Friday, March 5, 2010

ಸಾರ್ವಜನಿಕ ಪ್ರಮಾಣ, ಸಾಂಸ್ಕೃತಿಕ ಆದರ್ಶ ಹಾಗು ತಸ್ಲೀಮಾ ನಸರೀನ್

ಶಿವಮೊಗ್ಗಿ ಹಾಗು ಹಾಸನಗಳಲ್ಲಿ ತಸ್ಲೀಮಾ ನಸರೀನ್ ಇವರ ವಿರುದ್ಧ ಜರುಗಿದ ಹಿಂಸಾತ್ಮಕ ಪ್ರತಿಭಟನೆಗಳು ಕರ್ನಾಟಕದ ಸಾರ್ವಜನಿಕ ಹಾಗು ಸಾಂಸ್ಕೃತಿಕ ಜೀವನಕ್ಕೆ ಘೋರ ಕಳಂಕವನ್ನು ತಂದಿವೆ. ಈ ಹಿಂಸಾತ್ಮಕ ಪ್ರತಿಭಟನೆಗಿಂತ ಘೋರವಾದದ್ದು, ಈ ಘಟನೆಗಳಿಗೆ ವಿಚಾರವಂತರ ಪ್ರತಿಕ್ರಿಯೆ ಅಥವಾ ಪ್ರತಿಕ್ರಿಯೆಯ ಅಭಾವ. ತಸ್ಲೀಮಾ ಅವರ ಮೂಲಲೇಖನದ ಅನುವಾದವೆಂದು ಹೇಳಲಾದ ಲೇಖನವೊಂದು ‘ಕನ್ನಡ ಪ್ರಭಾ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ತಾನು ಅಂತಹ ಯಾವುದೇ ಅನುವಾದಕ್ಕೆ ಒಪ್ಪಿಗೆಯನ್ನೇ ನೀಡಿಲ್ಲ ಎನ್ನುವ ಅವರ ಹೇಳಿಕೆಯೂ ಪತ್ರಿಕೆಗಳಲ್ಲಿ ಪ್ರಕಟವಾಗಿದೆ !
ಇಲ್ಲಿ ಮೂಡುವ ಪ್ರಶ್ನೆಗಳು ಇಂತಿವೆ:
(೧) ಈ ಗಲಭೆಯು ಪೂರ್ವ ನಿಯೋಜಿತ ಹಾಗು ರಾಜಕೀಯ ಪ್ರೇರಿತ ಘಟನೆಯೆ ಅಥವಾ ಸ್ವಯಂಸ್ಫೂರ್ತ ಘಟನೆಯೆ?
(೨) ಸಾರ್ವಜನಿಕ ಹಾಗು ಸಾಂಸ್ಕೃತಿಕ ಜೀವನಕ್ಕೆ ಸಂಬಂಧಿಸಿದಂತೆ ವಿಚಾರವಂತರ ಹೊಣೆಗಾರಿಕೆ ಏನು?

(೧) ಈ ಗಲಭೆಯು ಪೂರ್ವ ನಿಯೋಜಿತ ಹಾಗು ರಾಜಕೀಯ ಪ್ರೇರಿತ ಘಟನೆಯೆ?:
 ಮಾಧ್ಯಮ ವಿದ್ಯಾರ್ಥಿಯಾದ ರಾಕೇಶ ಮಥಾಯಸರು ಈ ಹಿಂಸಾತ್ಮಕ ಪ್ರತಿಭಟನೆಯು ಪೂರ್ವ ನಿಯೋಜಿತ ಹಾಗು ರಾಜಕೀಯ ಪ್ರೇರಿತ ಸಂಚು ಎಂದು ಹೇಳುತ್ತಾರೆ. ನಮ್ಮ ಮಹಾನ್ ಭಾರತ ದೇಶದ ಪೂರ್ವ ಪ್ರಧಾನಿಯೊಬ್ಬರು ಈ ಸಂಚಿನ ಪ್ರೇರಕರು ಎನ್ನುವದು ಅವರ ಅಭಿಪ್ರಾಯ. ಅವರ ಕನ್ನಡ ಬ್ಲಾ^ಗು  ‘ಕ್ಷಕಿರಣ’ದಲ್ಲಿ ಅವರ ಅಭಿಪ್ರಾಯವನ್ನು ನೋಡಬಹುದು. 

ಇದು ನಿಜವೇ ಆಗಿದ್ದರೆ, ಇದಕ್ಕಿಂತ ಹೀನ ರಾಜಕೀಯ ಮತ್ತೊಂದಿಲ್ಲ. ಕೋಟಿಗಟ್ಟಲೆ ಬೆಲೆ ಬಾಳುವ  ಸಾರ್ವಜನಿಕ ಹಾಗು ಖಾಸಗಿ ಆಸ್ತಿಯ ನಾಶವಂತೂ ಆಯಿತು. ಅದಕ್ಕಿಂತ ಹೆಚ್ಚಾಗಿ ಈ ಲೇಖನದ ಬಗೆಗೆ ಏನೂ ಗೊತ್ತಿರದ ಅಮಾಯಕರ ಜೀವಹಾನಿಯೂ ಆಯಿತು. ಆ ರಾಜಕಾರಣಿಗೆ ಇದರಿಂದ ಏನು ಲಾಭವಾಯಿತೊ ತಿಳಿಯದು!
ಇನ್ನು ಇದು ಸ್ವಯಂಸ್ಫೂರ್ತ ಪ್ರತಿಭಟನೆಯಾಗಿದ್ದರೆ, ಪ್ರತಿಭಟನಾಕಾರರಿಗೆ ಪ್ರಜಾಪ್ರಭುತ್ವದ ವಿಧಾನಗಳಲ್ಲಿ ವಿಶ್ವಾಸವೇ ಇಲ್ಲ ಎಂದು ಹೇಳಬೇಕಾಗುತ್ತದೆ. ಅವರಿಗೆ ತಮ್ಮ ತೋಳ್ಬಲದ ಪ್ರದರ್ಶನ ಮಾಡುವದಷ್ಟೇ ಬೇಕಾಗಿದೆ ! ಅವರು ಕೊಡುವ ಸಂದೇಶವು ಹೀಗಿದೆ: ‘ನೋಡು, ನನ್ನ ಅಭಿಪ್ರಾಯಕ್ಕೆ ವಿರುದ್ಧವಾದದ್ದನ್ನು ನೀನು ಹೇಳಿದರೆ, ನಾನು ನಿನ್ನ ಗಂಟಲನ್ನು ಹಿಸುಕುತ್ತೇನೆ!’

‘ಕನ್ನಡ ಪ್ರಭಾ’ದಲ್ಲಿ ಪ್ರಕಟವಾದ ಲೇಖನದಲ್ಲಿ ಧರ್ಮನಿಂದೆಯ (blasphemy) ಅಥವಾ ಅವಹೇಳನದ (slander) ಅಂಶಗಳಿದ್ದರೆ, ನ್ಯಾಯಲಯಕ್ಕೆ  ಹೋಗಲು ಅವಕಾಶವಿದೆ. ಭಾರತೀಯ ನ್ಯಾಯಾಲಯಗಳು ಸತ್ಯ ಹಾಗು ನ್ಯಾಯವನ್ನು ಎತ್ತಿ ಹಿಡಿಯುವ ಪರಂಪರೆಯನ್ನೇ ಹೊಂದಿವೆ. ಅಲ್ಲಿ ಖಂಡಿತವಾಗಿಯೂ ಪ್ರತಿಭಟನಾಕಾರರಿಗೆ ಜಯವು ದೊರೆಯುತ್ತಿತ್ತು. ಆದರೆ, ಗಲಭೆಕೋರರಿಗೆ ತರ್ಕಜಿಜ್ಞಾಸೆಯಲ್ಲಿ ನಂಬಿಕೆ ಇಲ್ಲ. ಅವರಿಗೆ ಒಂದು ಸಮಾಜದಲ್ಲಿಯ status quoಅನ್ನು ಮುಂದುವರಿಸುವದು ಮಾತ್ರ ಬೇಕಾಗಿದೆ. ಆದುದರಿಂದಲೇ ಅವರು ಹಿಂಸಾತ್ಮಕ ದೊಂಬಿಗೆ ಮುಂದಾಗಿದ್ದಾರೆ. ಎರಡು ಪೂರ್ವನಿದರ್ಶನಗಳನ್ನು ಇಲ್ಲಿ ಗಮನಿಸಬಹುದು. ಒಂದು ಪೂರ್ವನಿದರ್ಶನವು ಸ್ವತಃ ಶ್ರೀಮತಿ ತಸ್ಲೀಮಾ ನಸರೀನ್ ಅವರಿಗೇ ಸಂಬಂಧಿಸಿದ್ದು. ಎರಡನೆಯದು ಕಲಾವಿದ ಶ್ರೀ ಎಮ್.ಎಫ್.ಹುಸೇನರಿಗೆ ಸಂಬಂಧಿಸಿದ್ದು.

ಕನ್ನಡ ನಾಡಿನಲ್ಲಿ ಸ್ತ್ರೀಸಂವೇದಿಯಾದ ಹಾಗು ಉದಾರ ಮನೋಭಾವದ ಅನೇಕ ಲೇಖಕಿಯರಿದ್ದಾರೆ. (ಉದಾಹರಣೆಗೆ ಶ್ರೀಮತಿ ಸಾರಾ ಅಬೂಬಕ್ಕರ.) ಶ್ರೀಮತಿ ತಸ್ಲೀಮಾ ನಸರೀನ್ ಸಹ ಇವರಂತಹ ಬಂಗ್ಲಾ ದೇಶೀಯ ಲೇಖಕಿ. ಇವರು ರಚಿಸಿದ ಕೆಲವೊಂದು ದಿಟ್ಟ ಬಂಗಾಲಿ ಕವನಗಳನ್ನು ಕನ್ನಡದಲ್ಲಿ ಅನುವಾದಿಸಿ, ಶ್ರೀ ಉದಯ ಇಟಗಿ ಅವರು ತಮ್ಮ ಬ್ಲಾ^ಗ್ ‘ಬಿಸಿಲ ಹನಿ’ಯಲ್ಲಿ ನೀಡಿದ್ದಾರೆ. 


ಬಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾದ ಹಿಂದೂ ಧರ್ಮೀಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ಶ್ರೀಮತಿ ತಸ್ಲೀಮಾ ನಸರೀನ್ ಅವರು ತಮ್ಮ ಕಿರು ಕಾದಂಬರಿ ‘ಲಜ್ಜಾ’ದಲ್ಲಿ ಚಿತ್ರಿಸಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಮೂಲಭೂತವಾದಿ ಮುಲ್ಲಾಗಳು ಇವರ ಮೇಲೆ ಫತ್ವಾ ಹೊರಡಿಸಿದರು. ಶ್ರೀಮತಿ ತಸ್ಲೀಮಾ ನಸರೀನ್ ಭಾರತಕ್ಕೆ ಓಡಿ ಬಂದರು. ಆದರೆ ಮತಬ್ಯಾಂಕಿನ ಮೇಲೆ ಕಣ್ಣಿಟ್ಟ ಕೇಂದ್ರ ಸರಕಾರವು  ಶ್ರೀಮತಿ ತಸ್ಲೀಮಾ ನಸರೀನ್ ಇವರಿಗೆ ಆಶ್ರಯ ಕೊಡಲು ನಿರಾಕರಿಸಿತು. ಭಾರತದಲ್ಲಿಯೂ ಸಹ ಇವರಿಗೆ ಮೂಲಭೂತವಾದಿಗಳ ಕಾಟ ತಪ್ಪಲಿಲ್ಲ. ಈ ದಿಟ್ಟ ಲೇಖಕಿ ಈಗ ಅಜ್ಞಾತವಾಸದಲ್ಲಿ ಇರಬೇಕಾಗಿದೆ (ಸಲ್ಮಾನ್ ರಶ್ದಿಯ ತರಹ).  ಬಂಗ್ಲಾ ದೇಶದಲ್ಲಿಯ ಅಸಹಾಯಕ ಹಿಂದೂಗಳ ಪರವಾಗಿ ದನಿ ಎತ್ತಿದ ಈ ದಿಟ್ಟ ಮಹಿಳೆಗೆ ಭಾರತದಲ್ಲಿಯ ಮುಸ್ಲಿಮರಿಂದ  ವಿರೋಧ ಬರಲು ಕಾರಣವೇನು? ಇದು ಭಾರತೀಯ ಮುಸ್ಲಿಮರ ಯಾವ ಮನೋಧರ್ಮವನ್ನು ತೋರಿಸುತ್ತದೆ?

