Thursday, December 27, 2012

ಅತ್ಯಾಚಾರೀ ಸಮಾಜ ಹಾಗು ಪರಿಹಾರದ ಹಕ್ಕು


ಈಗಿನ ಭಾರತೀಯ ಸಮಾಜವು ಅತ್ಯಾಚಾರೀ ಸಮಾಜವಾಗಿದೆ. ಸ್ತ್ರೀಯರ ಮೇಲಿನ ದೌರ್ಜನ್ಯದ ಹಾಗು ಸಾರ್ವಜನಿಕ ಅಪಮಾನದ ಸಮಾಚಾರಗಳು ಪ್ರತಿದಿನವೂ ಪತ್ರಿಕೆಯಲ್ಲಿ ಬರುತ್ತಲೇ ಇವೆ. ಈ ದುಷ್ಕೃತ್ಯಗಳನ್ನು ಮಾಡುವ ನೀಚರನ್ನು ಗಲ್ಲಿಗೇರಿಸಬೇಕು ಎನ್ನುವ ಬೇಡಿಕೆಯು ಸರಿಯಾದದ್ದೇ. ಕೊಲೆಯಾದವನ ಯಾತನೆಯು ಒಂದೇ ಸಲಕ್ಕೆ ಮುಗಿಯುತ್ತದೆ. ಆದರೆ ಅತ್ಯಾಚಾರಕ್ಕೊಳಗಾದ ಸ್ತ್ರೀಯು ಪ್ರತಿದಿನವೂ ಮಾನಸಿಕ ಹಾಗು ಸಾಮಾಜಿಕ ಯಾತನೆಯನ್ನು ಅನುಭವಿಸುತ್ತಾಳೆ. ಆದುದರಿಂದ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಶಿಕ್ಷೆ ಸಮರ್ಪಕ ಶಿಕ್ಷೆಯಾಗಿದೆ. ಇಷ್ಟೇ ಸಾಲದು. ಅತ್ಯಾಚಾರಕ್ಕೊಳಗಾದ ಸ್ತ್ರೀಗೆ ಅಪರಾಧಿಯು ಭಾರೀ ಪರಿಹಾರವನ್ನು ನೀಡಬೇಕು. ಈ ಪರಿಹಾರವನ್ನು ನೀಡುವ ಆರ್ಥಿಕ ಸಾಮರ್ಥ್ಯ ಅವನಲ್ಲಿ ಇಲ್ಲದಿದ್ದರೆ, ಸರಕಾರವೇ ಆ ಮೊತ್ತವನ್ನು ಭರಿಸಬೇಕು.

ಒಂದು ಕೂಸು ಹುಟ್ಟಿದ ಗಳಿಗೆಯಲ್ಲಿ, ಅದು ಸರ್ವತಂತ್ರ ಸ್ವತಂತ್ರ ಜೀವಿಯಾಗಿರುತ್ತದೆ. ಆದರೆ ಸಾಮಾಜಿಕ ಕಟ್ಟುಪಾಡುಗಳಿಗೆ ಒಳಪಟ್ಟ ಕ್ಷಣದಿಂದ, ಆ ಜೀವಿಯ ಸ್ವಾತಂತ್ರ್ಯ ನಷ್ಟವಾಗುತ್ತದೆ. ಉದಾಹರಣೆಗೆ, ಸ್ವತಂತ್ರ ಜೀವಿಯು ಕಾಡಿಗೆ ಹೋಗಿ, ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದು. ತನ್ನನ್ನು ಕಾಡುವ ವೈರಿಗಳನ್ನು ಕೊಂದು ಹಾಕಬಹುದು. ಆದರೆ, ಸಾಮಾಜಿಕ ಕಟ್ಟುಪಾಡುಗಳಿಗೆ ಒಳಗಾಗುವ ಅನಿವಾರ್ಯತೆಯಿಂದಾಗಿ ಇಂತಹ ಸ್ವಾತಂತ್ರ್ಯ ಹೊರಟುಹೋಗುತ್ತದೆ. ಅದರ ಬದಲಾಗಿ ಆ ಜೀವಿಗೆ ಕೆಲವೊಂದು ಹಕ್ಕುಗಳು ಲಭಿಸುತ್ತವೆ. ದುರಾಚಾರದಿಂದ ರಕ್ಷಣೆ ಪಡೆಯುವುದು ಪ್ರತಿಯೋರ್ವ ಜೀವಿಯ ಹಕ್ಕು ಹಾಗು ರಕ್ಷಣೆ ಕೊಡುವುದು ಸರಕಾರದ ಹೊಣೆಗಾರಿಕೆ. ರಕ್ಷಣೆ ಸಾಧ್ಯವಾಗದಿದ್ದರೆ, ಸಮುಚಿತ ಪರಿಹಾರವನ್ನು ಕೊಡಲೇಬೇಕು. ಅದು ಸರಕಾರದ ಕರ್ತವ್ಯ.

ಅತ್ಯಾಚಾರಿಗಳಿಗೆ ಶಿಕ್ಷೆ ಹಾಗು ದೌರ್ಜನ್ಯಪೀಡಿತರಿಗೆ ಪರಿಹಾರ ನೀಡುವದಷ್ಟೇ ಸಾಲದು. ಭಾರತೀಯ ಸಮಾಜದಲ್ಲಿ ಅತ್ಯಾಚಾರಗಳು ಏಕೆ ಹೆಚ್ಚಾಗುತ್ತಿವೆ ಎನ್ನುವುದನ್ನು ಅರಿತು, ಆ ಸಮಸ್ಯೆಯನ್ನು ಬಗೆಹರಿಸುವುದು ಅವಶ್ಯಕವಾಗಿದೆ. ಸಮಸ್ಯೆಯ ಕಾರಣವಂತೂ ಸ್ಪಷ್ಟವಾಗಿದೆ. ನಮ್ಮ ಸಮಾಜವು ತನ್ನ ತರುಣರಿಗೆ ತಪ್ಪು ಹಾದಿಯನ್ನು ತೋರಿಸುತ್ತಿದೆ. ನೈತಿಕ ಹಾಗು ಸಾಮಾಜಿಕ ಆದರ್ಶಗಳು ಮಾಯವಾಗಿವೆ. ಟೀವಿ ಹಾಗು ಸಿನೆಮಾಗಳಲ್ಲಿ ಆಶ್ಲೀಲತೆ ಹಾಗು ಮಿತಿಮೀರಿದ ಕ್ರೌರ್ಯದ ಪ್ರದರ್ಶನವಾಗುತ್ತಿದೆ.  ನಮ್ಮ ಶಾಸಕರಲ್ಲಿ ಶೇಕಡಾ ೩೦ರಷ್ಟು ಶಾಸಕರು ಒಂದಿಲ್ಲ ಒಂದು ನಮೂನೆಯ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ತಮ್ಮ ರಾಜಕೀಯ ಬಲದಿಂದಾಗಿ ಅನೇಕ ರಾಜಕಾರಣಿಗಳ ಅಪರಾಧಗಳು ಮುಚ್ಚಿ ಹೋಗುತ್ತಿವೆ. ಈ ನಾಯಕರೇ ನಮ್ಮ ತರುಣರಿಗೆ ಮಾದರಿಯಾಗಿದ್ದಾರೆ! ಹೀಗಿದ್ದಾಗ ನಮ್ಮ ಸಮಾಜವು ಅತ್ಯಾಚಾರೀ ಸಮಾಜವಾಗಿ ಬದಲಾದದ್ದರಲ್ಲಿ ಆಶ್ಚರ್ಯವೇನಿದೆ? ಯಥಾ ರಾಜಾ ತಥಾ ಪ್ರಜಾ!

ಗ್ಯಾಂಗ್‍ರೇಪ್‍ನಂತಹ ಅತ್ಯಾಚಾರಗಳು ಕಣ್ಣಿಗೆ ಎದ್ದು ಕಾಣುವಂತಹ ದೌರ್ಜನ್ಯಗಳಾಗಿವೆ. ಆದರೆ ಸಾರ್ವಜನಿಕರ ನಜರಿಗೆ ಬಾರದಿರುವ ದೌರ್ಜನ್ಯಗಳು ಇದರ ಸಾವಿರ ಪಟ್ಟಿನಷ್ಟಿವೆ. ಭಾರತದ ಮೆಟ್ರೋಗಳಲ್ಲಿ ದಿನವೂ ಅನೇಕ ಅಪಹೃತ ಬಾಲಿಕೆಯರ ಮಾರಾಟವಾಗುತ್ತಿದೆ. ಎರಡು ವರ್ಷಗಳ ಶಿಶುಗಳೂ ಸಹ ಅತ್ಯಾಚಾರಕ್ಕೆ ಬಲಿಯಾಗುತ್ತಿರುವುದು ಪತ್ರಿಕೆಗಳಲ್ಲಿ ಬೆಳಕಿಗೆ ಬರುತ್ತಿದೆ. ಹೆಣ್ಣಾಗಿ ಹುಟ್ಟಿದ್ದೇ ಈ ಬಾಲಿಕೆಯರ ಹಾಗು ಶಿಶುಗಳ ಅಪರಾಧವೇ?

ಸರಕಾರಕ್ಕೆ ಇದು ಗೊತ್ತಿರದೆ ಏನು? ಆದರೆ ಅಪರಾಧ ಮಾಫಿಯಾ ದೊಡ್ಡ ಸಂಘಟನೆಯಾಗಿದೆ. ಇವರು ಗಳಿಸುವ ಕೊಳಕು ಹಣದಲ್ಲಿ ಸಮಾಜರಕ್ಷಕರಿಗೂ ಪಾಲಿರುತ್ತದೆ. ಸರಕಾರದ ಕನಿಷ್ಠ ಕರ್ಮಚಾರಿಯಿಂದ ಪ್ರಾರಂಭವಾಗಿ, ಸರಕಾರದ ವರಿಷ್ಠರವರೆಗೆ ಎಲ್ಲರಿಗೂ ಈ ಅರಿಷ್ಟ ಹಣದಲ್ಲಿ ಪಾಲಿರುವದು ಒಂದು ಬಹಿರಂಗ ರಹಸ್ಯ!

ಆದುದರಿಂದ ಅಪರಾಧಿಗಳಲ್ಲಿ ಹೆದರಿಕೆ ಹುಟ್ಟಿಸುವಂತಹ ಶಿಕ್ಷೆಯ ಜೊತೆಗೆ, ಭಾರತೀಯ ಸಮಾಜದಲ್ಲಿರುವ ಅನೈತಿಕ ಕೊಳಕನ್ನು ಗುಡಿಸುವ ಕೆಲಸವೂ ಆಗಬೇಕು. ಶಾಲೆಗಳಲ್ಲಿ ನೈತಿಕ ಶಿಕ್ಷಣ ದೊರೆಯಬೇಕು. ಟೀವಿ ಹಾಗು ಸಿನೆಮಾಗಳಲ್ಲಿ ಅಶ್ಲೀಲತೆ ಹಾಗು ಕ್ರೌರ್ಯದ ಪ್ರದರ್ಶನಗಳನ್ನು ಪ್ರತಿಬಂಧಿಸಬೇಕು. ಲಂಚಗುಳಿ ಹಾಗು ಲಂಪಟ ರಾಜಕಾರಣಿಗಳನ್ನು ಸಮಾಜವು ತಿರಸ್ಕರಿಸಬೇಕು. ಅಲ್ಲಿಯವರೆಗೂ ಸ್ತ್ರೀಯರ ಹಾಗು ಬಾಲಿಕೆಯರ ಮೇಲಿನ ದೌರ್ಜನ್ಯವು ನಿಲ್ಲುವದಿಲ್ಲ.

ಸಾಮಾಜಿಕ ಅಪರಾಧಗಳಿಗೆ ಇನ್ನೂ ಒಂದು ಕಾರಣವಿದೆ. ಅನೇಕ ವರ್ಷಗಳ ಹಿಂದೆ, ಪ್ರಾಣಿವಿಜ್ಞಾನಿಗಳು ವಿಭಿನ್ನ ಪ್ರದೇಶಗಳ ಮಂಗಗಳ ಮೇಲೆ ಕೆಲವು ಪ್ರಯೋಗಗಳನ್ನು ಮಾಡಿದರು. ಈ ಪ್ರಾಣಿಗಳಲ್ಲಿ ಅವರು ಮೂರು ಗುಂಪುಗಳನ್ನು ಮಾಡಿದ್ದರು: ಅತಿ ದಟ್ಟವಾದ ಸಂಖ್ಯೆಯುಳ್ಳ ಗುಂಪು, ವಿರಳ ಸಂಖ್ಯೆಯ ಗುಂಪು ಹಾಗು ಮಧ್ಯಮ ಪ್ರಮಾಣದ ಸಂಖ್ಯೆಯ ಗುಂಪು. ಯಾವ ಗುಂಪಿನಲ್ಲಿ ಅತಿ ದಟ್ಟವಾದ ಪ್ರಾಣಿಸಂಖ್ಯೆ ಇದ್ದು, ನಾಯಕತ್ವವು ಬಲಹೀನವಾಗಿರುವಿದೋ, ಆ ಗುಂಪಿನ ಪ್ರಾಣಿಗಳಲ್ಲಿ ಪರಸ್ಪರ ಕಚ್ಚಾಟ ಹಾಗು ಅಪರಾಧಗಳು ವಿಶೇಷ ಪ್ರಮಾಣದಲ್ಲಿ ಕಂಡು ಬಂದವು. ಪ್ರಾಣಿಗಳಲ್ಲಿ ಸಾಧಾರಣವಾಗಿ ಕಂಡು ಬರದಂತಹ, ರೇಪ್ ಸಹ ಈ ಗುಂಪಿನಲ್ಲಿ ಕಂಡು ಬಂದಿತು. ಭಾರತದ ಸದ್ಯದ ಪರಿಸ್ಥಿತಿಯು ಇದೇ ರೀತಿಯಾಗಿರುವುದು ಸ್ಪಷ್ಟವಿದೆ. ನಮ್ಮಲ್ಲಿ ಮಿತಿ ಮೀರಿದ ಜನಸಂಖ್ಯೆ ಇದ್ದು, ಬಲಶಾಲಿ ನಾಯಕತ್ವದ ಅಭಾವವಿದೆ. 


ನಮ್ಮ ನಾಯಕರು ಮಧ್ಯರಾತ್ರಿಯ ಸಮಯದಲ್ಲಿ ನಿದ್ರಿಸುವ ಅಮಾಯಕ ಜನತೆಯ ಮೇಲೆ (--ಅವರಲ್ಲಿ ಅನೇಕರು ಮಹಿಳೆಯರು--) ಲಾಠೀಚಾರ್ಜ ಮಾಡಿಸುವ ಮೂಲಕ ತಮ್ಮ ಬಲಪ್ರದರ್ಶನ ಮಾಡುತ್ತಿದ್ದಾರೆ. ರಾಮಲೀಲಾ ಬಯಲಿನಲ್ಲಿ ರಾಮದೇವರ ಶಿಷ್ಯರ ಮೇಲೆ ನಡಿಸಿದ ಈ ದೌರ್ಜನ್ಯವು ಜಾಲಿಯಾನವಾಲಾ ಬಾಗಿನಲ್ಲಿ ಬ್ರಿಟಿಶರು ನಡೆಸಿದ ದೌರ್ಜನ್ಯಕ್ಕಿಂತ ಯಾವುದರಲ್ಲಿ ಕಡಿಮೆ ಇದೆ? ಅದರಂತೆ ಜಂತರಮಂತರ ಹಾಗು ಇಂಡಿಯಾ ಗೇಟಿನ ಬಳಿ ವಿದ್ಯಾರ್ಥಿಗಳ ಮೇಲೆ ಪೋಲೀಸರು ನಡೆಸಿದ ದೌರ್ಜನ್ಯವು ಚೀನಾದಲ್ಲಿಯ ಟಿಯಾನಾನ್ಮನ್ ಚೌಕದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ನೆನಪಿಸುತ್ತದೆ. ನಮ್ಮ ಸರಕಾರದ ನೀತಿಯೆಂದರೆ, ಚಳುವಳಿಗಾರರನ್ನು ಇದೇ ರೀತಿಯಲ್ಲಿ ಸತಾಯಿಸುತ್ತ ಇರಬೇಕು. ಕೊನೆಗೊಮ್ಮೆ ಅವರೇ ದಣಿದು ತಮ್ಮ ಚಳುವಳಿಯನ್ನು ಸ್ಥಗಿತಗೊಳಿಸುತ್ತಾರೆ! ಇದಕ್ಕೆ ಬಲಶಾಲಿ ನಾಯಕತ್ವ ಎನ್ನುವುದಿಲ್ಲ. ಇದು ಮಹಾಭಾರತದ ದುರ್ಯೋಧನನ ನೀತಿ. ನಮಗೆ ಬೇಕಾಗಿರುವುದು ಸುಭಾಷಚಂದ್ರ ಭೋಸ ಹಾಗು ವಲ್ಲಭಬಾಯಿ ಪಟೇಲರಂಥವರ ಸ್ಥೈರ್ಯದ ಗುಣ!


