Monday, August 4, 2008

ಅನಂತ ಪ್ರಣಯ....ದ.ರಾ.ಬೇಂದ್ರೆ

ನಿಸರ್ಗಪ್ರೇಮವು ನವೋದಯ ಕಾವ್ಯದ ಪ್ರಧಾನ ಲಕ್ಷಣವಾಗಿದೆ. ನಿಸರ್ಗಗೀತೆಗಳನ್ನು ನೇರವಾಗಿ ಬರೆಯದಂತಹ ನವೋದಯ ಕವಿಗಳ ಕವನಗಳಲ್ಲಿ ಸಹ, ನಿಸರ್ಗವರ್ಣನೆ ನೇಪಥ್ಯದ ಪಡದೆಯಾಗಿ ಬಂದೇ ಬಂದಿದೆ. ಪ್ರಕೃತಿಯ ಚೆಲುವನ್ನು ವರ್ಣಿಸಿದ ನವೋದಯ ಕವಿಗಳಲ್ಲಿ ಬೇಂದ್ರೆ ಅಗ್ರಸ್ಥಾನವನ್ನು ಪಡೆದಿದ್ದಾರೆ. ಪ್ರಕೃತಿವರ್ಣನೆಯಲ್ಲಿ ಇವರಿಗೂ ಇತರ ಕವಿಗಳಿಗೂ ಇರುವ ವ್ಯತ್ಯಾಸವೆಂದರೆ, ಬೇಂದ್ರೆಯವರ ಕವನಗಳಲ್ಲಿ ಪ್ರಕೃತಿ ಕೇವಲ ಭೌತಿಕ ವಸ್ತುವಲ್ಲ, ಅದು ಚೈತನ್ಯದ ಒಂದು ರೂಪವಾಗಿದೆ.

ಬೇಂದ್ರೆಯವರ ಸುಪ್ರಸಿದ್ಧ ಕವನ ಬೆಳಗುಇದಕ್ಕೊಂದು ಉತ್ತಮ ಉದಾಹರಣೆ. ಶಾಂತಿರಸವೆ ಪ್ರೀತಿಯಿಂದ ಮೈದೋರಿತಣ್ಣ, ಇದು ಬರಿ ಬೆಳಗಲ್ಲೊ ಅಣ್ಣಎಂದು ಹೇಳುವ ಮೂಲಕ ಬೇಂದ್ರೆಯವರು ಭೌತಿಕ ವಸ್ತುವಿನ ಹಿಂದೆ ಅಡಗಿರುವ ಅಭೌತಿಕ ಚೈತನ್ಯವನ್ನು ಓದುಗರಿಗೆ ದರ್ಶಿಸುತ್ತಿದ್ದಾರೆ.

ಬೇಂದ್ರೆಯವರ ಮತ್ತೊಂದು ಕವನ ಅನಂತ ಪ್ರಣಯದಲ್ಲಿ, ಅವರು ಇದಕ್ಕೂ ಹತ್ತು ಹೆಜ್ಜೆ ಮುಂದೆ ಹೋಗಿದ್ದಾರೆ. ಇಲ್ಲಿ ಸೂರ್ಯ, ಚಂದ್ರ ಹಾಗು ಭೂಮಿ ಇವು ಚೈತನ್ಯದ ಭೌತಿಕ ರೂಪಗಳು. ಇಷ್ಟೇ ಅಲ್ಲ, ಈ ಚೈತನ್ಯದ ರೂಪಗಳಲ್ಲಿ ಪರಸ್ಪರ ಪ್ರೇಮಾಕರ್ಷಣೆ ಇದೆ. ಈ ಪ್ರೇಮಾಕರ್ಷಣೆಯು ಭಗವತ್ಪ್ರೇಮದ ಭಾಗವೇ ಆಗಿದೆ. ಭಗವಂತನ ಪ್ರೇಮವೇ ಸೃಷ್ಟಿರೂಪವಾಯಿತು ಎಂದು ಭಾರತೀಯ ದರ್ಶನಗಳಲ್ಲಿ ಹೇಳಲಾಗುತ್ತಿದೆ.

ಅನಂತ ಪ್ರಣಯವು ವಿಶ್ವವ್ಯಾಪ್ತಿಯುಳ್ಳ ತ್ರಿಕೋಣಪ್ರೇಮದ ಕತೆ! ಸೂರ್ಯ ಹಾಗು ಚಂದ್ರರು ಮಿತ್ರರು. ಚಂದ್ರನಿಗೆ ಭೂಮಿಯಲ್ಲಿ ಆಕರ್ಷಣೆ. ಆದರೆ ಭೂಮಿ ಹಾಗು ಸೂರ್ಯ ಪರಸ್ಪರ ಪ್ರಣಯಿಗಳು. ಇದೊಂದು ಕೊನೆಯಿಲ್ಲದ ಪ್ರಣಯಕತೆ. ಅಂತೆಯೇ ಈ ಕವನಕ್ಕೆ ಅನಂತ ಪ್ರಣಯಎನ್ನುವ ಶೀರ್ಷಿಕೆ ಕೊಡಲಾಗಿದೆ.

ಕವನದ ಪೂರ್ತಿಪಾಠ ಹೀಗಿದೆ:

ಉತ್ತರಧ್ರುವದಿಂ ದಕ್ಷಿಣಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ.
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು.
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು.

ಅಕ್ಷಿನಿಮೀಲನ ಮಾಡದ ನಕ್ಷ-
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರನಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.
………………………………………………………………………
ಮೊದಲ ನುಡಿ:
ಉತ್ತರಧ್ರುವದಿಂ ದಕ್ಷಿಣಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ.
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.

ಕವನದ ಮೊದಲ ನುಡಿಯ ಮೊದಲೆರಡು ಸಾಲುಗಳಲ್ಲಿಯೇ, ಬೇಂದ್ರೆಯವರು ಭೂಮಿಯಲ್ಲಿ ತುಂಬಿರುವ ಪ್ರಣಯಭಾವದ ಗುರುತುಗಳನ್ನು ಸೂಚಿಸಿದ್ದಾರೆ.

ಭೂಮಿಯ ಉತ್ತರ ಧ್ರುವ ಹಾಗು ದಕ್ಷಿಣ ಧ್ರುವಗಳಲ್ಲಿ ನೈಸರ್ಗಿಕ ಚುಂಬಕ ಅಥವಾ ಅಯಸ್ಕಾಂತಗಳು ಇವೆ ಎನ್ನುವದು ಒಂದು ವೈಜ್ಞಾನಿಕ ಸತ್ಯ. ವಿರುದ್ಧ ಬಗೆಯ ಚುಂಬಕಗಳು ಪರಸ್ಪರ ಆಕರ್ಷಿಸುತ್ತವೆ ಎನ್ನುವದೂ ಸಹ ವೈಜ್ಞಾನಿಕ ಸತ್ಯವೇ. ಆದರೆ ಈ ವಾಸ್ತವತೆ ಬೇಂದ್ರೆಯವರ ಅನುಪಮ ಕಲ್ಪನೆಯಲ್ಲಿ ತಾಳುವ ಸುಂದರ ರೂಪವೇ ಬೇರೆ:
ಚುಂಬಕೀಯ ಶಕ್ತಿ ಎನ್ನುವ ಭೌತಿಕ ಆಕರ್ಷಣೆ ಈ ಕವನದಲ್ಲಿ ಪ್ರಣಯಭಾವವಾಗಿದೆ. (ಚುಂಬಕ ಎನ್ನುವುದಕ್ಕೆ ಚುಂಬನವನ್ನು ಪ್ರೇರೇಪಿಸುವ ಎನ್ನುವ ಅರ್ಥವಿದೆಯಲ್ಲವೆ?)

ಭೂಮಿಯಲ್ಲಿರುವ ಪ್ರಣಯಭಾವವು ಜಾಗೃತವಾಗಿದ್ದಂತೆಯೇ, ಇನ್ನೆರಡು ಚೈತನ್ಯರೂಪಿಗಳಾದ ಸೂರ್ಯ ಹಾಗು ಚಂದ್ರರಲ್ಲಿಯೂ ಸಹ ಗೆಳೆತನದ ಒಲುಮೆ ಇದೆ.
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.

ಈ ಗೆಳೆಯರಲ್ಲಿ ಒಬ್ಬನು, ಅಂದರೆ ಚಂದ್ರನು ಭೂಮಿಯಲ್ಲಿ ಪ್ರಣಯಾಸಕ್ತನಾಗಿದ್ದಾನೆ. ಭೂಮಿಗಾಗಿ ಅವನು ಹಲಬುವದನ್ನು ಬೇಂದ್ರೆಯವರು ಎರಡನೆಯ ನುಡಿಯಲ್ಲಿ ಈ ರೀತಿಯಾಗಿ ಬಣ್ಣಿಸುತ್ತಾರೆ:

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.

ಚಂದ್ರನೇನೋ ಭೂಯಾಮಿನಿಯನ್ನು ಪ್ರಣಯಕ್ರೀಡೆಗೆ ಕರೆಯುತ್ತಿದ್ದಾನೆ. ಆದರೆ ಈ ಭೂಯಾಮಿನಿ ಅವನ ಯಾಚನೆಯನ್ನು ಒಪ್ಪಿಲ್ಲ. ಹೀಗಾಗಿ ಚಂದ್ರನು (=ತಿಂಗಳು), ಪ್ರತಿತಿಂಗಳೂ ಕ್ಷೀಣಿಸುತ್ತಿದ್ದಾನೆ; ಅವಳು ತನ್ನ ಬೇಟಕ್ಕೆ ಒಪ್ಪಿಕೊಳ್ಳಬಹುದೆನ್ನುವ ಆಸೆಯಲ್ಲಿ ಮತ್ತೆ ಮತ್ತೆ ಮೈತುಂಬಿಕೊಳ್ಳುತ್ತಾನೆ. ಪೂರ್ಣಿಮೆಯಂದು ತನ್ನ ಪ್ರೇಮದ ಬೆಳದಿಂಗಳನ್ನು ಹೊರಸೂಸಿ ಭೂಮಿಯ ಮೇಲೆ ತುಳುಕಿಸುತ್ತಾನೆ. ಈ ಯಾಚನೆ ಹಾಗು ಯಾತನೆಯ ಸವಿಯನ್ನು ಚಂದ್ರನು ತನ್ನೊಳಗೇ ಸವಿಯುತ್ತಿದ್ದಾನೆ.
ವಿಪ್ರಲಂಭ ಶೃಂಗಾರಕ್ಕೆ ಈ ನುಡಿಯು ಒಂದು ಅತ್ಯುತ್ತಮ ಉದಾಹರಣೆ ಎನ್ನಬಹುದು.