ಇನ್ನು ಎರಡನೆಯ ಉದಾಹರಣೆಯನ್ನು ನೋಡಿರಿ. ಶ್ರೀ ಎಮ್.ಎಫ್.ಹುಸೇನರು ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿದ್ದರಿಂದ ಮನನೊಂದ ಅನೇಕ ಹಿಂದೂ ಸಂಘಟನೆಗಳು ನ್ಯಾಯಾಲಕ್ಕೆ ಹೋಗಿವೆ. ಅಲ್ಲಿ ಇವರ ವಿರುದ್ಧ ಧರ್ಮನಿಂದೆ ಹಾಗು ಅವಹೇಳನದ ಆರೋಪಗಳು ಸಾಬೀತು ಆಗುವ ಸಾಧ್ಯತೆಗಳಿವೆ. ಅರ್ಥಾತ್ ಶ್ರೀ ಹುಸೇನರು ದಂಡ ಮತ್ತು ಸೆರೆಮನೆಯ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಇದನ್ನು ತಪ್ಪಿಸಲು ಶ್ರೀ ಹುಸೇನರು ಮುಸ್ಲಿಮ್ ದೇಶವೊಂದಕ್ಕೆ ಪಲಾಯನಗೈದರು. ಸಾರ್ವಜನಿಕವಾಗಿ, ಜೀವಭಯದ ನೆಪವನ್ನು ತೋರಿಸಿದರು.  ಈ ದೇಶದೊಡನೆ ಭಾರತಕ್ಕೆ extradition ಒಪ್ಪಂದವಿಲ್ಲ. ಆದುದರಿಂದಲೇ ಭಾರತದಿಂದ ಓಡಿ ಹೋದ ಅಪರಾಧಿಗಳೆಲ್ಲ ಗಲ್ಫ್ ದೇಶಗಳಲ್ಲಿ ಆಶ್ರಯ ಪಡೆಯುವದು ! ಇದೀಗ ಶ್ರೀ ಹುಸೇನರಿಗೆ ಕತಾರದ ಪೌರತ್ವ ಸಹ ದೊರೆತಿದೆ !
ಈ ಎರಡೂ ಘಟನೆಗಳಲ್ಲಿ ಕಂಡು ಬರುವದೇನು?
ಮುಸ್ಲಿಮೇತರ ಸಮಾಜಗಳು ನ್ಯಾಯಾಲಯದಿಂದ ನ್ಯಾಯ ಪಡೆಯಲು ಪ್ರಯತ್ನಿಸುತ್ತವೆ. ಆದರೆ ಮುಸ್ಲಿಮ್ ಸಮಾಜವು ತನ್ನಲ್ಲಿಯ ಉದಾರವಾದಿಗಳನ್ನು ನಿರ್ದಯವಾಗಿ ಬೇಟೆಯಾಡುತ್ತದೆ !

(೨) ಸಾರ್ವಜನಿಕ ಹಾಗು ಸಾಂಸ್ಕೃತಿಕ ಜೀವನಕ್ಕೆ ಸಂಬಂಧಿಸಿದಂತೆ ವಿಚಾರವಂತರ ಹೊಣೆಗಾರಿಕೆ ಏನು?
ನಮ್ಮ ನಾಡಿನಲ್ಲಿಯ ಢೋಂಗಿ ವಿಚಾರವಂತರು ಸಾಮಾಜಿಕ ಹಾಗು ಸಾಂಸ್ಕೃತಿಕ ಸ್ವಾಸ್ಥ್ಯಕ್ಕಿಂತ ತಮ್ಮ ಮುಖವಾಡಗಳಿಗೆ, ಹಾಗು ಆ ಮೂಲಕ ಲಭಿಸುವ ಪ್ರಶಸ್ತಿಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಅಭಿಪ್ರಾಯ ಸ್ವಾತಂತ್ರ್ಯದ ಬಗೆಗೆ ವೇದಿಕೆಗಳ ಮೇಲೆ ತಾಸುಗಟ್ಟಲೆ ಮಾತನಾಡುವ ನಮ್ಮ ಜ್ಞಾನಪೀಠಸ್ಥರು ಕೆಲವೊಂದು ಸಂದರ್ಭಗಳಲ್ಲಿ ತತ್ಕಾಲಕ್ಕೆ ತುಟಿ ಹೊಲಿದುಕೊಂಡು ಕೂತಿರುವ ಕಾರಣವನ್ನು ತಿಳಿಯಬಹುದೆ? ನನಗೆ ನೆನಪಿರುವ ಇಂತಹ ಕೆಲವು ಘಟನೆಗಳನ್ನು ಉಲ್ಲೇಖಿಸುತ್ತೇನೆ:

 (೧) ಖ್ಯಾತ ಸಂಶೋಧಕರಾದ ಡಾ^. ಎಮ್. ಎಮ್.  ಕಲಬುರ್ಗಿಯವರು ತಮ್ಮ ಸಂಶೋಧನಾ ಕೃತಿ ‘ಮಾರ್ಗ’ದಲ್ಲಿ ವೀರಶೈವ ಶರಣ ಚೆನ್ನಬಸವಣ್ಣನ ಹುಟ್ಟಿನ ಬಗೆಗೆ ಕೆಲವು ಮಾತು ಹೇಳಿದ್ದರು. ಇದಕ್ಕೆ ತೀವ್ರವಾದ ಪ್ರತಿಭಟನೆ ನಡೆದು, ಕೊನೆಗೆ ಅವರು ಮಠಾಧೀಶರಲ್ಲಿ ಕ್ಷಮೆ ಕೇಳಿಕೊಳ್ಳಬೇಕಾಯಿತು.

(೨) ಬಂಜಗೆರೆ ಜಯಪ್ರಕಾಶರು ಬಸವಣ್ಣನ ಕುಲದ ಬಗೆಗೆ ಬರೆದ “ಆನು ದೇವಾ ಹೊರಗಿವನು” ಸಂಶೋಧನಾತ್ಮಕ ಕೃತಿಗೆ ವಿರೋಧ ವ್ಯಕ್ತವಾಗಿದ್ದರಿಂದ ಸರಕಾರವು ಈ ಕೃತಿಯ ಮೇಲೆ ಪ್ರತಿಷೇಧ ಹೇರಿತು.

(೩) ಡ್ಯಾನ್ ಬ್ರೌನ್ ಅವರ The Da Vinci Code ಕಾದಂಬರಿಯನ್ನು ವಿರೋಧಿಸಿ ಬೆಂಗಳೂರಿನ ಕ್ರಿಶ್ಚಿಯನ್ ಸಮುದಾಯದವರು ಮೆರವಣಿಗೆ ಮಾಡಿದರು. (ಯುರೋಪ್ ಅಥವಾ ಅಮೇರಿಕಾದಲ್ಲಿ ಆಗದ ಪ್ರತಿಭಟನೆ ಭಾರತದಲ್ಲಾಯಿತು!)

(೪) ಪ್ರವಾದಿ ಮೊಹಮ್ಮದರ ವ್ಯಂಗ್ಯಚಿತ್ರವೊಂದು ಡ್ಯಾನಿಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದಕ್ಕಾಗಿ ಭಾರತದಲ್ಲಿ ಗಲಭೆಗಳಾದವು.

(೫) ಕೆಲವು ವರ್ಷಗಳ ಹಿಂದೆ ಮಲೆಯಾಳಿ ಕತೆಯ ಅನುವಾದವೊಂದು ಡೆಕ್ಕನ್ ಹೆರಾಲ್ಡ ಪತ್ರಿಕೆಯಲ್ಲಿ ಪ್ರಕಟವಾದಾಗ, ಅದರ ವಿರುದ್ಧ ಗಲಭೆ ನಡೆದಿತ್ತು. ( ಆ ಕತೆಯ ಪಾತ್ರವೊಂದರ ಹೆಸರು ಮಹಮ್ಮದ ಎಂದಿತ್ತು.)

(೬) ತಸ್ಲೀಮಾ ನಸರೀನ್ ಅವರು ಇತ್ತೀಚೆಗೆ ಕೊಲ್ಕತ್ತಾದಲ್ಲಿ ಹಾಗು ಹೈದರಾಬಾದಿನಲ್ಲಿ ಭಾಗವಹಿಸಿದ್ದ ವೇದಿಕೆಯಲ್ಲಿ ಗಲಾಟೆಯನ್ನು ನಡೆಸಲಾಯಿತು.

ಈ ಎಲ್ಲ ಪ್ರಸಂಗಗಳು ನಡೆದ ಸಂದರ್ಭದಲ್ಲಿ ನಮ್ಮ ಬುದ್ಧಿಜೀವಿಗಳು ಅಭಿಪ್ರಾಯಸ್ವಾತಂತ್ರ್ಯದ ಪರವಾಗಿ ಒಂದು ಮಾತನ್ನೂ ಆಡಲಿಲ್ಲ. ಆ ಬಳಿಕ ವೇದಿಕೆಗಳ ಮೇಲೆ ಅಥವಾ ಪತ್ರಿಕೆಗಳ ಎದುರಿನಲ್ಲಿ ಅಭಿಪ್ರಾಯ ಸ್ವಾತಂತ್ರ್ಯದ ಚಾಂಪಿಯನ್ನರ ತರಹ ಸೋಗು ಹಾಕಿದರು.

ವಿಚಾರವಾದಿಗಳ ಬಾಯಿ ಮುಚ್ಚಿಸುವ ಇಂತಹ ಘಟನೆಗಳು ಭಾರತದಲ್ಲಿ ಏಕೆ ನಡೆಯುತ್ತವೆ, ಯುರೋಪ್ ಅಥವಾ ಅಮೇರಿಕಾದಲ್ಲಿ ಏಕೆ ನಡೆಯುವದಿಲ್ಲ?
ಕಾರಣಗಳು ಹೀಗಿರಬಹುದು:
(೧) ಯುರೋಪ್ ಮತ್ತು ಅಮೇರಿಕಾದಲ್ಲಿ ಇರುವಂತಹ ಸಂಶೋಧಕ ಹಾಗು ವೈಚಾರಿಕ ಪ್ರವೃತ್ತಿ ಭಾರತದಲ್ಲಿ ಮಾಯವಾಗಿದೆ. ಇದಕ್ಕೆ ಕಾರಣರಾದವರು ನಮ್ಮ ಮುಖವಾಡದ ಬುದ್ಧಿಜೀವಿಗಳು.
(೨) ನಮ್ಮ ಸರಕಾರಕ್ಕೆ ಇಂತಹ ಹಿಂಸಾತ್ಮಕ ಗಲಭೆಗಳನ್ನು ದಮನಗೊಳಿಸುವ ಧೈರ್ಯವಿಲ್ಲ. (ಮತಬ್ಯಾಂಕಿನ ಕಾರಣದಿಂದಾಗಿ).

(೧) ಮೊದಲನೆಯ ಕಾರಣವನ್ನು ನೋಡಿರಿ. ಅನೇಕ ವರ್ಷಗಳ ಹಿಂದೆ ಭಾರತದಲ್ಲಿ The Illustrated Weekly of India ಎನ್ನುವ ಜನಪ್ರಿಯ ಆಂಗ್ಲ ವಾರಪತ್ರಿಕೆಯು ಹೊರಡುತ್ತಿತ್ತು. ಈ ವಾರಪತ್ರಿಕೆಯಲ್ಲಿ ಯೇಸುವಿನ ಬಗೆಗೆ ಯುರೋಪಿನಲ್ಲಿ ನಡೆದ ಸಂಶೋಧನೆಯನ್ನು ಉಲ್ಲೇಖಿಸಿ ಒಂದು ಲೇಖನ ಪ್ರಕಟವಾಗಿತ್ತು. ಯೇಸುವಿನ ತಂದೆ ಒಬ್ಬ ರೋಮನ್ ನಾವಿಕ ಹಾಗು ತಾಯಿ ಒಬ್ಬ ಯಹೂದಿ ವೇಶ್ಯೆ ಎಂದು ಈ ಲೇಖನದಲ್ಲಿ ಬರೆಯಲಾಗಿತ್ತು. ಆದರೆ ಈ ಸಂಶೋಧನಾತ್ಮಕ ಲೇಖನದ ಬಗೆಗೆ ಆ ಸಮಯದಲ್ಲಿ ಎಲ್ಲಿಯೂ ಯಾವುದೇ ತರಹದ ಗಲಭೆ ನಡೆಯಲಿಲ್ಲ.  ಧಾರ್ಮಿಕ ಭಾವನೆಗಳಿಗಿಂತ ಸತ್ಯವೇ ಹೆಚ್ಚಿನದು ಎನ್ನುವ ಗ್ರಹಿಕೆ ಆ ಕಾಲದ ನೈಜ ವಿಚಾರವಾದಿಗಳಿಗೆ ಇದ್ದುದೇ ಇದಕ್ಕೆ ಕಾರಣವಾಗಿರಬಹುದು. ಈಗಿನ ಸೋಗಿನ ವಿಚಾರವಾದಿಗಳಾದರೋ ತಮ್ಮ ತರ್ಕದ ದೊಂಬರಾಟವನ್ನು ತಮಗೆ ಅನುಕೂಲವಾಗುವಂತೆ ಕುಣಿಸುತ್ತಾರೆ. ನಮ್ಮ ಈರ್ವರು ಜ್ಞಾನಪೀಠಸ್ಥರಾದ ಅನಂತಮೂರ್ತಿ ಹಾಗು ಕಾರ್ನಾಡರ ಉದಾಹರಣೆಗಳನ್ನೇ ನೋಡಬಹುದು.

‘ಟೀಪು ಸುಲ್ತಾನನ ಕನಸುಗಳು’ ಎನ್ನುವ ನಾಟಕವನ್ನು ಕಾರ್ನಾಡರು ಬರೆದಾಗ ಕೆಲವರು ಟೀಪು ಸುಲ್ತಾನನು ಮತಾಂಧನಿರಲಿಲ್ಲವೆ? ಎನ್ನುವ ಪ್ರಶ್ನೆಯನ್ನು ಕಾರ್ನಾಡರ ಎದುರಿಗೆ ಇಟ್ಟರು. ಟೀಪು ಸುಲ್ತಾನನ ಕಾಲದಲ್ಲಿ ಧರ್ಮನಿರಪೇಕ್ಷತೆಯ ಕಲ್ಪನೆಯೆ ಇರಲಿಲ್ಲವೆನ್ನುವ ಜಾಣತನದ ಉತ್ತರ ಕೊಟ್ಟು ಕಾರ್ನಾಡರು ಜಾರಿಕೊಂಡರು. ಟೀಪು ಸುಲ್ತಾನನಿಗೆ ದಕ್ಷಿಣ ಭಾರತವನ್ನೆಲ್ಲ ಇಸ್ಲಾಮೀಕರಿಸಬೇಕೆನ್ನುವ ಹೆಬ್ಬಯಕೆ ಇತ್ತು ಎನ್ನುವದು ಕಾರ್ನಾಡರಿಗೆ ಮತಾಂಧತೆಯಂತೆ ಕಂಡಿರಲಿಕ್ಕಿಲ್ಲ. ಟೀಪು ಸುಲ್ತಾನನಿಗಿಂತಲೂ ನೂರಾರು ವರ್ಷಗಳಷ್ಟು ಮೊದಲೇ ರಾಜ್ಯವಾಳಿದ ಹಿಂದೂ ರಾಜರಲ್ಲಿ ಯಾರೂ ಮುಸ್ಲಿಮ್ ಪ್ರಜೆಗಳನ್ನು ಭೇದಭಾವದಿಂದ ಕಂಡ ಉದಾಹರಣೆಗಳು ಇಲ್ಲ. ವಿಜಯನಗರದ ರಾಜನಾದ ಕೃಷ್ಣದೇವರಾಯನಂತೂ ತನ್ನ ಧರ್ಮನಿರಪೇಕ್ಷ ಆಡಳಿತೆಗೆ ಹೆಸರಾದವನು. ಕಾರ್ನಾಡರಂತಹ ಬುದ್ಧಿವಂತರಿಗೆ ಈ ಇತಿಹಾಸವೇ ಗೊತ್ತಿಲ್ಲ ಎಂದುಕೊಳ್ಳೋಣವೆ?
ಇನ್ನು ಅನಂತಮೂರ್ತಿಯವರ ಬಗೆಗೆ ಏನು ಹೇಳಲಾದೀತು? ಇವರು ಎಷ್ಟು ಎತ್ತರದಲ್ಲಿದ್ದಾರೆಂದರೆ ತಸ್ಲೀಮಾ ನಸರೀನಳು ಇವರ ಕಣ್ಣಿಗೇ ಬೀಳುವದಿಲ್ಲ!
ಒಂದು ವೇಳೆ ತಸ್ಲೀಮಾ ನಸರೀನ್ ರನ್ನು ಹಿಂದೂ ಸಂಘಟನೆಗಳು ವಿರೋಧಿಸಿದ್ದರೆ, ಅನಂತಮೂರ್ತಿ ಹಾಗು ಕಾರ್ನಾಡರಿಗೆ ಅಭಿಪ್ರಾಯ ಸ್ವಾತಂತ್ರ್ಯದ ನೆನಪು ತಕ್ಷಣವೇ ಆಗುತ್ತಿತ್ತೇನೊ?
ಈ ಸೋಗಿನ ಜ್ಞಾನಮೂರ್ತಿಗಳನ್ನು ಬಿಡೋಣ. ನಮ್ಮವರೇ ಆದ, ನಾವು ತುಂಬ ಪ್ರೀತಿಸುವ ಹಾಗು ಬೆಲೆ ಕೊಡುವ ಶ್ರೀ ಅಬ್ದುಲ್ ರಶೀದ ಹಾಗು ಶ್ರೀ ಫಕೀರ ಮುಹಮ್ಮದ ಕಟ್ಪಾಡಿಯವರು ಈ ವಿಷಯಕ್ಕೆ ಏನೆನ್ನುತ್ತಾರೆ?

ನಮ್ಮ ಜನಪ್ರಿಯ online ಪತ್ರಿಕೆ ‘ಕೆಂಡಸಂಪಿಗೆ’ಯಲ್ಲಿ ಅದರ ಸಂಪಾದಕ ಅಬ್ದುಲ್ ರಶೀದರು ತಸ್ಲೀಮಾ ಇಂತಹ ಲೇಖನ ಬರೆದದ್ದರಿಂದಲೇ ಅಮಾಯಕರ ಜೀವಹಾನಿಯಾಯಿತು ಎನ್ನುವ ತರ್ಕವನ್ನು ಮುಂದಿಟ್ಟಿದ್ದಾರೆ. (ಇಲ್ಲಿ ನೋಡಿ.) 
ತಸ್ಲೀಮಾ ಅವರು ಧರ್ಮನಿಂದೆಯನ್ನು ಅಥವಾ ಅವಹೇಳನವನ್ನು ಮಾಡಿದ್ದರೆ, ಆ ಅಂಶಗಳನ್ನು ಸ್ಪಷ್ಟೀಕರಿಸಬೇಕು. ಆದರೆ ಅವರ ಅಭಿಪ್ರಾಯ ಸ್ವಾತಂತ್ರ್ಯವನ್ನೇ ನಿರಾಕರಿಸುವದು ಸರಿಯಲ್ಲ. ಎರಡನೆಯದಾಗಿ, ಅವಳಿಂದಲೇ ಜೀವಹಾನಿಯಾಯಿತು ಎನ್ನುವದು, ಗಲಭೆಕೋರರ The Right to Riotಅನ್ನು ಎತ್ತಿ ಹಿಡಿದಂತಾಗುವದಿಲ್ಲವೆ? ಇದು ಸರಿಯೆ? ದೊಂಬಿಕೋರರು ಕಾಯದೆಯನ್ನು ಕೈಗೆತ್ತಿಕೊಂಡರೆ, ವಿಚಾರವಾದಿಗಳು ಅದನ್ನೇ ಸರಿ ಎನ್ನಬೇಕೆ?
ಕೆಂಡಸಂಪಿಗೆಯಲ್ಲಿಯೇ ಮತ್ತೊಂದು ಲೇಖನ ಬಂದಿದೆ. ಅದನ್ನು ಬರೆದ ಕನ್ನಡದ ಖ್ಯಾತ ಲೇಖಕ ಕಟ್ಪಾಡಿಯವರಂತೂ ತಸ್ಲೀಮಾ ಬರೆದ ಲೇಖನ ಕೆಟ್ಟ ಲೇಖನ ಎಂದಿದ್ದಾರೆಯೇ ಹೊರತು ಅದರಲ್ಲಿರುವ ಕೆಟ್ಟತನವು ಏನು ಎನ್ನುವದನ್ನು ತಿಳಿಸಿಲ್ಲ. 

ಅನಂತಮೂರ್ತಿ, ಗಿರೀಶ ಕಾರ್ನಾಡ, ಅಬ್ದುಲ್ ರಶೀದ ಮತ್ತು ಫಕೀರ ಮಹಮ್ಮದ ಕಟಪಾಡಿ ಇವರೆಲ್ಲರೂ  ನಮ್ಮ ಸಾರ್ವಜನಿಕ ಪ್ರಮಾಣವನ್ನು ರೂಪಿಸಬಲ್ಲ ಸಾಮರ್ಥ್ಯವಿರುವವರು.  ಸಾಂಸ್ಕೃತಿಕ ಆದರ್ಶಗಳ ರೂವಾರಿಗಳಾಗಬಲ್ಲವರು. ಇಂತಹ ವಿಚಾರವಾದಿಗಳೇ ಅಭಿಪ್ರಾಯ ಸ್ವಾತಂತ್ರ್ಯವನ್ನು ಹಾಗು ಸ್ತ್ರೀಸ್ವಾತಂತ್ರ್ಯವನ್ನು ಧಿಕ್ಕರಿಸುವದು ಸರಿಯೆ? ಇದರಿಂದ ನಮ್ಮ ಸಮಾಜದಲ್ಲಿ ಸುಧಾರಣೆಯಾಗಲು ಶಕ್ಯವಿದೆಯೆ? (ನಮ್ಮ ಸಮಾಜವೆಂದು ಹೇಳುವಾಗ, ನಾನು ಹಿಂದೂ ಹಾಗು ಮುಸ್ಲಿಮ್ ಸಮಾಜಗಳಲ್ಲಿ ಭೇದವೆಣಿಸುವದಿಲ್ಲ.)

ನಮ್ಮ ಎಲ್ಲಾ ರಾಜಕಾರಣಿಗಳೂ ಸ್ವಾರ್ಥಿಗಳೇ ಆಗಿದ್ದಾರೆ, ಸಮಯಸಾಧಕರೇ ಆಗಿದ್ದಾರೆ ಎಂದುಕೊಳ್ಳೋಣ. ಆದುದರಿಂದಲೇ ನಮ್ಮ ಸಾರ್ವಜನಿಕ ಹಾಗು ಸಾಂಸ್ಕೃತಿಕ ಆದರ್ಶವನ್ನು ಕಾಯ್ದುಕೊಳ್ಳುವದು ಈಗ ನಮ್ಮ ವೈಚಾರಿಕರ ಹೊಣೆಗಾರಿಕೆಯಾಗಿದೆ.

63 comments:

ತೇಜಸ್ವಿನಿ ಹೆಗಡೆ said...

ಕಾಕಾ,

ಪ್ರಸ್ತುತ ವಿದ್ಯಮಾನಗಳನ್ನು ಬಹು ಚೆನ್ನಾಗಿ ವಿಶ್ಲೇಷಿಸಿದ್ದೀರಿ. ಈ ಬುದ್ಧಿಜೀವಿಗಳಿಂದ ಸಾಮಾಜಕ್ಕೆ ಏನು ದೊಡ್ಡ ಕೊಡುಗೆ ಸಿಕ್ಕಿದೆಯೋ ಕಾಣೆ! ಅನವಶ್ಯಕ ವಿವಾದಗಳನ್ನು ಹುಟ್ಟಿಹಾಕುವುದು... ಇಲ್ಲಾ ಹುಟ್ಟಿರುವ ವಿವಾದಗಳಿಗೆ ತಾವೇ ಹೊಸ ಹೊಸ ಭಾಷ್ಯ ಬರೆದು, ತಮ್ಮ ಪಾಂಡಿತ್ಯ ಮೆರೆಸುವ ಚಟ. ಏನಾದರೊಂದು ಕಸರತ್ತು ನಡೆಸುತ್ತಾ ಸದಾ ಲೈಮ್‌ಲೈಟ್‌ನಲ್ಲಿರಲು ಯತ್ನಿಸುತ್ತಾರಷ್ಟೇ. ಜನಪರ ಕಾಳಜಿ ಗಣಿಸಿದೇ, ಸತ್ಯಾಪಸತ್ಯಗಳ ಅರಿವು ಇದ್ದರೂ, ಯಾವುದನ್ನು ಆಯ್ದುಕೊಂಡರೆ ತಮಗುತ್ತಮ ಎಂದು ಮಾತ್ರ ಯೋಚಿಸುತ್ತಾರೆ. ಮಹಾ ದೊಡ್ಡ ಅವಕಾಶವಾಗಿದಳು ಇವರೆಲ್ಲರೂ ಎಂದೆನಿಸುತ್ತದೆ.

sunaath said...

ತೇಜಸ್ವಿನಿ,
ಇವರು ನಿಜವಾಗಿಯೂ ಅವಕಾಶವಾದಿಗಳೇ. ತಮಗೆ ಪ್ರಶಸ್ತಿ ಸಿಗುವಂತಿದ್ದರೆ ಮಾತ್ರ ಮಾತನಾಡುತ್ತಾರೆ!

Sushrutha Dodderi said...

ಹ್ಮ್.. :(

ಈ ವಿದ್ಯಮಾನಗಳನ್ನೆಲ್ಲ ನೋಡಿ ಮನಸು ಬೇಸತ್ತು ಹೋಗಿದೆ.. ಮುಂದಾದರೂ ನೋಡೋಣ ಎಂದರೆ ಆಶಾಕಿರಣಗಲೇ ಕಾಣ್ತಿಲ್ಲ. :(

ಮನಮುಕ್ತಾ said...

ಕಾಕಾ,
ವಿಷಯವನ್ನು ತು೦ಬಾ ಕರಾರುವಕ್ಕಾಗಿ ವಿಶ್ಲೇಷಣೆ ಮಾಡಿದ್ದೀರಿ. ಬುದ್ಧಿ ಜೀವಿಗಳ ಅತಿಬುದ್ಧಿ ಪ್ರದರ್ಶನ, ರಾಜಕೀಯ ದೊ೦ಬರಾಟಗಳ ನಡುವೆ ಜನಸಾಮಾನ್ಯನ ಜೀವಕ್ಕೆ ಬೆಲೆಯೆ ಇಲ್ಲದ೦ತಾಗಿದೆ.

sunaath said...

ಸುಶ್ರುತ,
There is light at the end of the tunnel!

Subrahmanya said...

ಕಾಕಾಶ್ರೀ,
"ಕೆಲವರು" (oppartunists) ಬೇಳೆ ಬೇಯಿಸಿಕೊಳ್ಳಲು ಮಾತ್ರ ಮಾತನಾಡುತ್ತಾರೆ. ಇದಕ್ಕೆ ತಸ್ಲೀಮಾ ಕೂಡ ಹೊರತಲ್ಲ ಎಂದು ಅನಿಸಿಕೆ. ಲೇಖನ ಸಕಾಲಿಕ ಮತ್ತು ಮಜಬೂತಾಗಿದೆ.
೧) ಮಾಜಿ ಪ್ರಧಾನಿಯೊಬ್ಬರು ಇದರಲ್ಲಿ ಭಾಗಿಗಳೇ ..?? ಗೊತ್ತಿಲ್ಲ. ಇರಲಿ.., ಆ ಪತ್ರಿಕೆಗೆ ,ಅದರ ಹಿಂದಿನ ಸಂಪಾದಕರು ಗುಡ್ ಬೈ ಹೇಳಿ ಹೊರಟಾಗ ’ಸಂ’ ಗಳ ಹಿಂದೆ ಅವರ ಹಿಂಡೂ ಹೊರಟು ಹೋಯಿತು. ಅವತ್ತಿಗೆ ಅದೊಂದು ’ಬಿಗ್ ಬ್ಲೊ’ ಆ ಪತ್ರಿಕೆಗೆ. ಅರ್ಜೆಂಟಾಗಿ recover ಆಗಬೇಕಿತ್ತು ಅವರಿಗೆ..ಅದಕ್ಕೆ ಸಿಕ್ಕಿದ್ದು ಈ ಲೇಖನ, ಸಕ್ಕತ್ ಪ್ರಚಾರ ಮತ್ತು ಒಂದಷ್ಟು ಒದೆ..! ಇದೂ ಇರಬಹುದಲ್ಲವೆ ?? ಜೀವಹಾನಿ, ಆಸ್ತಿಹಾನಿ ಮಾಡಿದ್ದು ಯಾರನ್ನು ಮೆರೆಸಲು? ಕೆಲವು ಸನ್ಮಾನ್ಯರು ಇಂತಹ ವಿಷಯಗಳಲ್ಲಿ ಸೊಲ್ಲೆತ್ತುವುದಿಲ್ಲ.., ಅವರ black market ಕುಸಿಯಬಹುದೆಂಬ ಭಯವಿರಬಹುದೆ ??

೨) ಶೇಕಡಾ ನೂರು ನಿಜ. ವೈಚಾರಿಕತೆ ಹಾಗು awareness ನಾವೇ ರೂಡಿಸಿಕೊಳ್ಳುವುದು ಜಾಣತನ...., ರಾಜಕಾರಣಿಗಳಿಂದ ನಿರೀಕ್ಷೆ ಮಾಡುವುದು ತಪ್ಪು..ತಪ್ಪು.
ಏಕೆಂದರೆ ಅವರಲ್ಲಿ ಕೆಲವರು ಮುಂದಿನ ಜಲ್ಮದಲ್ಲಿ "ಏನೇನೋ" ಆಗಿ ಹುಟ್ಟುವವರಿದ್ದಾರಲ್ಲ ..! . ’ಜ್ಞಾನಿ’ಗಳು ತಮಗೆ ಅನುಕೂಲವಾಗುವಂತಹ, ಪರಾಕು ಸಿಗುವಂತಹ ಸಮಯಕ್ಕೆ ಕಾದು ಚೆನ್ನಾಗಿ ’ಬಡಿಯುತ್ತಾರೆ’. ಕೆಂಡಸಂಪಿಗೆಯವರು , ಹಾಸನದಲ್ಲಿ ಯಾರಿಂದ ದೊಂಬಿಯಾಯಿತು ಎಂದು ತಿಳಿದು ತಸ್ಲೀಮಾರನ್ನು ದೂಷಿಸಿದ್ದರೆ ಸರಿಯಾಗುತ್ತಿತ್ತು.
ಎಲ್ಲಾ ಒಂದೇ...ಬಿಡಿ ಕಾಕ..

Narayan Bhat said...

ಸಮಾಜಕ್ಕೆ ಮಾದರಿಯಾಗಬೇಕಾದವರು ತಮ್ಮ ತಮ್ಮ ವೈಯಕ್ತಿಕ ಕಾರಣಗಳಿಗಾಗಿ/ಲಾಭಗಳಿಗಾಗಿ, ತಮ್ಮ ಪ್ರಭಾವದಿಂದ ಸಮಾಜವನ್ನು ತಪ್ಪುದಾರಿಗೆ ಎಳೆಯುತ್ತಿರುವುದನ್ನು ಸಾತ್ವಿಕರು ಕೈಕಟ್ಟಿ ಕುಳಿತು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಣ್ಣು ತೆರೆಸುವ ಲೇಖನ..ಕೃತಜ್ಞತೆಗಳು.

sunaath said...

ಮನಮುಕ್ತಾ,
ಸ್ವಾರ್ಥಿ ನಾಗರಿಕತೆ ಇರುವವರೆಗೆ ಇದು ಸಹಜವೇ. ಇಂತಹ ನಾಗರಿಕತೆ ಹೋದೀತು ಎಂದು ಆಶಿಸೋಣ.

sunaath said...

ಪುತ್ತರ್,
ಪರದೆಯ ಹಿಂದಿನ ಕತೆ ಯಾರಿಗೆ ಗೊತ್ತು? ಒಟ್ಟಿನಲ್ಲಿ, ಗಲಭೆಯಾಗಲು ಬಿಡಬಾರದು. ಗಲಭೆಗೆ ರಾಜಕಾರಣಿಗಳ ಕುಮ್ಮಕ್ಕು ಇದ್ದರೆ ಇದು ಕಷ್ಟ!
-ಕಾಕಾಶ್ರೀ

sunaath said...

ನಾರಾಯಣ ಭಟ್ಟರೆ,
Indian society ಮತ್ತು Indian polity ಇಂದು ಚೂರು ಚೂರಾಗಿ ಹೋಗಿದೆ. ಎಲ್ಲರಿಗೂ ಅವರದೇ ಹಿತಾಸಕ್ತಿಗಳು. "ಸಬ ಕೊ ಸನ್ಮತಿ ದೇ ಭಗವಾನ್!" ಅಂತ ಭಜನೆ ಮಾಡುತ್ತ ಕೂಡಬೇಕಷ್ಟೆ.

ಸಾಗರಿ.. said...

ಕಾಕಾ
ನಮ್ಮ ದೆಶದಲ್ಲಿ ನಾವು ಧರ್ಮ ನಿರಪೇಕ್ಷರೇಂದೆನಿಸಿಕೊಳ್ಳ ಬೇಕಾದರೆ ಅನ್ಯ ಧರ್ಮೀಯರು ನಮ್ಮ ಭಾವನೆಗಳ ಮೇಲೆ ನಡೆಸುವ ಅತ್ಯಾಚಾರ, ಅವಮಾನಗಳನ್ನೆಲ್ಲಾ ಸಹಿಸಿಕೊಂಡು ಇತರರು ಆಡುವ ಆಟಗಳನ್ನೆಲ್ಲಾ ಸರಿ ಎಂದು ಸುಮ್ಮನಿದ್ದರಾಯಿತು. ಇಲ್ಲದಿದ್ದರೆ ಮೂಲಭೂತವಾದಿ ಎಂದು ನಾಮಕರಣ ಮಾಡುತ್ತಾರೆ. ನಮ್ಮಲ್ಲಿ ಅನಂತ ಮೂರ್ತಿಯವರಂತ ಅತೀ ಬುದ್ಧಿವಂತರು ಅಧಿಕವಾಗಿರುವುದೇ ಇದಕ್ಕೆಲ್ಲಾ ಕಾರಣ.
ಈ ಬರಹಕ್ಕೆ ತುಂಬಾ ಧನ್ಯವಾದಗಳು

ಸೀತಾರಾಮ. ಕೆ. / SITARAM.K said...

ಲೇಖನದ ಹರವು ಆಳವಾಗಿ ವಿಸ್ಕೃತವಾಗಿದೆ. ರಾಜಕೀಯ ಪ್ರೇರಿತ ಸ್ವಾರ್ಥಸಾಧನೆಗಾಗಿನ ನಾಟಕಗಳು ಸಾರ್ವಜನಿಕ ಅಸ್ತಿ ಪಾಸ್ತಿ ಮತ್ತು ಜೀವ ಹಾನಿ ಮಾಡುತ್ತಿರುವದಲ್ಲದೆ ಕೆಟ್ಟ ಸ೦ಪ್ರದಾಯವನ್ನು ಹುಟ್ಟು ಹಾಕುತ್ತಿರುವದು ನಮ್ಮ ದೇಶದಲ್ಲಿ ಹೊಸದೇನಲ್ಲ- ಇದೂ ಇರಬಹುದು.
ಇನ್ನು ಬುಧ್ಧಿ ಜೀವಗಳ ಬಗ್ಗೆ ಮಾತಾಡುವದಕ್ಕಿ೦ತ ಮಾತಾಡದಿದ್ದರೇ ಒಳ್ಳೇಯದು. ಅವರಿ೦ದ ಜ್ಞಾನಪೀಠದ ಮರ್ಯಾದೆ ಹೋಗಿದೆ. ಮುಖವಾಡದ ಜೀವನ ಅವರಿಗೆ ಇನ್ನು ಹೇಸಿಗೆ ಬ೦ದಿರದುದೆ ನನ್ನ ಅಶ್ಚರ್ಯದ ವಿಷಯ,
ಲೇಖನ ಸೂಕ್ತ ಹಾಗೂ ಮಾರ್ಮಿಕವಾಗಿದೆ. ಅದರೇನು ಮಾಡುವದು ದೊರೆಗಳೂ ಮತ್ತು ಬುದ್ಧಿಜೀವಿಗಳು ದಡ್ಡುಗಟ್ಟಿದ್ದಾರೆ.

sunaath said...

ಸಾಗರಿ,
ನಮ್ಮ ಸಮಾಜವು ಎಚ್ಚರಗೊಳ್ಳುವವರೆಗೆ,ಸ್ವೇಚ್ಛಾಪ್ರಭುತ್ವಕ್ಕೆ ಕೊನೆ ಇಲ್ಲ.
ನಿಮ್ಮ blogನಲ್ಲಿ ಪ್ರತಿಕ್ರಿಯಿಸಲು ಅನೇಕ ಸಲ ಪ್ರಯತ್ನಿಸಿದೆ.
ಆದರೆ comment box ಏಕೆ ಬರುತ್ತಿಲ್ಲ?

sunaath said...

ಸೀತಾರಾಮರೆ,
‘ದಾರಿ ಯಾವುದಯ್ಯಾ ವೈಕುಂಠಕೆ?’ ಎಂದು ನಾವೂ ಸಹ ಹಾಡುತ್ತ ಕೂತಿರಬೇಕಾಗಿದೆ, ಅಲ್ಲವೆ?

MD said...

ಸುನಾಥ್ ಸರ್,
ಎಲ್ಲೆಲ್ಲೂ ಅದೇ ವಿಷಯದ ಬಗ್ಗೆ ವಿಷದವಾಗಿ ಚರ್ಚಿಸೆ ವಿಷಣ್ಣರಾಗಿರುವುದು ಇಲ್ಲವೇ ವಿಷವುಣ್ಣುವುರಾಗಿ ಉಳಿಯಬೇಕಾದ ಪರಿಸ್ಥಿತಿಯಲ್ಲಿ
ಓದಿ ಓದಿ ದೂಶಿಸಿ ಪರಾಮರ್ಶಿಸಿ ಒಪ್ಪಿಸಿ ಜಪ್ಪಿಸಿ ಸಾಕಾಗಿ ಹೋಗಿ ನಿಮ್ಮ ಬ್ಲಾಗ್ ಗೆ ನುಗ್ಗಿ ಬೇಂದ್ರೆಯವರ ಕವಿತೆಯನ್ನೋ ಶರೀಫರ ಪದವನ್ನೋ, ಇನ್ನ್ಯಾರದೋ ಬ್ಲಾಗಿನಲ್ಲಿ ರೂಮಿಯ ಕವಿತೆಯನ್ನೋ ಅಲ್ಲಾಮಾ ಇಕ್ಬಾಲರ ಗಜಲನ್ನೋ ಓದಬೇಕೆನಿಸಿತು.
ಅದನ್ನು ಹುಡುಕಿಕೊಂಡು ಹೋಗಿ ಎರಡೂ ಬ್ಲಾಗ್ ಗಳಲ್ಲಿ ಮತ್ತದೇ ವಿಷ(!)ಯದ ಮೇಲೆ ಬರವಣಿಗೆ ಕಂಡು ಮನಸ್ಸಿಗೆ ಸಹಾರಾದಲ್ಲಿ ನೀರೇ ಸಿಗದಂಥ ಸ್ಥಿತಿ.

ಕಾಕಾರ ಸಾಕು ಬಿಡ್ರಿ. ಅದೂ ಹಂಗನೂ ಆಗುತ್ತ ಹಿಂಗನೂ ಆಗುತ್ತ !
ನೀವು ಆ ದಂಡೀಗೆ ನಿಂತು ನೋಡ್ತಿದೀರಿ ನಾನು ಈ ದಂಡಿಗೆ; ಕೊನೆಗೂ ದಡಗಳೇ ಆಗುತ್ತೆವಲ್ಲ ಅನ್ನೋದು ವ್ಯಥೆ :-(

ಹೋಗ್ಲಿ ಇದನ್ನು ಓದ್ರಿ;
ನಹಿಂ ಚುನಿ ಮೈನೆ ಯೆ ಜಮೀನ್ ಜೊ ವತನ್ ಟೆಹರಿ
ನಹಿಂ ಚುನಾ ಮೈನೆ ವೊ ಘರ್ ಜೊ ಖಾಂದಾನ್ ಬನಾ
ನಹಿಂ ಚುನಾ ಮೈನೆ ವೊ ಮಜಹಬ್ ಜೊ ಮುಜೆ ಬಕ್ಷಾ ಗಯಾ
ನಹಿಂ ಚುನಿ ಮೈನೆ ವೊ ಜಬಾನ್ ಜಿಸ್ ಮೆ ಮಾ ನೆ ಬೋಲನಾ ಸಿಖಾಯಾ
ಔರ್ ಅಬ್ ಮೈ ಇನ್ ಸಬ್ ಕೆ ಲಿಯೆ ತಯ್ಯಾರ್ ಹೂಂ
ಮರನೆ-ಮಾರನೆ ಪರ್
--ಫಜಲ್ ತಬಿಶ್
I didn’t choose the country where I was born
I didn’t select my family, my clan
I was given no option to decide upon my religion
And I didn’t choose my mother tongue either
But for all of them I am ready
To KILL...
--Fazal Tabish

sunaath said...

