Friday, October 8, 2010

ಬೇಂದ್ರೆ ಕಾವ್ಯದಲ್ಲಿ ಪದಸಂಧಾನ (concordance)……………................(‘ಗರಿ’ ಸಂಕಲನ)

ಪಾಶ್ಚಾತ್ಯ ಸಾಹಿತ್ಯದ ಅಧ್ಯಯನಕಾರರು concordance ಎನ್ನುವ ಒಂದು ಭಾಷಾಸಾಧನವನ್ನು  ಬಳಸುತ್ತಾರೆ. ಓರ್ವ ಲೇಖಕನು ತನ್ನ ಸಾಹಿತ್ಯದಲ್ಲಿ ಬಳಸಿದ ಪದಗಳ ಅಂಕಿ ಸಂಖ್ಯೆಗಳನ್ನು ಆಧರಿಸಿ ಲೇಖಕನ ಅಂತರಂಗವನ್ನು ಅಭ್ಯಸಿಸುವ ಯತ್ನವಿದು. ಸಾಹಿತಿಯ ಶೈಲಿಯನ್ನು ಕಟ್ಟಡದ ವಾಸ್ತುಶಿಲ್ಪ ಎಂದು ಕರೆಯಬಹುದಾದರೆ, concordanceಅನ್ನು ಕಟ್ಟಡಕ್ಕೆ ಬಳಸಲಾದ ಸಾಮಗ್ರಿ ಎಂದು ಕರೆಯಬಹುದು. ಶೈಲಿಯು ಲೇಖಕನ ಸಾರ್ವಜನಿಕ ಮುಖವಾದರೆ, concordance ಆತನ ಅಂತರಂಗದ ಮುಖ ಎನ್ನಬಹುದು.

ಪದಸಂಧಾನ:
Concordance ಅನ್ನುವ ಪದಕ್ಕೆ ಕನ್ನಡದಲ್ಲಿ ಸದ್ಯಕ್ಕೆ ಯಾವುದೇ ಬದಲು ಪದವಿಲ್ಲ. ಇದು ಪದಗಳ ಬಳಕೆಯನ್ನು ಹಾಗು ವಿಶ್ಲೇಷಣೆಯನ್ನು  ಅವಲಂಬಿಸಿರುವ ಕಾರಣದಿಂದ ಪದಶ್ಲೇಷಣೆ, ಪದಯೋಜನೆ, ಪದವಣಿಕೆ, ಪದಸಂಧಾನ ಇತ್ಯಾದಿ ಪದಗಳೆಲ್ಲ ನನ್ನ ಆಲೋಚನೆಯಲ್ಲಿ ಸುಳಿದು ಹೋದವು. ಆಬಳಿಕ ‘ಸಂಧಾನ’ ಪದವು ಓರ್ವ ವ್ಯಕ್ತಿ ಹಾಗು ಆತನು ಬಳಸಬಯಸುವ ಪದದ ನಡುವಿನ ಅನುಸಂಧಾನವನ್ನು ಸೂಚಿಸುವ ಸಂಕೇತವೆಂದುಕೊಂಡು concordance ಪದಕ್ಕೆ ‘ಪದಸಂಧಾನ’ ಎನ್ನುವ ಪದವನ್ನು  ಉಪಯೋಗಿಸುವದೇ ಉಚಿತವೆಂದು ಭಾವಿಸಿ ಇಲ್ಲಿ ‘ಪದಸಂಧಾನ’ ಎನ್ನುವ ಪದವನ್ನು ಬಳಸಿದ್ದೇನೆ.

ಕನ್ನಡದಲ್ಲಿ ಪದಸಂಧಾನದ ಪ್ರಯತ್ನವೊಂದು ಈವರೆಗೂ ನಡೆದಂತೆ ಕಾಣುವದಿಲ್ಲ. ಬೇಂದ್ರೆಯವರ ಕಾವ್ಯವನ್ನು ಈ ಪದಸಂಧಾನಕ್ಕೆ ಅಳವಡಿಸಲು ನಾನು ಕೆಲವು ತಿಂಗಳುಗಳ ಹಿಂದೆ ಇಂತಹ ಪ್ರಯೋಗವನ್ನು ಕೈಗೆತ್ತಿಕೊಂಡೆ. ಪ್ರಯತ್ನವನ್ನು ಪ್ರಾರಂಭಿಸಿದ ಬಳಿಕ, ಇದು ಹಿಮಾಲಯವನ್ನು ಹತ್ತುವಂತಹ ಸಾಹಸವೆಂದು ಅರ್ಥವಾಯಿತು.  ಏಕೆಂದರೆ ಬೇಂದ್ರೆಯವರು ೧೫೦೦ಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾರೆ. ಅವೆಲ್ಲವನ್ನೂ ಪುನಃ ಬರೆದು, ಪದಗಳನ್ನು ವಿಂಗಡಿಸಿ ಮಾಡಬೇಕಾದ ಕಾರ್ಯಕ್ಕೆ ಕಠಿಣ ಶ್ರಮ ಹಾಗು ದೀರ್ಘ ಕಾಲ ಬೇಕಾಗುತ್ತವೆ. ಆದುದರಿಂದ ಅವರ ಮೊದಲ ಕಾವ್ಯಸಂಕಲನಗಳಲ್ಲಿ ಒಂದಾದ ‘ಗರಿ’ ಸಂಕಲನವನ್ನು ಮಾತ್ರ ಆರಿಸಿಕೊಂಡು ಮುನ್ನಡೆದೆ. ಈ ಸಂಕಲನದಲ್ಲಿ ೫೫ ಕವನಗಳಿವೆ. ಅವೆಲ್ಲವನ್ನೂ ಪುನಃ ಬರೆದು, ಪದಗಳನ್ನು ವಿಂಗಡಿಸಲು ನನಗೆ ಕೆಲವು ತಿಂಗಳುಗಳೇ ಬೇಕಾದವು. ಗಣಕಯಂತ್ರದ ಸಹಾಯದಿಂದ ಅವುಗಳನ್ನು ಅಕಾರಾದಿ ಕ್ರಮದಲ್ಲಿ ಅಳವಡಿಸಲು ಕಷ್ಟವಾಗಲಿಲ್ಲ. ಆ ಬಳಿಕ ಆ ಪದಗಳ ಲಕ್ಷಣವನ್ನು ಗುರುತಿಸಲು ಪ್ರಯತ್ನಿಸಿದೆ. ನನ್ನ ಪ್ರಯತ್ನದ ಫಲವನ್ನು ಪ್ರಾಜ್ಞರಾದ ನಿಮ್ಮ ಎದುರಿಗೆ ಇಡುತ್ತಿದ್ದೇನೆ.

‘ಗರಿ’ ಕವನಸಂಕಲನದಲ್ಲಿಯ ೫೫ ಕವನಗಳನ್ನು ಈ ರೀತಿಯಾಗಿ ವರ್ಗೀಕರಿಸಬಹುದು:

ಕ್ರಮಸಂಖ್ಯೆ
ಕವನಗಳ ವರ್ಗೀಕರಣ
ಕವನಗಳ ಸಂಖ್ಯೆ
ಆದರ್ಶ
೧೧
ಸಮಾಜ, ದೇಶ
ಕನ್ನಡ ನಾಡು, ನುಡಿ
ದೇಶಪ್ರೇಮ
ತತ್ವ
ನಿಸರ್ಗ
ವೈಯಕ್ತಿಕ, ಕೌಟಂಬಿಕ
ಇತರ
೧೪
_____
ಒಟ್ಟು
೫೫

ಈ ವರ್ಗೀಕರಣದಲ್ಲಿ ದೋಷಗಳು ಇರಬಹುದು. ಇದ್ದರೆ, ದಯವಿಟ್ಟು ಮನ್ನಿಸಿರಿ.  ಬೇಂದ್ರೆಯವರ ಕವನಗಳನ್ನು ಎಂಟು ವಿಭಾಗಗಳಲ್ಲಿ ವರ್ಗೀಕರಿಸಿದರೂ ಸಹ, ಈ ಎಲ್ಲ ಕವನಗಳಲ್ಲಿ ಅವರು ಯಾವ ಪದಗಳ ಬಳಕೆಯನ್ನು ಎಷ್ಟು ಮಾಡಿದ್ದಾರೆ ಎನ್ನುವದೇ ಈ ‘ಪದಸಂಧಾನ’ದ ಸ್ವಾರಸ್ಯವಾಗಿದೆ. ಪದಸಂಧಾನದ ಎಲ್ಲ ಅಂಕಿ ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ.

