Friday, January 20, 2012

ಬೇಂದ್ರೆ-ಕಾವ್ಯ ಶೈಲಿ

ಭಾಷೆ, ಛಂದಸ್ಸು ಹಾಗು ಅಲಂಕಾರ ಇವು ಕಾವ್ಯಶೈಲಿಯ ಮೂರು ಅಂಗಗಳಾಗಿವೆ. ಬೇಂದ್ರೆಯವರ ಕಾವ್ಯಶೈಲಿಯನ್ನು ಅರಿತುಕೊಳ್ಳುವದು ಎಂದರೆ ಸಮುದ್ರವನ್ನು ಅಳೆದಂತೆ. ಅವರ ಕವನಗಳ ಭಾಷಾವೈವಿಧ್ಯವು ಬೆರಗುಗೊಳಿಸುವಂತಹದು. ಅಚ್ಚಗನ್ನಡ, ಸಂಸ್ಕೃತಭೂಯಿಷ್ಠ ಕನ್ನಡ, ಹಳ್ಳಿಯ ಆಡುನುಡಿ, ಮಿಶ್ರಕನ್ನಡ ಇವೆಲ್ಲವೂ ಅವರ ಕವನಗಳಲ್ಲಿ ಬಳಕೆಯಾಗಿವೆ. ಅವರು ಬಳಸಿದ ಭಾಷೆಯು ಯಾವುದೇ ಆಗಿರಲಿ, ಅದು ಕವನದ ಆಶಯಕ್ಕೆ ಸಮರ್ಪಕವಾದ ವಾಹನವಾಗಿರುವದು ಅವರ ಪ್ರತಿಭೆಯ ನಿದರ್ಶನವಾಗಿದೆ. ಅವರ ಕವನಗಳ ಭಾಷಾವೈವಿಧ್ಯದ ಅಂದಾಜು ಮಾಡಲು ಅವರ ಕೆಲವೊಂದು ಕವನಗಳನ್ನು ಇಲ್ಲಿ ಪರಿಶೀಲಿಸೋಣ:

ಮೊದಲನೆಯದಾಗಿ ಆಡುನುಡಿಯನ್ನು ಬಳಸಿರುವ, ಜಾನಪದ ಧಾಟಿಯ ಅವರ ಕವನವೊಂದನ್ನು ನೋಡೋಣ. ‘ಒಲುಮೆಯ ಕಿಚ್ಚು’ ಎನ್ನುವ ಕವನದ ಎರಡನೆಯ ನುಡಿ ಹೀಗಿದೆ:
“ಸುಗ್ಗಿ ನಗಿ ನಕ್ಕಾಗ ಮೊಗ್ಗು ಬಿಚ್ಚಿತ ಒಳಗ
ಹಿಗ್ಗಿ ಪಾಡಾಗಿ ಮಾಗಿಸಿತು ಹರೆಯವು
ಬಗ್ಗದ ಎದೆಯ ಬಾಗಿಸಿತು ”

ಹದಿಹರೆಯದ ಹಳ್ಳಿಯ ಹುಡುಗಿಯೊಬ್ಬಳು ತನ್ನ ಜೀವದ ಗೆಳತಿಯೊಡನೆ ಹಂಚಿಕೊಳ್ಳುತ್ತಿರುವ ಆಪ್ತವಾದ ಮಾತಿದು. ಸುಗ್ಗಿಯ ಕಾಲವೆಂದರೆ ಹೊಲದಲ್ಲಿಯ ಪೈರು ಮಾಗುವ ಕಾಲ. ಈ ಹುಡುಗಿಯೂ ಈಗ ದೈಹಿಕವಾಗಿ ಹಾಗು ಮಾನಸಿಕವಾಗಿ ಮಾಗುತ್ತಿದ್ದಾಳೆ. ಇದನ್ನು ಸೂಚಿಸಲು ಅವಳು ಬಳಸುವ ರೂಪಕಗಳು ಜಾನಪದ ರೂಪಕಗಳಾಗಿವೆ; ಬಳಸುವ ಭಾಷೆ ಜಾನಪದ ಭಾಷೆಯಾಗಿದೆ. ಜಾನಪದ ಭಾಷೆ ಹಾಗು ಗ್ರಾಮೀಣ ಭಾಷೆ ಎರಡೂ ಒಂದೇ ಅಲ್ಲ. ಜಾನಪದ ಭಾಷೆ ಎಂದರೆ ಗ್ರಾಮೀಣ ಸಂಸ್ಕೃತಿಯು ತನ್ನದೇ ಆದ ಸಾಹಿತ್ಯಕ್ಕಾಗಿ ಸೃಷ್ಟಿಸಿಕೊಂಡ ಭಾಷೆ. ಗ್ರಾಮೀಣ ಭಾಷೆ ಎಂದರೆ ಹಳ್ಳಿಗರ ಸದ್ಯದ ಆಡುನುಡಿ. ಗ್ರಾಮೀಣ ಆಡುನುಡಿಯ ಉದಾಹರಣೆ ಎಂದು ಅವರ ‘ಕಗ್ಗ’ ಕವನವನ್ನು ನೋಡಬಹುದು. ಈ ಕವನದ ಎರಡನೆಯ ನುಡಿ ಹೀಗಿದೆ:
“ಹಸು ಕೂಡs ಕಟ್ಟಿದ್ದುಂಟು
ಬಸವಣ್ಣsನೂ ಹುಟ್ಟಿದ್ದುಟು
ಮುಟ್ಟಿದ್ದೆಲ್ಲಾ ‘ಬೂದಿ’ ಮಾಡಿದಾ ಭಸ್ಮಾಸುರಾss
ಅವನ ನೀಗಿಸಿ ಬಿಟ್ಟಿತಣ್ಣಾ ಮೋಹಿನಿ ಅವತಾರಾ.”

ಹಸುವು ಗರ್ಭ ಧರಿಸುವದಕ್ಕೆ ಹಳ್ಳಿಗರು ‘ಕಟ್ಟುವದು’ ಎನ್ನುತ್ತಾರೆ. ಹಸುವು ಕಟ್ಟಿದ ಮೇಲಷ್ಟೆ ಆದಕ್ಕೆ ಬಸವಣ್ಣ ಅಂದರೆ ಹೋರಿಗರು ಹುಟ್ಟಲು ಸಾಧ್ಯ. ಆದರೆ ಬಸವಣ್ಣನು ‘ಭವಿ’ ಅಲ್ಲ ಅರ್ಥಾತ್ ಅವನು ಭೂಲೋಕದಲ್ಲಿ ಹುಟ್ಟಿದರೂ ಸಹ ಅವನದು ಅವತರಣ ಮಾತ್ರ. ಈ ಕವನದ ಭಾಷೆ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಹಳ್ಳಿಗರು ಬಳಸುತ್ತಿದ್ದ ಆಡುನುಡಿಯಾಗಿದೆ. ನೋಡಲು ಸರಳವೆನಿಸುವ ಈ ನುಡಿಯನ್ನು ತಿಳಿದುಕೊಳ್ಳಲು ಗ್ರಾಮೀಣ ಹಾಗು ಪೌರಾಣಿಕ ಹಿನ್ನೆಲೆಗಳನ್ನು ಅರಿತಾಗ ಮಾತ್ರ ಸಾಧ್ಯ!

ಬೇಂದ್ರೆಯವರ ಸಂಸ್ಕೃತಭೂಯಿಷ್ಠ ಭಾಷೆಯ ಉದಾಹರಣೆಗಾಗಿ ‘ಏಲಾಗೀತೆ’ ಎನ್ನುವ ಕವನವನ್ನು ಗಮನಿಸಬಹುದು. ಈ ಕವನದ ಮೊದಲ ನುಡಿ ಹೀಗಿದೆ:
“ಏಲಾವನ ಲವಲೀವನ ಲವಂಗವನಗಳಲಿ
ನಾಗಲತಾ ಸಂಕುಲ ಬನವಾಸಿಯ ಜನಗಳಲಿ
ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿ ”
ಈ ಕವನದಲ್ಲಿ ಲಲಿತ ಹಾಗು ಸಂಸ್ಕೃತಭೂಯಿಷ್ಠ ಭಾಷೆಯ ಬಳಕೆಯಾಗಿದೆ. ಇದು ಸಂಸ್ಕೃತವ್ಯಾಮೋಹದ ಪರಿಣಾಮವಲ್ಲ! ಅನುರಣಿಸುವ ಮೃದುಪದಗಳಿಂದ ಈ ಕವನದಲ್ಲಿ ಅಪೂರ್ವವಾದ ನಾದಬಂಧುರತೆಯನ್ನು ಸಾಧಿಸಲಾಗಿದೆ.

