Sunday, September 22, 2013

ಕವನದಿಂದ ಕವನ ಹುಟ್ಟುವ ಪರಿ

“ ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ | ”

ವಾಲ್ಮೀಕಿಋಷಿಗಳು ಪ್ರಾತಃಕಾಲದಲ್ಲಿ ಸ್ನಾನ, ಆಹ್ನಿಕಾದಿಗಳನ್ನು ಮುಗಿಸಿಕೊಂಡು ನದೀತಟದಿಂದ ಮರಳುವಾಗ, ಬೇಡನೋರ್ವನು ಕ್ರೌಂಚಪಕ್ಷಿಗಳ ಜೋಡಿಗೆ ತನ್ನ ಬಾಣದಿಂದ ಹೊಡೆಯುವದನ್ನು ನೋಡುತ್ತಾರೆ. ಆ ಜೋಡಿಯಲ್ಲಿ ಒಂದು ಪಕ್ಷಿಯು ಜೀವ ಕಳೆದುಕೊಂಡು ಕೆಳಗೆ ಬೀಳುತ್ತದೆ. ಇನ್ನೊಂದು ಪಕ್ಷಿಯು ತನ್ನ ಜೊತೆಯ ಪಕ್ಷಿಯ ಸುತ್ತಲೂ ವಿಲಪಿಸುತ್ತ ಸುತ್ತುತ್ತದೆ.

ವಾಲ್ಮೀಕಿ ಋಷಿಗಳು ಈ ಘಟನೆಯಿಂದ ಉದ್ವಿಗ್ನರಾದಾಗ ಅವರ ಮುಖದಿಂದ ಒಂದು ಉದ್ಗಾರ ಹೊರಡುತ್ತದೆ:
“ಬೇಡನೆ, ಕಾಮಮೋಹಿತವಾದ ಈ ಜೋಡಿಯಲ್ಲಿ ಒಂದನ್ನು ಹತ್ಯೆ ಮಾಡಿದ ನಿನಗೆ ಎಂದಿಗೂ ಶಾಂತಿ ಸಿಗಲಾರದು.” ಭಾರತದ ಆದಿಕವಿ ವಾಲ್ಮೀಕಿಯವರಿಂದ ಹೊರಹೊಮ್ಮಿದ ಪ್ರಥಮ ಶ್ಲೋಕವಿದು. ‘ಶೋಕವೇ ಶ್ಲೋಕರೂಪವನ್ನು ಪಡೆಯಿತು’ ಎಂದು ಈ ನುಡಿಯನ್ನು ವರ್ಣಿಸಲಾಗಿದೆ. ಗೋಪಾಲಕೃಷ್ಣ ಅಡಿಗರೂ ಸಹ “ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು” ಎಂದು ಭಾರತದ ಮೊದಲ ಮಹಾಕಾವ್ಯ ರಾಮಾಯಣವನ್ನು ಬಣ್ಣಿಸಿದ್ದಾರೆ.

ಅನಂತರ ಅನೇಕ ಕವಿಗಳು ರಾಮಾಯಣವನ್ನು ತಮ್ಮದೇ ಆದ ನೋಟದಲ್ಲಿ  ಹಾಗು ತಮ್ಮದೇ ಅದ ಧಾಟಿಯಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ ತೊರವೆ ರಾಮಾಯಣದಿಂದ, ಮೊಯಿಲಿರಾಮಾಯಣದವರೆಗೆ ಈ ಸರಣಿ ಸಾಗಿದೆ. ‘ತಿಣಿಕಿದನು ಫಣಿರಾಯ ರಾಮಾಯಣದ ಭಾರದಲಿ’ ಎಂದು ಸಾರಿದ ಕುಮಾರವ್ಯಾಸನು ತನ್ನ ಪೂರ್ವಕವಿಗಳ ಮಾರ್ಗದಲ್ಲಿಯೇ ‘ಮಹಾಭಾರತ’ವನ್ನು ರಚಿಸಿದ್ದಾನೆ.

ಹಾಗಿದ್ದರೆ, ಈ ಕವಿಗಳು ರಚಿಸಿದ ರಾಮಾಯಣ ಅಥವಾ ಮಹಾಭಾರತ ಕಾವ್ಯಗಳು ಅನುಕರಣೆಗಳೆ? ಖಂಡಿತವಾಗಿಯೂ ಅಲ್ಲ! ಬಂಗಾರದ ತುಂಡಿನಿಂದ ಒಬ್ಬ ಅಕ್ಕಸಾಲಿಗನು ಜೋಡೆಳೆಯ ಸರವನ್ನು ಮಾಡಿದರೆ, ಮತ್ತೊಬ್ಬ ಅಕ್ಕಸಾಲಿಗನು ಅದೇ ಬಂಗಾರದ ತುಂಡಿನಿಂದ ಕಮಲಹಾರವನ್ನು ರಚಿಸಬಹುದು. ಮೊದಲನೆಯ ಅಕ್ಕಸಾಲಿಗನು ಎರಡನೆಯವನಿಗೆ ಪ್ರೇರಣೆಯನ್ನು ನೀಡುತ್ತಾನೆ, ಅಷ್ಟೇ. ಇದುವೇ ಕವನದಿಂದ ಕವನ ಹುಟ್ಟುವ ಪರಿ.

ಇಂತಹ ಪ್ರೇರಣೆಯನ್ನು ಪಡೆದ ಕನ್ನಡ ಕವಿಗಳಲ್ಲಿ ವರಕವಿ ಬೇಂದ್ರೆಯವರು ಅಗ್ರಗಣ್ಯರು. ಬೇಂದ್ರೆಯವರದು ಬಹಳ ವಿಸ್ತಾರವಾದ ಹಾಗು ಆಳವಾದ ಅಧ್ಯಯನ. ಈ ಅಧ್ಯಯನದ ಪ್ರಭಾವವನ್ನು ಅವರು ತಮ್ಮ ಅನೇಕ ರಚನೆಗಳಲ್ಲಿ ತೋರಿಸಿದ್ದಾರೆ. ಈ ರೀತಿಯಿಂದ ತಮ್ಮ ಮೇಲೆ ಪ್ರಭಾವ ಬೀರಿದ ಪೂರ್ವಕವಿಗಳನ್ನು ಅಪ್ರತ್ಯಕ್ಷವಾಗಿ ಸ್ಮರಿಸುತ್ತಾರೆ.

ಅವರ ಕವನವೊಂದು ಸರ್ವಜ್ಞನ ಈ ವಚನದಿಂದ ಪ್ರೇರಿತವಾಗಿರುವದನ್ನು ಗಮನಿಸಬಹುದು:
“ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು |
ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ |
ನಡುವೆ ಎತ್ತಣದು?  ಸರ್ವಜ್ಞ ||”

ಸರ್ವಜ್ಞನು ಕುಲಭೇದವನ್ನು ಖಂಡಿಸಿ ರಚಿಸಿದ ವಚನವಿದು. ಈಗ ಬೇಂದ್ರೆಯವರ ಕವನವೊಂದನ್ನು (ಬೈರಾಗಿಯ ಹಾಡು) ಗಮನಿಸಿರಿ:
“ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ.
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ || ಇಕೋ ನೆಲ…..”

ಸರ್ವಜ್ಞನ ವಚನವು ತ್ರಿಪದಿಯ ಧಾಟಿಯಲ್ಲಿದೆ, ಬೇಂದ್ರೆಯವರ ಕವನದಲ್ಲಿ ಎಂಟು ಸಾಲುಗಳಿವೆ. ಈ ಕಾರಣದಿಂದಾಗಿ ಬೇಂದ್ರೆಯವರ ಕವನದಲ್ಲಿ ಮೂಲ ತಿರುಳಿನ ವಿಸ್ತಾರವಿದೆ. ಆದರೆ ಎರಡೂ ರಚನೆಗಳಲ್ಲಿ, ಭೂಮಿತಾಯಿ ಹಾಗು ಜೀವಜಲ ಇವು ಎಲ್ಲರಿಗೂ ಸಮಾನ ಎನ್ನುವ ಆಶಯವಿದೆ. ಸರ್ವಜ್ಞನು ಕುಲಭೇದವನ್ನು ಪ್ರತ್ಯಕ್ಷವಾಗಿ ಖಂಡಿಸಿದ್ದಾನೆ. ಬೇಂದ್ರೆಯವರು ಮಾನವರೆಲ್ಲರೂ ಒಂದೇ ಎಂದಿದ್ದಾರೆ. ಸರ್ವಜ್ಞನ ಕಾಣ್ಕೆಯನ್ನು ಹಾಗು ಅವನದೇ ಕೆಲವು ಪದಗಳನ್ನು ಬಳಸಿಕೊಂಡು ಬೇಂದ್ರೆಯವರು ಮಾಡಿದ ಬಂಗಾರದ ಒಡವೆಯಿದು! ಇದು ತಮ್ಮ ಪೂರ್ವಕವಿಗಳನ್ನು ಬೇಂದ್ರೆಯವರು ಸ್ಮರಿಸುವ ರೀತಿಯೂ ಹೌದು.

ಭಾರತೀಯ ಕವಿಗಳಷ್ಟೇ ಬೇಂದ್ರೆಯವರಿಗೆ ಈ ರೀತಿಯ ಪ್ರೇರಣೆ ಕೊಟ್ಟಿದ್ದಾರೆ ಎಂದಲ್ಲ. ಆಂಗ್ಲ ನಾಟಕಕಾರ ಶೇಕ್ಸಪಿಯರನ ‘ಕಿಂಗ ಲಿಯರ’ ಎನ್ನುವ ನಾಟಕದಲ್ಲಿ ಪುಟ್ಟದೊಂದು ಹಾಡು ಬರುತ್ತದೆ:
Under the greenwood tree
Who wants to lie with me
Come hither, come hither, come hither.
Here shall he see
No enemy
But winter and rough weather.

ಈಗ ಬೇಂದ್ರೆಯವರ ಕವನವೊಂದನ್ನು ಗಮನಿಸಿರಿ:
“ಮಳೆ ಬರಲಿ, ಚಳಿ ಇರಲಿ, ಬಿಸಿಲು ಕುದಿಸುತಲಿರಲಿ, ಮಂಜು ಸುರಿಯುತಲಿರಲಿ,
ಮುಮ್ಮುಖದ ಋತುಮಾನ ಹೇಗು ಇರಲಿ;  
ನಗುತ ಒಲಿವೆವು ನಾವು, ನಗುತ ಒಲಿಸುವೆವು.”

ಶೇಕ್ಸಪಿಯರನ ಕವನದ ಮನೋಧರ್ಮಕ್ಕೂ, ಬೇಂದ್ರೆಯವರ ಕವನದ ಮನೋಧರ್ಮಕ್ಕೂ ಏನಾದರೂ ಭಿನ್ನತೆ ಇದೆಯೆ?
ಶೇಕ್ಸಪಿಯರನು ತನ್ನ ಕವನದಲ್ಲಿ ಸಾಮರಸ್ಯವನ್ನು ಸೂಚಿಸಲು ನಿಸರ್ಗದ ಪ್ರತೀಕವನ್ನು ಬಳಸಿಕೊಂಡಂತೆ, ಬೇಂದ್ರೆಯವರೂ ತಮ್ಮ ಕವನದಲ್ಲಿ ಋತುಮಾನದ ಪ್ರತೀಕವನ್ನು ಬಳಸಿಕೊಂಡಿದ್ದಾರಲ್ಲವೆ?

ಬೇಂದ್ರೆಯವರು ತಮ್ಮ ಕವನಗಳಲ್ಲಿ ಯಾರದೇ ಅನುಕರಣೆಯನ್ನು ಮಾಡಿಲ್ಲ. ಆದರೆ ಅವರ ಪ್ರತಿಭೆಯು ತಾನು ಕಂಡದ್ದನ್ನು, ಹಾಗು ತಾನು ಉಂಡದ್ದನ್ನು ಅರಗಿಸಿಕೊಂಡು, ಮತ್ತೊಂದು ಪ್ರಸಂಗದಲ್ಲಿ, ತನ್ನದೇ ರೀತಿಯಲ್ಲಿ ಮರುಸೃಷ್ಟಿಸಿ ಕನ್ನಡಿಗರಿಗೆ ನೀಡಿದೆ. ಇದನ್ನೇ ಕವನದಿಂದ ಕವನ ಹುಟ್ಟುವ ಪರಿ ಎಂದು ಹೇಳಬಹುದು.

