Thursday, December 27, 2012

ಅತ್ಯಾಚಾರೀ ಸಮಾಜ ಹಾಗು ಪರಿಹಾರದ ಹಕ್ಕು


ಈಗಿನ ಭಾರತೀಯ ಸಮಾಜವು ಅತ್ಯಾಚಾರೀ ಸಮಾಜವಾಗಿದೆ. ಸ್ತ್ರೀಯರ ಮೇಲಿನ ದೌರ್ಜನ್ಯದ ಹಾಗು ಸಾರ್ವಜನಿಕ ಅಪಮಾನದ ಸಮಾಚಾರಗಳು ಪ್ರತಿದಿನವೂ ಪತ್ರಿಕೆಯಲ್ಲಿ ಬರುತ್ತಲೇ ಇವೆ. ಈ ದುಷ್ಕೃತ್ಯಗಳನ್ನು ಮಾಡುವ ನೀಚರನ್ನು ಗಲ್ಲಿಗೇರಿಸಬೇಕು ಎನ್ನುವ ಬೇಡಿಕೆಯು ಸರಿಯಾದದ್ದೇ. ಕೊಲೆಯಾದವನ ಯಾತನೆಯು ಒಂದೇ ಸಲಕ್ಕೆ ಮುಗಿಯುತ್ತದೆ. ಆದರೆ ಅತ್ಯಾಚಾರಕ್ಕೊಳಗಾದ ಸ್ತ್ರೀಯು ಪ್ರತಿದಿನವೂ ಮಾನಸಿಕ ಹಾಗು ಸಾಮಾಜಿಕ ಯಾತನೆಯನ್ನು ಅನುಭವಿಸುತ್ತಾಳೆ. ಆದುದರಿಂದ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಶಿಕ್ಷೆ ಸಮರ್ಪಕ ಶಿಕ್ಷೆಯಾಗಿದೆ. ಇಷ್ಟೇ ಸಾಲದು. ಅತ್ಯಾಚಾರಕ್ಕೊಳಗಾದ ಸ್ತ್ರೀಗೆ ಅಪರಾಧಿಯು ಭಾರೀ ಪರಿಹಾರವನ್ನು ನೀಡಬೇಕು. ಈ ಪರಿಹಾರವನ್ನು ನೀಡುವ ಆರ್ಥಿಕ ಸಾಮರ್ಥ್ಯ ಅವನಲ್ಲಿ ಇಲ್ಲದಿದ್ದರೆ, ಸರಕಾರವೇ ಆ ಮೊತ್ತವನ್ನು ಭರಿಸಬೇಕು.

ಒಂದು ಕೂಸು ಹುಟ್ಟಿದ ಗಳಿಗೆಯಲ್ಲಿ, ಅದು ಸರ್ವತಂತ್ರ ಸ್ವತಂತ್ರ ಜೀವಿಯಾಗಿರುತ್ತದೆ. ಆದರೆ ಸಾಮಾಜಿಕ ಕಟ್ಟುಪಾಡುಗಳಿಗೆ ಒಳಪಟ್ಟ ಕ್ಷಣದಿಂದ, ಆ ಜೀವಿಯ ಸ್ವಾತಂತ್ರ್ಯ ನಷ್ಟವಾಗುತ್ತದೆ. ಉದಾಹರಣೆಗೆ, ಸ್ವತಂತ್ರ ಜೀವಿಯು ಕಾಡಿಗೆ ಹೋಗಿ, ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದು. ತನ್ನನ್ನು ಕಾಡುವ ವೈರಿಗಳನ್ನು ಕೊಂದು ಹಾಕಬಹುದು. ಆದರೆ, ಸಾಮಾಜಿಕ ಕಟ್ಟುಪಾಡುಗಳಿಗೆ ಒಳಗಾಗುವ ಅನಿವಾರ್ಯತೆಯಿಂದಾಗಿ ಇಂತಹ ಸ್ವಾತಂತ್ರ್ಯ ಹೊರಟುಹೋಗುತ್ತದೆ. ಅದರ ಬದಲಾಗಿ ಆ ಜೀವಿಗೆ ಕೆಲವೊಂದು ಹಕ್ಕುಗಳು ಲಭಿಸುತ್ತವೆ. ದುರಾಚಾರದಿಂದ ರಕ್ಷಣೆ ಪಡೆಯುವುದು ಪ್ರತಿಯೋರ್ವ ಜೀವಿಯ ಹಕ್ಕು ಹಾಗು ರಕ್ಷಣೆ ಕೊಡುವುದು ಸರಕಾರದ ಹೊಣೆಗಾರಿಕೆ. ರಕ್ಷಣೆ ಸಾಧ್ಯವಾಗದಿದ್ದರೆ, ಸಮುಚಿತ ಪರಿಹಾರವನ್ನು ಕೊಡಲೇಬೇಕು. ಅದು ಸರಕಾರದ ಕರ್ತವ್ಯ.

ಅತ್ಯಾಚಾರಿಗಳಿಗೆ ಶಿಕ್ಷೆ ಹಾಗು ದೌರ್ಜನ್ಯಪೀಡಿತರಿಗೆ ಪರಿಹಾರ ನೀಡುವದಷ್ಟೇ ಸಾಲದು. ಭಾರತೀಯ ಸಮಾಜದಲ್ಲಿ ಅತ್ಯಾಚಾರಗಳು ಏಕೆ ಹೆಚ್ಚಾಗುತ್ತಿವೆ ಎನ್ನುವುದನ್ನು ಅರಿತು, ಆ ಸಮಸ್ಯೆಯನ್ನು ಬಗೆಹರಿಸುವುದು ಅವಶ್ಯಕವಾಗಿದೆ. ಸಮಸ್ಯೆಯ ಕಾರಣವಂತೂ ಸ್ಪಷ್ಟವಾಗಿದೆ. ನಮ್ಮ ಸಮಾಜವು ತನ್ನ ತರುಣರಿಗೆ ತಪ್ಪು ಹಾದಿಯನ್ನು ತೋರಿಸುತ್ತಿದೆ. ನೈತಿಕ ಹಾಗು ಸಾಮಾಜಿಕ ಆದರ್ಶಗಳು ಮಾಯವಾಗಿವೆ. ಟೀವಿ ಹಾಗು ಸಿನೆಮಾಗಳಲ್ಲಿ ಆಶ್ಲೀಲತೆ ಹಾಗು ಮಿತಿಮೀರಿದ ಕ್ರೌರ್ಯದ ಪ್ರದರ್ಶನವಾಗುತ್ತಿದೆ.  ನಮ್ಮ ಶಾಸಕರಲ್ಲಿ ಶೇಕಡಾ ೩೦ರಷ್ಟು ಶಾಸಕರು ಒಂದಿಲ್ಲ ಒಂದು ನಮೂನೆಯ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ತಮ್ಮ ರಾಜಕೀಯ ಬಲದಿಂದಾಗಿ ಅನೇಕ ರಾಜಕಾರಣಿಗಳ ಅಪರಾಧಗಳು ಮುಚ್ಚಿ ಹೋಗುತ್ತಿವೆ. ಈ ನಾಯಕರೇ ನಮ್ಮ ತರುಣರಿಗೆ ಮಾದರಿಯಾಗಿದ್ದಾರೆ! ಹೀಗಿದ್ದಾಗ ನಮ್ಮ ಸಮಾಜವು ಅತ್ಯಾಚಾರೀ ಸಮಾಜವಾಗಿ ಬದಲಾದದ್ದರಲ್ಲಿ ಆಶ್ಚರ್ಯವೇನಿದೆ? ಯಥಾ ರಾಜಾ ತಥಾ ಪ್ರಜಾ!

ಗ್ಯಾಂಗ್‍ರೇಪ್‍ನಂತಹ ಅತ್ಯಾಚಾರಗಳು ಕಣ್ಣಿಗೆ ಎದ್ದು ಕಾಣುವಂತಹ ದೌರ್ಜನ್ಯಗಳಾಗಿವೆ. ಆದರೆ ಸಾರ್ವಜನಿಕರ ನಜರಿಗೆ ಬಾರದಿರುವ ದೌರ್ಜನ್ಯಗಳು ಇದರ ಸಾವಿರ ಪಟ್ಟಿನಷ್ಟಿವೆ. ಭಾರತದ ಮೆಟ್ರೋಗಳಲ್ಲಿ ದಿನವೂ ಅನೇಕ ಅಪಹೃತ ಬಾಲಿಕೆಯರ ಮಾರಾಟವಾಗುತ್ತಿದೆ. ಎರಡು ವರ್ಷಗಳ ಶಿಶುಗಳೂ ಸಹ ಅತ್ಯಾಚಾರಕ್ಕೆ ಬಲಿಯಾಗುತ್ತಿರುವುದು ಪತ್ರಿಕೆಗಳಲ್ಲಿ ಬೆಳಕಿಗೆ ಬರುತ್ತಿದೆ. ಹೆಣ್ಣಾಗಿ ಹುಟ್ಟಿದ್ದೇ ಈ ಬಾಲಿಕೆಯರ ಹಾಗು ಶಿಶುಗಳ ಅಪರಾಧವೇ?

