Wednesday, April 19, 2017

ಸಾಮರಸ್ಯದ ಸಹಜಕವಿ ಶಿಶುನಾಳ ಶರೀಫರು



ಹಾವೇರಿ ಜಿಲ್ಲೆಯ ಶಿಶುನಾಳದಲ್ಲಿ ೧೮೧೯, ಮಾರ್ಚ ೭ರಂದು ಜನಿಸಿದ ಮಹಮ್ಮದ ಶರೀಫರು ೧೮೮೯, ಮಾರ್ಚ ೭ರಂದೇ ದೇಹವಿಟ್ಟರು. ಎಪ್ಪತ್ತು ವರ್ಷಗಳ ತಮ್ಮ ಬದುಕಿನಲ್ಲಿ, ಶರೀಫರು ತಾವು ಕಂಡ ಬೆಳಕನ್ನು ಸುತ್ತಲಿನವರಿಗೆಲ್ಲರಿಗೆ ಕಾಣಿಸಲು ಅಲೆದಾಟದಲ್ಲಿಯೇ ಕಳೆದರು. ‘ಮೈ ಜಂಗಮ್ ಹೋಕರ ಗಲ್ಲಿ ಗಲ್ಲಿ ಫಿರಿಯಾ, ಅಂಗಬಹುತವು ಲಿಂಗ ಪಾವುಮೆ, ಕೋರಾಣ ಭಿಕ್ಷಾ ಬೋಲಿಯಾಎಂದು ಶರೀಫರೇ ತಮ್ಮ ಬದುಕಿನ ಬಗೆಗೆ ಹಾಡಿದ್ದಾರೆ.

ಮುಲ್ಕಿ ಪರೀಕ್ಷೆಯನ್ನು ಮುಗಿಸಿದ ಬಳಿಕ ಶರೀಫರು ಕನ್ನಡ ಶಾಲೆಯಲ್ಲಿ ಕೆಲಕಾಲ ಉಪಾಧ್ಯಾಯರಾಗಿ ದುಡಿದರು. ಹಳೆಗನ್ನಡ ಹಾಗು ನಡುಗನ್ನಡ ಕಾವ್ಯಗಳನ್ನೆಲ್ಲ ಶರೀಫರು ಅರಿತವರೆ. ಆದರೆ ಅವರೇ ರಚಿಸಿದ ಗೀತೆಗಳಲ್ಲಿ ಪೂರ್ವಸೂರಿಗಳ ಛಾಯೆ ಇನಿತೂ ಮೂಡಿಲ್ಲ. ಪಂಡಿತರಿಂದ ಕವಿ ಎಂದು ಕರೆಯಿಸಿಕೊಳ್ಳಲು ಶರೀಫರು ಕವನಗಳನ್ನು ರಚಿಸಲಿಲ್ಲ. ತಮ್ಮ ಸುತ್ತಲಿನ ಸಾಮಾನ್ಯ ಹಳ್ಳಿಯ ಜನರಿಗಾಗಿ ಶರೀಫರ ಹೃದಯದಿಂದ ಉಕ್ಕಿ ಬಂದ ಪದಗಳಿವು. ಸಹಜಸ್ಫೂರ್ತಿಯೇ ಅವರ ಗೀತೆಗಳ ಹಿಂದಿನ ಪ್ರೇರಣೆ. ಹಳ್ಳಿಗರ ಭಾಷೆಯೆ ಅವರ ಪದಗಳ ಭಾಷೆ. ಆದುದರಿಂದ ಅವರನ್ನು ಸಹಜ ಕವಿ ಎಂದು ಕರೆಯುವದು ಸಮಂಜಸವಾಗಿದೆ.

