Friday, August 21, 2020

ಕರಣಂ ಇವರ ಕಾದಂಬರಿ ‘ಗ್ರಸ್ತ’...................... ಸುದರ್ಶನ ಗುರುರಾಜರಾವ ಇವರ ಒಂದು ವಿಶ್ಲೇಷಣೆ

ಸುದರ್ಶನ ಗುರುರಾಜರಾವ ಇವರು ಕರಣಂ ರಚಿಸಿದ ಕಾದಂಬರಿ ‘ಗ್ರಸ್ತ’ ಬಗೆಗೆ ವಿಮರ್ಶಾತ್ಮಕ ಲೇಖನ ಬರೆದಿದ್ದಾರೆ. ಇದನ್ನು ‘ಸಲ್ಲಾಪ’ದಲ್ಲಿ ಪ್ರಕಟಿಸಲು ಸಂತೋಷವಾಗುತ್ತಿದೆ. ಈ ಲೇಖನದಲ್ಲಿ ಸುದರ್ಶನರು ವ್ಯಕ್ತಪಡಿಸಿದ ಅಭಿಪ್ರಾಯಗಳು ಸಂಪೂರ್ಣವಾಗಿ ಅವರವೇ ಆಗಿವೆ. ‘ಸಲ್ಲಾಪ’ blogದ ಒಡೆಯರಿಗೆ ಇದರೊಡನೆ ಯಾವುದೇ ಸಂಬಂಧವಿಲ್ಲ. ------ಸುನಾಥ ..................... ಕೊಂಡು ತಂದು ೨ ವರ್ಷಗಳಷ್ಟೇ ಆಗಿದ್ದರೂ ಗ್ರಸ್ತವನ್ನು ಓದಲು ಕಾಲ ಕೂಡಿ ಬಂದಿರಲೇ ಇಲ್ಲ. ಅಂತರ್ಜಾಲದಲ್ಲೂ ,ಫೇಸ್ಬುಕ್ ಪುಟಗಳಲ್ಲೂ ಸಾಕಷ್ಟು ಓದುಗರು ಈ ಕಾದಂಬರಿಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮೊದಲು ಕರಣಂ ಅವರ ಕರ್ಮ ಮತ್ತು ನನ್ನಿ ಎರಡನ್ನೂ ಓದಿ ಮೆಚ್ಚಿದ್ದೆ.ಈ ಭಾನುವಾರ ಯಾವ ಕೆಲಸ ಇಲ್ಲದ ಕಾರಣ ನಿಧಾನವಾಗಿ ಕುಳಿತು ಓದಿದ್ದಾಯ್ತು. ಚಿಕ್ಕದಾದ ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಯಿತು. ಬೆಂಗಳೂರಿನ ಬ್ರಾಹ್ಮಣ ಬಡಾವಣೆಯಲ್ಲಿ ಪ್ರಾರಂಭವಾಗುವ ಕಥೆ ಅಲ್ಲ್ಲಿಲ್ಲಿ ಹರಿದು, ಪ್ರಾಗ್ ಎಂಬ ವಿದೇಶಕ್ಕೆ ಹೋಗಿ ಪುನಃ ಬೆಂಗಳೂರಿಗೆ ಬಂದು, ತಿರುವು ಪಡೆದು ಮಲೆನಾಡಿನ ಮಲೆಯೊಂದರ ಮೇಲೆ ಬಂದು ನಿಲ್ಲುತ್ತದೆ. ಅದು ಮುಕ್ತಾಯವೋ ಹೊಸ ಆರಂಭವೋ ಎಂಬುದನ್ನು ಓದುಗರು ಊಹಿಸಿಕೊಳ್ಳಬೇಕು. ಕೆಳ ಮಧ್ಯಮ ವರ್ಗದ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಕಣ್ಣಿನ ತುಂಬಾ ಕನಸು ಹೊತ್ತ ಯುವತಿ, ಸರಿಯಾಗಿ ತಿಳಿಯದೆ, ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿ ಮನೆಬಿಟ್ಟು ಓಡಿಹೋಗಿ ಮದುವೆ ಮಾಡಿಕೊಳ್ಳುವ ಜಯಶ್ರೀ; ಕನಸುಗಳೊಂದೂ ಸಾಕಾರವಾಗದೆ ಬರೀ ಬೀಳುಗಳ ಹಾದಿಯಲ್ಲಿ ಕ್ರಮಿಸುತ್ತಲೇ ಇನ್ನೇನು ಸ್ವಲ್ಪ ಏಳು ಕಾಣುತ್ತಿದೆ ಎಂಬಲ್ಲಿ ಹೃದಯಾಘಾತದಿಂದ ನಿಧನಳಾಗುತ್ತಾಳೆ. ಕನಸುಗಳು ತುಂಬಿದ ಜೀವವೊಂದು, ಕನಸುಗಳೇ ಇಲ್ಲದ, ಕೆಲಸ ಮಾಡುವ ಕಸುವೂ ಇಲ್ಲದ ಒಬ್ಬನನ್ನು ಓಡಿಹೋಗಿ ಮದುವೆಯಾಗುವ ವಿಪರ್ಯಾಸಗಳು ದಿನವೂ ಕಂಡು ಕೇಳುವ ವಿಚಾರವೇ. ಬವಣೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಅವಳ ಮಗನೇ ಅಸಾಧಾರಣ ಬುದ್ಧಿಮತ್ತೆ ಮತ್ತು ಅತೀಂದ್ರಿಯ ಮನ:ಶಕ್ತಿ ಇರುವ ಅವಿನಾಶ್! ಅವನ ತಾಯಿ ಜಯಶ್ರೀ ಗೆ ಅಡುಗೆ ಮಾಡಿ ಮನೆ ಸಂಭಾಳಿಸುವ ಕೆಲಸ ಕೊಟ್ಟಿದ್ದ ಪ್ರೊಫೆಸ್ಸರ್ ಗೋಪೀನಾಥ್ ಮನೆಯಲ್ಲೇ ಜಯಶ್ರೀ ಮತ್ತು ಶಿವಕುಮಾರ್ ಗೆ ಹುಟ್ಟಿದ ಮಗ ಅವಿನಾಶ ಕೆಲಸಕ್ಕೆ ಉಳಿಯುತ್ತಾನೆ. ಅವನೂ ತನ್ನ ಅಮ್ಮನಂತೆ ಅಡುಗೆಯಲ್ಲಿ ನುರಿತವನೇ. ಜಯಶ್ರೀಯಿಂದ ಒಮ್ಮೆ ಅವಳ ಕಥೆಯನ್ನು ಕೇಳಿ ತಿಳಿದು, ತಮ್ಮ ಸಾಂಪ್ರದಾಯಿಕ ಒತ್ತಡಗಳನ್ನು ಬದಿಗೆ ಸರಿಸಿ,ಮೀರಿ, ಆಕೆಯನ್ನು ಕೆಲಸಕ್ಕೆ ಇಟ್ಟುಕೊಂಡು ಅವಳ ಮಗನ ವಿದ್ಯಾಭ್ಯಾಸದ ಬಗೆಗೆಯೂ ಆಸಕ್ತಿ ವಹಿಸುವ ಗೋಪೀನಾಥರು ಅನಂತರವೂ ಅವನಿಗೆ ಮಾರ್ಗದರ್ಶನ ಮತ್ತಿತರ ಸಹಾಯ ಮಾಡುತ್ತಲೇ ಇರುತ್ತಾರೆ. ತಮ್ಮ ಕಾಲೇಜಿನಲ್ಲೇ ಕೆಲಸವನ್ನೂ ಕೊಡಿಸುತ್ತಾರೆ , ಅವನ ಸ್ಕಾಲರ್ಷಿಪ್ ಗೆ ತಮ್ಮದೇ ಥೀಸಿಸ್ ಕೊಟ್ಟಿರುತ್ತಾರೆ, ಅವನ ಏಳಿಗೆಯನ್ನು ಕಂಡು ಸಂತೋಷಿಸಿಯೂ ಇರುತ್ತಾರೆ. ವಿಜ್ಞಾನ -ತಂತ್ರಜ್ಞಾನ-ತತ್ವಶಾಸ್ತ್ರ ಇವುಗಳನ್ನು ಸಮನ್ವಯ ಸಾಧಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ನಡೆಸುತ್ತಲೇ ಅವಿನಾಶನನ್ನೂ ಕಡೆಗೆ ಗಮನ ವಹಿಸಲು ಪ್ರಚೋದಿಸುತ್ತಾರೆ. ಅವಿನಾಶನ ತಂದೆ ತೀರಿಕೊಂಡಾಗ ತಮ್ಮ ಸಂಪ್ರದಾಯ, ಮಡಿ ಮೈಲಿಗೆ, ಆಚಾರಗಳನ್ನು ಮೀರಿ ಮಾನವೀಯತೆ ತೋರಿಸುತ್ತಾರೆ. ಅವರ ಮಗಳಿಗೆ ಅವಿನಾಶನೆಂದರೆ ಪ್ರೀತಿ. ಅವಿನಾಶನಿಗೂ ಅವಳನ್ನು ಮದುವೆಯಾಗುವ ಬಯಕೆ. ಈ ನಡುವೆ ರೇಖಾ ಎಂಬ ಸುಂದರಿಯೂ, ಜಾಣೆಯೂ,, ಸ್ಥಿತಿವಂತ ಮನೆತನದ, ಮದುವೆಯಾದ ಆದರೆ ದಾಂಪತ್ಯದಲ್ಲಿ ಅಸಂತುಷ್ಟಳಾದ ಹೆಣ್ಣಿನ ಪರಿಚಯ ಅವಿನಾಶನಿಗೆ ಆಗಿ, ಅವಳೊಂದಿಗೆ, ಅವಳ ಗಂಡನ ಅನುಪಸ್ಥಿತಿಯಲ್ಲಿ ದೇಹಸಂಪರ್ಕ ಬೆಳೆಸುತ್ತಾನೆ. ಹೇಳದೆ ಕೇಳದೆ ಅವಳಿಂದ ಬಿಡಿಸಿಕೊಂಡು ದೂರವೂ ಸರಿಯುತ್ತಾನೆ. ವಿದೇಶ ತಿರುಗಿ ವಾಪಸ್ಸು ಬಂದಮೇಲೆ, ಗಂಡನನ್ನು ಬಿಟ್ಟು ಹೊರಟು ಬಂದ ರೇಖಾ, ಮಗುವಿನ ಜೊತೆಗೆ, ಗೋಪೀನಾಥರ ಮಧ್ಯಸ್ಥಿಕೆಯಲ್ಲಿ ಅವಿನಾಶನ ಮನೆ ಸೇರುತ್ತಾಳೆ. ಅವನ ವಿಕ್ಷಿಪ್ತ ನಡವಳಿಕೆಗಳನ್ನು ಸಹಿಸಿಕೊಂಡು, ಅವನೂ ಅವಳನ್ನು ಒಪ್ಪಿಕೊಂಡು,ಬಾಳುವೆ ನಡೆಸುತ್ತಿರುತ್ತಾರೆ. ಅಷ್ಟರಲ್ಲಿ, ವಿದೇಶದಿಂದ ಇವನ ಸಂಶೋಧನೆಗೆ ಸಲ್ಲಬೇಕಾದ ಹಣದ ಮೊತ್ತವೊಂದು ಬರುತ್ತದೆ. ಈ ಮಧ್ಯೆ ಗೋಪೀನಾಥರ ಮಗಳ ಮದುವೆಯೂ ಆಗಿ ಆ ಕಹಿಯನ್ನು ಮೀರಿ ನಿರ್ಭಾವುಕನಾಗಿ ಯೋಚಿಸುವಾಗ ,ದೇಹ,ಮಾಂಸ, ಸೌಂದರ್ಯ,ಅದರ ಪ್ರಚೋದನೆ ಆ ಪ್ರಚೋದಕ ಶಕ್ತಿ,ಒಂದು ಆಕರವಾಗಿ,ಇನ್ನೊಂದು ಸ್ಪಂದಿಸಿ ಶಕ್ತಿ ಸೋರಿಕೆಯಾಗುವ ಐಡಿಯಾ ಬಂದುಬಿಡುತ್ತದೆ., ಅದೇ ಸ್ಪಷ್ಟವಾಗುತ್ತಾ ಹೋಗಿ ಇವನಿಗೆ ಧಿಗ್ಗನೆ ಪ್ರಪಂಚದಲ್ಲಿ ಸರ್ವವ್ಯಾಪಿಯಾಗಿರುವ ವಿದ್ಯುತ್ತನ್ನು ನಿಸ್ತಂತು ಮಾಧ್ಯಮದ ಮೂಲಕ ನಿರಂತರ ಚಾರ್ಜ್ ಮಾಡಬಲ್ಲ ವಿಧಾನದ ಸಾಕ್ಷಾತ್ಕಾರ ಹೊಳೆಯುತ್ತದೆ. ಅದನ್ನು ಭೌತಿಕವಾಗಿ ಕಾರ್ಯರೂಪಕ್ಕೆ ತರಲು ಮಲೆನಾಡಿನ ಮಧ್ಯದಲ್ಲಿ ಮನೆ ಮಾಡಿ , ಬೆಟ್ಟದ ಮೇಲೆ ತನ್ನ ಪ್ರಯೋಗ ನಡೆಸಿ, ತನ್ನ ಹೆಂಡತಿಯಂತೆಯೇ ಇದ್ದ ರೇಖಾಳನ್ನು ನಡುರಾತ್ರಿಯಲ್ಲಿ ಅಲ್ಲಿಗೆ ಕರೆದೊಯ್ದು, ಅವಳಿಂದ , ಅವಳ ಪ್ರತಿಭಟನೆ ಮೀರಿ, ಆಕಸ್ಮಿಕ ಅಕ್ರಮಣಕ್ಕೆ ಅವಳ ಗಂಡನಾದ ಸುಂದರನಿಂದಲೇ ಅತ್ಯಾಚಾರದ ಹೇಯ ಕೆಲಸಕ್ಕೆ ಪ್ರಮಾಣವನ್ನು ಪಡೆಯುತ್ತಾನೆ. ಅತಿಇಂದ್ರಿಯ ಶಕ್ತಿಯಿಂದಾಗಿ, ಮತ್ತೊಬ್ಬರ ಉದ್ದೇಶವನ್ನು ತಿಳಿಯುವ,ಘಟಿಸಿದ ಘಟನೆಯ ವಿವರಗಳನ್ನು ಅಪ್ರತ್ಯಕ್ಷವಾಗಿ ಅರಿಯುವ ಒಂದು ಜನ್ಮಜಾತ ಅಲೌಕಿಕ ಶಕ್ತಿ ಅವಿನಾಶನಿಗಿರುತ್ತದೆ!. ಅವನ ನಿಸ್ತಂತು ವಿದ್ಯುತ್ಪ್ರವಾಹದ ಉತ್ಪಾದನೆ,, ಪ್ರಸರಣ ಹಾಗೂ ಅದರ ಬಳಕೆಯನ್ನು ಮಾಡಿಕೊಳ್ಳುವ ಪ್ರಯೋಗದ ಸಾಫಲ್ಯವನ್ನೂ ಕಾಣುತ್ತಲೇ ಅವಳನ್ನು ಒಂಟಿಯಾಗಿ ಬಿಟ್ಟು ದಿಗಂಬರನಾಗಿ ಎತ್ತಲೋ ಕಳೆದು ಹೋಗುವಲ್ಲಿ ಕಥೆ ಬಂದು ನಿಲ್ಲುತ್ತದೆ. ಎಲ್ಲಿಯೂ ನಿಲ್ಲದೆ, ಹೆಚ್ಚು ಎಳೆದಾಡದೆ ಓದಿಸಿಕೊಂಡು ಹೋಗುವ ಕಥೆಯಲ್ಲಿ ಅಲ್ಲಲ್ಲಿ ಪ್ರಾಸ್ತವಿಕವಾಗಿ, ಉಪನಿಷತ್, ವೇದ, ಪ್ರಾಚೀನ ಭಾರತೀಯ ಗಣಿತ, ಅಮೂರ್ತವಾದದ್ದರ ಅದ್ಭುತ ಚಿಂತನೆ, ನಿಕೋಲಾ ಟೆಸ್ಲಾ ಸೇರಿದಂತೆ ಹಲವಾರು ವಿಜ್ಞಾನಿಗಳ ಉಲ್ಲೇಖ ಬಂದು ಹೋಗುತ್ತದೆ. ದೇಹದಿಂದ ಆತ್ಮ ಬೇರೆಯಾಗುವುದಲ್ಲ, ದೇಹವೇ ಅಖಂಡವಾದ ಆತ್ಮ ಎಂಬಂತೆ ನಾವು ಗ್ರಹಿಸುವ ಸರ್ವವ್ಯಾಪಿ ಶಕ್ತಿ ಎಂಬ ಜಾಲದಿಂದ ಬೇರ್ಪಡುತ್ತದೆ, ಎಂಬಂಥ ಹಲವು ಜಿಜ್ಞಾಸೆಗೆ ಒಡ್ಡಿಸಿಕೊಳ್ಳುವ ಹೇಳಿಕೆಗಳಿವೆ; ಚೆನ್ನಾಗಿವೆ. ನಿರ್ಗುಣ ನಿರಾಕಾರ ಬ್ರಹ್ಮ, ಪಂಚಭೂತಗಳಲ್ಲಿ ಬ್ರಹ್ಮವು ಪ್ರವೇಶಿಸಿ, ತಾನೇ ಅದಾಗುವುದು ಎಂಬ ರೀತಿಯ ಉಪನಿಷತ್ ವಾಕ್ಯಗಳನ್ನು ಯಥಾಯೋಗ್ಯವಾಗಿ ಬಳಸಿಕೊಂಡಿದ್ದಾರೆ. ಕಾದಂಬರಿಗೆ ಬೇಕಾದ ಬಿಗಿಯಾದ ಶೈಲಿ, ಸರಸರನೆ ನಡೆದು ಹೋಗುವ ಘಟನೆಗಳು, ಒಂದರಿಂದ ಇನ್ನೊಂದಕ್ಕೆ ತೆರೆದುಕೊಳ್ಳುವ ಬೆಳವಣಿಗೆಗಳು, ಒಂದು ದಿಕ್ಕಿಗೆ ಹರಿದ ಕಥೆ ಮತ್ತೊಂದು ದಿಕ್ಕಿಗೆ ಹರಿದು ಪುನಃ ಎಲ್ಲಿಗೆ ಬಿಟ್ಟಿತ್ತೋ ಅಲ್ಲಿಗೆ ಬಂದು ಮುಂದುವರಿದು ಅಂತ್ಯಕಾಣುವ ವರಸೆಯೂ ಚೆನ್ನಾಗಿದೆ. ವಿಭಿನ್ನ ಕಥಾವಸ್ತು, ಭಾಷೆ, ಸರಳತೆ ಎಲ್ಲದರಲ್ಲೂ ಆಪ್ತವೆನಿಸುವ ಈ ಕಿರುಕಾದಂಬರಿ ಬಹಳ ಕಡೆ ಕರ್ತೃವು ಎಡವಿದ ಅನುಭವ ನನಗೆ ನೀಡಿತು. ಕಳೆದ ಶತಮಾನ ಕಂಡ ಮೇಧಾವಿ ಆದರೆ ಹತಭಾಗ್ಯನಾದ ವಿಜ್ಞಾನಿ ನಿಕೋಲಾ ಟೆಸ್ಲಾ ೧೯೧೦-೧೨ ರಲ್ಲಿಯೇ ಇಡೀ ವಿಶ್ವಕ್ಕೆ ವಿದ್ಯುತ್ತನ್ನೂ , ಮಾಹಿತಿ ತರಂಗಗಳನ್ನೂ ಬೇಕಾದಷ್ಟು ಪ್ರಮಾಣದಲ್ಲಿ ಉಚಿತವಾಗಿ ಕೊಡುವ ಆಲೋಚನೆ ಹಾಕಿ ಅದಕ್ಕೆ ಆರಂಭಿಕ ಕೆಲಸವನ್ನೂ ಪ್ರಾರಂಭಿಸಿದ್ದ. ಎಡಿಸನ್ನ್ನನ ನಿರಂತರ ಕಿರುಕುಳ, ಆರ್ಥಿಕ ಪ್ರಹಾರ, ರಾಜಕೀಯ, ಮಾರ್ಕೋನಿಯ ಶೀಘ್ರ ಫಲಿತಾಂಶ ಕೊಟ್ಟ ಪ್ರಯೋಗಗಳು ಇವನಿಗೆ ಸಹಾಯ ಸಿಗದಂತೆ ಮಾಡಿ, ದಿವಾಳಿಯೆದ್ದುಹೋದ ಟೆಸ್ಲಾ, ಅಜ್ಞಾತನಾಗಿ ಸತ್ತುಹೋದ. ಅದೇನೋ ಕೆಲವರಿಗೆ ಬಾಳಿನಲ್ಲಿ ಅದೃಷ್ಟ ಎಂಬುದಿರುವುದಿಲ್ಲ. ಕನ್ನಡದ ಪಿ.ಬಿ.ಶ್ರೀನಿವಾಸ್, ಶ್ರೀನಿವಾಸ ರಾಮಾನುಜಂ, ಅಂತಹ ಕೆಲವರು. ಲೇಖಕರ ಕಥೆಗೆ ಇದು ತಳಹದಿಯೂ, ಸ್ಫೂರ್ತಿಯೂ ಆಗಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಕರಣಂ ಅವರ ವೈಜ್ಞಾನಿಕ ಪರಿಕಲ್ಪನೆಯಲ್ಲಿ ಹೊಸದೆಂಬುದೇನೂ ಇಲ್ಲ; ಟೆಸ್ಲಾನಿಗೆ ತೋರಿಸಲು ಅವಕಾಶ ಆಗಲಿಲ್ಲ, ಅದನ್ನೇ ಇಲ್ಲಿ ಬಳಸಿಕೊಂಡಿದ್ದಾರೆ. ಅವಿನಾಶನ ಆವಿಷ್ಕಾರ ಎಂಬಂತೆ ಬಿಂಬಿಸಿ ಟೆಸ್ಲಾನ ನೇರ ಕಾಣಿಕೆಯನ್ನು ಮರೆಮಾಚಿದ್ದು ಯಾಕೋ ತಿಳಿಯಲಿಲ್ಲ. ಅವಿನಾಶನ ವ್ಯಕ್ತಿತ್ವದಲ್ಲಿ ಮಾಂತ್ರಿಕ ವಾಸ್ತವತೆಯ ಬಳಕೆ ಮಾಡಿಕೊಂಡಿದ್ದಾರೆ. ಅದನ್ನೇ ಬಳಸಿ ಈ ಪ್ರಯೋಗ-ಪರಿಕಲ್ಪನೆ- ಪರಿಣಾಮಗಳಿಗೆ ಟೆಸ್ಲಾನನ್ನು ಬೆಸೆದಿದ್ದರೆ ವಾಸ್ತವಕ್ಕೆ ನ್ಯಾಯ ಒದಗಿಸಿದಂತಾಗುತ್ತಿತ್ತು. ಕಥಾ ಸಮಯ ಎಂದು ರಿಯಾಯಿತಿ ತೋರಿಸಬಹುದೇನೋ!! ಶ್ರುತಿ -ಸ್ಮೃತಿಗಳು ವಿದ್ಯುತ್ ತರಂಗದ ರೂಪದಲ್ಲಿ ಒಬ್ಬರಿಂದ ಇನೋಬ್ಬರಿಗೆ ಇಳಿಯಬಹುದಾದರೆ ಅದನ್ನು ಭಾರತೀಯ ಭೌಗೋಲಿಕ ಮಿತಿಗೆ ನಿಯಂತ್ರಿಸುವುದರಲ್ಲಿ ಅರ್ಥವಿಲ್ಲ. ಕಥೆಯ ಮೂಲ ಎಳೆ, “ಹುಟ್ಟು ಮತ್ತದರ ಮೂಲ ಮುಖ್ಯವಲ್ಲ, ಹುಟ್ಟಿನ ಪರಿಣಾಮ ಮುಖ್ಯ” ಎಂದಾಗಿರುವುದರಿಂದ, ಒಂದು ಹುಟ್ಟನ್ನು ಬ್ರಾಹ್ಮಣ ಜಾತಿಗೆ ತಗುಲಿ ಹಾಕಲಾಗಿದೆ. ಇಂದಿನ ಕಾಲದ ಅವಶ್ಯಕತೆಯಾದ, ಎಲ್ಲರಿಂದಲೂ ಅನ್ನಿಸಿಕೊಳ್ಳುವ ಬ್ರಾಹ್ಮಣ, ಆ ಜಾತಿಯ ಸ್ಥಿತಿ, ಗತಿ, ಆಚಾರ ವಿಚಾರ ಎಲ್ಲವುಗಳನ್ನೂ ಲೇಖಕರು ಚೆನ್ನಾಗಿ ಬಳಸಿಕೊಂಡು, ಅದಕ್ಕೊಂದಷ್ಟು ಮಸಿಯನ್ನೂ ಬಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾಂತ್ರಿಕ ವಾಸ್ತವವನ್ನು ಅವಿನಾಶನಿಗಷ್ಟೇ, ಅವನ ಉದ್ದೇಶಗಳಿಗಷ್ಟೇ ಬಳಸಿಕೊಂಡು, ಅವನನ್ನು ಲಾಂಚ್ ಮಾಡಲು ಇತರ ಪಾತ್ರಗಳನ್ನೂ ದುರ್ಬಲವನ್ನಾಗಿ ಚಿತ್ರಿಸಿರುವುದು ಲೇಖಕರು ಪೂರ್ವತಯಾರಿಯಲ್ಲಿ ಎಡವಿರುವುದನ್ನು ತೋರಿಸುತ್ತದೆ. ಜಾತಿಯಿಲ್ಲದೆಯೂ , ಬ್ರಾಹ್ಮಣ ಜಾತಿಯನ್ನು ಹೊರತುಪಡಿಸಿಯೂ ಈ ಕಥೆಯನ್ನು ವಿಭಿನ್ನ ನೆಲೆಯಲ್ಲಿ ಕಟ್ಟಬಹುದಿತ್ತೇ ಎಂದರೆ ಹೌದು ಎನ್ನಬಹುದು. ಗಾರ್ಸಿಯ ಮಾರ್ಕ್ವೆಜ್ ನ one hundred years of solitude ಅನ್ನು ಓದಿದವರಿಗೆ, ಪಾತ್ರಗಳನ್ನೂ ನಿರ್ವಚನೆಯಿಂದ ಬೆಳೆಸುವುದು ಹೇಗೆ ಎಂದು ತಿಳಿದೀತು. ‘ಪಾತ್ರಗಳ ಮೇಲೆ ಲೇಖಕನಿಗೆ ಹಿಡಿತವಿಲ್ಲ, ಅವು ತೆರೆದುಕೊಂಡಂತೆ ಬರೆಯುತ್ತಾನೆ’ ಎನ್ನುವುದಾದರೆ, ಒಂದು ಪಾತ್ರವನ್ನು ಜಾತಿ ಮತ ಇತ್ಯಾದಿಗಳಿಗೆ ಬಿಗಿದು ಅಧೋಗತಿಯ ಪ್ರಪಾತಕ್ಕೆ ಇಳಿಸುವಾಗ, ಅದಕ್ಕೆ ಸಂವಾದಿಯಾದ ಮತ್ತೊಂದು ಚಿತ್ರವನ್ನು ಕಟ್ಟಿ ಕೊಡಬೇಕಾಗುತ್ತದೆ ಮತ್ತು ಇದೇ ಲೇಖಕರ ‘ಕರ್ಮ' ಕಾದಂಬರಿಯಲ್ಲಿ ಆ ಕೆಲಸವನ್ನು ಅಯಾಚಿತವಾಗಿ ಮಾಡಿದ್ದಾರೆ. ಜೀವನದ ಸ್ವಾರಸ್ಯ, ಜಗತ್ತಿನ ವೈಚಿತ್ರ ಇರುವುದೇ ಅಲ್ಲಿ. ಆದರೆ ಪವನ ಪ್ರಸಾದರ ಈ ಪ್ರಪಂಚದಲ್ಲಿ ನಾಯಕನನ್ನು ಬಿಟ್ಟು ಉಳಿದೆಲ್ಲ ಪಾತ್ರಗಳೂ ದುರ್ಬಲವಾಗಬೇಕು, ಅಂದರೆ ನಾಯಕನ ಹೊಳಹು ಹೆಚ್ಚಿತು ಎಂದು ತಿಳಿದಂತಿದೆ. ಪಾತ್ರಗಳನ್ನ ಚಿತ್ರಿಸಿದ ರೀತಿಯಲ್ಲಿಯೂ ಲೇಖಕರು ಎಡವಿದ್ದಾರೆ ಎಂದೆನಲ್ಲ, ಅದನ್ನು ನೋಡೋಣ. ಈ ಮಾತನ್ನು ಹೇಳುವಾಗ ಪಾತ್ರಗಳನ್ನೂ ಅವುಗಳು ಇದ್ದಂತೆಯೇ ಒಪ್ಪಿಕೊಳ್ಳುವ ಅವಶ್ಯಕತೆಯನ್ನೂ. ಕಾದಂಬರಿಕಾರನ ಸ್ವಾತಂತ್ರ್ಯವನ್ನೂ ಅನುಲಕ್ಷ್ಯದಲ್ಲಿ ಇಟ್ಟುಕೊಂಡೆ ಹೇಳುತ್ತಿದ್ದೇನೆ. ಲೇಖಕರ ಅನುಭವದ ಮೂಸೆಯಿಂದ ಮೂಡಿದ ಪಾತ್ರಗಳೆಂದರೆ ಜಯಶ್ರೀ ಮತ್ತು ಶಿವಕುಮಾರ ಮಾತ್ರ. ಜಯಶ್ರೀ ಪಡುವ ಕಾರ್ಪಣ್ಯಗಳು, ಇಟ್ಟ ಹೆಜ್ಜೆಗಳು, ಅವಳ ಮಿತಿಯಲ್ಲಿ ತೆಗೆದುಕೊಂಡ ನಿರ್ಧಾರಗಳು ಹಾಗೂ ಅವಳ ಅಂತ್ಯ, ಅವಳ ಗಂಡನಾದ ಶಿವಕುಮಾರ, ಅವನ ನಿಷ್ಕ್ರಿಯತೆ, ನಡೆಸಿದ ದೈನೇಸಿ ಜೀವನ ಎಲ್ಲವೂ ವಾಸ್ತವದಿಂದ ಭಿನ್ನವಿಲ್ಲ. ಓದುಗ, ತನ್ನ ಸುತ್ತಲಿನ ಪ್ರಪಂಚದ ಜತೆಗೆ ಗುರುತಿಸಿಕೊಳ್ಳಬಹದು ಹಾಗೂ ಆ ಪಾತ್ರಗಳನ್ನೂ ಚೆನ್ನಾಗಿ ಕಟ್ಟಿಕೊಡಲಾಗಿದೆ. ಮತ್ತೊಂದು ಪ್ರಮುಖ ಪಾತ್ರವಾದ ಗೋಪೀನಾಥರು ತಮ್ಮ ಮಿತಿಯಲ್ಲಿ ತಮಗೆ ಯಾವುದೂ ಅಲ್ಲದ ಅವಿನಾಶನ ಕೈಹಿಡಿದು ಮೇಲೆತ್ತಿ, ಅವನ ಬದುಕಿಗೆ ಒಂದು ದಿಕ್ಕು, ಗುರಿ ತೋರಿಸುವ ತನಕ ಬೆಳೆಸಿ,ಅನಂತರದಲ್ಲಿ ಸ್ವಾರ್ಥಕ್ಕೆ ಪಕ್ಕಾಗಿ ಅವಿನಾಶನಿಗೆ ಮೋಸ ಮಾಡುವ ವಂಚಕನನ್ನಾಗಿ ಚಿತ್ರಿಸಲಾಗಿದೆ. ಅಲ್ಲಿಯೂ ಅವರು ತಮ್ಮ ಮಗಳನ್ನು ಇವನು ಮದುವೆಯಾಗುವ ಅನಿವಾರ್ಯತೆಯಿಂದ ತಪ್ಪಿಸಲು ಹಾಗೆ ಮಾಡಿದರು , ರೇಖಾಳಿಗೆ ಇವನನ್ನು ತಗುಲಿಹಾಕಲು ಮಾಧ್ಯಮವಾದರು, ಮಗಳ ಮದುವೆಗೆ ಕುಹಕದಿಂದ ಆಮಂತ್ರಿಸಿದರು, ಎಂದು ಓದುಗರನ್ನು ನಂಬಿಸಲು ಹರಸಾಹಸ ಪಟ್ಟಿದ್ದಾರೆ. ರೇಖಳಂಥ, ತಿಳಿದ ಬುದ್ಧಿವಂತ ಹೆಣ್ಣಿಗೆ ರೇಪು ಅಪಾದನೆ ಮಾಡಿ ಇವನನ್ನು ಬೀಳಿಸಲು, ವಯೋವೃದ್ಧರಾದ, ಧರ್ಮ ಕರ್ಮಗಳನ್ನು ಅರಿತ ಒಬ್ಬ ಸದ್ಬ್ರಾಹ್ಮಣಾನೇ ಬೇಕಿತ್ತ?.ಇಲ್ಲಿ ಪಾತ್ರಗಳನ್ನೂ ಸ್ವಾಭಾವಿಕವಾಗಿ ಬೆಳೆಯಲು ಬಿಡದೆ ತಮ್ಮ ಒಗ್ಗರಣೆ ಹಾಕಿರುವುದು ರಾಚುತ್ತದೆ. ಇದನ್ನು ಮೀರಿ, ಅವಿನಾಶನ ಬಾಯಲ್ಲಿ “ನಾನು ಬ್ರಾಹ್ಮಣನಲ್ಲದಿದ್ದರೆ ನೀವು ನನಗೆ ಅನ್ನ ಹಾಕುತ್ತಿದ್ದಿರಾ, ಸಹಾಯ ಮಾಡುತ್ತಿದ್ದೀರಾ, ಇಲ್ಲ; ನನ್ನ ಯೋಗ್ಯತೆಯಿಂದ ನೀವು ನನ್ನನ್ನು ಗಳಿಸಿಕೊಂಡಿರಿ, ನಿಮ್ಮ ಅಯೋಗ್ಯತೆಯಿಂದ ನನ್ನನ್ನು ಕಳೆದುಕೊಂಡಿರಿ ‘ಎಂಬ ಮಾತನ್ನು ಆಡಿಸಿ ,ಅದಕ್ಕೆ ಸಂವಾದಿಯಾಗಿ ಗೋಪಿನಾಥರಿಂದ, ಸ್ವಗತವೋ, ಇನ್ನೊಂದೋ ತಂದು ಆ ವಿಚಾರಗಳ ಸಮತೋಲನ ಸಾಧಿಸಲಿಲ್ಲ. ಇದು ನನಗೆ ಪೂರ್ವಾಗ್ರಹ ಎಂದೆನಿಸುತ್ತದೆ. ಮೊದಲು ರೇಖಾಳನ್ನಂತೂ ಒಂದು ಕೃತ್ರಿಮಿಯಾಗಿ ಬೆಳೆಸಿಕೊಂಡು ಹೋಗಿದ್ದಾರೆ, ಅನಂತರದಲ್ಲಿ ಸ್ವಂತಿಕೆಯಿಲ್ಲದ, ಬದುಕಲು ಏನೋ ಮಾಡುವ ಹತಾಶ ಹೆಣ್ಣಾಗಿ ಚಿತ್ರಿಸಿದ್ದಾರೆ. ಮದುವೇಗೆ ಮುಂಚೆ, ಮದುವೆಯ ನಂತರ, ಮದುವೆ ಮುರಿದ ಮೇಲೆ, ಎಲ್ಲಾ ಹಂತಗಳಲ್ಲೂ ಅವಳು ಒಂದು ರೀತಿ ಜಾರಿದ ಹೆಂಗಸು ಎನ್ನುವ ಭಾವ ಬರುವಹಾಗೆ ಚಿತ್ರಿಸಿದ್ದೂ ಅಲ್ಲದೆ ತನ್ನ ಗಂಡನಿಗೆ ಅನುಮಾನ ಬರುವಂತೆ ತಾನೇ ಸುಳಿವುಗಳನ್ನು ಸೃಷ್ಟಿಸಿದಳು ಎಂಬಲ್ಲಿಯವರೆಗೂ ಎಳೆದಿದ್ದಾರೆ. ಇದೂ ಸಹಾ ಒಂದು ವಾಸ್ತವದ ಚೌಕಟ್ಟಿನಲ್ಲಿ ಬೆಳೆಸಿದ ಪಾತ್ರವಲ್ಲ. ತೀರಾ ನಾಟಕೀಯತೆಯನ್ನು ಬಲವಂತವಾಗಿ ಹೇರಿರುವುದು ಓದುಗನಿಗೆ ಭಾರಿ ಎನಿಸದಿರದು. ಆನಂದತೀರ್ಥ ಎಂಬ ಜಯಶ್ರೀಯ ತಂದೆ, ಮಗಳು ಯಾರೊಂದಿಗೋ ಓಡಿಹೋದನಂತರ ನೇಣು ಬಿಗಿದು ಸತ್ತರೆ, ಅದಕ್ಕೂ ಜಯಶ್ರೀಯ ಬಾಯಲ್ಲಿ ಬಾಳು ನೀಗಿಸಲಾಗದ ಹೇಡಿ , ಸಂದರ್ಭವನ್ನು ಬಳಸಿಕೊಂಡು ನೇಣು ಬಿಗಿದು ಸತ್ತ ಎಂದು ಹೇಳಿಸಿ ಕೈತೊಳೆದುಕೊಂಡಿದ್ದಾರೆ;ಹೀಗೆ ಸಾಯುವ ತಂದೆ ತಾಯಿಯರು ಆತ್ಮಗೌರವವಿಲ್ಲದ ಆತ್ಮವಂಚನೆ ಬ್ರಾಹ್ಮಣರು ಎಂದಾಯಿತು... ಕಿರು ಪಾತ್ರವಾಗಿ ಬಂದುಹೋಗುವ ಸುಶ್ಮಾಳನ್ನೂ ಬಿಡದೆ, ಅವಳೂ ಯಾರೊಂದಿಗೋ ಒಂದು ರಾತ್ರಿ ಮಲಗಿ ವ್ಯಭಿಚಾರ ಮಾಡಿದಳು ಎಂದೂ ತೋರಿಸಿಬಿಟ್ಟಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಭ್ರಷ್ಟ ಮನಸ್ಸಿನ ಆಷಾಢಭೂತಿಗಳು ಎಂದಾಯಿತು ಅನಿಸುವಂತಿದೆ ಅವಿನಾಶನ ಪಾತ್ರ ಈ ಕಾದಂಬರಿಯ ಕೇಂದ್ರಬಿಂದು. ಪಾತ್ರದ ಹುಟ್ಟು, ಬೆಳವಣಿಗೆ, ವಿಸ್ತಾರ ಎಲ್ಲಾ ಚೆನ್ನಾಗಿದೆ. ಇಲ್ಲವೆನ್ನಲಾಗದು. ಅವನ ದೂಷಣೆಗಳು, ಹೇಳಿಕೆಗಳು, ಎಲ್ಲವೂ ಅವನೊಬ್ಬ ವಿಕ್ಷಿಪ್ತ ವ್ಯಕ್ತಿ ಎಂದು ತಿಳಿದು ಬರುತ್ತದೆ. ಅವನ ಕಾಲೇಜಿನ ಕೆಲವು ಸಂದರ್ಭಗಳು, ಅವನ ಸ್ಕಾಲರ್ಷಿಪ್ ನ ಸಂದರ್ಶನ ಪರಿಣಾಮಕಾರಿಯಾಗಿಲ್ಲ. ಅಲ್ಲಿನ ಪ್ರಶ್ನೆಗಳು, ಇವನ ಉತ್ತರ, ಅವರ ನಿರ್ಧಾರ, ಮಾತುಕತೆಗಳು ಒಂದು ನಿಜ ಸಂದರ್ಶನದ ಅನುಭವವನ್ನು ಓದುಗನಿಗೆ ಕೊಡುವುದಿಲ್ಲ. ಹಲವ್ರು ಸಂದರ್ಶನಗಳನ್ನು ಎದುರಿಸಿದವನಾಗಿ, ಹಲವಾರು ಸಂದರ್ಶನಗಳನ್ನು ಮಾಡಿದವನಾಗಿ ಹೇಳುತ್ತೇನೆ; ಇಲ್ಲಿ ಇನ್ನಷ್ಷ್ಟು ಪರಿಶ್ರಮದ ಅವಶ್ಯಕತೆ ಇತ್ತು. ಪೇಲವತೆ ಇದೆ. ತನ್ನ ಅಲೌಕಿಕ ಶಕ್ತಿಯಿಂದ ಏನೇನನ್ನೋ ಗ್ರಹಿಸುವ, ಇತರರ ಮನಸ್ಸನ್ನು ಓದಬಲ್ಲ ಅವಿನಾಶನ ಆ ಗ್ರಹಿಕೆಗಳಿಗೆ ಸಂವಾದಿಯಾದ ಆಲೋಚನೆಗಳನ್ನೇ ಬೆಳೆಸದ ಕಾರಣ, ಈ ಕಾದಂಬರಿ, ಇಲ್ಲಿ ಬರುವ “ ಬ್ರಾಹ್ಮಣ” ಪಾತ್ರಗಳ ಬಗ್ಗೆ ಒಂದು ಘನವಾದ ತಪ್ಪು ಕಲ್ಪನೆಯನ್ನು ತಪ್ಪಾಗಿ ಮೂಡಿಸುವ ಪ್ರಮಾದವೆಸಗುತ್ತವೆ. ಕರ್ಮ ಕಾದಂಬರಿಯಲ್ಲಿ ಇರುವ ಸತ್ಯನಿಷ್ಠುರತೆ ಇಲ್ಲಿ ಪವನಪ್ರಸಾದರಿಗೆ ಸಿದ್ಧಿಸಿಲ್ಲ. ಈ ಕಾದಂಬರಿಯಲ್ಲಿ ಪಾತ್ರಗಳೆಲ್ಲವೂ ಕರಣಂ ಪವನ ಪ್ರಸಾದರ ಶಾಪಕ್ಕೆ “ಗ್ರಸ್ತ” ವಾಗಿವೆ..