Tuesday, December 15, 2009

ಸಾಹಿತ್ಯಲೋಕದ ಸುತ್ತ-ಮುತ್ತ (ಗಿರಡ್ಡಿ ಗೋವಿಂದರಾಜ)

‘ಮನೋಹರ ಗ್ರಂಥಮಾಲಾ’ ಸಂಸ್ಥೆಯು ಗಿರಡ್ಡಿ ಗೋವಿಂದ್ ರಾಜ್ ಬರೆದ ‘ಸಾಹಿತ್ಯಲೋಕದ ಸುತ್ತ-ಮುತ್ತ’ ಎನ್ನುವ ಪುಸ್ತಕವನ್ನು ಇತ್ತೀಚೆಗೆ ಹೊರತಂದಿದೆ. ಇದು ಈ ಸಂಸ್ಥೆಯ ೨೦೦೯ನೆಯ ವರ್ಷದ ನಾಲ್ಕನೆಯ ಪುಸ್ತಕ.
ಗಿರಡ್ಡಿಯವರು ದೀರ್ಘಕಾಲದಿಂದ ಕನ್ನಡ ಸಾಹಿತ್ಯಲೋಕದಲ್ಲಿ ವಿಮರ್ಶಕರೆಂದು ಹೆಸರು ದಾಖಲಿಸಿಕೊಂಡವರು. ಅವರಿಗೆ ಏನು ಉಮೇದಿ ಬಂದಿತೋ, ಪ್ರಬಂಧಸಾಹಿತ್ಯಕ್ಕೆ  ಕೈ ಹಚ್ಚಿದರು. ಎರಡು ವರ್ಷಗಳ ಹಿಂದೆ ಇದೇ ಸಂಸ್ಥೆಯು ಅವರ ಲಲಿತಪ್ರಬಂಧಗಳ ಸಂಕಲನವೊಂದನ್ನು ಪ್ರಕಟಿಸಿತು. ‘ಹಿಡಿಯದ ಹಾದಿ’ ಎಂದು ಅದರ ಹೆಸರು. ಅದನ್ನು ಓದಿದಾಗ ಅನ್ನಿಸಿದ್ದು : ಗಿರಡ್ಡಿಯವರು ಪ್ರಬಂಧಬರಹದ ಈ ಹಾದಿಯನ್ನು ಹಿಡಿಯದಿದ್ದರೇ ಚೆನ್ನಾಗಿತ್ತು.

ಈ ವರ್ಷ(೨೦೦೯) ಇದೇ ಸಂಸ್ಥೆಯು ಗಿರಡ್ಡಿಯವರ ‘ಸಾಹಿತ್ಯಲೋಕದ ಸುತ್ತ-ಮುತ್ತ’ ಎನ್ನುವ ಲೇಖನಸಂಕಲನವೊಂದನ್ನು ಪ್ರಕಟಗೊಳಿಸಿದೆ. ಗಿರಡ್ಡಿಯವರು ತಮ್ಮ ಲೇಖನಗಳಿಗೆ ಪ್ರಸಂಗಸಾಹಿತ್ಯವೆಂದು ಕರೆಯುತ್ತ ಈ ರೀತಿಯಾಗಿ ಹೇಳಿದ್ದಾರೆ:


ಗಿರಡ್ಡಿಯವರ ಸಂಕಲನದ ಉದ್ದೇಶ ಹಾಗು ತಿರುಳು ಅರ್ಥವಾಯಿತೆ? ಸಾಹಿತಿಗಳಿಗೆ ಸಂಬಂಧಿಸಿದ “ಋಣಾತ್ಮಕ ಅಂಶ”ಗಳನ್ನು  ಅವರು ಈ ಸಂಕಲನದಲ್ಲಿಬಣ್ಣಿಸಿದ್ದಾರೆ. “ಋಣಾತ್ಮಕ ಅಂಶ”ಗಳೆಂದರೇನು? ಇದು ಅವರವರ ನಿಲುವು ಹಾಗೂ ವ್ಯಾಖ್ಯಾನದ ಮೇಲೆ ಹೋಗುತ್ತದೆ. ಉದಾಹರಣೆಗೆ ‘ಸುರಾಪಾನ’ವು ಹಿರಿಯ ಕನ್ನಡ ಸಾಹಿತಿಗಳಾದ ಮಾಸ್ತಿ, ಬೇಂದ್ರೆ, ಕುವೆಂಪು, ದೇವುಡು ಹಾಗು ಡಿವಿಜಿ ಇಂಥವರಿಗೆ ಋಣಾತ್ಮಕ ಅಂಶವಾಗಿ ಕಂಡರೆ, ನವ್ಯ ಸಾಹಿತಿಗಳಿಗೆ ಅಂದರೆ ಅನಂತ ಮೂರ್ತಿ, ಗಿರೀಶ ಕಾರ್ನಾಡ ಹಾಗು ಗಿರಡ್ಡಿಯಂಥವರಿಗೆ ಅದು ಧನಾತ್ಮಕ ಅಂಶವಾಗಿ ಕಾಣಬಹುದು. ಹಿರಿಯ ಸಾಹಿತಿಗಳಲ್ಲಿ ಸುರಾಪಾನಿಗಳು ಸಿಗುವದಿಲ್ಲ. ಕೆಲವರಂತೂ ‘ಚಾ-ಪಾಣಿ’ಗಳೂ ಆಗಿರಲಿಕ್ಕಿಲ್ಲ.ಆದುದರಿಂದ ಇವರಲ್ಲಿ ಇರಬಹುದಾದ ಮಾನವಸಹಜ ಕುಂದು ಕೊರತೆಗಳಿಗೆ ಬಣ್ಣ ಕೊಟ್ಟು, ಹಿಗ್ಗಿಸಿ ಬರೆದಾಗ, ಲೇಖನಕ್ಕೆ ‘ಸಂಕೀರ್ಣತೆ’ ಬರುತ್ತದೆ! ಇಂತಹ ಸಂಕೀರ್ಣತೆ ವ್ಯಕ್ತಿಚಿತ್ರಗಳಲ್ಲಿ ಅಥವಾ ಅಭಿನಂದನ ಗ್ರಂಥಗಳಲ್ಲಿ ಸಿಗುವದಿಲ್ಲ ಎನ್ನುವದು ಗಿರಡ್ಡಿಯವರ ಕೊರಗು ಹಾಗು ಅಮೂಲ್ಯ ಅಭಿಪ್ರಾಯ.
ಹೀಗಾಗಿ ತಮ್ಮ ಸಂಕಲನದ ಅನೇಕ ಲೇಖನಗಳನ್ನು ಗಿರಡ್ಡಿಯವರು ಈ ‘ಋಣಾತ್ಮಕ ಸಂಕೀರ್ಣತೆ’ಗಾಗಿಯೇ ಮೀಸಲಿಟ್ಟಿದ್ದಾರೆ. ಅವು ಇಂತಿವೆ:

(೧) ರಾಜೀ ಊಟ 
(ಬೇಂದ್ರೆ-ಕುವೆಂಪು ವೈಮನಸ್ಸು!)
(೨) ಕವಿತೆಯ ಓದು 
(ಸುಮತೀಂದ್ರ ನಾಡಿಗರ ಸ್ವಮೋಹ)
(೩) ಅನ್ನದ ರಿಣ 
(ರಂ.ಶ್ರೀ. ಮುಗಳಿಯವರ ಸ್ವಮೋಹ)
(೪) ಒಂದು ಲೋಟ ನೀರು 
(ಕುವೆಂಪುರವರ unhospitality)
(೫) ಕುರ್ಚಿಯ ಗೌರವ 
(ಗಿರಡ್ಡಿಯವರು ಸರೋಜಿನಿ ಶಿಂತ್ರಿಯವರ ಬಾಲ ಕತ್ತರಿಸಿದ್ದು)
(೬) ಬೀದಿ ಬದಿಯ ರದ್ದಿ ಪುಸ್ತಕಗಳ ಅಂಗಡಿಯಲ್ಲಿ 
( ಹಾ. ಮಾ. ನಾಯಕರ complex)
(೭) ಜಾರೆ ಅಮೃತಮತಿ 
(ಬಿ.ವಿ. ಕಾರಂತರ ಕುಡುಕತನ)
(೮) ಮೈ ಹಿಂದೀ ಮೆ ನಹೀ ಬೋಲೂಂಗಾ 
(ಬಿ.ವಿ. ಕಾರಂತರ ಕುಡುಕತನ)
(೯) ಬಿ. ವಿ. ಕಾರಂತರ ಬಾಥ್ ರೂಮ್ 
(ಬಿ.ವಿ. ಕಾರಂತರ ಕುಡುಕತನ)
(೧೦) ಸಾಲಿ ರಾಮಾಯಣ 
(ಬೇಂದ್ರೆಯವರ ಕ್ಷುಲ್ಲಕತನ ಹಾಗು ಗುಂಪುಗಾರಿಕೆ)
(೧೧) ಒಂದು ಸ್ನೇಹದ ಕಥೆ 
(ಬೇಂದ್ರೆಯವರಿಗೆ ಮಾಸ್ತಿಯವರ ಬಗೆಗಿದ್ದ ಅಸಮಾಧಾನ)
(೧೨) ಯುಗದ ಕವಿ, ಜಗದ ಕವಿ 
(ಬೇಂದ್ರೆಯವರಿಗೆ ಕುವೆಂಪು ಬಗೆಗಿದ್ದ ಅಸೂಯೆ)
(೧೩) ತಂದೆ-ಮಗ 
(ಶ್ರೀರಂಗರ ತಂದೆಗೆ ಶ್ರೀರಂಗರ ಬಗೆಗಿದ್ದ ಅಸಮಾಧಾನ)
(೧೪) ಶಂಬಾ-ಬೇಂದ್ರೆ ಪುರಾಣ 
( ಬೇಂದ್ರೆ-ಶಂ. ಬಾ. ಜೋಶಿಯವರ ಜಗಳ)
(೧೫) ಶಂ.ಬಾ. ಅವರ ಬಲೂನುಗಳು 
(ಶಂ. ಬಾ. ಜೋಶಿಯವರ ತಿಕ್ಕಲುತನ)
(೧೬) ಹದಿನೈದು ಪೈಸೆ ಕಾರ್ಡುಗಳು 
(ಶಂ. ಬಾ. ಜೋಶಿಯವರ ತಿಕ್ಕಲುತನ)

ಒಟ್ಟು ೫೬ ಪ್ರಸಂಗಗಳಲ್ಲಿ ೧೬ ಪ್ರಸಂಗಗಳು ಈ ತರಹದ ಋಣಾತ್ಮಕ ಸಂಕೀರ್ಣತೆಗೆ ಮೀಸಲಾಗಿವೆ. (ವ್ಯವಹಾರದ ಭಾಷೆಯಲ್ಲಿ ಇದಕ್ಕೆ ‘ಛಿದ್ರಾನ್ವೇಷಣೆ’ ಎನ್ನಬಹುದೇನೊ?) ಕೇವಲ ‘ಋಣಾತ್ಮಕ’ ಪ್ರಸಂಗಗಳನ್ನು ವರ್ಣಿಸಿದರೆ ಪುಸ್ತಕವೇ ‘ಋಣಾತ್ಮಕ ಸಂಕಲನ ’ ಎನ್ನುವ ಹೊಗಳಿಕೆಗೆ ಪಾತ್ರವಾಗಬಹುದಲ್ಲವೆ? ಆದುದರಿಂದ ಗಿರಡ್ಡಿಯವರು ಧನಾತ್ಮಕವಾದ, ಪ್ರಶಂಸಾಪೂರ್ವಕವಾದ ಹಲವು ಲೇಖನಗಳನ್ನೂ  ಬರೆದಿದ್ದಾರೆ. ಈ ಲೇಖನಗಳೆಲ್ಲ ಸಂಕಲನದ ಮೊದಲಲ್ಲೇ ಬಂದಿವೆ.  ಆದರೆ ಈ ಪ್ರಶಂಸೆ ಎಲ್ಲ ಸ್ವಪ್ರಶಂಸೆಯಾಗಿರುವದೇ ಓದುಗರಿಗೆ ಮನೋರಂಜನೆಯನ್ನು ಒದಗಿಸಬಹುದು! ಇಂತಹ ಲೇಖನಗಳ ಪಟ್ಟಿ ಇಲ್ಲಿದೆ. ಸಂಕಲನದ ಮೊದಲನೆಯ ಲೇಖನವೇ ಇವರ ‘ಬಾಲ್ಯಪ್ರತಿಭೆ’ಯ ಕೊಂಡಾಟವಾಗಿರುವದನ್ನು ಗಮನಿಸಬೇಕು:

(೧) ಮೂಗಿನ ಕೆಳಗೆ ಮೀಸೆ
(ಬಂಕಾಪುರ ಎನ್ನುವ ಪತ್ರಕರ್ತರು ಗಿರಡ್ಡಿಯವರ ಕಿಶೋರಾವಸ್ಥೆಯ ಲೇಖನ ಮೆಚ್ಚಿಕೊಂಡಿದ್ದು)
(೨) ಕೈತೋಟದ ಎರಡು ಹಗರಣಗಳು
(ಭೈರಪ್ಪನವರು ಇವರ ಕತೆಗಳನ್ನು ಮೆಚ್ಚಿಕೊಂಡಿದ್ದು)
(೩) ಸಾಹಿತ್ಯದ ಕಾಡುವ ಗುಣ
( ಸಾಮಾನ್ಯ ಓದುಗಳೊಬ್ಬಳು ಇವರ ಕತೆ ಮೆಚ್ಚಿಕೊಂಡಿದ್ದು)
(೪) Brilliant Young Man
( ವಿ.ಸೀ.ಯವರು ಇವರ ಲೇಖನ ಮೆಚ್ಚಿಕೊಂಡಿದ್ದು)
(೫) ಹದಿನಾರೂವರೆ ವರ್ಷದ ವಿವೇಕ
(ಕಿಶೋರಾವಸ್ಥೆಯ ವಿವೇಕ ಶಾನಭಾಗ ಇವರ ಕತೆ ಮೆಚ್ಚಿಕೊಂಡಿದ್ದು)
(೬) ಅಜ್ಞಾತದಿಂದ ಒಂದು ಪತ್ರ
(ಲಕ್ಷ್ಮೀನರಸಿಂಹ ಎನ್ನುವ ಅಪರಿಚಿತರು ಇವರ ಸಾಹಿತ್ಯವನ್ನು ಮೆಚ್ಚಿಕೊಂಡಿದ್ದು)
(೭) Felicity of Expression
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ  ಕವನಗಳನ್ನು ಮೆಚ್ಚಿಕೊಂಡಿದ್ದು)
(೮) ಸ್ವಾತಂತ್ರ್ಯೋತ್ಸವದ ಆ ದಿನ
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ ಕವನಗಳನ್ನು ಮೆಚ್ಚಿಕೊಂಡಿದ್ದು)
(೯) Promising Poet
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ ಕವನಗಳನ್ನು ಮೆಚ್ಚಿಕೊಂಡಿದ್ದು)
(೧೦) ನಿನ್ನ ಕಾವ್ಯಸ್ಫೂರ್ತಿ ಮುಂಬರಿಯಲಾವುದಡ್ಡಿ?
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ ಕವನಗಳನ್ನು ಮೆಚ್ಚಿಕೊಂಡಿದ್ದು)
(೧೧) ಬಾಣದ ಬಿರಸು
(ಗಿರಡ್ಡಿಯವರು ವಿದ್ಯಾರ್ಥಿಯಾಗಿದ್ದಾಗ ಪ್ರೊಫೆಸರ್ ಮಾಳವಾಡರ ಎದುರಿಗೆ ತೋರಿದ ಧೈರ್ಯ)
(೧೨) ಚಮತ್ಕಾರ
(ಗಿರಡ್ಡಿಯವರು ಬೇಂದ್ರೆಯವರನ್ನು ತಮಾಶೆ ಮಾಡಿದ್ದು)

ಈ ರೀತಿಯಾಗಿ ೫೬ ಪ್ರಸಂಗಗಳಲ್ಲಿ ಮೊದಲಿನ ೧೨ ಪ್ರಸಂಗಗಳು ಧನಾತ್ಮಕ ಸಂಕೀರ್ಣತೆಗೂ (ಸ್ವಪ್ರಶಂಸೆಗೂ),ನಂತರದ ೧೬ ಪ್ರಸಂಗಗಳು ಋಣಾತ್ಮಕ ಸಂಕೀರ್ಣತೆಗೂ (ಛಿದ್ರಾನ್ವೇಷಣೆಗೂ) ಮೀಸಲಾಗಿವೆ.ಇಂತಹ ಲೇಖನಗಳನ್ನು ನೋಡಿಯೇ ಚೆನ್ನವೀರ ಕಣವಿಯವರು ಈ ಪುಸ್ತಕಕ್ಕೆ ‘ಅಧಿಕ ಪ್ರಸಂಗಗಳು’ ಎನ್ನುವ ಹೆಸರನ್ನು ಸೂಚಿಸಿರಬಹುದು!  ಉಳಿದ ೨೮ ಪ್ರಸಂಗಗಳು ಅಂದರೆ ಶೇಕಡಾ ೫೦ ಪ್ರಸಂಗಗಳು ಅತಿ ಸಾಮಾನ್ಯವೆನ್ನಿಸಬಹುದಾದ ಲೇಖನಗಳು. ಉದಾಹರಣೆಗೆ ‘ಧಾರವಾಡದಲ್ಲಿ ಕವಿಗಳು’ ಎನ್ನುವ ಲೇಖನ ನೋಡಬಹುದು. ಈ ಲೇಖನವನ್ನು ಗಿರಡ್ಡಿಯವರು ಯಾಕೆ ಬರೆದರೋ ತಿಳಿಯದು. ಮಾಧ್ಯಮಿಕ ಶಾಲೆಯ ಹುಡುಗರು ಇಂತಹ ನಿಬಂಧವನ್ನು ಬರೆಯಬಹುದು. ಓದುಗರು ಈ ನಿಬಂಧದ evaluationಅನ್ನು ಸ್ವತಃ ಮಾಡಲಿ ಎನ್ನುವ ಉದ್ದೇಶದಿಂದ ಲೇಖನದ ಕೊನೆಯಲ್ಲಿ ಆ ನಿಬಂಧವನ್ನು ಅಂದರೆ ಅವರ ಪ್ರತಿಭೆಯ ಒಂದು ಸ್ಯಾಂಪಲ್ ಅನ್ನು ಉದ್ಧರಿಸುತ್ತಿದ್ದೇನೆ. ದಯವಿಟ್ಟು ಕ್ಷಮಿಸಬೇಕು. 

ವ್ಯಕ್ತಿಚರಿತ್ರೆ ಹಾಗು ಆತ್ಮಚರಿತ್ರೆಗಳು ಕನ್ನಡ ಸಾಹಿತ್ಯದಲ್ಲಿ ಅಪರೂಪವೇನಲ್ಲ. ಅದೇ ರೀತಿಯಾಗಿ ನಾಡಿಗೆ ಸೇವೆ ಸಲ್ಲಿಸಿದ ವ್ಯಕ್ತಿಗಳ ತುಣುಕು ಚರಿತ್ರೆಗಳು, ಪ್ರಸಿದ್ಧರಾಗಿರದಿದ್ದರೂ ಸಹ ಶೀಲವಂತರಾದ ವ್ಯಕ್ತಿಗಳ ತುಣುಕು ಪ್ರಸಂಗಗಳೂ ಸಹ ಕನ್ನಡ ಸಾಹಿತ್ಯದಲ್ಲಿ ಸ್ಥಾನ ಪಡೆದಿವೆ. ಇಂತಹ ಸಾಹಿತ್ಯವನ್ನು ನಿರ್ಮಿಸಿದ ಹಿರಿಯರಲ್ಲಿ ಡಿ. ವ್ಹಿ. ಗುಂಡಪ್ಪನವರು, ಗೊರೂರು ರಾಮಸ್ವಾಮಿ ಅಯ್ಯಂಗಾರರು, ವಿ. ಸೀತಾರಾಮಯ್ಯನವರು ಹಾಗು ಸಿದ್ಧವ್ವನಹಳ್ಳಿ ಕೃಷ್ಣಶರ್ಮರು ಪ್ರಮುಖರು. ಗುಂಡಪ್ಪನವರ ‘ಜ್ಞಾಪಕ ಚಿತ್ರಶಾಲೆ’, ಗೊರೂರರ ‘ಹಳ್ಳಿಯ ಹತ್ತು ಸಮಸ್ತರು’, ವಿ.ಸೀ.ಯವರ ‘ವ್ಯಕ್ತಿಚಿತ್ರಸಂಪುಟ’ ಹಾಗು ಕೃಷ್ಣಶರ್ಮರ ‘ದೀಪಮಾಲೆ’ ಕೃತಿಗಳಲ್ಲಿ ಬಾಳಿಗೆ ಬೆಳಕು ಕೊಡುವಂತಹ ವ್ಯಕ್ತಿಚಿತ್ರಣಗಳಿವೆ. ಅದರ ಜೊತೆಗೆ, ಆ ಕಾಲದ ಸಂಸ್ಕೃತಿಯ ಹಾಗು ಜೀವನವಿಧಾನದ ಮಿಂಚು ನೋಟ ಸಹ ಈ ಕೃತಿಗಳಲ್ಲಿ ಚಿತ್ರಿತವಾಗಿದೆ. ಅದರಂತೆ ದೀರ್ಘ ಹಾಗು ಗಾಢವಾದ ವ್ಯಕ್ತಿಚಿತ್ರಗಳ ಬದಲು, ಕೆಲವು ಪ್ರಸಂಗಗಳ ಮೂಲಕ ಕೆಲವಾರು ವ್ಯಕ್ತಿಗಳ ಪಾರ್ಶ್ವನೋಟದ ಚಿತ್ರವನ್ನು ಕೊಡುವ ಸಾಹಿತ್ಯಕೃತಿಗಳೂ ನಮ್ಮಲ್ಲಿ ಸಾಕಷ್ಟಿವೆ. ಹಾ. ಮಾ. ನಾಯಕರು ಬರೆದ ‘ವೆಂಕಣ್ಣಯ್ಯ ಕೆಲ ಪ್ರಸಂಗಗಳು’, ಬೆಳಗೆರೆ ಕೃಷ್ಣಶಾಸ್ತ್ರೀಯವರು ಬರೆದ ‘ಸಾಹಿತಿಗಳ ಸಂಗದಲ್ಲಿ’, ‘ಮರೆಯಲಾದೀತೆ?’, ‘ಎಲೆಮರೆಯ ಅಲರು’, ಬಿ. ಎಸ್. ಕೇಶವರಾವರು ಬರೆದ ‘ಪ್ರಸಂಗಪ್ರವಾಹ’, ‘ನಾ ಕಂಡ ಪುಂಡ ಪಾಂಡವರು’ ಹಾಗು ವಿಷ್ಣು ನಾಯ್ಕರು ಬರೆದ ‘ಅರೆ ಖಾಸಗಿ’ ಕೃತಿಗಳನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಒಬ್ಬನೇ ಸಾಹಿತಿಯ ಬಗೆಗೆ ಅನೇಕ ಲೇಖಕರು ಬರೆದ ಅಭಿನಂದನೆಯ ಗ್ರಂಥಗಳು ಅಥವಾ ಸ್ಮರಣೆಯ ಕೃತಿಗಳೂ ಸಹ ಸಾಕಷ್ಟಿವೆ. (ಉದಾಹರಣೆ: ‘ತೇಜಸ್ವಿ ನೆನಪು’). ಲಂಕೇಶರು ತಮ್ಮ ಪತ್ರಿಕೆಯಲ್ಲಿ ಅನೇಕ ಸಾಹಿತಿಗಳನ್ನು ಹಾಗು ತಮ್ಮ ಗೆಳೆಯರನ್ನೇ ಟೀಕಿಸಿದ್ದಾರೆ. ಆದರೆ ಅದು ಸಾಹಿತ್ಯಕ ಹಾಗು ಸಾಮಾಜಿಕ ಕಾರಣಗಳಿಗಾಗಿಯೇ ಹೊರತು, ವೈಯಕ್ತಿಕ ಛಿದ್ರಾನ್ವೇಷಣೆಗಾಗಿ ಅಲ್ಲ.

ಇದಲ್ಲದೆ, ನಮ್ಮ ಪತ್ರಿಕೆಗಳಲ್ಲೂ ಸಹ ಇಂತಹ ಲೇಖನಮಾಲೆಗಳು ಪ್ರಕಟವಾಗಿವೆ. ‘ಪ್ರಪಂಚ’ ವಾರಪತ್ರಿಕೆಯ ಸಂಪಾದಕರಾದ ಶ್ರೀ ಪಾಟೀಲ ಪುಟ್ಟಪ್ಪನವರು ಐದು ದಶಕಗಳಷ್ಟು ಹಿಂದೆಯೇ ತಮ್ಮ ವಾರಪತ್ರಿಕೆಯಲ್ಲಿ ‘ದೊಡ್ಡವರ ಸಣ್ಣತನ’ ಎನ್ನುವ ಸ್ಥಿರಮಾಲಿಕೆಯಲ್ಲಿ ಅನೇಕ ರಾಜಕೀಯ ಮುಂದಾಳುಗಳ ಸಣ್ಣತನದ ಪ್ರಸಂಗಗಳನ್ನು ರೋಚಕವಾಗಿ ಬಣ್ಣಿಸುತ್ತಿದ್ದರು. ಅವರೇ ಮುಂದೆ ‘ಪಾಪು ಪ್ರಪಂಚ’ ಎನ್ನುವ ಪುಸ್ತಕವನ್ನೂ ಹೊರತಂದರು. ತಮ್ಮ  ಲೇಖನಗಳಲ್ಲಿ ಪಾಟೀಲ  ಪುಟ್ಟಪ್ಪನವರು ರಾಜಕಾರಣಿಗಳ ಹುಳಕನ್ನು ಬಯಲಿಗೆಳದಿದ್ದಾರೆ. ಪುಟ್ಟಪ್ಪನವರ ಉದ್ದೇಶ ನಾಗರಿಕಪ್ರಜ್ಞೆಯನ್ನು ಜಾಗೃತಗೊಳಿಸುವದಾಗಿತ್ತೇ ಹೊರತು ಛಿದ್ರಾನ್ವೇಷಣೆಯಾಗಿರಲಿಲ್ಲ.  ಈ ರೀತಿಯಾಗಿ ಎರಡು ಶತಮಾನಗಳ ಕಾಲವನ್ನು  ವ್ಯಾಪಿಸಿದ, ಅದರಂತೆ ಇದೇ ದಶಕದಲ್ಲಿ ಪ್ರಕಟವಾದ ಸಾಹಿತ್ಯಕೃತಿಗಳು ಕನ್ನಡದಲ್ಲಿ ಸಾಕಷ್ಟಿದ್ದರೂ ಸಹ, ಕರ್ನಾಟಕದ ಹೆಮ್ಮೆಯ ಪ್ರಕಾಶನಸಂಸ್ಥೆಯೆಂದು ಹೇಳಿಕೊಳ್ಳುವ ‘ಮನೋಹರ ಗ್ರಂಥಮಾಲಾ’ ಸಂಸ್ಥೆಯ ಮಾಲಕರಾದ ರಮಾಕಾಂತ ಜೋಶಿಯವರಿಗೆ  ಪ್ರಸಂಗಸಾಹಿತ್ಯವು ಇತ್ತೀಚಿನ ಬೆಳವಣಿಗೆಯಂತೆ ಕಾಣುತ್ತಿರುವದು  ಅಚ್ಚರಿಯ ಸಂಗತಿ. (ಪ್ರಕಾಶಕರ ಮಾತು ನೋಡಿರಿ: “ಇತ್ತೀಚೆಗೆ ಸಾಹಿತ್ಯಪ್ರಕಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗತೊಡಗಿದ್ದು, ಶುದ್ಧ ಸಾಹಿತ್ಯಕ್ಕಿಂತ ಹೆಚ್ಚಾಗಿ ಸಾಹಿತ್ಯ ಲೋಕದ ಆಜೂ ಬಾಜೂ ನಡೆದಿರಬಹುದಾದ, ನಡೆದ ಪ್ರಸಂಗಗಳನ್ನು ಅರಿಯುವ ಕುತೂಹಲ ಓದುಗರಿಗೆ ಹೆಚ್ಚಾಗತೊಡಗಿದೆ.)

ಗಿರಡ್ಡಿಯವರ ಶೈಲಿಯ ಬಗೆಗೆ ಒಂದು ಮಾತು. ತಮ್ಮ ಸ್ವಪ್ರಶಂಸೆಯು ಢಾಳಾಗಿ ಕಾಣಬಾರದೆಂದೊ ಅಥವಾ gentleman image ಇಟ್ಟುಕೊಳ್ಳುವ ಉದ್ದೇಶದಿಂದಲೋ ಗಿರಡ್ಡಿಯವರು ತಮ್ಮ ಲೇಖನಗಳನ್ನು ಸಂಕೋಚಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಆದರೆ ಇದರ ಪರಿಣಾಮ ಹೇಗಾಗಿದೆಯಂದರೆ ಇವರ ಲೇಖನಗಳು ನಿಸ್ಸತ್ವ, ನಿಸ್ಸಾರ ಶೈಲಿಯ ನಿರರ್ಥಕ ಚಿತ್ರಗಳಂತೆ ಕಾಣುತ್ತವೆ. ಪುಸ್ತಕವನ್ನು ಓದಿದ ಬಳಿಕ ಓದುಗನಿಗೆ ತನ್ನ ಸಮಯವು ಹಾಳಾಯಿತಲ್ಲ ಎಂದು ಪರಿತಾಪವಾಗಲಾರದೆ ಇರಲಾರದು. ಗುಜರಿಯಲ್ಲಿ ಬಿಕರಿಯಾಗಬೇಕಾದ ಕೃತಿಯನ್ನು ಮನೋಹರ ಗ್ರಂಥಮಾಲೆಯು ತನ್ನ ಚಂದಾದರರಿಗೆ ಕೊಡಮಾಡಿದೆ ಎನ್ನಲು ವಿಷಾದವಾಗುತ್ತಿದೆ.

ಗಿರಡ್ಡಿಯವರ ನಿಬಂಧ ಇಲ್ಲಿದೆ. ತಾಳ್ಮೆ ಇದ್ದವರು ಓದಬಹುದು. ದಯವಿಟ್ಟು ನನ್ನನ್ನು ಕ್ಷಮಿಸಿರಿ.


40 comments:

ಸಿಂಧು sindhu said...

ಪ್ರಿಯ ಸುನಾಥ,

very interesting analysis!

ನಿಮ್ಮ ತಲೆಬರಹ ಉದ್ದೇಶಪೂರ್ವಕವೇ ಅಂದುಕೊಳ್ಳುತ್ತಿದ್ದೇನೆ ಲೇಖನ ಓದಿದ ಬಳಿಕ.

ಕಣವಿಯವರ ಸೂಚನೆ ಸೂಕ್ತವಾಗಿದೆ ಈ ಪುಸ್ತಕಕ್ಕೆ.

ಪ್ರೀತಿಯಿಂದ
ಸಿಂಧು

sunaath said...

ಸಿಂಧು,
ತಲೆಬರಹದ pun ಪ್ರಿಂಟಿಂಗ್ ಮಿಸ್ಟೇಕ್ ನಿಂದ ಆಗಿದ್ದು, ಅದನ್ನೀಗ ಸರಿಪಡಿಸಿದ್ದೇನೆ. ಆದರೆ ಆ pun ಮಾತ್ರ ಯೋಗ್ಯವೇ ಆಗಿತ್ತು!

PARAANJAPE K.N. said...

ನಮಗೆಲ್ಲ ವಿಮರ್ಶಕರೆ೦ದೇ ಪರಿಚಿತ ರಾಗಿರುವ ಗಿರಡ್ಡಿಯವರ ಬಗ್ಗೆ ಸವಿಸ್ತಾರವಾಗಿ ಬರೆದಿದ್ದೀರಿ, ಚೆನ್ನಾಗಿದೆ. ಅನೇಕ ಗೊತ್ತಿಲ್ಲದ ವಿಷಯಗಳ ಪರಿಚಯವಾಯ್ತು. ಧನ್ಯವಾದ.

ಸಾಗರದಾಚೆಯ ಇಂಚರ said...

ಗಿರಡ್ಡಿಯವರ ಬಗೆಗೆ ಬಹಳಷ್ಟು ತಿಳಿಸಿದ್ದಿರಿ
ನಂಗೆ ಇಷ್ಟೊಂದು ತಿಳಿದಿರಲಿಲ್ಲ
ಒಳ್ಳೆಯ ಮಾಹಿತಿಗೆ ಅಭಿನಂದನೆಗಳು

ಮನಮುಕ್ತಾ said...

ಸಾಹಿತ್ಯಲೋಕದ ಬಗ್ಗೆ ವಿವರ..ಲೇಖಕರ ಹಾಗು ಸಾಹಿತ್ಯದ ಬಗ್ಗೆ ವಿಮರ್ಶೆ..ಅನೇಕ ವಿಚಾರಗಳನ್ನು ತಿಳಿಸಿಕೊಟ್ಟಿತು. ಹೆಚ್ಚು ಹೆಚ್ಚು ಮಾಹಿತಿಗಳನ್ನು ಕೊಡುತ್ತಿರಿ... ಧನ್ಯವಾದಗಳು....

sunaath said...

ಪರಾಂಜಪೆಯವರೆ,
ವಿಮರ್ಶಕರು ಪ್ರಬಂಧಕಾರರಾಗಿದ್ದರಿಂದ ಇಷ್ಟೆಲ್ಲಾ ತೊಂದರೆ,ನೋಡಿ!

sunaath said...

ಗುರುಮೂರ್ತಿಯವರೆ,
ಈ ಬರಹ ಗಿರಡ್ಡಿಯವರ ಸದ್ಯದ ‘ಅವತಾರ’ದ ಬಗೆಗೆ ಮಾತ್ರ.
ಅವರ ಪೂರ್ವಾಶ್ರಮದ (ವಿಮರ್ಶಕ ಆಶ್ರಮದ) ಬಗೆಗೆ ಅಲ್ಲ!

sunaath said...

ಮನಮುಕ್ತಾ,
ಸಾಹಿತ್ಯದ ಹಾಗು ಸಾಹಿತಿಗಳ ವಿಮರ್ಶೆಯನ್ನು ಅನೇಕರು ವಿವಿಧ ದೃಷ್ಟಿಕೋನದಿಂದ ಮಾಡಿದ್ದಾರೆ. ಲಂಕೇಶರು ಮಾಡಿದ ವಿಮರ್ಶೆ ಈ ಪ್ರಕಾರದಲ್ಲಿ ಭಿನ್ನ ದೃಷ್ಟಿಕೋನದ ವಿಮರ್ಶೆ ಎಂದು ಹೇಳಬಹುದು. ಆ ವಿಮರ್ಶೆಯನ್ನು ಕೆಲವರು ಒಪ್ಪಲಿಕ್ಕಿಲ್ಲ, ಆದರೆ ಲಂಕೇಶರ ದೃಷ್ಟಿಕೋನದ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು.

ಆನಂದ said...

ಕಾಕಾ,
ಕೃತಿ ಮತ್ತು ಇತರೆ ವಿಚಾರಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
ನೀವು ತಿಳಿಸಿದ ಕೃತಿಗಳಲ್ಲಿ ಕೆಲವನ್ನು ಓದಿರುವೆ. ನನ್ನ favourite, ಬೆಳಗೆರೆ ಕೃಷ್ಣಶಾಸ್ತ್ರಿಗಳ ’ಮರೆಯಲಾದೀತೆ?’. ನೀವು ಹೇಳಿದಂತೆ ಪ್ರಸಂಗಗಳ ಮೂಲಕ ವ್ಯಕ್ತಿ ಪರಿಚಯ ಮಾಡುವ ಅವರ ಶೈಲಿ ಅನನ್ಯ.
ಹಾಗೆಯೇ ಕುವೆಂಪು ಕುರಿತು ಬಂದ ’ಅಣ್ಣನ ನೆನಪು’ಗಳಲ್ಲಿ ಕುವೆಂಪುರವರನ್ನು ಕವಿಯಾಗಿಯಷ್ಟೇ ಅಲ್ಲದೆ, ಒಬ್ಬ ಅಪ್ಪನಾಗಿ, ವ್ಯಕ್ತಿಯಾಗಿ ನೋಡಬಹುದು.

ಹಾಗೇ ಸುಮ್ಮನೆ ಗಮನಿಸಿದರೆ, ಸಾಹಿತ್ಯದಲ್ಲಷ್ಟೇ ಅಲ್ಲದೆ, ಸಂಗೀತ, ಸಿನಿಮಾ ಇತ್ಯಾದಿ ಕ್ಷೇತ್ರಗಳಲ್ಲಿಯೂ ತಮ್ಮ comfort zoneನಿಂದ ಹೊರಬಂದು ಬೇರೆ ಏನೋ ಮಾಡಲು ಹೋಗಿ ಕೈ ಸುಟ್ಟುಕೊಂಡವರಿದ್ದಾರೆ. ಆದರೆ ಮರ‍ಳಿ ಯತ್ನವ ಮಾಡು ಎನ್ನುವಂತೆ ಮತ್ತೆ ಪ್ರಯತ್ನಿಸಿ ಅದರಲ್ಲಿ ಗೆದ್ದವರೂ ಇದ್ದಾರೆ.
ಗಿರಡ್ಡಿಯವರ ಮುಂದಿನ ಕೃತಿ ಇದಕ್ಕೆ ಉತ್ತರವಾಗಬಹುದೇನೋ...

Unknown said...

