Friday, July 5, 2024

ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ

 “ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ 

 

ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯದಲ್ಲಿ ಹಿಮಾಲಯವನ್ನು ‘ದೇವತಾತ್ಮಾ’ ಎಂದು ಭಕ್ತಿಯಿಂದ, ಗೌರವದಿಂದ ಕರೆಯುವ ಸಾಲು ಇದು. ಭಾರತವು ಉತ್ತರದಲ್ಲಿ ಹಿಮಾಲಯದಿಂದ ಪ್ರಾರಂಭಿಸಿ, ದಕ್ಷಿಣಕ್ಕೆ ಕನ್ಯಾಕುಮಾರಿಯವರೆಗೆ ವ್ಯಾಪಿಸಿದ ವಿಶಾಲವಾದ ದೇಶವಾಗಿದ್ದು, ಈ ಭೂಪ್ರದೇಶದಲ್ಲಿ ಅನೇಕ ಸಮುದಾಯಗಳು ಹರಡಿದ್ದವು, ಹರಡಿವೆ. ಕಾಲಾಂತರದಲ್ಲಿ ಕೆಲ ಸಮುದಾಯಗಳು ಬಲಿಷ್ಠವಾದರೆ, ಕೆಲ ಸಮುದಾಯಗಳು ನಶಿಸಿ ಹೋದವು. ಆದರೆ ಅವುಗಳ ಕುರುಹುಗಳನ್ನು ನಮ್ಮ ಪುರಾಣಗಳಲ್ಲಿ, ನಮ್ಮ ಭಾಷೆಗಳಲ್ಲಿ ಹಾಗು ನಮ್ಮ ಸ್ಥಳನಾಮಗಳಲ್ಲಿ ಹುಡುಕಬಹುದು. ಈ ದಿಕ್ಕಿನಲ್ಲಿ ಶ್ರೇಷ್ಠ ಸಂಶೋಧಕರಾದ ಕೀರ್ತಿಶೇಷ ಶಂ. ಬಾ. ಜೋಶಿಯವರು ಏಶಿಯಾದಲ್ಲಿಯೇ ಪ್ರಪ್ರಥಮವಾಗಿ ವಿಸ್ತಾರವಾದ ಹಾಗು ಆಳವಾದ ಸಾಂಸ್ಕೃತಿಕ ಅಧ್ಯಯನವನ್ನು ಮಾಡಿದರು. ಶಂ. ಬಾ. ಜೋಶಿಯವರು ತಮ್ಮ ಸಂಶೋಧನೆಗಳಲ್ಲಿ ಉಲ್ಲೇಖಿಸಿದ ಸಮುದಾಯಗಳಿಗಿಂತ ಪೂರ್ವದಲ್ಲಿಯೇ ಭರತಖಂಡದ ಗೊಂಡಾರಣ್ಯದಲ್ಲಿ ಮತ್ತೂ ಒಂದು ಸಮುದಾಯದ ಕೆಲವರು ಪಾದಾರ್ಪಣೆ ಮಾಡಿದ್ದರು ಅನ್ನುವುದು ಅಚ್ಚರಿಯ ಸಂಗತಿಯಲ್ಲವೆ? ಅವರೇ ಬಾಹ್ಯಾಂತರಿಕ್ಷ ಯಾತ್ರಿಗಳು! ಆಶ್ಚರ್ಯವಾಗುವುದೆ, ಗೆಳೆಯರೆ? ಈ ಅನುಮಾನಕ್ಕೆ ಕಾರಣವಾಗಬಲ್ಲ ಕೆಲವು ಅಂಶಗಳನ್ನು, ನಮ್ಮ ಪುರಾಣಗಳಿಂದಲೇ ಹೆಕ್ಕಿ, ನಿಮ್ಮ ಮುಂದೆ  ಇದೀಗ ಇಡುತ್ತಿದ್ದೇನೆ.

 

ಮೊದಲನೆಯದಾಗಿ ಭಾರತದ ಸರ್ವಮಾನ್ಯ, ಜನಪ್ರಿಯ ದೇವರಾದ ಹನುಮಂತನನ್ನು ಪರಿಶೀಲಿಸೋಣ. (‘ಹನುಮಾನ್’ ಎನ್ನುವುದು ‘ಅನುಮಾನ್’ ಎನ್ನುವ ಅನ್ಯಭಾಷೆಯ ಪದದ ಅಪಭ್ರಂಶ ರೂಪ ಎಂದು ಭಾಷಾತಜ್ಞರೊಬ್ಬರು ಹೇಳುತ್ತಾರೆ; ಇದು ಬೇರೆಯ ವಿಷಯ.)  ಸಂಸ್ಕೃತ ಭಾಷೆಯಲ್ಲಿ ‘ಹನು’ ಎಂದರೆ ಗದ್ದ. ಉದ್ದವಾದ ಗದ್ದವಿದ್ದವನು ಹನುಮಾನ್. ಈ ದೈಹಿಕ ವೈಶಿಷ್ಟ್ಯವುಳ್ಳ ಕೆಲವರು ಉತ್ತರಪ್ರದೇಶದ ಒಂದು ಭಾಗದಲ್ಲಿ ಇದ್ದಾರಂತೆ. ಇದು ಒಂದು ದೂರದ ಊಹೆ ಎಂದು ಅನಿಸಬಹುದು. ಇದಕ್ಕಿಂತಲೂ ಹತ್ತಿರದ ಕೆಲವು ಸಾಧ್ಯತೆಗಳನ್ನು ನೋಡೋಣವೆ? ಹನುಮಂತನು ವಾಯುದೇವನ ಮಗನು. ನಮ್ಮ ಸ್ಪರ್ಶದ ಅನುಭವಕ್ಕೆ ಬರುತ್ತಿರುವ ವಾಯುವಷ್ಟೇ ವಾಯುದೇವನಲ್ಲ; ‘ನಿಲಿಂಪ’ರು ಹಾಗು ‘ಮರುತ’ರು ಎನ್ನುವುದು ವಾಯುದೇವತೆಗಳ ಗುಂಪುಗಳು. ನಮ್ಮ ಸ್ತೋತ್ರಮಂತ್ರಾದಿಗಳಲ್ಲಿ ಇವರ ಉಲ್ಲೇಖವಿದೆ. ಇವರನ್ನು ಅಂತರಿಕ್ಷ ಯಾತ್ರಿಗಳು ಎಂದು ಭಾವಿಸಬಹುದೆ? ಈ ವಾಯುದೇವರಲ್ಲಿಯ ಓರ್ವನು ಭೂವನಿತೆಯಾದ ‘ಅಂಜನಾ’ಳ ಜೊತೆಗೆ ಸಂಪರ್ಕ ಹೊಂದಿದ್ದರಿಂದ, ‘ಹನುಮಂತ’ನು ಜನಿಸಿದನೆ? ಇದು ಒಂದು ಅತಿರೇಕದ ಕಲ್ಪನೆ ಎಂದು ನಿಮಗೆ ಎನಿಸಿದರೆ, ಇದಕ್ಕೂ ಹೆಚ್ಚಿನ ಎರಡು ಸಂಭಾವ್ಯ ಪುರಾವೆಗಳನ್ನು ನಿಮ್ಮೆದುರಿಗೆ ಇಡುತ್ತೇನೆ:

 