ಬೀದರ ಶಹರದಲ್ಲಿ ವಾರ್ತಾ ಇಲಾಖೆಯವರು ಹಮ್ಮಿಕೊಂಡ ಕವಿಗೋಷ್ಠಿಗಾಗಿ ಬೇಂದ್ರೆಯವರು ರಚಿಸಿದ ಕವನವು ಮಿಶ್ರಭಾಷೆಯ ಬಳಕೆಯ ಉತ್ಕೃಷ್ಟ ಉದಾಹರಣೆಯಾಗಿದೆ. ‘ಕವಿಗಳ ಕಾಣಿಕಿ’ ಎನ್ನುವ ಆ ಕವನದ ಒಂದು ನುಡಿ ಹೀಗಿದೆ:
“ಸಲಾಮ್ ಮಾಡ್ತೇವಿ ಶಾಹೀರಿ ವಾಣೀಗೆ
ಜಗ ಜಾಹೀರ ವಜ್ರದ ಖಾಣೀಗೆ
ಕಾಳಾಬಝಾರ ಹಜಾರ ಇದ್ರೂ
ಬಾಳೋ ಉಸಿರಿಗೆ ಒಂದೇ ಹೆಸರು:
ಅದು ಕವಿ ಕಾಣಿಕೀ
ಅದಕ್ಕ ಬೇಕಿಲ್ಲ ಬ್ಯಾರೆ ಆನಿಕಿ”

ಬೇಂದ್ರೆಯವರು ತಮ್ಮ ಕವನಗಳಲ್ಲಿ ಕನ್ನಡ ಹಾಗು ಸಂಸ್ಕೃತದ ವಿವಿಧ ಛಂದಸ್ಸುಗಳನ್ನು ಬಳಸಿದ್ದಾರೆ. ಕವನದ ಭಾವವನ್ನು ಆತ್ಮವೆಂದು ಕರೆದರೆ, ಛಂದಸ್ಸನ್ನು ದೇಹವೆಂದು ಕರೆಯಬಹುದು. ಬೇಂದ್ರೆಯವರ ಪ್ರತಿ ಕವನದ ಛಂದಸ್ಸು ಆಯಾ ಕವನದ ಭಾವಕ್ಕೆ ಪೂರಕವಾದಂತಹದು. ಉದಾಹರಣೆಗೆಂದು ಅವರ ‘ಪಾತರಗಿತ್ತಿ ಪಕ್ಕಾ’ ಕವನವನ್ನು ನೋಡಬಹುದು. ಪಾತರಗಿತ್ತಿಯ ಅಂದರೆ ಚಿಟ್ಟೆಯ ಹಾರಾಟವು ಎಷ್ಟು ಲಘುಗತಿಯದಾಗಿರುವದೋ, ಈ ಕವನದ ಛಂದಸ್ಸು ಸಹ ಅಷ್ಟೇ ಕ್ಷಿಪ್ರಗತಿಯದಾಗಿದೆ.
‘ಪಾತರಗಿತ್ತಿ ಪಕ್ಕಾ
ನೋಡಿದೇನ ಅಕ್ಕಾ’ ಎಂದು ಹಾಡಿದಾಗ ಚಿಟ್ಟೆಯೇ ನಮ್ಮ ಕಣ್ಣೆದುರು ಚಲಿಸುತ್ತಿರುವಂತೆ ಭಾಸವಾಗುವದು. ಇನ್ನು ಕೆಲವು ಕವನಗಳನ್ನು ಬೇಂದ್ರೆಯವರು ದೀರ್ಘ ಛಂದಸ್ಸಿನಲ್ಲಿ ರಚಿಸಿದ್ದಾರೆ. ಉದಾಹರಣೆಗೆ ಅವರ ‘ಅಷ್ಟು ಪ್ರೀತಿ, ಇಷ್ಟು ಪ್ರೀತಿ’ ಎನ್ನುವ ಕವನವನ್ನು ನೋಡಿರಿ.
‘ಅಷ್ಟು ಪ್ರೀತಿ, ಇಷ್ಟು ಪ್ರೀತಿ ಎಣಿಸಿ ಕಷ್ಟಬಡೆದಿರು, ಒಲೆದು ಒಲಿಸಿ ಸುಖದಿರು;
ಎಷ್ಟೆ ಇರಲಿ ಅಷ್ಟೆ ಮಿಗಿಲು, ತಮ್ಮ ಕಿರಣ ತಮಗೆ ಹಗಲು, ಉಳಿದ ಬೆಳಕು ಕತ್ತಲು;
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು, ಉಳಿದ ಲೋಕ ಹಿತ್ತಲು;’
ದೀರ್ಘವಾದ ಕಲ್ಪನೆಗೆ ತಕ್ಕಂತೆ ದೀರ್ಘವಾದ ಛಂದಸ್ಸಿನಲ್ಲಿಯೇ ಈ ಕವನವನ್ನು ಹೆಣೆಯಲಾಗಿದೆ!

ಬೇಂದ್ರೆಯವರ ಅನುವಾದ ಕವನಗಳ ಛಂದಸ್ಸುಗಳ ಬಗೆಗೂ ಒಂದು ಮಾತನ್ನು ಇಲ್ಲಿ ಹೇಳುವದು ಅವಶ್ಯವಿದೆ. ಸಂಸ್ಕೃತ ಮಂದಾಕ್ರಾಂತ ವೃತ್ತದಲ್ಲಿದ್ದ ಕಾಳಿದಾಸನ ‘ಮೇಘದೂತ’ ಕಾವ್ಯದ ಅನುವಾದಕ್ಕಾಗಿ ಅವರು ಕನ್ನಡ ಮಂದಾಕ್ರಾಂತ ಛಂದಸ್ಸನ್ನು ಸೃಷ್ಟಿಸಿದರು.

ಫಿಲಿಪೀನ ದೇಶದ ಸ್ವಾತಂತ್ರ್ಯಯೋಧರಾದ ಜೋಸ ರಿಝಾಲರು ರಚಿಸಿದ My Last Farewell ಕವನವನ್ನು ಬೇಂದ್ರೆಯವರು ‘ನಮ್ಮ ಕೊನೆಯ ಶರಣು’ ಎನ್ನುವ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ. ಇದರ ಛಂದಸ್ಸು ಲಾವಣಿಯ ಗತ್ತಿನಲ್ಲಿದ್ದು, ಈ ಕವನವು ಭಾರತೀಯ ಸ್ವಾತಂತ್ರ್ಯಯೋಧರ ಬಗೆಗಿನ ಗೀತೆ ಎನ್ನುವ ಭಾಸವನ್ನು ಹುಟ್ಟಿಸುತ್ತದೆ.

ಬೇಂದ್ರೆಯವರ ಕಲ್ಪನೆಗೆ ಎಲ್ಲೆ ಎನ್ನುವದಿಲ್ಲ. ‘ ಎಲ್ಲೆಕಟ್ಟು ಇಲ್ಲದಾ ಬಾನಬಟ್ಟೆಯಲ್ಲಿದೊ’ ಎನ್ನುವಂತೆ ಅವರ ಕಲ್ಪನೆಯು ದಿಗಂತವ್ಯಾಪಿಯಾಗಿದೆ. ಆದರೆ ಬೇಂದ್ರೆಯವರ ಕಾವ್ಯದಲ್ಲಿ ಎಲ್ಲಿಯೂ ಕಲ್ಪನೆಯು ವಾಸ್ತವತೆಗೆ ವ್ಯತಿರಿಕ್ತವಾಗಿ ಬಳಕೆಯಾಗಿಲ್ಲ. ಕಾವ್ಯ ಎನ್ನುವ ಬಟ್ಟೆಯ ಹಾಸು ಮತ್ತು ಹೊಕ್ಕಿನಂತಿರುವ ಅವು ಸಮಪ್ರಮಾಣದಲ್ಲಿಯೇ ನೇಯ್ಗೆಯಾಗಿವೆ. ಉದಾಹರಣೆಗೆ ‘ಹಕ್ಕಿ ಹಾರುತಿದೆ ನೋಡಿದಿರಾ’ ಎನ್ನುವ ಬೇಂದ್ರೆಯವರ ಕವನವನ್ನು ಪರಿಶೀಲಿಸಬಹುದು. ಕಾಲಪಕ್ಷಿಯ ಅಮಿತ ವೇಗವನ್ನು ಸೂಚಿಸಲು ಬೇಂದ್ರೆಯವರು ‘ಗಾವುದ ಗಾವುದ ಗಾವುದ ದೂರಕೆ, ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಎಂದು ಹೇಳಿದ್ದಾರೆ. ಭಾರತೀಯ ಕಾಲಗಣನೆಯ ಮೇರೆಗೆ ‘ಎವೆ ತೆರೆದಿಕ್ಕುವ ಹೊತ್ತು’ ಒಂದು ನಿಮಿಷದ ಅವಧಿಯಾಗಿದೆ. ಈ ರೀತಿಯಲ್ಲಿ ಬೇಂದ್ರೆಯವರು ಕಲ್ಪನೆಯನ್ನು ಭೌತಿಕ ವಾಸ್ತವತೆಯೊಡನೆ ತಳಕು ಹಾಕುತ್ತಿದ್ದಾರೆ.