ಸುನಾಥ್ ಸಾರ್,

ಕೆಲವೊಂದು ವಿಷಯಗಳು ತಿಳಿದವು... ಗಿರಡ್ಡಿ ಅಂದ್ರೆ ಯಾರೆಂದೇ ನನಗೆ ಗೊತ್ತಿರಲಿಲ್ಲ ಹೆಸರೂ ಕೇಳಿರಲಿಲ್ಲ.....:-)

sunaath said...

ಆನಂದ,
ಬೆಳಗೆರೆಯವರ ಕೃತಿಗಳು ಸಾಹಿತಿಗಳ ಬಾಳಿನ ಉತ್ತಮ ನೋಟವನ್ನು ನೀಡುತ್ತವೆ. ತೇಜಸ್ವಿಯವರ ‘ಅಣ್ನನ ನೆನಪುಗಳು’ ಮಾಹಿತಿಪೂರ್ಣವಾಗಿದೆ. ಆದರೆ ಲಂಕೇಶರು ಈ ಕೃತಿಯನ್ನು ಮೆಚ್ಚಿಲ್ಲ!

sunaath said...

ರವಿಕಾಂತ,
ಕುರ್ತಕೋಟಿ ಹಾಗೂ ಆಮೂರರನ್ನು ನವೋದಯದ ನಡುಗಾಲದ ವಿಮರ್ಶಕರೆಂದು ಕರೆಯಬಹುದು. ಗಿರಡ್ಡಿಯವರು ನವ್ಯಕಾಲದ ವಿಮರ್ಶಕರಲ್ಲಿ ಸೇರ್ಪಡೆಯಾಗುತ್ತಾರೆ.

ಚುಕ್ಕಿಚಿತ್ತಾರ said...

ಸುನಾಥ್ ಕಾಕಾ,
ಈ ಲೇಖನ ತು೦ಬಾ ಇಷ್ಟವಾಯಿತು.
ಗಿರಡ್ಡಿಯವರ ಸಾಹಿತ್ಯವನ್ನು ವಿಶೇಷವಾಗಿ ಓದಿಲ್ಲ. ವಿಜಯಕರ್ನಾಟಕದಲ್ಲಿ ಕೆಲವು ಓದಿದ್ದೇನೆ ಅಷ್ಟೇ. ವ೦ದನೆಗಳು.

sunaath said...

ವಿಜಯಶ್ರೀ,
ಗಿರಡ್ಡಿಯವರ ಸ್ಥಿರಶೀರ್ಷಿಕೆಯೊಂದು ಇತ್ತೀಚೆಗೆ ವಿಜಯಕರ್ನಾಟಕದಲ್ಲಿ ಪ್ರಕಟವಾಗತೊಡಗಿದೆ. ತಮ್ಮ ‘ಇದೇ ಪುಸ್ತಕದ’ ಲೇಖನಗಳನ್ನು ಬಹುಶಃ ಅವರು ಅಲ್ಲಿಯೂ ಪ್ರಕತಿಸುತ್ತಿರಬಹುದು.

ಶಿವಪ್ರಕಾಶ್ said...

ಸುನಾಥ್ ಸರ್,
ಸಾಹಿತ್ಯ ಲೋಕದ ಬಗ್ಗೆ ನನಗೆ ಅಸ್ಟೊಂದು ಗೊತ್ತಿಲ್ಲ.
ಇಲ್ಲಿ ಕೂಡ ಕೆಲವು ವ್ಯಕ್ತಿಗಳು, ಬೇರೆಯವರ ಸಾಹಿತ್ಯದ ಹಾಗು ಸಾಹಿತಿಗಳ ವಿಮರ್ಶೆಯನ್ನು ಋಣಾತ್ಮಕ ಸಂಕೀರ್ಣತೆಗೂ (ಛಿದ್ರಾನ್ವೇಷಣೆಗೂ) ಬಳಸಿಕೊಳ್ಳುವರು ಎಂದು ತಿಳಿಯಿತು.
ಇದು ಸರಿಯೋ, ತಪ್ಪೋ ಎಂದು ಹೇಳುವಸ್ಟು ದೊಡ್ಡವನು ನಾನಲ್ಲ.
ಸಾಹಿತ್ಯಲೋಕದಲ್ಲಾಗುತ್ತಿರುವ ವಿಷಯಗಳ ಮಾಹಿತಿಗಾಗಿ ಧನ್ಯವಾದಗಳು...

sunaath said...

ಶಿವಪ್ರಕಾಶ,
"ಇದು ಎಂಥ ಲೋಕವಯ್ಯ!" ಎಂದು ನಾರದ ಮಹರ್ಷಿಗಳು ಹಾಡಿದ್ದಾರೆ, ಕನ್ನಡ ಚಲನಚಿತ್ರವೊಂದರಲ್ಲಿ. ಇದು ಸಾಹಿತ್ಯಲೋಕಕ್ಕೂ ಅನ್ವಯಿಸುತ್ತದೆ! ಇಲ್ಲಿರುವಷ್ಟು ಗುಂಪುಗಳು, lobbying ರಾಜಕೀಯದಲ್ಲೂ ಇರಲಿಕ್ಕಿಲ್ಲ.

ಬಿಸಿಲ ಹನಿ said...

ಗಿರಡ್ದಿಯವರ ಬಗ್ಗೆ ಹಿಂದೊಮ್ಮೆ ಲೇಖಕಿ ಎಮ್. ಕೆ. ಇಂದಿರಾವರು ಅವರು ಕೃತಿಯನ್ನು ಓದದೇ ವಿಮರ್ಶೆ ಮಾಡುತ್ತಾರೆ ಎಂದು ಹೇಳಿದ್ದರು. ಅದೇಕೋ ಇಲ್ಲಿ ನೆನಪಾಯಿತು. ಇರಲಿ,ಗಿರಡ್ದಿಯವರ ಪುಸ್ತಕದ ಬಗೆಗಿನೆ ನಿಮ್ಮ ಲೇಖನ ತುಂಬಾ ಚನ್ನಾಗಿ ಬಂದಿದೆ.

sunaath said...

ಉದಯ,
ಗಿರಡ್ಡಿಯವರ ವಿಮರ್ಶೆ ಆ ತರಹ ಇರೋದೇನೂ ಸುಳ್ಳಲ್ಲ!

sritri said...

ಕಾಕಾ, ಈ ಪುಸ್ತಕಕ್ಕೆ ಬಂದಿರುವ ಇತರ ವಿಮರ್ಶೆಗಳ ಬಗ್ಗೆಯೂ ತಿಳಿಯುವ ಕುತೂಹಲವಿದೆ. ನಿಮ್ಮ ಗಮನಕ್ಕೆ ಬಂದಿದೆಯೇ?

sunaath said...

ತ್ರಿವೇಣಿ,
ಈ ಪುಸ್ತಕ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈವರೆಗೂ ಯಾವ ವಿಮರ್ಶೆಯೂ ಬಂದಿಲ್ಲ. ‘ಸಲ್ಲಾಪ’ದ ವಿಮರ್ಶೆಯೇ ಮೊದಲ ವಿಮರ್ಶೆ.

sritri said...

ಕಾಕಾ, ನಿನ್ನೆಯ ವಿಜಯಕರ್ನಾಟಕದ ಸಾಪ್ತಾಹಿಕ ವಿಭಾಗದಲ್ಲಿ ಈ ಪುಸ್ತಕದ ಒಂದು ಪ್ರಸಂಗ (ಶ್ರಿರಂಗರದು) ಪ್ರಕಟವಾಗಿದೆ.

sunaath said...

ತ್ರಿವೇಣಿ,
ವಿಜಯಕರ್ನಾಟಕದಲ್ಲಿ ಈ ಪುಸ್ತಕದ ಪ್ರಸಂಗಗಳು ಪ್ರಕಟವಾಗುತ್ತಲಿವೆ.

ದಿನಕರ ಮೊಗೇರ said...

