Monday, October 10, 2016

ಸೀಮೋಲ್ಲಂಘನ............................ಬೇಂದ್ರೆ


ಹೋಗೋಣ ಬಾ ! ಇನ್ನು ಸೀಮೆಯನು ದಾಟಿ !!

ಪಂಗಡವ ಪಂಗಡವ ವಿಂಗಡಿಸಿ ಕೆಟ್ಟು
ಸಂಗಡಿಸಿ ಕೂಡಿರುವ ಬಾಳುವೆಯ ಗುಟ್ಟು
ಕಂಗೊಳಿಸೆ ಹಾಗಿರುವ ಬಿರುದನ್ನು ತೊಟ್ಟು
ಹೋಗೋಣ ಬಾ ಇನ್ನು ಸೀಮೆಯನು ದಾಟಿ.

ಇಲ್ಲಸಲ್ಲದ ಕಾಲತೊಡರುಗಳ ಕಡಿದು
ಬಲ್ಲವರು ತೋರಿರುವ ಹಾದಿಯನು ಹಿಡಿದು
ಎಲ್ಲರೂ ಒಂದಾಗಿ ಒಂದಾಗಿ ನಡೆದು
ಹೋಗೋಣ ನಾವೆಲ್ಲ ಸೀಮೆಯನು ದಾಟಿ.

ಅಕ್ಕತಂಗೆಂದರಿಗೆಲ್ಲ ವಿದ್ಯೆಯನು ಕಲಿಸಿ
ಚಿಕ್ಕಮಕ್ಕಳ ಬುದ್ಧಿ ಮುದ್ದಾಡಿ ಬಲಿಸಿ
ನಕ್ಕು ನಲಿದಾಡಿ ಹಿರಿಕಿರಿಯರನು ಒಲಿಸಿ
ಅಡಿಗಡಿಗೆ ಹೋಗೋಣ ಸೀಮೆಯನು ದಾಟಿ.

ಮಾಡಿದರೆ ನನ್ನಿ ತಾ ಮಾಡುವರು ನನ್ನಿ
ನೋಡಿ ನೋಡಿದವರ್ಗೆ ಬನ್ನಿ ಬನ್ನೆನ್ನಿ
ಕೊಡಬನ್ನಿ-ಕೊಳಬನ್ನಿ-ಕೊಡುವೆನೀ ಬನ್ನಿ
ಹೀಗೆಂದು ಸಾಗೋಣ ಸೀಮೆಯನು ದಾಟಿ.

ಹಿಂದಿರುವ ಹಗೆಯೀಗ ಅಂಗಾರವಾಯ್ತು
ಮುಂದಿರುವ ಗೆಳೆತನವೆ ಸಿಂಗಾರವಾಯ್ತು
ಇಂದು ಮುಟ್ಟಿದ ಪತ್ರಿ ಬಂಗಾರವಾಯ್ತು
ಹೋಗೋಣ ಬಾ ಇನ್ನು ಸೀಮೆಯನು ದಾಟಿ.

ಒಂದೆ ತಾಯಿಯ ಮಕ್ಕಳಂತೆ ಒಂದಾಗಿ
ಅಂದಗೇಡನು ಕೆಡಿಸಿ ಚೆಲುವು ಚೆಂದಾಗಿ
ಮುಂದಿರುವ ಜನರ ಸರಿಮೇಲು ಮುಂದಾಗಿ
ಸಾಗೋಣ ಹೋಗೋಣ ಸೀಮೆಯನು ದಾಟಿ.

ಹೋಗಲಾಡಿಸಿಕೊಂಡು ತಿರುಕತನವನ್ನು
ನೀಗಲಾಡಿಸುತ ಮನೆಮುರುಕತನವನ್ನು
ಬೇಗದಿಂ ಕರುನಾಡ ಹರುಕತನವನ್ನು
ಕಳೆದು ಹಿರಿದಾಗೋಣ ಸೀಮೆಯನು ದಾಟಿ.

ಪಡುವಣದ ಶಕ್ತಿಯಲಿ ಮೂಡಣದ ಭಕ್ತಿ
ಬಡಗಣದ ಭುಕ್ತಿಯಲಿ ತೆಂಕಣದ ಮುಕ್ತಿ
ಒಡನೊಡನೆ ನೆರೆಬೆರೆತು ಹೊಸತಾಯ್ತು ಯುಕ್ತಿ
ಹೀಗೆ ಇಡಿಯಾಗೋಣ ಸೀಮೆಯನು ದಾಟಿ.

ದೇವಿಯರ ನಾಡೆಂತು ಹಿಂದುಳಿಯಬಹುದು?
ಭಾವಭಕ್ತಿಯವೆಂತು ಹಗೆಯಾಗಲಹುದು?
ಹೇವದಿಂ ಗುರಿಯಿಟ್ಟು ಮೇಳ ಹೊರಟಿಹುದು
ಏರಿಕೆಯ ಕರಿನಾಡ ಸೀಮೆಯನು ದಾಟಿ.
********************************************

ವಿಜಯದಶಮಿಯಂದು ಬೇಂದ್ರೆಯವರು ‘ಸೀಮೋಲ್ಲಂಘನ’ದ ಕರೆ ನೀಡಿದ್ದಾರೆ. ಅವರ ಸೀಮೋಲ್ಲಂಘನವು ನಮ್ಮನ್ನೇ ನಾವು ಗೆಲ್ಲಿಕೊಳ್ಳುವ ಪರಾಕ್ರಮದಲ್ಲಿದೆಯೇ ಹೊರತು, ಪರರ ಆಕ್ರಮಣದಲ್ಲಿಲ್ಲ. ಈ ಕವನ ‘ಗರಿ’ ಸಂಕಲನದಲ್ಲಿದೆ. ಗರಿ ಮೊದಲು ಪ್ರಕಟವಾಗಿದ್ದು ೧೯೩೨ರಲ್ಲಿ. ಆಗಿನ್ನೂ ಕರ್ನಾಟಕದ ಏಕೀಕರಣ ಕನಸಿನ ಮಾತಾಗಿತ್ತು. ಆ ಕನಸು ಈ ಕವನದಲ್ಲೂ ಬಿಂಬಿಸಿದೆ. ಕರುನಾಡ ಏಳ್ಗೆಯನ್ನು ಈ ಕವನ ಕಾಣುತ್ತಿದೆ. 

ಬೇಂದ್ರೆಯವರ ಅಪಾರ ಕಲ್ಪನಾಪ್ರತಿಭೆಯು, ಪದಸಾಮರ್ಥ್ಯವು ಎಲ್ಲ ಸೀಮೆಗಳನ್ನು ದಾಟಿರುವುದನ್ನು ನಾವು ಈ ದೀರ್ಘ ಕವನದಲ್ಲಿ ನೋಡಬಹುದು.

ವಿಜಯದಶಮಿಯ ದಿನ ಬೇಂದ್ರೆಯವರ ಜೊತೆಜೊತೆಗೇ ನಾವೂ ಸಹ ಉಗ್ಗಡಿಸೋಣ, ಬನ್ನಿ : 

ಕೊಡಬನ್ನಿ-ಕೊಳಬನ್ನಿ-ಕೊಡುವೆನೀ ಬನ್ನಿ
ಹೀಗೆಂದು ಸಾಗೋಣ ಸೀಮೆಯನು ದಾಟಿ.

Saturday, September 17, 2016

ಬೇಂದ್ರೆ ಕನಸು-ಕಾವ್ಯ



  Bliss was it in that dawn to be alive,
          But to be young was very heaven!
                  -ವಿಲಿಯಮ್ ವರ್ಡ್ಸವರ್ಥ (ಫ್ರೆಂಚ ರಾಜ್ಯಕ್ರಾಂತಿಯ ಬಗೆಗೆ)

ಬೇಂದ್ರೆಯವರ ತಾರುಣ್ಯದ ಕಾಲವು ರಾಷ್ಟ್ರೀಯ ನವೋದಯದ ಕಾಲವಾಗಿತ್ತು. ಕನ್ನಡ ತರುಣರಿಗೆ ಒಂದೆಡೆ ಸ್ವಾತಂತ್ರ್ಯಸಮರದಲ್ಲಿ ಧುಮುಕುವ ಹುಮ್ಮಸ್ಸು, ಇನ್ನೊಂದೆಡೆ ಕನ್ನಡತಾಯಿಯ ಸೇವೆಯ ಹಂಬಲ, ಮಗುದೊಂದೆಡೆಗೆ ಆಧ್ಯಾತ್ಮದ ಒಲವು. ಬೇಂದ್ರೆಯವರ ಕಾವ್ಯದಲ್ಲಿ ಈ ಎಲ್ಲ ಆದರ್ಶಗಳ ಕನಸುಗಳನ್ನು ನೋಡಬಹುದು. ಅವರ ‘ನರಬಲಿ’ ಕವನವಂತೂ ಅವರನ್ನು ಸೆರೆಮನೆಗೆ ಅಟ್ಟಿತು. ಮೇಲಾಗಿ ಅವರಿಗೆ ಆರು ವರ್ಷಗಳವರೆಗೆ ನೌಕರಿ ಕೊಡಕೂಡದೆನ್ನುವ ಸರಕಾರೀ ಕಟ್ಟಾಜ್ಞೆ ಬೇರೆ. ಈ ಸಂಕಟಗಳಲ್ಲಿ ಬೇಂದ್ರೆ ಬೆಂದರು, ಬೇಂದ್ರೆಕಾವ್ಯವು ರಸಪಾಕವಾಯಿತು.

ನವೋದಯ ಕಾಲದಲ್ಲಿ ಬೇಂದ್ರೆಯವರು ದೇಶಪ್ರೇಮದ ಹಾಗು ಕನ್ನಡಸೇವೆಯ ಕನಸುಗಳನ್ನು ಕಂಡರು. ಅನೇಕ ಸಲ ಇವು ಅವರು ನಿಜವಾಗಿಯೂ ಕಂಡ ಕನಸುಗಳೇ ಆಗಿರುವುದು ವರಕವಿಯ ವೈಶಿಷ್ಟ್ಯವಾಗಿದೆ. ಅವರ ಆಧ್ಯಾತ್ಮಸಾಧನೆಯೂ ಸಹ ಈ ಕನಸುಗಳಲ್ಲಿ ಪ್ರತಿಬಿಂಬಿತವಾಗಿದೆ. 

ಇದರಲ್ಲಿ ಅಚ್ಚರಿಪಡುವಂತಹದೇನೂ ಇಲ್ಲ. ಮಾನವಜೀವಿಯ ನಿದ್ರಾವಸ್ಥೆಯನ್ನು ವಿಜ್ಞಾನಿಗಳು ಲಘುನಿದ್ರಾವಸ್ಥೆ , ಗಾಢ ನಿದ್ರಾವಸ್ಥೆ ಹಾಗು ಮತ್ತೊಮ್ಮೆ  ಲಘುನಿದ್ರಾವಸ್ಥೆ ಎಂದು ಮೂರು ಭಾಗಗಳಲ್ಲಿ ವಿಭಜಿಸಿದ್ದಾರೆ. ಗಾಢನಿದ್ರಾವಸ್ಥೆಯ ನಂತರದ ಲಘುನಿದ್ರಾವಸ್ಥೆಯಲ್ಲಿ ಮಾನವಜೀವಿಯು ಎಚ್ಚರಕ್ಕೆ ಹತ್ತಿರವಾಗಿ ಇರುವದರಿಂದ,ಆ ಅವಧಿಯ ಕನಸುಗಳು ಅವನ ನೆನಪಿನಲ್ಲಿ ಉಳಿಯುವುದು ಸಹಜವಾಗಿದೆ. ಈ ಸ್ಥಿತಿಯಲ್ಲಿ ಸಾಧಕನು ತನ್ನ ಆದರ್ಶಗಳ ಹಾಗು ಸಾಧನೆಯ ಕನಸುಗಳನ್ನು ಕಾಣಬಹುದು ಮತ್ತು ಕವಿಯು ತನ್ನ ಕಾವ್ಯರಚನೆಯ ಹೊಳಹುಗಳನ್ನು ಕಾಣಬಹುದು.