ಆದರೆ ಇತ್ತ ಭೂಮಿ ಹಾಗು ಸೂರ್ಯರ ಪ್ರಣಯ ಅಬಾಧಿತವಾಗಿ ಸಾಗಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು.
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು.

ಭೂಮಿಯ ಚಲನೆಯಿಂದಾಗಿ ಋತುಗಳು ಬದಲಾಗುತ್ತಿವೆ. ಪ್ರತಿ ವಸಂತಕ್ಕೂ ಭೂಮಿಯ ಮೇಲೆ ಹೂಗಳು ಮತ್ತೆ ಮತ್ತೆ ಅರಳುತ್ತವೆ. ಇದು ಎಷ್ಟು ಕೋಟಿ ವರ್ಷದಿಂದ ನಡೆದಿದೆಯೊ ಬಲ್ಲವರಾರು? ಬೇಂದ್ರೆಯವರ ಕವಿ ಕಣ್ಣಿಗೆ ಇದು ಕಾಣುವ ಬಗೆ ಬೇರೆ. ಸೂರ್ಯನ ಕಿರಣಸ್ಪರ್ಶದಿಂದ ಪುಲಕಿತಳಾದ ಭೂಮಿ ಮರಳಿ ಮರಳಿ ಕುಸುಮಿಸುತ್ತಾಳೆ ಅಂದರೆ ಪುಷ್ಪವತಿಯಾಗುತ್ತಾಳೆ; ಕೋಟಿ ಕೋಟಿ ಸಲ ಅವಳು ನವಯೌವನವನ್ನು ಪಡೆಯುತ್ತಾಳೆ ಎಂದು ಬೇಂದ್ರೆ ಹೇಳುತ್ತಾರೆ.
ಸೂರ್ಯನೂ ಸಹ ಅಷ್ಟೇ ಪ್ರೇಮದಿಂದ ತುಂಬಿಕೊಂಡಿದ್ದಾನೆ. ಮಿತ್ರನ (=ಸೂರ್ಯನ) ಮೈತ್ರಿಯ (=ಒಲವಿನ) ಒಸಗೆ(=ಸಂದೇಶ) ಮಸಗದಿದೆ(=ಕಳೆಗುಂದಿಲ್ಲ); ಬದಲಾಗಿ ಅದು ಹೆಚ್ಚಾಗುತ್ತಲೆ ಇದೆ. (=ಮಸೆಯಿಸಿತು.)

ಆಕಾಶದೇವತೆಗಳ ಈ ಪ್ರಣಯಕ್ಕೆ ಬೇಂದ್ರೆಯವರು ಆಕಾಶದಲ್ಲಿರುವ ನಕ್ಷತ್ರಪುಂಜಗಳನ್ನೇ ಸಾಕ್ಷಿಯಾಗಿ ಮಾಡುತ್ತಾರೆ. ಕಣ್ಣು ತೆರೆದುಕೊಂಡೇ ಇರುವ (=ಅಕ್ಷಿನಿಮೀಲನ ಮಾಡದ) ನಕ್ಷತ್ರಗಳಿವು.
ದೇವತೆಗಳು ಅಕ್ಷಿನಿಮೀಲನ ಮಾಡುವದಿಲ್ಲವೆನ್ನುವದನ್ನು ನೆನಪಿಸಿಕೊಂಡರೆ, ಈ ನಕ್ಷತ್ರಗಳೂ ಸಹ ದೇವತಾಸಮೂಹವೇ ಎನ್ನುವ ಕಲ್ಪನೆ ಬರುವದು. ಆದರೆ ಈ ತಾರಾಸಮೂಹವು ಗಗನದಲ್ಲಿ ಶೋಭಿಸುತ್ತಿರುವ ಹಾರದಂತೆ ಕಾಣುತ್ತದೆ ಎಂದು ಬೇಂದ್ರೆಯವರು ಕಲ್ಪಿಸುತ್ತಾರೆ.

ಅಕ್ಷಿನಿಮೀಲನ ಮಾಡದ ನಕ್ಷ-
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರನಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.

ಇತ್ತ ಚಂದ್ರನ ಗತಿ ಏನು? ಆತ ತನ್ನ ಹಂಬಲವನ್ನು ಜೀವಂತವಾಗಿ ಇಟ್ಟುಕೊಂಡ ಭಗ್ನಪ್ರಣಯಿ.
ಅಂತೆಯೇ,
ಬಿದಿಗೆಯ ಬಿಂಬಾಧರನಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ”!

ಭೂಮಿ ಹಾಗು ಸೂರ್ಯರ ಕೂಟ ನಿರಂತರವಾಗಿದೆ. ಭೂಮಿಗಾಗಿ ಚಂದ್ರನ ಹಂಬಲ ನಿರಂತರವಾಗಿದೆ.
ಇದು ನಿರಂತರವಾದ ಅನಂತ ಪ್ರಣಯ. ಬೇಂದ್ರೆಯವರ ಕಲ್ಪನಾಪ್ರತಿಭೆಯು ಸಮಗ್ರ ವಿಶ್ವವನ್ನೇ ಆವರಿಸಿಕೊಳ್ಳಬಲ್ಲದು ಎನ್ನುವದಕ್ಕೆ ಈ ಕವಿತೆ ಸಾಕ್ಷಿಯಾಗಿದೆ.