ಬೇಂದ್ರೆಯವರ ಕವನಗಳಲ್ಲಿ ತರ್ಕಪೂರ್ಣ ಕ್ರಮಬದ್ಧತೆಗೆ ಎಂದೂ ಲೋಪವಾಗುವದಿಲ್ಲ. ಇದನ್ನು ಮನಗಾಣಲು ಕೆಳಗಿನ ಸಾಲುಗಳನ್ನು ನೋಡಬಹುದು:
“ಎಲೆಗಳ ಮೇಲೇ, ಹೂಗಳ ಒಳಗೇ
ಅಮೃತsದ ಬಿಂದು
ಕಂಡವು-- ಅಮೃತsದ ಬಿಂದು ”

‘ಬೆಳಗು’ ಕವನದಲ್ಲಿ ಈ ವರ್ಣನೆ ಬರುತ್ತಿದೆ. ಎಲೆಗಳ ಮೇಲಿರುವ ಇಬ್ಬನಿಯ ಹನಿಗಳು ನೋಡುಗನ ಕಣ್ಣಿಗೆ ಮೊದಲು ಕಾಣುತ್ತವೆ. ಹೂಗಳ ಪಕಳೆಗಳಲ್ಲಿರುವ ಹನಿಗಳು ಹತ್ತಿರ ಹೋದ ಬಳಿಕ ಕಾಣುತ್ತವೆ. ಇದೇ ಕ್ರಮವನ್ನು ಕವನದಲ್ಲಿಯೂ ಅನುಸರಿಸಲಾಗಿದೆ.

ಇದೇ ಸಾಲಿನಲ್ಲಿರುವ ‘ಅಮೃತsದಾ ಬಿಂದು’ ಎನ್ನುವ ವಿಶೇಷವನ್ನು ಗಮನಿಸಿರಿ. ‘ಅಮೃತ’ವೆಂದರೆ ನಾಶವಿಲ್ಲದ್ದು. ಇಬ್ಬನಿಯು ಕ್ಷಣಮಾತ್ರದಲ್ಲಿ ಮಾಯವಾಗುವಂತಹದು. ಅಪೂರ್ವವಾದ ವೈರುಧ್ಯತೆಯೊಂದನ್ನು ಒಂದೇ ಪದಪುಂಜದಲ್ಲಿ ಅಡಕಗೊಳಿಸುವ ಬೇಂದ್ರೆಯವರ ಕೌಶಲ್ಯವನ್ನು ಇಲ್ಲಿ ಕಾಣಬಹುದು.

ಇಂತಹದೇ ವಿರುದ್ಧಶ್ಲೇಷೆಯ ಸಾಲು ‘ಸಂಸಾರ’ ಎನ್ನುವ ಕವನದಲ್ಲಿದೆ:
‘ಅಮೃತಂತ ಬಾಯಿ ಚಪ್ಪರಿಸತಾವ
ಕೇಳಿ ಕಣ್ಣು ಮಿಟಕತದ ರಾತ್ರಿ.’

ನಲ್ಲ, ನಲ್ಲೆಯರ ನಡುವೆ ಮುತ್ತುಗಳ ವಿನಿಮಯವಾಗುತ್ತಿರುವಾಗ, ‘ಅಹಾ! ಇದೇ ಅಮೃತ’ ಎಂದು ಅವರು ಖುಶಿ ಪಡುತ್ತಾರೆ.ಇದನ್ನು ಆಲಿಸಿದ ರಾತ್ರಿ ಚೇಷ್ಟೆಯಿಂದ ಕಣ್ಣು ಮಿಟುಕಿಸುತ್ತದೆ. ಇದು ತೋರಿಕೆಯ ಅರ್ಥ. ಕಣ್ಣು ಮಿಟುಕಿಸುವದು ಎಂದರೆ ಒಂದು ನಿಮಿಷದ ಕಾಲ. ಇದು ಅಮೃತದಂತೆ ಚಿರಕಾಲದ ಸುಖವಲ್ಲ, ಆದರೆ ಕ್ಷಣಿಕ ಎನ್ನುವದು ಒಳಗಿನ ಅರ್ಥ! ಒಂದೇ ಸಾಲಿನಲ್ಲಿ ವಿರುದ್ಧಾರ್ಥವನ್ನು ಸೂಚಿಸುವ ಬೇಂದ್ರೆ ಪ್ರತಿಭೆ ಇದು!

ಇಂತಹ ವೈರುಧ್ಯಭಾವವನ್ನು ಸೂಚಿಸುವ ಮತ್ತೊಂದು ಸಾಲು ‘ಬಾರೊ ಸಾಧನಕೇರಿಗೆ’ ಕವನದಲ್ಲಿದೆ;
‘ಮಲೆಯ ಮೊಗವೇ ಹೊರಳಿದೆ
ಕೋಕಿಲಕೆ ಸವಿ ಕೊರಳಿದೆ
ಬೇಲಿಗೂ ಹೂಬೆರಳಿದೆ
ನೆಲಕೆ ಹರೆಯವು ಮರಳಿದೆ’

ಬೇಂದ್ರೆಯವರು ಈ ಕವನವನ್ನು ಬರೆಯುವ ಕಾಲಾವಧಿಯಲ್ಲಿ ಧಾರವಾಡದಲ್ಲಿದ್ದ ಮನೆಗಳಿಗೆ ಈಗಿನಂತೆ ಕಲ್ಲಿನ ಅಥವಾ ಸಿಮೆಂಟಿನ ಪ್ರಾಕಾರ ಇರುತ್ತಿರಲಿಲ್ಲ. ಸಾದಾ ಹೂವುಗಳ ಬೇಲಿ ಇರುತ್ತಿತ್ತು. ಈ ಬೇಲಿಯ ಹೂವುಗಳು ಸಹಸಾ ಕೊಳವೆಯಾಕಾರದಲ್ಲಿ ಇರುತ್ತಿದ್ದವು. ಬೇಂದ್ರೆಯವರು ಈ ಹೂವುಗಳನ್ನು ಬೇಲಿಯ ಬೆರಳುಗಳಿಗೆ ಹೋಲಿಸುತ್ತಿದ್ದಾರೆ. ಬೇಲಿಯ ಕೆಲಸವೆಂದರೆ ಅಪರಿಚಿತರನ್ನು ಹೊರಗಿಡುವದು. ಆದರೆ ಈ ಬೇಲಿಯು ತನ್ನ ಹೂಬೆರಳುಗಳಿಂದ ಎಲ್ಲರಿಗೂ ಸ್ವಾಗತ ನೀಡುವ ಸ್ವಾಗತಕಾರಿಣಿಯಾಗಿದೆ! ಈ ರೀತಿಯಾಗಿ ಬೇಂದ್ರೆಯವರು ವಿರುದ್ಧಾರ್ಥವನ್ನು ಸೂಚಿಸುತ್ತಲೇ, ಆ ಕಾಲದ ವಾಸ್ತವತೆಯ ದಾಖಲಾತಿಯನ್ನು ಸಹ ಮಾಡುತ್ತಿದ್ದಾರೆ.

ಕವನದಲ್ಲಿರುವ ಕ್ರಮಬದ್ಧತೆಯನ್ನು ಪರೀಕ್ಷಿಸುವಾಗ ‘ರಾಧೆಯ ಪಾಡು’ ಎನ್ನುವ ಕವನವನ್ನು ನಿರ್ಲಕ್ಷಿಸುವದು ಸಾಧ್ಯವಿಲ್ಲ. ಭಕ್ತಿಯ ಮೊದಲ ಹಂತವೆಂದರೆ ಆರ್ತ ಪ್ರಾರ್ಥನೆ. ಈ ಕವನದಲ್ಲಿ ರಾಧೆಯು ಕೃಷ್ಣನನ್ನು ‘ಒರೆದನಂಗಲಾಚಿ, ಕರೆದೆ ಜೀವವ ಚಾಚಿ’ ಎಂದು ತನ್ನ ಸಖಿಯೆದುರಿಗೆ ಹೇಳುತ್ತಿದ್ದಾಳೆ. ಆದರೆ ಕೃಷ್ಣ ಅವಳಿಗೆ ಒಲಿಯುತ್ತಿಲ್ಲ. ಮುಂದಿನ ಹಂತದಲ್ಲಿ ಅವಳ ದನಿಯೇ ಬಿದ್ದು ಹೋಗುತ್ತದೆ. ಅವಳ ಅಹಮಿಕೆ ಕರಗತೊಡಗುತ್ತದೆ. ಆ ಹಂತವನ್ನು ‘ಬರದು ಕೂತಿತು ದನಿ, ಕಣ್ಣೆಲ್ಲಾ ಕಂಬನಿ ತಂದೇನೆ, ಕರಗಿ ತಂದೇನೆ’ ಎಂದು ಬಣ್ಣಿಸಲಾಗಿದೆ. ಇದೂ ಸಹ ನಿಷ್ಫಲ. ತನ್ನ ಶೃಂಗಾರದಿಂದ ತಾನು ಕೃಷ್ಣನನ್ನು ಗೆಲ್ಲಲಾರೆ ಎಂದು ತಿಳಿದಾಗ, ‘ಒಗೆದು ಹೂದಂಡಿಗೆ ಯಮುನೆಯ ದಂಡಿಗೆ’ ಎಂದು ತನ್ನ ಅಲಂಕಾರವನ್ನೆಲ್ಲ ಕಿತ್ತೆಸೆಯುತ್ತಾಳೆ. ಅಹಮ್‍ದ ಈ ಎಲ್ಲ ಹಂತಗಳನ್ನು ದಾಟಿ ಕೊನೆಯಲ್ಲಿ ಬರುವ ಹಂತವೆಂದರೆ, ‘ನಾನು’ ಎನ್ನುವದರ ಸಂಪೂರ್ಣ ನಿರಾಕರಣೆ. ‘ಹೊಳೆಯೊಳು ಹೊತ್ತಾರೆ ಧುಮುಕಿ ನಾ ಸತ್ತಾರೆ ಹೊಂದೇನೆ ಅವನ ಹೊಂದೇನೆ’ ಎನ್ನುವ ಮೂಲಕ ಈ ಭಾವನೆಯನ್ನು ವ್ಯಕ್ತಪಡಿಸಲಾಗಿದೆ. ಈ ರೀತಿಯಾಗಿ ಸಾಧನಾಮಾರ್ಗದ ವಿವಿಧ ಹಂತಗಳನ್ನು ಇಲ್ಲಿ ಕ್ರಮಬದ್ಧವಾಗಿ ವರ್ಣಿಸಲಾಗಿದೆ.

