Friday, December 13, 2013

ಅಪಾಯಕಾರಿ ಸ್ವೇಚ್ಛಾಚಾರ



ಸಮಾಜ ಹಾಗು ವ್ಯಕ್ತಿ ಇವುಗಳ ನಡುವಿನ ಸಂಬಂಧದ ಚರ್ಚೆ ಇಂದು ನಿನ್ನೆಯದಲ್ಲ. ವ್ಯಕ್ತಿಯ ಸ್ವಾತಂತ್ರ್ಯ ಅಪರಿಮಿತವಾದದ್ದೊ ಅಥವಾ ಸಮಾಜದ ಅಧಿಕಾರ ಹೆಚ್ಚಿನದೊ ಎನ್ನುವ ತಿಕ್ಕಾಟ ನಡದೇ ಇದೆ. ಸಮಾಜವನ್ನು ತಲ್ಲಣಗೊಳಿಸಿ, ಸಾಮಾಜಿಕ ಸಂಸ್ಥೆಗಳನ್ನು ಛಿದ್ರಗೊಳಿಸುವ ವ್ಯಕ್ತಿಸ್ವಾತಂತ್ರ್ಯವನ್ನು ಅಪಾಯಕಾರಿ ಸ್ವೇಚ್ಛಾಚಾರ ಎಂದೇ ಕರೆಯಬೇಕಾಗುವುದು.

ಸಂತಾನಾಭಿವೃದ್ಧಿಯೇ ರತಿಕ್ರೀಡೆಯ ನೈಸರ್ಗಿಕ ಉದ್ದೇಶ. ಇದು ಸೃಷ್ಟಿಯ ಎಲ್ಲ ಜೀವಿಗಳಿಗೂ ಅನ್ವಯಿಸುತ್ತದೆ. ಆದುದರಿಂದಲೇ ರತಿಕ್ರೀಡೆಯು ಪೂರಕಲಿಂಗಿಗಳಲ್ಲಿ ಮಾತ್ರ ನಡೆಯುತ್ತದೆ. ಇದಕ್ಕೆ ವಿರುದ್ಧವಾದ ರತಿಕ್ರೀಡೆಯು ಅನೈಸರ್ಗಿಕವಾದದ್ದು. ನಿಸರ್ಗದಲ್ಲಿರುವ ಕೆಳ ತರಗತಿಯ ಜೀವಿಗಳಲ್ಲಿ ಸಲಿಂಗರತಿಯನ್ನು ಕಾಣಲು ಸಾಧ್ಯವೇ ಇಲ್ಲ. ಮಾನವ ಪರಿಸರವು ಸಮತೋಲನದ ಬದುಕಿನಿಂದ ದೂರ ಸರಿದಂತೆಲ್ಲ, ಮನೋರೋಗಗಳು ಹೆಚ್ಚಾಗತೊಡಗಿದವು. ಸಲಿಂಗಕಾಮ, ಪಶುರತಿ, ಅತ್ಯಾಚಾರ ಇವೆಲ್ಲ ಮನೋರೋಗದ ಉದಾಹರಣೆಗಳೇ. ಆದುದರಿಂದಲೇ ನಮ್ಮ ಧರ್ಮಶಾಸ್ತ್ರಗಳು ಹಾಗು ನಮ್ಮ ವಿಧಾಯಕರು ಇವನ್ನೆಲ್ಲ ಅಪರಾಧಗಳು ಎಂದು ಸಾರಿದ್ದು.

