Monday, December 2, 2019

ಕನ್ನಡ ಕಲಿಕೆಯೂ, ಭಾಷೆಯೂ ನಮ್ಮ ಹೆಮ್ಮೆಯ ತುರಾಯಿಯೇ...............ಅನಿತಾ ನರೇಶ್ ಮಂಚಿ

ಸುಶ್ರೀ ಅನಿತಾ ನರೇಶ್ ಮಂಚಿಯವರು ಕನ್ನಡದ ಬಗೆಗೆ ಹಾಗು ಪ್ರಸ್ತುತ ವಿಷಯಗಳ ಬಗೆಗೆ ‘ವಿಜಯವಾಣಿ’ ದಿನಪತ್ರಿಕೆಯಲ್ಲಿ ನಿಯತವಾಗಿ ವೈಚಾರಿಕ ಲೇಖನಗಳನ್ನು ಬರೆಯುತ್ತಾರೆ.  ದಿನಾಂಕ ೨೮ ನವೆಂಬರದಂದು ವಿಜಯವಾಣಿಯಲ್ಲಿ ಪ್ರಕಟವಾದ  ‘ಕನ್ನಡ ಕಲಿಕೆಯೂ, ಭಾಷೆಯೂ ನಮ್ಮ ಹೆಮ್ಮೆಯ ತುರಾಯಿಯೇ’ ಎನ್ನುವ ಇವರ ಲೇಖನವು ಕನ್ನಡ ಕಲಿಕಾವಿಧಾನದ ಬಗೆಗಿನ ಸಮಗ್ರ ವಿಮರ್ಶೆಯಾಗಿದೆ. ಈ ಲೇಖನದಲ್ಲಿ ಇವರು ಪ್ರಸ್ತುತಪಡಿಸಿದ ವಿಚಾರಗಳನ್ನು ನಮ್ಮ ಶಿಕ್ಷಣತಜ್ಞರು ಗಂಭೀರವಾಗಿ ಪರಿಶೀಲಿಸುವುದು ಹಾಗು ಸಮಂಜಸವಾದ ಕ್ರಮವನ್ನು ತೆಗೆದುಕೊಳ್ಳುವುದು ಅವಶ್ಯವಾಗಿದೆ. ಈ ಲೇಖನದ ತಿರುಳಿಗೆ ಹಾಗು ಶೈಲಿಗೆ ಮಾರು ಹೋದ ನಾನು ‘ಸಲ್ಲಾಪ’ದಲ್ಲಿ ಈ ಲೇಖನವನ್ನು ಪ್ರಕಟಿಸಲು ಅವರ ಅನುಮತಿಯನ್ನು ಕೋರಿದಾಗ ತಕ್ಷಣವೇ ಅನುಮತಿಯನ್ನು ನೀಡಿದರು. ಅವರಿಗೆ ನನ್ನ ಧನ್ಯವಾದಗಳು. ಇದೀಗ ಅವರ ಲೇಖನ ನಿಮ್ಮ ಮುಂದಿದೆ. ಇದರಲ್ಲಿ ಕಣ್ತಪ್ಪಿನಿಂದ ಆದಂತಹ ದೋಷಗಳಿಗೆ ನಾನೇ ಕಾರಣ ಎಂದು ಘೋಷಿಸುತ್ತೇನೆ. ...........ಸುನಾಥ. 
.........................................................
ಬಸ್ಸಿಳಿಯುವಾಗಲೇ ಫೋನ್ ಹೊಡೆದುಕೊಂಡಿತ್ತು. ಗೆಳತಿ ರೂಪಾ ಸತೀಶ್ ಮಾತನಾಡುತ್ತಿದ್ದರು. ಆಕೆ ಸಾಮಾಜಿಕ ಜಾಲತಾಣದಲ್ಲಿ ಬಿತ್ತಿದ್ದ 3k ಕನ್ನಡ ಕವಿತೆ ಕಥನ ಎಂಬ ಬೀಜವೊಂದು ಕನ್ನಡಪ್ರಿಯ ಮನಸ್ಸುಗಳ ಹೆಮ್ಮರವಾಗಿ ಬೆಳೆದು ಟೊಂಗೆ ಟೊಂಗೆಗೂ ಕನ್ನಡದ ಹೂಗಳನ್ನರಳಿಸಿ, ಸಿಹಿಯಾದ ಫಲವನ್ನೀಯುತ್ತಿದೆ ಎಂಬುದು ತಿಳಿದಿದ್ದ ವಿಷಯ. ಈಗದರ ದಶಮಾನೋತ್ಸವ ಸಂಭ್ರಮ ಎಂದು ನನ್ನನ್ನೂ ಆ ಕಾರ್ಯಕ್ರಮಕ್ಕೆ ಆಹ್ವಾನಿಸಲು ಕರೆ ಮಾಡಿದ್ದರು. ಸಮಾನ ಮನಸ್ಕರುಳ್ಳ ಆ ಗುಂಪುಹೊರನಾಡವರಿಗೆ ಕನ್ನಡ ಕಲಿಸುವದರಿಂದ ಹಿಡಿದು ಅಶಕ್ತರಿಗೆ ಕೈಲಾದ ಸಹಾಯ ಮಾಡುತ್ತಾ ಕನ್ನಡದ ಬಗ್ಗೆ ಹತ್ತು ಹಲವು ಸ್ಪರ್ಧೆಗಳನ್ನು ನಡೆಸಿ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿತ್ತು. ಇಂತಹ ಕನ್ನಡ ಪ್ರೀತಿಗೊಂದು ಜೈ ಹೇಳುತ್ತಲೇ ನಡೆದು ಬರುತ್ತಿದ್ದೆ.