ಒಟ್ಟು ಕವನಗಳ ಸಂಖ್ಯೆ
೫೫
ಅತ್ಯಧಿಕ
ಪದಗಳ
ಸಂಖ್ಯೆ
ಬಳಸಲಾದ ಒಟ್ಟು
ಪದಗಳ ಸಂಖ್ಯೆ
೭೧೫೦
ಆತ್ಮೀಯವಾಚಕ ಪದಗಳು
ಉದಾ: ನಾನು, ನೀನು, ತಾನು
೨೯೩
ದರ್ಶನಸೂಚಕ ಪದಗಳು
ಉದಾ: ದೃಷ್ಟಿ, ನೋಟ, ಕಾಣು, ನೋಡು
೧೪೩
ಅಸ್ತಿತ್ವಸೂಚಕ ಪದಗಳು
ಉದಾ: ಇರು, ಆಗು
೧೩೭
ಕ್ರಿಯಾತ್ಮಕ ಪದಗಳು
ಉದಾ: ಮಾಡು, ಆಡು, ಹಾಡು, ಆಟ
೧೧೨
ಭಾವನಾಸೂಚಕ ಪದಗಳು
ಉದಾ: ಮನಸ್ಸು, ಭಾವ, ಅಂತರಂಗ
೧೧೦
ಪ್ರಶ್ನಾರ್ಥಕ ಪದಗಳು
ಉದಾ: ಏನು, ಯಾರು, ಎಲ್ಲಿ, ಏಸು
೯೫
ಆಮಂತ್ರಣ, ಆಹ್ವಾನ
ಉದಾ: ಬಾ, ಬರು, ಬಂದ
೯೫
ಹರ್ಷ, ಉಲ್ಲಾಸ
ಉದಾ: ನಗು, ಸುಖ, ಆನಂದ
೭೪
ಕಣ್ಣು
ಉದಾ: ಕಣ್ಣು ಕಂಗಳು
೬೪
ಕಾಲಮಾನ
ಉದಾ: ದಿನ
೫೮
ಏಕತೆ
ಉದಾ: ಒಂದು, ಒಂದಾಗು
೪೫
ಸಂಬೋಧನಾತ್ಮಕ
ಉದಾ: ಓ, ಏ, ಎಲವೊ
೩೯
ಬೆಳಕು
ಉದಾ: ಬೆಳಕು, ಬೆಳಗು
೩೯
ಹೊಸತು
ಉದಾ: ಹೊಸ
೩೬
ಚೆಲುವು
ಉದಾ: ಚೆಲವು, ಸೊಬಗು, ಸೊಗಸು
೨೯

‘ಗರಿ’ ಕವನಸಂಕಲನ ಪ್ರಕಟವಾಗಿದ್ದು ೧೯೩೨ರಲ್ಲಿ. ಅದು ಸ್ವಾತಂತ್ರ್ಯಹೋರಾಟದ ಹಾಗು ಆದರ್ಶಸ್ಫೂರ್ತಿಯ ಕಾಲ. ಆದುದರಿಂದಲೇ, ಈ ಸಂಕಲನದಲ್ಲಿ ೧೫ ಕವನಗಳು ಸಮಾಜ, ದೇಶ, ದೇಶಪ್ರೇಮ ಹಾಗು ಕನ್ನಡ ನಾಡು-ನುಡಿಯ ಬಗೆಗೆ ಇವೆ ; ೧೧ ಕವನಗಳು ವೈಯಕ್ತಿಕ ಆದರ್ಶದ ಕವನಗಳಾಗಿವೆ; ನಿಸರ್ಗ ಕವನಗಳ ಸಂಖ್ಯೆ ಕೇವಲ ೫.

ಇನ್ನು ಪದಸಂಧಾನದ ಅಂಕಿ ಅಂಶಗಳನ್ನು ವಿಶ್ಲೇಷಿಸೋಣ:
ಬೇಂದ್ರೆಯವರ ಕವನಗಳಲ್ಲಿ ಅತ್ಯಧಿಕವಾಗಿ ಬಳಕೆಯಾದ ಪದಗಳು ಆತ್ಮೀಯವಾಚಕ ಪದಗಳು (೨೯೩), (ಉದಾ: ನಾನು, ನೀನು, ಆನು ಇತ್ಯಾದಿ). ಇದು ಅವರ ಕವನಗಳಲ್ಲಿ ಕಂಡು ಬರುವ motif ಆಗಿದೆ. ಈ ಆತ್ಮೀಯವಾಚಕ ಪದಗಳು ಅವರ ಅಂತರಂಗಕ್ಕೆ ಹಿಡಿದ ಕನ್ನಡಿಯಾಗಿವೆ.

ಬೇಂದ್ರೆಯವರು ತಮ್ಮ ಓದುಗರೊಂದಿಗೆ ಯಾವಾಗಲೂ interactionಅನ್ನು ಬಯಸುತ್ತಾರೆ. ಅವರ ಕಾವ್ಯವಿರುವದು ಸಹೃದಯ ರಸಿಕರಿಗಾಗಿ. ಇದು ಬೇಂದ್ರೆ ಕಾವ್ಯದ ಮಹತ್ವದ ಲಕ್ಷಣ. ಈ ಕಾವ್ಯ-ನೀತಿಯು ಅವರ ಕವನವೊಂದರಲ್ಲಿ ಸ್ಪಷ್ಟವಾಗಿಯೇ ಕಾಣುತ್ತದೆ:
ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ;
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.”

ಬೇಂದ್ರೆಯವರ ಅನೇಕ ಕವನಗಳು ಹಳ್ಳಿಯ ಕವಿಯೊಬ್ಬ ಮರದಕಟ್ಟೆಯ ಮೇಲೆ ಕುಳಿತುಕೊಂಡು  ಸುತ್ತಲೂ ನೆರೆದ ಜನರೆದುರಿಗೆ ಕೈಯೆತ್ತಿ ಹಾಡುತ್ತಿರುವ ನೋಟವನ್ನು ನೆನಪಿಸುವಂತಿವೆ. ಬೇಂದ್ರೆಯವರ ಪಾಂಡಿತ್ಯವು ಅಗಾಧವಾಗಿದ್ದರೂ ಸಹ ಅವರು ಒಂದರ್ಥದಲ್ಲಿ ಜಾನಪದ ಕವಿಗಳು. ‘ಗರಿ’ ಕವನಸಂಕಲನದಲ್ಲಿ ಬಳಸಲಾದ ಒಟ್ಟು ೭೧೫೦ ಪದಗಳ ಪೈಕಿ, ೪೯೭ ಅಂದರೆ ಶೇಕಡಾ ೭ರಷ್ಟು ಪದಗಳು ಮಾತ್ರ ಸಂಸ್ಕೃತ ಪದಗಳು. ಹಾಗಿರಲು ಬೇಂದ್ರೆಯವರನ್ನು ‘ಅಚ್ಚಕನ್ನಡ ಕವಿ’ ಎಂದು ಕರೆಯುವದರಲ್ಲಿ ಏನೂ ತಪ್ಪಿಲ್ಲ.

(ಇಲ್ಲಿ ಒಂದು ವಿವರಣೆಯನ್ನು ಕೊಡುವದು ಅವಶ್ಯವಾಗಿದೆ. ಕನ್ನಡಿಗರು ಸಾಮಾನ್ಯವಾಗಿ ಬಳಸುವ ಸಂಸ್ಕೃತ ಪದಗಳನ್ನು ಕನ್ನಡ ಪದಗಳೆಂದೇ ಗ್ರಹಿಸಲಾಗಿದೆ. ಉದಾಹರಣೆಗೆ ಕನ್ನಡದಲ್ಲಿ ‘ಸಿದ್ಧ’ ಹಾಗು ‘ಶಿಖರ’ ಎನ್ನುವ ಸಂಸ್ಕೃತ ಪದಗಳನ್ನು ಕನ್ನಡ ಪದಗಳಂತೆಯೇ ಬಳಸಲಾಗುತ್ತಿದೆ. ಆದರೆ ‘ಸಿದ್ಧಶಿಖರ’ ಎನ್ನುವ ಪದವನ್ನು ಸಾಮಾನ್ಯವಾಗಿ ಬಳಸುವದಿಲ್ಲ. ಆದುದರಿಂದ, ‘ಸಿದ್ಧ’ ಹಾಗು ‘ಶಿಖರ’ ಪದಗಳನ್ನು ಕನ್ನಡ ಪದಗಳೆಂದು ಗ್ರಹಿಸಲಾದರೂ ಸಹ ‘ಸಿದ್ಧಶಿಖರ’ವನ್ನು ಸಂಸ್ಕೃತ ಪದವೆಂದು ಗ್ರಹಿಸಲಾಗಿದೆ. ಇನ್ನು ಬೇಂದ್ರೆಯವರು ಕನ್ನಡದಲ್ಲಿ ಅನೇಕ ಜೋಡು ಪದಗಳನ್ನು ಸೃಷ್ಟಿಸಿದ್ದು ಅವುಗಳನ್ನು ಮುಂದೆ ಕೊಡಲಾಗಿದೆ.)

ಆತ್ಮೀಯವಾಚಕ ಪದಗಳ ನಂತರ, ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪದಗಳು ದರ್ಶನಸೂಚಕ ಪದಗಳಾಗಿವೆ. ಇವುಗಳ ಸಂಖ್ಯೆ ೧೪೩ .  ಬೇಂದ್ರೆಯವರು ಕನ್ನಡದ ಕನಸುಗಾರರಾಗಿದ್ದರು. ಅಲ್ಲದೆ ಅವರು ಆಧ್ಯಾತ್ಮಿಕ ಒಲವುಳ್ಳವರೂ ಆಗಿದ್ದರು. ಆದುದರಿಂದ ‘ಕಾಣ್ಕೆ’, ‘ನೋಟ’ ಮೊದಲಾದ ಪದಗಳು ಎರಡನೆಯ ಸ್ಥಾನ ಪಡೆದಿದ್ದರಲ್ಲಿ ಆಶ್ಚರ್ಯವಿಲ್ಲ. ಇನ್ನು ೧೩೭ ಪದಗಳುಳ್ಳ ಅಸ್ತಿತ್ವಸೂಚಕ ಪದಗಳು ೩ನೆಯ ಸ್ಥಾನದಲ್ಲಿ ಇವೆ. ಇದೂ ಸಹ ತಾತ್ವಿಕ ಒಲವಿನಿಂದಲೇ ಆದದ್ದು. ಮಹರ್ಷಿ ಅರವಿಂದರು ತಮ್ಮ ಕೃತಿಯೊಂದರಲ್ಲಿ ‘To be or to become is the whole endeavor of the Nature’ ಎಂದು ಹೇಳಿದ್ದಾರೆ. ಬೇಂದ್ರೆಯವರು ಅರವಿಂದರ ಭಕ್ತರು. ತತ್ವಶಾಸ್ತ್ರವನ್ನು ಅರೆದು ಕುಡಿದವರು. ಆದುದರಿಂದ ಅಸ್ತಿತ್ವಸೂಚಕವಾದ ಪದಗಳು ಬೇಂದ್ರೆಯವರ ಕವನಗಳಲ್ಲಿ ಮೂರನೆಯ ಸ್ಥಾನದಲ್ಲಿವೆ.

