Thursday, January 15, 2009

ಬಸವಣ್ಣನವರ ವಚನಗಳು

ವಿಚಾರಕ್ರಾಂತಿ, ಆಚಾರಕ್ರಾಂತಿ ಇವು ಕಲ್ಯಾಣದ ಶಿವಶರಣರ ಪ್ರಮುಖ ಧ್ಯೇಯಗಳಾಗಿದ್ದವು.
ಈ ಧ್ಯೇಯಗಳ ಸಾಧನೆಯ ಜೊತೆಜೊತೆಗೇ ಕನ್ನಡ ಭಾಷೆಯೂ ಸಹ ಶರಣರ ವಚನಗಳಿಂದಾಗಿ ಹೊಸ ಪ್ರಭೆಯನ್ನು ಪಡೆಯಿತು.
ಶರಣರ ಮುಖ್ಯ ಧ್ಯೇಯದ ಎದುರಿಗೆ ಇದು ಒಂದು ತರಹದ ‘ಉಪ ಉತ್ಪನ್ನ’.
ಹೀಗಾಗಿ, ಬಸವಣ್ಣನವರಿಗೆ, ಪ್ರಭುದೇವರಿಗೆ ಅಥವಾ ಅಕ್ಕಮಹಾದೇವಿಗೆ ‘ಶ್ರೇಷ್ಠ ಸಾಹಿತಿಗಳು’ ಎಂದು ಕರೆಯಲು ನಾವು ಹಿಂಜರಿಯುತ್ತೇವೆ.
ಆದರೆ ಅವರು ಶ್ರೇಷ್ಠ ಸಾಹಿತಿಗಳು ಎನ್ನುವದು ಒಂದು ವಾಸ್ತವಿಕತೆ, although secondary reality.
ಅವರು ಆಧ್ಯಾತ್ಮಿಕ ಮಹಾನುಭಾವರು ಎನ್ನುವದೇ ಮೂಲ ವಾಸ್ತವಿಕತೆ, primary reality.

“ನುಡಿದರೆ ಮುತ್ತಿನ ಹಾರದಂತಿರಬೇಕು..” ಎನ್ನುವ ಬಸವಣ್ಣನವರ ಮಾತು ಅವರ ವಚನಗಳಿಗೇ ಅನ್ವಯಿಸುತ್ತದೆ.
ಬಸವಣ್ಣನವರು ತಮ್ಮ ವಚನಗಳ ಮೂಲಕ ಸೃಷ್ಟಿಸಿದ ಸುಂದರ ಪದಪುಂಜಗಳಿಗೆ ಲೆಕ್ಕವಿಲ್ಲ.
‘ಹೊನ್ನಶೂಲ’, ‘ತಲೆದಂಡ’, ‘ಲೋಕದ ಡೊಂಕು’, ‘ಮಾನಿಸಗಳ್ಳೆ’, ‘ಚಿತ್ರದ ರೂಹು’, ‘ಕರ್ತಾರನ ಕಮ್ಮಟ’ ಇವುಗಳನ್ನು ಉದಾಹರಿಸಬಹುದು.

ಸಂಸ್ಕೃತದ ಅನೇಕ ಸುಂದರ ವಾಕ್ಯಗಳನ್ನು ಅವರು ಕನ್ನಡದಲ್ಲಿ ಇನ್ನೂ ಚೆನ್ನಾಗಿ ಹೇಳಿದ್ದಾರೆ ಅಥವಾ ಅನುವಾದಿಸಿದ್ದಾರೆ.
ಉದಾಹರಣೆಗೆ ಈ ಸಂಸ್ಕೃತ ವಾಕ್ಯವನ್ನು ನೋಡಿರಿ:
“ಮಧು ತಿಷ್ಠತಿ ಜಿಹ್ವಾಗ್ರೇ, ಹೃದಯೇತು ಹಾಲಾಹಲಮ್.”
ಬಸವಣ್ಣನವರು ಇದೇ ಮಾತನ್ನು ಕನ್ನಡದಲ್ಲಿ ಹೇಳಿದ ಬಗೆ ಹೀಗಿದೆ:
ಅವಳ ಮಾತು ಬೆಲ್ಲದಂತೆ, ಮನದಲ್ಲಿದ್ದದು ನಂಜು ಕಂಡಯ್ಯಾ.”

ಮಹಾಭಾರತದಲ್ಲಿ ಧರ್ಮರಾಯನು ಹೇಳುವ,
“ಮಾತೃವತ್ ಪರದಾರೇಷು,
ಪರದ್ರವ್ಯೇಷು ಲೋಷ್ಠವತ್”
ಎನ್ನುವ ನೀತಿಬೋಧೆಯನ್ನು ಬಸವಣ್ಣನವರು ಈ ರೀತಿಯಾಗಿ ಕನ್ನಡಿಸಿದ್ದಾರೆ:
ಛಲ ಬೇಕು ಶರಣಂಗೆ ಪರಧನವನೊಲೆನೆಂಬ,
ಛಲ ಬೇಕು ಶರಣಂಗೆ ಪರಸತಿಯನೊಲೆನೆಂಬ
”.

ಭಗವದ್ಗೀತೆಯು ಸ್ಥಿತಪ್ರಜ್ಞನ ಲಕ್ಷಣಗಳನ್ನು ನಾಲ್ಕು ಶ್ಲೋಕಗಳಲ್ಲಿ ಹೇಳಿದೆ.
ಬಸವಣ್ಣನವರು ಕನ್ನಡದ ಒಂದೇ ವಾಕ್ಯದಲ್ಲಿ ಅದರ ಸಾರವನ್ನು ತಿಳಿಯಾಗಿ ತಿಳಿಸಿದ್ದಾರೆ:
ಮನೆಯೊಳಗಿನ ಕಿಚ್ಚು ಮನೆಯ ಸುಟ್ಟೀತಲ್ಲದೆ, ನೆರೆಮನೆಯ ಸುಟ್ಟೀತೆ ಅಯ್ಯಾ?

ಈ ವಾಕ್ಯದಲ್ಲಿ ಕೇವಲ ಸಂದೇಶವಷ್ಟೇ ಅಲ್ಲ, ಅದಕ್ಕಿರುವ ಮನೋವೈಜ್ಞಾನಿಕ ಆಧಾರವೂ ಸಹ ವ್ಯಕ್ತವಾಗಿದೆ.
ಇದೀಗ ನಮ್ಮ ಮನೋವಿಜ್ಞಾನಿಗಳು, corporate ಗುರುಗಳು ಇದೇ ಸಂದೇಶವನ್ನು corporate executiveಗಳಿಗೆ ***** ಹೊಟೇಲುಗಳಲ್ಲಿ ವಿವರಿಸುತ್ತಾರೆ.
ಬೇರೆಯವರ ವಿಚಾರವಾಗಿ ನಮ್ಮ ಮನದಲ್ಲಿ ಸಿಟ್ಟು, ಸೆಡವು, ಹತಾಶೆ ಉಳಿದುಕೊಂಡರೆ, acidity, BP, ಇವೆಲ್ಲ ಅಗುವದು ನಮಗೇ ಹೊರತು ಅವರಿಗಲ್ಲ ಎನ್ನುವ ಸಂದೇಶವನ್ನು ಬಸವಣ್ಣನವರು ಒಂದೇ ವಾಕ್ಯದಲ್ಲಿ ಮನಗಾಣಿಸಿದ್ದಾರೆ.

ಯಾವುದೇ ಒಂದು ಸಂದೇಶವನ್ನು ಬಸವಣ್ಣನವರಂತೆ compact ಆಗಿ ಹೇಳಿದವರು ಬಹುಶಃ ಯಾರೂ ಇರಲಿಕ್ಕಿಲ್ಲ.
ಉದಾಹರಣೆಗೆ ಈ ವಚನ ನೋಡಿರಿ:
“ಕರಿ ಘನ, ಅಂಕುಶ ಕಿರಿದೆನ್ನಬಹುದೆ? ಬಾರದಯ್ಯಾ
ಗಿರಿ ಘನ, ವಜ್ರ ಕಿರಿದೆನ್ನಬಹುದೆ? ಬಾರದಯ್ಯಾ
ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯಾ
ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ?
ಬಾರದಯ್ಯಾ ಕೂಡಲಸಂಗಮ ದೇವಾ”

ಈ ವಚನವನ್ನು ನೋಡಿದಾಗ ನನಗೆ ಅಲೆಗ್ಝಾಂಡರ
ಸೋಲ್ಝೆನಿತ್ಸನ್ನನ ನಾಟಕದ ಶೀರ್ಷಿಕೆ ನೆನಪಾಗುತ್ತದೆ: “Candle in the wind”.
Candle in the wind ಅಂದರೆ ಸಂಕಷ್ಟವನ್ನು ಎದುರಿಸುತ್ತಿರುವ human spirit ಎಂದು ಸೋಲ್ಝೆನಿತ್ಸನ್ನನ ಮತ.
'ಜ್ಯೋತಿ' ಎಂದು ಬಸವಣ್ಣನವರು ಹೇಳುತ್ತಿರುವದು ದೇವರಲ್ಲಿಯ ನಂಬುಗೆ.
ಈ ಎರಡರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನಂಬುಗೆ ಅಥವಾ spirit ಇವು ಅನೇಕ ಅಡಚಣಿಗಳನ್ನು ಎದುರಿಸುತ್ತಿರಬಹುದು. ಆದರೆ ಅವುಗಳನ್ನು ರಕ್ಷಿಸಿಕೊಳ್ಳುವದು ನಮ್ಮ ಅವಶ್ಯಕತೆ.

ತನ್ನ ಕೊನೆಯ ದಿನಗಳಲ್ಲಿ ಬುದ್ಧನು ತನ್ನ ಶಿಷ್ಯರಿಗೆ ಕೆಲವೊಂದು rules of conduct ಹೇಳಿದ್ದ.
“ನೀವು ಭಿಕ್ಷೆ ಬೇಡಲು ಹೋದಾಗ ಯಾರನ್ನೂ ಬಯ್ಯಬೇಡಿ, ಸುಳ್ಳು ಹೇಳಬೇಡಿ” ಇತ್ಯಾದಿ.
ಇದೇ ಸಂದೇಶವು ಬಸವಣ್ಣನವರ ವಚನದಲ್ಲಿ ಎಷ್ಟು ಸುಂದರವಾಗಿ ಮೂಡಿದೆ ಎನ್ನುವದನ್ನು ನೋಡಬಹುದು.

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಅನ್ಯರಿಗೆ ಅಸಹ್ಯಪಡಬೇಡ, ಮುನಿಯಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ,
ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ”

ಅನೇಕ ಮೂಲಗಳಿಂದ ಜ್ಞಾನಸಂಪಾದನೆ ಮಾಡಿದ ಬಸವಣ್ಣನವರು ಬುದ್ಧನ ಸಂದೇಶವನ್ನೇ ಕನ್ನಡದಲ್ಲಿ ಹೇಳಿದ್ದರೆ ಆಶ್ಚರ್ಯವಿಲ್ಲ.

ಇಂತಹ ವಚನಗಳಿಂದ ಬಸವಣ್ಣನವರು ಕೇವಲ ಸಮಾಜಸುಧಾರಣೆಯನ್ನಷ್ಟೇ ಮಾಡಲಿಲ್ಲ, ಕನ್ನಡ ನುಡಿಯ ಸೊಬಗನ್ನೂ ಸಹ ಹೆಚ್ಚಿಸಿದರು.
ಕನ್ನಡ ಸಾಹಿತ್ಯದ ಹಿರಿಯ ಪಟ್ಟ ಅವರದು.
ಆದರೆ ಅವರ ಶರಣಪಟ್ಟವು ಇದಕ್ಕಿಂತಲೂ ಎಷ್ಟೋ ದೊಡ್ಡದು.
.......................................................
ಪ್ರಿಯ ಸಹಭಾಗಿಗಳೆ,
ಒಂದು ಅತ್ಯಂತ ಕಳವಳದ ವಿಷಯವನ್ನು ನಮ್ಮ ಸಹಬ್ಲಾಗಿಗರಾದ ಸುಷ್ಮಾಸಿಂಧು ನನ್ನ ನಜರಿಗೆ ತಂದಿದ್ದಾರೆ.
ಅವರು ತಮ್ಮ ಬ್ಲಾಗಿನಲ್ಲಿ ಬರೆದ ಲೇಖನವನ್ನು
(http://mydreamwritings.blogspot.com/2008/10/great-aspirations.html)
ಯದ್ವತ್ ನಕಲು ಮಾಡಿ Panky ಎನ್ನುವ ಕಳ್ಳನೊಬ್ಬ ತನ್ನದೇ ಲೇಖನ ಎನ್ನುವಂತೆ ತನ್ನ ಬ್ಲಾಗಿನಲ್ಲಿ ಹಾಕಿಕೊಂಡಿದ್ದಾನೆ.
(http://panki-wellstream.blogspot.com/2008/11/great-aspirations.html)
This is a clear case of plagiarism.
ನಾನು ಅವನಿಗೆ ಇದೇ ರೀತಿಯಾಗಿ comment ಬರೆದಿದ್ದೇನೆ.
ನೀವು ದಯವಿಟ್ಟು ಎರಡೂ blogsಗಳಿಗೆ ಹೋಗಿ ನೋಡಿ, ನಿಮ್ಮ commentಆ blogಗಳಲ್ಲಿ ಉಲ್ಲೇಖಿಸಿದರೆ ಇಂತಹ ಕಳ್ಳತನಗಳು ಇಲ್ಲವಾಗಬಹುದು.
ಅಲ್ಲದೆ, ಈ ವಿಷಯವನ್ನು ನಮ್ಮ blogger.comದ ಒಡೆಯರಿಗೆ ತಿಳಿಸುವ ಬಗೆ ನಿಮಗೆ ಗೊತ್ತಿದ್ದರೆ ದಯವಿಟ್ಟು ಹೇಳಿ ಹಾಗೂ ನೀವು ತಿಳಿಸಿ.
Let us fight against plagiarism.
-ಸುನಾಥ

Wednesday, January 7, 2009

ವಿಚಾರಸ್ವಾತಂತ್ರ್ಯ ಹಾಗು ವಿಚಾರಕ್ರಾಂತಿ

೧೨ನೆಯ ಶತಮಾನದಲ್ಲಿ ಜರುಗಿದ ಶರಣರ ಕ್ರಾಂತಿಯು ಕರ್ನಾಟಕದಲ್ಲಿ ನಡೆದ ಅದ್ಭುತ ವೈಚಾರಿಕ ಕ್ರಾಂತಿ ಎನ್ನಬಹುದು.
ಬಸವಣ್ಣನವರನ್ನು ಈ ಕ್ರಾಂತಿಯ ನೇತಾರ ಎನ್ನಲಾಗುತ್ತದೆ.
ಆದರೆ ಈ ಕ್ರಾಂತಿ ಬಸವಣ್ಣನವರಿಗಿಂತಲೂ ಸಾಕಷ್ಟು ಪೂರ್ವದಲ್ಲಿಯೇ ಪ್ರಾರಂಭವಾಗಿತ್ತು.
ಈ ಪೂರ್ವಿಕರನ್ನು ಬಸವಣ್ಣನವರು ಆದ್ಯರು ಎಂದು ಕರೆದಿದ್ದಾರೆ.
ಅವರ ವಚನಗಳನ್ನು “ಆದ್ಯರ ವಚನ ಪರುಷದಂತೆ ಕಾಣಯ್ಯ” ಎಂದು ಬಣ್ಣಿಸಿದ್ದಾರೆ.

ಈ ವೈಚಾರಿಕ ಕ್ರಾಂತಿಯಲ್ಲಿ ಶರಣರು ಆರು ಅಂಶಗಳನ್ನು ಪ್ರತಿಪಾದಿಸಿದ್ದಾರೆ:
(೧) ಸಾಂಪ್ರದಾಯಕ ಅಂಧಶ್ರದ್ಧೆಗಳನ್ನು ತಿರಸ್ಕರಿಸುವದು,
(೨) ಮತೀಯ ಶ್ರೇಣೀಕರಣವನ್ನು ಹಾಗೂ ಮತೀಯ ಭಿನ್ನತೆಯನ್ನು ತಿರಸ್ಕರಿಸುವದು,
(೩) ಧಾರ್ಮಿಕ ಆಚರಣೆಗಳಲ್ಲಿಯ ಅನಾಚಾರವನ್ನು/ಡಾಂಭಿಕತೆಯನ್ನು ತಿರಸ್ಕರಿಸುವದು,
(೪) ಧಾರ್ಮಿಕ ಆಚರಣೆಗಳ ಸರಳೀಕರಣ,
(೫) ವೈಯಕ್ತಿಕ ಉತ್ತಮಿಕೆಗೆ ಒತ್ತು,
(೬) ಸಾಮಾಜಿಕ ಸುಧಾರಣೆ.

ಈ ಅಂಶಗಳು ಬಸವಣ್ಣನವರ ಅನೇಕ ವಚನಗಳಲ್ಲಿ ವ್ಯಕ್ತವಾಗುತ್ತವೆ.
ಅಂತಹ ಕೆಲವು ವಚನಗಳು ಹಿಗಿವೆ:

(೧) ಸಾಂಪ್ರದಾಯಕ ಶ್ರದ್ಧೆಗಳನ್ನು ತಿರಸ್ಕರಿಸುವದು (Rational thinking):
ಶುಭಕಾರ್ಯಗಳನ್ನು ಶುಭ ಮುಹೂರ್ತದಲ್ಲಿ ಮಾಡುವದು ಒಂದು ಸಾಂಪ್ರದಾಯಕ ಶ್ರದ್ಧೆ.
ಆದರೆ, ಶರಣರು ‘ಶುಭಮುಹೂರ್ತ’ ಎನ್ನುವ conceptಅನ್ನೇ ತಿರಸ್ಕರಿಸಿದರು.
ಇದರ ಬಗೆಗೆ ಬಸವಣ್ಣನವರ ವಚನವೊಂದು ಹೀಗಿದೆ:

“ ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ, ಋಣಸಂಬಂಧವುಂಟೆಂದು ಹೇಳಿರಯ್ಯಾ,
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ,
ಕೂಡಲಸಂಗಮ ದೇವನ ಪೂಜಿಸಿದ ಫಲ ನಿಮ್ಮದಯ್ಯಾ.”

“ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ,
ಗ್ರಹಣ, ಸಂಕ್ರಾಂತಿಯಿಂದ ವೆಗ್ಗಳ,
ಏಕಾದಶಿ, ವ್ಯತಿಪಾತದಿಂದ ವೆಗ್ಗಳ,
ಸೂಕ್ಷ್ಮ ಶಿವಪಥನರಿದವಂಗೆ
ಹೋಮ, ನೇಮ, ಜಪ, ತಪದಿಂದ ವೆಗ್ಗಳ,
ಕೂಡಲಸಂಗಮ ದೇವಾ ನಿಮ್ಮ ಮಾಣದೆ ನೆನೆವವಂಗೆ”

ಪಾರಮಾರ್ಥಿಕ ಸಾಧನೆಗೆ ದೇಹದಂಡನೆಯು ಅವಶ್ಯವೆನ್ನುವದು ಮತ್ತೊಂದು ಸಾಂಪ್ರದಾಯಕ ಶ್ರದ್ಧೆ.
ಬಸವಣ್ಣನವರ ಒಂದು ವಚನವು ಈ ಪರಿಕಲ್ಪನೆಯನ್ನು ವಿರೋಧಿಸುವ ಪರಿ ಹೀಗಿದೆ:

“ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೆ ಅಯ್ಯಾ
ಅಘೋರ ತಪವ ಮಾಡಿದೊಡೇನು?
ಅಂತರಂಗ ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯಾ
ಕೂಡಲಸಂಗಮ ದೇವಾ?”

ಈ ವಚನದಲ್ಲಿ ಬಸವಣ್ಣನವರು ಸಾಂಪ್ರದಾಯಕ ಶ್ರದ್ಧೆಯನ್ನು ಟೀಕಿಸಿದ್ದಷ್ಟೇ ಅಲ್ಲ,
ತಮ್ಮ ವೈಚಾರಿಕ ಧಾರ್ಷ್ಟ್ಯವನ್ನೂ ನಿಚ್ಚಳವಾಗಿ ತೋರಿಸಿದ್ದಾರೆ.

ಭಾರತೀಯ ಸಾಂಪ್ರದಾಯಕ ವಿಚಾರಧಾರೆಯ ಮೇರೆಗೆ ಹಾವು ಅಥವಾ ಸರ್ಪವೆಂದರೆ ಕುಂಡಲಿನಿ ಶಕ್ತಿ.
ಈ ಶಕ್ತಿಯನ್ನು ಜಾಗೃತಗೊಳಿಸುವದು ಯೋಗಿಯ ಗುರಿಯಾಗಿದೆ.
ಕನಸಿನಲ್ಲಿ ಹಾವು ಕಂಡರೆ ಅದು ಕುಂಡಲಿನಿ ವ್ಯಕ್ತವಾಗುವ ಬಗೆ ಎಂದು ಸಾಂಪ್ರದಾಯಕವಾಗಿ ಭಾವಿಸಲಾಗುತ್ತದೆ.
ಆದರೆ ಬಸವಣ್ಣನವರು ಕನ್ನಡ ನಾಡಿನಲ್ಲಿ (ಬಹುಶಃ ಭಾರತದಲ್ಲಿಯೇ) ಮೊದಲ ಬಾರಿಗೆ ಹಾವನ್ನು ಕಾಮಪೂರಿತ ಮನಸ್ಸಿಗೆ ಹೋಲಿಸಿದ್ದಾರೆ.
ಜರ್ಮನಿಯ ಮನೋವಿಜ್ಞಾನಿ ಫ್ರಾ:ಯ್ಡನು ಕನಸುಗಳಲ್ಲಿ ಕಂಡುಬರುವ ಹಾವು ಲೈಂಗಿಕ ಪ್ರತೀಕ ಎಂದು ಹೇಳುವದಕ್ಕಿಂತ ಏಳುನೂರು ವರ್ಷ ಮೊದಲಿಗೇ, ಬಸವಣ್ಣನವರು ಹಾವನ್ನು ‘lust’ ಪ್ರತೀಕವಾಗಿ ಬಳಸಿದ್ದಾರೆ.
ಇದು ಅವರ ವೈಚಾರಿಕ ಧಾರ್ಷ್ಟ್ಯವನ್ನು ಎತ್ತಿ ತೋರಿಸುತ್ತದೆ.

ವಿಚಿತ್ರವೆಂದರೆ, ಎರಡು ಶತಮಾನಗಳ ನಂತರದ ಕವಿಯಾದ ಸರ್ವಜ್ಞನು ಇದಕ್ಕೆ ವಿರುದ್ಧವಾದ ತನ್ನ ಅಭಿಪ್ರಾಯವನ್ನು ಹೀಗೆ ಹೇಳಿದ್ದಾನೆ:

“ದಂಡಿಸದೆ ದೇಹವನು, ಖಂಡಿಸದೆ ಕಾಯವನು
ಉಂಡುಂಡು ಸ್ವರ್ಗಕ್ಕೆ ಹೋಗಲಿಕೆ ಅದನೇನು,
ರಂಡೆಯಾಳುವಳೆ ಸರ್ವಜ್ಞ?”

(೨) ಮತೀಯ ಶ್ರೇಣೀಕರಣವನ್ನು ಹಾಗೂ ಮತೀಯ ಭಿನ್ನತೆಯನ್ನು ತಿರಸ್ಕರಿಸುವದು:

ಮತೀಯ ಶ್ರೇಣೀಕರಣವು ವೈದಿಕ ಧರ್ಮದ ಒಂದು ವಿರೂಪ ಸ್ವರೂಪವಾಗಿದೆ.
ಬಸವಣ್ಣನವರ ಅನೇಕ ವಚನಗಳಲ್ಲಿ ಇದರ ವಿರುದ್ಧದ ಹೋರಾಟವನ್ನು ನೋಡಬಹುದು.
ಒಂದು ಉದಾಹರಣೆ ಹೀಗಿದೆ:

“ಸೆಟ್ಟಿಯೆಂಬೆನೆ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹಾರನೆಂಬೆನೆ ಕಕ್ಕಯ್ಯನ?
ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದೆಡೆ ಕೂಡಲಸಂಗಮ ನಗುವನಯ್ಯಾ!”

“ ಶ್ವಪಚನಾದಡೇನು? ಲಿಂಗಭಕ್ತನೇ ಕುಲಜನು.
ನಂಬಿ, ನಂಬದಿದ್ದಡೆ ಸಂದೇಹಿ, ನೋಡಾ.
ಕಟ್ಟಿದಡೇನು, ಮುಟ್ಟಿದಡೇನು, ಹೂಸಿದಡೇನು
ಮನ ಮುಟ್ಟದನ್ನಕ್ಕ?
ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು,
ಕೂಡಲಸಂಗಯ್ಯನೊಲಿದಂಗಲ್ಲದೆ.”

“ಜಾತಿವಿಡಿದು ಸೂತಕವನರೆಸುವೆ,
ಜ್ಯೋತಿವಿಡಿದು ಕತ್ತಲೆಯನರೆಸುವೆ!
ಇದೇಕೊ ಮರುಳುಮಾನವಾ?
ಜಾತಿಯಲ್ಲಿ ಅಧಿಕನೆಂಬೆ!
ವಿಪ್ರಶತಕೋಟಿಗಳಿದ್ದಲ್ಲಿ ಫಲವೇನು?
ಭಕ್ತಶಿಖಾಮಣಿ ಎಂಬುದು ವಚನ.
ನಮ್ಮ ಕೂಡಲಸಂಗನ ಶರಣರ ಪಾದಪರುಶವ ನಂಬು,
ಕೆಡಬೇಡ ಮಾನವಾ.”

ಶರಣರೆಲ್ಲರೂ ಒಂದೇ. ಯಾರಲ್ಲೂ ಮೇಲು, ಕೀಳಿಲ್ಲ ಎನ್ನುವ ತತ್ವವು
ಬಸವಣ್ಣನವರ ಈ ಮುಂದಿನ ವಚನದಲ್ಲಿ ವ್ಯಕ್ತವಾಗುತ್ತದೆ:

“ಇವನಾರವ, ಇವನಾರವ ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮ ದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ!”

(೩) ಧಾರ್ಮಿಕ ಆಚರಣೆಗಳಲ್ಲಿಯ ಅನಾಚಾರವನ್ನು/ಡಾಂಭಿಕತೆಯನ್ನು ತಿರಸ್ಕರಿಸುವದು:

ವೈದಿಕ ಧರ್ಮದಲ್ಲಿ ಬೇರೂರಿದ ಅನಾಚಾರ ಹಾಗೂ ಡಾಂಭಿಕತೆಯನ್ನು ತೊಳೆಯಲು, ಶರಣರು ಪ್ರಯತ್ನ ಪಟ್ಟಿದ್ದಾರೆ. ಇದರ ಉದಾಹರಣೆಯಾಗಿ ಅಕ್ಕಮಹಾದೇವಿಯ ವಚನವೊಂದನ್ನು ನೋಡಬಹುದು:

“ತನು ಕರಗದವರಲ್ಲಿ ಪುಷ್ಪವನೊಲ್ಲೆಯ್ಯ ನೀನು,
ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲೆಯ್ಯ ನೀನು,
ಹದುಳಿಗರಲ್ಲದವರಲ್ಲಿ ಮಜ್ಜನವನೊಲ್ಲೆಯ್ಯ ನೀನು,
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯ್ಯ ನೀನು,
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯ್ಯ ನೀನು,
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯ್ಯ ನೀನು,
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯ್ಯ ನೀನು,
ಹೃದಯಕಮಲವರಳದವರಲ್ಲಿ ಇರಲೊಲ್ಲೆಯ್ಯ ನೀನು,
ಎನ್ನಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯಾ!”

ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ ಈ ಐದು ಉಪಕರಣಗಳನ್ನು ಬಳಸಿ ಮಾಡುವ ಪೂಜೆಗೆ ‘ಪಂಚೋಪಚಾರ ಪೂಜೆ’ ಎಂದು ಕರೆಯಲಾಗುತ್ತದೆ.
ಇದರಂತೆ ಶೋಡಷೋಪಚಾರ ಪೂಜೆಯೂ ಇದೆ.
ಪರಮಾತ್ಮನ ಪೂಜೆಯ ಅಂತಿಮ ಉದ್ದೇಶವೇ ‘ತನ್ನತನ’ ಕರಗುವದು.
ಇದನ್ನೇ ಕನಕದಾಸರು “ ‘ನಾನು’ ಹೋದರೆ ಹೋಗಬಹುದು” ಎಂದು ಹೇಳಿದ್ದು.
‘ನಾನು’ ನಾಶವಾಗದೆ, ಈ ಪಂಚೋಪಚಾರ ಅಥವಾ ಶೋಡಷೋಪಚಾರ ಪೂಜೆಯ ಸಾರ್ಥಕತೆ ಏನು?
ಅಕ್ಕಮಹಾದೇವಿ ತನ್ನ ವಚನದ ಮೂಲಕ ಇಂತಹ ವ್ಯರ್ಥ ಪೂಜೆಯನ್ನು ಟೀಕಿಸಿದ್ದಾರೆ.
ತನು ಹಾಗು ಮನಸ್ಸನ್ನು ಅಪರೋಕ್ಷವಾಗಿ ಪುಷ್ಪ ಹಾಗೂ ಅದರ ಗಂಧಕ್ಕೆ ಹೋಲಿಸಿರುವದು ಈ ವಚನದ ವೈಶಿಷ್ಟ್ಯವಾಗಿದೆ.

ಇದರಂತೆಯೇ, ಯಜ್ಞ ಯಾಗಾದಿಗಳಲ್ಲಿ ಜರಗುತ್ತಿದ್ದ ಪ್ರಾಣಿಬಲಿಯನ್ನು ಖಂಡಿಸಿ ಬಸವಣ್ಣನವರು ಹೇಳಿದ ವಚನವೊಂದು ಹೀಗಿದೆ:

“ ವಿಷ್ಣು ವರಾಹಾವತಾರದಲ್ಲಿ ಹಂದಿಯಂ ತಿಂಬುದಾವಾಚಾರವೊ?
ವಿಷ್ಣು ಮತ್ಸ್ಯಾವತಾರದಲ್ಲಿ ಮೀನಂ ತಿಂಬುದಾವಾಚಾರವೊ ?
ವಿಷ್ಣು ಕೂರ್ಮಾವತಾರದಲ್ಲಿ ಆಮೆಯ ತಿಂಬುದಾವಾಚಾರವೊ?
ವಿಷ್ಣು ಹರಿಣಾವತಾರದಲ್ಲಿ ಎರಳೆಯ ತಿಂಬುದಾವಾಚಾರವೊ?
ಇಂತಿವನೆಲ್ಲ ಅರಿಯದೆ ತಿಂದರು.
ಅರಿದರಿದು ನಾಲ್ಕು ವೇದ, ಹದಿನಾರು ಶಾಸ್ತ್ರ,
ಹದಿನೆಂಟು ಪುರಾಣ, ಇಮ್ಮತ್ತೆಂಟಾಗಮ
ಇಂತಿವೆಲ್ಲನೋದಿ, ಕೇಳಿ, ಹೋಮವನಿಕ್ಕಿ, ಹೋತನ ಕೊಂದು
ತಿಂಬುದಾವಾಚಾರದೊಳಗೋ?
ಇಂತೀ ಶ್ರುತಿಗಳ ವಿಧಿಯ ಜಗವೆಲ್ಲ ನೋಡಿರೆ.
ನಮ್ಮ ಕೂಡಲಸಂಗಮ ದೇವಂಗೆ ಅಧಿದೇವತೆಗಳು ಸರಿಯೆಂಬುವರ
ಬಾಯಲ್ಲಿ ಸುರಿಯವೆ ಬಾಲಹುಳಗಳು? ”

(೪) ಧಾರ್ಮಿಕ ಆಚರಣೆಗಳ ಸರಳೀಕರಣ:

ಧಾರ್ಮಿಕ ಡಂಭಾಚಾರವನ್ನು ತಿರಸ್ಕರಿಸಿದ ಶರಣರು, ಅದಕ್ಕೆ ಲಿಂಗಧಾರಣೆಯ ಪರ್ಯಾಯವನ್ನು ನೀಡಿದರು.
ಇಷ್ಟಲಿಂಗವನ್ನು ಸದಾಕಾಲ ಎದೆಯ ಮೇಲೆ ಧರಿಸುವದರಿಂದ ಶರಣನು ಸದಾಕಾಲ ಎಚ್ಚರದಿಂದ ನಡೆಯುತ್ತಾನೆ.
ಈ ಇಷ್ಟಲಿಂಗವನ್ನು ಕರಸ್ಥಳದಲ್ಲಿ ಇಟ್ಟುಕೊಂಡು ಮಾನಸಿಕ ಪೂಜೆಯನ್ನು ಮಾಡುವದರಿಂದ,
ಆತ ಸಾಧನಾಪಥದಲ್ಲಿ ಶೀಘ್ರವಾಗಿ ಮುಂದುವರೆಯಬಹುದು ಎನ್ನುವ ಹಾರೈಕೆ ಇಲ್ಲಿದೆ.
ಇದಕ್ಕೆ ಸಂಬಂಧಿಸಿದ ಬಸವಣ್ಣನವರ ವಚನವೊಂದು ಈ ರೀತಿಯಾಗಿದೆ:

“ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದತ್ತ ನಿಮ್ಮ ಶ್ರೀಮುಕುಟ!
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,
ಕೂಡಲಸಂಗಮ ದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ!”

(೫) ವೈಯಕ್ತಿಕ ಉತ್ತಮಿಕೆಗೆ ಒತ್ತು:

ಕೇವಲ ಲಿಂಗಧಾರಣೆಯಿಂದ ಅಥವಾ ಕರಸ್ಥಲಪೂಜೆಯಿಂದ ವ್ಯಕ್ತಿಯ ಉನ್ನತಿ ಆಗದು ಎದು ತಿಳಿದ ಶರಣರು ವೈಯಕ್ತಿಕ ಉತ್ತಮಿಕೆಗೆ ತಮ್ಮ ವಚನಗಳಲ್ಲಿ ಒತ್ತು ನೀಡಿದ್ದಾರೆ.
ಈ ವಿಷಯದಲ್ಲಿ ಬಸವಣ್ಣನವರು ಅನೇಕ ವಚನಗಳನ್ನು ರಚಿಸಿದ್ದಾರೆ.
ಉದಾಹರಣೆ:

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ.”

“ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ,
ಮನೆಯೊಳಗೆ ಮನೆಯೊಡೆಯನಿಲ್ಲಾ, ಕೂಡಲಸಂಗಮ ದೇವಾ!”

“ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ನಮ್ಮ ಕೂಡಲಸಂಗಮ ದೇವ.”

(೬) ಸಾಮಾಜಿಕ ಸುಧಾರಣೆ:
ಧಾರ್ಮಿಕ ಸುಧಾರಣೆ, ವೈಯಕ್ತಿಕ ಸುಧಾರಣೆ ಇವುಗಳ ಜೊತೆಗೇ ಸಾಮಾಜಿಕ ಸುಧಾರಣೆಯೂ ಸಹ ಮಹತ್ವದ ವಿಷಯವಾಗಿದೆ.
ಸಮಾಜದಲ್ಲಿ ಈವರೆಗೆ ಬೇರೂರಿದ ತಪ್ಪು ಧೋರಣೆಗಳನ್ನು ಬದಲಾಯಿಸುವ ಉದ್ದೇಶದಿಂದ ವಚನಕಾರರರು ಅನೇಕ ವಚನಗಳನ್ನು ಹಾಡಿದ್ದಾರೆ.
“ಕಾಯಕವೇ ಕೈಲಾಸ” ಎನ್ನುವ ವಚನವು dignity of labourಅನ್ನು ವ್ಯಕ್ತಪಡಿಸುವದಲ್ಲದೆ, ಪರಿಶ್ರಮ ಪಡದೆ ಉಣ್ಣುವದು ತಪ್ಪು ಎನ್ನುವ ಭಾವವನ್ನು ಸಹ ವ್ಯಕ್ತ ಮಾಡುತ್ತದೆ.
ಸಮಾಜಸುಧಾರಣೆಯ ಉದ್ದೇಶವನ್ನು ಸ್ಪಷ್ಟ ಪಡಿಸುವ ಬಸವಣ್ಣನವರ ಎರಡು ವಚನಗಳು ಹೀಗಿವೆ:

“ ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ,
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ,,
ಕೂಡಲಸಂಗಮ ದೇವಾ.”

“ಏನಿ ಬಂದಿರಿ, ಹದುಳವಿದ್ದಿರೆ ಎಂದರೆ
ನಿಮ್ಮ ಮೈಸಿರಿ ಹಾರಿ ಹೋಹುದೆ?
ಕುಳ್ಳಿರೆಂದರೆ ನೆಲ ಕುಳಿ ಹೋಹುದೆ?
ಒಡನೆ ನುಡಿದರೆ ಸಿರ ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದ್ದೆಡೆ
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮ ದೇವನು?”

ಬಸವಣ್ಣನವರ ವಚನಗಳು ಹಾಗೂ ಶರಣರ ವಚನಗಳು ಈ ರೀತಿಯಾಗಿ ವೈಚಾರಿಕ ಕ್ರಾಂತಿಯ ಸಂದೇಶವನ್ನು ಬೀರುತ್ತವೆ.
ಆದರೆ ಈ ವೈಚಾರಿಕ ಕ್ರಾಂತಿ ಈಗ ಉಳಿದಿಲ್ಲ ಎನ್ನುವದು ಕನ್ನಡ ನಾಡಿನ ದುರ್ದೈವ.
ಕರ್ನಾಟಕದ ಖ್ಯಾತ ಸಂಶೋಧಕರಾದ ಶ್ರೀ ಎಮ್. ಎಮ್. ಕಲಬುರ್ಗಿಯವರು ತಮ್ಮ ಸಂಶೋಧನಾ ಕೃತಿ “ಮಾರ್ಗ”ದಲ್ಲಿ ಚೆನ್ನಬಸವಣ್ಣನ ಬಗೆಗೆ ಬರೆದ ವಿಷಯಗಳು ಕರ್ನಾಟಕದ ಕೆಲವೆಡೆ ತೀವ್ರ ಕ್ಷೋಭೆಯನ್ನು ಉಂಟು ಮಾಡಿದವು.
ಶ್ರೀ ಕಲಬುರ್ಗಿಯವರು ಮಠಾಧೀಶರ ಕ್ಷಮೆ ಕೋರಿದ ಬಳಿಕ ಈ ಪ್ರಕರಣ ಮುಕ್ತಾಯವಾಯಿತು.

ಇತ್ತಿಚೆಗೆ ಶ್ರೀ ಜಯಪ್ರಕಾಶ ಬಂಜಗೆರೆಯವರು ಬಸವಣ್ಣನು ಹುಟ್ಟಿನಿಂದ ಬ್ರಾಹ್ಮಣನಿರಲಿಕ್ಕಿಲ್ಲ ಎನ್ನುವ ಅನುಮಾನವನ್ನು “ ಆನು ಹೊರಗಣವನಯ್ಯಾ ” ಎನ್ನುವ ತಮ್ಮ ಕೃತಿಯೊಂದರಲ್ಲಿ ವ್ಯಕ್ತ ಪಡಿಸಿದರು.
ಅದರ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿ, ಕರ್ನಾಟಕ ಸರಕಾರವು ಕೊನೆಗೊಮ್ಮೆ ಆ ಕೃತಿಯನ್ನು ಮುಟ್ಟುಗೋಲು ಹಾಕುವದರಲ್ಲಿ ಮುಕ್ತಾಯವಾಯಿತು.

ಆದರೆ, ಡಾಃನ್ ಬ್ರೌನ್ ಬರೆದ “ಡಾ ವಿಂಚಿ ಕೋಡ್” ಕೃತಿಯು ಯೇಸು ಕ್ರಿಸ್ತನ ಬಗೆಗೆ ಅನೇಕ ಸಂಶಯಗಳನ್ನು ವ್ಯಕ್ತ ಪಡಿಸಿದರೂ ಸಹ ಪಾಶ್ಚಾತ್ಯ ದೇಶಗಳಲ್ಲಿ ಅದರ ವಿರುದ್ಧ ಯಾವುದೇ ಚಳುವಳಿಯಾಗಲಿಲ್ಲ.
ಅಷ್ಟೇ ಏಕೆ, ಯೇಸುವು ಓರ್ವ ಸೂಳೆಯಲ್ಲಿ ರೋಮನ್ ಸೈನಿಕನಿಗೆ ಹುಟ್ಟಿದ ಮಗನು ಎನ್ನುವ ಸಂಶೋಧನಾತ್ಮಕ ಲೇಖನಗಳೂ ಸಹ ಪ್ರಕಟವಾಗಿವೆ.
ಆದರೆ ಇದರ ವಿರುದ್ಧ ಸಹ ಪಾಶ್ಚಾತ್ಯ ಲೋಕದಲ್ಲಿ ಯಾವುದೇ ಆಕ್ರೋಶ ವ್ಯಕ್ತವಾಗಿಲ್ಲ.

ಶರಣರು ತೋರಿಸಿದ ವೈಚಾರಿಕ ಸ್ವಾತಂತ್ರ್ಯ , ಆ ಸ್ವಾತಂತ್ರ್ಯಕ್ಕೆ ಬೇಕಾಗುವ ಸಹನೆ ನಮ್ಮಲ್ಲಿ ಮಾಯವಾಗಿದೆಯೆ?
ಹದಿನೇಳನೆಯ ಶತಮಾನದಲ್ಲಿ ಬಾಳಿದ, ಫ್ರೆಂಚ್ ಕ್ರಾಂತಿಗೆ ಪ್ರೇರಣೆ ನೀಡಿದ ಚಿಂತಕರಲ್ಲಿ ಒಬ್ಬನಾದ ವೋಲ್ಟೇರ್ ಎನ್ನುವ ಲೇಖಕ ಈ ರೀತಿ ಹೇಳಿದ್ದಾನೆ:
I do not agree with what you have to say, but I will defend to the death your right to say it.
ಭಾರತದಲ್ಲಿ ಈಗಿರುವ ಪರಿಸ್ಥಿತಿ ಹೇಗಿದೆಯೆಂದರೆ:
If you do not agree with me, I will do you to death!