ಇನ್ನು  ಮತಬ್ಯಾಂಕನ್ನು ಓಲೈಸುವ ರಾಜಕಾರಣಿಗಳು ಜನಸಂಖ್ಯಾನಿಯಂತ್ರಣದ ಬಗೆಗೆ ಕ್ರಮ ತೆಗೆದುಕೊಳ್ಳುವದಂತೂ ಕನಸಿನ ಮಾತು. ಜನಸಂಖ್ಯೆ ಹೆಚ್ಚಿದಂತೆಲ್ಲ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಸಮಸ್ಯೆಗಳ ದುರ್ಲಾಭ ಪಡೆಯುವದೇ ರಾಜಕಾರಣಿಗಳ ನೀತಿಯಾಗಿದೆ.  ಪರಿಸ್ಥಿತಿಯು ಇದೇ ರೀತಿಯಲ್ಲಿ ಮುಂದುವರೆದರೆ, ನಮ್ಮ ಭಾರತವು ಕೊಳಚೆಯ ಗೂಡಾಗುವದರಲ್ಲಿ ಸಂದೇಹವಿಲ್ಲ.

30 comments:

Swarna said...

ಎನೂ ಹೇಳಲು ಆಗುತ್ತಿಲ್ಲ ಕಾಕಾ
ಇಂದು ಮತ್ತೊಂದು ಸುಧ್ಧಿ ಬಂದಿದೆ
ಹಸ್ತಿನಾವತಿಯಲ್ಲಿಗ ಅಕ್ಷರಶಃ ದುಷ್ಶಾಸನರ ರಾಜ್ಯ
ಕೃಷ್ಣ ತಾನಾದರೂ ಬರಲಿ
ಇಲ್ಲವೇ ಕೃಷ್ಣೆಯರಿಗೆ ಆ ಶಕ್ತಿ ಬರಲಿ

Ashok.V.Shetty, Kodlady said...

ಸುನಾಥ್ ಸರ್,

ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ ಏನು ಮಾಡೋದು? ತಂದೆ ಎನಿಸಿಕೊಂಡ ಪ್ರಾಣಿ ಕೂಡ ತನ್ನ ಮಕ್ಕಳ ಮೇಲೆ ಅತ್ಯಾಚಾರ ಮಾಡಿರುವ ಸುದ್ದಿಗಳನ್ನು ನಾವು ಹಲವು ಸಲ ಓದಿದ್ದೇವೆ. ಹಾಗಾದ್ರೆ ಒಂದು ಹೆಣ್ಣು ಮಗು ಯಾರ ಮೇಲೆ ಭರವಸೆ ಇಡಬೇಕು ???? ಇವೆಲ್ಲಕ್ಕೆ ಯಾರನ್ನು ದೂರಬೇಕು, ಯಾರನ್ನು ಹಳಿಯಬೇಕು ಎಂದೇ ಅರ್ಥವಾಗುತ್ತಿಲ್ಲ......ನಮ್ಮ ಕಾನೂನು ಸಹ ಇಂತಹ ಅಪರಾಧಿಗಳಿಗೆ ಕಠಿಣವಾದ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗಿರುವುದು ಸಹ ವಿಷಾದನೀಯ.....ಧರ್ಮಸ್ಥಳ ದಲ್ಲಿ ಇತ್ತೀಚಿಗೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ' ಸೌಜನ್ಯ' ಳಿಗೆ ನ್ಯಾಯ ದೊರಕಿಲ್ಲ....ಕೆಲವು ಘಟನೆಗಳು ಎಲ್ಲರ ಗಮನಕ್ಕೆ ಬಂದರೆ ಅದೆಷ್ಟೋ ಹೆಣ್ಣುಮಕ್ಕಳು ಇಂತಹ ನೋವನ್ನು ಅನುಭವಿಸಿ ಯಾರಿಗೂ ಹೇಳಲಾಗದೆ ಮುಚ್ಚಿಟ್ಟ ಘಟನೆಗಳು ಇರಬಹುದಲ್ಲವೇ ??? ಮನುಷ್ಯನ ನಡವಳಿಕೆ ಕ್ರೂ ರ ಪ್ರಾಣಿಗಳಿಗಿಂತ ಕಡೆಯಾದ ರೀತಿಯಲ್ಲಿ ವರ್ತಿಸುತ್ತಿರುವುದು ನಿಜಕ್ಕೂ ವಿಷಾದನೀಯ....ವಿದ್ಯಾವಂತ ರೆನಿಸಿಕೊಂಡ ಯುವಕರು ಸಹ ಇಂತಹ ಅಮಾನವೀಯ ಕೃತ್ಯಗಳಿಗೆ ಕೈಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ....

ಸಕಾಲಿಕ ಲೇಖನ....ಧನ್ಯವಾದಗಳು....

Badarinath Palavalli said...

ಇಂದಿನ ವಿಷಮಯ ಅತ್ಯಾಚಾರಿ ಸಮಾಜದ ಬಗೆಗೆ ಒಳ್ಳೆಯ ಲೇಖನ ಸಾರ್. ಸರ್ಕಾರಗಳ ಹೊಣೆಗೇಡಿತನ ಮತ್ತು ಅಪರಾಧಿಗಳ ಉಡಾಫೆಗಳ ಫಲವೇ ಈ ಕರ್ಮಕಾಂಡ.

ಮತ ಬ್ಯಾಂಕ್ ಮತ್ತು ಸ್ವಿಸ್ ಬ್ಯಾಂಕ್ ಎರಡನ್ನೇ ತುಂಬಿಸಲು ಹೆಣಗುವ ರಾಜಕಾರಣಿಗಳಿಗೆ ಬುದ್ದಿ ಎಂದು ಬರುತ್ತದೋ? ಘೋರ ಶಿಕ್ಷೆಗಳು ಶೀಘ್ರವಾಗಿ ಸಿಗುವಂತಾಗಲಿ.

sunaath said...