ಸರಕಾರಕ್ಕೆ ಇದು ಗೊತ್ತಿರದೆ ಏನು? ಆದರೆ ಅಪರಾಧ ಮಾಫಿಯಾ ದೊಡ್ಡ ಸಂಘಟನೆಯಾಗಿದೆ. ಇವರು ಗಳಿಸುವ ಕೊಳಕು ಹಣದಲ್ಲಿ ಸಮಾಜರಕ್ಷಕರಿಗೂ ಪಾಲಿರುತ್ತದೆ. ಸರಕಾರದ ಕನಿಷ್ಠ ಕರ್ಮಚಾರಿಯಿಂದ ಪ್ರಾರಂಭವಾಗಿ, ಸರಕಾರದ ವರಿಷ್ಠರವರೆಗೆ ಎಲ್ಲರಿಗೂ ಈ ಅರಿಷ್ಟ ಹಣದಲ್ಲಿ ಪಾಲಿರುವದು ಒಂದು ಬಹಿರಂಗ ರಹಸ್ಯ!

ಆದುದರಿಂದ ಅಪರಾಧಿಗಳಲ್ಲಿ ಹೆದರಿಕೆ ಹುಟ್ಟಿಸುವಂತಹ ಶಿಕ್ಷೆಯ ಜೊತೆಗೆ, ಭಾರತೀಯ ಸಮಾಜದಲ್ಲಿರುವ ಅನೈತಿಕ ಕೊಳಕನ್ನು ಗುಡಿಸುವ ಕೆಲಸವೂ ಆಗಬೇಕು. ಶಾಲೆಗಳಲ್ಲಿ ನೈತಿಕ ಶಿಕ್ಷಣ ದೊರೆಯಬೇಕು. ಟೀವಿ ಹಾಗು ಸಿನೆಮಾಗಳಲ್ಲಿ ಅಶ್ಲೀಲತೆ ಹಾಗು ಕ್ರೌರ್ಯದ ಪ್ರದರ್ಶನಗಳನ್ನು ಪ್ರತಿಬಂಧಿಸಬೇಕು. ಲಂಚಗುಳಿ ಹಾಗು ಲಂಪಟ ರಾಜಕಾರಣಿಗಳನ್ನು ಸಮಾಜವು ತಿರಸ್ಕರಿಸಬೇಕು. ಅಲ್ಲಿಯವರೆಗೂ ಸ್ತ್ರೀಯರ ಹಾಗು ಬಾಲಿಕೆಯರ ಮೇಲಿನ ದೌರ್ಜನ್ಯವು ನಿಲ್ಲುವದಿಲ್ಲ.

ಸಾಮಾಜಿಕ ಅಪರಾಧಗಳಿಗೆ ಇನ್ನೂ ಒಂದು ಕಾರಣವಿದೆ. ಅನೇಕ ವರ್ಷಗಳ ಹಿಂದೆ, ಪ್ರಾಣಿವಿಜ್ಞಾನಿಗಳು ವಿಭಿನ್ನ ಪ್ರದೇಶಗಳ ಮಂಗಗಳ ಮೇಲೆ ಕೆಲವು ಪ್ರಯೋಗಗಳನ್ನು ಮಾಡಿದರು. ಈ ಪ್ರಾಣಿಗಳಲ್ಲಿ ಅವರು ಮೂರು ಗುಂಪುಗಳನ್ನು ಮಾಡಿದ್ದರು: ಅತಿ ದಟ್ಟವಾದ ಸಂಖ್ಯೆಯುಳ್ಳ ಗುಂಪು, ವಿರಳ ಸಂಖ್ಯೆಯ ಗುಂಪು ಹಾಗು ಮಧ್ಯಮ ಪ್ರಮಾಣದ ಸಂಖ್ಯೆಯ ಗುಂಪು. ಯಾವ ಗುಂಪಿನಲ್ಲಿ ಅತಿ ದಟ್ಟವಾದ ಪ್ರಾಣಿಸಂಖ್ಯೆ ಇದ್ದು, ನಾಯಕತ್ವವು ಬಲಹೀನವಾಗಿರುವಿದೋ, ಆ ಗುಂಪಿನ ಪ್ರಾಣಿಗಳಲ್ಲಿ ಪರಸ್ಪರ ಕಚ್ಚಾಟ ಹಾಗು ಅಪರಾಧಗಳು ವಿಶೇಷ ಪ್ರಮಾಣದಲ್ಲಿ ಕಂಡು ಬಂದವು. ಪ್ರಾಣಿಗಳಲ್ಲಿ ಸಾಧಾರಣವಾಗಿ ಕಂಡು ಬರದಂತಹ, ರೇಪ್ ಸಹ ಈ ಗುಂಪಿನಲ್ಲಿ ಕಂಡು ಬಂದಿತು. ಭಾರತದ ಸದ್ಯದ ಪರಿಸ್ಥಿತಿಯು ಇದೇ ರೀತಿಯಾಗಿರುವುದು ಸ್ಪಷ್ಟವಿದೆ. ನಮ್ಮಲ್ಲಿ ಮಿತಿ ಮೀರಿದ ಜನಸಂಖ್ಯೆ ಇದ್ದು, ಬಲಶಾಲಿ ನಾಯಕತ್ವದ ಅಭಾವವಿದೆ. 


ನಮ್ಮ ನಾಯಕರು ಮಧ್ಯರಾತ್ರಿಯ ಸಮಯದಲ್ಲಿ ನಿದ್ರಿಸುವ ಅಮಾಯಕ ಜನತೆಯ ಮೇಲೆ (--ಅವರಲ್ಲಿ ಅನೇಕರು ಮಹಿಳೆಯರು--) ಲಾಠೀಚಾರ್ಜ ಮಾಡಿಸುವ ಮೂಲಕ ತಮ್ಮ ಬಲಪ್ರದರ್ಶನ ಮಾಡುತ್ತಿದ್ದಾರೆ. ರಾಮಲೀಲಾ ಬಯಲಿನಲ್ಲಿ ರಾಮದೇವರ ಶಿಷ್ಯರ ಮೇಲೆ ನಡಿಸಿದ ಈ ದೌರ್ಜನ್ಯವು ಜಾಲಿಯಾನವಾಲಾ ಬಾಗಿನಲ್ಲಿ ಬ್ರಿಟಿಶರು ನಡೆಸಿದ ದೌರ್ಜನ್ಯಕ್ಕಿಂತ ಯಾವುದರಲ್ಲಿ ಕಡಿಮೆ ಇದೆ? ಅದರಂತೆ ಜಂತರಮಂತರ ಹಾಗು ಇಂಡಿಯಾ ಗೇಟಿನ ಬಳಿ ವಿದ್ಯಾರ್ಥಿಗಳ ಮೇಲೆ ಪೋಲೀಸರು ನಡೆಸಿದ ದೌರ್ಜನ್ಯವು ಚೀನಾದಲ್ಲಿಯ ಟಿಯಾನಾನ್ಮನ್ ಚೌಕದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ನೆನಪಿಸುತ್ತದೆ. ನಮ್ಮ ಸರಕಾರದ ನೀತಿಯೆಂದರೆ, ಚಳುವಳಿಗಾರರನ್ನು ಇದೇ ರೀತಿಯಲ್ಲಿ ಸತಾಯಿಸುತ್ತ ಇರಬೇಕು. ಕೊನೆಗೊಮ್ಮೆ ಅವರೇ ದಣಿದು ತಮ್ಮ ಚಳುವಳಿಯನ್ನು ಸ್ಥಗಿತಗೊಳಿಸುತ್ತಾರೆ! ಇದಕ್ಕೆ ಬಲಶಾಲಿ ನಾಯಕತ್ವ ಎನ್ನುವುದಿಲ್ಲ. ಇದು ಮಹಾಭಾರತದ ದುರ್ಯೋಧನನ ನೀತಿ. ನಮಗೆ ಬೇಕಾಗಿರುವುದು ಸುಭಾಷಚಂದ್ರ ಭೋಸ ಹಾಗು ವಲ್ಲಭಬಾಯಿ ಪಟೇಲರಂಥವರ ಸ್ಥೈರ್ಯದ ಗುಣ!


ಇನ್ನು  ಮತಬ್ಯಾಂಕನ್ನು ಓಲೈಸುವ ರಾಜಕಾರಣಿಗಳು ಜನಸಂಖ್ಯಾನಿಯಂತ್ರಣದ ಬಗೆಗೆ ಕ್ರಮ ತೆಗೆದುಕೊಳ್ಳುವದಂತೂ ಕನಸಿನ ಮಾತು. ಜನಸಂಖ್ಯೆ ಹೆಚ್ಚಿದಂತೆಲ್ಲ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಸಮಸ್ಯೆಗಳ ದುರ್ಲಾಭ ಪಡೆಯುವದೇ ರಾಜಕಾರಣಿಗಳ ನೀತಿಯಾಗಿದೆ.  ಪರಿಸ್ಥಿತಿಯು ಇದೇ ರೀತಿಯಲ್ಲಿ ಮುಂದುವರೆದರೆ, ನಮ್ಮ ಭಾರತವು ಕೊಳಚೆಯ ಗೂಡಾಗುವದರಲ್ಲಿ ಸಂದೇಹವಿಲ್ಲ.

Friday, December 21, 2012

"ಬರುವದೇನೆ ನೆಪ್ಪಿಗೆ".........................ಬೇಂದ್ರೆ



ಬರುವದೇನೆ ನೆಪ್ಪಿಗೆ
ನಮ್ಮ ನಿಮ್ಮ ಒಪ್ಪಿಗೆ
         ಎಲ್ಲೊ ಏನೊ ನೋಡಿದೆ
          ಹಾಗೆ ಬಂದು ಕೂಡಿದೆ.