MD,
ನೀವು ಕಳುಹಿಸಿದ ಗಝಲ್ ಯಥಾರ್ಥವಾಗಿದೆ. ಬೇರೆ ಬೇರೆ campಉಗಳಲ್ಲಿ ಹುಟ್ಟಿರುವದು, ನಿಂತುಕೊಂಡಿರುವದು ನಮ್ಮ ಇಚ್ಛೆಯಿಂದಲ್ಲ. ಸರಿಯೆ.
ಆದರೆ ಇಲ್ಲಿರುವ point ಬೇರೆಯೇ ಆಗಿದೆ.
ನಾನು ತಸ್ಲೀಮಾಳಿಗೆ ಅನುಕಂಪ ತೋರಿಸುವದು ತಪ್ಪೆ?
ಅವಳ ಹೆಸರಿನಲ್ಲಿ ದೊಂಬಿ ಆಗಿರುವದು ಸರಿಯೆ?
MD,
ನಾವು ನಿಂತುಕೊಂಡಿರುವ ದಂಡೆ ಯಾವುದೇ ಆಗಿರಲಿ, ಆದರೆ ಕುಡಿಯುತ್ತಿರುವ ನೀರು ಒಂದೇ ಗಂಗೆಯದು.

ದಿನಕರ ಮೊಗೇರ said...

ಸುನಾಥ್ ಸರ್,
ರಾಜಕಾರಣಿಗಳ ಸೋಗಲಾಡಿತನ, ದುರಾಲೋಚನೆ , ಸಮಯಸಾಧಕತನ ದ ಬಗ್ಗೆ ಬರಾತಾ ಹೋದರೆ ನಮಗೆ ನಮ್ಮ ಮೇಲೇನೆ ನಂಬಿಕೆ ಹೊರತು ಹೋಗತ್ತೆ ...... ಇತ್ತೀಚಿನ ಗಲಭೆ ಬಗ್ಗೆ ವಿಸ್ತ್ರತವಾಗಿ ಬರೆದಿದ್ದೀರಿ..... ಧನ್ಯವಾದ ನಿಮ್ಮವಿವರಣೆಗೆ.....

ಸಂದೀಪ್ ಕಾಮತ್ said...

ಖಂಡಿತ ಇದು ಯಾವುದೋ ರಾಜಕೀಯ ಪಕ್ಷದ ಕಿರಿಕ್ಕೇ...

Unknown said...

ತುಂಬಾ ಚೆನ್ನಾಗಿ ಬರೆದಿದ್ದೀರಾ.
ಅನಂತಮೂರ್ತಿ ಮತ್ತು ಗಿರೀಶ ಕಾರ್ನಾಡರ ವಿಷಯ ಬಿಡಿ. ಅವರ ಮಾತಿಗೆ ಬೆಲೆಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಅಬ್ದುಲ್ ರಶೀದ ಮತ್ತು ಫಕೀರ ಮಹಮ್ಮದ ಕಟಪಾಡಿ ಅವರ ಲೇಖನಗಳು ಆಘಾತಕಾರಿಯಾಗಿವೆ. ವಿದ್ಯಾವಂತ ಮುಸ್ಲಿಂಮ್ಮರೆ ಸುಧಾರಣೆಗೆ ಮುಂದಾಗದಿದ್ದರೆ ಹೇಗೆ? ಎಲ್ಲಿಯವರೆಗೂ ವಿದ್ಯಾವಂತ ಮುಸ್ಲಿಂಮ್ಮರು ಸುಧಾರಣೆಗೆ ಮುಂದಾಗುವುದಿಲ್ಲವೋ ಅಲ್ಲಿಯವರೆಗೂ ಗಲಭೆ, ಸಾವು, ನೋವು ತಪ್ಪಿದ್ದಲ್ಲ.

Anonymous said...

ಗಲಭೆಯಾಗುವದಕ್ಕೆ ಲೇಖನ ಒಂದು ಕುಂಟು ನೆಪವಷ್ಟೆ ! ನಮ್ಮ ದೇಶದಲ್ಲಿ ಯಾವದೇ ಮತೀಯ ಗಲಭೆಯ ಇತಿಹಾಸವನ್ನು ಕುಲಂಕೂಷವಾಗಿ ಛೇದಿಸಿ ನೋಡಿದರೆ ಗೊತ್ತಾಗುವದು ಒಂದೇ ಸತ್ಯ. ಎಲ್ಲ ಜಾತಿ ಗಲಭೆಗಳೂ engineered. ಅಕಸ್ಮಾತ್ ಆಗಿದ್ದಲ್ಲ ! "ಅಕಸ್ಮಾತ್" ಎಂದು ತೋರಿಸುವದಕ್ಕೆ ನಡೆದ ಸಣ್ಣ - ಸಣ್ಣ ಘಟನೆಗಳೂ ಕೂಡ ಇಂಜಿನೀಯರ್ಡೇ ! ನಮ್ಮ ರಾಜಕಾರಣಿಗಳು ಈ ಕೆಲಸದಲ್ಲಿ ತುಂಬಾ ಬುದ್ಧಿವಂತರು ! ಅವರಿಗೆ ದೇಶ, ಜನತೆ, ಸರ್ವಜನಿಕ ಆಸ್ತಿ ಯಾವದರ ಬಗ್ಗೆಯೂ ಚಿಂತೆ ಇಲ್ಲ. ತಮ್ಮ ರಾಜಕೀಯದ ಬೇಳೆ ಬೇಯಬೇಕು. ಅದು ಮುಖ್ಯ ! ಹಾಸನ, ಶಿವಮೊಗ್ಗೆ ಅಷ್ಟೆ ಏಕೆ, ಇಂದಿನ ಹುಬ್ಬಳ್ಳಿಯ ಘಟನೆಯೂ ಇದಕ್ಕೆ ಜೀವಂತ ಸಾಕ್ಷಿ.

ಸಾಗರಿ.. said...

ಕಾಕಾ,,
ತುಂಬಾ ಧನ್ಯವಾದಗಳು, ನನ್ನ ಕಾಮೆಂಟ್ ಸೆಟ್ಟಿಂಗಲ್ಲಿ ಸ್ವಲ್ಪ ದೋಷವಿತ್ತು. ಅದನ್ನು ಈಗ ಸರಿಪಡಿಸಿಕೊಂಡಿದ್ದೇನೆ. ಒಂದಿಬ್ಬರು ಕಾಮೆಂಟ್ಸ್ ಬರ್ಯೋಕಾಗ್ತ ಇಲ್ಲ ಎಂದಾಗ್ಲು ನನಗಿದು ಹೊಳೆದಿರಲಿಲ್ಲ. ನನ್ನ ಮಗ ಅಹನ್ ತುಂಬಾ ಚಿಕ್ಕವನು(ಒಂದು ವರ್ಷದ ನಾಲ್ಕು ತಿಂಗಳು) ಆದ್ದರಿಂದ ನನ್ನ ಹೆಚ್ಚಿನ ಎಲ್ಲಾ ಸಮಯವೂ ಅವನೊಂದಿಗೇ ಕಳೆಯಬೇಕಾಗುತ್ತದೆ. ಈ ಕಾರಣದಿಂದಾಗಿ ನನ್ನ ಬ್ಲಾಗನ್ನು ಸುಂದರವಾಗಿ ಡಿಸೈನ್ ಮಾಡಿ, ಒಳ್ಳೊಳ್ಳೆ ಛಾಯಾಚಿತ್ರದೊಂದಿಗೆ ಲೇಖನವನ್ನು ಪ್ರಕಟಿಸುವುದು ಸಾಧ್ಯವಾಗುತ್ತಿಲ್ಲ (ಬ್ಲಾಗ್ ನನಗೆ ತುಂಬಾ ಹೊಸದು, ಅದರ ಡಿಸೈನ್ ಬಗ್ಗೆ ಜಾಸ್ತಿ ತಿಳಿದಿಲ್ಲ. ಟ್ರಯಲ್ & ಎರರ್ ಗೆ ಸಮಯವಿಲ್ಲವಾಗಿದೆ.) ಕಾಮೆಂಟ್ ಬರೆಯಬೇಕೆಂದುಕೊಂಡಿದ್ದಕ್ಕೆ ಬಹಳ ಧನ್ಯವಾದಗಳು.

sunaath said...

ದಿನಕರ,
ನಮ್ಮಲ್ಲಿ ರಾಜಕಾರಣಿಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ. ಈವತ್ತಿನ ರಾಜಕೀಯವನ್ನು Political Mafia ಎಂದು ಕರೆಯಬಹುದೇನೊ?

ಮನಸಿನಮನೆಯವನು said...

'sunaath' ಅವ್ರೆ..,

ಅರ್ಥಬದ್ಧ ವಿಶ್ಲೇಷಣೆ...

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http:/manasinamane.blogspot.com

Sushma Sindhu said...

ಕಾಕಾ,
ಹಾಸನದಲ್ಲಿ ನಮ್ಮ ಮನೆಯ ಆಸುಪಾಸಿನಲ್ಲೀ ನಡೆಯುತ್ತಿರುವ ಗಲಭೆ ನೋಡುತ್ತಾ, ಪ್ರತಿದಿನವೂ ಒ೦ದು ಭಯದ ಛಾಯೆಯಡಿಯಲ್ಲಿ ಇಲ್ಲಿ ಓಡಾಡುತ್ತಿರುವ ಸ೦ದರ್ಭದಲ್ಲಿ ನಿಮ್ಮ ಈ ಲೇಖನ ಘಟನೆಯ ಎಲ್ಲಾ ಆಯಾಮಗಳ ವಿಶ್ಲೇಷಣೆಯೊ೦ದಿಗೆ ನನ್ನ ಪಾಲಿಗೆ ಹೆಚ್ಚು ಪ್ರಸ್ತುತವಾಗಿ, ಮತ್ತಷ್ಟು ಚಿ೦ತನೆಗೆ ಹಚ್ಚಿದೆ. ಇದರ ಹಿ೦ದಿರುವ ಕುಮ್ಮಕ್ಕು ಏನೇ, ಯಾವುದೇ ಆಗಿರಲಿ, ಪ್ರಜ್ಞಾವ೦ತರು ಇದನ್ನು ಖ೦ಡಿಸಲೇ ಬೇಕು. ಎಲ್ಲರಲ್ಲಿ 'ಮಾನವೀಯ' ಪ್ರಜ್ಞೆಯನ್ನು ಮೂಡಿಸುವತ್ತ ಮಾತ್ರ ಗಮನ ಹರಿಸಬೇಕು.

sunaath said...

ಸಂದೀಪ,
ರಾಜಕೀಯ ಹಸ್ತಕ್ಷೇಪವಿಲ್ಲದೆ, ಇಷ್ಟು ಶೀಘ್ರವಾಗಿ, ಇಷ್ಟು ಜನರನ್ನು ಒಟ್ಟಿಗೆ ಕೂಡಿಸಿ, ದೊಂಬಿ ಹಾಕಿಸುವದು ಅಸಾಧ್ಯ. ರಾಕೇಶ ಮಥಾಯಸರ ಅನುಮಾನ ಸರಿ ಎನ್ನಿಸುತ್ತದೆ.

sunaath said...

ಕಲ್ಯಾಣರೆ,
ನೀವು ಹೇಳುವದು ಸರಿ. ಹಿಂದೂ ಸಮಾಜದ ಸುಧಾರಣೆಗೆ, ಈ ಸಮಾಜದ ವಿದ್ಯಾವಂತರು ಹೇಗೆ ಕಾರಣೀಭೂತರದರೊ, ಮುಸ್ಲಿಮ್ ವಿದ್ಯಾವಂತರೂ ಸಹ ಪ್ರಯತ್ನ ಮಾಡಲೇ ಬೇಕು.

sunaath said...

ಅನಾಮಿಕರೆ,
ಇದು ಇಂದಿನ ಸತ್ಯ!

sunaath said...

ಗುರು-ದೆಸೆ,
ನಿಮ್ಮ ‘ಮನಸಿನ ಮನೆ’ಗೆ ಬಂದಿದ್ದೇನೆ. ನಿಮ್ಮ ರಚನೆಗಳನ್ನ ಓದಿ ಖುಶಿ ಪಟ್ಟಿದ್ದೇನೆ. ಆದರೆ, ನನ್ನ ವಯಸ್ಸಿನ ಕಾರಣದಿಂದ, ಪ್ರತಿಕ್ರಿಯೆ ನೀಡಲು ಸ್ವಲ್ಪ ಸಂಕೋಚಪಟ್ಟಿದ್ದೇನೆ, ಅಷ್ಟೆ!

sunaath said...

ಸುಷ್ಮಾ,
ಇದೂ ಒಂದು terrorism.ಹಾಗಾಗಿ ಭಾರತೀಯರೆಲ್ಲರೂ ಈಗ ಭಯದ ನೆರಳಿನಲ್ಲಿಯೇ ಬಾಳಬೇಕಾಗಿದೆ.

sunaath said...

ಸಾಗರಿ,
ಧನ್ಯವಾದಗಳು.