ಯೇಟ್ಸ ಕವಿಯ “Crazy Jane talks with the Bishop” ಎನ್ನುವ ಕವನಕ್ಕೂ ಬೇಂದ್ರೆಯವರ ಕವನವೊಂದಕ್ಕೂ ಇರುವ ಸಾಮ್ಯ, ವೈಷಮ್ಯಗಳನ್ನು ಗಮನಿಸಿರಿ. ಯೇಟ್ಸನ ಕವನವನ್ನು ಇಲ್ಲಿ ನೋಡಬಹುದು. ಇನ್ನು ಬೇಂದ್ರೆಯವರ ಕವನದ ಮೊದಲ ಸಾಲುಗಳು ಹೀಗಿವೆ:
“ಗುಡಿಯ ಮಡಿಯ ಪೂಜಾರರಣ್ಣ ನರ್ತಕಿಗೆ ನುಡಿದ ನೊಂದು
‘ಎಲೆ ದುಷ್ಟೆ, ನಷ್ಟೆ, ನೀ ಪ್ರಾಯದವರನು ಬೇಟೆಯಾಡುವೆಯೆ’ ಎಂದು.
‘ಹೌದು ದೊರೆಯೆ, ನಾ ಬಿಚ್ಚುಮೊಗ್ಗೆ, ನನಗಿಲ್ಲ ಸೆರಗು ಮುಚ್ಚು,
ತೆರೆದ ಪುಸ್ತಕವು ನನ್ನ ಬಾಳು, ನಿಮಗೇನೊ ಬೇರೆ ಹುಚ್ಚು!’”

ಯೇಟ್ಸನ ಕವನದಲ್ಲಿ ವೇಶ್ಯೆಯೋರ್ವಳಿಗೆ ಬಿಶಪ್ ಹೇಳುವ ಮಾತುಗಳು ಹಾಗು ಬೇಂದ್ರೆಯವರ ಕವನದ ಪೂಜಾರಿಯು ನರ್ತಕಿಗೆ ಹೇಳುವ ಮಾತುಗಳು ಒಂದೇ ಆಗಿವೆ. ಯೇಟ್ಸನ ವೇಶ್ಯೆ ಹಾಗು ಬೇಂದ್ರೆಯವರ ನರ್ತಕಿ ಇವರು ಕೊಡುವ ಉತ್ತರಗಳ ತಿರುಳು ಒಂದೇ. ಆದರೆ ಯೇಟ್ಸನ ವೇಶ್ಯೆಯ ಉತ್ತರದಲ್ಲಿ ಆಕ್ರೋಶವಿದೆ. ಬೇಂದ್ರೆಯವರ ನರ್ತಕಿಯ ಉತ್ತರದಲ್ಲಿ resignation ಇದೆ. ಯೇಟ್ಸನ ವೇಶ್ಯೆಯು “.... love has pitched his mansion in the place of excrement” ಎಂದು ಕೊನೆಯಲ್ಲಿ ಹೇಳುವಾಗ ಸ್ಫೋಟಿಸುತ್ತಾಳೆ. ಬೇಂದ್ರೆಯವರ ನರ್ತಕಿಯು “ತೆರೆದ ಪುಸ್ತಕವು ನನ್ನ ಬಾಳು, ನಿಮಗೇನೊ ಬೇರೆ ಹುಚ್ಚು!’” ಎಂದು ಉಸುರುವಾಗ, “ನನ್ನದು ಬಹಿರಂಗವಾದ ಕಾಮವ್ಯಾಪಾರವಾದರೆ, ನಿಮ್ಮದು ಅಂತರಂಗದಲ್ಲಿರುವ ಕಾಮವ್ಯಾಪಾರ” ಎಂದು ಮುಸುಕಿನ ಗುದ್ದು ಕೊಡುತ್ತಾಳೆ!

ಯೇಟ್ಸ ಕವಿಯ ಇದೇ ಕವನದಿಂದ ಪ್ರೇರಣೆ ಪಡೆದು ರಚಿಸಿದ ಒಂದು ಕವನವು ಇಲ್ಲಿದೆ. ಇದನ್ನು ರಚಿಸಿದವರು ಸ್ವರ್ಣಾ. ಅವರ ಕವನ ಇಲ್ಲಿದೆ: http://subbajji.blogspot.in/2013/08/blog-post_29.html

Sunday, September 15, 2013

`ನ ಹನ್ಯತೆ’……….ಮೈತ್ರೇಯಿದೇವಿ



ಪ್ರಸ್ತಾವನೆ:
ಮೈತ್ರೇಯಿದೇವಿಯವರು (೧೯೧೪-೧೯೯೦) ಬಂಗಾಲದ ಸುಪ್ರಸಿದ್ಧ ಲೇಖಕಿ. ಇವರು ಹದಿನೈದು ವರ್ಷದವರಿದ್ದಾಗಲೆ ಇವರ ಮೊದಲ ಕವನಸಂಕಲನ ‘ಉದಿತಾ’ದ ಪ್ರಕಟಣೆಯಾಯಿತು. ಈ ಕವನಸಂಕಲನಕ್ಕೆ ರವೀಂದ್ರನಾಥ ಠಾಕೂರರು ಮುನ್ನುಡಿಯನ್ನು ಬರೆದಿದ್ದಾರೆ. ಇದಲ್ಲದೆ ಚಿತ್ತಛಾಯಾ, ಹಿರಣ್ಮಯೀ ಪಾಖೀ (ಕವನಸಂಕಲನಗಳು), ಅಚೇನಾ ಚೀನ, ಚೀನೆ ಓ ಜಪಾನೆ, ಮಹಾಸೋವಿಯತ್ (ಪ್ರವಾಸಕಥನ), ಮೈತ್ರೇಯಿದೇವೀರ ಗಲ್ಪ (ಕಥಾಸಂಕಲನ) ಇವು ಇವರ ಪ್ರಸಿದ್ಧ ಕೃತಿಗಳು. ರವೀಂದ್ರನಾಥರ ಬಗೆಗೆ ಇವರು ಬರೆದಿರುವ ಕುಟೀರಬಾಸಿ ರವೀಂದ್ರನಾಥ, ಸ್ವರ್ಗೇರ್ ಕಾಚಾಕಾಚಿ, ರವೀಂದ್ರನಾಥ ಗೃಹೆ ಓ ವಿಶ್ವೆ ಇವು ಇವರ ಜನಪ್ರಿಯ ಕೃತಿಗಳು.

ಮೈತ್ರೇಯಿದೇವಿಯವರ ತಂದೆ ಸುರೇಂದ್ರನಾಥ ದಾಸಗುಪ್ತರು (೧೮೮೭-೧೯೫೨) ಕೋಲಕತ್ತಾ ಹಾಗು ಕೇಂಬ್ರಿಜ್ ವಿಶ್ವವಿದ್ಯಾಲಯಗಳಿಂದ ಡಾ*ಕ್ಟರೇಟ್ ಪದವಿಯನ್ನು ಹಾಗು ರೋಮ್ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನು ಪಡೆದವರು. ಅನೇಕ ಅಂತರರಾಷ್ಟ್ರೀಯ ಧಾರ್ಮಿಕ ಹಾಗು ತತ್ವಶಾಸ್ತದ ಸಮ್ಮೇಳನಗಳಲ್ಲಿ ಭಾಗವಹಿಸಿದವರು. ರವೀಂದ್ರನಾಥ ಠಾಕೂರರಿಗೆ ತುಂಬ ಹತ್ತಿರದವರು ಹಾಗು ರವೀಂದ್ರ-ಸಾಹಿತ್ಯದಲ್ಲಿ ನಿಷ್ಣಾತರು ಎಂದು ಗಣಿಸಲ್ಪಟ್ಟವರು.

೧೯೩೦ರಲ್ಲಿ ಮಿರ್ಚಾ ಇಲಿಯೇಡ (೧೯೦೭-೧೯೮೬) ಎನ್ನುವ ರೋಮಾನಿಯದ ತತ್ವಶಾಸ್ತ್ರದ ವಿದ್ಯಾರ್ಥಿ ದಾಸಗುಪ್ತರಲ್ಲಿ ಸಂಸ್ಕೃತ ಹಾಗು ಭಾರತೀಯ ತತ್ವಶಾಸ್ತ್ರದ ಅಧ್ಯಯನ ಮಾಡಲು ಬರುತ್ತಾನೆ. ದಾಸಗುಪ್ತರು ಅವನಿಗೆ ತಮ್ಮ ಮನೆಯಲ್ಲಿ ವಸತಿಯನ್ನು ಕಲ್ಪಿಸಿಕೊಟ್ಟರಲ್ಲದೆ, ತಮ್ಮ ಮನೆಯಲ್ಲಿ ಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟರು. ೧೬ ವರುಷದ ಮೈತ್ರೇಯಿ ಹಾಗು ೨೩ ವರುಷದ ಮಿರ್ಚಾ ಜೊತೆಗೂಡಿ, ದಾಸಗುಪ್ತರ ವಾಚನಾಲಯದ ಪುಸ್ತಕಗಳ ಗ್ರಂಥಸೂಚಿಯನ್ನು ತಯಾರಿಸುತ್ತಿದ್ದರು. ಯುರೋಪಿಯನ್ ನಾಗರಿಕತೆಯ ಮಿರ್ಚಾನು ಮೈತ್ರೇಯಿಯ ನಿಕಟ ಸಂಪರ್ಕವನ್ನು ಬಯಸಿದ್ದರಲ್ಲಿ ಅಚ್ಚರಿಯಾಗಲಿಕ್ಕಿಲ್ಲ. ಆಗ ತಾನೇ ತರುಣಾವಸ್ಥೆಯಲ್ಲಿ ಕಾಲಿಡುತ್ತಿದ್ದಂತಹ ಮೈತ್ರೇಯಿಗೆ ಮಿರ್ಚಾನ ಮೇಲೆ ದ್ವಂದ್ವಭಾವವು ಮೂಡಿದ್ದರಲ್ಲಿಯೂ ಅಚ್ಚರಿಯಾಗಲಿಕ್ಕಿಲ್ಲ. ಮೈತ್ರೇಯಿ, ಅವಳ ತಂಗಿ ಹಾಗು ಮಿರ್ಚಾ ಒಮ್ಮೆ ಕೆರೆಯ ದಂಡೆಯ ಮೇಲೆ ತಿರುಗಾಡಲು ಹೋದಾಗ, ಮಿರ್ಚಾ ಅವಳನ್ನು ಬರಸೆಳೆದಪ್ಪಿ ಮುದ್ದಿಸಿದ. ಈ ಪ್ರಸಂಗವು ಬಯಲಾದ ಕ್ಷಣವೇ ದಾಸಗುಪ್ತರು ಮಿರ್ಚಾನನ್ನು ಮನೆಯಿಂದ ಹೊರಗೆ ಕಳಿಸಿದರು. ಆದರೆ ಆಕರ್ಷಣೆ ಹಾಗು ವಿಕರ್ಷಣೆಗಳ ನಡುವೆ ಸಿಲುಕಿದ ಬಾಲೆ ಮೈತ್ರೇಯಿದೇವಿ ಮಾತ್ರ ಈ ಘಟನೆಯಿಂದಾಗಿ ನಲುಗಿ ಹೋದಳು.

ನಾಲ್ಕು ವರ್ಷಗಳ ಬಳಿಕ ಮೈತ್ರೇಯಿಯ ಮದುವೆ ಅವಳಿಗಿಂತ ಹದಿನಾಲ್ಕು ವರ್ಷ ದೊಡ್ಡವರಾದ  ಮನಮೋಹನ ಸೇನ ಎನ್ನುವ ವೈದ್ಯರ ಜೊತೆಗೆ ಜರುಗುತ್ತದೆ. ತುಂಬ ತಿಳಿವಳಿಕೆಯುಳ್ಳ, ತುಂಬ ಒಳ್ಳೆಯವರಾದ ಹಾಗು ಮೈತ್ರೇಯಿಯನ್ನು ತುಂಬ ಪ್ರೀತಿಸುತ್ತಿದ್ದ ಗಂಡನ ಜೊತೆಗೆ ಮೈತ್ರೇಯಿಯ ದಾಂಪತ್ಯಜೀವನ ನಿರುದ್ವೇಗದಿಂದ ಸಾಗುತ್ತದೆ. ಮಕ್ಕಳು, ಮೊಮ್ಮಕ್ಕಳು ಅವಳ ಸಂಸಾರವನ್ನು ತುಂಬುತ್ತಾರೆ.

೧೯೭೨ರಲ್ಲಿ, ಅಂದರೆ ಮೈತ್ರೇಯಿದೇವಿಯವರಿಗೆ ೫೮ ವರ್ಷ ತುಂಬಿದ ಸಮಯದಲ್ಲಿ, ಕೋಲಕತ್ತಾದಲ್ಲಿ ಅಕಸ್ಮಾತ್ತಾಗಿ ಒಬ್ಬ ಯುರೋಪಿಯನ್ ವ್ಯಕ್ತಿಯ ಭೆಟ್ಟಿಯಾಗುತ್ತದೆ. “ಮಿರ್ಚಾ ಏಲಿಯೇಡ್ ಬರೆದ ಪುಸ್ತಕದಿಂದಾಗಿ  ನೀವು ಯುರೋಪ ಖಂಡದಲ್ಲೆಲ್ಲ ತುಂಬ ಪ್ರಸಿದ್ಧರಾಗಿದ್ದೀರಿ” ಎಂದು ಆತ ಹೇಳಿದಾಗ, ಮೈತ್ರೇಯಿದೇವಿಯವರಿಗೆ ಆಶ್ಚರ್ಯವಾಗುತ್ತದೆ.
ಮಿರ್ಚಾ ಎಲಿಯೇಡ್ ಬರೆದ ಪುಸ್ತಕದ ಹೆಸರು: ‘ಮೈತ್ರೇಯಿದೇವಿ’. ಇದನ್ನು ‘ಬಂಗಾಲದ ರಾತ್ರಿಗಳು’ ಎಂದೂ ಕರೆಯಲಾಗಿದೆ.