                    ಬೆಳಕು ಬೆಂಕಿ ಬೆರೆತುಕೊಂಡು
                           ಭಾವವು ಹೊರದೂಡಿರೆ
                        ಬಾಳು ಮೊಳೆತು ಸುಗ್ಗಿ ನನೆತು
                               ಹೂವಿನಂತೆ ಮಾಡಿರೆ
                        ಆಹಾ ಚೆಲುವೆ ! ಎಂದು ಕುಣಿದೆ
                                ಮಿಕ್ಕ ಸಂಜೆ ಮಬ್ಬಿಗೆ
                        ಓಹೊ ಒಲವೆ ! ಎಂದು ಕರೆದೆ
                                 ಪಲ್ಲವಿಸಿದ ಹುಬ್ಬಿಗೆ.                                                           
ಅಂದು ಏನ ಬೇಡಿದೆ
ಏನ ನೆನಸಿ ಹಾಡಿದೆ
      ಬರುವದೇನೆ ನೆಪ್ಪಿಗೆ
       ಎದೆಗೆ ಎದೆಯ ಅಪ್ಪಿಗೆ.

ಬರುವದೇನೆ ನೆಪ್ಪಿಗೆ
ಕೂಡಿದೊಂದು ತಪ್ಪಿಗೆ
        ಏನೊ ಏನೊ ನೂತೆವು
         ಬದುಕಿನೆಳೆಗೆ ಜೋತೆವು

                        ಮೋಡದೊಂದು ನಾಡಿನಲ್ಲಿ
                                ಮಳೆಯ ಮಿಂಚು ಕಂಡೆವು
                        ಯಾವ ಫಲಕೆ ಇಳಿಯುತಿತ್ತೊ
                                 ಮಣ್ಣ ಬೀಜ ಉಂಡೆವು
                        ದುಃಖದೊಂದು ಶೂಲೆಯಲ್ಲಿ
                                  ನೋವಗೊಂಡು ತಿಣುಕಿದೆ
                        ಸುಖದ ತೊಟ್ಟು ತೊಟ್ಟಿಗಾಗಿ
                                   ಹತ್ತು ಕಡೆಗೆ ಹಣಿಕಿದೆ.

ಇಬ್ಬಗೆಗೂ ಸೋತೆವು
ಆಸರಾಗಿ ಆತೆವು
         ಬರುವದೇನೆ ನೆಪ್ಪಿಗೆ
          ಹೊರತಾದೆವು ಉಪ್ಪಿಗೆ.

ಬರುವದೇನೆ ನೆಪ್ಪಿಗೆ
ನಾವು ಬಿದ್ದ ಟೊಪ್ಪಿಗೆ
        ತಲೆಯ ತೆರೆದು ಬಂದಿತು
         ಎಚ್ಚರೆಚ್ಚರೆಂದಿತು.

                        ಯಾವ ಲೋಕದಿಂದಲಿಳಿದೊ
                                 ಹೊಸ ಸುಗಂಧ ಬೀರಿದೆ
                        ರಣೋತ್ಸಾಹ ಕಹಳೆಯಂತೆ
                                    ನವಚೇತನ ಊರಿದೆ
                        ಇಬ್ಬರನ್ನು ನೂಗಿಕೊಂಡು
                                    ಒಬ್ಬನಾಗಿ ಎದ್ದಿದೆ.
                        ಚಿತ್ತವೆಲ್ಲಿ ಎನುವಾಗಲೆ
                                ಕೊಡುವ ಮೊದಲೆ ಕದ್ದಿದೆ.

ಸಲ್ಲುವಲ್ಲಿ ಸಂದಿದೆ
ನಿಲ್ಲುವಲ್ಲಿ ನಿಂದಿದೆ
           ಬರುವದೇನೆ ನೆಪ್ಪಿಗೆ
             ಜೀವಜೀವದಪ್ಪಿಗೆ.
……………………………………………………………..
‘ಬರುವದೇನೆ ನೆಪ್ಪಿಗೆ’ ಕವನದಲ್ಲಿ ಬೇಂದ್ರೆಯವರು ತಮ್ಮ ಕೆಳದಿಯೊಡನೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.  ಈ ನೆನಪುಗಳು ಮೂರು ಕಾಲಘಟ್ಟಗಳಲ್ಲಿ ಹಂಚಿಹೋಗಿವೆ. ಪ್ರತಿಯೊಂದು ಘಟ್ಟದ ಪ್ರಾರಂಭದಲ್ಲಿಯೂ ಬೇಂದ್ರೆಯವರು ತಮ್ಮ ಮಡದಿಗೆ ‘ಬಂದಿತೇನೆ ನೆನಪಿಗೆ?’ ಎಂದು ಕೇಳುತ್ತಿದ್ದಾರೆ.

ಗಂಡ-ಹೆಂಡತಿಯ ಮೊದಲ ನೆನಪು ತಮ್ಮ ಮದುವೆಯ ಸಮಯದ್ದೇ ಆಗಿರುತ್ತದೆಯಲ್ಲವೆ? ಬೇಂದ್ರೆಯವರು ತಮ್ಮ ಮಡದಿಗೆ ನೆನಪು ಮಾಡಿಕೊಡುವುದೂ ಅದನ್ನೇ!

“ಬರುವದೇನೆ ನೆಪ್ಪಿಗೆ
ನಮ್ಮ ನಿಮ್ಮ ಒಪ್ಪಿಗೆ
         ಎಲ್ಲೊ ಏನೊ ನೋಡಿದೆ
          ಹಾಗೆ ಬಂದು ಕೂಡಿದೆ.”

ಬೇಂದ್ರೆಯವರು ಮದುವೆಯಾದಾಗ ಅವರ ವಯಸ್ಸು ೨೩. ಅವರ ಹೆಂಡತಿಯ ವಯಸ್ಸು ೧೩ ! ಹಿರಿಯರೇ ಮದುವೆಯನ್ನು ನಿಶ್ಚಯಿಸುವ ಆ ಕಾಲದಲ್ಲಿ, ಮದುವೆಯಾಗುವ ಹುಡುಗನ ಹಾಗು ಹುಡುಗಿಯ ಒಪ್ಪಿಗೆಯನ್ನು ಕೇಳುವವರು ಯಾರು? ಅಂತೆಲೇ ಬೇಂದ್ರೆಯವರು ‘ನಮ್ಮ ನಿಮ್ಮ ಒಪ್ಪಿಗೆ’ ಎಂದು ವಿನೋದಿಸುತ್ತಾರೆ. ಅಂತಃಪಟವನ್ನು ಸರಿಸುವವರೆಗೂ ವಧುವರರು ಪರಸ್ಪರ ಮುಖವನ್ನು ಸಹ ನೋಡಿರುತ್ತಿರಲಿಲ್ಲ. ಆದುದರಿಂದಲೇ ಬೇಂದ್ರೆಯವರು ‘ಎಲ್ಲೊ ಏನೊ ನೋಡಿದೆ, ಹಾಗೆ ಬಂದು ಕೂಡಿದೆ’ ಎಂದು ಹೇಳುತ್ತಾರೆ. ತಮ್ಮ ಸಖೀಗೀತದಲ್ಲೂ ಸಹ, ಬೇಂದ್ರೆಯವರು ಈ ಪ್ರಸಂಗವನ್ನು “ಅಂತಃಪಟದಾಚೆ ವಿಧಿ ತಂದ ವಧು ನೀನು”  ಎಂದು ವರ್ಣಿಸಿದ್ದಾರೆ!

ಬೇಂದ್ರೆಯವರ ದಾಂಪತ್ಯಜೀವನ ಪ್ರಾರಂಭವಾಗುತ್ತದೆ. ದಾಂಪತ್ಯಧರ್ಮವನ್ನು ಅರಿತುಕೊಳ್ಳುವುದು ಬೆಳಕು. ದಂಪತಿಗಳಲ್ಲಿ ನೈಸರ್ಗಿಕವಾಗಿ ಜ್ವಲಿಸುತ್ತಿರುವುದು ಕಾಮದ ಬೆಂಕಿ. ಈ ಎರಡೂ ಸಮರಸವಾಗಿ ಬೆರೆತಿರಲು ದಂಪತಿಗಳ ಬದುಕು ಒಂದು ಹಬ್ಬ. ಇಂತಹ ಸಾಮರಸ್ಯದ ಬದುಕಿನಿಂದ ಮನದೊಳಗೆ ಭಾವೋದ್ದೀಪನವಾಗುತ್ತದೆ.
ತಮ್ಮ ‘ಸಖೀಗೀತ’ದಲ್ಲಿ ಬೇಂದ್ರೆಯವರು ಈ ತಾರುಣ್ಯದ ಹಬ್ಬವನ್ನು ಹೀಗೆ ವರ್ಣಿಸಿದ್ದಾರೆ:

“ಹಗಲೆಲ್ಲೊ ಹಾರಿದವು ಇರುಳೆಲ್ಲ ಜಾರಿದವು
ಋತು ನಿದ್ದೆಯಾಡಿದವು ಬುಗುರೆಯೊಲೆ”