Tuesday, December 30, 2008

ಅತಿ-ಗಂಡಸ್ತನ-ಭ್ರಮಾವಿಲಾಸ

’Super-male-fantasy’ ಎನ್ನುವ ಪದಕ್ಕೆ ಶ್ರೀ ಕೇಶವ ಕುಲಕರ್ಣಿಯವರು ’ಅತಿ-ಗಂಡಸ್ತನ-ಭ್ರಮೆ’ ಎನ್ನುವ ಪರ್ಯಾಯ ಕನ್ನಡ ಪದವನ್ನು ನೀಡಿದ್ದಾರೆ.
Fantasy ಎನ್ನುವ ಇಂಗ್ಲಿಶ್ ಪದಕ್ಕೆ ಸರಿಯಾದ ಪದ ಹೊಳೆಯದೆ ಇದ್ದುದರಿಂದ ನಾನು ಆ ಆಂಗ್ಲ ಪದವನ್ನೇ ಬಳಸುತ್ತ ಬಂದಿದ್ದೆ.
ಅವರ ಕೊಡುಗೆಗೆ ಧನ್ಯವಾದಗಳು.
ಆದರೆ, ಭ್ರಮೆ ಎನ್ನುವದು illusion ಪದಕ್ಕೆ ಸರಿಹೋಗುವದು.
Fantasy ಪದಕ್ಕೆ ’ಭ್ರಮಾವಿಲಾಸ’ ಎನ್ನುವ ಪದಪುಂಜ ಸರಿಯಾಗಬಹುದೆಂದು ಈಗ ಹೊಳೆಯುತ್ತಿದೆ.
ಆದುದರಿಂದ ಮುಂದಿನ ಭಾಗದಲ್ಲಿ ನಾನು ‘ಭ್ರಮಾವಿಲಾಸ’ ಎನ್ನುವ ಪದವನ್ನು fantasy ಪದಕ್ಕೆ ಪರ್ಯಾಯವಾಗಿ ಬಳಸುತ್ತೇನೆ.

ಭೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವ ಈ ‘ಅಗಂಭ್ರವಿ’ ಬಗೆಗೆ ಹಿಂದಿನ ಲೇಖನದಲ್ಲಿ ಬರೆದ ಬಳಿಕ, ಸಹೃದಯ ಸ್ನೇಹಿತರು ಈ ವಿಷಯವನ್ನು ವಿವಿಧ ಕೋನಗಳಲ್ಲಿ ಪರೀಕ್ಷಿಸಿದ್ದಾರೆ.
ವಿಷಯದ ಪರವಾಗಿ ಹಾಗೂ ವಿರೋಧವಾಗಿ ಅನೇಕ ಟಿಪ್ಪಣಿಗಳು ಮೂಡಿವೆ.
ಈ ಟಿಪ್ಪಣಿಗಳನ್ನು ಸಮರ್ಪಕವಾಗಿ ಜೋಡಿಸಿಕೊಂಡು, ಸಮೀಕ್ಷಿಸುವ ಅವಶ್ಯಕತೆ ಕಂಡುಬರುತ್ತಿದೆ.

ಟಿಪ್ಪಣಿಗಳನ್ನು ಈ ರೀತಿಯಲ್ಲಿ ಜೋಡಿಸಿಕೊಳ್ಳಬಹುದು:
(೧) ರತಿಕ್ರಿಯೆಯ ವರ್ಣನೆ ಅನೇಕ ಸಾಹಿತಿಗಳ ಸಾಹಿತ್ಯದಲ್ಲಿ ಕಂಡುಬರುತ್ತದೆ. ಇದು ಕೇವಲ
ಭೈರಪ್ಪನವರ specialty ಅಲ್ಲ.
(೨) ಭೈರಪ್ಪನವರ ಸಾಹಿತ್ಯದಲ್ಲಿ ಕಂಡುಬರುವ ರತಿಕ್ರೀಡಾ ವರ್ಣನೆಯು ಸಂದರ್ಭಕ್ಕೆ ಉಚಿತವಾಗಿರುತ್ತದೆ. ಅದರಲ್ಲಿ ತಪ್ಪಿಲ್ಲ.
(೩) ಭೈರಪ್ಪನವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡದೆ, ಈ ರೀತಿಯ ನಿರ್ಣಯಕ್ಕೆ ಬರುವದು ತಪ್ಪು.

ಈ ಟಿಪ್ಪಣಿಗಳಿಗೆ ನನ್ನ ಮರುಟಿಪ್ಪಣಿಗಳು ಈ ರೀತಿಯಾಗಿವೆ:
(೧) ರತಿಕ್ರೀಡೆಯ ವರ್ಣನೆ ಭೈರಪ್ಪನವರ ಕಾದಂಬರಿಗಳಲ್ಲಿ explicit ಆಗಿ ಕಂಡುಬರುವಷ್ಟು ಬೇರೆ ಯಾವದಾದರೂ ಕನ್ನಡ ಕಾದಂಬರಿಯಲ್ಲಿ ಕಂಡು ಬರುತ್ತಿದ್ದರೆ, ದಯವಿಟ್ಟು ತಿಳಿಸಬೇಕು. (except in porno literature).
ನನಗೆ ಗೊತ್ತಿರುವ ಮಟ್ಟಿಗೆ ಕುವೆಂಪು ಬರೆದ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ರತಿಕ್ರೀಡೆಯ explicit ವರ್ಣನೆ ಇದೆ.
(ಓದಬಯಸುವವರು ಮೋಟುಗೋಡೆಯ ಮರೆಯಲ್ಲಿ ನೋಡಿರಿ.)
ಆದರೆ, ಈ ವರ್ಣನೆ ‘ಅತಿ-ಗಂಡಸ್ತನ-ಭ್ರಮಾವಿಲಾಸ’ದ ವರ್ಣನೆ ಅಲ್ಲ.
On the contrary, ಗಂಡು ಹೆಣ್ಣುಗಳ ಸಮಾನತೆಯನ್ನು, ಸಮಾನ ಆಸಕ್ತಿಯನ್ನು, ಕಾಮದ ಸಹಜತೆಯನ್ನು ತೋರಿಸುವ ವರ್ಣನೆ ಇದಾಗಿದೆ.
ಭೈರಪ್ಪನವರ ರತಿವರ್ಣನೆಗಳಲ್ಲಿ ಕಂಡುಬರುವ ವೈಶಿಷ್ಟ್ಯವೆಂದರೆ ‘ಅಗಂಭ್ರವಿ’.
ಇದರ ಅನೇಕ ಉದಾಹರಣೆಗಳನ್ನು ನಾನು ಹಿಂದಿನ ಲೇಖನದಲ್ಲಿ ಕೊಟ್ಟಿದ್ದೇನೆ.
ಅವರ ಒಂದು ಕಾದಂಬರಿಯಲ್ಲಿ (‘ಅನ್ವೇಷಣೆ’) ಬರುವ ಸಂದರ್ಭವನ್ನು ಇಲ್ಲಿ ಮತ್ತೊಮ್ಮೆ ನೆನಪಿಸಬಯಸುತ್ತೇನೆ.

ಕಾದಂಬರಿಯ ನಾಯಕನ ಗುರುವಾದ ಒಬ್ಬ ಸಾಧುಬಾಬಾ, ನಾಯಕನ ಹಾಗೆ ತಾನೂ ರತಿಸುಖವನ್ನು ಸವಿದು, ಜೀವನದಲ್ಲಿ ಅದರ ಮೌಲ್ಯ ಗುರುತಿಸುವ ಬಯಕೆಯೊಂದಿಗೆ, ಮುಂಬಯಿಯಲ್ಲಿ ಸೂಳೆಯೊಬ್ಬಳ ಬಳಿಗೆ ಹೋಗುತ್ತಾನೆ.
ಸರಿ, ಓದುಗನಿಗೆ ಇದರಲ್ಲಿ ಎಂತಹ ತಪ್ಪೂ ಕಾಣುವದಿಲ್ಲ.

ಸಾಮಾನ್ಯ ಗಂಡಸಿನ ತರಹ ಒಂದು ನಿರ್ದಿಷ್ಟ ಅವಧಿಯವರೆಗೆ, ಆ ಸಾಧುಬಾಬಾ ಕ್ರೀಡಿಸಿದ್ದರೆ ಹಾಗೂ ರತಿಸುಖ ಪಡೆಯುವದರಲ್ಲಿ ತಪ್ಪಿಲ್ಲ ಎನ್ನುವ ನಿರ್ಣಯಕ್ಕೆ ಬಂದಿದ್ದರೆ, ಅದಕ್ಕೆ ಏನೂ ಆಕ್ಷೇಪಣೆ ಇರುತ್ತಿರಲಿಲ್ಲ.
ಆದರೆ, ಭೈರಪ್ಪನವರ ವರ್ಣನೆಯ ಮೇರೆಗೆ ಆ ಸಾಧುಬಾಬಾ ೪ ದಿನಗಳವರೆಗೆ ನಿರಂತರವಾಗಿ ಅವಳಲ್ಲಿ ಕ್ರೀಡಿಸಿದ!

ಓದುಗನು ಅದನ್ನೂ ಸಹ ಒಪ್ಪಿಕೊಂಡಾನು.
ಬಹುಶಃ ಭೈರಪ್ಪನವರು Guinnes Record ಸಾಧಿಸುವ ಉದ್ದೇಶದಿಂದ ಹಾಗೆ ಬರೆದಿದ್ದಾರು ಎಂದುಕೊಳ್ಳೋಣ.
ಆದರೆ, ಈ ಮುಂದಿನ ವಾಕ್ಯವನ್ನು ಗಮನಿಸಿ:
ಅವಳು ಬಳಲಿದ್ದಳು. ನಾನು ಏನೂ ಬಳಲಿರಲಿಲ್ಲ.
ಈ ವಾಕ್ಯವು ರತಿಸುಖದ ಮೌಲ್ಯಮಾಪನೆಗೆ ಅವಶ್ಯಕವೆ?
Does it not smack of super-male-fantasy?

ಕನ್ನಡದ ಇತರ ಸಾಹಿತಿಗಳ ಸಾಹಿತ್ಯದಲ್ಲಿ ಕಂಡುಬಂದಿರಬಹುದಾದ ರತಿವರ್ಣನೆಯು ‘ಅಗಂಭ್ರವಿ’ ಅಲ್ಲ. ಅದು ಕೇವಲ ರತಿಕ್ರೀಡೆಯ ಸರಳ ವರ್ಣನೆಯಷ್ಟೇ.

(೨) ಭೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವ ರತಿಕ್ರೀಡಾ ವರ್ಣನೆಯು ಸಂದರ್ಭಜನ್ಯವಾಗಿರುತ್ತದೆ ಎನ್ನುವದು ಮತ್ತೊಂದು ಟಿಪ್ಪಣಿ.
ಅನೇಕ ಕನ್ನಡ ಹಾಗೂ ಹಿಂದಿ ಸಿನೆಮಾಗಳಲ್ಲಿ, ನಾಯಕ ಹಾಗೂ ನಾಯಕಿ ವನದಲ್ಲಿ ಅಥವಾ ಉಪವನದಲ್ಲಿ ತಿರುಗಾಡುತ್ತಿರುವಾಗ ಧಾರಾಕಾರವಾಗಿ ಮಳೆ ಹುಯ್ಯಲು ಪ್ರಾರಂಭವಾಗುತ್ತದೆ. ನಾಯಕ ಹಾಗೂ ನಾಯಕಿ ಸಂದರ್ಭಕ್ಕೆ ಉಚಿತವಾಗಿಯೇ (!) ಮಿಲನಗೊಳ್ಳುತ್ತಾರೆ.
EXACTLY ಇದೇ ರೀತಿಯಲ್ಲಿ, ‘ಗ್ರಹಣ’ ಕಾದಂಬರಿಯ ನಾಯಕರಾದ ಸ್ವಾಮೀಜಿಯವರು ನಾಯಕಿಯೊಡನೆ ಮಿಲನಗೊಂಡರು.
ತಪ್ಪೇನಿಲ್ಲ ಬಿಡಿ; ಸಂದರ್ಭವೇ ಹಾಗಿದೆ ಎಂದು ಒಪ್ಪಿಕೊಳ್ಳೋಣ.
ಆದರೆ ಈ ರತಿಕ್ರೀಡೆಯು ಸ್ವಾಮೀಜಿಯವರ ’ಅತಿಮಾನುಷಪೌರುಷ’ದ ವರ್ಣನೆಯಾಗುವದರ ಔಚಿತ್ಯವೇನು; ಕಾದಂಬರಿಯ ಕಥಾನಕಕ್ಕೆ ಇದು ಯಾವ ರೀತಿಯಲ್ಲಿ ಪೂರಕ ಎನ್ನುವದಷ್ಟೇ ನನ್ನ ಪ್ರಶ್ನೆ.

(೩) ಭೈರಪ್ಪನವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡದೆ, ಈ ರೀತಿಯ ನಿರ್ಣಯಕ್ಕೆ ಬರುವದು ತಪ್ಪು:

ಭೈರಪ್ಪನವರು ಈವರೆಗೆ ಬರೆದ ೨೦ ಕಾದಂಬರಿಗಳ ಪೈಕಿ ೧೨ ಕಾದಂಬರಿಗಳಿಂದ ಈ ಲೇಖನದಲ್ಲಿ ನಾನು quote ಮಾಡಿದ್ದೇನೆ. ಇವರ ಎಲ್ಲಾ ಕಾದಂಬರಿಗಳಿಂದ ನಾನು quote ಮಾಡಿದ್ದರೆ, ಲೇಖನವು ಅನವಶ್ಯಕವಾಗಿ ದೀರ್ಘವಾಗುತ್ತಿತ್ತು.
ಭೈರಪ್ಪನವರ ಆತ್ಮಚರಿತ್ರೆ ಹಾಗೂ ವಿಮರ್ಶಾಗ್ರಂಥಗಳನ್ನು ನಾನು ಬಿಟ್ಟಿದ್ದಕ್ಕೆ ಆಕ್ಷೇಪಣೆ ಬಂದಿದೆ.
ಅಲ್ರೀ, ಆತ್ಮಚರಿತ್ರೆಯಲ್ಲಿ ಯಾರಾದರೂ ‘ಅಗಂಭ್ರವಿ’ಯನ್ನು ಬರೆಯುತ್ತಾರೆಯೆ?!
………………………………………………………………………………
ಉಳಿದ ಸಾಹಿತಿಗಳಿಗೆ ಹೋಲಿಸಿದಾಗ ಭೈರಪ್ಪನವರು ಎಲ್ಲಿ ನಿಲ್ಲುತ್ತಾರೆ?
ಕನ್ನಡದ ಕೆಲವು ನಾಮಾಂಕಿತ ಕಾದಂಬರಿಕಾರರನ್ನು ತೆಗೆದುಕೊಳ್ಳೋಣ:
ಶಿವರಾಮ ಕಾರಂತರು ಕನ್ನಡದ ಉದ್ದಾಮ ಸಾಹಿತಿಗಳು.
ಅವರ ಅನೇಕ ಕಾದಂಬರಿಗಳನ್ನು ಓದಿದವರಿಗೆ ಒಂದು ವಿಷಯ ಸ್ಪಷ್ಟವಾಗಿ ಗೋಚರವಾಗುತ್ತದೆ:
ಸಾಮಾನ್ಯ ಮಾನವನ ಬಗೆಗಿರುವ ಗೌರವ, ಸಹಕಂಪ ಹಾಗೂ ಮಾನವಪ್ರಯತ್ನದಲ್ಲಿರುವ ವಿಶ್ವಾಸ ಇವು ಕಾರಂತರ ಸಾಹಿತ್ಯದ ಮೂಲ ಆಶಯಗಳಾಗಿವೆ.

ಈಗ ತ್ರಿವೇಣಿಯವರನ್ನು ತೆಗೆದುಕೊಳ್ಳೋಣ.
ಕನ್ನಡದ ಖ್ಯಾತ ವಿಮರ್ಶಕರಾದ (ದಿ.) ಕೀರ್ತಿನಾಥ ಕುರ್ತಕೋಟಿಯವರು ತ್ರಿವೇಣಿಯವರ ಕಾದಂಬರಿಗಳನ್ನು ಅರೆಬೆಂದ ಕನಸುಗಳು ಎಂದು ವಿಮರ್ಶಿಸುವ ಮೂಲಕ ಈ ಲೇಖಕಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ.
ತ್ರಿವೇಣಿಯವರ ಎಲ್ಲಾ ಕಾದಂಬರಿಗಳಲ್ಲಿ ಕಂಡು ಬರುವ ಮೂಲ ಆಶಯವೆಂದರೆ: Woman’s aspirations.
ಹೆಣ್ಣಿಗೂ ಸಹ ಗಂಡಿನಂತೆಯೇ ಆಕಾಂಕ್ಷೆಗಳಿರುತ್ತವೆ, ಅವಳಿಗೂ ಮನಸ್ಸೆಂಬುದು ಒಂದಿದೆ, ಗಂಡು ಹಾಗು ಹೆಣ್ಣು ಪರಸ್ಪರ ಪ್ರೇಮಿಗಳೇ ಹೊರತು ಪ್ರತಿಸ್ಪರ್ಧಿಗಳಲ್ಲ ಎನ್ನುವದು ಅವರ ಸಾಹಿತ್ಯದ ಮೂಲ ಆಶಯ.

ಕನ್ನಡದ ಕಥಾಬ್ರಹ್ಮರೆಂದು ಹೆಸರು ಪಡೆದ ಮಾಸ್ತಿಯವರ ಸಾಹಿತ್ಯದ ಮೂಲ ಆಶಯವೇನು?
ಮಾನವನ ಆದರ್ಶ, ಘನತೆ, ಸ್ತ್ರೀಯರ ಬಗೆಗೆ ಔದಾರ್ಯ ಇವು ಮಾಸ್ತಿಯವರ ಸಾಹಿತ್ಯದ ಮೂಲ ಆಶಯಗಳು.
(ಈ ಎಲ್ಲ ಅಂಶಗಳನ್ನು ಒಳಗೊಂಡ ಅವರ ಅತ್ಯುತ್ತಮ ಕತೆ ಎಂದರೆ ‘ವೆಂಕಟಿಗನ ಹೆಂಡತಿ’.)

ಕಥಾಸಾಹಿತ್ಯದಲ್ಲಿ ಮಾಸ್ತಿಯವರಷ್ಟೇ ಶ್ರೇಷ್ಠರಾದ ಪಿ. ಲಂಕೇಶರ motif ಮಾತ್ರ ಬೇರೆಯಾಗಿತ್ತು.
ಇವರು ಪರಿಸರದ ಅನಿವಾರ್ಯತೆಯಿಂದ ಉಂಟಾದ ಮನುಷ್ಯನ ಕ್ಷುದ್ರತೆಯನ್ನು ತೋರಿಸಿದರು.
ಇದರ ಉದಾಹರಣೆಯಾಗಿ ಕನ್ನಡದ ಶ್ರೇಷ್ಠ ಕವನಗಳಲ್ಲೊಂದಾದ ಅವರ ‘ಅವ್ವ’ ಕವನವನ್ನೇ ನೋಡಬಹುದು.
ಇಲ್ಲಿ ಅವರು ತಮ್ಮ ಅವ್ವನನ್ನು ‘ಬನದ ಕರಡಿ’ ಎಂದು ಬಣ್ಣಿಸುತ್ತಾರೆ.
ತನ್ನ ಗಂಡನ ಲಂಪಟತನ, ಬೇಜವಾಬ್ದಾರಿ ವರ್ತನೆ, ಮಕ್ಕಳನ್ನು ತಾನೇ ಸಾಕಬೇಕಾದ ಹೊಣೆಗಾರಿಕೆ ಇವೇ ಅವಳನ್ನು ಕರಡಿಯನ್ನಾಗಿ ಪರಿವರ್ತಿಸಿದ ಕಾರಣಗಳು.
ಅವರ ‘ಮೈಲಿ ಮುಖದ ಹಜಾಮ’ ಸಹ ಒಬ್ಬ ಮನುಷ್ಯನು ಮತ್ತೊಬ್ಬ ಮನುಷ್ಯನನ್ನು ನಂಬಲಾರದಂತಹ ಮಾನವ ಪರಿಸರವನ್ನು ತೋರಿಸುತ್ತದೆ.

ವಿಶ್ವಸಾಹಿತ್ಯದಲ್ಲಿ ಸ್ಥಾನ ಪಡೆಯುವಂತಹ ಕತೆಗಳನ್ನು ಬರೆದ ದೇವನೂರು ಮಹಾದೇವ ಇವರ ಮೂಲ ಆಶಯಗಳೇನು?
ಶೋಷಣೆಯ ಸ್ಥಿತಿಯು ಯಾವ ರೀತಿಯಲ್ಲಿ ಮನುಷ್ಯನನ್ನು compromise ಮಾಡಿಸುತ್ತದೆ ಎನ್ನುವದು ದೇವನೂರರ motif.