ಶ್ಲೇಷಾಲಂಕಾರವಂತೂ ಬೇಂದ್ರೆಯವರ ಕವನಗಳ ವಿಶೇಷ ಲಕ್ಷಣವಾಗಿದೆ. `ಸಾವಿರದ ಮನೆಗಳಲ್ಲಿ ಒಂದು ಮನೆಯ ಮಾಡಿದೆ’ ಎನ್ನುವಾಗ, ‘ಒಂದು ಸಾವಿರ’ ಎನ್ನುವ ಅರ್ಥವಲ್ಲದೆ, ‘ಸಾವು ಇರದ’ ಎನ್ನುವ ಅರ್ಥವೂ ಧ್ವನಿಸುತ್ತದೆ. ‘ಮುತ್ತು, ರತುನ, ಹೊನ್ನು ಎಲ್ಲ ಕಲ್ಲುಮಣ್ಣ ವೈಭವಾ’ ಎನ್ನುವಾಗ, ಈ ಅಮೂಲ್ಯ ವಸ್ತುಗಳಿಗೆ ಬೆಲೆ ಇಲ್ಲ ಎನ್ನುವ ಅರ್ಥದೊಡನೆ, ಇವು ಖನಿಜ ಪದಾರ್ಥಗಳೆನ್ನುವ ಅರ್ಥವೂ ಇದೆ. ಬೇಂದ್ರೆಯವರ ಪ್ರಸಿದ್ಧ ಕವನ ‘ನಾನು ಬಡವಿ..’ಯಲ್ಲಿಯ ‘ತೋಳ ಬಳಸಿ ತೋಳಬಂದಿ, ಕೆನ್ನೆ ಮೇಲೆ ಮುತ್ತು’ ಎನ್ನುವ ಸಾಲಿನಲ್ಲಿ ತೋಳಬಂದಿ ಹಾಗು ಮುತ್ತು ಇವು ಒಡವೆಗಳಾಗಿರುವಂತೆಯೇ, ಪ್ರಣಯದ ಸಂಕೇತಗಳೂ ಆಗಿವೆ. ಈ ಕವನದ ಕೊನೆಯಲ್ಲಿ ಬರುವ ವ್ಯಂಗ್ಯಧ್ವನಿಯಂತೂ ಅಪೂರ್ವವಾದದ್ದು. ‘ಹೊಟ್ಟೆಗಿತ್ತ ಜೀವಫಲವ’ ಎಂದು ನಲ್ಲೆಯು ಹೇಳುವಾಗ, ತಾನು ಗರ್ಭಿಣಿಯಾಗಿರುವದನ್ನು ಸೂಚಿಸುತ್ತಲೇ, ತನ್ನ ನಲ್ಲ ತನಗೆ ಕೊಟ್ಟದ್ದು ಇದಷ್ಟೇ ಎನ್ನುವ ಛೇಡನೆಯೂ ಇದೆ!

‘ಹೃದಯಸಮುದ್ರ’ ಕವನದ ಈ ಸಾಲನ್ನು ಗಮನಿಸಿರಿ:
‘ಅದರೊಳಗೆ ನಾವು, ನಮ್ಮೊಳಗೆ ತಾವು
ಅದು ಇಲ್ಲವಣ್ಣ ದೂರಾ’

ಹೃದಯಸಮುದ್ರದಲ್ಲಿ ನಾವು ಇದ್ದೇವೆ ಹಾಗು ನಮ್ಮೊಳಗೆ ತಾವು ಅಂದರೆ ದೇವರು ಇದ್ದೀರಿ ಎನ್ನುವದು ಮೇಲಿನ ಅರ್ಥ. ‘ನಾವು’ ಎಂದರೆ ದೋಣಿ, ‘ತಾವು’ ಅಂದರೆ ಬಂದರು. ನಮ್ಮ ಹೃದಯಸಮುದ್ರದಲ್ಲಿಯೇ ದೋಣಿ ಇದೆ ಹಾಗು ಅಲ್ಲಿಯೇ ನಾವು ತಲುಪಬೇಕಾದ ಬಂದರು ಇದೆ ಎನ್ನುವದು ಎರಡನೆಯ ಅರ್ಥ.

ಒಂದು ಕವನದ ಒಂದು ಸಂಪೂರ್ಣ ನುಡಿಯೇ ಶ್ಲೇಷೆಯಾಗುವದು ಬೇಂದ್ರೆಯವರ ಕಾವ್ಯದಲ್ಲಿ ಮಾತ್ರ ಸಾಧ್ಯ!
“ಏನೈತಿ ಸುಗ್ಗಿಯಾ ಹುರುಡ—
ಯಾಕ ಉಳಿದೆಲ್ಲ ತಿಂಗಳಾ ಬರಡ
ಬೇಕ್ಯಾಕ ಮಾವಿನಾ ಕಾಡು
ಕೋಗಿಲದ ಹಾಡು
ಅಗಲಿಕೀ ಕೇಕು......
.............ನಿನ ತೆಕ್ಕಿಯೊಳಗ ಸಿಕ್ಕೈತಿ ಸುಗ್ಗಿ
ಸ್ವರ್ಗಕ್ಕ ಸಾಕು ತೋಳೆರಡs……”

ನಲ್ಲೆಯ ಸರಸ ಸಮಾಗಮಕ್ಕೆ ವಸಂತ ಋತು, ಮಾವು ಹಾಗು ಕೋಗಿಲೆಯ ನೆರವು ಬೇಕಾಗಿಲ್ಲ ಎಂದು ನಲ್ಲನೊಬ್ಬನು ಹೇಳುತ್ತಿರುವ ಮಾತಿದು. ವಸಂತ ಋತು, ಮಾವು ಹಾಗು ಕೋಗಿಲೆ ಈ ಮೂರು ವಿಶೇಷಗಳು ಮಾರ್ಗ ಕಾವ್ಯದ ಅವಶ್ಯಕ ಅಂಶಗಳು ಎನ್ನುವದನ್ನು ಗಮನಿಸಬೇಕು. ದೇಸಿ ಪದ್ಧತಿಯಲ್ಲಿ ರಚಿಸಲಾದ ಈ ಕಾವ್ಯವು ‘ ಹೊಸ ಕಾಲದಲ್ಲಿ ಮಾರ್ಗ ಕಾವ್ಯ ಬೇಕಾಗಿಲ್ಲ’ ಎನ್ನುವ ಶ್ಲೇಷೆಯನ್ನು ಹೊಂದಿದೆ!

ಬೇಂದ್ರೆಯವರ ಕವನಗಳಲ್ಲಿ ಉಪಮೆಗಳು ಹಾಗು ರೂಪಕಗಳು ವಿಶಿಷ್ಟ ಸ್ಥಾನವನ್ನು ಹೊಂದಿವೆ. ‘ಗಮ ಗಮಾ ಗಮಾಡಸ್ತಾವ ಮಲ್ಲಿಗಿ’ ಕವನದಲ್ಲಿ ನಲ್ಲೆಯೊಬ್ಬಳು ತನ್ನ ನಲ್ಲನಿಗೆ ಹೇಳುತ್ತಿರುವ ಸಾಲುಗಳು ಹೀಗಿವೆ:
‘ಚಿಕ್ಕಿ ತೋರಸ್ತಾವ ಚಾಚಿ ಬೆರಳ
ಚಂದ್ರಾಮಾ ಕನ್ನಡಿ ಹರಳ’

ಚಿಕ್ಕೆಗಳ ಮಿನುಗುವಿಕೆ ಈ ಹುಡುಗಿಗೆ ಬೆರಳುಗಳಂತೆ ಕಾಣಿಸುತ್ತಿದೆ. ಚಿಕ್ಕೆಗಳು ಚಂದ್ರನನ್ನು ತೋರಿಸುತ್ತವೆ ಎಂದು ಹೇಳುವ ಮೂಲಕ ಈ ಹುಡುಗಿಯು ತನ್ನ ನಲ್ಲನಿಗೆ ಪ್ರಣಯದ ಕರೆಯನ್ನು ನೀಡುತ್ತಿದ್ದಾಳೆ. ಚಂದ್ರನು ಕನ್ನಡಿಯ ಹರಳು ಎನ್ನುವದು ಸುಂದರವಾದ ಉಪಮೆ. ಈ ಉಪಮೆಯು ಹಳ್ಳಿಗರಿಗೆ ವಿಶಿಷ್ಟವಾದ ಉಪಮೆ ಎನ್ನುವದನ್ನು ಗಮನಿಸಬೇಕು.

‘ನೀ ಹೀಂಗ ನೋಡಬ್ಯಾಡ ನನ್ನ’ ಕವನದ ‘ಹುಣ್ಣಿವಿ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲುತ ಹಗಲ’ ಎನ್ನುವದು ಒಂದು ಸಂಕೀರ್ಣ ಉಪಮೆಯಾಗಿದೆ. ನಾಯಕನ ಹೆಂಡತಿಯ ರೂಪವು ಹುಣ್ಣಿವೆಯ ಚಂದ್ರನಂತೆ ಶಾಂತ ಹಾಗು ಸುಂದರವಾಗಿರುವದನ್ನು ಹೇಳುತ್ತಲೇ, ಇದೀಗ ಆ ಮುಖದ ಮೇಲೆ ಪ್ರೇತಕಳೆ ಆವರಿಸಿರುವದನ್ನೂ ಸಹ ಇಲ್ಲಿ ಹೇಳಲಾಗಿದೆ.

ಉಪಮೆಗಳಂತೆ ಬೇಂದ್ರೆಯವರ ರೂಪಕಗಳೂ ಸಹ ವಿಶಿಷ್ಟವಾಗಿವೆ. ‘ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ’ ಎನ್ನುವ ರೂಪಕವನ್ನು ನೋಡಿರಿ. ಹರಿಯುತ್ತಿರುವ ಹಳ್ಳವು ಜೀವನವನ್ನು ಸೂಚಿಸುವ ರೂಪಕವಾದರೆ, ‘ಮೊದಲಿಗೆ’ ಎನ್ನುವದು ತಾರುಣ್ಯದ ಕಾಲದ ಸೂಚನೆಯಾಗಿದೆ.

ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ಧರಾದ ಮೂವರು ಕವಿಗಳ (ಕಾಲಿದಾಸ, ಭಾರವಿ ಹಾಗು ದಂಡಿನ) ವೈಶಿಷ್ಟ್ಯಗಳನ್ನು ವರ್ಣಿಸುತ್ತ, ಮಾಘ ಎನ್ನುವ ಕವಿಯಲ್ಲಿ ಈ ಮೂರೂ ಲಕ್ಷಣಗಳು ಸಮ್ಮಿಲಿತವಾಗಿವೆ ಎಂದು ಹೇಳುವ ಶ್ಲೋಕವೊಂದು ಹೀಗಿದೆ:
ಉಪಮಾ ಕಾಲಿದಾಸಸ್ಯ
ಭಾರವೇರರ್ಥಗೌರವಮ್
ದಂಡಿನ: ಪದಲಾಲಿತ್ಯಮ್
ಮಾಘೇ ಸಂತಿ ತ್ರಯೋ ಗುಣಾ:
ಕಾಲಿದಾಸನ ಉಪಮಾಸಾಮರ್ಥ್ಯ, ಭಾರವಿಯ ಅರ್ಥಗೌರವ, ದಂಡಿಯ ಪದಲಾಲಿತ್ಯ ಇವು ಬೇಂದ್ರೆಯವರ ಕಾವ್ಯದಲ್ಲಿಯೂ ಸಹ ವ್ಯಕ್ತವಾಗಿವೆ. ಇವರೆಲ್ಲರ ಸರಿಜೋಡಿಯಾದ ಪ್ರತಿಭೆಯೂ ಬೇಂದ್ರೆಕಾವ್ಯದಲ್ಲಿದೆ. ಬೇಂದ್ರೆ ಕಾವ್ಯದಲ್ಲಿಯ ಭಾಷೆ, ಛಂದಸ್ಸು ಹಾಗು ಅಲಂಕಾರಗಳು ಅವರ ಅನನ್ಯ ಪ್ರತಿಭೆಗೆ ಸಾಕ್ಷಿಯಾಗಿವೆ.

31 comments:

Anil Talikoti said...

ಬೇಂದ್ರೆ ಅರ್ಥವಾಗೊದಿಲ್ಲಂದ್ರೆ
ಏನಿಲ್ಲವೋ ತೊಂದ್ರೆ
ಸುಲಭವೋ ಬೇಂದ್ರೆ
ಸುನಾಥರ ಸಲ್ಲಾಪ ಓದಿದ್ರೆ!
ತುಂಬಾ ಚೆನ್ನಾಗಿದೆ - "ಅದರೊಳಗೆ ನಾವು, ನಮ್ಮೊಳಗೆ ತಾವು" -
ಹೊರಗೆ ಹುಡಿಕಿದಸ್ಟೇ ಒಳಗೂ ಹುಡುಕಬೇಕು ನಮ್ಮನ್ನು ನಾವೇ ಅರಿಯಲು ಅಲ್ಲವೇ?
ಅನಿಲ ತಾಳಿಕೋಟಿ

ಮನಸಿನಮನೆಯವನು said...

ಅನಿಲ್ ತಾಳಿಕೋಟಿಯರು ಹೇಳಿದಂತೆ ಬೇಂದ್ರೆಯವರು ನಿಮ್ಮಿಂದ ಅರ್ಥವಾಗುತ್ತಾರೆ,

Badarinath Palavalli said...

ಬೇಂದ್ರೆಯವರ ಕಾವ್ಯ ಪ್ರವೇಶಕ್ಕೆ ನಮಗೆ ಅನುವು ಮಾಡಿಕೊಡುವ ಇನ್ನೊಂದು ಲೇಖನ ಕೊಟ್ಟಿದ್ದಕ್ಕೆ ಮೊದಲ ಧನ್ಯವಾದ ಸಾರ್.

ಭಾಷೆಯ ಸಾರ್ಥಕ ಅನ್ವಯಿಕೆಗೆ ಬೇಂದ್ರೆ ಅಜ್ಜನಿಗೆ ಬೇಂದ್ರೆ ಅಜ್ಜನೇ ಸಾಟಿ!

ಕಾವ್ಯದಲ್ಲಿ ಸಾದೃಷ್ಯ ಕಟ್ಟಿಕೊಡುವ ಅವರ ಪರಿಯು ನನಗೆ ಸದಾ ವಿಸ್ಮಯ. ಹೊರಗಿನ ಜಗಕ್ಕೆ ತೆರೆದುಕೊಳ್ಳದ ಕವಿ ಕೂಪ ಮಂಡೂಕನಂತೆ ಬರೆದದ್ದನ್ನೇ ಬರೆಯುತ್ತಾ, ಬರೀ ಉಳಿದಲ್ಲೇ ಉಳಿಯುತ್ತಾನೆ. ಬೇಂದ್ರೆ ಕಾವ್ಯ ವಿಸ್ತಾರ ಮತ್ತು ಅದು ಮನಸ್ಸಿಗೆ ರೆರೆಯುವ ಭಿತ್ತಿಯ ದೃಷ್ಯ ಚಿತ್ತಾರ ಸದಾ ಸ್ಮರಣೀಯ.

ನೀವು ಹೇಳಿದಂತೆ ಕ್ರಮಬದ್ಧತೆಯು ಕವಿ ರೂಢಿಸಿಕೊಳ್ಳ ಬೇಕಾದ ಶಿಸ್ತು. ಇಲ್ಲದಿದ್ದರೆ ಪಾಠಕನಿಗೆ ಯಾವುದು ಮೊದಲು ಯಾವುದು ಆನಂತರ ಎನ್ನುವುದೇ ಪ್ರಶ್ನೆಯಾಗುವ ಸಾಧ್ಯತೆ ಇದೆ!

ಈ ಶ್ಲೇಷಾಲಂಕಾರ ಕಾವ್ಯದ ಆಳವನ್ನು ಹೆಚ್ಚಿಸಿ, ಓದಿನ ಓಘಕ್ಕೆ ಸಮ್ಮಿತ್ತಾಗುತ್ತದೆ.

ಉಪಮೆ ಮತ್ತು ರೂಪಕಗಳು ಬೇಂದ್ರೆಯವರು ಬಳಸಿಕೊಂಡಿರುವ ರೀತಿ ಅದ್ಭುತ. ಅವು ತುರುಕಿದಂತಿಲ್ಲ ಅವಾಗೇ ಜನಿಸಿದಂತಿವೆ.

ಉಪ ಸಂಹಾರ:

‘ಉಪಮಾ ಕಾಲಿದಾಸಸ್ಯ,
ಭಾರವೇರರ್ಥಗೌರವಮ್
ದಂಡಿನಃ ಪದಲಾಲಿತ್ಯಂ,
ಮಾಘೇ ಸಂತಿ ತ್ರಯೋ ಗುಣಾ:
ಚತುರ್ಥಂ ಸುನಾತ ಬೋಧನಂ'

ಅಂತ ಬದಲಾಯಿಸಿ ಬೀಡೋಣ ಅಲ್ಲವಾ ಗುರುಗಳೇ?’

sunaath said...

ಅನಿಲರೆ,
ಬೇಂದ್ರೆ ನನಗೆ ಅರ್ಥವಾಗುತ್ತಿರುವದೇ ಅತ್ಯಲ್ಪ. ಕೀರ್ತಿನಾಥ ಕುರ್ತಕೋಟಿಯವರು ಬೇಂದ್ರೆ-ನಿಘಂಟು ಇದ್ದಂತೆ ಇದ್ದರು. ಆಮೂರ ಅವರು ಇದ್ದಾರೆ. ಇನ್ನೂ ಅನೇಕ ದೊಡ್ಡವರು ನಮ್ಮ ನಡುವೆ ಇದ್ದಾರೆ. ಇವರ ಜೊತೆಗೆ ನನ್ನದೂ ಸಹ ಅಳಿಲ ಕಾಣಿಕೆ!
ಹಾಂ, ಹೊರಗಿನ ಹಾಗು ಒಳಗಿನ ಅನ್ವೇಷಣೆ ನಡೆಯಲೇ ಬೇಕು, ನಮ್ಮನ್ನು ನಾವು ಅರಿಯಲು!

sunaath said...

ವಿಚಲಿತರೆ,
ಬೇಂದ್ರೆಯವರು ಓದುಗನನ್ನು ಬೆಳೆಯಿಸುವ ಕವಿ. ಓದಿದಂತೆಲ್ಲ ಅವರು ಹೆಚ್ಚೆಚ್ಚು ಅರ್ಥವಾಗುತ್ತಾರೆ!

sunaath said...

ಬದರಿನಾಥರೆ,
ಉಪಮೆ,ಪ್ರಾಸ,ಛಂದಸ್ಸು,ಭಾಷೆ ಇವೆಲ್ಲ ಬೇಂದ್ರೆಯವರಿಗೆ ಅನಾಯಾಸ ಸಿದ್ಧಿಸಿದ ಗುಣಗಳು. ನೀವು ಪದಪುಂಜವನ್ನು ಅನಾಯಾಸವಾಗಿ ಸೃಷ್ಟಿಸುತ್ತೀರಲ್ಲ ಹಾಗೆ!ಇದೇ ಕವಿಯ ಪ್ರತಿಭೆ.

ಈಶ್ವರ said...

ಕಾಕಾ, ತುಂಬಾ ದೊಡ್ಡೋರು ನೀವು, ನಮಗೆಲ್ಲಾ ಏನಕ್ಕೆ ಅರ್ಥ ಆಗಲ್ಲ ಅಂತ ಕಸಿವಿಸಿ ಆಗಿಬಿಡತ್ತೆ. ನೀವು ಇನ್ನೂ ಹೆಚ್ಚಾಗಿ ಬರೀಬೇಕು ಅನ್ನೋದೆ ನನ್ನ ಪ್ರಾರ್ಥನೆ.

ತುಂಬಾ ಓದೋದಿದೆ. ಪುನಃ ಪುನಃ ಓದುತ್ತೇನೆ. ಧನ್ಯ.


ಬಿಡುವಾದರೆ ನನ್ನ ಬ್ಲಾಗಿಗೆ ಬನ್ನಿ.

http://bhavakirana.blogspot.com/
ಮೃಷ್ಟಾನ್ನ ಭೋಜನಕ್ಕಲ್ಲ. ಬರೀ ತಂಬ್ಳಿ ಸಿಗಬಹುದೇನೋ.

ಜಲನಯನ said...

ಬೇಂದ್ರೆಯಜ್ಜನ ಕವನಗಳ ರಸದೌತಣದ ಜೊತೆಗೆ ನಿಮ್ಮ ವ್ಯಾಖ್ಯಾನ ಎಮ್ದಿನಂತೆ ಮಾಹಿತಿಪೂರ್ಣ..ಅನಿಲ್ ನಿಮ್ಮ ಲೇಖನದ ವಿಮರ್ಶೆ ನಾಲ್ಕು ಸಾಲಲ್ಲಿ ಬಹಳ ಚನ್ನಾಗಿ ಮಾಡಿದ್ದಾರೆ.
“ ಹಸು ಕೂಡs ಕಟ್ಟಿದ್ದುಂಟು
ಬಸವಣ್ಣsನೂ ಹುಟ್ಟಿದ್ದುಂಟು
ಮುಟ್ಟಿದ್ದೆಲ್ಲಾ ‘ಬೂದಿ’ ಮಾಡಿದಾ ಭಸ್ಮಾಸುರಾss
ಅವನ ನೀಗಿಸಿ ಬಿಟ್ಟಿತಣ್ಣಾ ಮೋಹಿನಿ ಅವತಾರಾ.”
ಈ ಸಾಲುಗಳ ಅಂತರಾರ್ಥಕ್ಕೆ ಹಳ್ಳಿಗಾಡಿನ ಬದುಕು ಬಹಳ ಪೂರಕವೆನ್ನುವ ನಿಮ್ಮ ಮಾತು ನಿಜ,,,
ಸುನಾಥಣ್ನ..ಬಹಳ ಚನ್ನಾಗಿದೆ..ಪದಾರ್ಥ ಎಲ್ಲೆಡೆಯೂ..

ಮಂಜುಳಾದೇವಿ said...

ನಿಮ್ಮ ಲೇಖನಗಳನ್ನು ಓದುತ್ತಾ ನಾನು ಬೇಂದ್ರೆಯವರ ಕಾವ್ಯಗಳ ಸೊಗಸನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಮಹಾನ್ ಕವಿಯ ಬರಹದ ಬಗ್ಗೆ ಅತ್ಯಂತ ಮಾಹಿತಿಪೂರ್ಣ ಬರಹಗಳಿಗಾಗಿ ನಿಮಗೆ ಧನ್ಯವಾದಗಳು.

sunaath said...

ಈಶ್ವರ ಭಟ್ಟರೆ,
ತಿಳಿದದ್ದನ್ನು ಹಂಚಿಕೊಳ್ಳೋಣ! ನಿಮ್ಮ ಬ್ಲಾಗಿನಲ್ಲಿಯ ಸಾಹಿತ್ಯವನ್ನು ಈಗಾಗಲೇ ಓದಿದ್ದೇನೆ ಹಾಗು ಖುಶಿಪಟ್ಟಿದ್ದೇನೆ.

sunaath said...

ಜಲನಯನ,
ಬೇಂದ್ರೆಯವರದು ಬಹಳ ವಿಶಾಲವಾದ ಆಸಕ್ತಿ. ಅವರು ಎಲ್ಲರೊಡೆನೆಯೂ ಬೆರೆಯುತ್ತಿದ್ದರು. ಹೀಗಾಗಿ ಅವರ ಕವನಗಳಲ್ಲಿ ಹಳ್ಳಿಯ ಹಾಗು ನಗರದ ಸೆಳಕುಗಳನ್ನು ಕಾಣುತ್ತೇವೆ.

sunaath said...

ಮಂಜುಳಾದೇವಿಯವರೆ,
ನನ್ನಿಂದ ಏನಾದರೂ ಸೇವೆಯಾಗಿದ್ದರೆ ನಾನು ಧನ್ಯ!

prabhamani nagaraja said...

ಬೇ೦ದ್ರೆಯವರ ಕಾವ್ಯದ ಸೊಬಗನ್ನು ಪರಿಚಯಿಸುತ್ತಿರುವ ನಿಮ್ಮ ಬರವಣಿಗೆಯ ಶೈಲಿ ಬಹಳ ಚೆನ್ನಾಗಿದೆ ಸರ್, ಧನ್ಯವಾದಗಳು. ನನ್ನ ಬ್ಲಾಗ್ ಗೆ ಭೇಟಿ ನೀಡಿ.

V.R.BHAT said...

ಸುಧೀಂದ್ರರೇ, ಇತ್ತೀಚಿನ ನವ್ಯ ಮತ್ತು ನವೋದಯದಲ್ಲಿ ಕೆಲವು ಪದಲಾಲಿತ್ಯ ಬಿಟ್ಟರೆ ವ್ಯಾಕರಣ, ಛಂದಸ್ಸು, ಪ್ರಾಸ ಇವುಗಳ ಬಗ್ಗೆ ಗಮನವೂ ಇಲ್ಲ-ಅದು ಯಾರಿಗೂ ಬೇಕಾಗೂ ಇಲ್ಲ! ಇದೇ ಕನ್ನಡ ಕಾವ್ಯಲೋಕದ ಇಂದಿನ ವಿಪರ್ಯಾಸ. ಯಾರೋ ಹೇಳಿದ್ದರು: ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಮಧ್ಯಂತರದ ಗತಿಯನ್ನು ’ಗಪದ್ಯ’ ಎಂಬ ಹೊಸಶೈಲಿಯಲ್ಲಿ ಗುರ್ತಿಸುವುದೇ ಒಳ್ಳೆಯದು ಎಂದು; ಅದು ನನಗೂ ಹೌದೆನಿಸುತ್ತದೆ. ಕಾವ್ಯಕ್ಕೊಂದು ಕಾರಣಬೇಕು-ಮೈಮೇಲೆ ಸೊಳ್ಳೆ ಕೂತಿದ್ದಕ್ಕೋ ನಾಯಿ ಉಚ್ಚೆಹಾರಿಸಿದ್ದಕ್ಕೋ ಕವನ ಕಟ್ಟುವ ಇಂದಿನ ’ಕಪಿ’ಗಳಿಗೆ ಏನು ಹೇಳಬೇಕೋ ತೋಚುತ್ತಿಲ್ಲ. ತಾವು ಹೇಳಿದಂತೇ ಬೇಂದ್ರೆಯವರಿಗೆ ಪ್ರಾಸ, ಛಂದಸ್ಸು, ಉಪಮೆ-ಅಲಂಕಾರ ಮತ್ತು ಧ್ವನಿತ ಪದಗಳ ಲಾಲಿತ್ಯ ಜನ್ಮಜಾತವಾಗಿ ಬಂದಹಾಗೇ ಕಾಣುತ್ತದೆ! ಕವಿಯೆನಿಸುವುದು ಹಾಗೆ ಸುಲಭವಲ್ಲ, ಅದೊಂದು ವಿಸ್ತೃತ ದೃಷ್ಟಿಕೋನದ ಸಮಾಜಮುಖಿ ಜೀವನಗತಿ! ಕವಿ ತನ್ನ ಕೃತಿಗಳಲ್ಲಿ ಎಡವಟ್ಟು ಮಾಡಿದರೆ ಕಪಿ ಬಾಳೆಯ ತೋಟ ಹೊಕ್ಕಂತಾಗುತ್ತದೆ ಎಂಬುದು ನನ್ನ ಅನಿಸಿಕೆ. ಇಂದಿನ ಕ[ಪಿ]ವಿಗಳು ಅದನ್ನು ಮೈಗೂಡಿಸಿ ಕೊಳ್ಳಲಿ ಎಂಬುದು ನನ್ನ ವಿನಮ್ರ ವಿನಂತಿ. ಹಿರಿಯ ಮಿತ್ರ ಶತಾವಧಾನಿ ಆರ್. ಗಣೇಶ್ ಅವರು ಇದಕ್ಕಾಗೇ ’ಪದ್ಯಪಾನ’ ಎಂಬ ಆನ್ ಲೈನ್ ಶಾಲೆಯನ್ನು ತೆರೆದಿದ್ದಾರೆ! ಅದರ ಕೊಂಡಿ ಇಲ್ಲಿದೆ >>http://padyapaana.com/

ತಮ್ಮ ವ್ಯಾಖ್ಯಾನದ ಬಗ್ಗೆ ಮತ್ತೆ ಹೇಳಿದ್ದನ್ನೇ ಹೇಳುವುದು ಬೇಡ ಅಲ್ಲವೇ? ಅದೊಂದು ರಸಪಾಕ; ಕರ್ಜೀಕಾಯಿಯಂತೇ ಅಥವಾ ಮೋದಕದಂತೇ ಮೋದಪ್ರದ ಎಂದಷ್ಟೇ ಹೇಳುತ್ತಿದ್ದೇನೆ, ಧನ್ಯವಾದಗಳು.

sunaath said...

ಪ್ರಭಾಮಣಿಯವರೆ,
ಧನ್ಯವಾದಗಳು. ನಿಮ್ಮ ಬ್ಲಾಗಿಗೆ ನಾನು ನಿಯತವಾಗಿ ಬರುತ್ತಿದ್ದೇನೆ. ಬಾಳಿಗೆ ಬೆಳಕು ಕೊಡುವ ನಿಮ್ಮ ಲೇಖನಗಳು ಪ್ರಶಂಸನೀಯವಾಗಿವೆ.

sunaath said...

ಭಟ್ಟರೆ,
ಬೇಂದ್ರೆಯವರನ್ನು ಭುವನದ ಭಾಗ್ಯ ಎಂದು ಶ್ರೀ ಆಮೂರರು ವರ್ಣಿಸಿದ್ದಾರೆ. ಕನ್ನಡಕಾವ್ಯೋದ್ಯಾನದಲ್ಲಿ ಕವಿಗಳೂ ಇದ್ದಾರೆ, ಕಪಿಗಳೂ ಇದ್ದಾರೆ. ಕವಿಗಳು ಉಪವಾಸ ಕುಳಿತಾಗ, ಕಪಿಗಳು ಬಾಳೆಯ ಹಣ್ಣುಗಳನ್ನು ತಿಂದು ಮುಗಿಸಿದ್ದೂ ಉಂಟು!

Swarna said...

ಬೇಂದ್ರೆಯವರ ಕವನ ಓದೋವಾಗ ಖಂಡಿತ ಇನ್ಮುಂದೆ ನೀವ್
ನೆನಪಾಗ್ತಿರ ಸರ್. ಸಾಧನಕೇರಿಗೆ ಈ ಭಾರಿ ಭೇಟಿ ಇಟ್ಟಾಗ ಬೇಂದ್ರೆ ಸ್ವಲ್ಪ ಹೆಚ್ಚು
ಅರ್ಥವಾಗ್ತಾರೆ, ಅದಕಾಗಿ ಧನ್ಯವಾದಗಳು .
ನಾನು 'ಏಲಾವನ ಲವಲೀವನ ಲವಂಗವನಗಳಲಿ' ಎಲ್ಲೋ ಕೇಳಿದ್ದೇನೆ. ಆದರೆ ಮರೆತಿದೆ :(
ಸಾಧ್ಯವಾದರೆ ಪೂರ್ಣಪಾಠ ವನ್ನ ನಿಮ್ಮ ವಿವರಣೆಯೊಂದಿಗೆ ಕೊಡಿ.
ಸ್ವರ್ಣಾ

sunaath said...

ಸ್ವರ್ಣಾ ಮೇಡಮ್,
ಏಲಾಗೀತೆಯ ಪೂರ್ಣಪಾಠವನ್ನು ಓದಲು ನೀವು ಈ ಲಿಂಕನ್ನು ನೋಡಿರಿ:http://sallaap.blogspot.com/2008/04/blog-post_25.html

umesh desai said...

ಕಾಕಾ ನಿಮ್ಮ ವ್ಯಾಖ್ಯಾನ ಭಾರೀ ಇತ್ತು. ಕಬ್ಬಿಣದ ಕಡಲೆಯೂ ಕರಗಿ ಹಯಗ್ರೀವ ಆದಂಗ
ಹೆಚ್ಚಿಗಿ ಏನೂ ಹೇಳೂದು ಉಳದಿಲ್ಲಾ ನಿಮಗೊಂದು ಹಂಗೂ ಬೇಂದ್ರೆ ಅಜ್ಜನಿಗೊಂದು ಸಲಾಮು
+

ಸಿಂಧು sindhu said...

ಪ್ರೀತಿಯ ಸುನಾಥ ಕಾಕಾ,
ಬೇಂದ್ರೆ ಅಜ್ಜನ ರುಚಿ-ಗುಣ ವಿಶೇಷಗಳನ್ನ ಉದಾಹರಣೆಸಹಿತ ನೀವು ವಿವರಿಸಿರುವುದು ತುಂಬ ಉಪಯುಕ್ತ. ಬೇಂದ್ರೆಯವರ ಕಾವ್ಯಕ್ಕೆ ಇದು ಪ್ರವೇಶಕ್ಕೂ ಆಸ್ವಾದನೆಗೂ ಎರಡಕ್ಕೂ ಅತಿ ಉಪಯುಕ್ತ ವಿವರ.
ಕವಿಸಾಲುಗಳ ಸೊಲ್ಲು ವಿವರಿಸುತ್ತಾ, ಕವಿಯ ಮನಸ್ಥಿತಿ, ಸಾಮಾಜಿಕ ಚಿಂತನೆ, ಸಂಸ್ಕೃತಿ, ಪ್ರಕೃತಿ, ಮತ್ತು ಹಲವು ವಿಷಯ ವೈವಿಧ್ಯಗಳನ್ನ ಅರ್ಥ ಮಾಡಿಸಿಕೊಟ್ಟಿದ್ದೀರಿ.
ಶರಣು ನಿಮಗೆ.
ಮನುಷ್ಯ ಸಮುದ್ರವೋ, ಬಾವಿಯೋ, ಹೊಳೆಯ ಮುಂದೇ ಇದ್ದರೂ - ಬೊಗಸೆಯೊಂದು ಬೇಕು ಅದು ಬಾಯಿ ತಲುಪಲಿಕ್ಕೆ. ದಾಹ ತೀರಿಸಲಿಕ್ಕೆ.
ನೀವು ಅವರ ಕಾವ್ಯಧಾರೆಯ ಬೊಗಸೆಗೈ. ಎಂದೋ ಕವಿ ಕೂತು ಬರೆದ ಸಾಲು ಯಾವಯಾವುದೋ ಕ್ಷಣದ ಧಾವಂತಗಳನ್ನ ಸಂತೈಸುವ ಪರಿಗೆ ನಾನು ಬೆರಗಾಗಿದ್ದೇನೆ. ಕಾಲ ದೇಶಗಳನ್ನು ಮೀರಿ ಹಬ್ಬುವ ಭಾವದ ಬೆಡಗು!
ನಮಸ್ತೇ.
ಪ್ರೀತಿಯಿಂದ,
ಸಿಂಧು

ರಾಘವೇಂದ್ರ ಜೋಶಿ said...

ಚಿಕ್ಕವನಿದ್ದಾಗ ನಮ್ಮಮ್ಮ ಚಪಾತಿಯಲ್ಲಿ ತುಪ್ಪ-ಉಪ್ಪು ಹಚ್ಚಿ,ಸುರುಳಿಸುತ್ತಿ,ಕೈಯಲ್ಲಿಟ್ಟು
''ಏನಾದ್ರೂ ಮಾಡ್ಕೋ ಹೋಗ್.." ಅಂತ ತನ್ನ ಪಾಡಿಗೆ ತಾನು ಸುಮ್ಮನಿದ್ದು ಬಿಡುತ್ತಿದ್ದಳು.
ನಿಮ್ಮ ವಿವರಣೆ ನೋಡಿ ಅದೆಲ್ಲ ನೆನಪಾಯಿತು..
(ಬೇಂದ್ರೆ) ಕವಿತೆಗಳನ್ನು ಹೇಗೆ ಓದಬೇಕು,ಹೇಗೆ ಗ್ರಹಿಸಬೇಕು ಅಂತ ಒಂದು ಸುಸೂತ್ರ ವಿಧಾನದಲ್ಲಿ
ಹೇಳಿಕೊಡುತ್ತಿರುವ ನಿಮಗೆ ಥ್ಯಾಂಕ್ಸ್. :-)

Keshav.Kulkarni said...

ನಿಮ್ಮಂಗ ಬೇಂದ್ರೆಯನ್ನ ಓದ್ಡಿಕೊಂಡು ನಿಮ್ಮಂಗ ಬರಿಲಾಕ ಪಡೆದು ಬಂದವ ಬೇಕೋ!
ನೀವು ನಮಗೆಲ್ಲ ಬೇಂದ್ರೆ ವಿಚಾರದಲ್ಲಿ ಗುರುದೇವ!
ನೀವು ಬೇಂದ್ರೆಯವರ ಎಲ್ಲ ಕವನಗಳನ್ನೂ ಇದೇ ರೀತಿ ಬರೆದು ನಮಗೆಲ್ಲ ಉಣಿಸಿ!!
- ಕೇಶವ

sunaath said...

ದೇಸಾಯರ,
ಬೆಂದ್ರೆಯವರ ಕವನಗಳು ಹೊರಗೆ ಸರಳ,ಒಳಗೆ ಸಂಕೀರ್ಣ.
ಅವರ ಕಾವ್ಯ ಓದುತ್ತಿರುವ ನಾವೇ ಭಾಗ್ಯವಂತರು.

sunaath said...

ಸಿಂಧು,
ಬೇಂದ್ರೆ-ಕಾವ್ಯ ಕಾಲ,ದೇಶಗಳನ್ನು ಮೀರಿದ entity ಎಂದು ಸರಿಯಾಗಿ ಗುರುತಿಸಿದ್ದೀರಿ. ನವೋದಯದ ಹಾಗು ನವ್ಯದ ಅನೇಕ ಸಾಹಿತಿಗಳು ಈಗ irrelevant ಎಂದು ಅನಿಸುತ್ತಾರೆ. ಆದರೆ ಬೇಂದ್ರೆ ಕಾವ್ಯಾಸ್ವಾದಕ್ಕೆ ಕಾಲದೇಶದ ಹಂಗಿಲ್ಲ!

sunaath said...

RJ,
ಹಿರಿಯರಿಂದ ನನಗೆ ಬಂದದ್ದನ್ನು, ನಾನು ಕಿರಿಯರಿಗೆ ದಾಟಿಸುತ್ತಿದ್ದೇನೆ, ಕೈಯಲ್ಲಿ ‘ತುಪ್ಪ-ಚಪಾತಿ’ ಕೊಡುವಂತೆ!

sunaath said...

ಕೇಶವರೆ,
ಬೇಂದ್ರೆಯವರನ್ನು ನಾನು ಗ್ರಹಿಸಿದ್ದು ಅತ್ಯಲ್ಪ. ಆದರೆ ಅರಿವಿಗೆ ಬಂದದ್ದನ್ನು ಖುಶಿಯಿಂದ ನಿಮ್ಮ ಜೊತೆಗೆ ಹಂಚಿಕೊಳ್ಳುವೆ!

Ashok.V.Shetty, Kodlady said...

ಸುನಾಥ್ ಸರ್....

ಬೇಂದ್ರೆಯವರ ಬಗ್ಗೆ ತಿಳಿದುಕೊಂಡಷ್ಟು ಕಡಿಮೆ ಅನ್ನಿಸುತ್ತೆ...ಬೇಂದ್ರೆಯವರ ಕಾವ್ಯದಲ್ಲಿ ಸಿಗುವ ಹದವಾಗಿ ಪಾಕಗೊಂಡ ರಸವತ್ತಾದ ಜೀವನ ಮೌಲ್ಯಗಳ ಮಿಶ್ರಣ ಮತ್ತೆಲ್ಲಿ ಸಿಗಬಲ್ಲುದು ? ಅವರ ಜೀವನವೇ ಕಾವ್ಯ, ಕಾವ್ಯವೇ ಜೀವನ....

ನನ್ನ ಮೆಚ್ಚಿನ ನಾಕುತಂತಿಯ ಸುಪ್ರಸಿದ್ಧ ಕವನದ ಸಾಲು ನೆನಪಾಯಿತು....
ಈ ಜಗ ಅಪ್ಪ-ಅಮ್ಮನ ಮಗ
ಅಮ್ಮನೊಳಗೆ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ........
- ಹೀಗೆ ಶೃಂಗಾರ, ವಾತ್ಸಲ್ಯ, ಭಕ್ತಿ ಇವುಗಳ ತ್ರಿವೇಣಿ ಸಂಗಮವನ್ನು ಇಲ್ಲಿ ಕಾಣಬಹುದು.....

ಬೇಂದ್ರೆಯವರ ಕಾವ್ಯಗಳ ವಿವರವನ್ನು ಸುಲಭವಾಗಿ, ಸಮಗ್ರವಾಗಿ ನಮಗೆ ಮುಟ್ಟಿಸಲು ಪ್ರಯತ್ನಿಸುತ್ತಿರುವ ನಿಮಗೆ ಅನಂತ ಧನ್ಯವಾದಗಳು...

ಸೀತಾರಾಮ. ಕೆ. / SITARAM.K said...

ಬೇಂದ್ರೆ ಸಮಗ್ರ ಅವಲೋಕನದಲ್ಲಿ ಹಲವು ವಿಶಿಷ್ಟ ಅಂಶಗಳನ್ನೂ ಗುರುತಿಸಿ ಲೇಖನಿಸಿದ ಈ ದಾಖಲೆ ಓದುಗರಿಗೆ ಪ್ರಿಯವಾಗಿದ್ದು.
ತಮ್ಮ ಲೇಖನ ಬೇಂದ್ರೆ ಓದಿದ್ದರೆ? ಎಂಬ ಕಲ್ಪನೆ ಮನದಲ್ಲಿ ಮೂಡಿತು.
ಅವರ ಹರವನ್ನು ಸರಿಯಾಗಿ ಹಿಡಿದಿರುವ ತಾವು ಅವರಿಗೆ ಹೆಮ್ಮೆಯವರಾಗಿರುತ್ತಿದಿರಿ ಎಂದು ನನ್ನ ಅನಿಸಿಕೆ.

Karthik Kamanna said...

ಸಾಧನಕೇರಿಯ ಸಾಧಕನ ಹಿರಿಮಿಗೆ ಅವರೇ ಸಾಟಿ!
ವಿಚಾರಪೂರ್ಣ ಲೇಖನಕ್ಕೆ ಧನ್ಯವಾದಗಳು ಸುನಾಥರೇ :)

sunaath said...

ಕಾರ್ತೀಕರೆ,
ಧನ್ಯವಾದಗಳು.

sunaath said...

ಸೀತಾರಾಮರೆ,
ಧನ್ಯವಾದಗಳು.