Thursday, October 18, 2012

ಬೇಂದ್ರೆಯವರ ‘ಭಾವಗೀತೆ’


ಬೇಂದ್ರೆಯವರ ಕವನಗುಚ್ಛ ‘ಗರಿ’ ೧೯೩೨ರಲ್ಲಿ ಪ್ರಕಟವಾಯಿತು.  ‘ನರಬಲಿ’ ಕವನವು ಈ ಮೊದಲೇ ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಈ ಸಂಕಲನದಲ್ಲಿ ಅಡಕವಾಗಿತ್ತು.

 ‘ನರಬಲಿ’ ಕವನವು ರಾಜದ್ರೋಹದ ಸಂದೇಶವನ್ನು ನೀಡುತ್ತದೆ ಎಂದು ನಿರ್ಣಯಿಸಿದ ಬ್ರಿಟಿಶ್ ಜಿಲ್ಲಾಧಿಕಾರಿಗಳು ಬೇಂದ್ರೆಯವರಿಗೆ ಸೆರೆಮನೆಯ ಶಿಕ್ಷೆಯನ್ನು ವಿಧಿಸಿದರು. ಬೇಂದ್ರೆಯವರು ಮೂರು ತಿಂಗಳು ಅವಧಿಯನ್ನು ಹಿಂಡಲಗಿಯ ಸೆರೆಮನೆಯಲ್ಲಿ ಕಳೆದ ಬಳಿಕ, ಇವರ ಕಕ್ಕನ ಅನಾರೋಗ್ಯದ ಕಾರಣದಿಂದಾಗಿ ಇವರನ್ನು ಮುಗದ ಎನ್ನುವ ಹಳ್ಳಿಯಲ್ಲಿ ನಜರಬಂದಿಯಲ್ಲಿ ಇಡಲಾಯಿತು. ಬೇಂದ್ರೆ ಅಲ್ಲಿ ಒಂಬತ್ತು ತಿಂಗಳುಗಳವರೆಗೆ ಇದ್ದರು. ಈ ನಡುವೆ ತಪ್ಪೊಪ್ಪಿಗೆಯ ಹೇಳಿಕೆಯನ್ನು ನೀಡಿದರೆ, ಅವರನ್ನು ಬಿಡುಗಡೆ ಮಾಡುವ ಆಮಿಶವನ್ನು ಬ್ರಿಟಿಶ್ ಸರಕಾರ ತೋರಿಸಿತ್ತು. ಆದರೆ ಬೇಂದ್ರೆಯವರು ಅದಕ್ಕೆ ಒಪ್ಪಲಿಲ್ಲ. ನನ್ನ ಕವನವು ದೇಶಪ್ರೇಮದ ಕವನವೇ ಹೊರತು ದೇಶದ್ರೋಹದ ಕವನವಲ್ಲ ಎಂದು ಅವರು ಹೇಳಿದರು. ಈ ಘಟನೆಯನ್ನು ಬೇಂದ್ರೆಯವರು ತಮ್ಮ ‘ಸಖೀಗೀತ’ದಲ್ಲಿ ಹೀಗೆ ವರ್ಣಿಸಿದ್ದಾರೆ:

‘ನರಬಲಿ’ ಕವನವು ಬಲಿ ಮಾಡಿತೆನ್ನನು
ಹೆಳವನಿದ್ದಲ್ಲಿಗೆ ಹೊಳೆ ಬಂದಿತು
……………………………
…………………………….
ಪ್ರಾಣದ ಒಗರಷ್ಟು ಹಿಂಡಿತು ಹಿಂಡಲಿಗೆ
ಮುಗದದ ಮಳೆಗಾಳಿ ಮುಂದೆಳೆದಿತು.

ಬೇಂದ್ರೆಯವರ ಅನೇಕ ಶ್ರೇಷ್ಠ ಕವನಗಳು ಈ ಅಗ್ನಿಪರೀಕ್ಷೆಯ ಅವಧಿಯಲ್ಲಿ ಹುಟ್ಟಿದವು. ಅವರ ಅತ್ಯುತ್ತಮ ಕವನಗಳಲ್ಲಿ ಒಂದಾದ ‘ಭಾವಗೀತೆ’ಯು  ಸಹ ಇದೇ ಕಾಲದಲ್ಲಿ ರಚಿತವಾಯಿತು. ಆ ಕವನದ ಹುಟ್ಟಿಗೆ ಕಾರಣವಾದ ಘಟನೆ ಹೀಗಿದೆ:  

ಮುಗದದಲ್ಲಿ ನಜರಬಂದಿಯಲ್ಲಿ ಇದ್ದ ಬೇಂದ್ರೆಯವರು, ಅಲ್ಲಿಯ ದೇವಿಯ ಗುಡಿಯೊಂದರಲ್ಲಿ ಒಮ್ಮೆ ಜೊಂಪಿಸುತ್ತ ಕೂತಿದ್ದಾಗ, ಹತ್ತಿರದಲ್ಲಿರುವ ಬಿದಿರಮೆಳೆಯಲ್ಲಿರುವ ಗುಂಗೀಹುಳವೊಂದು ಬಿದಿರನ್ನು ಕೊರೆಯುತ್ತಿರುವ ಧ್ವನಿ ಬೇಂದ್ರೆಯವರ ಕಿವಿಗೆ ಬೀಳುತ್ತದೆ. ನಾದಲೋಲರಾದ ಈ ವರಕವಿಯ ಮನದಲ್ಲಿ ಭಾವಲಹರಿಯೊಂದು ಉದ್ಭವಿಸಿ ಕವನವಾಗಿ ಹೊರಹೊಮ್ಮಿತು. ಅದೇ ‘ಭಾವಗೀತೆ’.  ಈ ಕವನದ ಪೂರ್ತಿಪಾಠ ಹೀಗಿದೆ:

‘ಭಾವಗೀತೆ’
“ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ”
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
                                         ಭೃಂಗದ ಬೆನ್ನೇರಿ ಬಂತು….

ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ    
                                     ಭೃಂಗದ ಬೆನ್ನೇರಿ ಬಂತು….

ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ
ಉಸಿರಿನಿಂದ ಹುಡುಕುವಂತೆ ತನ್ನ ಬಾಳ ಮೇಲಾ
                                        ಭೃಂಗದ ಬೆನ್ನೇರಿ ಬಂತು….

ತಿರುಗುತಿತ್ತು ತನ್ನ ಸುತ್ತು ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ
                                       ಭೃಂಗದ ಬೆನ್ನೇರಿ ಬಂತು….

ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ದಾಂಗುಡಿಗಳ ಬಿಡುತಲಿತ್ತು ಅರಳಲಿತ್ತು, ಪ್ರೇಮಾ
                                       ಭೃಂಗದ ಬೆನ್ನೇರಿ ಬಂತು….

ವಜ್ರಮುಖವ ಚಾಚಿ ಮುತ್ತುತಿತ್ತು ಹೂವ ಹೂವಾ
ನೀರ ಹೀರಿ ಹಾರುತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ
                                     ಭೃಂಗದ ಬೆನ್ನೇರಿ ಬಂತು….

ಗಾಳಿಯೊಡನೆ ತಿಳ್ಳಿಯಾಡುತದರ ಓಟಾ
ದಿಕ್ತಟಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕೆಯೊಡನೆ ಬೆಳೆಸುತಿತ್ತು ಕೂಟಾ
                                         ಭೃಂಗದ ಬೆನ್ನೇರಿ ಬಂತು….

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕುತಿತ್ತು ತಾಳಾ
‘ಬಂತೆಲ್ಲಿಗೆ?’ ಕೇಳುತಿದ್ದನೀಯನಂತ ಕಾಳಾ
                                          ಭೃಂಗದ ಬೆನ್ನೇರಿ ಬಂತು….

ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ
                                            ಭೃಂಗದ ಬೆನ್ನೇರಿ ಬಂತು….

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
                                         ಭೃಂಗದ ಬೆನ್ನೇರಿ ಬಂತು….


ಕವನಗಳು ಹುಟ್ಟುವುದನ್ನು ಕುರಿತೇ ಬೇಂದ್ರೆಯವರು ಅನೇಕ ಕವನಗಳನ್ನು ಬರೆದಿದ್ದಾರೆ. ಬೇಂದ್ರೆಯವರ ಕವನಗಳ ವೈಶಿಷ್ಟ್ಯವೆಂದರೆ, ಅವರು ಕವನಗಳನ್ನು ಕಟ್ಟುವದಿಲ್ಲ. ಅವರ ಮಾನಸ ಸರೋವರದಲ್ಲಿ ತರಂಗಗಳು ಎದ್ದಂತೆ ಅವರ ಕವನಗಳು ಹುಟ್ಟುತ್ತವೆ! ‘ಭಾವಗೀತೆ’ ಕವನದ ಮೊದಲ ನುಡಿಯನ್ನು ನೋಡಿರಿ:

“ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
                                  ಭೃಂಗದ ಬೆನ್ನೇರಿ ಬಂತು….

ಗುಂಗೀಹುಳವೊಂದರ ಗುಂಯ್ಗುಡುವಿಕೆಯೇ ‘ಭಾವಗೀತೆ’ಯ ಹುಟ್ಟಿಗೆ ಕಾರಣವಾಗಿದೆ. ಬೇಂದ್ರೆಯವರು ಹೇಳಿಕೇಳಿ ನಾದಲೋಲರು.  ಭ್ರಮರನಾದದಲ್ಲಿ ತಲ್ಲೀನರಾದ ಅವರಿಗೆ ಕಲ್ಪನೆಯ ಪ್ರವಾಹವು ಹರಿಯಲು  ಇಷ್ಟೇ ಸಾಕಾಯಿತು. “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಎನ್ನುವ ಸಾಲು ಹೊರಹೊಮ್ಮಿತು.

ಗುಂಗು ಪದಕ್ಕೆ ತಲ್ಲೀನತೆ ಹಾಗು ಮರುಳು ಎನ್ನುವ ಅರ್ಥಗಳು ಇವೆ. ಭೃಂಗ ಅಥವಾ ಗುಂಗೀ ಹುಳುವು ತದೇಕಚಿತ್ತವಾಗಿ ಮರವನ್ನು ಕೊರೆಯುವಂತೆಯೇ ಕವಿಯೂ ಸಹ ತನ್ನ ಕಾವ್ಯಸೃಷ್ಟಿಯಲ್ಲಿ, ಕಾವ್ಯದ ನಾದದಲ್ಲಿ  ತಲ್ಲೀನನಾಗುತ್ತಾನೆ. ಕಾವ್ಯದ ಕಲ್ಪನಾವಿಲಾಸವನ್ನು ಹಿಂಬಾಲಿಸಿ ಹೋಗುತ್ತಾನೆ. ಇದು ಈ ಸಾಲಿನ ಮೇಲುನೋಟದ ಅರ್ಥ.

ಈ ಮೇಲುನೋಟದ ಅರ್ಥದೊಡನೆ, ಒಂದು ಒಳನೋಟದ ಅರ್ಥವೂ ಇಲ್ಲಿದೆ. ಅದು ಕವಿಕುಲಗುರು ಕಾಳಿದಾಸನ ಸ್ಮರಣೆ. ಕಾಳಿದಾಸನ ‘ಅಭಿಜ್ಞಾನ ಶಾಕುಂತಲಮ್’ ನಾಟಕದಲ್ಲಿ, ಶಕುಂತಲಾ ಹಾಗು ದುಷ್ಯಂತರ ಪ್ರಣಯಕ್ಕೆ ಕಾರಣವಾಗುವುದೇ ಒಂದು ಭ್ರಮರ. ಈ ರಮ್ಯ ಕಲ್ಪನಾವಿಲಾಸವನ್ನು ಅನುಸರಿಸಿಕೊಂಡು, ನಾಟಕ ಮುಂದುವರಿಯುತ್ತದೆ. ಆದುದರಿಂದಲೇ “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಎಂದು ಹೇಳುವಾಗ ವರಕವಿ ಬೇಂದ್ರೆಯವರು ಕವಿಕುಲಗುರು ಕಾಳಿದಾಸನನ್ನು ಪರೋಕ್ಷವಾಗಿ ಸ್ಮರಿಸುತ್ತಿದ್ದಾರೆ. ಈ ಒಳಅರ್ಥದ ಸೂಚನೆ ಕೊಡಲೆಂದೇ ಆ ಸಾಲನ್ನು inverted commasದಲ್ಲಿ ಬರೆದಿದ್ದಾರೆ.

(ಬೇಂದ್ರೆಯವರು ನಾದಲೋಲ ಕವಿಗಳು. ಅವರ ಕಾವ್ಯ ಜನಿಸುವುದೇ ನಾದದಲ್ಲಿ! ‘ನಾದಬೇಕು, ನಾದಬೇಕು, ನಾದಾನ್ನ ನಾದಬೇಕು’ ಎನ್ನುವ ಬೇಂದ್ರೆಯವರ ಕವನವೊಂದರ ಸಾಲುಗಳನ್ನು ನೆನೆಪಿಸಿಕೊಳ್ಳಿರಿ. ಇಲ್ಲಿ ನಾದ ಪದಕ್ಕೆ ನಾಲ್ಕು ಅರ್ಥಗಳಿವೆ. ಮೊದಲನೆಯದು ಧ್ವನಿ ಎನ್ನುವ ಅರ್ಥ. ಎರಡನೆಯದು ತಲ್ಲೀನತೆ ಎನ್ನುವ ಅರ್ಥ. ಮೂರನೆಯದಾಗಿ knead ಎನ್ನುವ ಅರ್ಥ. ನಾಲ್ಕನೆಯದಾಗಿ ‘ನಾದ’ ಪದಕ್ಕೆ ‘ಮರುಳು’ ಎನ್ನುವ ಅರ್ಥವೂ ಇದೆ. ಇದಲ್ಲದೆ,  ‘ನಾದಾನ್ನ’ ಪದವನ್ನು innocent ಎನ್ನುವ ಅರ್ಥದಲ್ಲಿಯೂ ಬಳಸಲಾಗಿದೆ.)