ನಮ್ಮ ಸಮಾಜದಲ್ಲಿ ಹೆಣ್ಣು ಪಡುವ ಯಾತನೆಯನ್ನು, ಅವಳ ಅಸಹಾಯಕತೆಯನ್ನು ಭೈರಪ್ಪನವರಷ್ಟು ಚೆನ್ನಾಗಿ ಯಾರೂ ತೋರಿಸಿಲ್ಲ.
ಇದು ಭೈರಪ್ಪನವರ ಸಾಹಿತ್ಯದ ಮೂಲ ಆಶಯ.
ಆದರೆ ಇದರ ಜೊತೆಗೇ ‘ಅಗಂಭ್ರವಿ’ಯ motif ಸೇರಿಕೊಂಡಿರುವದು ಅವರ ದುರದೃಷ್ಟ.
ಅಥವಾ ಇದು ಕನ್ನಡಿಗರ ದುರದೃಷ್ಟವೆ?
………………………………………………………………………………………
ಸಹೃದಯರಿಗೆಲ್ಲ ಹೊಸ ವರ್ಷದ ಶುಭಾಶಯಗಳು!

Saturday, December 20, 2008

ಭೈರಪ್ಪನವರು ಹಾಗು super-male-fantasy

ಎಸ್.ಎಲ್.ಭೈರಪ್ಪನವರು ಕನ್ನಡದ ಜನಪ್ರಿಯ ಸಾಹಿತಿಗಳು.
ಸಾಧಾರಣವಾಗಿ ಅವರ ಕಾದಂಬರಿಗಳಲ್ಲಿ ಮೂರು ಮುಖ್ಯ ಲಕ್ಷಣಗಳನ್ನು ಗುರುತಿಸಬಹುದು:
(೧) passionate ಬರವಣಿಗೆ.
(೨) ತತ್ವಜಿಜ್ಞಾಸೆ.
(೩) obsession with sex.

ಭೈರಪ್ಪನವರ ಪಾತ್ರಗಳು, ವಿಶೇಷತ: ನಾಯಕರು ಛಲವಾದಿಗಳು, ತೀವ್ರವಾದ ತಳಮಳದಲ್ಲಿ ತೊಳಲಾಡುವಂಥವರು.
ನಾಯಕ ಹಾಗೂ ನಾಯಕಿಯಲ್ಲದೆ, ಇತರ ಪಾತ್ರಗಳೂ ಸಹ ನಿರ್ಣಾಯಕ ಸಮಯದಲ್ಲಿ ಭಯಂಕರ ತತ್ವಜಿಜ್ಞಾಸೆಯಲ್ಲಿ ತೊಡಗಿಕೊಳ್ಳುವಂಥವರು. ಇದು ಬರವಣಿಗೆಯಲ್ಲಿ passion ತುಂಬಲು ಸಹಾಯಕವಾಗಿದೆ.
ಇದೆಲ್ಲದರ ಹಿಂದೆ, ಕೆಲವೊಮ್ಮೆ ಮುಕ್ತವಾಗಿ, ಕೆಲವೊಮ್ಮೆ ಗುಪ್ತವಾಗಿ ಮತ್ತೊಂದು ವಿಶೇಷತೆಯನ್ನು ಕಾಣಬಹುದು.
ಈ ವಿಶೇಷತೆಗೆ ನಾವು super- male- fantasy ಎಂದು ಕರೆಯಬಹುದು.

ಬಹುಶಃ ಎಲ್ಲ ಗಂಡಸರು ತಾವು ಹೆಣ್ಣಿಗಿಂತ ಎಲ್ಲ ವಿಧದಲ್ಲಿಯೂ ಹೆಚ್ಚಿನವರು, ವಿಶೇಷತ: sexually ಹೆಚ್ಚು ಸಾಮರ್ಥ್ಯವುಳ್ಳವರು ಎಂದು ಕಲ್ಪಿಸಿಕೊಳ್ಳುತ್ತಾರೆ.
ಆದರೆ, ನಿಸರ್ಗದ ಯೋಜನೆ ಅಥವಾ ವಿಧಾನ ಹಾಗಿಲ್ಲ.
ಮಾನವಕುಲದಲ್ಲಿ ಗಂಡು ಹಾಗೂ ಹೆಣ್ಣುಗಳ ಪ್ರಮಾಣ ಸುಮಾರಾಗಿ ಸರಿಸಮವಾಗಿದೆ.
ಮಾನವಕುಲದಲ್ಲಿ ಹೆಚ್ಚಿಗೆ ಸಂತಾನವಾಗಬೇಕಾದರೆ, ರತಿಕ್ರಿಯೆಯಲ್ಲಿ ತೊಡಗಿದ ಗಂಡಸಿನ ಕ್ರಿಯೆ ಶೀಘ್ರಮುಕ್ತಾಯ ಕಾಣಬೇಕು ; ಹಾಗೂ ಹೆಣ್ಣಿನಲ್ಲಿ ರತಿಕ್ರಿಯೆ ಬಲಶಾಲಿ ಹಾಗೂ ನಿಧಾನವಾಗಿರಬೇಕು so that she can receive more & more males.
ಇದು ನಿಸರ್ಗದ ಸಂವಿಧಾನ.

ಆದರೆ ಮಾನವಕುಲದ ಅಹಂಕಾರಿ ಗಂಡುಜಾತಿಗೆ ಈ ನಿಸರ್ಗಯೋಜನೆ ಅಪಥ್ಯವಾಗಿದೆ.
ಆದುದರಿಂದ ಆತ ಪ್ರಕೃತಿಯ ಈ ವಿಧಾನವನ್ನು ಮನಸಾ ಒಪ್ಪಿಕೊಳ್ಳಲಾರದೆ ತೊಳಲಾಡುತ್ತಾನೆ.
ರತಿಕ್ರಿಯೆಯನ್ನು ದೀರ್ಘಗೊಳಿಸಲು ಕೃತ್ರಿಮ ವೈದ್ಯಕೀಯ ವಿಧಾನಗಳಿಗೆ ಶರಣಾಗುತ್ತಾನೆ.
ಅದು ಸಾಧ್ಯವಾಗದಾಗ ತನ್ನ ಸಾಮರ್ಥ್ಯವನ್ನು fantasyಯಲ್ಲಿ ಕಾಣಬಯಸುತ್ತಾನೆ.
ಈ fantasyಯು ಕೇವಲ ವೈಯಕ್ತಿಕ ಹಗಲುಗನಸುಗಳಿಗೆ ಸೀಮಿತವಾಗದೆ, ಸಾಹಿತ್ಯದಲ್ಲಿಯೂ ಸಹ ವ್ಯಕ್ತಗೊಳ್ಳುತ್ತಲೇ ಇದೆ.
ಸಾಹಿತ್ಯದಲ್ಲಿ ವ್ಯಕ್ತವಾಗುವ ಇಂತಹ fantasyಯನ್ನು super- male- fantasy ಎಂದು ಕರೆಯಬಹುದು.

ಸಾಮಾನ್ಯವಾಗಿ super- male- fantasy ಯಲ್ಲಿ ಎರಡು categoryಗಳನ್ನು ಮಾಡಬಹುದು:
(೧) ಜಾಗತಿಕವಾಗಿ ಅಥವಾ ಸಾರ್ವತ್ರಿಕವಾಗಿ applicable ಆಗುವಂತಹ super- male- fantasy ಹಾಗೂ
(೨) ಭಾರತೀಯರಿಗೇ ವಿಶಿಷ್ಟವಾಗಿರುವ super- male- fantasy.

ಸಾರ್ವತ್ರಿಕ super- male- fantasy ಯ ಎರಡು ಲಕ್ಷಣಗಳು ಹೀಗಿವೆ:
(೧) ಹೆಣ್ಣು ಗಂಡಿನ ದಾಸಿಯಂತೆ ವರ್ತಿಸುವದು.
(೨) ಹೆಣ್ಣನ್ನು ಗಂಡು ರತಿಕ್ರಿಯೆಯಲ್ಲಿ ಸೋಲಿಸುವದು !

ಭಾರತೀಯರು ಸಾಮಾನ್ಯವಾಗಿ ದೃಢವಾದ ನೈತಿಕ ಬುದ್ಧಿಯುಳ್ಳವರು. ಇವರು ತಮ್ಮ fantasyಯಲ್ಲಿ ಸಹ ನೈತಿಕ ಹಾಗೂ ಧಾರ್ಮಿಕ ಕಟ್ಟಳೆಗಳನ್ನು ಉಲ್ಲಂಘಿಸಲಾರರು.
ಆದುದರಿಂದ ಭಾರತೀಯರಿಗೆ ವಿಶಿಷ್ಟವಾದ super- male- fantasy ಯ ವಿಶೇಷ ಲಕ್ಷಣಗಳನ್ನು ಹೀಗೆ ಗುರುತಿಸಬಹುದು:

(೧) ತಾನು ಹೆಣ್ಣಿಗೆ ಸೋಲದ ನಿಷ್ಠಾವಂತ ಬ್ರಹ್ಮಚಾರಿಯಾಗಿರಬೇಕು.
(೨) ಒಂದು ವೇಳೆ ಅಕಸ್ಮಾತ್ ಹೆಣ್ಣಿಗೆ ಸೋತು ರತಿಕ್ರಿಯೆ ಸಂಭವಿಸಿದರೆ, ಅದು compulsive circumstancesದಲ್ಲಿ ಆಗಿರಬೇಕೇ ಹೊರತು, ಅದರಲ್ಲಿ ಒಳಗೊಂಡವರ ಕಾಮದ ಬಯಕೆಯಿಂದ ಸಂಭವಿಸಿರಕೂಡದು.
ಅಂದರೆ ತಾನು ಹಾಗೂ ಆ ಹೆಣ್ಣು ಅಕ್ರಮ ರತಿಕ್ರಿಯೆಯೆ ನಂತರವೂ innocent ಹಾಗೂ virtuous ಆಗಿಯೇ ಉಳಿದಿರಬೇಕು.

Indian super- male- fantasy ಯ ಕತೆಗಳು ಭಾರತದಲ್ಲಿ ಪುರಾಣಕಾಲದಿಂದಲೂ ಚಾಲ್ತಿಯಲ್ಲಿವೆ.
ಮಹಾಭಾರತದ ಭೀಷ್ಮನು ಅಖಂಡ ಬ್ರಹ್ಮಚಾರಿಯಾಗಿ ಉಳಿದುಕೊಂಡು ಈ super-fantasyಯ super hero ಆಗಿ ಖ್ಯಾತಿ ಪಡೆದ.
ಭೀಷ್ಮನ ಮಲತಾಯಿಯಾದ ಮತ್ಸ್ಯಗಂಧಿಯೊಡನೆ ಪರಾಶರ ಮುನಿಗಳು ಡೋಣಿಯಲ್ಲಿ ಹೋಗುವಾಗ ನದಿಯ ಮಧ್ಯದಲ್ಲಿ ಅವರೀರ್ವರ ಮಿಲನವಾಯಿತು.
ಅವರು ಮುನಿಗಳಾಗಿದ್ದರಿಂದ ಅವರಿಗೆ ನೈತಿಕತೆಯ ಬಂಧನವಿಲ್ಲ.
ಮುನಿಗೆ ಮೈಕೊಟ್ಟಿದ್ದರಿಂದ ಅವಳ ನೈತಿಕತೆಗೂ ಧಕ್ಕೆಯಿಲ್ಲ.
ಅಲ್ಲದೆ ಅವಳಿಗೆ ಮತ್ತೆ ಕನ್ಯತ್ವವನ್ನು ಪ್ರಸಾದಿಸುವ ಮೂಲಕ ಅವಳ virtueಅನ್ನು ಅವರು restore ಮಾಡಿದರು.
ಇಂತಹ ಶಕ್ತಿ ಇದ್ದುದರಿಂದ ಅವರ ವ್ಯಕ್ತಿತ್ವಕ್ಕೆ ಮತ್ತಷ್ಟು ಘನತೆ ದೊರೆಯಿತೇ ಹೊರತು, ಅವರ ನೈತಿಕತೆ ಅಪಮೌಲ್ಯಕ್ಕೊಳಗಾಗಲಿಲ್ಲ.

ಆಧುನಿಕ ಕಾಲದಲ್ಲಿ ಇಂತಹ ಋಷಿ-ಮುನಿಗಳು ಸಿಗುವದು ಸಾಧ್ಯವಿಲ್ಲ.
ಆದುದರಿಂದ ಆಧುನಿಕ ಸಾಹಿತ್ಯದಲ್ಲಿ ಹಾಗೂ ಸಿನೆಮಾಗಳಲ್ಲಿ ನಾಯಕ ಹಾಗು ನಾಯಕಿಯರ ಆತ್ಮನಿಯಂತ್ರಣವನ್ನು ಮುರಿದು ಹಾಕುವಂತಹ ನೈಸರ್ಗಿಕ ಘಟನೆಗಳು ( compulsive circumstances) ಅವಶ್ಯವಾಗುತ್ತವೆ.

ಅನೇಕ ಹಿಂದಿ ಹಾಗೂ ಕನ್ನಡ ಚಿತ್ರಗಳಲ್ಲಿ ನಾಯಕ ಹಾಗೂ ನಾಯಕಿಯರ ಮಿಲನದ ದೃಶ್ಯವು ಹೀಗಿರುತ್ತದೆ:
ಧಾರಾಕಾರವಾಗಿ ಮಳೆ ಬೀಳುತ್ತಿದೆ; ನಾಯಕ ಹಾಗೂ ನಾಯಕಿ ಇಬ್ಬರೂ ಅಡವಿಯ ನಡುವಿನ ಪಾಳು ಗುಡಿಸಿಲಿನಲ್ಲಿ ಸಿಕ್ಕುಬಿದ್ದಿದ್ದಾರೆ.
ನಾಯಕಿಯ ಅಲ್ಪಸ್ವಲ್ಪ ಬಟ್ಟೆ ಸಹ ತೊಯ್ದು ತೊಪ್ಪಡಿಯಾಗಿವೆ.
ಇಂತಹ ಕಠಿಣ(!) ಪರಿಸ್ಥಿತಿಯಲ್ಲಿ ಅವರ ಸಂಯಮದ ಕಟ್ಟೆ ಸಡಿಲಾಗುತ್ತದೆ.
ಆದುದರಿಂದ ಅದು ಕ್ಷಮ್ಯ.
ಅವರ ನೈತಿಕತೆಗೆ ಅದರಿಂದ ಧಕ್ಕೆ ಇಲ್ಲ.
ಇದು Indian movies’ formula.

ಪುರಾಣಗಳ ನಂತರ ಹಾಗೂ Indian ಸಿನೆಮಾಗಳ ನಂತರ, ಈ Indian super- male- fantasyಯನ್ನು ತಮ್ಮ ಕಾದಂಬರಿಗಳ ಮೂಲಕ ಮುಂದುವರೆಸಿಕೊಂಡು ಬಂದಂತಹ ಸಾಹಿತಿಗಳೆಂದರೆ ಶ್ರೀ ಭೈರಪ್ಪನವರು ಎಂದು ಧಾರಾಳವಾಗಿ ಹೇಳಬಹುದು.
ಆದರೆ ಅವರು ತಮ್ಮ ಕಾದಂಬರಿಗಳಲ್ಲಿ compulsive circumstancesದಂತಹ ಕೀಳು formula ಬಳಸಲಾರರು. ಇದು ಅವರಿಗೆ ಶೋಭಿಸುವಂತಹದಲ್ಲ.

ಭೈರಪ್ಪನವರ ಕಾದಂಬರಿಗಳಲ್ಲಿ ಭಾರತದ ಸಾಂಪ್ರದಾಯಕ ಮೌಲ್ಯಗಳಿಗೆ ವಿಶೇಷ ಗೌರವ ಕಂಡುಬರುತ್ತದೆ.
ಸಾಂಪ್ರದಾಯಕ ಹಾಗೂ ಆಧುನಿಕ ಮೌಲ್ಯಗಳ ತಿಕ್ಕಾಟವೇ ಅವರ ೫ನೆಯ ಕಾದಂಬರಿ ‘ವಂಶವೃಕ್ಷ’ದ ಕಥಾವಸ್ತುವಾಗಿದೆ.
ಈ ಕಾದಂಬರಿಯ ಘನತೆವೆತ್ತ ಪಾತ್ರವಾದ ಶ್ರೋತ್ರಿಗಳ ಜೀವನದಲ್ಲಿಯೂ ಸಹ ಒಂದು ಸೂಕ್ಷ್ಮ ಪ್ರಸಂಗ ಬರುತ್ತದೆ.
Indian super- male- fantasyಯ ನಿಷ್ಠಾವಂತ ಬ್ರಹ್ಮಚರ್ಯದ ಆ fantasy ಹೀಗಿದೆ:
ಶ್ರೋತ್ರಿಗಳ ಹೆಂಡತಿಯು ತನ್ನ ಗಂಡನಿಗೆ ಶರೀರಸುಖವನ್ನು ಕೊಡಲು ಅಸಮರ್ಥಳಾಗಿದ್ದಾಳೆ.
ಹೀಗಾಗಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಓರ್ವ ಹೆಣ್ಣುಮಗಳನ್ನು ತನ್ನ ಬದಲಿಯಾಗಲು ಒಪ್ಪಿಸುತ್ತಾಳೆ.
ಶ್ರೋತ್ರಿಗಳು ಮೊದಲು ಒಪ್ಪಿಕೊಂಡರೂ ಸಹ, ಮಿಲನದ ರಾತ್ರಿಯಂದು ತಮ್ಮ ಮನಸ್ಸಿನಲ್ಲಿಯೇ ಭಯಂಕರ ತತ್ವಜಿಜ್ಞಾಸೆಯನ್ನು ಮಾಡಿ, ಬಳಿಗೆ ಬಂದ ಹೆಣ್ಣನ್ನು ದೂರೀಕರಿಸುತ್ತಾರೆ.
ಅವರ ಮನ ನಿರಾಳವಾಗುತ್ತದೆ.
ನಿಷ್ಠಾವಂತ ಬ್ರಹ್ಮಚರ್ಯದ Indian super- male- fantasy ಯ ಹೀರೋನಿಗೆ ಜಯ ಲಭಿಸುತ್ತದೆ!

ಈಗ Indian super- male- fantasyಯ ಎರಡನೆಯ ಲಕ್ಷಣವಾದ compulsive circumstances ಅನ್ನು ನೋಡೊಣ:
ನಾಯಕನು ಜಾರುವಂತಹ ಪ್ರಸಂಗವಿದ್ದಾಗ ಏನು ಮಾಡಬೇಕು?
ಸಾಮಾನ್ಯವಾಗಿ ಅನೇಕ ಲೇಖಕರು Compulsive circumstances ಅನ್ನುವ formula ಬಳಸುತ್ತಾರೆ.
ಆದರೆ ಭೈರಪ್ಪನವರು ಇದಕ್ಕಿಂತಲೂ ಹೆಚ್ಚಿನ ಒಂದು super formulaವನ್ನು ಹುಡುಕಿದ್ದಾರೆ.
ಅದು Inborn innocence ಎನ್ನುವ formula.

ಅವರ ೭ನೆಯ ಕಾದಂಬರಿಯಲ್ಲಿ (‘ನಾಯಿ ನೆರಳು’) ಇಂತಹ ಒಂದು ಸಂದರ್ಭವಿದೆ.
ಈ ಕಾದಂಬರಿಯ ನಾಯಕನಿಗೆ ಪೂರ್ವಜನ್ಮದ ಸ್ಮೃತಿ ಬಂದಿದೆ.
ಇವನ ಪೂರ್ವ ಜನ್ಮದ ತಂದೆ, ತಾಯಿ ಹಾಗೂ ಹೆಂಡತಿ ಇವನನ್ನು ಒಪ್ಪಿಕೊಂಡಿದ್ದಾರೆ.
ಪೂರ್ವ ಜನ್ಮದ ಹೆಂಡತಿಯೊಡನೆ ಇವನು ಮಲಗಿಕೊಳ್ಳುತ್ತಿದ್ದಾನೆ.
ಸಹಜವಾಗಿಯೇ ಅವಳು ಇವನ ದುಪ್ಪಟ್ಟು ವಯಸ್ಸಿನವಳು.
ಆದರೇನಾಯಿತು, ತನ್ನ ಗಂಡ ತನಗೆ ಜನ್ಮಾಂತರದಲ್ಲಿಯಾದರೂ ಸಿಕ್ಕಿದ್ದು ತನ್ನ ಪುಣ್ಯವೆಂದು ಆ ಮುತ್ತೈದೆ ಭಾವಿಸಿಕೊಂಡು ತನ್ನನ್ನು ಅವನಿಗೆ ಒಪ್ಪಿಸಿಕೊಳ್ಳುತ್ತಿದ್ದಾಳೆ.
(=formula of devotion and innocence!)