ಪಾಶ್ಚಾತ್ಯ ದೇಶಗಳಲ್ಲಿ ಸಂಪತ್ತು ತುಂಬಿ ತುಳುಕಾಡುತ್ತಿದೆ ಮತ್ತು ಅಲ್ಲಿಯ ಸಾಮಾಜಿಕ ಕಟ್ಟುಪಾಡುಗಳು ಶಿಥಿಲವಾಗಿವೆ. ಅಲ್ಲಿಯ ನಿವಾಸಿಗಳು ತಮ್ಮ ಆಚಾರವಿಚಾರಗಳೇ ಶ್ರೇಷ್ಠ ಎಂದು ನಂಬಿದ್ದಾರೆ. ಆದುದರಿಂದ ತಮ್ಮಂತೆಯೇ ಇತರ ದೇಶಗಳೂ ಆಚರಿಸಬೇಕು ಎನ್ನುವ ಅಹಮ್ಮು ಅವರಿಗಿದೆ. ಅದಲ್ಲದೆ ತಮ್ಮ ದೇಶವಾಸಿಗಳು ಪರದೇಶಗಳಿಗೆ ಪ್ರವಾಸ ಕೈಗೊಂಡಾಗ, ಸಲಿಂಗಕಾಮದ ಅಪರಾಧದಲ್ಲಿ ಸಿಲುಕಬಾರದು ಎನ್ನುವ ದುರುದ್ದೇಶವೂ ಅವುಗಳಿಗೆ ಇದೆ. ಆದುದರಿಂದ ‘ಮಾನವ ಹಕ್ಕುಗಳು’ ಎನ್ನುವ ಸೋಗಿನಲ್ಲಿ ಇತರ ದೇಶಗಳ ಮೇಲೆ ಅವು ಅನೈಸರ್ಗಿಕ ರತಿಯನ್ನು ಹೇರುತ್ತಿವೆ. ಆದುದರಿಂದಲೇ ಬಡದೇಶಗಳಿಗೆ ನೆರವು ನೀಡುವ ಸಂದರ್ಭದಲ್ಲಿ ಈ ಶ್ರೀಮಂತ ಪಾಶ್ಚಾತ್ಯ ರಾಷ್ಟ್ರಗಳು  ‘ಮಾನವ ಹಕ್ಕುಗಳ ಪಾಲನೆ’ಯನ್ನು ಒಂದು ಶರತ್ತನ್ನಾಗಿ ಮಾಡುತ್ತಿವೆ. ಮಾನವ ಹಕ್ಕುಗಳ ಪಾಲನೆಯಲ್ಲಿ ಸಲಿಂಗಕಾಮವನ್ನೂ ಸಹ ಅವು ಸೇರಿಸಿವೆ. ಆಫ್ರಿಕಾ ಖಂಡದಲ್ಲಿರುವ ಮಾಲವಿ ಎನ್ನುವ ಬಡರಾಷ್ಟ್ರಕ್ಕೆ ಇಂಗ್ಲಂಡ ತಾನು ಕೊಡಮಾಡುತ್ತಿದ್ದ ೧೯ ಮಿಲಿಯನ್ ಪೌಂಡ್ ನೆರವನ್ನು ಇಂತಹ ಮಾನವ ಹಕ್ಕುಗಳ ನೆವದಲ್ಲಿಯೇ ನಿರಾಕರಿಸಿತು.

 ಇದೇ ಉದ್ದೇಶದಿಂದಲೇ ೧೯೭೩ನೆಯ ಇಸವಿಯಲ್ಲಿ  ಅಮೇರಿಕಾದ ಮನೋರೋಗ ವಿಜ್ಞಾನಿಗಳ ಮಂಡಳಿಯು ತನ್ನ ಕೈಪಿಡಿಯಿಂದ ಸಲಿಂಗಕಾಮವನ್ನು ತೆಗೆದು ಹಾಕಿತು. ಆದರೆ ಅಲ್ಲಿಯ ಅನೇಕ ಮನೋರೋಗವಿಜ್ಞಾನಿಗಳು ಗುಟ್ಟಿನಲ್ಲಿಯೇ ಆಗಲಿ, ಸಲಿಂಗಕಾಮವನ್ನು ಮನೋರೋಗವೆಂದೇ ಪರಿಗಣಿಸುತ್ತಾರೆ ಹಾಗು ಆ ರೋಗಕ್ಕೆ ಚಿಕಿತ್ಸೆ ನೀಡುತ್ತಾರೆ.