ಕಲ್ಪನಾವಿಲಾಸ ಪ್ರಾರಂಭವಾದರೆ ಸಾಕೆ? ಅದು ಕಾವ್ಯವಾಗಲು ಲಯ ಹಾಗು ತಾಳ ಬೇಡವೆ? ವರಕವಿ ಬೇಂದ್ರೆಯವರಿಗೆ ಇದು ಸಹಜಸಿದ್ಧಿ. ಗಾಳಿಯೇ ಚಿಟ್ಟೆಯಾಗಿ ಹಾರಲಾರಂಭಿಸಿದರೆ, ಅದರ ಮಸೆದಾಟವೇ ಅದರ ಪಕ್ಕಗಳಾಗುತ್ತವೆ. ಒಂದು ಪಕ್ಕ ತಾಳವಾದರೆ, ಮತ್ತೊಂದು ಪಕ್ಕ ಲಯ ಆಗುತ್ತದೆ. ವರಕವಿಯ ಭಾವಗೀತೆಗೆ ಗಾಳಿಯಾಟದಷ್ಟೇ ಸಹಜವಾಗಿ ಲಯ, ತಾಳ ಹಾಗು ಪ್ರಾಸ ಲಭಿಸುತ್ತವೆ. ಅಂತೆಯೇ ಅವರು ‘ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ’ ಎನ್ನುತ್ತಾರೆ. ಆ ಸ್ವಚ್ಛಂದ ಹಾರಾಟದ ರೇಷೆಯೇ (line of flight) ಒಂದು ಮಂದಹಾಸದಂತೆ ಮಿಂಚಿ ಮಾಯವಾಗುತ್ತದೆ. ( ಈ ಮಾತಿಗಾಗಿ ಬೇಂದ್ರೆಯವರ ಅನೇಕ ಕವನಗಳ ಉದಾಹರಣೆಗಳನ್ನು ನೀಡಬಹುದು. ಲೇಖನ ಕೈಮೀರಬಾರದೆಂದು ಅವುಗಳನ್ನು ಉಲ್ಲೇಖಿಸುತ್ತಿಲ್ಲ.)

ಕವಿಯು ಈ ನಾದವನ್ನು ಅನುಭವಿಸುತ್ತಾನೆ. ಅದನ್ನು ಅರಿತುಕೊಳ್ಳಲು ಅದರಲ್ಲಿಯೇ ಮುಳುಗುತ್ತಾನೆ. ಈ ಮಾತನ್ನು ಎರಡನೆಯ ನುಡಿಯಲ್ಲಿ ಈ ರೀತಿಯಾಗಿ ಹೇಳಲಾಗಿದೆ:

ಏನು ಏನು? ಜೇನು ಜೇನು? ಎನೆ ಗುಂಗುಂ ಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ   
                                     ಭೃಂಗದ ಬೆನ್ನೇರಿ ಬಂತು….

ವಿಶ್ವದ ಸೃಷ್ಟಿಯಾಗುವಾಗ ಮೊದಲು ಹುಟ್ಟಿದ್ದೇ ಓಂಕಾರ ನಾದ. ಆದುದರಿಂದ ಪ್ರಣವವು (ಓಂಕಾರವು) ಪರಬ್ರಹ್ಮಸ್ವರೂಪಿಯಾಗಿದೆ. ಗುಂಗೀಹುಳದ ಗುಂಗುಂ ಗಾಯನವನ್ನು ಕೇಳಿದ ಕವಿಗೆ ಅದು ಜೇನಿನಷ್ಟು ಸಿಹಿಯಾದ ನಾದದಂತೆ ಭಾಸವಾಗುತ್ತದೆ. ಅದು ಪ್ರಣವನಾದಕ್ಕೆ ಅತಿ ಹತ್ತಿರವಾದ ನಾದವೆನ್ನಿಸುತ್ತದೆ. ಕವಿಯ ಕವನದಲ್ಲಿ  ಅನುಭವಿಸಬಹುದಾದ ಏಕತಾರಿಯ ನಾದಕ್ಕೆ ಸಮಾನವಾದ ನಾದವು ಇದಾಗಿದೆ.

ನಾದದಲ್ಲಿ ಲೀನವಾದ ಈ ಕಲ್ಪನಾವಿಲಾಸಕ್ಕೆ ಕಾವ್ಯರೂಪವು ಇನ್ನೂ ದೊರೆತಿಲ್ಲ. ಅದು ಕಾವ್ಯವಾಗಿ ಪರಿವರ್ತನೆಯಾಗುವ ವಿವಿಧ ಹಂತಗಳನ್ನು ಬೇಂದ್ರೆಯವರು ಹೇಳುತ್ತಾರೆ. ಮೂರನೆಯ ನುಡಿಯಲ್ಲಿ ಮೊದಲ ಹಂತದ ವರ್ಣನೆ ಇದೆ:

ಒಡಲ ನೂಲಿನಿಂದ ನೇಯುವಂತೆ ಜೇಡ ಜಾಲಾ
ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ
ಉಸಿರಿನಿಂದ ಹುಡುಕುವಂತೆ ತನ್ನ ಬಾಳ ಮೇಲಾ
                                        ಭೃಂಗದ ಬೆನ್ನೇರಿ ಬಂತು….

ಮುಂಡಕೋಪನಿಷತ್ತಿನಲ್ಲಿ ಹೇಳುವಂತೆ, ಈ ವಿಶ್ವದ ಸೃಷ್ಟಿಗೆ ಕಾರಣನಾದ ಭಗವಂತನಿಗೆ ‘ಊರ್ಣನಾಭ’ ಎನ್ನುತ್ತಾರೆ. ಊರ್ಣ ಎಂದರೆ ಉಣ್ಣೆ. ಜೇಡವು ತನ್ನ ಹೊಕ್ಕಳಿನಿಂದ ಸ್ರವಿಸುವ ಊರ್ಣ ಅಥವಾ ನೂಲಿನಿಂದಲೇ ತನ್ನ ಬಲೆಯನ್ನು ಕಟ್ಟುತ್ತದೆ. ಭಗವಂತನೂ ಸಹ ಯಾವ ವಸ್ತುಗಳನ್ನೂ ಅವಲಂಬಿಸದೆ ತನ್ನಿಂದಲೇ ಈ ವಿಶ್ವವನ್ನು ಲೀಲೆಯಿಂದಲೇ ಸೃಷ್ಟಿಸುತ್ತಾನೆ. ಕವಿಯೂ ಸಹ ತನ್ನ ಕಾವ್ಯಸೃಷ್ಟಿಯನ್ನು  ತನ್ನ ಕಲ್ಪನೆಯಿಂದಲೇ, ನಿರಾಯಾಸವಾಗಿ ಮಾಡುತ್ತಾನೆ.

ಬ್ರಹ್ಮಸೃಷ್ಟಿಯ ಹಣೆಬರಹವನ್ನು ಬ್ರಹ್ಮನು ಬರೆಯುತ್ತಾನೆ. ಕವನದ ಹಣೆಬರಹವನ್ನು, ಬೇಂದ್ರೆಯವರ ಮೇರೆಗೆ ಕವನವೇ ಬರೆಯುತ್ತದೆ:  ತನ್ನ ದೈವರೇಷೆ ಬರೆಯುವಂತೆ ತಾನೆ ಭಾಲಾ’!  (ಭಾಲ = ಹಣೆ)
‘ಬಾಳ ಮೇಲಾ’ ಅಂದರೆ ಬಾಳಿನ ಉನ್ನತಿ ಅಥವಾ ಶ್ರೇಯಸ್ಸು. ಭ್ರೂಣಾವಸ್ಥೆಯಲ್ಲಿರುವ ಕವನವು ತನ್ನ ಉಸಿರನ್ನು ಹುಡುಕಿಕೊಂಡು (ಅಂದರೆ ಪ್ರಾಣಾಯಾಮದ ಮೂಲಕ) ತನ್ನ ಬಾಳಿನ ಮೇಲ್ಮೆಯನ್ನು ಸಾಧಿಸಬೇಕು. ಈ ಪ್ರಾಣವಾಯುವನ್ನು ಈ ಭ್ರೂಣಕ್ಕೆ ಅನುಗ್ರಹಿಸುವವರು ಯಾರು? ಅವಳೇ ವಾಗ್ದೇವಿ. ಬೇಂದ್ರೆಯವರು ತಮ್ಮ ಮತ್ತೊಂದು ಕವನದಲ್ಲಿ ಈ ದೇವಿಯನ್ನು ಹೀಗೆ ಪ್ರಾರ್ಥಿಸುತ್ತಾರೆ:
‘ಮಾತುಗಳ ಮಾತೆ ನೀನು
ಮಾತಿನಲಿ ಹೂತು ಬರಬಾರದೇನು?
ಉಸಿರುಗಳ ಉಸಿರೆ ನೀನು
ಉಸಿರಿನಲಿ ಹಸಿರಾಗಿ ಹರಿದೆ ನಾನು.”
ಕಾವ್ಯಭ್ರೂಣಕ್ಕೆ ಉಸಿರಿನ ಅನುಗ್ರಹವಾದಾಗ, ಅದು ಸಜೀವವಾಗಿ ಸಂಚಲನೆಯನ್ನು ಪಡೆಯುವುದು.

ನಾಲ್ಕನೆಯ ನುಡಿಯಲ್ಲಿ ಕಾವ್ಯಭ್ರೂಣದ ಎರಡನೆಯ ಅವಸ್ಥೆಯ ವರ್ಣನೆ ಇದೆ:

ತಿರುಗುತಿತ್ತು ತನ್ನ ಸುತ್ತು ಮೂಕಭಾವ ಯಂತ್ರಾ
ಗರ್ಭಗುಡಿಯ ಗರ್ಭದಲ್ಲಿ ಪಡಿನುಡಿಯುವ ಮಂತ್ರಾ
ಮೂಡಿ ಮೂಡಿ ಮುಳುಗಿ ಮುಳುಗಿ ಮೊಳಗುವೊಲು ಸ್ವತಂತ್ರಾ
                                       ಭೃಂಗದ ಬೆನ್ನೇರಿ ಬಂತು….

ಸ್ಥೂಲರೂಪಿಯಾದ ಈ ಕಾವ್ಯಭ್ರೂಣಕ್ಕೆ ಜೀವವೇನೊ ಬಂದಿತು. ಆದುದರಿಂದ ಅದರಲ್ಲಿ ಚಲನೆಯೂ ಬಂದಿತು. ಆದರೆ ಅದರಲ್ಲಿ  ಇನ್ನೂ ‘ನುಡಿ’ ಬಂದಿಲ್ಲ. ಅದರ ಕಾವ್ಯಭಾವವು ಅದರೊಳಗೇ ಇನ್ನೂ ನಿಶ್ಶಬ್ದವಾಗಿಯೇ ಇದೆ. ಆದುದರಿಂದ ಅದು ಮೂಕಯಂತ್ರದಂತೆ ತನ್ನ ಸುತ್ತಲೂ ತಾನೇ ತಿರುಗುತ್ತ ವಾಕ್ ರೂಪವನ್ನು ಪಡೆಯಲು ಪ್ರಯತ್ನಿಸುತ್ತಿದೆ. ತನ್ನನ್ನು ಅರಿತುಕೊಳ್ಳುವ ಈ ಪ್ರಯತ್ನವೇ ‘ತಪಸ್’ ಆಗಿದೆ. ತಪಸ್ಸಿನ ಮೂಲಕವೇ ಸ್ವರೂಪದರ್ಶನ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಹೊಮ್ಮುವ ವಾಕ್ ಅಥವಾ ಅಭಿವ್ಯಕ್ತಿ ಅಂದರೆ ಸತತವಾಗಿ ಝೇಂಕಾರವಾಗುತ್ತಿರುವ ಮಂತ್ರ. ಈ ವಾಕ್ ಕಾವ್ಯಗರ್ಭದಲ್ಲಿ ಒಂದೇ  ಸವನೆ ಪಡಿನುಡಿಯುತ್ತಿದೆ ಅಂದರೆ ಪ್ರತಿಧ್ವನಿಸುತ್ತಿದೆ.

 (‘ವಾಕ್’ಗೆ ನಾಲ್ಕು ಅವಸ್ಥೆಗಳು: ಪರಾ, ಪಶ್ಯಂತೀ, ಮಧ್ಯಮಾ, ವೈಖರೀ. ನಿಷ್ಪಂದವಾಗಿ ಪರಾ ಅವಸ್ಥೆಯಲ್ಲಿರುವ ವಾಕ್, ಕೊನೆಯದಾದ ವೈಖರೀ ಅವಸ್ಥೆಯಲ್ಲಿ ವ್ಯಕ್ತರೂಪವನ್ನು ಪಡೆಯುತ್ತದೆ.)
   
ಬೇಂದ್ರೆಯವರಿಗೆ ಕಾವ್ಯವೆಂದರೆ ಮಂತ್ರ! ‘ನಾನೃಷಿ: ಕುರುತೇ ಕಾವ್ಯಮ್’ ಎನ್ನುವ ಮಾತೇ ಇದೆಯಲ್ಲ. ಬೇಂದ್ರೆಯವರೇ ತಮ್ಮ ಮತ್ತೊಂದು ಕವನದಲ್ಲಿ, ‘ಇದು ಮಂತ್ರ; ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ;’ ಎಂದು ಹೇಳಿದ್ದಾರೆ. ಅದರಂತೆಯೆ ನಾದದ ಗರ್ಭದಲ್ಲಿ ಅಭಿವ್ಯಕ್ತಿಯನ್ನು ಪಡೆಯುವ ಉದ್ದೇಶದಿಂದ ತನ್ನ ಸುತ್ತಲೂ ತಾನೇ ತಿರುಗುತ್ತಿರುವ ಈ ಕಾವ್ಯಭ್ರೂಣವು ಮತ್ತೆ ಮತ್ತೆ ಕವಿಕಲ್ಪನೆಯಲ್ಲಿ ಮೂಡುತ್ತದೆ, ಮತ್ತೆ ಮತ್ತೆ ಮುಳುಗುತ್ತದೆ. ಈ ಕ್ರಿಯೆಯಲ್ಲಿ ಅದು ಸಂಪೂರ್ಣ ಸ್ವತಂತ್ರವಾದದ್ದು. ಕವಿಯ ಬಂಧನವೂ ಅದಕ್ಕೆ ಇರುವುದಿಲ್ಲ.