36 comments:

Unknown said...

ಸುನಾಥರೆ,
ಬೇಂದ್ರೆಯವರ ಕಾವ್ಯಕಲ್ಪನೆ ಎಷ್ಟೊಂದು ಅದ್ಭುತವಾಗಿದೆ ಎಂದು ತೋರಿಸಿದ್ದಕ್ಕಾಗಿ ಧನ್ಯವಾದಗಳು. ಓದಲು ಖುಶಿಯಾಗಿತ್ತದೆ.

ರೇಣುಕಾ ನಿಡಗುಂದಿ said...

ಸುನಾಥರೇ, ಬೇಂದ್ರೆಯವರ ಅನಂತ ಪ್ರಣಯದ ಕಾವ್ಯ ಕಲ್ಪನೆ ಬಗ್ಗೆ ತುಂಬಾ ಅದ್ಭುತವಾಗಿ ವಿವರಿಸಿದ್ದೀರಿ. ಧನ್ಯವಾದಗಳು.

sunaath said...

ವನಮಾಲಾ,
ಧನ್ಯವಾದಗಳು.

sunaath said...

ರೇಣುಕಾ,
ಸುಸ್ವಾಗತ.
ಸ್ಪಂದನಕ್ಕಾಗಿ ಧನ್ಯವಾದಗಳು.
ಬರುತ್ತಾ ಇರಿ.

Shriniwas M Katti said...

ಬ್ರಹ್ಮಾಂಡವೇ ಅನಂತಶಕ್ತಿಯ ಸೆಳೆತದ ಬುಗುರಿಯಾಟ. ಚಂದ್ರನಿಗೆ ಭೂಮಿಯ ಸೆಳೆತ, ಭೂಮಿಗೆ ಸೂರ್ಯನ ಸೆಳೆತ, ಸೂರ್ಯನಿಗೆ ಇನ್ನೊಂದು ದೊಡ್ಡ ನಕ್ಷತ್ರದ ಆಕರ್ಷಣೆ, ಇವೆಲ್ಲವಕ್ಕೂ ಮಹಾಶಕ್ತಿಯ (ಪರಮಾತ್ಮನ) ಮಹಾಸೆಳೆತ.ಸಣ್ಣ ಶಕ್ತಿಗೆ ದೊಡ್ಡ ಶಕ್ತಿಯಲ್ಲಿ ಲೀನವಾಗುವ ಬಯಕೆ. ಇದೇ ಸರ್ವಜೀವರಲ್ಲಿ ಪ್ರಣಯಾಕರ್ಷಣೆಯ ರೂಪದಲ್ಲಿ ಆವಿರ್ಭವಿಸುತ್ತದೆ.ಈ ಮಹಾತತ್ವವನ್ನು ವರಕವಿ ಬೇಂದ್ರೆ ಅತಿ ಸರಳವಾಗಿ, ಸುಂದರವಾಗಿ ತಮ್ಮ ಕವಿತೆಯಲ್ಲಿ ಮೂಡಿಸಿದ್ದಾರೆ. ಇದನ್ನು ತಾವು ಗದ್ಯದಲ್ಲಿ ಅಷ್ಟೇ ಸುಂದರವಾಗಿ ಅರ್ಥೈಸದ್ದೀರಿ. ಈ ರಸದೌತಣವನ್ನು ತಾವು ದಿನಾಲೂ ಯಾಕೆ ಬಡಿಸಬಾರದು ? ....ಬೇಡ, ದಿನಾಲೂ ಉಂಡರೆ ಅಜೀರ್ಣವಾದೀತು !!!

ಶ್ರೀನಿವಾಸ ಮ. ಕಟ್ಟಿ
ಡಬ್ಲಿನ, ಓಹೈಒ, ಅಮೆರಿಕಾ.

sunaath said...

ಕಟ್ಟಿಯವರೆ,
ಆ ಕಾವ್ಯಗಂಗೆಯನ್ನು ನಾನು ಬೊಗಸೆಯಲ್ಲಿ ಎಷ್ಟು ಎತ್ತಲಾದೀತು?
ಧನ್ಯವಾದಗಳು.

Anonymous said...

ಕಾವ್ಯಗಂಗೆಯ ರಭಸ ಬಹಳ. ಆಳವೂ ಹೆಚ್ಚು. ಆದರೆ ನಿಮ್ಮ ಬೊಗಸೆಗೈಯೂ ತುಂಬ ಗಟ್ಟಿ ! ಹರಿಯುವ ಗಂಗೆಯನ್ನು ಹಿಡಿದು, ರಸಗ್ರಹಣ ಮಾಡಿ, ನಮಗೆಲ್ಲರಿಗೂ ಸುಧಾಪಾನ ಮಾಡಿಸುತ್ತಿರುವಿರಿ. ಇದೇನು ಸಣ್ಣ ಮಾತೆ ?

Keshav.Kulkarni said...

ತುಂಬ ಚೆನ್ನಾಗಿ ಈ ಕವಿತೆ ವಿವರಿಸಿದ್ದಕ್ಕೆ ತುಂಬ ಧನ್ಯವಾದಗಳು. ಬೇಂದ್ರೆಯವರನ್ನು ಇನ್ನೂ ಹೆಚ್ಚು ಉಣಿಸುತ್ತಿರಿ,

ಕೇಶವ

hamsanandi said...

