Tuesday, February 24, 2015

ಹುದುಗಲಾರದ ದುಃಖ............ಬೇಂದ್ರೆ



ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ
          ನಸುನಗುತ ಬಂದೆ ಇದಿರು;
ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ
          ಇದು ಯಾವ ಊರ ಚದುರು?

ಕೈಮುಟ್ಟಿ ಮೈಮುಟ್ಟಿ ನನ್ನ ಮನ ಸಂತೈಸ—
           ಲೆಂದು ಬಗೆವವಳು ನೀನು,
ನಾನದನೆ ಬಯಸುತಿಹ ಸೊಗಸುಗಾರಿಕೆಯವನೆ
           ನಾನೆದೆಯ ಕಟುಕನೇನು?

ಮುಗುಳುನಗೆಯರಳಿಸುತ ಕರಿಯಾಲಿ ಹೊರಳಿಸುತ
           ಸುಳ್ಳುಸುಖ ಮೆರೆಸಬಹುದೆ?
ಮಮತಾಜಳನು ಹುಗಿದು ತಾಜಮಹಲನು ಕಟ್ಟಿ
           ನಿಜದುಃಖ ಮರೆಸಬಹುದೆ?

ಎಲೆಲೆ ಜೀವದ ಗೆಳತಿ ! ನನ್ನೆದೆಯ ಗುಡಿಯಲ್ಲಿ
           ನೀನು ಅಟಮಟಿಸತಿರಲು
ನಿನ್ನ ನಗೆ ಸುಖದ ಹೂವೆಂದು ತಿಳಿಯಲಿ ಹೇಗೆ
           ಅಂತಿಂತು ನಟಿಸುತಿರಲು?
……………………………………………………………………….
ವರಕವಿ ಬೇಂದ್ರೆಯವರ ಜೀವನದಲ್ಲಿ ಬಂದ ಪರಿತಾಪಗಳು ಅಷ್ಟಿಷ್ಟಲ್ಲ. ಅವರ ಐದು ಮಕ್ಕಳು ಶಿಶುಮರಣವನ್ನಪ್ಪಿದರು. ಈ ಆಘಾತಗಳನ್ನು ಸಹಿಸುವುದು ಹೇಗೆ?  ಇಂತಹ ಸಂದರ್ಭದಲ್ಲಿ ಗಂಡಹೆಂಡಿರು ತಮ್ಮ ದುಃಖವನ್ನು ಮರೆಮಾಚುತ್ತ ಪರಸ್ಪರರನ್ನು ಸಂತೈಸುವ ಪ್ರಯತ್ನ ಮಾಡುವುದು ಸಹಜ. ಬೇಂದ್ರೆಯವರ ಹೆಂಡತಿಯು ತನ್ನ ದುಃಖವನ್ನು ಮರೆಮಾಚಿ, ತನ್ನ ಗಂಡನನ್ನು ಸಮಾಧಾನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕಣ್ಣಿಗೆ ಮರೆಯಾದದ್ದು ಹೃದಯಕ್ಕೆ ಕಾಣದಿದ್ದೀತೆ? ಅಂತೆಯೇ ಬೇಂದ್ರೆ ತಮ್ಮ ಹೆಂಡತಿಗೆ ಕೇಳುತ್ತಾರೆ:
ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ
          ನಸುನಗುತ ಬಂದೆ ಇದಿರು;
ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ
          ಇದು ಯಾವ ಊರ ಚದುರು?
ಈ ದುಃಖ ಹುದುಗಲಾರದ್ದು; ಅಂದರೆ ಎಷ್ಟೇ ಪ್ರಯತ್ನಿಸಿದರೂ ಇದನ್ನು ಅದುಮಿ ಇಡಲು ಸಾಧ್ಯವಾಗದು. ಅಂತಹ ದುಃಖವನ್ನು ಬೇಂದ್ರೆಯವರ ಪತ್ನಿ ತನ್ನ ನಸುನಗುವಿನಲ್ಲಿ ಹುಗಿದು ಹಾಕಿ ತನ್ನ ಗಂಡನನ್ನು ಸ್ವಾಗತಿಸುತ್ತಿದ್ದಾರೆ. ಆದರೆ ಪತ್ನಿಯ ಅಂತರಂಗವನ್ನು ಅರಿಯದಷ್ಟು ಆತ ಪರಕೀಯನೆ ಅಥವಾ ಶತದಡ್ಡನೆ? ಆದುದರಿಂದಲೇ ಅವರು ತಮ್ಮ ಹೆಂಡತಿಗೆ ಕೇಳುತ್ತಾರೆ: ‘ಈ ಜಾಣತನವನ್ನು ಎಲ್ಲಿಂದ ಕಲಿತೆ?’