ದಂಪತಿಗಳಲ್ಲಿ ಸಾಮರಸ್ಯ ಮೂಡಿದಾಗ ಬಾಳಿನಲ್ಲಿ ಉಲ್ಲಾಸ ಹಾಗು ಉತ್ಸಾಹ ಮೂಡುತ್ತವೆ.ಈ ಸಾಧನೆಯಾದಾಗ ಬಾಳು ಮೊಳೆಯುತ್ತದೆ. ಬಾಳಿನಲ್ಲಿ ಸುಗ್ಗಿ ಪ್ರವೇಶಿಸುತ್ತದೆ ಹಾಗು ಸುಖದ ಹೂವು ಅರಳುತ್ತದೆ. ಈ ಭಾಗವನ್ನು ಬೇಂದ್ರೆಯವರು ಹಾಡುವುದು ಹೀಗೆ:
                    ಬೆಳಕು ಬೆಂಕಿ ಬೆರೆತುಕೊಂಡು
                           ಭಾವವು ಹೊರದೂಡಿರೆ
                        ಬಾಳು ಮೊಳೆತು ಸುಗ್ಗಿ ನನೆತು
                               ಹೂವಿನಂತೆ ಮಾಡಿರೆ
                        ಆಹಾ ಚೆಲುವೆ ! ಎಂದು ಕುಣಿದೆ
                                ಮಿಕ್ಕ ಸಂಜೆ ಮಬ್ಬಿಗೆ
                        ಓಹೊ ಒಲವೆ ! ಎಂದು ಕರೆದೆ
                                 ಪಲ್ಲವಿಸಿದ ಹುಬ್ಬಿಗೆ.

ಈ ಕಾಲದಲ್ಲಿ ಗಂಡನ ಕಣ್ಣಿಗೆ ಹೆಂಡತಿ ಅಪ್ಸರೆಯೇ ಸೈ. ಅವಳ ಬೆಡಗು, ಬಿನ್ನಾಣ, ಅವಳ ಹುಬ್ಬಿನ ಕುಣಿತ ಅವನನ್ನು ಮರಳುಗೊಳಿಸುತ್ತವೆ. ಬೇಂದ್ರೆಯವರೂ ಇದಕ್ಕೆ ಹೊರತಾಗಿರಲಿಲ್ಲ.

(ಬೇಂದ್ರೆಯವರ ‘ಅಪರೂಪರಾಗ’ ಎನ್ನುವ ಕವನವು ಪ್ರಾರಂಭವಾಗುವುದೇ ‘ಆಹಾs ಚೆಲುವೆ’ ಎಂದು:
“ಆಹಾs ಚೆಲುವೆ, ಓಹೋs ಚೆಲುವೆ, ಏನುs ಚೆಲುವೆಯೋ
ನಿನ್ನ ನೀನೊ ಏನೊ ಏನೊ ನೋಡಿs ನಲಿವೆಯೋ”)

ತಾರುಣ್ಯದ ಈ ಮಬ್ಬು ಇಳಿದ ಬಳಿಕ, ದಂಪತಿಗಳು ತಾವು ಬಯಸಿದ್ದೇನು, ದೊರೆತದ್ದೇನು ಎಂದು ಯೋಚಿಸುತ್ತಾರೆ. ಬಯಸಿದ್ದೆಲ್ಲ ದೊರೆಯಲಿಕ್ಕಿಲ್ಲ. ಆದರೆ ಮೈಕಾವೇ ಅವರ ಮನಸ್ಸನ್ನೂ ಬೆಚ್ಚಗೆ ಮಾಡುತ್ತದೆ. ಅದೇ ಪರಸ್ಪರ ಪ್ರೀತಿಗೂ ಕಾರಣವಾಗುತ್ತದೆ. ಅದನ್ನು ಬೇಂದ್ರೆಯವರು ಹೇಳುವುದು ಹೀಗೆ:

ಅಂದು ಏನ ಬೇಡಿದೆ
ಏನ ನೆನಸಿ ಹಾಡಿದೆ
      ಬರುವದೇನೆ ನೆಪ್ಪಿಗೆ
       ಎದೆಗೆ ಎದೆಯ ಅಪ್ಪಿಗೆ.

ಬೇಂದ್ರೆ-ಬದುಕಿನ ಎರಡನೆಯ ಕಾಲಘಟ್ಟವು ೧೯೩೨ನೆಯ ಇಸವಿಯಿಂದ ಪ್ರಾರಂಭವಾಗುತ್ತದೆ ಎನ್ನಬಹುದು. ಬೇಂದ್ರೆಯವರು ಈಗಾಗಲೇ ಎರಡು ಗಂಡುಮಕ್ಕಳನ್ನು ಕಳೆದುಕೊಂಡಿದ್ದರು. ‘ನರಬಲಿ’ ಕವನವು ಅವರನ್ನು ಸೆರೆಮನೆಗೆ ಕಳಿಸಿತು. ೯ವರ್ಷಗಳವರೆಗೆ ಅಂದರೆ ೧೯೪೧ನೆಯ ಇಸವಿಯವರೆಗೆ ಅವರು ರಾಜಾಜ್ಞೆಯಿಂದಾಗಿ ಕೆಲಸವಿಲ್ಲದೆ ಅಲೆದಾಡಬೇಕಾಯಿತು. ಮದುವೆಯಾದದ್ದೇ ತಪ್ಪಾಯಿತೇನೊ ಎಂದು ಅವರಿಗೆ ಎನಿಸುವುದು ಸಹಜ. ಮಕ್ಕಳಾದದ್ದಂತೂ  ಮತ್ತೂ ದೊಡ್ಡ ತಪ್ಪು. ಇದೀಗ ಆ ತಪ್ಪಿನೊಡನೆ ಹೊಂದಿಕೊಂಡು ಹೋಗಲು ಏನೆಲ್ಲ ಕಸರತ್ತು ಮಾಡಬೇಕಲ್ಲವೆ? ಆದುದರಿಂದಲೇ ಬೇಂದ್ರೆಯವರು ತಮ್ಮ ಮಡದಿಗೆ ವಿಷಾದದಿಂದ ಹೇಳುತ್ತಾರೆ:

“ಬರುವದೇನೆ ನೆಪ್ಪಿಗೆ
ಕೂಡಿದೊಂದು ತಪ್ಪಿಗೆ
        ಏನೊ ಏನೊ ನೂತೆವು
         ಬದುಕಿನೆಳೆಗೆ ಜೋತೆವು”

‘ಏನೊ ಏನೊ ನೂತೆವು’ ಎಂದು ಹೇಳುವಾಗ ಬೇಂದ್ರೆಯವರು ಜೇಡರಹುಳದ ರೂಪಕವನ್ನು ಬಳಸುತ್ತಿದ್ದಾರೆ. ಬೇಂದ್ರೆ ದಂಪತಿಗಳು ತಾವೇ ಹೆಣೆದಂತಹ ಸಂಸಾರವೆನ್ನುವ ಬಲೆಯಲ್ಲಿ ಸಿಲುಕಿದ್ದಾರೆ!

ಮಕ್ಕಳ ಸಲುವಾಗಿಯಾದರೂ ಈ ದಂಪತಿಗಳು ಬದುಕಿನ ತೆಳು ಎಳೆಗೆ ಜೋತು ಬೀಳುವುದು ಅನಿವಾರ್ಯವಾಗಿತ್ತು.
ಧಾರವಾಡ ಬೇಂದ್ರೆಯವರನ್ನು ಹೊರಗೆ ಹಾಕಿತು. ಬೇಂದ್ರೆಯವರ ವಾಸ ಪುಣೆಯಲ್ಲಿ.
ಕಕ್ಕನ ಆಸರೆ ಹಾಗು ಹಿರಿಯಣ್ಣನಂತಹ ಮಾಸ್ತಿಯವರ ನೆರವಿನಿಂದ ಬದುಕನ್ನು ಸಾಗಿಸಿದರು. ಆಗ ಬೇಂದ್ರೆಯವರ ಪಾಲಿಗೆ ನಾಡೆಲ್ಲ ಮೋಡ ಕವಿದ ವಾತಾವರಣ, ಕಣ್ಣು ಹೊರಳಿಸಿದಲ್ಲೆಲ್ಲ ಕಾರುಕತ್ತಲೆ.

ಈ ಮಾತನ್ನು ಅವರು ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿ ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ದೊರೆತ ನೆರವು ಅವರ ಪಾಲಿನ ಮಳೆಯ ಮಿಂಚು. ಏಕೆಂದರೆ ಈ ನೆರವು ಮಿಂಚಿನಂತೆ ಕ್ಷಣಿಕ ಹಾಗು ಅಲ್ಪ ಬೆಳಕನ್ನು ನೀಡುವಂತಹದು. ರಾಜಕೀಯವಾಗಿ ಹಾಗು ಸಾಮಾಜಿಕವಾಗಿ ಹೇಳುವದಾದರೆ, ಮಹಾತ್ಮಾ ಗಾಂಧಿ ಹಾಗು ಇತರ ದೇಶಭಕ್ತರು, ಮೋಡ ಕವಿದ ಭಾರತದಲ್ಲಿ ಮಿಂಚಿನಂತೆ ಬೆಳಕು ನೀಡುತ್ತಿದ್ದರು.