ಸುನಾಥ್ ಸರ್,
ಸಾಹಿತ್ಯ ಲೋಕದ ಉತ್ತಮರನ್ನು ಎಲ್ಲರಿಗೂ ಪರಿಚಯಿಸುತ್ತಾ ಇದ್ದೀರಾ.... ತುಂಬಾ ಧನ್ಯವಾದಗಳು..... ಇವರ ಎಲ್ಲಾ ಸಂಗ್ರಹ ಓದಲು ಕಷ್ಟವಾದರೂ, ಕೆಲವೊಂದನ್ನು ಓದಲುಪ್ರಯತ್ನಿಸುತ್ತೇನೆ.....

sunaath said...

ದಿನಕರ,
ಧನ್ಯವಾದಗಳು. ಕನ್ನಡ ಸಾಹಿತ್ಯಲೋಕದಲ್ಲಿ ರತ್ನಗಳೂ ಇವೆ, ಗಾಜಿನ ಮಣಿಗಳೂ ಇವೆ. ಅವುಗಳನ್ನು ಗುರುತಿಸೋಣ!

Ittigecement said...

ಸುನಾಥ ಸರ್...

ಗಿರೆಡ್ಡಿಯವರು ಒಂದು ವಿಷಯದ ಪರವಾಗಿರುತ್ತಾರೆ...
ಇಂಪಾರ್ಷಿಯಲ್ ಆಗಿರುವದಿಲ್ಲ ಎನ್ನುವದನ್ನು ನಾನು ಕೇಳಿದ್ದೆ...
ಅವರ ಪತ್ರಿಕೆ ಮೊದಲು ಜನಪ್ರಿಯವಾದರೂ ಆಮೇಲೆ ಇದೇ ಕಾರಣಕ್ಕಾಗಿ ಸೊರಗಿತು..
ಅಂತ ನನ್ನ ಸ್ನೇಹಿತರೊಬ್ಬರು ಹೇಳುತ್ತಾರೆ..

sunaath said...

ಪ್ರಕಾಶ,
ಗಿರಡ್ಡಿ, ಚಂದ್ರಶೇಖರ ಪಾಟೀಲ ಹಾಗು ಸಿದ್ಧಲಿಂಗ ಪಟ್ಟಣಶೆಟ್ಟಿ ಜೊತೆಯಾಗಿ ‘ಸಂಕ್ರಮಣ’ ಪತ್ರಿಕೆಯನ್ನು ಹೊರತಂದಿದ್ದರು. ಕಾಲಕ್ರಮೇಣ ಚಂಪಾರವರು ಗಿರಡ್ಡಿ ಹಾಗು ಪಟ್ಟಣಶೆಟ್ಟರನ್ನು ಹೊರದೂಡಿ, ಸಂಕ್ರಮಣದ ಏಕೈಕ ಮಾಲೀಕರಾದರು.

ತೇಜಸ್ವಿನಿ ಹೆಗಡೆ said...

ಕಾಕಾ,
"ಮೊಸರಲ್ಲಿ ಕಲ್ಲುಹುಡುಕುವ" ಕೆಲಸವಿದೆಂದು ಸ್ಯಾಂಪಲ್ ಲೇಖನವನ್ನೋದಿ ತಿಳಿಯಿತು. ಉತ್ತಮ ವಿಮರ್ಶೆ. ಸರಿಯಾಗಿ ಹೇಳಿದ್ದೀರಿ.

sunaath said...

ತೇಜಸ್ವಿನಿ,
ಏನಾದರೂ ಬರೆದು ವೇದಿಕೆಯ ಮೇಲೆಯೇ ಇರಬಯಸುವ ಲೇಖಕರಿಂದ ಇಂತಹ ‘ಬೂಸಾ’ಸಾಹಿತ್ಯ ಹುಟ್ಟುತ್ತದೆ.

Narayan Bhat said...

ಈ ಲೇಖಕರ ಸಾಹಿತ್ಯದ ಇನ್ನೊಂದು ಮಗ್ಗುಲು ತೋರಿಸಿದ್ದೀರಿ, ಕೃತಜ್ಞತೆಗಳು.

sunaath said...

ಧನ್ಯವಾದಗಳು. ಇಲ್ಲಿಯ ದೋಷಗಳನ್ನು ತೋರಿಸುತ್ತ ಇರಿ ಎಂದು ಕೋರುತ್ತೇನೆ.

VENU VINOD said...

ಸುನಾಥರೇ,
ಎಂದಿನಂತೆ ವಿಶ್ಲೇಷಣಾತ್ಮಕವಾಗಿ ವಿಮರ್ಶಕರನ್ನೇ ವಿಮರ್ಶಿಸಿದ್ದೀರಿ..
ಹಿರಿಯ ಕವಿಗಳನ್ನು ಎಲ್ಲೆಡೆ ಹೊಗಳಿಯೇ ಬರುವುದರಿಂದ ಅವರ ಇನ್ನೊಂದು ಮಗ್ಗುಲು ಜನಸಾಮಾನ್ಯರಿಗೆ ತಿಳಿದಿಲ್ಲ ಎನ್ನುವುದು ತಕ್ಕ ಮಟ್ಟಿಗೆ ನಿಜವೇ.
ಆದರೂ ಟೀಕೆಗಾಗಿಯೇ ಟೀಕೆ, ಪ್ರಚಾರದಲ್ಲಿರುವುದಕ್ಕಾಗಿ ಟೀಕೆ ಯಾಕೆ? ಎನ್ನುವುದು ನನ್ನದೂ ಪ್ರಶ್ನೆ...
ಯೋಚನೆಗೆ ಹಚ್ಚಿದ್ದಕ್ಕೆ ವಂದನೆಗಳು..

sunaath said...

ವೇಣು ವಿನೋದ,
ನೀವು ಹೇಳುವದು ಸರಿ. ನಾಣ್ಯಕ್ಕೆ ಎರಡು ಮುಖಗಳು ಇರುತ್ತವ. ಅಲ್ಲದೆ, ಋಣಾತ್ಮಕ exposureಉ ಧನಾತ್ಮಕವಾಗಿರಬೇಕು!!! ಅದೂ ಸಹ ಋಣಾತ್ಮಕವೇ ಆಗಬಾರದು, ಅಲ್ಲವೆ?

ಮನಸು said...

ಸುನಾಥ್ ಸರ್,
ನಿಜಕ್ಕೂ ನನಗೆ ಈ ಲೇಖನ, ವ್ಯಕ್ತಿ ವಿಶೇಷ ಎಲ್ಲ ತುಂಬಾ ಇಷ್ಟವಾಯಿತು. ನವ್ಯಕಾಲದ ವಿಮರ್ಶಕರ ಬಗ್ಗೆ ಬಹಳಷ್ಟು ತಿಳಿಸಿದ್ದೀರಿ. ನಮಗೆ ಗೊತ್ತಿಲ್ಲದ್ದು ಬಹಳ ಇದೆ. ಅವರ ವಿಮರ್ಶೆಗಳನ್ನು ಓದುವ ಮನಸಾಗಿದೆ.

Anonymous said...