Keshav.Kulkarni said...

ಸುನಾಥ,

ಈ ವಿಷಯ ತುಂಬ ಸಂಕೀರ್ಣವಾಗಿದೆ. ಪೂರ್ವಗ್ರಹಗಳಿಲ್ಲದೇ ನಾವ್ಯಾರೂ ಇಂಥ ವಿಷಯಗಳನ್ನು ಬಿಡಿಸಿ ಬರೆಯಲು ಸಾಧ್ಯವೇ ಇಲ್ಲವೇನೋ!

- ಕೇಶವ

ಸುಮ said...

ನೀವೆನ್ನುವುದು ನಿಜ ಕಾಕ. ಹೀಗೆ ಯಾರದೋ ಕಾರಣಗಳಿಗೆ ನಡೆಯುವ ಗಲಭೆ ದೊಂಬಿಗಳಲ್ಲಿ ತೊಂದರೆ ಅನುಭವಿಸುವವರು ಇದಕ್ಕೆ ಸ್ವಲ್ಪವೂ ಸಂಭಂದವಿರದ ಅಮಾಯಕರು .

sunaath said...

ಕೇಶವ,
ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತೇನೆ.ನನ್ನ ಬರಹದಲ್ಲೂ ಸಹ
ಪೂರ್ವಾಗ್ರಹಪೀಡಿತ ವಿಚಾರಗಳು ಇರಬಹುದು. ಆದರೆ ಭಿಡೆಗೆ ಒಳಗಾಗಿ ಮೌನ ವಹಿಸುವದರಲ್ಲಿ ಅರ್ಥವಿಲ್ಲ.
ನೀವು ಹೇಳಿದಂತೆ ವಿಷಯ ಸಂಕೀರ್ಣವಾಗಿದೆ. ಆದುದರಿಂದ ಭಾರತೀಯ ಸಮಾಜದ ಎಲ್ಲ ಮುಖಗಳನ್ನೂ ಪರೀಕ್ಷಿಸುವ ಒಂದು comprehensive analysis ಅವಶ್ಯವಿದೆ ಎಂದು ಅನಿಸುತ್ತದೆ.

sunaath said...

ಸುಮಾ,
ಇದನ್ನು ಸರಿಪಡಿಸಲು ಸಾಧ್ಯವೆ?

ವಿನಾಯಕ ಕೆ.ಎಸ್ said...

ಲೇಖನದ ಹಿಂದಿನ ವಾಸ್ತವ ಏನೇ ಇರಬಹುದು, ನಿಮ್ಮ ವಿಶ್ಲೇಷಣೆ ಅದ್ಭುತವಾಗಿ ಮೂಡಿ ಬಂದಿದೆ. ನಿಮ್ಮಷ್ಟೆ ಸಾಮಾಜಿಕ ಕಾಳಜಿಯನ್ನು ದೇವರು ಮಾಧ್ಯಮದಲ್ಲಿ ಕೆಲಸ ಮಾಡುವ ಮಂದಿಗೂ ಕರುಣಿಸಲಿ, ಪ್ರಸಾರ ಸಂಖ್ಯೆ ಹೆಚ್ಚಳ, ಟಿಆರ್‌ಪಿ ಏರಿಕೆಗಾಗಿ ಸಮಾಜದಲ್ಲಿ ಕಿಚ್ಚು ಹಚ್ಚಿ ಜೀವ ಹಾನಿ ಮಾಡುವ ವಿಚಾರಗಳನ್ನು ಕೈಗೆತ್ತಿಕೊಳ್ಳದಿರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮಾತ್ರ ಸಾಮಾನ್ಯರಾದ ನಮ್ಮ ಪಾಲಿಗೆ ಉಳಿದಿದೆ ಅನ್ನಿಸುತ್ತಿದೆ ನನಗೆ. ಉತ್ತಮ ಲೇಖನಕ್ಕಾಗಿ ಧನ್ಯವಾದಗಳು...
ವಿನಾಯಕ ಕೋಡ್ಸರ

sunaath said...

ವಿನಾಯಕರೆ,
ಈ ಪ್ರಸಂಗದ ಅನೇಕ ಮುಖಗಳಲ್ಲಿ ಕೆಲವನ್ನಾದರೂ ತಿಳಿದು, ಚಿತ್ರಿಸಲು ಪ್ರಯತ್ನ ಪಟ್ಟಿದ್ದೇನೆ.ನೀವು ಒಪ್ಪಿಕೊಂಡಿದ್ದೀರಿ.
ಧನ್ಯವಾದಗಳು

ಬಿಸಿಲ ಹನಿ said...

ಸುನಾಥ್ ಸರ್,
ತಸ್ಲಿಮಾ ಲೇಖನದ ಬಗ್ಗೆ ಆನಂತರದ ಪರಿಣಾಮಗಳ ಬಗ್ಗೆ ಮತ್ತು ಅದಕ್ಕೆ ನಮ್ಮ ಬುದ್ಧಿ ಜೀವಿಗಳ ನೀರಸ ಪ್ರತಿಕ್ರಿಯೆಯ ಬಗ್ಗೆ ತುಂಬಾ ಕೂಲಂಕುಷವಾಗಿ ವಿವರಿಸಿದ್ದೀರಿ. ತಸ್ಲೀಮಾಳ ವಿಚಾರಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಅದನ್ನೊಂದು ದೊಡ್ಡ ಕೋಮು ಗಲಭೆಗೆ ಕಾರಣ ಮಾಡಿಟ್ಟ ಮೂರ್ಖರಿಗೆ ಹಾಗು ಅದರ ಹಿಂದೆ ಇರುವ ರಾಜಕೀಯ ಹಿತಾಸಕ್ತಿಗೆ ನನ್ನ ಧಿಕ್ಕಾರವಿದೆ. ಸತ್ಯ ಹೇಳಿದ್ದಕ್ಕೆ ತಾನೆ ಇಷ್ಟೆಲ್ಲ ಅನಾಹುತ ನಡೆದಿದ್ದು? ಬಹುಶಃ ಮೇಲಿಂದ ಮೇಲೆ ತಮ್ಮ ಮೇಲೆ ದಾಳಿಗಳಾಗುವದನ್ನು ನೋಡಿ ಬೇಸತ್ತು ಹೋಗಿ ಅವರು “ಎಂದಿಗೂ ಸತ್ಯವನ್ನು ಹೇಳಬೇಡ..” ಎನ್ನುವ ಕವನವನ್ನು ಹೊಸೆದಿರಬಹುದೆ? ವೇದಿಕೆಯ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ಬುದ್ಧಿ ಜೀವಿಗಳು ನಿಜ ಜೀವನದಲ್ಲಿ ಇಂತಹ ಘಟನೆಗಳು ನಡೆದಾಗ ಬಾಯಿಮುಚ್ಚಿಕೊಂಡು ಕುಳಿತಿರುವದು ನಿಜಕ್ಕೂ ಅಸಹ್ಯಕರವೆನಿಸುತ್ತದೆ. ಇನ್ನು ಮುಸ್ಲಿಂ ಲೇಖಕರಾದ ಅಬ್ದುಲ್ ರಶೀದ್ ಮತ್ತು ಕಟ್ಪಾಡಿಯವರ ಲೇಖನಗಳು ಅವರ ಮತಾಂಧತೆಯನ್ನು ಎತ್ತಿ ತೋರಿಸುವಂತಿವೆ.

ಚುಕ್ಕಿಚಿತ್ತಾರ said...

ಈ ದುರ್ಬುದ್ಧಿಜೀವಿಗಳು ಅಥವಾ ವಿಚಾರವ್ಯಾಧಿಗಲಿ೦ದ ಹೆಚ್ಚು ಏನನ್ನ ನಿರೀಕ್ಶೆ ಮಾಡೋಣ ಕಾಕ..
ಹೇಳುವುದು ಒ೦ದು.. ಮಾಡುವುದು ಏನೂ ಇಲ್ಲ....!!!ಒ೦ದು ರೀತಿಯಲ್ಲಿ ಜನರ ದಾರಿತಪ್ಪಿಸುವ ಕೆಲಸವೊ೦ದನ್ನು ಮಾತ್ರಾ ಸಾದರದಿ೦ದ ಮಾಡುತ್ತಿದ್ದಾರೆ...!!!
ಆಶಾಢಬೂತಿಗಳು ಎ೦ಬ ಮತ್ತೊ೦ದು ಹೆಸರು ಇವರಿಗೆ ಸರಿಹೊ೦ದಬಹುದು....!!!

sunaath said...

ಉದಯ,
ತಸ್ಲಿಮಾರ ಕವನಗಳನ್ನು ಅನುವಾದಿಸಿದವರು ನೀವು. ಅವರ ಬಗೆಗೆ ಹೆಚ್ಚು ಗೊತ್ತಿರುವವರು ನೀವು. ನಿಮಗೆ ಹೇಳುವದೇನಿದೆ?
ಕನ್ನಡದಲ್ಲಿಯೂ ಸಾಕಷ್ಟು ಉದಾರವಾದಿ ಹಾಗು ಸ್ತ್ರೀವಾದಿ ಸಾಹಿತಿಗಳಿದ್ದಾರೆ. We welcome them.
ತಸ್ಲಿಮಾಳಿಗೆ ಹೀಗಾಗುತ್ತಿರುವದು ವ್ಯಥೆಯ ಸಂಗತಿ.

sunaath said...

ಚುಕ್ಕಿ,
ನೀವು ವರ್ಣಿಸಿದಂತೆ, ದುರ್-ಬುದ್ಧಿಜೀವಿಗಳು ಇವರು.
ಇವರು ನಮ್ಮ ಸಮಾಜದ ಚಿಂತನೆಯನ್ನು dominate
ಮಾಡುತ್ತಿರುವ ಅವಧಿಯಲ್ಲಿ ಸುಧಾರಣೆ ಸಾಧ್ಯವೆ?

Karthik Kamanna said...

adbhta mattu echchrikeya kareghante baarisuva lekhana. innaadaroo sogalaadigalige buddhi barali.
http://bhringasangama.blogspot.com/2010/01/blog-post.html

sunaath said...

ಕಾರ್ತೀಕ,
ನಮ್ಮ ಬುದ್ಧಿಜೀವಿಗಳಿಗೆ ಬುದ್ಧಿ ಕೊಡು ಎಂದು ದೇವರಲ್ಲಿ ಪ್ರಾರ್ಥಿಸಬೇಕಾಗಿದೆ!

umesh desai said...

ಕಾಕಾ ಈ ವಿಷಯ ಹಾಗೂ ಇದಕ್ಕೆ ಸಂಭಂಧಪಟ್ಟ ವಿಷಯಗಳ ಬಗ್ಗೆ ಸಂಪದಾ ದಲ್ಲಿ ಬಿಸಿ ಬಿಸಿ ಚರ್ಚಾ ಆದ್ವು ಏನ ಅನ್ರಿ
ಇದು ನಾವು ಮಾಡಿಕೊಂಡ ಉಪದ್ವ್ಯಾಪಿತನ ಅದ ಅವಾಗ ಅವರನ್ನು ಒಳಗ ಬಿಟಕೊಂಡು ತಪ್ಪು ಮಾಡಿದ್ದೂ ಸಾಕಾಗದ
ಈಗ ಈ ಬುದ್ಧಿಜೀವಿ ಎಂಬೋ ಬಿಳಿಆನಿ ಸಾಕಲಿಕ್ಕ ಹತ್ತೇವಿ...

sunaath said...

ಉಮೇಶ,
ಬುದ್ಧಿಜೀವಿ ಎನ್ನುವಾನೆ
ಮೆದ್ದು ಎಲ್ಲ ರಾಜ್ಯಧನವ
ಲದ್ದಿ ಹಾಕುತಿರಲು ಜನರು ಕೋಪಗೊಂಡರು
ಒದ್ದು ಅದನ ಕೆಳಗೆ ಕೆಡವಿ
ಗುದ್ದಿ ಅದರ ಹಲ್ಲು ಮುರಿಯೆ
ಸುದ್ದಿಯಾಯಿತೆಂದು ಆನೆ ಖುಶಿಯ ಪಟ್ಟಿತು.

shivu.k said...

ಸುನಾಥ್ ಸರ್,

ನೀವು ಬರೆದ ಲೇಖನವನ್ನು ಓದಿದಾಗ ನಮ್ಮ ಬುದ್ದಿಜೀವಿಗಳು ಎಂಥವರು ಎನ್ನುವುದು ಗೊತ್ತಾಗುತ್ತದೆ. ಇಡೀ ವಿಚಾರವನ್ನು ಲೇಖನದಲ್ಲಿ ಚೆನ್ನಾಗಿ ಅವಲೋಕಿಸಿದ್ದೀರಿ. ಗಲಭೆಯ ವಿಚಾರವಾಗಿ ಪತ್ರಿಕೆಗಳಿಗಿಂತ[ಮಾದ್ಯಮಗಳ ವಿಚಾರವಾಗಿ ತೇಜಸ್ವಿನಿ ಹೆಗಡೆಯವರ ಬ್ಲಾಗಿನಲ್ಲಿ ನನಗಾದ ಅನುಭವವನ್ನು ಪ್ರತಿಕ್ರಿಯಿಸಿದ್ದೇನೆ.]ನೀವು ವಿವರವಾಗಿ ಬರೆದಿರುವುದರಿಂದ ಎಷ್ಟು ವಿಚಾರಗಳು ಗೊತ್ತಾಗುತ್ತವೆ. ಇಂಥವೆಲ್ಲಾ ನಮ್ಮ ಪತ್ರಿಕೆಯಲ್ಲಿರುವ ಬುದ್ದಿಜೀವಿಗಳು, ಅಥವ ಸಾಹಿತ್ಯದ ಬುದ್ದಿಜೀವಿಗಳಿಗೆ ಗೊತ್ತಿಲ್ಲವೇ? ಅಥವ ಗೊತ್ತಿದ್ದರೂ ಹೇಳಲಾಗದ ಮಟ್ಟಕ್ಕೆ ಬಂದುಬಿಟ್ಟಿದ್ದಾರಾ? ಹೇಳಲಾಗದಿದ್ದಕ್ಕೂ ಯಾವುದೋ ಒಂದು ಮರ್ಜಿ ಕಾರಣವಿರಬಹುದೇ? ಹಾಗಾದರೆ ಯಾರನ್ನು ವಿಚಾರವಂತರೆನ್ನುವುದು?
ನಿಮ್ಮ ಲೇಖನ ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಮೂಡಿಸುತ್ತದೆ.