 ದಾರಿ ಬದಿಯಲ್ಲೊಂದು ಕಂಡ ಗಿಡದಲ್ಲೊಂದು ಸುಂದರ ಹೂವು. ಕಾಡುಗಿಡದಂತೆ ಕಂಡರೂ ಆ ಗಿಡ ಮನೆಯಂಗಳದಲ್ಲೂ ಇದ್ದರೆ ಚೆನ್ನ ಅನ್ನಿಸಿತು. ಗಟ್ಟಿ ಗಿಡ, ಮಣ್ಣು ಒಣಗಿದ್ದ ಕಾರಣ ಕಿತ್ತರೆ ಬರಲಾರದಷ್ಟು ಆಳಕ್ಕಿಳಿದಿದ್ದ ಬೇರುಗಳುಜೊತೆಗೆ ಕಿತ್ತು ನೆಟ್ಟರೆ ಬದುಕಬಹುದೇ ಎಂಬ ಅನುಮಾನ ಕೂಡಾಗಿಡವನ್ನು ಸರಿಯಾಗಿ ನೋಡಿದಾಗ ಗಿಡದಲ್ಲೇ ಉಳಿದಿದ್ದ ಬೀಜಗಳುಕಂಡಿದ್ದವು. ಅದನ್ನೇ ತೆಗೆದುಕೊಂಡರಾಯಿತು ಎಂದು ಬೀಜಗಳನ್ನು ಕಿತ್ತೆ. ಅವುಗಳನ್ನು ಪರ್ಸಿನೊಳಗೆ ಹಾಗೇ ತುರುಕಿದರೆ ಆ ಸಣ್ಣ ಬೀಜಗಳನ್ನು ಪರ್ಸಿನಿಂದ ಹೆಕ್ಕುವುದು ಸುಲಭವಲ್ಲ.ರಸ್ತೆ ಬದಿ ಎಂದ ಮೇಲೆ ಕಾಗದಕ್ಕೇನು ಬರವೇ..? ಕಣ್ಣೆದುರೇ ಬಿದ್ದಿದ್ದ ಯಾರೋ ಮಕ್ಕಳು ಹರಿದೆಸೆದ ಪುಸ್ತಕದ ಅನಾಥ ಹಾಳೆಯೊಂದು ಸಿಕ್ಕಿತು. ಅದರೊಳಗೇ ಬೀಜಗಳನ್ನು ಹಾಕಿ ಮುದುರಿ ಪರ್ಸಿನೊಳಗಿಟ್ಟು ಮನೆಗೆ ನಡೆದೆ. ಕುಂಡವೊಂದಕ್ಕೆ ಮಣ್ಣು ತುಂಬಿ ಪೇಪರಿನ ಉಂಡೆಯನ್ನು ಬಿಡಿಸಿ ಬೀಜಗಳನ್ನುದುರಿಸಿ ನೀರು ಹನಿಸಿಟ್ಟೆ

ತುಳಸಿ ಕಟ್ಟೆಯಲ್ಲಿ ಮುದುರಿ ಕುಳಿತಿದ್ದ ಪೇಪರನ್ನು ಎಸೆಯಲೆಂದು ಹಿಡಿದವಳು ಅದರಲ್ಲಿ ಬರೆದ ಕನ್ನಡ ಅಕ್ಷರಗಳು ಮತ್ತದರ ಕೆಳಗೆ ಕೆಂಪಿಂಕಿನಲ್ಲಿ ಸೀನ್ ಎಂದು ಬರೆದ ಟೀಚರಿನ ಕೈಗುರುತು ಕಂಡು ಕುತೂಹಲಕ್ಕೆಂದು ಕಣ್ಣಾಡಿಸಿದೆ. ಸಮಾಜಶಾಸ್ತ್ರದ ಟಿಪ್ಪಣಿ ಪುಸ್ತಕದ ಹಾಳೆಯದು. ಭೂಗೋಳದ ಕುರಿತು ಕೇಳಿದ್ದ ಒಂದು ಪ್ರಶ್ನೆಗೆ ಉತ್ತರವಿತ್ತದರಲ್ಲಿ. ಇಡೀ ವಾಕ್ಯದಲ್ಲಿ ಒಂದಾದರೂ ಪದದ ಕಾಗುಣಿತ ಸರಿಯಾಗಿಲ್ಲ. ಆದರೂ ಉತ್ತರ ಸರಿಯಾಗಿದೆ ಎಂದು ಹಾಕಿದ ರೈಟ್ ಗುರುತು