ಸ್ವರ್ಣಾ,
ನಮ್ಮ ಸಾಂಸ್ಕೃತಿಕ ಹಾಗು ರಾಜಕೀಯ ವಾತಾವರಣ ಬದಲಾಗಬೇಕು. ಅದನ್ನು ನಾವೇ ಸಾಧಿಸಬೇಕು. ಕೃಷ್ಣ ಬರಲಿ, ಬಿಡಲಿ; ಕೃಷ್ಣೆಯರು ಸಬಲರಾಗಬೇಕು!

sunaath said...

ಅಶೋಕರೆ,
ನೈತಿಕತೆ ತಳಮಟ್ಟ ಕಂಡಿದೆ. ರಾಜಕೀಯವು ಇದಕ್ಕೆ ಒಂದು ಪ್ರಮುಖ ಕಾರಣವಾಗಿದ್ದರೆ, ಆ ರಾಜಕೀಯಕ್ಕೆ ಮತದಾತರೂ ಕಾರಣರೇ!

sunaath said...

ಬದರಿನಾಥರೆ,
ರಾಜಕಾರಣವು ಆಮೂಲಾಗ್ರವಾಗಿ ಬದಲಾಗಬೇಕು. ಅಲ್ಲಿಯವರೆಗೆ, ನಮ್ಮನ್ನು, ನಮ್ಮ ಹೆಣ್ಣುಮಕ್ಕಳನ್ನು ದೇವರೇ ರಕ್ಷಿಸಬೇಕು!

ಜಲನಯನ said...

ಬಹಳ ಸಾಂದರ್ಭಿಕ ಸುನಾಥಣ್ಣ ನಿಮ್ಮ ಲೇಖನ. ಸಮಾಜದ ಹುಳುಕುಗಳಿಗೆ ಕಲುಷಿತ ವಾತಾವರಣ ಕಾರಣ ಎಂದೇ ನನ್ನ ಅನಿಸಿಕೆ. ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡಲಾಗದೇ ಹೋಗುತ್ತಿರುವುದು ಪೋಷಕರ ವೈಫಲ್ಯವಾದರೆ ಎಲ್ಲಾ ಕೆಟ್ಟದ್ದನ್ನೇ ಕಲಿಸಿಕೊಡುವ ಮಾಧ್ಯಮಗಳು. ಇಂದಿನ ಚಿತ್ರರಂಗದ ಪಾತ್ರ ಅತಿಹೆಚ್ಚು ಇದು ನನ್ನ ಬಲವಾದ ನಂಬಿಕೆ.
ಸಮಾಜವೂ ತನ್ನ ನೇರಕ್ಕೇ ಎಲ್ಲವನ್ನೂ ತೆಗೆದುಕೊಳ್ಳುವುದೇ ಇನ್ನೊಂದು ಕಾರಣ ಸಾಮೂಹಿಕ ಜವಾಬ್ದಾರಿಯ ಪರಿಕಲ್ಪನೆ ನಮ್ಮ ಇಂದಿನ ಸಮಾಜದಲ್ಲಿಲ್ಲ. ದೆಹಲಿಯ ಆ ನತದೃಷ್ಟೆಯ ಉದಾಹರಣೆ ತೆಗೆದುಕೊಳ್ಳಿ. ಪಾಪ ರಕ್ತದ ಮಡುವಿನಲ್ಲಿ ಬೆತ್ತಲೆ ಬಿದ್ದವಳನ್ನು ನೋಡುವವರೇ ಇದ್ದರೇ ವಿನಃ ಕಳಕಳಿಯಿಂದ ವರ್ತಿಸಿದವರು ಇರಲೇ ಇಲ್ಲ... ಯೋಚನೆಗೀಡುಮಾಡುವ ಬೆಳವಣಿಗೆಗಳು.

ಮಂಜುಳಾದೇವಿ said...

ಹೊಲಸು ರಾಜಕೀಯ,ಕೊಳಕು ಸಮಾಜ,ಬೇಡದ್ದನ್ನೇ ಮತ್ತೆ ಮತ್ತೆ ತೋರಿಸಿ ಹಾದಿ ತಪ್ಪಿಸುವ ಮಾಧ್ಯಮಗಳು . ಇವೆಲ್ಲವುಗಳಿಂದ ನಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳುವುದೆಂತು....?ಭವಿಷ್ಯವನ್ನು ನೆನಪಿಸಿಕೊಂಡರೆ ಭಯವಾಗುತ್ತದೆ.ಇವುಗಳಿಗೆ ಕೊನೆಯೆಂದು....?ನಿಮ್ಮ ಕಳಕಳಿಯ ಬರಹಕ್ಕೆ ಧನ್ಯವಾದಗಳು ಸಾರ್.

sunaath said...

ಜಲನಯನ,
ಸಾಂಸ್ಕೃತಿಕ ವಾತಾವರಣವನ್ನು ಕಲ್ಮಶಗೊಳಿಸುವದರಲ್ಲಿ ನಮ್ಮ ಚಿತ್ರರಂಗದ ಕೊಡುಗೆ ಅಗಾಧವಾಗಿದೆ! ಸರಕಾರವು ಸೆನ್ಸಾರಿಂಗ್ಅನ್ನು ಬಲಗೊಳಿಸಬೇಕು.ನಾವು ಸರಕಾರವನ್ನು ಒತ್ತಾಯಿಸಬೇಕು.

sunaath said...

ಮಂಜುಳಾದೇವಿಯವರೆ,
ಕಲುಷಿತ ವಾತಾವರಣದಲ್ಲಿ ನಮ್ಮ ಮಕ್ಕಳು ಸೆರೆಯಾಗಿದ್ದಾರೆ. ವಾತಾವರಣವನ್ನು ಸ್ವಚ್ಛಗೊಳಿಸುವುದು ಹಿರಿಯರಾದ ನಮ್ಮ ಜವಾಬ್ದಾರಿಯಾಗಿದೆ.