ಐದನೆಯ ನುಡಿ ಹೀಗಿದೆ:
ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ
ಲಹರಿ ಲಹರಿ ಕಂಪಬಳ್ಳಿ; ಚಿತ್ತರಂಗ ಭೂಮಾ
ದಾಂಗುಡಿಗಳ ಬಿಡುತಲಿತ್ತು ಅರಳಲಿತ್ತು, ಪ್ರೇಮಾ
                                       ಭೃಂಗದ ಬೆನ್ನೇರಿ ಬಂತು….

ಭ್ರೂಣಾವಸ್ಥೆಯು ಮುಗಿದು, ಈ ಕವನದ ‘ಸೃಷ್ಟಿ’ ಅಂದರೆ ಹೆರಿಗೆ ಪ್ರಾರಂಭವಾಗಬೇಕು. ಆ ಸಮಯದಲ್ಲಿ ಕವಿಯ ಮನಸ್ಸು ಸಂತೋಷವನ್ನು, ಮಂಗಳವನ್ನು ಅನುಭವಿಸುತ್ತದೆ ಎನ್ನುವುದನ್ನು ‘ಎಲ್ಲೆಲ್ಲೂ ಸೃಷ್ಟಿದೇವಿಗಿಟ್ಟ ಧೂಪ ಧೂಮಾ’ ಎಂದು ಬೇಂದ್ರೆಯವರು ವರ್ಣಿಸಿದ್ದಾರೆ. ಕಾವ್ಯದ ಛಂದಸ್ಸು ತನ್ನಿಂದ ತಾನೇ ಹುಟ್ಟಿಕೊಳ್ಳುತ್ತದೆ ಎನ್ನುವುದನ್ನು ‘ಲಹರಿ ಲಹರಿ ಕಂಪಬಳ್ಳಿ’ ಎನ್ನುವ ಮೂಲಕ ಹೇಳುತ್ತಿದ್ದಾರೆ. ಕವನದ ಹುಟ್ಟಿಗೆ ಕಾರಣವಾದ ಮನೋಲಹರಿಗೆ ಸುಗಂಧವನ್ನೀಯುತ್ತಿರುವ ಬಳ್ಳಿ ದೊರಕುತ್ತಿದೆ. ಅರ್ಥಾತ್ ಛಂದಸ್ಸು ಲಭಿಸುತ್ತಿದೆ. (“ಹಬ್ಯಾವ ಛಂದದ ಬಳ್ಳಿ” ಎನ್ನುವ ಬೇಂದ್ರೆಯವರ ಕವನವನ್ನು ನೆನಪಿಸಿಕೊಳ್ಳಿ.) ಈ ಸಮಯದಲ್ಲಿ ಕವಿಯ ಮನಸ್ಸು ತಾಯಿಯ ಮನಸ್ಸಿನಂತೆ ಭೂಮರೂಪವನ್ನು ಅಂದರೆ ವೈಶಾಲ್ಯತೆಯನ್ನು ತಳೆದಿರುತ್ತದೆ, ಅಂದರೆ ಅದರಲ್ಲಿ ಯಾವುದೇ ಅಲ್ಪತನವು ಇರುವುದಿಲ್ಲ. ಅದು ಪ್ರೇಮಪೂರ್ಣವಾಗಿರುತ್ತದೆ. ಆದುದರಿಂದಲೇ ಅದು ಹೂವಿನ ಮೊಗ್ಗೆಗಳನ್ನು ಬಿಟ್ಟು, ಅರಳಲು ಉದ್ಯುಕ್ತವಾಗಿರುತ್ತದೆ.

ಆರನೆಯ ನುಡಿ ಹೀಗಿದೆ:
ವಜ್ರಮುಖವ ಚಾಚಿ ಮುತ್ತುತಿತ್ತು ಹೂವ ಹೂವಾ
ನೀರ ಹೀರಿ ಹಾರುತಿತ್ತು ನೀರಸವಾ ಜಾವಾ
ಅಯ್ಯೊ ನೋವೆ! ಅಹಹ ಸಾವೆ! ವಿಫಲ ಸಫಲ ಜೀವಾ
                                     ಭೃಂಗದ ಬೆನ್ನೇರಿ ಬಂತು….

ಕಾವ್ಯಭ್ರೂಣವು ಕವಿಯ ಅಂದರೆ ತಾಯಿಯ ಮನಸ್ಸಿನಲ್ಲಿ ಅರಳಿರುವ ಹೂವುಗಳನ್ನು ವಜ್ರಮುಖದಿಂದ ಮುತ್ತುತ್ತಿದೆ ಎಂದು ಬೇಂದ್ರೆಯವರು ಹೇಳುತ್ತಿದ್ದಾರೆ. ಕವಿಯ ಮನಸ್ಸಿನಲ್ಲಿ ಅರಳಿರುವ ಅನೇಕ ನಾದರೂಪಗಳನ್ನು ಇಲ್ಲಿ ಅರಳಿರುವ ಹೂವುಗಳಿಗೆ ಹೋಲಿಸಲಾಗಿದೆ. ಕಾವ್ಯಭ್ರೂಣವನ್ನು ಜೇನುಹುಳಕ್ಕೆ ಹೋಲಿಸಲಾಗಿದೆ. ಹೂವುಗಳಿಂದ ಜೇನು ಸಂಗ್ರಹಿಸುವ ಜೇನುಹುಳದಂತೆ, ಕಾವ್ಯಭೃಂಗವು ಕವಿಯ ಚಿತ್ತದಲ್ಲಿ ಝೇಂಗುಟ್ಟುತ್ತಿರುವ ನಾದದ ಸಾರವನ್ನು ಹೀರಿ, ಪದಗಳನ್ನಾಗಿ ಪರಿವರ್ತಿಸುತ್ತದೆ.

ವಜ್ರಮುಖ ಅಂದರೆ ಜೇನುಹುಳದ ಕೊಂಡಿ. ಆ ಕೊಂಡಿಯಿಂದ ನೀರನ್ನು ಅಂದರೆ ವಾಕ್-ಸಾರವನ್ನು ಹೀರಿದ ಬಳಿಕ ಹೂವು ನೀರಸವಾಗಲೇ ಬೇಕಲ್ಲವೆ!? ಇದು ಹೂವಿಗೆ ನೋವು ಹಾಗು ಸಾವನ್ನು ಕೊಡುವಂತಹದು. ಆದುದರಿಂದ ಹೂವಿನ ಬಾಳು ಇಲ್ಲಿಗೆ ಮುಗಿಯಿತು. ಆದರೆ ಕಾವ್ಯಭೃಂಗಕ್ಕೆ ಪೋಷಣೆ ನೀಡಿರುವದರಿಂದ ಅದರ ಜೀವನವು ಸಫಲವೂ ಆಗಿದೆ!

ಏಳನೆಯ ನುಡಿ ಹೀಗಿದೆ:
ಗಾಳಿಯೊಡನೆ ತಿಳ್ಳಿಯಾಡುತದರ ಓಟಾ
ದಿಕ್ತಟಗಳ ಹಾಯುತಿತ್ತು; ಅದರ ಬಿದಿಗೆ ನೋಟಾ
ನಕ್ಕ ನಗುವ ಚಿಕ್ಕೆಯೊಡನೆ ಬೆಳೆಸುತಿತ್ತು ಕೂಟಾ
                                         ಭೃಂಗದ ಬೆನ್ನೇರಿ ಬಂತು….

ಕಲ್ಪನಾವಿಲಾಸವನ್ನು ಹೊತ್ತುಕೊಂಡು ಹುಟ್ಟಲು ಎಳಸುತ್ತಿರುವ ಈ ಕಾವ್ಯಶಿಶುವಿನ ಅನಂತ ಸಾಮರ್ಥ್ಯವನ್ನು ಬೇಂದ್ರೆ ಬಣ್ಣಿಸುತ್ತಾರೆ: ಅದರ ಓಟವು ಗಾಳಿಯೊಡನೆ ತಿಳ್ಳಿಯಾಟವನ್ನು ಆಡುತ್ತಿತ್ತು ಹಾಗು ದಿಕ್ಕುಗಳನ್ನು ಹಾಯುತ್ತಿತ್ತು. ಬಿದಿಗೆ ಚಂದ್ರನನ್ನು ಹೋಲುವ ಅದರ ನೋಟವು ನಗುವ ಚಿಕ್ಕೆಯೊಡನೆ ಕೆಳೆತನವನ್ನು ಬೆಳೆಸುತ್ತಿತ್ತು ಎಂದು ಬೇಂದ್ರೆ ಹೇಳುತ್ತಾರೆ. ಮನೋವೇಗವೇ ಪರಮವೇಗವೆಂದ ಮೇಲೆ ಕಲ್ಪನೆಯ ಸವಾರಿಯನ್ನು ಮಾಡುತ್ತಿರುವ ಕಾವ್ಯಶಿಶುವಿಗೆ  ದಿಕ್ಕುಗಳನ್ನು ಹಾಯುವ ಸಾಮರ್ಥ್ಯವಿರುವುದು ಸಹಜವೇ ಆಗಿದೆ. ಇನ್ನು ಅದರ ನೋಟವು (ಶುಕ್ಲಪಕ್ಷದ) ಬಿದಿಗೆಯ ನೋಟವೇಕೆ? ಇದು ಇದೀಗ ಜನಿಸಬೇಕಾದ ಶಿಶು. ಆದುದರಿಂದ ಅದು (ಶುಕ್ಲಪಕ್ಷದ) ಬಿದಿಗೆಯ ಚಂದ್ರನಂತೆ ಇನ್ನೂ ಪುಟ್ಟದಾಗಿದ್ದು, ಪ್ರವರ್ಧಮಾನಕ್ಕೆ ಬರುವಂತಹದಾಗಿದೆ. ‘ನಕ್ಕು ನಗುವ ಚಿಕ್ಕೆ’ ಎಂದರೆ ಶುಕ್ರಗ್ರಹ. ಅಮವಾಸ್ಯೆಯ ನಂತರ, ಬಿದಿಗೆಯ ಚಂದ್ರನು ಸೂರ್ಯ, ಬುಧ ಹಾಗು ಶುಕ್ರಗ್ರಹಗಳಿಗೆ ಸನಿಹದಲ್ಲಿಯೇ ಇರುತ್ತಾನೆ. ಆದುದರಿಂದ ಸೂರ್ಯಾಸ್ತದ ನಂತರ ಅಥವಾ ಸೂರ್ಯೋದಯಕ್ಕೂ ಮೊದಲು, ಶುಕ್ರ ಹಾಗು ಚಂದ್ರಮರು ಸಂಗಮಿಸುವ ಸಾಧ್ಯತೆಗಳಿರುತ್ತವೆ. ಇದರಿಂದಾಗಿ ಬೆಳದಿಂಗಳು ಹೆಚ್ಚು ಪ್ರಕಾಶಮಾನವಾಗಿರುತ್ತದೆ. ಇದೀಗ ಹೊರಬರುತ್ತಿರುವ ಕಾವ್ಯಶಿಶು ವೇಗಶಾಲಿ ಹಾಗು ಪ್ರಕಾಶಮಾನವಾಗಿದೆ.

ಎಂಟನೆಯ ನುಡಿಯಲ್ಲಿ ಬೇಂದ್ರೆಯವರು ಕಾವ್ಯಶಿಶುವಿನಲ್ಲಿ ಪ್ರಾಣಸಂಚಾರವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಚೆಲುವು ತಾನೇ ತಾನಾಗಿ ತಾಳವನ್ನು ಹಾಕುತ್ತಿದೆ. ಇದೆಲ್ಲವೂ ನಿರಾಯಾಸವಾದ ಲೀಲೆ ಎಂದು ಬೇಂದ್ರೆಯವರು ಹೇಳುತ್ತಿದ್ದಾರೆ.

ಅಂತು ಇಂತು ಪ್ರಾಣತಂತು ಹೆಣೆಯುತಿತ್ತು ಬಾಳಾ
ಅಲ್ಲು ಇಲ್ಲು ಚೆಲುವು ನಿಂತು ಹಾಕುತಿತ್ತು ತಾಳಾ
‘ಬಂತೆಲ್ಲಿಗೆ?’ ಕೇಳುತಿದ್ದನೀಯನಂತ ಕಾಳಾ
                                          ಭೃಂಗದ ಬೆನ್ನೇರಿ ಬಂತು….

ಇನ್ನು ಈ ಭ್ರೂಣದ ಪ್ರಸವವಾಗಬೇಕಷ್ಟೆ? ಅದು ಕವಿಯನ್ನು ಅವಲಂಬಿಸಿರುವದಿಲ್ಲ. ಆಗುವದೆಲ್ಲವೂ ನಿಯತಿಯನ್ನು ಅನುಸರಿಸುತ್ತದೆ. ಆ ‘ಸಮಯವು ಬಂದಿತೆ?’ ಎಂದು ಕಾಲನು ಕೇಳುತ್ತಿದ್ದಾನೆ. ಆತನಿಗೆ ಅವಸರವಿಲ್ಲ. ಯಾಕೆಂದರೆ ಆತನು ಅನಂತನು; ಇಂತಹ ಅನೇಕೆ ಹೆರಿಗೆಗಳನ್ನು ಆತ ಕಂಡಿದ್ದಾನೆ.