ಇಡೀ ಕಾದಂಬರಿಯೇ ಒಂದು ಅಜೇಂಡಾವೇನೋ ಅನ್ನಿಸಿಬಿಡುತ್ತದೆ, ಹಾಗೂ ವೈಜ್ಞಾನಿಕ ಆವಿಷ್ಕಾರದ ಕಥೆಯ ಎಳೆ ಅದಕ್ಕೆ ಕೇವಲ ದುರ್ಬಲ ಆಧಾರ ಒದಗಿಸುವಂತಿದೆ. ವೈಜ್ಞಾನಿಕ ವಿವರಣೆಗಳ ಬಗೆಗೂ ಬರೆಯುವುದಾದರೆ, ಸರಳವಾಗಿ ವಿವರಿಸುವ ಪ್ರಯತ್ನದಲ್ಲಿ ಒಂದಷ್ಟು ಮುಖ್ಯವಾದ ಅಂಶಗಳನ್ನು ಉಪೇಕ್ಷಿಸಿದ್ದಾರೆ. ಸಾಮಾನ್ಯ ಓದುಗನಿಗೆ ಅದರ ಅವಶ್ಯಕತೆ ಇಲ್ಲ. ಪರಿಪೂರ್ಣತೆಯ ದೃಷ್ಟಿಯಿಂದ ಬೇಕಿತ್ತೇನೋ ಎಂದು, ಭೌತಶಾಸ್ತ್ರದಲ್ಲಿ ಪ್ರವೇಶ ಇರುವ ಕೆಲವರಿಗೆ ಅನ್ನಿಸಬಹುದು. ದ್ರವ್ಯ-ಶಕ್ತಿಯ ಸಮನ್ವಯತೆಯನ್ನು, ವಿದ್ಯುತ್ತಿನ ವಿವಿಧ ಅಲೆಗಳ ತರಂಗಾಂತರಗಳನ್ನೂ ಹೇಗೆ ಪ್ರತ್ಯೇಕಿಸಿ ಬಳಸಬೇಕು, ವಿವಿಧ ಉಪಕರಣಗಳು ತರಂಗಾಂತರದ ವ್ಯತ್ಯಾಸವಿದ್ದಾಗ ಅದನ್ನು ಪ್ರಸರಿಯುವ ಟ್ರಾನ್ಸ್ಮಿಟರ್ ನಿಂದ ಹೇಗೆ ಪಡೆದುಕೊಳ್ಳುತ್ತವೆ? LED ಬಲ್ಬು ಮತ್ತು ತಂತಿಯ ಸುರುಳಿಯ ಬಲ್ಬುಗಳು ಒಂದೇ ಟ್ರಾನ್ಸ್ಮಿಟರ್ ನ ತರಂಗಗಳನ್ನು ಪಡೆದು ಹೇಗೆ ಕೆಲಸ ಮಾಡಬಲ್ಲವು, inductive ಟೆಕ್ನಾಲಜಿಯ ವಿವರಣೆ ಸರಿಯಾ? ಎಂಬ ಹಲವಾರು ಸಂದೇಹಗಳು ಬಂದು ಹೋದವು. ಇವು ಬೇಕಿಲ್ಲದ ಆಕ್ಷೇಪಣೆಗಳು. ಪರಿಪೂರ್ಣತೆಯ ದೃಷ್ಟಿಯಿಂದ ಮುಂದಿನ ಆವೃತ್ತಿಯಲ್ಲಿ ಗಣಿಸಬಹುದು. ಇಷ್ಟೆಲ್ಲಾ ಹೇಳಿದಮೇಲೆಯೂ, ಇದೊಂದು ಉತ್ತಮವಾಗಿ ಓದಿಸಿಕೊಂಡು ಹೋಗುವ ಕಾದಂಬರಿ.ಓದುಗನನ್ನು ಚಿಂತನೆಗೆ ಹಚ್ಚುವ, ವಿಭಿನ್ನ ಕಥಾವಸ್ತು ಇರುವ ಕಾದಂಬರಿ. ಸುದೀರ್ಘವಾದ ಅವಲೋಕನ ಎಲ್ಲಿಯೂ ಇಲ್ಲದ ಕಾರಣ, ನನಗೆ ತಿಳಿದಷ್ಟು ನಾನಿಲ್ಲಿ ದಾಖಲಿಸಿದ್ದೇನೆ. (ಯಾವುದೇ ವ್ಯಕ್ತಿ ಇನ್ನೊಬ್ಬನಿಗೆ ಸಹಾಯ ಮಾಡುವಾಗ ಅಲ್ಲಿ ಹೆಚ್ಚು ಲೆಕ್ಖಕ್ಕೆ ಬರುವುದು ಸಹಾಯ ಪಡೆಯುವವನು ನಮ್ಮ ಮನೋಧರ್ಮಕ್ಕೆ ಎಷ್ಟು ಸ್ಪಂದಿಸುತ್ತಾನೆ ಎಂಬುದು. ಅಲ್ಲಿ ಜಾತಿಯೊಂದು ಅಂಶವಷ್ಟೇ. ಅದನ್ನು ಬಳಸಿ ಇಡೀ ಬ್ರಾಹ್ಮಣ ಜಾತಿಯಮೇಲೆ ಗೂಬೆ ಕೂರಿಸುವ ಅವಶ್ಯಕತೆ ಇರಲಿಲ್ಲ.ಅಸಲಿಗೆ, ಅವಿನಾಶ ಬ್ರಾಹ್ಮಣನೇ ಅಲ್ಲ. ತಾಯಿಯ ಸಂಸ್ಕಾರ ಅವನಿಗೆ ಸಿಕ್ಕಿದ್ದಷ್ಟೇ. ಜಿ.ಎಸ.ಶಿವರುದ್ರಪ್ಪ ಅವರನ್ನು ಬೆಳೆಸಿದ ತ.ಸು. ಶ್ಯಾಮರಾಯ, ಕು.ವೇಂಪು ಅವರನ್ನು ಬೆಳೆಸಿದ ಟಿ.ಎಸ. ವೆಂಕಣ್ಣಯ್ಯ , ಅಂಬೇಡ್ಕರ್, ಹೀಗೆ ಚಾಣಕ್ಯ-ಚಂದ್ರಗುಪ್ತನಿಂದ ಇತ್ತೀಚಿನವರೆಗೂ ಉದಾಹರಣೆಗಳನ್ನು ಕೊಡಬಹುದು.ಲೇಖಕನಿಗೆ, ತನ್ನ ಪ್ರಸ್ತುತ ಸಮಾಜದ , ಶೋಷಣೆಗೆ ಗುರಿಯಾಗುತ್ತಿರುವ ಒಂದು ವರ್ಗದ ಕುರಿತು ಸಾಮಾಜಿಕ ಜವಾಬ್ದಾರಿ ಇರಲಿ ಎಂಬುದಕ್ಕೆ ಈ ಮಾತು) --ಸುದರ್ಶನ ಗುರುರಾಜರಾವ

No comments: