Wednesday, May 20, 2009

ತುಂಬಿ ಬಂದಿತ್ತು..........ದ.ರಾ.ಬೇಂದ್ರೆ


ಬಸವಣ್ಣನ ಜೀವನದ ಕೊನೆಯ ದಿನಗಳಿಗೆ ಸಂಬಂಧಿಸಿದಂತೆ, ಬೇಂದ್ರೆಯವರು ‘ತಲೆದಂಡ’ ಎನ್ನುವ ನಾಟಕವನ್ನು ರಚಿಸಿದ್ದರು. ಈ ನಾಟಕವು ಪ್ರಕಟಿತವಾಗಲಿಲ್ಲ. ಈ ಹಾಡನ್ನು ಸ್ವತಃ ಬೇಂದ್ರೆಯವರೇ ಏಕತಾರಿಯ ಹಿನ್ನೆಲೆಯಲ್ಲಿ ೧೯೪೭ರಲ್ಲಿ ಹಾಡಿದ್ದರು. ಅದು ‘ಎಚ್.ಎಮ್.ವ್ಹಿ’ ಕಂಪನಿಯಿಂದ ಮುದ್ರಿತವಾಗಿತ್ತು. ಅನೇಕ ವರ್ಷಗಳ ನಂತರ ಗಿರೀಶ ಕಾರ್ನಾಡರು ಬಸವಣ್ಣನ ಬಗೆಗೆ ತಾವೂ ಒಂದು ನಾಟಕವನ್ನು ರಚಿಸಿದರು ಹಾಗು ಬೇಂದ್ರೆಯವರ ಅನುಮತಿಯನ್ನು ಪಡೆದುಕೊಂಡು ತಮ್ಮ ನಾಟಕಕ್ಕೆ ‘ತಲೆದಂಡ’ ಎನ್ನುವ ಹೆಸರನ್ನೇ ಕೊಟ್ಟರು. ಬೇಂದ್ರೆಯವರ ಕವನದ ಪೂರ್ಣಪಾಠ ಹೀಗಿದೆ:
 

ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್
ತುಂಬಿ ಬಂದಿತ್ತ ತಂಗೀ
ತುಂಬಿ ಬಂದಿತ್ತು ||ಪಲ್ಲವಿ||

ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ
ಜಡಿಯಿಂದಿಳಿದ ಗಂಗಿ ಹಾಂಗ
ಚಂಗನೆ ನೆಗೆದಿತ್ತ
ಮೈಯೊಳಗಿರುವ ಮೂಲಿಮೂಲಿಗೂ
ಮೂಡಿ ಬಂದಿತ್ತ
ಅಡಿಮುಡಿಗೂಡಿ ನಡುವಂತೆಲ್ಲಾ
ಮುಳುಗಿಸಿ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು ||ತುಮ್ ತುಮ್....

ಹೂವಿಗಿರುವ ಕಂಪು ಇತ್ತ
ಹಾಡಿಗಿರುವ ಇಂಪು ಇತ್ತ
ಜೀವದ ಮಾತು ಕಟ್ಟಿಧಾಂಗ
ಎದ್ಯಾಗ ನಟ್ಟಿತ್ತ
ವರ್ಮದ ಮಾತು ಆಡಿಧಾಂಗ
ಮರ್ಮಕ ಮುಟ್ಟಿತ್ತ
ಬೆಳಕಿಗೆ ಮರಳಿ ಕಮಲವರಳಿ
ಜೇನ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು ||ತುಮ್ ತುಮ್....

ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ
ಹದ್ದು ಬಂದು ಹಾವಿನ ಮ್ಯಾಲೆ
ಎರಗಿದಂತಿತ್ತ
ಇರುಳ ಮಬ್ಬಿನ್ಯಾಗ ಹಗಲಿನ ಬೆಳಕು
ಕರಗಿದಂತಿತ್ತ
ಗುಂಗು ಹಿಡಿದು ತಂಗಿದಾಗ
ತುಂಬಿ ನಿಂತಿತ್ತ ಈಗ
ತುಳುಕಿ ಹೋಗಿತ್ತ
ತಂಗೀ ತುಂಬಿ ಬಂದಿತ್ತು || ತುಮ್ ತುಮ್....

ಬೇಂದ್ರೆಯವರ ನಾಟಕದಲ್ಲಿ, ಬಸವಣ್ಣನವರ ಸಮಾಧಿಯ ಕೆಲಸ ನಡೆದಿರುವಾಗ ಅಲ್ಲಿಗೆ ಬಂದ ಮುದುಕ ಜಂಗಮನೊಬ್ಬನು ಈ ಹಾಡನ್ನು ಹೇಳುವನು. ಏಕತಾರಿಯ ನಾದದಲ್ಲಿ ಲೀನವಾಗುವಂತೆ, ಗೀಗೀ ಪದದ ಗತ್ತಿನಲ್ಲಿ ಈ ಹಾಡನ್ನು ಹೆಣೆಯಲಾಗಿದೆ.

ಚೈತನ್ಯಪುರುಷರು ದೇವಲೋಕದಿಂದ ಇಹಲೋಕಕ್ಕೆ ‘ಅವತರಣ’ ಮಾಡುತ್ತಾರೆ ಎನ್ನುವದು ಭಕ್ತರ ನಂಬುಗೆಯಾಗಿದೆ. ಬಸವಣ್ಣನವರು ಶಿವನ ಗಣಗಳಲ್ಲಿ ಒಬ್ಬರಾಗಿದ್ದು ಜನರ ಉದ್ಧಾರಕ್ಕಾಗಿ ಇಹಲೋಕಕ್ಕೆ ಅವತರಣ ಮಾಡಿದರು ಎನ್ನುವುದು ಒಂದು ನಂಬಿಕೆ. ಈ ಹಾಡನ್ನು ಆ ಹಿನ್ನೆಲೆಯಲ್ಲಿಯೂ ಅರ್ಥೈಸಬಹುದು. ಅಲ್ಲದೆ, ಬೇಂದ್ರೆಯವರ ಕವನಗಳಿಗೆ ಅನೇಕ ಆಯಾಮಗಳು ಇರುವುದರಿಂದ ಇನ್ನೂ ಬೇರೆ ರೀತಿಯಿಂದಲೂ ಅರ್ಥೈಸಬಹುದು. ಆ ಎಲ್ಲ ಆಯಾಮಗಳನ್ನು ಸಮಗ್ರಗೊಳಿಸಿದ ಒಂದು ವ್ಯಾಖ್ಯಾನವನ್ನು ಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ. 

ಈ ಗೀತೆಯ ಮೊದಲ ನುಡಿಯನ್ನು ಗಮನಿಸಿರಿ: ‘ ಬೆಳಕಿಂತ ಬೆಳ್ಳಗೆ ಇತ್ತ, ಗಾಳಿಗಿಂತ ತೆಳ್ಳಗೆ ಇತ್ತ’ ಎನ್ನುವ ವಸ್ತು ಯಾವುದಿರಬಹುದು? ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು ವರ್ಣಿಸಿದ ಆತ್ಮವನ್ನು ಇದು ಹೋಲುತ್ತದೆ:
"ನೈನಂ ಛಿಂದಂತಿ ಶಸ್ತ್ರಾಣಿ, ನೈನಂ ದಹತಿ ಪಾವಕಃ
ನಚೈನಂ ಶೋಧಯಂತ್ಯಾಪೋ, ನ ಶೋಷಯತಿ ಮಾರುತ:" 

ಇಂತಹ ಆತ್ಮದ ಅವತರಣದ ಸ್ವರೂಪವನ್ನು ಈ ಹಾಡಿನ ಮೊದಲ ನುಡಿಯಲ್ಲಿ ವರ್ಣಿಸಲಾಗಿದೆ:

ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ
ಜಡಿಯಿಂದಿಳಿದ ಗಂಗಿ ಹಾಂಗ
ಚಂಗನೆ ನೆಗೆದಿತ್ತ
ಮೈಯೊಳಗಿರುವ ಮೂಲಿಮೂಲಿಗೂ
ಮೂಡಿ ಬಂದಿತ್ತ
ಅಡಿಮುಡಿಗೂಡಿ ನಡುವಂತೆಲ್ಲಾ
ಮುಳುಗಿಸಿ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು.