ಕಾವ್ಯರೂಪವನ್ನು ಪಡೆದ ಬೇಂದ್ರೆಯವರ ಇಂತಹ ಕನಸುಗಳಲ್ಲಿ ಕೆಲವನ್ನು ನಾವು ಇಲ್ಲಿ ಗಮನಿಸಬಹುದು:
(೧) ತೇಲಾಡುವಾಗ (‘ಗಂಗಾವತರಣ’ ಕವನಸಂಕಲನ, ಪುಟ೧೬)
(೨) ಕನಸಿನ ಕಥೆ (‘ಗಂಗಾವತರಣ’ ಕವನಸಂಕಲನ, ಪುಟ೨೫)
(೩) ಬಾ ಕೈ ತಾ ( ‘ಸಖೀಗೀತ’ ಕವನಸಂಕಲನ..ಪುಟ ೫೬ )
(೪) ಏಳು ಕನ್ನಿಕೆಯರು ( ‘ನಾದಲೀಲೆ’ ಕವನಸಂಕಲನ.. ಪುಟ೬)


(೧) ತೇಲಾಡುವಾಗ:
ನಿದ್ರಾವಸ್ಥೆಯ ಕೊನೆಯ ಭಾಗದ ಅಂದರೆ REM (Rapid Eye Movement = ತೀವ್ರ ಅಕ್ಷಿ ಸಂಚಲನ) ಅವಧಿಯ ಸ್ಥಿತಿಯನ್ನು ಬೇಂದ್ರೆ ತಮ್ಮ‘ತೇಲಾಡುವಾಗ’ ಕವನದಲ್ಲಿ ಈ ರೀತಿಯಾಗಿ ಅನುಭವಿಸಿದ್ದಾರೆ:

“ ತೇಲಾಡುವಾಗ ಮನಸು
            ಮೇಲಾಡತಾವ ಕನಸು
   ತಾಕಾಡುವಾಗ ಇತ್ತ
            ತೇಕಾಡತಾವ ಚಿತ್ತ ”         

(ಮನಸ್ಸು ಕೆಳಪಾತಳಿಯಿಂದ ಮೇಲ್‍ಪಾತಳಿಗೆ ಸರಿದಾಗ, ಕನಸುಗಳು ಮೇಲಾಡುತ್ತವೆ ಎನ್ನುವುದು ಮನೋವೈಜ್ಞಾನಿಕ ವಾಸ್ತವವಾಗಿರುವದನ್ನು ಗಮನಿಸಿರಿ.) ಇಂತಹ ತಮ್ಮ ಕನಸುಗಳಲ್ಲಿ ಬೇಂದ್ರೆಯವರು ಕವನಗಳನ್ನು ‘ಕಾಣು’ತ್ತಾರೆ. ಎಚ್ಚರಕ್ಕೆ ಬಂದಾಗ ಈ ಕವನಗಳ ಕೆಲಭಾಗವಾದರೂ ಅವರಿಗೆ ಲಭ್ಯವಾಗುತ್ತದೆ. ಅದನ್ನು ಅವರು ಹೇಳುವುದು ಹೀಗೆ:

ಹಾಸಾದ ಮಿಂಚಿನಂದ
         ಬೀಸಿದ್ದ ಸೆರಗಿನಿಂದ
ಸೆಳೆದಂತೆ ಎರಡು ನೂಲು
         ಉಳಿದಾವ ನಾಕು ಸಾಲು

ಎಚ್ಚರದಲ್ಲಿಯ ಚಿಂತೆಗೆ ಹಾಗು ಚಿಂತನೆಗೆ ಬೆಳಗಿನ ಜಾವದ ಕನಸುಗಳಲ್ಲಿ ಉತ್ತರ ಸಿಗುವುದು ಅನೇಕರಿಗೆ ಲಭಿಸಿದ ಅನುಭವವಾಗಿರಬಹುದು. ಇದರಲ್ಲಿ ವಿಶೇಷವೇನೂ ಇಲ್ಲ. (ಶಾಂತ ಅವಸ್ಥೆಯಲ್ಲಿ ಹಾಗು ಧ್ಯಾನಾವಸ್ಥೆಯಲ್ಲಿ ಮಿದುಳಿನ ಕೆಲ ಆವರ್ತಗಳ ಕಂಪನವು ತೀವ್ರವಾಗುವುದರಿಂದ ಆ ಭಾಗದ ಮಿದುಳು ಹೆಚ್ಚು ಕ್ರಿಯಾಶೀಲವಾಗುತ್ತದೆ.) ಇಂತಹ ಸಮಯದಲ್ಲಿ ವರಕವಿಗೆ ವರಕಾವ್ಯವೇ ಸ್ಫುರಿಸುವುದು ಸ್ವಾಭಾವಿಕವೇ ಆಗಿದೆ. 

‘ತೇಲಾಡುವಾಗ’ ಕವನದಲ್ಲಿ ಕಂಡು ಬರುವ ಮತ್ತೊಂದು ಅಂಶ ಹೀಗಿದೆ:
ಬೇಂದ್ರೆಯವರು ತಮ್ಮ ಕವನಗಳಲ್ಲಿ ಬಳಸುವ ಪದಗಳು ಸಾಮಾನ್ಯ ಆಡುನುಡಿಯ ಪದಗಳೇ ಆಗಿರುತ್ತವೆ, ಆದರೆ ಅಲ್ಲಿ ಹುಟ್ಟುವ ಕವನಗಳು ಅಸಾಮಾನ್ಯವಾಗಿರುತ್ತವೆ. ಇದಕ್ಕೆ ನಿದರ್ಶನವಾಗಿ ಮೇಲಿನ ನುಡಿಯನ್ನೇ ನೋಡೋಣ. ಹಾಸಾದ ಮಿಂಚು ಅಂದರೆ ವಿಸ್ತಾರವಾದ ಮಿಂಚು. ಈ ಮಿಂಚಿನ ಹರಹಿಗೆ ಮಿತಿ ಇಲ್ಲ. ಆದರೆ ಇದು ಮಿಂಚಾಗಿರುವುದರಿಂದ  ನಮಗೆ ಇದರ ನೋಟ ಸಿಗುವುದು ಕ್ಷಣಕಾಲ ಮಾತ್ರ.
(ಟಿಪ್ಪಣಿ: ನೆಯ್ಗೆಯಲ್ಲಿ ಬರುವ ‘ಹಾಸು’ ಹಾಗು ‘ಹೊಕ್ಕು’ ಎನ್ನುವ ಪದಗಳನ್ನು ಗಮನಿಸಿರಿ. ಮಿಂಚೇ ಇಲ್ಲಿ ‘ಹಾಸು’ ಆಗಿದೆ.)

ಈ ಸೆರಗಿನ ಒಡತಿ ಬೇಂದ್ರೆಯವರ ಕಾವ್ಯಪ್ರತಿಭಾದೇವಿ! ಅವಳು ಬೀಸಿದ ಅಂಬರವ್ಯಾಪಿ ಸೆರಗಿನಿಂದ, ಬೇಂದ್ರೆಯವರು ಎಳೆದುಕೊಂಡದ್ದು ಎರಡು ಸಾಲು ಮಾತ್ರ! ಸಾಮಾನ್ಯ ಪದಗಳಲ್ಲಿ ಎಂತಹ ಅಸಾಮಾನ್ಯ ಅನುಭವವನ್ನು ಬೇಂದ್ರೆಯವರು ಹುದುಗಿಸಿದ್ದಾರೆ ಎನ್ನುವುದನ್ನು ಗಮನಿಸಿದಾಗ, ಅವರ ಕಾವ್ಯಪ್ರತಿಭೆಯ ಮಿಂಚು ನಮ್ಮ ದೃಗ್ಗೋಚರಕ್ಕೂ ಬರುವುದಷ್ಟೆ! (ಎರಡು ನೂಲುಗಳನ್ನು ಮಾತ್ರ ಎಂದು ಬೇಂದ್ರೆಯವರು ಹೇಳಿಕೊಂಡಿದ್ದಾರೆ. ಆದರೆ ಅವರ ಕವನಗಳ ದೀರ್ಘತೆಯನ್ನು ಹಾಗು ಅಪಾರ ಕಲ್ಪನಾಶಕ್ತಿಯನ್ನು ಕಂಡಾಗ, ಇವು ಎರಡು ನೂಲಲ್ಲ; ಇದು ಅಪಾರ ‘ಅಂಬರ’ ಎನ್ನುವ ಅರಿವು ನಮಗೆ ಮೂಡುವುದು.

(೨) ಕನಸಿನ ಕಥೆ:
ಈ ಕವನದಲ್ಲಿ ಬೇಂದ್ರೆಯವರು ತಾವು ಕಂಡ ಕನಸೊಂದನ್ನು ತಮ್ಮ ಮಗಳು ಮಂಗಳಾಗೆ ಹೇಳುತ್ತಿದ್ದಾರೆ:
“ ಮಗಳೆ ಮಂಗಳೆ, ಬಾರೆ ಕೇಳು ಕಥೆಯ
ಹರುಷವೀಯುವುದು ಪರಿಹರಿಸಿ ವ್ಯಥೆಯ ”

ಕವನದ ಕೊನೆಕೊನೆಯಲ್ಲಿ ಬರುವ ನುಡಿ ಹೀಗಿದೆ:
“ಆಹಾ ಏನಿದು! ಎನುತ ನಾನು ಎದ್ದೆ
ನಿನಗಾಗ ಸಕ್ಕರೆಜೊಂಪು ನಿದ್ದೆ
ನಿನಗಾಗಿ ಈ ಕತೆಯ ನೆನಪು ಇಟ್ಟೆ
ಹೇಳುವಾಗಲೆ ಮಾತು ಬಿಗಿದು ಬಿಟ್ಟೆ.”

ತಮ್ಮ ಅಪ್ಪ ಹಾಡಿದ ಕಥೆಗೆ ಮಗಳ ಮಂಗಳಶ್ಲೋಕ ಹೀಗಿದೆ:
“ ಕಥೆ ಆಯಿತೇ ಅಣ್ಣ, ಬಹಳ ಸಣ್ಣ
ಕಥೆಯ ಮೈಗಿಂತ ಮಿಗಿಲಿದರ ಬಣ್ಣ.”

(೩) ಬಾ ಕೈ ತಾ:
ಬೇಂದ್ರೆಯವರು ಆದರ್ಶಗಳ ನಡುವೆ ಬದುಕಿದವರು ಎನ್ನುವುದನ್ನು ನೋಡಿದ್ದೇವೆ. ಈ ಆದರ್ಶಸಿದ್ಧಿಗೆ ಪರಮಾತ್ಮನ ಬೆಂಬಲವೂ ಬೇಕಷ್ಟೆ. ಬೇಂದ್ರೆಯವರಂತೂ ಬಾಲ್ಯದಿಂದಲೇ ಶ್ರದ್ಧೆಯ ವಾತಾವರಣದಲ್ಲಿ ಬೆಳೆದವರು. ತಮ್ಮ ಆದರ್ಶಗಳನ್ನು ಪಾಲಿಸಲು ಅವರು ಭಗವಂತನ ಸಹಾಯವನ್ನು ಯಾಚಿಸುತ್ತಾರೆ. ಅವರ ಭಕ್ತಿ ಸಖ್ಯರೂಪದ್ದು. ‘ಬಾ ಕೈ ತಾ’ ಕವನವು ಕನಸಿನಲ್ಲಿ ಹೊಳೆದ ಕವನವಲ್ಲದಿದ್ದರೂ ಸಹ, ಬೇಂದ್ರೆಯವರ ಕನಸುಮನಸುಗಳಲ್ಲಿ ಭಗವಂತನ ಅನುಗ್ರಹದ ಯಾಚನೆ ಇದ್ದದ್ದನ್ನು, ಈ ಕವನವು ಸ್ಪಷ್ಟಪಡಿಸುತ್ತದೆ:
ಮನಸಿನಲ್ಲಿ ಹೊಳೆದವನೆ
ಕನಸಿನಲ್ಲಿ ಬೆಳೆದವನೆ
ಜೀವನವನೆ ತೊಳೆದವನೆ
ಎಲ್ಲಿರುವೆ ಬಾ!
ಚೆಲುವಿನಲ್ಲಿ ಮಾಗಿರುವೆ
ಒಲವಿನಲ್ಲಿ ಬಾಗಿರುವೆ
ಜಗದ ರೂಪವಾಗಿರುವೆ ಕೈಗೆ ಕೈಯ ತಾ!

(೪) ಏಳು ಕನ್ನಿಕೆಯರು:
ಬೇಂದ್ರೆಯವರು ಆಧ್ಯಾತ್ಮ ಸಾಧಕರು. ಅವರ ಸಾಧನೆಯ ತೀವ್ರತೆ ಎಷ್ಟಿತ್ತೆಂದರೆ, ಅವರ ಕನಸುಗಳೂ ಸಹ ಸಾಂಕೇತಿಕವಾಗಿರುತ್ತಿದ್ದವು. ಈ ಕವನವು ಕನಸಿನಲ್ಲಿ ನಡೆದದ್ದನ್ನು ನೇರವಾಗಿಯೇ ಹೇಳುತ್ತದೆ:

ನಿದ್ದೆಗಡಲಿನಲ್ಲಿ ನಾನು
ಎದ್ದೇಳುತಲಿದ್ದೆನಾಗ
ಏಳು ಕನ್ನಿಕೆಯರು ಬಂದು
ಏಳು ಎಂದು ಎಂದರೋ---
ಈ ಕನ್ನಿಕೆಯರು ಬಹುಶಃ ಸಪ್ತಮಾತೃಕೆಯರು ಇರಬಹುದು ಅಥವಾ ಸಾಧನೆಯ ಹಾದಿಯಲ್ಲಿಯ ಸಹಾಯಕ ದೇವತೆಗಳಾಗಿರಬಹುದು. ಬೇಂದ್ರೆಯವರನ್ನು ಪರೀಕ್ಷಿಸಿದ ಈ ಕನ್ನಿಕೆಯರು ಅವರ ಸಾಧನೆಯು ಇನ್ನೂ ಪಕ್ವವಾಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಬೇಂದ್ರೆಯವರು ಹೆಚ್ಚಿನ ಸಾಧನೆಯ ಸಂಕಲ್ಪವನ್ನು ಮಾಡುತ್ತಾರೆ.

ಆದಿ ಶಂಕರಾಚಾರ್ಯರು ತಮ್ಮ ‘ದಕ್ಷಿಣಾಮೂರ್ತಿ ಸ್ತೋತ್ರ’ದಲ್ಲಿ ‘ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾಪರಿಭ್ರಾಮಿತಃ’ ಎಂದು ಪುರುಷನನ್ನು ಬಣ್ಣಿಸಿದ್ದಾರೆ. ಬೇಂದ್ರೆಯವರು ಸ್ವಪ್ನದಲ್ಲಿ ಅಥವಾ ಜಾಗೃತಾವಸ್ಥೆಯಲ್ಲಿ ಲೋಕಮಾಯೆಯಿಂದ ಅಲ್ಲ, ಆದರೆ ಕಾವ್ಯಮಾಯೆಯಿಂದಆವೃತವಾದವರು!

Sunday, August 28, 2016

ತ್ರಿವೇಣಿಯವರ ‘ಮೊದಲ ಹೆಜ್ಜೆ’



ಕನ್ನಡದಲ್ಲಿ ಕಾದಂಬರಿಯುಗವು ಪ್ರಾರಂಭವಾದಾಗಿನಿಂದ ಸಾವಿರಾರು ಕಾದಂಬರಿಗಳು ಕನ್ನಡದಲ್ಲಿ ಬಂದಿವೆ. ಶಿವರಾಮ ಕಾರಂತರು ಮಾನವೀಯ ನೆಲೆಯ ವೈಚಾರಿಕ ಕಾದಂಬರಿಗಳನ್ನು ಸೃಷ್ಟಿಸಿದರೆ, ಶಾಂತಿನಾಥ ದೇಸಾಯಿಯವರು ‘ಮುಕ್ತಿ’ಯ ಮೂಲಕ ನವ್ಯ ಕಾದಂಬರಿಯ ಮಾದರಿಯನ್ನು ತೋರಿಸಿದರು. ನವ್ಯೋತ್ತರ ಸಾಹಿತಿಯಾದ ದೇವನೂರ ಮಹಾದೇವರು ‘ಕುಸುಮಬಾಲೆ’ಯ ಮೂಲಕ ಓದುಗರು ಬೆರಗಾಗುವಂತಹ ಕಾದಂಬರಿಯನ್ನು ಸೃಷ್ಟಿಸಿದರು! ಈ ಎಲ್ಲ ಕಾದಂಬರಿಗಳ ನಡುವೆ ತ್ರಿವೇಣಿಯವರು ಬರೆದ ‘ಮೊದಲ ಹೆಜ್ಜೆ’ ಎನ್ನುವ ಕಾದಂಬರಿಯು ತನ್ನ ವೈಶಿಷ್ಟ್ಯಗಳಿಂದಾಗಿ ಏಕಮೇವಾದ್ವಿತೀಯವಾಗಿದೆ.

ತ್ರಿವೇಣಿಯವರು ಈ ಕಾದಂಬರಿಯನ್ನು ೧೯೫೦ರ ದಶಕದಲ್ಲಿ ಬರೆದಿರಬಹುದು. ಅಂದರೆ ಇಂದಿಗೆ ಸುಮಾರು ೬೦ ವರ್ಷಗಳೇ ಕಳೆದು ಹೋಗಿವೆ. ಕನ್ನಡದ ಮೊದಲ ಕಾದಂಬರಿಯಿಂದ ಇತ್ತೀಚಿನ ಕಾದಂಬರಿಯವರೆಗೂ ಯಾವ ಘಟಾನುಘಟಿ ಕಾದಂಬರಿಕಾರನೂ ತ್ರಿವೇಣಿಯವರು ಈ ಕಾದಂಬರಿಯಲ್ಲಿ ಬಳಸಿದ ತಂತ್ರವನ್ನು ಬಳಸಿಲ್ಲ! ಆದುದರಿಂದ, ಆ ಹಳೆಯ ಕಾದಂಬರಿಯ ನವನವೀನ ರಚನಾವಿಧಾನವನ್ನು ಪ್ರಸ್ತಾಪಿಸಲು ಇಲ್ಲಿ ಪ್ರಯತ್ನಿಸಲಾಗಿದೆ.  

‘ಮೊದಲ ಹೆಜ್ಜೆ’ಯ ಕಥೆಯು ಬಹಳ ಸರಳವಾಗಿದೆ. ಕಾಲು ಜಾರಿದ ಹುಡುಗಿಯೊಬ್ಬಳು ಪಟ್ಟ ಸಂಕಷ್ಟಗಳ ಕಥೆ ಇದು. ಅ. ನ.ಕೃ, ತ.ರಾ.ಸು ಮೊದಲಾದ ಕಾದಂಬರಿಕಾರರಾಗಿದ್ದರೆ, ಏಕಪ್ರಕಾರವಾದ ಸರಳವರ್ಣನೆಯ ಮೂಲಕ ಕಥೆಯನ್ನು ಹೇಳಿ ಮುಗಿಸಿ ಬಿಡುತ್ತಿದ್ದರು. ಶಿವರಾಮ ಕಾರಂತರಾಗಿದ್ದರೆ ಕಾದಂಬರಿಯ ನಾಯಕಿಯು ತನ್ನ ಸಂಕಷ್ಟಗಳನ್ನು ಎದುರಿಸಿ ಬಾಳನ್ನು ಕಟ್ಟಿಕೊಂಡ ಕಥೆಯನ್ನು ಹೇಳುತ್ತಿದ್ದರು. ಅನಂತಮೂರ್ತಿಯವರಾಗಿದ್ದರೆ ನಾಯಕಿಯ existential dilemmaಅನ್ನು ಮನೋಹರವಾಗಿ ವರ್ಣಿಸುತ್ತಿದ್ದರು!

ತ್ರಿವೇಣಿ ಈ ಕಥೆಯನ್ನು ಏಕಪ್ರಕಾರವಾಗಿ ವರ್ಣಿಸಿಲ್ಲ. ಅವರ ಮನದಲ್ಲಿ ಮಿಡಿಯುತ್ತಿರುವ ನಾಯಕಿಯು ಎಲ್ಲ ಯುವತಿಯರಂತೆ ಕನಸುಗಳನ್ನು ಇಟ್ಟುಕೊಂಡವಳಲ್ಲ.  ಆದರೆ (ಸಂತಾನಸೃಷ್ಟಿಗಾಗಿ ನಿಸರ್ಗವು ನಿರ್ಮಿಸಿರುವ) ಗಂಡು-ಹೆಣ್ಣಿನ ಪ್ರೀತಿಯ ಹಂಬಲವು ಎಲ್ಲರಿಗೂ ಇರುವಂತೆ ಈ ಹೆಣ್ಣಿಗೂ ಇದ್ದೇ ಇರಬೇಕಲ್ಲವೆ? ಹಾಗೆಂದು ಅವಳು ಸುಲಭವಾಗಿ ಕಾಲು ಜಾರುವಂಥವಳೂ ಅಲ್ಲ.  ತಾನು ಅವಲಂಬಿಸಬಹುದಾದ, ವಿಶ್ವಾಸಪಾತ್ರನಾದ ಗಂಡಿಗೆ ಮಾತ್ರ ಅವಳು ತನ್ನನ್ನು ಸಮರ್ಪಿಸಿಕೊಳ್ಳುತ್ತಾಳೆ. ಆದರೆ ಆ ಗಂಡು ಈ ಹೆಣ್ಣಿಗೆ ಕೈಕೊಟ್ಟು ಓಡಿದರೆ? ಇಂತಹ ನಾಯಕಿಯ ಕಥೆಯನ್ನು ಬರೆಯುವಾಗ, ತ್ರಿವೇಣಿಯವರು ಆವರೆಗಿನ ಕನ್ನಡ ಕಾದಂಬರಿಗಳ ನೇರ ವರ್ಣನಾಕ್ರಮವನ್ನು ಬಿಟ್ಟು, ಹೊಸದೊಂದು ಕ್ರಮವನ್ನು ರೂಪಿಸಿಕೊಂಡರು.

ಮೊದಲ ಹೆಜ್ಜೆಯ ಕಥಾನಕವನ್ನು ನಾಲ್ಕು ಭಾಗಗಳಲ್ಲಿ ರಚಿಸಲಾಗಿದೆ. ಮೊದಲನೆಯ ಭಾಗದ ಕಥೆಯು ನಾಯಕಿಯ ಹೇಳುವ ಕಥೆಯಾಗಿದೆ. ಈ ಭಾಗದಲ್ಲಿ ಅವಳ ಬಾಲ್ಯ ಹಾಗು ಅವಳು ತನ್ನ ತಂಗಿಯ ಬಾಣಂತನಕ್ಕಾಗಿ, ತಂಗಿಯ ಮನೆಗೆ ಬರುವ ವರ್ಣನೆ ಇದೆ. ಎರಡನೆಯ ಭಾಗದಲ್ಲಿ ಇವಳಿಗೆ ಮೋಸ ಮಾಡಿದ ಗಂಡು ಹೇಳುವ ಕಥೆ ಇದೆ.  ಮೂರನೆಯ ಭಾಗದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇವಳ ಬೇಡದ ಬಸುರಿಗೆ ಹೆರಿಗೆ ಮಾಡಿಸಿದ ನರ್ಸ ಒಬ್ಬಳು ಹೇಳುವ ಕಥೆ ಇದೆ. ಕೊನೆಯ ಭಾಗದಲ್ಲಿ ಇವಳ ಸೆರೆಮನೆಯ ಬದುಕಿನ ವರ್ಣನೆ ಇದೆ. ಈ ಯಾವ ಭಾಗದಲ್ಲಿಯೂ ನಾಯಕಿಯ ಹೆಸರು ಬರುವುದಿಲ್ಲ. ಇವಳಿಗೆ ಸಂಬಂಧಪಟ್ಟ ಉಳಿದೆಲ್ಲ ಪಾತ್ರಗಳ ಹೆಸರುಗಳು ಬರುತ್ತವೆ. ಇವಳು ಒಬ್ಬ ಅಸಹಾಯಕ, ಅನಾಮಿಕ, ಕಪ್ಪು ಹುಡುಗಿ ; ಹೆಸರಿನಿಂದ ಗುರುತಿಸುವ ಯೋಗ್ಯತೆ ಇದ್ದವಳಲ್ಲ!

ಈ ಕಥೆಯನ್ನು ಕಾದಂಬರಿಕಾರಳೇ ನೇರವಾಗಿ ಹೇಳಲು ಬರುತ್ತಿರಲಿಲ್ಲವೆ, ನಾಲ್ಕು ವಿಭಿನ್ನ ವ್ಯಕ್ತಿಗಳು ಹೇಳುವ ಕಾದಂಬರಿಯನ್ನಾಗಿ ಮಾಡುವ ಅವಶ್ಯಕತೆ ಏನಿತ್ತು ಎನ್ನುವ ಸಂದೇಹ ಯಾರಿಗಾದರೂ ಬಾರದೆ ಇರದು. ಆದರೆ ‘ಮೊದಲ ಹೆಜ್ಜೆ’ ಕಾದಂಬರಿಯನ್ನು ಓದಿದಾಗ, ಈ ತರಹದ ವಿಂಗಡಣೆಯಲ್ಲಿ ಇರುವ ಅನುಕೂಲತೆಯ ಹಾಗು ಲೇಖಕಿಯ ಚಾತುರ್ಯದ ಅರ್ಥವಾಗುವುದು.

ತ್ರಿವೇಣಿಯವರ ನಾಯಕಿಯರು ಸ್ವೇಚ್ಛಾಚಾರಿಗಳಲ್ಲ, ನೀತಿಯ ಗೆರೆಯನ್ನು ದಾಟುವವರಲ್ಲ. ಹಾಗಿದ್ದಾಗ ಕಾಲು ಜಾರಲು ಒಂದು ಕಾರಣ ಬೇಕಲ್ಲವೆ? ಅದಕ್ಕೆ ಪೂರ್ವಭಾವಿಯಾಗಿ, ಈ ಕಪ್ಪು ಹುಡುಗಿಯ ಬಾಲ್ಯದ ಹಾಗು ಯೌವನದ ಪರಿಸರವನ್ನು ಲೇಖಕಿಯೇ ವರ್ಣಿಸಿದ್ದರೆ ಅದು ಅತಿಶಯೋಕ್ತಿಯ ವರ್ಣನೆಯೋ ಅಥವಾ ನೀರಸ ವರ್ಣನೆಯೋ ಆಗುವ ಸಾಧ್ಯತೆ ಇತ್ತು. ನಾಯಕಿಯ ತಂದೆ ಬಡತನದಲ್ಲಿ ಬದಕುತ್ತಿರುವ ಒಬ್ಬ ಶಾಲಾಶಿಕ್ಷಕ. ಅವರಿಗೆ ಇಷ್ಟು ಬೇಗನೆ ಮಕ್ಕಳೇ ಬೇಕಿರಲಿಲ್ಲ. ಅಂತಹ ಸಮಯದಲ್ಲಿ ಮೊದಲಿನ ಹೆರಿಗೆಯಲ್ಲಿ ಒಬ್ಬ ಕಪ್ಪು ಹುಡುಗಿ ಹುಟ್ಟುತ್ತಾಳೆ.  ಈ ಹೆರಿಗೆಯೂ ಸಹ ದೊಡ್ಡಮ್ಮನ ಮನೆಯಲ್ಲಿ ಆಗುವ ಅನಿವಾರ್ಯತೆ. ಈ ಎಲ್ಲವನ್ನೂ ವರ್ಣಿಸುವಾಗ ನಮ್ಮ ಕಪ್ಪು ಹುಡುಗಿಯಲ್ಲಿ ಒಂದು ನಿರ್ಲಿಪ್ತತೆ ಕಾಣುತ್ತದೆ; ವಿಧಿಯನ್ನು ಒಪ್ಪಿಕೊಂಡಂತಹ ಒಬ್ಬ ಸಾಮಾನ್ಯಳ ಮನೋಧರ್ಮ ಕಾಣುತ್ತದೆ. ಇದು ಲೇಖಕಿಯೇ ಮಾಡುವ ವರ್ಣನೆಯಲ್ಲಿ ಸಂಕ್ಷಿಪ್ತವಾಗಿ ಸಾಧ್ಯವಾಗುತ್ತಿರಲಿಲ್ಲ. ನಮ್ಮ ಕಪ್ಪು ಹುಡುಗಿಯು ಹೇಳುವ ರೀತಿಯನ್ನು ನೋಡಿರಿ: 

[ಸುಶೀಲಕ್ಕನ ಮಾತು ಕೇಳಿ ಸುಬ್ಬಿಗೆ ತನ್ನ ಅಸಹಾಯಕತೆ ನೆನೆದು ತುಂಬಾ ಅಳು ಬಂತಂತೆ. ಕೊನೆಗೆ ಬಡವರು; ಬಿಂಕ ಮಾಡಿದರೆ ನಡೆಯೋದಿಲ್ಲ ಎಂದು ಯೋಚಿಸಿ ಒಪ್ಪಿಕೊಂಡಳಂತೆ.
ನಾನು ಹೆಣ್ಣಾಗಿ ಹುಟ್ಟುವುದು ನನ್ನ ತಾಯಿ ತಂದೆಗೆ ಬೇಕಿರಲಿಲ್ಲ. ಮೊದಲನೆಯದಾಗಿ ನನ್ನ ಜನ್ಮವೇ ಅವರಿಗೆ ಬೇಕಿರಲಿಲ್ಲ.]  
(ಸೂಚನೆ: ನಮ್ಮ ಕಪ್ಪು ಹುಡುಗಿಯು ತನ್ನ ತಾಯಿಯನ್ನು ಅವಳ ಹೆಸರಿನಿಂದಲೇ ಎಂದರೆ ಸುಬ್ಬಿ ಎಂದೇ ಕರೆಯುತ್ತಿರುತ್ತಾಳೆ. ಸುಶೀಲಕ್ಕ ಎಂದರೆ ಸುಬ್ಬಿಯ ಅಕ್ಕ. ಸುಶೀಲಕ್ಕ ಸ್ವಲ್ಪ ಸ್ಥಿತಿವಂತಳು. ಆದುದರಿಂದ ಅವಳ ಹೆಸರಿಗೆ ಅಕ್ಕ ಎನ್ನುವ ಜೋಡಣೆ. ಸುಬ್ಬಿ ಕೇವಲ ಸುಬ್ಬಿ! ಸುಬ್ಬಿಗೆ  ಮೊದಲ ಹೆರಿಗೆಯನ್ನು ತವರು ಮನೆಯಲ್ಲಿ ಮಾಡಿಸುವುದು ಸಾಧ್ಯವಿರಲಿಲ್ಲ. ಆದುದರಿಂದ ಅವಳ ಅಕ್ಕನ ಮನೆಯಲ್ಲಿ ಹೆರಿಗೆ ಮಾಡಿಸುವುದು ಅನಿವಾರ್ಯವಾಯಿತು.)

ಈ ಶಾಲಾಶಿಕ್ಷಕನಿಗೆ ಒಂದರ ಮೇಲೊಂದರಂತೆ ಮಕ್ಕಳು ಹುಟ್ಟುತ್ತವೆ. ಆ ಎಲ್ಲ ಕೂಸುಗಳ ಜೋಪಾನ, ತಾಯಿಯ ಬಾಣಂತನ ಹಾಗು ಮನೆಯ ಕೆಲಸದ ಹೊರೆ ಈ ಪುಟ್ಟ ಬಾಲಕಿಯ ಮೇಲೆ ಬೀಳುವುದು ಅನಿವಾರ್ಯ. ಇವಳ ತಂಗಿ ಬೆಳ್ಳಗಿದ್ದು ಸುರೂಪಿಯಾಗಿದ್ದಳು. ಯಾವುದೋ ಮದುವೆಯಲ್ಲಿ ಅವಳನ್ನು ನೋಡಿದ ಒಬ್ಬ ಯುವಕ ಅವಳಿಗೆ ಮರುಳಾದ. ಹೀಗಾಗಿ ಅಕ್ಕನಿಗಿಂತಲೂ ಮೊದಲೇ ತಂಗಿಗೆ ಮದುವೆಯಾಯಿತು. ಶೀಘ್ರವೇ ಅವಳಿಗೆ ಹೆರಿಗೆಯೂ ಆಯಿತು. ತಾಯಿ ಬಾಣಂತಿ ಆದಾಗಲೊಮ್ಮೆ ಅವಳನ್ನು ಜೋಪಾನ ಮಾಡಿದ ಕಪ್ಪು ಹುಡುಗಿಗೆ, ಇದೀಗ ತಂಗಿಯ ಬಾಣಂತನಕ್ಕಾಗಿ ಅವಳ ಮನೆಗೆ ಹೋಗುವುದು ಅಗತ್ಯವಾಯಿತು. ಈ ಭಾಗದಲ್ಲಿ ಎಲ್ಲಿಯೂ ನಮ್ಮ ನಾಯಕಿಯು ತನ್ನ ಕಷ್ಟಗಳನ್ನು ಹೇಳಿಕೊಂಡಿಲ್ಲ. In fact ಅವಳು ವಾಸ್ತವವನ್ನು ಅರಿತುಕೊಂಡಂತಹ, ಅದಕ್ಕೆ ಬಾಲ್ಯದಿಂದಲೇ ಒಗ್ಗಿಕೊಂಡಂತಹ ಒಬ್ಬ ಸಾಧಾರಣ ಹುಡುಗಿ.

ಇವಳ ತಂಗಿಯ ಮನೆಯ ಆವರಣದಲ್ಲಿರುವ ಕೋಣೆಯೊಂದರಲ್ಲಿ ಒಬ್ಬ ಕಾ^ಲೇಜ ಹುಡುಗನಿದ್ದಾನೆ. ಆತ ಶೋಕೀಲಾಲ. ನಮ್ಮ ಕಪ್ಪು ಹುಡುಗಿಗೆ ಅವನಲ್ಲಿ ಆಸಕ್ತಿಯೇನೂ ಇಲ್ಲ. ಇದಿಷ್ಟು ನಮ್ಮ ನಾಯಕಿಯು ಹೇಳುವ ಮೊದಲ ಭಾಗದ ಕಥೆ. ಈ ತರಹದ ತಂತ್ರದಿಂದಾಗಿ ಲೇಖಕಿಗೆ ಕಪ್ಪು ಹುಡುಗಿಯ ಸಾಮಾನ್ಯ ಪರಿಸರವನ್ನು ಅವಳ ಸಾಧಾರಣತೆಯನ್ನು ನಿರ್ಲಿಪ್ತವಾಗಿ ಚಿತ್ರಿಸುವದು ಸಾಧ್ಯವಾಗಿದೆ. ಈ ತಂತ್ರದ ಅತಿ ದೊಡ್ಡ ಲಾಭವೆಂದರೆ, ನಾಯಕಿಯ ಹೆಸರನ್ನು ಹೇಳುವ ಅಗತ್ಯವು ಎಲ್ಲೂ ಬಂದಿಲ್ಲ. ನಮ್ಮ ನಾಯಕಿಯು ಒಬ್ಬ ಅತಿ ಸಾಮಾನ್ಯ, ಅತಿ ಸಾಧಾರಣ, ಅನಾಮಿಕ ಕಪ್ಪು ಹುಡುಗಿ. 

ಎರಡನೆಯ ಭಾಗದ ಕಥೆಯನ್ನು ಹೇಳುವವನು ಈ ಕಪ್ಪು ಹುಡುಗಿಯನ್ನು ನಂಬಿಸಿ, ಮೋಸಗೊಳಿಸಿದ ಕಾ^ಲೇಜು ಹುಡುಗ. ಈತನಿಗೆ ಈ ಹುಡುಗಿಯ ಬಗೆಗೆ ಎಂತಹ ಅಭಿಪ್ರಾಯವಿದೆ ಎಂದರೆ, ‘ಹಿಟ್ಟು ಹಳಸಿತ್ತು, ನಾಯಿ ಹಸಿದಿತ್ತು’ ಎನ್ನುವುದು ತಮ್ಮ ಪ್ರಣಯದ ಬಗೆಗೆ ಇವನಿಗಿರುವ ಅಭಿಪ್ರಾಯ. ‘ತನ್ನ ತಂಗಿಯನ್ನು ನೋಡಲು ತನ್ನ ತಂದೆ-ತಾಯಿಯರು ಬರುತ್ತಿದ್ದಾರೆ. ಅವರೆದುರಿಗೆ ತಮ್ಮ ಮದುವೆಯ ಪ್ರಸ್ತಾಪವನ್ನುಮಾಡಿರಿ’ ಎಂದು ನಮ್ಮ ಕಪ್ಪು ಹುಡುಗಿ ದೈನ್ಯತೆಯಿಂದ ಕೇಳಿಕೊಂಡಾಗ, ಈ ಹುಡುಗ ಮನಸ್ಸಿನಲ್ಲಿಯೇ ನಗುತ್ತಾನೆ. ಮರುದಿನವೇ ತಾನಿದ್ದ ಆ ಕೋಣೆಯನ್ನು ಬಿಟ್ಟು, ಬೇರೊಂದು ಕೋಣೆಗೆ ಹೊರಟು ಹೋಗುತ್ತಾನೆ. ಈ ಸಂದರ್ಭದಲ್ಲಿ ಆ ಹುಡುಗಿಯ ಮನಸ್ಸಿನಲ್ಲಿ ಏನೇನು ನಡೆದಿರಬಹುದು ಎನ್ನುವುದನ್ನು ಆತ ಗ್ರಹಿಸುವುದು ಹೀಗೆ: ಆತ ಚಿಕ್ಕವನಿದ್ದಾಗ ಒಂದು ನಾಯಿ ಮರಿಯನ್ನು ನೀರಿನಲ್ಲಿ ಮುಳುಗಿಸಿದ್ದ. ಇದೀಗ ಕಪ್ಪು ಹುಡುಗಿಯ ನೋಟದಿಂದ ಅವನಿಗೆ ಆ ಪ್ರಸಂಗ ನೆನಪಿಗೆ ಬರುತ್ತದೆ:

[ನಾಯಿ ಮರಿ ನೀರಿನಲ್ಲಿ ಮುಳುಗುವದಕ್ಕೆ ಮುಂಚೆ ನನ್ನ ಕಡೆ ದೈನ್ಯದಿಂದ ನೋಡಿ ಮುಳುಗಿತು……ಮರಿಯನ್ನು ಈಚೆಗೆ ತೆಗೆದಾಗ ಅದಕ್ಕೆ ಪ್ರಾಣವಿರಲಿಲ್ಲ.ಆದರೆ ಅದು  ಮುಳುಗುವದಕ್ಕೆ ಮುಂಚೆ ನನ್ನ ಕಡೆ ನೋಡಿದುದನ್ನು ಮಾತ್ರ ಎಂದಿಗೂ ಮರೆಯಲಾರೆ.
ಅವಳು ನನ್ನ ಕಡೆ ದೃಷ್ಟಿ ಬೀರಿ ಒಳಗೆ ಹೋದಾಗ ನನಗೆ ನಾಯಿ ರಾಮಿಯ ನೆನಪು ಬಂದಿತು.]

ಈ ಭಾಗವನ್ನು ಸ್ವತಃ ಲೇಖಕಿಯೇ ನಿರೂಪಿಸಿದ್ದರೆ, ಕಾ^ಲೇಜು ಹುಡುಗನ ಹಿನ್ನೆಲೆಯನ್ನು ವಿವರಿಸಬೇಕಾಗುತ್ತಿತ್ತು.
ಕಪ್ಪು ಹುಡುಗಿಯು ಆ ಹುಡುಗನ ಬಲೆಗೆ ಬೀಳುವ ಸಂದರ್ಭವನ್ನು ವಿವರಿಸುವುದು ಲೇಖಕಿಯ ಅನಿವಾರ್ಯತೆಯಾಗುತ್ತಿತ್ತು. ಲೇಖಕಿಯು ಪಕ್ಷಪಾತ ಮಾಡುತ್ತಿದ್ದಾಳೆ  ಎಂದು ಓದುಗನಿಗೆ ಅನಿಸುವ ಸಾಧ್ಯತೆ ಇತ್ತು. ಇದೀಗ ಹುಡುಗನೇ ಮಾಡುವ ನಿರೂಪಣೆಯಿಂದಾಗಿ ಇತರ ವರ್ಣನೆಗಳನ್ನು ಬಿಟ್ಟು ಬಿಡುವುದು ಹಾಗು ಕಾದಂಬರಿಯ ಗಾತ್ರವನ್ನು ನಿಯಂತ್ರಿಸುವುದು ಲೇಖಕಿಗೆ ಸಾಧ್ಯವಾಗಿದೆ.

 ಮೂರನೆಯ ಭಾಗದ ಕಥೆಯನ್ನು ಹೇಳುವವಳು ಸಾರ್ವಜನಿಕ ಹೆರಿಗೆ ಆಸ್ಪತ್ರೆಯ ಒಬ್ಬ ನರ್ಸ. ಒಬ್ಬ ಕಪ್ಪು ಹುಡುಗಿ ಯಾರದೂ ಜೊತೆಯಿಲ್ಲದೆ, ಆಸ್ಪತ್ರೆಗೆ ಬಂದು ಹೆರಿಗೆ ಮಾಡಿಸಿಕೊಳ್ಳುವ ಸಂದರ್ಭವನ್ನು ಇವಳು ಹೇಳುತ್ತಾಳೆ. ಆ ಹುಡುಗಿಯ ಹೆಸರನ್ನು ಕೇಳಿದಾಗ, ಅವಳು ಏನೋ ಒಂದು ಹೆಸರನ್ನು ಹೇಳುತ್ತಾಳೆ. ಹೆರಿಗೆಯ ಸಮಯದಲ್ಲಿ ಹಾಗು ಹೆರಿಗೆಯಾದ ಬಳಿಕ ಇವಳನ್ನು ನೋಡಲು ಯಾರೂ ಬರುವದಿಲ್ಲ. ಆ ಕಪ್ಪು ಹುಡುಗಿ ಹೆರಿಗೆ ಆಸ್ಪತ್ರೆಯಿಂದ ತನ್ನ ಮಗುವನ್ನು ಎತ್ತಿಕೊಂಡು ಒಬ್ಬಳೇ ಹೊರಟು ಹೋಗುತ್ತಾಳೆ.