ನಿಮ್ಮ ಅಭಿಪ್ರಾಯಗಳನ್ನು ಒಪ್ಪುತ್ತೇನೆ. ಇವು ಕೃತಿ ರೂಪದಲ್ಲಿ ಬರದೆ ಮಾತಲ್ಲಿ ಇದ್ದರೆ ಚೆನ್ನ...... ಒಬ್ಬರ ಬಾಯಿಂದ ಇನ್ನೊಬ್ಬರ ba .ಮನೋಹರ ಗ್ರಂಥಮಾಲೆ ಯಿಂದ ಇದನ್ನು ನೀರಿಕ್ಷಿಸಿರಿಲಿಲ್ಲ .
ವೆಂಕಟಾಚಲ ಶಾಸ್ತ್ರಿಗಳ " ಉದಾತ್ತ ಮನಸ್ಸಿನ ಉದಾತ್ತ ಪುರುಷರು " ( ಹೆಸರು ಸರಿಯಿಲ್ಲದಿರಬಹುದು ) ರೀತಿ ಸಾಹಿತಿಗಳ ಪರಿಚಯ ಮಾಡಿಕೊಟ್ಟರೆ ತುಂಬಾ ಚೆನ್ನ .
ಕೆಲವೊಮ್ಮೆ ಈ ಅಭಿಪ್ರಾಯಗಳು ನಮ್ಮನ್ನು ಕೃತಿಕಾರರ ಬಗ್ಗೆ ಇದ್ದ ಅಭಿಮಾನವನ್ನು ಕಡಿಮೆಯೂ ಮಾಡಬಹುದು. ಕಾರಂತರ ಕೃತಿಗಳು ಅದ್ಬುತವಾಗಿವೆ, ಅವರ ಬಗ್ಗೆ ತಿಳಿದುಕೊಳ್ಳುವ ಕ್ರಿಯಾ ಸಕಾರಾತ್ಮಕ ವಾಗಿ ಇದ್ದರೆ ತುಂಬಾ ಚೆನ್ನ. ಕಾರಂತರ ಆತ್ಮ ಕಥೆಯಲ್ಲಿ ಅವರು ತಮ್ಮನ್ನೇ ಲೇವಡಿ ಮಾಡಿಕೊಂಡ ಅನೇಕ ಉದಾಹರಣೆಗಳಿವೆ. ಆದರೆ ಈ ರೀತಿ ಬರೇ "ಈಗ ಬದುಕಿಲ್ಲದವರ " ( ತೀರಿ ಹೋಗಿ , ಅದರ ಬಗ್ಗೆ ಕಾಮೆಂಟ್ ಮಾಡಲು ಆಗದವರ )ಬಗ್ಗೆ ಲೇವಡಿ ಮಾಡಿರುವುದು ಯಾಕೋ ಸರಿಯೇನಿಸುತಿಲ್ಲ .ವಿಮರ್ಶೆಗಳೇ ಕೃತಿಯನ್ನು ವಿಮರ್ಶಿಸಬೇಕೆ ಹೊರತು, ಕೃತಿಕಾರರನ್ನಲ್ಲ ಎಂಬ ನಿಯಮವಿರುವಾಗ, ಈ ರೀತಿ ಕೃತಿಗಳು ಬರಬಾರದು ಎಂಬುದು ನನ್ನಅಭಿಪ್ರಾಯ

sunaath said...

ಮನಸು,
ಹಳೆಯ ವಿಮರ್ಶಕರಲ್ಲಿ ಕೀರ್ತಿನಾಥ ಕುರ್ತಕೋಟಿಯವರಂತೂ ಕೀರ್ತಿಶೇಷರಾಗಿದ್ದಾರೆ. ಆಮೂರವರು ಉತ್ತಮ ವಿಮರ್ಶಕರು, ಆದರೆ ಕಟುವಾಗಿ ವಿಮರ್ಶಿಸಲು ಹಿಂಜರಿಯುತ್ತಾರೆ. ನಂತರದ ವಿಮರ್ಶಕರಲ್ಲಿ ಟಿ.ಪಿ.ಅಶೋಕ ಹಾಗು ರಹಮತ್ ತರೀಕೆರೆ ಹೆಸರಾದವರು. ಲಂಕೇಶರು ಕಟುವಾದ ವಿಮರ್ಶಕರಾಗಿದ್ದರು, ಆದರೆ ಈಗ ಅವರೂ ಇಲ್ಲ.

sunaath said...

ಅನಾನಿಮಸ್ಸರೆ,
ಮೌಲಿಕವಾದ ಅಭಿಪ್ರಾಯವನ್ನು ಹೇಳಿದ್ದೀರಿ. "ಧಾರವಾಡದಲ್ಲಿ ನಿಂತುಕೊಂಡು ಕಲ್ಲು ಒಗೆದರೆ..." ಎಂದು ಗಿರಡ್ಡಿಯವರು ಬರೆಯುವಾಗ, ಅವರು ಈ ರೀತಿಯ ‘ಕಲ್ಲು ಒಗೆಯುತ್ತಾರೆ’ ಎಂದು ನಾನು ನಿರೀಕ್ಷಿಸಿರಲಿಲ್ಲ. ಆದರೆ, ಕೆಲವೊಮ್ಮೆ ಕಲ್ಲುಗಳೂ ಸಹ ಬೂಮೆರಾಂಗ್ ಆಗಬಹುದು!

ಶ್ರೀನಿವಾಸ ಮ. ಕಟ್ಟಿ said...

ಇವರ ಯೋಗ್ಯತೆಯೇ ಇಷ್ಟು ! ಉ....ಯಲ್ಲಿ ಮೀನು ಹಿಡಿಯುವ ನೀಚ ಬುದ್ಧಿ.

sunaath said...

ಕಟ್ಟಿಯವರೆ,
ಈ ಮೂತ್ರಮತ್ಸ್ಯಗಾರರಿಗೆ ಇದೀಗ ಗೌರೀಶ ಕಾಯ್ಕಿಣಿ ಪ್ರಶಸ್ತಿ ಲಭಿಸಿತು. ಇವರು ಸಾಹಿತ್ಯ ಅಕಾಡೆಮಿಯ ಸದಸ್ಯರೂ ಹೌದು.
So,ಯೋಗ್ಯತೆಯನ್ನು ಅಳೆಯುವ ಮಾನದಂಡ ಎಂತಹದಿರಬಹುದು, ನೋಡಿರಿ!

ಸೀತಾರಾಮ. ಕೆ. / SITARAM.K said...

"ನಿ೦ದಕರಿರಬೇಕು ಮ೦ದಿಯೊಳಗೆ
ಊರಲ್ಲಿ ಹ೦ದಿಯಿದ್ದ೦ತೆ ಸರ್ವಜ್ಞ"
ಎ೦ಬ ತ್ರಿಪದಿಯ೦ತೆ, ಕೆಲಸ ಮಾಡಿದ ವಿಮರ್ಶಕರು - ಗಿರಡ್ಡಿ, ಚ೦ಪಾ, ಸಿದ್ದಲಿ೦ಗ ಪಟ್ಟನಶೆಟ್ಟಿ, ಪೋಲ೦ಕಿ ಮು೦ತಾದವರು....
ಕಾವ್ಯವೊ೦ದರ ಶಬ್ದಗಳ ಇನ್ನೊ೦ದು ಮಗ್ಗುಲ ಜಾಡ ಹಿಡಿದು ಋಣಾತ್ಮಕ ಅರ್ಥ ಕೊಡುವದರಲ್ಲಿ ಇವರು ಗಟ್ಟಿಗರು. "ಸ೦ಕ್ರಮಣ"ದ ಸೇವೆಯೂ ಅಪಾರ ಈ ನಿಟ್ಟಿನಲ್ಲಿ. ಪೊಲ೦ಕಿಯವರು ವಾಲ್ಮೀಕಿಯ ರಾಮಾಯಣವನ್ನೂ ಬಿಟ್ಟಿಲ್ಲ ತಮ್ಮ ಋಣಾತ್ಮಕ ವಿಶ್ಲೇಷಣೆಗೆ. ಇ೦ಥವರ ಇನ್ನೊ೦ದು ಮಗ್ಗಲನ್ನು ಪರಿಚಯಿಸಿದ್ದಿರಾ.. ಧನ್ಯವಾದಗಳು.

sunaath said...

ಸೀತಾರಾಮರೆ,
ಪೋಲಂಕಿಯವರಂತೂ ಹಂದಿಗಳ ರಾಜ!