ಭಗವಚ್ಚೈತನ್ಯದ ಒಂದು ಅಂಶವು ಪೃಥಕ್ಕರಣಗೊಳ್ಳುವಾಗ, ಮೊದಲಿಗೆ ಪಂಚಮಹಾಭೂತಗಳಲ್ಲಿ, ಅಂದರೆ ಪೃಥ್ವಿ, ನೀರು, ತೇಜ, ಆಕಾಶ ಹಾಗು ವಾಯು ರೂಪಗಳಲ್ಲಿ ವಿಘಟನೆ ಹೊಂದುತ್ತದೆ. ಈ ಚೈತನ್ಯವು ನಮ್ಮ ಐಹಿಕ ಪಂಚೇಂದ್ರಿಯಗಳ ಗ್ರಹಣಶಕ್ತಿಯನ್ನು ಮೀರಿದ ಬೆರಗು. ಆದುದರಿಂದಲೇ ಇದು ಬೆಳಕಿಗಿಂತಲೂ ಬೆಳ್ಳಗಿದೆ ಹಾಗು ಗಾಳಿಗಿಂತಲೂ ತೆಳ್ಳಗಿದೆ. ಶಿವನು ತನ್ನ ಜಡೆಯಲ್ಲಿ ಧರಿಸಿದ ಗಂಗಾದೇವಿಯು ಪತಿತೋದ್ಧಾರಕ್ಕಾಗಿ ಭೂಮಿಗೆ ಜಿಗಿದಂತೆ, ಈ ಚೈತನ್ಯವೂ ಭೂಮಿಗೆ ಧಾವಿಸಿದೆ. ಅಲ್ಲಿಂದ ಈ ನಾಡಿನ ಮೂಲೆಮೂಲೆಗೂ ಇದು ತಲುಪಿ ಅಲ್ಲಿಯ ಕಲ್ಮಶವನ್ನು ತೊಳೆದಿದೆ. ಅಡಿಯಿಂದ ಮುಡಿಯವರೆಗೂ ಅಂದರೆ ಸಮಾಜದ ಕೆಳಸ್ತರದಲ್ಲಿ ಇರುವವರಿಂದ ಹಿಡಿದು, ಮೇಲ್ತರಗತಿಯಲ್ಲಿ ಇರುವವರವರೆಗೂ ಈ ಗಂಗಾಪ್ರವಾಹದ ಪರಿಣಾಮವಾಗಿದೆ. ಭಕ್ತರ ಅಡಿ ಅಂದರೆ ನಡೆಯನ್ನು, ಮುಡಿ ಅಂದರೆ ವಿಚಾರವನ್ನು ಹಾಗು ನಡು ಅಂದರೆ ಆಚಾರವನ್ನು ಈ ಚೈತನ್ಯಗಂಗೆಯು ತುಂಬಿ, ತುಳುಕಿ ಅವರನ್ನು ಶುದ್ಧಗೊಳಿಸಿದೆ. ಬೆಳಕು ಅಜ್ಞಾನವನ್ನು, ಗಾಳಿಯು ದುರ್ಗಂಧವನ್ನು ಹಾಗು ನೀರು ಮಾಲಿನ್ಯವನ್ನು ತೆಗೆದು ಹಾಕುವ ಸಾಧನಗಳಾಗಿವೆ. ಕೈಲಾಸದಲ್ಲಿರುವ ಶಿವನ ತುಂಬಿಯು ಈ ಉದ್ದೇಶದಿಂದ ಧರಣಿಗೆ ಅವತರಿಸಿದೆ. ಬಸವಣ್ಣನವರ ಪ್ರಭಾವವು ನಾಡನ್ನೆಲ್ಲ ವ್ಯಾಪಿಸಿ, ಜನರ ಮನಸ್ಸನ್ನು ಶುದ್ಧಗೊಳಿಸಿದ ರೀತಿಯನ್ನು ಈ ಗೀತೆ ಹೀಗೆ ವರ್ಣಿಸಿದೆ ಎನ್ನಬಹುದು.

ಬಸವಣ್ಣನವರ ವ್ಯಕ್ತಿತ್ವವನ್ನು ವರ್ಣಿಸಲೂ ಸಹ ಈ ನುಡಿಯನ್ನು ಬಳಸಬಹುದು. ಬೆಳಕು, ಗಾಳಿ ಹಾಗು ಗಂಗೆ ಅರ್ಥಾತ್ ನೀರು ಇವು ಮಾನವನನ್ನು ಶುದ್ಧಗೊಳಿಸುವ ಸಾಧನಗಳು. ಅಲ್ಲದೆ ಈ ಮೂರು ಮಹಾಭೂತಗಳು (ತೇಜಸ್ಸು, ಪೃಥ್ವಿ ಹಾಗು ವಾಯು) ದೇಶಕಾಲವನ್ನು ಮೀರಿದ ಶಕ್ತಿಗಳು. ಬಸವಣ್ಣನವರ ಒಳಗೆ ಅರಳಿದ ಸೂಕ್ಷ್ಮ ದೈವೀ ಚೈತನ್ಯವನ್ನು ಬಣ್ಣಿಸಲು ನಿಸರ್ಗದ ಚೈತನ್ಯಗಳಾದ ಬೆಳಕು, ಗಾಳಿ ಹಾಗೂ ಗಂಗೆ ಇವುಗಳನ್ನೇ ಪ್ರತೀಕಗಳಾಗಿ ಬಳಸುವದು ಸಹಜ. ಆದುದರಿಂದಲೇ ಇಲ್ಲಿ ಹಾಡುತ್ತಿರುವ ಜಂಗಮನು ಈ ಸೂಕ್ಷ್ಮ ಚೈತನ್ಯವು ಬೆಳಕಿಗಿಂತಲೂ ಬೆಳ್ಳಗೆ ಇತ್ತು ಹಾಗೂ ಗಾಳಿಗಿಂತಲೂ ತೆಳ್ಳಗೆ ಇತ್ತು ಎಂದು ಬಣ್ಣಿಸುತ್ತಿದ್ದಾನೆ. ಬೆಳಕು ಜ್ಞಾನವನ್ನು ಕೊಡುತ್ತದೆ, ಗಾಳಿ ಎಲ್ಲ ಜೀವಿಗಳ ಪ್ರಾಣಕ್ಕೆ ಆಧಾರವಾಗಿದೆ. ಗಂಗೆ ಜೀವಿಗಳ ಕೊಳೆಯನ್ನು ತೊಳೆದು ಅವರನ್ನು ಪಾವನಗೊಳಿಸುವಳು. ಬಸವಣ್ಣನವರ ಲೋಕಕಲ್ಯಾಣಕರ ವ್ಯಕ್ತಿತ್ವವು ಬೆಳಕು, ಗಾಳಿ ಹಾಗೂ ಗಂಗೆಯಂತೆ ಪರಿಶುದ್ಧವಾಗಿದೆ, ಅಲ್ಲದೆ ಸಮಾಜಕ್ಕೆ ಒಳಿತನ್ನು ಮಾಡಿದೆ. ಈ ರೂಪಕವು ಬಸವಣ್ಣನವರ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ವರ್ಣಿಸುವಂತೆ, ಅವರ ಸಾಮಾಜಿಕ ವ್ಯಕ್ತಿತ್ವವನ್ನೂ ಸಹ ವರ್ಣಿಸುತ್ತದೆ. ಬಸವಣ್ಣನವರೂ ಸಹ ಬೆಳಕು, ಗಾಳಿ ಹಾಗು ಗಂಗೆಯಂತೆ ಸಮಾಜದ ಶುದ್ಧೀಕರಣದಲ್ಲಿ ತೊಡಗಿದ್ದರು. ನಾಡಿನ ಮೂಲೆಮೂಲೆಗಳಿಂದ ಆಕರ್ಷಿತರಾದವರು ಕಲ್ಯಾಣಕ್ಕೆ ಬಂದು ಬಸವಣ್ಣನವರಿಗೆ ಶರಣಾದರು, ಬಸವಣ್ಣನವರ ಶರಣರಾದರು. ಈ ಆಕರ್ಷಣೆಗೆ, ಇಂತಹ ಅದ್ಭುತ ಪರಿಣಾಮಕ್ಕೆ ಕಾರಣವೇನು? ಎರಡನೆಯ ನುಡಿಯಲ್ಲಿ ಇದರ ಕಾರಣವನ್ನು ಈ ರೀತಿಯಾಗಿ ಹೇಳಲಾಗಿದೆ: 

ಹೂವಿಗಿರುವ ಕಂಪು ಇತ್ತ
ಹಾಡಿಗಿರುವ ಇಂಪು ಇತ್ತ
ಜೀವದ ಮಾತು ಕಟ್ಟಿಧಾಂಗ
ಎದ್ಯಾಗ ನಟ್ಟಿತ್ತ
ವರ್ಮದ ಮಾತು ಆಡಿಧಾಂಗ
ಮರ್ಮಕ ಮುಟ್ಟಿತ್ತ
ಬೆಳಕಿಗೆ ಮರಳಿ ಕಮಲವರಳಿ
ಜೇನ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು.

ಬಸವಣ್ಣನವರ ವ್ಯಕ್ತಿತ್ವವು ಸರ್ವರನ್ನು ಆಕರ್ಷಿಸುವ ವ್ಯಕ್ತಿತ್ವ. ಆದುದರಿಂದಲೇ ಬಡವರು, ಶ್ರೀಮಂತರು, ದಲಿತರು, ಸವರ್ಣೀಯರು, ಸೇವಕರು ಹಾಗು ಮಹಾರಾಜರು ಇವರೆಲ್ಲ ಬಸವಣ್ಣನವರನ್ನು ಮುತ್ತಿಕೊಂಡರು. ಆದರೆ ಈ ಆಕರ್ಷಕ ವ್ಯಕ್ತಿತ್ವವು ಪ್ರಯತ್ನಪಟ್ಟು ಬೆಳೆಯಿಸಿಕೊಂಡ ವ್ಯಕ್ತಿತ್ವವಲ್ಲ. ಹೂವಿನಲ್ಲಿರುವ ಕಂಪು ಅದರ ಸಹಜ ಗುಣವಾಗಿದೆ, ಅದು ಕೃತಕ ಸುಗಂಧವಲ್ಲ. ಅದರಂತೆ ನೈಜ ಹಾಡುಗಾರನಲ್ಲಿರುವದು ದೇವದತ್ತವಾದ ಇಂಪಾದ ಧ್ವನಿ. ಬಸವಣ್ಣನವರದು ಈ ಬಗೆಯ ದೇವದತ್ತವಾದ, ನೈಜ ವ್ಯಕ್ತಿತ್ವವಾಗಿತ್ತು. ಅವರು ಜನರಿಗೆ ಹೇಳುವ ಮಾತುಗಳು ಆಡಂಬರದ ಉಪದೇಶವಾಗಿರದೆ, ಅವರ ಜೀವಾಳದಿಂದ ಬಂದ ಮಾತಾಗಿರುತ್ತಿತ್ತು. ಆ ಕಾರಣದಿಂದಲೇ ಕೇಳುಗರ ಎದೆಯಲ್ಲಿ ಅದು ನಾಟುತ್ತಿತ್ತು. ಬೆಳಕು, ಗಾಳಿ ಹಾಗೂ ಗಂಗೆ ಇವು ನಕಾರಾತ್ಮಕ ಗುಣಗಳನ್ನು ನಿವಾರಿಸುತ್ತವೆ. ಅಷ್ಟಾದರೆ ಸಾಕೆ? ಸಕಾರಾತ್ಮಕ ಗುಣಗಳೂ ಸಹ ಬೇಕಲ್ಲವೆ? ಈ ನುಡಿಯಲ್ಲಿ ಬಸವಣ್ಣನವರ ಆಚಾರ-ವಿಚಾರಗಳು ಜನರನ್ನು ಸಕಾರಾತ್ಮಕವಾಗಿ ಪ್ರಭಾವಿಸುವ ರೀತಿಯನ್ನು ಹೇಳಲಾಗಿದೆ. ಹೂವಿನ ಕಂಪಿನಂತೆ, ಹಾಡಿನ ಇಂಪಿನಂತೆ ಅವರ ಆಚಾರ-ವಿಚಾರಗಳು ಜನರನ್ನು ಪ್ರಭಾವಿಸುತ್ತಿದ್ದವು. ಅವರ ವಚನಗಳಲ್ಲಿ ನಾಮಾಮೃತವು ತುಂಬಿದೆ, ಈ ಅಮೃತಪಾನ ಮಾಡುವ ತುಂಬಿ ಅವರು. ಈ ವಚನಗಳ ಕಂಪು ಹಾಗೂ ಇಂಪು ಎಲ್ಲೆಡೆ ಹರಡಿವೆ, ತುಂಬಿಕೊಂಡಿವೆ.

ಬಸವಣ್ಣನವರ ನಡೆ ಹಾಗು ನುಡಿಗಳ ಸರಳತೆ, ಸೌಜನ್ಯ ಹಾಗು ಅವರಲ್ಲಿರುವ ಸತ್ಯ ಇವು ಜನರ ಮನಸ್ಸಿಗೆ ನಾಟುತ್ತಿದ್ದವು. ಇಷ್ಟೇ ಅಲ್ಲ, ಆ ಮಾತಿನಲ್ಲಿಯ ವರ್ಮ ಅಂದರೆ ಧೀರತನ ಅನೇಕ ಸಲ ಸಮಾಜದ ರೂಢಿಗಳಿಗೆ ವಿರುದ್ಧವಾಗಿರುತ್ತಿದ್ದವು. ಆದರೂ ಸಹ ಆಲೋಚಿಸಿದಾಗ ಅದು ಸತ್ಯ ಎನ್ನುವುದರ ಅರಿವು ತಟ್ಟನೆ ಆಗುತ್ತಿತ್ತು. ಕೇಳುಗರ ಮನಸ್ಸನ್ನು ಬೇಧಿಸುತ್ತಿತ್ತು ಅದನ್ನೇ  ‘ವರ್ಮದ ಮಾತು ಆಡಿಧಾಂಗ ಮರ್ಮಕ ಮುಟ್ಟಿತ್ತ’ ಎಂದು ಜಂಗಮನು ಹೇಳುತ್ತಿದ್ದಾನೆ. ಸಾಂದರ್ಭಿಕವಾಗಿ ಇಲ್ಲಿ ನಾವು ಮತ್ತೊಂದು ಮಾತನ್ನು ಅಂದರೆ ಬೇಂದ್ರೆಯವರ ಪದಪ್ರತಿಭೆಯನ್ನೂ ಗಮನಿಸಬೇಕು. ಉತ್ತರ ಕರ್ನಾಟಕದ ರೂಢ ಮಾತಿನಲ್ಲಿ ವರ್ಮ ಅಂದರೆ ವೈರ ಹಾಗು ಮರ್ಮ ಅಂದರೆ  ಅಂತರಂಗದ ಸೂಕ್ಷ್ಮತೆ. ಈ ಪದಗಳನ್ನು ವಿಶೇಷ ಅರ್ಥವನ್ನು ಸೂಚಿಸುವಂತೆ ಬೇಂದ್ರೆ ಇಲ್ಲಿ ಬಳಸಿಕೊಂಡಿರುವುದು ಅವರ ಕಾವ್ಯಪ್ರತಿಭೆಗೆ ಸಾಕ್ಷಿಯಾಗಿದೆ.

ಒಳ್ಳೆಯವರನ್ನು ಹಾಗು ಕೇಡುಗರನ್ನು ಒಳಗೊಂಡ ಸಂಪೂರ್ಣ ಸಮಾಜವೇ ಬಸವಣ್ಣನವರ ಹೃದಯದ ಮಾತುಗಳತ್ತ ಆಕರ್ಷಿತವಾಗಿದೆ. ಇದನ್ನು ಒಂದು ಸುಂದರವಾದ ಉಪಮೆಯ ಮೂಲಕ ವಿವರಿಸಲಾಗಿದೆ. ಕತ್ತಲಲ್ಲಿರುವ ಕಮಲವು ಮುಚ್ಚಿಕೊಂಡಿರುತ್ತದೆ. ಸೂರ್ಯೋದಯವಾದಾಗ, ಅದು ಬೆಳಕಿಗೆ ಮರಳುವದರಿಂದ ಅದು ಅರಳುತ್ತದೆ. ಅದರಲ್ಲಿರುವ ಜೇನನ್ನು ತುಂಬಿಗಳು ಹೀರಿಕೊಳ್ಳುತ್ತವೆ. ಇದರಂತೆಯೇ ಕತ್ತಲಲ್ಲಿದ್ದ ಸಮಾಜವು ವಿಚಾರದ ಬೆಳಕಿಗೆ ಎದುರಾದಾಗ,  ತನ್ನಲ್ಲಿರುವ ಮೂಢ ಆಚಾರವಿಚಾರಗಳನ್ನು ತ್ಯಜಿಸುತ್ತದೆ. ಸಮಾಜವೆನ್ನುವ ಕಮಲಕ್ಕೆ ಬಸವಣ್ಣನವರು ಬೆಳಕು ನೀಡಿದ ರವಿಯಾಗಿದ್ದಾರೆ. ಈ ರವಿಗೂ ಒಂದು ಅಸ್ತಮಾನ ಇರಬೇಕಲ್ಲವೆ? ಬಸವಣ್ಣನವರ ಅವತರಣ ಹಾಗು ಸಾಮಾಜಿಕ ಕಾರ್ಯವನ್ನು ಬಣ್ಣಿಸಿದ ಬಳಿಕ, ಅವರ ಅನೂಹ್ಯ ಹಾಗು ಕ್ಷಿಪ್ರ ಕೊನೆಯನ್ನು ಮೂರನೆಯ ನುಡಿಯಲ್ಲಿ ಬಣ್ಣಿಸಲಾಗಿದೆ. ಮೊದಲನೆಯ ನುಡಿಯಲ್ಲಿ ಬೆಳಕಿಗಿಂತ ಬೆಳ್ಳಗಿತ್ತ ಎನ್ನುವ ವರ್ಣನೆ, ಮೂರನೆಯ ನುಡಿಯಲ್ಲಿ ‘ಕಾಲಧಾಂಗ ಕಪ್ಪಗಿತ್ತ’ ಎಂದಾಗಿದೆ. ಕಾಲ ಎಂದರೆ ಎಲ್ಲವನ್ನೂ ನಾಶಗೊಳಿಸುವ ಕಾಲಪುರುಷ. ಈತ ಜೀವನದ ಎಲ್ಲ ಬಣ್ಣಗಳನ್ನೂ ನುಂಗಿ ಹಾಕುವ ಕಾಳವರ್ಣದವನು.