ಕಥೆ:
ದಾಸಗುಪ್ತರಿಂದ ಹೊರದೂಡಿಸಿಕೊಂಡ ಮಿರ್ಚಾ ಕೆಲವು ಕಾಲ ಹಿಮಾಲಯದಲ್ಲಿ ಸನ್ಯಾಸಿಯಂತೆ ತಿರುಗಾಡುತ್ತಾನೆ. ಈ ಸಮಯದಲ್ಲಿ ಅಲ್ಲಿಯ ಆಧ್ಯಾತ್ಮಕ ಸಾಧಕರ ಜೊತೆಗೆ ನಿಕಟ ಸಂಬಂಧವನ್ನು ಪಡೆಯುತ್ತಾನೆ. ಇದರಿಂದಾಗಿ ಯೋಗ ಹಾಗು ಭಾರತೀಯ ಧರ್ಮಕಲ್ಪನೆಯ ಮೇಲೆ ಕೃತಿಗಳನ್ನು ರಚಿಸಲು ಅವನಿಗೆ ಅನುಕೂಲವಾಗುತ್ತದೆ. ಇದೇನೇ ಆದರೂ ಮೈತ್ರೇಯಿದೇವಿಯ ಮೇಲೆ ಮನಸ್ಸಿಟ್ಟಿದ್ದ ಮಿರ್ಚಾ ‘ಮೈತ್ರೇಯಿದೇವಿ’ ಅಥವಾ ‘ಬಂಗಾಲದ ರಾತ್ರಿಗಳು’ ಎನ್ನುವ ತನ್ನ ಆತ್ಮಚರಿತ್ರೆಯ ರೂಪದ ಕಾದಂಬರಿಯನ್ನು ಬರೆಯುತ್ತಾನೆ. ವಾಸ್ತವಕ್ಕೆ ತೀರ ವಿರುದ್ಧವಾದ ಈ ಕಾದಂಬರಿಯಲ್ಲಿ, ಮೈತ್ರೇಯಿದೇವಿಯ ಬಗೆಗೆ ತನಗೆ ನಿಷ್ಕಾಮ ಪ್ರೇಮವಿತ್ತು, ಆದರೆ ಅವಳೇ ತನ್ನನ್ನು ಕಾಮಶಯ್ಯೆಗೆ ಸೆಳೆದಳು; ಅವಳು ಈ ಮೊದಲೂ ಸಹ ಕನ್ಯೆಯಾಗಿರಲಿಕ್ಕಿಲ್ಲ ಎಂದು ಬರೆದಿದ್ದಾನೆ. ಒಬ್ಬ ಯುರೋಪಿಯನ್ ಅಳಿಯನನ್ನು ಬಯಸುತ್ತಿದ್ದ ದಾಸಗುಪ್ತರು, ತನ್ನ ಮಗಳನ್ನು ಉತ್ತೇಜಿಸುತ್ತಿದ್ದರು ಎಂದೂ ಸಹ ಇದರಲ್ಲಿ ಸೂಚಿಸಲಾಗಿದೆ. ಮದುವೆಯನ್ನು ಅನಿವಾರ್ಯ ಮಾಡುವ ಉದ್ದೇಶದಿಂದ, ಬಸಿರಾಗ ಬಯಸಿದ ಮೈತ್ರೇಯಿ ಮತ್ತೊಬ್ಬ ಕೀಳು ಮನುಷ್ಯನೊಡನೆ ಸಂಗವನ್ನು ಮಾಡಿದಳು ಎಂದೂ ಮಿರ್ಚಾ ಆ ಕಾದಂಬರಿಯಲ್ಲಿ ಬರೆದಿದ್ದಾನೆ. ಸ್ಥಳೀಯ ಸಾಹಿತ್ಯಕ್ಕೆ ರಮ್ಯವಿಲಾಸಿ, ರಂಗೀನ ಕಾದಂಬರಿಯನ್ನು (Exotic novel) ಪರಿಚಯಿಸಿದವನೆಂದು ಮಿರ್ಚಾನಿಗೆ ವಿಮರ್ಶಕರ ಮನ್ನಣೆ ಸಿಗುತ್ತದೆ!

ವ್ಯಥೆ:
ಈ ಪುಸ್ತಕವು ಪ್ರಕಟವಾದ ಸುಮಾರು ೪೦ ವರ್ಷಗಳ ಬಳಿಕ, ಮೈತ್ರೇಯಿದೇವಿಯವರಿಗೆ ಇದು ಓದಲು ಲಭ್ಯವಾಯಿತು. ಅದನ್ನು ಓದಿದ ಮೈತ್ರೇಯಿದೇವಿಯವರು ತನ್ನ ಚಾರಿತ್ರ್ಯಹನನದಿಂದ ಹಾಗು ಆಮೂಲಕ ತನಗೆ ದೊರೆತ ಅಪಖ್ಯಾತಿಯಿಂದ ಆಘಾತಗೊಂಡರು. ಇದರಿಂದ ತುಂಬ ನೊಂದುಕೊಂಡ ಅವರು ೧೯೭೭ರಲ್ಲಿ (-ಅಂದರೆ ಅವರಿಗೆ ೬೩ ವರ್ಷಗಳಾದಾಗ-) ‘ನ ಹನ್ಯತೆ’ ಎನ್ನುವ ಕಾದಂಬರಿರೂಪದ ಕೃತಿಯನ್ನು ರಚಿಸಿದರು. ಆ ಕೃತಿಯಲ್ಲಿ ತನ್ನ ಹಾಗು ಮಿರ್ಚಾನ ನಡುವಿನ ಸಂಬಂಧವನ್ನು ಅವರು ವಿವರಿಸಿದ್ದಾರೆ. ಮಿರ್ಚಾನ ಮೇಲೆ ತನಗೆ ಹದಿಹರೆಯದ ಆಕರ್ಷಣೆ ಇದ್ದದ್ದು ನಿಜ, ಆದರೆ (ಸಾಂಪ್ರದಾಯಕ ಮನೆಯಲ್ಲಿ ಬೆಳೆದ) ತಾನು ಎಂದೂ ನೀತಿಮಾರ್ಗವನ್ನು ಅತಿಕ್ರಮಿಸಲಿಲ್ಲ, ಈಗಲಾದರೂ ಸಹ ಆತನ ಮೇಲೆ ತನಗೆ ಪ್ರೀತಿ ಇದೆ, ಇದು ಮಾನವಪ್ರೀತಿ ಎಂದು ಅವರು ಹೇಳುತ್ತಾರೆ. ಈ ಕಾದಂಬರಿಯಲ್ಲಿ ಮೈತ್ರೇಯಿದೇವಿಯವರು ತನ್ನ ಮನದ ತೊಳಲಾಟವನ್ನು ಬಗೆಬಗೆಯಲ್ಲಿ ಚಿತ್ರಿಸಿದ್ದಾರೆ. ಈ ಕೃತಿಯಲ್ಲಿ ವ್ಯಕ್ತವಾದ  ಅವರ ಭಾಷಾಪ್ರಭುತ್ವವು ಅಚ್ಚರಿ ಮೂಡಿಸುವಂತಹದಾಗಿದೆ.

‘ನ ಹನ್ಯತೇ’ ಇದು ಕಠೋಪನಿಷತ್ತಿನಲ್ಲಿ ಯಮಧರ್ಮನು ನಚಿಕೇತನಿಗೆ ಆತ್ಮದ ಬಗೆಗೆ ಹೇಳುವ ವರ್ಣನೆ:
ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ,
ನ ಹನ್ಯತೇ ಹನ್ಯಮಾನೇ ಶರೀರೇ.
ಶರೀರವು ನಾಶವಾದರೂ ಸಹ ಆತ್ಮವು ನಾಶವಾಗುವುದಿಲ್ಲ.
ಮೈತ್ರೇಯಿದೇವಿಯವರು ‘ಯಾವ ಘಟನೆಯೂ, ಯಾವ ಪ್ರೀತಿಯೂ ನಾಶವಾಗುವುದಿಲ್ಲ; ಅದು ನೆನಪಿನಲ್ಲಿ ಚಿರಸ್ಥಾಯಿ’ ಎನ್ನುವ ಅರ್ಥದಲ್ಲಿ, ಇಲ್ಲಿ ಇದನ್ನು ಶೀರ್ಷಿಕೆಯನ್ನಾಗಿ ಬಳಸಿಕೊಂಡಿದ್ದಾರೆ.

೧೯೮೮ರಲ್ಲಿ ಎಲಿಯೇಡನ ಕಾದಂಬರಿಯನ್ನು ‘Bengali Nights’ ಎನ್ನುವ ಚಲನಚಿತ್ರವನ್ನಾಗಿ ಮಾಡಲಾಯಿತು. ಹ್ಯೂ ಗ್ರ್ಯಾಂಟ ಈ ಚಲನಚಿತ್ರದ ನಾಯಕ ಹಾಗು ಸುಪ್ರಿಯಾ ಪಾಠಕ ನಾಯಕಿ. ಇದೊಂದು ಅಶ್ಲೀಲ ಚಲನಚಿತ್ರವೆಂದು ಪ್ರತಿಭಟನೆಗಳಾದಾಗ, ಭಾರತದಲ್ಲಿ ಇದನ್ನು ನಿಷೇಧಿಸಲಾಯಿತು.

ಕೊನೆಯ ಕಣ್ಣೀರು:
ಮೈತ್ರೇಯಿದೇವಿಯವರು ತಮ್ಮ ಸಾಹಿತ್ಯ ಹಾಗು ಪಾಂಡಿತ್ಯದ ಕಾರಣದಿಂದಾಗಿ ದೇಶವಿದೇಶಗಳ ಮನ್ನಣೆ ಹಾಗು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ನ ಹನ್ಯತೆ’ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

೧೯೭೧ರಲ್ಲಿ ಬಂಗ್ಲಾ ಯುದ್ಧದ ನಿರಾಶ್ರಿತ ಬಾಲಕರಿಗಾಗಿ ಇವರು ‘ಖೇಲಾಘರ’ ಸ್ಥಾಪಿಸಿದರು. ಅಲ್ಲದೆ ‘ಕ್ವೇಕರ್ಸ ಸೊಸಾಯಿಟಿ ಆ*ಫ್ ಫ್ರೆಂಡ್ಸ’ ಹಾಗು ‘ಗಾಂಧಿ ಶಾಂತಿ ಪ್ರತಿಷ್ಠಾನ’ದ ಜೊತೆಗೂ ಇವರು ದುಡಿದಿದ್ದಾರೆ. ೧೯೭೭ರಲ್ಲಿ ಭಾರತ ಸರಕಾರವು ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನಿಸಿತು.

ಇತ್ತ ಮಿರ್ಚಾ ಏಲಿಯೇಡ ಸಹ ಯುರೋಪ ಖಂಡದಲ್ಲಿ ತನ್ನ ತಾತ್ವಿಕ ಹಾಗು ಸಾಹಿತ್ಯಕ ಕೃತಿಗಳಿಗಾಗಿ ಮನ್ನಣೆಯನ್ನು ಪಡೆದ. ಎರಡು ಸಲ ಮದುವೆಯನ್ನೂ ಆದ.

ವಾಸ್ತವದಲ್ಲಿ ಸಾಧ್ಯವಾಗದ ಬಯಕೆಗಳನ್ನು ವ್ಯಕ್ತಿಯು ಕನಸಿನಲ್ಲಿ ತೀರಿಸಿಕೊಳ್ಳುತ್ತಾನೆ ಎಂದು ಮನೋಶಾಸ್ತ್ರಜ್ಞ  ಫ್ರಾ*ಯ್ಡ ಹೇಳುತ್ತಾನೆ. ಏಲಿಯಡ್‍ ತನ್ನ ಕನಸುಗಳಲ್ಲಿ ಏನಾದರೂ ಮಾಡಿಕೊಳ್ಳಲಿ, ಆದರೆ ಮೈತ್ರೇಯಿದೇವಿಯ ಜೊತೆಗೆ ಶರೀರಸಂಪರ್ಕ ಸಾಧ್ಯವಾಗಲಿಲ್ಲ ಎನ್ನುವ ರೊಚ್ಚಿನಿಂದ ಅವಳ ಮೇಲೆ ಮಾನಸಿಕ  ಅತ್ಯಾಚಾರವನ್ನು ಹಾಗು ಸಾಹಿತ್ಯಕ ಅಪಪ್ರಚಾರವನ್ನು ಮಾಡಿದ್ದು ಅನ್ಯಾಯದ ಸಂಗತಿ. ಓರ್ವ ಅಮಾಯಕ ಸ್ತ್ರೀಯ ಚಾರಿತ್ರ್ಯಹನನವನ್ನು ಮಾಡಿದ ಮಿರ್ಚಾ ಏಲಿಯಡ್‌ನಿಗೆ ಧಿಕ್ಕಾರವಿರಲಿ!

