Tuesday, January 12, 2021

‘ಮಾತ್ರೆ ದೇವೋ ಭವ’..................ಆರತಿ ಘಟಿಕಾರರ ವಿನೋದ ಲೇಖನಗಳ ಸಂಕಲನ


ಆರತಿ ಘಟಿಕಾರರು ಕನ್ನಡದ ಜಾನೇಮಾನೇ ವಿನೋದ ಸಾಹಿತಿಗಳು. ಅವರ ವಿನೋದ ಲೇಖನಗಳು ಈಗಾಗಲೇ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರನ್ನು ನಗಿಸಿವೆ, ಸಂತೋಷಗೊಳಿಸುವೆ. ‘ಭಾವತೋರಣಎನ್ನುವ ಅವರ ಬ್ಲಾ˘ಗ್ ದಲ್ಲಿ (bhaavatorana.bloggspot.com), ಅವರ ಹಾಸ್ಯಲೇಖನಗಳನ್ನು ಓದಬಹುದು. ‘ಮಾತ್ರೆ ದೇವೋ ಭವಎನ್ನುವುದು ಅವರ ಹಾಸ್ಯಲೇಖನಗಳ ಸಂಕಲನ. ಇದು ಅವರ ಪ್ರಥಮ ಪ್ರಕಟಿತ ಕೃತಿಯೂ ಹೌದು. 

ಹಾಸ್ಯ ಹೇಗಿರಬೇಕು? ಹಾಸ್ಯಬ್ರಹ್ಮ ಬಿರುದಾಂಕಿತ ರಾ.ಶಿ.ಯವರು ಒಮ್ಮೆ ಹೇಳಿದಂತೆ ಹಾಸ್ಯವು subtle ಪದದಲ್ಲಿಯ b ಇದ್ದಂತೆ ಇರಬೇಕು. ಹಾಸ್ಯವು ಮುಗುಳುನಗೆಯನ್ನು ಉಕ್ಕಿಸಬೇಕೇ ಹೊರತು, ಅಟ್ಟಹಾಸವನ್ನಲ್ಲ. ಆರತಿಯವರ ಲೇಖನಗಳನ್ನು ಓದುತ್ತ ಹೋದಂತ, ಓದುಗನ ಮುಖದ ಮೇಲಿನ ಮುಗುಳುನಗೆಯು ಮಾಸುವುದೇ ಇಲ್ಲ. ಅವಲೇಖನಗಳ ಪ್ರತಿಯೊಂದು ಸಾಲೂ ಹಾಸ್ಯದ ಪುಟ್ಟ ಕಾರಂಜಿಯಾಗಿದೆ. ಇದು ಅವರ ಲೇಖನ ಶೈಲಿ. 

ಸಾಮಾನ್ಯವಾಗಿ ನಾವು ಓದುವ ಅನೇಕ ಹಾಸ್ಯಲೇಖನಗಳು ಘಟನೆಗಳನ್ನು ಆಧರಿಸಿರುತ್ತವೆ. ಆದರೆ ಆರತಿಯವರ ವಿನೋದಕ್ಕೆ ಘಟನೆಗಳೇ ಬೇಕಂತಿಲ್ಲ. ವಿನೋದವು ಅವರ ವರ್ಣನೆಯಲ್ಲಿಯೇ ಇದೆ. ಭಾಷೆಯ ಜೊತೆಗಿನ ಚೆಲ್ಲಾಟ ಹಾಗು ಸಹಜಸ್ಫೂರ್ತ wit ಇವು ಆರತಿಯವರ ವಿನೋದದ ವೈಶಿಷ್ಟ್ಯಗಳಾಗಿವೆ. 

ಈ ವಿಶಿಷ್ಟ್ಯತೆಗಳ ಉದಾಹರಣೆಗಾಗಿ ಅವರ ಮಿನಿ ಮನೆ (ವನ)ವಾಸ ಎನ್ನುವ ಲೇಖನವನ್ನೇ ನೋಡೊಣ.