(ಬೇಂದ್ರೆಯವರು ಇಲ್ಲಿ ಸಂಸ್ಕೃತದ ಕವಿ ಭವಭೂತಿಯನ್ನು ನೆನಸುತ್ತಿದ್ದಾರೆ. ‘ಕಾಲವು ಅನಂತವಾಗಿದೆ, ಪೃಥ್ವಿ ವಿಶಾಲವಾಗಿದೆ. ನನ್ನ ಕಾವ್ಯವನ್ನು ಆನಂದಿಸುವ ಒಬ್ಬನು ಇದ್ದೇ ಇರುತ್ತಾನೆ.’ ಎಂದು ಹೇಳಿದ ಕವಿ ಈತ.)

ಒಂಬತ್ತನೆಯ ನುಡಿ ಹೀಗಿದೆ:

ಮಾತು ಮಾತು ಮಥಿಸಿ ಬಂದ ನಾದದ ನವನೀತಾ
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ
                                            ಭೃಂಗದ ಬೆನ್ನೇರಿ ಬಂತು….

ಬೇಂದ್ರೆಯವರು ಈ ರೀತಿಯಲ್ಲಿ ಜನಿಸಿದ ಭಾವಗೀತೆಯ ಲಕ್ಷಣಗಳನ್ನು ವಿವರಿಸುತ್ತಿದ್ದಾರೆ.
ಭಾವಗೀತೆಯ ರಚನೆಯ ಸಮಯದಲ್ಲಿ ವಿಭಿನ್ನ ಪದಗಳ ಮಂಥನ ನಡೆಯುತ್ತದೆ. ಈ ಮಂಥನದಲ್ಲಿ ಅತ್ಯಂತ ಸಮಂಜಸವಾದ ಪದವು ಮಜ್ಜಿಗೆಯಲ್ಲಿ ಬೆಣ್ಣೆ ತೇಲಿ ಬರುವಂತೆ ಸಹಜವಾಗಿ ತೇಲಿ ಬರುತ್ತದೆ. ಇದು ಕವನದ ‘ನಾದ’ಕ್ಕೆ ಯುಕ್ತವಾಗಿರಬೇಕು. (‘ನವನೀತ’ವೆಂದರೆ ‘ಹೊಸದಾಗಿ ಕಡೆದಂತಹ’ ಎನ್ನುವ ಅರ್ಥವಿದೆ.) ಮಾತು ಎಂದರೆ ‘ವಾಕ್’. ನಾದದಲ್ಲಿ ತೇಲುವ ನವನೀತವೆಂದರೆ ಆ ವಾಕ್ ಪ್ರತಿಪಾದಿಸುವ ಅರ್ಥ. ಇವೆರಡರಲ್ಲಿ ಸಾಮರಸ್ಯವಿರಬೇಕು. ಆವಾಗಲೇ ಅದು ‘ಹೊಸ ಬೆಣ್ಣೆ’ಯ ಸವಿಯನ್ನು ನೀಡುವುದು. ಇಂತಹ ಸಿದ್ಧಿ ತನ್ನ ಕಾವ್ಯದಲ್ಲಿ ಸಾಧಿಸಲಿ ಎನ್ನುವುದಕ್ಕಾಗಿಯೇ ಕಾಳೀದಾಸನು ತನ್ನ ‘ಕುಮಾರಸಂಭವ’ ಕಾವ್ಯದ ಮೊದಲಲ್ಲಿ ದೇವರಲ್ಲಿ ಹೀಗೆ ಪ್ರಾರ್ಥಿಸಿದ್ದಾನೆ:
“ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ.”
( “ವಾಕ್ ಮತ್ತು ಅರ್ಥಗಳ ಸುಯೋಗಕ್ಕಾಗಿ, ವಾಕ್ ಮತ್ತು ಅರ್ಥಗಳಂತೆ ಹೆಣೆದುಕೊಂಡಿರುವ, ಜಗತ್ತಿನ ತಂದೆ-ತಾಯಿಯರಾದ, ಪಾರ್ವತೀಪರಮೇಶ್ವರರನ್ನು ಪ್ರಾರ್ಥಿಸುತ್ತೇನೆ.”)

ಇದೀಗ ಜನಿಸಿದ ಈ ಕಾವ್ಯಶಿಶು ‘ಹಿಗ್ಗ ಬೀರಿ ಹಿಗ್ಗುವುದು’. ಅಂದರೆ ಸುತ್ತಲಿದ್ದವರಿಗೆ, ಎತ್ತಿಕೊಂಡವರಿಗೆ ಅದು ಹಿಗ್ಗನ್ನು ಕೊಡುತ್ತದೆ ಹಾಗು ಆ ಮೂಲಕ ತಾನೂ ಹಿಗ್ಗುತ್ತದೆ. ಹಿಗ್ಗುತ್ತದೆ ಅಂದರೆ ಆನಂದಿಸುತ್ತದೆ ಎನ್ನುವ ಅರ್ಥವಲ್ಲದೆ ಬೆಳೆಯುತ್ತದೆ ಅನ್ನುವ ಅರ್ಥವೂ ಇದೆ. ಭಾವಗೀತೆ ಎನ್ನುವ ಈ ಕೂಸು ಸ್ವಸಂತೋಷದಲ್ಲಿ ಮುಳುಗಿದೆ. ಕವಿಯ ಕಲ್ಪನೆಯಲ್ಲಿ ಹುಟ್ಟಿದ ಭಾವಗೀತೆ ಎನ್ನುವ ಈ ಕೂಸಿನ ಸಂತೋಷಕ್ಕೆ ಹೊರಗಿನ ಯಾವ ವಸ್ತುವೂ ಬೇಕಿಲ್ಲ. ತನ್ನಷ್ಟಕ್ಕೆ ತಾನೇ ಕೈಕಾಲು ಬಡಿಯುತ್ತ, ಆಡುತ್ತಿರುವ ಶಿಶುವನ್ನು ನೋಡಿದವರಿಗೆ, ಇದು (ಪರಬ್ರಹ್ಮನಂತೆ) ಸ್ವಂತ ಆನಂದಲ್ಲಿ ಮುಳುಗಿದೆ ಎನ್ನುವುದರ ಭಾಸವಾಗುವುದು. ಅದನ್ನೇ ಬೇಂದ್ರೆಯವರು ‘ತನ್ನ ತಾನೆ ಪ್ರೀತಾ’ ಎನ್ನುವುದರ ಮೂಲಕ ಹೇಳುತ್ತಾರೆ. ಈ ಕೂಸಿನ ಆನಂದದ ಆಟಕ್ಕೆ ಏನಾದರೂ ಅರ್ಥವಿದೆಯೆ? ಅಥವಾ ಯಾವುದಾದರೂ ಸ್ವಾರ್ಥಪರ ಉದ್ದೇಶದಿಂದ  ಕೂಸು ಈ ಆಟವನ್ನು ಆಡುತ್ತಿದೆಯೆ? ಭಾವಗೀತೆಯೂ ಸಹ ತನ್ನಲ್ಲಿಯೇ ಆನಂದವನ್ನು ಹುಟ್ಟಿಸುತ್ತದೆ ಹಾಗು ಆ ಆನಂದವನ್ನು ಇತರರೂ ಅನುಭವಿಸುತ್ತಾರೆ. ಆದುದರಿಂದ ಬೇಂದ್ರೆಯವರು ಭಾವಗೀತೆಯನ್ನು ‘ಅರ್ಥವಿಲ್ಲ, ಸ್ವಾರ್ಥವಿಲ್ಲ ಬರಿಯ ಭಾವಗೀತೆ’ ಎಂದು ಬಣ್ಣಿಸುತ್ತಾರೆ.

ಕೊನೆಯ ನುಡಿ:
ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
                                  ಭೃಂಗದ ಬೆನ್ನೇರಿ ಬಂತು….

ಮೊದಲನೆಯ ನುಡಿಯನ್ನೇ ಬೇಂದ್ರೆಯವರು ಕೊನೆಯಲ್ಲಿ ಮರುಕಳಿಸಿದ್ದಾರೆ. ಆದರೆ ಇಲ್ಲಿ ‘ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸಾ’ ಎನ್ನುವ ಪದಪುಂಜಕ್ಕೆ  inverted commas ಬಳಸಿಲ್ಲ. ಯಾಕೆಂದರೆ ಮೊದಲ ನುಡಿಯಲ್ಲಿ ಅವರು ಕಾಳೀದಾಸನನ್ನು ಸ್ಮರಿಸಿದ್ದಾರೆ. ಇಲ್ಲಿ ಮಾತ್ರ ಅವರು ತಮ್ಮ ಕಾವ್ಯಾನುನುಭವವನ್ನೇ ಹೇಳುತ್ತಿದ್ದಾರೆ! ಭಾವಗೀತೆಯ ಕಾವ್ಯಾನುಭವವು ಆನಂದಮಯವಾದದ್ದು. ಬೇಂದ್ರೆಯವರ ಕಠಿಣಕಾಲದಲ್ಲಿ ಈ ಆನಂದದ ಗೀತೆ ಹುಟ್ಟಿರುವುದನ್ನು ಗಮನಿಸಿದಾಗ ಈ ಕವನವನ್ನು ‘ಅಗ್ನಿಯಲ್ಲಿ ಅರಳಿದ ಆನಂದದ ಹೂವು’ ಎನ್ನಬಹುದಲ್ಲವೆ?
………………………………………………………………
(ಟಿಪ್ಪಣಿ:
ಬೇಂದ್ರೆಯವರು ಮುಗದ ಹಳ್ಳಿಯಲ್ಲಿ ನಜರಬಂದಿಯಲ್ಲಿ ಇದ್ದರು. ಮುಗದವು ಹಳಿಯಾಳ ರಸ್ತೆಯ ಮೇಲೆ ಧಾರವಾಡದಿಂದ ಸುಮಾರು ೧೩ ಕಿಲೋಮೀಟರುಗಳ ದೂರದಲ್ಲಿದೆ. ‘ಗೆಳೆಯರ ಗುಂಪಿ’ನ ಗೆಳೆಯರಲ್ಲಿ ಒಬ್ಬರಾದ ಹಾಗು ಮನೋಹರ ಗ್ರಂಥಮಾಲೆಯನ್ನು ಸ್ಥಾಪಿಸಿದ ಶ್ರೀ ಜಿ.ಬಿ.ಜೋಶಿಯವರು ಪ್ರತಿ ದಿನವೂ ಸೈಕಲ್ ಮೇಲೆ ಹೋಗಿ ಬೇಂದ್ರೆಯವರಿಗೆ ಊಟವನ್ನು ಕೊಟ್ಟು ಬರುತ್ತಿದ್ದರು. ಈ ಮಾಹಿತಿಯನ್ನು ಶ್ರೀ ವ್ಯಾಸ ದೇಶಪಾಂಡೆ ನೀಡಿದ್ದಾರೆ. ಅವರಿಗೆ ನಾನು ಋಣಿಯಾಗಿದ್ದೇನೆ.)

Friday, September 7, 2012

ಬೇಂದ್ರೆ-ಕುವೆಂಪು....ದೃಷ್ಟಿ-ಸೃಷ್ಟಿ


ಬೇಂದ್ರೆ ಹಾಗು ಕುವೆಂಪು ಇವರೀರ್ವರು ನವೋದಯ ಕಾಲದ ಹೆಸರಾಂತ ಕನ್ನಡ ಕವಿಗಳು. ಇವರೀರ್ವರ ಕಾವ್ಯಗಳಲ್ಲಿ ಉತ್ತರ ಧ್ರುವ ಹಾಗು ದಕ್ಷಿಣ ಧ್ರುವಗಳಿಗಿರುವ ಭಿನ್ನತೆಯನ್ನು ಕಾಣಬಹುದು. ಈ ಭಿನ್ನತೆಗಳ ಸ್ವರೂಪ ಎಂತಹದು, ಇದರ ಹಿಂದಿರುವ ಮನೋವೈಜ್ಞಾನಿಕ ಕಾರಣಗಳೇನು ಎನ್ನುವುದನ್ನು ಅರಿತುಕೊಳ್ಳುವ ಒಂದು ಪ್ರಯತ್ನವು ಇಲ್ಲಿದೆ. ಆ ಪ್ರಯತ್ನದ ಮೊದಲ ಹೆಜ್ಜೆಯಾಗಿ, ಈ ಕವಿಗಳ ಕೆಲವು ಕವನಗಳ ಅಧ್ಯಯನವನ್ನು ಮಾಡೋಣ.

ನವೋದಯದ ಎಲ್ಲ ಕವಿಗಳಂತೆ ಬೇಂದ್ರೆ ಹಾಗು ಕುವೆಂಪು ಸಹ ಕನ್ನಡ ನಾಡು ಹಾಗು ನುಡಿಗಳ ಮೇಲೆ ಅನೇಕ ಕವನಗಳನ್ನು ರಚಿಸಿದ್ದಾರೆ. ಇವರ ಎರಡು ಕವನಗಳ ಒಂದೊಂದು ನುಡಿಗಳು ಹೀಗಿವೆ :

(೧) ಕುವೆಂಪು ಅವರ ಕವನ:
ನೀ ಮೆಟ್ಟುವ ನೆಲ ಅದೆ ಕರ್ನಾಟಕ,
ನೀನೇರುವ ಮಲೆ ಸಹ್ಯಾದ್ರಿ;
ನೀ ಮುಟ್ಟುವ ಮರ ಶ್ರೀಗಂಧದ ಮರ,
ನೀ ಕುಡಿಯುವ ನೀರ್ ಕಾವೇರಿ!