ನಮ್ಮನೆಗೆ ಬಂದ ಪುಟ್ಟ ಮಕ್ಕಳ ಜೊತೆ ತುಂಬಾ ಹೊತ್ತು ಕಳೆಯುವ ಸಮಯವಿದ್ದಲ್ಲಿ ಅವರಿಗೆ ಬೇಸರವಾಗದಂತೆ ಅವರ ಜೊತೆ ಆಡುತ್ತ ಕೂರುವದುಂಟು. ಕೆಲವರಿಗೆ ಸ್ವಲ್ಪ ಹೊತ್ತಿನಲ್ಲೇ ಆಟದಲ್ಲಿ ಬೇಸರ ಬಂದು ತಂಟೆ ಮಾಡಲು ಸುರು ಮಾಡುತ್ತಾರೆ. ಆಗವರ ಮನಸ್ಸನ್ನು ಹೊರಳಿಸಲು ಪೇಪರ್ ಪೆನ್ ಕೊಟ್ಟು, “ನಾನು ಹೇಳಿದ್ದನ್ನೆಲ್ಲಾ ಬರೀರಿ. ಎಲ್ಲಾ ಸರಿಯಾದರೆ ಚಾಕಲೇಟಿನ ಬಹುಮಾನವೂ ಉಂಟುಅಂತ ಆಟ ಶುರು ಮಾಡ್ತೇನೆ. ಯಾರನ್ನೇ ಕೇಳಲಿ ಶಾಲೆಯಲ್ಲಿ ಎಲ್ಲರೂ ನೂರಕ್ಕೆ ತೊಂಬತ್ತರ ಮೇಲೆ ಅಂಕ ತೆಗೆದ ಮಕ್ಕಳೇ. ಮತ್ತೆ ನನ್ನ ಈ ಸವಾಲಿಗೆ ಹೆದರುವುದುಂಟೆ? ಸಿಗಬಹುದಾದ ಚಾಕಲೇಟನ್ನು ನೆನೆದು ಪೆನ್ನು ಪೇಪರ್ ಹಿಡಿದು ಕುಳಿತೇಬಿಡ್ತಾರೆ. ಹೀಗೆ ಆಗಿದ್ದು ಮೊನ್ನೆಯೂ..

ಅವಲಕಿ, ಉಬಿಟು, ಕೊಸಬರಿ,‍ ‍ಬ್‍ಶಿ, ಪಲ್ಲ, ಮಇಸರು ಪಕು, ಕೆಸರಿ ಬತು, ಮಗಲುರು, ಮಳೆಗಳ, ಚಿತನುಆರನೆಯ ತರಗತಿ ಹುಡುಗಿಯೊಬ್ಬಳು ನಾನು ಹೇಳಿದ ಪದಗಳನ್ನು ಬರೆದದ್ದು ಈ ರೀತಿ. ಆಕೆ ಕ್ಲಾಸಿನಲ್ಲಿ ಕನ್ನಡದಲ್ಲಿ ನೂರಕ್ಕೆ ತೊಂಬತ್ತೇಳು ಅಂಕಗಳನ್ನು ಪಡೆದಿದ್ದಾಗಿ ಅವಳಮ್ಮ ಹೇಳುತ್ತಿದ್ದರೆ ನಾನು ಬೆಕ್ಕಸ ಬೆರಗಿನಿಂದ ಕೇಳುತ್ತ ಮೈಮರೆತುಬಿಟ್ಟೆ. ಹ್ಹಾ ಸವಿಗನ್ನಡವೇ? ಹೇಗೆ ಬರೆದರೂ ಅಂಕಗಳು ನಿನ್ನವೇ

ಒಂದನೇ ಕ್ಲಾಸಿಗೆ ಸ್ಲೇಟು, ಬಳಪದ ಕಡ್ಡಿ ಇದ್ದ ಬ್ಯಾಗು ಹಿಡಿದು ಪ್ರವೇಶ ಮಾಡಿದ ನಮಗೆಲ್ಲ ಒಂದೆರಡು ದಿನಗಳಲ್ಲಿ ಕಲಿಯಬೇಕಿದ್ದುದು ಅ ಆ ಮಾತ್ರ. ಇಡೀ ಸ್ಲೇಟಿಗೆ ಎರಡೇ ಅಕ್ಷರಗಳು.  ಪ್ರತಿ ಅಕ್ಷರದ ಮೇಲೆಯೇ ಬರೆಯುತ್ತ ಅದನ್ನು ದಪ್ಪವಾಗಿಸುತ್ತಿದ್ದೆವು. ಯಾವ ಅಕ್ಷರ ಎಷ್ಟು ದಪ್ಪಗಾಗಿದೆಯೋ ಅದರ ಮೇಲೆ ಅವರೆಷ್ಟು ಸಲ ಬರೆದಿದ್ದಾರೆ ಎಂಬುದು ತಿಳಿಯುತ್ತಿತ್ತು. ಇಡೀ ಒಂದು ವರ್ಷ ಕಲಿತಿದ್ದು ಬರೀ ಅ ದಿಂದ ಜ್ಞ ದವರೆಗಿನ ಅಕ್ಷರಮಾಲೆ. ಎರಡನೇ ತರಗತಿಗೆ ಹೋಗುವ ಮೊದಲು ಇದೆಲ್ಲವನ್ನೂ ತಪ್ಪಿಲ್ಲದೆ ಬರೆದರೆ ಮಾತ್ರ ಪಾಸ್. ಇಲ್ಲದಿದ್ದರೆ ಮರು ವರ್ಷವೂ ಅದೇ ತರಗತಿಯಲ್ಲಿ ಕುಳಿತು ಕಲಿಯಬೇಕಾಗಿತ್ತು.

ಒಂದು ಸಣ್ಣ ತಪ್ಪಿಗೂ ಒಂದು ಅಂಕ ಕಡಿಮೆ. ಅದೇಕೆಂದರೆ ಮತ್ತೊಮ್ಮೆ ಅದೇ ತಪ್ಪು ಮಾಡದಂತೆ ಜಾಗ್ರತವಾಗಿರಲು. ಭಾಷಾಕಲಿಕೆಯಲ್ಲಿ ನೂರಕ್ಕೆ ನೂರು ಎಂಬ ಮಾತೇ ಇಲ್ಲದ ಕಾಲವದು. ನಾನು ಆ ಕಾಲದಲ್ಲಿ ಕನ್ನಡ ಕಲಿತ ಕಾರಣ ಬರವಣಿಗೆಯ ತಪ್ಪುಗಳನ್ನು ನಾನಾಗಿಯೇ ಸರಿಪಡಿಸಿಕೊಳ್ಳುವ ಆತ್ಮವಿಶ್ವಾಸ ಈಗಲೂ. ಕನ್ನಡದಲ್ಲಿ ನೂರಕ್ಕೆ ಅರುವತ್ತು ಅಂಕಗಳು ಬಂದರೆ ಅದೊಂದು ಡಂಗುರ ಸಾರುವಂತಹ ವಿಷಯವಾಗಿದ್ದ ದಿನಗಳವು.

ಆಗಿನ ಕಲಿಕಾ ವಿಧಾನವೇ ಒಂದು ಥರದ್ದು. ಮೊದಲಿಗೆ ಭಾಷೆಯ ಅಧ್ಯಯನಕ್ಕೆ ಅನಿವಾರ್ಯವಾದ ಅಕ್ಷರಗಳ ಕಲಿಯುವಿಕೆಗೇ ರಾಜನ ಪಟ್ಟ ದೊರೆಯುತ್ತಿದ್ದದ್ದು. ಸ್ವರಗಳಿಂದ ಮೊದಲ್ಗೊಂಡು ವ್ಯಂಜನಗಳ ಬಳಿಗೆ ಬಂದು ನಿಂದು ಅರಗಿಸಿಕೊಂಡ ಬಳಿಕ ಒತ್ತಕ್ಷರಗಳು. ಅದೆಲ್ಲ ಮುಗಿದ ನಂತರವೇ ಅಕ್ಷರ ಅಕ್ಷರಗಳನ್ನು ಜೋಡಿಸಿದ ಪದಗಳು, ಅದರಿಂದಾಗುವ ವಾಕ್ಯಗಳು, ಆ ವಾಕ್ಯಗಳನ್ನು ರಚಿಸುವ ಕ್ರಮಗಳು, ಅದರಿಂದ ಮುಂದುವರಿದು ಇಡೀ ಪಾಠಗಳು, ವ್ಯಾಕರಣಗಳುಹೀಗೆ ಭಾಷೆಯೊಂದು ನಿಧಾನಕ್ಕೆ ಹಿಡಿತಕ್ಕೆ ಸಿಗುವಂತಾಗುತ್ತಿತ್ತು.

ಮೊನ್ನೆ ಹಳೇ ಗೆಳತಿಯೊಬ್ಬಳು ಮಾತಿಗೆ ಸಿಕ್ಕಿದ್ದಳು. ನಾವಿಬ್ಬರೂ ಒಟ್ಟಿಗೇ ಓದಿದವರು. ಆಕೆ ಈಗ ಶಾಲೆಯೊಂದರಲ್ಲಿ ಶಿಕ್ಷಕಿ. ತನ್ನ ಕೆಲಸದ ಬಗ್ಗೆ ಮಾತನಾಡುತ್ತ ನಾನು ಮಕ್ಕಳಿಗೆ ಕಲಿಸಲು ಶಾಲೆಗೆ ಹೋಗುತ್ತಿದ್ದೇನಾ ಅಥವಾ ಮಕ್ಕಳ ಬಿಸಿಯೂಟದ ಬೇಳೆಕಾಳು, ಅಕ್ಕಿ, ಗೋಧಿ ಸ್ವಚ್ಛ ಮಾಡಲು ಶಾಲೆಗೆ ಹೋಗುತ್ತಿದ್ದೇನಾ ಎಂಬುದೇ ಸಂಶಯವಾಗಿದೆ. ಇದರ ನಡುವೆ ನಾನು ಮಾಡಿದ ಪಾಠ ಮಕ್ಕಳಿಗೆ ಅರ್ಥವಾಗಿದೆಯೋ ಇಲ್ಲವೋ ಎಂದು ಪರೀಕ್ಷೆ ಮಾಡಿದಾಗ ಅವರು ತಪ್ಪು ಉತ್ತರ ಕೊಟ್ಟರೂ ಅವರನ್ನು ಫೈಲ್ ಎನ್ನುವಂತಿಲ. ಮತ್ತೊಮ್ಮೆ ಅದೇ ಪ್ರಶ್ನೆ ಕೇಳಿ ಉತ್ತರ ಹೊರಡಿಸಿ ತೃಪ್ತಿಕರಎಂಬ ರಿಸಲ್ಟ್ ಕೊಡಬೇಕಾಗುತ್ತದೆ. ನನ್ನ ಹಲವು ಸಹೋದ್ಯೋಗಿಗಳು ಅದಕ್ಕಾಗಿ ಮೊದಲೇ ಯಾವ ಯಾವ ಪ್ರಶ್ನೆ ಕೊಡುತ್ತೇನೆ ಅಂತ ಹೇಳಿಯೇ ಪರೀಕ್ಷೆ ಇಡ್ತಾರಂತೆ. ಮತ್ತೊಮ್ಮೆ ಪರೀಕ್ಷೆ ಮಾಡು, ಪೇಪರ್ ತಿದ್ದು ಎನ್ನುವ ಎಲ್ಲ ರಗಳೆಗಳಿಂದ ಮುಕ್ತಿ. ಆದರೆ ಬೇಸರವಾಗೋದು ಯಾವಾಗ ಅಂದ್ರೆ ಕನ್ನಡವನ್ನೂ ಮಾರ್ಕ್ ಸ್ಕೋರಿಂಗ್ ಸಬ್ಜೆಕ್ಟ್ ಮಾಡುವ ಭರದಲ್ಲಿ ಭಾಷೆಯ ಸತ್ವ ಕಳೆದುಕೊಳ್ಳುತ್ತಿರುವುದು.

ಆಕೆ ಹೇಳಿದ್ದು ಹೌದೆನ್ನಿಸಿತು.

ಕೆಲವು ತಿಂಗಳಿನ ಮೊದಲು ಮನೆಗೆ ಬಂದಿದ್ದ ಪದವಿ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆಗಷ್ಟೇ ಪೇಟೆಯಲ್ಲಿರುವ ಪ್ರತಿಷ್ಠಿತ ಕಾಲೇಜಿಗೆ ಸೇರಿದ್ದಳು. ತನ್ನ ಹೊಸ ಕಾಲೇಜಿನ ಸುದ್ದಿ ಮಾತನಾಡುತ್ತ ಕುಳಿತಿದ್ದಾಗ ಆಕೆಗೆ ಅವಳ ಗೆಳತಿಯಿಂದ ಫೋನ್ ಬಂತು. ಅವರ ಮಾತುಕತೆ ನಡೆದದ್ದೆಲ್ಲ ಇಂಗ್ಲೀಷಿನಲ್ಲಿಯೇ. ಫೋನ್ ಇಟ್ಟವಳೇ ಹೇಳಿದಳು. ‘ಅವಳು ನಮ್ಮ ಹಿಂದಿನ ಮನೆಯವಳು, ಈಗ ನಮ್ಮ ಕ್ಲಾಸೇ ಆಕೆ.’

ಅವಳಿಗೆ ಕನ್ನಡ ಬರುವದಿಲ್ವಾಅಂದೆ.
ಬಾರದೇ ಏನು?’ ಎಂದಳು.
ಮತ್ಯಾಕೆ ಇಬ್ಬರೂ ಇಂಗ್ಲೀಶಲ್ಲೇ ಮಾತಾಡಿದ್ದುಎಂದು ಕೇಳಿದ್ದಕ್ಕೆಕಾಲೇಜಲ್ಲಿ  ಯಾರೂ ಕನ್ನಡದಲ್ಲಿ ಮಾತನಾಡೋದೇ ಇಲ್ಲ, ಅದರಲ್ಲೂ ಹುಡುಗಿಯರು….’ ಎಂದಳು. ಹುಡುಗರಾದರೆ ತುಳು ಅಥವಾ ಕನ್ನಡದಲ್ಲಿ ಮಾತಾಡ್ತಾರೆ, ಹುಡುಗಿಯರಲ್ಲೂ ಕೆಲವರು ಕೊನೇ ಬೆಂಚಿನವರು ಮಾತ್ರ ಕನ್ನಡ ಮಾತಾಡೋದುಎಂದಳು. ತಲೆ ತಿರುಗಿತು. ಭಾಷೆಯೊಂದು ಭಾಷೆಯಾಗುಳಿಯದೇ ಅಂತಸ್ತು, ಮೇಲುಕೀಳುಗಳಿಗೆ ಕಾರಣವಾಗುವುದು.

ನನಗೂ ಕನ್ನಡ ಎರಡನೇ ಭಾಷೆಯಾಗಿ ಕಲಿತಿದ್ದು, ಹಾಗಾಗಿ ಬರೆಯುವುದು ಕಷ್ಟ. ಈಗ ಒಂದಿಷ್ಟು ಅಸೈನ್‍ಮೆಂಟುಗಳಿವೆ. ಅದರಲ್ಲಿ ಕೆಲವು ಲೇಖನಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಬೇಕು. ಅದೆಷ್ಟು ಕಷ್ಟ ಗೊತ್ತಿದೆಯಾಎಂದು ವಾದ ಹೂಡಿದಳು. ‘ಹುಂ. ಇಂಗ್ಲಿಷ್ ಭಾಷೆಯನ್ನು ನೀನು ಪ್ರಯತ್ನ ಪಟ್ಟು ಕಲಿತದ್ದು. ಅದೇ ಸುಲಭ ಎಂದರೆ ನೀನು ಯಾವ ಪ್ರಯತ್ನವೂ ಇಲ್ಲದೆ ಕಲಿತ ಕನ್ನಡ ಯಾಕೆ ಕಷ್ಟವಾಗುವುದು. ನಿನಗೆ ಕನ್ನಡ ಮಾತನಾಡಲು ಗೊತ್ತಿದೆಯಲ್ಲ. ಆಗ ಬಳಸುವ ಶಬ್ದಗಳನ್ನೇ ಸ್ವತಂತ್ರವಾಗಿ ಬಳಕೆ ಮಾಡಿ ನಿನ್ನ ಕನ್ನಡ ಅಭ್ಯಾಸಕ್ಕೂ ಬಳಸು, ಸುಲಭಎಂದೆ. ತಲೆಯಲುಗಿಸಿದಳು.

ಸ್ವಲ್ಪ ದಿನ ಕಳೆದ ನಂತರ ಫೋನ್ ಮಾಡಿನೀವು ಹೇಳಿದ ಉಪಾಯ ಇಷ್ಟ ಆಯ್ತು. ಈಗ ಇಂಗ್ಲೀಷಿನಲ್ಲಿ ಬರೆದಿದ್ದನ್ನು ನಾನಾಗಿದ್ದರೆ ಕನ್ನಡದಲ್ಲಿ ಹೇಗೆ ಹೇಳುತ್ತಿದ್ದೆ ಎಂದು ಆಲೋಚನೆ ಮಾಡಿ ಅದೇ ರೀತಿ ಬರೆಯುತ್ತಿದ್ದೇನೆ. ನಮ್ಮ ಲೆಕ್ಚರರ್ಸ್ ಈಗ ನಿನ್ನ ಕನ್ನಡ ಉತ್ತಮವಾಗಿದೆ ಎಂದಿದ್ದಾರೆಎಂದಳು. ಖುಶಿಯಾಗಿತ್ತು.

ಹೊಸ ಬಗೆಯ ಕಲಿಕಾ ಕ್ರಮಗಳೋ ಅಥವಾ ಹೇಗೆ ಬರೆದರೂ ಸಣ್ಣ ತರಗತಿ ಮಕ್ಕಳನ್ನು ಪಾಸ್ ಮಾಡಲೇಬೇಕೆಂಬ ಶಿಕ್ಷಣದ ಉದಾರ ನಿಯಮಗಳೋ, ಯಾವುದು ಹೆಚ್ಚು ಅಪಾಯಕಾರಿ ಎಂದು ತಿಳಿಯದಿದ್ದರೂ ಕನ್ನಡವನ್ನು ಕುಲಗೆಡಿಸುವದು ಇದರಿಂದ ನಡೆಯುತ್ತಿರುವದಂತೂ ಸತ್ಯ. ಹೇಗೆ ಕಟ್ಟಡವೊಂದು ಸರಿಯಾದ ತಳಹದಿಯಿಲ್ಲದಿದ್ದರೆ ನಿಂತುಕೊಳ್ಳಲು ಸಾಧ್ಯವಿಲ್ಲವೋ ಹಾಗೆಯೇ ನಮ್ಮ ಶಿಕ್ಷಣದಲ್ಲಿ ಅಕ್ಷರಗಳ ಕಲಿಕೆಯೇ ಸರಿಯಿಲ್ಲದಿದ್ದರೆ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಸಿಗುವುದೂ ಸಾಧ್ಯವಿಲ್ಲ. ಸರ್ಕಾರವೂ, ಶಿಕ್ಷಣಮಂತ್ರಿಗಳೂ ಈ ನಿಟ್ಟಿನಲ್ಲಿ ಯೋಚಿಸುವುದೊಳಿತು.

ಕನ್ನಡಕಲಿಕೆಯೂ, ಕನ್ನಡಭಾಷೆಯೂ ನಮ್ಮ ಹೆಮ್ಮೆಯ ತುರಾಯಿಯೇ ಎಂಬ ಮನಸ್ಥಿತಿ ಬರುವವರೆಗೆ ಕನ್ನಡಕ್ಕೆ ಈ ಅವಹೇಳನ ತಪ್ಪಿದ್ದಲ್ಲ. ಕನ್ನಡ ನವೆಂಬರ ತಿಂಗಳಿನ ಸಭೆ ಸಮಾರಂಭಗಳ ಭಾಷಣ ಮಾತ್ರವಾಗದೇ ಮನೆಮನಗಳ ಭಾಷೆಯಾದರೆ ಕನ್ನಡ ಉಳಿದೀತು, ಬೆಳೆದೀತು.

ಅನಿತಾ ನರೇಶ್ ಮಂಚಿ

4 comments:

Badarinath Palavalli said...

ಇದು ಸಕಾಲಿಕ ಲೇಖನ. ಅನಿತಾರವರು ಪ್ರಸ್ತಾಪಿಸಿದ ಕಲಿಕೆಯ ವಿಧಾನದಲ್ಲಿ ಸರಳತೆ ಇದೆ.

ತಾವೂ ಭಾಗವಹಿಸಿದ್ದ ನನ್ನ ಚೊಚ್ಚಲ ಕವನ ಸಂಕಲನದ ಬಿಡುಗಡೆ ಸಮಾರಂಭದಲ್ಲಿ, ನನ್ನ ಶಾಲಾ ಕನ್ನಡ ಶಿಕ್ಷಕರಾದ ಶರ್ಮಾ ಮಾಸ್ತರರನ್ನು ವೇದಿಕೆಯಲ್ಲಿ ಗೌರವಿಸಿದ್ದೆ ನೆನಪಿದೆಯೇ ಸಾರ್? ಅವರು ಕನ್ನಡ ಕಲಿಸುವ ವಿಧಾನ ಪುಟ್ಟ ಕಂದಮ್ಮಗಳಿಗೆ ತಾಯಂದಿರು ನುಣ್ಣಗೆ ಅನ್ನವ ಕಲಸಿ, ಬಾಯ್ತುತ್ತು ಕೊಡುತ್ತಾರಲ್ಲವೇ ಹಾಗೆ. ಸುಲಭವಾಗಿ ಕನ್ನಡವನ್ನು ಮೆದುಳಿನ ಭಾಗವಾಗಿಸಿದ ಗಿರಿಮೆ ಅವರದು.

ತಾವೇ ತದ್ದಿ ಕೊಟ್ಟು ಉಪಕರಿಸಿದ್ದಿರಿ ನೆನಪಿದೆಯೇ ಸಾರ್?
ಇಂತಹ ಶ್ರೇಷ್ಠ ಕನ್ನಡ ಉಪಾಧ್ಯಾಯರು ನನಗೆ ಸಿಕ್ಕರೂ ಸಹ, ಅದ್ಹೇಗೆ ನಾನು ಆ ಪಾಟಿ ಕಾಗುಣಿತ ತಪ್ಪುಗಳನ್ನು ಮಾಡುತ್ತೇನೆ ಎಂಬ ಸಂಶಯ ತಮಗೂ ಬರಬಹುದು.

ನನ್ನ ಮಾತೃ ಭಾಷೆ ಮತ್ತು ನನ್ನ ಹಳ್ಳಿಯ ವಾತಾವರಣದಲ್ಲಿ ಸಂವಹನ ಭಾಷೆ ತೆಲುಗು. ಅದೂ ಶುದ್ಧ ತೆಲುಗು ಬಳಕೆಯಲ್ಲ. ಕೋಲಾರ ಜಿಲ್ಲೆಯಲ್ಲಿ ಬಳಸುವ ಕೋಲಾರ ತೆಲುಗು ಹಾಗಾಗಿ, ಜನ್ಮೇಪಿ ದಡ್ಡನಾದ ನನ್ನಿಂದ ಅಷ್ಟೊಂದು ದೋಷಗಳು.

ಅಧಿನಾಯಕಿ ರೂಪಾ ಸತೀಶ್ ಮತ್ತವರ ಕನ್ನಡದ ಕಟ್ಟಾಳುಗಳು‌ ನಿರ್ವಹಿಸುವ 3ಕೆ ಒಂದು ಮಾದರಿಯಾದ ಕನ್ನಡದ ಉಳಿಸಿ ಬೆಳೆಸುವ ಕೈಂಕರ್ಯ. ಅವರ ದಶಮಾನೋತ್ಸಕ್ಕೆ ನಮ್ಮೆಲ್ಲರ ಅಭಿನಂದನೆಗಳು.

sunaath said...

ಪ್ರಿಯ ಬದರಿನಾಥರೆ,
ನೀವು ಶರ್ಮಾ ಮಾಸ್ತರರನ್ನು ವೇದಿಕೆಯಲ್ಲಿ ಗೌರವಿಸಿದ ಘಟನೆ ಹಚ್ಚ ಹಸುರಾಗಿ ನನ್ನ ನೆನಪಿನಲ್ಲಿದೆ. ನೀವು ಒಂದು ಉತ್ತಮ ಪ್ರಥೆಯನ್ನು ಹಾಕಿಕೊಟ್ಟಿದ್ದೀರಿ. ನಿಮ್ಮಂತೆ ನಾನೂ ಸಹ ನನ್ನ ಕೆಲವು ಕನ್ನಡ ಶಿಕ್ಷಕರಿಗೆ ತುಂಬ ಋಣಿಯಾಗಿದ್ದೇನೆ. ನೀವು ಕಾಗುಣಿತದ ತಪ್ಪುಗಳನ್ನು ಮಾಡಿದ್ದು ನನಗೆ ಗೊತ್ತಾಗಿಲ್ಲ. ಆದರೆ ನಿಮ್ಮ ಕವನಗಳು ನೀವು ಶ್ರೇಷ್ಠ ಕವಿ ಎನ್ನುವುದನ್ನು ಎತ್ತಿ ತೋರಿಸುತ್ತಿವೆ. ಒಂದು ವೇಳೆ ನೀವು ಕಾಗುಣಿತದ ತಪ್ಪುಗಳನ್ನು ಮಾದಿದ್ದರೂ ಸಹ, ಶೇಕ್ಸಪಿಯರನಲ್ಲಿಯೂ ಸಹ ಸಾಕಷ್ಟು ಕಾಗುಣಿತದ ದೋಷಗಳಿದ್ದವು ಎಂದಷ್ಟೇ ಹೇಳಬಲ್ಲೆ.
ಅಭಿಮಾನಪೂರ್ವಕವಾಗಿ
ನಿಮ್ಮ ಸುನಾಥ ಕಾಕಾ

Arathi said...

ಒಳ್ಳೆಯ ಲೇಖನವನ್ನೆ ಹಂಚಿಕೊಂಡಿದ್ದೀರಿ ಸುನಾತ್ ಕಾಕಾ ! ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎನ್ನುವಂತೆ ಎಳೆಯ ವಯಸ್ಸಿನಲ್ಲೇ ಕನ್ನಡ ಕಲಿಕೆಯಲ್ಲಿ , ಅಂಕಗಳೆ ಮಾನದಂಡ ವಾಗಿಸಿ ಭೋದನಾ ಕ್ರಮದಲ್ಲೆ ತಪ್ಪುಗಳಾಗುತ್ತಿದ್ದರೆ ಯಾರು ಹೊಣೆ ?
ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಕ್ಕಳು ಕನ್ನಡ ಮಾತಾಡಿಕೊಂಡರೆ ಶಿಕ್ಷಕರು ಅದನ್ನು ಅಪರಾಧ ಎನ್ನುವಂತೆ ನೋಡುತ್ತಿದ್ದಾರೆ. ಈಗಿನ ಶಿಕ್ಷಣ ಕ್ರಮ ಕನ್ನಡ ಭಾಷೆಯನ್ನು ಬೆಳೆಸುವ ದಿರಲಿ ಉಳಿಸುವುದೆ ಎನ್ನುವ ಸಂದೇಹ..
ಸಕಾಲಿಕ ಲೇಖನ ಅನಿತಾ ಅವರದ್ದು..

sunaath said...

ಮೇಡಮ್, ಸರಕಾರವೇ ಕನ್ನಡ ಶಾಲೆಗಳನ್ನು ಬಂದು ಮಾಡಿ, ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವ ವಿಚಾರದಲ್ಲಿದೆಯಲ್ಲವೆ? ಇನ್ನು ಮುಂದೆ ನಮ್ಮ ಮಕ್ಕಳು ‘My mother tongue is English' ಎಂದರೆ ಅಚ್ಚರಿಯಾಗಲಿಕ್ಕಿಲ್ಲ!