ಸುನಾಥರೆ

ಕವಿತೆಯನ್ನು ಚೆನ್ನಾಗಿ ವಿವರಿಸಿದ್ದೀರಿ - ಹೀಗೇ ಇನ್ನಷ್ಟು ಗೀತೆಗಳ ಬಗ್ಗೆ ಬರೆಯುತ್ತಿರಿ.

Anonymous said...

ಪ್ರತಿಸಲ ಗೂಗಲ್ ಗೆ ಹೋಗಿ "ಸಲ್ಲಾಪ" ಹುಡುಕಿ ನೋಡಬೇಕಾಗುತ್ತದೆ. ಇನ್ನೊಮ್ಮೆ ಸಲ್ಲಾಪದ ವೆಬ್ ಸೈಡ್ ನ ವಿಳಾಸ ತಿಳಿಸುವಿರಾ ?

ಶ್ರಿನಿವಾಸ ಮ. ಕಟ್ಟಿ

ತೇಜಸ್ವಿನಿ ಹೆಗಡೆ said...

ಸುನಾಥರೆ,

ಕವನವೆಷ್ಟು ಸುಂದರವಾಗಿ, ಹೃದ್ಯವಾಗಿದೆಯೋ ಅಷ್ಟೇ ಸರಳವಾಗಿ, ಅರ್ಥವತ್ತಾಗಿ ಗ್ರಾಹ್ಯವಾಗುವಂತೆ ವಿವರಿಸಿದ್ದೀರಿ. ತುಂಬಾ ವಂದನೆಗಳು. ಭೂಮಿ ಸೂರ್ಯನ ಸುತ್ತ ಹಾಗೂ ಚಂದ್ರ ಭೂಮಿಯ ಸುತ್ತ ಭ್ರಮಿಸುತ್ತಲೇ ಇದ್ದಾರೆ.. ಇರುತ್ತಾರೆ. ಕೊನೆಯಿಲ್ಲದ ಅವರ (ಪಯಣ)ಪ್ರಣಯವೇ ಈ ಸೃಷ್ಟಿಗೆ ಕಾರಣ ಅಲ್ಲವೇ?

sunaath said...

ಕೇಶವ,ಹಂಸಾನಂದಿ,
ಧನ್ಯವಾದಗಳು.
ರಸಗವಳವನ್ನು ಹಂಚಿಕೊಳ್ಳುತ್ತ ಹೋಗುವೆ.

sunaath said...

ಕಟ್ಟಿಯವರೆ,
ಸಲ್ಲಾಪದ URL ಹೀಗಿದೆ:
http://www.sallaap.blogspot.com

sunaath said...

ತೇಜಸ್ವಿನಿ,
ಸರಿಯಾಗಿ ಹೇಳಿದಿರಿ. ಪ್ರಣಯ ಹಾಗು ಪಯಣ ನಿರಂತರವಾಗಿ ಸಾಗಿವೆ.

ಅಂತರ್ವಾಣಿ said...

ಸುನಾಥವರೆ,

ಅದ್ಭುತವಾದ ವಿವರಣೆ ಕೊಟ್ಟಿದ್ದೀರ. :)

kanasu said...

"ವಾರ(ರೆ)ನೋಟ" ದಿಂದ ವಾರೆಯಾಗಿ ನೋಡಿದಾಗ ನಿಮ್ಮ ಬ್ಲಾಗ್ ಸಿಕ್ಕಿತು. ಬೇಂದ್ರೆಯವರ ಈ ಹಾಡು ಸಿನಿಮಾದಲ್ಲಿ ಕೇಳಿ ಆನಂದಿಸಿದ್ದೆ. ಆದರೆ ಅದರ ಸಂಪೂರ್ಣ ಸ್ವಾರಸ್ಯ ತಿಳಿದು ಸಂತೋಷವಾಯಿತು.

ಧನ್ಯವಾದಗಳು

sunaath said...

ಜಯಶಂಕರ,
ಧನ್ಯವಾದಗಳು. ಕವನವೇ ಅದ್ಭ್ತವಾಗಿದೆ.

sunaath said...

ಧನ್ಯವಾದಗಳು, ಕನಸುಗಾತಿ!
ನಿಮ್ಮ bilingual blogಅನ್ನು ನೋಡಿ ಬಂದೆ. ಕನ್ನಡ ಕವನಗಳನ್ನು ಹಾಗು ಇಂಗ್ಲಿಶ್ ಲೇಖನಗಳನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ.

Anonymous said...