ಕಾಲದ ಮೂರು ಮುಖಗಳು: ಭೂತ ಹಾಗು ಭವಿಷ್ಯತ್ ಹಾಗು ವರ್ತಮಾನ. ಭೂತ ಹಾಗು ಭವಿಷ್ಯತ್ ಇವು ಯಾವಾಗಲೂ ನಿಗೂಢವೇ ಸರಿ. ಆದುದರಿಂದಲೇ ಇವು ಕಪ್ಪು ಕುಳಿಗಳು! ಜೀವಿಗಳ ಆಪೋಶನವನ್ನು ಸಾವು ಮೌನವಾಗಿ ತೆಗೆದುಕೊಳ್ಳುತ್ತದೆ ಹಾಗು ಜೀವಿಯನ್ನು ನಿಶ್ಚಲಗೊಳಿಸುತ್ತದೆ. ಆದುದರಿಂದ ಕಾಲವು ಕಪ್ಪಾದರೆ, ಸಾವು ತೆಪ್ಪಗೆ ಮಾಡುವ ಕ್ರಿಯೆಯಾಗಿದೆ. ಬಸವಣ್ಣನವರ ಅವತಾರವು ಈ ಕಾಲದಲ್ಲಿ ಈಗ ವಿಲೀನವಾಗುವ ಕಾಲ ಬಂದಿದೆ. ಜಂಗಮನು ಅದನ್ನು ಹಾಡುವ ಬಗೆ ಹೀಗಿದೆ: 

ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ
ಹದ್ದು ಬಂದು ಹಾವಿನ ಮ್ಯಾಲೆ
ಎರಗಿದಂತಿತ್ತ
ಇರುಳ ಮಬ್ಬಿನ್ಯಾಗ ಹಗಲಿನ ಬೆಳಕು
ಕರಗಿದಂತಿತ್ತ
ಗುಂಗು ಹಿಡಿದು ತಂಗಿದಾಗ
ತುಂಬಿ ನಿಂತಿತ್ತ ಈಗ
ತುಳುಕಿ ಹೋಗಿತ್ತ
ತಂಗೀ ತುಂಬಿ ಬಂದಿತ್ತು.

ಸಮಾಜಸುಧಾರಣೆಯು ಕಲ್ಯಾಣದಲ್ಲಿ ಈ ರೀತಿ ನಡೆದಿರುವಾಗಲೇ ಒಂದು ಆಘಾತಕಾರಿ ಘಟನೆ ಸಂಭವಿಸುತ್ತದೆ. ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಕೂಡಲಸಂಗಮಕ್ಕೆ ಹೋಗುತ್ತಾರೆ. ಅಲ್ಲಿ ಅವರ ಜಲಸಮಾಧಿಯಾಗುತ್ತದೆ. ಇತ್ತ ಕಲ್ಯಾಣದಲ್ಲಿ ಅನೇಕ ಶರಣರ ನರಮೇಧವೂ ನಡೆಯುತ್ತದೆ. ಈ ದುರಂತವನ್ನು ‘ಕಾಲದ್ಹಾಂಗ ಕಪ್ಪಗಿತ್ತ’ ಎಂದು ಬೇಂದ್ರೆ ಬಣ್ಣಿಸುತ್ತಾರೆ. ಕಪ್ಪು ಅಥವಾ ಕತ್ತಲೆಯು ನಮ್ಮನ್ನು ಕುರುಡರನ್ನಾಗಿ ಮಾಡುತ್ತದೆ. ಕಾಲಗರ್ಭದಲ್ಲಿ ಏನಿದೆ ಎನ್ನುವದನ್ನು ನಾವು ತಿಳಿಯಲಾರೆವು. ಕಲ್ಯಾಣದಲ್ಲಿ ನಡೆದ ವಿನಾಶದ ನಂತರ ಅಲ್ಲಿ ನೆಲೆಸಿದ್ದು ಸ್ಮಶಾನಶಾಂತಿ. ಅದನ್ನು ಬೇಂದ್ರೆಯವರು ಸಾವಿನ್ಹಾಂಗ ತೆಪ್ಪಗಿತ್ತ ಎಂದು ಹೇಳುತ್ತಾರೆ. ಏನಾಗುತ್ತಿದೆ ಎಂದು ಅರಿತುಕೊಳ್ಳುವಷ್ಟರಲ್ಲಿಯೇ ಜರುಗಿದ ಈ ವಿಪ್ಲವವನ್ನು ‘ಹದ್ದು ಬಂದು ಹಾವಿನ ಮ್ಯಾಲೆ ಎರಗಿದಂತಿತ್ತ’ ಎಂದು ಬೇಂದ್ರೆ ವರ್ಣಿಸುತ್ತಾರೆ.

‘ಹದ್ದು ಬಂದು ಹಾವಿನ ಮ್ಯಾಲೆ ಎರಗಿದಂತಿತ್ತ’ ಎನ್ನುವ ಉಪಮೆಯು ಅನೇಕ ಅರ್ಥಗಳನ್ನು ಧ್ವನಿಸುತ್ತದೆ. ಮೊದಲನೆಯದಾಗಿ ಇದರಲ್ಲಿ ಕ್ರೌರ್ಯ ಅಡಗಿದೆ. ಬಸವಣ್ಣನವರ ಕೊನೆಯ ದಿನಗಳಲ್ಲಿ ನಡೆದ ಸಾಮಾಜಿಕ ವಿಪ್ಲವವು ಭಯಂಕರವಾಗಿತ್ತು. ಅನೇಕ ಶರಣರ ಕೊಲೆ ಹಾಗು ನಿರ್ಗಮನದಿಂದಾಗಿ ಕಲ್ಯಾಣವು ಹಾಳು ಬಿದ್ದು ಹೋಯಿತು. ಈ ಉಪಮೆಯು ಆ ಸಮಯದ ಘಟನೆಗಳನ್ನು ನೆನಪಿಗೆ ತರುತ್ತದೆ. ಹದ್ದು ಎರಗುವುದು ಅತ್ಯಂತ ವೇಗವಾಗಿ. ಬಸವಣ್ಣನವರ ದೇಹತ್ಯಾಗವೂ ಅಷ್ಟೇ ಆಕಸ್ಮಿಕವಾಗಿ ಹಾಗು ತ್ವರಿತವಾಗಿ ನಡೆದು ಹೋಯಿತು. ನಾಡನ್ನು ಬೆಳಗಿದ ಬೆಳಕು ಈಗ ಎಲ್ಲೆಡೆಗೂ ಹಬ್ಬಿದ ಮಬ್ಬುಗತ್ತಲೆಯಲ್ಲಿ ಕರಗಿ ಹೋಯಿತು. ಈ ಸಾಲನ್ನು ಓದುವಾಗ ಗಾಂಧೀಜಿಯವರ ಸಾವಿನ ನೆನಪೂ ಆಗದಿರದು. ಬಸವಣ್ಣ ಹಾಗು ಗಾಂಧೀಜಿಯವರ ಸಾವಿನಲ್ಲಿ ಭಿನ್ನತೆ ಇದೆ. ಆದರೆ ಸಮಾಜವನ್ನು ಸತ್ಯ ಹಾಗು ಪ್ರೇಮಗಳಿಂದ ಬೆಳಗಿದ ಈ ಎರಡು ಜ್ಯೋತಿಗಳು ಕತ್ತಲೆಯಲ್ಲಿ ಕರಗಿ ಹೋದದ್ದರಲ್ಲಿ ಸಾಮ್ಯತೆ ಇದೆ. ‘ಮಬ್ಬು’ ಎನ್ನುವ ಪದವನ್ನು ಗಮನಿಸಿರಿ. ಮಬ್ಬು ಎನ್ನುವುದು ಕತ್ತಲೆಯನ್ನು ಹಾಗು ಬುದ್ಧಿಗೇಡಿತನವನ್ನಷ್ಟೇ ಅಲ್ಲ, ಯಾವುದೋ ವಿಚಾರಧಾರೆಯ ಹಿಡಿತವನ್ನೂ ಸೂಚಿಸುತ್ತದೆ. ಸಮಾಜದಲ್ಲಿ ಮತ್ತೆ ಕತ್ತಲೆ ಆವರಿಸಿತು. ಸುಧಾರಣೆಯ ಹಗಲಿನ ಬೆಳಕು ವಿಪ್ಲವದ ಇರುಳಿನ ಮಬ್ಬಿನಲ್ಲಿ ಮತ್ತೆ ಕರಗಿತು! (ಇರುಳು ಶಾಶ್ವತವಲ್ಲ ಎನ್ನುವ ತಿಳಿವಳಿಕೆ ಇಲ್ಲಿ ಮನೋಗತವಾಗಿದೆ.)
 