(೨) ಬೇಂದ್ರೆಯವರ ಕವನ:
ಕನ್ನಡ ನುಡಿದಿತು ಕನ್ನಡ ಹಕ್ಕಿ,
ಕನ್ನಡವೆಂದಿತು ಆ ಗೋದೆ.
ಕಾವೇರಿಯು ತಂಪಾಯಿತು,
ಕನ್ನಡ ಗಾಳಿಯು ಉಸಿರಿತು ಈ ಬೋಧೆ.

ಈ ಎರಡೂ ನುಡಿಗಳ ಆಂತರ್ಯ ಒಂದೇ. ಎರಡೂ ಕವನಗಳು ಕನ್ನಡ ನಾಡು ಹಾಗು ನುಡಿಯ ಪ್ರೇಮದಿಂದ ತುಂಬಿವೆ. ಆದರೆ ಎರಡೂ ಕವನಗಳು ಕೊಡುವ ಸಂದೇಶ ಮಾತ್ರ ಬೇರೆ. ಕುವೆಂಪುರವರ ಕವನದಲ್ಲಿ ರಣೋತ್ಸಾಹವಿದೆ. ಆವೇಶ ಹಾಗು ಆದೇಶ ಈ ಗುಣಗಳು ಅವರ (ಅನೇಕ) ಕವನಗಳ ಲಕ್ಷಣಗಳು. ಓರ್ವ ದಂಡನಾಯಕನಂತೆ ಕುವೆಂಪು ಕನ್ನಡಿಗರಿಗೆ ಆದೇಶ ನೀಡುತ್ತಾರೆ. ಈ ಆದೇಶವನ್ನು ಕೇಳುತ್ತಿದ್ದಂತೆ, ಕನ್ನಡಿಗರಲ್ಲಿ ಹುರುಪು ತುಂಬುವುದು.

ಬೇಂದ್ರೆಯವರ ಕವನವು ಅನೇಕ ಶ್ಲೇಷಾರ್ಥಗಳನ್ನು ಒಳಗೊಂಡಿದೆ. ಐತಿಹಾಸಿಕವಾಗಿ ಕನ್ನಡ ನಾಡು ಗೋದಾವರಿಯಿಂದ ಕಾವೇರಿಯವರೆಗೆ ವ್ಯಾಪಿಸಿತ್ತು. (ಗೋದಾವರಿಯ ದಂಡೆಯ ಮೇಲೆ, ಈಗಿನ ಮಹಾರಾಷ್ಟ್ರದಲ್ಲಿ ‘ಕನ್ನಡ’ ಎನ್ನುವ ಹಳ್ಳಿಯೊಂದಿದೆ. ಆ ಹಳ್ಳಿಯ ಜನರೆಲ್ಲ ಕನ್ನಡ ಭಾಷೆಯನ್ನೇ ಮಾತನಾಡುತ್ತಾರೆ. ಅದರಂತೆ ಮಧ್ಯಪ್ರದೇಶದಲ್ಲಿಯೂ ಸಹ ಕನ್ನಡ ಎನ್ನುವ ಕೆಲವು ಹಳ್ಳಿಗಳಿವೆ.) ಐತಿಹಾಸಿಕ ಕಾಲದಲ್ಲಿ ಈ ಎಲ್ಲ ಪ್ರದೇಶದಲ್ಲಿ ಕನ್ನಡ ಸಂಸ್ಕೃತಿಯು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈಗ ಭೌಗೋಲಿಕವಾಗಿ ಹಾಗು ಸಾಂಸ್ಕೃತಿಕವಾಗಿ ಕನ್ನಡ ನಾಡು ಕುಗ್ಗಿ ಹೋಗಿದೆ. ಈಗಲೂ ಸಹ ನೆರೆಯ ಭಾಷಿಕರಿಂದ ಕರ್ನಾಟಕದ ಮೇಲೆ ಆಕ್ರಮಣ ನಡದೇ ಇದೆ. (‘ಮರಾಠಿಗರ ಘೋಷಣೆಯಾದ ‘ಬೆಳಗಾಂವ, ಕಾರವಾರ ಸಂಯುಕ್ತ ಮಹಾರಾಷ್ಟ್ರ ಝಾಲಾಚ ಪಾಹಿಜೆ’ ಎನ್ನುವ ವಾಕ್ಯದಲ್ಲಿಯ ‘ಝಾಲಾಚ ಪಾಹಿಜೆ’ಯನ್ನು ಬೇಂದ್ರೆಯವರು ‘ಆಗೋದೆ’ ಎನ್ನುವ ಶ್ಲೇಷೆಯ ಮೂಲಕ ವ್ಯತಿರಿಕ್ತ ಅರ್ಥದಲ್ಲಿ ಬಳಸಿದ್ದಾರೆ.)

ಇಂತಹ ಸಂದರ್ಭದಲ್ಲಿ ಕನ್ನಡಿಗರ ಕರ್ತವ್ಯವೇನು?
ಕುವೆಂಪು ಹೋರಾಟದ ಸಂದೇಶವನ್ನು ನೀಡಿದರೆ, ಬೇಂದ್ರೆಯವರು ತಾಳ್ಮೆಯ ಉಪದೇಶವನ್ನು ನೀಡುತ್ತಾರೆ. ‘ಕಾವೇರಿಯು ತಂಪಾಯಿತು’ ಎಂದರೆ ಕನ್ನಡಿಗರಲ್ಲಿ ‘ಕಾವು+ಏರಿಯೂ’ ಸಹ, ತಂಪಾಯಿತು ಎನ್ನುವ ಶ್ಲೇಷೆ ಇಲ್ಲಿದೆ.
ಈ ಸ್ವಭಾವಭಿನ್ನತೆ ಬೇಂದ್ರೆ ಹಾಗು ಕುವೆಂಪು ಇವರ  ಕವನಗಳ ಭಿನ್ನತೆಗೆ ಕಾರಣವಾಗಿದೆ.

ನಾಡಪ್ರೇಮವಲ್ಲದೆ,ಸಾಮಾಜಿಕ ಅಸಮತೆ ಹಾಗು ಬಡ ನಾಡಿಗರ ಕಷ್ಟಕಾರ್ಪಣ್ಯದ ಬಗೆಗೆಯೂ  ಕುವೆಂಪು ಹಾಗು ಬೇಂದ್ರೆಯವರು ಅನೇಕ ಕವನಗಳನ್ನು ಬರೆದಿದ್ದಾರೆ. ಅವರ ಎರಡು ಕವನಗಳ ಕೆಲವು ಸಾಲುಗಳನ್ನು ಪರಿಶೀಲಿಸೋಣ:

ಕುವೆಂಪು:
ಬಡಬಗ್ಗರ ಜಠರಾಗ್ನಿಯು ಎದ್ದು
ಗುಡಿಸಿಲುಗಳಿಗೆ ಬೆಂಕಿಯು ಬಿದ್ದು
ಧಗಧಗಧಗಧಗ ಹೊತ್ತಿದುದು
ಭುಗಿಭುಗಿಲೆನ್ನುತ ಮುತ್ತಿದುದು!

ಮುಗಿಲಿನವರೆಗೂ ಬಾನಿನವರೆಗೂ
ದಿಕ್ಕುದಿಕ್ಕುಗಳ ಜುಟ್ಟಿನವರೆಗೂ
ಬಡವರ ಬೆಂಕಿಯ ನಾಲಗೆ ಚಾಚಿ
ಶ್ರೀಮಂತರನಪ್ಪಿತು ಬಾಚಿ!

ಬೇಂದ್ರೆ:
ಕಿಕ್ಕಿರಿ ತುಂಬಿದೆ ಭೂಮಿಯ ಕಣಜ
ಕಕ್ಕಸಬಡುತಿದೆ ಬೊಕ್ಕಸದೊಡಲು
ಬಾಳಿಗಿಂತಲೂ ಕೂಳೇ ಮೇಲೊ?
ಬರಿದೊ ಬರಿದು, ತೆರವೊ ತೆರವು
ಬಡವರ ಬಗ್ಗರ ತುತ್ತಿನ ಚೀಲ!

ಕುವೆಂಪು ಅವರ ಕವನದಲ್ಲಿ ಆವೇಶವಿದೆ,ಆಕ್ರೋಶವಿದೆ. ಬಡವರ ಒಡಲ ಬೇಗೆಯು ಸಿರಿವಂತರನ್ನು ಸುಟ್ಟು ಹಾಕುವುದು ಎನ್ನುವ ಎಚ್ಚರಿಕೆಯ ಘೋಷಣೆ ಇದೆ. ಬೇಂದ್ರೆಯವರ ಕವನದಲ್ಲಿ ವಾಸ್ತವತೆಯ ಭೀಕರ ಚಿತ್ರಣವಿದೆ.
ಬೇಂದ್ರೆಯವರು ಈ ಕವನವನ್ನು (ತುತ್ತಿನ ಚೀಲ’) ಬರೆದ ಕಾಲದಲ್ಲಿ ಎರಡನೆಯ ಜಾಗತಿಕ ಮಹಾಯುದ್ಧ ನಡೆದಿತ್ತು. ಬ್ರಿಟಿಶ್ ಸರಕಾರವು ಭಾರತದಲ್ಲಿ ಬೆಳೆದ ಆಹಾರಧಾನ್ಯವನ್ನು ತನ್ನ ಸೈನಿಕರಿಗಾಗಿ ಹಾಗು ಬ್ರಿಟಿಶರಿಗಾಗಿ ಇಲ್ಲಿಂದ ನಿರ್ಯಾತ ಮಾಡುತ್ತಿತ್ತು. ಬಂಗಾಲದಲ್ಲಿಯ ರೈತರು ತಾವು ಬೆಳೆದ ಅಕ್ಕಿಯನ್ನು ತಾವೇ ಕೊಳ್ಳಲಾರದಂತಹ ಕೃತಕ ಬರ ನಿರ್ಮಾಣವಾಗಿತ್ತು. ಬಂಗಾಲದಲ್ಲಿ ಎಲ್ಲೆಂದರಲ್ಲಿ ಹಸಿವಿನಿಂದ ಸತ್ತವರ ಶವಗಳು ಬಿದ್ದಿದ್ದು, ಆ ಕಳೇವರಗಳನ್ನು ಪರದೇಶದ ವೈದ್ಯಕೀಯ ವಿದ್ಯಾಲಯಗಳಿಗಳಿಗೆ ಕಳ್ಳತನದಿಂದ ಕಳುಹಿಸುವ ಜಾಲವೇ ಹುಟ್ಟಿಕೊಂಡಿತ್ತು. ಬ್ರಿಟಿಶ್ ಪಾರ್ಲಿಮೆಂಟಿನಲ್ಲಿ ವಿರೋಧ ಪಕ್ಷಗಳು, ಈ ವಿಷಯಕ್ಕೆ ಸಂಬಂಧಿಸಿದಂತೆ ಬ್ರಿಟಿಶ್ ಸರಕಾರವನ್ನು ಕಟುವಾಗಿ ಟೀಕಿಸಿದ್ದಕ್ಕೆ ದಾಖಲೆಗಳಿವೆ.

ಬೇಂದ್ರೆಯವರ ಕವನದ ಈ ನುಡಿಯ ಪ್ರತಿ ಸಾಲನ್ನು ವಿಶ್ಲೇಷಿಸಿರಿ:
ಕಿಕ್ಕಿರಿ ತುಂಬಿದೆ ಭೂಮಿಯ ಕಣಜ’ ಇದು ಮೊದಲನೆಯ ಸಾಲು. ಭೂಮಿಯ ಮೇಲೆ ಆಹಾರಧಾನ್ಯದ ಕೊರತೆ ವಾಸ್ತವದಲ್ಲಿ ಇಲ್ಲವೇ ಇಲ್ಲ. ಒಂದು ವೇಳೆ ಭಾರತದ ಯಾವುದೇ ಭಾಗದಲ್ಲಿ ಆಹಾರದ ಕೊರತೆಯಾದರೂ ಸಹ, ಬೇರೆಡೆಯಿಂದ ಧಾನ್ಯವನ್ನು ಕೊಂಡು ತಂದು ಬಡವರಿಗೆ ಹಂಚಲು ಸರಕಾರಕ್ಕೆ ಅಸಾಧ್ಯವಲ್ಲ; ಏಕೆಂದರೆ ಭಾರತದಲ್ಲಿಯ ಬ್ರಿಟಿಶ್ ಸರಕಾರದ ಬೊಕ್ಕಸವು ವಾಂತಿಯಾಗುವಷ್ಟು ತುಂಬಿ ತುಳುಕುತ್ತಿದೆ: ‘ಕಕ್ಕಸಬಡುತಿದೆ ಬೊಕ್ಕಸದೊಡಲು’! ಮೂರನೆಯ ಸಾಲಿನಲ್ಲಿ (‘ಬಾಳಿಗಿಂತಲೂ ಕೂಳೇ ಮೇಲೊ?’) ಹಸಿವನ್ನು ಪರಿಹರಿಸಿಕೊಳ್ಳಲು ಬಂಗಾಲದ ಬಡ ಜನ ಕಳ್ಳತನ, ಮೋಸಗಾರಿಕೆಯಂತಹ ಹೀನಕೃತ್ಯಗಳಿಗೆ ಹಾಗು ಒಂದು ತುಂಡು ರೊಟ್ಟಿಗಾಗಿ, ಹೆಂಗಸರು ಮೈಯನ್ನು ಮಾರಿಕೊಳ್ಳುವಂತಹ ಅನಿವಾರ್ಯತೆಗೆ ಮೊರೆ ಹೊಕ್ಕಿರುವದರ ಸೂಚನೆ ಇದೆ.
ಇಷ್ಟಾದರೂ ಸಹ ಆ ನರಕಜೀವಿಗಳ ಹೊಟ್ಟೆ ತುಂಬಿತೆ? ...ಇಲ್ಲ!
ಬರಿದೋ ಬರಿದು, ತೆರವೋ ತೆರವು
ಬಡವರ ಬಗ್ಗರ ತುತ್ತಿನ ಚೀಲ.