ಹನುಮಂತನು ಸೀತಾದೇವಿಯನ್ನು ಹುಡುಕುತ್ತ ಕತ್ತಲೆಯ ಕಗ್ಗಾಡಿನಲ್ಲಿ ಅಲೆಯುತ್ತಿರುವಾಗ, ಒಂದು ಗುಹೆಯನ್ನು ನೋಡುತ್ತಾನೆ. ಆ ಗುಹೆಯಲ್ಲಿ ಆತನು ಪ್ರವೇಶಿಸಿದಾಗ, ತನ್ನ ಮೈಯಿಂದಲೇ ಬೆಳಕನ್ನು ಸೂಸುತ್ತಿರುವ ಓರ್ವ ಯೋಗಿನಿಯನ್ನು ನೋಡುತ್ತಾನೆ. ಅವಳ ಹೆಸರು ಸ್ವಯಂಪ್ರಭಾ. (ಸ್ವಯಂಪ್ರಭಾ ಎನ್ನುವುದು ಅವಳಿಗೆ ನಾವು ಕೊಟ್ಟ ಹೆಸರು ಎನ್ನುವುದು ಸ್ಪಷ್ಟವಿದೆ.) ಅವಳಿಗೆ ಈ ಬೆಳಕು ಎಲ್ಲಿಂದ ಬಂದಿತು? ಇದು ಅಣುಶಕ್ತಿಯ ಬೆಳಕು ಇರಬಹುದೆ? ಬಾಹ್ಯಾಂತರಿಕ್ಷದ ಸುದೂರದಿಂದ ಭೂಮಿಯವರೆಗೆ ಬಂದವರಿಗೆ, ಅಣುಶಕ್ತಿಯಿಂದಲೇ ಶಕ್ತಿಯನ್ನು ಹಾಗು ಬೆಳಕನ್ನು ಉತ್ಪಾದಿಸಿಕೊಳ್ಳುವ ತಂತ್ರ ಅನಿವಾರ್ಯವಲ್ಲವೆ?

 

ಇನ್ನೀಗ ಮತ್ತೊಂದು ಪುರಾವೆ. ಅಮೆರಿಕದ ಒಂದು ದೊಡ್ಡ ಬೆಟ್ಟದಲ್ಲಿ ಕಲ್ಲಿನಲ್ಲಿ ನಿರ್ಮಿಸಿದ ಕೆಲವು ಉಬ್ಬುಶಿಲ್ಪಗಳಿವೆ. ಅದರಲ್ಲಿಯ ಒಂದು ಶಿಲ್ಪವು ಥೇಟ್ ನಮ್ಮ ಹನುಮಂತನನ್ನೇ ಹೋಲುತ್ತದೆ. ನಾನು ೪೦ ವರ್ಷಗಳ ಹಿಂದೆ, ಎಷ್ಟೋ ವರ್ಷಗಳ ಹಿಂದಿನ ಒಂದು ಇಂಗ್ಲಿಶ್ ಪುಸ್ತಕದಲ್ಲಿ ಈ ಚಿತ್ರವನ್ನು ನೋಡಿದೆ. ಭಾರತೀಯನಾದ ನನಗೆ ಇದು ಹನುಮಂತನ ಚಿತ್ರವೆಂದು ಥಟ್ಟನೆ ಹೊಳೆಯಿತು. ಆದರೆ ನಮ್ಮ ಪುರಾಣಗಳ ಪರಿಚಯವಿರದ ಪಾಶ್ಚಾತ್ಯರಿಗೆ ಹಾಗೆ ಅನಿಸಲು ಸಾಧ್ಯವಿಲ್ಲ! ಇದೊಂದು ಆದಿವಾಸಿಗಳ ಕಲ್ಪನಾಚಿತ್ರವೆಂದು ಅವರು ಭಾವಿಸಿರಬಹುದು! (ಆದಿವಾಸಿಗಳು ತಮ್ಮ ಕಲ್ಪನೆಯ ಮೂಲಕ ಅಂತಹ ಒಂದು ಚಿತ್ರವನ್ನು ಸೃಜಿಸಲು ಸಾಧ್ಯವಿಲ್ಲ!) 

 

ಹೀಗಿರುವಾಗ ಭರತಖಂಡಕ್ಕೆ ಆಗಮಿಸಿದ ಅನೇಕ ಸಮುದಾಯಗಳಲ್ಲಿ ಬಾಹ್ಯಾಂತರಿಕ್ಷದ ಒಂದು ಸಮುದಾಯವೂ ಇದ್ದಿರಲು ಸಾಧ್ಯವಿದೆ. ಜಿಜ್ಞಾಸುಗಳು ಗಂಭೀರವಾದ ಸಂಶೋಧನೆಯನ್ನು ಮಾಡಲು ಈ ವಿಷಯವು ಯೋಗ್ಯವಾಗಿದೆ!

 

ಇನ್ನು ಬಾಹ್ಯಾಂತರಿಕ್ಷವನ್ನು ಬಿಟ್ಟು ಸಮುದ್ರಮಾರ್ಗಕ್ಕೆ ಬರೋಣ. ದೇವತೆಗಳು ಹಾಗು ಅಸುರರು ಜೊತೆಯಾಗಿ ಸಮುದ್ರಮಥನವನ್ನು ಮಾಡಿದಾಗ, ಸಮುದ್ರದ ಒಡಲಿನಿಂದ ಹದಿನಾಲ್ಕು ರತ್ನಗಳು ಹೊರಬಂದವು ಎಂದು ನಮ್ಮ ಪುರಾಣಗಳು ಹೇಳುತ್ತವೆ. ಆ ರತ್ನಗಳಲ್ಲಿ ಏಳು ಮುಖದ ಕುದುರೆ ಸಹ ಒಂದು ರತ್ನ. ಸಮುದ್ರದ ಈ ರತ್ನಗಳು ಈಜಿಪ್ತಿನಿಂದ ಭಾರತಕ್ಕೆ ಸಮುದ್ರಮಾರ್ಗವಾಗಿ ಬಂದ ‘ರತ್ನಗಳು’ ಎಂದು ಕೆಲವು ಸಂಶೋಧಕರು ಹೇಳುತ್ತಾರೆ. ಇವುಗಳಲ್ಲಿ ಕುದುರೆಯೂ ಸಹ ಇದೆ. ಪ್ರಾಚೀನ ಭಾರತದಲ್ಲಿ ಕುದುರೆಗಳು ಇರಲಿಲ್ಲ. ಈಜಿಪ್ತಿನಿಂದ ಕುದುರೆಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತಿತ್ತು. ಈಜಿಪ್ತದ ಭಾಷೆಯಲ್ಲಿ ಕುದುರೆಗೆ hytr ಎಂದು ಕರೆಯುತ್ತಾರೆ. ಅದೇ ಕನ್ನಡದಲ್ಲಿ ‘ಕುದುರೆ’ಯಾಗಿದೆ ಎಂದು ಕನ್ನಡದ ಕಣ್ವರೆಂದು ಖ್ಯಾತರಾದ ಬಿ.ಎಮ್.ಶ್ರೀಕಂಠಯ್ಯನವರು ತರ್ಕಿಸಿದ್ದಾರೆ. ಕರ್ನಾಟಕದ ಕರಾವಳಿಯಲ್ಲಿರುವ ಭಟಕಳವು ಒಂದು ಕಾಲದಲ್ಲಿ ಖ್ಯಾತ ಬಂದರು ಆಗಿತ್ತು ಹಾಗು ಈ ಬಂದರಿಗೆ ಈಜಿಪ್ತಿನ ಜೊತೆ ನೇರ ಸಂಪರ್ಕವಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಅಲ್ಲಿಂದ ಬಂದ ಅರಬರು ಭಟಕಳದಲ್ಲಿ ನೆಲೆಸಿದರು. ಅವರಿಗೆ ‘ನವಾಯತರು’ ಎಂದು ಸ್ಥಳೀಯರು ಕರೆಯುತ್ತಾರೆ. (ನವಾಯತ=ನವ+ಆಯತ). ಇವರೀಗ ಪರಕೀಯರಾಗಿ ಉಳಿದಿಲ್ಲ! ನಮ್ಮ ನಾಡಿನ ಮುಖ್ಯ ಪ್ರವಾಹದಲ್ಲಿ ಇವರು ಮಿಳಿತರಾಗಿ ಹೋಗಿದ್ದಾರೆ.

 

(ಟಿಪ್ಪಣಿ: (೧) ಭಟಕಳ ಬಂದರಿನ ಅನುಕೂಲತೆಯನ್ನು ಅರಿತಂತಹ ಶ್ರೀ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದಾಗ, ಭಟಕಳವನ್ನು ಮೈಸೂರಿಗೆ ಮಾರಲು ಕೊಡುವಂತೆ ಬ್ರಿಟಿಶರನ್ನು ಕೇಳಿಕೊಂಡಿದ್ದರು; ಆದರೆ ಬ್ರಿಟಿಶರು ಅದಕ್ಕೆ ಒಪ್ಪಲಿಲ್ಲ.