ಈ ಮಳೆ, ಈ ಮಿಂಚು ಬೇಂದ್ರೆ ಕುಟುಂಬಕ್ಕೆ ನೀಡಿದ ಫಲವೇನು? ‘ಮಣ್ಣಿನಲ್ಲಿ ಮಣ್ಣಾದ ಬೀಜ’ ಎಂದು ಬೇಂದ್ರೆ ಅದನ್ನು ವರ್ಣಿಸುತ್ತಾರೆ. ಅಂದರೆ ಅವರ ಹರಪ್ರಯತ್ನಗಳಿಗೆ ಯಾವ ಫಲವೂ ಸಿಗಲಿಲ್ಲ!
         ಮೋಡದೊಂದು ನಾಡಿನಲ್ಲಿ
                                ಮಳೆಯ ಮಿಂಚು ಕಂಡೆವು
                        ಯಾವ ಫಲಕೆ ಇಳಿಯುತಿತ್ತೊ
                                 ಮಣ್ಣ ಬೀಜ ಉಂಡೆವು
                        ದುಃಖದೊಂದು ಶೂಲೆಯಲ್ಲಿ
                                  ನೋವಗೊಂಡು ತಿಣುಕಿದೆ
                        ಸುಖದ ತೊಟ್ಟು ತೊಟ್ಟಿಗಾಗಿ
                                   ಹತ್ತು ಕಡೆಗೆ ಹಣಿಕಿದೆ.

ಕಕ್ಕನ ನೆರವಿನಿಂದ ಪುಣೆಯಲ್ಲಿ ಕನ್ನಡ ಎಮ್.ಏ. ಪದವಿಯನ್ನು ಪೂರೈಸಿದ ಬೇಂದ್ರೆಯವರು ಒಂದು ಒಳಸಂಚಿನಿಂದಾಗಿ ಮೂರನೆಯ ದರ್ಜೆಯಲ್ಲಿ ಪಾಸಾದರು. ಆದುದರಿಂದ ಕಾಲೇಜು ಉಪನ್ಯಾಸಕ ಪದವಿಯನ್ನು ಪಡೆಯಲು ಅನರ್ಹರಾದರು! ಹೀಗಾಗಿ ೧೯೪೧ರಲ್ಲಿ ಗದುಗಿನ ವಿದ್ಯಾದಾನ ಸಮಿತಿ ಹೈಸ್ಕೂಲಿಗೆ ಹೆಡ್ ಮಾಸ್ತರ ಎಂದು ಹೋದರು. ೧೯೪೨ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಶ್ ಸ್ಕೂಲಿಗೆ ಶಿಕ್ಷಕರಾಗಿ ಬಂದರು. ಇದನ್ನೇ ಅವರು ‘ಸುಖದ ತೊಟ್ಟು ತೊಟ್ಟಿಗಾಗಿ ಹತ್ತು ಕಡೆಗೆ ಹಣಿಕಿದೆ’ ಎಂದು ಬಣ್ಣಿಸುತ್ತಾರೆ!

ಈ ರೀತಿಯಲ್ಲಿ ಬೇಂದ್ರೆ ದಂಪತಿಗಳು ಗೃಹಸ್ಥಜೀವನದ ಮೊದಲೆರಡು ಪುರುಷಾರ್ಥಗಳಾದ ಧರ್ಮ ಹಾಗು ಅರ್ಥ ಇವುಗಳನ್ನು ಸಂಚಯಿಸುವುದರಲ್ಲಿ ವಿಫಲರಾದರು. ಈ ವೈಫಲ್ಯದಲ್ಲಿ ಗಂಡಹೆಂಡಿರೇ ಒಬ್ಬರೊಬ್ಬರಿಗೆ ಆಸರೆಯನ್ನು ಕೊಡಬೇಕಲ್ಲವೆ? ವರಕವಿಗಳು ಈ ವೈಪಲ್ಯವನ್ನು, ಈ ಪರಸ್ಪರ ಆಲಂಬನವನ್ನು ವರ್ಣಿಸುವುದು ಹೀಗೆ:

ಇಬ್ಬಗೆಗೂ ಸೋತೆವು
ಆಸರಾಗಿ ಆತೆವು
         ಬರುವದೇನೆ ನೆಪ್ಪಿಗೆ
          ಹೊರತಾದೆವು ಉಪ್ಪಿಗೆ.
ಉಪ್ಪೂ ಸಹ ಸಿಗಲಾರದಂತಹ ಸಂಕಟಕಾಲದ ವರ್ಣನೆ ಇದು.

ಬೇಂದ್ರೆಯವರ ನೆನಪುಗಳ ಮೂರನೆಯ ಕಾಲಘಟ್ಟ ಈಗ ಪ್ರಾರಂಭವಾಗುತ್ತದೆ:
೧೯೪೩ರಲ್ಲಿ ಬೇಂದ್ರೆಯವರು ಪುದುಚೆರಿಯಲ್ಲಿ ಶ್ರೀಮಾತಾ ಹಾಗು ಅರವಿಂದರ ದರ್ಶನವನ್ನು ಪಡೆದರು. ೧೯೪೪ರಲ್ಲಿ ಮಹಾರಾಷ್ಟ್ರವು (ಸೊಲ್ಲಾಪುರದ ಡಿ.ಏ.ವ್ಹಿ. ಕಾಲೇಜು) ಇವರಿಗೆ ಕನ್ನಡ ಪ್ರಾಧ್ಯಾಪಕ ಹುದ್ದೆ ಕೊಟ್ಟು ಆದರಿಸಿತು.

ಇದು ಸ್ವಾತಂತ್ರ್ಯ ಚಳುವಳಿಯ ಮಹಾಕಾಲವೂ ಅಹುದು.ದೇಶಪ್ರೇಮಿಗಳೆಲ್ಲರೂ ‘ಗಾಂಧೀ ಟೊಪ್ಪಿಗೆ’ಯನ್ನು ತೊಡುತ್ತಿದ್ದ ಕಾಲ. ಬೇಂದ್ರೆಯವರು ಅದನ್ನು ಬಣ್ಣಿಸುವುದು ಹೀಗೆ:

ಬರುವದೇನೆ ನೆಪ್ಪಿಗೆ
ನಾವು ಬಿದ್ದ ಟೊಪ್ಪಿಗೆ
        ತಲೆಯ ತೆರೆದು ಬಂದಿತು
         ಎಚ್ಚರೆಚ್ಚರೆಂದಿತು.

ಟೊಪ್ಪಿಗೆ ಹಾಕಿಸಿಕೊಳ್ಳುವುದು ಅಂದರೆ ಮೋಸಹೋಗುವುದು ಎಂದರ್ಥ. ಬದುಕು ಬೇಂದ್ರೆ ದಂಪತಿಗಳನ್ನು ಮೋಸಗೊಳಿಸಿತು. ಆದರೆ, ಬೇಂದ್ರೆಯವರು ಮತ್ತೊಂದು ಟೊಪ್ಪಿಗೆಯನ್ನೂ ನೆನೆಸಿಕೊಳ್ಳುತ್ತಿದ್ದಾರೆ. ಅದು ಗಾಂಧೀ ಟೊಪ್ಪಿಗೆ. ಗಾಂಧೀ ಟೊಪ್ಪಿಗೆಯು ನಾಡಿನ ಜನರನ್ನು ಜಾಗೃತಗೊಳಿಸಿದ ಟೊಪ್ಪಿಗೆ. ಸಾಮಾನ್ಯ ಜನರಲ್ಲಿಯೂ ದೇಶಪ್ರೇಮವನ್ನು ಬಿತ್ತಿದ ಟೊಪ್ಪಿಗೆ. ಅನೇಕ ಜನ ಯುವಕರು ರಣೋತ್ಸಾಹದಿಂದ ಸ್ವಾತಂತ್ರ್ಯಯುದ್ಧದಲ್ಲಿ ಪಾಲ್ಗೊಳ್ಳಲು ಪ್ರೇರಣೆ ಕೊಟ್ಟ ಟೊಪ್ಪಿಗೆ. ಇದನ್ನು ಬೇಂದ್ರೆಯವರು ಹೇಳುವುದು ಹೀಗೆ:
        ಯಾವ ಲೋಕದಿಂದಲಿಳಿದೊ
                                 ಹೊಸ ಸುಗಂಧ ಬೀರಿದೆ
                        ರಣೋತ್ಸಾಹ ಕಹಳೆಯಂತೆ
                                    ನವಚೇತನ ಊರಿದೆ
ಇದರ ಪರಿಣಾಮವು ಬೇಂದ್ರೆ ದಂಪತಿಗಳ ಮೇಲೆಯೂ ಆಯಿತು. ದಂಪತಿಗಳ ಸಂಬಂಧವು ಇನ್ನಷ್ಟು ಬಲವಾಯಿತು.         

 ಇಬ್ಬರನ್ನು ನೂಗಿಕೊಂಡು
  ಒಬ್ಬನಾಗಿ ಎದ್ದಿದೆ.
              ಚಿತ್ತವೆಲ್ಲಿ ಎನುವಾಗಲೆ
              ಕೊಡುವ ಮೊದಲೆ ಕದ್ದಿದೆ.