ದಿನಕರ ಮೊಗೇರ said...

ಸುನಾಥ್ ಸರ್,
ನಿಮ್ಮ ಲೆಖನ ರಾಜಕಾರಣದ, ರಾಜಕಾರಣಿಗಳ ಪರದೆ ತೆರೆದಿದೆ.. ಎಲ್ಲಿಯವರೆಗೂ ವೋಟ್ ಬ್ಯಾಂಕ್ ರಾಜಕಾರಣ ಇರತ್ತೋ ಅಲ್ಲಿಯವರೆಗೂ ..ಇದೇ ಸ್ಥಿತಿ ಅನಿಸತ್ತೆ... ಹೆಣ್ಣಿನ ಮೇಲಿನ ದೌರ್ಜನ್ಯ ಸೌಹಾರ್ಧ ಸಮಾಜವನ್ನು ಕಲುಶಿತ ಗೊಳಿಸಿದೆ....

sunaath said...

ದಿನಕರರೆ,
ಈಗ ನಡೆಯುತ್ತಿರುವ ವಿದ್ಯಾರ್ಥಿ ಆಂದೋಲನವನ್ನು ಗಮನಿಸಿದರೆ, ಪರಿಸ್ಥಿತಿ ಸುಧಾರಿಸಬಹುದು ಎನ್ನುವ ಆಸೆ ಮೂಡುತ್ತಿದೆ! ನೋಡೋಣ!

Srikanth Manjunath said...

ಸುಮಾರು ಇಪ್ಪತೈದು 30 ವರ್ಷಗಳ ಹಿಂದೆ "ಕಸ್ತೂರಿ" ಎಂಬ ಮಾಸಿಕದಲ್ಲಿ ಓದಿದ್ದ ನೆನಪು...ಹಿಂದಿನ ಕಾಲದಲ್ಲಿ ಹೆಣ್ಣಿನ ಹೆಜ್ಜೆಯ ಗೆಜ್ಜೆಯ ದನಿಗೆ ಮಾನವ (ಗಂಡು) ಬೆರಗಾಗುತಿದ್ದ..ನಂತರ ಅರೆತೆರೆದ ಕೈ, ತೋಳುಗಳು ಸಾಕಿದ್ದವು....ಅಂತ...ಈಗಿನ ಕಾಲದಲ್ಲಿ ಸಿನಿಮಾದಲ್ಲಿ ತೊಡುವ ಬಟ್ಟೆಗಳು ದೇವರಿಗೆ ಪ್ರೀತಿ..ಇನ್ನು ದೂರದರ್ಶನದಲ್ಲಿ ತೋರುವ ಕಾರ್ಯಕ್ರಮಗಳು ಎಂತಹವರಿಗೂ ಪ್ರಚೋದನೆ ನೀಡುವ ಮಾತು ಸತ್ಯಕ್ಕೆ ತೀರ ಹತ್ತಿರ..ಚಿಕ್ಕ ಮಕ್ಕಳಿಗೂ "ನೀಲಿ: ಬಣ್ಣ ಎಂದರೆ ಏನು ಎನ್ನುವ ಅರ್ಥವಾಗತೊಡಗಿದೆ...ಇದೆ ಅಲ್ಲವೇ ನಿಜವಾದ್ಗ ದುರಂತ...ಸುಂದರ ಲೇಖನ ಸರ್ಜಿ...

KalavathiMadhusudan said...

asahaayakateye drutaraashtranantaagide.
dhanyavaadagalu

sunaath said...

ಶ್ರೀಕಾಂತ,
ನಮ್ಮ ಸಮಾಜವೇ ನೀಲಿಯಾಗತೊಡಗಿದೆ?!

sunaath said...

ಕಲರವ,
ನಮ್ಮ ರಾಜಕಾರಣಿಗಳು ಧೃತರಾಷ್ಟ್ರನಂತೆ ಕುರುಡರಾಗಿದ್ದಾರೆ, ನಮ್ಮ ಶಾಸಕರು ದುಶ್ಶಾಸನರಾಗಿದ್ದಾರೆ. ಆದರೇನು, ನಮ್ಮ ವಿದ್ಯಾರ್ಥಿಗಳ ರೊಚ್ಚನ್ನು ನೋಡಿದಾಗ, ಪರಿಸ್ಥಿತಿ ಸುಧಾರಿಸಬಹುದು ಎನ್ನುವ ಆಸೆ ಚಿಗುರುತ್ತಿದೆ.

umesh desai said...

ಒಳ್ಳೆಯ ಬರಹ ಕಾಕಾ..
ಭಾರತೀಯ ಪುರುಷರೇಕೆ ರೇಪ್ ಮಾಡುತ್ತಾರೆ ಈ ಪ್ರಶ್ನೆ ಇಟ್ಟುಕೊಂಡು
ಟೈಮ್ಸ್ ಆಪ್ ಇಂಡಿಯಾದಲ್ಲಿ ಒಬ್ರು ಬ್ಲಾಗ್ ಬರೆದಿದ್ದರು, ಒಟ್ಟು ಕುಟುಂಬ ಅದರಲ್ಲೂ
ಹೆಣ್ಣುಮಕ್ಕಳ ನಡುವೆ ಬೆಳೆದ ಗಂಡು ಹೇಗೆ ದರ್ಪ ಚಲಾಯಿಸುತ್ತಾನೆ ಮತ್ತು ಹೇಗೆ ಅವನಿಗೆ
ಪ್ರತ್ಯಕ್ಷ ಪರೋಕ್ಷ ಬೆಂಬಲ ದೊರೆಯುತ್ತದೆ....ಇತ್ಯಾದಿ. ಮುಖ್ಯವಾಗಿ ಮಾನಸಿಕ ಸ್ಥಿತಿ ಬದಲಾಗಬೇಕು ಅದು ಕಷ್ಟ
ಹಾಗದ್ರೆ ಇಂಥಾವ್ರಿಗೆ ಹೆದರಿಕೆ ಇರಬೇಕು ಕಾನೂನಿಂದು ಎರಡೂ ಇಲ್ಲ ಅಂದ್ರೆ ಇಂಥಾ ಸುದ್ದಿ ನಾವು ಮೇಲಿಂದ ಮೇಲೆ
ಓದಬೇಕಾಗುತ್ತದೆ...!!

sunaath said...