[ಅವಳೊಡನೆ ಯಾರೂ ಇರಲಿಲ್ಲ. ಅವಳು ಆಸ್ಪತ್ರೆಯ ಲಂಗವನ್ನು ಕಳಚಿ ಮೊದಲ ದಿನ ತಾನುಟ್ಟುಕೊಂಡ ಬಂದಿದ್ದ ಹರಕು ಸೀರೆಯನ್ನು ಧರಿಸಿದ್ದಳು. ಮಗು ಅವಳ ಹೆಗಲ ಮೇಲೆ ಮಲಗಿ ನಿದ್ರಿಸುತ್ತಿತ್ತು.]
ಕೆಲವೇ ದಿನಗಳ ಬಳಿಕ ಆ ನರ್ಸ ಪತ್ರಿಕೆಯಲ್ಲಿ ಒಂದು ಸಮಾಚಾರವನ್ನು ಓದುತ್ತಾಳೆ:
[…ಈ ಸುದ್ದಿಯ ಪಕ್ಕದಲ್ಲೆ ಮತ್ತೊಂದು ಸುದ್ದಿ ಪ್ರಕಟವಾಗಿತ್ತು. ‘ಶಿಶುಹತ್ಯೆ ಎಂಬ ಶಿರೋನಾಮೆ ನನ್ನ ಗಮನವನ್ನು ಸೆಳೆಯಿತು…]

ತ್ರಿವೇಣಿಯವರು ನೇರ ನಿರೂಪಣೆಯನ್ನು ಅವಲಂಬಿಸಿದ್ದರೆ, ಈ ಕಪ್ಪು ಹುಡುಗಿಯು ಬಸಿರಾದ ಬಳಿಕ, ಅವಳ ಮನೆಯವರಿಗೆ ಅದು ತಿಳಿದ ಬಗೆ, ಅವಳು ಮನೆಯಿಂದ ಹೊರಬೀಳಬೇಕಾದ ಅಸಹಾಯಕತೆ, ಅವಳು ಎಲ್ಲಿ ಮತ್ತು ಹೇಗೆ ಬದುಕಿದಳು ಎನ್ನುವ ವಿವರಗಳನ್ನು ವರ್ಣಿಸಬೇಕಾಗುತ್ತಿತ್ತು. ಆಬಳಿಕ  ತನ್ನ ನವಜಾತ ಶಿಶುವನ್ನು ಹತ್ಯೆಗೈದ ವಿವರಗಳನ್ನು, ಆ ಸಂದರ್ಭದಲ್ಲಿಯ ಅವಳ ಮನಸ್ಸಿನಲ್ಲಿ ಏಳುಬೀಳುತ್ತಿರುವ ಭಾವನೆಗಳನ್ನು ಹೇಳಬೇಕಾಗುತ್ತಿತ್ತು. ಇದೀಗ ಇವಳಿಗೆ ಹೆರಿಗೆ ಮಾಡಿಸಿದ ನರ್ಸ ಕಣ್ಣಿಗೆ ಆ ಸುದ್ದಿ ಬಿಳುವ ಮೂಲಕ, ಉಳಿದೆಲ್ಲ ವರ್ಣನೆಗಳ ಅವಶ್ಯಕತೆಗಳನ್ನು ತ್ರಿವೇಣಿಯವರು ತೊಡೆದು ಹಾಕಿದ್ದಾರೆ. ಭಾವನೆಗಳಿಗೆ ಇಲ್ಲೆಲ್ಲಿಯೂ ಸ್ಥಾನವೇ ಇಲ್ಲ.

ನಾಲ್ಕನೆಯ ಭಾಗದಲ್ಲಿ ನಮ್ಮ ಕಪ್ಪು ಹುಡುಗಿಯೇ ಮತ್ತೊಮ್ಮೆ ತನ್ನ ಕಥೆಯನ್ನು ಹೇಳುತ್ತಾಳೆ. ಅವಳನ್ನು ಇರಿಸಲಾದ ಸೆರೆಮನೆಯ ವರ್ಣನೆಯಿಂದ ಕಥೆ ಪ್ರಾರಂಭವಾಗುತ್ತದೆ. ಶಿಕ್ಷೆಯ ಅವಧಿ ಮುಗಿದ ನಂತರ ಅವಳನ್ನು ಸೆರೆಮನೆಯಿಂದ ಬಿಡುಗಡೆ ಮಾಡುವ ದಿನದ ಅವಳ ಸ್ವಗತ ನಿರೂಪಣೆ ಹೀಗಿದೆ:

 [(ಜೇಲರ್ ಕೇಳುತ್ತಾರೆ:)....’ನಿಮ್ಮೋರು ಯಾರೂ ಇಲ್ಲವೇನು? ನಿಮ್ಮಪ್ಪ ಇದಾರಲ್ಲ….ಅಲ್ಲಿಗೆ ಯಾಕೆ ಹೋಗಬಾರದು?’
ನಾನು ಅವಮಾನದಿಂದ ನಾಲಿಗೆ ಕಚ್ಚಿ ಹೇಳಿದೆ: ‘ಅವರು ನನ್ನ ಮನೆಗೆ ಸೇರಿಸೋಲ್ಲ.’
‘ಯಾಕೆ?’
‘ನಾನು ಅವರ ವಂಶಕ್ಕೆ ಮಸಿ ಬಳಿದಿದೀನಿಂತ ಅವರ ಭಾವನೆ. ಅವರು ನನ್ನ ತಿರುಗಿ ಅವರ ಹತ್ತಿರ ಸೇರಿಸೋದಿಲ್ಲ. ನನಗೆ ಚೆನ್ನಾಗಿ ಗೊತ್ತು. ನಾನೊಬ್ಬಳೇ ಜಗತ್ತನ್ನು ಎದುರಿಸಿ ಹೋರಾಡಬೇಕು.’

ಮಳೆಯಿನ್ನೂ ನಿಂತಿರಲಿಲ್ಲ. ಹನಿಹನಿಯಾಗಿ ಬೀಳುತ್ತಲೇ ಇತ್ತು. ನಾನು ನಿಧಾನವಾಗಿ ಕಾಲೆಳೆದುಕೊಂಡು ಜೈಲಿನ ಕಾಂಪೌಂಡನ್ನು ದಾಟಿ ರಸ್ತೆಗೆ ಬಂದೆ. ಹೆಬ್ಬಾಗಿಲಿನ ಪಕ್ಕದಲ್ಲಿ ಮರವೊಂದರ ಆಶ್ರಯದಲ್ಲಿ  ಮುದುಕನೊಬ್ಬ ನಿಂತಿದ್ದ. ಮುಪ್ಪು ಅವನ ಮುಖದ  ಮೇಲೆ, ದೇಹದ ಮೇಲೆ ತನ್ನ ದಾಳಿ ನಡಿಸಿತ್ತು. ಮುಖದ ತೊಗಲು ಸುಕ್ಕುಗಟ್ಟಿತ್ತು. ಕಣ್ಣುಗಳು ಹೂತು ಹೋಗಿ ಮಂಕಾಗಿದ್ದವು. ಆರಿಸಿ ಹುಡುಕಿದರೂ ತಲೆಯಲ್ಲಿ ಒಂದೂ ಕಪ್ಪು ಕೂದಲು ಇರಲಿಲ್ಲ. ಮಳೆಯಲ್ಲಿ ನೆನೆಯುತ್ತಾ ನಿಂತಿರುವ ಮುದುಕನನ್ನು ನೋಡಿ ನನಗೆ ಮರುಕವುಂಟಾಯಿತು. ನಾನು ಕುತೂಹಲದಿಂದ ಅವನ ಕಡೆಗೆ ನೋಡಿದೆ.
’ಇನ್ನು ಹದಿನೈದಿಪ್ಪತ್ತು ವರ್ಷ ಕಳೆದರೆ ನಮ್ಮ ತಂದೇನೂ ಹೀಗೆ ಕಾಣಬಹುದು’ ಎಂದು ಮನಸ್ಸಿನಲ್ಲಿಯೇ ನಾನು ಹೇಳಿಕೊಂಡೆ.

ಮಳೆಯಲ್ಲಿ ನಡುಗುತ್ತಾ ನಿಂತಿದ್ದ ಮುದುಕನೂ ನನ್ನ ಕಡೆಗೆ ನೋಡಿದ. ಭಾವಾವೇಶದಿಂದ ಅವನ ತುಟಿಯಲುಗಿತು. ಕಾಂತಿಹೀನವಾಗಿದ್ದ ಅವನ ಕಣ್ಣುಗಳಲ್ಲಿ ಬೆಳಕು ಚಿಮ್ಮಿ ಬಂತು. ನಿರ್ಜೀವ ಪ್ರತಿಮೆಯಂತೆ ನಿಂತಿದ್ದ ಅವನ ಕಾಲುಗಳು ಚಲಿಸಿದವು.

ಯಾವುದೋ ಮೋಡಿಗೆ ಒಳಗಾದವಳಂತೆ ನಾನು ನಿಂತಲ್ಲಿಂದ ಅಲುಗದೆ, ರೆಪ್ಪೆ ಮಿಟುಕಿಸದೆ ಮುದುಕನನ್ನೇ ನೋಡಿದೆ. ಆ ಮುದುಕ ನಿಧಾನವಾಗಿ ನನ್ನ ಹತ್ತಿರ ಬಂದು ನನ್ನ ತೋಳು ಹಿಡಿದು, ಅತ್ಯಂತ ಮೃದುವಾದ ದನಿಯಲ್ಲಿ “ಬಾಮ್ಮ, ಮನೆಗೆ ಹೋಗೋಣ” ಎಂದ.]

‘ನಾನು ಅವರ ವಂಶಕ್ಕೆ ಮಸಿ ಬಳಿದಿದೀನಿಂತ ಅವರ ಭಾವನೆ. ಅವರು ನನ್ನ ತಿರುಗಿ ಅವರ ಹತ್ತಿರ ಸೇರಿಸೋದಿಲ್ಲ. ’ ಎಂದು ಕಪ್ಪು ಹುಡುಗಿಯು ಹೇಳುವ ಮೂಲಕ, ತ್ರಿವೇಣಿಯವರು ಕಪ್ಪು ಹುಡುಗಿಯು ಬಸಿರಾದದ್ದು ಅವಳ ಕುಟುಂಬಕ್ಕೆ ತಿಳಿದ ಬಳಿಕ ನಡೆದ ಘಟನೆಗಳನ್ನು, ಅವರು ಇವಳನ್ನು ತಿರಸ್ಕರಿಸಿದ್ದನ್ನು ಬರೆಯದೇನೆ ಓದುಗರಿಗೆ ತಿಳಿಸಿದ್ದಾರೆ. ಇವಳ ದುರಂತದಿಂದಾಗಿ ಇವಳ ತಂದೆಗಾದ ಸಂಕಟವನ್ನು, ಆತನಿಗೆ ಅಕಾಲದಲ್ಲಿ ಮುಪ್ಪು ಅಡರಿದ್ದನ್ನು ಕಪ್ಪು ಹುಡುಗಿಯ ಸ್ವಗತವು ನಮಗೆ ತಿಳಿಸುತ್ತದೆ. ತಂದೆಯ ಬಗೆಗೆ ಇವಳಿಗೆ ಇನ್ನೂ ಆರದ ಪ್ರೀತಿಯನ್ನು ಇದು ತೋರಿಸುತ್ತದೆ. ಇಷ್ಟೆಲ್ಲ ಇದ್ದರೂ ಸಹ ತಂದೆಯು ತನ್ನ ಮಗಳನ್ನು ಮರಳಿ ಮನೆಗೆ ಕರೆದುಕೊಂಡು ಹೋಗುವ ಸಾಲು ಅವಳ ಬಗೆಗೆ ಅವನಿಗಿರುವ ಪ್ರೀತಿಯನ್ನು, ಮರುಕವನ್ನು ತೋರಿಸುತ್ತದೆ.

ತ್ರಿವೇಣಿಯವರು ಸರಸ, ಸುರಸ ಶೈಲಿಗೆ ಹೆಸರಾದವರು. ಈ ಕಾದಂಬರಿಯಲ್ಲಿ ತಮ್ಮ ರಚನಾಶೈಲಿಯನ್ನು ಅವರು ಬದಲಿಸಿದ್ದಾರೆ. ತಾವು ಹೇಳಬೇಕಾದದ್ದನ್ನು ಪದಗಳಲ್ಲಿ ವರ್ಣಿಸದೆ, ಓದುಗನ ಮನಸ್ಸನ್ನು ಮುಟ್ಟಲು ಅವರಿಗೆ ಸಾಧ್ಯವಾಗಿದೆ.