ಬೇಂದ್ರೆಯವರು ತಮ್ಮ ಮತ್ತೊಂದು ಕವನದಲ್ಲಿ ‘ಕೊಡುವುದೇನು, ಕೊಂಬುವುದೇನು? ಒಲವು, ಸ್ನೇಹ, ಪ್ರೇಮ!’ ಎಂದಿದ್ದಾರೆ. ಈ ಅನುರಾಗ ಭಾವನೆಯನ್ನು ನಮಗರಿವಾಗದಂತೆಯೇ ಪರಸ್ಪರ ಕೊಟ್ಟುಕೊಂಡಿರುತ್ತೇವೆ.

ತಮ್ಮ ಬದುಕಿನಲ್ಲಿ ಬೇಂದ್ರೆ ದಂಪತಿಗಳು ಅನೇಕ ಸುಖ, ದುಃಖಗಳನ್ನು ಅನುಭವಿಸಿದರು. ಈ ಅನುಭವಗಳಿಂದ ಅವರಿಗೆ ದಕ್ಕಿದ ಕಾಣ್ಕೆ ಏನು?

ಸಲ್ಲುವಲ್ಲಿ ಸಂದಿದೆ
ನಿಲ್ಲುವಲ್ಲಿ ನಿಂದಿದೆ
           ಬರುವದೇನೆ ನೆಪ್ಪಿಗೆ
             ಜೀವಜೀವದಪ್ಪಿಗೆ.

‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ’ ಎಂದಿದ್ದಾರೆ ಬಸವಣ್ಣನವರು. ನಮ್ಮ ಮನಸ್ಸನ್ನು ಮಾಗಿಸುವುದೇ ಭಗವಂತನ ಇಚ್ಛೆ. ಈ ನೋವು, ನಲಿವಿನ ಅನುಭವಗಳಿಂದ ಬೇಂದ್ರೆ ದಂಪತಿಗಳ ಮನಸ್ಸು ಮಾಗಿದೆ. ಕಳೆದು ಹೋದ ದಿನಗಳ ಬಗೆಗೆ ಅವರಿಗೆ ಯಾವುದೇ ಸಂತಾಪವಿಲ್ಲ, ಅವರ ‘ತಾಪ’ವೆಲ್ಲ ‘ತಪಸ್ಸಾ’ಗಿ ಪರಿವರ್ತಿತವಾಗಿದೆ. ಅಂತೆಯೇ ಅವರು ‘ಸಲ್ಲುವಲ್ಲಿ ಸಂದಿದೆ, ನಿಲ್ಲುವಲ್ಲಿ ನಿಂದಿದೆ’ ಎಂದು ಅರಿತಿದ್ದಾರೆ.

ದಾಂಪತ್ಯಜೀವನದ ಮೊದಲಲ್ಲಿ,‘ಎದೆಗೆ ಎದೆಯ ಅಪ್ಪುಗೆ’ ಎಂದು ಹಾಡಿದ ಬೇಂದ್ರೆಯವರು, ತಮ್ಮ ಹಾಡಿನ ಕೊನೆಯಲ್ಲಿ ‘ಜೀವಜೀವದಪ್ಪಿಗೆ’ ಎನ್ನುತ್ತಾರೆ. ಇದು ದಂಪತಿಗಳ ಕಾಮವು ಪ್ರೇಮವಾಗಿ ಪರಿವರ್ತಿತವಾಗಿದ್ದನ್ನು ಹಾಗು ಅವರ ದಾಂಪತ್ಯದ ಸಫಲತೆಯನ್ನು ಸೂಚಿಸುತ್ತದೆ.

ಏಕಾಂತದಲ್ಲಿ ಜರಗುವ ನೆನಪುಗಳ ಇಂತಹ ಸಿಂಹಾವಲೋಕನದ ಉದ್ದೇಶವೇನು? ಹಳೆಯದನ್ನು ನೆನೆಸಿಕೊಂಡಾಗಲೇ ಬದುಕಿನ ಅರ್ಥವು ಹೊಳೆಯುತ್ತದೆ.ಇದನ್ನೇ ಬೇಂದ್ರೆಯವರು ತಮ್ಮ ‘ಸಖೀಗೀತ’ದಲ್ಲಿ ಹೀಗೆ ಹೇಳಿದ್ದಾರೆ:

“ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿವೆ.”

ಬೇಂದ್ರೆಯವರು ಇರುಳತಾರೆಗಳ ಈ ಬೆಳಕನ್ನು, ಈ ಸರಸವಾದ ರಸವನ್ನು, ತಮಗೆ ಕಂಡ ಕಾಣ್ಕೆಯನ್ನು ಸಹೃದಯರೊಡನೆ ಹಂಚಿಕೊಳ್ಳಲು ಬಯಸುತ್ತಾರೆ. ಅವರು ಸಹೃದಯರನ್ನು ಆಹ್ವಾನಿಸುವುದು ಹೀಗೆ:

“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲು ಸಕ್ಕರೆಯಂಥ  ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.”

ವರಕವಿಯ ಈ ಕರೆಗೆ ಕನ್ನಡಿಗರ ಹೃದಯ ಕರಗಬಹುದೆ?

Thursday, December 13, 2012

ವಿಶ್ವೇಶ್ವರ ಭಟ್ಟರ ‘ಸತ್ಯ, ವಿಶ್ವಾಸಾರ್ಹತೆ ಹಾಗು ಧಿಮಾಕು’



೬-೧೨-೨೦೧೨ನೆಯ ದಿನಾಂಕದ ‘ಕನ್ನಡಪ್ರಭಾ’ ಪತ್ರಿಕೆಯಲ್ಲಿ ‘ಸತ್ಯ, ವಿಶ್ವಾಸಾರ್ಹತೆ, ಧಿಮಾಕು....ಹೀಗೊಂದು ಪದ ಮೆಲಕು’ ಎನ್ನುವ ಶೀರ್ಷಿಕೆಯನ್ನು ಹೊಂದಿದ ಲೇಖನವೊಂದು ಪ್ರಕಟವಾಗಿದೆ. ಲೇಖನವನ್ನು ಸಂಪಾದಕರಾದ ವಿಶ್ವೇಶ್ವರ ಭಟ್ಟರು ಬರೆದಿದ್ದಾರೆ. ಈ ಲೇಖನದಲ್ಲಿ ಕನ್ನಡ ಭಾಷೆಗೆ ಹಾಗು ಕನ್ನಡದ ಸರ್ವಕಾಲೀನ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾದ ಶಿವರಾಮ ಕಾರಂತರಿಗೆ ಅಪಚಾರವಾಗಿದೆ. ಇದರಿಂದಾಗಿ ನನ್ನ ಮನಸ್ಸಿಗೆ ವ್ಯಥೆಯಾದರೂ ಸಹ, ನಿಮ್ಮೆದುರಿಗೆ ಅದನ್ನಿಡುವ ಮೊದಲು ನಾನು ಸಾಕಷ್ಟು ಯೋಚಿಸಬೇಕಾಯಿತು. ೬ರಿಂದ ೧೨ನೆಯ ದಿನಾಂಕದವರೆಗೆ ಡೋಲಾಯಮಾನವಾಗಿದ್ದ ನನ್ನ ಮನಸ್ಸು ಕೊನೆಗೂ ಒಂದು ನಿರ್ಧಾರಕ್ಕೆ ಬಂದಿತು. ನಾನೀಗ ಸುಮ್ಮನಿದ್ದರೆ, ಅಶಂಕ ವ್ಯಕ್ತಿಗಳಿಗೆ ತಪ್ಪು ಮಾಹಿತಿ ರವಾನೆಯಾದೀತು, ಇದನ್ನು ತಪ್ಪಿಸಿ, ‘ನಿಜವಾದ ಸತ್ಯ’ವನ್ನು (!) ನಿಮ್ಮ ಗಮನಕ್ಕೆ ತರದೆ ಇರುವುದು ಕರ್ತವ್ಯಲೋಪವಾಗುತ್ತದೆ ಎನ್ನಿಸಿತು. ಆದುದರಿಂದ ಆ ಲೇಖನದ ಪ್ರಸ್ತುತ ಭಾಗವನ್ನು (ಮಾತ್ರ) ಇಲ್ಲಿ ಉದ್ಧರಿಸುತ್ತಿದ್ದೇನೆ. ಅದು ಹೀಗಿದೆ:

ಅಷ್ಟಕ್ಕೂ audacity ಎಂದರೆ ಏನು? ಡಿಕ್ಷನರಿ ಡಾಟ್ ಕಾಮ್‍ನಲ್ಲಿ ಈ ಪದಕ್ಕೆ ಈ ಅರ್ಥವನ್ನು ಕೊಟ್ಟಿದ್ದಾರೆ
audacity Boldness or daring especially with confidant or arrogant disregard for personal safety. ಧೈರ್ಯ ಅಥವಾ ಅದಮ್ಯ ವಿಶ್ವಾಸ ಅಥವಾ ಆತ್ಮರಕ್ಷಣೆಯನ್ನೂ ಲೆಕ್ಕಿಸದ ಗರ್ವ. ಮತ್ತೊಂದು ಅರ್ಥ Unusually harsh boldness with brashness. ಈ ಪದವನ್ನು ವಾಕ್ಯದಲ್ಲಿ ಹೀಗೆ ಬಳಸಲಾಗಿದೆ-- His student's audacity shocked the lecturer. ಕನ್ನಡದಲ್ಲಿ ಈ ಪದಕ್ಕೆ ಎದೆಗಾರಿಕೆ, ಪೊಗರು, ಧಿಮಾಕು ಎಂದೆಲ್ಲ ಅರ್ಥೈಸಬಹುದು. ತುಸು ಒರಟಾಗಿ ತಿಕಕೊಬ್ಬು ಎಂದೂ ಅರ್ಥೈಸಬಹುದು. ಎಲ್ಲರಿಗೂ ಈ audacity ಪದವನ್ನು ಬಳಸಲು ಆಗುವದಿಲ್ಲ. ಚೆನ್ನಾಗಿ ಓದಿಕೊಂಡ, ತನ್ನ ವಿದ್ವತ್ತಿನ ಬಗ್ಗೆ ಹೆಮ್ಮೆಯ ಜಂಭವನ್ನು ಪ್ರದರ್ಶಿಸುವ, ತುಸು ಗರ್ವಿಷ್ಠನಿಗೆ ಈ ಪದವನ್ನು ಬಳಸಬಹುದು. ವಿದ್ವತ್ತಿನ ಬೆಂಬಲ, ಬುದ್ಧಿಯ ಒಲವು ಗಳಿಸಿಕೊಂಡವ ತುಸು ಜಂಭದಿಂದ ನಡೆದುಕೊಂಡರೆ ಅದೇನು ಅಪರಾಧವಲ್ಲ, ಅಸಹನೀಯವೂ ಅಲ್ಲ. ಅಂಥ ಕೊಬ್ಬಿನ ವರ್ತನೆಯನ್ನು ಅನೇಕರು ಮೆಚ್ಚುತ್ತಾರೆ.

ಈ ಗುಣ ಶಿವರಾಮ ಕಾರಂತರಲ್ಲಿತ್ತು. ಅಧ್ಯಯನ, ಅನುಭವದ ಸಮಪಾಕದಲ್ಲಿ ಬೆಂದು ರೂಪುಗೊಂಡ ಅವರ ವ್ಯಕ್ತಿತ್ವದಲ್ಲಿ ಈ audacity ಚೆನ್ನಾಗಿ ಮನೆ ಮಾಡಿತ್ತು.ಹಿರಿಯ ಕವಿಯೊಬ್ಬರು ಶಿವರಾಮ ಕಾರಂತರನ್ನು ಭೇಟಿ ಮಾಡಿ, ತಮ್ಮ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಬೇಕೆಂದು ಕೋರಿದಾಗ, ನಿಮ್ಮ ಕವನ ಓದುವುದು ಹಾಗು ಕೇಳುವುದೆಂದರೆ ದೊಡ್ಡ ಶಿಕ್ಷೆ. ಅಂಥ ಭಾಗ್ಯವನ್ನು ನನಗೆ ಕರುಣಿಸಬೇಡಿ. ನಿಮ್ಮ ಕಾರ್ಯಕ್ರಮಕ್ಕೆ ಬಂದು ಟೈಮ್ ವೇಸ್ಟ್ ಮಾಡಲು ನನಗೆ ಮನಸ್ಸಿಲ್ಲ’ ಎಂದು ಖಂಡತುಂಡಾಗಿ ಹೇಳಿದ್ದರು. ಕಾರಂತರ ಈ  audacityಯನ್ನು , ಧಿಮಾಕಿನ ನಡೆಯನ್ನು ಯಾರೂ ತಪ್ಪಾಗಿ ಭಾವಿಸುತಿರಲಿಲ್ಲ.  .....................................................ಧಿಮಾಕನ್ನು ಸೊಕ್ಕು ಎಂದು ತಪ್ಪಾಗಿ ಭಾವಿಸುವವರು ಪಡಪೋಶಿಗಳು.

ಮೊದಲನೆಯದಾಗಿ audacityಗೆ ನಿಖರವಾದ ಕನ್ನಡ ಪದವೊಂದಿದೆ: ‘ಧಾರ್ಷ್ಟ್ಯ’.  (‘ಅದಟು’ ಎನ್ನುವ ಹಳೆಗನ್ನಡ ಪದ ಬಳಕೆಯಲ್ಲಿ ಇಲ್ಲ.) ‘ಎದೆಗಾರಿಕೆ’ ಎಂದು ಹೇಳಿದರೆ ತಪ್ಪಿಲ್ಲ. ಆದರೆ ‘ಪೊಗರು, ಧಿಮಾಕು’ ಎನ್ನುವುದು ಸರಿಯಾದ ಅರ್ಥವಲ್ಲ. ಅದು  ಅನರ್ಥ! ‘ತಿಕಕೊಬ್ಬು’ ಎನ್ನುವುದಂತೂ ಅಸಹ್ಯ. ಭಟ್ಟರು ಬರೆದಿರುವಂತೆ audacity ಅಥವಾ ಧಾರ್ಷ್ಟ್ಯವು ಚೆನ್ನಾಗಿ ಓದಿಕೊಂಡ, ಅದರ ಬಗೆಗೆ ಹೆಮ್ಮೆ ಇರುವಂಥ ವ್ಯಕ್ತಿಗೇ ಇರಬೇಕೆಂದಿಲ್ಲ. ತನಗೆ ಸರಿ ಅನ್ನಸಿದ್ದನ್ನು ಜನಪ್ರಿಯ ನಂಬುಗೆಯ ಅಥವಾ ಪಂಡಿತರ ಹಾಗು ಮಾನ್ಯರ ವಿರೋಧದ ನಡುವೆಯೂ ಹೇಳುವ ವ್ಯಕ್ತಿಗೆ ಈ ಗುಣ ಇರುತ್ತದೆ. ಶಿವರಾಮ ಕಾರಂತರಲ್ಲಿ ಈ ಗುಣ ಇದ್ದದ್ದು ನಿಜ. ಇದಕ್ಕೆ ಕಾರಣ ಅವರ ನೇರ ನಡೆ ಹಾಗು ನೇರ ನುಡಿ. ಆದರೆ ಭಟ್ಟರು ಕೊಟ್ಟ ಉದಾಹರಣೆ ತಪ್ಪು. ಹಿರಿಯ ಕವಿಗೆ ಕಾರಂತರು ಹೇಳುವ ಮಾತು ಅವರ ನಿಷ್ಠುರತೆಯನ್ನು ತೋರಿಸುವ ಉದಾಹರಣೆಯಾಗಿದೆ. ಇನ್ನು ಅವರ ಧಾರ್ಷ್ಟ್ಯವನ್ನು ತೋರಿಸುವ ಸರಿಯಾದ ಎರಡು ಉದಾಹರಣೆಗಳು ಹೀಗಿವೆ:

(೧)ಬೀದರ ನಗರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದಾಗ, ಆ ವರುಷ ಬರಗಾಲವಿದ್ದದ್ದರಿಂದ, ಸಮ್ಮೇಳನವನ್ನು ರದ್ದು ಪಡಿಸಬೇಕೆಂದು ಅನೇಕರು ಆಗ್ರಹಿಸಿದರು. ಆಗ ಶಿವರಾಮ ಕಾರಂತರು ಸಮ್ಮೇಳನವನ್ನು ಬೆಂಬಲಿಸಿ ಹೇಳಿದ ಮಾತು: ‘ಬರಗಾಲ ಇದೆಯೆಂದು ಜನ ಮಸಾಲೆ ದೋಸೆ ತಿನ್ನುವುದನ್ನು ಬಿಟ್ಟಿದ್ದಾರೆಯೆ?’

(೨)ಅಯೋಧ್ಯೆಯಲ್ಲಿ ಬಾಬರಿ ಮಸೀದೆಯನ್ನು ಕೆಡವಿದ ಘಟನೆ ಸಂಭವಿಸಿದ ಬಳಿಕ ಕರ್ನಾಟಕದ ಎಲ್ಲ ಸ್ವಘೋಷಿತ-ಜಾತ್ಯತೀತ ಬುದ್ಧಿಜೀವಿಗಳು ಈ ಘಟನೆಯನ್ನು ಖಂಡಿಸಿದರು. ಶಿವರಾಮ ಕಾರಂತರು ನಾಸ್ತಿಕರು. ದೇವರು ಹಾಗು ಧರ್ಮ ಇವೆರಡರಲ್ಲೂ ಅವರಿಗೆ ನಂಬಿಗೆ ಇರಲಿಲ್ಲ. ಹಾಗಿದ್ದರೂ ಸಹ ಅವರು ‘ಅದರಲ್ಲೇನು ತಪ್ಪಿದೆ?’ ಎಂದು ಕೇಳಿದರು. ಇಂತಹ ಹೇಳಿಕೆಯಿಂದ ತಮ್ಮ ಸಾಮಾಜಿಕ ಹಾಗು ಸಾಹಿತ್ಯಕ image ಹಾಳಾಗಬಹುದೆನ್ನುವ ಶಂಕೆ ಅವರಿಗೆ ಬರಲಿಲ್ಲವೆ? ಯಾವುದೇ ಸ್ವಾರ್ಥಕಾರಣವಿಲ್ಲದೆ, ತನಗೆ ಸರಿ ಎಂದು ಕಂಡದ್ದನ್ನೇ ತಾನು ಹೇಳುವೆ ಎನ್ನುವ ಈ ಗುಣಕ್ಕೆ ಧಾರ್ಷ್ಟ್ಯ ಎನ್ನಬೇಕು! ಈ ಗುಣಕ್ಕೆ ಯಾರಾದರೂ ‘ಪೊಗರು, ಧಿಮಾಕು ಅಥವಾ....(ಛೀ!) ತಿಕಕೊಬ್ಬು’ ಎನ್ನಬಹುದೆ?
ಪಡಪೋಶಿಗಳಷ್ಟೇ ಹಾಗೆ ಅಂದಾರು!