ನಾಲ್ಕನೆಯ ಸ್ಥಾನದಲ್ಲಿರುವ ಕ್ರಿಯಾತ್ಮಕ ಪದಗಳನ್ನು ಗಮನಿಸಿರಿ. ಇವು ಸಾಮಾನ್ಯವಾಗಿ ‘ಮಾಡು, ಆಡು, ಹಾಡು’ ಈ ತರಹದ ಪದಗಳಾಗಿವೆ. ಈ ಜಗದಲ್ಲಿ ನಡೆಯುತ್ತಿರುವದೆಲ್ಲವೂ ಭಗವಂತನ ಲೀಲೆ ಅಂದರೆ ಆಟ ಎನ್ನುವ ನಂಬಿಗೆಯ ಬೇಂದ್ರೆಯವರು ಮಾಡು, ಆಡು, ಹಾಡು ಮೊದಲಾದ ಕ್ರಿಯೆಗಳನ್ನು ಸೂಚಿಸುವ ೧೧೨ ಪದಗಳನ್ನು ಬಳಸಿದ್ದಾರೆ.

ಐದನೆಯ ಸ್ಥಾನದಲ್ಲಿ ಭಾವನಾತ್ಮಕ ಪದಗಳು (೧೧೦) ಬರುತ್ತವೆ. ಉದಾಹರಣೆಗೆ ಮನಸ್ಸು, ಅಂತರಂಗ ಇತ್ಯಾದಿ. ಬೇಂದ್ರೆಯವರ ಸಂಬಂಧಗಳು ಯಾವಾಗಲೂ ಭಾವನಾತ್ಮಕ ಸಂಬಂಧಗಳು. ನಾಡು ಅವರ ಪಾಲಿಗೆ ನಾಡತಾಯಿ; ಓದುಗ ಅವರ ಪಾಲಿಗೆ ಅಂತರಂಗದ ಗೆಳೆಯ. ಪ್ರೀತಿ ಹಾಗು ಕಲಹ ಇವು ಮಾನಸಸರೋವರದಲ್ಲಿ ನಿತ್ಯವೂ ಏಳುವ ತೆರೆಗಳು. ಇದರ ಪರಿಣಾಮವೇ ಅವರ ಕವನಗಳಲ್ಲಿ ಮನೋಸೂಚಕ ಪದಗಳ ಆಧಿಕ್ಯ.
ಇದೇ ರೀತಿ ಉಳಿದ ಪದಗಳನ್ನೂ ಸಹ ವಿಶ್ಲೇಷಿಸಬಹುದು.

ಬೇಂದ್ರೆಯವರ ಪದಸಂಪತ್ತು ಅಪಾರವಾದದ್ದು. ಈ ಕೆಳಗಿನ ಕೋಷ್ಟಕದಿಂದ ಅದು ಸ್ಪಷ್ಟವಾಗುತ್ತದೆ:

‘ಗರಿ’ ಸಂಕಲನದ ೫೫ ಕವನಗಳಲ್ಲಿ
ಸಂಖ್ಯೆ
ಒಂದೇ ಸಲ ಬಳಸಿದ ಪದಗಳು
೧೧೮೦
೨ ಸಲ ಮಾತ್ರ ಬಳಸಿದ ಪದಗಳು
೩೨೦
೩ ಸಲ ಮಾತ್ರ ಬಳಸಿದ ಪದಗಳು
೧೮೪
೪ ಸಲ ಮಾತ್ರ ಬಳಸಿದ ಪದಗಳು
೧೦೭
೫ ಸಲ ಮಾತ್ರ ಬಳಸಿದ ಪದಗಳು
೭೩
೬ ಸಲ ಬಳಸಿದ ಪದಗಳು
೫೨
೭ ಸಲ ಬಳಸಿದ ಪದಗಳು
೩೪
೮ ಸಲ ಬಳಸಿದ ಪದಗಳು
೨೧
೯ ಸಲ ಬಳಸಿದ ಪದಗಳು
೨೪
೧೦ ಸಲ ಬಳಸಿದ ಪದಗಳು
೧೨
೧೧ ಸಲ ಬಳಸಿದ ಪದಗಳು
೧೬
೧೨ ಸಲ ಬಳಸಿದ ಪದಗಳು
೧೪
೧೩ ಸಲ ಬಳಸಿದ ಪದಗಳು
೧೨
೧೪ ಸಲ ಬಳಸಿದ ಪದಗಳು
೧೫ ಸಲ ಬಳಸಿದ ಪದಗಳು
೧೨
೧೬ ಸಲ ಬಳಸಿದ ಪದಗಳು
೧೭ ಸಲ ಬಳಸಿದ ಪದಗಳು
೧೮ ಸಲ ಬಳಸಿದ ಪದಗಳು
೧೯ ಸಲ ಬಳಸಿದ ಪದಗಳು
೨೦ ಸಲ ಬಳಸಿದ ಪದಗಳು
೨೨ ಸಲ ಬಳಸಿದ ಪದಗಳು
೨೩ ಸಲ ಬಳಸಿದ ಪದಗಳು
೨೪ ಸಲ ಬಳಸಿದ ಪದಗಳು
೨೭ ಸಲ ಬಳಸಿದ ಪದಗಳು
೨೯ ಸಲ ಬಳಸಿದ ಪದಗಳು
೩೧ ಸಲ ಬಳಸಿದ ಪದಗಳು
೩೨ ಸಲ ಬಳಸಿದ ಪದಗಳು
೩೫ ಸಲ ಬಳಸಿದ ಪದಗಳು
೩೬ ಸಲ ಬಳಸಿದ ಪದಗಳು
೩೯ ಸಲ ಬಳಸಿದ ಪದಗಳು
೪೧ ಸಲ ಬಳಸಿದ ಪದಗಳು
೪೫ ಸಲ ಬಳಸಿದ ಪದಗಳು
೪೭ ಸಲ ಬಳಸಿದ ಪದಗಳು
೪೮ ಸಲ ಬಳಸಿದ ಪದಗಳು
೫೦ ಸಲ ಬಳಸಿದ ಪದಗಳು
೫೨ ಸಲ ಬಳಸಿದ ಪದಗಳು
೫೩ ಸಲ ಬಳಸಿದ ಪದಗಳು
೫೫ ಸಲ ಬಳಸಿದ ಪದಗಳು
೫೮ ಸಲ ಬಳಸಿದ ಪದಗಳು
೬೪ ಸಲ ಬಳಸಿದ ಪದಗಳು
೮೪ ಸಲ ಬಳಸಿದ ಪದಗಳು
೯೯ ಸಲ ಬಳಸಿದ ಪದಗಳು
೧೦೨ ಸಲ ಬಳಸಿದ ಪದಗಳು
೧೦೬ ಸಲ  ಬಳಸಿದ ಪದಗಳು
೧೩೨ ಸಲ ಬಳಸಿದ ಪದಗಳು

ಬೇಂದ್ರೆಯವರು ಇಲ್ಲಿ ಬಳಸಿದ ಒಟ್ಟು ೭೧೫೦ ಪದಗಳ ಪೈಕಿ ೨೧೨೮ ಅಂದರೆ ಶೇಕಡಾ ೩೦ರಷ್ಟು ಪದಗಳು ವಿಭಿನ್ನ ಪದಗಳು ಹಾಗು ೧೧೮೦ ಪದಗಳನ್ನು (ಅಜಮಾಸು ೧೬.೫%) ಒಂದೇ ಸಲ ಬಳಸಿದ್ದಾರೆ. ಅತ್ಯಧಿಕವಾಗಿ ಬಳಸಿದ ಪದವೂ ಸಹ ೧೩೨ ಬಾರಿ, ಅಂದರೆ ಶೇಕಡಾ ೧.೮೫ ಸಲ ಮಾತ್ರ. ಈ ಅಂಕಿ ಅಂಶಗಳು ಬೇಂದ್ರೆಯವರ ಅಪಾರ ಪದಸಂಪತ್ತಿಗೆ ಸಾಕ್ಷಿಯಾಗಿವೆ ಎಂದು ಹೇಳಬಹುದು.

ಬೇಂದ್ರೆಯವರ ಪದಭಾಂಡಾರದಲ್ಲಿ ಇರುವ ದೇಶಿ ಹಾಗು ಪ್ರಾದೇಶಿಕ ಪದಗಳೂ ಸಹ ಎಣಿಕೆಗೆ ಮಿಕ್ಕುವಂತಹವು. ಉದಾಹರಣೆಗೆ ‘ಗರಿ’ ಸಂಕಲನದ ಎರಡು ಕವನಗಳನ್ನು ಪರೀಕ್ಷಿಸಬಹುದು:

(೧) ‘ಚಳಿಯಾಕೆ’ ಕವನದಲ್ಲಿ ಬಳಸಲಾದ ಆಭರಣಸೂಚಕ ಪದಗಳು:
            (೧) ಓಲೆಕೊಪ್ಪ (=ವಾಲೆ=ಕರ್ಣಾಭರಣ)
            (೨) ಚಳತುಂಬ (=One kind of ear-drop)
            (೩) ಹೊನ್ನ ಸೇವಂತಿಗೆ (=ಬಂಗಾರದ ಕೇಶಾಭರಣ)
            (೪) ಹೆರಳು ಬಂಗಾರ (= ಜಡೆಗೆ ಹಾಕಿಕೊಳ್ಳುವ ಚಿನ್ನದ ಆಭರಣ)

(ಸ್ವತಃ ಬೇಂದ್ರೆಯವರು ಪತ್ನಿಗೆ ಒಂದೂ ಆಭರಣ ಕೊಡಿಸದಿದ್ದರೂ, ಕವನಕನ್ನೆ ‘ಚಳಿಯಾಕೆ’ಗೆ ಇಷ್ಟೆಲ್ಲ ಆಭರಣ ತೊಡಿಸಿದ್ದಾರೆ!)

