಯೇ ಅಗ್ರಗಣ್ಯವಾಗಿದೆ.

Slumdog millionaire ಚಿತ್ರದಲ್ಲಿ ಯಾವುದೇ ಸಮಸ್ಯೆಯ ಅಧ್ಯಯನವಿಲ್ಲ,
ಯಾವುದೇ ಮಾನವೀಯ ಅನುಕಂಪವಿಲ್ಲ ಹಾಗೂ ಭಾರತವನ್ನೇ ಪ್ರತಿನಿಧಿಸುವ ಯಥಾರ್ಥತೆ (documentary character) ಇಲ್ಲ.

ಮುಂಬಯಿಯಲ್ಲಿ ಜರುಗಿದಂತೆ ಈ ಚಿತ್ರದ ಕತೆಯನ್ನು ತೋರಿಸಲಾಗಿದೆ.
ಆದರೆ ಇದು ಯಾವ ದೇಶದಲ್ಲಾದರೂ ನಡೆಯಬಹುದಾದಂತಹ ಘಟನಾವಳಿ.
(ಮುಂಬಯಿ ನಗರಕ್ಕೆ ವಿಶಿಷ್ಟವಾದ crime racket ನೋಡಬೇಕೆಂದರೆ, ಭಂಡಾರಕರರು ನಿರ್ದೇಶಿಸಿದ Traffic Signal ಚಲನಚಿತ್ರವನ್ನು ನೋಡಬೇಕು.)
ಈ ಚಿತ್ರದ ಕತೆಯ ದೇಹ ಮಾತ್ರ ಭಾರತೀಯ , ಪ್ರಾಣ ಭಾರತೀಯವಲ್ಲ , ಬಹುಶ: ಯಾವ ದೇಶದ್ದೂ ಅಲ್ಲ.
ಹೀಗಾಗಿ ಈ ಚಿತ್ರವು ಒಂದು stuffed toy ತರಹ ಕಾಣುತ್ತದೆ, ನಿರ್ಜೀವ ಬೊಂಬೆಯಂತೆ ಕಾಣುತ್ತದೆ.

Slumdog millionaire ಚಿತ್ರವು ಭಾರತದಲ್ಲಿಯ ದಾರಿದ್ರ್ಯ ಹಾಗು ಅಪರಾಧವನ್ನಷ್ಟೇ ತೋರಿಸುತ್ತದೆ. ಆದುದರಿಂದ ಇದು ಒಳ್ಳೆಯ ಚಿತ್ರವಲ್ಲ ಎಂದು ಕೆಲವರು ಪ್ರೇಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.
ದಾರಿದ್ರ್ಯ ಹಾಗೂ ಅಪರಾಧವನ್ನು ತೋರಿಸುವ ಒಂದೇ ಕಾರಣದಿಂದಲೇ ಯಾವ ಚಿತ್ರವೂ ಕೆಟ್ಟ ಚಿತ್ರವಾಗುವದಿಲ್ಲ.
ಸತ್ಯಜಿತ ರಾಯರ ಮೊದಲ ಚಿತ್ರ ‘ಪಥೇರ ಪಾಂಚಾಲಿ’ಗೆ Cannes Film Festivalದಲ್ಲಿ ಅತ್ಯುತ್ತಮ ಮಾನವೀಯ ದಾಖಲೆ ಪ್ರಶಸ್ತಿ ಲಭಿಸಿತು.
ಈ ಚಿತ್ರದಲ್ಲಿ ಬಂಗಾಲದ ಹಳ್ಳಿ ಹಾಗು ಪಟ್ಟಣಗಳಲ್ಲಿಯ ಬಡತನದ ಚಿತ್ರಣವಿದೆ.
ಆದರೆ, ಈ ಚಿತ್ರದ ಉದ್ದೇಶವು ಭಾರತದ ಬದುಕನ್ನು ಹಾಗು ಸಂಸ್ಕೃತಿಯನ್ನು ಚಿತ್ರಿಸುವದಾಗಿದೆಯೇ ಹೊರತು ಬಡತನವನ್ನು ಚಿತ್ರಿಸುವದಲ್ಲ.
ಭಾರತದಲ್ಲಿ ಆರ್ಥಿಕ ಬಡತನವು ಮೊದಲೂ ಇತ್ತು, ಈಗಲೂ ಇದೆ.
ಆದರೆ ಭಾರತವು ಸಂಸ್ಕೃತಿಯಲ್ಲಿ ಎಂದೂ ಬಡವಾಗಿಲ್ಲ.
ಕಾಡುಮೇಡುಗಳಿಂದ ತುಂಬಿದ ಬಡ ಹಳ್ಳಿಯೊಂದರಲ್ಲಿ ಪರಿಸರದೊಡನೆ ಒಂದಾದ ಬಂಗಾಲಿ ಕುಟುಂಬವು ಹೇಗೆ ಜೀವಿಸುತ್ತದೆ ಎನ್ನುವದನ್ನು ಸತ್ಯಜಿತ ರಾಯ ತುಂಬ ತಾಳ್ಮೆಯಿಂದ ಚಿತ್ರಿಸಿದ್ದಾರೆ.