ಇದೆಲ್ಲ ಸರಿ, ಬಸವಣ್ಣನವರ ನಂತರ ಈ ಸಮಾಜದ ಗತಿ ಏನು? ಹಗಲಿನ ಬೆಳಕು ರಾತ್ರಿಯ ಮಬ್ಬಿನಲ್ಲಿ ಕರಗಿ ಹೋದಂತೆ, ಬಸವಣ್ಣನವರ ಸತ್ಕಾರ್ಯಗಳು ಕರಗಿ ಹೋದವು. ಮಬ್ಬು ಎಂದರೆ ಕತ್ತಲೆ ಎನ್ನುವ ಅರ್ಥವಲ್ಲದೆ ಬುದ್ಧಿಹೀನತೆ, ವಿಚಾರದಾಸ್ಯ ಎನ್ನುವ ಅರ್ಥವೂ ಇರುವದನ್ನು ಗಮನಿಸಬೇಕು. 

ಸಾಮಾಜಿಕ ಹಾಗು ಆಧ್ಯಾತ್ಮಿಕ ಸುಧಾರಣೆಯಲ್ಲಿ ಬಸವಣ್ಣನವರು ಒಂದೇ ಮನಸ್ಸಿನಿಂದ ನಿರತರಾಗಿದ್ದರು. ಈ ಕ್ರಿಯೆಯನ್ನು ‘ಗುಂಗು ಹಿಡಿದು ತಂಗಿದಾಗ’ ಎಂದು ಬಣ್ಣಿಸಲಾಗಿದೆ. ಗುಂಗಿ ಹುಳವು ಅಂದರೆ ಭ್ರಮರವು ಒಂದೇ ಧ್ವನಿಯನ್ನು ಹೊರಡಿಸುತ್ತ ಹಾರುತ್ತಿರುತ್ತದೆ. ಅದು ‘ತಂಗಿದಾಗ’ ಅಂದರೆ ಕಲ್ಯಾಣವನ್ನೇ ಕೇಂದ್ರವನ್ನಾಗಿ ಮಾಡಿಕೊಂಡು ಅಲ್ಲಿ ತಳವೂರಿದಾಗ ಎನ್ನುವ ಅರ್ಥವು ಇಲ್ಲಿ ನಿಹಿತವಾಗಿದೆ. ಬಸವಣ್ಣನವರದೂ ಸಹ ಅದರಂತೆಯೆ ಒಂದೇ ಧ್ವನಿ. ಅದು ಶಿವಾಚಾರದ ಧ್ವನಿ. ಶಿವಾಚಾರವನ್ನು ತುಂಬಿಕೊಂಡ ಅವರ ವ್ಯಕ್ತಿತ್ವವು ತುಂಬಿದ ಕೊಡವಾಗಿತ್ತು. ಆ ತುಂಬಿದ ಚೈತನ್ಯಜಲ ವಿಪ್ಲವ ಸಮಯದಲ್ಲಿ ತುಳುಕಿ ಹೋಯಿತು.

ಕಲ್ಯಾಣದ ವಿಪ್ಲವಕ್ಕೂ ಮೊದಲು ಬಸವಣ್ಣನವರ ಅನುಚರರು ಅವರ ಸುತ್ತಲೂ ‘ಗುಂಗು ಹಿಡಿದವರಂತೆ’ ಕೂಡಿರುತ್ತಿದ್ದರು. ‘ತಂಗುವದು’ ಎಂದರೆ ಅಲ್ಲಿಯೇ ನೆಲೆ ನಿಲ್ಲುವದು. ಕಲ್ಯಾಣದಲ್ಲಿದ್ದ ಶರಣರೆಲ್ಲ, ಈ ವಿಪ್ಲವದ ನಂತರ ತುಳುಕಿ ಹೋದರು. ಈ ಸಾಲುಗಳು ಬಸವಣ್ಣನವರಿಗೂ ಅನ್ವಯಿಸುತ್ತವೆ. ಕಲ್ಯಾಣದಲ್ಲಿ ತಂಗಿದ್ದಾಗ ಅವರು ‘ಗುಂಗು ಹಿಡಿದ’ ತುಂಬಿಯಂತೆ ಇದ್ದರು. ತುಂಬಿಯು ‘ಗುಂ ಗುಂ’ ಎನ್ನುವ ಒಂದೇ ನಾದವನ್ನು ಹೊರಡಿಸುತ್ತದೆ. ಬಸವಣ್ಣನವರಿಗೆ ಹಿಡಿದ ಗುಂಗು ಶಿವಾಚಾರದ ಗುಂಗು, ಸಮಾಜದ ಉದ್ಧಾರದ ಗುಂಗು. ಅವರು ಹೊರಡಿಸುತ್ತಿದ್ದ ಧ್ವನಿಯೂ ಅದೊಂದೇ ಧ್ವನಿ. ತಮ್ಮ ವ್ಯಕ್ತಿತ್ವವನ್ನೆಲ್ಲ , ತಮ್ಮ ತನು, ಮನ, ಧನವನ್ನೆಲ್ಲ ಅದರಲ್ಲಿಯೇ ತೊಡಗಿಸಿ, ಅದರಲ್ಲಿಯೇ ಅವರು ತುಂಬಿಕೊಂಡಿದ್ದರು. ಆದರೆ ಅವರ ಕಾಲವು ತುಂಬಿ ಬಂದಿತ್ತು ಹಾಗು ಬಸವಣ್ಣನವರ ಚೈತನ್ಯವು ಈಗ ತುಳುಕಿ ಹೋಯಿತು ಅಂದರೆ ಇಲ್ಲದಂತಾಯಿತು.

ಇನ್ನು ಈ ಗೀತೆಯ ಪಲ್ಲವಿಯನ್ನು ಗಮನಿಸೋಣ:

ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್
ತುಂಬಿ ಬಂದಿತ್ತ ತಂಗೀ
ತುಂಬಿ ಬಂದಿತ್ತು||
 ತುಮ್ ತುಮ್..... ಎನ್ನುವ ಪದವು ಏಕತಾರಿಯ ನಾದಕ್ಕೆ ಸಂವಾದಿಯಾದ ಪದವಾಗಿದೆ. ಬೇಂದ್ರೆಯವರ ‘ತಲೆದಂಡ’ ನಾಟಕದಲ್ಲಿಯ ಜಂಗಮನು ಏಕತಾರಿಯನ್ನು ಬಾರಿಸುತ್ತಲೇ ಈ ಗೀತೆಯನ್ನು ಹಾಡುತ್ತಿರುತ್ತಾನೆ. ಮೊದಲನೆಯ ನುಡಿಯ ಕೊನೆಯಲ್ಲಿ ಆತನು ‘ತುಂಬಿ ಬಂದಿತ್ತ’ ಎಂದು ಹೇಳುವಾಗ, ಬಸವಣ್ಣನವರನ್ನು ಭ್ರಮರಕ್ಕೆ ಹೋಲಿಸಿ ಅವರ ಅವತರಣಕ್ಕೆ ಸಂಕೇತವಾಗಿ ‘ತುಂಬಿ’ ಪದವನ್ನು ಬಳಸಲಾಗಿದೆ. ಬಸವಣ್ಣವರ ವ್ಯಕ್ತಿತ್ವದ ಪರಿಪೂರ್ಣತೆಯನ್ನು ಬಣ್ಣಿಸಲು ಹಾಗು ಕೈಲಾಸದಿಂದ ಭೂಮಿಗೆ ಈ ದೇವ-ತುಂಬಿಯ ಅವತರಣವನ್ನು ಸೂಚಿಸಲು ‘ತುಂಬಿ ಬಂದಿತ್ತ’ ಎಂದು ಹೇಳಲಾಗಿದೆ. ಕೈಲಾಸದಲ್ಲಿರುವ ದುಂಬಿಯು ಈಗ ಭೂಲೋಕಕ್ಕೆ ಬಂದಿದೆ ಎನ್ನುವುದರ ಸೂಚನೆ ಇದು.