Sunday, August 7, 2016

ದೊಂಗಲುನ್ನಾರೂsರೇ-ಜಾಗ್ರತs.....ದ.ರಾ. ಬೇಂದ್ರೆ


ದೊಂಗಲುನ್ನಾರೂsರೇ-ಜಾಗ್ರತs
ಎಚ್ಚರಿರು ಇದೊಂದೇ ಆಗಲಿ ವ್ರತಾ    ||ಪಲ್ಲ||

ಇನ್ನಾರು ನಿಮ್ಗss / ಎಚ್ಚರಾ ಕೊಡಾವ್ರಣ್ಣಾ
ಹಾದಿ ಐತಿ ಬಲೂ ಬಲೂ ದೂರಾ
ಗಂಟs ಬೀಳ್ತಾನ ಅಲ್ಲಿನೆ ಚೋರಾ
ನಿದ್ದೀ ಬ್ಯಾಡ್ರೆಪ್ಪಾ ಬಂದೀತು ಘೋರಾ || ದೊಂಗಲು…

ಕಳ್ಳಾ ಅಂಬಾವ / ಬ್ಯಾರೆ ಯಾರೂ ಇಲ್ಲಾ
ಅಂವಾ ನಮ್ಹಾಂಗ ನಿಮ್ಹಾಂಗs ಎಲ್ಲಾ
ಆದ್ರ ಧಂದೇನ ಮಾಡಿಕೊಂಡಾನ ಖುಲ್ಲಾ || ದೊಂಗಲು…

ಅಂದಾನು ಹೆದರ್ಬ್ಯಾಡೋ, ಹೆದರ್ಬ್ಯಾಡೋ ತಮ್ಮಾ
ಐತಿ, ರಾಜ್ಯಾನ ಇದು ನಮ್ಮ ನಿಮ್ಮಾ
ಬ್ಯಾರೆ ಬರ್ತಾರು ಯಾರು ?  ಮಕ್ಕೋ ಸುಮ್ಮಾ || ದೊಂಗಲು…

ಇದ್ದವ್ರ ಹರಕೊಳ್ಳಾಕ ಇಲ್ದವ್ರು ಬರ್ತಾರ
ಇದ್ದದ್ದು ಇಲ್ಲದ್ಯಾವ್ದೊ ಯಣ್ಣಾ
ಮನಸ್ಯಾರ s ಹೂಲಿ ಎಬಿಸಿ
ಮನಸ್ಯಾರ್ನ ತಿಂತಾರ
ದೇವ್ರs ತೆರೀಬೇಕೊ ಕಣ್ಣಾ
ಮುಚ್ಚಿಕೊಂಡೈತಿ | ಅಂತಃಕರ್ಣಾ

ಕರ್ಣನ ಕಿಸೇಕsನ ಹಾಕಾವ್ರು ಕನ್ನಾ
ಬಂದು ಎದ್ದೈತಿ ಅಲ್ಲಲ್ಲಿ ಹಾಹಾಕಾರ
ಸ್ವಾಹಾಕಾರಾನ ಬಲು | ದೊಡ್ಡ ಮಂತ್ರ ಆಗೈತಿ
ಬಂದೈತ್ಯೋ ಗೆಣೆಯಾ ಭಾಳ ಘೋರಾ
ಇಲ್ಲಿ ಪಾರಾದವ್ನs  ಖರೇ ಶೂರಾ || ದೊಂಗಲು…

ಅಂಬಿಕಾತನಯನಿಗು ಇತಿಮಿತಿ ಬಿದ್ದೈತಿ
ನೆಂಬಿಕ್ಯಾರೆ ಯಾರ್ದಪಾ ಇಲ್ಲಿ
ಪೂಜಾರೀನs ಕೂತು | ದೇವರ್ನ ಕದ್ದರ
ಇನ್ನ ಫಜೀತಿ, ಬ್ಯಾರೆ ಯಾವ್ದೈತಿ?
ಸೋದsರ ಭಾವ ಹೇಳೂವ
ಚೋದ್ಯರು ಚೋದರು ಮಾದರು ಕೂಡ್ಯಾರು
ಗ್ಯಾಂಗ, ಗ್ಯಾಂಗೀsಗೆ ಬ್ಯಾರೆ ಹೆಸರೈತಿ
ಯಾಲೀ ಧೂಲಾ ಅಂತ ಹೈದೋಸ ನಡಿಸ್ಯಾರ
ಮನಸ್ಯಾರ್ಕಿ ಒಳಗs ಕಸರೈತಿ
ಸಾಲಾs ಸಾಲೀ ಅಂತ| ನೆಂಟಸ್ತ್ಕಿ ಬೆಳಸ್ತಾರು
ಸೋದೇರು ಭಾನಚೋದ ಮಂದಿ | ಭಾಳ ಬೆರ್ಕಿ
ಅಲ್ಲಿ ತುರ್ಕಿ, ಇಲ್ಲಿ ತುರ್ಕಿ, ಹೊಡದಾರು ನಡವs ಗಿರ್ಕಿ
ತೂಕಡಿಸಬ್ಯಾಡೋ ಜೋಲಿ ತಪ್ಪಿ || ದೊಂಗಲು…

ಮನಸ್ಯಾರ್ಹಾಂಗ ಕಾಣ್ತಾರಂತ
ಮನಸ್ಯಾರs ಅಂತ ತಿಳ್ದು
ನಿದ್ದೀ ಮಾಡಾಕ ಒಪ್ಪಿಗಿಪ್ಪಿ
ಹುಶಾರ್, ಹುಶಾರ್ | ಗೆಣೆಯಾ, ತಮ್ಮಾ, ಅಣ್ಣಾ
ಜಂಪು ಹತ್ತೀತು ತಪ್ಪಿಸಿ ಕಣ್ಣಾ || ದೊಂಗಲು…

………………………………………………………………..
ಬೇಂದ್ರೆಯವರ ಒಂದು ಅಪರೂಪ ಕವನವಿದು. ಬಹುಶಃ ಅವರ ಒಂದು ರೇಲವೇ ಪ್ರಯಾಣದಲ್ಲಿ ಈ ಕವನ ಅವರಿಗೆ ಸ್ಫುರಿಸಿರಬಹುದು. ಆ ಕಾಲದಲ್ಲಿ ಕರ್ನಾಟಕವು ಮಹಾರಾಷ್ಟ್ರ, ಆಂಧ್ರ ಹಾಗು ತಮಿಳುನಾಡಿನ ರೇಲವೇ ವಿಭಾಗಗಳಲ್ಲಿ ತ್ರಿಭಾಗವಾಗಿ ಹೋಗಿತ್ತಲ್ಲ, ಬೇಂದ್ರೆಯವರು ಆಂಧ್ರವಿಭಾಗದಲ್ಲಿ ಹಾಯ್ದು ಹೋಗುತ್ತಿರುವ ರೇಲವೇದಲ್ಲಿ ಕುಳಿತಿದ್ದಾರೆ. ‘ದೊಂಗಲುನ್ನಾರು ಜಾಗ್ರತ’ ಎನ್ನುವ ತೆಲುಗು ಬರಹದಲ್ಲಿರುವ ಎಚ್ಚರಿಕೆ ಅವರ ಕಣ್ಣಿಗೆ ಬಿದ್ದಿದೆ.

ಬೇಂದ್ರೆಯವರು ಮಾತುಗಾರರು. ಅವರ ಎದುರಿಗಿರುವಾತ ನಿರಕ್ಷರ ಕುಕ್ಷಿಯೇ ಆಗಿರಲಿ, ಪ್ರಕಾಂಡ ಪಂಡಿತನೇ ಆಗಿರಲಿ, ಇವರ ಮಾತನ್ನು ಬಾಯಿ ಬಿಟ್ಟುಕೊಂಡು ಕೇಳುತ್ತ ಕುಳಿತಿರಬೇಕು, ಅಂತಹ ವಾಗ್ಝರಿ ಅವರದು. ಈ ಕವನವೂ ಸಹ ಸಹಪ್ರಯಾಣಿಕರನ್ನು ಎಚ್ಚರಿಸುವ ಧಾಟಿಯಲ್ಲಿಯೇ ಇದೆ. (ಇವರು ಮಾತಾಡುತ್ತಿರುವಾಗ ಯಾರಿಗೆ ತಾನೇ ನಿದ್ದೆ ಹತ್ತೀತು?... ಆ ಮಾತೇ ಬೇರೆ!)

ಈ ಕವನದ ವೈಶಿಷ್ಟ್ಯವೆಂದರೆ, ಬೇಂದ್ರೆಯವರ ಅಕ್ಕಪಕ್ಕದಲ್ಲಿ ಇರುವ ಸಹಪ್ರಯಾಣಿಕರು ಅತಿ ಸಾಮಾನ್ಯ ವ್ಯಕ್ತಿಗಳು. ತಮ್ಮ ಜೊತೆಗೆ ಸಲುಗೆಯಿಂದ ಮಾತನ್ನಾಡುವ ಯಾರನ್ನಾದರೂ ಪಕ್ಕನೇ ನಂಬಿ ಬಿಡುವಂಥ ಅಮಾಯಕರು. ಆದರೆ ಬೇಂದ್ರೆಯವರು ಸ್ವಲ್ಪ ಹೆಚ್ಚಿಗೆ ತಿಳಿವಳಿಕೆ ಇದ್ದವರಲ್ಲವೆ? ಅಲ್ಲದೇ, ದೊಂಗಲುನ್ನಾರು ಜಾಗ್ರತ ಎನ್ನುವ ರೇಲವೇಬರಹವನ್ನು ಸಹ ನೋಡಿದ್ದಾರೆ. ತಮ್ಮ ಸಹಪ್ರಯಾಣಿಕರಿಗೆ, ಅವರ ಆಡುನುಡಿಯ ಶೈಲಿಯಲ್ಲಿಯೇ ಎಚ್ಚರಿಕೆ ಕೊಡಬೇಕೆನ್ನುವ ಕರ್ತವ್ಯಪ್ರಜ್ಞೆ ಹಾಗು ಹುಕಿ ಬೇಂದ್ರೆಯವರಲ್ಲಿ ಸ್ಫುರಿಸಿದೆ. ತಗೋ, ಸುರುವಾಯಿತು ಕವನಗಂಗಾವತರಣ: ದೊಂಗಲುನ್ನಾರೂsರೇ- ಜಾಗ್ರತs!

ಕವನದ ಮೊದಲ ಸಾಲಿನ ಭಾಗವಾದ ‘ದೊಂಗಲುನ್ನಾರೂsರೇs’  ಎನ್ನುವ ವಾಕ್ಯವನ್ನು ಗಮನಿಸಿರಿ. ಇದು ‘ದೊಂಗಲುನ್ನಾರೂs+ ರೇ’ ಎನ್ನುವ ಎರಡು ಪದಗಳ ಕೂಡಿಕೆಯಿಂದಾಗಿದೆ. ಕೇವಲ ‘ದೊಂಗಲುನ್ನಾರು ಜಾಗ್ರತ’ ಎಂದು ಹೇಳಿದ್ದರೆ ಇದು ಕೇವಲ ಒಂದು statement ಆಗುತ್ತಿತ್ತು. `ರೇ’ ಎನ್ನುವ ಪದದ ಮೂಲಕ ಬೇಂದ್ರೆಯವರು ತಮ್ಮ ಸಹಪ್ರಯಾಣಿಕರನ್ನು ಸಂಬೋಧಿಸುತ್ತಿದ್ದಾರೆ, ಅವರಿಗೆ ತೀವ್ರವಾದ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಅದರಂತೆಯೇ `ದೊಂಗಲುನ್ನಾರೂs’ ಹಾಗು ‘ಜಾಗ್ರತs’ ಎಂದು ಎಳೆದು ಹೇಳುವ ಮೂಲಕ ನಿದ್ರಿಸುತ್ತಿರುವ ಪ್ರಯಾಣಿಕರ ಕಿವಿಗಳಲ್ಲಿ ತಮಟೆ ಬಾರಿಸುತ್ತಿದ್ದಾರೆ.

ಇಷ್ಟಾದರೆ ಸಾಕೆ? ಉಂಹೂಂ! ಇದು ಆಂಧ್ರಕ್ಕೆ ಸೇರಿದ ರೇಲವೇ ವಿಭಾಗವಾಗಿರುವದರಿಂದ, ರೇಲವೇ ಅಧಿಕಾರಿಗಳು ಎಚ್ಚರಿಕೆಯನ್ನು ತೆಲುಗಿನಲ್ಲಿ ಬರೆದಿದ್ದಾರೆ. ಆದರೆ ನಮ್ಮ ಕನ್ನಡದ ದೊಂಬರಿಗೆ, ತೆಲುಗಿನ ‘ದೊಂಗ’ದ ಅರ್ಥವಾದೀತೆ? ಆದುದರಿಂದಲೇ, ಬೇಂದ್ರೆಯವರು ತಮ್ಮ ಎಚ್ಚರಿಕೆಯನ್ನು ಮತ್ತೊಮ್ಮೆ ಕನ್ನಡದಲ್ಲಿ ಪುನರುಚ್ಚರಿಸುತ್ತಾರೆ: ‘ಎಚ್ಚರಿರು,  ಇದೊಂದೇ ಆಗಲಿ ವ್ರತಾ’.  ಸತತ ಎಚ್ಚರಿಕೆಯೇ ಸುರಕ್ಷಿತ ಪ್ರಯಾಣದ ಕವಚ! ಈ ಕಠಿಣ ನಿದ್ರಾಬಹಿಷ್ಕಾರವನ್ನು ಒಂದು ವ್ರತದಂತೆ ಸಾಧಿಸಬೇಕು!

ಬೇಂದ್ರೆಯವರ ಈ ಎಚ್ಚರಿಕೆಯ ಗಂಟೆಯನ್ನು ಎಲ್ಲರೂ ಸ್ವಾಗತಿಸುತ್ತಾರೆ ಅಂತೇನಿಲ್ಲ. ‘ಈ ಮುದುಕ ತಾನೂ ಮಲಗೂದಿಲ್ಲಾ, ನಮಗೂ ಬಿಡೂದಿಲ್ಲಾ’ ಅನ್ನೋ ಅಂಥಾ ಖಬರಗೇಡಿ, ಮುಗ್ಗಲಗೇಡಿ ಪ್ರಯಾಣಿಕರೂ ಇರ್ತಾರಲ್ಲ. ತಾವು ಏಕೆ ಸಹಪ್ರಯಾಣಿಕರಿಗೆ ಕಿಟಿಕಿಟಿ ಕೊಡ್ತಾ ಇದ್ದೇನಿ ಅನ್ನೋದನ್ನ ಇಂಥವರಿಗೆ ಬೇಂದ್ರೆಯವರು ವಿವರಿಸಲೇ ಬೇಕಲ್ಲ! ಅದಕ್ಕಾಗಿ ಸ್ವಪ್ರೇರಿತ, ಸ್ವಯಂಸೇವಕರಾಗಿ ಬಿಟ್ಟಿರುವ ಬೇಂದ್ರೆ ಮತ್ತೇ ಹೇಳುತ್ತಾರೆ:
‘ಇನ್ನಾರು ನಿಮ್ಗss ಎಚ್ರಾ ಕೊಡಾವ್ರಣ್ಣಾ, ಹಾದಿ ಐತಿ ಬಲೂ ಬಲೂ ದೂರಾ’.
ಬೇಂದ್ರೆ ಒಬ್ಬರನ್ನ ಬಿಟ್ಟರ, ಈ ಡಬ್ಬಿ ಒಳಗಿರೋ ಎಲ್ಲಾರೂ ನಿದ್ದೀಬಡಕರs. ಎಚ್ಚರಿಸೋ ಹೊರಿ ಬೇಂದ್ರೆಯವರ ತಲೀ ಮ್ಯಾಲs ಬಿದ್ದsದ!