ಬರಿಯ ಮಾತಿನಿಂದ ತನ್ನ ಗಂಡನನ್ನು ಸಮಾಧಾನಗೊಳಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಹೆಂಡತಿಯು, ಆತನ ಹತ್ತಿರ ಹೋಗಿ, ಆತನ ಮೈ-ಕೈ ಮುಟ್ಟಿ ಸಾಂತ್ವನಗೊಳಿಸುವುದು ಸಹಜವಷ್ಟೇ? ಕೆಲವು ಗಂಡಸರು ಸ್ತ್ರೀಸ್ಪರ್ಶದಿಂದ ಕರಗಿ ಹೋಗುತ್ತಾರೆ. ಆದರೆ ಸ್ತ್ರೀಸಾಮೀಪ್ಯವು ತನ್ನ ಸಂಕಟವನ್ನು ಕರಗಿಸಲು ಬೇಂದ್ರೆಯವರು ‘ಸೊಗಸುಗಾರ ಪುಟ್ಟಸ್ವಾಮಿ’ ಅಲ್ಲವಲ್ಲ! ಅವರು ತಮ್ಮ ಹೆಂಡತಿಯ ಅಳಲಿಗೆ ಮಿಡಿಯುವ ಅಂತಃಕರಣಮಯಿ ಗಂಡನಲ್ಲವೆ? ಅದನ್ನು ಅವರು ಹೇಳುವುದು ಹೀಗೆ:
ಕೈಮುಟ್ಟಿ ಮೈಮುಟ್ಟಿ ನನ್ನ ಮನ ಸಂತೈಸ—
        ಲೆಂದು ಬಗೆವವಳು ನೀನು,
ನಾನದನೆ ಬಯಸುತಿಹ ಸೊಗಸುಗಾರಿಕೆಯವನೆ
        ನಾನೆದೆಯ ಕಟುಕನೇನು?

ತಮಗೊಂದು ಕೂಸು ಇದ್ದದ್ದು ಕೇವಲ ಒಂದು ಕನಸು; ತನಗೆ  ಪುತ್ರಶೋಕವು ಆಗಿಯೇ ಇಲ್ಲ ಎನ್ನುವ ಭ್ರಮೆಯನ್ನು ಹುಟ್ಟಿಸುವಂತೆ, ಬೇಂದ್ರೆಯವರ ಹೆಂಡತಿ ಅಭಿನಯ ಮಾಡುತ್ತಾರೆ. ಮುಖದ ಮೇಲೆ ಮಂದಹಾಸ ತರುತ್ತಾರೆ, ತಮ್ಮ ಬಟ್ಟಲುಗಣ್ಣುಗಳನ್ನು ಓಲಾಡಿಸುತ್ತಾರೆ.

(ಬೇಂದ್ರೆಯವರ ಹೆಂಡತಿಗೆ ವಿಶಾಲವಾದ ಕಪ್ಪು ಕಣ್ಣುಗಳು ಇದ್ದವೇನೊ? ಅವರ ಮತ್ತೊಂದು ಕವನ ‘ನೀ ಹೀಂಗ ನೋಡಬ್ಯಾಡ ನನ್ನ’ ಕವನದಲ್ಲೂ ಸಹ ಅವರು ತಮ್ಮ ಹೆಂಡತಿಯ ಕಣ್ಣುಗಳನ್ನು ಹೀಗೆ ವರ್ಣಿಸಿದ್ದಾರೆ:
‘ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?’)

ಆದರೆ ಈ ನಟನೆಯ ಹಿಂದಿನ ಸಂಕಟ ಬೇಂದ್ರೆಯವರಿಗೆ ಅರ್ಥವಾಗದಿದ್ದೀತೆ?  ಆ ಸಮಯದಲ್ಲಿ ಅವರ ಹೃದಯದಿಂದ ಬಂದ ನುಡಿಯೊಂದು ಕನ್ನಡ ಕಾವ್ಯದ ಶ್ರೇಷ್ಠ ಉಪಮೆಯಾಗಿ ಹೊರಹೊಮ್ಮಿದೆ:
ಮುಗುಳುನಗೆಯರಳಿಸುತ ಕರಿಯಾಲಿ ಹೊರಳಿಸುತ
        ಸುಳ್ಳುಸುಖ ಮೆರೆಸಬಹುದೆ?
ಮಮತಾಜಳನು ಹುಗಿದು ತಾಜಮಹಲನು ಕಟ್ಟಿ
        ನಿಜದುಃಖ ಮರೆಸಬಹುದೆ?

‘ಉಪಮಾ ಕಾಲಿದಾಸಸ್ಯ’ ಎಂದು ಹೇಳುತ್ತಾರೆ. ಕಾಲೀದಾಸನು ಒಂದು ವಸ್ತುವನ್ನು ಮತ್ತೊಂದು ವಸ್ತುವಿಗೆ ಹೋಲಿಸುವಾಗ ಸಮುಚಿತವಾದ ಉಪಮೆಗಳನ್ನು ಕೊಟ್ಟಿರಬಹುದು. ಆದರೆ ಬೇಂದ್ರೆಯವರ ಈ ಉಪಮೆಯಲ್ಲಿ ಕೇವಲ ಹೋಲಿಕೆ ಇಲ್ಲ; ಇಲ್ಲಿರುವುದು ಅಳಲಿನ ಆಕ್ರಂದ. ಉಪಮೆಯನ್ನು ಭಾವಾಭಿವ್ಯಕ್ತಿಯ ಮಾಧ್ಯಮವನ್ನಾಗಿ ಬಳಸುವ ಈ ಪ್ರತಿಭೆ ಬೇಂದ್ರೆಯವರಲ್ಲಿ ಮಾತ್ರ ಕಾಣಲು ಸಾಧ್ಯ.
[ಅವರ ಮತ್ತೊಂದು ಕವನ ಚಿಗರಿಗಂಗಳಚೆಲುವಿಯಲ್ಲಿಯೂ ಇಂತಹದೇ ಸಾಮರ್ಥ್ಯವನ್ನು ನೋಡಬಹುದು:
ಆಳುಗಳ ಹೋರಾಟ
ಆಳುವವರಿಗೆ ಆಟ
ಗಾಳಕ್ಕ ಸಿಕ್ಕ ಮೀನದ ಗೋಳಾಟೊ
ಗೆಣೆಯಾ ಗೋಳಾಟೋ
ಗೆದ್ದವರ ಇದ್ದವರ ಹಾರಾಟ;
ಅರೆಸತ್ತ ಜೀವಾ ಕೊಳೆತಾsವೊ
ಹುಳತಾsವೊ
ಅಳತಾsವೋ
ಹಸುಗೂಸು ತಿರುಗಿ ಹೊಟ್ಟ್ಯಾಗ ಹುಗಿಧ್ಹಾಂಗ
ಕೊನೆಯ ಸಾಲಿನಲ್ಲಿ ಇರುವ ಈ ಉಪಮೆಯನ್ನು ನೋಡಿರಿ. ಈ ಉಪಮೆಯೂ ಸಹ ಒಂದು ಕ್ರಿಯೆಯನ್ನು ಸೂಚಿಸುತ್ತ, ಕವನದ ಭಾವಕ್ಕೆ ಮಾಧ್ಯಮವಾಗಿದೆ.]

ಬೇಂದ್ರೆಯವರ ಹೆಂಡತಿಗೆ ಅವರ ಅಂತರಂಗದಲ್ಲಿ ಅತ್ಯುಚ್ಚ ಸ್ಥಾನವಿದೆ. ಅವಳು ಅವರಿಗೆ ಜೀವದ ಗೆಳತಿ; ಅವಳು ಅವರ ಗೃಹಲಕ್ಷ್ಮಿ; ಅವಳ ಸ್ಥಾನವು ದೇವರಿಗೆ ಹತ್ತಿರವಾದ ಸ್ಥಾನ. ಅಂದ ಮೇಲೆ ತಮ್ಮ ಹೃದಯದಲ್ಲಿ ನೆಲೆ ನಿಂತ ಅವಳ ಅಳಲು ಅವರಿಗೆ ತಿಳಿಯದಿದ್ದೀತೆ?
ಎಲೆಲೆ ಜೀವದ ಗೆಳತಿ ! ನನ್ನೆದೆಯ ಗುಡಿಯಲ್ಲಿ
        ನೀನು ಅಟಮಟಿಸತಿರಲು
ನಿನ್ನ ನಗೆ ಸುಖದ ಹೂವೆಂದು ತಿಳಿಯಲಿ ಹೇಗೆ
        ಅಂತಿಂತು ನಟಿಸುತಿರಲು?
‘ನಿನ್ನ ನಗೆ ಕೇವಲ ವೇಷಧಾರಿ, ಅದು ಸುಖದಲ್ಲಿ ಅರಳಿದ ಹೂವಲ್ಲ’ ಎಂದು ಬೇಂದ್ರೆ ತಮ್ಮ ಹೆಂಡತಿಯು ತಮಗಾಗಿ  ಮಾಡುತ್ತಿರುವ ನಟನೆಗಾಗಿ ಮರಗುತ್ತಾರೆ. ಇಲ್ಲಿ ‘ಅಂತಿಂತು’ ಎನ್ನುವ ಪದವನ್ನು ಗಮನಿಸಬೇಕು. ‘ಅನೇಕ ವಿಧಗಳಲ್ಲಿ ಆದರೆ ನಿರರ್ಥಕವಾದ’ ಎನ್ನುವ ವಿಸ್ತಾರಿತ ಅರ್ಥವನ್ನು ಈ ಪದವು ಇಲ್ಲಿ ನೀಡುತ್ತದೆ. ಸಾಮಾನ್ಯ ಪದಗಳನ್ನು ಬಳಸುತ್ತಲೇ ಅಸಾಮಾನ್ಯ ಅರ್ಥವನ್ನು ಹೊಮ್ಮಿಸುವ ಬೇಂದ್ರೆ-ಪ್ರತಿಭೆ ಇದು. ಇಂತಹ ಪದಗಳನ್ನು ಬೇಂದ್ರೆಯವರ ಕವನಗಳಲ್ಲಿ ನಾವು ಸಾಮಾನ್ಯವಾಗಿ ಕಾಣುತ್ತಲೇ ಇರುತ್ತೇವೆ.
ಈ ಕವನದ ನಾಲ್ಕೂ ನುಡಿಗಳು ಪ್ರಶ್ನೆಗಳಲ್ಲಿ ಕೊನೆಗೊಳ್ಳುವುದನ್ನು ಗಮನಿಸಬೇಕು.
‘ಹುದುಗಲಾರದ ದುಃಖ’ ಕವನವು  ಬೇಂದ್ರೆಯವರ ‘ಗರಿ’ ಕವನಸಂಕಲನದಲ್ಲಿ ಅಡಕವಾಗಿದೆ.
………………………………………………………………………….
ತಮ್ಮ ತಾಪ, ಸಂತಾಪಗಳನ್ನೆಲ್ಲ ಬೇಂದ್ರೆ ಕಾವ್ಯವಾಗಿ ಪರಿವರ್ತಿಸಿದರು. ತಮ್ಮ ‘ಸಖೀಗೀತ’ದಲ್ಲಿ ಬೇಂದ್ರೆ ಹೀಗೆ ಹಾಡಿದ್ದಾರೆ:
ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವುದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿವೆ

ತಮ್ಮ ಕಾವ್ಯವನ್ನು ಆಸ್ವಾದಿಸುವ ಸಹೃದಯರಿಂದ ಬೇಂದ್ರೆ ಕೇಳುವುದು ಇಷ್ಟೇ:
ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.

Tuesday, February 17, 2015

ಮುದುಕಿ, ನಿನ್ನಾಟ ಮುಂದ ಅದ!



ಅರವಿಂದ ಕೇಜರಿವಾಲಾರು ಮೊದಲ ಸಲ ದಿಲ್ಲಿಯ ಮುಖ್ಯ ಮಂತ್ರಿಯಾಗುವ ಸಮಯದಲ್ಲಿ ನನಗೆ ಅವರ ಬಗೆಗೆ ತುಂಬ ಗೌರವವಿತ್ತು. ಇವರು ಅನೇಕ ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾದವರು ಹಾಗು ರಾಜಕೀಯದ ಶುದ್ಧೀಕರಣಕ್ಕಾಗಿ ತಮ್ಮದೇ ಆದ ‘ಆಮ ಆದ್ಮಿ ಪಕ್ಷ’ವನ್ನು ಕಟ್ಟಿ ಪರ್ಯಾಯ ರಾಜಕಾರಣವನ್ನು ಪ್ರಾರಂಭಿಸಿದವರು ಎನ್ನುವುದು ನನ್ನ ಭಾವನೆಯಾಗಿತ್ತು. ಆದರೆ ಕಳೆದ ವರ್ಷದಲ್ಲಿ ನಡೆದ ಚುನಾವಣೆಗೂ ಮೊದಲು ಅವರು ಉತ್ತರ ಪ್ರದೇಶದ ಮುಸ್ಲಿಮ ಧರ್ಮಗುರು ಒಬ್ಬರನ್ನು ಭೆಟ್ಟಿಯಾಗಿ ಮುಸ್ಲಿಮರ ಮತಗಳನ್ನು ಸೆಳೆಯಲು ಪ್ರಯತ್ನಿಸಿದಾಗ, ‘ಓಹ್! ಇವರೂ ಒಬ್ಬ ಪಕ್ಕಾ ರಾಜಕಾರಣಿಯೇ!’ ಎಂದು ಬೇಸರವಾಯಿತು.

ಈ ಸಲ ದಿಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಂತೂ ಕೇಜರಿವಾಲಾ ತಮ್ಮ ಬಣ್ಣವನ್ನು ಸರಿಯಾಗಿ ತೋರಿಸಿದರು. ತಮ್ಮ ಎದುರಾಳಿ ಕಿರಣ ಬೇಡಿಯವರನ್ನು ‘ಮೋದಿಯ ಸೂತ್ರದ ಗೊಂಬೆ’ ಎಂದು ಹೀಯಾಳಿಸಿದ ಇವರು, ‘ಕೇಜರಿವಾಲಾ ಕಳ್ಳ’ ಎಂದು ನಿರ್ಮಲಾ ಸೀತಾರಾಮನ್ ಆಪಾದಿಸಿದಾಗ, ಇದು ‘ಅಸಭ್ಯ ಪ್ರಚಾರ’ ಎಂದು ಪ್ರತಿಭಟಿಸಿದರು.

ಕೇಜರಿವಾಲಾ ಮತದಾರರಿಗೆ ಒಡ್ಡಿದ ಆಮಿಶಗಳಿಗೆ ಹಾಗು ತೋರಿಸಿದ ಕಾಮನಬಿಲ್ಲಿಗೆ ನನ್ನ ಆಕ್ಷೇಪಣೆ ಇಲ್ಲ. ಎಲ್ಲ ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ಇದನ್ನು ಮಾಡುತ್ತಾರೆ. ಆದರೆ ಕೇಜರಿವಾಲಾರು ತಮ್ಮನ್ನು ವೈಭವೀಕರಿಸುವ ಉದ್ದೇಶದಿಂದ, ಇತರರನ್ನು ಮುಖ್ಯವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಯನ್ನು ವಿನಾಕಾರಣ ಕೀಳು ಮಾಡುವುದು ಸರಿಯಲ್ಲ. ವಿದೇಶಿ ಬ್ಯಾಂಕುಗಳಲ್ಲಿ ಇರುವ ಭಾರತೀಯರ ಕಪ್ಪು ಹಣವನ್ನು ಬಯಲಿಗೆಳೆಯುತ್ತೇನೆ ಎನ್ನುವ ವಿದೇಶೀ ವ್ಯಕ್ತಿಯನ್ನು ಭಾರತ ಸರಕಾರವು ತನ್ನ ‘ಕಪ್ಪು ಹಣ ನಿರ್ವಹಣಾ ಮಂಡಲಿ’ಯಲ್ಲಿ ಸೇರಿಸಿಕೊಳ್ಳಬೇಕು ಎನ್ನುವ ಸಲಹೆಯನ್ನು ಪತ್ರಮುಖೇನ ಇವರು ಭಾರತ ಸರಕಾರಕ್ಕೆ ನೀಡುತ್ತಿದ್ದಾರೆ ಹಾಗು ಇದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದಾರೆ. ಇದರ ಹಿಂದಿನ ಉದ್ದೇಶವು ಯಾರಿಗಾದರೂ ಅರ್ಥವಾಗುವಂತಹದೇ. ಇಂತಹ ಕ್ರಿಯೆಯು ಅಸಾಧುವಾಗಿದ್ದರಿಂದ ಭಾರತ ಸರಕಾರವು ಹಾಗೆ ಮಾಡಲು ಸಾಧ್ಯವಿಲ್ಲ. ಆಗ ಕೇಜರಿವಾಲಾ ಅಮಾಯಕ ಜನರೆದುರಿಗೆ ಬೊಬ್ಬೆ ಹಾಕಬಹುದು: ‘ನೋಡಿ, ನಾನೊಬ್ಬನೇ ಸತ್ಯ ಹರಿಶ್ಚಂದ್ರ; ಉಳಿದವರು ಭ್ರಷ್ಟರು!’ ಭಾರತ ಸರಕಾರವು  ಕೆಲಸದಿಂದ ತೆಗೆದು ಹಾಕಿದ ಸಂಜೀವ ಚತುರ್ವೇದಿಯವರನ್ನು ಪುನಃ ನೇಮಿಸಿಕೊಳ್ಳುವ ಮೂಲಕ ಕೇಜರಿವಾಲಾ ಕೇಂದ್ರ ಸರಕಾರದ ವಿರುದ್ಧ ಸೆಡ್ಡು ಹೊಡೆಯುತ್ತಿದ್ದಾರೆ. ಇವೆಲ್ಲುವುಗಳ ಹಿಂದಿನ ಉದ್ದೇಶ ಇಷ್ಟೇ. ಕೇಂದ್ರ ಸರಕಾರದ ಮುಖಕ್ಕೆ ಕಪ್ಪು ಬಳಿದು, ಜನತೆಯನ್ನು ಅದರ ವಿರುದ್ಧ ತಿರುಗಿಸುವುದು. ಅಮಾಯಕ ಜನತೆಯನ್ನು ಮರಳು ಮಾಡುವ ಇಂತಹ ತಂತ್ರಗಳನ್ನು ತಥಾಕಥಿತ ಕ್ರಾಂತಿಕಾರಿಗಳು ಯಾವತ್ತಿನಿಂದಲೂ ಅನುಸರಿಸುತ್ತಲೇ ಬಂದಿದ್ದಾರೆ! ಫ್ರಾನ್ಸ ಹಾಗು ರಶಿಯಾದಲ್ಲಿ ನಡೆದ ಕ್ರಾಂತಿಗಳು ಎಂತಹ ನರಮೇಧಗಳಲ್ಲಿ ಕೊನೆಗೊಂಡವು ಹಾಗು ಕೊನೆಗೂ ಏನನ್ನೂ ಸಾಧಿಸದೇ ಹೋದವು ಎನ್ನುವುದು ಇತಿಹಾಸದ ಅಭ್ಯಾಸಿಗಳಿಗೆ ಗೊತ್ತಿರುವ ವಿಷಯವೇ ಆಗಿದೆ.

ದಿಲ್ಲಿಗೇ ಆಗಲಿ, ಭಾರತಕ್ಕೇ ಆಗಲಿ, ಈಗ ಬೇಕಾಗಿರುವುದು ಸಂಪತ್ತನ್ನು ವೃದ್ಧಿಸುವ ಯೋಜನೆಗಳು. ಇಂತಹ ಯೋಜನೆಗಳಿಗಾಗಿ ಮೋದಿ ಎಲ್ಲೆಲ್ಲೂ ಅಲೆದು, ನಿಧಿಯನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕೇಜರಿವಾಲಾ ಅವರು ಈ ನಿಧಿಯನ್ನು ಅಸಮರ್ಪಕ ಸಬ್ಸಿಡಿಗಳ ಮೂಲಕ ಹಾಳು ಮಾಡುತ್ತ, ತಮ್ಮ ಮುಂದಿನ ಚುನಾವಣೆಗಳ ಉದ್ದೇಶದಿಂದ ಅಪವ್ಯಯಗೊಳಿಸುತ್ತಿದ್ದಾರೆ. ವಾಹವ್ವಾ, ದೂರದೃಷ್ಟಿಯೇ!

ಅಣ್ಣಾ ಹಜಾರೆಯವರು ‘ರಾಜಕಾರಣವನ್ನು ಪ್ರವೇಶಿಸಬೇಡಿ’ ಎಂದು ತಮ್ಮ ಶಿಷ್ಯರಿಗೆ ಎಚ್ಚರಿಕೆ ನೀಡಿದ್ದು ಏಕೆ ಎನ್ನುವುದು ಈಗ ಅರ್ಥವಾಗುತ್ತದೆ. ಎಂತಹ ನಿಸ್ವಾರ್ಥಿ ಕೇಜರಿವಾಲಾ ಎಷ್ಟು ಸರಳವಾಗಿ ತಮ್ಮ ಬಣ್ಣವನ್ನು ಬದಲಾಯಿಸಿದರಲ್ಲ ಎಂದು ವ್ಯಥೆಯೂ ಆಗುತ್ತದೆ. ಇದರಲ್ಲಿ ಆಶ್ಚರ್ಯವೇನಿಲ್ಲ. ವೈಯಕ್ತಿಕ ಸ್ವಾರ್ಥವಿಲ್ಲದ ವ್ಯಕ್ತಿಯಲ್ಲಿ ರಾಜಕೀಯ ಸ್ವಾರ್ಥವು ಹುಟ್ಟಬಹುದಲ್ಲವೆ?  ಆದರೂ ಆ ಮಹಾಶಯನಿಗೆ ಒಂದು ಎಚ್ಚರಿಕೆಯ ಮಾತನ್ನು ಹೇಳಲೇ ಬೇಕು. ಲಕ್ಷ್ಮಣರೇಖೆಯನ್ನು ದಾಟಿದ ರಾವಣನು ಸೀತೆಯನ್ನು ಅಪಹರಿಸಲು ಸಾಧ್ಯವಾಯಿತು. ಆದರೆ ಆ ಮೂಲಕ ಇಡೀ ಲಂಕೆಯೇ ಸುಟ್ಟು ಹೋಯಿತು. ಕೇಜರಿವಾಲಾರೆ, ಇಡೀ ದಿಲ್ಲಿ ತನ್ನನ್ನು ಪ್ರೀತಿಸುತ್ತಿದೆ ಎಂದು ಬೊಬ್ಬೆ ಹೊಡೆಯಬೇಡಿ. ನಿಮಗೆ ಸಿಕ್ಕಿದ್ದು ಶೇಕಡಾ ೫೩ರಷ್ಟು ಮತಗಳು. ಇದರರ್ಥ ಶೇಕಡಾ ೪೭ರಷ್ಟು ಮತದಾರರು ನಿಮ್ಮನ್ನು ಪ್ರೀತಿಸುವದಿಲ್ಲ. ಈಗೇನೋ ನೀವು ದೊಂಬರಾಟವನ್ನು ಮಾಡುತ್ತಿದ್ದೀರಿ. ಆದರೆ ನಿಮಗೊಂದು ಮಾತನ್ನು ಗಟ್ಟಿಯಾಗಿ ಹೇಳಲೇ ಬೇಕು: ‘ಮುದುಕಿ, ನಿನ್ನಾಟ ಮುಂದ ಅದ!’