ತೀಕ್ಷ್ಣಮತಿ ಹಾಗು ಜಿಪುಣಾಗ್ರೇಸರ”; ಹೀಗೆ :೧ ಸ್ವಭಾವದವರಾದ ನನ್ನ ಪತಿರಾಯರುಎಂದು ತಮ್ಮ ಪತಿರಾಯರನ್ನು ಅಣಗಿಸುತ್ತ ಆರತಿಯವರು, ವಿನೋದದ ಊಟಕ್ಕೆ ಒಗ್ಗರಣೆ ಹಾಕುತ್ತಾರೆ. ಈ ಪತಿರಾಯರು ಕಟ್ಟಿಸಿದ ಮನೆ ಹಾಗು ಪಕ್ಕದ ಮನೆ ಇವೆರಡೂ ಒಂದು ಕಾ˘ಮನ್ ಗೋಡೆಯ ಮೂಲಕ ಎರಡು ದೇಹ, ಒಂದೇ ಆತ್ಮ ಎನ್ನುವಂತೆ ಇದ್ದವಂತೆ. ಸಂಸಾರ ಬೆಳೆದಂತೆ, ಈ ಮನೆ ಪುಟ್ಟದಾಗತೊಡಗಿದಾಗ, ಆರತಿಯವರು ಸ್ವಲ್ಪ ದೊಡ್ಡದಾದ ಮನೆಯನ್ನು ತೆಗೆದುಕೊಳ್ಳುವ ಪ್ರಸ್ತಾವನೆಯನ್ನು ಇಡುತ್ತಾರೆ. ಇವರ ಪತಿರಾಯರು ಜಾಣತನದಿಂದ, ಆ ಪ್ರಸ್ತಾವನೆಯನ್ನು ತಳ್ಳಿಹಾಕಿದಾಗ”, ಆರತಿಯವರು, “ಪಾಲಿಗೆ ಬಂದದ್ದು ‘punchಅಮ್ರುತಾ ಎಂದು ಬಗೆದು ಸುಮ್ಮನಾಗುತ್ತಾರೆ. ಈ ರೀತಿಯಾಗಿ ಭಾಷೆಯಲ್ಲಿಯೇ ವಿನೋದವನ್ನು ಹೊಮ್ಮಿಸುವ ಜಾಣ್ಮೆ ಆರತಿಯವರಲ್ಲಿದೆ! 

ಆರತಿಯವರು ಆಧುನಿಕ ಕಾಲದಲ್ಲಿ, ಆಧುನಿಕ ಪರಿಸರದಲ್ಲಿ ಇರುತ್ತಿರುವ ಲೇಖಕಿಯರು. ಹೀಗಾಗಿ ಇವರ ಲೇಖನಗಳಲ್ಲಿ ಆಧುನಿಕ ಭಾಷೆ, ಆಧುನಿಕ ಪರಿಸರ, ಆಧುನಿಕ ಪರಿಕರ ಕಾಣುವುದು ಸಹಜವಾಗಿದೆ. ತಮ್ಮ ಪತಿಯೊಡನೆ *ಮಾಮೂಲಿ* ಜಗಳ ಕಾಯುತ್ತಿದ್ದ ಆರತಿಯವರು ಹೀಗೆ ಹೇಳುತ್ತಾರೆ:

ತಾಲ ತಮಟೆಗಳ ಸೌಂಡ್ ಎಫೆಕ್ಟ್ ನಲ್ಲಿ ಸಾಗುತ್ತಿದ್ದ ನಮ್ಮ ಜಗಳಕ್ಕೆ ನಾನು ಏನೋ ಶಾ˘ಕ್ ಹೊಡೆದವಳಂತೆ ಎಚ್ಚೆತ್ತುಕೊಂಡು ಬ್ರೇಕ್ ಹಾಕಿ ನನ್ನ ದನಿಯನ್ನು ಪಿಸುನುಡಿಯ ಗೇರಿಗೆ ಬದಲಾಯಿಸಿ ಇವರನ್ನೂ ಎಚ್ಚರಿಸಿದೆ”.

ಒಂದು ವೇಳೆ ತಮ್ಮ ಜಗಳದ ಸೌಂಡ್ ಬೈಟ್ ಗಳನ್ನು ಕಡಿಮೆ ಮಾಡಲು ಇವರಿಗೆ ಸಾಧ್ಯವಾಗದಿದ್ದರೆ, ಆಗ ನೆರೆಮನೆಯರ ಡಿಶ್ ಆಂಟೆನಾದಂತಹ ಕಿವಿಗಳು….”