ಈ ನಾಯಕ ಒಮ್ಮೆ ತೋಟದ ಕಡೆಗೆ ನಡೆದಾಗ ಅಲ್ಲಿ ಒಬ್ಬಳು ತರುಣ ಕೆಲಸದಾಕೆಯನ್ನು ನೋಡುತ್ತಾನೆ.
ಇವನ ಮನಸ್ಸಿನಲ್ಲಿ ಅವಳನ್ನು ಕೂಡಬೇಕು ಎನ್ನುವ ಭಾವನೆ ಅತ್ಯಂತ ಸಹಜವಾಗಿ ಹುಟ್ಟುತ್ತದೆ.
ಇದು ಸಾಮಾನ್ಯ ಮಾನವರ ಮನದಲ್ಲಿ ಮೂಡುವ ನೀಚಕಾಮವಲ್ಲ!
ನಿಸರ್ಗದ ಮಕ್ಕಳ ಹಾಗೆ ಅವರು ಅತ್ಯಂತ ಸಹಜವಾಗಿ ಕೂಡುತ್ತಾರೆ.
ಮತ್ತೊಮ್ಮೆ formula of innocenceದ ವಿಜಯವಾಗುತ್ತದೆ!

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಗಂಡು ಹೆಣ್ಣು ಬೆರೆಯುವದಕ್ಕೆ ಯಾವುದೇ ನೈತಿಕ ಪ್ರತಿಬಂಧ ಉಳಿದಿಲ್ಲ.
ಹೀಗಾಗಿ ಅಲ್ಲಿಯ ಕಾದಂಬರಿಕಾರರಿಗೆ ಇಂತಹ formulaಗಳ ಅವಶ್ಯಕತೆ ಬರುವದಿಲ್ಲ.

Indian-super-male-fantasyಯ ಉದಾಹರಣೆಗಳನ್ನು ಪುರಾಣಗಳಲ್ಲಿ, ಸಿನೆಮಾಗಳಲ್ಲಿ ಹಾಗೂ ಭೈರಪ್ಪನವರ ಕೆಲವು ಕಾದಂಬರಿಗಳಲ್ಲಿ ನೋಡಿದ್ದಾಯ್ತು.
ಇದೀಗ ಸಾರ್ವತ್ರಿಕ super-male-fantasyಯ ಲಕ್ಷಣಗಳು ಭೈರಪ್ಪನವರ ಕಾದಂಬರಿಗಳಲ್ಲಿ ವ್ಯಕ್ತವಾದ ಬಗೆಯನ್ನು ನೋಡೋಣ:
ಈ fantasyಯ ಮೊದಲ ಗುರುತು ಎಂದರೆ ‘ಹೆಣ್ಣು ಗಂಡಿನ ದಾಸಿ ಅಥವಾ ಆರಾಧಕಿಯಂತೆ’ ವರ್ತಿಸುವದು.
ಭೈರಪ್ಪನವರ ೪ನೆಯ ಕಾದಂಬರಿ ‘ಮತದಾನ’ದ ಪುಟ ೧೬೯ರಲ್ಲಿ ಕಾದಂಬರಿಯ ನಾಯಕಿ ರಂಗಲಕ್ಷ್ಮಿಯು ನಾಯಕನಿಗಾಗಿ ಹಪಾಪಿಸುವದನ್ನು ಓದಿರಿ:
“ ತಾನು ಯಾರ ಬಗ್ಗೆ ಅತ್ಯಂತ ಗೌರವ ತಳೆದು,ಯಾರಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳಲು ಎರಡು ವರ್ಷಗಳ ಹಿಂದೆ ತವಕಪಡುತ್ತಿದ್ದಳೊ ಅವರು ಈ ದಿನ ತನ್ನ ಎದುರು ಕುಳಿತು, ‘ನಾವಿಬ್ಬರು ಒಂದಾಗೋಣ ಬಾ’ ಎಂದು ಕರೆಯುತ್ತಿದ್ದಾರೆ. ಅವರ ಸ್ವಭಾವ, ಉಚ್ಚ ಆದರ್ಶ ಮತ್ತು ಪ್ರಾಮಾಣಿಕ ಜೀವನಗಳು ಅವಳಿಗೆ ತಿಳಿದಿವೆ. ಅವುಗಳಿಗೆ ತನ್ನ ಜೀವನದ ಶಕ್ತಿಯನ್ನು ಬೆರಸಿ ಬೆಳೆಸುವದಕ್ಕಿಂತ ಸಾರ್ಥಕವಾದ ಜೀವನವಿಲ್ಲ.”
ಭೈರಪ್ಪನವರ ನಾಯಕಿಯರ ಅತ್ಯುಚ್ಚ ಸಾಧನೆ ಹಾಗೂ ಆದರ್ಶ ಅಂದರೆ, ನಾಯಕನ ಛಾಯಾನುವರ್ತಿಯಾಗಿ ವರ್ತಿಸುವದು!

‘ದೂರ ಸರಿದರು’ ಇದು ಬೈರಪ್ಪನವರ ಮೂರನೆಯ ಕಾದಂಬರಿ.
ಈ ಕಾದಂಬರಿಯಲ್ಲಿ ಕಾಲೇಜೊಂದರ ವಿದ್ಯಾರ್ಥಿನಿ ಉಮಾ ಎನ್ನುವವಳು ತನ್ನ ಮುಂದಿನ ಕ್ಲಾಸಿನಲ್ಲಿರುವ ವಸಂತ ಎನ್ನುವ ವಿದ್ಯಾರ್ಥಿಯನ್ನು ಪ್ರೀತಿಸುತ್ತಾಳೆ.
ತತ್ವಶಾಸ್ತ್ರದ ವಿದ್ಯಾರ್ಥಿನಿಯಾದ ಇವಳು ತನ್ನಲ್ಲಿ ಪ್ರೀತಿ ಹುಟ್ಟುವವರೆಗೂ ಗಂಡು ಹೆಣ್ಣು ಸಮಾನರು ಎಂದು ತಿಳಿದವಳು.
ಆದರೆ, ತನ್ನ senior ವಿದ್ಯಾರ್ಥಿಯೊಬ್ಬನಲ್ಲಿ ಪ್ರೀತಿ ಹುಟ್ಟಿದ ಬಳಿಕ ಹೆಣ್ಣು ಗಂಡಿನ ಸಮಾನಳಲ್ಲ ಎಂದು ತಿಳಿದುಕೊಂಡು ಬಿಡುತ್ತಾಳೆ !
ಆ ಕಾದಂಬರಿಯ ೮೭ನೆಯ ಪುಟದಲ್ಲಿ ಆಕೆ ತನ್ನಲ್ಲಿ ಮೂಡುವ ಭಾವನೆಗಳನ್ನು ತನ್ನ ಪ್ರಿಯಕರನಿಗೆ ಈ ರೀತಿಯಾಗಿ ಹೀಗೆ ಹೇಳುತ್ತಾಳೆ:
“…ಸಮಾನತೆ ಎನ್ನುವದರಲ್ಲೂ ಹುರುಳು ಕಾಣುತ್ತಿಲ್ಲ. ನಾನು ನಿಮಗಿಂತ ಚಿಕ್ಕವಳು, ವಯಸ್ಸಿನಲ್ಲಿ ಮಾತ್ರವಲ್ಲ-ಬುದ್ಧಿಯಲ್ಲಿ, ಭಾವದಲ್ಲಿ-ಎಲ್ಲದರಲ್ಲಿ ಚಿಕ್ಕವಳು ಅನಿಸುತ್ತಿತ್ತು. ನಿಮ್ಮೆದುರಿಗೆ ನನ್ನ ಸ್ವತಂತ್ರ ವ್ಯಕ್ತಿತ್ವವೆಂದರೆ ಅದು ನನಗೆ ಬೇಡವಾದ ಒಂದು ಶತ್ರು ಅನಿಸುತ್ತಿತ್ತು”

ಇದೇ ಕಾದಂಬರಿಯ ಮತ್ತೊಂದು ಪಾತ್ರವಾದ ವಿನತೆ ಎನ್ನುವವಳ fantasyಯನ್ನು ನೋಡಿರಿ (ಪುಟ೨೨೧):
“…ಅವರ ವೃದ್ಧ ತಾಯಿಗೆ ತಾನು ಸೊಸೆಯಾಗಿ ಅವರ ಸೇವೆ ಮಾಡುತ್ತಿರುವಂತೆ ಅವಳು ಮನಸ್ಸಿನೊಳಗೇ ಚಿತ್ರಿಸಿಕೊಳ್ಳುವಳು. ಮುಂಜಾವಿನಿಂದ ಸಂಜೆಯವರೆಗೂ ಓದಿ ಅವನಿಗೆ ಆಯಾಸವಾದಾಗ, ತಾನು ಅವನ ಮನಸ್ಸನ್ನು ಅರಳಿಸಿ ಉಪಚರಿಸುವ ಕನಸನ್ನೂ ಕಾಣುವಳು. ಅವನು ಓದುವ ಪುಸ್ತಕಗಳ ಟಿಪ್ಪಣಿ ಬರೆದುಕೊಡುವದು, ಅವನ ಬರಹಗಳ ಉತ್ತಮ ಪ್ರತಿ ಮಾಡುವದು, ಅವನ ಬಟ್ಟೆಬರೆಗಳನ್ನು ಒಗೆದು ಮನೆಗೆಲಸ ಮಾಡುವದು, ಮೊದಲಾದವುಗಳಲ್ಲಿ ಕಾಲ ಕಳೆಯುವಂತೆ ಭಾವಿಸುವಳು……”

So, ಭೈರಪ್ಪನವರ ನಾಯಕಿಯರು ಭಾರತೀಯ ಪತಿವ್ರತಾ ನಾರಿಯರ ಅಪರಾವತಾರಗಳು.
ಹೆಣ್ಣು ಗಂಡಸಿನ ದಾಸಿ ಅಥವಾ ಆರಾಧಕಿಯಾಗಿರಬೇಕೆನ್ನುವ ಜಾಗತಿಕ male-fantasyಯನ್ನು ನಾವು ೫೦ ವರ್ಷಗಳ ಹಿಂದಿನ ಇಂಗ್ಲಿಶ ಕಾದಂಬರಿಗಳಲ್ಲೂ ಕಾಣುತ್ತೇವೆ.
ಈ ಧೋರಣೆಯನ್ನು ಕನ್ನಡದಲ್ಲಿ ಭೈರಪ್ಪನವರು emphatically ಮುಂದುವರಿಸಿಕೊಂಡು ಬರುತ್ತಿದ್ದಾರೆ.

‘ಭೀಮಕಾಯ’ ಇದು ಭೈರಪ್ಪನವರ ಮೊದಲನೆಯ ಕಾದಂಬರಿ.
ಈ ಕಾದಂಬರಿಯ ನಾಯಕ ಒಬ್ಬ ತರುಣ ಭೀಮಕಾಯ ಜಟ್ಟಿ.
ಈತ ಅನೇಕ ಮಹಾಜಟ್ಟಿಗಳನ್ನು ಚಿತ್ ಮಾಡಿ ಒಗೆದಿದ್ದಾನೆ.
ಇವನನ್ನು ಓರ್ವ ತರುಣ ವೇಶ್ಯೆಯೇ ಮೋಹಿಸುತ್ತಾಳೆ.
ಭೀಮಕಾಯನೂ ಅವಳನ್ನು ಮೋಹಿಸಿದ ಎಂದು ಬರೆದರೆ, ಅವನ ನೈತಿಕತೆ ಹಾಳಾದಂತಲ್ಲವೆ?
ಆದುದರಿಂದ, ಭೈರಪ್ಪನವರು plot ಒಂದನ್ನು ಹೆಣೆಯುತ್ತಾರೆ.
ತನ್ನ ವಿರೋಧಿಗಳ ಕುತಂತ್ರದಿಂದಾಗಿ, ಈ ಭೀಮಕಾಯ ಆ ತರುಣಿಯ ಬಲೆಯಲ್ಲಿ ಬೀಳುತ್ತಾನೆ.
ಆದರೇನು, ಆ ವೇಶ್ಯೆ ಇವನನ್ನು ಮನಸಾ ಆರಾಧಿಸುತ್ತಾಳೆ.
ಆದುದರಿಂದ ಇವನಿಂದ ದುಡ್ಡು ತೆಗೆದು ಕೊಳ್ಳುವದಿಲ್ಲ ; ಇವನಿಂದ ಮಗುವನ್ನು ಪಡೆಯುತ್ತಾಳೆ.
ಈ ಭೀಮಕಾಯನಿಗೆ ಓರ್ವ ಬಾಲಿಕೆಯೊಡನೆ ಮದುವೆ ನಿಶ್ಚಯವಾದಾಗ ಆ ಹುಡುಗಿಯನ್ನು ಮದುವೆಯಾಗಲು ಅವನಿಗೆ ಬುದ್ಧಿ ಹೇಳುತ್ತಾಳೆ.

ಆ ವೇಷ್ಯೆಗಷ್ಟೆ ಇಂತಹ ಆರಾಧನಾ ಭಾವ ಇತ್ತು ಎಂದಲ್ಲ.
ತಮ್ಮ ಪ್ರಥಮ ರಾತ್ರಿಯಂದು, ಭೀಮಕಾಯನು ತನ್ನ ಬಾಲಿಕಾ ವಧುವಿಗೆ ಎಲ್ಲ ಸಂಗತಿಯನ್ನು ತಿಳಿಸುತ್ತಾನೆ.
ಇಡೀ ರಾತ್ರಿ ತನ್ನ ಗಂಡನ ವೇಷ್ಯಾಪುರಾಣ ಕೇಳಿದ ಅವಳೂ ಸಹ ತನ್ನ ಹೊಸ ಪತಿಯ ಬಗೆಗೆ ಅಷ್ಟೇ ಆರಾಧನಾ ಭಾವನೆಯನ್ನು ತೋರಿಸುತ್ತಾಳೆ.
ತನ್ನ ಗಂಡನ ಮನಸ್ಸನ್ನು ಗೆದ್ದ ಆ ವೇಷ್ಯೆಯ ಮನೆಗೆ ತಕ್ಷಣವೇ ಗಂಡನೊಡನೆ ತೆರಳಿ, ಅವಳ ಆಶೀರ್ವಾದ ಪಡೆಯುತ್ತಾಳೆ, ಚುಮುಚುಮು ನಸುಕಿನಲ್ಲಿ !
Indian-super-male-fantasyಯ “ದಾಸಿ-ಒಡೆಯ-ಆರಾಧನಾ-syndrome”ದ ಉತ್ಕಟ ಉದಾಹರಣೆ ಅಲ್ಲವೆ ಇದು?

Compulsive circumstances formulaಅನ್ನು ಭೈರಪ್ಪನವರು ತಮ್ಮ ‘ಗ್ರಹಣ’ ಕಾದಂಬರಿಯಲ್ಲಿ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ.
ಇದು ಭೈರಪ್ಪನವರ ೧೧ನೆಯ ಕಾದಂಬರಿ.
ಇಲ್ಲಿ ಆಧುನಿಕ ವಿಚಾರಗಳಿರುವ ಹಾಗೂ ಉಚ್ಚ ಧ್ಯೇಯಗಳಿರುವ ಸ್ವಾಮಿಗಳು ಕಾದಂಬರಿಯ ನಾಯಕರು. ಅಂತಹದೇ ವಿಚಾರಗಳ ಹಾಗೂ ಡಾಕ್ಟರ ವೃತ್ತಿಯ ನಾಯಕಿ ಇವನ ಆರಾಧಕಳು.
ಒಮ್ಮೆ ಭಯಂಕರ ಮಳೆ ಬೀಳುತ್ತದೆ.ನಾಯಕ ಹಾಗೂ ನಾಯಕಿ ತೊಯ್ದು ತೊಪ್ಪಡಿಯಾಗಿದ್ದಾರೆ.
ನಾಯಕ ಹಾಗೂ ನಾಯಕಿ ಅವನ ಗುಡಿಸಲಿಗೆ ಓಡಿ ಬರುತ್ತಾರೆ.
ಗುಡಿಸಲೂ ಸಹ ಸೋರುತ್ತಿದೆ. (ಸೋರುತಿಹದು ಮನೆಯ ಮಾಳಿಗೆ!)
ನಾಯಕನ ಸಂಯಮ ಕುಸಿದು, ಆತ ನಾಯಕಿಯ ಮೇಲೆ ಎರಗುತ್ತಾನೆ.
ನಾಯಕಿ ಆತನನ್ನು ತುಂಬು ಮನಸ್ಸಿನಿಂದ ಸ್ವೀಕರಿಸುತ್ತಾಳೆ!

Compulsive circumstances ಹಾಗೂ ಆರಾಧನಾ ಭಾವ ಅನ್ನುವ ಎರಡು ಲಕ್ಷಣಗಳಲ್ಲದೆ, Indian-super-male-fantasyಯ ಮೂರನೆಯ ಲಕ್ಷಣ ಸಹ ಈ ಕಾದಂಬರಿಯಲ್ಲಿದೆ.
ಅದು ನಾಯಕನ ರತಿಸಾಮರ್ಥ್ಯ!

ಇದೇ (‘ಗ್ರಹಣ’) ಕಾದಂಬರಿಯ ೧೦೫ನೆಯ ಪುಟದದಲ್ಲಿ ನಾಯಕಿ ವರ್ಣಿಸುವ ನಾಯಕನ ರತಿಸಾಮರ್ಥ್ಯದ ವೈಭವವನ್ನಷ್ಟು ಓದಿರಿ:
“……..ಅವರ ಕೈ, ತೋಳು, ಎದೆ, ಕುತ್ತಿಗೆ, ಕಾಲಿನ ಕಂಬ, ಮೀನಖಂಡಗಳೆಲ್ಲವೂ ಇನ್ನೂ ಬಿಗಿಯಾಗಿಯೇ ಇವೆ. ತನ್ನ ತೋಳು ಸೋತು ಮಲಗಿರುವಾಗ ಅವರ ಬಾಹುಗಳು ಮೊದಲಿಗಿಂತ ಗಟ್ಟಿಯಾಗುತ್ತಿವೆ. ಇನ್ನು ಸಾಕೆಂದು ಅವರಿಗೆ ಹೇಗೆ ಹೇಳುವದು?
ತಾನು ವೈದ್ಯಶಾಸ್ತ್ರವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿರುವ ಹೆಂಗಸು. ಪ್ರಥಮ ಘಟನೆ, ಸ್ತ್ರೀಯ ಅನುಭವ, ಉದ್ದೀಪನ, ಪುರುಷನ ಧಾರಣ, ಕಾಲಾವಧಿ, ಸಾಪೇಕ್ಷ ಶಕ್ತಿಗಳ ಬಗೆಗೆ ತಿಳಿದುಕೊಂಡಿದ್ದವಳು. ಆದರೆ ಇದು ತನ್ನ ಕಲ್ಪನೆಯನ್ನೇ ಕುಸಿಸಿ ಮುಳುಗಿಸುತ್ತಿದೆ. ಇವರ ಧಾರಣಶಕ್ತಿ ಪ್ರಚಂಡವಾದದು. ಪ್ರಥಮ ಅನುಭವದಲ್ಲೇ ತನ್ನನ್ನು ರತಿಯ ತಲಾತಲಗಳಿಗೆ ತಲುಪಿಸಿದ್ದಾರೆ. ಪೌರುಷವೇ ಸಾಕ್ಷಾತ್ಕಾರವಾಗಿ ಚಲಿಸುವ ಇವರಿಗೆ ನಾನೊಬ್ಬಳಲ್ಲ, ನನ್ನಂತಹ ಹಲವು ಸ್ತ್ರೀಯರಾದರೂ ಸಾಲದೇನೋ!”

ಇದೇ (‘ಗ್ರಹಣ’) ಕಾದಂಬರಿಯ ೧೩೧ನೆಯ ಪುಟದಲ್ಲಿ, ಸ್ತ್ರೀಯ ಮೇಲೆ ಪುರುಷನ ವಿಜೃಂಭಣೆಯ ಮತ್ತೊಂದು ಪ್ರಕಾರವನ್ನು ಕಾಣಬಹುದು:
“ಸರೋಜ ಮಾತನಾಡದೆ ನಿಂತುಕೊಂಡಳು. ಆದರೆ ದೃಷ್ಟಿಯನ್ನು ಕೆಳಗೆ ಮಾಡದೆ ಕುತ್ತಿಗೆಯನ್ನು ಹಿಂದಕ್ಕೆ ತಿರುಗಿಸಿ, ಮಂಚದ ಮೇಲೆ ಮಲಗಿ ಕೈಕಾಲು ಅದರಿಸುತ್ತಿದ್ದ ರೋಗಿಯನ್ನು ನೋಡುತ್ತಿದ್ದಳು.
ತಮ್ಮ ಎಡಗಾಲನ್ನು ಮೇಲೆ ಎತ್ತಿ ಸ್ವಾಮಿಗಳು, ‘ಹೇಡಿ’ ಎಂದು ಅವಳ ಸೊಂಟಕ್ಕೆ ಒದೆದು ತೋಳನ್ನು ಬಿಟ್ಟರು. ಅವಳು ಉರುಳಿ ಕೆಳಗೆ ಬಿದ್ದಳು.
ಅವರು ಅವಳನ್ನು ತಿರುಗಿ ನೋಡಲಿಲ್ಲ. ಕಲ್ಲುಚಪ್ಪಡಿಯ ಮೆಟ್ಟಲನ್ನು ಇಳಿದರು.”