‘ಬಲೂ ಬಲೂ’ ಎನ್ನುವ ಪದಗಳನ್ನು ಗಮನಿಸಿರಿ. ಮಾತನಾಡುವಾಗ, ಒಂದು ಪದವನ್ನು emphasise ಮಾಡಬೇಕೆನಿಸಿದರೆ, ಆ ಪದದ ಸ್ವರಾಂತವನ್ನು ಎಳೆಯುವ ರೂಢಿ ಕನ್ನಡದಲ್ಲಿದೆ. (ಉದಾಹರಣೆಗೆ: ನಿಮ್ಮ ಕೈಅಡಗಿ ಭಾಳಾss ಭಾಳಾss ರುಚೀs ಆಗ್ತೈತ್ರಿ!’)

ಬೇಂದ್ರೆ ತಮ್ಮ ಸಹಪ್ರಯಾಣಿಕರೊಡನೆ (ಅವರಿಗೆ ನಿದ್ರೆ ಹತ್ತಿದ್ದರೂ ಸಹ) ಮಾತನಾಡುತ್ತಿದ್ದಾರೆ. ಆದುದರಿಂದಲೇ ಅವರಿಗೆ ‘ಬಲು ಬಲೂ’ ಎಂದು ಎಳೆದೆಳೆದು ಹೇಳುತ್ತಿದ್ದಾರೆ! ಈ ಪ್ರಯಾಣಿಕರನ್ನು ಸುಲಿಯಲು ಬರುವ ಚೋರನು ದರೋಡೆಖೋರರಲ್ಲ, ನಯವಂಚಕನು. ಆದುದರಿಂದಲೇ ಇವನನ್ನು ಬೇಂದ್ರೆ ‘ಗಂಟs ಬೀಳ್ತಾನ ಅಲ್ಲಿನ ಚೋರಾ ; ನಿದ್ದೀ ಬ್ಯಾಡ್ರೆಪ್ಪಾ ಬಂದೀತು ಘೋರಾ’ ಎಂದು ವರ್ಣಿಸುತ್ತಾರೆ.

ಈ ಕಳ್ಳನೂ ಸಹ ಸಾಮಾನ್ಯ ಪ್ರಯಾಣಿಕನಂತೆಯೇ ಒಳಗೆ ನುಸುಳುತ್ತಾನೆ. ಇವನನ್ನು ಪ್ರತ್ಯೇಕಿಸಿ ಗುರುತಿಸುವುದು ಅಸಾಧ್ಯ. ಆದರೆ ಒಮ್ಮೆ ಇವನ ಕೈಚಳಕ ಸುರುವಾಯಿತೊ, ಆಗ ನೋಡಿರಿ ‘ಎಲ್ಲಾ ಖುಲ್ಲಮ್ ಖುಲ್ಲಾ!’ ಈ ಸಾಮಾನ್ಯನು ಆಗ ಅಸಾಮಾನ್ಯನಾಗುತ್ತಾನೆ. ಅದಕ್ಕೆಂದೇ ಬೇಂದ್ರೆಯವರು ಸಹಪ್ರಯಾಣಿಕರಿಗೆ ಸಾರಿ ಸಾರಿ ಹೇಳುತ್ತಿದ್ದಾರೆ: ‘ದೊಂಗಲುನ್ನಾರೂsರೇ-ಜಾಗ್ರತs’!

ಈ ಕಳ್ಳನ ಕ್ರಿಯಾವಿಧಾನ ಎಂಥಾದ್ದು? ಎಚ್ಚರಿರುವವರನ್ನು ಮಲಗಿಸುವುದು, ಅವರಲ್ಲಿ ಭದ್ರತೆಯ ಭಾವವನ್ನು ಹುಟ್ಟಿಸುವುದು, ಅವರು ಮಲಗಿಕೊಂಡ ಮೇಲೆ ಅವರನ್ನು ದೋಚುವುದು…..!
‘ಅಂದಾನು ಹೆದರ್ಬ್ಯಾಡೋ, ಹೆದರ್ಬ್ಯಾಡೋ ತಮ್ಮಾ
ಐತಿ, ರಾಜ್ಯಾನ ಇದು ನಮ್ಮ ನಿಮ್ಮಾ
ಬ್ಯಾರೆ ಬರ್ತಾರು ಯಾರು ?  ಮಕ್ಕೋ ಸುಮ್ಮಾ || ದೊಂಗಲು…’

ಪಾಪ, ಬೇಂದ್ರೆಯವರ ಎಚ್ಚರಿಕೆಗೆ ಯಾರೂ ಕಿವಿ ಕೊಟ್ಟಂತೆ ಕಾಣುವುದಿಲ್ಲ. ಇವರ ಕಂಠಶೋಷಣೆ ವ್ಯರ್ಥವಾಯಿತು.  ಕಳ್ಳನ ಕೈ ಮೇಲಾಯ್ತು. ಆಗ ಬೇಂದ್ರೆಯವರು ಕೈಚೆಲ್ಲಿದರು. ಅವರಲ್ಲಿ philosophic mood ಜಾಗೃತವಾಯಿತು. ನಮ್ಮ ಸಮಾಜದಲ್ಲಿ ನಡೆಯುವ ಈ ಕಳ್ಳಾಟದ ಮೂಲವನ್ನು ಬೇಂದ್ರೆಯವರು ಹುಡುಕಲು ಪ್ರಾರಂಭಿಸಿದರು. ಆಗ ಅವರಿಗೆ ಹೊಳೆದದ್ದನ್ನು ಅರೆಸ್ವಗತದಲ್ಲಿ ಬೇಂದ್ರೆಯವರು ಗುನುಗುಟ್ಟುತ್ತಾರೆ:
‘ಇದ್ದವ್ರ ಹರಕೊಳ್ಳಾಕ ಇಲ್ದವ್ರು ಬರ್ತಾರ
ಇದ್ದದ್ದು ಇಲ್ಲದ್ಯಾವ್ದೊ ಯಣ್ಣಾ
ಮನಸ್ಯಾರ s ಹೂಲಿ ಎಬಿಸಿ
ಮನಸ್ಯಾರ್ನ ತಿಂತಾರ
ದೇವ್ರs ತೆರೀಬೇಕೊ ಕಣ್ಣಾ
ಮುಚ್ಚಿಕೊಂಡೈತಿ | ಅಂತಃಕರ್ಣಾ’

ಸಮಾಜವ್ಯವಸ್ಥೆಯಲ್ಲಿ ಅಸಮಾನತೆ ಇರುವವರೆಗೂ ಈ ಕಳ್ಳಾಟ ನಡೆಯುವದೇ. ಇಲ್ಲದವರು ಇದ್ದವರಿಂದ ಕಸಿದುಕೊಳ್ಳುವರೇ. ಆದರೆ, ‘ಇದ್ದದ್ದು ಯಾವುದು? ಇಲ್ಲದ್ದು ಯಾವುದು? ನನ್ನದು ಯಾವದು? ಅವನದು ಯಾವದು?’ ಈ ತತ್ವವನ್ನು ನಮ್ಮ ಅನೇಕ ಸಂತರು ಪದೇ ಪದೇ ಹಾಡಿದ್ದನ್ನು ಕೇಳಿದ್ದೇವೆ. ಕನ್ನಡ ನಾಡಿನ ಹಳ್ಳಿಗರಲ್ಲಿ, ಸಾಮಾನ್ಯರಲ್ಲಿ ಈ ತತ್ವ ಮೈಗೂಡಿಕೊಂಡಿದೆ. ಆದರೆ, ದೋಚುವದೇ ವೃತ್ತಿಯಾದವರಿಗೆ ಈ ತತ್ವ ಬೇಡ. ಅವರಿಗೆ ಬೇಕು: ‘ಹೂಲಿ ಎಬ್ಬಿಸುವುದು’ ಅಂದರೆ ಗಲಾಟೆ ಎಬ್ಬಿಸುವುದು. ಇತ್ತೀಚಿನ ದಿನಗಳಲ್ಲಿ ಈ ‘ಹೂಲಿ ಎಬ್ಬಿಸುವ’ ಕೆಲಸ ಭಾರತದಲ್ಲಿ ಸಾರ್ವತ್ರಿಕವಾಗಿರುವದನ್ನು ನೋಡುತ್ತೇವೆ. ಎಲ್ಲಿ ನೋಡಿದಲ್ಲಿ ಗಲಾಟೆಗಳು, ಪ್ರತಿಭಟನೆಗಳು, ಬಂಧ್‍ಗಳು. ಅದಕ್ಕೆ ಬಲಿಯಾಗುವವರೂ ಮನುಷ್ಯರೇ, ಅದರ ಫಲಾನುಭವಿಗಳೂ (!) ಮನುಷ್ಯರೇ!
ಇದನ್ನೆಲ್ಲ ನೆನೆದ ಬೇಂದ್ರೆಯವರು ಕಣ್ಣುಗಳನ್ನು ನಿಮೀಲಿಸಿ ಹೇಳುತ್ತಾರೆ: ‘ದೇವ್ರs ತೆರೀಬೇಕೊ ಕಣ್ಣಾ’ ಈ ಮಾತೂ ಸಹ ಮುಗ್ಧ ಹಳ್ಳಿಗನ ಮಾತೇ, ಅವನಲ್ಲಿ ಹರಿಯುವ ದೈವನಂಬಿಗೆಯ ಮಾತೇ. ಆದರೆ ಇಲ್ಲಿ ಏಳುವ ಪ್ರಶ್ನೆ: ದೇವರು ತನ್ನ ಕಣ್ಣುಗಳನ್ನು ತೆಗೆಯಬೇಕೊ, ಅಥವಾ ಕಣ್ಣು ಮುಚ್ಚಿಕೊಂಡಂತಹ ಮನುಷ್ಯರ ಕಣ್ಣುಗಳನ್ನು ತೆಗೆಯಬೇಕೊ ಎನ್ನುವುದು. ಅದು ತಿಳಿಯುವುದು ಮುಂದಿನ ಸಾಲಿನಿಂದ: ‘ಮುಚ್ಚಿಕೊಂಡೈತಿ | ಅಂತಃಕರ್ಣಾ’
ದೇವರ ಅಂತಃಕರಣ ಮುಚ್ಚುವುದು ಅಸಾಧ್ಯ. ಆದುದರಿಂದ ಮನುಷ್ಯನ ಅಂತಃಕರಣ ಮುಚ್ಚಿದೆ. ಅವನ ಒಳಗಣ್ಣು ಮುಚ್ಚಿವೆ. ಆ ಕಣ್ಣುಗಳನ್ನು ದೇವರೇ ತೆಗೆಯಿಸಬೇಕು!

ನಮ್ಮ ಕಳ್ಳರಿಗೆ ಕಳ್ಳತನ ಸಹಜ ಸ್ವಭಾವವಾಗಿದೆ. ಸ್ವತಃ ದಾನಶೂರ ಕರ್ಣನೇ ಇವರಿಗೆ ಯಥೇಚ್ಛ ದಾನ ಕೊಡಲು ಕೈ ಎತ್ತಿ ನಿಂತಾಗಲೂ, ಅವನ ಕಿಸೆಗೆ ಕನ್ನ ಹಾಕಿದಾಗಲೇ ಇವರಿಗೆ ತೃಪ್ತಿ! ಸ್ವಾಹಾಕಾರವೇ ಇವರಿಗೆ ಸಿದ್ಧಿಸಿದ ಮಂತ್ರ! ಹಾಗಾಗಿ ಈ ಕಳ್ಳರ ಹಾವಳಿ ನಡೆದಲ್ಲೆಲ್ಲ ಹಾಹಾಕಾರ ಏಳುವುದು ಸಹಜವಾಗಿದೆ.
ಕರ್ಣನ ಕಿಸೇಕsನ ಹಾಕಾವ್ರು ಕನ್ನಾ
ಬಂದು ಎದ್ದೈತಿ ಅಲ್ಲಲ್ಲಿ ಹಾಹಾಕಾರ
ಸ್ವಾಹಾಕಾರಾನ ಬಲು | ದೊಡ್ಡ ಮಂತ್ರ ಆಗೈತಿ

ಬೇಂದ್ರೆಯವರ ಒಳಗಣ್ಣಿನ ಎದುರಿಗೆ ಈ ಚಿತ್ರಗಳು ಸರಿದಂತೆಲ್ಲ, ಅವರಿಗೆ ಅನಿಸುತ್ತದೆ:
ಬಂದೈತ್ಯೋ ಗೆಣೆಯಾ ಭಾಳ ಘೋರಾ
ಇಲ್ಲಿ ಪಾರಾದವ್ನs  ಖರೇ ಶೂರಾ || ದೊಂಗಲು…

ನಮ್ಮ ಹಳೆಯ ಪುರಾಣಕಥೆಗಳನ್ನು ಓದಿದವರು ಒಂದು ಮರುಕಳಿಸುವ ವಾಕ್ಯವನ್ನು ಅಲ್ಲಿ ಗಮನಿಸಿರಬಹುದು: ಕಲಿಯುಗವು ಘೋರವಾದದ್ದು. ಇನ್ನು ಮುಂದೆ ಇನ್ನೂ ಘೋರವಾದ ಕಾಲ ಬರುವುದು, ಇತ್ಯಾದಿ. ಬೇಂದ್ರೆಯವರೂ ಸಹ ಪುರಾಣದ ಭವಿಷ್ಯಕಾರನಂತೆ ಹೇಳುತ್ತಿದ್ದಾರೆ: ಇನ್ನು ಮುಂದೆ ಇನ್ನೂ ಘೋರವಾದ ಕಾಲ ಬರುತ್ತದೆ. ಆ ಹೊಡೆತದಲ್ಲಿ ಪಾರಾಗಿ ಹೋಗುವವನೇ ಖರೇ ಶೂರ! ಪುರಾಣಕಾರರಾದರೋ ಸರಳವಾದ ಉಪಾಯವನ್ನು ಹೇಳಿ ಬಿಡುತ್ತಾರೆ: ‘ದೇವರಲ್ಲಿ ನಂಬಿಕೆ ಇಟ್ಟು ಭಜನೆ ಮಾಡುತ್ತ ಇರಿ. ಅಂದರೆ ಸಂಸಾರಸಾಗರದಿಂದ ಪಾರಾಗಿ ಹೋಗುತ್ತೀರಿ.’
ಆದರೆ ಸ್ವತಃ ಬೇಂದ್ರೆಯವರಿಗೆ ಸಂಶಯಗಳು ಕಾಡುತ್ತಿವೆ. ದೇವರನ್ನ ನಂಬಬೇಕೊ ಬ್ಯಾಡೊ, ಬಾಜೂದವನ್ನ ನಂಬಬೇಕೊ ಬ್ಯಾಡೊ? ತಮ್ಮ ಎಚ್ಚರಿಕೆಯ ಬೋಧನಾ ಎಷ್ಟರ ಮಟ್ಟಿಗೆ ಉಪಯುಕ್ತ?
ಆದುದರಿಂದಲೇ ಅವರು ತಮ್ಮ ಸಹಪ್ರಯಾಣಿಕರೆದುರಿಗೆ ಹೇಳುತ್ತಾರೆ:
ಅಂಬಿಕಾತನಯನಿಗು ಇತಿಮಿತಿ ಬಿದ್ದೈತಿ
ನೆಂಬಿಕ್ಯಾರೆ ಯಾರ್ದಪಾ ಇಲ್ಲಿ
ಪೂಜಾರೀನs ಕೂತು | ದೇವರ್ನ ಕದ್ದರ
ಇನ್ನ ಫಜೀತಿ ಬ್ಯಾರೆ ಯಾವ್ದೈತಿ?