ಜಲನಯನ said...

ಸುನಾಥ್ ಸರ್.....ನನ್ನ ಮೊದಲ ಪ್ರಶ್ನೆ...ಇತಿಹಾಸ ಬಿಡಿ..ಅದನ್ನು ಹಿನ್ನಡಸಲು ಸಾಧ್ಯವಿಲ್ಲ...ಮಹತ್ವಾಕಾಂಕ್ಷಿಗಳಿಗೆ ಮತ ಧರ್ಮ ಒಮ್ದು ನೆಪವಷ್ಟೇ...ಪ್ರಸ್ತುತ ಪರಿಸ್ಥಿತಿಯಲ್ಲಿ...ಬೆಂಕಿ ಹಚ್ಚುವ ಕೆಲಸ ಯಾರೇ ಮಾಡಿದರೂ ಖಂಡನಾರ್ಹ...ಇಲ್ಲಿ ನಾನು ಲೇಖಕರ ಸಮಾಜದ ಆರೋಗ್ಯ ಕಾಪಾಡುವ ಹೊಣೆಗಾರಿಕೆ ಪ್ರಧಾನವಾಗಬೇಕೇ ಹೊರತು ಜನಮನದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡುವ ತಮ್ಮನ್ನು ಯಶೋಶಿಖರಕ್ಕೆ ಕೊಂಡೊಯ್ಯಲೆಂದು ಬರೆಯುವ ಲೇಖನವನ್ನೂ ನಾನು ಒಪ್ಪುವುದಿಲ್ಲ...ಯಾಕಂದರೆ ನಮ್ಮ ಉದ್ರೇಕಿತ ಸಮಾಜದ ಮನಸ್ಥಿತಿಯಲ್ಲಿ ಸಾಂತ್ವನ ನೀಡುವ ಲೇಖನ ಬರಬೇಕೇ ಹೊರತು ಕೆರಳಿಸುವ ಲೇಖನಗಳಲ್ಲ...ಲೇಖನಗಳಿಂದ ಸಮಾಜ ಸುಧಾರಕ ಕ್ರಂತಿಕಾರಿ ಬದಲಾವಣೆ ತರುವ ವಸ್ಥುಸ್ಥಿತಿಯೂ ಇಲ್ಲ...ಇನ್ನು..ಇಂತಹ ಬಹು ಸೂಕ್ಷ್ಮ ಸಮಾಜದ ಸ್ಥಿತಿಯಲ್ಲಿ...ಬಹಳ ಶ್ರಮಪಡದೇ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು, ಧರ್ಮಗುರುಗಳು, ಸೋಕಲ್ಡ್ ಬುದ್ಧಿ ಜೀವಿಗಳು....ಕೊಲೆಗಡುಕರಿಗಿಂತ ಕಡಿಮೆಯೇನಲ್ಲ....ಮತಾಂಧತೆ ಎಲ್ಲಿ ಮೂಡಿದರೂ ...ಅಪಾಯವೇ...ಮೂಲ ಮತ ಪ್ರವರ್ತಕರು ಎಂದೂ ಇಂತಹ ಕೃತ್ಯವಿರಲಿ, ಭಾವನೆಯನ್ನೂ ವ್ಯಕ್ತಗೊಳಿಸಿಲ್ಲ ಎನ್ನುವುದೇ ನನ್ನ ನಂಬಿಕೆ ಮತ್ತು ಗ್ರಹಿಕೆ...ಇನ್ನು ನಮ್ಮ ಬುದ್ಧಿಜೀವಿಗಳು ಬುದ್ಧಿಯಿದ್ದು ಹೇಳಿಕೆನೀಡ್ತ್ತಾರೋ...ಇಲ್ಲ ಏನು ಮಾಡಬೇಕೆಂದು ತೋಚದೇ ...ಕಕಾಬಿಕ್ಕಿ ಯಾಗುತ್ತರೋ ತಿಳಿಯದು.....
ಎಲ್ಲದಕ್ಕೂ ಮುಖ್ಯ...ಯಾರೇ ದೊಂಬಿ..ಗಲಭೆ ಮಾಡುವವರು ಒಮ್ಮೆ....ಗಲಭೆ ನಡೆಯುತಿರುವ ಪಟ್ಟಣದ ಇನ್ನೊಂದು ಸ್ಥಾನದಲ್ಲಿ ತನ್ನ ಅಪ್ತರು ಇದ್ದಾರೆ ಎನ್ನುವುದನ್ನು ನೆನೆಪಿಸಿಕೊಡರೂ ಸಾಕು....ಪ್ರಾಯಶಃ ಗಲಭೆ ನಡೆಯದು....
ಬಹಳ ವಿಚಾರವಂತ...ಮಂಥನದ ..ವಿಷಯ ಮುಂದಿಟ್ಟಿರಿ...ಧನ್ಯವಾದ...

Pavan said...

ಸುನಾಥ್ ಅವರೇ ತಮ್ಮ ಈ ಲೇಖನ ತುಂಬಾ ತಾರ್ಕ ಹಾಗು ಸತ್ಯಾಂಶ ಆಧಾರಿತವಾಗಿದೆ. ಇದು ಸತ್ಯಕ್ಕೆ ತುಂಬಾ ಹತ್ತಿರವಾದ್ದರಿಂದ ಇನ್ನು ಮತ್ತಷ್ಟು ವಿಶ್ವಾಸಾರ್ಹ ವಾಗಿದೆ. ರಾಜಕಾರಣಿಗಳ ಅವಕಾಶವಾದಿ ಸ್ವಭಾವ ಸಮಾಜದ ಈ ಸ್ಥಿತಿಯನ್ನು ತಿದ್ದಲು ಬಿಡುವುದಿಲ್ಲ. ಈ ಬುಧಿಜೀವಿಗಳ ತರ್ಕವೂ ಕೂಡ ಇದೆ ರೀತಿ rediculous ಇರುವುದು ಖಂಡಿತ ಯಾಕೆಂದರೆ ಅವರಿಗೆ ಅದೇ identity . ಅವರು ಸರಿಯಾದ ದ್ರಿಷ್ಟಿಯಲ್ಲಿ ವಿಚಾರ ಮಾಡುವುದಾದರೆ ಅವರಲ್ಲಿ ಮತ್ತೆ ಬೇರೆಜಾಣರಲ್ಲಿ ವ್ಯತ್ಯಾಸವೇನು? ಬಹುಶ ಈ ಪ್ರಶ್ನೆಯೇ ಅವರಿಗೆ ಬುಧ್ಧಿಜೀವಿ ಆಗಲು ಪ್ರಚೋದನೆ.

sunaath said...

ಶಿವು,
ನಮ್ಮ ಬುದ್ಧಿಜೀವಿಗಳಲ್ಲಿ ಬುದ್ಧಿ ಇದೆ, ಆದರೆ ವಿವೇಕವಿಲ್ಲ!

sunaath said...

ಜಲನಯನ,
ಭಾರತೀಯ ಸಮಾಜದಲ್ಲಿ ಅನೇಕ ಹಿತಾಸಕ್ತಿಗಳಿವೆ. ನಮ್ಮ ಬುದ್ಧಿಜೀವಿಗಳು ಹಾಗು ಬುದ್ಧಿಯಿಲ್ಲದ ಜೀವಿಗಳು ಎಲ್ಲರೂ ವಿಭಿನ್ನ ಹಿತಾಸಕ್ತಿಗಳಲ್ಲಿ ಹಂಚಿಹೋಗಿದ್ದಾರೆ. ಇದರರ್ಥ ಅವರೆಲ್ಲರೂ ಸ್ವಾರ್ಥಿಗಳೇ ಅಂತಲ್ಲ. They have different perceptions of truth and social good.

ನೀವು ಹೇಳುವದು ಸರಿ. ನಮ್ಮಲ್ಲಿ ಈಗ ಉದ್ರೇಕಕಾರಿ ಭಾಷಣಗಳಿಗಿಂತ ಸಮಾಧಾನಕಾರಿ ಹೇಳಿಕೆಗಳ ಅವಶ್ಯಕತೆ ಇದೆ. ಆದರೆ ಬುದ್ಧಿಜೀವಿಗಳು, ಉದಾಹರಣೆಗೆ ನಮ್ಮ ಅಜ್ಞಾನಮೂರ್ತಿಗಳು, plural culture ಎಂದು ಭಾಷಣ ಬಿಗಿಯುತ್ತ, ನಮ್ಮ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ.

ಭಾರತೀಯ ಸಮಾಜವು ಸುಧಾರಿಸುವ ಅವಶ್ಯಕತೆ ಇದೆ. ಇದು ಸುಧಾರಿಸಬೇಕಾದರೆ, ಸತ್ಯವನ್ನು ನಿರ್ಭಿಡೆಯಿಂದ ಹೇಳುವ ವ್ಯಕ್ತಿಗಳು ಬೇಕು. ತಾನು ಯಾವುದೇ ಸಮಾಜದಲ್ಲಿ ಹುಟ್ಟಿರಲಿ, ಎಲ್ಲ ಸಮಾಜಗಳಲ್ಲಿರುವ ದೋಷಗಳನ್ನು ತೋರಿಸಿ, ಸುಧಾರಣೆಗೆ ಸಲಹೆ ಕೊಡುವ ನಿಷ್ಪಕ್ಷಪಾತಿ ವ್ಯಕ್ತಿ ಬೇಕು. ಅಂತಹ ವ್ಯಕ್ತಿಯೊಬ್ಬರು ಇದ್ದರು. ಅವರೇ ಶಿವರಾಮ ಕಾರಂತ. ಈಗಂತೂ ಯಾರೂ ಇಲ್ಲ. ಇದು ನಮ್ಮ ಸಮಾಜದ ದುರ್ದೈವ.

ಇನ್ನು ರಾಜಕಾರಣಿಗಳಂತೂ ಓಟಿನ ಬೇಟೆಗಾರರು!

sunaath said...

ಪವನ,
ಸತ್ಯಕ್ಕೆ ತುಂಬ ಹತ್ತಿರ ಎಂದರೆ, ಇದು ಸತ್ಯವಲ್ಲ ಎಂದಂತಾಯ್ತು! (By how many points, I am missing the complete truth?)
ಒಟ್ಟಿನಲ್ಲಿ ನಿಮ್ಮ frank ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ
ಧನ್ಯವಾದಗಳು.

ಮನಸು said...

ಸುನಾಥ್ ಸರ್,
ಸಮಾಜ ಹಾಳು ಮಾಡಲೆಂದೇ ಹುಟ್ಟಿರುವವರನ್ನ ಏನು ಮಾಡೋದು ತಿಳಿಯದು ಆದರೂ ನಮ್ಮ ಜನ ಧರ್ಮದ ಹೆಸರಿನಲ್ಲಿ ಸಮಾಜದ ಒಳಿತನ್ನು ಕೆಡೆಸುತ್ತಲಿದ್ದಾರೆ ಇದು ಮಾತ್ರ ಬೇಸರದ ಸಂಗತಿ. ಒಳ್ಳೆಯ ಲೇಖನ ಜೊತೆಗೆ ಎಲ್ಲರೂ ತಿಳಿಯಬೇಕಾದ್ದು ಕೂಡಾ.

Unknown said...

vichaarapoorna lekhana..

ಶೆಟ್ಟರು (Shettaru) said...

ಕಾಕಾ,

ವಿಶ್ಲೇಷಣಾತ್ಮಕ ಲೇಖನ,

ನಾನು ಈ ಒಂದೆರಡು ದಿನಗಳ ಹಿಂದೆಯೇ ಓದಿದ್ದರೂ ಶ್ರೀ ಅಬ್ದುಲ್ ರಶೀದ ಹಾಗು ಶ್ರೀ ಫಕೀರ ಮುಹಮ್ಮದ ಕಟ್ಪಾಡಿಯವರು ತಮ್ಮ ಅಭಿಪ್ರಾಯ ಮೂಡಿಸುತ್ತಾರೋ ಹೇಗೆ ಎಂಬ ಕುತೂಹಲದಿಂದ ಕಮೆಂಟಿಸದೇ ಹಾಗೆ ಬಿಟ್ಟಿದ್ದೆ.