ಅದೇ (‘ಗ್ರಹಣ’) ಕಾದಂಬರಿಯ ೧೪೨ನೆಯ ಪುಟದಲ್ಲಿ ನಾಯಕಿಗೆ ಮತ್ತೆ ನಾಯಕನ ಪೌರುಷದ ಸ್ಮರಣೆಯಾಗುವ ಬಗೆಯನ್ನು ಓದಿರಿ:
“ಅಂಗಳದ ಭಾಗವನ್ನು ನೋಡುತ್ತಿದ್ದಾಗ, ತಾನು ಇಲ್ಲಿಗೆ ಬಂದಿದ್ದ ಕೊನೆಯ ದಿನದ ಮನಃಸ್ಥಿತಿ ಮತ್ತು ಅನುಭವಗಳ ನೆನಪಾಯಿತು. ಅದೆಂತಹ ಪೌರುಷ ಅವರದು! ಗಟ್ಟಿ ತೋಳಗಳು, ಕಸುವಿನ ಎದೆಕಟ್ಟು, ತಾನು ಸೋತು, ಬಳಲಿ, ನರನರಗಳೂ, ಸ್ನಾಯುಗಳೂ ಸಡಿಲವಾದಂತಾಗಿ ನಿಶ್ಚೇತನಳಾದ, ಮಾದಕತೆಯಿಂದ ಕಣ್ಣುಗತ್ತಲೆ ಬಂದಂತಹ ಅನುಭವ.”

ಭೈರಪ್ಪನವರ ೧೩ನೆಯ ಕಾದಂಬರಿ “ಅನ್ವೇಷಣೆ”ಯಲ್ಲಿ ಬರುವ ಒಬ್ಬ ಸನ್ಯಾಸಿಯು ಮುಂಬಯಿಯ ಸೂಳೆಯೊಬ್ಬಳಲ್ಲಿ ತೋರಿಸುವ ರತಿಸಾಮರ್ಥ್ಯದ ವರ್ಣನೆ ಹೀಗಿದೆ:
“ಅವರು ನಾಲ್ಕು ದಿನ ಆ ಮಹಡಿಯಿಂದ ಕೆಳಗೆ ಇಳಿಯಲಿಲ್ಲ. ತನಗೂ ಅವಳಿಗೂ ಅಲ್ಲಿಗೇ ಊಟ ಬರುತ್ತಿತ್ತು. ಐದನೆಯ ಬೆಳಗ್ಗೆ ಕೆಳಗಿಳಿದು ಬಾಂಬೆ ಸೆಂಟ್ರಲ್ ಸ್ಟೇಶನ್ನಿನ ಅದೇ ಜಾಗಕ್ಕೆ ಹೋಗಿ ಕುಳಿತಾಗ ಅನ್ನಿಸಿತು:
ಒಳ್ಳೆಯ ಹುಡುಗಿ. ಅಖಂಡ ಸುಖ ಕೊಟ್ಟಳು. ನನ್ನಲ್ಲಿ ಇಷ್ಟು ಶಕ್ತಿ ಇದೆ ಅಂತ ನನಗೇ ಗೊತ್ತಿರಲಿಲ್ಲ. ನಾಲ್ಕು ಹಗಲು ನಾಲ್ಕು ರಾತ್ರಿ. ಅವಳು ಎಷ್ಟು ಬಳಲಿದಳೋ! ನನಗೇನೂ ಬಳಲಿಕೆ ಇಲ್ಲ.”


ಭೈರಪ್ಪನವರ ೧೬ನೆಯ ಕಾದಂಬರಿ ‘ಸಾಕ್ಷಿ’ಯಂತೂ Super-male-fantasyಯ ಪರಮೋಚ್ಚ ಉದಾಹರಣೆ ಎನ್ನಬಹುದು.
ಈ ಕಾದಂಬರಿಯ (ಖಳ)ನಾಯಕ ಮಂಜಯ್ಯನೆನ್ನುವನು ಒಬ್ಬ Casanova.
ಈತ ೧೭ ವರ್ಷದವನಿರುವಾಗಲೇ ೩೫ ವರ್ಷದ ಪತಿವ್ರತಾ ಹೆಂಗಸೊಬ್ಬಳನ್ನು ತನ್ನ ಬಲೆಯಲ್ಲಿ ಅತಿ ಸುಲಭವಾಗಿ ಬೀಳಿಸುತ್ತಾನೆ. (ಹೆಣ್ಣಿನಲ್ಲಿರುವ ಆರಾಧನಾ ಗುಣದ ಮೂಲಕ!)
ತನಗೆ ೫೧ ವರ್ಷ ವಯಸ್ಸಾದಾಗ ಅದೇ ಸ್ತ್ರೀಯ ೧೭ ವರ್ಷದ ಹೆಣ್ಣು ಮಗಳನ್ನು ಅದೇ ರೀತಿಯಲ್ಲಿ ಬಲೆಗೆ ಕೆಡವಿಕೊಳ್ಳುತ್ತಾನೆ.
ಆಕೆ ತನ್ನ ಅಪ್ಪನ ವಿರೋಧವಿದ್ದಾಗಲೂ ಈತನನ್ನು ಮದುವೆಯಾಗುತ್ತಾಳೆ.
ಆಬಳಿಕ ಈ ಮಂಜಯ್ಯನು ಆ ಊರಿನ ಕೂಲಿಯೊಬ್ಬನನ್ನು ಕೊಂದು ಹಾಕಿ, ಅವನ ಹೆಂಡತಿಯನ್ನು ಬುಟ್ಟಿಗೆ ಹಾಕಿಕೊಂಡು ಅವಳ ಜೊತೆಗೆ ಅಕ್ರಮ ಸಂಬಂಧ ಸ್ಥಾಪಿಸುತ್ತಾನೆ.
ಆಬಳಿಕ ಅವಳ ಮಗಳನ್ನೂ ಸಹ ಬುಟ್ಟಿಗೆ ಬೀಳಿಸಿಕೊಳ್ಳುತ್ತಾನೆ.
SUPER CASANOVA !
ಈಗ ಈ Casanovaನ ಸಾಮರ್ಥ್ಯವನ್ನಷ್ಟು ನೋಡಿರಿ:
(ತನ್ನ ಗಂಡನ ಕೊಲೆಗಾರನಾದ ಮಂಜಯ್ಯನ ಬಗೆಗೆ ಮೋಹ ತಳೆದ ಲಕ್ಕಿ ಎನ್ನುವ ಹೆಂಗಸಿನ ವಿಚಾರವನ್ನು ಅರಿಯಲು ಈ ‘ಸಾಕ್ಷಿ’ ಕಾದಂಬರಿಯ ೩೫ನೆಯ ಪುಟವನ್ನು ನೋಡಿರಿ:)

“……ತಾನು ಈ ವಯ್ಯನನ್ನು ಕೂಡಿರುವದು ಈಗ ಎರಡನೆಯ ದಫ. ಮೊದಲನೆ ದಫ ಗ್ಯಾಪಿಸಿಕೊಂಡರೆ ಯವ್ವೇ ಎದೆ ಜಲ್ ಅಂತದೆ. ನಂಗೇ ಗೊತ್ತಿಲ್ಲದ್ಹಂಗೆ ಈವಯ್ಯ ಮಂತ್ರ ಹಾಕಿ, ಎಂಗಸೆಂದರೆ ಸೋತ ಎಣ್ಣು ನಾಯಿ ಮಾಡಿಬಿಡ್ತಾನೆ. ಕ್ವಾಟೆ ಬೀದಿ ನಾಗೀನ ಒಂದು ಸಲ ನಾನು ಕೇಳಿದ್ದಕ್ಕೆ ಅದೇನು ಕಂಡು ಆವಯ್ಯಂಗೆ ಗಂಟು ಬಿದ್ದೀದೀಯಮ್ಮಿ? ಅಂತ, ಯಕ್ಕಾ ಒಂದು ದಫಾ ಆವಯ್ಯನನ್ನು ಕೂಡಿಬಿಟ್ಟರೆ ಸಾಕು ಮುಂದೆ ಏಳೇಳು ಜನ್ಮಕ್ಕೂ ಅವನ ಜೀತದ ಆಳಾಗಿಯಾದರೂ ಅವನ ತಾವವೇ ಇರಬೇಕು ಅನ್ನಿಸ್ತದೆ ಅಂದಿದ್ದಳು, ಆಗ ನಂಗೆ ತಿಳಿದಿರಲಿಲ್ಲ ಹಿಂಗಿರ್ತದೆ ಅಂತ………”

ಇವರಿಬ್ಬರ ಮೊದಲ ಸಂಗಮದ ವರ್ಣನೆಯನ್ನಷ್ಟು ನೋಡಿರಿ:
“……..ಅವಳಿಗೆ ಅರ್ಥವಾಗುವ ಮೊದಲೇ, ಅರ್ಥ ಮಾಡಿಕಳುಕ್ಕೆ ಅವಕಾಶವನ್ನೇ ಕೊಡದೆ ತಬ್ಬಿ ಉರುಳಿಸಿಕೊಂಡು ಮೇಲೆ ಬಂದು, ಪ್ರವೇಶಿಸಿ ಕೊಸರಾಡದ ಹಾಗೆ ಪಟ್ಟು ಹಾಕಿ, ‘ಬ್ಯಾಡ ಕಣಯ್ಯಾ ಬ್ಯಾಡ ಕಣಯ್ಯಾ, ಇನ್ನೂ ಸೂತಕ ಕಣಯ್ಯಾ,’ ಅನ್ನುತ್ತಿದ್ದ ಬಾಯಿಗೆ ನನ್ನ ಬಾಯಿ ಕೊಟ್ಟು ಮುಚ್ಚಿಸಿಬಿಟ್ಟೆ ಎಂದುಕೊಂಡಾಗ ಮಂಜಯ್ಯ ಎಡಕ್ಕೆ ತಿರುಗಿ ನೋಡಿದ……ಶುರುವಿನಲ್ಲಿ ಮೆಟ್ಟಿಕೊಂಡು ಕೊಸರಾಟವನ್ನು ಹತೋಟಿಗೆ ತರಬೇಕಾದರೂ ನಿಧಾನವಾಗಿ ಇವಳು ಕೊಸರುವದನ್ನು ಬಿಟ್ಟು ಸಡಿಲಗೊಂಡು ಒಪ್ಪಿಸಿಕೊಂಡು ಕೊನೆಗೆ ಇವಳ ನಾಡಿಗಳನ್ನು ಕಂಡು ಹಿಡಿದು ಮಿಡಿದು ವರಸೆ ವೈಖರಿಗಳನ್ನು ಪ್ರಯೋಗಿಸಿದ ಮೇಲೆ ತಾನೂ ತೆವಲೇರಿ ನರಳುಕ್ಕೆ ಶುರು ಮಾಡಿದಳಲ್ಲ………”

ಈಗ ಈ ಮಂಜಯ್ಯ ಎನ್ನುವ ೫೧ ವಯಸ್ಸಿನ ಪಾತ್ರ, ತನ್ನನ್ನು ಬಿಟ್ಟು ಹೋಗಿ, ತನ್ನಿಂದ ೧೭ವರ್ಷಗಳ ವರೆಗೆ ದೂರವಾಗಿ ಉಳಿದ ತನ್ನ ೩೪ ವಯಸ್ಸಿನ ಹೆಂಡತಿಯ ಮೇಲೆ ಅತ್ಯಾಚಾರ ಎಸಗುವ ವರ್ಣನೆ ಹಿಗಿದೆ:
“…ತಡ ಮಾಡದೆ ಅವನು ಎವೆಯಿಕ್ಕುವದರೊಳಗೆ, ‘ಸಾವಿತ್ರಿ, ನಿನ್ನ ಕೈಲಿ ಮಾತಾಡಬೇಕು. ಇಲ್ಲಿ ಕೇಳು’ ಎನ್ನುತ್ತಾ ಬಾಗಿಲು ಮುಚ್ಚಿ ಅವಳ ಹತ್ತಿರಕ್ಕೆ ಹಾರಿ ಒಂದೇ ಅಪ್ಪಳಿಕೆಗೆ ಅವಳನ್ನು ತಬ್ಬಿ ಹಿಡಿದು ಬಾಯಿಯ ಮೇಲೆ ಕೈಇಟ್ಟು ಕಾಲಿಗೆ ಟಾಂಗು ಕೊಟ್ಟು ಕೆಡವಿಕೊಂಡು ಹೊರಳಾಡಲು ಬಿಡಿಸಿಕೊಳ್ಳಲು ಆಗದಂತೆ ಪಟ್ಟುಹಾಕಿ ಬಾಯಲ್ಲಿ ನನ್ನ ಮಾತು ಕೇಳು ನನ್ನ ಮಾತು ಕೇಳು ಎಂದು ಅನುನಯಿಸುತ್ತಾ ತೆಕ್ಕೆಬಿದ್ದು ಆಕ್ರಮಿಸಿಬಿಟ್ಟ. ಸರೋಜಾಕ್ಷಿಯೊಡನೆ ಮಾಡಿದ ತಪ್ಪು ಮಾಡದೆ ಆಕ್ರಮಣವು ಸಂಪೂರ್ಣವಾದ ನಂತರವೂ ಅವಳಿಗೆ ಕಿರುಚಿಕೊಳ್ಳಲು ಅವಕಾಶ ಕೊಡದಂತೆ ಬಾಯಿ ಮುಚ್ಚಿಸಿ ತನ್ನ ದೇಹದ ಎಲ್ಲ ಲಂಪಟ ಭಾಗಗಳಿಂದಲೂ ಅವಳನ್ನು ಉದ್ದೀಪಿಸತೊಡಗಿದ. ಅವಳು ವಿರೋಧಿಸುತ್ತಿದ್ದಳು. ಹೊರಳಲು, ಕೆಡವಲು, ನುಣುಚಿಕೊಳ್ಳಲು ಹೆಣಗಿದಳು. ದೈಹಿಕವಾಗಿ ಅವಾವುವೂ ಸಾಧ್ಯವಾಗದ ಹಿಡಿತವನ್ನು ಬಿಗಿಮಾಡುತ್ತಲೇ ನಡೆದಂತೆ ಬಿಡಿಸಿಕೊಳ್ಳುವದು ಅಸಾಧ್ಯವೆಂದರಿತ ಅವಳು ಸೋತು ಸುಮ್ಮನಾದಳು……………..”

ಈ ಅತ್ಯಾಚಾರದ ಕೊನೆಯಲ್ಲಿ ಅವಳಲ್ಲಿ ಉಕ್ಕಿದ ಭಾವನೆಗಳು ಹೀಗಿವೆ:
“…………ಅವನು ಮಾಡಿದ ಅತ್ಯಾಚಾರದ ಕೊನೆಕೊನೆಗೆ ನಾನು ಸೋತಿದ್ದೆ. ಭಾಗಿಯಾಗಿದ್ದೆ. ಅದು ಅವನಿಗೆ ಅರ್ಥವಾಗಿದೆ. ನನ್ನ ಸೋಲು,ನನ್ನ ನಾಚಿಕೆಯ ಅಂಶ ಅದು .”

ಇದೆಲ್ಲ super-fantasyಯ ಭಾಗವಾದ ರತಿಸಾಮರ್ಥ್ಯದ ಲಕ್ಷಣವಾಯಿತು. ಈಗ ಇನ್ನೊಂದು ಲಕ್ಷಣವನ್ನು ನೋಡಿರಿ.
ಅಂದರೆ ಹೆಣ್ಣನ್ನು ಆಳಬಯಸುವ ಮನೋಭಾವವನ್ನು ಇಲ್ಲಿ ವ್ಯತ್ಯಸ್ತವಾಗಿ ಹೇಳಲಾಗಿದೆ.
ಅರ್ಥಾತ್, ಹೆಣ್ಣೇ ಗಂಡಸಿನಿಂದ ಆಳಿಕೊಳ್ಳಲು ಬಯಸುತ್ತಾಳೆ ಎಂದು ಹೇಳುವ ಮೂಲಕ ವರ್ಣಿಸಲಾಗಿದೆ.

ಇದೇ (‘ಸಾಕ್ಷಿ’) ಕಾದಂಬರಿಯಲ್ಲಿಯ ಸರೋಜ ಎನ್ನುವ ಪಾತ್ರ ತನ್ನ ಗಂಡನ ಬಗೆಗೆ ಹೇಳುವ ಮಾತುಗಳು ಹೀಗಿವೆ:
“…ಎಂಥ ಗಂಡ ಈತ! ಕೆಟ್ಟವರಲ್ಲ. ಕೇಡಿಗರಲ್ಲ. ಸತ್ವಹೀನ, ಯಾರನ್ನೂ ಏನನ್ನೂ ಆಳಲಾರದವ…..ಇಂಥ ವಿಧೇಯತೆಯನ್ನು ಕಳೆಸಿ ಇವರನ್ನೊಬ್ಬ ಸಮರ್ಥ ಗಂಡಸನ್ನಾಗಿ ಮಾಡಬೇಕೆಂದು ಎಷ್ಟು ವಿಧದಲ್ಲಿ ಪ್ರಯತ್ನಿಸಿದೆ? ಹೆಂಗಸು ಮೆಚ್ಚುವ ಗಂಡಸಿನ ಗುಣಲಕ್ಷಣಗಳನ್ನು ಎಷ್ಟು ಆಪ್ತವಾಗಿ ಬಿಡಿಸಿ ಹೇಳಿದೆ?.........”

‘ಸಾಕ್ಷಿ’ ಕಾದಂಬರಿಯಲ್ಲಿ ಉದ್ದಕ್ಕೂ ಲಂಪಟತನವಿದೆ ; explicit ರತಿವರ್ಣನೆ ಇದೆ.
ಇವೆಲ್ಲವನ್ನೂ ಸಂಭಾವಿತವಾಗಿ cover ಮಾಡುವ ಉದ್ದೇಶದಿಂದ ಪುಟಗಟ್ಟಲೆ ಬರೆದ ಸೋಗಲಾಡಿ ತತ್ವಜಿಜ್ಞಾಸೆ ಇದೆ. ಭೈರಪ್ಪನವರು ತಮ್ಮ ನೈಜ ಉದ್ದೇಶವನ್ನು ಮರೆಮಾಚಲು ಈ ಕಾದಂಬರಿಯಲ್ಲಿ ಬಲು ವಿಚಿತ್ರವಾದ ತಂತ್ರವನ್ನು ಬಳಸಿದ್ದಾರೆ. ಅದು ಹಿಗಿದೆ:

ಯಮಧರ್ಮರಾಯನ ಆಸ್ಥಾನದಲ್ಲಿ ವಿಚಾರಣೆ ನಡೆಯುತ್ತಿದೆ.
ಯಮಧರ್ಮನಿಗೆ ಹಾಗೂ ಚಿತ್ರಗುಪ್ತರಿಗೆ ಸತ್ಯದ ಪೂರ್ಣ ಅರಿವಿದೆ.
ಆದರೂ ಸಹ ಅಲ್ಲಿ ನಿಂತಿರುವ ಆತ್ಮಕ್ಕೆ ತನ್ನ ಸಮರ್ಥನೆಯನ್ನು ಹೇಳಲು ಒಂದು ಅವಕಾಶ ಕೊಟ್ಟಿದ್ದಾರೆ.
ಅಲ್ಲಿಂದ ಕಾದಂಬರಿಯ flashback ಪ್ರಾರಂಭವಾಗುತ್ತದೆ.

ಕೊನೆಯಲ್ಲಿ ಮತ್ತೊಮ್ಮೆ ಯಮಧರ್ಮನ ಆಸ್ಥಾನದ ವರ್ಣನೆ, ಹಾಗೂ ಸತ್ಯದ proclamation ಆಗುತ್ತದೆ !
ಈ ತಂತ್ರಕ್ಕೆ ಹೊಂದುವಂತೆ, ಕಾದಂಬರಿಗೆ ‘ಸಾಕ್ಷಿ’ ಎಂದು ಹೆಸರಿಸಲಾಗಿದೆ.
ಭೈರಪ್ಪನವರು ಸತ್ಯಕ್ಕೆ ನಿಜವಾಗಿಯೂ ಬೆಲೆ ಕೊಡುತ್ತಿದ್ದರೆ, ಈ ಕಾದಂಬರಿಗೆ ‘ಒಬ್ಬ ಕಾಮಪಿಶಾಚಿಯ ಸಾಹಸಗಳು’ ಎನ್ನುವ ಶೀರ್ಷಿಕೆಯನ್ನು ಕೊಟ್ಟಿರುತ್ತಿದ್ದರು.