ಸಮಾಜವ್ಯವಸ್ಥೆಯಲ್ಲಿಯೇ ಮೋಸ ಅಡಗಿದೆ. ‘ನಾವೆಲ್ಲರೂ ಅಣ್ಣ ತಮ್ಮಂದಿರು’ ಎಂದು ಸೋದರಭಾವ ಹೇಳುವವರದೇ ಒಂದು ಗ್ಯಾಂಗು. ಇವರು ಚೋದ್ಯರು ಎಂದರೆ ವಿಚಿತ್ರವಾಗಿ ಇರುವವರು. ‘ಚೋದರು ಮಾದರು’ ಎನ್ನುವ ಪದಗಳನ್ನು ಬೇಂದ್ರೆ ಬಳಸಿದ್ದಾರೆ. ಕೀಳುಮಟ್ಟದ ಜನರು ಬೈದಾಡುವಾಗ ‘ಮಾದರಚೋತ್’ ಎಂದು ಬೈಯುವದನ್ನು ನೀವು ಕೇಳಿರಬಹುದು. ಇದರ ಕನ್ನಡ ಅನುವಾದವನ್ನು ‘ತಾಯಿಗ್ಗಂಡ’ ಎಂದು ಸುಧಾರಿಸಿ ಹೇಳಬಹುದು. ಇಂತಹ ಅನೇಕ ಗ್ಯಾಂಗುಗಳು ಇಲ್ಲಿವೆ. ಇವರು ಮೇಲ್ನೋಟಕ್ಕೆ ಸತ್ಯನಿಷ್ಠ ಹೋರಾಟಗಾರರು.

ಬೇಂದ್ರೆಯವರು ಬಹುಶಃ ಇದೀಗ ರಾಯಚೂರಿನ ಹತ್ತಿರ ಬಂದಿರಬಹುದು.  ಇಲ್ಲಿ ಮುಸಲ್ಮಾನ ಧರ್ಮೀಯರು ಬಹುಸಂಖ್ಯೆಯಲ್ಲಿ ಇರುವದರಿಂದ  ಮುಸ್ಲಿಮ್ ಧರ್ಮದ ಕೆಲವು ಸಂಕೇತಗಳನ್ನು ಬೇಂದ್ರೆ ಬಳಸಿಕೊಂಡಿದ್ದಾರೆ. ಕರ್ಬಲಾ ಕಾಳಗದ ಸಂದರ್ಭದಲ್ಲಿ ‘ಯಾ ಅಲೀ ಧೂಲಾ’ ಎನ್ನುವ ಘೋಷಣೆ ಕೇಳಿ ಬರುತ್ತದೆ. ಇದು ಪ್ರಾಮಾಣಿಕ ಹೋರಾಟಗಾರರ ಕೂಗು. ಆದರೆ ಇಲ್ಲಿ ಆ ಕೂಗು ಅಪ್ರಾಮಾಣಿಕರ ಕೈಯಲ್ಲಿ ಸಿಕ್ಕಿದೆ.  
ಸೋದsರ ಭಾವ ಹೇಳೂವ
ಚೋದ್ಯರು ಚೋದರು ಮಾದರು ಕೂಡ್ಯಾರು
ಗ್ಯಾಂಗ, ಗ್ಯಾಂಗೀsಗೆ ಬ್ಯಾರೆ ಹೆಸರೈತಿ
ಯಾಲೀ ಧೂಲಾ ಅಂತ ಹೈದೋಸ ನಡಿಸ್ಯಾರ

ಇದಕ್ಕೆ ಕಾರಣ ಎಂದರೆ ಮನುಷ್ಯತ್ವದಲ್ಲಿಯೇ ದೋಷವಿದೆ, ಹೊರಗೆ ಮನುಷ್ಯರೂಪ, ಒಳಗೆ ನರಿ, ತೋಳ ಇತ್ಯಾದಿ.
ಮನಸ್ಯಾರ್ಕಿ ಒಳಗs ಕಸರೈತಿ
ಸಾಲಾs ಸಾಲೀ ಅಂತ| ನೆಂಟಸ್ತ್ಕಿ ಬೆಳಸ್ತಾರು
ಸೋದೇರು ಭಾನಚೋದ ಮಂದಿ | ಭಾಳ ಬೆರ್ಕಿ
ಅಲ್ಲಿ ತುರ್ಕಿ, ಇಲ್ಲಿ ತುರ್ಕಿ, ಹೊಡದಾರು ನಡವs ಗಿರ್ಕಿ
ತೂಕಡಿಸಬ್ಯಾಡೋ ಜೋಲಿ ತಪ್ಪಿ || ದೊಂಗಲು…

ಈ ಗಂಟುಕಳ್ಳರು ಸಹಪ್ರಯಾಣಿಕರನ್ನು ‘ಸಾಲಾ, ಸಾಲೀ’ (=ಹೆಂಡತಿಯ ತಮ್ಮ/ತಂಗಿ) ಎಂದು ಪ್ರೀತಿಯಿಂದೆನ್ನುವಂತೆ ಮಾತನಾಡಿಸುತ್ತಾರೆ. ‘ಯಾ ಕಡೇರಿ, ಪೌಣ್ಯಾರ?’ ಎಂದು ನೆಂಟಸ್ತ್ಕಿಯನ್ನು ಬೆಳಸುತ್ತಾರೆ. ‘ಸೋದೇರು’ ಅನ್ನುವಲ್ಲಿ ಬೇಂದ್ರೆ ಶ್ಲೇಷೆಯನ್ನು ಬಳಸಿದ್ದಾರೆ. ಈ ಜನ ಸೋದರಭಾವನೆಯನ್ನು ಪ್ರದರ್ಶಿಸುತ್ತ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದರಿಂದ ಇವರು ಸೋದೇರು. ಎರಡನೆಯದಾಗಿ ಇವರು ‘ಸೌದಾ’ ಎಂದರೆ ತಮ್ಮ ಧಂಧೆ ನಡೆಯಿಸುವ ಪಕ್ಕಾ ವ್ಯಾಪಾರಿಗಳು. ಇವರನ್ನು ಬೇಂದ್ರೆ ಇವರು ಬಳಸುವ ಭಾಷೆಯಲ್ಲಿಯೇ ವರ್ಣಿಸುತ್ತಾರೆ: ‘ಭಾನಚೋದ ಮಂದಿ’ (=ಸೋದರಿಯ ಜೊತೆಗೆ ಹಾದರ ಮಾಡುವವ.) ಇವರು ಭಾಳಾ ಬೆರಕಿ. ಉತ್ತರ ಕರ್ನಾಟಕದಲ್ಲಿ ಬೆರಕಿ ಮನಷ್ಯಾ ಎಂದರೆ ಜಾಬಾಲ, street smart ಮನುಷ್ಯ. ದಕ್ಷಿಣ ಕರ್ನಾಟಕದಲ್ಲಿ ಇದರರ್ಥ hybrid. ರೇಲವೇ ಡಬ್ಬಿಯಲ್ಲಿ ಬೇಕೆಂತಲೇ ಗದ್ದಲ ಮಾಡಿ, ಜಾಗಾ ಸಿಕ್ಕಲ್ಲೆಲ್ಲ ಸೇರಿಕೊಳ್ಳುತ್ತ ಹೋಗುವವರು. ತುರ್ಕಿ ಎನ್ನುವ ಪದಕ್ಕೂ ವಿಭಿನ್ನ ಅರ್ಥಗಳನ್ನು ಮಾಡಬಹುದು. ಮುಸ್ಲಿಮ್ ಆಳಿಕೆ ಇದ್ದಾಗ, ಧರ್ಮೋಪದೇಶಕ್ಕಾಗಿ ಹಾಗು ಸೈನ್ಯದ ಉದ್ಯೋಗಕ್ಕಾಗಿ ಅನೇಕ ತುರ್ಕೀಯರು ಹಾಗು ಪಠಾಣರು ಇಲ್ಲಿಗೆ ಬರುತ್ತಿದ್ದರು. ಹೀಗಾಗಿ ಮುಸ್ಲಿಮ್ ವ್ಯಕ್ತಿಯನ್ನು ‘ತುರಕ’ ಎಂದು ಕರೆಯುವದೇ ಇಲ್ಲಿಯ ರೂಢಿಯಾಗಿದೆ.
ಈ ಗಂಟುಕಳ್ಳರು ಅಲ್ಲಲ್ಲಿ ತುರಕಿಕೊಂಡು, ತಮ್ಮ ಕೆಲಸವಾದ ತಕ್ಷಣ ‘ಗಿರ್ಕಿ’ ಹೊಡೆಯುತ್ತಾರೆ ಅಂದರೆ ಗರ್ರನೆ ತಿರುಗಿ ಕಾಣದಾಗುತ್ತಾರೆ.
ಆದುದರಿಂದ ಬೇಂದ್ರೆ ಹೇಳುತ್ತಾರೆ: ತಮ್ಮಾ, ಎಚ್ಚರಿರು ತೂಕಡಿಸಬ್ಯಾಡಾ; ನಿನ್ನ ಜೋಲಿ ತಪ್ಪಿದಾಗ, ನಿನ್ನ ಕಿಸೇಕ್ಕ ಕನ್ನ ಬಿದ್ದೀತು!

ಬೇಂದ್ರೆ ಇದೀಗ ಕೊನೆಯ ಎಚ್ಚರಿಕೆಯನ್ನು ಕೊಡುತ್ತಿದ್ದಾರೆ. ಈ ಕಳ್ಳರು ಸಾಮಾನ್ಯ ಮನುಷ್ಯರಂತೆಯೇ ಕಾಣುತ್ತಾರೆ. ಹಾಗಂತ ನೀನು ನಂಬಿ ಬಿಡಬ್ಯಾಡಾ. ಅವರ ಮಾತಿಗೆ ಮರುಳಾಗಿ ನಿದ್ದೀ ಮಾಡಲಿಕ್ಕೆ ಒಪ್ಪಬ್ಯಾಡಾ.  ತೂಕಡಿಕೆ ಬಂದೀತು, ಜಂಪು ಹತ್ತೀತು. ‘ತಪ್ಪೀಸಿ ಕಣ್ಣಾ’ ಎನ್ನುವ ಪದಗುಚ್ಛದಲ್ಲಿಯ ಇಬ್ಬಗೆಯ ಅರ್ಥಗಳನ್ನು ನೋಡಿರಿ. ಒಂದು ಅರ್ಥವೆಂದರೆ,  ಕಣ್ಣು ತೆಗೆದುಕೊಂಡಿದ್ದೇವೆ ಎಂದು ತಿಳಿದುಕೊಂಡಿರುವಂತೆಯೇ, ಕಣ್ಣು ಮುಚ್ಚಿಕೊಳ್ಳುವುದು. ಎರಡನೆಯದು ಎಚ್ಚರಿಕೆಯು ಮರವಾಗಿ, ಕಣ್ಣು ಮುಚ್ಚಿಕೊಳ್ಳುವುದು.
ಮನಸ್ಯಾರ್ಹಾಂಗ ಕಾಣ್ತಾರಂತ
ಮನಸ್ಯಾರs ಅಂತ ತಿಳ್ದು
ನಿದ್ದೀ ಮಾಡಾಕ ಒಪ್ಪಿಗಿಪ್ಪಿ
ಹುಶಾರ್, ಹುಶಾರ್ | ಗೆಣೆಯಾ, ತಮ್ಮಾ, ಅಣ್ಣಾ
ಜಂಪು ಹತ್ತೀತು ತಪ್ಪಿಸಿ ಕಣ್ಣಾ || ದೊಂಗಲು…

ಬೇಂದ್ರೆಯವರು ಇಷ್ಟು ಹೇಳುವವರೆಗೆ ಬಹುಶಃ ಅವರ ನಿಲ್ದಾಣ ಬಂದಿರಬಹುದು. ಹೀಗಾಗಿ ಅವರ ಕವನ ಇಲ್ಲಿಗೇ ಕೊನೆಗೊಂಡಿದೆ!