            (೨) ‘ಪಾತರಗಿತ್ತಿ ಪಕ್ಕ’ ಕವನದಲ್ಲಿ ಬರುವ ಸಸ್ಯಗಳ ಹೆಸರುಗಳು:
ಕ್ರ.ಸಂ.
ಬೇಂದ್ರೆ ಬಳಸಿದ ಪದ
ಸಸ್ಯಶಾಸ್ತ್ರೀಯ ಪದ
(ಆಧಾರ: ಕಿಟ್ಟೆಲ್ ನಿಘಂಟು)
ಸೂರೇಪಾನ
Helianthus annus
ತುರುಬಿ (ತುರುವೆ)
Sida indica
ತುಂಬಿ (ತುಂಬೆ)
Phlomis indica
ಕಳ್ಳಿ
Euphoria tirukalli
ನಾಯಿ ಛತ್ತರಗಿ
----------------------
ರುದ್ರಗಂಟಿ
(ದಾಸವಾಳ)
Hibiscus rosa sinesis

ವಿಷ್ಣುಗಂಟಿ
Evolulus alsinoides
ಹೇಸಿಗೆ ಹೂವು
Lantana aculeate
ಮದಗುಣಕಿ
Bauhinia variegate
೧೦
ಸೀಗಿಬಳ್ಳಿ
Acacia concinna
೧೧
ಗೊರಟಿಗೆ
Odina wodier
೧೨
ಮಾಲಿಂಗನ ಬಳ್ಳಿ
Bryonia lacinoisa
೧೩
ಗುಲಬಾಕ್ಷಿ
-----------------
೧೪
ಅಡವಿ ಮಲ್ಲಿಗಿ
Clitoria ternatea
೧೫
ಅಂಚಿಗಂಟಿ
(ಬದುವಿನ ಕಂಟಿ)
-----------------------





















ಇಲ್ಲಿ ಮತ್ತೊಂದು ಸ್ವಾರಸ್ಯವಿದೆ. ‘ವಿಷ್ಣುಗಂಟಿ’ ಎನ್ನುವ ಸಸ್ಯದ ನಿಜವಾದ ಹೆಸರು ‘ವಿಷ್ಣುಕಾಂತಿ’. ಹಾಗು  ರುದ್ರಗಂಟಿ ಸಸ್ಯದ ನಿಜವಾದ ಹೆಸರು ದಾಸವಾಳ. ಬೇಂದ್ರೆಯವರು ಈ ಹೆಸರುಗಳನ್ನು ಬದಲಾಯಿಸಿಕೊಳ್ಳುವ ಉದ್ದೇಶವು ಪ್ರಾಸಾನುಕೂಲತೆಯಲ್ಲ. ಇದಕ್ಕೆ ಬೇರೊಂದು ಕಾರಣವಿದೆ. ಯೋಗಶಾಸ್ತ್ರದ ಮೇರೆಗೆ ಅನಾಹತ ಚಕ್ರದ ಮೇಲೆ ಇರುವದು ವಿಷ್ಣುಗ್ರಂಥಿ; ಆಜ್ಞಾಚಕ್ರದ ಮೇಲಿರುವದು ರುದ್ರಗ್ರಂಥಿ. ಕುಂಡಲಿನಿ ದೇವಿಯು ಈ ಗ್ರಂಥಿಗಳನ್ನು ಭೇದಿಸಿ, ಸಹಸ್ರಾರ ಚಕ್ರಕ್ಕೆ ಮುನ್ನಡೆಯುವಳು. ಗ್ರಂಥಿ ಎನ್ನುವ ಸಂಸ್ಕೃತ ಪದವು ಕನ್ನಡದಲ್ಲಿ ‘ಗಂಟಿ(=ಕಂಟಿ)’ ಎಂದಾಗುತ್ತದೆ. ಈ ರೀತಿಯಲ್ಲಿ, ಪಾತರಗಿತ್ತಿಯ ಬಳಸು ಹಾರಾಟವನ್ನು ಬೆನ್ನು ಹತ್ತಿದ ಬೇಂದ್ರೆಯವರು ಕುಂಡಲಿನಿಯ ಪಥವನ್ನು ಸೂಚಿಸುತ್ತಿದ್ದಾರೆ! ದಾಸವಾಳ ಸಸ್ಯಕ್ಕೆ ರುದ್ರಗಂಟಿ ಎಂದು ಹೇಳುವ ಮತ್ತೊಂದು ಕಾರಣವೆಂದರೆ, (ಕೆಂಪು) ದಾಸವಾಳವು ರುದ್ರಪುತ್ರ ಗಣೇಶನಿಗೆ ಪ್ರಿಯವಾದ ಪುಷ್ಪ!
           
ಇನ್ನು ಬೇಂದ್ರೆಯವರು ಟಂಕಿಸಿದ ಅಚ್ಚಕನ್ನಡ ಜೋಡುಪದಗಳನ್ನಷ್ಟು ನೋಡಬೇಕು. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಕೊಡಲಾಗಿದೆ ಹಾಗು ಸಂಸ್ಕೃತದ  ಜೋಡುಪದಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ನೀಡಲಾಗಿದೆ:
            (೧) ಅರೆಬೆದರು
            (೨) ಇಡುಗಂಗೆ
            (೩) ಇದಿರುಗಣ್ಣು
            (೪) ಇನಿಹನಿ
            (೫) ಇಳಿಗೂದಲು
            (೬) ಉದರದಂಗಳ
            (೭) ಎದೆಮುಗಳು
            (೮) ಎದೆಯಕಟುಕ
            (೯) ಎಲ್ಲೆಕಟ್ಟು
            (೧೦) ಒಳಹದುಳ
            (೧೧) ಕಡಲಟ್ಟ
            (೧೨) ಕಡೆಕೂಳು
            (೧೩) ಕಡೆಗೋಲು (=oar)
            (೧೪) ಕಣ್ಣನಂಜು
            (೧೫) ಕತ್ತಲೆಕಾಳು
            (೧೬) ಕನಿಮನೆ
            (೧೭) ಕರುಳಮಲ್ಲಿಗೆ
            (೧೮) ಕಾಲತೊಡರು
            (೧೯) ಕೊನೆಬಿಕ್ಕು
            (೨೦) ಗಂಡುಗಣ್ಣು
            (೨೧) ಗುಬ್ಬಿಬೆಳಸಿ
            (೨೨) ಗುಬ್ಬಿಮನೆ
            (೨೩) ಗುಬ್ಬಿಮಾನವ
            (೨೪) ಗೊನೆಮಿಂಚು
            (೨೫) ಜನ್ನಗುದುರೆ
            (೨೬) ಜೊನ್ನಮಗ್ಗ
            (೨೭) ತನಿಗುಸುರು
            (೨೮) ತಪ್ಪಡಿ (=ತಪ್ಪು ಅಡಿ)
            (೨೯) ತಿರುಹಾಡು
            (೩೦) ತುಟಿಹಾಲು
            (೩೧) ತೊತ್ತುಳಿಗೊಳ್ಳು
            (೩೨) ದೊರೆವಾಡು
            (೩೩) ಧೂಳಿಸ್ನಾನ (=ಪರಾಗಸ್ಪರ್ಶ)
            (೩೪) ನಗಿಹೂ
            (೩೫) ನಗೀನವಿಲು
            (೩೬) ನನಿಕೊನೆ
            (೩೭) ನನ್ನಿಕಾವ
            (೩೮) ನನ್ನಿವಾತು
            (೩೯) ನಿಡುದುದಿ
            (೪೦) ನೀರಮಣಿ
            (೪೧) ನೆತ್ತರಹೇಡಿ
            (೪೨) ನೆತ್ತರಹೂವು
            (೪೩) ಪಟ್ಟವಣೆ
            (೪೪) ಪಡಿನೆಳಲು
            (೪೫) ಪಣ್ಯಕಾವ್ಯ
            (೪೬) ಪರಪ್ರಾಣ
            (೪೭) ಪಿರಿಸೆರೆ
            (೪೮) ಪೆರಗನ್ನಡಿ
            (೪೯) ಬಣಗುಮಾತು
            (೫೦) ಬಾನಬಟ್ಟೆ
            (೫೧) ಬಾಳ್ವಣ್ಣು
            (೫೨) ಬಿಚ್ಚುಜೀವ
            (೫೩) ಬೀರಕಡಗ
            (೫೪) ಬೀರಬೊಬ್ಬೆ
            (೫೫) ಬೆಂಡುಗೊಳ್ಳು
            (೫೬) ಬೆರಗುಗತೆ
            (೫೭) ಬೆವರಬಳ್ಳಿ
            (೫೮) ಬೆಳಕಿನೊಡೆಯ
            (೫೯) ಮಳ್ಳಗಾಳಿ
            (೬೦) ಮಿಕ್ಕುಗಾಳು
            (೬೧) ಮುಂಗಾವಲು
            (೬೨) ಮುಂಗುರುಹು
            (೬೩) ಮುಂಗೆಲಸ
            (೬೪) ಮುಗಿಲಿನಂಗಳ
            (೬೫) ಮೆಚ್ಚುಬೆರಳು
            (೬೬) ಸವಿಕೂಟ
            (೬೭) ಸಿರಿಮುಖ
            (೬೮) ಸುಖದ ಹೂವು
            (೬೯) ಸುಳಿಗಾಲ
            (೭೦) ಸುಳ್ಳೆಣಕಿ
            (೭೧) ಸೂಳೆಬೆಡಗು
            (೭೨) ಹಾದಿಹುಡಿ
            (೭೩) ಹಾಲಗಂಗೆ
            (೭೪) ಹಿಂಜಾಪು
            (೭೫) ಹುಡಿಯಣು
            (೭೬) ಹುಲುಗಡಣ
            (೭೭) ಹೂತುಟಿನೀರು
            (೭೮) ಹೊಂಗೆಳತಿ 
            (೭೯) ಹೊರಮಿಂಚು
           