ಟಿಪ್ಪಣಿ:
‘ನ ಹನ್ಯತೆ’ ಕೃತಿಯನ್ನು ಪ್ರಾಧ್ಯಾಪಕಿ ಗೀತಾ ವಿಜಯಕುಮಾರ ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಸಾಹಿತ್ಯ ಅಕಾಡೆಮಿ, ನವದೆಹಲಿಯಿಂದ ೨೦೦೮ರಲ್ಲಿ ಪ್ರಕಟವಾಗಿದೆ.

Sunday, August 25, 2013

ಹಿಂದs ನೋಡದs (ಒಂದು ಹಳೆಯ ಚಿತ್ರವನ್ನು ಕುರಿತು).......ಬೇಂದ್ರೆ



ಹಿಂದs ನೋಡದs
(ಒಂದು ಹಳೆಯ ಚಿತ್ರವನ್ನು ಕುರಿತು)

ಹಿಂದs ನೋಡದs | ಗೆಳತಿ
               ಹಿಂದs ನೋಡದs

ಒಂದೇ ಬಾರಿ ನನ್ನ ನೋಡಿ
ಮಂದ ನಗೀ ಹಾಂಗs ಬೀರಿ
ಮುಂದs  ಮುಂದs ಮುಂದs ಹೋದ || ಹಿಂದs…

ಗಾಳಿ ಹೆಜ್ಜೆ ಹಿಡದ ಸುಗಂಧ
ಅತ್ತs ಅತ್ತs ಹೋಗುವಂದ
ಹೋತ ಮನಸು ಅವನ ಹಿಂದs || ಹಿಂದs…

ನಂದ ನನಗ ಎಚ್ಚರಿಲ್ಲ
ಮಂದಿಗೊಡವಿ ಏನs ನನಗs
ಒಂದೇ ಅಳತಿ ನಡದದ ಚಿತ್ತ || ಹಿಂದs…

ಸೂಜಿ ಹಿಂದ ಧಾರದಾಂಗ
ಕೊಳ್ಳದೊಳಗ ಜಾರಿಧಾಂಗ
ಹೋತs ಹಿಂದ ಬಾರಧಾಂಗ || ಹಿಂದs…
…………………………………………………………..

ಹದಿಹರೆಯವು ಪ್ರೇಮಾಕರ್ಷಣೆಯ ಕಾಲವಾಗಿದೆ. ಈ ಅನುಭವವು ಎಲ್ಲರಿಗೂ ಆಗಿರುವಂತಹದೆ. ಬೇಂದ್ರೆಯವರು ಸ್ವತಃ ಈ ಆಕರ್ಷಣೆಯ ಜಾಲದಲ್ಲಿ ಸಿಲುಕಿರಲಿಕ್ಕಿಲ್ಲ. ಅದರೆ ಅಂತಹ ಪ್ರಸಂಗಗಳನ್ನು ಅವರು ಕಂಡಿರಬಹುದು. ಅವರು ರಚಿಸಿದ ಇಂತಹ ಪ್ರೇಮಕವನಗಳು ಬಹುತೇಕವಾಗಿ ನಾಯಿಕಾ-ಪ್ರಧಾನವಾಗಿವೆಯೇ ಹೊರತು ನಾಯಕ-ಪ್ರಧಾನವಾಗಿಲ್ಲ ಎನ್ನುವುದು ಗಮನಾರ್ಹವಾಗಿದೆ. ಇದಕ್ಕೆ ಕಾರಣವೇನಿರಬಹುದು? ಹುಡುಗಿಯರು ಹುಡುಗರಿಗಿಂತ ಹೆಚ್ಚು ಭಾವಜೀವಿಗಳು ಎನ್ನುವುದು ಅವರ ಅಭಿಪ್ರಾಯವಾಗಿರಬಹುದೆ? ‘ಹುಡುಗರ ಭಾವನೆಗಳಲ್ಲಿ ವರ್ಣಿಸಲಿಕ್ಕೆ ಏನಿದೆ ಮಣ್ಣು?’ ಎನ್ನುವುದು ಅವರ ಅನಿಸಿಕೆಯಾಗಿರಬಹುದೆ!?



‘ಹಿಂದs ನೋಡದs’ ಎನ್ನುವ ಕವನವು ಹದಿಹರೆಯದಲ್ಲಿ ಆಕರ್ಷಣೆಯ ಜಾಲಕ್ಕೆ ಮೊದಲ ಸಲ ಸಿಲುಕಿದ ಬಾಲೆಯೊಬ್ಬಳ ಭಾವಗೀತೆಯಾಗಿದೆ. ಆದರೆ ಈ ಅನುಭವದ ಅನೇಕ ವರ್ಷಗಳ ನಂತರ ಅವಳು ತನ್ನ ಸಖಿಯಲ್ಲಿ ಈ ಹಳೆಯ ಕತೆಯನ್ನು ಬಿಚ್ಚಿಡುತ್ತಿದ್ದಾಳೆ. ಆ ಕಾರಣದಿಂದಾಗಿಯೇ, ಕವನದ ಶೀರ್ಷಕದ ಕೆಳಗೆ `ಒಂದು ಹಳೆಯ ಚಿತ್ರವನ್ನು ಕುರಿತು’ ಎನ್ನುವ ಸೂಚನೆಯನ್ನು ವರಕವಿಗಳು ನೀಡಿದ್ದಾಳೆ. ಕಾಲವು ನೀರಿನಂತೆ ಹರಿದು ಹೋಗಿದೆ. ಆದರೆ  ಚಿಕ್ಕ ಮಕ್ಕಳು  ತಮ್ಮ ಪುಸ್ತಕದಲ್ಲಿ ನವಿಲುಗರಿಯನ್ನು ಪ್ರೀತಿಯಿಂದ ಇಟ್ಟುಕೊಳ್ಳುವಂತೆ ಈ ಹೆಣ್ಣುಮಗಳು ತನ್ನ ಮೊದಲ ಪ್ರೇಮಾನುಭವವನ್ನು ತನ್ನ ಹೃದಯದಲ್ಲಿ ಕಾಪಿಟ್ಟಿದ್ದಾಳೆ. ಆ ಅನುಭವವನ್ನು ವಾಸ್ತವ ದೃಷ್ಟಿಕೋನದಿಂದ ವಿಶ್ಲೇಷಿಸಿ ಹೇಳುವ ಪ್ರೌಢತೆ ಅವಳಿಗೆ ಈಗ ಬಂದಿದೆ.
……………………………………………………………
`ಹಿಂದs ನೋಡದs | ಗೆಳತಿ
               ಹಿಂದs ನೋಡದs’ ಎನ್ನುವ ಪದಪುಂಜವು ಈ ಕವನದಲ್ಲಿ ೫ ಸಲ ಉಕ್ತವಾಗಿದೆ. ಪ್ರತಿ ಸಲವೂ ಈ ಪದಪುಂಜಕ್ಕೆ ಬೇಂದ್ರೆಯವರು ವಿಭಿನ್ನ ಅರ್ಥವನ್ನೇ ನೀಡಿದ್ದಾರೆ. ‘ಹಿಂದೆ ನೋಡುವುದು’ ಎಂದರೆ ಹಳೆಯದನ್ನು ನೆನಪಿಸಿಕೊಳ್ಳುವುದು. ಸಖಿಯ ಜೊತೆಗೆ ತನ್ನ ಹಳೆಯ ಅನುಭವವನ್ನು ಹಂಚಿಕೊಳ್ಳುತ್ತಿರುವ ನಮ್ಮ ನಾಯಕಿಯು ‘ಹಿಂದs ನೋಡದs’ ಎಂದು ಹೇಳುವುದೇ ಒಂದು ವಿರೋಧಾಲಂಕಾರವಾಗಿದೆ.

ನಮ್ಮ ನಾಯಕಿಯನ್ನು ಈ ಪರಿ ಆಕರ್ಷಿಸಿದ ತರುಣನು ಅವಳಿಗೆ ಅಪರಿಚಿತ. ಅಕಸ್ಮಾತ್ತಾಗಿ ಅವಳಿಗೆ ಜಾತ್ರೆಯಲ್ಲಿ ಅಥವಾ ಒಂದು ಸಾರ್ವಜನಿಕ ಜಾಗದಲ್ಲಿ ಕಂಡವನು. ಅವನನ್ನು ನೋಡಿದ ತಕ್ಷಣ ನಮ್ಮ ನಾಯಕಿಯು ಅವನಿಗೆ ತನ್ನ ಹೃದಯವನ್ನು ಅರ್ಪಿಸಿದಳು. ಆತ ಯಾರು, ಆತನ ಕುಲಗೋತ್ರವೇನು ಇದಾವದನ್ನೂ ಅರಿಯದೆ ಅವನಿಗೆ ಮಾರು ಹೋದ ಹುಡುಗಿ ಇವಳು. ಆದುದರಿಂದಲೇ ತನ್ನ ಸಖಿಗೆ ಇವಳು  ‘ಹಿಂದೆ ಮುಂದೆ ನೋಡದೆ’ ಅವನಿಗೆ ಮರುಳಾದೆ ಎಂದು ಹೇಳುತ್ತಿದ್ದಾಳೆ. ‘ಹಿಂದs ನೋಡದs’ ಎನ್ನುವ ಪದಪುಂಜದ ಮೊದಲನೆಯ ಅರ್ಥವಿದು.

ಇವಳ ನೋಟಕ್ಕೆ ಆ ತರುಣನ ಪ್ರತಿಕ್ರಿಯೆ ಏನು?
ಒಂದೇ ಬಾರಿ ನನ್ನ ನೋಡಿ
ಮಂದ ನಗೀ ಹಾಂಗs ಬೀರಿ
ಮುಂದs  ಮುಂದs ಮುಂದs ಹೋದ || ಹಿಂದs…
ಆತ ಇವಳ ಪ್ರೇಮಕಟಾಕ್ಷವನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಉತ್ತೇಜಿಸುವದಿಲ್ಲ. ಒಂದೇ ಸಲ ಇವಳನ್ನು ನೋಡುತ್ತಾನೆ. ಸಭ್ಯತೆಯ ಸಂಕೇತವೆಂಬಂತೆ ಒಂದು ಮುಗುಳುನಗೆಯನ್ನು ಬೀರಿ ಆತ ಮುನ್ನಡೆಯುತ್ತಾನೆ.  `ಹಾಂಗs ಬೀರಿ’ ಎನ್ನುವಾಗ ‘ತನಗೆ ಈ ಹುಡುಗಿಯೇನೂ ವಿಶೇಷವಲ್ಲ’ ಎನ್ನುವ ಭಾವನೆ ಇದೆ. ಆತ ಅಲ್ಲಿಯೇ ನಿಂತು ಇವಳೊಡನೆ ‘ಕಣ್ಣಾಟ’ವಾಡಬಹುದಾಗಿತ್ತು. ಆದರೆ ಅವನು ಅಂಥವನಲ್ಲ! ಹಾಗಾಗಿ ಆತನು ಹಿಂದೆ ತಿರುಗಿ ಸಹ ನೋಡುವದಿಲ್ಲ. ತನ್ನ ವಿಚಾರಗಳಲ್ಲಿಯೇ ಮಗ್ನನಾದ ಆತನು ಹಾಗೇ ಮುಂದೆ ಹೋಗಿ ಬಿಡುತ್ತಾನೆ. ‘ಹಿಂದs ನೋಡದs’ ಎನ್ನುವ ಪದಪುಂಜದ ಎರಡನೆಯ ಅರ್ಥವಿದು.

ಆ ತರುಣನ ಇಂತಹ ಪ್ರತಿಕ್ರಿಯೆಯು ಅವನಲ್ಲಿ ಅವಳಿಗಿರುವ ಸೆಳೆತವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆತ ಕಾಣದಿದ್ದರೇನಾಯಿತು? ಅವಳ ಮನಸ್ಸು ಇಂದ್ರಿಯಾತೀತವಾಗಿ ಅವನ ಹಿಂದೆ ಹೋಗಿದೆಯಲ್ಲವೆ? ಅದನ್ನು ಅವಳು ಹೀಗೆ ಹೇಳುತ್ತಾಳೆ:
ಗಾಳಿ ಹೆಜ್ಜೆ ಹಿಡದ ಸುಗಂಧ
ಅತ್ತs ಅತ್ತs ಹೋಗುವಂದ
ಹೋತ ಮನಸು ಅವನ ಹಿಂದs || ಹಿಂದs…
ಹೂವಿನ ಸುಗಂಧವು ಗಾಳಿಯ ಜೊತೆಗೆ ಬೆರೆತು, ಗಾಳಿ ಹೋದಲ್ಲೆಲ್ಲ ಹೋಗುತ್ತದೆ. ಗಾಳಿ ಬೀಸಿದಾಗ ಮೊದಲು ಅದರ ಸ್ಪರ್ಶದ ಅನುಭವ ಆಗುತ್ತದೆ. ಆಬಳಿಕ ಅದರ ಜೊತೆಗಿರುವ ಕಂಪಿನ ಅನುಭವ ಆಗುತ್ತದೆ. ಆದುದರಿಂದ ಸುಗಂಧವು ಗಾಳಿಯನ್ನು ಹಿಂಬಾಲಿಸುತ್ತದೆ.