ಶ್ರೀಯುತರೇ,
ವೈಯಕ್ತಿಕವಾಗಿ ನಿಮ್ಮ ಪರಿಚಯ ನನಗಿಲ್ಲ.
ಬೇಂದ್ರೆಯವರ ಹಾಡು (ಪದ್ಯ ಅಥವಾ ಕವಿತೆ ಎನ್ನಲು ಮನಸ್ಸಾಗುತ್ತಿಲ್ಲ.ಪದ್ಯ/ಕವಿತೆಗಳು ಕೇವಲ
ಪುಸ್ತಕದಲ್ಲಿ ಉಳಿದುಬಿಡುತ್ತವೆ;ಹಾಡು ಮಾತ್ರ ಜನಗಳ ಬಾಯಲ್ಲಿ ನಲಿದಾಡುತ್ತದೆ ಎಂಬ ನಂಬಿಕೆಯಿಂದ!)
ಕುರಿತಂತೆ mostly,ಬೇಂದ್ರೆಯವರು ನಿಮ್ಮೊಳಗೆ ಪರಕಾಯ ಪ್ರವೇಶ ಮಾಡಿದ್ದಾರೇನೋ ಎಂಬಂತೆ ವಿವರಿಸುತ್ತಿದ್ದೀರಿ..
ತುಂಬ ಕಡಿಮೆ ಜನರಿಗೆ ಇಂಥದೊಂದು focus ಇರಲಿಕ್ಕೆ ಸಾಧ್ಯ!
ನಿಮ್ಮ ವಯಸ್ಸು ಗೊತ್ತಿಲ್ಲದ ಕಾರಣ ತಮ್ಮಲ್ಲಿ ಮೊದಲೇ ಕ್ಷಮೆಯಾಚಿಸುತ್ತ ಹೀಗೊಂದು ಅಸಂಬದ್ಧ ಪ್ರಶ್ನೆ:
ನಾನು ಓದಿದ ಸರಕಾರಿ ಶಾಲೆಯಲ್ಲಿ ನಿಮ್ಮಂಥ ಒಬ್ಬೇ ಒಬ್ಬ ಕನ್ನಡ ಮಾಸ್ತರುಗಳು ಇದ್ದಿದ್ದರೆ ಎಷ್ಟು ಚೆಂದವಿರುತ್ತಿತ್ತು ..?
-ರಾಘವೇಂದ್ರ ಜೋಶಿ.

sunaath said...

ರಾಘವೇಂದ್ರ ಜೋಶಿಯವರ,
ನಾನು ಕನ್ನಡ ಸಾಲಿ ಒಳಗ ಮತ್ತು ಹಾಯ್‌ಸ್ಕೂಲಿನಾಗ ಓದೋ
ಮುಂದ,ಸಾಹಿತ್ಯದ ಅಭಿರುಚಿ ಇರೋ ಅಂಥಾ ಗುರುಗಳು ನಮಗ
ಕಲಿಸಿದ್ದು ನಮ್ಮ ಪುಣ್ಯಾ ಅಂತ ತಿಳಕೊಂಡೇನಿ.
ಬೇಂದ್ರೆಯವರ ಬಗ್ಗೆ ನಾ ತಿಳಕೊಂಡದ್ದು ಭಾಳ ಏನ ಅಲ್ಲ. ಅಲ್ರೀ, ಆ ಕಾವ್ಯಸಾಗರ ಎಲ್ಲೆ, ಈ ಸಣ್ಣ ಮೀನ ಎಲ್ಲೆ?

ಇನ್ನು ನನ್ನ ಪರಿಚಯ ಅಂದರ, ನಾ ನಿವೃತ್ತ ಆಗಿ ಈಗ ಮೂರು
ವರ್ಷ ಆತು.
ನೀವು ಏನು ಮಾಡ್ತೀರಿ?

Anonymous said...

ನಮಸ್ಕಾರ ಸಾಹೇಬ್ರಿಗೆ,
ನಿಮ್ಮ ಬರಹದಲ್ಲಿನ ಗಂಭೀರತೆ,ವಿಶ್ಲೇಷಿಸುವ ಪರಿ ನೋಡಿ ನಿಮ್ಮ ವಯಸ್ಸಿನ ಬಗ್ಗೆ ಹೀಗೇ ಇರಬಹುದೂಂತ
ಅನ್ಕೊಂಡಿದ್ದೆ.ಸರಿಯಾಗಿ ನನ್ನ ಎರಡುಪಟ್ಟು ವಯಸ್ಸಿನ ಹಿರಿಯರು ತಾವು!
ನಿಮ್ಮ ಬರಹಗಳ ಮೇಲಿನ ಮಮತೆ ಮತ್ತು ನಿಮಗಿರುವ ಅಗಾಧ ಸೂಕ್ಷ್ಮದೃಷ್ಟಿ ನನ್ನಿಂದ ಹಾಗೆ
ಕನ್ನಡ ಮೇಷ್ಟ್ರಗಳ ಬಗ್ಗೆ ಬರೆಯುವಂತೆ ಮಾಡಿತು..
ಮೂಲತಃ ಗದುಗಿನವ.ಬ್ರಹ್ಮಚಾರಿ.ಬೆಂಗಳೂರಿನಲ್ಲಿ ಕಂಪ್ಯೂಟರ್ ಮತ್ತು ಅದರ ನಿರ್ವಹಣೆಗೆ
ಸಂಬಂಧಪಟ್ಟಂತೆ ಬ್ಯುಸಿನೆಸ್ಸಿದೆ.ತಂದೆ-ತಾಯಿ ಧಾರವಾಡದಲ್ಲಿದ್ದಾರೆ.
ತಿಂಗಳ ಹಿಂದೆ ಅಚಾನಕ್ಕಾಗಿ ನಿಮ್ಮ ಬ್ಲಾಗ್ ನೋಡಿದೆ.
ಸದ್ಯಕ್ಕೆ addicted!
-ರಾಘವೇಂದ್ರ ಜೋಶಿ.

Anonymous said...

ಬೇಂದ್ರೆಯವರ "ನೀ ಹಿಂಗ ನೋಡಬ್ಯಾಡ ನನ್ನ.."
ಹಾಡಿನ ಬಗ್ಗೆ ಬರೆಯುವಿರಾ ಸಾರ್?
ಆ ಹಾಡಿನ ಹುಟ್ಟಿನ ಹಿನ್ನೆಲೆಯಲ್ಲಿ ಗಾಢವಿಷಾದ ಅಡಗಿದೆಯೆಂದು ಕೇಳಿದ್ದೇನೆ..
-ರಾಘವೇಂದ್ರ ಜೋಶಿ.

sunaath said...

ರಾಘವೇಂದ್ರರೆ,
ಖಂಡಿತವಾಗಿಯೂ ಬರೆಯುವೆ.

Shiv said...

ಸುನಾಥರೇ,

ಬೇಂದ್ರೆಯಜ್ಜ ನಿಂ ಜೋಡಿ ಕೂತು ನಮಗೆ ಕವನ ಓದಿಸಿ, ಅದರ ಅರ್ಥೈಸುತ್ತಾರೆ ಅನಿಸ್ತಿದ.

ಅದ್ಭುತ ಕಾವ್ಯಕ್ಕೊಂದು ಸುಂದರ ವಿವರಣೆ..

ಆಲಾಪಿನಿ said...

ಸುನಾಥ ಅಂಕಲ್,
ಖರೇನ ನನಗ ಬಾಳ ಖುಷಿ ಆತು. ಎಷ್ಟ ಚಂದ ವಿವರಣೆ ನೀಡೀರಲ್ಲ. ಹಿಂಗ ಇನ್ನಷ್ಟು ಕವನಗಳ ವಿವರಣೆ ಜೊತೆಗೆ ಹಿನ್ನೆಲೆ ತಿಳಿಸಿಕೊಟ್ರೂ ಅಡ್ಡಿಯಿಲ್ಲ. ನಾವಂತೂ ಓದ್ಲಿಕ್ಕೇ ಕಾಯ್ಲಿಕತ್ತೇವಿ. ಮತ್ತ ಮತ್ತ ಬರೀರಿ ಏನ... ಅಂದಹಂಗ ನಿಮ್ಮ ಮನಿ ಎಲ್ಯದ? ನಾ ಧಾರವಾಡಕ್ ಬಂದಾಗ ಗ್ಯಾರಂಟಿ ಭೇಟಿಯಾಗ್ತೇನಿ.

sunaath said...

ಶಿವ,
ಧನ್ಯವಾದಗಳು. ನಿಮ್ಮ ಭೆಟ್ಟಿಯಿಂದ ಸಂತೋಷವಾಯಿತು.

ಮನಸ್ವಿನಿ said...

ಕಾಕಾ,

ಎಷ್ಟು ಥ್ಯಾಂಕ್ಸ್ ಹೇಳಲಿ ?

sunaath said...

ಶ್ರೀದೇವಿಯವರೆ,
ನೀವು ಧಾರವಾಡಕ್ಕೆ ಬರೋವಾಗ ನನಗ email ಮಾಡಿರಿ:
sunaath@gmail.com
ನಿಮಗ ನನ್ನ ವಿಳಾಸ ತಿಳಸ್ತೇನಿ.

sunaath said...

ಮನಸ್ವಿನಿ,
ನಿನ್ನ ಕಾಕಾನಿಗೆ ನೀನು ಥ್ಯಾಂಕ್ಸ್ ಹೇಳುವ ಅವಶ್ಯಕತೆ ಏನಿದೆಯಮ್ಮ?

ತೇಜಸ್ವಿನಿ ಹೆಗಡೆ said...

ಸುನಾಥ ಕಾಕ,

ನಾನೂ ನಿಮ್ಮಿಂದ ನೀ ಹೀಂಗ ನೋಡ ಬ್ಯಾಡ.. ಕವನದ ವಿಮರ್ಶೆಯನ್ನು ನಿರೀಕ್ಷಿಸುತ್ತಿರುವೆ. ಬೇಂದ್ರೆಯವರ ಮಗನೋರ್ವ ಅಕಾಲಿಕ ಮರಣವನ್ನು ಹೊಂದಿದಾಗ, ಅವರು ಮಗುವಿನ ಕಳೇಬರವನ್ನು ನೋಡಿ ರೋಧಿಸುತ್ತಿರುವ ತಮ್ಮ ಹೆಂಡತಿಯನ್ನುದ್ದೇಶಿಸಿ ರಚಿಸಿದ ಕವನ ಇದೆಂದು ಓದಿರುವೆ. ತುಂಬಾ ವೇದನೆ ಭರಿತ ಕವನವದು!

sunaath said...

ತೇಜಸ್ವಿನಿ,
ಸದ್ಯಕ್ಕೆ ಮತ್ತೊಂದು ಕವನದ ("ನಾವು ಬರ್ತೀವಿನ್ನು ತಾಯಿ..")ಮೇಲೆ ಬರೆಯುತ್ತಿದ್ದು, ಅದು ಮುಗಿಯುತ್ತಲಿದೆ.
ಅದನ್ನು post ಮಾಡಿ, ತಕ್ಷಣವೇ " ನೀ ಹೀಂಗ ನೋಡಬ್ಯಾಡ ನನ್ನ" ಹಾಗೂ "ಇಳಿದು ಬಾ ತಾಯಿ" ಈ ಕವನಗಳ ಬಗೆಗೆ ಬರೆಯಲು ಪ್ರಾರಂಭಿಸುವೆ.
ವಂದನೆಗಳು,
-ಸುನಾಥ ಕಾಕಾ

ಕುಕೂಊ.. said...