(೨) ಹಿಮಾಲಯವಾಸಿಯಾದ ಶಿವನ ವಾಹನವು ನಂದಿಯಾಗಿತ್ತೇ ಹೊರತು, ಕುದುರೆಯಾಗಿರಲಿಲ್ಲ. ಅವನ ಮಗನಾದ ಗಣಪತಿಯೂ ಸಹ ಗಜಮುಖನೇ ಹೊರತು, ಆಶ್ವಮುಖನಲ್ಲ! ಕುದುರೆಗಳ ಬಳಕೆಯು ಭಾರತದಲ್ಲಿ ರಾಮಾಯಣ ಹಾಗು ಮಹಾಭಾರತದ ಕಾಲಗಳಿಂದ ಅಂದರೆ ಆರ್ಯರ ಆಗಮನದ ನಂತರವೇ ಪ್ರಾರಂಭವಾಗುತ್ತದೆ.)

 

ಇದಿಷ್ಟು ಪ್ರಾಗೈತಿಹಾಸಿಕ ಭಾರತದ ಪುರಾಣ. ಇನ್ನು ಐತಿಹಾಸಿಕ ಭಾರತದಲ್ಲಿ ಸಿಗುವ ಕೆಲವು ಸಮುದಾಯಗಳನ್ನು ನೋಡೋಣ!