ಸಮಾಜದಲ್ಲಿ ಹರಡಿದ ಅಜ್ಞಾನದ ಬಗೆಗೆ ಶಿವರಾಮ ಕಾರಂತರಲ್ಲಿ ಬೇಸರವಿತ್ತು. ಡಂಭಾಚಾರದ ಬಗೆಗೆ ಅಸಹನೆ ಇತ್ತು. ಆದರೆ ತಮ್ಮ ನಂಬುಗೆಗೆ ವಿರುದ್ಧವಾದ ಅನ್ಯರ ನಂಬುಗೆಗಳನ್ನು ಆದರಿಸುವ ಗುಣವೂ ಅವರಲ್ಲಿ ಇತ್ತು. ಅವರ ಕಾದಂಬರಿಗಳಾದ ‘ಮರಳಿ ಮಣ್ಣಿಗೆ’ ಹಾಗು ‘ಮೂಕಜ್ಜಿಯ ಕನಸುಗಳು’ ಈ ಮಾತಿಗೆ ಸಾಕ್ಷಿಯಾಗಿವೆ. ಸಮಾಜದಲ್ಲಿ ಮಾನವೀಯತೆಯನ್ನು ನೆಲೆಗೊಳಿಸುವದೇ ಅವರ ಎಲ್ಲ ಕಾದಂಬರಿಗಳ ಉದ್ದೇಶವಾಗಿತ್ತು. ಆದುದರಿಂದಲೇ ಅವರ ಕಾದಂಬರಿಗಳಲ್ಲಿ ಪೊಳ್ಳು ಅಲಂಕಾರಿಕ ಶೈಲಿಯಿಲ್ಲ. ಸತ್ಯವನ್ನು ಅವರು ನೇರವಾಗಿ, ನಿರಾಡಂಬರವಾಗಿ ಹೇಳುತ್ತಿದ್ದರು. ಇಷ್ಟು ನಿರಾಲಂಕೃತರಾದ ಈ ವ್ಯಕ್ತಿ ಶ್ರೇಷ್ಠ ಕಲಾಜೀವಿಯೂ ಆಗಿದ್ದರು.

ನಾನು ಸುರತ್ಕಲ್ ಇಂಜನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದ ಅವಧಿಯಲ್ಲಿ, ಅಂದರೆ ಸುಮಾರು ೪೫ ವರ್ಷಗಳ ಹಿಂದಿನ ಘಟನೆಯೊಂದನ್ನು ಹೇಳುತ್ತೇನೆ. ಕಾಲೇಜಿಗೆ ರಜೆ ಬಂದಿತ್ತು.  ನಾನು ಹಾಗು ನನ್ನ ಗೆಳೆಯನೊಬ್ಬ ಶಿವರಾಮ ಕಾರಂತರನ್ನು ಭೇಟಿಯಾಗುವ ಉದ್ದೇಶದಿಂದ ಪುತ್ತೂರಿಗೆ ಓಡಿದೆವು. ಅವರ ಮನೆ ಹುಡುಕುತ್ತಾ ಹೋದೆವು. ಸುಮಾರು ೧೧ ಗಂಟೆಯ ಸಮಯ. ಕಾರಂತರು ಹೊರಗೆಲ್ಲೊ ಹೋಗಲೆಂದು ಬರುತ್ತಿದ್ದರು. ನಾವು ಅವರನ್ನು ಕಂಡು ನಮ್ಮ ಉದ್ದೇಶವನ್ನು ತಿಳಿಸಿದೆವು.

ಕಾರಂತರು ಪೂರ್ವನಿಯೋಜನವಿಲ್ಲದೇ ಯಾರನ್ನೂ ಭೆಟ್ಟಿಯಾಗರು ಎನ್ನುವ ಖ್ಯಾತಿ ಉಳ್ಳವರು. ಆದರೆ ಈ ಇಬ್ಬರು ಹುಡುಗರನ್ನು ಅವರು ಆದರದಿಂದಲೇ ಬರ ಮಾಡಿಕೊಂಡು ತಮ್ಮ ಮನೆಯೆಡೆಗೆ ಕರೆದೊಯ್ದರು. ಅವರು ಕೆಲಸ ಮಾಡುವ ಕೊಠಡಿ, ಅವರ ನಿವಾಸದಿಂದ ಸುಮಾರು ೫೦ ಅಡಿ ದೂರದಲ್ಲಿದೆ. ನಿವಾಸದ ಹೊರಗಡೆ ಅವರ ಹೆಂಡತಿ ಹಾಗು ಮಗಳು ಕೂತಿದ್ದರು. ಅಟ್ಟದ ಮೇಲಿರುವ ತಮ್ಮ ಕೊಠಡಿಗೆ ಹೋಗುವಾಗಲೇ, ತಮ್ಮ ಹೆಂಡತಿಯತ್ತ ನೋಡುತ್ತ, ಕಾರಂತರು ಎರಡು ಬೆರಳು ತೋರಿಸಿದರು.

ಕಾರಂತರ ಕೊಠಡಿಯಲ್ಲಿ ಹೆಚ್ಚಿಗೆ ವಸ್ತುಗಳು ಇರಲಿಲ್ಲ. ಇರುವ ಒಂದೆರಡು ವಸ್ತುಗಳೇ ಅವರ ಕಲಾಭಿಜ್ಞತೆಯನ್ನು ತೋರಿಸುತ್ತಿದ್ದವು. ಕರ್ನಾಟಕದ ಔದ್ಯೋಗಿಕ ಪ್ರಗತಿ ಹೇಗಾದೀತು ಎನ್ನುವ ನಮ್ಮ ಹುಚ್ಚು ಪ್ರಶ್ನೆಗೆ ಕಾರಂತರು ಸುಮಾರು ಒಂದು ಗಂಟೆಯವರೆಗೆ ತಿಳಿಸಿ ಹೇಳಿದರು. ಈ ನಡುವೆ ಅವರ ಮಗಳು ಎರಡು ಲೋಟಾ ಪಾನಕ ತಂದು ಕೊಟ್ಟಳು. ಕಾರಂತರು ಎರಡು ಬೆರಳು ತೋರಿಸಿದ್ದರ ಅರ್ಥ ಆಗ ಹೊಳೆಯಿತು.

ಶಿವರಾಮ ಕಾರಂತರ ಮಾನವೀಯ ಗುಣದ ಬಗೆಗೆ ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಒಂದು ಪುಟ್ಟ ಬರಹ ಪ್ರಕಟವಾಗಿತ್ತು. ಪುತ್ತೂರಿನ ರಸ್ತೆಯಲ್ಲಿ ಹೆಂಗಸೊಬ್ಬಳು ಭಾರವಾದ ಚೀಲವೊಂದನ್ನು ಹೊತ್ತುಕೊಂಡು ಒಯ್ಯುತ್ತಿರುವಾಗ, ಅದನ್ನು ಕಂಡ ಕಾರಂತರು, ಆ ಅಪರಿಚಿತ ಹೆಣ್ಣು ಮಗಳ ಕೈಯಿಂದ ಭಾರವನ್ನು ಕಸಿದುಕೊಂಡು, ಅವಳ ಜೊತೆಗೆ ನಡೆದರು ಎನ್ನುವುದು ಆ ಬರಹದ ಸಾರಾಂಶವಾಗಿತ್ತು.

ಇಂತಹ ಕಾರಂತರಲ್ಲಿಯ ಯಾವ ಗುಣವು ವಿಶ್ವೇಶ್ವರ ಭಟ್ಟರಿಗೆ ಪೊಗರು ಅಥವಾ (ಛೀ!) ತಿಕಕೊಬ್ಬಿನಂತೆ ಕಂಡಿರಬಹುದು?

ವಿಶ್ವೇಶ್ವರ ಭಟ್ಟರು ಕನ್ನಡದಲ್ಲಿ ಗಣ್ಯರಾದ ಪತ್ರಿಕಾಸಂಪಾದಕರು. ಅವರು ಬರೆದದ್ದನ್ನು ಅಮಾಯಕರು ನಿಶ್ಶಂಕರಾಗಿ ನಂಬುತ್ತಾರೆ. ಆದುದರಿಂದ ಪತ್ರಿಕೆಯ ಓದುಗರ (--ವಿಶೇಷತಃ ಎಳೆಯ ಓದುಗರ--) ಹಾದಿಯನ್ನು ತಪ್ಪಿಸಬಾರದೆನ್ನುವ ಎಚ್ಚರಿಕೆಯು ಸಂಪಾದಕರಿಗೆ ಇರಬೇಕು. ಪದಗಳ ಬಳಕೆಯ ಬಗೆಗೆ ಹಾಗು ವ್ಯಕ್ತಿಗಳ ಬಗೆಗೆ ಬರೆಯುವಾಗ ಅಪಚಾರವಾಗದಂತೆ ಜಾಗೃತರಾಗಿರಬೇಕು. ಇದು ಅವರಿಗೆ ನನ್ನ ಸವಿನಯ ಪ್ರಾರ್ಥನೆ.