ಶರೀಫರು ಜೀವಿಸಿದ ಕಾಲದಲ್ಲಿ ನಮ್ಮ ಹಳ್ಳಿಗರಲ್ಲಿ ಧರ್ಮಭೇದವಿರಲಿಲ್ಲ. ಹಿಂದು ಹಾಗು ಮುಸಲ್ಮಾನರು ತಮ್ಮೀರ್ವರ ಹಬ್ಬಗಳನ್ನು ಜೊತೆಜೊತೆಯಾಗಿಯೇ ಆಚರಿಸುತ್ತಿದ್ದರು. ಆದುದರಿಂದ ಎಲ್ಲರೊಳಗೆ ಬೆಲ್ಲದಂತೆ ಬೆರತುಕೊಂಡಿದ್ದ ಶರೀಫರಿಗೆನಿಮ್ಮೊಳಗಿದ್ದೂ ನಿಮ್ಮಂತಾಗಲಿಲ್ಲಎನ್ನುವ ತಳಮಳವು ಬರಲೇ ಇಲ್ಲ.

ತಮ್ಮ ಗೀತೆಗಳಲ್ಲಿ ಅವರು ಹಿಂದೂ ದೇವತೆಗಳನ್ನು ಸ್ತುತಿಸಿದಂತೆಯೇ ಇಸ್ಲಾಮ ಧರ್ಮದ ಸಂತರನ್ನು ಹಾಗು ಪ್ರವಾದಿ ಮಹಮ್ಮದರನ್ನೂ ಸ್ತುತಿಸಿದ್ದಾರೆ. ಹಿಂದೂ ಹಬ್ಬಗಳಲ್ಲಿ ಕೋಲು ಕೋಲಿನ ಕೋಲು/ ಮೇಲೆ ಮುತ್ತಿನ ಕೋಲು ಎನ್ನುವ  ಕೋಲಾಟದ ಹಾಡುಗಳನ್ನು ರಚಿಸಿದಂತೆಯೆ, ಮುಸ್ಲಿಮ್ ಹಬ್ಬಗಳಲ್ಲೂ ಹಾಡು ಕಟ್ಟಿ ಹೆಜ್ಜೆ ಮೇಳವನ್ನು ಕುಣಿಸಿದ್ದಾರೆ.

ಮೊಹರಮ್ ಸಮಯದಲ್ಲಿ ಅವರು ರಚಿಸಿದ ಹೆಜ್ಜೆಮೇಳದ ಗೀತೆಯೊಂದನ್ನುಇಲ್ಲಿ ನೋಡಬಹುದು. ಗೀತೆಯು ಪೂರ್ಣವಾಗಿ ಕನ್ನಡದಲ್ಲಿಯೇ ಇರುವುದು ದರ  ವಿಶೇಷವಾಗಿದೆ.
ಸಖಿಯೆ ಅಲಾವಿ ಆಡುನು ಬಾ 
ಆಲಾವಿಯಾಡುತ, ಪದಗಳ  ಪಾಡುತ
ಬಳ್ಳಿ ಹಿಡಿದು, ಬಲು ಮೋಜಿಲೆ ಕುಣಿದು  
ಸೊಗಸಿನ ಸಿಂಗಾರ, ಮಾಡ್ಯಾರು ವಯ್ಯಾರ
ಬಾಗಿ ಬಳುಕುತ, ಹೆಜ್ಜಿ ಚೆಲ್ಲುತ,
ಗೆಜ್ಜಿ ಸಪ್ಪಳ ಕೇಳುನು ಬಾ 
ಶರಣರ ಲೀಲಾ, ಕಲಿಯುಗದ ಮೇಲಾ
ಜಾಹೀರಾದೀತು ಶಿಶುನಾಳನಾ ಶಾಹೀದರಾ,
ಹೊಂದಿಗೂಡುನು ಬಾ 