(೧) ಮಲ್ಲರು: ಮಲ್ಲರು ಭಾರತದಲ್ಲೆಲ್ಲ ಹರಡಿದ ದೊಡ್ಡ ಸಮುದಾಯ. ಕುರುಕ್ಷೇತ್ರ ಯುದ್ಧದಲ್ಲಿ ಮಲ್ಲರು ಭಾಗವಹಿಸಿದ್ದರು ಎಂದು ವ್ಯಾಸಭಾರತವು ಹೇಳುತ್ತದೆ. ಈ ಮಲ್ಲರ ವಾಸಸ್ಥಾನವು ಇದೀಗ ಪಾಕಿಸ್ತಾನದ ಪಂಜಾಬ ಹಾಗು ಭಾರತದ ಝಾರಖಂಡದಲ್ಲಿದೆ. ಇವರದು ಜಾಟ ಕುಲ. (ಜಾಟ >> ಜಾತ = ಕುಲೀನ). ಇವರು ಬಂಗಾಲವನ್ನು ಸಹ ಆಳಿದ್ದರು. ಅಲ್ಲಿ ಇವರು ಕಟ್ಟಿಸಿದ ಗುಡಿ-ಗುಂಡಾರಗಳಿವೆ. ಮಲ್ಲ ಅರಸರು ಕನ್ನಡ ನಾಡಿನವರೆಂದು ಸ್ಥಳೀಯ ಮಾರ್ಗದರ್ಶಿಗಳು ಹೇಳುತ್ತಾರೆ. ಕರ್ನಾಟಕದಲ್ಲಿ ಸಹ ಮಲ್ಲರು ಸಾಕಷ್ಟು ಸಂಖ್ಯೆಗಳಲ್ಲಿ ಹರಡಿಕೊಂಡಿದ್ದರು. ಇವರ ಅನೇಕ ನೆಲೆಗಳು ‘ಮಲ್ಲ’ ಎನ್ನುವ ಪೂರ್ವಪದದಿಂದ ಪ್ರಾರಂಭವಾಗುತ್ತವೆ. ಉದಾಹರಣೆಗೆ ಮಲ್ಲಾಡಿಹಳ್ಳಿ, ಮಲ್ಲಾಪುರ, ಮಲ್ಲೇಶ್ವರ ಇತ್ಯಾದಿ. ಕರ್ನಾಟಕದಲ್ಲಿ ಹರಿದ ಮಲಪ್ರಭಾ ನದಿಯು ವಾಸ್ತವದಲ್ಲಿ ‘ಮಲ್ಲಪ್ರಭಾ’!. ಸಂಸ್ಕೃತ ಪಂಡಿತರು ಇದನ್ನು ‘ಅಮಲಪ್ರಭಾ’ ಎಂದು ತಿದ್ದುವ ಜಾಣ ಕೆಲಸವನ್ನು ಮಾಡುತ್ತಾರೆ! ಕರ್ನಾಟಕದಲ್ಲಿ ಇರುವ ಅಜಮಾಸು ೩೦,೦೦೦ ಹಳ್ಳಿಗಳಲ್ಲಿ ಸುಮಾರು ೩೮೫ ಹಳ್ಳಿಗಳ ಹೆಸರುಗಳು ‘ಮಲ್ಲ’ ಎನ್ನುವ ಉಪಾಧಿಯೊಂದಿಗೆ ಪ್ರಾರಂಭವಾಗುತ್ತವೆ, ಅರ್ಥಾತ್ ಅಂದಾಜು ೧೩%. ಇದಲ್ಲದೆ ಕೇರಳದಲ್ಲಿಯೂ ಸಹ ಈ ಹೆಸರಿನ ಹಳ್ಳಿಗಳಿವೆ. ಕನ್ನಡದ ಜಾನಪದ ಕಥೆಗಳಲ್ಲಿ ‘ಮಲಪೂರಿ’ ಎನ್ನುವ ಒಬ್ಬ ಯಕ್ಷಿಣಿ ಬರುತ್ತಾಳೆ. ಅರ್ಥಾತ್ ಕರ್ನಾಟಕದಲ್ಲಿ ಈಗ ಹೇಳಹೆಸರಿಲ್ಲದಂತೆ ನಶಿಸಿ ಹೋಗಿದ್ದರೂ ಸಹ, ಈ ಮಲ್ಲರು ಒಂದು ಕಾಲಕ್ಕೆ ಕರ್ನಾಟಕದ ಒಂದು ಪ್ರಬಲ ಸಮುದಾಯವಾಗಿದ್ದರು. ಕರ್ನಾಟಕದಲ್ಲಿ ಇವರು ಈಗ ಇರದಿದ್ದರೂ ಸಹ ಉತ್ತರಭಾರತದಲ್ಲಿ ಇವರದು ದೊಡ್ಡ ಸಮುದಾಯವಾಗಿ ಉಳಿದಿದೆ. ಒಂದು ಕಾಲಕ್ಕೆ Bandit Queen ಎಂದು ಖ್ಯಾತಳಾಗಿದ್ದ ಫೂಲನ್ ದೇವಿಯು ಮಲ್ಲ ಕುಲದವಳು. ಮಲ್ಲರು ಜಲಗಾರರೂ ಸಹ ಅಹುದು. ಇವರು ‘ಗಂಗಾಮತಸ್ಥ’ರಿಗೆ ಹತ್ತಿರದವರಾಗಿರಬಹುದೆ? ಗಂಗಾಮತಸ್ಥರು ಕರ್ನಾಟಕದಲ್ಲಿ ಇನ್ನೂ ಇದ್ದಾರೆ. ಮಹಾಭಾರತದಲ್ಲಿ ನಾವು ಗುರುತಿಸಬಹುದಾದ,  ಗಂಗೆಗೆ ಸಂಬಂಧ ಪಟ್ಟ ಈರ್ವರು ಪ್ರಸಿದ್ಧಪುರುಷರೆಂದರೆ, (೧) ವ್ಯಾಸ ಮತ್ತು (೨) ಭೀಷ್ಮ.

 