‘ಹೆಜ್ಜೆ ಹಿಡಿದು ಹೋಗುವುದು’ ಎನ್ನುವುದಕ್ಕೆ ಇರುವ ಒಂದು ವಿಶೇಷ ಅರ್ಥವನ್ನೂ ಸಹ ಇಲ್ಲಿ ಗಮನಿಸಬೇಕು. ಬೇಟೆಗಾರನು ತನ್ನ ಬೇಟೆಯನ್ನು ಹಿಂಬಾಲಿಸುವದಕ್ಕೆ ‘ಹೆಜ್ಜೆ ಹಿಡಿಯುವುದು’ ಎನ್ನುತ್ತಾರೆ. ಅದರಂತೆ ನಮ್ಮ ನಾಯಕಿಯ ಪ್ರೇಮಿಯು ಎಲ್ಲಿಯೇ ಚಲಿಸುತ್ತಿರಲಿ, ಅವಳ ಮನಸ್ಸು ಆತನ ಹೆಜ್ಜೆಯನ್ನು ಕಂಡು ಹಿಡಿದು, ಅವನನ್ನು ಹಿಂಬಾಲಿಸುತ್ತಿದೆ. ಹಾಗೆಂದು ಅವಳ ಆಕರ್ಷಣೆಯ ಬಗೆಗೆ ತಪ್ಪು ತಿಳಿಯಬಾರದು. ಅದು ಸುಗಂಧಮಯ, ಅದು ಸುಮನಸ್ಸು. ಗಾಳಿಯ ವಿರುದ್ಧ ದಿಕ್ಕಿನಲ್ಲಿ ಈ ಸುಗಂಧ ಚಲಿಸಲಾರದು. ಅದರ ದಾರಿಯು ನಿಶ್ಚಿತವಾಗಿದೆ. ಇದು ‘ಹಿಂದs ನೋಡದs’  ಎನ್ನುವ ಪದಪುಂಜದ ಮೂರನೆಯ ಅರ್ಥ.

ನಂದ ನನಗ ಎಚ್ಚರಿಲ್ಲ
ಮಂದಿಗೊಡವಿ ಏನs ನನಗs
ಒಂದೇ ಅಳತಿ ನಡದದ ಚಿತ್ತ || ಹಿಂದs…
ಹೀಗೆ ಪರವಶಳಾಗಿ ಕುಳಿತಿರುವ ಹದಿಹರೆಯದ ಹುಡುಗಿಯನ್ನು ನೋಡಿದವರು ಏನಂದಾರು?
ಆದರೆ ತನ್ನ ಖಬರೇ ತನಗೆ ಇಲ್ಲದವಳು ಮಂದಿಯ ಮಾತಿಗೆ ಗಮನ ಕೊಡುವಳೆ?
ಅವಳ ಚಿತ್ತವು ಬಾಹ್ಯ ಪರಿಸರದತ್ತ ಗಮನ ಹರಿಸದೇ ತನ್ನ ಅಂತರಂಗದ ಭಾವದಲ್ಲಿಯೇ ತಲ್ಲೀನವಾಗಿ, ಸಮವೇಗದಲ್ಲಿ ನಡೆದಿದೆ. ಅವಳ ಮನಸ್ಸು ಪ್ರೇಮದ ದಾರಿಯಲ್ಲೇ ಮುನ್ನಡೆಯುವುದು. ಇದು ಈ ಪದಪುಂಜದ ನಾಲ್ಕನೆಯ ಅರ್ಥ.

ತನ್ನ ಪ್ರೇಮವು ತಾತ್ಪೂರ್ತಿಕ ಆಕರ್ಷಣೆಯಲ್ಲ. ತನ್ನ ಮನಸ್ಸು ಆ ತರುಣನಲ್ಲಿ ಶಾಶ್ವತವಾಗಿ ನೆಟ್ಟಿದೆ ಎಂದು ಅವಳು ಹೇಳುತ್ತಾಳೆ:
ಸೂಜಿ ಹಿಂದ ಧಾರದಾಂಗ
ಕೊಳ್ಳದೊಳಗ ಜಾರಿಧಾಂಗ
ಹೋತs ಹಿಂದ ಬಾರಧಾಂಗ || ಹಿಂದs…
ಸೂಜಿಯಲ್ಲಿ ಸಿಲುಕಿಸಿದ ದಾರವು ಸೂಜಿಯನ್ನೇ ಹಿಂಬಾಲಿಸುವುದು ಅನಿವಾರ್ಯ. ಕೊಳ್ಳದಲ್ಲಿ ಜಾರುವುದು ಒಂದು ಆಕಸ್ಮಿಕ. ಹಾಗೆ ಜಾರಿದ ವ್ಯಕ್ತಿ ಮತ್ತಿಷ್ಟು ಜಾರುತ್ತ ಹೋಗುವುದೇ ಸಹಜವಾದದ್ದು. ನಮ್ಮ ನಾಯಕಿಯ ಮನಸ್ಸು ಸಹ ಹಿಂದೆ ಬಾರದಂತೆ, ಅಂದರೆ ಬದಲಾಯಿಸಲು ಅಶಕ್ಯವಾದಂತೆ ಆ ತರುಣನಲ್ಲಿ ಸಿಲುಕಿದೆ. ನಮ್ಮ ನಾಯಕಿಯು ತನ್ನ ನಿರ್ಧಾರದಲ್ಲಿ ಹಾಗು ನಿಷ್ಠೆಯಲ್ಲಿ ಅಚಲಳಾಗಿದ್ದಾಳೆ. ಆದುದರಿಂದಲೇ ಅವಳು ‘ಹಿಂದs ನೋಡದs’ ಎಂದು ಹೇಳುತ್ತಿದ್ದಾಳೆ. ಇದು ಈ ಪದಪುಂಜದ ಐದನೆಯ ಅರ್ಥ.

ಮೊದಲ ಪ್ರೇಮದ ವಿವಿಧ ಸ್ಥಿತಿಗಳನ್ನು ಬೇಂದ್ರೆಯವರು ಸುಸಂಬದ್ಧವಾಗಿ ಇಲ್ಲಿ ವರ್ಣಿಸಿದ್ದಾರೆ. ಈ ಸುಸಂಬದ್ಧತೆ ಅವರ ಕವನಗಳ ವೈಶಿಷ್ಟ್ಯವೇ ಆಗಿದೆ. ಇನ್ನು ‘ಹಿಂದs ನೋಡದs’ ಎನ್ನುವ ಪದಪುಂಜವನ್ನು ವಿಭಿನ್ನಾರ್ಥಗಳಲ್ಲಿ ಬಳಸಿರುವುದು ಬೇಂದ್ರೆ-ಪ್ರತಿಭೆಯ ದ್ಯೋತಕವಾಗಿದೆ!

‘ಹಿಂದs ನೋಡದs’ ಕವನವು ‘ಗಂಗಾವತರಣ’ ಕವನಸಂಕಲನದಲ್ಲಿ ಅಡಕವಾಗಿದೆ.

Friday, August 16, 2013

ಯೇಟ್ಸ ಕವಿಯ ಕವನವೊಂದರ ಮೂರು ಅನುವಾದಗಳು



ಇಂಗ್ಲಿಶ್ ಸಾಹಿತ್ಯದ ಮಹಾನ್ ಕವಿಯಾದ ಯೇಟ್ಸ್ ಅವರು ಬರೆದ ಕವನವೊಂದು ಇಲ್ಲಿದೆ. ಮೂಲಕವನದ ಜೊತೆಗೆ ಆ ಕವನದ ಮೂರು ಅನುವಾದಗಳನ್ನೂ ಸಹ ಇಲ್ಲಿ ಕೊಡುತ್ತಿದ್ದೇನೆ. ಮೊದಲಿನ ಎರಡು ಅನುವಾದಗಳು ಕನ್ನಡದ ಉದ್ದಾಮ ಸಾಹಿತಿಗಳು ಮಾಡಿದ ಭಾಷಾಂತರಗಳಾಗಿವೆ. ಮೂರನೆಯ ಅನುವಾದವು ಬ್ಲಾ*ಗ್ ಲೋಕದಲ್ಲಿ ಸುಪರಿಚಿತರಾದ ಶ್ರೀ ಮಂಜುನಾಥ ಕೊಳ್ಳೇಗಾಲರದು.

Crazy Jane talks with the Bishop
I met the Bishop on the road
And much said he and I.
Those breasts are flat and fallen now,
Those veins must soon be dry;
Live in a heavenly mansion,
Not in some foul sty.’

`Fair and foul are near of kin,
And fair needs foul,’ I cried.
‘My friends are gone, but that’s a truth
Nor grave nor bed denied,
Learned in bodily lowliness
And in the heart’s pride.

`A woman can be proud and stiff
When on love intent;
But love has pitched his mansion in
The place of excrement;
For nothing can be sole or whole
That has not been rent.’

ಈ ಕವನವನ್ನು ಅನಂತಮೂರ್ತಿಯವರು ಅನುವಾದಿಸಿದ ಬಗೆ ಹೀಗಿದೆ:
ಮರಳಿ ಜೇನ್ ಗೌರವಾನ್ವಿತ ಬಿಶಪ್‍ಗೆ

ಬೀದಿಯಲ್ಲಿ ಬಿಶಪ್ ಸಿಕ್ಕ
ಅವನು ಅಂದ, ನಾನೂ ಅಂದೆ;
‘ಎಂಥ ಮೊಲೆಗಳೂ ಸೊರಗಿವೆ, ಜೋತಿವೆ,
ಅನಾಳಗಳೂ ಬತ್ತಲಿವೆ.
ನಿರ್ಮಲ ಸೌಧದಿ ಬಾಳೇ ಹೆಣ್ಣೆ,
ಮಲದ ಕೂಪ ತೊರೆಯೆ.
ನಿಜದ ಠಾವು ಅರಿಯೆ.’

ನಾನದ ಕೊಡೆ: ಕೇಳೋ ತಂದೆ
ಮಲ ನಿರ್ಮಲ ನೆಂಟರಂತೆ
ಮಲವಿದ್ದೇ ಅಮಲ;
ಸಖರೆಷ್ಟೋ ಸತ್ತರು—ನಿಜ
ಗೋರಿಯಷ್ಟೇ ಸುಖದ ಶಯ್ಯೆ
ಮರೆಮಾಚದ ನಿಜವದು.

ಅರಿತದ್ದೋ ಅದು—
ಪಾಪದ ತನು ವಿನಯದಲ್ಲಿ
ಹೃದಯ ಹೆಮ್ಮೆಯಲ್ಲಿ.
ರತ್ಯಾತುರ ಹೆಣ್ಣಿಗು ಇದೆ
ಲಜ್ಜೆಯ ಬಿಗುಮಾನ;
ಪ್ರೇಮವೆಬ್ಬಿಸಿದ ಸಿರಿಸೌಧದ ಠಾವೊ
ಮಲಮೂತ್ರದ ಜಘನ;

ಬಿಡಿ ನಿಂತಿದ್ದೂ ಇಡಿ ತುಂಬಿದ್ದೂ
ಬಗೆದದ್ದೇ ಎಲ್ಲ—ಹರಿಯದೆ
ಬಗೆದದ್ದೂ ಇಲ್ಲ.’

ಇದೇ ಕವನವನ್ನು ಲಂಕೇಶರು ಹೀಗೆ ಅನುವಾದಿಸಿದ್ದಾರೆ:
ಮಳ್ಳಿ ಜೇನ್ ಮತ್ತು ಬಿಶಪ್ ಮಾತಾಡಿದ್ದು
ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕಿದ್ದ,
ಆಡಿದೆವು ಅದೂ ಇದೂ ಮಾತು.
ಅವನೆಂದ, ‘ಎಂಥ ಮೊಲೆ ಬತ್ತಿವೆ, ನರ
ಒಣಗಿ ಬೀಳಲಿವೆ ಜೋತು;
ಹೊಲಸು ಹಕ್ಕೆಯ ತೊರೆ, ಕಳೆ
ದಿನಗಳ ದೇವಾಲಯದಿ ಕೂತು.’

ಚೀರಿದೆ ನಾನು, ‘ಹೊಲಸಿಗೂ ಸೊಗಸಿಗೂ
ಬಿಡಿಸಲಾರದ ಮಿಲಾಖತ್ತು;
ಸಖರು ಹೊರಟುಹೋದರು—ಈ ವಾಸ್ತವ
ಹಾಸಿಗೆ, ಗೋರಿಗೂ ಗೊತ್ತು;
ದೇಹದ ಪತನಕೆ ಹಿಗ್ಗಿದೆ ಹೃದಯ,
ಪಡಕೊಂಡಿದೆ ಸುಖಸಂಪತ್ತು.’
ಹೆಣ್ಣು ಪ್ರೇಮಕ್ಕೆ ಮನದ ನೆಟ್ಟರೆ
ಉಬ್ಬಿ ಹೋಗುವುಳು ಸೆಡೆದು

ಕಾಮ ಮಾಡಿದ್ದೇನು, ಹಾಕಿದೆ ಡೇರೆ
ಮಲಮೂತ್ರ ಸ್ಥಾನ ಹಿಡಿದು,
ಇಲ್ಲಿ ಚಿಂದಿಯಾಗದೆ ಕಷ್ಟ, ಮತ್ತೆ
ಒಂದಾಗಿಸುವುದು ಹೊಲೆದು.’