ಮೊಹರಮ್ ಸಂದರ್ಭದಲ್ಲಿ ತಾಜಿಯಾ (ದೇವರ) ಮುಂದೆ ಮಾಡುವ ಅಗ್ನಿಕುಂಡಕ್ಕೆಅಲಾವಿಎನ್ನುತ್ತಾರೆ. ಭಕ್ತರು ಕುಂಡದ ಬಳಿಯಲ್ಲಿ ಅಥವಾ ಕೆಂಡದ ಮೇಲೆ ಕುಣಿಯುವದಕ್ಕೆ ಅಲಾವಿ ಕುಣಿತವೆಂದು ಹೇಳುತ್ತಾರೆ. ಇಲ್ಲಿ ಶರೀಫರು ಸೂಚಿಸುತ್ತಿರುವ ಶರಣರೆಂದರೆ ಅರಬಸ್ತಾನದ ಕರ್ಬಲಾ ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದ ಇಮಾಮ ಹುಸೇನ, ಹಸನ್ ಹಾಗು ಅವರ ಅನುಯಾಯಿಗಳು. ಶರೀಫರು ಭಕ್ತರಲ್ಲಿ ಧರ್ಮಭೇದವನ್ನಾಗಲಿ, ಜಾತಿಭೇದವನ್ನಾಗಲಿ ಮಾಡುತ್ತಿರಲಿಲ್ಲ, ಎಲ್ಲ ಭಕ್ತರೂ ಅವರಿಗೆ ಶರಣರೇ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಭಕ್ತರಲ್ಲಿ ಮಾತ್ರವಲ್ಲ, ಹಿಂದು ಹಾಗು ಇಸ್ಲಾಮ ಧರ್ಮದ ದೇವರಲ್ಲಿಯೂ ಕೂಡ ಶರೀಫರು ಯಾವ ಭೇದವನ್ನೂ ಮಾಡುತ್ತಿರಲಿಲ್ಲ. ಹುಲಗೂರಿನಲ್ಲಿರುವ ಇಸ್ಲಾಮ ಧರ್ಮದ ಸಂತ ಖಾದರ ಶಾ ವಲಿಯವರನ್ನು ಅವರು ಸಂಬೋಧಿಸುವುದುಖಾದರಲಿಂಗಎಂದು!

ಶಿಶುನಾಳಕ್ಕೆ ಹತ್ತಿರ ಹುಲಗೂರಿನಲ್ಲಿರುವ ಸಂತ ಖಾದರ ಶಾ ವಲಿಯವರ ಸಮಾಧಿಗೆ ಶರೀಫರ ತಂದೆತಾಯಿಗಳು ಸಂತಾನಕ್ಕಾಗಿ ನಡೆದುಕೊಳ್ಳುತ್ತಿದ್ದರು. ಖಾದರ ಶಾ ವಲಿಯವರ ಅನುಗ್ರಹದಿಂದ ಶರೀಫರು ಜನಿಸಿದರು. ಶರೀಫರು ಆಗಾಗ ಖಾದರ ಶಾ ವಲಿಯವರ ಸಮಾಧಿಯ ದರ್ಶನ ಪಡೆಯುತ್ತಿದ್ದರು. ಖಾದರ ಶಾ ವಲಿಯವರನ್ನು ಶರೀಫರು ಖಾದರಲಿಂಗ ಎಂದು ಸಂಬೋಧಿಸಿ  ಹಾಡಿದ ಒಂದು ಗೀತೆ ಹೀಗಿದೆ:
ನಡೆಯೊ ದೇವರ ಚಾಕರಿಗೆ ಮುಕ್ತಿ-
ಗೊಡೆಯ ಖಾದರಲಿಂಗ ನೆಲಸಿರ್ಪ ಗಿರಿಗೆ.