ಇವಲ್ಲದೆ ಬೇಂದ್ರೆಯವರು ಕೆಲವೊಂದು ಪದಗಳನ್ನು ಸ್ವತಃ ಟಂಕಿಸಿಕೊಂಡಿದ್ದಾರೆ ಅಥವಾ ರೂಪಾಂತರಿಸಿಕೊಂಡಿದ್ದಾರೆ. ಅವು ಯಾವುದೇ ಶಬ್ದಕೋಶದಲ್ಲಿ ಸಿಗಲಿಕ್ಕಿಲ್ಲ.
ಉದಾಹರಣೆ:
ಅಟಮಟಿಸು, ಉಗೆವಾಡ, ಕಟ್ಟಡಕ, ಕಾಳವ, ಚಲಮಲ ಇತ್ಯಾದಿ.
ಈ ಪದಗಳ ಅರ್ಥವನ್ನು ಸಾಂದರ್ಭಿಕವಾಗಿಯೇ ಮಾಡಿಕೊಳ್ಳಬೇಕಾಗುತ್ತದೆ.

ಕೆಲವೊಂದು ಪದಗಳು ಕಾಲಾಂತರದಲ್ಲಿ ಕನ್ನಡದಿಂದ ಕಣ್ಮರೆಯಾಗಿವೆ. ಆದರೆ ಬೇರೆ ಭಾಷೆಗಳಲ್ಲಿ ಈ ಪದಗಳ ರೂಪಾಂತರಗಳು ಬಳಕೆಯಲ್ಲಿವೆ. ಉದಾಹರಣಗೆ ‘ನರಬಲಿ’ ಕವನದಲ್ಲಿ ಬೇಂದ್ರೆಯವರು ‘ಕಕ್ಕಡ’ ಎನ್ನುವ ಕನ್ನಡ ಪದವನ್ನು ಬಳಸಿದ್ದಾರೆ. ಇದರ ಅರ್ಥ ಹಿಲಾಲು, ಮಶಾಲ , torch. ಈ ಪದವು ಮರಾಠಿಯಲ್ಲಿ ‘ಕಾಕಡಾ’ ಅಗಿ ಬಳಕೆಯಲ್ಲಿದೆ. ದೇವಾಲಯಗಳಲ್ಲಿ ಸೂರ್ಯೋದಯಪೂರ್ವದ ಆರತಿಗೆ ‘ಕಾಕಡಾರತಿ’ ಎನ್ನುತ್ತಾರೆ. ವಿದ್ಯುಚ್ಛಕ್ತಿ ಇಲ್ಲದ ಹಳೆಯ ದಿನಗಳಲ್ಲಿ ಕಕ್ಕಡವನ್ನು ಬಳಸಿ, ಭಕ್ತರು ಆರತಿಗಾಗಿ ಗುಡಿಗೆ ಬರುತ್ತಿದ್ದರು. ಆದುದರಿಂದ ‘ಕಾಕಡಾರತಿ’ ಎನ್ನುವ ಹೆಸರು. ಅದರಂತೆ ಹಳೆಯ ಕಾಲದ ಅಡುಗೆ ಸ್ಟೋವುಗಳಿಗೆ ಬಿಸಿ ಮಾಡಲು ಬಳಸುವ ಉಪಕರಣಕ್ಕೆ ‘ಕಾಕಡಾ’ ಎನ್ನುತ್ತಿದ್ದರು. ಈ ಮರಾಠಿ ಪದಕ್ಕೆ ಕನ್ನಡದ ‘ಕಕ್ಕಡ’ವೇ ಮೂಲವಾಗಿದೆ.

ಬೇಂದ್ರೆಯವರ ಬಳಸಿದ ಕೆಲವು ಪದಗಳು ಸಾಮಾನ್ಯ ಅರ್ಥದ ವಿರೋಧಾಭಾಸದಲ್ಲಿ ಬಳಕೆಯಾಗಿವೆ. ಉದಾಹರಣೆಗೆ ‘ಸುಖ’ ಎನ್ನುವ ಪದವನ್ನು ಪರೀಕ್ಷಿಸೋಣ. ಬೇಂದ್ರೆಯವರು ‘ಗರಿ’ ಕವನ ಸಂಕಲನದ  ೭ ಕವನಗಳಲ್ಲಿ ಒಟ್ಟು ೧೦ ಸಲ ‘ಸುಖ’ ಎನ್ನುವ ಪದವನ್ನು ಬಳಸಿದ್ದಾರೆ. ಆದರೆ ಒಂದು ಸಲವೂ ಈ ಪದದ ಅರ್ಥವು ಸುಖವನ್ನು ಕೊಡುವದಿಲ್ಲ . ಈ ಕವನಗಳನ್ನು ಪರೀಕ್ಷಿಸೋಣ:

ಸುಖವು ಮೃಗಜಲ ಎನ್ನುವ ಅರ್ಥದಲ್ಲಿ ಈ ನಾಲ್ಕು ಕವನಗಳಲ್ಲಿ ಬಳಸಲಾಗಿದೆ:
(೧) ಕುಣಿಯೋಣು ಬಾರs ಕುಣಿಯೋಣು ಬಾ:
                                    ಬಿಸಿ ದುಃಖದರಿವ್ಯಾಕ
                                    ಹುಸಿ ಸುಖದ ಪರಿವ್ಯಾಕ
                                    ಕುಣಿಯೋಣು ಬಾರs ಕುಣಿಯೋಣು ಬಾ.
(೨) ಹುದುಗಲಾರದ ದುಃಖ:
                                    ಮುಗುಳುನಗೆಯರಳಿಸುತ ಕರಿಯಾಲಿ ಹೊರಳಿಸುತ
                                    ಸುಳ್ಳು ಸುಖ ಮೆರೆಸಬಹುದೆ?
                                    ಮಮತಾಜಳನು ಹುಗಿದು ತಾಜಮಹಲನು ಕಟ್ಟಿ
                                    ನಿಜದುಃಖ ಮರೆಸಬಹುದೆ?
(೩) ನನ್ನ ಕಿನ್ನರಿ:
                                    ಬಾಡಿದ ಮುಖದಿಂದ
                                    ಹತ್ತಿದೆ ಸುಖದ್ಹಿಂದ
                                    ಸಿಗದsನ ಸಿಗದsನ ಸಿಗದsನ
                                    ಸಿಗು ಬದುಕಲ್ಲೆಂದು ಬಗೆದೇನ.
(೪) ನನ್ನ ಹಾಡು:
                                    ಸುಖದ ಮಿಷವು,
                                    ದುಃಖ ವಿಷವು
                                    ಹಿಗ್ಗಿ ಪ್ರಾಣಪೂರಣಾ

ಆದರ್ಶದ ಕವನಗಳಲ್ಲಿ ಸುಖವು ಆದರ್ಶಕಾಲದಲ್ಲಿ ದೊರೆಯಬೇಕಾದ ವಸ್ತುವಾಗಿದೆ!
            (೧) ಕೋಗಿಲೆ:
                                    ವ್ಯೋಮಮಂಡಲ ಸುಖಧಾಮವಾಗುsವಂತೆ
                                    ಕಾಮರತಿಯ ಮೀರಿ ಕೋಗಿಲೇ!
                                    ಪ್ರೇಮಕವಿಯು ಕಂಡ ಸಾಮವೇದವ ನೀನು
                                    ಕೂಗುವಿಯಾ ಹೇಳು ಕೋಗಿಲೇ!
            (೨) ಕೀರ್ತಿ:
                                    ತನ್ನ ಹಿಗ್ಗಿಗೆ ತೆರೆದ ಆ ಸುಖಸರೋವರದ
                                    ನಗೆಯ ನೈದಿಲವೆ ನಂದನದ ಕಂಪು
            (೩) ಕೀರ್ತಿ:
                                    ಸುಖದ ಬಂಗಾರ ಜೀವನದ ಸಿಂಗಾರ
                                    ಹೆಸರ ಕೀರ್ತಿಯು ಮಾತ್ರ ವಜ್ರಪಾತ

ಕೆಲವು ಕವನಗಳಲ್ಲಿ ವ್ಯಂಗ್ಯರೂಪವಾಗಿ ‘ಸುಖ’ ಬಂದಿದೆ. ಉದಾಹರಣೆ:
            (೧)ಕೆಲಸವಿಲ್ಲದವರ ಹಾಡು:
                                    ಬಾರೈ ಬಣ್ಣದ ಮಾತಿನ ಅಣ್ಣ!
                                    ಸುಖಸಾಮ್ರಾಜ್ಯದ ಕನಸಿಗ ನೀನು.
                                    ಅಟ್ಟ ಮುರಿಯುವೀ ಕುಣಿತವಿದೇನು?

ಈ ರೀತಿಯಾಗಿ ಬೇಂದ್ರೆಯವರ ಕವನಗಳಲ್ಲಿ ‘ಸುಖ’ ಪದದ ಮರ್ಮವು ಅದರ ಅರ್ಥಕ್ಕಿಂತ ಭಿನ್ನವಾಗಿದೆ!

ಒಟ್ಟಿನಲ್ಲಿ ಬೇಂದ್ರೆಯವರ ‘ಗರಿ’ ಕವನಸಂಕಲನದ ಪದಸಂಧಾನವನ್ನು ಪರೀಕ್ಷಿಸಿದಾಗ ಈ ಕೆಳಗಿನ ನಿರ್ಣಯಗಳಿಗೆ ತಲುಪಬಹುದು:
(೧) ಸಹೃದಯ ಓದುಗರೊಡನೆ ಆತ್ಮೀಯತೆ ಬೇಂದ್ರೆ-ಕಾವ್ಯದ ಮುಖ್ಯ ಲಕ್ಷಣ.
(೨) ವೈಯಕ್ತಿಕ ಆದರ್ಶ, ನಾಡು ಹಾಗು ನುಡಿಯ ಪ್ರೇಮ ಇವು ‘ಗರಿ’ ಸಂಕಲನದ ಕವನಗಳ ಸ್ಫೂರ್ತಿಮೂಲಗಳು.
(೩) ತತ್ವಜ್ಞಾನ, ಯೋಗಶಾಸ್ತ್ರ ಇವೆಲ್ಲವೂ ಬೇಂದ್ರೆ-ಕಾವ್ಯದಲ್ಲಿ ಹಾಸುಹೊಕ್ಕಾಗಿವೆ.
(೪) ಬೇಂದ್ರೆ ಪದಭಾಂಡಾರ ಅಪಾರವಾದದ್ದು ಹಾಗು ಪದಗಳನ್ನು ಟಂಕಿಸುವ ಬೇಂದ್ರೆ ಪ್ರತಿಭೆ ಅಗಾಧವಾದದ್ದು.
(೫) ಬೇಂದ್ರೆಯವರು ಕನ್ನಡ ಪದಗಳನ್ನೇ ಅತಿ ಹೆಚ್ಚಾಗಿ ಬಳಸಿದ್ದಾರೆ.

ಇದು ಬೇಂದ್ರೆ ಸಮಗ್ರಕಾವ್ಯದ ಪದಸಂಧಾನವಲ್ಲ.
ಕೇವಲ ‘ಗರಿ’ ಕವನಸಂಕಲನದ ಕವನಗಳ ಪದಸಂಧಾನದ ವಿಶ್ಲೇಷಣೆಯಿಂದ ಇದಿಷ್ಟು ನನಗೆ ಹೊಳೆದ ತಿಳಿವು. ಸಮಗ್ರ ಪದಸಂಧಾನದಿಂದ ಹೆಚ್ಚಿನ ತಿಳಿವು ಸಾಧಿಸೀತು.

ಪದಸಂಧಾನ ತುಲನೆ:
ತುಲನಾತ್ಮಕ ಪದಸಂಧಾನವು ಈರ್ವರು ಕವಿಗಳ ತುಲನಾತ್ಮಕ ಅಧ್ಯಯನಕ್ಕೆ ನೆರವು ನೀಡುತ್ತದೆ. ಉದಾಹರಣೆಗೆ ಬೇಂದ್ರೆ ಹಾಗು ಕುವೆಂಪುರವರನ್ನು ಈ ರೀತಿಯಾಗಿ ಅಭ್ಯಸಿಸಬಹುದು. ನಾನು ಕುವೆಂಪುರವರ ಯಾವುದೇ ಕವನಸಂಕಲನದ ಪದಸಂಧಾನವನ್ನು ಮಾಡಿರದಿದ್ದರೂ ಸಹ ಎಲ್ಲರೂ ತಿಳಿದಿರುವಂತೆ, ಕುವೆಂಪುರವರಲ್ಲಿ ಸಂಸ್ಕೃತ ಪದಗಳ ಆಧಿಕ್ಯವಿದೆ. ಎರಡನೆಯದಾಗಿ ಕುವೆಂಪುರವರ ಕವನಗಳಲ್ಲಿ ಆದೇಶಾತ್ಮಕ ಪದಗಳ ಆಧಿಕ್ಯವಿದೆ. ಬೇಂದ್ರೆ ಹಾಗು ಕುವೆಂಪು ಈರ್ವರೂ ‘ಬೆಳಗಿ’ನ ಬಗೆಗೆ ಬರೆದ ಕವನಗಳನ್ನೇ ನೋಡಿರಿ.

ಬೇಂದ್ರೆ: “ಶಾಂತಿರಸವೆ ಪ್ರೀತಿಯಿಂದ ಮೈದೋರಿತಣ್ಣಾ, ಇದು ಬರಿ ಬೆಳಗಲ್ಲೊ ಅಣ್ಣಾ!”
ಕುವೆಂಪು: “ಸೂರ್ಯೋದಯ, ಚಂದ್ರೋದಯ ದೇವರ ದಯೆ ಕಾಣಾ!”

ಬೇಂದ್ರೆಯವರ ಕವನದಲ್ಲಿ ಆತ್ಮೀಯವಾಚಕ ಅಥವಾ ಸಂಬಂಧವಾಚಕವಾದ ‘ಅಣ್ಣಾ’ ಪದದ ಬಳಕೆಯ ಹಾಗು ವಿಸ್ಮಯದ ಸೂಚನೆ ಇದ್ದರೆ, ಕುವೆಂಪುರವರ ಕವನದಲ್ಲಿ ಆದೇಶಾತ್ಮಕ ‘ಕಾಣಾ’ ಪದದ ಹಾಗು ಓದುಗನನ್ನು ‘keeping at a distance’ ಭಾವನೆ ಎದ್ದು ಕಾಣುತ್ತದೆ.

ಈ ರೀತಿಯ ತುಲನಾತ್ಮಕ ಅಧ್ಯಯನವನ್ನು ಸಹ ಪದಸಂಧಾನದ ಮೂಲಕ ಮಾಡಬಹುದು.

25 comments:

ಜಲನಯನ said...

ಸುನಾಥಣ್ಣ ಇವೆಲ್ಲಾ ನೀವೇ ವಿಶ್ಲೇಷಣೆ ಮಾಡಿ ಬರೆದ ವಿವರಾತ್ಮಕ ವಿಷಗಳಾ....ಅಲ್ಲ..ಇವೆಲ್ಲ್ಲ ಯಾವುದೇ ಪಿ.ಎಚ್.ಡಿ ಕಡಿಮೆಯಿಲ್ಲ...ನಮಗೇ ಓದಲೇ ಎಷ್ಟು ಸಮಯ ಬೇಕು...ಇನ್ನು ಬರೆದ ನಿಮಗೆ..??
ಹ್ಯಾಟ್ಸ ಆಫ್ ನಿಮ್ಮ್ಮ ಈ ಸಹನೆಗೆ ಮತ್ತು ವಿಶ್ಲೇಷಣಾ ಸಾಮರ್ಥ್ಯಕ್ಕೆ.
ಅಂದಹಾಗೆ ಪ್ರತಿಯೊಬ್ಬ ಲೇಖಕ ತನ್ನದೇ ಆದ ಸಿಗ್ನೇಚರ್ (ಹಸ್ತಾಕ್ಷರ)ಶೈಲಿಗೆ ಬದ್ಧನಸುವುದಿಲ್ಲವೇ...? ನಾನು ವೈಜ್ಞಾನಿಕ ಲೇಖಕರ ಶೈಲಿಯಲ್ಲಿ ಇದನ್ನು ಗಮನಿಸಿದ್ದೇನೆ..ಕೆಲವರ ಪದ ಬಳಕೆಯಲ್ಲಿ (ಪುನರಪಿ ಬಳಕೆ) ಗೊತ್ತಾದ ವಿಧ ಕಂಡುಬರುತ್ತದೆ...ಅಲ್ಲವೇ...?

sunaath said...

ಜಲನಯನ,
ನೀವು ಗಮನಿಸಿದ ವಿಷಯ ಸರಿಯಾಗಿದೆ. ಪ್ರತಿಯೊಬ್ಬ ಲೇಖಕನ ಹಸ್ತಾಕ್ಷರ ಶೈಲಿಯೂ ವಿಶಿಷ್ಟವಾಗಿರುತ್ತದೆ. ಅವರ ಶೈಲಿ ಹಾಗು ಅವರು ಬಳಸುವ ಪದಗಳ ಮೂಲಕ ಅವರ ಹಿನ್ನೆಲೆ, ಅವರ ಧೋರಣೆ, ಅವರ psychology ಮೊದಲಾದ ಸಂಗತಿಗಳನ್ನು ಅಭ್ಯಸಿಸಬಹುದು. ಆದರೆ ಇದಕ್ಕೆ ತಾಳ್ಮೆ ಹಾಗು ದೀರ್ಘ ಶ್ರಮ ಬೇಕಾಗುವದು!

V.R.BHAT said...

ಬೇಂದ್ರೆಯವರ ಬಗ್ಗೆ ಇಷ್ಟೆಲ್ಲಾ ಆಳವಾಗಿ ಬಹುಶಃ ಯಾರೂ ಬರೆದಿರಲಿಕ್ಕಿಲ್ಲ, ಒಂದು ವಿನಂತಿ: ಕವನಗಳು ಹುಟ್ಟಿದ ಸಂದರ್ಭಗಳು ತಮಗೆ ಸಿಕ್ಕರೆ, ಅವುಗಳು ಇನ್ನೂ ಸಂತುಷ್ಟಿದಾಯಕ, ಆ ದಿಸೆಯಲ್ಲಿ ಆದರೆ ಒಂದಷ್ಟು ನಿರೀಕ್ಷಿಸುತ್ತೇನೆ, ತಮ್ಮ ಪ್ರಯತ್ನಕ್ಕೆ ನಮ್ಮ ಪ್ರತಿಕ್ರಿಯೆಯಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲ, ಕೇವಲ ಅನೌಪಚಾರಿಕ ಧನ್ಯವಾದಗಳು 'ಒಳಗಿನಿಂದ' ಹೊರಬರುತ್ತಿವೆ, ಅವುಗಳನ್ನೇ ತಮಗೆ ತಲ್ಪಿಸುವ ಅಂಚೆಮಾಮನಾಗಿ ಬರೆಯುತ್ತಿದ್ದೇನೆ, ಧನ್ಯವಾದಗಳು

ಸೀತಾರಾಮ. ಕೆ. / SITARAM.K said...

ಸುನಾಥರೆ ನಿಮ್ಮ ಅಧ್ಯಯನದಾಹಕ್ಕೆ ಮತ್ತು ಅದರ ವೈವಿಧ್ಯಕ್ಕೆ ನನ್ನದೊಂದು ನಮಸ್ಕಾರ. ತಮ್ಮ ಈ ಪ್ರಯತ್ನ ಯಾವ ಪಿಎಚ್-ಡಿ ಗೂ ಕಮ್ಮಿ ಇಲ್ಲ. ಈ ತರದ ಅಧ್ಯಯನ ಕನ್ನಡದಲ್ಲೇ ಮೊದಲು.

ತುಂಬಾ ಉತ್ತಮವಾಗಿ ಪದಸಂಧಾನದ ಬಗ್ಗೆ ಮತ್ತು ಬೇಂದ್ರೆಯವರ ಗರಿ ಯನ್ನೂ ಪದಸಂಧಾನಕ್ಕೆ ಒಳಪಡಿಸಿ -ಬರೆದ ಈ ಲೇಖನ ನಿಜಕ್ಕೂ ನಮಗೆ ಸಂಗ್ರಹಯೋಗ್ಯ!
ಧನ್ಯವಾದಗಳು.

sunaath said...

ಭಟ್ಟರೆ,
ಬೇಂದ್ರೆಯವರ ಕೆಲವು ಕವನಗಳಿಗೆ ಅವರೇ ಸಂದರ್ಭಸೂಚಿಯನ್ನು ಕೊಟ್ಟಿದ್ದಾರೆ. ಅಂತಹ ಕವನಗಳ ಸಂದರ್ಭಗಳನ್ನು ಅವಕಾಶವಿದ್ದಾಗ ಕೊಡುವೆ.
ತಮ್ಮ ಒಲವಿನ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

sunaath said...

ಸೀತಾರಾಮರೆ,
Concordance ಬಗೆಗೆ ನಾನು ಮೊದಲು ಓದಿದ್ದು ಶ್ರೀನಿವಾಸ ಹಾವನೂರರು ಬರೆದ ಲೇಖನವೊಂದರಲ್ಲಿ. ಆದರೆ ಬೇಂದ್ರೆಯವರ ಸಮಗ್ರ ಕಾವ್ಯವನ್ನು ಪದಸಂಧಾನಕ್ಕೆ ಅಳವಡಿಸುವದು ದುಸ್ಸಾಧ್ಯವೆಂದುಕೊಂಡು ತೆಪ್ಪಗೆ ಕುಳಿತಿದ್ದೆ. ಬಳಿಕ ‘ಗರಿ’ ಸಂಕಲನವೊಂದನ್ನಾದರೂ ಪ್ರಯತ್ನಿಸಬಹುದೆಂದು ಅನ್ನಿಸಿದ್ದರಿಂದ, ದೊಡ್ಡ ಸಾಹಸದ ಬದಲು ಸಣ್ಣ ಸಾಹಸಕ್ಕೆ ಕೈಹಾಕಿದೆ!

Prabhuraj Moogi said...

ಈ ರೀತಿಯ ಸುಧೀರ್ಘ ವಿಶ್ಲೇಷಣೆಗೆ ನೀವು ತೆಗೆದುಕೊಳ್ಳುವ ಶ್ರಮ ಅತ್ಯಂತ ಅಮೂಲ್ಯ ಸರ್... ಜೋಡುಪದಗಳು ಬಹಳ ಇಷ್ಟವಾದವು...
ಪುನರಪಿ ಪದ ಬಳಕೆ ನಿಜ ಅಲ್ವಾ... ಗೊತ್ತಿದ್ದೊ ಗೊತ್ತಿಲ್ಲದೋ ಲೇಖಕ ಹಾಗೆ ಕೆಲವೊಂದು ಪದಗಳನ್ನು ಪದೇಪದೇ ಬಳಸಿರುತ್ತಾನೆ...

sunaath said...

ಪ್ರಭುರಾಜರೆ,
ಬೇಂದ್ರೆಯವರ ಎಲ್ಲ ಕವನಗಳ ಜೋಡುಪದಗಳನ್ನು ಹಾಗು ದೇಸಿ ಪದಗಳನ್ನು ಪಟ್ಟಿ ಮಾಡಿದರೆ, ಅದೇ ಭಾಷಾಸುಖದ ಒಂದು ಸ್ರೋತವಾದೀತು!
ಇನ್ನು ಎಲ್ಲ ಲೇಖಕರ ಹಾಗು ನಮ್ಮೆಲ್ಲರ (ಬ್ಲಾಗಿಗರ) ಲೇಖನಗಳಲ್ಲಿ ಮತ್ತು ಪ್ರತಿಸ್ಪಂದನಗಳಲ್ಲಿ ಸಹ ಕೆಲವೊಂದು ಪದಗಳ ಪುನರಾವರ್ತನೆಯು ಆಗುವದು ನೀವು ಊಹಿಸಿದಂತೆ ಸರಿಯಾಗಿದೆ. ಇಂತಹ ಒಂದು ಪದಸಂಧಾನ ಮಾಡಿದರೆ, ನಮ್ಮ ಅಂತರಂಗಕ್ಕೆ ಒಂದು ಬೆಳಕಿಂಡಿ ದೊರೆತೀತು!

Subrahmanya said...

ಕಾಕಾಶ್ರೀ,

ಇಷ್ಟೊಂದು ಛಂದೋಬದ್ದವಾಗಿ ಭಟ್ಟಿ ಇಳಿಸಿದ ನಿಮ್ಮ ತಾಳ್ಮೆಗೆ ಏನು ಹೇಳುವುದು !?. ಇಂತಹ concept ಕೂಡ ನನಗೆ ಹೊಸದು. ಈ ಲೇಖನದಿಂದ ತುಂಬ ತಿಳಿಯಿತು ಮತ್ತು ಒಂದಷ್ಟು ಕಲಿತೆ. ನಿಮ್ಮ ಲೇಖನದಿಂದ ಕಲಿಯುವುದೇ ನಿಮ್ಮ ಬರಹದ ಸಾರ್ಥಕ್ಯವೆಂದುಕೊಂಡಿದ್ದೇನೆ.

(ಯಾಕೋ ಗೊತ್ತಿಲ್ಲ, ನಿಮ್ಮ ಈ ಪೋಸ್ಟ್ ನನ್ನ ಬ್ಲಾಗಿನಲ್ಲಿ update ಆಗಿರಲಿಲ್ಲ (technical problems ??) ..ಹಾಗಾಗಿ ತಡವಾಯಿತು. )

sunaath said...

ಪುತ್ತರ್,
concordance ಅನ್ನುವ conceptಅನ್ನು ನಾನು ಸಹ ಶ್ರೀ ಶ್ರೀನಿವಾಸ ಹಾವನೂರರ ಲೇಖನ ಓದಿದಾಗಲೇ ಅರಿತುಕೊಂಡದ್ದು. ತಿಳಿವಳಿಕೆ ಎನ್ನುವದು ಇದೇ ತರಹ ಸರಪಣಿಯಲ್ಲಿ ಸಾಗಬೇಕಲ್ಲವೆ?

ಇನ್ನೂ ಕೆಲವು ಬ್ಲಾಗುಗಳ ಪಟ್ಟಿಯಲ್ಲಿಯೂ ಸಹ ‘ಸಲ್ಲಾಪ’ ಅಪ್ ಡೇಟ್ ಆಗಿಲ್ಲ ಎನ್ನುವದನ್ನು ಗಮನಿಸಿದ್ದೇನೆ. ಏನೋ ತಾಂತ್ರಿಕ ಸಮಸ್ಯೆ ಇರಬಹುದು.

Unknown said...

ಸುನಾಥ್ -
ಅಧ್ಯಯನ ಯೋಗ್ಯ, ವೈಜ್ಞಾನಿಕ ಮತ್ತು ವಿಚಾರಪೂರ್ಣ ಮತ್ತು ವಿಭಿನ್ನ ದೃಷ್ಟಿಯ ಲೇಖನಕ್ಕೆ ಧನ್ಯವಾದಗಳು.
ನಿಮ್ಮ ಈ ಪ್ರಯತ್ನ ಶ್ಲಾಘನೀಯ ಮತ್ತು ಅಭಿನಂದನೀಯ.
-ಅಶ್ವತ್ಥ ಶಿಕಾರಿಪುರ

sunaath said...

ಅಶ್ವತ್ಥರೆ,
ಪದಸಂಧಾನದ ಪರಿಕಲ್ಪನೆಯನ್ನು ಅರಿತ ಬಳಿಕ ನಾನು ಮಾಡಿದ ಮೊದಲ ಪ್ರಯತ್ನವಿದು. ಇನ್ನೂ ಏನೆಲ್ಲ ಸಾಧ್ಯತೆಗಳು ಇರುವವೊ ಗೊತ್ತಿಲ್ಲ. ನೀವೆಲ್ಲ ಈ ದಿಕ್ಕಿನಲ್ಲಿ ಸಾಧನೆಗೈಯಬಹುದು.