ಎರಡನೆಯ ನುಡಿಯಲ್ಲಿ ಸಾಮಾಜಿಕ ಹಾಗು ಆಧ್ಯಾತ್ಮಿಕ ಕಾರ್ಯದಲ್ಲಿ ಬಸವಣ್ಣನವರು ತುಂಬಿಕೊಂಡಿದ್ದನ್ನು ಸೂಚಿಸಲಾಗಿದೆ. ಬಸವಣ್ಣನವರ ಆಚಾರ, ವಿಚಾರಗಳು ಸಮಾಜವನ್ನು ಪೂರ್ಣವಾಗಿ ತುಂಬಿದವು ಅಂದರೆ ಆವರಿಸಿದವು ಹಾಗು ಪ್ರಭಾವಿಸಿದವು ಎನ್ನುವ ಸೂಚನೆಯು ‘ತುಂಬಿ ಬಂದಿತ್ತ’ ಪದದಲ್ಲಿ ಅಡಕವಾಗಿದೆ.
ಮೂರನೆಯ ನುಡಿಯಲ್ಲಿ ಬಸವಣ್ಣನವರ ಕಾಲವು ತುಂಬಿ ಬಂದಿದ್ದನ್ನು ಸೂಚಿಸಲಾಗಿದೆ.ಕನ್ನಡ ನಾಡಿನಲ್ಲಿ ಒಂದು ಯುಗಸಮಾಪ್ತಿಯಾಯಿತು.
ಬಸವಣ್ಣನವರ ಜೀವನದ ಮಂಗಲಗೀತೆಯಂತೆ ಇರುವ ಈ ಕವನದಲ್ಲಿ ‘ತುಂಬಿ’ ಪದವನ್ನು ಬಳಸಲು ಬೇಂದ್ರೆಯವರಿಗೆ ಬಹುಶಃ ಬಸವಣ್ಣನವರ ಒಂದು ವಚನದಿಂದಲೇ ಪ್ರೇರಣೆ ದೊರೆತಿರಬಹುದು. ಭಕ್ತಿಭಂಡಾರಿ ಬಸವಣ್ಣನವರು ಕೂಡಲಸಂಗಮದೇವರಲ್ಲಿ ಇರಿಸಿದ ಭಕ್ತಿ ಆ ವಚನದಲ್ಲಿ ವ್ಯಕ್ತವಾಗಿದೆ. ಆ ವಚನ ಹೀಗಿದೆ:

ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಕೂಡಲಸಂಗಮದೇವಾ
ನಿಮ್ಮ ಚರಣಕಮಲದೊಳಾನು ತುಂಬಿ

ಇದರಂತೆಯೇ ಅಲ್ಲಮಪ್ರಭುಗಳೂ ಸಹ ಒಂದು ವಚನವನ್ನು ರಚಿಸಿದ್ದಾರೆ. ಅದು ಹೀಗಿದೆ:

ಗಿಡದ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು, ತುಂಬಿ ನೋಡಾ!
ಆತುಮ ತುಂಬಿ ತುಂಬಿ ನೋಡಾ!
ಪರಮಾತುಮ ತುಂಬಿ ತುಂಬಿ ನೋಡಾ!
ಗುಹೇಶ್ವರ ಲಿಂಗಕ್ಕೆರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ!!

ಅಲ್ಲಮಪ್ರಭುವಿನ ವಚನವು ಗಿಡವನ್ನು ಪ್ರಪಂಚಕ್ಕೆ ಹಾಗೂ ಗಿಡದ ಮೇಲಿರುವ ತುಂಬಿಯನ್ನು ಆತ್ಮಕ್ಕೆ ಹೋಲಿಸುತ್ತದೆ. ಆತ್ಮದ ವಿಕಸನ ಹಾಗೂ ಪರಮಾತ್ಮದ ಆನಂದವನ್ನು ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ಬಣ್ಣಿಸಿದ್ದಾರೆ.
ಈ ಎರಡು ವಚನಗಳಲ್ಲಿಯ ‘ತುಂಬಿ’ ಬೇಂದ್ರೆಯವರ ಕವನಕ್ಕೆ ಪ್ರೇರಣೆಯಾಗಿರಬಹುದು! 
ಈ ಕವನವು ‘ಸಖೀಗೀತ’ ಸಂಕಲನದಲ್ಲಿ ಅಡಕವಾಗಿದೆ.

33 comments:

Keshav.Kulkarni said...

ಸುನಾಥ,
ಕವನದ ಸಂದರ್ಭ ವಿಅವರಣೆ ತುಂಬ ಉಪಯುಕ್ತವಾಯಿತು.
- ಕೇಶವ

sritri said...

ಗಿರೀಶ್ ಕಾರ್ನಾಡರ ನಾಟಕವಾದ ತಲೆದಂಡದ ಬಗ್ಗೆ ಮಾತ್ರ ಗೊತ್ತಿತ್ತು. ಒಮ್ಮೆ,ಈ ನಾಟಕದಲ್ಲಿ ನಾನೂ ಅಭಿನಯಿಸಿದ್ದೆ. ಆದರೆ ಬೇಂದ್ರೆಯವರು ಕೂಡ ’ತಲೆದಂಡ’ ಬರೆದಿರುವ ಬಗ್ಗೆ ತಿಳಿದಿರಲಿಲ್ಲ. ಕಾಕಾ, ಎಂದಿನಂತೆಯೇ ಮಾಹಿತಿ "ತುಂಬಿ"ದ ಲೇಖನ ನಿಮ್ಮದು. ಧನ್ಯವಾದಗಳು.

shivu.k said...

ಸುನಾಥ್ ಸರ್,

ಮುಂಜಾನೆ ದಿನಪತ್ರಿಕೆ ಕೆಲಸಗಳನ್ನು ಗಡಿಬಿಡಿಯಲ್ಲಿ ಮುಗಿಸಿ ಮದುವೆ ಫೋಟೋಗ್ರಫಿಗೆ ಸಿದ್ಧನಾಗುತ್ತಿದ್ದ ನನಗೆ ನಿಮ್ಮ ಹೊಸ ಲೇಖನದಲ್ಲಿ ಬೇಂದ್ರೆಯವರ ತಲೆದಂಡ ಮತ್ತು ಕಾರ್ನಾಡರ ತಲೆದಂಡ, ಬಸವಣ್ಣನವರ ವ್ಯಕ್ತಿತ್ವ, ಸಾಮಾಜಿಕ ಕಾರ್ಯದಲ್ಲಿ ಪರಿಪೂರ್ಣತೆ..ಮತ್ತು ವಚನಗಳನ್ನು ಓದಿ ಮನಸ್ಸಿಗೆ ಆನಂದವಾಯಿತು....

ಧನ್ಯವಾದಗಳು

PARAANJAPE K.N. said...

ನಿಮ್ಮ ಬ್ಲಾಗ್ ಮಾಹಿತಿ ಕಣಜ. ಬೇ೦ದ್ರೆಯವರ ಬಗ್ಗೆ, ಅವರ ಕವನಗಳ ಬಗ್ಗೆ ನೀವು ಕೊಡುವ authentic ಮಾಹಿತಿ ನನಗಿಷ್ಟ. ಈ ಬಾರಿ ಬಸವಣ್ಣ ನವರ ಬಗ್ಗೆಯೂ ಸಾಕಷ್ಟು ಮಾಹಿತಿ ಕೊಟ್ಟಿದ್ದೀರಿ. ತು೦ಬಾ ಚೆನ್ನಾಗಿದೆ.

ಮನಸು said...

ತುಂಬಾ ಚೆನ್ನಾಗಿ ತಿಳಿಸಿದ್ದೀರಿ... ಬಹಳ ಖುಷಿಯಾಗುತ್ತೆ ಇದನ್ನೆಲ್ಲಾ ತಿಳಿಯಲು.
ಧನ್ಯವಾದಗಳು

Anonymous said...