ಬೇಂದ್ರೆಯವರ ‘ಕರಡಿ ಕುಣಿತ’ ಎನ್ನುವ ಕವನದಲ್ಲಿ ಸಾವಿರಾರು ವರ್ಷಗಳಿಂದ ಪಟ್ಟಭದ್ರರು ಅಮಾಯಕ-ಅಸಹಾಯಕರ ಮೇಲೆ ನಡೆಯಿಸುತ್ತಿರುವ ದೌರ್ಜನ್ಯದ ಚಿತ್ರವಿದೆ. (ಆ ಕವನದ ವಿಶ್ಲೇಷಣೆಯನ್ನು ಇಲ್ಲಿ ನೋಡಿರಿ.) ಆದರೆ ಆ ಕವನದ ಅತ್ಯಂತ ಸರಳ ಭಾಷೆಯಿಂದಾಗಿ, ಆ ಕವನವನ್ನು ‘ಬಾಲಗೀತೆ’ಗಳಲ್ಲಿ ಸೇರಿಸಲಾಗಿದೆ! ಸರಳ ಕನ್ನಡವೇ ಬೇಂದ್ರೆಯವರ ಕಾವ್ಯದ ಒಂದು ದೋಷವೇನೊ ಎನ್ನುವಂತಾಗಿದೆ.

ಬೇಂದ್ರೆ ಹಾಗು ಕುವೆಂಪು ಭಾರತದ ಸ್ವಾತಂತ್ರ್ಯಹೋರಾಟದ ಬಗೆಗೂ ಕವನಗಳನ್ನು ರಚಿಸಿದ್ದಾರೆ. ಈ ಹೋರಾಟಕ್ಕೆಂದು ಕುವೆಂಪು ನೇರವಾದ, ಉತ್ಸಾಹಪೂರ್ಣ ಕರೆಯನ್ನೇ  ನೀಡಿದ್ದಾರೆ:
ನಾನಳಿವೆ, ನೀನಳಿವೆ
ನಮ್ಮೆಲುವುಗಳ ಮೇಲೆ
ಮೂಡುವುದು, ಮೂಡುವುದು
ಭಾರತದ ಲೀಲೆ, ನವಭಾರತದ ಲೀಲೆ.

ಈ ನುಡಿಗಳಲ್ಲಿ marching songವೀರಾವೇಶವಿದೆ, ಬಲಿದಾನ ಮಾಡಲು ಆಹ್ವಾನವಿದೆ.
ಬೇಂದ್ರೆಯವರಿಗೆ ಇಂತಹ ಕವನವನ್ನು ರಚಿಸಲು ಸಾಧ್ಯವೇ ಇಲ್ಲ! ಭಾರತಮಾತೆಯು ಕಣ್ಣೀರು ಸುರಿಸುವ ಕಲ್ಪನೆಯ ಕವನವನ್ನು ಮಾತ್ರ ಅವರು  ಸೃಷ್ಟಿಸಬಲ್ಲರು :
ಮಕ್ಕಳಿವರೇನಮ್ಮ? ಮಕ್ಕಳಿವರೇನಮ್ಮ?
       ಮೂವತ್ತುಮೂರು ಕೋಟಿ!
            ನಾ ಹಡೆದ
ಮೂವತ್ತುಮೂರು ಕೋಟಿ.

ಬೇಂದ್ರೆ ಹಾಗು ಕುವೆಂಪು ಅವರ ಸ್ವಭಾವಭಿನ್ನತೆಯ ಒಂದು ಮಗ್ಗಲನ್ನು ನೋಡಿದೆವು. ಇದು ಅವರ ಪ್ರಕೃತಿಗೀತೆಗಳಲ್ಲೂ ಸಹ ಬಿಂಬಿತವಾಗಿದೆ.
ಉದಾಹರಣೆಗೆಂದು ಈ ಕವನಗಳನ್ನು ನೋಡಿರಿ:
ಕುವೆಂಪು:
ಓಡು ಹೊರಗೆ, ಓಡು ನೋಡು:
ಮೂಡುತಿಹನು ದಿನಮಣಿ!
ಹಚ್ಚನೆ ಹಸರು ಬಯಲ ಮೇಲೆ
ಮಿರುಗುತಿಹವು ದಿನಮಣಿ!

ಅದರಂತೆ,
ನೋಡಲ್ಲಿ ಮೂಡಿಹುದು ಮುಗಿಲಿನಲಿ ಮಳೆಬಿಲ್ಲು
ಬಾನ್ದೇವಿಯಾಂತ ಮಣಿಹಾರದಂತೆ
ಮೂಕವಿಸ್ಮಿತನಾಗಿ ನಿಲ್ಲು, ಗೆಳೆಯನೆ ನಿಲ್ಲು
ಗುಡಿಯೆದುರು ಕೈಮುಗಿವ ಭಕ್ತನಂತೆ!-

ಅಥವಾ,
ವಾವೇಶದಿ ನೋಡುತ ನಿಂತೆ,
ಹೃದಯದೊಳುರಿಯಿತು ರಸಮಯ ಚಿಂತೆ,
‘ಉರಿ-ಕಿಡಿ’ದೆನು ಹಿಮಮಣಿಯಂತೆ!
(-ಶರತ್ಕಾಲದ ಸೂರ್ಯೋದಯದಲಿ)

ಕುವೆಂಪು ಅವರ ಮೂರು ವಿಭಿನ್ನ ಕವನಗಳ ಮೂರು ನುಡಿಗಳಿವು. ಮೊದಲೆರಡು ಕವನಗಳಲ್ಲಿ ಜ್ಞಾನಿಯಾದ ಕವಿಯು high pedestal ಮೇಲೆ ನಿಂತುಕೊಂಡು ಅಜ್ಞಾನಿಗಳಿಗೆ ತಿಳಿವಳಿಕೆಯನ್ನು ಹಾಗು ಆದೇಶವನ್ನು ನೀಡುತ್ತಿದ್ದಾನೆ. ಮೂರನೆಯ ಕವನದಲ್ಲಿ ಕವಿಯ ಸ್ವಕೇಂದ್ರಿತ, ಸ್ವಕಲ್ಪಿತ ದೊಡ್ಡಸ್ತನದ ಭ್ರಮೆಯಿದೆ.

ಬೇಂದ್ರೆಯವರ ಪ್ರಕೃತಿಕವನಗಳಲ್ಲಿ ಬೆರಗನ್ನು ಇತರರೊಡನೆ ಹಂಚಿಕೊಳ್ಳುವ ಸಾಲುಗಳು ಬರಬಹುದೇ ಹೊರತು, ಆದೇಶ-ಸಂದೇಶಗಳಲ್ಲ. ಅವರ ಪ್ರಸಿದ್ಧ ಕವನದಲ್ಲಿ (‘ಬೆಳಗು’) ಬರುವ ‘ಇದು ಬರಿ ಬೆಳಗಲ್ಲೊ ಅಣ್ಣಾ!’ ಎನ್ನುವ ಸಾಲನ್ನು ಇದಕ್ಕೆ ಉದಾಹರಣೆಯನ್ನಾಗಿ ನೋಡಬಹುದು. ಇನ್ನು ಕೆಲವು ಕವನಗಳಲ್ಲಂತೂ ನಿಸರ್ಗವಷ್ಟೇ ಇರುತ್ತದೆಯೇ ಹೊರತು, ಕವಿಯೂ ಸಹ ಅಲ್ಲಿರುವದಿಲ್ಲ. ಉದಾಹರಣೆಗಾಗಿ ‘ವಸಂತಮುಖ’ ಈ ಕವನವನ್ನು ನೋಡಿರಿ:
ಉದಿತ ದಿನ, ಮುದಿತ ವನ
ಸಾವಿರ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ!

ಬೆಳಗಿನ ಸಮಯದಲ್ಲಿ ಬೇಂದ್ರೆಯವರ ಕಣ್ಣಿಗೆ ಕಾಣುವುದು ಉಲ್ಲಾಸದಲ್ಲಿರುವ ನಿಸರ್ಗ ಹಾಗು ಅಲ್ಲಿಯ ಅನೇಕ ಜೀವಿಗಳ ಕಲರವ. ಅವರ ಹೃದಯದಲ್ಲಿ ಯಾವ ‘ರಸಮಯ ಚಿಂತೆ(!?)’ಯೂ ಉರಿಯುವದಿಲ್ಲ! ‘ವಸಂತಮುಖ’ ಕವನವು ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದ್ದು, ಆ ಕವನದ ವ್ಯಾಖ್ಯಾನವನ್ನು ಇಲ್ಲಿ ನೋಡಿರಿ.

ಇನ್ನು ಸಾಮಾನ್ಯ ಓದುಗನಿಗೆ ವೀರಾವೇಶದ ಘೋಷಣೆಯೇ ಹೆಚ್ಚು ಹಿಡಿಸುತ್ತದೆ. Authority figure ನೀಡುವ ಆದೇಶವು ಅವನ ಮನವನ್ನುಆವರಿಸಿ ಬಿಡುತ್ತದೆ. ಕುವೆಂಪುರವರ ಕಾವ್ಯದಲ್ಲಿ ಇರುವ ಇಂತಹ ಗುಣಗಳು ಬೇಂದ್ರೆಯವರ ಕಾವ್ಯದಲ್ಲಿ ಇಲ್ಲ. ಅಲ್ಲದೆ, ಕುವೆಂಪು ಸೃಷ್ಟಿಸುವ ಕೆಲವು ಪದಪುಂಜಗಳು ಸಹ ಓದುಗನನ್ನು ವಿಭ್ರಾಂತಗೊಳಿಸುವ ಶಕ್ತಿಯನ್ನು ಪಡೆದಿವೆ.
ಉದಾಹರಣೆಗೆ:
(೧) ಮೂಕವಿಸ್ಮಿತನಾಗಿ ನಿಲ್ಲು
(೨) ಓ ಕರ್ನಾಟಕ ಹೃದಯ ಶಿವ
(೩) ಇದು ಪಕ್ಷಿಕಾಶಿ
(೪) ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು
ಇಂತಹ ಸಂಭ್ರಾಮಕ ಪದಸೃಷ್ಟಿ ಬೇಂದ್ರೆಯವರ ಪದಗಳಲ್ಲಿ ಕಂಡುಬರುವದಿಲ್ಲ..
ಇದು ಅವರ ಸ್ವಭಾವಭಿನ್ನತೆಯ ಪರಿಣಾಮದ ಮತ್ತೊಂದು ಉದಾಹರಣೆಯಾಗಿದೆ.

ಕುವೆಂಪು ಹಾಗು ಬೇಂದ್ರೆ ಈರ್ವರೂ ನಿಸರ್ಗದ ಚೆಲುವನ್ನು ಅನುಭವಿಸಿ, ಆನಂದಿಸಿದ ಕವನಗಳನ್ನು ನೋಡಿದೆವು. ಇಷ್ಟೇ ಅಲ್ಲ, ಈ ಇಬ್ಬರೂ ಕವಿಗಳು ಪ್ರಕೃತಿಯಲ್ಲಿ ಪರಮಾತ್ಮನನ್ನು ಕಂಡವರು. ಇದರ ಉದಾಹರಣೆಯಾಗಿ, ಮೊದಲಿಗೆ ಕುವೆಂಪು ಅವರ ಕವನವೊಂದರ ಒಂದು ನುಡಿಯನ್ನು ಗಮನಿಸೋಣ:
ಬಿಸಿಲಿದು ಬರಿ ಬಿಸಿಲಲ್ಲವೊ
ಸೂರ್ಯನ ಕೃಪೆ ಕಾಣೊ
ಸೂರ್ಯನು ಬರಿ ರವಿಯಲ್ಲವೊ
ಆ ಭ್ರಾಂತಿಯ ಮಾಣೊ.

ಪ್ರಕೃತಿಯಲ್ಲಿ ಪರಮಾತ್ಮನನ್ನು ಕಾಣುವ ಕವನವಿದು.
ಆದರೆ ಈ ಸಾಲುಗಳಲ್ಲೂ ಸಹ ನಾವು ಆದೇಶದ ಧೋರಣೆಯನ್ನೇ ಕಾಣುತ್ತೇವೆ. (ಅಲ್ಲದೆ ‘ಸೂರ್ಯನು ಬರಿ ರವಿಯಲ್ಲವೊ’ ಎನ್ನುವ ಸಾಲಿನ ಅರ್ಥವೂ ಆಗುವುದಿಲ್ಲ!)
ಅಥವಾ ಈ ನುಡಿಯನ್ನು ನೋಡಿರಿ:
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು
ರಸವಶನಾಗುತ ಕವಿ ಅದ ನೋಡಿದನು!

ಈ ನುಡಿಯ ಮೊದಲಲ್ಲಿ ಬರುವ ಕಲ್ಪನೆಯು ಅದ್ಭುತವಾಗಿದ್ದರೂ, ಕೊನೆಯಲ್ಲಿ ಬರುವ ಹೆಗ್ಗಳಿಕೆಯು ‘ಕವಿಯಾಗಿ ತಾನು ಎಷ್ಟು ಹೆಚ್ಚಿನವನು!’ ಎನ್ನುವ ಅಹಂಭಾವವನ್ನು ತೋರುತ್ತದೆ. ಇದು ಸರಿಯಲ್ಲ. ಏಕೆಂದರೆ ಕವಿಯಷ್ಟೇ ಅಲ್ಲ, ಸಾಮಾನ್ಯ ವ್ಯಕ್ತಿಯೂ ಸಹ ಇಂತಹ ದೃಶ್ಯವನ್ನು ರಸವಶನಾಗುತ್ತ ನೋಡುತ್ತಾನೆ. ಕವಿಯ ಹೆಚ್ಚುಗಾರಿಕೆ ಇರುವುದು ಅವನ ಕಲಾಪೂರ್ಣ ಅಭಿವ್ಯಕ್ತಿಸಾಮರ್ಥ್ಯದಲ್ಲಿ!