Mahantesh said...

oncordance (ಪದಸಂಧಾನ ) ಎಷ್ಟೊಂದು ವಿವರಗಳು. ನಿಮ್ಮ ವಿವರಣೆ, ವಿವರಾತ್ಮಕ ವಿಶ್ಲೇಷಣೆ , ಅದಕ್ಕೆ ತಗೆದುಕೊಂಡ ಸಮಯ ,ಸಹನೆಗೆ ಹ್ಯಾಟ್ಸ ಆಫ್.

sunaath said...

ಮಹಾಂತೇಶ,
ನಿಮ್ಮ ಒಲವಿನ ಸ್ಪಂದನಕ್ಕೆ ಧನ್ಯವಾದಗಳು.

Ashok.V.Shetty, Kodlady said...

Sunaat sir,

ishtu vistaaravaagi,vivaraatmakavaagi chitrisiddiri.Nimma blog na moolaka aneka nanage priyavaada, aadre nange gottillada vishyagalannu aritukollutiddene. Dnhayvadagalu sir...

sunaath said...

ಅಶೋಕರೆ,
ಈ ಲೇಖನದಿಂದ ನಿಮಗೆ ಕೆಲವೊಂದು ಮಾಹಿತಿ ದೊರಕಿದ್ದರೆ, ಅದೇ ನನಗೆ ಖುಶಿ.

KalavathiMadhusudan said...

ಸುನಾಥ್ ಸರ್ ರವರೆ ಬೇಂದ್ರೆಯವರ " ಗರಿ "ಯನ್ನ ಸುಧೀರ್ಘವಾದ ಅಧ್ಯಯನ ದಿಂದ ಸವಿವರವಾದ ಮಾಹಿತಿಯನ್ನು ನಮಗೆ
ಒದಗಿಸಿರುತ್ತೀರಾ.ನಿಮ್ಮ ವಿಶೇಷವಾದ ಈ ಪ್ರಯತ್ನ ಶ್ಲಾಘ ನೀಯವಾದದ್ದು.ಹೃತ್ಪೂರ್ವಕ ಅಭಿನಂದನೆಗಳು.ನಿಮ್ಮಿಂದ ಇನ್ನು ಹೆಚ್ಚುಅಮೂಲ್ಯವಾದ ಮಾಹಿತಿಹರಿದುಬರುತ್ತಿರಲಿ... ಧನ್ಯವಾದಗಳು.

sunaath said...

ಕಲಾವತಿಯವರೆ,
ಚಿಕ್ಕ ಪ್ರಯತ್ನವನ್ನು ಮಾಡಿದ್ದೇನೆ. ಎಷ್ಟು ಸಫಲನಾಗಿದ್ದೇನೊ ತಿಳಿಯದು.

Manjunatha Kollegala said...

By and large, the best ever analysis I ever came across. ಸುನಾಥರೇ, ಬೇಂದ್ರೆಯವರ ಬಗೆಗಿನ ತಮ್ಮ passion ಇಷ್ಟು ಆಳ ಮುಟ್ಟುವುದೆಂದು ಎಣಿಸಿರಲಿಲ್ಲ. ರಸಯಾತ್ರೆಯಲ್ಲಿ ತಮ್ಮೊಡನೆ ಹೆಜ್ಜೆ ಹಾಕುವುದು ತುಸು ಉಸಿರುಹತ್ತಿಸುವ ಕೆಲಸವೇ ಸರಿ. ತುಸು ನಿಧಾನ! ಪದಪದಗಳ ಅಂಕಿ-ಅಂಶಗಳ ಮಟ್ಟದ ವಿಶ್ಲೇಷಣೆ, ಅದೂ ಒಣವಿಶ್ಲೇಷಣೆಯಲ್ಲ, ರಸವತ್ತಾದ ಸಾಹಿತ್ಯಕ ವಿಶ್ಲೇಷಣೆಯಿಂದ ಕುಣಿದಾಡುವಷ್ಟು ಖುಷಿಯಾಯಿತು. ಗಣಕ ಯಂತ್ರ ಮತ್ತು ತಾಂತ್ರಿಕತೆಯ ಬೆಂಬಲವಿದ್ದೂ ನಾನು ಇಷ್ಟು ಆಳವಾದ ವಿಶ್ಲೇಷಣೆಗೆ ತೊಡಗುತ್ತಿದ್ದೆನೇ? ಖಂಡಿತ ಇಲ್ಲ. Thanks for this wonderful writeup.

sunaath said...

ಶಿವಶಂಕರ,
ಪ್ರಕಾಶರಿಗೆ ನನ್ನ ದೂರವಾಣಿ ಸಂಖ್ಯೆ ನಿಜವಾಗಿಯೂ ಗೊತ್ತಿಲ್ಲ. ಅದು ರಹಸ್ಯವಾಗಿಯೂ ಇಲ್ಲ.
(೦೮೩೬-೨೪೬೬೭೧೩).

ನೀವು ಗದಗಿನವರು. ಧಾರವಾಡ,ಗದಗ ಹತ್ತಿರದಲ್ಲಿಯೇ ಇವೆ!
ಅಲ್ಲದೆ ದೂರವಾಣಿಯಂತೂ ದೂರವನ್ನು ಇಲ್ಲದಂತೆ ಮಾಡಿದೆ.
ನಿಮಗೆ ಸ್ವಾಗತ.

sunaath said...

ಮಂಜುನಾಥರೆ,
ನಾನು ಪದಸಂಧಾನ-concordance ಬಗೆಗೆ ಮೊದಲು ಓದಿದ್ದು ಶ್ರೀ ಶ್ರೀನಿವಾಸ ಹಾವನೂರರ ಲೇಖನ ಒಂದರಲ್ಲಿ. ಬೇಂದ್ರೆಯವರ ಎಲ್ಲ ಕವನಗಳನ್ನೂ ಪದಸಂಧಾನಕ್ಕೆ ಅಳವಡಿಸುವದು ದುಸ್ತರವೆಂದುಕೊಂಡೇ ‘ಗರಿ’ ಸಂಕಲನವನ್ನು ಆರಿಸಿಕೊಂಡೆ. ಇನ್ನೂ ಅನೇಕ ಅಂಶಗಳು ನನಗೆ ಹೊಳೆಯದೇ ಇರಲೂ ಬಹುದು.
ನಾನು ಸೇವಾನಿವೃತ್ತ ವ್ಯಕ್ತಿಯಾಗಿರುವದರಿಂದ ಕಾಲಾವಕಾಶ ಲಭ್ಯವಾಗುತ್ತದೆ. ನೀವು ಸೇವೆಯಲ್ಲಿ ಇದ್ದುಕೊಂಡೇ ‘ಕರ್ಣಾಟ ಭಾರತ ಕಥಾಮಂಜರಿ’ಗಾಗಿ ದುಡಿಯುತ್ತಿರುವದು ಹೆಚ್ಚಿನ ಪ್ರಶಂಸೆಗೆ ಅರ್ಹವಾಗಿದೆ.

Anonymous said...

ಸರ್

ತುಂಬಾ ದಿನದಿಂದ ಕಾಕದ ಆರತಿ ಅಂತ ಯಾಕಂತಾರೆ ಅಂದ್ಕೋತಿದ್ದೆ .
ಕಾಕಡ ಅಂದರೆ ಮರಾಟಿ ಯಲ್ಲಿ ನಸುಕೆನೋ ಅಂದ್ಕೊಂಡಿದ್ದೆ :-)
ತಪ್ಪುಗ್ರಹಿಕೆ ದೂರಾಯಿತು
ಧನ್ಯವಾದಗಳು.
ಸ್ವರ್ಣ

sunaath said...

ಸ್ವರ್ಣಾ,
ನನಗೂ ಸಹ ಪದಸಂಧಾನದ ಸಮಯದಲ್ಲಿಯೇ ಈ ಅರ್ಥದ ಅರಿವಾಗಿದ್ದು. ಧನ್ಯವಾದಗಳು.

Unknown said...

ಹೊಸಪದಗಳನ್ನು ಕನ್ನಡದ್ದೇ ಆಗಿರಬೇಕೆಂಬುದನ್ನ ಬಲವಾಗಿ ನಂಬಿರುವುದರಿಂದ
೧. concordance - An index of all main words in a book along with their immediate contexts
ಪದವೆಣಿಕೆ, ಪದತೋರು, ಒರೆತೋರು, ಪದತೋರುವೆಣಿಕೆ
ಪದತೋರುವೋದು, ಪದತೋರ್ವಟ್ಟಿ(ಪದ+ತೋರ್+ಪಟ್ಟಿ)

೨. comparitive study = ತುಲನಾತ್ಮಕ ಅಧ್ಯಯನ = ಹೋಲಿಸಿವೋದು, ಹೋಲ್ವೋದು.

Unknown said...

"...ಬೇಂದ್ರೆಯವರು ‘ಕಕ್ಕಡ’ ಎನ್ನುವ ಕನ್ನಡ ಪದವನ್ನು ಬಳಸಿದ್ದಾರೆ. ಇದರ ಅರ್ಥ ಹಿಲಾಲು, ಮಶಾಲ , torch. ಈ ಪದವು ಮರಾಠಿಯಲ್ಲಿ ‘ಕಾಕಡಾ’ ಅಗಿ ಬಳಕೆಯಲ್ಲಿದೆ. .."

ಕರ್+ಕಡೆ = ಕರ್ಕಡೆ => ಕಕ್ಕಡೆ = ಕಕ್ಕಡ

ಅಂದರೆ ಕರ್(ಕತ್ತಲೆ) ಅನ್ನು ಕಡೆಸುವುದು(ಹೋಗಲಾಡಿಸುವುದು) ಎಂಬ ತಿರುಳು ಆಗುತ್ತದೆ.

+ಹದುಳವಿರಲಿ,
ಬರತ್