ವ್ಯಾಸನು ಪರಾಶರ ಎಂಬ ಋಷಿ ಹಾಗು ಮತ್ಸ್ಯಗಂಧಿ ಎನ್ನುವ ಬೆಸ್ತ ತರುಣಿಯ ಮಗನು. ವ್ಯಾಸನ ಜನನದ ನಂತರ ಪರಾಶರನು, ಮತ್ಸ್ಯಗಂಧಿಗೆ ವಿದಾಯ ಹೇಳಿ ಹೊರಟು ಹೋದನು! ಮತ್ಸ್ಯಗಂಧಿಯೇ ವ್ಯಾಸನನ್ನು ತನ್ನ ಬೆಸ್ತಕುಲದಲ್ಲಿ ಬೆಳೆಸಿದಳು ಎಂದು ನಾವು ಭಾವಿಸಬಹುದು. ಅದರಂತೆಯೇ ಭೀಷ್ಮನು ಶಂತನು ಎನ್ನುವ ಮಹಾರಾಜ ಹಾಗು ಗಂಗಾದೇವಿಯ ಸಂಯೋಗದಿಂದ ಜನಿಸಿದನು. ಈ ಎರಡೂ ಘಟನೆಗಳಲ್ಲಿ ನಮಗೆ ಸ್ಪಷ್ಟವಾಗಿ ಗೋಚರವಾಗುವ ವಿಷಯವೆಂದರೆ, ಈ ಬೆಸ್ತ ಕನ್ಯೆಯರಿಗೆ ವಿವಾಹಬಂಧನವು ಕಡ್ಡಾಯವಾಗಿರಲಿಲ್ಲ. ಮಾತೃಪ್ರಧಾನ ಕುಲದವರಾದ ಬೆಸ್ತ ಕನ್ಯೆಯರಲ್ಲಿ ಆರ್ಯಕುಲದ ಗಂಡಸರಿಗೆ ಜನಿಸಿದವರು ಈ ಭೀಷ್ಮ ಹಾಗು ವ್ಯಾಸ ಮಹರ್ಷಿಗಳು. ಗಂಗೆಯು ತನ್ನಲ್ಲಿ ಹುಟ್ಟಿದ ಮೊದಲ ಏಳು ಮಕ್ಕಳನ್ನು ನದಿಯಲ್ಲಿ ಬಿಸುಟಳು ಎನ್ನುವದರ ಅರ್ಥವೇನು? ಈ ಬೆಸ್ತರ ಕುಲವು ಮಾತೃಪ್ರಧಾನವಾಗಿದ್ದು, ಇವಳು ತನ್ನ ಮಕ್ಕಳನ್ನು ತನ್ನ ಕುಲದವರ ಆಶ್ರಯದಲ್ಲಿ ಬೆಳೆಸಿದಳು; ಎಂಟನೆಯ ಮಗುವನ್ನು ಶಂತನು ರಾಜನು ಬೇಡಿಕೊಂಡಾಗ, ಅವನಿಗೆ ಒಪ್ಪಿಸಿ, ತಾನು ಮತ್ತೆ ತನ್ನ ಪೂರ್ವಸ್ಥಾನಕ್ಕೆ ಮರಳಿದಳು!

 