ಈಗೊಂದು ಪ್ರಶ್ನೆ. ಮೂಲಕವನವು ಅರ್ಥವಾಗುವಷ್ಟು ಸರಳವಾಗಿ, ಮೂಲಕವನದ ಭಾವವು ಮನಸ್ಸಿಗೆ ತಟ್ಟುವಷ್ಟು ಸಮರ್ಥವಾಗಿ ಈ ಭಾಷಾಂತರಗಳು ಅರ್ಥವಾಗುತ್ತಿವೆಯೆ? ಈ ಎರಡೂ ಅನುವಾದಗಳು ಮೂಲಕವನದ ಛಂದಸ್ಸನ್ನು ನಿಖರವಾಗಿ ಹಿಂಬಾಲಿಸಿವೆ. ಎರಡೂ ಕವನಗಳಲ್ಲಿ ಪದಲೋಪವಾಗಿಲ್ಲ. ಆದರೆ ಕವನದ ಭಾವ(Spirit of the poem) ಹಾಗು ಸ್ವಭಾವ(Tone of the poem)ಗಳ ನಿರ್ಮಾಣದಲ್ಲಿ ಅನಂತಮೂರ್ತಿಯವರ ಅನುವಾದವು ಸಂಪೂರ್ಣವಾಗಿ ಸೋತು ಹೋಗಿದೆ. ಲಂಕೇಶರ ಅನುವಾದವು ಸ್ವಲ್ಪ ಮಟ್ಟಿಗೆ ಉತ್ತಮ.

ಈ ಮಾತನ್ನು ಚರ್ಚಿಸಲು ಕವನದ ಹಿನ್ನೆಲೆಯನ್ನು ಗಮನಿಸೋಣ. ಈ ಕವನದ ನಾಯಕಿ ಮೈಮಾರಿಕೊಂಡು ಜೀವಿಸುತ್ತಿರುವ,  ಹರೆಯವನ್ನು ದಾಟಿದ ಓರ್ವ ಸೂಳೆ. ಸಮಾಜದ ಚರಂಡಿಯಲ್ಲಿ ಬಿದ್ದುಕೊಂಡು ಬದುಕು ಕಟ್ಟಬೇಕಾದ ಪರಿಸ್ಥಿತಿ ಅವಳದು. ಅವಳು ದಾರಿಯಲ್ಲಿ ಹೋಗುತ್ತಿರುವಾಗ  ಅಕಸ್ಮಾತ್ತಾಗಿ ಆ ಭಾಗದ ಧರ್ಮಬೋಧಕನು ಅವಳನ್ನು ನೋಡುತ್ತಾನೆ. ‘ಪಾಪಿ’ಗಳನ್ನು ಉದ್ಧರಿಸುವುದೇ ಅವನ ಕರ್ತವ್ಯವಲ್ಲವೆ! ಈ ಸೂಳೆಯನ್ನು ಉದ್ಧರಿಸುವ ದಿವ್ಯ ಅಪೇಕ್ಷೆಯನ್ನು ಹೊಂದಿದ ಧರ್ಮಬೋಧಕನೇ ಅವಳೊಡನೆ ಮಾತನ್ನು ಪ್ರಾರಂಭಿಸುತ್ತಾನೆ ಹಾಗು ಇವಳು ಎಗ್ಗಿಲ್ಲದೆ ಅವನಿಗೆ ಪ್ರತಿಯಾಡುತ್ತಾಳೆ. ಇಷ್ಟೆಲ್ಲವನ್ನೂ ಏಟ್ಸ್ ಒಂದೇ ವಾಕ್ಯದಲ್ಲಿ ಹೇಳಿದ್ದಾನೆ:
I met the Bishop on the road
And much said he and I.
ಈ ಮಾತನ್ನು ಅನಂತಮೂರ್ತಿಯವರು ಅನುವಾದಿಸಿದ್ದು ಹೀಗೆ:
ಬೀದಿಯಲ್ಲಿ ಬಿಶಪ್ ಸಿಕ್ಕ
ಅವನು ಅಂದ, ನಾನೂ ಅಂದೆ;
ಬಿಶಪ್ಪನ ನೀತಿಬೋಧೆಯ ಆತುರವು ಈ ಅನುವಾದದಲ್ಲಿ ವ್ಯಕ್ತವಾಗುವುದಿಲ್ಲ. ಆ ನೀತಿಬೋಧೆಯಿಂದಾಗಿಯೇ ನಮ್ಮ ನಾಯಕಿಯು ಕೆರಳುತ್ತಾಳೆ ಎನ್ನುವುದೂ ಇಲ್ಲಿ ತಿಳಿಯುವುದಿಲ್ಲ!
ಇನ್ನು ಲಂಕೇಶರ ಅನುವಾದವನ್ನು ನೋಡೋಣ:
ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕಿದ್ದ,
ಆಡಿದೆವು ಅದೂ ಇದೂ ಮಾತು.
‘ಬೀದಿಯಲ್ಲೊಬ್ಬ’ ಎಂದಾಗ ಅವನು ಯಾವುದೋ ಒಬ್ಬ ಪಾದ್ರಿ ಎನ್ನುವ ಗ್ರಹಿಕೆಯಾಗುವುದೇ ಹೊರತು, ಆ ಭಾಗದ ಧರ್ಮೋಪದೇಶಕ ಎನ್ನುವ ವಿಷಯ ತಿಳಿಯುವುದಿಲ್ಲ. ಇದು ತಪ್ಪು ಭಾಷಾಂತರ. ‘ಅದೂ ಇದೂ ಮಾತಾಡಿದೆವು’ ಎನ್ನುವಾಗ, ಆ ಪಾದ್ರಿ ಮತ್ತು ಸೂಳೆ ಲೋಕಾಭಿರಾಮವಾಗಿ ಮಾತನಾಡಿದರು ಎನ್ನುವ ಅರ್ಥವನ್ನು ಈ ಅನುವಾದವು ಕೊಡುತ್ತದೆ! ಇಲ್ಲಿ ಲಂಕೇಶರು ಅನಂತಮೂರ್ತಿಗಿಂತ ಕೆಟ್ಟದಾಗಿ ಅನುವಾದಿಸಿದ್ದಾರೆ.

ಮುಂದಿನ ನುಡಿಯಲ್ಲಿ, ನಮ್ಮ ಸೂಳೆಯ ಈಗಿನ ಅನಾಕರ್ಷಕ ರೂಪವನ್ನು ಆ ಧರ್ಮಬೋಧಕನು ನೇರವಾಗಿ ಹೀಗಳೆಯಲು ಪ್ರಾರಂಭಿಸುತ್ತಾನೆ. ಇದು ಅವನಿಗಿರುವ ಸಾಮಾಜಿಕ ಪ್ರತಿಷ್ಠೆಯ ಅಹಮ್ ಅನ್ನು ತೋರಿಸುತ್ತದೆ.
Those breasts are flat and fallen now,
Those veins must soon be dry;
Live in a heavenly mansion,
Not in some foul sty.’
ಈ ಮಾತನ್ನು ಬೋಧಿಸುವಾಗ ಒಬ್ಬ ಹೆಣ್ಣುಮಗಳಿಗೆ (--ಅವಳು ಸೂಳೆಯೇ ಯಾಕಾಗಿರಲಿ--) ಗೌರವ ಕೊಡುವ ಅವಶ್ಯಕತೆ ಅವನಿಗೆ ಕಾಣುವದಿಲ್ಲ.

ಧರ್ಮಬೋಧಕನ ಇಂತಹ ಪ್ರತಿಷ್ಠಿಕೆಯ ಮನೋಭಾವ ಅನಂತಮೂರ್ತಿಯವರ ಅನುವಾದದಲ್ಲಿ ಕಾಣುವುದಿಲ್ಲ. ಬದಲಾಗಿ ಓರ್ವ ನಿರಪೇಕ್ಷ ವ್ಯಕ್ತಿಯ ನೈಜ ಉಪದೇಶದಂತೆ ಭಾಸವಾಗುತ್ತದೆ. ಯಾಕೆಂದರೆ ಅನಂತಮೂರ್ತಿಯವರು ಈ ಬೋಧನೆಯನ್ನು ಶಿಷ್ಟ, ಸುಸಂಸ್ಕೃತ ಭಾಷೆಯಲ್ಲಿ ಅನುವಾದಿಸಿದ್ದಾರೆ:
‘ಎಂಥ ಮೊಲೆಗಳೂ ಸೊರಗಿವೆ, ಜೋತಿವೆ,
ಅನಾಳಗಳೂ ಬತ್ತಲಿವೆ.
ನಿರ್ಮಲ ಸೌಧದಿ ಬಾಳೇ ಹೆಣ್ಣೆ,
ಮಲದ ಕೂಪ ತೊರೆಯೆ.
ನಿಜದ ಠಾವು ಅರಿಯೆ.’

ಈ ಮಾತನ್ನು ಲಂಕೇಶರು ಅನುವಾದಿಸಿದ್ದು ಹೀಗೆ:
ಅವನೆಂದ, ‘ಎಂಥ ಮೊಲೆ ಬತ್ತಿವೆ, ನರ
ಒಣಗಿ ಬೀಳಲಿವೆ ಜೋತು;
ಹೊಲಸು ಹಕ್ಕೆಯ ತೊರೆ, ಕಳೆ
ದಿನಗಳ ದೇವಾಲಯದಿ ಕೂತು.’

ಲಂಕೇಶರ ಅನುವಾದದಲ್ಲಿ ಧರ್ಮಬೋಧಕನು ಬಳಸುವ ಅಶಿಷ್ಟ ಭಾಷೆಯು ಮೂಲಕವನದಲ್ಲಿ ಕಾಣಬರುವ ವ್ಯಂಗ್ಯಕ್ಕೆ ಸಮಾಂತರವಾಗಿದೆ. ಮೂಲಕವನದಲ್ಲಿ ಧರ್ಮಾಧಿಕಾರಿಯು ಬಳಸುವ ಚುಚ್ಚುಮಾತು ಹಾಗು ಅವಳ ಬಗೆಗೆ ಅವನಿಗೆ ಇರುವ ತಾತ್ಸಾರವು ಲಂಕೇಶರ ಅನುವಾದದಲ್ಲಿ ವ್ಯಕ್ತವಾದಂತೆ, ಅನಂತಮೂರ್ತಿಯವರ ಅನುವಾದದಲ್ಲಿ ವ್ಯಕ್ತವಾಗಿಲ್ಲ.

ಧರ್ಮಬೋಧಕನು ಮಾಡುವ ನಾಯಕಿಯ ತುಚ್ಛೀಕರಣಕ್ಕೆ ಅವಳ ಪ್ರತಿಕ್ರಿಯೆ ಏನು? ‘I cried’ ಎಂದರೆ ಆ ಸೂಳೆಯು ಚೀರುತ್ತಾಳೆ.
`Fair and foul are near of kin,
And fair needs foul,’ I cried.
‘My friends are gone, but that’s a truth
Nor grave nor bed denied,
Learned in bodily lowliness
And in the heart’s pride.
ಧರ್ಮಬೋಧಕನ ನೀತಿಪಾಠವು ಅವಳನ್ನು ಕೆಣಕಿದೆ ಹಾಗು ಕೆರಳಿಸಿದೆ. ಕೊಳಚೆಯಲ್ಲಿ ಒತ್ತಲ್ಪಟ್ಟ ಆ ನಾಗಿಣಿಯ ಹೆಡೆಯನ್ನು ಅವನು ತುಳಿದಿದ್ದಾನೆ. ಈ ‘ಪ್ರತಿಷ್ಠಿತ, ಸಭ್ಯ ಪುರುಷನ’ ಪ್ರತಿಯಾಗಿ ಇರುವ ಅಸಹಾಯಕತೆ ಹಾಗು ರೋಷ ಅವಳನ್ನು ಭುಸುಗುಟ್ಟುವಂತೆ ಮಾಡಿದೆ

ಇದು ಅವಳ ಸಹಜ ಸ್ವಭಾವ ಇರಬಹುದು ಅಥವಾ ಧರ್ಮಾಧಿಕಾರಿಯ ಚುಚ್ಚು ಮಾತಿಗೆ ಪ್ರತಿಕ್ರಿಯೆಯಾಗಿರಬಹುದು. ಅಲ್ಲದೆ ತನ್ನ ಬದುಕು ಎಂತಹದೇ ಇದ್ದರೂ ಸಹ, ಇದು ಸಮಾಜದ್ದೇ ಸೃಷ್ಟಿ ಎನ್ನುವ ಅರಿವಿನಿಂದ ಅವಳು ಕುದಿಯುತ್ತಾಳೆ. ಆದುದರಿಂದಲೇ, ಸೊಗಸು ಹಾಗು ಕೊಳಕು ಎರಡೂ ಸಂಬಂಧಿಗಳು ಎಂದು ಕುಟುಕುತ್ತಾಳೆ. ಅರ್ಥಾತ್ ಉದಾತ್ತ ಪ್ರೇಮ ಹಾಗು ಕೊಳಕು ಕಾಮ ಇವೆರಡೂ ಬಿಡಿಸಲಾರದ ಜೋಡಿ ಎಂದು ಅವನ ಮುಖಕ್ಕೆ ರಾಚಿದಂತೆ ಹೇಳುತ್ತಾಳೆ. ತನ್ನ ಕಸುಬಿನ ದೈಹಿಕ ಅವಮಾನ ಏನೇ ಇದ್ದರೂ ಸಹ, ತನ್ನ ಆತ್ಮಗೌರವಕ್ಕೆ ಅದರಿಂದ ಚ್ಯುತಿ ಇಲ್ಲ ಎಂದು ಗಂಭೀರವಾಗಿ ಉಸುರುತ್ತಾಳೆ.