ತಮ್ಮ ಮತ್ತೊಂದು ರಚನೆಯಲ್ಲಿ, ಶರೀಫರುಖಾದರಿ  ಸದಾವರಿ, ನಿತ್ಯ  ನಿರಂಜನಾವರಿಎಂದು ಹಾಡಿದ್ದಾರೆ.
ಚಾರೋ ಯಾರೋ ಅಲಿ ಪಾದಕ್ಕೆರಗಿಎನ್ನುವ ಅವರ ಗೀತೆಯಲ್ಲಿ ಇಸ್ಲಾಮ ಸ್ಥಾಪಕ ಮಹಮ್ಮದ ಹಾಗು ಮಹಾಭಾರತದ ಪಾಂಡವರು ಏಕಕಾಲ ಹಾಗು ಏಕದೇಶವಾಗಿದ್ದಾರೆ. ಗೀತೆಯ ಒಂದು ನುಡಿ ಹೀಗಿದೆ:
ಚಾರೋ ಯಾರೋ ಅಲಿ ಪಾದಕ್ಕೆರಗಿ
ಮಾರ್ಗ ಹಿಡಿದು ಬರುವ ಕಾಲದಲ್ಲಿ
ಮದೀನಾದ ಸ್ವರ್ಗಮಾನ
ಶಹರಿನೊಳು ಮಹಮ್ಮದನಿರಲು
ಯಮಜಗೆ ತೋರಲು ಭೂಮಿಪತಿ ಸಾರಲು
ಭೀಮನಿದನು ಕಂಡು ಅರ್ಜುನ, ನಕುಲ-ಸಹದೇವರಿಗೆ’ .

ಶರೀಫರು ಅನೇಕ ಸಂದರ್ಭಗಳಲ್ಲಿ ಹಿಂದೂ ಹಾಗು ಮುಸ್ಲಿಮ್ ಇಬ್ಬರನ್ನೂ ನಿಷ್ಠುರವಾಗಿ ಟೀಕಿಸಿದ್ದಾರೆ. ಅವರು ತಮ್ಮ ಸುತ್ತಲಿನ ಸಮಾಜದಲ್ಲಿ ಬೇವು-ಬೆಲ್ಲದಂತಿದ್ದವರು. ಅವರ ಅನೇಕ ಪದಗಳು ಬೇವಿನಂತೆ ಕಹಿಯಾಗಿದ್ದರೂ, ಸಮಾಜದ ರೋಗಗಳಿಗೆ ಗುಣಕಾರಿಯಾಗಿಯೂ ಇರುತ್ತಿದ್ದವು. ಬಿದ್ದೀಯಬೇ ಮುದುಕಿ ಎನ್ನುವ ಅವರ ಗೀತೆಯು ಇದಕ್ಕೆ ಉತ್ತಮ ನಿದರ್ಶನವಾಗಿದೆ.  ತರವಲ್ಲ ತಗಿ ನಿನ್ನ ತಂಬೂರಿ ಎನ್ನುವ ಗೀತೆಯಲ್ಲಿ ವೈಯಕ್ತಿಕ ನೈತಿಕತೆಯ ಜೊತೆಗೆ ಸಾಮಾಜಿಕ ಸಾಮರಸ್ಯವನ್ನು ಸಹ ಸಾಧಿಸಬೇಕು ಎನ್ನುವುದನ್ನು ಶರೀಫರು ಸೂಚಿಸುತ್ತಾರೆ. ಅದರಂತೆ ಬೋಧನಾಪ್ರಧಾನವಾದ ಅವರ ಗೀತೆಗಳು ಬೆಲ್ಲದಂತೆ ಸಿಹಿಯಾಗಿಯೂ, ಮಾರ್ಗದರ್ಶಕವೂ, ಎಲ್ಲರನ್ನು ಒಳಗೊಳ್ಳುವಂತಹವೂ ಆಗಿರುತ್ತಿದ್ದವು.
ಇದಕ್ಕೊಂದು ಉದಾಹರಣೆ ಹೀಗಿದೆ:
ಗುಜುಗುಜುಮಾಪೂರ ಆಡೋಣ
ಸಜ್ಜನರೆಲ್ಲರು ಕೂಡೋಣ
ಗಜಿಬಿಜಿ ಸಂಸಾರ ದೂಡೋಣ ಸಾ-
ಯುಜ್ಯ ಮುಕ್ತಿಯ ಹೊಂದೋಣ

 ಅಲ್ಲೀಕೇರಿಗೆ ಹೋಗುನು, ಬರ್ತೀರೇನ್ರೆ ಎನ್ನುವ ಪದದಲ್ಲಿ ಶರೀಫರು ತಮ್ಮ ಪ್ರಿಯ ಸಂತನಾದ ಅಲ್ಲಮಪ್ರಭುವನ್ನು ನೆನಸುವುದು ವಿಶೇಷವಾಗಿದೆ:
ಅಲ್ಲೀಕೇರಿಗೆ ಹೋಗುನು ಬರ್ತೀರೇನ್ರೆ ನೀವು
ಒಲ್ಲದಿದ್ದರೆ ಇಲ್ಲೆ ಇರ್ತೀರೇನ್ರೆ
ಕಲ್ಲೌ ಮಲ್ಲೌ ಕೂಡಿಕೊಂಡು
ದೀವಳಿಗೆಯ ಹಬ್ಬದಲ್ಲಿ
ಉಲ್ಲಾಸದಿಂದಿರುವ ಅಲ್ಲಮಪ್ರಭುವಿನ
ಮರತೀರೇನ್ರೆ, ಇಲ್ಲೇ ಇರತೀರೇನ್ರೆ!

(ಆಷಾಢ ಮಾಸದ ಅಮವಾಸ್ಯೆಯಂದು, ಸೀಗೆ ಹುಣ್ಣಿವೆಯಂದು ಹಾಗು ದೀಪಾವಳಿ ಪಂಚಮಿಯಂದು, ವಾರಿಗೆಯ ಹೆಣ್ಣು ಮಕ್ಕಳು ತರತರದ ತಿನಿಸುಗಳೊಂದಿಗೆ ವನಭೋಜನಕ್ಕೆ ಹೋಗುತ್ತಾರೆ. ಮೂರು ಸಂದರ್ಭಗಳನ್ನು ಅಲ್ಲೀಕೇರಿ ಎಂದು ಕರೆಯಲಾಗುತ್ತದೆ.)

ಕನಕದಾಸರ ಮುಂಡಿಗೆಗಳಂತೆ ಶರೀಫರು ಸಹ ಚಮತ್ಕಾರದ ಪದಗಳನ್ನು ಹಾಡಿದ್ದಾರೆ. ಅವುಗಳಲ್ಲಿ ವಿಶೇಷವಾದ ಖ್ಯಾತಿಯನ್ನು ಪಡೆದ ಪದಗಳೆಂದರೆ ಕೋಡಗನ್ನ ಕೋಳಿ ನುಂಗಿತ್ತ, ಕುಂಟ ಕುರುಡರೆಂಟು ಮಂದಿ, ಎಂಥಾ ಮೋಜಿನ  ಕುದುರಿಇತ್ಯಾದಿ.

