Monday, September 4, 2017

ಚಂದನ ಧಾರಾವಾಹಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮ.......ಮೋದ--ಖೇದ



ಮಿತ್ರರೆ,
ದೂರದರ್ಶನದ ‘ಚಂದನ’ ವಾಹಿನಿಯಲ್ಲಿ ‘ಥಟ್ ಅಂತ ಹೇಳಿ’ ಎನ್ನುವ ರಸಪ್ರಶ್ನೆಯ ಕಾರ್ಯಕ್ರಮವನ್ನು ನೀವು ಕೇಳಿರಬಹುದು. ರಾತ್ರಿ ೯:೩೦ರಿಂದ ೧೦ ಗಂಟೆಯವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮವು ನನ್ನ ನೆಚ್ಚಿನ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ನಿರ್ವಾಹಕರಾದ ಡಾ^| ಸೋಮೇಶ್ವರರು ಸಹ ನನ್ನ ನೆಚ್ಚಿನ ನಿರ್ವಾಹಕರು. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯವ್ಯಕ್ತಿಗಳ ಸಂದರ್ಶನವನ್ನೂ ಸಹ ಜರುಗಿಸಲಾಗಿದೆ. ನಮ್ಮೆಲ್ಲರ ಮೆಚ್ಚಿನ ಬ್ಲಾ^ಗರ್ ಶ್ರೀ ಪ್ರಕಾಶ ಹೆಗಡೆಯವರೂ ಸಹ ಈ ಸಂದರ್ಶನ-ಕಾರ್ಯಕ್ರಮದಲ್ಲಿ ಒಮ್ಮೆ ಭಾಗಿಯಾಗಿದ್ದರು.

ಈ ಕಾರ್ಯಕ್ರಮವನ್ನು ತಪ್ಪದೆ ಆಲಿಸಿ ಆನಂದಿಸುವ ನಾನು ಕೆಲವೊಮ್ಮೆ ಖೇದವನ್ನೂ ಪಟ್ಟಿದ್ದೇನೆ. ಅಂತಹ ನೋವಿನ ವಿಷಯವನ್ನು ನಿಮ್ಮೆದುರಿಗೆ ಇಡುವುದು ನನಗೆ ಅನಿವಾರ್ಯವಾಗಿದೆ. ‘ಥಟ್ ಅಂತ ಹೇಳಿ’ ರಸಪ್ರಶ್ನೆಯಲ್ಲಿ ತಪ್ಪುಗಳು ನುಸಳಬಾರದು. ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವದರಿಂದ  ಹಾಗು ಅನೇಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಕೇಳುಗರಾಗಿರುವದರಿಂದ, ಅತ್ಯಂತ ಸಣ್ಣ ತಪ್ಪೂ ಸಹ ರಸಪ್ರಶ್ನೆಗಳ ಉತ್ತರದಲ್ಲಿ ಬರಬಾರದು, ಅಲ್ಲವೆ?

ಆದರೆ, ತಪ್ಪು ಮಾಹಿತಿಗಳು, ತಪ್ಪು ಭಾಷಾಪ್ರಯೋಗಗಳು ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಧಾರಾಳವಾಗಿ ಸೇರಿಕೊಳ್ಳುತ್ತಿರುವದರಿಂದ, ಇಂತಹ ತಪ್ಪುಗಳನ್ನು ಕಾರ್ಯಕ್ರಮದ ಯೋಜಕರ ಎದುರಿಗೆ ತರಲೇಬೇಕು. ಚಂದನವಾಹಿನಿಗೆ ನೇರವಾಗಿ ಬರೆದರೆ, ಆ ಕಾಗದವು ಎಲ್ಲಿ ಹೋಗಿ ಬೀಳುತ್ತದೆಯೋ ತಿಳಿಯದು. ಆದುದರಿಂದ ಈ ತಪ್ಪುಗಳನ್ನು ಸಾರ್ವಜನಿಕ ನಜರಿನಲ್ಲಿ ತರುವ ಉದ್ದೇಶದಿಂದ ಇಲ್ಲಿ ಪ್ರಸ್ತಾವಿಸುತ್ತಿದ್ದೇನೆ.

(ಅ) ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಕೇಳಲಾದ ತಪ್ಪು ಪ್ರಶ್ನೆಗಳು ಅಥವಾ ತಪ್ಪು ಉತ್ತರಗಳು ಹೀಗಿವೆ:

(೧) ದಿನಾಂಕ ೧೬/೮/೧೭ರಂದು ಕೇಳಲಾದ ಪ್ರಶ್ನೆ (ಕ್ರಮಾಂಕ ೨):
ಭಾರತವು ಬ್ರಿಟಿಶ್ ಸಾಮ್ರಾಜ್ಯದ ವಸಾಹತು ಆಗಿದ್ದು ಎಲ್ಲಿಯವರೆಗೆ?
ನಿರ್ವಾಹಕರು ಕೊಟ್ಟ ಉತ್ತರ: ದಿನಾಂಕ ೨೬-೧-೧೯೫೦ರವರೆಗೆ.

ನನ್ನ ತಕರಾರು: ನಿರ್ವಾಹಕರು ಹೀಗೆ ಕೇಳಬೇಕಾಗಿತ್ತು: ‘ಭಾರತವು ಬ್ರಿಟಿಶ್ ಸಾಮ್ರಾಜ್ಯದ ಸ್ವಯಮಾಡಳಿತ ಪ್ರದೇಶವಾಗಿದ್ದು ಎಲ್ಲಿಯವರೆಗೆ?’

ವಸಾಹತು ಅಂದರೆ colony. ‘‘‘ಯಾವುದೇ ಒಂದು ಸಾಮ್ರಾಜ್ಯದ ಸ್ವಯಮಾಡಳಿತ ಪ್ರದೇಶ ಅಂದರೆ dominion.
ಬ್ರಿಟಿಶರು India Independence Actನಲ್ಲಿ ಭಾರತಕ್ಕೆ Commonwealthದ dominion ರಾಷ್ಟ್ರವನ್ನಾಗಿ ಮಾಡಿದ ಠರಾವನ್ನು ಅಂಗೀಕರಿಸಿದ್ದಾರೆ.  ಭಾರತವು ೧೫-೮-೧೯೪೭ರಂದು ಬ್ರಿಟಿಶ್ ವಹಾಸತುಸ್ಥಿತಿಯಿಂದ ಮುಕ್ತವಾಯಿತು; ಹಾಗು ೨೬/೧/೧೯೫೦ರಂದು ಭಾರತವು ತನ್ನ ಸಂವಿಧಾನದ ಮೇರೆಗೆ dominion statusನಿಂದ ಮುಕ್ತವಾಗಿ, ಸಂಪೂರ್ಣ ಸ್ವತಂತ್ರ, ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು.

(dominion ಪದದ ಅರ್ಥವನ್ನು ಗೂಗಲ್ ಆಂಗ್ಲ ಪದಕೋಶದಲ್ಲಿ ಹೀಗೆ ಕೊಡಲಾಗಿದೆ:
a territory constituting a self-governing commonwealth and being one of a number of such territories united in a community of nations, or empire.
ಆದುದರಿಂದ ವಸಾಹತು ಪದದ ಬದಲಾಗಿಬ್ರಿಟಿಶ್ ಸಾಮ್ರಾಜ್ಯದ ಸ್ವಯಮಾಡಳಿತ ಪ್ರದೇಶಎಂದು ಹೇಳುವುದು ಸಮರ್ಪಕವಾಗುತ್ತದೆ. ೨೬--೧೯೫೦ರ ಬಳಿಕ, ಭಾರತವು commonwealthದಲ್ಲಿ ಒಂದು ಗಣರಾಜ್ಯವಾಗಿ ಉಳಿದುಕೊಂಡಿತೇ ಹೊರತು dominion ಆಗಿ ಅಲ್ಲ.
ಆದುದರಿಂದ ಪ್ರಶ್ನೆಯನ್ನಾದರೂ ಬದಲಾಯಿಸಬೇಕು ಅಥವಾ ಉತ್ತರವನ್ನಾದರೂ ಬದಲಾಯಿಸಬೇಕು.

(೨) ಇದೇ ದಿನಾಂಕದಂದು ಕೇಳಲಾದ ಮತ್ತೊಂದು ಪ್ರಶ್ನೆ: ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿ:
ನಿರ್ವಾಹಕರ ಉತ್ತರ: ಗೋಪಾಲಕೃಷ್ಣ ಗೋಖಲೆ.

ನನ್ನ ತಕರಾರು: ಉತ್ತರವೇನೊ ಸರಿಯಾಗಿದೆ. ಆದರೆ ನಿರ್ವಾಹಕರು ತಮ್ಮ ಹೆಚ್ಚಿನ ವಿವರಣೆಯಲ್ಲಿ ಇವರನ್ನುತೀವ್ರಗಾಮಿ  (extremist) ಎಂದು ಕರೆದಿದ್ದು ಆಶ್ಚರ್ಯಕರವಾಗಿದೆ. ಗೋಖಲೆಯವರು ಮಂದಗಾಮಿ(moderate) ಧುರೀಣರಾಗಿದ್ದರು. ಇತರ ಮಂದಗಾಮಿ ಧುರೀಣರೆಂದರೆ ದಾದಾಭಾಯಿ ನವರೋಜಿ, ಫಿರೋಝ ಶಾಹ ಮೆಹತಾ, ಪಂಡಿತ ಮದನಮೋಹನ ಮಾಲವೀಯ ಮೊದಲಾದವರು.
ತೀವ್ರಗಾಮಿ ಧುರೀಣರೆಂದರೆ: ‘ಲಾಲ-ಬಾಲ-ಪಾಲಎಂದು ಹೆಸರಾದ ಲಾಲಾ ಲಜಪತ ರಾಯ, ಬಾಲಗಂಗಾಧರ ತಿಲಕ ಹಾಗು ಬಿಪಿನ್ಚಂದ್ರ ಪಾಲ; ಅಲ್ಲದೆ ಅರವಿಂದ ಘೋಷ ಮೊದಲಾದವರು.

ಇತ್ತೀಚೆಗೆ ಕರ್ನಾಟಕ ಸರಕಾರವು ಪ್ರಕಟಿಸುತ್ತಿರುವ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಗೋಖಲೆಯವನ್ನು ತೀವ್ರಗಾಮಿ ಎಂದು ತಪ್ಪಾಗಿ ಹೇಳಲಾಗಿದ್ದರೆ, ಹಾಗು ಆಧಾರದ ಮೇಲೆ ಚಂದನ ವಾಹಿನಿಯ ಯೋಜಕರು ಗೋಖಲೆಯವರನ್ನು ತೀವ್ರಗಾಮಿ ಎಂದು ತಪ್ಪಾಗಿ ಹೇಳಿದ್ದರೆ,  ನಿರ್ವಾಹಕರು ತಪ್ಪಿಗೆ ಹೊಣೆಗಾರರಾಗುವುದಿಲ್ಲ . ಅಂತಹ ಸಂದರ್ಭದಲ್ಲಿ ನಿರ್ವಾಹಕರ ಕ್ಷಮೆಯನ್ನು ಕೋರುತ್ತೇನೆ.

 (೩) ಇದೇ ದಿನದಂದು ಕೇಳಲಾದ ಚಟ್‍ಪಟ್ ಚಿನಕುರಳಿಯಲ್ಲಿ ಕೇಳಲಾದ ಪ್ರಶ್ನೆ: ‘ಭಾರತದ ರಾಷ್ಟ್ರಗೀತೆಯಲ್ಲಿ ಮೂಲಗೀತೆಯ ಎಷ್ಟು ಪಂಕ್ತಿಗಳಿವೆ?’
ನಿರ್ವಾಹಕರ ಉತ್ತರ: ‘ಮೂಲಗೀತೆಯ ಐದು ಪಂಕ್ತಿಗಳಲ್ಲಿ ಒಂದು ಪಂಕ್ತಿ ಇದೆ.’

ನನ್ನ ತಕರಾರು: ಪಂಕ್ತಿ ಎಂದರೆ ‘ಸಾಲು’. ಮೂಲಗೀತೆಯಲ್ಲಿ ಐದು ‘ನುಡಿ’ಗಳಿವೆ, ಐದು ಪಂಕ್ತಿಗಳಲ್ಲ!
ನಿರ್ವಾಹಕರು ‘ಮೂಲಗೀತೆಯ ನುಡಿಗಳಲ್ಲಿ..’ ಎಂದು ಕೇಳಬೇಕಾಗಿತ್ತು ಅಥವಾ ಮೊದಲನೆಯ ನುಡಿಯಲ್ಲಿ ಎಷ್ಟು ಪಂಕ್ತಿಗಳು (ಸಾಲುಗಳು) ಇವೆ ಎಂದು ಕೇಳಬೇಕಾಗಿತ್ತು. ಇಂತಹ ತಪ್ಪಿನಿಂದಾಗಿ ಕೇಳುಗರು ಪಂಕ್ತಿ ಎಂದರೆ ‘ನುಡಿ’ ಎಂದು ತಪ್ಪಾಗಿ ತಿಳಿಯುವರು.

(೪) ದಿನಾಂಕ ೨೨/೮/೧೭ರಂದು ಕೇಳಲಾದ ನಾಲ್ಕನೆಯ ಪ್ರಶ್ನೆ: ‘ಹೂವಿನಲ್ಲಿ ಹೂವು’ ಯಾವುದು ಹೇಳಿ.
ನಿರ್ವಾಹಕರು ಕೊಟ್ಟ ಉತ್ತರ: ‘ಹತ್ತಿಯಹೂವು’.
ನನ್ನ ತಕರಾರು: ಪ್ರಶ್ನೆ ಸ್ಪಷ್ಟವಿಲ್ಲ. ಅಭ್ಯರ್ಥಿಗಳುಹೂವಿನಲ್ಲಿಯೇ ಹುಟ್ಟಿದ ಹೂವುಎಂದು ಗ್ರಹಿಸಿ ಉತ್ತರ ಕೊಟ್ಟಿದ್ದಾರೆ. ಅವರ ಗ್ರಹಿಕೆಯನ್ನು ನಿರ್ವಾಹಕರು ತಪ್ಪು ಎಂದು ಘೋಷಿಸಿದರು. ‘ಹೂವಿನಲ್ಲಿ ಹೂವುಎಂದರೆ ಶ್ರೇಷ್ಠವಾದ ಹೂವು ಎಂದು ತಿಳಿಸಿ, ಅದನ್ನುಹತ್ತಿಯ ಹೂವುಎಂದು ತಿಳಿಸಿದರು. ಪ್ರಶ್ನೆಯೇ ಸಮರ್ಪಕವಾಗಿರದ ಕಾರಣ ತಮಗೆ ಬರಬಹುದಾದ ಗುಣಗಳಿಂದ ಅಭ್ಯರ್ಥಿಗಳು ವಂಚಿತರಾದರು.

(೫) ಹತ್ತನೆಯ ಪ್ರಶ್ನೆ :ಪದಬಂಧ
ಅಡ್ಡಪದಕ್ಕೆ ನೀಡಲಾದ ಸುಳಿವು: ದುಷ್ಟ ಆಶಯ ಅಥವಾ ಭಾವನೆ.
ನೀಡಲಾದ ಉತ್ತರ: ದುರಭಿಪ್ರಾಯ
ತಕರಾರು: ಕನ್ನಡದಲ್ಲಿಆಶಯಪದಕ್ಕೆ ಇರುವ ಅರ್ಥ= intention or thought
             ಕನ್ನಡದಲ್ಲಿಭಾವನೆಪದಕ್ಕೆ ಇರುವ ಅರ್ಥ= feeling or emotion
             ಕನ್ನಡದಲ್ಲಿಅಭಿಪ್ರಾಯಪದಕ್ಕೆ ಇರುವ ಅರ್ಥ= opinion
‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಯೋಜಕರು ಇಂತಹ ಸೂಕ್ಷ್ಮಭೇದಗಳನ್ನು ಅರಿತುಕೊಳ್ಳಬೇಕು. ಇಲ್ಲವಾದಲ್ಲಿ ಕೇಳುಗರಲ್ಲಿ ತಪ್ಪು ಗ್ರಹಿಕೆಯು ಹುಟ್ಟುತ್ತದೆ.

(೬) ದಿನಾಂಕ ೩೦/೮/೧೭ರಂದು ಕೇಳಲಾದ ೧೦ನೆಯ ಪ್ರಶ್ನೆಯಲ್ಲಿ ನಮ್ಮ ಹಳೆಯ ರಾಷ್ಟ್ರಾಧ್ಯಕ್ಷ ಶ್ರೀ ವರಾಹಗಿರಿ ವೆಂಕಟಗಿರಿಯವರ ಚಿತ್ರವನ್ನು ತೋರಿಸಿ, ಅವರನ್ನು ಗುರುತಿಸಲು ಕೇಳಲಾಗಿದೆ.

ನಿರ್ವಾಹಕರು ಅವರ ಹೆಸರನ್ನು ‘ವರಾಹ ವೆಂಕಟಗಿರಿ’ ಎಂದು ತಪ್ಪಾಗಿ ಹೇಳಿದ್ದಾರೆ. ಇದು ತಪ್ಪು. ಇವರ ಹೆಸರು ವರಾಹಗಿರಿ ವೆಂಕಟಗಿರಿ. ಈ ತಪ್ಪಿನ ಸ್ಪಷ್ಟೀಕರಣಕ್ಕಾಗಿ ಒಂದು ಉದಾಹರಣೆ ಕೊಡುತ್ತೇನೆ: ‘ಮೋಹನದಾಸ ಕರಮಚಂದ ಗಾಂಧೀ’ ಇವರ ಹೆಸರನ್ನು ‘ಮೋಹನ ಕರಮ ಗಾಂಧೀ’ ಎಂದು ಹೇಳುವುದು ಸರಿಯಾದೀತೆ?