ವಾಸ್ತವದಲ್ಲಿ ಆರ್ಯರಲ್ಲಿಯೂ ಸಹ ವಿವಾಹಬದ್ಧತೆ ಮೊದಮೊದಲು ಇರಲಿಲ್ಲ. ಶ್ವೇತಕೇತು ಎನ್ನುವ ವಟುವಿನ ಕಥೆಯನ್ನು ಕೇಳಿರಿ. ಈ ವಟುವು ಒಂದು ಮಧ್ಯಾಹ್ನ ತನ್ನ ಆಶ್ರಮಕ್ಕೆ ಅನಿರೀಕ್ಷಿತವಾಗಿ ಬಂದಾಗ, ಅಲ್ಲಿ ತನ್ನ ತಾಯಿ ಒಬ್ಬ ಅಪರಿಚಿತ ಗಂಡಸಿನ ಜೊತೆಗೆ ಮಲಗಿರುವುದನ್ನು ನೋಡುತ್ತಾನೆ. ಅದು ಅವನಿಗೆ ಸಹ್ಯವಾಗುವುದಿಲ್ಲ. ತಕ್ಷಣವೇ ಆತನು ಶಾಪರೂಪದಲ್ಲಿ ಒಂದು ಕಟ್ಟಳೆಯನ್ನು ಮಾಡುತ್ತಾನೆ. ಇನ್ನು ಮೇಲೆ ಆರ್ಯ ಹೆಂಗಸರು ತಮ್ಮ ಗಂಡಂದಿರ ಜೊತೆಗೆ ಮಾತ್ರ ಮಲಗತಕ್ಕದ್ದು, ಬೇರೆ ಗಂಡಸರ ಜೊತೆಗೆ ಮಲಗಕೂಡದು. ಈ ವಿಷಯವನ್ನು ನಾವು ಪರೀಕ್ಷಿಸುವಾಗ, ಆರ್ಯರು ಭೂಮಿಯ ಉತ್ತರ ಭಾಗದಿಂದ ಭಾರತಕ್ಕೆ ಬಂದರು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಉತ್ತರ ಧ್ರುವಕ್ಕೆ ಸಮೀಪದಲ್ಲಿರುವ ಎಸ್ಕಿಮೋಗಳಲ್ಲಿ ಸಂತಾನೋತ್ಪತ್ತಿ ಕಡಿಮೆ. ಅಲ್ಲಿಯ ಹವಾಮಾನ ಹಾಗು ಆಹಾರದ ಕೊರತೆಯಿಂದಾಗಿ ಇದು ಸಹಜವೇ. ಆದರೆ, ಎಲ್ಲ ಮನುಷ್ಯಕುಲಗಳಲ್ಲಿಯೂ ಸಂತಾನೋತ್ಪತ್ತಿಯ ಬಯಕೆ ಇದ್ದೇ ಇರುತ್ತದಲ್ಲವೆ? ಆದುದರಿಂದ ಓರ್ವ ಎಸ್ಕಿಮೊ ಕುಟುಂಬಕ್ಕೆ ಯಾರಾದರೂ ಪುರುಷನು ಅತಿಥಿಯಾಗಿ ಬಂದಂತಹ ಸಂದರ್ಭದಲ್ಲಿ, ಎಸ್ಕಿಮೋನ ಹೆಂಡತಿಯ ಜೊತೆಗೆ ಈ ವ್ಯಕ್ತಿಯು ಕಡ್ಡಾಯವಾಗಿ ಮಲಗಿಕೊಳ್ಳಲೇಬೇಕು! ಇದು ಅಲ್ಲಿಯ ರಿವಾಜು. ಭಾರತದಂತಹ ಅತಿಸಂತಾನ ದೇಶದಲ್ಲಿ ಏಕಪತಿತ್ವವು ಅನಿವಾರ್ಯವಾಗಿದೆ!

 

ಪ್ರಾಚೀನ ಕಾಲದ ಪ್ರಾಚೀನ ಭಾರತದಲ್ಲಿ, ಬೇಟೆಯ ಹಾಗು ಬೆಳೆಯ ಜಾಗಗಳ ಸಲುವಾಗಿ ವಿವಿಧ ಸಮುದಾಯಗಳು ಪರಸ್ಪರ ಹೋರಾಡುತಿದ್ದದ್ದು ಸಹಜವೇ ಆಗಿದೆ. ಹಾಗಿದ್ದರೆ, ಈ ಮಲ್ಲರ ಕಡು ವೈರಿ ಯಾರೆಂದಿರಾ? ಆತನೇ ನಮ್ಮ ಪುರಾಣಪ್ರಸಿದ್ಧ ದೇವನಾದ ಮಲ್ಲಾರಿ! ಈ ಮಲ್ಲಾರಿಗೆ ‘ಮಲ್ಲನಿಷೂದನ’ ಎಂದು ಸಂಬೋಧಿಸಲಾಗಿದೆ.ಒಂದು ಕಾಲಕ್ಕೆ ಶೂರ-ವೀರ ಕುಲದವರಾದ ಮಲ್ಲರು, ತಮ್ಮ ಹೋರಾಟಗಳಲ್ಲಿ ಮಣ್ಣು ಮುಕ್ಕಿದಾಗ, ಅವರು ಸಮಾಜಸೋಪಾನದಲ್ಲಿಯ ಅತ್ಯಂತ ಕೆಳಮಟ್ಟದ ಮೆಟ್ಟಲಿಗೆ ಇಳಿದರು!

 

ಈ ಎಲ್ಲ ಭಾರತೀಯ ಕುಲಗಳ ವೈವಿಧ್ಯಗಳೇನು, ಅವರುಗಳ ಸಂಸ್ಕೃತಿ ಹೇಗಿತ್ತು ಎನ್ನುವುದನ್ನು ಮತ್ತೊಮ್ಮೆ ಪರಿಶೀಲಿಸೋಣ.