ಈ ಸಲಿಂಗಕಾಮಿಗಳಿಗೆ ‘ಅಲ್ಪಸಂಖ್ಯಾತರು’ ಎನ್ನುವ ನಾಮಕರಣ ಮಾಡಿ, ಆ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳು ಎಂದು ವಿಶ್ಲೇಷಿಸುವ ಬುದ್ಧಿವಂತಿಕೆಯೊಂದು ಪ್ರಾರಂಭವಾಗಿದೆ. ಸ್ವಾಮಿ, ನಿಜವಾದ ಅಲ್ಪಸಂಖ್ಯಾತರ ಒಳ್ಳೆಯ ವೈಶಿಷ್ಟ್ಯಗಳನ್ನು ಉಳಿಸಿ, ಬೆಳೆಯಿಸುವ ಉದ್ದೇಶದಿಂದ ಅವರಿಗೆ ವಿಶೇಷ ಸೌಲಭ್ಯ ನೀಡಬೇಕೆ ಹೊರತು, ದುರಾಚಾರಗಳನ್ನು ಹರಡುವದಕ್ಕಾಗಿ ಅಲ್ಲ. ಈ ತರ್ಕವನ್ನೇ ಮುಂದುವರೆಸಿದರೆ, ಕಳ್ಳರು, ಸುಳ್ಳರು, ಅತ್ಯಾಚಾರಿಗಳು, ಲಂಚಬಡಕರು ಎಲ್ಲರೂ ಅಲ್ಪಸಂಖ್ಯಾತರೇ ಆಗುವರು.  (ಹೌದೆ?)

ವ್ಯಕ್ತಿಸ್ವಾತಂತ್ರ್ಯದ ಪರಮಾಧಿಕಾರವನ್ನು ಸಾರುವ ಬುದ್ಧಿಜೀವಿಗಳು ಹೆರಯಿನ್ ಮೊದಲಾದ ಮಾದಕದ್ರವ್ಯಗಳ ಸೇವನೆಯನ್ನೂ ಸಹ ವ್ಯಕ್ತಿಸ್ವಾತಂತ್ರ್ಯ ಎಂದು ಹೇಳಬೇಕಲ್ಲವೆ?  ಪಾಶ್ಚಾತ್ಯ ರಾಷ್ಟ್ರಗಳಿಗೆ ಈ ಮಾದಕದ್ರವ್ಯಗಳ ಸೇವನೆ ಬೇಡವಾಗಿದೆ. ಅಲ್ಲಿ ಅವುಗಳನ್ನು ನಿಷೇಧಿಸಿದ ಕಾರಣದಿಂದಲೇ, ನಮ್ಮಲ್ಲಿಯ ಬುದ್ಧಿಜೀವಿಗಳು ಈ ವಿಷಯದಲ್ಲಿ ಬಾಯಿ ಮುಚ್ಚಿಕೊಂಡಿರುವದು.
ಅಂದರೆ ಅಲ್ಲಿ ಸಲ್ಲುವುದು ಮಾತ್ರ ಇಲ್ಲಿ ಸಲ್ಲುವುದು ಎಂದಂತಾಯಿತಲ್ಲವೆ?

ಈ ವಿಷಯದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ವಿರುದ್ಧ ಈ ‘ಅಲ್ಪಸಂಖ್ಯಾತ’ರಿಂದ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವು ರಾಜಕಾರಣಿಗಳೂ ಸಹ ಸರ್ವೋಚ್ಚ ನ್ಯಾಯಾಲಯವು ತಪ್ಪು ಮಾಡಿದೆ ಎನ್ನುವ ಹೇಳಿಕೆ ಕೊಟ್ಟು ‘ದೊಡ್ಡ ಮನುಷ್ಯ’ರಾಗುತ್ತಿದ್ದಾರೆ. ಸರ್ವೋಚ್ಚ ನ್ಯಾಯಾಲಯವು “ಸಲಿಂಗಕಾಮವನ್ನು ಸಕ್ರಮಗೊಳಿಸುವ ಶಾಸನವನ್ನು ಮಾಡುವ ಅಧಿಕಾರ ತನಗಿಲ್ಲ. ಅದನ್ನು ಲೋಕಸಭೆ ಮಾಡಬಹುದು” ಎಂದಷ್ಟೇ ಹೇಳಿದೆ. ಹಾಗಿದ್ದಾಗ, ‘ಅಲ್ಪಸಂಖ್ಯಾತ’ರು ಹಾಗು ಕೆಲವು ರಾಜಕಾರಣಿಗಳು (ಜನಪ್ರಿಯತೆಗಾಗಿ) ಸರ್ವೋಚ್ಚ ನ್ಯಾಯಾಲಯವನ್ನು ಹೀಗಳೆಯುತ್ತಿರುವುದು ತಪ್ಪಲ್ಲವೆ? 