ಮತ್ತೊಬ್ಬರಿಗೆ ಆದೇಶ ನೀಡುವುದು ಬೇಂದ್ರೆಯವರಿಗೆ ಸಾಧ್ಯವಿಲ್ಲ. ಸ್ವಂತದ ಹೆಗ್ಗಳಿಕೆಯೂ ಅವರಿಗೆ ಸಾಧ್ಯವಿಲ್ಲ.
ರಸಿಕ ಓದುಗನಲ್ಲಿಯೂ ಸಹ ಅವರು ಪ್ರಾರ್ಥಿಸುವುದು ಇಷ್ಟೇ:
ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.

ಕುವೆಂಪುರವರಂತೆ ಬೇಂದ್ರೆಯವರೂ ಸಹ ನಿಸರ್ಗದ ಜಡವಸ್ತುಗಳಲ್ಲಿ ಭಗವತ್‍ಚೈತನ್ಯವನ್ನು ಕಾಣುತ್ತಾರೆ. ಆದರೆ ಕುವೆಂಪುವಿನಂತೆ ವಸ್ತುವಿನ ಹೊರಗೆ ನಿಂತು ನೋಡದೆ, ಬೇಂದ್ರೆ ಆ ಪರಾವಸ್ತುವಿನಲ್ಲಿಯೇ ಪರವಶರಾಗುತ್ತಾರೆ. ಅಂತಹ ಒಂದು ಕವನದ (‘ಶ್ರಾವಣ’) ನುಡಿಯೊಂದು ಹೀಗಿದೆ:

ಗುಡ್ಡ ಗುಡ್ಡ ಸ್ಥಾವರಲಿಂಗ
ಅವಕ ಅಭ್ಯಂಗ
ಎರಿತಾವನ್ನೊ ಹಾಂಗ
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ |

ಅಥವಾ ಈ ಕವನದ (‘ದವನದ ಹುಣ್ಣಿವೆಯ ಜಾತ್ರಿಯ ರಾತ್ರಿ’) ನುಡಿಯೊಂದನ್ನು ನೋಡಬಹುದು:
ಆಕಾಶ ಅನಸತದ ಗುಡಿಯ ಹಾಂಗ
ಪ್ರಕಾಶ ಮಹಾಲಿಂಗ, ನೆಲ ಅಗಲ ಪೀಠಧ್ಹಾಂಗ.

ಕುವೆಂಪು ಅವರ ಕವನಗಳಲ್ಲಿ ಭಾವಸ್ಫೋಟವಿದ್ದರೆ, ಬೇಂದ್ರೆಯವರ ಕವನಗಳಲ್ಲಿ ಅರ್ಥಸ್ಫೋಟವಿದೆ.
ಸ್ವಭಾವದ ಭಿನ್ನತೆಯೇ ಕಾವ್ಯದ ಭಿನ್ನತೆಗೆ ಕಾರಣ ಎನ್ನುವುದನ್ನು ಹೇಳಬೇಕಾಗಿಲ್ಲ. ಬೇಂದ್ರೆ ಹಾಗು ಕುವೆಂಪು ಬೆಳೆದ ಪರಿಸರವನ್ನು ಗಮನಿಸಿದಾಗ ಇವರ ಸ್ವಭಾವದ ಭಿನ್ನತೆಯ ಕಾರಣವೂ ಅರ್ಥವಾಗುವುದು.

ಕುವೆಂಪು ತಮ್ಮ ಬಾಲ್ಯದಲ್ಲಿ ಹಳ್ಳಿಯಲ್ಲಿ ಬೆಳೆದವರು. ಅವರ ಮನೆತನಕ್ಕೆ ಜಮೀನು, ದರ್ಪ ಹಾಗು ಹಣವಂತಿಕೆ ಎಲ್ಲವೂ ಇದ್ದವು. ಹಳ್ಳಿಗಳಲ್ಲಿ ಸಾಮಾನ್ಯವಾದ ಮೌಢ್ಯವನ್ನು ಹಾಗು ಮೂಢನಂಬಿಕೆಗಳ ಮೇಲೆ ಆಧಾರಿತವಾದ ಬದುಕನ್ನು ಕಂಡ  ಕುವೆಂಪು, ಹೆಚ್ಚಿನ ಶಿಕ್ಷಣಕ್ಕಾಗಿ ಪಟ್ಟಣಕ್ಕೆ ತೆರಳಿದ ಬಳಿಕ ಅಲ್ಲಿಯ ಸುಧಾರಿತ ಜೀವನಮಟ್ಟವನ್ನು ಹಾಗು ನಯ ನಾಗರಿಕತೆಯನ್ನು ನೋಡಿದರು. ಹಳ್ಳಿಗರ ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿ ಸುಧಾರಿಸಬೇಕಾದರೆ, ಅವರಲ್ಲಿಯ ಮೌಢ್ಯ ತೊಲಗಬೇಕು, ಅವರಲ್ಲಿ ವೈಚಾರಿಕ ಕ್ರಾಂತಿ ಆಗಬೇಕು ಎನ್ನುವುದನ್ನು ಕುವೆಂಪು ಅನುಭವಿಸಿದರು. ಹೀಗಾಗಿ ಅವರ ಕವನಗಳಲ್ಲಿ ಕ್ರಾಂತಿಗೆ ಕರೆ ಇದೆ, ಆಹ್ವಾನವಿದೆ, ಆದೇಶವಿದೆ. ಸಮಾಜವನ್ನು ಅಜ್ಞಾನದಿಂದ ಮುಕ್ತಗೊಳಿಸಬೇಕೆನ್ನುವ ಹಂಬಲ ಹಾಗು ಕಳಕಳಿ ಅವರಲ್ಲಿದೆ. ಅಲ್ಲದೆ ನಗರವಾಸಿಗಳಿಗಿಂತ ತಾನೇನು ಕಡಿಮೆಯಲ್ಲ ಎನ್ನುವದನ್ನು ತೋರಿಸಬೇಕಾದರೆ ಅಹಂಭಾವದ ವರ್ತನೆ ಅನಿವಾರ್ಯವಾದ ಪ್ರತಿಕ್ರಿಯೆ ಆಗುತ್ತದೆ. ಇದು mega maniaಕ್ಕೆ ಹತ್ತಿರವಾದ ಭಾವ. ಹೀಗಾಗಿ ಅವರ ಕವನಗಳಲ್ಲಿ ಸ್ವಕೇಂದ್ರಿತ ನಾಯಕನ ಮನೋಭಾವವನ್ನು ಕಾಣುತ್ತೇವೆ.

ಸಂಸ್ಕೃತಭೂಯಿಷ್ಠ ಕನ್ನಡವು ನಾಗರಿಕ ಭಾಷೆಯಾಗಿದ್ದನ್ನು ಕಂಡ ಕುವೆಂಪು, ತಮ್ಮ ಕವನಗಳಲ್ಲಿ ಅತ್ಯಧಿಕ ಸಂಸ್ಕೃತವನ್ನು ಬಳಸಿದ್ದಾರೆ. ಗಾವಿಲ ಜನತೆ ನಾಗರಿಕ ಸಂಸ್ಕೃತಿಯ ಮಟ್ಟವನ್ನು ತಲುಪಲಿ ಎನ್ನುವ ಅವರ ಹಂಬಲದ ಪ್ರತೀಕವೆಂದು ಇದನ್ನು ಭಾವಿಸಬಹುದು. ಅಲ್ಲದೆ, ಒಂದು ಸಂಸ್ಕೃತಿ ಅಥವಾ ನಾಗರಿಕತೆಯನ್ನು ತಿರಸ್ಕರಿಸುವವರು, ಆ ಸಂಸ್ಕೃತಿಯ ಮಾದರಿಯನ್ನು ಅಥವಾ ಅದರ ಬಾಹ್ಯಲಕ್ಷಣಗಳನ್ನು ನಕಲು ಮಾಡುವುದನ್ನು ನಾವು ನೋಡುತ್ತಲೇ ಇದ್ದೇವೆ. (ಇದು Stockholm syndromeಗೆ ಹತ್ತಿರವಾದ ಲಕ್ಷಣಸಮುಚ್ಚಯವಾಗಿದೆ!) ಆದುದರಿಂದ ವೈದಿಕ ಸಂಸ್ಕೃತಿಯನ್ನು ತಿರಸ್ಕರಿಸಿದ ಕುವೆಂಪು, ಅದರ ಹೊರಲಕ್ಷಣವಾದ ಸಂಸ್ಕೃತಭೂಯಿಷ್ಠ ಭಾಷೆಯನ್ನು ತಮ್ಮ ಸಾಹಿತ್ಯದಲ್ಲಿ ಅಳವಡಿಸಿಕೊಂಡರು ಎನ್ನಬಹುದು. ಇನ್ನು ಅವರ ಸ್ವಕೇಂದ್ರಿತ ದೊಡ್ಡಸ್ತನದ ಭ್ರಮೆಗೆ ಕಾರಣವೇನು? ಇದಕ್ಕೆ ಸರಳವಾದ ಉತ್ತರವಿಲ್ಲ. ಆದರೆ ನಾಯಕನಾಗ ಬಯಸುವವನಿಗೆ ತಾನು ತನ್ನ ಸುತ್ತಲಿನವರಿಗಿಂತ ಹೆಚ್ಚಿನವನು ಎನ್ನುವ ( --ಕೆಲವೊಮ್ಮೆ ಭ್ರಮಾತ್ಮಕವಾದ--) self image ಇರುತ್ತದೆ. ಒಂದು ಸಂದರ್ಭದಲ್ಲಿ ಕುವೆಂಪು ‘ತಾನು ವಿವೇಕಾನಂದ’ ಎನ್ನುವ ಭ್ರಮೆಗೆ ಒಳಗಾಗಿದ್ದರು ಎನ್ನುವುದನ್ನು ಇಲ್ಲಿ ನೆನೆಯಬಹುದು.   

ಬಡತನವು ಬೇಂದ್ರೆಯವರ ಆಜನ್ಮ ಸಂಗಾತಿಯಾಗಿತ್ತು. ನರಗುಂದದ ಬಂಡಾಯದ ಕಾಲಕ್ಕೆ, ಇವರ ಅಜ್ಜಿ ಧಾರವಾಡಕ್ಕೆ ಓಡಿ ಬರಬೇಕಾಯಿತು. ಅವರ ೧೭ ಮಕ್ಕಳಲ್ಲಿ ಉಳಿದ ಒಂದೇ ಒಂದು ಸಂತಾನವೆಂದರೆ ಬೇಂದ್ರೆಯವರ ತಾಯಿ ಮಾತ್ರ. ಬೇಂದ್ರೆಯವರ ತಂದೆ ಶಾಲಾಶಿಕ್ಷಕರಾಗಿದ್ದವರು ಬೇಗನೇ ತೀರಿಕೊಂಡರು. ಆಗ ಇವರ ಅಜ್ಜಿಯೇ ಖಾನಾವಳಿಯೊಂದನ್ನು ನಡೆಸುತ್ತ ಇವರನ್ನು ಸಾಕಿದರು. ಆ ಅಜ್ಜಿಯನ್ನು ಬೇಂದ್ರೆ ನೆನೆಸುವುದು ಹೀಗೆ:
ಹದಿನೇಳು ಹಡೆದರು ಹೆಣ್ಣೊಂದೆ ಉಳಿದರು
ಜಗ್ಗದ ಕುಗ್ಗದ ಎದೆಯವಳು
ಹುಲಿ ಹಾಲ ಕುಡಿಸಿದಳು ತಂತಿಯಲಿ ನಡೆಸಿದಳು
ಸೂಜಿಯ ಮೊನೆಯಲ್ಲಿ ನಿಲಿಸಿದಳು.

ತಮ್ಮ ಅಜ್ಜಿಯಿಂದ ಬೇಂದ್ರೆ ಪೌರುಷವನ್ನು ಕಲಿತರೇ ಹೊರತು ದರ್ಪವನ್ನಲ್ಲ. ಧಾರವಾಡದಲ್ಲಿ ಹಾಗು ಪುಣೆಯಲ್ಲಿ ಆ ಸಮಯದಲ್ಲಿ ರಾಷ್ಟ್ರೀಯ ಚಳುವಳಿಯ ಗಾಳಿ ಬೀಸುತ್ತಿತ್ತು. ಸಾಮುದಾಯಕ ಚಟುವಟಿಕೆಗಳಲ್ಲಿ ಸದಾ ಭಾಗಿಯಾಗುತ್ತಿದ್ದ ಬೇಂದ್ರೆಯವರಿಗೆ ಮಾತುಗಾರಿಕೆ ಅನಿವಾರ್ಯವಾಗಿತ್ತು.ಈ ಕಾರಣಕ್ಕಾಗಿ ಬೇಂದ್ರೆಯವರು ವಾಚಾಳಿಯಾಗಿರಬಹುದು. ಇದು ಅವರ ಕವನಗಳಲ್ಲಿ ಕಾಣುವ ಅಪರಿಮಿತ ಕಲ್ಪನೆ ಹಾಗು ವಾಗ್ಜಾಲಕ್ಕೆ ಮೂಲವಾಗಿರಬಹುದು. ಈ ಗುಣಗಳು ಅವರ ಕವನಗಳಲ್ಲಿ ಸುವ್ಯಕ್ತವಾಗಿವೆ. ಆದರೆ ಈ ಗುಣಗಳಿಂದಾಗಿಯೇ ಬೇಂದ್ರೆಯವರ ಅನೇಕ ಕವನಗಳಲ್ಲಿ focus ತಪ್ಪಿಹೋಗಿರುತ್ತದೆ. ಇದು ಅವರ ದೌರ್ಬಲ್ಯ ಎನ್ನಬಹುದು.