ನಿಮ್ಮ ಅಭಿಪ್ರಾಯಗಳು ನನ್ನವು ಹೌದು, ಶ್ರೀ ಅಬ್ದುಲ್ ರಶೀದ ಹಾಗು ಶ್ರೀ ಫಕೀರ ಮುಹಮ್ಮದ ಕಟ್ಪಾಡಿಯವರ ಲೇಖನಗಳನ್ನು ಕೆಂಡಸಂಪಿಗೆಯಲ್ಲಿ ಓದಿದಾಗ ನಾ ಮೆಚ್ಚುವ ಲೇಖಕ ಶ್ರೀ ಅಬ್ದುಲ್ ರಶೀದ ಕೂಡಾ ಮೂಲಭೂತವಾದಿಯೇ ಎಂದೆನಿಸಿದ್ದು ಸುಳ್ಳಲ್ಲ. ನಮ್ಮ ರಾಜಕಾರಣಿಗಳು ಬಿಡಿ ಅವರಿಗೆ ನಂಜೆರಿಸುವುದಷ್ಟೆ ಗೋತ್ತು. ನಮ್ಮ ಬುದ್ದಿಜೀವಿಗಳಿಗೇನಾಗಿದೆ, ಎಲ್ಲಿದ್ದಾರವರು? ಬದಕಿದ್ದಾರೋ ಇಲ್ಲಾ ಸತ್ತಿದ್ದಾರೋ? ಲೇಖನದ ವಿರುದ್ದ ಒಂದು ಜನಾಂಗದ ಜನ ಇಷ್ಟೊಂದು ಪ್ರಾಣಗಳ, ಸಾರ್ವಜನಿಕ ಆಸ್ತಿಯ ನಾಶವಾದರೂ ನಮ್ಮ ಈ ಬುದ್ದಿಜೀವಿಗಳು ಸತ್ಯಾಗ್ರಹ, ವಿರೋಧ ಸಭೆ ನೆಡೆಸುವುದು ಬಿಡಿ ಒಂದು ಹೇಳಿಕೆ ನಿಡಿಲ್ಲ.

ಸಾಗರಿಯವರು ಹೇಳಿದಂತೆ "ನಮ್ಮ ದೆಶದಲ್ಲಿ ನಾವು ಧರ್ಮ ನಿರಪೇಕ್ಷರೇಂದೆನಿಸಿಕೊಳ್ಳ ಬೇಕಾದರೆ ಅನ್ಯ ಧರ್ಮೀಯರು ನಮ್ಮ (ಹಿಂದೂ) ಭಾವನೆಗಳ ಮೇಲೆ ನಡೆಸುವ ಅತ್ಯಾಚಾರ, ಅವಮಾನಗಳನ್ನೆಲ್ಲಾ ಸಹಿಸಿಕೊಂಡು ಇತರರು ಆಡುವ ಆಟಗಳನ್ನೆಲ್ಲಾ ಸರಿ ಎಂದು ಸುಮ್ಮನಿದ್ದರಾಯಿತು. ಇಲ್ಲದಿದ್ದರೆ ಮೂಲಭೂತವಾದಿ ಎಂದು ನಾಮಕರಣ ಮಾಡುತ್ತಾರೆ."

ನಮಗೆಲ್ಲರಿಗೂ (ನಮ್ಮನ್ನಾಳುವವರೂ ಸೇರಿ) ಎಂದು ಬುದ್ದಿ ಬರುವುದೋ?

-ಶೆಟ್ಟರು

Pavan said...

ಸುನಾಥ ಅವರೇ, ನಾನು ಇದು ಖಡಾ ಖಂಡಿತ ಸತ್ಯ ಎಂದಿದ್ದರೆ ನನ್ನನು right wing fanatic ಅಂದುಕೊಳ್ಳುತಾರೆನೋ ಅಂತ ಹಾಗೆ ಬರೆದೆ!

sunaath said...

ಮನಸು,
ವೈಯಕ್ತಿಕ ಸ್ವಾರ್ಥ ಹಾಗು ಗುಂಪು-ಸ್ವಾರ್ಥ ಇವು ಎಲ್ಲೆಡೆಗೂ ಇರುವವೇ. ಇವುಗಳನ್ನು ಹಿಡಿತದಲ್ಲಿಡಲು ಸಾಮಾಜಿಕ ಕಟ್ಟಳೆಗಳು ಹಾಗೂ ರಾಜಕೀಯ ಶಾಸನಗಳು ಅವಶ್ಯ. ಭಾರತದಲ್ಲಿ ಸದ್ಯಕ್ಕೆ ಇವೆರಡೂ ಇಲ್ಲ!

sunaath said...

ರವಿಕಾಂತ,
ಧನ್ಯವಾದಗಳು. ನಮ್ಮ ಪೂರ್ವ-ರಾಷ್ಟ್ರಪತಿ ಅಬ್ದುಲ್ ಕಲಾಮ ಆಶಿಸಿದಂತೆ, ನಮ್ಮದು Knowledge Society
ಆದರೆ ಮಾತ್ರ, ನಮ್ಮಲ್ಲಿ ಸುಧಾರಣೆ ಬಂದೀತು.

sunaath said...

ಶೆಟ್ಟರs,
ಅಬ್ದುಲ್ ರಶೀದ ಹಾಗೂ ಕಟ್ಪಾಡಿಯವರ ಬಗೆಗೆ ನನಗೂ ನಿರಾಶೆ ಆಯಿತು. ಶಿವಮಗ್ಗಿ ಹಾಗು ಹಾಸನಗಳಲ್ಲಿಯ ದೊಂಬಿಯ ಬಗೆಗೆ ಯಾರೂ ಏನೂ ಅಂದಿರಲಿಲ್ಲ. ಆಗಲೇ, ಶ್ರೀ ರಶೀದರು, ‘ಕೆಂಡಸಂಪಗೆ’ಯಲ್ಲಿ defensive batting ಚಾಲೂ ಮಾಡಿದರು even before one single ball was bowled. ಅವರ ಜೊತೆಗೆ runner ಆಗಿ ಶ್ರೀ ಕಟ್ಪಾಡಿಯವರು ನಿಂತುಕೊಂಡರು. ಈ ದಿನ, ಕಾಕತಾಳೀಯವಾಗಿ (?) ಅರಬಸ್ತಾನದ ಹೆಗ್ಗಳಿಕೆಯನ್ನು ಸಾರುವ ಲೇಖನ ಮಾಲೆಯೊಂದು ಪ್ರಾರಂಭವಾಗಿದೆ.

ಕಟಪಾಡಿಯವರು ‘ನಮ್ಮಷ್ಟಕ್ಕೆ ನಮ್ಮನ್ನು ಬಿಡಿ’ ಎಂದು ಹೇಳಿದ್ದಾರೆ. ಅದರರ್ಥ ‘ನಮ್ಮ ತಂಟೆಗೆ ಬರಬೇಡಿ’ ಎಂದಲ್ಲವೆ? ‘ನಾವು ನಿಮ್ಮ ತಂಟೆಗೆ ಬರುತ್ತಿಲ್ಲ ಮಾರಾಯ್ರೆ, ನಾವು ಹೋರಾಡುತ್ತಿರುವದು ತಸ್ಲೀಮಾ ನಸ್ರೀನಳ ಅಭಿಪ್ರಾಯ ಸ್ವಾತಂತ್ರ್ಯಕ್ಕಾಗಿ’ ಎಂದು ನಾವು ಹೇಳುತ್ತಿದ್ದೇವೆ.

ಕೇವಲ ಅನಂತಮೂರ್ತಿ ಹಾಗು ಕಾರ್ನಾಡರಿಗೆ ಮಾತ್ರ ಈ ಹೋರಾಟದ ಹಕ್ಕು ಇರುವಂತೆ ಕಾಣುತ್ತದೆ!

sunaath said...

ಪವನ,
ನಿಮ್ಮ ಮಾತು ನಿಜ. ಕೆಲವೇ ದಿನಗಳ ಮೊದಲು ನಾನೊಬ್ಬ ಸರ್ವಧರ್ಮಸಾಮರಸ್ಯವಾದಿಯಂತೆ ಕಾಣುತ್ತಿದ್ದವನು ಈಗೊಬ್ಬ ಮೂಲಭೂತವಾದಿಯಂತೆ ಕಾಣುತ್ತಿರಬಹುದು.
I seek truth, so I do not bother!

VENU VINOD said...

ಸುನಾಥರೇ,
ಆ ಪತ್ರಿಕೆಗೆ ಸೇರಿದವನಾದ ಕಾರಣಕ್ಕೆ ನಾನು ತಸ್ಲೀಮಾ ಲೇಖನದ ಅನುವಾದ ಪ್ರಕಟಣೆಯ ಔಚಿತ್ಯ ಕೇಳಲು ಹೋಗಲಾರೆ, ಆದರೆ ಆ ಲೇಖನ ಹೆಸರಲ್ಲಿ ದೊಂಬಿ ಎಬ್ಬಿಸಿದ್ದಾರೆ, ಪತ್ರಿಕಾ ಕಚೇರಿಗೆ ಪೆಟ್ರೋಲ್ ಬಾಂಬ್‌ ಹಾಕುವಷ್ಟರ ಮಟ್ಟಿಗೆ ಮುಂದುವರಿದಿದ್ದಾರೆ ಎಂದರೆ ಇದನ್ನೇನು ಹೇಳಬೇಕು. ಟೀಕೆಗಳನ್ನು ಅರಗಿಸಿಕೊಳ್ಳುವಂಥ ಮೆಚ್ಯುರಿಟಿ ನಮ್ಮ ಪ್ರಜಾಪ್ರಭುತ್ವಕ್ಕೆ ಇಲ್ಲವೆಂದೇ ತೋರುತ್ತದೆ.

sunaath said...

ವೇಣು,
ತಸ್ಲೀಮಾ ನಸರೀನಳ ಲೇಖನ ಪ್ರಕಟಿಸುವ ಹಕ್ಕು ಯಾವುದೇ ಪತ್ರಿಕೆಗೆ ಇದ್ದೇ ಇದೆ. ಅದರಲ್ಲಿ ಧರ್ಮನಿಂದನೆ ಅಥವಾ ಅವಹೇಳನೆ ಕಂಡು ಬಂದರೆ ನ್ಯಾಯಾಲಯಕ್ಕೆ ಹೋಗಬಹುದಲ್ಲ!
ಪತ್ರಕರ್ತರನ್ನು ಹೆದರಿಸಬಯಸುವವರನ್ನು terrorist ಎಂದೇ ಕರೆಯಬೇಕಾಗುತ್ತದೆ. ಇವರನ್ನು ಮಟ್ಟ ಹಾಕುವ ಧೈರ್ಯ ಸರಕಾರಕ್ಕಿಲ್ಲ.

Prabhuraj Moogi said...

ದಿಟ್ಟ ಲೇಖನಗಳು ಬಹಳ ಸಾರಿ ಕೆಟ್ಟದಾಗಿಯೇ ಕಾಣೋದು... ಸತ್ಯ ಯಾವಾಗಲೂ ಕಹಿಯಾಗಿರುತ್ತದೆ ಅನೋದು ಅದಕ್ಕೇ ಏನೊ... ದೊಡ್ಡ ಚಿಂತಕರು ಹೇಗೆ ಚಿಂತಿಸುತ್ತಾರೆ ಇಂಥ ಘಟನೆಗಳ ಬಗ್ಗೆ ಅನ್ನೊದೆ ಚಿಂತಿಸುವ ವಿಷಯ...

sunaath said...

ಪ್ರಭುರಾಜ,
‘ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಮ’ ಎಂದೇನೋ ಹೇಳಿದ್ದಾರೆ. ಆದರೆ ಕಹಿಯಾದ ಸತ್ಯವೆಂದರೆ ಕಹಿಯಾದ ಮದ್ದಿನಂತಲ್ಲವೆ?

Anonymous said...

ಸುನಾಥ್ ಅವರೆ,
ನಿಮ್ಮ ೧ನೇ ವಿಷಯದ ಬಗೆಗಿನ ಚರ್ಚೆ ಪೂರ್ವಗ್ರಹಗಳಿಂದ ಕೂಡಿದೆ ಎಂಬುದು ನನ್ನ ಅಭಿಪ್ರಾಯ. ಶ್ರೀಮತಿ ಸಾರಾ ಅಬೂಬಕ್ಕರ ಅವರನ್ನು ಉದಾರ ಮನೋಭಾವದ ಲೇಖಕಿ ಎಂದಿದ್ದೀರಿ. ಕಡೆಯಲ್ಲಿ "ಆದರೆ ಮುಸ್ಲಿಮ್ ಸಮಾಜವು ತನ್ನಲ್ಲಿಯ ಉದಾರವಾದಿಗಳನ್ನು ನಿರ್ದಯವಾಗಿ ಬೇಟೆಯಾಡುತ್ತದೆ !" ಎಂಬ ನಿರ್ಣಯಕ್ಕೆ ಬಂದಿದ್ದೀರಿ. ಆದರೆ ಸಾರಾ ಅಬೂಬಕ್ಕರ ಅಂತಹವರು ಮುಸ್ಲಿಮ್ ಸಮಾಜದೊಳಗೆ ಇದ್ದು ಇನ್ನೂ ಧೈರ್ಯದಿಂದ ಬರೆಯುತ್ತಲೇ ಇದ್ದಾರಾಲ್ಲ. ಬೇರೆ ಮತಾಂಧ ಗುಂಪುಗಳು(ಮುಸ್ಲಿಮೇತರ ಸಮಾಜಗಳು) ಕೂಡಾ ನೀವಂದುಕೊಂಡಷ್ಟು ಉದಾರಿಗಳಲ್ಲ. ಉದಾಹರಣೆಗೆ “ಆನು ದೇವಾ ಹೊರಗಿವನು” ಕೃತಿಯ ವಿವಾದವೇ ನೋಡಿ.

ಇತಿ,
ರವಿಪ್ರಕಾಶ