ಕೊನೆಯದಾಗಿ ಹೇಳಬೇಕೆಂದರೆ, ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ, ಆರೋಗ್ಯವಂತರಾದ ಬಹುಸಂಖ್ಯಾತರು ಬೇಕಾಗುವರೇ ಹೊರತು ಅಲ್ಪಸಂಖ್ಯಾತರ ಸೋಗಿನ ಮನೋರೋಗಿಗಳಲ್ಲ. ಇಂತಹವರನ್ನು ಕರುಣೆಯಿಂದ ನೋಡಿ, ಇವರ ಮನೋರೋಗಕ್ಕೆ ಚಿಕಿತ್ಸೆ ನೀಡುವುದೇ ಒಳ್ಳೆಯದು.

Friday, December 6, 2013

ಇಲಸ್ಟ್ರೇಟೆಡ್ ವೀಕ್ಲಿ ಆ*ಫ್ ಇಂಡಿಯಾ……..ನೆನಪುಗಳು



ಭಾರತ ಆಂಗ್ಲಭಾಷಾ ಪತ್ರಿಕೆಗಳಲ್ಲಿ The Illustrated Weekly of Indiaಕ್ಕೆ ಮಹತ್ವದ ಸ್ಥಾನವಿದೆ. ೧೮೯೦ರಿಂದ Times of India ದಿನಪತ್ರಿಕೆಯ ಸಾಪ್ತಾಹಿಕ ಪುರವಣಿಯಾಗಿ ಪ್ರಕಟವಾಗುತ್ತಿದ್ದ ಈ ಪತ್ರಿಕೆ, The Illustrated Weekly of India ಎನ್ನುವ ಹೆಸರನ್ನು ಪಡೆದದ್ದು ೧೯೨೩ರಲ್ಲಿ. ೧೯೯೩ರಲ್ಲಿ ಈ ಪತ್ರಿಕೆ ಮುಚ್ಚಿತು. ಆ ಕಾಲದಲ್ಲಿ  ಇಂಗ್ಲಿಶ್ ಪತ್ರಿಕೆಗಳ ಸಂಖ್ಯೆಯೇ ವಿರಳವಾದದ್ದರಿಂದ ಈ ಪತ್ರಿಕೆ ಸುಮಾರಾಗಿ ಜನಪ್ರಿಯವಾಗಿತ್ತು ಹಾಗು ಇಂಗ್ಲಿಶ್ ಓದುಗರಿಗೆ ಅನಿವಾರ್ಯವಾದ ಪತ್ರಿಕೆಯಾಗಿತ್ತು. ಈ ಪತ್ರಿಕೆಯಲ್ಲಿ ಪ್ರಕಟವಾದ ಕೆಲ ಲೇಖನಗಳು ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಚೊತ್ತಿವೆ. ಅವುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ:

(೧) ಮುಂಬಯಿಯ ಕೊಳೆಗೇರಿಗಳ ನಿವಾಸಿಗಳನ್ನು ಸಂಘಟಿತ ಗುಂಡಾಗಳು ಶೋಷಿಸುವುದು ಹೊಸತೇನಲ್ಲ. ಪ್ರಧಾನಿ ಇಂದಿರಾ ಗಾಂಧಿಯವರು  ಫಕರುದ್ದೀನ ಅಲಿ ಅಹಮದ ಇವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದಾಗಲೂ ಸಹ (೧೯೭೪- ೧೯೭೭) ಈ ಶೋಷಣೆ ನಡೆಯುತ್ತಲೇ ಇತ್ತು. ಅದಕ್ಕಾಗಿ ಯಾರನ್ನೂ ನಾನು ದೂರುತ್ತಿಲ್ಲ. ಆದರೆ ಈ ಅವಧಿಯಲ್ಲಿ ಸಾಮಾಜಿಕ ಒಳಿತಿಗೆ ಬದ್ಧಳಾದ ಓರ್ವ ಅಮಾಯಕ ಯುವತಿಯ ಬರ್ಬರ ಹತ್ಯೆಯ ಬಗೆಗೆ ಓದಿದ ಬಳಿಕ ನನ್ನ ಜೀವ ಹಿಂಡಿ ಹೋಯಿತು. ಈ ಪ್ರಕರಣದಲ್ಲಿ ನಾವು ಯಾರನ್ನು ದೂರಬೇಕು ಎನ್ನುವುದೇ ತಿಳಿಯುವದಿಲ್ಲ.  The Illustrated Weekly of Indiaದಲ್ಲಿ ಪ್ರಕಟವಾದ ಆ ಪ್ರಕರಣ ಹೀಗಿದೆ:

ಸಮಾಜಶಾಸ್ತ್ರ ವಿಷಯದಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ಓರ್ವ ಹುಡುಗಿಗೆ ತನ್ನ ಅಧ್ಯಯನದ ಕಾರಣಗಳಿಂದಾಗಿ ಸಂಘಟಿತ ಗುಂಡಾಗಳ ಬಗೆಗೆ ಒಂದಿಷ್ಟು ಮಾಹಿತಿ ದೊರೆಯುತ್ತದೆ.  ದೊರೆತ ಮಾಹಿತಿಯನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ಸುಮ್ಮನೆ ಕೂತಿದ್ದರೆ ಈ ಹುಡುಗಿ ಜಾಣಳಾಗುತ್ತಿದ್ದಳು. ಆದರೆ ಈ ದಡ್ಡ ಹುಡುಗಿ ಭಾರತದ ರಾಷ್ಟ್ರಪತಿಗಳಿಗೆ ಒಂದು ‘ರಹಸ್ಯ ಪತ್ರ’ವನ್ನು ಬರೆಯುತ್ತಾಳೆ. ಮುಂದೆ ಏನಾಯಿತು, ಅಂತೀರಾ? ಆ ಗುಂಡಾಗಳನ್ನು ಬಂಧಿಸಲು ರಾಷ್ಟ್ರಪತಿಯವರು ಆದೇಶ ಕಳುಹಿಸಿದರೆ? ಆ ಗುಂಡಾ ಧಂಧೆ ಬಂದಾಗಿ ಹೋಯಿತೆ? No… ಈ ‘ರಹಸ್ಯ ಪತ್ರ’ ಬರೆದ ಕೆಲವೇ ದಿನಗಳಲ್ಲಿ ಆ ಹುಡುಗಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಯಿತು. ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಈ ಹುಡುಗಿಯ ಮೊದಲಿನ ಫೋಟೋ ಹಾಗು ಚಿತ್ರಹಿಂಸೆಯ ನಂತರದ ಫೋಟೋವನ್ನು ಅಕ್ಕಪಕ್ಕದಲ್ಲಿ ಪ್ರಕಟಿಸಲಾಗಿತ್ತು. ಕರಳು ಹಿಂಡುವ ದೃಶ್ಯ.

ವಿಷಯ ಅದಲ್ಲ. ‘ರಹಸ್ಯ ಪತ್ರ’ದಲ್ಲಿದ್ದ ಮಾಹಿತಿ ಗುಂಡಾಗಳಿಗೆ ತಕ್ಷಣದಲ್ಲಿ ತಿಳಿದದ್ದು ಹೇಗೆ? ರಾಷ್ಟ್ರಪತಿಯವರ ಅಧಿಕಾರಿಗಳು ಇದನ್ನು ಬಯಲು ಮಾಡಿದರೆ? ಹಾಗಿದ್ದರೆ, ರಾಷ್ಟ್ರಪತಿಗಳು ಆ ನೀಚರ ಮೇಲೆ ಕ್ರಮ ಕೈಗೊಂಡರೆ? ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಇದರ ಬಗೆಗೆ ಏನೂ ಮಾಹಿತಿ ಇರಲಿಲ್ಲ. ಆ ಎರಡು ಫೋಟೋಗಳನ್ನು ನೆನಸಿಕೊಂಡಾಗ, ಈಗಲೂ ನನಗೆ ಕಣ್ಣೀರು ಬರುವುದು ನಿಂತಿಲ್ಲ.