ಕಾಕಾ,

ಪ್ರತಿಸಲದಂತೆ ಒಳ್ಳೆಯ ಮಾಹೀತಿಪೂರ್ಣ ಲೇಖನ,
ಕಾರ್ನಾಡರ ತಲೆದಂಡ ನಾಟಕ ನೋಡಿದ್ದೆ, ಬೆಂದ್ರೆಯವರ "ತಲೆದಂಡ" ನಾಟಕದ ಬಗ್ಗೆ ಇನ್ನಷ್ಟು ಮಾಹೀತಿ ನಿಮ್ಮಿಂದ ಬಯಸುತ್ತೆನೆ.

ಧನ್ಯವಾದಗಳು

-ಶೆಟ್ಟರು

ಶಿವಪ್ರಕಾಶ್ said...

ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು...

sunaath said...

ಕೇಶವ,
ಬೇಂದ್ರೆಯವರ ಅನೇಕ ಕವನಗಳು ಕೆಲವೊಂದು ಹಿನ್ನೆಲೆ ಹೊಂದಿವೆ. ದ.ರಾ.ಬೇಂದ್ರೆಯವರು ಹಾಗು ವಾಮನ ಬೇಂದ್ರೆಯವರು ಕವನಗಳಿಗೆ ಭಾವಸೂಚಿಯನ್ನು ಕೊಟ್ಟು ಪ್ರಸಂಗಗಳನ್ನು ವಿವರಿಸಿದ್ದಾರೆ.

sunaath said...

ತ್ರಿವೇಣಿ,
ಕಾರ್ನಾಡರ ನಾಟಕದಲ್ಲಿ ಅಭಿನಯಿಸಿದ್ದಕ್ಕಾಗಿ ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.

sunaath said...

ಶಿವು,
ನಿಮ್ಮ busy scheduleನಲ್ಲಿಯೇ ಬ್ಲಾಗುಗಳನ್ನು ಓದುತ್ತಿರುವ ಪರಿ ಬೆರಗುಗೊಳಿಸುತ್ತದೆ.

sunaath said...

ಪರಾಂಜಪೆ,
ಬಸವಣ್ಣನವರ ಬಗೆಗೆ ನನಗೆ ತಿಳಿದಿರುವದೂ ಅತ್ಯಲ್ಪವೇ!

sunaath said...

ಮನಸು,
ನಿಮಗೂ ಧನ್ಯವಾದಗಳು. ತನಗೆ ತಿಳಿದಿರುವ ಮಾಹಿತಿಯನ್ನು ಎಲ್ಲರಲ್ಲಿಯೂ ಹಂಚುವದು ಪ್ರತಿಯೊಬ್ಬನ ಕರ್ತವ್ಯವೇ ಆಗಿದೆಯಲ್ಲವೇ!

sunaath said...

ಶೆಟ್ಟರ,
ಬಸವಣ್ಣನವರ ಬಗೆಗೆ ಮೊದಲು ನಾಟಕ ಬರೆದವರು ಬಹುಶ: ಅ.ನ.ಕೃಷ್ಣರಾಯರು.(=ಜಗಜ್ಯೋತಿ ಬಸವೇಶ್ವರ). ಆ ಬಳಿಕ
ಏಣಗಿ ಬಾಳಪ್ಪನವರೂ ಸಹ ‘ಜಗಜ್ಯೋತಿ ಬಸವೇಶ್ವರ’ ಎನ್ನುವ ತಮ್ಮ ಸ್ವರಚಿತ ನಾಟಕವನ್ನು ಕರ್ನಾಟಕದಲ್ಲೆಲ್ಲ ಪ್ರದರ್ಶಿಸಿದರು.
ಬಸವಣ್ಣನವರ ಬಗೆಗೆ ಪಿ.ಲಂಕೇಶ ಅವರು ‘ಸಂಕ್ರಾಂತಿ’ ಎನ್ನುವ ನಾಟಕವನ್ನು ಹಾಗೂ ಎಚ್.ಎಸ್.ಶಿವಪ್ರಕಾಶ ಅವರು ’ಮಹಾಚೈತ್ರ’ ನಾಟಕವನ್ನು ಬರೆದಿದ್ದಾರೆ. ವ್ಯಾಸ ದೇಶಪಾಂಡೆಯವರು ‘ಇವ ನಮ್ಮವ’ ಎನ್ನುವ ನಾಟಕವನ್ನು ರಚಿಸಿದ್ದಾರೆ.
ಬೇಂದ್ರೆಯವರು ‘ತಲೆದಂಡ’ ನಾಟಕವನ್ನು ಪೂರ್ಣಗೊಳಿಸಲಿಲ್ಲ.

sunaath said...

ಶಿವಪ್ರಕಾಶ,
ನಿಮಗೂ ಧನ್ಯವಾದಗಳು.

umesh desai said...

ಸರ್ ಈ ಕವಿತಾ ಧಾರವಾಡ ಆಕಾಶವಾಣಿಯೊಳಗ ಬಹಳ ಸಲ ಕೇಳೇನಿ ಶ್ರೀಮತಿ ಸರಳಾ ದೇಸಾಯಿ ಅವರು ಛಲೋ ಹಾಡತಿದ್ರು. ಹಳೇ ನೆನಪು ತಂದು ಕೊಟ್ರಿ ಧನ್ಯವಾದಗಳು....

sunaath said...

ದೇಸಾಯರ,
ಅಡಗಿ ಮಾಡಿದವರಿಗೆ,ಹಾಡಿನ ಮೂಲಕ ಬಡಿಸಿದವರಿಗೆ ಧನ್ಯವಾದಗಳನ್ನು ಸಲ್ಲಿಸೋದು OK;ನೆನಪು ಮಾಡಿದವರಿಗೆ ಯಾಕೆ?

ಬಿಸಿಲ ಹನಿ said...

ತುಂಬಿ ಬಂದಿತ್ತು ಕವನದ ಮಾಹಿತಿ ಹಾಗೂ ವಿಶ್ಳೇಷಣೆಗೆ ಧನ್ಯವಾದಗಳು.

sunaath said...

ಉದಯ,
ನಿಮಗೂ ಧನ್ಯವಾದಗಳು.

Godavari said...

ಸುನಾಥ್ ಅವರೇ ಬಹಳ ಸುಂದರವಾಗಿ ಈ ಕವನವನ್ನು ವಿವರಿಸಿದ್ದೀರಿ.. ಧನ್ಯವಾದಗಳು..

ಬಸವಣ್ಣನ ವ್ಯಕ್ತಿಯಲ್ಲ, ಒಂದು ಅಭಿವ್ಯಕ್ತಿ ಅಲ್ಲವೇ?
"ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ" ಎನ್ನುತ್ತಾ ಬಸವಣ್ಣ ಎಂಬ ಶಕ್ತಿ ದೇಶಕಾಲಗಳನ್ನು ಮೀರಿದ ಬಗೆ ಹೇಳುತ್ತಾರೆ..

ಅಂತೆಯೇ ಕೊನೆಯಲ್ಲಿ
"ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ" ಎಂದು ಕಾಲದ ದುರ್ನಿರೀಕ್ಷ್ಯವನ್ನೂ ಹೇಳುತ್ತಾರೆ..

ಆರಂಭ ಬೆಳಕಿನಂತೆ, ಜಟೆಯಿಂದ ಇಳಿವ ಗಂಗೆಯಂತೆ ಚುರುಕು.. ಆದರೆ ಅಂತ್ಯದಲ್ಲಿ ಬೆಳಕು ಕರಗಿದಂತೆ ಈ ಚಟುವಟಿಕೆಗಳೆಲ್ಲ ಕಳೆದು ತೆಪ್ಪಗಾಗಿ ಹೋಗುತ್ತದೆ!!!

ಬೇಂದ್ರೆ, ಇಲ್ಲಿ ಕಾಲದ ಬಣ್ಣ ಕಪ್ಪು ಎಂದರೆ ಅವರ ಆರಂಭದ ಕವಿತೆಗಳಲ್ಲಿ ಒಂದಾದ ಕಾಲದ ಬಗ್ಗೆಯೇ ಬರೆದಿರುವ 'ಹಕ್ಕಿ ಹಾರುತಿದೆ ನೋಡಿದಿರಾ?' ಅಲ್ಲಿ ಕಾಲ 'ನೀಲಮೇಘಮಂಡಲ -ಸಮಬಣ್ಣ' ಎನ್ನುತ್ತಾರೆ!! ಎರಡೂ ಪ್ರಯೋಗಗಳು ಕಾಲಸೂಚಕಗಳೇ ಆದರೂ ಅವು ಎಷ್ಟು ಬೇರೆ ಬೇರೆ ಅರ್ಥಗಳನ್ನೂ ಕಲ್ಪನೆಗಳನ್ನೂ ಕಟ್ಟಿಕೊಡುತ್ತವೆ.. ಅದಕ್ಕೇ ಬೇಂದ್ರೆ ಶಬ್ದ ಗಾರುಡಿಗ !!

sunaath said...