ಹಾಗಂತ, ಈ ಲೇಖನದಲ್ಲಿ ನಾನು ಭೈರಪ್ಪನವರ ಶೈಲಿಯ ಅಥವಾ ಇತರ ಉತ್ತಮ ಗುಣಗಳ ವಿಮರ್ಶೆಯನ್ನು ಮಾಡುತ್ತಿಲ್ಲ.
ಈ ಲೇಖನದ ಉದ್ದೇಶ ತುಂಬಾ limited ಆಗಿದೆ.
ಬಹಿರಂಗದಲ್ಲಿ ಕಾಣುವ ಕತೆ ಹಾಗೂ ಅಂತರಂಗದ stuff ಹೇಗೆ ಬೇರೆಯಾಗಿರಬಲ್ಲವು ಎಂದು ತೋರಿಸುವದಷ್ಟೇ ಈ ಲೇಖನದ ಸೀಮಿತ ಉದ್ದೇಶ.

ಭೈರಪ್ಪನವರ ಕಾದಂಬರಿಗಳ ಮುಖ್ಯ ಪಾತ್ರಗಳ ಕೆಲವು ಲಕ್ಷಣಗಳನ್ನು ಓದುಗರು ದಯವಿಟ್ಟು ಗಮನಿಸಬೇಕು.
(೧) ಈ ನಾಯಕರಲ್ಲಿ ಒಂದೋ ಬ್ರಹ್ಮಚರ್ಯದ ಬಗೆಗೆ ದೃಢವಾದ ಶ್ರದ್ಧೆ ಇರುತ್ತದೆ ಅಥವಾ ಅಗಾಧವಾದ ಕಾಮುಕ ಶಕ್ತಿ ಇರುತ್ತದೆ.
(೨) ನಾಯಕ ಮತ್ತು ನಾಯಕಿಯರಲ್ಲಿ ಸಾಮಾನ್ಯರಿಗೆ ಸಾಧ್ಯವಾಗದಷ್ಟು ತೀವ್ರವಾದ ತಳಮಳ ಹಾಗೂ ತತ್ವಜಿಜ್ಞಾಸೆ ಇರುತ್ತವೆ.

ಈ ಅಸಾಮಾನ್ಯ ಗುಣಗಳಿಗೆ ನನ್ನದೇನೂ ಆಕ್ಷೇಪಣೆ ಇಲ್ಲ. ಆದರೆ ಈ ಗುಣಗಳು ಅನೇಕ ಸಲ ಕಾದಂಬರಿಯನ್ನು ನಿರ್ದಿಷ್ಟ ದಿಕ್ಕಿನಲ್ಲಿ ಒಯ್ಯುವ ಅನುಕೂಲದ ಸಾಧನೆಗಳಾಗಿ ಹಾಗೂ ಲಂಪಟತನಕ್ಕೆ coverage ಆಗಿ ಬಳಕೆಯಾಗಿವೆಯೇ ಹೊರತು, ಪಾತ್ರಗಳ ಆಂತರಿಕ ಅವಶ್ಯಕತೆಯಿಂದಾಗಿ ಅಲ್ಲ.
ಇದರಿಂದ ದೊರೆಯುವ ಅನುಕೂಲವೆಂದರೆ, ಪಾತ್ರಗಳ ವರ್ತನೆಯನ್ನು ತತ್ವಜಿಜ್ಞಾಸೆಯಲ್ಲಿ ಮುಚ್ಚಿಹಾಕಬಹುದು.

ಇದಕ್ಕೆ ಉದಾಹರಣೆ ಎಂದು ಭೈರಪ್ಪನವರ ‘ಅಂಚು’ ಕಾದಂಬರಿಯನ್ನು ತೆಗೆದುಕೊಳ್ಳಬಹುದು.
ಈ ಕಾದಂಬರಿಯಲ್ಲಿ ಆರ್ಕಿಟೆಕ್ಟ ಆದ ನಾಯಕನಿಗೆ ಒಬ್ಬಳು neurotic ನಾಯಕಿಯೊಡನೆ ಭೆಟ್ಟಿಯಾಗುತ್ತದೆ.
ನಾಯಕನ ಹೆಂಡತಿ ಹಾಗೂ ಮಗ conveniently ನಾಲ್ಕು ವರ್ಷದ ಹಿಂದೆ ಸತ್ತಿದ್ದಾರೆ.
ನಾಯಕಿ, ತನ್ನ ಗಂಡನನ್ನು ಬಿಟ್ಟು, ಇಬ್ಬರು ಚಿಕ್ಕ ಮಕ್ಕಳೊಡನೆ ಮೈಸೂರಿನಲ್ಲಿ, conveniently ಒಬ್ಬಂಟಿಯಾಗಿ ವಾಸಿಸುತ್ತಿದ್ದಾಳೆ.

೩೫೦ ಪುಟಗಳ ಈ ಕಾದಂಬರಿಯಲ್ಲಿ ೪೪ನೆಯ ಪುಟದಲ್ಲಿ ನಾಯಕ ಹಾಗೂ ನಾಯಕಿಯರ ಸಂಗಮವಾಗುತ್ತದೆ.
ಆನಂತರ, ಓದುಗರಿಗೆ bore ಆಗುವಷ್ಟು ಸಲ ಸಂಗಮವು repeat ಆಗುತ್ತದೆ.
ನಾಯಕಿ neurotic ಇರುವದರಿಂದ, ರಿವಾಲ್ವರನಿಂದ ಗುಂಡು ಹೊಡೆದುಕೊಂಡು ಸಾಯಲು ಅನೇಕ ಸಲ ಪ್ರಯತ್ನಿಸುತ್ತಾಳೆ; ಚಾಮುಂಡಿ ಬೆಟ್ಟದಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲೂ ಸಹ ಅಷ್ಟೇ ಸಲ ಪ್ರಯತ್ನಿಸುತ್ತಾಳೆ.
ಆತ್ಮಹತ್ಯೆಯ ಪ್ರಯತ್ನದ ಮೊದಲು ಪ್ರತಿ ಸಲವೂ ಕನಿಷ್ಠ ಎರಡು ಪುಟದಷ್ಟು ತತ್ವಜಿಜ್ಞಾಸೆ(ಸ್ವಗತದಲ್ಲಿ) ಮಾಡುತ್ತಾಳೆ.
ಓದುಗನಿಗೆ ತಲೆಚಿಟ್ಟು ಹಿಡಿದು ಹೋಗುತ್ತದೆ.
ಯಾವಾಗ ಈ ನಾಯಕಿಯು ಆತ್ಮಹತ್ಯೆಯಲ್ಲಿ ಸಫಲಳಾಗಿ, ತನಗೆ ಮುಕ್ತಿ ಕೊಡುತ್ತಾಳೊ ಎಂದು ಓದುಗ ಕಾಯುತ್ತಾನೆ.
ಆದರೆ, ಅವಳು ಕೊನೆಗೂ ಸಾಯುವದಿಲ್ಲ!
ಭೈರಪ್ಪನವರು ಸುಖಾಂತ ಮಾಡಿ ಮುಗಿಸುತ್ತಾರೆ.
(ಅಂದರೆ, ಮುಗಿದದ್ದೇ ಒಂದು ಸುಖ ಅಂತ!)

ಭೈರಪ್ಪನವರ ಬಹುತೇಕ ಕಾದಂಬರಿಗಳಲ್ಲಿ explicit sex ಇದೆ.
ಈ obsessionದ ಮನೋವೈಜ್ಞಾನಿಕ ಕಾರಣ ಏನು ಅಂತ ಹುಡುಕುವದು ನಮ್ಮ ಕೆಲಸವಲ್ಲ.
ಭೈರಪ್ಪನವರು ತತ್ವಜಿಜ್ಞಾಸೆಯನ್ನು cover ರೂಪದಲ್ಲಿ ಉಪಯೋಗಿಸಿಕೊಳ್ಳದಿದ್ದರೆ, ಈ ಕಾದಂಬರಿಗಳನ್ನು soft porn ಎಂದು ಕರೆಯಬಹುದಾದ ಮಟ್ಟಿಗೆ ಇಲ್ಲಿ sex ಇದೆ.

ಆದರೆ, ತತ್ವಜಿಜ್ಞಾಸೆಯನ್ನು ಓದುವದರಿಂದ ಓದುಗನಿಗೆ ಖುಶಿಯಾಗುತ್ತದೆ.
ತಾನು ಯಾವುದೋ ಒಂದು ಬೌದ್ಧಿಕ ಸಾಹಿತ್ಯವನ್ನು ಓದುತ್ತಿದ್ದೇನೆ ಎನ್ನುವ ಭ್ರಮೆ ಅವನಲ್ಲಿ ಹುಟ್ಟುತ್ತದೆ.
ಅದರ ಜೊತೆಗೆ ಓದುಗನ super-male-fantasyಯು ಸಹ ತೃಪ್ತವಾಗುತ್ತದೆ.
ದುರ್ದೈವದಿಂದ ಭಾರತೀಯ ಸ್ತ್ರೀಯರೂ ಸಹ ಈ super-male-fantasyಗೆ ಒಗ್ಗಿ ಹೋಗಿದ್ದಾರೆ.
(ಇದಕ್ಕೆ ಸಾವಿರಾರು ವರ್ಷಗಳ social conditioning ಕಾರಣವಾಗಿದೆ.)
ಅಲ್ಲದೆ soft pornದ ಖುಶಿ ಸಹ ಸಿಗುತ್ತದೆ.
(ಹಾಗೆಂದು ಈ ಕಾದಂಬರಿಗಳನ್ನು ಮುಚ್ಚಿ ಓದುವ ಕಾರಣವಿಲ್ಲ ; ಇದು ಗಂಭೀರ ಸಾಹಿತ್ಯ!)
ಈ ತಂತ್ರಗಳೇ ಭೈರಪ್ಪನವರ ಕಾದಂಬರಿಗಳ ಜನಪ್ರಿಯತೆಗೆ ಕಾರಣವಾಗಿವೆ ಎನ್ನಬಹುದು.

ಈ ಲೇಖನ ಭೈರಪ್ಪನವರ ಕಾದಂಬರಿಗಳ ವಿಮರ್ಶೆ ಅಲ್ಲ.
ಅವರ ಕಾದಂಬರಿಗಳಲ್ಲಿ ಕಂಡುಬರುವ ಕೆಲವು ಗುಣಲಕ್ಷಣಗಳನ್ನು ತೋರಿಸುವ ಪ್ರಯತ್ನ ಮಾತ್ರ.
ನಿಜ ಹೇಳಬೇಕೆಂದರೆ ಭಾರತೀಯ ಸಮಾಜದಲ್ಲಿಯ ಹೆಣ್ಣುಮಕ್ಕಳ ಬವಣೆಯನ್ನು , ಯಾತನೆಯನ್ನು ಅವರಷ್ಟು ಸಮರ್ಥವಾಗಿ ಹಾಗೂ ವಿಪುಲವಾಗಿ ಬೇರೆ ಯಾವ ಲೇಖಕನೂ ತೋರಿಸಿಲ್ಲ.

‘ಗೃಹಭಂಗ’ ಹಾಗು ‘ಸಾರ್ಥ’ ಇದಕ್ಕೆ ಉತ್ತಮ ಉದಾಹರಣೆಗಳು.
ಅದರಲ್ಲೂ ಸಹ, ‘ಸಾರ್ಥ’ವು ನನ್ನ ನೆಚ್ಚಿನ ಕಾದಂಬರಿ.
‘ಗೃಹಭಂಗ’ ಕಾದಂಬರಿಯಲ್ಲಿ super-male-fantasyಯ ಯಾವ ವರ್ಣನೆಯೂ ಇಲ್ಲ.
ಇಲ್ಲಿಯ ನಾಯಕ ಒಬ್ಬ ಹೇಪ್ಲ್ಯಾ ಹಾಗೂ ಅವಿವೇಕಿ ಗಂಡಸು.
ಅದಾಗ್ಯೂ ಸಹ ನಾಯಕಿಯು ಎಲ್ಲ ಸಂಕಷ್ಟಗಳನ್ನು ಎದುರಿಸುತ್ತಾ ಸಂಸಾರದ ಬಂಡಿಯನ್ನು ತಾನೇ ಎಳೆಯುತ್ತಾಳೆ.
‘ಸಾರ್ಥ’ ಕಾದಂಬರಿಯಲ್ಲಿ super-male-fantasyಯ ಒಂದು ಘಟನೆ ಇದ್ದರೂ ಸಹ, ಒಟ್ಟಾರೆ ಕಾದಂಬರಿಯಲ್ಲಿ ಆ ಘಟನೆ ಗೌಣವಾಗಿ ಬಿಡುತ್ತದೆ.
‘ಗೃಹಭಂಗ’ ಹಾಗು ‘ಸಾರ್ಥ’ ಕಾದಂಬರಿಗಳಲ್ಲಿ ಓದುಗರ ಮನಸ್ಸಿನಲ್ಲಿ ಕೊನೆಗೂ ನಿಲ್ಲುವವರು ಆ ಕಾದಂಬರಿಗಳ ನಾಯಕಿಯರೇ.

Saturday, December 6, 2008

ಗಿರಣಿ ವಿಸ್ತಾರ ನೋಡಮ್ಮ

ಶರೀಫರದು ವಿಮರ್ಶಾತ್ಮಕವಾದ ಹರಿತ ದೃಷ್ಟಿ.
ತಾವು ಹೋದಲ್ಲೆಲ್ಲ ತಮ್ಮ ಕಣ್ಣಿಗೆ ಬಿದ್ದ ವಸ್ತುಗಳ ಮೇಲೆ ಅವರದೊಂದು ವಿಮರ್ಶಾತ್ಮಕ ಗೀತೆ ಹೊರಬರುತ್ತಿತ್ತು.

ಹುಬ್ಬಳ್ಳಿಯಲ್ಲಿ ಆಗ ತಾನೇ ಹತ್ತಿಯನ್ನು ಹಿಂಜುವ ಗಿರಣಿ (ginning mill) ಪ್ರಾರಂಭವಾಗಿತ್ತು.
ಆ ಕಾಲದಲ್ಲಿ ಇಂತಹ ಯಾಂತ್ರಿಕ ಗಿರಣಿ ನಮ್ಮವರಿಗೆ ಸೋಜಿಗದ ವಸ್ತುವಾಗಿತ್ತು.
ಶರೀಫರೂ ಸಹ ಈ ಗಿರಣಿಯನ್ನು ಕಂಡು, ಬೆರಗಾಗಿ ಅದನ್ನು ತಮ್ಮ ಸಖಿಗೆ ವರ್ಣಿಸುತ್ತಿದ್ದಾರೆ.
ಅವರ ಕವನದ ಪೂರ್ತಿಪಾಠ ಹೀಗಿದೆ:
…………………………………………………………..
ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ ||ಪಲ್ಲ||

ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ ||ಅ.ಪ.||

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ, ಹೊಗಿಯ ಬಿಂಬವೋ ||೧||

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು ||೨||

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ ||೩||

ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ ||೪||
............................................
ಶರೀಫರ ಹಾಡುಗಳ ಪದ್ಧತಿಯನ್ನು ಗಮನಿಸಿರಿ.
ಅವರ ಅನೇಕ ಹಾಡುಗಳು ಪ್ರಾರಂಭವಾಗುವದು ಒಬ್ಬ ಹೆಣ್ಣುಮಗಳು ತನ್ನ ಗೆಳತಿಗೆ ವಿಷಯವೊಂದನ್ನು ಬಣ್ಣಿಸುವ ರೀತಿಯಲ್ಲಿ.

ಶರೀಫರು ಶಿಶುನಾಳಧೀಶನಲ್ಲಿ ಪತ್ನೀಭಾವವನ್ನು ಇಟ್ಟುಕೊಂಡವರು.
ಆದುದರಿಂದ ಜೀವಾತ್ಮರೆಲ್ಲರೂ ಶಿಶುನಾಳಧೀಶನ ಪತ್ನಿಯರೇ.
ಹೀಗಾಗಿ ಅವರು ತಮ್ಮ ಆಪ್ತ ಗೆಳೆಯರನ್ನು ಸಖೀಭಾವದಲ್ಲಿ ನೋಡುವದು ಸಹಜವೇ ಆಗಿದೆ.

ಅದಲ್ಲದೆ, ಗೆಳತಿಯರ ನಡುವೆ ನಡೆಯುವ ಆಪ್ತಸಲ್ಲಾಪದಲ್ಲಿ ಯಾವುದೇ ಭಿಡೆ, ಸಂಕೋಚ, ದೊಡ್ಡಿಸ್ತನ ಇರುವದಿಲ್ಲ.
ಇದು ಒಂದು absolutely free inter-action.
ಇದೇ ಮಾತನ್ನು ಗೆಳೆಯರ ಬಗೆಗೆ ಹೇಳಲು ಆಗುವದಿಲ್ಲ.

ಆದುದರಿಂದ ಈ ಹಾಡಿನ ಮೊದಲಲ್ಲಿ ಶರೀಫರು ತಮ್ಮ ಗೆಳತಿಗೆ ‘ಶರಣಿ’ ಎಂದು ಕರೆಯುತ್ತಾರೆ.
ಅಂದರೆ ಈ ವ್ಯಕ್ತಿಯೂ ಸಹ ದೇವಭಕ್ತಳೇ ಆಗಿರಬೇಕಾಯಿತು.
ಈ ಆಪ್ತನನ್ನು ಶರೀಫರು ತಮ್ಮ ಬದಿಯಲ್ಲಿ ಕರೆದು ಕೂಡಿಸಿಕೊಂಡು, ಹುಬ್ಬಳ್ಳಿಯಲ್ಲಿ ಹೊಸದಾಗಿ ಪ್ರಾರಂಭವಾದ ಗಿರಣಿಯ ಬಗೆಗೆ ಕೌತುಕದಿಂದ ವರ್ಣಿಸಲು ಪ್ರಾರಂಭಿಸುತ್ತಾರೆ:

“ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ”

ಬ್ರಿಟಿಶರ ಆಳಿಕೆ ಭಾರತದಲ್ಲಿ ಪ್ರಾರಂಭವಾದದ್ದರಿಂದಲೇ ಯಾಂತ್ರಿಕ ಗಿರಣಿಗಳು ಇಲ್ಲಿ ಸ್ಥಾಪನೆಯಾದವು. ಈ ಹಿನ್ನೆಲೆಯನ್ನು ಶರೀಫರು ತಮ್ಮ ಹಾಡಿನ ಪ್ರಾರಂಭದಲ್ಲಿ ಹೇಳುತ್ತಾರೆ:

“ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ”

೧೮೫೭ರಲ್ಲಿ ನಡೆದ ಹೋರಾಟದ ಬಳಿಕ ವ್ಹಿಕ್ಟೋರಿಯಾ ರಾಣಿಯು ಭಾರತದ ಚಕ್ರವರ್ತಿನಿಯೆಂದು ಘೋಷಿಸಿಕೊಂಡಳು.
ಆ ಸಮಯದಲ್ಲಿ ಮರಾಠಾ ಸಾಮ್ರಾಜ್ಯವೆಲ್ಲ ಬ್ರಿಟಿಶರ ಆಡಳಿತಕ್ಕೊಳಪಟ್ಟು ಮುಂಬಯಿ ಪ್ರಾಂತವೆಂದು ಕರೆಯಲ್ಪಡುತ್ತಿತ್ತು.
೧೮೧೭ರಲ್ಲಿ (ಹಳೆ)ಹುಬ್ಬಳ್ಳಿಯನ್ನು ಸಾಂಗ್ಲಿ ಸಂಸ್ಥಾನಿಕರು ಬ್ರಿಟಿಶರಿಗೆ ಮಾರಿದರು.
೧೮೩೦ನೆಯ ಇಸವಿಯಲ್ಲಿ ಮುಂಬಯಿ ಪ್ರಾಂತದ ಭಾಗವಾಗಿ ಧಾರವಾಡ ಜಿಲ್ಲೆ ನಿರ್ಮಾಣವಾಯಿತು.
೧೮೮೮ರಲ್ಲಿ ಧಾರವಾಡದಲ್ಲಿ ರೇಲವೆ ಪ್ರಾರಂಭವಾಯಿತು.
ಆಬಳಿಕ ಅಮೆರಿಕದಿಂದ ಆಮದಾದ ಹತ್ತಿಯ ಬೀಜಗಳಿಂದ ಈ ಭಾಗದಲ್ಲಿ ಹೊಸ ತರದ ಹತ್ತಿಯನ್ನು ಬೆಳೆಯುವದು ಪ್ರಾರಂಭವಾಯಿತು.
ಹತ್ತಿಯನ್ನು ಹಿಂಜುವ ಕಾರಖಾನೆಗಳು ಪ್ರಾರಂಭವಾದವು.
ಸಾರ್ವಜನಿಕ ಶಾಲೆಗಳು ಪ್ರಾರಂಭವಾಗಿ ಸಾರ್ವತ್ರಿಕ ಶಿಕ್ಷಣ ಸುರುವಾಯಿತು.
ಇದರಿಂದ ಎಲ್ಲೆಡೆಯೂ ಹೊಸ ಗಾಳಿ ಬೀಸಲಾರಂಭಿಸಿತು.
ಬ್ರಿಟಿಶರು ತಮ್ಮ ಆರ್ಥಿಕ ಸ್ವಾರ್ಥಕ್ಕಾಗಿಯೇ ಭಾರತದಲ್ಲಿ ಆಧುನಿಕತೆಯನ್ನು ತಂದಿರಬಹುದು.
ಆದರೆ ಜನಸಾಮಾನ್ಯರಿಗೆ ಮಾತ್ರ ಇದು ಹೊಸ ಯುಗದ ಪ್ರಾರಂಭವೆನ್ನುವಂತೆ ತೋರುತ್ತಿತ್ತು.