ನಿಮ್ಮ ಸೊಗಸಾದ ವಿವರಣಾ ಶೈಲಿಯಿಂದ ನಮಗೆ ಬೇಂದ್ರೆ ಅಜ್ಜರ 'ಅನಂತ ಪಯಣ' ಕವಿತೆಯ ಆಳವಾದ ಅರ್ಥವನ್ನು ವಿವರಿಸಿ ರಸದೌತಣವನ್ನು ಉಣಿಸಿದ್ದಕ್ಕೆ ನಿಮಗೆ ಅನಂತ ಕೋಟಿ ಧನ್ಯವಾದಗಳು. ನಾನು ತುಂಬಾ ಚಿಕ್ಕವನಿದ್ದಾಗಿನಿಂದ ದಾರವಾಡ ಆಕಾಶವಾಣಿಯಲ್ಲಿ ಬರುತ್ತಿದ್ದ ಚಿತ್ರಗೀತೆ ಕೇಳುತ್ತಿದ್ದೆ. ಅದರಲ್ಲಿ ಉತ್ತರ ದ್ರುವದಿಂದ ದಕ್ಷಿಣ ದ್ರುವಕೂ ನನ್ನ ನೆಚ್ಚಿನ ಗೀತೆಯಾಗಿತ್ತು. ಆದರೆ ಅದರ ಆಳವಾದ ಅರ್ಥ ನನಗೆ ಗೊತ್ತಿರಲಿಲ್ಲ. ನಿಮ್ಮ ಈ ವಿವರಣೆಯ ಬರವಣಿಗೆಯಿಂದ ನಾನು ಈ ಹಾಡನ್ನು ಮುಂದೇಂದಾರು ಕೇಳುವಾಗ ಇನ್ನು ಹೆಚ್ಚಿನ ಸವಿಯನ್ನು ಸವಿಯುತ್ತೇನೆ.

ಧನ್ಯವಾದಗಳು
ಕುಮಾರಸ್ವಾಮಿ ಕಡಾಕೊಳ್ಳ

sunaath said...

ಕುಮಾರಸ್ವಾಮಿಯವರೆ,
ವಂದನೆಗಳು.

ತಿರು ಶ್ರೀಧರ said...

ಮನಮುಟ್ಟುವ ಸುಂದರ ವಿವರಣೆ ಹೃತ್ಪೂರ್ವಕ ವಂದನೆಗಳು.

Badarinath Palavalli said...

ಯಾಕೋ ಬೆಳಗಿನಿಂದ ದ.ರಾ. ಬೇಂದ್ರೆಯವರ 'ಉತ್ತರಧ್ರುವದಿಂ ದಕ್ಷಿಣಧ್ರುವಕೂ' ಎಂದು ಆರಂಭವಾಗುವ ಅನಂತ ಪ್ರಣಯ ಗೀತೆ ಮನದಲ್ಲೇ ಗುನುಗುನುಗುತ್ತಿತ್ತು.

ಈ ಗೀತೆಯನ್ನು ಶರಪಂಜರ ಚಿತ್ರದಲ್ಲಿ ಪುಟ್ಟಣ್ಣ ಅದೆಷ್ಟು ಅಮೋಘವಾಗಿ ಬಳಸಿಕೊಂಡಿದ್ದಾರೆ ಅಲ್ಲವಾ? ಇದೇ ಕವನದ conceptನಿಂದಲೇ ನಾಗತಿಹಳ್ಳಿ ಚಂದ್ರಶೇಖರ್ ಸಾರ್ ಪ್ರೇರಣೆಗೊಂಡು ಅಮೇರಿಕಾ ಅಮೇರಿಕಾ ಚಿತ್ರವನ್ನು ತೆರೆಗೆ ತಂದಿರಬಹುದಲ್ಲವೇ? ಗೆಳೆಯರೇ.

ಅಂದಹಾಗೆ, ಇಡೀ ಕವನ ಸರಿಯಾಗಿ ಜೀರ್ಣವಾಗಬೇಕಾದರೆ ನಮಗೆ ಧಾರವಾಡದ ಸುನಾಥ್ ಸಾರ್ ಅವರ ಸಲ್ಲಾಪ ಬ್ಲಾಗ್‌ನ ಈ post ಬಲು ಸಹಕಾರಿ ಅನಿಸಿತು. ಲಿಂಕ್ ಕೆಳಗಡೆ ಇದೆ ಒಮ್ಮೆ ಆ ಪುಟ್ಟ ಬರಹವನ್ನೂ ಓದಿಕೊಳ್ಳಿರಿ:

sunaath said...

ಧನ್ಯವಾದಗಳು, ಬದರಿಯವರೆ. ಪುಟ್ಟಣ್ಣನವರು ಈ ಕವನವನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ಯಾರ ಯಾರ ಪ್ರಭಾವವು ಯಾರ ಯಾರ ಮೇಲೆ ಹೇಗೆ ಹೇಗೆ ಆಗುತ್ತದೆಯೋ ಎನ್ನುವುದು ವಿಚಿತ್ರವಾಗಿದೆ. ‘ಅಮೆರಿಕಾ ಅಮೆರಿಕಾ’ಚಿತ್ರದ ಮೇಲೆ ‘ಉತ್ತರ ಧ್ರುವದ..’ ಪ್ರಭಾವ ಬಿದ್ದಿರಬಹುದು!