ನಾನದ ಕೊಡೆ: ಕೇಳೋ ತಂದೆ
ಮಲ ನಿರ್ಮಲ ನೆಂಟರಂತೆ
ಮಲವಿದ್ದೇ ಅಮಲ;
ಸಖರೆಷ್ಟೋ ಸತ್ತರು—ನಿಜ
ಗೋರಿಯಷ್ಟೇ ಸುಖದ ಶಯ್ಯೆ
ಮರೆಮಾಚದ ನಿಜವದು.
ಆ ಧರ್ಮಬೋಧಕನ ಮೇಲೆ ಇಷ್ಟೆಲ್ಲ ತಿರಸ್ಕಾರವಿರುವ ಆ ಹೆಣ್ಣು, ಅವನನ್ನು ‘ತಂದೆ’ ಎಂದು ಸಂಬೋಧಿಸಲು ಸಾಧ್ಯವೆ? ಕವನದ meter ಉಳಿಸಿಕೊಳ್ಳಲು ಅನಂತಮೂರ್ತಿಯವರು ಹಾಕಿರುವ ತಿಪ್ಪರಲಾಗ ಇದು! ಅಲ್ಲದೆ ಧರ್ಮಬೋಧಕನ ವಿರುದ್ಧ ಫೂತ್ಕರಿಸುತ್ತಿರುವ, ಕೊಳಚೆಯಲ್ಲಿ ಬದುಕುತ್ತಿರುವ ನಮ್ಮ ಸೂಳೆಯ ಬಾಯಿಯಿಂದ ಎಂತಹ ಅಭಿಜಾತ ಭಾಷೆ ಬರುತ್ತಿದೆ, ನೋಡಿರಿ!

ಮೂಲ ಇಂಗ್ಲಿಶ್ ಕವನವನ್ನು ಓದದೆ, ಈ ನುಡಿಯ ಅನುವಾದವನ್ನು ಮಾತ್ರ ಓದಿದರೆ, ಏನಾದರೂ ಅರ್ಥವಾದೀತೆ?  ಅಲ್ಲದೆ, ಧರ್ಮಬೋಧಕನ ಮಾತಿನಿಂದ ಆ ಹೆಣ್ಣಿಗೆ(--ಸೂಳೆಯಲ್ಲ, ಹೆಣ್ಣು--) ಆದ hurt ಕನ್ನಡ ಅನುವಾದದಲ್ಲಿ ಪ್ರತಿಫಲಿಸಿದೆಯೆ?

ಇನ್ನು ಈ ನುಡಿಯನ್ನು ಲಂಕೇಶರು ಹೇಗೆ ಅನುವಾದಿಸಿದ್ದಾರೆ?
ಚೀರಿದೆ ನಾನು, ‘ಹೊಲಸಿಗೂ ಸೊಗಸಿಗೂ
ಬಿಡಿಸಲಾರದ ಮಿಲಾಖತ್ತು;
ಸಖರು ಹೊರಟುಹೋದರು—ಈ ವಾಸ್ತವ
ಹಾಸಿಗೆ, ಗೋರಿಗೂ ಗೊತ್ತು;
ದೇಹದ ಪತನಕೆ ಹಿಗ್ಗಿದೆ ಹೃದಯ,
ಪಡಕೊಂಡಿದೆ ಸುಖಸಂಪತ್ತು.’
ಲಂಕೇಶರ ಅನುವಾದದ ಮೊದಲ ಎರಡು ಸಾಲುಗಳು ಮೂಲಕವನದ ಭಾವಕ್ಕೆ ಹೆಚ್ಚು ಹತ್ತಿರವಾಗಿದೆ ಎನ್ನಬಹುದು. ಆದರೆ ಕೊನೆಯ ಎರಡು ಸಾಲುಗಳ ಅನುವಾದದಲ್ಲಿ ಅವರು ಎಡವಿದ್ದಾರೆ. ‘Learned in bodily lowliness,
And in the heart’s pride’ ಎನ್ನುವಾಗ ಆ ಸೂಳೆಯು ‘ಹೊಲಸಿಗೂ ಸೊಗಸಿಗೂ ಬಿಡಿಸಲಾರದ ಮಿಲಾಖತ್ತು’ ಎನ್ನುವುದನ್ನು justify ಮಾಡುತ್ತಿರುವಳೇ ಹೊರತು, ‘ದೇಹದ ಪತನಕೆ ಹಿಗ್ಗಿದ ಹೃದಯ’ ಎಂದು ಭಾವಿಸುತ್ತಿಲ್ಲ.

ಕೊನೆಯ ನುಡಿಯಲ್ಲಿ ಯೇಟ್ಸ ಕವಿಯು ಪ್ರೇಮ-ಕಾಮಗಳ ವಾಸ್ತವತೆಯನ್ನು ಬಯಲು ಪಡಿಸುತ್ತಾನೆ.
`A woman can be proud and stiff
When on love intent;
But love has pitched his mansion in
The place of excrement;
For nothing can be sole or whole
That has not been rent.’

ಈ ನುಡಿಯಲ್ಲಿಯ ಈ ಸಾಲುಗಳನ್ನು ಗಮನಿಸಿ:
`A woman can be proud and stiff
When on love intent;’

ಯೇಟ್ಸರ ನಾಯಕಿ ಸೂಳೆಯೇ ಆದರೂ ಸಹ ಅವಳಿಗೂ ಪ್ರೇಮಿಸಬಲ್ಲ ಹೃದಯ ಹಾಗು ಆತ್ಮಗೌರವ ಇವೆ. ತನ್ನ ನೈಜಪ್ರೇಮಿಯ ಜೊತೆಗೆ ಕೂಡುವಾಗ ಅವಳಿಗೆ ಪ್ರೇಮ ಹಾಗು ಕಾಮದ ಉತ್ಕಟತೆಯ ಅನುಭವ ಆಗಬಹುದು. ಅಂತಹ ಸ್ಥಿತಿಯನ್ನು ಅನಂತಮೂರ್ತಿಯವರು ‘ರತ್ಯಾತುರ ಹೆಣ್ಣು’ ಎಂದು ವರ್ಣಿಸುತ್ತಿದ್ದಾರೆ. ಅಂದರೆ ಮೂಲಕವನದಲ್ಲಿ ಇಲ್ಲದ ಅರ್ಥವನ್ನು ಅನಂತಮೂರ್ತಿಯವರು ತಮ್ಮ ಕವನದಲ್ಲಿ ಅನವಶ್ಯಕವಾಗಿ ಸೇರಿಸಿದ್ದಾರೆ. ಆದರೆ ‘ಹೆಣ್ಣು ಪ್ರೇಮಕ್ಕೆ ಮನದ ನೆಟ್ಟರೆ ಉಬ್ಬಿ ಹೋಗುವುಳು ಸೆಡೆದು’ ಎಂದು ಲಂಕೇಶರು ಅನುವಾದಿಸಿದ್ದು ಮೂಲಕ್ಕೆ ಹೆಚ್ಚು ಹತ್ತಿರವಾಗಿದೆ!

ಯೇಟ್ಸನ ಕವನದ ಕೊನೆಯ ನಾಲ್ಕು ಸಾಲುಗಳು ಹೀಗಿವೆ:
But love has pitched his mansion in
The place of excrement;
For nothing can be sole or whole
That has not been rent.’

ಕೊನೆಯ ಸಾಲುಗಳು ತುಂಬ ಅರ್ಥಗರ್ಭಿತವಾಗಿವೆ. ಯಾವುದನ್ನು ನಾವು ‘ಪ್ರೇಮ’ ಎಂದು ಕರೆಯುತ್ತೇವೆಯೋ, ಅದಕ್ಕೆ ಕಾಮದ drive ಬೇಕು.  ದಿವ್ಯಪ್ರೇಮವೆಂದು ಕರೆಯುವ ಭಾವವು ಮಲದ ಗುಂಡಿಯಲ್ಲಿಯೇ ತನ್ನ ಡೇರೆಯನ್ನು ಹೊಡೆದಿದೆ. ಇಲ್ಲಿ ಮತ್ತೊಂದು ಶ್ಲೇಷೆಯನ್ನು ಗಮನಿಸಬೇಕು:

ಇಂಗ್ಲೀಶಿನಲ್ಲಿ ನಪುಂಸಕಲಿಂಗದ ವಸ್ತುಗಳನ್ನು ಪುಲ್ಲಿಂಗ ಅಥವಾ ಸ್ತ್ರೀಲಿಂಗದಲ್ಲಿ ಯೋಜಿಸುವುದು ವಾಡಿಕೆಯ ಮಾತಾಗಿದೆ. ಉದಾಹರಣೆಗೆ ship ಇದನ್ನು ಸ್ತ್ರೀಲಿಂಗದಲ್ಲಿ she ಎಂದು ಅವರು ಕರೆಯುತ್ತಾರೆ. ಇಲ್ಲಿ loveಅನ್ನು ಪುಲ್ಲಿಂಗದಲ್ಲಿ ಬಳಸುತ್ತ, `ಅವನು’ ತನ್ನ ಭವ್ಯಸೌಧವನ್ನು …..’ ಎಂದು ಹೇಳಲಾಗಿದೆ. ಅರ್ಥಾತ್ ಈ ಪ್ರೇಮ-ಕಾಮದ ವಿಪರ್ಯಾಸವು ಗಂಡಸರ ಕರಾಮತ್ತು ಎನ್ನುವ ಭಾವನೆ ಇಲ್ಲಿ ವ್ಯಕ್ತವಾಗುತ್ತಿದೆ.  ಎರಡನೆಯದಾಗಿ ಮೊದಲನೆಯ ನುಡಿಯಲ್ಲಿ ಧರ್ಮಬೋಧಕನು ಹೇಳುವ ‘Live in a heavenly mansion..’ ಎನ್ನುವಲ್ಲಿಯ mansionಗೆ ವ್ಯಂಗ್ಯವಾಗಿ, ನಮ್ಮ ನಾಯಕಿಯು  ‘But love has pitched his mansion..’ ಎಂದು ಹೇಳುತ್ತಿದ್ದಾಳೆ. ಈ ಎರಡು mansionಗಳ ನಡುವಿನ ಅಂತರವನ್ನು ಗಮನಿಸಬೇಕು! ಈ ವ್ಯಂಗ್ಯ ಅನಂತಮೂರ್ತಿಯವರ ಅನುವಾದದಲ್ಲಾಗಲೀ, ಲಂಕೇಶರ ಅನುವಾದದಲ್ಲಾಗಲೀ ಕಾಣುವದಿಲ್ಲ.


ಒಟ್ಟಿನಲ್ಲಿ, ಈ ಸಾಲುಗಳಲ್ಲಿರುವ ಅಡಗಿರುವ ಅರ್ಥವನ್ನು ಅನುವಾದದಲ್ಲಿ ತರಲು ಅನಂತಮೂರ್ತಿ ಹಾಗು ಲಂಕೇಶರು ಸೋತು ಹೋಗಿದ್ದಾರೆ. ಆದರೆ ಈ ಸಾಲುಗಳಲ್ಲಿರುವ ಭಾವವನ್ನು ಸೂಚಿಸುವಂತಹ ತ್ರಿಪದಿಯೊಂದು ಕನ್ನಡದಲ್ಲಿ ಇದೆ! ಆ ತ್ರಿಪದಿಯನ್ನು ಓದುವ ಮೊದಲು ಅದರ ಹಿಂದಿನ ಕತೆಯನ್ನಷ್ಟು ಕೇಳೋಣ:

ಹದಿನೇಳನೆಯ ಶತಮಾನದ ಮಹಾನ್ ಕವಿ ಹಾಗು ಲೋಕಶಿಕ್ಷಕನಾದ ಸರ್ವಜ್ಞನು ವೇಶ್ಯೆಯರ ಬಗೆಗೆ ಅನುದಾರವಾಗಿ ವಚನಿಸುವುದನ್ನು ಕಂಡ ಹೆಣ್ಣುಮಗಳೊಬ್ಬಳು ಅವನಿಗೆ ವಚನರೂಪದಲ್ಲಿಯೇ ಈ ರೀತಿಯಾಗಿ ತಿವಿಯುತ್ತಾಳಂತೆ:

ಉಚ್ಚೆಯಾ ಬಚ್ಚಲವು ತುಚ್ಛವೆನ್ನಲು ಬೇಡ    
ಅಚ್ಯುತನು ಬಿದ್ದ, ಅಜ  ಬಿದ್ದ, ನಿಮ್ಮಪ್ಪ
ಎಚ್ಚತ್ತೆ ಬಿದ್ದ, ಸರ್ವಜ್ಞ!