ಬೇಂದ್ರೆ ಹಾಗು ಕುವೆಂಪು ಅವರು ಬೆಳೆದ ಪರಿಸರವು ಅವರ ಸ್ವಭಾವಭಿನ್ನತೆಗೆ ಹಾಗು ಕಾವ್ಯಭಿನ್ನತೆಗೆ ಈ ರೀತಿಯಾಗಿ ಕಾರಣವಾಗಿದೆ. ಇನ್ನು ಇವರು ಹೆಣ್ಣನ್ನು ನೋಡುತ್ತಿದ್ದ ದೃಷ್ಟಿಗೂ ಸಹ ಅವರ ಬಾಲ್ಯದ ಹಾಗು ತಾರುಣ್ಯದ ವಾತಾವರಣವೇ ಕಾರಣವಾಗಿವೆ. ಬೇಂದ್ರೆಯವರ ಪೋಷಣೆಯಲ್ಲಿ ಅವರ ಅಜ್ಜಿ ಹಾಗು ತಾಯಿ ಮಹತ್ವದ ಪಾತ್ರ ವಹಿಸಿದರು. ಇದರಿಂದಾಗಿ ಬೇಂದ್ರೆಯವರು ‘ಹೆಣ್ಣು’ ಅಂದರೆ ತಾಯಿ ಎನ್ನುವ ದೃಷ್ಟಿಯಿಂದ ನೋಡುತ್ತಾರೆ.
ನಾನು’ ಎನ್ನುವ ಅವರ ಕವನವನ್ನು ಇಲ್ಲಿ ನೋಡಬಹುದು:

ವಿಶ್ವಮಾತೆಯ ಗರ್ಭಕಮಲಜಾತ-ಪರಾಗ-
ಪರಮಾಣು ಕೀರ್ತಿ ನಾನು
ಭೂಮಿತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು
ಭರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು
ಕನ್ನಡದ ತಾಯಿ-ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು
ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು
ಈ ಐದು ಐದೆಯರೆ ಪಂಚಪ್ರಾಣಗಳಾಗಿ
ಈ ಜೀವ ದೇಹನಿಹನು
ಹೃದಯಾರವಿಂದದಲ್ಲಿರುವ ನಾರಾಯಣನೆ
ತಾನಾಗಿ ದತ್ತನರನು
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ
ಅಂಬಿಕಾತನಯನಿವನು.

ಕುವೆಂಪು ಅವರು ರಾಮಕೃಷ್ಣ ಆಶ್ರಮದಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ಆಶ್ರಮದ ಆದರ್ಶಗಳನ್ನು ಅಳವಡಿಸಿಕೊಂಡರು. ನಡುವಯಸ್ಸು ಸಮೀಪಿಸುವವರೆಗೆ ಬ್ರಹ್ಮಚಾರಿಯಾಗಿ ಉಳಿದ ಕುವೆಂಪು ಅವರಿಗೆ ಸಂಗಾತಿಯೊಬ್ಬಳ ಅವಶ್ಯಕತೆ ಭಾಸವಾಗತೊಡಗಿತು. ಆಗ ಅವರು ಮಂಜಪ್ಪಗೌಡರಿಗೆ ಬರೆದ ಪತ್ರದಲ್ಲಿ ಹೀಗೆ ಬರದಿದ್ದಾರೆ :
......Now comes the strange news- I have a mind to choose a bride and live a married life!......

ಮತಾಂತರ ಹೊಂದುವ ವ್ಯಕ್ತಿ ತನ್ನ ಹಳೆಯ ಮತಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ ವರ್ತಿಸುವುದು ಒಂದು ಮನೋವೈಜ್ಞಾನಿಕ ತಥ್ಯವಾಗಿದೆ. ಕುವೆಂಪು ಬ್ರಹ್ಮಚರ್ಯದ ಆದರ್ಶವನ್ನು ತ್ಯಜಿಸಿ, ಗೃಹಸ್ಥಾಶ್ರಮಕ್ಕೆ ಮತಾಂತರಗೊಂಡರು. ಈ ಮತಾಂತರದ ಲಕ್ಷಣಗಳು ಅವರ ಕವನಗಳಲ್ಲಿ ಪ್ರತಿಫಲಿತವಾಗಿವೆ. ಹೀಗಾಗಿ ಅವರ ಅನೇಕ ಕವನಗಳಲ್ಲಿ ದೇಹಸೌಂದರ್ಯ ಹಾಗು ದೇಹಸುಖವೇ ಪ್ರಮುಖವಾಗಿವೆ. ಬ್ರಹ್ಮಚರ್ಯದ ತಿರಸ್ಕಾರವು, ಮೈಯ ಚೆಲುವನ್ನು ಬಣ್ಣಿಸುವುದರಲ್ಲಿ ಹಾಗು ದೇಹಸುಖವನ್ನು ವೈಭವೀಕರಿಸುವದರಲ್ಲಿ ಉಕ್ಕುಕ್ಕಿ ಬರುವುದು ಕುವೆಂಪು ಅವರ ಅನೇಕ ಕವನಗಳ ಲಕ್ಷಣವಾಗಿದೆ. ಅವರ ಅತ್ಯಂತ ಜನಪ್ರಿಯ ಗೀತೆಯೊಂದರ ಸಾಲುಗಳು ಹೀಗಿವೆ:
ನೋಡು ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ, ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ.
‘ಮೂಡುವೆಣ್ಣಿನ ಮೈಸಿರಿ’ ಎನ್ನುವುದು sensuous beautyಯ ಉದಾಹರಣೆಯಾಗುತ್ತದೆ. ಉಷಾದೇವಿಯ ದೈವಿಕ ಚೆಲುವನ್ನು ‘ಮೂಡುವೆಣ್ಣಿನ ಮೈಸಿರಿ’ ಎಂದು ಕರೆಯುವುದು ಸಭ್ಯವೆನಿಸುವುದಿಲ್ಲ..
ಅವರ ಇತರ ಪ್ರೇಮಕವನಗಳಲ್ಲಿಯೂ ಕಾಮವೇ ಮುಖ್ಯವಾಗಿದೆ ಎಂದು ಭಾಸವಾಗುತ್ತದೆ.
ಉದಾಹರಣೆಗಳು:
(೧) ನನ್ನ ಕೈಯೊಳಿರಲು ನಿನ್ನ
ಪ್ರೇಮ ಶಿಖರ ಪದುಮ ಸದೃಶ
ಹೇಮವಕ್ಷದಮೃತ ಕಲಶ,
ನಾನು ಅಜರ! ನಾನು ಅಮರ!
ನಾನು ದಿವ್ಯ ! ನಾನು ಧನ್ಯ !

(೨) ಯೋಗವೇದಿಕೆ ಮಂಚ;
ಭೋಗಾಸನವೆ ಯೋಗಾಸನ;
ಚೆಂದುಟಿಯ ಚುಂಬನವೆ ಧ್ಯಾನಮುದ್ರೆ;
ಹೊಂಗಳಸದಾಲಿಂಗನವೆ ಯೋಗ ನಿದ್ರೆ.

ಈ ಕೆಳಗಿನ ಕವನವಂತೂ ಸ್ವಂತದ ಸಂಭೋಗಶಕ್ತಿಯ ಪರಾಕಾಷ್ಠ ವರ್ಣನೆಯಾಗಿದೆ:
ದಿನವೊಂದರೊಳೆ ನಿನ್ನ ಎದೆಯ ರಸವನು ಹೀರಿ
ಸರ್ವಸ್ವವನು ನಲ್ಲೆ; ಸುಲಿಯಬಲ್ಲೆ!
ಮುತ್ತೊಂದರೊಳೆ ಮೊಗೆದು ಮನದಣಿಯೆ ಸೊದೆಯೀಂಟಿ
ಆನಂದದಮರತೆಯ ಹೊಂದಬಲ್ಲೆ!
...................
ಸಂಯೋಗವೊಂದರೊಳೆ ನಿನ್ನ ನುಣ್ಣನೆ ನೊಣೆದು
ರಸಪೂರ್ಣ ಶೂನ್ಯತೆಗೆ ಕಳುಹಬಲ್ಲೆ!
ಮಲಗಿರುವ ಬಡಬಾಗ್ನಿ ನಾನೆನ್ನ ಕೆಣಕದಿರು
ಗುಟುಕೊಂದರಲಿ ಕಡೆಯ ಕುಡಿಯಬಲ್ಲೆ!

ಮಹಾದೇವನ ಲಿಂಗಶಕ್ತಿಯನ್ನು ಕುವೆಂಪು ಬಣ್ಣಿಸುವುದು ಹೀಗೆ:
ಕ್ಷೀರವಾರ್ಧಿ ಕುಗ್ಗಿತೊ ಎನೆ
ಹಿಗ್ಗಿತಾ ಸರೋವರ,
ಸ್ಪರ್ಧಿಸಿತೆನೆ ಗಿರಿಮಂದರ
ವರ್ಧಿಸಿತ್ತು ಕುಂಜರ!

ಕನ್ನಡದಲ್ಲಿ ಅಸಭ್ಯವಾಗುವ ಈ ಸಾಲುಗಳು ಸಂಸ್ಕೃತದಲ್ಲಿ ಬರೆದದ್ದರಿಂದ  ಸಭ್ಯವಾಗಿವೆಯೆ ಎನ್ನುವ ವಿಮರ್ಶೆಯನ್ನು ನಾನು ಮಾಡುತ್ತಿಲ್ಲ. ಕುವೆಂಪು ಅವರು ಹೀಗೆ ಬರೆಯಲು ಅವರ ‘ಮತಾಂತರ ಮನೋಸ್ಥಿತಿ’ ಕಾರಣವಾಗಿರಬಹುದು ಎನ್ನುವದಷ್ಟೆ ನಾನು ಹೇಳುತ್ತಿರುವ ವಿಷಯವಾಗಿದೆ.

ಅಧ್ಯಾತ್ಮಕವನಗಳಲ್ಲಿಯೂ ಸಹ ಕುವೆಂಪು ಅವರು ದೈಹಿಕ ಚೆಲುವಿಗೇ ಮನ್ನಣೆ ನೀಡುತ್ತಾರೆ. ಇಲ್ಲಿಯೂ ಸಹ ಅವರದು ಆದೇಶದ ಧೋರಣೆಯೇ ಆಗಿದೆ. ಅವರ ಕವನವೊಂದರ ಕೆಲವು ಸಾಲುಗಳನ್ನು ಗಮನಿಸಿರಿ:
ಬೃಂದಾವನಕೆ ಹಾಲನು ಮಾರಲು
ಹೋಗುವ ಬಾರೆ ಬೇಗ ಸಖಿ
..........................................
ತೊಂಡೆಯ ಹಣ್ಣನು ತುಟಿಗಳು ನಗಲಿ,
ವದನವು ಮೀರಲಿ ತಾವರೆಯ.
ಈ ಕೊನೆಯ ಎರಡು ಸಾಲುಗಳು ಕುವೆಂಪು ಅವರ ಆದೇಶ ಮನೋಭಾವಕ್ಕೆ ಹಾಗು ದೈಹಿಕ ಚೆಲುವಿಗೆ ಅವರು ಕೊಡುವ ಮನ್ನಣೆಗೆ ಸಾಕ್ಷಿಯಾಗಿವೆ.

ರಾಧೆಯ ಪಾಡು’ ಎನ್ನುವ ಬೇಂದ್ರೆಯವರ ಕವನವು ಇದಕ್ಕೆ ತೀರ ವಿರುದ್ಧವಾದ ಮನೋಭಾವವನ್ನು ಹೊಂದಿದೆ. ಅಲ್ಲಿ ರಾಧೆ ತನ್ನ ಅಲಂಕಾರಗಳನ್ನೆಲ್ಲ ಬಿಸುಟಿ ಒಗೆಯುತ್ತಾಳೆ. ಯಮುನಾನದಿಯಲ್ಲಿ ಜೀವಿತವನ್ನು ಕೊನೆಗೊಳಿಸಿದರಾದರೂ ಕೃಷ್ಣ ದೊರೆತಾನೆಯೆ ಎಂದು ಹಂಬಲಿಸುತ್ತಾಳೆ.

ಕುವೆಂಪು ಹಾಗು ಬೇಂದ್ರೆ ಇವರು ಬೆಳೆದ ಪರಿಸರಗಳು ಹೇಗೆ ಅವರ ಕಾವ್ಯದ ಮೇಲೆ ಪ್ರಭಾವ ಬೀರಿವೆ ಎನ್ನುವುದನ್ನು ನೋಡಿದೆವು. ಇದು ಅವರ ಕಾವ್ಯದ ವಿಮರ್ಶೆ ಅಥವಾ ಮೌಲ್ಯಮಾಪನವಲ್ಲ ಎನ್ನುವುದನ್ನು ಸ್ಪಷ್ಟಪಡಿಸಬಯಸುತ್ತೇನೆ. ಕನ್ನಡಾಂಬೆಯ ಈ ಇಬ್ಬರು ಸುಪುತ್ರರ ಸಾಹಿತ್ಯಕ್ಕೆ ಅವರು ಬೆಳೆದ ಪರಿಸರವು ಹೇಗೆ ಕಾರಣವಾಗಿದೆ ಎನ್ನುವುದನ್ನು ಅರಿಯುವ ಒಂದು ಪ್ರಯತ್ನ ಮಾತ್ರ ಇದಾಗಿದೆ. ಇಂತಹ ಭಿನ್ನ ಸ್ವಭಾವಗಳ ಮೂಲಕ ಕುವೆಂಪು ಅವರು ಕರ್ನಾಟಕದ ಒಂದು ಸಾಂಸ್ಕೃತಿಕ icon ಆದರೆ, ಬೇಂದ್ರೆ ವರಕವಿಗಳಾದರು. ಇವರೀರ್ವರಿಗೂ ನನ್ನ ಸಹಸ್ರ ನಮನಗಳು.