ಗೋದಾವರಿ,
ನಿಮ್ಮ ವ್ಯಾಖ್ಯಾನ ಅತ್ಯಂತ ಸಮಂಜಸವಾಗಿದೆ. ಆದುದರಿಂದ ನಿಮ್ಮ ವ್ಯಾಖ್ಯಾನದ ಭಾಗವನ್ನು ನನ್ನ ಲೇಖನದ ಕೊನೆಯಲ್ಲಿ ಸೇರಿಸಿದ್ದೇನೆ.
ಬೇಂದ್ರೆಯವರ ಕವನಗಳು ತಮ್ಮ ಗುಟ್ಟನ್ನು ಸುಲಭವಾಗಿ ಬಿಟ್ಟುಕೊಡುವದಿಲ್ಲ, ಅಲ್ಲವೆ?

ಧರಿತ್ರಿ said...

ಚೆನ್ನಾಗ್ ಓದಿ ತಲೆಯನ್ನು ಲೈಬ್ರೆರಿ ಮಾಡಿಕೋತಾಇದ್ದೀನಿ ಅಂಕಲ್
-ಧರಿತ್ರಿ

ಜಲನಯನ said...

ಸುನಾಥ್ ಸರ್,
ಎಂಥ ಲೈವ್ ವೈರ್ ಮೇಲೆ ಬೆರಳು..
ಬೇಂದ್ರೆ, ಕುವೆಂಪು ಮತ್ತು ಕಾರಂತರು ನನ್ನ ಪ್ರಕಾರ ಕನ್ನಡದ ತ್ರಿಮೂರ್ತಿಗಳು...
ಒಬ್ಬೊಬ್ಬರದೂ ಒಂದೊಂದು ಆಯಕಟ್ಟಿನ ಆಧಾರದ ನಿಲುವು, ನಿಲುವಿಗೆ ತಕ್ಕ ಕೃತಿಗಳು, ಎಲ್ಲ ಮೇರುಗಳು..ನಾವು ತೃಣಕ್ಕೆ ಸಮಾನ ಅವನ್ನು ವಿಶ್ಲೇಷಿಸಲು...
ಚನ್ನಾಗಿ ಇವೆಲ್ಲದರ ಬಗ್ಗೆ ತಿಳಿಸಿ ನಮ್ಮ ಮತ್ತು ಆ ಮಹಾನ್ ಸಾಧನೆಗಳ ಮಧ್ಯೆ ಮಾಧ್ಯಮವಾಗುತ್ತಿದ್ದೀರಿ..
ನಮ್ಮ ಗೂಡಿಗೂ ಬಂದು ನಮಗೂ ಸ್ವಲ್ಪ ಮಾರ್ಗದರ್ಶನ ಮಾಡಿ...

sunaath said...

ಧರಿತ್ರಿ,
ತಲೆಯು ಲೈಬ್ರರಿಯೊಳಗೊ,
ಲೈಬ್ರರಿಯು ತಲೆಯೊಳಗೊ,
ತಲೆ ಮತ್ತು ಲೈಬ್ರರಿ ಎರಡು ನಿಮ್ಮ ಒಳಗೊ?

sunaath said...

ಜಲನಯನ,
ಕನ್ನಡ ಸಾಹಿತ್ಯದ ತ್ರಿಮೂರ್ತಿಗಳನ್ನು ಸರಿಯಾಗಿ ಗುರುತಿಸಿದ್ದೀರಿ.
ನಿಮ್ಮ ಭೇತಾಳದ ಕತೆ ಹಾಗೂ ಮಗುವಿನ ಪ್ರಶ್ನೆ ತುಂಬಾ ಚೆನ್ನಾಗಿವೆ.

Archu said...

ಕಾಕಾ ,
ನೀವು ಬೇಂದ್ರೆ ಕವನ ವಿವರಿಸುವ ರೀತಿ ತುಂಬಾ ಖುಷಿ ಕೊಡ್ತದೆ :)
ಪ್ರೀತಿಯಿಂದ
ಅರ್ಚು

sunaath said...

ಅರ್ಚು,
ನಿನಗೆ ಪ್ರೀತಿಯ ಧನ್ಯವಾದಗಳು.
-ಕಾಕಾ

ಧರಿತ್ರಿ said...

ಸುನಾಥ್ ಅಂಕಲ್,..
ತಲೆಯು ಲೈಬ್ರರಿಯೊಳಗೊ,
ಲೈಬ್ರರಿಯು ತಲೆಯೊಳಗೊ,
ತಲೆ ಮತ್ತು ಲೈಬ್ರರಿ ಎರಡು ನಿಮ್ಮ ಒಳಗೊ?
ಇಂಥ ಪ್ರಶ್ನೆ ಕೇಳಿದ್ರೆ ನಾ ಹ್ಯಾಂಗ ಉತ್ತರ ಕೊಡಲಿ? ಇರಲಿ ಕೊನೆಯ ಉತ್ತರ 'ತಲೆ-ಲೈಬ್ರೆರಿ' ಎರಡೂ ನನ್ನೊಳಗೆ.
-ಧರಿತ್ರಿ

Umesh Balikai said...

ಸುನಾಥ ಸರ್,

ಬೇಂದ್ರೆ ಅಜ್ಜನ ಈ ಪದ್ಯವನ್ನು ನಾನೂ ಚಿಕ್ಕವನಾಗಿದ್ದಾಗಲೆ ಕೇಳಿದ್ದೆ, ಓದಿದ್ದೆ. ಇಲ್ಲಿಯವರೆಗೂ 'ತುಂಬಿ' ಅಂದ್ರೆ 'ದುಂಬಿ' ಅಂತಾನೆ ತಿಳ್ಕೊಂಡಿದ್ದೆ. ನಿಮ್ಮ ಲೇಖನ ಓದಿದ ಮೇಲೆಯೇ ಅದಕ್ಕೆ ಹೀಗೂ ಒಂದು ಆಯಾಮ ಇರಬಹುದು ಅಂತ ಗೊತ್ತಾಯ್ತು. ನೀವು ಹೇಳೋದು ನಿಜ, ಬೇಂದ್ರೆ ಅಜ್ಜನ ಹಾಡುಗಳು ಅಷ್ಟು ಸುಲಭವಾಗಿ ಗುಟ್ಟು ಬಿಟ್ಟು ಕೊಡುವುದಿಲ್ಲ.

Unknown said...

9480939562 ಈ ನಂಬರ್ ಗೆ ಮೆಸ್ಸೇಜ್ ಮಾಡಿ ನನಗೆ eeradu ಕವನ ಬೇಕು plz

Unknown said...

9480939562 ನುಂಬರ ಗೆ hii ಅಂತ ಹಾಕಿ

sunaath said...

ಪ್ರಿಯ Unknownರೆ, ನಿಮಗೆ ಯಾವ ಕವನ ಬೇಕು ಎನ್ನುವುದು ತಿಳಿಯಲಿಲ್ಲ. ಪೂರ್ಣ ಪಾಠ ಬೇಕೊ ಅಥವಾ ವ್ಯಾಖ್ಯಾನ ಬೇಕೊ?

Unknown said...

ಬೇಂದ್ರೆಯವರ ಈ ಕವನದ ಮೂಲ ಅರ್ಥವನ್ನು ಬಹಳ ಸೊಗಸಾದ ವ್ಯಾಖ್ಯಾನ ಕೊಟ್ಟ
ಸುನಾಥ ಅವರಿಗೆ ಅನಂತಾನಂತ ಧನ್ಯವಾದಗಳು.
ಬೇಂದ್ರೆ ಯವರ ಕವನಗಳು ಅರ್ಥ ಮಾಡಿಕೊಳ್ಳುವುದು ಬಹಳ ಕ್ಲಿಷ್ಟ ಸಾಧ್ಯ. ಬೇಂದ್ರೆ ಅಜ್ಜನವರ ಇತರ ಕವನಗಳಿಗೆ ತಾವು ವ್ಯಾಖ್ಯಾನ ಬರೆದಿರಬಹುದೆಂದು ನಾನು ನಂಬಿರುತ್ತೇನೆ. ಹಾಗೇನಾದರೂ ಇದ್ದಲ್ಲಿ ತಾವು ನಮಗೂ ಅವುಗಳ ಪರಿಚಯ ಮಾಡಬೇಕೆಂದು ನನ್ನ ಕಳಕಳಿಯ ಮನವಿ.

sunaath said...

ಧನ್ಯವಾದಗಳು, Unknownರೆ!