ದೇಸಾಯರ,
ನಮ್ಮ ಸಮಾಜದ ಸಾಂಪ್ರದಾಯಕ, male chauvinist ಮನೋಭಾವ ಇನ್ನೂ ಬದಲಾಗಿಲ್ಲ. ಕಾದು ನೋಡಬೇಕು!

Manjunatha Kollegala said...

"ಟೀವಿ ಹಾಗು ಸಿನೆಮಾಗಳಲ್ಲಿ ಆಶ್ಲೀಲತೆ ಹಾಗು ಮಿತಿಮೀರಿದ ಕ್ರೌರ್ಯದ ಪ್ರದರ್ಶನವಾಗುತ್ತಿದೆ" - ಸರಿಯಾದ ಮಾತು ಹೇಳಿದಿರಿ. ಇವತ್ತು ದೃಶ್ಯಮಾಧ್ಯಮಗಳು ಬೀರುವ ಪರಿಣಾಮ ಬೇರಾವ ಮಾಧ್ಯಮಗಳೂ ಬೀರುತ್ತಿಲ್ಲ. ಅಂಥಾದ್ದರಲ್ಲಿ ದೃಶ್ಯಮಾಧ್ಯಮಗಳನ್ನು ಎಷ್ಟು ಕೆಟ್ಟ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಅಂದರೆ, ಬೀದಿಯಗಲಕ್ಕೂ ರಕ್ತ-ಮಾಂಸ ಚೆಲ್ಲಾಡಿದ್ದರೂ ಜನಕ್ಕೆ ಏನೂ ಅನ್ನಿಸುವುದಿಲ್ಲವೇನೋ ಅನಿಸುತ್ತದೆ. ದೇವರು-ಧರ್ಮದ ಬಗ್ಗೆ ತುಸುವೇ ಆಚೀಚಿನ ಮಾತು ಬಂದರೂ ರೊಚ್ಚಿಗೇಳುವ ಜನ, ತಮ್ಮ ಸ್ವಾಸ್ಥ್ಯವನ್ನೇ ಶಾಶ್ವತವಾಗಿ ಹಾಳುಗೆಡವಿಬಿಡುವ ಇಂಥಾ ಮನರಂಜನೆಯನ್ನು ಮಾತ್ರ ಏಕೆ ಬಾಯಿ ಚಪ್ಪರಿಸಿಕೊಂಡು ನೋಡುತ್ತಾರೋ ತಿಳಿಯದು. ನನ್ನ ಕೇಳಿದರೆ ಇವತ್ತು ನಡೆಯುತ್ತಿರುವ ಅಪರಾಧಗಳಿಗೆಲ್ಲಾ ಇಂಥಾ ಬೇಜವಾಬ್ದಾರಿ ನಿರ್ಮಾಪಕ-ನಿರ್ದೇಶಕರೇ ಕಾರಣ. ಸೆನ್ಸಾರ್ ನಿಯಮಾವಳಿಗಳನ್ನು ಬಲಪಡಿಸಿ, ಒಂದಿಬ್ಬರು ನಿರ್ಮಾಪಕರನ್ನು ಇನ್ನಿಲ್ಲದಂತೆ ಮುಳುಗಿಸಿದರೆ ಎಲ್ಲವೂ ಸರಿಹೋಗುತ್ತದೆ.

ಮನುಷ್ಯನಿಗೆ ಪುಸ್ತಕದಂಥಾ ಸನ್ಮಿತ್ರ ಇನ್ನೊಂದಿಲ್ಲ ಎಂಬ ಮಾತಿದೆ. ಆದರೆ ಇವತ್ತು ಓದುವ ಹವ್ಯಾಸವನ್ನೇ ಈ ದೃಷ್ಯ ಮಾಧ್ಯಮ ಕಸಿದುಕೊಳ್ಳುತ್ತಿದೆ. ಹಾಗೇ ಜೀವನಕ್ಕೆ ಸಂಸ್ಕೃತಿಯನ್ನು ತಂದುಕೊಡುವ ಸಾಹಿತ್ಯಸಂಪತ್ತನ್ನು ’ಕಸ’ ಎಂದು ಜರಿದು, ಜನರನ್ನ ಅದರಿಂದ ವಿಮುಖಗೊಳಿಸುವ ಪ್ರಯತ್ನಗಳೂ ಜೋರಾಗಿ ನಡೆಯುತ್ತಿವೆ. ಇವೆಲ್ಲಾ ಮೇಲೆ ಹೇಳಿದ ಅತ್ಯಾಚಾರದ ಸಮಸ್ಯೆಗೆ ನೇರ ಸಂಬಂಧಿಸದಿರಬಹುದು, ಆದರೆ ನಮ್ಮ ಬಹುತೇಕ ಸಮಸ್ಯೆಗಳ ಮೂಲ ಇರುವುದು ಇಲ್ಲೇ.

sunaath said...