ಈ ತ್ರಿಪದಿಯನ್ನು ಹೇಳಿದ ಹೆಣ್ಣಿಗೆ ಇರುವ ಆತ್ಮಗೌರವ ಹಾಗು ಅವಳು ಬಳಸುವ ಭಾಷೆಗೂ, ಯೇಟ್ಸನ ನಾಯಕಿಗೆ ಇರುವ ಆತ್ಮಗೌರವ ಹಾಗು ಅವಳು ಬಳಸುವ ಭಾಷೆಗೂ ಸಾಮ್ಯತೆ ಇದೆಯಲ್ಲವೆ? ಯೇಟ್ಸನ ಕವನದಂತೆ ಈ ತ್ರಿಪದಿಯೂ ಸಹ ಭಾಷೆಯಲ್ಲಿ ಸರಳವಾಗಿ ಹಾಗು ಭಾವದಲ್ಲಿ ಸಂಕೀರ್ಣವಾಗಿ ಇರುವುದಲ್ಲವೆ! ಮೂಲಕವನದಲ್ಲಿ ಇರುವ ಸರಳತೆಯು ಅನಂತಮೂರ್ತಿಯವರ ಅನುವಾದದಲ್ಲಿ ಮಾಯವಾಗಿದೆ; ಅನುವಾದವು ಅರ್ಥವಾಗದಂತೆ ಜಟಿಲವಾಗಿದೆ. ಒಟ್ಟಿನಲ್ಲಿ ಅನಂತಮೂರ್ತಿ ಹಾಗು ಲಂಕೇಶರ ಅನುವಾದಗಳು ತಿಣುಕಾಟದ ಭಾಷಾಂತರಗಳಾಗಿವೆ.

ಹಾಗಿದ್ದರೆ ಸಮರ್ಪಕ ಅನುವಾದ ಅಥವಾ ‘ಸಾರ್ಥಕ ಅನುವಾದ’ವೆಂದು ಯಾವುದಕ್ಕೆ ಹೇಳಬೇಕು? ಪದಶಃ ಅನುವಾದವು ಕೇವಲ ಭಾಷಾಂತರವಾಗುತ್ತದೆಯೇ ಹೊರತು ‘ಸಾರ್ಥಕ ಅನುವಾದ’ವಾಗುವುದಿಲ್ಲ. ಮೂಲಕವನದ ಭಾವ(Spirit) ಹಾಗು ಸ್ವಭಾವ(Tone) ಇವು ಅನುವಾದದಲ್ಲಿ ಮೂಡಬೇಕು. ಯೇಟ್ಸನ ಕವನವು ಸರಳವಾಗಿದೆ. ಅದರ ಭಾವವು ಸ್ಪಷ್ಟವಾಗಿದೆ. ಆದರೆ ಅನಂತಮೂರ್ತಿಯವರ ಕವನದಲ್ಲಿ ಮೂಲಕವನದ ಭಾವವು ಕಾಣದಾಗಿದೆ. ಸಮಾಜದ ದೃಷ್ಟಿಯಲ್ಲಿ ಪತಿತಳಾದ ಈ ಹೆಣ್ಣಿನ Self, ಭದ್ರಸಮಾಜದವರಿಗಿಂತ ಕಡಿಮೆಯದಲ್ಲ ಎನ್ನುವ ಭಾವವು ಅನಂತಮೂರ್ತಿಯವರ ಅನುವಾದದಲ್ಲಿ ವ್ಯಕ್ತವಾಗುವುದಿಲ್ಲ. ಲಂಕೇಶರ ಅನುವಾದದ ಹಣೆಬರಹವೂ ಅಷ್ಟೇ. ಅನಂತಮೂರ್ತಿ ಹಾಗು ಲಂಕೇಶ ಇವರೀರ್ವರೂ ಈ ಕವನದಲ್ಲಿ ಕಾಮಕ್ಕೆ ನೀಡಲಾದ ಸ್ಥಾನದ ಬಗೆಗೆ ಹೆಚ್ಚು ಉತ್ಸುಕರಾಗಿದ್ದಾರೆಯೇ ಹೊರತು, ಆ ಸೂಳೆಯು ಸಮಾಜದ ದ್ವಂದ್ವ ಮುಖದಿಂದ ತ್ರಸ್ತಳಾಗಿದ್ದಾಳೆ ಎನ್ನುವ ಮಹತ್ವದ ಅಂಶವನ್ನು ನಿರ್ಲಕ್ಷಿಸಿದ್ದಾರೆ.

ಇನ್ನು ಕವನದ ಸ್ವಭಾವವನ್ನು (Tone) ನಿಶ್ಚಿತಗೊಳಿಸುವದು ಅಲ್ಲಿ ಬಳಸಲಾದ ಭಾಷೆಯ ಕೆಲಸ. ಈ ಉದ್ದೇಶದಿಂದ ಯೇಟ್ಸ ಕವಿಯು ಸೂಳೆಯಾಡುವ ಭಾಷೆಯಲ್ಲಿ ಗಾವಿಲತನವನ್ನು ಬಳಸಿದ್ದಾನೆ. ಆದರೆ, ಅನಂತಮೂರ್ತಿಯವರದಾದರೋ ಸುಸಂಸ್ಕೃತ ಪಾಂಡಿತ್ಯಭರಿತ ಭಾಷೆ! ಎಂತಹ ಆಭಾಸ! ಲಂಕೇಶರ ಭಾಷೆಯು ಅನಂತಮೂರ್ತಿಯವರ ಭಾಷೆಗಿಂತ ಮೂಲಕವನಕ್ಕೆ ಹತ್ತಿರವಾಗಿದೆ ಎಂದಷ್ಟೇ ಹೇಳಬಹುದು.

ಸಮರ್ಪಕ ಅನುವಾದವನ್ನು ಹೇಗೆ ಮಾಡಬೇಕೆಂದು ಅರಿಯಬೇಕಾದರೆ, ಬೇಂದ್ರೆಯವರ ಅನುವಾದಗಳ ಅಧ್ಯಯನವನ್ನು ಮಾಡಬೇಕು. ವಿವೇಕಾನಂದರು ರಚಿಸಿದ ಕವನವೊಂದರ ಅನುವಾದವನ್ನು ಇಲ್ಲಿ ನೋಡಬಹುದು. ಅದರಂತೆ ಫಿಲಿಪೀನಾದ ಸ್ವಾತಂತ್ರ್ಯಯೋಧನಾದ ಜೋಸೆ ರಿಝಾಲನು ಗಲ್ಲಿಗೇರುವ ಮೊದಲು ರಚಿಸಿದ ಕವನದ ಅನುವಾದವನ್ನು ಬೇಂದ್ರೆ ಮಾಡಿದ್ದಾರೆ. ವಿಶ್ವಸಾಹಿತ್ಯದ ಶ್ರೇಷ್ಠ ಅನುವಾದಗಳಲ್ಲಿ ಈ ಅನುವಾದವನ್ನು ಸೇರಿಸಬಹುದು.

ಇನ್ನು ಕಾಳಿದಾಸನ ‘ಮೇಘದೂತ’ ಕಾವ್ಯದ ಬೇಂದ್ರೆಯವರ ಅನುವಾದವನ್ನು ಸ್ವಲ್ಪ ಪರಿಶೀಲಿಸೋಣ. ಆ ಕಾವ್ಯದ ನುಡಿಯೊಂದು ‘ಆಷಾಢಸ್ಯ ಪ್ರಥಮೇ ದಿವಸೇ’ (=ಆಷಾಢಮಾಸದ ಮೊದಲ ದಿನದಂದು) ಎಂದು ಪ್ರಾರಂಭವಾಗುತ್ತದೆ. ಬೇಂದ್ರೆಯವರು ಈ ಸಾಲನ್ನು ಪದಶಃ ಅನುವಾದಿಸದೆ, ‘ಕಾರಹುಣ್ಣಿವೆಯ ಮಾರನೆಯ ದಿನ’ ಎಂದು ಅನುವಾದಿಸಿದ್ದಾರೆ. ಇದರ ಕಾರಣವೆಂದರೆ, ಉತ್ತರ ಭಾರತದಲ್ಲಿ ಪ್ರತಿ ಮಾಸವು ಹುಣ್ಣಿವೆಯ ಮಾರನೆಯ ದಿನದಿಂದ ಪ್ರಾರಂಭವಾದರೆ, ದಕ್ಷಿಣ ಭಾರತದಲ್ಲಿ ಅಮವಾಸ್ಯೆಯ ಮಾರನೆಯ ದಿನದಿಂದ ಪ್ರಾರಂಭವಾಗುತ್ತದೆ. ಅನುವಾದಕರಿಗೆ ಇಂತಹ ಔಚಿತ್ಯಪ್ರಜ್ಞೆ ಅವಶ್ಯವಾಗಿದೆ. ಈ ಸಾಲನ್ನು ಪದಶಃ ಭಾಷಾಂತರಿಸಿದ್ದರೆ, ಅರ್ಥವು ಅನರ್ಥವಾಗುತ್ತಿತ್ತು!

ಯೇಟ್ಸ ಕವಿಯ ಕವನವನ್ನು ಅನುವಾದಿಸಿದವರು ವಿಶ್ವವಿದ್ಯಾಲಯದ ಬೋಧಕವರ್ಗದಲ್ಲಿದ್ದಂತಹ ಪಂಡಿತರು. ಆವರ ಅನುವಾದಗಳನ್ನಲ್ಲದೆ, ಶ್ರೀ ಮಂಜುನಾಥ ಕೊಳ್ಳೇಗಾಲರು ತಮ್ಮ ಬ್ಲಾ॑ಗಿನಲ್ಲಿ ಪ್ರಕಟಿಸಿದ ಅನುವಾದವೊಂದನ್ನು ಇಲ್ಲಿ ಕೊಡುತ್ತಿದ್ದೇನೆ. ಇವರ ಅನುವಾದವು  ಅನಂತಮೂರ್ತಿ ಹಾಗು ಲಂಕೇಶ ಇವರ ಭಾಷಾಂತರಗಳಿಗಿಂತ ಉತ್ತಮವಾಗಿರುವದನ್ನು ಗಮನಿಸಬಹುದು. ಇದರ ತಾತ್ಪರ್ಯವೇನೆಂದರೆ, ಒಂದು ಕವನದ ‘ಸಾರ್ಥಕ ಅನುವಾದ’ಕ್ಕೆ ಬೇಕಾದದ್ದು ಸರಿಯಾದ ಮನೋಧರ್ಮವೇ ಹೊರತು ವಿಶ್ವವಿದ್ಯಾಲಯದ ಪಾಂಡಿತ್ಯವಲ್ಲ!

ದಾರಿಯಲ್ಲಿ ಆ ಪಾದ್ರಿ ಸಿಕ್ಕಿದ್ದ
ಅದೂ ಇದೂ ಮಾತಾಡಿದೆವು.
"ಎಂಥ ಮೊಲೆ, ಹೇಗೆ ಬತ್ತಿಹೋಗಿವೆ ನೋಡು,
ನರಗಳಿನ್ನೇನು ಸೊರಗುವುವು;
ನಡೆಯಿನ್ನಾದರು ಸ್ವರ್ಗದಲಿ ಬದುಕು
ಸಾಕೀ ನರಕದ ಕೊಳೆ ಬದುಕು"

"ಕೊಳಕಿಗು ಥಳುಕಿಗು ಬಿಡದಿಹ ನಂಟು
ಅಗಲಿ ಇರವು ಅವು" - ಚೀರಿದೆ ನಾನು,
"ಸಖರು ಹೋದರೂ ಗೋರಿಯೂ ತಿಳಿದಿದೆ
ಸುಖದ ಶಯ್ಯೆಯೂ ನಿಜವಿದನು.
ಈ ಪತಿತ ದೇಹದಲೆ, ವಿನಯದಿ ಹೆಮ್ಮೆಯ
ಮನದಿ ಅರಿತೆನೀ ಸತ್ಯವನು"

"ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!
ಹರಿಯದ ಬಿರಿಯದ ಒಂದಿದ್ದರೆ ಅದ
ಹೊಲೆವುದು ತಾನೇ ಎಲ್ಲಿ?"

ಮೂಲಕವನದ ಭಾವಕ್ಕೆ ಮಂಜುನಾಥರ ಅನುವಾದವು ಹತ್ತಿರದಲ್ಲಿದೆ ಎನ್ನಬಹುದು.

ಯೇಟ್ಸ ಕವಿಯ ಈ ಕವನದಲ್ಲಿ ಸಾಮಾಜಿಕ ವೈಷಮ್ಯದ ಜೊತೆಗೆ, ಪುರುಷಪ್ರಧಾನ ಸಮಾಜವ್ಯವಸ್ಥೆಯ ಭಂಡತನವೂ ಸಹ ವ್ಯಕ್ತವಾಗುತ್ತಿದೆ ಎನ್ನುವುದನ್ನು ಗಮನಿಸಬೇಕು.