ಶರೀಫರು ತಮ್ಮ ಕಾಲದ ಘಟನೆಗಳಿಗೆ ತೀವ್ರವಾಗಿ ಸ್ಪಂದಿಸುತ್ತಿದ್ದರು. ಹುಬ್ಬಳ್ಳಿಯಲ್ಲಿ ಪ್ರಪ್ರಥಮವಾಗಿ ನೂಲಿನ ಗಿರಣಿ ಪ್ರಾರಂಭವಾದಾಗ, ಶರೀಫರುಗಿರಣಿ ವಿಸ್ತಾರ ನೋಡಮ್ಮಎಂದು ಹಾಡಿದ್ದಾರೆ. ಶರೀಫರ ಅನೇಕ ಗೀತೆಗಳಂತೆ ಗೀತೆಯೂ ಸಹ ಲೌಕಿಕದಿಂದ ಅಲೌಕಿಕಕ್ಕೆ ಹೊರಳಿರುವದರಲ್ಲಿ ಅಚ್ಚರಿಯಿಲ್ಲ. ಆದರೆ ತಮ್ಮಸೂಜಿಯೇ ನೀನು ಸೂಜಿಯೇಎನ್ನುವ ಪದದಲ್ಲಿ ಶರೀಫರು ಅಲೌಕಿಕಕ್ಕೆ ಹೊರಳದೆ, ಬ್ರಿಟಿಶ್ ಈಸ್ಟ ಇಂಡಿಯಾ ಕಂಪನಿಯು ಭಾರತಕ್ಕೆ ಮಾಡಿದ ಅನ್ಯಾಯವನ್ನು ದಾಖಲಿಸಿದ್ದಾರೆ:
ತಂಪುಳ್ಳ ಉಕ್ಕಿನೋಳ್ ಹುಟ್ಟಿದ ಸೂಜಿಯೇ
ಶಿಂಪಿಗರಣ್ಣಗೆ ಬಲವಾದ ಸೂಜಿಯೇ
ಇಂಪುಳ್ಳ ದಾರಕ್ಕೆ ಸೊಂಪಿಗೊಂಡಿರುವಂಥ
ಕಂಪನಿ ಸರಕಾರ ವಶವಾದ ಸೂಜಿಯೇ.

ಬ್ರಿಟನ್ನಿನಲ್ಲಿ ಉದ್ದಿಮೆಗಳನ್ನು ಬೆಳೆಯಿಸುವ ಉದ್ದೇಶದಿಂದ ಕಂಪನಿ ಸರಕಾರವು ಭಾರತದಲ್ಲಿಯ ಅನೇಕ ಕೈಗಾರಿಕೋದ್ಯಮಗಳನ್ನು ನಿಷೇಧಿಸಿತು. ಸೂಜಿಯಂತಹ ಸಣ್ಣ ವಸ್ತುವನ್ನೂ ಸಹ ಭಾರತೀಯರು ಬ್ರಿಟನ್ನಿನಿಂದಲೇ ಆಮದು ಮಾಡಿಕೊಳ್ಳುವಂತಹ ಪರಿಸ್ಥಿತಿಯನ್ನು ಕಂಪನಿ ಆಡಳಿತವು ನಿರ್ಮಿಸಿತು. ಶರೀಫರ ಸೂಕ್ಷ್ಮ ದೃಷ್ಟಿಗೆ ಇದು ಕಾಣದೆ ಇರಲಿಲ್ಲ. ಅದರ ಪರಿಣಾಮವಾಗಿ ಗೀತೆ ಹುಟ್ಟಿದೆ.

ಶರೀಫರು ನಿಷ್ಠುರವಾದಿಗಳೂ ಹೌದು. ನವಲಗುಂದದ ನಾಗಲಿಂಗಸ್ವಾಮಿಗಳು ಪಲ್ಲಕ್ಕಿಯಲ್ಲಿ ಹೋಗುತ್ತಿರುವಾಗ, ಶರೀಫರು, ‘ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ; ನಾಗಲಿಂಗಯೋಗಿ ತಾನು ತಿರುಗುವದ್ಯಾತಕೆ ಎಂದು ಟೀಕಿಸಿದ್ದಾರೆ. ಸಿದ್ಧಾರೂಢಸ್ವಾಮಿಗಳನ್ನು ನೋಡಲೆಂದು ಶರೀಫರು ಹುಬ್ಬಳ್ಳಿಗೆ ಹೋದಾಗ, ಬಾಲಭಾವದಲ್ಲಿದ್ದ ಸ್ವಾಮಿಗಳು, ಗೋಲಿಗುಂಡವನ್ನು ಆಡುತ್ತ ಕೂತಿದ್ದರಂತೆ. ಆಗ ಶರೀಫರುಆರೂಢಾ ಈರೂಢಾ ಆರೂಢಾ ಯಾ ಅಲಿ, ಪ್ರೌಢತನದಿ ಗುಂಡಾಡು ಹುಡುಗರೊಳು, ಮೃಡ ನೀ ಪ್ರಭು ಆಡೋ ನಿರಂಜನಎಂದು ಹಾಡಿದ್ದಾರೆ. ಸಿದ್ಧಾರೂಡರ ಶಿಷ್ಯರು ಇದನ್ನು ತಮ್ಮ ಗುರುವಿನ ಟೀಕೆಯೆಂದು ಭಾವಿಸಿ, ಶರೀಫರನ್ನು ಚೆನ್ನಾಗಿ ತದುಕಿದರಂತೆ!

ಶರೀಫರು ತಮ್ಮ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ದುಃಖವನ್ನು ಅನುಭವಿಸಿದರು. ಹೆಂಡತಿಯ ಮೇಲೆ ತುಂಬ ಪ್ರೀತಿಯಿಟ್ಟುಕೊಂಡ ಶರೀಫರು, ‘ಸ್ನೇಹ ಮಾಡಬೇಕಿಂಥವಳಾ, ಒಳ್ಳೇ ಮೋಹದಿಂದ ಬಂದು ಕೂಡುವಂಥವಳಾಎಂದು ಹಾಡಿದ್ದಾರೆ. ಮೊದಲ ಹೆರಿಗೆಯಲ್ಲಿಯೇ ಹೆಂಡತಿ ತೀರಿಕೊಂಡ ಬಳಿಕ, ಸಂಸಾರವಿಮುಖರಾದ ಶರೀಪರು, ‘ಮೋಹದ ಹೆಂಡತಿ ಸತ್ತ ಬಳಿಕ, ಮಾವನ ಮನೆಯ ಹಂಗಿನ್ಯಾಕೊಎಂದು ದುಃಖಿಸಿದ್ದಾರೆ. ಪ್ರಾಪಂಚಿಕ ವ್ಯವಹಾರಕ್ಕೆ ಲಕ್ಷ್ಯ ಕೊಡದ ಶರೀಫರು ತಮ್ಮ ಹೊಲ, ಮನೆಗಳ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ. ಇದರಿಂದಾಗಿ ಸಾಲದಲ್ಲಿ ಮುಳುಗಿದರು. ಸಾಲ ತೀರಿಸಲು ತಮ್ಮ ಜಮೀನುಗಳನ್ನು ಮಾರಬೇಕಾಯಿತು. ಸಮಾಜದಲ್ಲಿ ಅವಮಾನವನ್ನು ಭರಿಸುವ ಪ್ರಸಂಗಗಳು ಬಂದವು. ಆಗ ಶರೀಫರು ನಾ ನಿನ್ನ ಮಗ ನಗೆಗೀಡು ಮಾಡಬ್ಯಾಡ್ರಿ ಜಗದೊಳು ಎಂದು ದೇವರಿಗೆ ಮೊರೆ ಹೊಕ್ಕರು. ತಮ್ಮ ಸಂಕಷ್ಟಗಳೆಲ್ಲ ದೇವರ ಪ್ರಸಾದವೆಂದೇ ಭಾವಿಸಿದ ಶರೀಫರು ಹಾಡಿದ ಗೀತೆಯ ಒಂದು ನುಡಿ ಹೀಗಿದೆ:
ಬಡತಾನೆಂಬುದು ಕಡೆತನಕಿರಲಿ
ವಡವಿ ವಸ್ತ ಹಾಳಾಗಿ ಹೋಗಲಿ
ನಡುವಂಥ ದಾರಿಯು ತಪ್ಪಿ
ಅಡವಿ ಸೇರಿದಂತಾಗಿ ಹೋಗಲಿ.
ಪರಾತ್ಪರನಾದ ಗುರುವಿನ
ಅಂತಃಕರಣ ಒಂದು ಬಿಡದಿರಲಿ.’

ಗೀತೆಯನ್ನು ಪುರಂದರದಾಸರಬಂದದ್ದೆಲ್ಲಾ ಬರಲಿ, ಗೋವಿಂದನ ದಯೆಯೊಂದಿರಲಿಎನ್ನುವ ಕವನದೊಂದಿಗೆ ಹೋಲಿಸಿದಾಗ, ಶಿಷ್ಟ ಕವಿಗೂ, ಸಹಜ ಕವಿಗೂ ಇರುವ ಅಂತರದ ಅರಿವಾಗುತ್ತದೆ. ಸುತ್ತಲಿನ ಪರಿಸರಕ್ಕೆ ಸ್ಪಂದಿಸುವಾಗ, ಶರೀಫರ ಗೀತೆಗಳು ಹಳ್ಳಿಗರ ಸ್ವಾಭಾವಿಕ ನುಡಿಯಲ್ಲಿಯೇ ಇದ್ದರೂ ಸಹ, ತಮ್ಮ ಆತ್ಮಾನುಭವವನ್ನು ಹೇಳುವಾಗ, ಕೆಲವೊಮ್ಮೆ ಲಲಿತವಾದ ಭಾಷೆಗೆ ಹೊರಳುತ್ತವೆ:
ಶ್ರೀಗುರು ಮಂತ್ರವ
ರಾಗದಿ ನುತಿಸಲು
ಬೋಧ ಸಂಪದ ಸುಖವಾಗುವುದೋ
ಶಿಶುನಾಳಾಧೀಶನ
ಹೆಸರಿನೈದಕ್ಷರ
ಹಸನಾಗಿ ಭಜಿಸಲಹುದೆನಿಸುವುದೋ

ತಮ್ಮ ಸಮಕಾಲೀನರಾದ ಗರಗದ ಮಡಿವಾಳಪ್ಪ, ನವಲಗುಂದದ ನಾಗಲಿಂಗ ಸ್ವಾಮಿಗಳು ಹಾಗು ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳಂತೆ, ಶರೀಫರಿಗೆ ಯಾವುದೇ ಸಿದ್ಧಿಗಳು ಸಾಧಿಸಿರಲಿಲ್ಲ.ಸೊಲ್ಲು ಸೊಲ್ಲಿಗೆ ಬಯ್ದು ನನ್ನ, ಎಲ್ಲಿಗೋಗ್ಹದಾಂಗ ಮಾಡಿಟ್ಟಾ, ಕಾಲ್ಮುರಿದು ಬಿಟ್ಟಾಎನ್ನುವ ಮೂಲಕ, ದೇವರು ಎಲ್ಲ ಸಿದ್ಧಿಗಳನ್ನು ತಮ್ಮಿಂದ ದೂರವೇ ಇಟ್ಟನು ಎನ್ನುವುದನ್ನು ಶರೀಫರು ಸೂಚಿಸುತ್ತಾರೆ. ಆದರೆ ಅವರು ಅವರು ಸಿದ್ಧಿಗಳನ್ನು ಬಯಸಿರಲೂ ಇಲ್ಲ. ಕಾಂತೆ ಕೇಳೆ ಕರುಣ ಗುಣದಿಂದ, ಎನಗಿಂಥ ಪುರುಷನು ಬಂದು ದೊರಕಿದ ಪುಣ್ಯಫಲದಿಂದಎಂದು ಹೇಳುವ ಶರೀಫರು ಇದನ್ನು ದೇವರ ಅನುಗ್ರಹವೆಂದೇ ಭಾವಿಸಿದರು.

ನಾಡಿನ ಪುಣ್ಯ ಹಾಗು ನುಡಿಯ ಪುಣ್ಯದಿಂದ ಶರೀಫರಂತಹ ಸಹಜ ಸಂತ ಕವಿಗಳು ಶತಮಾನಕ್ಕೊಮ್ಮೆ ನಮಗೆ ಲಭಿಸುತ್ತಾರೆ. ಅವರಿಗೆ ನಮನಗಳು.