ಮಂಜುನಾಥರೆ,
ವೈಯಕ್ತಿಕ ಸ್ವಾತಂತ್ರ್ಯದ ನೆವದಲ್ಲಿ ನಮ್ಮ ಸಾಮಾಜಿಕ ಹಾಗು ನೈತಿಕ ಕಟ್ಟುಪಾಡುಗಳು ಶಿಥಿಲವಾಗಿವೆ. ರಾಜಕಾರಣಿಗಳಿಂದಾಗಿ ಶಾಸನದ ಕಟ್ಟುಪಾಡುಗಳಿಗೆ ಬೆಲೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಅಪರಾಧಗಳು ಬೆಳೆಯುತ್ತಿರುವದರಲ್ಲಿ ಆಶ್ಚರ್ಯವಿಲ್ಲ!

vaishu said...

Kakaa olle baraha....nim mathu nija,igina chalanachitragalu kroorateyannu acceptable anno rithi torisuttave.adaralli rowdygale herogalu samajada adarsha vyaktigalu!E prakaranada nantara salaagi baruttiruva samajada mukhya prathinidhi anisikondavara helikegalu(most are ridiculous) samoohikavaagi henn manasugala atyachara nadesuttive.kelavara swechacharakke(swechachaara=kevala gandasina hakku avara prakara)idi hennu kulada atyacharave sariyaada sikshe ennuvantide avara dorane.:( Ondede horaatagalu nadeyuttale ive,innondede madhyamadalli sarani atyacharagala suddhi bittaravaaguttale ive.Attyacharada viruddh mathaadidastu avu hecchutaveye?adagiro vikruta manasugalu jagrutavaguttiddaaveye? athiyada amruthavu vishavaagodandre idena kakaa? idakella thatvika antya koduvudaralli kanunu edavideya? athava naitika shikshanavannu maneyindale shuru maduvalli navugalu edaviddeveye?

sunaath said...

ವೈಶು,ಧನ್ಯವಾದಗಳು.
ಸಮಾಜ ಕೆಟ್ಟು ಹೋಗುತ್ತಾ ಇದೆ ಎಂದು ಭಾವಿಸಿದ್ದೆ. ಆದರೆ, ನಮ್ಮ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಗಮನಿಸಿದ ಬಳಿಕ, ತರುಣ ಪೀಳಿಗೆಯಲ್ಲಿ ಸಂವೇದನೆ ಇದೆ ಎಂದು ಹರ್ಷವಾಗುತ್ತಿದೆ.

ಈಶ್ವರ said...

ಸುನಾಥ್ ಸರ್ ಸಕಾಲಿಕ ವಿಷಯವಿದು. ಪರಿಹಾರ ಹುಡುಕುವ ಬದಲು ಎಲ್ಲರೂ ಘರ್ಷಣೆಯ ಮಾರ್ಗವನ್ನೇ ಅನುಸರಿಸುವುದು ನಮ್ಮ ಸಮಾಜದ ಹುಳುಕು ಆಗಿರಬಹುದು. ಮತ್ತೆ ಇಂತಹ ಕೃತ್ಯಗಳು ಮುಂದುವರೆಯುತ್ತಿರುವುದು ನಾವು ಎತ್ತಕಡೆ ಸಾಗುತ್ತಿದ್ದೇವೆ ಅನ್ನುವುದನ್ನು ತೋರಿಸುತ್ತಾ ಇದೆ. ಖೇದವಿದೆ.

sunaath said...

ಈಶ್ವರ ಭಟ್ಟರೆ,
ಅತ್ಯಾಚಾರ ಜರುಗದಂತಹ ಸಮಾಜ ನಮಗೆ ಬೇಕು. ರೋಗಕ್ಕೆ ಮದ್ದು ಕೊಡುವುದರ ಜೊತೆಗೆ, ರೋಗ ಬಾರದ ಹಾಗೂ ನೋಡಿಕೊಳ್ಳಬೇಕು!

Subrahmanya said...

ಭಾರತವು ಬುಧ್ಧಿವಂತರ ಮುಂದುವರೆದ ದೇಶವಾಗುವವರೆಗೂ ಹೆಚ್ಚಿನದೇನನ್ನೂ ನಿರೀಕ್ಷಿಸಲು ಆಗದು ಎಂದು ನನ್ನ ಭಾವನೆ. ಕಾಲವೇ‌ ಎಲ್ಲಕ್ಕೂ ಉತ್ತರಿಸಬೇಕು.

sunaath said...

ಭಾರತದಲ್ಲಿ ಪ್ರತಿ ದಿನವೂ ಒಂದು ಆಸ್ಟ್ರೇಲಿಯಾ ಖಂಡ ಹುಟ್ಟುತ್ತದೆಯಂತೆ. ಆದರೆ ಈ ಜನಸಂಖ್ಯೆಯಲ್ಲಿ ಶೇಕಡಾ ೯೦ರಷ್ಟು ಜನ ಕಾರ್ಪಣ್ಯದಲ್ಲಿ ಬಳಲುವವರೇ ಆಗಿರುತ್ತಾರೆ. ಇವರು ತಮ್ಮ ನಾಡಿಗೆ ಏನನ್ನು ಕೊಟ್ಟಾರು? ಇವರ ದೇಶ ಇವರಿಗೆ ಏನನ್ನು ಕೊಟ್ಟೀತು?

ತೇಜಸ್ವಿನಿ ಹೆಗಡೆ said...

hmmmmmm Enu madOdu? Sarakaaravannu/samaajavannu sarimadOdu hege? :(

sunaath said...

ತೇಜಸ್ವಿನಿ,
ದೇವರೇ ಕಾಯಬೇಕು!

Anonymous said...

we are part of this system. we should change ourselves to change the society.

sunaath said...

ಹೌದು.ಮೊದಲು ನಾವು ಸರಿಯಾದ ದಾರಿಯಲ್ಲಿ ನಡೆಯಬೇಕು. ನಮ್ಮ ಮಕ್ಕಳಿಗೆ, ನಮ್ಮ ಕಿರಿಯರಿಗೆ ಸರಿಯಾದ ಮಾರ್ಗವನ್ನು ತೋರಿಸಬೇಕು. ಇದು ಸಾಧ್ಯವಿದೆ.