(೨) ಭಾರತವು ಧರ್ಮನಿರಪೇಕ್ಷ ದೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ
            (ಅ) ಭಾರತೀಯ ಶಾಸನಗಳು ಧರ್ಮನಿರಪೇಕ್ಷವಾಗಿವೆ.
            (ಆ) ಭಾರತೀಯ ನ್ಯಾಯದಾನವು ಧರ್ಮನಿರಪೇಕ್ಷವಾಗಿದೆ.
ಎಲ್ಲಾ ದೇಶಗಳಲ್ಲಿ ನಾವು ಇಂತಹ ಸ್ಥಿತಿಯನ್ನು ಕಾಣುವದಿಲ್ಲ. ಇಲಸ್ಟ್ರೇಟೆಡ್ ವೀಕ್ಲಿಯು ಪ್ರಕಟಿಸಿದ ಒಂದು ಲೇಖನವು ಕೊಲ್ಲಿ ದೇಶಗಳ ಶಾಸನ ಹಾಗು ನ್ಯಾಯದಾನ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ.

ಕೊಲ್ಲಿ ದೇಶದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಕಾರ್ಮಿಕನ ಮೇಲೆ, ಅಕಸ್ಮಾತ್ತಾಗಿ ವಾಹನವೊಂದು ಚಲಿಸಿ, ಆ ಕಾರ್ಮಿಕ ಸಾವನ್ನಪ್ಪುತ್ತಾನೆ. ನ್ಯಾಯಾಲಯವು “ಈತ ಭಾರತೀಯನಾದುದರಿಂದ ಇಷ್ಟೇ ಪರಿಹಾರ ಸಾಕು” ಎನ್ನುವ ತೀರ್ಪನ್ನು ನೀಡುತ್ತದೆ. ಅಷ್ಟರಲ್ಲಿಯೇ ಈತನು ಹಿಂದು ಧರ್ಮದವನು ಎನ್ನುವುದು ಗೊತ್ತಾದಾಗ, ಪರಿಹಾರದಲ್ಲಿ ಮತ್ತೆ ಒಂದು ಮೂರಾಂಶವನ್ನು ಕಡಿತಗೊಳಿಸಲಾಗುತ್ತದೆ.

ಪುಣ್ಯಕ್ಕೆ ನಮ್ಮಲ್ಲಿ ಹಾಗಿಲ್ಲ. ಭಾರತೀಯ ನ್ಯಾಯವ್ಯವಸ್ಥೆಯು ದೇಶ ಹಾಗು ಧರ್ಮಗಳ ಆಧಾರದ ಮೇಲೆ ಭೇದವನ್ನು ಮಾಡುವುದಿಲ್ಲ. ಇನ್ನು ಮುಂದೆಯೂ ಸಹ ಅದು ಹಾಗೆ ಉಳಿದೀತೆ? ಈ ಸಂದೇಹಕ್ಕೆ ಕಾರಣವೇನೆಂದರೆ ಕೇಂದ್ರಸರಕಾರವು ಪ್ರಸ್ತಾವಿಸುತ್ತಿರುವ ‘ಜಾತೀಯ ಹಿಂಸಾಚಾರದ ಮಸೂದೆ.’ ಬಹುಶಃ ಇದು ಚುನಾವಣಾ-ಡೊಂಬರಾಟ ಇರಬಹುದು ಎಂದುಕೊಳ್ಳೋಣ. ಒಂದು ವೇಳೆ ಇದು ಶಾಸನವಾದರೆ, ನಮ್ಮ ಜಾತ್ಯತೀತತೆಯು ಅಲ್ಲಿಗೆ ಶಾಸನಬದ್ಧವಾಗಿ ಅಂತ್ಯಗೊಂಡಂತೆ!

(೩) ಯೇಶು ಕ್ರಿಸ್ತನ ಜನನದ ಬಗೆಗೆ ‘ವೀಕ್ಲಿ’ಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಕೆಲವು ಸಂಶೋಧಕರು ಯೇಶು ಯಹೂದಿ ವೇಶ್ಯೆಯೊಬ್ಬಳಿಗೆ ರೋಮನ್ ನಾವಿಕನಲ್ಲಿ ಹುಟ್ಟಿದ ಮಗ ಎಂದು ಬರೆದದ್ದನ್ನು ಅಲ್ಲಿ ಪ್ರಸ್ತಾವಿಸಲಾಗಿತ್ತು. ಆ ಲೇಖನದ ವಿರುದ್ಧ ಭಾರತದಲ್ಲೇ ಅಗಲಿ, ಯುರೋಪ ಅಥವಾ ಅಮೆರಿಕಾದಲ್ಲಿಯೇ ಆಗಲಿ, ಆ ಸಮಯದಲ್ಲಿ ಯಾವುದೇ ಪ್ರತಿಭಟನೆ ಆಗಲಿಲ್ಲ. ಈಗಲಾದರೋ ಎಂತೆಂಥಾ ಕಾರಣಗಳಿಗಾಗಿ ನಮ್ಮ ಜನ ಪ್ರತಿಭಟನೆ ಮಾಡುತ್ತಿದ್ದಾರೆ! ಬಂಜಗೆರೆಯವರು ಬಸವಣ್ಣನ ಬಗೆಗೆ ಬರೆದ ಸಂಶೋಧನಾ ಲೇಖನದ ವಿರುದ್ಧ, ಗಣಪತಿಯ ಅನಾರ್ಯತ್ವದ ವಿರುದ್ಧ, ಡ್ಯಾನ್ ಬ್ರೌನನ ‘ಡಾ ವಿಂಚಿ ಕೋಡ್’ ಕಾದಂಬರಿಯ ವಿರುದ್ಧ….!

ಹದಿನೆಂಟನೆಯ ಶತಮಾನದಲ್ಲಿ ಬದುಕಿದ್ದ ಫ್ರೆಂಚ ಸಾಹಿತಿ ವೋಲ್ಟೇರನ ವಿಚಾರವನ್ನು ಪ್ರಜ್ಞಾವಂತ ಭಾರತೀಯರೇ (ಜ್ಞಾನಪೀಠಿಗಳನ್ನು ಒಳಗೊಂಡು) ಮರೆಯುತ್ತಿರುವುದು ಸೋಜಿಗದ ಸಂಗತಿ: “ನೀನು ಹೇಳುವುದನ್ನು ನಾನು ಒಪ್ಪುವುದಿಲ್ಲ. ಆದರೆ ಹಾಗೆ ಹೇಳಲು ನಿನಗಿರುವ ಸ್ವಾತಂತ್ರ್ಯವನ್ನು ನನ್ನ ಜೀವ ಕೊಟ್ಟಾದರೂ ರಕ್ಷಿಸುತ್ತೇನೆ.”
ಈಗಿನ ನಮ್ಮ ಭಾರತೀಯ ‘ನಾಗರಿಕರು’ ವಿರೋಧಿಗಳ ಜೀವ ತೆಗೆಯುವುದನ್ನೇ ಇಷ್ಟಪಡುತ್ತಾರೆ! (ಗಿರೀಶ ಕಾರ್ನಾಡರು ಮುಂಬಯಿಯ ಅಂತರರಾಷ್ಟ್ರೀಯ ಸಾಹಿತ್ಯಮೇಳದಲ್ಲಿ ಸಲ್ಮಾನ ರಶ್ದಿಯ ವಿರುದ್ಧ ಕೆಂಡ ಕಾರಿದ್ದನ್ನು ನೆನಪಿಸಿಕೊಳ್ಳಿರಿ.)

ಈ ಸಂದರ್ಭದಲ್ಲಿ ನಮ್ಮ ಸಂವೇದನೆಗಳು ಸೀಮಿತವಾಗುತ್ತಿರುವುದನ್ನೂ ಸಹ ನಾವು ಲಕ್ಷಿಸಬೇಕು. ಯಾವುದೋ ಒಂದು ಧರ್ಮದ ಪ್ರಾರ್ಥನಾ ಮಂದಿರವನ್ನು ಕಿಡಿಗೇಡಿಗಳು ಹಾನಿಗೊಳಿಸಿದಾಗ, ಕೇವಲ ಆ ಸಮುದಾಯದವರಷ್ಟೇ ಪ್ರತಿಭಟನಾ ಮೆರವಣಿಗೆಯನ್ನು ಮಾಡುತ್ತಾರೆ. ಹೀಗೇಕೆ? ಇಂತಹ ದುರುಳ ಕೃತ್ಯವು ಇತರರಲ್ಲಿ ಅಸಮಾಧಾನವನ್ನು ಏಕೆ ಹುಟ್ಟಿಸಬಾರದು? ನಾಗರಿಕರೆನ್ನಿಸಿಕೊಳ್ಳುವವರೆಲ್ಲ ಒಟ್ಟಾಗಿ ಏಕೆ ಪ್ರತಿಭಟಿಸಬಾರದು?

(೪) ಇಲಸ್ಟ್ರೇಟೆಡ್ ವೀಕ್ಲಿಯು ಪ್ರಕಟಿಸಿದ ಒಂದು ನಗೆಹನಿಯು ಅನೇಕ ವರ್ಷಗಳ ಬಳಿಕ ವಿಪರ್ಯಾಸವಾಗಿ ರೂಪಾಂತರಗೊಂಡಿದ್ದು ಆಶ್ಚರ್ಯದ ಸಂಗತಿಯಾಗಿದೆ. ಆ ನಗೆಹನಿ ಹೀಗಿದೆ:
ರಶಿಯಾದಲ್ಲಿ ಮಹಾಕ್ರಾಂತಿ ಜರುಗಿದ ನಂತರ ಕಮ್ಯುನಿಸ್ಟ ಅಧಿಕಾರಿಯೊಬ್ಬನು ಓರ್ವ ಪ್ರಜೆಗೆ ಪ್ರಶ್ನೆ ಕೇಳುತ್ತಿದ್ದಾನೆ.
ಅಧಿಕಾರಿ: ರಶಿಯದ ಮಹಾಕ್ರಾಂತಿ ಜರುಗುವ ಮೊದಲು ನೀನು ಯಾವ ಊರಿನಲ್ಲಿದ್ದಿ?
ಪ್ರಜೆ: ಸೇಂಟ ಪೀಟರ್ಸಬರ್ಗನಲ್ಲಿದ್ದೆ, ಸ್ವಾಮಿ.
ಅಧಿಕಾರಿ: ಕ್ರಾಂತಿ ಜರಗುವ ಅವಧಿಯಲ್ಲಿ?
ಪ್ರಜೆ: ಪೆಟ್ರೋಗ್ರ್ಯಾಡ್‍ನಲ್ಲಿ, ಸ್ವಾಮಿ.
ಅಧಿಕಾರಿ: ಕ್ರಾಂತಿಯ ನಂತರ?
ಪ್ರಜೆ: ಲೆನಿನ್‍ಗ್ರ್ಯಾಡ್‍ನಲ್ಲಿ ಇದ್ದೇನೆ, ಸ್ವಾಮಿ.
ಅಧಿಕಾರಿ: ಈ ಮೂರು ಶಹರಗಳಲ್ಲಿ ನಿನಗೆ ಅತಿ ಮೆಚ್ಚಿಗೆಯಾಗುವ ಊರು ಯಾವುದು?
ಪ್ರಜೆ: ಸೇಂಟ ಪೀಟರ್ಸಬರ್ಗ, ಸ್ವಾಮಿ!
(ಟಿಪ್ಪಣಿ: ಸೇಂಟ ಪೀಟರ್ಸಬರ್ಗ ಎನ್ನುವ ಪಟ್ಟಣದ ಹೆಸರನ್ನು ೧೯೧೪ರಲ್ಲಿ ಪೆಟ್ರೋಗ್ರ್ಯಾಡ್‍ ಎಂದು ಬದಲಾಯಿಸಲಾಯಿತು. ೧೯೨೪ರಲ್ಲಿ ಲೆನಿನ್‍ಗ್ರ್ಯಾಡ್‍ ಎಂದು ಬದಲಾಯಿಸಲಾಯಿತು. !)

ವೀಕ್ಲಿ ಈ ನಗೆಹನಿಯನ್ನು ಪ್ರಕಟಿಸಿ ಸುಮಾರು ೨೦-೨೫ ವರ್ಷಗಳ ನಂತರ ರಶಿಯಾ ದೇಶ glasnost ಹಾಗು perestroikaದ ಪರಿಣಾಮದಿಂದ ಒಡೆದು ತುಂಡಾಯಿತು. ಲೆನಿನ್‍ಗ್ರ್ಯಾಡ್ ಎನ್ನುವ ಹೆಸರನ್ನು ೧೯೯೧ರಲ್ಲಿ ಮತ್ತೊಮ್ಮೆ ಸೇಂಟ ಪೀಟರ್ಸಬರ್ಗ ಎಂದು ಬದಲಾಯಿಸಲಾಯಿತು.
ಎಂತಹ ವಿಪರ್ಯಾಸ!