ಕ್ರೌರ್ಯ ಹಾಗು ಅಪರಾಧವನ್ನು ತೋರಿಸುವ ಉತ್ತಮ ಹಿಂದೀ ಚಿತ್ರವೆಂದರೆ ‘ಸಲಾಮ್ ಬಾಂಬೇ’.
ಈ ಚಿತ್ರಕ್ಕೂ ಸಹ Cannes film festivalನಲ್ಲಿ Golden Camera ಪ್ರಶಸ್ತಿ ದೊರಕಿದೆ.
ಮುಂಬಯಿ ನಗರದಲ್ಲಿಯ crime racketಅನ್ನು ಈ ಚಿತ್ರದಲ್ಲಿ ವಿಸ್ತಾರವಾಗಿ ತೋರಿಸಲಾಗಿದೆ.
ಈ ಚಿತ್ರದಲ್ಲಿ ನಾನಾ ಪಾಟೇಕರನ ಮೂಲಕ ಬಿಂಬಿಸಲಾದ ಕ್ರೂರ ಮನೋಸ್ಥಿತಿಯು ಭಯಾನಕವಾಗಿದೆ.
ಬಡತನವನ್ನು ಚಿತ್ರಿಸುವ ‘ಪಥೇರ ಪಾಂಚಾಲಿ’ ಹಾಗೂ ಅಪರಾಧವನ್ನು ಚಿತ್ರಿಸುವ ‘ಸಲಾಮ್ ಬಾಂಬೇ’ ಚಿತ್ರಗಳಲ್ಲಿ ಜೀವನದ ವಾಸ್ತವತೆಯ ಚಿತ್ರಣವಿದೆ.
ಆದರೆ Slumdog millionaire ಚಿತ್ರದಲ್ಲಿ ವಾಸ್ತವತೆಯ ಬದಲು Sensationalism ಬಂದಿದೆ.
ಅಂತಹ ಘಟನೆಗಳಲ್ಲಿಯೆ ಅತ್ಯಂತ ಕೊಳಕು ಘಟನೆ ಎಂದರೆ ಸಾರ್ವಜನಿಕ ಸಂಡಾಸಕ್ಕೆ ಹೋದ ಹುಡುಗನು, ಅಮಿತಾಭ ಬಚ್ಚನ್ನನನ್ನು ನೋಡಲು ಹೊಲಸಿನಲ್ಲಿ ಜಿಗಿಯುವ ಘಟನೆ.
ಪ್ರೇಕ್ಷಕರನ್ನು ವಿನೋದಿಸಲೆಂದು ನಿರ್ದೇಶಕರು ಇಂತಹ ದೃಶ್ಯವನ್ನು ಸೃಷ್ಟಿಸಿದರಲ್ಲ ಎಂದು ದುಃಖವಾಗುತ್ತದೆ.

Slumdog millionaire ಚಿತ್ರದ ಒಂದೇ ಒಳ್ಳೆಯ ಗುಣವೆಂದರೆ ಅಚ್ಚುಕಟ್ಟಾದ ನಿರೂಪಣೆ.
ಅಚ್ಚುಕಟ್ಟಾದ ನಿರೂಪಣೆ,Sensationalism ಹಾಗೂ ವಿದೇಶಿ ನಿರ್ದೇಶಕ ಎನ್ನುವ ಮೂರು ಕಾರಣಗಳಿಂದ ಈ ordinary ಚಲನಚಿತ್ರವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆಲ್ಲುತ್ತ ನಡೆದಿದೆ.