(೭) ದಿನಾಂಕ ನನಗೆ ನೆನಪಿಲ್ಲ. ಈ ರಸಪ್ರಶ್ನೆಯು ಪದಬಂಧಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಮೊದಲನೆಯ ಉದ್ದ ಸಾಲಿನಲ್ಲಿ ಮೂರಕ್ಷರದ ಪದವೊಂದು ಬೇಕಾಗಿದೆ. ನಡುವಿನ ಅಕ್ಷರವು ‘ನು’ ಎಂದಿದೆ. ಈ ಪದದ ಅರ್ಥ ‘ಮಗಳು’ ಎಂದು ನಿರ್ವಾಹಕರು ತಿಳಿಸಿದರು. ಈ ಸಮಸ್ಯೆಗೆ ಅಮೃತಾ ಹೆಗಡೆ ಎನ್ನುವ ಅಭ್ಯರ್ಥಿಯು ‘ತನುಜಾ’ ಎಂದು ಥಟ್ಟನೆ ಉತ್ತರ ನೀಡಿದರು. ನಿರ್ವಾಹಕರಾದ ಡಾ^|| ಸೋಮೇಶ್ವರರು ಇದನ್ನು ತಪ್ಪು ಎಂದು ಘೋಷಿಸಿದರು. ‘ತನುಜೆ’ ಎನ್ನುವುದು ಸರಿಯಾದ ಉತ್ತರ ಎಂದು ಶ್ರೀ ಸೋಮೇಶ್ವರರು ಹಟ ಹಿಡಿದರು. ಅಮೃತಾ ಅವರು, ‘ಸsರ್, ‘ತನುಜ:’ ಎನ್ನುವುದಕ್ಕೆ ‘ಮಗ’ ಎಂದೂ, ‘ತನುಜಾ’ ಎನ್ನುವುದಕ್ಕೆ ‘ಮಗಳು’ ಎಂದೂ ಅರ್ಥವಿದೆಯಲ್ಲವೆ?’ ಎಂದು ಕೇಳಿದರು. ಶ್ರೀ ಸೋಮೇಶ್ವರರು, ‘ತನುಜಾ ಎನ್ನುವುದು ಸಂಸ್ಕೃತ, ಕನ್ನಡದಲ್ಲಿ ‘ತನುಜೆ’ ಎನ್ನುವುದೇ ಸರಿ ಎಂದು ಸಾಧಿಸಿದರು.

ಭಪ್ಪರೆ, ಸೋಮೇಶ್ವರ! ಹಾಗಿದ್ದರೆ, ‘ಗಿರಿಜಾ’ ಎನ್ನುವ ಹುಡುಗಿಯ ಹೆಸರನ್ನು ಶಾಲಾದಾಖಲೆಗಳಲ್ಲಿ ನೀವು ‘ಗಿರಿಜಾ’ ಎಂದೇ ಬರೆಯುತ್ತೀರಿ ತಾನೆ? ಅಥವಾ ಅವಳ ಹೆಸರನ್ನು ‘ಗಿರಿಜೆ’ ಎಂದು ಬರೆಯುತ್ತೀರೊ? ತ್ರಿವೇಣಿಯವರ ಕಾದಂಬರಿಗಳಲ್ಲಿ ಅನೇಕ  ಸ್ತ್ರೀಪಾತ್ರಗಳು ಬರುತ್ತಿದ್ದು, ಆ ಪಾತ್ರಗಳ ಹೆಸರುಗಳನ್ನು ‘ಗೀತಾ, ಕನಕಾ, ರಮಾ, ಅಮೃತಾ…’ ಹೀಗೆಲ್ಲ ಬರೆಯಲಾಗಿದೆಯೇ ಹೊರತು, ‘ಗೀತೆ, ಕನಕೆ, ರಮೆ, ಅಮೃತೆ..’ ಎಂದು ಬರೆದಿಲ್ಲವಲ್ಲ! 

‘ತನುಜಾ’ ಎನ್ನುವುದು ವ್ಯಕ್ತಿನಾಮ ಹಾಗು ‘ತನುಜೆ’ ಎನ್ನುವುದು ಸರ್ವನಾಮ ಎಂದು ಹೇಳುತ್ತ, ನೀವು ನಿಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಬಹುದು. ಆದರೆ ಇದು ಕೂದಲನ್ನು ಸೀಳುವ ಪ್ರಯತ್ನವಷ್ಟೆ! ಡಾ^ಸೋಮೇಶ್ವರರೆ, ಈ ತಪ್ಪು ಕಾರ್ಯಕ್ರಮದ ಯೋಜಕರದಲ್ಲ. ಈ ತಪ್ಪಿನ ಹೊಣೆ ಸಂಪೂರ್ಣವಾಗಿ ನಿರ್ವಾಹಕರಾದ ನಿಮ್ಮ ಮೇಲೆಯೇ ಇದೆ.

‘ಥಟ್ಟನೆ ಹೇಳಿ’ ಕಾರ್ಯಕ್ರಮದಲ್ಲಿ ಯಾವುದೇ ಪ್ರಶ್ನೋತ್ತರವು ಸಂದಿಗ್ಧವಾಗಿ ಅಥವಾ ವಿವಾದಾಸ್ಪದವಾಗಿ ಇರಬಾರದು, ಅಲ್ಲವೆ? 

(೮) ದಿನಾಂಕ ೮/೮/೧೭ರಂದು ಕೇಳಲಾದ  ಪ್ರಶ್ನೆ (ಕ್ರಮಾಂಕ ೩) : ಕಾ^ಡ್‍ಲಿವರ ಎಣ್ಣೆಯಲ್ಲಿ ವ್ಹಿಟಮಿನ್ ‘ಏ’ ಎಷ್ಟು ಇರುತ್ತದೆ?
ನಿರ್ವಾಹಕರು ಕೊಟ್ಟ ಉತ್ತರ: ೩೦,೦೦೦ mg.
ನನ್ನ ತಕರಾರು : ಎಷ್ಟು ಪ್ರಮಾಣದ ಎಣ್ಣೆಯಲ್ಲಿ ಎಂದು ಹೇಳದೆ, ಕೇವಲ ೩೦,೦೦೦ mg ಎಂದಷ್ಟೇ ಹೇಳಿದ್ದಾರೆ. ಎರಡನೆಯದಾಗಿ ವ್ಹಿಟಮಿನ್ ಪ್ರಮಾಣವನ್ನು ‘IU’ ಮಾಪನದಲ್ಲಿ ಹೇಳುತ್ತಾರೆಯೇ ಹೊರತು mgಗಳಲ್ಲಿ ಅಲ್ಲ.
ಇದರ ಸರಿಯಾದ ಉತ್ತರ ಹೀಗಿದೆ: ೧೦೦ ಗ್ರಾಮುಗಳಲ್ಲಿ ೧,೦೦,೦೦೦ IU.