ಆಧುನಿಕ ಭಾಷೆಯು ಹೊಮ್ಮಿಸುವ ಈ ವಿನೋದದ ಪರಿಯನ್ನು ಗಮನಿಸಿರಿ! 

(*ಮಾಮೂಲಿ* ಜಗಳ ಎನ್ನುವ ಪದವು ನನ್ನದು; ಇದು ಒಂದು ಊಹೆಯಷ್ಟೆ. ಆರತಿಯವರನ್ನು ದಯವಿಟ್ಟು ಈ ಪದಕ್ಕೆ ಹೊಣೆಗಾರರನ್ನಾಗಿ ಮಾಡಬೇಡಿರಿ! ಅವರು ಅಂಥವರಿರಲಿಕ್ಕಿಲ್ಲ.)


ಭಾಷೆಯೇ ವಿನೋದದ ಸಾಧನವಾಗುವ ಈ ಶೈಲಿಯನ್ನು ನಾನು ಇತರತ್ರ ಕಂಡಿಲ್ಲ ಎಂದು ಹೇಳಬಲ್ಲೆ. ಇನ್ನೊಂದೆರಡು ಇಂತಹ ಉದಾಹರಣೆಗಳನ್ನುಮಾತ್ರೆದೇವೋಭವಲೇಖನದಿಂದ ಉದ್ಧರಿಸುವ ಚಪಲವನ್ನು ನಾನು ತಡೆದುಕೊಳ್ಳಲಾರೆ;

 

 () ಇನ್ನು ಶೀತ ಜ್ವರಗಳಂತಹ ಚಿಕ್ಕ ಪುಟ್ಟ ರೌಡಿ ಬಾಧೆಗಳು…………….

() ನಿರಂತರವಾಗಿ ನಮ್ಮಂತಹ ಗಟ್ಟಿ ಜೀವಗಳ ಮೇಲೆ ತಮ್ಮ ಪ್ರಯೋಗಗಳನ್ನು ನಡೆಸುತ್ತಲೇ……

() ಈ ಸೂಜಿಗಳ ಶಿರಶಯ್ಯೆ………………..

() ಮನೆಯೇ ಮಾತ್ರಾಲಯ, ಮನಸೇ (ದೇಹವೇ) ರೋಗಾಲಯ

() ಏಕ ()ಕ್ರಾಧಿಪತ್ಯ

() ಪಾದ ಪಾದ ವಿಪದಂ

() ಮೊದಲು ಪತಿಯಿಂದ ಸಿಂಪತಿ, ಬಳಿಕ ನ್ಯಾಚುರೋಪತಿ


ಆರತಿಯವರ ವಿನೋದದೃಷ್ಟಿಯು ೩೬೦ ಅಂಶಗಳಷ್ಟು ವಿಸ್ತಾರವಾದ  ಪೂರ್ಣಕೋನದ್ದಾಗಿದೆ. ಹೀಗಾಗಿ ಇವರ ವಿನೋದನೋಟಕ್ಕೆ ಸಿಗದ ವಸ್ತುವಿಲ್ಲ. ಆದರೆ ಈ ವಿನೋದವು ಮೃದುವಾದ ವಿನೋದ, ಯಾರನ್ನೂ ಕುಟುಕುವ ವಿನೋದವಲ್ಲ. ತಂಗಾಳಿಯಂತೆ ಮನಸ್ಸನ್ನು ಸವರಿ ಸುಖವನ್ನು ಕೊಟ್ಟು ಸರಿಯುವಂತಹದು. ಉದಾಹರಣೆಗೆ˘ಟೋರಾಜಲೇಖನವನ್ನೇ ನೋಡಿರಿ

ಈ ಲೇಖನದಲ್ಲಿ ಆ˘ಟೋರಾಜನು, ಆರತಿಯವರಿಗೆ ತನ್ನ ಲೋಕಜ್ಞಾನದ ವ್ಯಾಖ್ಯಾನವನ್ನು ಮಾಡುತ್ತಲೇ ಹೋಗುತ್ತಾನೆ.    ಲೋಕಜ್ಞಾನವು ಸರ್ವಸಾಮಾನ್ಯರ ಸಾಮಾನ್ಯಜ್ಞಾನವಾಗಿರುವದರಿಂದ ಎಲ್ಲರನ್ನೂ ನಗಿಸುತ್ತದೆಯೆ ಹೊರತು, ಎಲ್ಲಿಯೂ ಯಾರನ್ನೂ ಚುಚ್ಚುವುದಿಲ್ಲ.

ಆರತಿಯವರು ತಮ್ಮ ಸಂಕಲನದಲ್ಲಿ ಇಪ್ಪತ್ತುನಾಲ್ಕು ಲೇಖನಗಳನ್ನು ಕೊಟ್ಟಿದ್ದಾರೆ. ದಿನದ ಇಪ್ಪತ್ತುನಾಲ್ಕು ಗಂಟೆಗಳು ವಿನೋದದ ಆನಂದದಿಂದ ತುಂಬಿರಲಿ ಎನ್ನುವುದರ ಸಂಕೇತವಾಗಿರಬಹುದೆ ಇದು? ಆರತಿಯವರು ನಮ್ಮನ್ನು ದಿನದ ಇಪ್ಪತ್ತುನಾಲ್ಕು ಗಂಟೆಗಳಲ್ಲಿ, ವರ್ಷದ ೩೬೫ ದಿನಗಳಲ್ಲಿ ವಿನೋದದಿಂದ ತಣಿಸಲಿ ಎಂದು ಹಾರೈಸುತ್ತ , ಇನ್ನಷ್ಟು ಹೆಚ್ಚೆಚ್ಚು ಲೇಖನಗಳನ್ನು ಅವರಿಂದ ಎದುರು ನೋಡುತ್ತೇನೆ.

3 comments:

Arathi said...

ನನ್ನ ಚೊಚ್ಚಲು ಹಾಸ್ಯ ಲೇಖನ ಸಂಕಲನದ ಕುರಿತು ನಿಮ್ಮಂತ ಪ್ರತಿಭಾವಂತ ಲೇಖಕರು ಹಾಗು ಚಿಂತಕರ ಆಶೀರ್ವಾದದ ನುಡಿ ತೋರಣ ಸಿಕ್ಕಿದ್ದು ಅತ್ಯಂತ ಸಂತಸವಾಯಿತು ಸರ್. ಬಹಳ ಪ್ರೋತ್ಸಾಹದಾಯಕ ವಿಮರ್ಶೆ ನೀಡಿ ನನ್ನ ಬರವಣಿಗೆಯ ಜೋಶನ್ನು ಇಮ್ನಡಿ ಗೊಳಿಸಿದ್ದೀರಿ.ನನ್ನ ಹಾಸ್ಯ ಲೇಖನಗಳ ಪಂಚ್ ಲೈನುಗಳು ನಿಮಗೆ ಮುಗುಳ್ನನಗೆ ತರಿಸಿದ್ದು ,ಕೆಲವನ್ನು ಇಲ್ಲಿ ಮೆಲಕು ಹಾಕಿದ್ದು ಓದಿ ನನಗೂ ಖುಶಿ ಆಯಿತು. ಸಹೃದಯದಿಂದ ನನ್ನ ವಿನೋದ ಲೇಖನಗಳನ್ನು ಓದಿ ಸೊಗಸಾಗಿ ಪರಿಚಯಿಸಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್.

Badarinath Palavalli said...

ಆರತಿ ಅಕ್ಕ ನನಗೆ ಬಲು ನೆಚ್ಚಿನ ಕವಿಯತ್ರಿ.
ಹಾಸ್ಯವನ್ನು ಅವರು ಉಣ ಬಡಿಸುವಾಗ ಎಲ್ಲೂ ಶ್ಲೀಲತೆಯ ಗಡಿ ದಾಟದಂತೆ ಮತ್ತು ಕಚಗುಳಿ ಹಳಸಾಗದಂತೆ ತೆಗೆದುಕೊಳ್ಳುವ ಎಚ್ಚರಿಕೆ ಬಲು ಇಷ್ಟ.

ಅವರ ಸಂಕಲನವನ್ನು ತಾವು ಗಮನಿಸಿದ ರೀತಿಯೂ ನೆಚ್ಚಿಗೆಯಾಯಿತು ಸಾರ್.

Arathi said...

ಧನ್ಯವಾದಗಳು ಬದ್ರಿ ಸರ್ ನಿಮ್ಮ ಅಭಿಮಾನಕ್ಕೆ !