(೯) ೧೦/೮/೧೭ರಂದು ಕೇಳಲಾದ ಒಂದು ಪ್ರಶ್ನೆಯ ಉತ್ತರಕ್ಕೆ ವಿವರಣೆ ನೀಡುತ್ತ, ನಿರ್ವಾಹಕರು ‘ಗಾಳಿಯಂತ್ರಗಳ ಶಕ್ತಿ ಎನ್ನುವುದು ಸೌರಶಕ್ತಿಯ ಪರಿವರ್ತಿತ ರೂಪ’ ಎಂದು ಹೇಳಿದರು. ಈ ಅವೈಜ್ಞಾನಿಕ ಹಾಗು ತಪ್ಪು ವಿವರಣೆಯನ್ನು ಕೇಳಿ ನನಗೆ ದಿಗ್ಭ್ರಮೆಯಾಯಿತು.

ಗಾಳಿಯು ವಿದ್ಯುತ್ ಉತ್ಪಾದಕಗಳನ್ನು ತಿರುಗಿಸುವದರಿಂದ ವಿದ್ಯುತ್ ಉತ್ಪಾದನೆ ಆಗುತ್ತದೆ. ಅದರಂತೆ ಸೌರಕೋಶಗಳು ಸೌರಶಕ್ತಿಯನ್ನು ವಿದ್ಯುತ್‍ಗೆ ಪರಿವರ್ತಿಸುತ್ತವೆ. ಇವೆರಡಕ್ಕೂ ಸಂಬಂಧವೇ ಇಲ್ಲ. ನಿರ್ವಾಹಕರ ವಿವರಣೆಯು ವಿದ್ಯಾರ್ಥಿಗಳನ್ನು ತಪ್ಪು ದಾರಿಗೆ ನೂಕುತ್ತದೆ. ಇದು ಅಕ್ಷಮ್ಯವಾದ ತಪ್ಪು.

(೧೦) ದಿನಾಂಕ ೮/೮/೧೭ರಂದು ಕೇಳಲಾದ ಮೊದಲನೆಯ ಪ್ರಶ್ನೆ ಹೀಗಿದೆ: ‘ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪಇವರ ಕಾವ್ಯನಾಮವೇನು?’
ನನ್ನ ತಕರಾರು: ಕುಪ್ಪಳ್ಳಿ ಎನ್ನುವ ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿದೆ. ಇದು ಕುವೆಂಪುರವರ ಊರು ಅಲ್ಲ.  ‘ಕುವೆಂಪು’ರವರ ಊರಿನ ಸರಿಯಾದ ಹೆಸರು: ಕುಪ್ಪಳಿ. ಇದು ಶಿವಮೊಗ್ಗಿ ಜಿಲ್ಲೆಯಲ್ಲಿದೆ. ಕಾರ್ಯಕ್ರಮದ ಯೋಜಕರು ಪ್ರಶ್ನೆಯನ್ನು ಹಾಗು ಉತ್ತರವನ್ನು ಒಮ್ಮೆ ಬಿಟ್ಟು ಎರಡು ಸಲ ಪರೀಕ್ಷಿಸಬೇಕು. ಇಲ್ಲವಾದಲ್ಲಿ ಇಂತಹ ತಪ್ಪುಗಳು ಕೇಳುಗರಿಗೆ ತಪ್ಪು ಮಾಹಿತಿಯನ್ನು ನೀಡುತ್ತವೆ.


(ಆ) ಇನ್ನು ಈ ಕಾರ್ಯಕ್ರಮದಲ್ಲಿ ಕಂಡು ಬಂದ ತಪ್ಪು ಉಚ್ಚಾರಗಳನ್ನು ಹಾಗು ತಪ್ಪು ಭಾಷಾಪ್ರಯೋಗಗಳನ್ನಷ್ಟು ನೋಡೋಣ:
(೧) ದಿನಾಂಕ ೧೨/೮/೧೭ರಂದು ಕೇಳಲಾದ ಪ್ರಶ್ನೆಯಲ್ಲಿ ಒಂದು ಕಟ್ಟಡವನ್ನು ತೋರಿಸಿ, ಅದನ್ನು ಗುರುತಿಸಲು ಕೇಳಲಾಗಿದೆ:
ನಿರ್ವಾಹಕರು ಕೊಟ್ಟ ಉತ್ತರ : ಸರ್ವೋಚ್ಛ ನ್ಯಾಯಾಲಯ.
 ನನ್ನ ತಕರಾರು: ‘ಸರ್ವೋಚ್ಚ’ ಎನ್ನುವುದು ಸರಿಯಾದ ಪದ. ಇದು ಸಂಸ್ಕೃತ ಪದವಾದ ಮಾತ್ರಕ್ಕೆ, ಈ ಪದದಲ್ಲಿ ಮಹಾಪ್ರಾಣ ಇರಬೇಕೆನ್ನುವುದು ತಪ್ಪು ಗ್ರಹಿಕೆ. ಇದರಂತೆ ಅಲ್ಪಪ್ರಾಣಿಯಾದ ಇತರ ಪದಗಳು: ಉಚ್ಚ, ಸಮುಚ್ಚಯ, ಮುಷ್ಟಿ ಇತ್ಯಾದಿ. ಮಹಾಪ್ರಾಣವಿರುವ ಕೆಲವು ಪದಗಳು: ಪಾಪಿಷ್ಠ, ಕೋಪಿಷ್ಠ ಇತ್ಯಾದಿ.

(೨) ದಿನಾಂಕ ೧೪/೮/೧೭ರಂದು ಕೇಳಲಾದ ೪ನೆಯ ಕ್ರಮಾಂಕದ ಪ್ರಶ್ನೆಗೆ ನಿರ್ವಾಹಕರು ನೀಡಿದ ಉತ್ತರ: ಜಲಿಯನ್‍ವಾಲಾ ಭಾಗ್.
ನನ್ನ ತಕರಾರು: ಭಾಗ್ ಎಂದರೆ ಹಿಂದಿಯಲ್ಲಿ ‘ಓಡು’ ಎನ್ನುವ ಅರ್ಥವಿದೆ. ಈ ಸ್ಥಳದ ಸರಿಯಾದ ಹೆಸರು ‘ಜಲಿಯನ್‍ವಾಲಾ ಬಾಗ’. (ಬಾಗ ಎಂದರೆ ಹಿಂದಿಯಲ್ಲಿ ತೋಟ ಎಂದರ್ಥ.)

(೩) ದಿನಾಂಕ ೧೬/೮/೧೭ರಂದು ಕೇಳಲಾದ ಮೊದಲನೆಯ ಪ್ರಶ್ನೆ ಹೀಗಿದೆ:
‘ಗದರ್’ ಪಕ್ಷವನ್ನು ಕಟ್ಟಿದವರು ಯಾರು?
ನಿರ್ವಾಹಕರು ಕೊಟ್ಟ ಉತ್ತರ: ರಾಸಬಿಹಾರಿ ಬೋಸ್.
ನನ್ನ ತಕರಾರು: ‘ಗದರ್’ ಎನ್ನುವುದು ತಪ್ಪು ಉಚ್ಚಾರ. ‘ಗದ್ದಾರ್’ ಎನ್ನುವುದು ಸರಿಯಾದ ಉಚ್ಚಾರ.
ಈ ಹಿಂದೀ ಪದದ ಅರ್ಥ : ಬಂಡಾಯಗಾರ.

(೪) ದಿನಾಂಕ ೧೮/೮/೧೭ರಂದು ಕೇಳಲಾದ ಹತ್ತನೆಯ ಪ್ರಶ್ನೆ ‘ಪದಬಂಧ’ದಲ್ಲಿ ಆಡ್ಡ ಸಾಲಿನಲ್ಲಿ ನಿರ್ವಾಹಕರು ಸರಿ ಉತ್ತರವನ್ನು ‘ಬಿಕಾಜಿ ಕಾಮಾ’ ಎಂದು ಹೇಳಿದ್ದಾರೆ.
ಈ ಸಮಸ್ಯೆಯ ಸರಿಯಾದ ಉತ್ತರ : ‘ಭೀಕಾಜಿ ಕಾಮಾ’.
ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ ಈ ಗೌರವಾನ್ವಿತ ಮಹಿಳೆಯ ಹೆಸರನ್ನು ಈ ರೀತಿ ಕೆಡಿಸಬಾರದು.

(೫) ಇದರಂತೆ ಅದೇ ದಿನದಂದು ‘ಚಟ್‍ಪಟ್ ಚಿನಕುರಳಿ’ಯಲ್ಲಿ ಕೇಳಲಾದ ಪ್ರಶ್ನೆಯ, ಮತ್ತೊಮ್ಮೆ ದಿನಾಂಕ ೨೩/೮/೧೭ರಂದು ಕೇಳಲಾದ ೯ನೆಯ ಪ್ರಶ್ನೆಗೆ ನಿರ್ವಾಹಕರು ನೀಡಿದ ಉತ್ತರ: ಸುಭಾಶ ಚಂದ್ರ ಬೋಸ್.
ಸರಿಯಾದ ಉತ್ತರ : ಸುಭಾಸಚಂದ್ರ ಬೋಸ್.
ಸಂಸ್ಕೃತದಲ್ಲಿ ಭಾಸ ಎನ್ನುವ ಪದಕ್ಕೆ ಹೊಳೆಯುವ ಎನ್ನುವ ಅರ್ಥವಿದೆ.
(ಸುಭಾಸಚಂದ್ರ = ಕಾಂತಿಮಂತನಾಗಿ ಹೊಳೆಯುವ ಚಂದ್ರ)
ಸಂಸ್ಕೃತದಲ್ಲಿ ಭಾಶ್ ಎನ್ನುವ ಪದವೇ ಇಲ್ಲ. (ಭಾಷ್ ಎನ್ನುವ ಪದವಿದ್ದು ಅದರರ್ಥ ‘ನುಡಿ’ ಎಂದಾಗುತ್ತದೆ.)

(೬)೨೩/೮/೧೭ರ ‘ಚಟ್‍ಪಟ್ ಚಿನಕುರಳಿ’ಯಲ್ಲಿ ಕೇಳಲಾದ ಪ್ರಶ್ನೆಗೆ ನಿರ್ವಾಹಕರು ‘ನೀಲ್ಸ ಬೋರ್’ ಎನ್ನುವ ಉತ್ತರವನ್ನು ನೀಡಿದ್ದಾರೆ. Niels Bohr ಹೆಸರಿನ ಸರಿಯಾದ ಉಚ್ಚಾರ: ನಿಯಲ್ಸ್ ಬೋರ್
ಈ ಪರಕೀಯನ ಹೆಸರಿನ ಸರಿಯಾದ ಉಚ್ಚಾರ ನಮಗೇಕೆ ಬೇಕು ಎಂದು ಕೆಲವರು ಕೇಳಬಹುದು. ಸರಿಯಾದ ಉಚ್ಚಾರವನ್ನು Google Searchದಿಂದ ತಕ್ಷಣವೇ ತಿಳಿದುಕೊಳ್ಳಲು ಸಾಧ್ಯವಿರುವಾಗ, ಕನ್ನಡದಲ್ಲಿ ಈ ಪದಗಳನ್ನು ಉಚ್ಚರಿಸಲು ಹಾಗು ಬರೆಯಲು ಸಾಧ್ಯವಿರುವಾಗ, ನಾವು ತಪ್ಪುಗಳನ್ನು ಏಕೆ ಮಾಡಬೇಕು? ಉದಾಹರಣೆಗೆ, ಆಂಗ್ಲರಿಂದ ಪ್ರಭಾವಿತರಾದ ನಾವು ಅವರಂತೆಯೆ ಅನೇಕ ತಪ್ಪು ಉಚ್ಚಾರಗಳನ್ನು ಮಾಡುತ್ತೇವೆ. Marie Curie ಎನ್ನುವ ಹೆಸರನ್ನು ‘ಮಾರಿ ಕುರಿ’ ಎನ್ನುವ ಬದಲಾಗಿ, ‘ಮೇರಿ ಕ್ಯೂರಿ’ ಎನ್ನುತ್ತೇವೆ. ‘ಯೇಶು’ ಎನ್ನುವ ಬದಲಾಗಿ ಜೀಸಸ್ ಎಂದು ಹೇಳುತ್ತೇವೆ. ಯಾಕಾದರೂ ನಾವು ತಪ್ಪು ಮಾಡಬೇಕು? ನಾವೇನು ಆಂಗ್ಲರ ಹಿಂಬಾಲಕರೆ? ನಮಗೇಕೆ ಆಂಗ್ಲವ್ಯಾಮೋಹ?

(೭) ಇದೆಲ್ಲ ಹೋಗಲಿ ಬಿಡಿ, ಭಾರತೀಯ ಹೆಸರುಗಳನ್ನಾದರೂ ನಾವು ಸರಿಯಾಗಿ ಉಚ್ಚರಿಸುತ್ತೇವೆಯೆ?
ದಿನಾಂಕ ೧೨/೮/೧೭ರಂದು ಕೇಳಲಾದ ೭ನೆಯ ಪ್ರಶ್ನೆಗೆ ನಿರ್ವಾಹಕರು ಕೊಟ್ಟ ಉತ್ತರ; ‘ಟಾಟಾಪಾನಿ.’
ಸ್ವಾಮಿ, ಇಂಗ್ಲೀಶಿನಲ್ಲಿ ‘Tatapani’ ಎಂದು ಬರೆದಿದ್ದನ್ನು ಓದಿ, ನೀವು ‘ಟಾಟಾಪಾನಿ’ ಎಂದು ಹೇಳಿಬಿಟ್ಟಿರಿ. ಆ ಊರಿನ ಸರಿಯಾದ ಹೆಸರು; ‘ತಾತಾಪಾನಿ’! ನಮ್ಮ ಭಾರತೀಯ ಹೆಸರುಗಳನ್ನಾದರೂ ಸರಿಯಾಗಿ ಹೇಳಿರಿ, ಗುರುಗಳೆ. ನಾವೇನೂ ಆಂಗ್ಲರಲ್ಲವಲ್ಲ!
(ಟಿಪ್ಪಣಿ: ಇದೇ ರೀತಿಯಲ್ಲಿ ರಬೀಂದ್ರನಾಥ ಠಾಕೂರ ಇವರ ಹೆಸರನ್ನು ಅನೇಕರು ರವೀಂದ್ರನಾಥ ಟ್ಯಾಗೋರ್ ಎಂದು ಬರೆಯುವದನ್ನು ನೋಡಿದ್ದೇನೆ. ಭಾರತವು ಸ್ವತಂತ್ರವಾಗಿ ೭೦ ವರ್ಷಗಳಾದ ಬಳಿಕ ಸಹ ಈ ಆಂಗ್ಲಶೈಲಿಯನ್ನು ಕುರುಡಾಗಿ ಅನುಸರಿಸುವ ಕಾರಣ ತಿಳಿಯುತ್ತಿಲ್ಲ!)

(೮) ಇದರಂತೆ ೨೩/೮/೧೭ರಂದು ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಯೋಜಕರು ಅಥವಾ ನಿರ್ವಾಹಕರು ಮತ್ತೊಂದು ಅಕ್ಷಮ್ಯ ಅಪಚಾರವನ್ನು ಮಾಡಿದ್ದಾರೆ.
ಮಹಾರಾಷ್ಟ್ರದ ‘ಮಹಾಡ’ ಎನ್ನುವ ಊರಿನಲ್ಲಿ ಇದ್ದಂತಹ ಸಾರ್ವಜನಿಕ ಕೆರೆಯಿಂದ ನೀರು ತೆಗೆದುಕೊಳ್ಳಲು ದಲಿತರಿಗೆ ಅವಕಾಶವಿರಲಿಲ್ಲ. ಡಾ^| ಅಂಬೇಡಕರರು ದಿನಾಂಕ ೧೯-೩-೧೯೨೭ರಂದು ಇದನ್ನು ವಿರೋಧಿಸಿ ಒಂದು ಪ್ರಬಲವಾದ ಪ್ರತಿಭಟನೆಯನ್ನು ಆಯೋಜಿಸಿದರು. ಈ ‘ಮಹಾಡ’ ಎನ್ನುವ ಊರಿನ ಹೆಸರನ್ನು‘ಥಟ್ ಅಂತ ಹೇಳಿ’  ಕಾರ್ಯಕ್ರಮದ ಫಲಕದಲ್ಲಿ ‘ಮಹದ್’ ಎಂದು ಬರೆಯಲಾಗಿತ್ತು ಹಾಗು ನಿರ್ವಾಹಕರು ಅದನ್ನು ‘ಮಹದ್’ ಎಂದೇ ಉಚ್ಚರಿಸಿದರು. ಬಹುಶ: ಇಂಗ್ಲೀಶಿನ `Mahad’ ಎನ್ನುವ ಪದವನ್ನು ನೋಡಿ, ಇವರು ಅದನ್ನು ‘ಮಹದ್’ ಎಂದು ತಿಳಿದಿರಬಹುದು. ಅಯ್ಯಾ ಸ್ವಾಮಿ, ಗೂಗಲ್ ಸರ್ಚನ್ನು ನೋಡಿದ್ದರೆ, ನಿಮಗೆ ಎರಡೇ ನಿಮಿಷದಲ್ಲಿ ಸರಿಯಾದ ಉಚ್ಚಾರ ಹಾಗು ಬರವಣಿಗೆ ತಿಳಿದು ಬಿಡುತ್ತಿತ್ತಲ್ಲ. ಇದೀಗ ವಿದ್ಯಾರ್ಥಿಗಳಲ್ಲಿ ನಮ್ಮ ದೇಶದ ಒಂದು ಮಹತ್ವದ ಪ್ರತಿಭಟನೆಯು ನಡೆದಿರುವ ಸ್ಥಳದ ಬಗೆಗೆ, ನೀವು ಎಂತಹ ತಪ್ಪು ತಿಳಿವಳಿಕೆಯನ್ನು ಮೂಡಿಸಿ ಬಿಟ್ಟಿರಲ್ಲ!  ಯಾಕೆ? ಯಾಕೆ? ಯಾಕೆ? ಯೋಜಕರಿಗಾಗಲಿ, ನಿರ್ವಾಹಕರಿಗಾಗಲಿ ಸ್ವಲ್ಪ ಸಂಶೋಧನೆ ಮಾಡಲೂ ಸಹ ಅನಾಸಕ್ತಿ ಹಾಗು ಆಲಸ್ಯವೆ?

(೯) ಇದರಂತೆಯೆ, Mohenjo daroದ ಬಗೆಗೆ ಸ್ವಲ್ಪ ಹೇಳಬೇಕಾಗಿದೆ. ಈ ಊರು ಸಿಂಧ ಪ್ರಾಂತದಲ್ಲಿದೆ. ಸಿಂಧೀ ಜನರು ಇದನ್ನು ‘ಮುಅನಜೋ ದಡೊ’ ಎಂದು ಕರೆದರೆ, ಉರ್ದೂ ಭಾಷೆಯಲ್ಲಿ ಇದನ್ನು ‘ಮೋಹನಜೋ ದಡೊ’ ಎಂದು ಕರೆಯುತ್ತಾರೆ. ದಿನಾಂಕ ೨೯/೮/೧೭ರಂದು ಕೇಳಲಾದ ೮ನೆಯ ಪ್ರಶ್ನೆಗೆ ಉತ್ತರವಾಗಿ ಈ ಸ್ಥಳವನ್ನು ‘ಮೊಹೆಂಜೊದಾರೊ’ ಎಂದೇ ಹೇಳಲಾಗಿದೆ. ‘ಹಾಗೆ ಕರೆದರೆ ತಪ್ಪೇನು?’ ಎಂದು ಕೆಲವರು ಕೇಳಬಹುದು. ಮಾನ್ಯರೆ, ನಮ್ಮ ಬೆಂಗಳೂರನ್ನು ನಾವು ಇದೀಗ ‘ಬ್ಯಾಂಗಲೋರ್’ ಎಂದು ಕರೆಯುತ್ತೇವೆಯೆ? ಅಥವಾ ಹುಬ್ಬಳ್ಳಿಯನ್ನು ‘ಹುಬ್ಲಿ’ ಎನ್ನುತ್ತೇವೆಯೆ? ನಮ್ಮ ಊರುಗಳನ್ನು ಪರರು ಸರಿಯಾಗಿ ಉಚ್ಚರಿಸಬೇಕೆಂದು ನಾವು ಅಪೇಕ್ಷಿಸಿದರೆ, ಪರಸ್ಥಳಗಳನ್ನು ಸಹ ನಾವು ಸರಿಯಾಗಿ ಉಚ್ಚರಿಸಬೇಕಲ್ಲವೆ?

(೧೦) ಇನ್ನು ಗಣಿತಪ್ರಶ್ನೆಗಳಿಗೆ ಬರೋಣ. ಗಣಿತದಲ್ಲಿ ಕೂಡಿಸುವ, ಕಳೆಯುವ, ಗುಣಿಸುವ, ಭಾಗಿಸುವ ಕೆಲವು ಸಮಸ್ಯೆಗಳನ್ನು ಕೊಟ್ಟು, ಈ ಎಲ್ಲ ಸಮಸ್ಯೆಗಳ ಉತ್ತರಗಳನ್ನು ಸಂಕಲಿಸಿ, ಒಟ್ಟು ಉತ್ತರವನ್ನು ತಿಳಿಸಲು ಕೇಳಲಾಗುತ್ತದೆ. ಈ ಸಂದರ್ಭದಲ್ಲಿ ಈ ಎಲ್ಲ ಉತ್ತರಗಳನ್ನು ‘ಕೂಡಿಸಿ’ ಎಂದು ಹೇಳುವ ಬದಲಾಗಿ, ನಿರ್ವಾಹಕರು ‘ಕೂಡಿ’ ಎಂದು ಹೇಳುತ್ತಾರೆ. ‘ಕೂಡಿ’ ಎಂದರೆ ‘ಒಟ್ಟಾಗು’ ಎನ್ನುವ ಅರ್ಥ ಬರುತ್ತದೆಯೆ ಹೊರತು ‘ಒಟ್ಟಾಗಿಸು’ ಎನ್ನುವ ಅರ್ಥ ಬರುವದಿಲ್ಲ. ‘ಒಟ್ಟಾಗಿಸಿ’ ಎನ್ನುವದಕ್ಕೆ ‘ಕೂಡಿಸಿ’ ಎಂದು ಹೇಳಬೇಕಾಗುತ್ತದೆ.

ಇವೆಲ್ಲ ಕ್ಷುಲ್ಲಕ ಎನಿಸುತ್ತವಯೆ?  ಈ ಕ್ಷುಲ್ಲಕ  ಅಪಚಾರಗಳನ್ನು ಸಹಿಸಿಕೊಳ್ಳುತ್ತ ಹೋದರೆ, ಕನ್ನಡ ಭಾಷೆಯು ಕಾಲಕ್ರಮೇಣ ‘ಖನ್ನಡ’ವಾಗಿ ಹೋದೀತು! ನಮ್ಮ ನುಡಿಯನ್ನು ಸರಿಯಾದ ರೀತಿಯಲ್ಲಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾನಂತೂ ಈ ಲೇಖನದ ಮೂಲಕ ಈ ದಿಶೆಯಲ್ಲಿ ನನ್ನ ಅಳಿಲುಸೇವೆಯನ್ನು ಸಲ್ಲಿಸಿದ್ದೇನೆ. ಇದನ್ನು ಚಂದನದ ಕಾರ್ಯಕ್ರಮಯೋಜಕರು ಗಮನಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

4 comments:

Unknown said...

ನಾನೂ ಕೂಡ ಚಂದನದಲ್ಲಿ ಪ್ರಸಾರವಾಗುವ 'ಥಟ್ ಅಂತ ಹೇಳಿ' ಕಾರ್ಯಕ್ರಮ ನೋಡುತ್ತಿರುತ್ತೇನೆ. ಈ ಕಾರ್ಯಕ್ರಮದ ಬಗ್ಗೆ ನೀವು ವ್ಯಕ್ತ ಪಡಿಸುವ ಮಾತುಗಳು ಒಪ್ಪುವಂತಾದ್ದು.

sunaath said...

ಧನ್ಯವಾದಗಳು, ಚಂದ್ರಶೇಖರ!

Shivaraj meghana said...

ಒಳ್ಳೆಯ ವಿಚಾರ ತಿಳಿಸಿದ್ದೀರಿ...ಗುರುಗಳೇ..ತುಂಬಾ ಸಂತಸದ ವಿಚಾರ.

sunaath said...

ಧನ್ಯವಾದಗಳು, ಪ್ರಿಯ a. ಚಂದನ ವಾಹಿನಿಯು ತಮ್ಮ ತಪ್ಪುಗಳನ್ನು ಅರಿತುಕೊಳ್ಳಲಿ ಎಂದು ಹಾರೈಸುತ್ತೇನೆ.