ಆದುದರಿಂದ ಶರೀಫರು ಧರಣಿಪತಿಯಾದ, ಭೂಮಂಡಲದ ರಾಣಿಯಾದ, ಕರುಣಾಪೂರ್ಣಳಾದ ವ್ಹಿಕ್ಟೋರಿಯಾ ರಾಣಿ ತನ್ನ ಆಧೀನದಲ್ಲಿರುವ ಈ ರಾಜ್ಯಕ್ಕೆ ತರಿಸಿದ ಘನಚೋದ್ಯವಿದು ಎಂದು ಈ ಗಿರಣಿಯನ್ನು ಬಣ್ಣಿಸುತ್ತಾರೆ.
ಇಂತಹ ಒಂದು ಆಧುನಿಕ ಯಾಂತ್ರಿಕ ಸಾಧನವನ್ನು ಇಲ್ಲಿಯ ಸಾಮಾನ್ಯ ಜನತೆ ಈಮೊದಲು ನೋಡಿರಲಿಲ್ಲ. ಅವರಿಗೆ ಇದೊಂದು ಸೋಜಿಗದ ವಸ್ತು.
ಆದುದರಿಂದ ಶರೀಫರು ಇದನ್ನು ಘನಚೋದ್ಯವೆಂದು ಕರೆದಿದ್ದಾರೆ.

ಚೀನಾದಿಂದ ಸಹ ಆ ಕಾಲಕ್ಕೆ ಸಕ್ಕರೆ, ರೇಶಿಮೆ ಮೊದಲಾದ ವಸ್ತುಗಳು ಇಲ್ಲಿ ಆಮದಾಗುತ್ತಿದ್ದವು.
ಚೀನಾದ ಔದ್ಯೋಗಿಕ ಜಾಣ್ಮೆಯ ಬಗೆಗೆ ಭಾರತೀಯರಿಗೆ ಗೌರವವಿತ್ತು.
ಆದುದರಿಂದ ಈ ಗಿರಣಿಯನ್ನು ಚೀನಾದ ವಿದ್ಯೆಯಿರಬಹುದೆ ಎನ್ನುವ ಅನುಮಾನವನ್ನು ಶರೀಫರು ವ್ಯಕ್ತಪಡಿಸುತ್ತಾರೆ.

ಈ ಆಧುನಿಕ ಯಂತ್ರಸಾಧನೆಯು ಯಾವ ರೀತಿಯಲ್ಲಿ ನಡೆಯುತ್ತದೆ ಎನ್ನುವ ವಿಸ್ಮಯವನ್ನು ಶರೀಫರು ಈಗ ತಮ್ಮ ಸಖಿಗೆ ಬಿಚ್ಚಿ ಹೇಳುತ್ತಾರೆ:

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ, ಹೊಗಿಯ ಬಿಂಬವೋ ||

ಕಲ್ಲಿದ್ದಲನ್ನು ಕಾಯಿಸಿ, ಬಾಯ್ಲರುಗಳ ಮುಖಾಂತರ ನೀರನ್ನು ಉಗಿಯನ್ನಾಗಿ ಪರಿವರ್ತಿಸಿ, ಚಕ್ರಗಳನ್ನು ತಿರುಗಿಸುವ ಈ ಯಂತ್ರವನ್ನು ಶರೀಫರು ಅರ್ಥ ಮಾಡಿಕೊಂಡಿರಬಹುದು.
ಆದುದರಿಂದಲೇ ಅವರು ಜಲ, ಅಗ್ನಿ, ವಾಯು ಒಂದಾಗಿ ಎಂದು ಬಣ್ಣಿಸುತ್ತಾರೆ.
ಗಿರಣಿಯ ಚಿಮಣಿಗಳಿಂದ ಹೊರಡುವ ಹೊಗೆಯ ಕಂಬವೂ ಸಹ ಅವರ ದೃಷ್ಟಿಗೆ ಚಲುವಾಗಿಯೇ ಕಂಡು ಬೆರಗನ್ನು ಉಂಟು ಮಾಡುತ್ತದೆ.

ಇದೇನೊ ಗಿರಣಿಯನ್ನು ಚಾಲಿಸುವ ಚೈತನ್ಯವಾಯಿತು.
ಗಿರಣಿಯ ಒಳಗಿರುವ ಚಮತ್ಕಾರ ಏನು ಎನ್ನುವದನ್ನು ಶರೀಫರು ಈಗ ತಮ್ಮ ಸಖಿಗೆ ಈ ರೀತಿಯಾಗಿ ಹೇಳುತ್ತಾರೆ:

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು ||

ಒಳಗಿನ ಚಕ್ರಕ್ಕೆ ಒಂಬತ್ತು ಹಲ್ಲುಗಳಿದ್ದು, ಅದರಲ್ಲಿ ನೂಲಿಗೆ ಆಧಾರವಾಗಿ (=ಸೂತ್ರಾಧಾರ) ಲಾಳಿ ಇದೆ. ಈ ಲಾಳಿಯಲ್ಲಿ ಮೂರು ಕೊಳವಿಗಳು ಇದ್ದು ಅವು ನೂಲಿನ ಎಳೆಯನ್ನು ತುಂಬುತ್ತಾ ಇವೆ.
ಶರೀಫರು ಹೇಳುವಂತೆ ಆ ಗಿರಣಿಯಲ್ಲಿ ಒಂಬತ್ತು ಹಲ್ಲುಗಳ ಚಕ್ರ ಹಾಗೂ ಮೂರು ಕೊಳವಿಗಳ ಲಾಳಿ ಇದ್ದವೊ ಇಲ್ಲವೊ ಎನ್ನುವದು ಈಗ ತಿಳಿಯಲು ಸಾಧ್ಯವಾಗಲಿಕ್ಕಿಲ್ಲ.
ಆದರೆ, ಗಿರಣಿಯ ಪ್ರತೀಕದಲ್ಲಿ ಈ ವರ್ಣನೆಯನ್ನು ಶರೀಫರು ಜೀವಾತ್ಮನಿಗೆ ಹೋಲಿಸಿ ಹೇಳಿರುವದು ಮೇಲ್ನೋಟಕ್ಕೇ ತಿಳಿದು ಬಿಡುತ್ತದೆ.

ಜಲ, ಅಗ್ನಿ ಹಾಗೂ ವಾಯುಗಳು ಒಂದಾಗಿ ನೆಲದಿಂದ (=ಪೃಥ್ವಿ) ಗಗನಕ್ಕೆ ಮುಟ್ಟುತ್ತವೆ ಎಂದರೆ ಪಂಚಮಹಾಭೂತಗಳು (=ಪೃಥ್ವಿ,ಅಪ್,ತೇಜ,ಆಕಾಶ,ವಾಯು) ಒಂದಾಗಿ ಜೀವಿಗೆ ರೂಪ ಕೊಟ್ಟಿವೆ ಎನ್ನುವದು ಶರೀಫರ ಒಡಪಿನ ಮಾತು.
ಈ ಶರೀರದಲ್ಲಿ ಒಂಬತ್ತು ರಂಧ್ರಗಳು ಇರುವದಾಗಿ ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಶರೀಫರು ಅದನ್ನೇ ಒಂಬತ್ತು ದಳಗಳ ಚಕ್ರ ಅಂದರೆ ಯಂತ್ರಸಾಧನೆ ಎಂದು ಕರೆದಿರಬಹುದು.
ಈ ಯಂತ್ರದಲ್ಲಿ ಮೂರು ಕೊಳವಿಯ ಲಾಳಿಯು ಸೂತ್ರಾಧಾರವಾಗಿ ಅಥವಾ ಸೂತ್ರಧಾರನಾಗಿ ಎಳೆಯನ್ನು ತುಂಬುತ್ತಿದೆ.
ಎಳೆ ಅಂದರೆ ಶ್ವಾಸೋಛ್ವಾಸ.
ಎಳೆಯನ್ನು ತುಂಬುತ್ತದೆ ಅಂದರೆ ಜೀವನದ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುತ್ತ ನಡೆಯಿಸುತ್ತಿದೆ.
ತುಂಬಾ ಮಹತ್ವದ ಲಾಳಿಯಾಯಿತು ಇದು!
ಇದರ ಮೂರು ಕೊಳಿವೆಗಳು ಯಾವವು?
ಇಡಾ, ಪಿಂಗಲಾ ಹಾಗೂ ಸುಷುಮ್ನಾ ಎನ್ನುವ ಮೂರು ನಾಡಿಗಳೇ ಈ ಮೂರು ಕೊಳಿವೆಗಳು.
ಈ ಮೂರು ನಾಡಿಗಳಲ್ಲಿ ಶ್ವಾಸವನ್ನು ನಿಯಂತ್ರಿಸುವದರ ಮೂಲಕ ಯೋಗಿಯು ಪ್ರಾಣಾಯಾಮದ ಸಿದ್ಧಿಯನ್ನು ಪಡೆಯುತ್ತಾನೆ.

ಆ ನಾಡಿಗಳಲ್ಲಿ ಸಂಚರಿಸಿದ ಶ್ವಾಸವು ಹಿಂಜಿ ಅಂದರೆ ಶುದ್ಧವಾಗಿ ಹಂಜಿಯಾಗುತ್ತದೆ.
ಹಂಜಿ ಅಂದರೆ ಹಿಂಜಲ್ಪಟ್ಟಂತಹ ಅರಳೆ.

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ ||

ಹಿಂಜಿದ ಅರಳಿಯನ್ನು ದಾರದ ಎಳೆ ಮಾಡಲು ಎರಡು ಗಾಲಿಗಳು ಬೇಕಾಗುತ್ತವೆ.
ಮೂಲಬ್ರಹ್ಮ ಅಂದರೆ ಯಾವುದೇ ಗುಣಸ್ವಭಾವ ಇಲ್ಲದ ನಿರ್ಗುಣ ಬ್ರಹ್ಮ.
ನಿರ್ಗುಣ ಬ್ರಹ್ಮ ಅಂದರೆ ಶುದ್ಧವಾದ, ಹಿಂಜಿದ ಅರಳಿ.
ಇಡಾ ಹಾಗೂ ಪಿಂಗಳಾ ಎನ್ನುವ ಎರಡು ಗಾಲಿಗಳಲ್ಲಿ(= ನಾಡಿಗಳಲ್ಲಿ) ಸಂಚರಿಸಿ ಶುದ್ಧವಾದ ಶ್ವಾಸವು
ಹಿಂಜಿದ ಅರಳಿಯಂತೆ ಅಥವಾ ನಿರ್ಗುಣ ಬ್ರಹ್ಮನಂತೆ ಇರುತ್ತದೆ.
ಇದು ಸುಷುಮ್ನಾ ನಾಡಿಯಲ್ಲಿ ಸಂಚರಿಸಿದಾಗ ದಾರದ ಕುಕ್ಕಡಿ ತಯಾರಾಗುತ್ತದೆ.
ಕುಕ್ಕಡಿ ಅಂದರೆ ನೂಲಿನ ಅಳತೆ.
ಇದು ತಕಲಿ, ಚರಕಾ ಅಥವಾ ಯಂತ್ರದ ಕೊನೆಯಲ್ಲಿ ತಯಾರಾಗುವ ನೂಲಿನ ಗಂಟು.

ಇಲ್ಲಿಯವರೆಗೆ ನೂಲು ತಯಾರಾದಂತಾಯ್ತು.
ಇದರಿಂದ ತಯಾರಾದ ಅರಿವೆ ಎಂತಹದೆಂತೀರಿ?

ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ ||

ಪಟ್ಟೆ ಅಂದರೆ ರೇಶಿಮೆ ಸೀರೆ.
ಇದು ಪರಮಾನ ಎನ್ನುವ ಪಟ್ಟೆ.
ಪರಮ ಅಂದರೆ ಶ್ರೇಷ್ಠ ಅಥವಾ ದಿವ್ಯ ಎನ್ನುವ ಅರ್ಥದಲ್ಲಿ ಶರೀಫರು ಹೇಳುತ್ತಿದ್ದಾರೆಯೆ?
ಅಲ್ಲದೆ ಫರ್ಮಾನ್ ಎನ್ನುವ ಉರ್ದು ಪದಕ್ಕೆ ರಾಜಾಜ್ಞೆ ಎನ್ನುವ ಅರ್ಥವಿದೆ.
ಈ ದಿವ್ಯವಾದ ರೇಶಿಮೆ ಸೀರೆಯ ಮೇಲೆ ಪರಮಾತ್ಮನ ರಾಜಾಜ್ಞೆಯನ್ನು ನೇಯಿಸಿ ಮಾರಾಟಕ್ಕೆ ಇಡಲಾಗಿದೆ ಎನ್ನುವ ಅರ್ಥ ಇಲ್ಲಿ ಇರಬಹುದು.
ಇಂತಹ ದಿವ್ಯವಾದ ಪಟ್ಟೆಯನ್ನು ಆಸ್ಥೆಯುಳ್ಳವರು ಯಾರಾದರೂ ಅಂದರೆ ಭಕ್ತರು ಕೊಳ್ಳಬಹುದು.

ವಿಶ್ವಕ್ಕೆ ನೇಯ್ಗೆಯನ್ನು ಕಲಿಸಿದವನು ದೇವಾಂಗ ಋಷಿ.
ಆ ದೇವಾಂಗ ಋಷಿಯಿಂದ(=ಪರಮಾತ್ಮನಿಂದ) ಈ ಹಚ್ಚಡ(= ಹೊದಿಕೆ) ನೇಯಲ್ಪಟ್ಟಿತು.
ಆದುದರಿಂದ ಇಡೀ ಲೋಕವೆ ಈ ಹಚ್ಚಡವನ್ನು ಮೆಚ್ಚಿಕೊಂಡಿದೆ.
ಪರಮಾತ್ಮನ ಆಣತಿಗಳನ್ನು ಪಾಲಿಸುವ ಭಕ್ತಜನರು ಅವನ ಕೃಪೆಯೆನ್ನುವ ಈ ಹಚ್ಚಡವನ್ನು ಹೊಚ್ಚಿಕೊಂಡು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬಹುದು ಎನ್ನುವುದು ಶರೀಫರ ಇಂಗಿತ.

ಈ ರೀತಿಯಾಗಿ ಗಿರಣಿಯ ಭೌತಿಕ ವರ್ಣನೆಯಿಂದ ಪ್ರಾರಂಭವಾದ ಈ ರಚನೆ, ಗಿರಣಿಯನ್ನು ಮಾನವನಿಗೆ ಹೋಲಿಸಿ, ಅವನ ಒಳಿತನ್ನು ಅವನಿಗೆ ನೆನಪಿಸುವದರೊಂದಿಗೆ ಮುಕ್ತಾಯವಾಗುತ್ತದೆ.

[ಟಿಪ್ಪಣಿ:
ಇಲ್ಲಿ ಶರೀಫರು ವ್ಹಿಕ್ಟೋರಿಯಾ ರಾಣಿಯನ್ನು ಕರುಣಾಮಯಿಯಾದ ಭೂಮಂಡಲ-ಚಕ್ರವರ್ತಿನಿ ಎಂದು ಕರೆದಿರುವದು ಒಂದು ಅನುಮಾನಕ್ಕೆ ಕಾರಣವಾಗಿದೆ.
ಶರೀಫರು ವಸಾಹತುವಾದಿ ಬ್ರಿಟಿಶ್ ಆಳಿಕೆಯ ಪರವಾಗಿದ್ದರೆ ಎನ್ನುವದೆ ಆ ಅನುಮಾನ.
ಈ ಅನುಮಾನದ ವಿಶ್ಲೇಷಣೆ ಮಾಡಲು ಭಾರತದ ಮೇಲಾದ ಪರಕೀಯ ಆಕ್ರಮಣಗಳನ್ನು ಗಮನಿಸಬೇಕು.
ಪರ್ಶಿಯನ್ನರು, ತುರುಕರು, ಮಂಗೋಲರು, ಮುಗಲರು ಭಾರತದ ಮೇಲೆ ದಾಳಿ ಮಾಡಿ ಇಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು.
ಈ ಆಕ್ರಮಣದ ಬಗೆಗೆ ಭಾರತೀಯರಲ್ಲೆ ಎರಡು ಭಿನ್ನ ಅಭಿಪ್ರಾಯಗಳಿದ್ದವು.
“ಜಾಣ ಹಾಗು practical” ಅಭಿಪ್ರಾಯವೆಂದರೆ, ಪರಕೀಯರ ಜೊತೆಗೆ ಸಂಧಾನ ಮಾಡಿಕೊಂಡು, ರಾಜ್ಯದ ಅಮಾಯಕ ಜನತೆಯನ್ನು ಸಂಕಟಕ್ಕೆ ಒಳಪಡಿಸದಿರುವದು.
ಅಕಬರನ ಜೊತೆಗೆ ರಾಜಿಯಾದ ರಾಜಾ ಮಾನಸಿಂಗನು ಈ ಧೋರಣೆಯ ಅಧ್ವರ್ಯು.
ಪರಕೀಯರ ಪ್ರಭುತ್ವವನ್ನು ಒಪ್ಪಿಕೊಂಡು ಆತ್ಮಗೌರವ ಕಳೆದುಕೊಳ್ಳುವದಕ್ಕಿಂತ, ಹೋರಾಡಿ ಸಾಯುವದು ಮೇಲು ಎನ್ನುವ ಧೋರಣೆಯನ್ನು ವ್ಯಕ್ತಪಡಿಸಿದ ಏಕಾಕಿ ರಾಜನೆಂದರೆ ರಾಣಾ ಪ್ರತಾಪಸಿಂಹ.
ಅಕಬರನ ನಂತರದ ತುರುಕರ ಅತ್ಯಾಚಾರ ಅತಿಯಾದಾಗ, ಶಿವಾಜಿ ಇಲ್ಲಿಯ ನಾಡ ಮಕ್ಕಳಿಗಾಗಿ ಹೋರಾಡಿ, ಮರಾಠಾ ರಾಜ್ಯ ಸ್ಥಾಪನೆ ಮಾಡಿದ.
ಅದಕ್ಕೂ ಮೊದಲೇ ವಿಜಯನಗರ ರಾಜ್ಯ ಸ್ಥಾಪನೆಯಾಗಿತ್ತು.

ಅದಾಗ್ಯೂ ಸಹ ಭಾರತದ ಬಹುಭಾಗದಲ್ಲಿ ವಿದೇಶೀಯರ ಆಡಳಿತವೇ ಜಾರಿಯಲ್ಲಿತ್ತು.
ಭಾರತೀಯನಾಗಿ ಪರಿವರ್ತಿತನಾಗಿದ್ದನು ಎಂದು ಹೊಗಳಲ್ಪಟ್ಟ ಅಕಬರನ ಆಸ್ಥಾನದ ಒಂಬತ್ತು ಮುಖ್ಯರಲ್ಲಿ ಏಳು ಜನ ವಿದೇಶೀಯರೇ(=ಪರ್ಶಿಯನ್ನರು) ಇದ್ದರು ಎನ್ನುವದನ್ನು ಗಮನಿಸಿದರೆ, ಭಾರತದ ಆಡಳಿತವು ಪರಕೀಯರಿಂದ ನಿಯಂತ್ರಿತವಾಗುತ್ತಿತ್ತು ಹಾಗೂ ಭಾರತವು ಪರಕೀಯರ ಆಳಿಕೆಯನ್ನು ಒಪ್ಪಿಕೊಂಡಿತ್ತು ಎನ್ನುವದು ಸ್ಪಷ್ಟವಾಗುತ್ತದೆ.

ಅದರಂತೆಯೇ ಬ್ರಿಟಿಶ್ ಆಳಿಕೆಯನ್ನು ಸಹ ಭಾರತೀಯರು ಒಪ್ಪಿಕೊಂಡರು.
ತುರುಕರ ಆಳಿಕೆಗಿಂತ ಬ್ರಿಟಿಶರ ಆಳಿಕೆಯಲ್ಲಿ ಭಾರತದಲ್ಲಿ ಅನೇಕ ಮೂಲಭೂತ ಬದಲಾವಣೆಗಳು ಬಂದವು.
ಜನಸಾಮಾನ್ಯರು ಬಹುಶಃ ಇದನ್ನು ಸಂತೋಷದಿಂದ ಸ್ವಾಗತಿಸಿರಬಹುದು.
ಅಷ್ಟೇ ಏಕೆ, ಗೋಪಾಲಕೃಷ್ಣ ಗೋಖಲೆ, ಮೋತಿಲಾಲ ನೆಹರೂ ಮಹಾತ್ಮಾ ಗಾಂಧಿಯವರಂತಹವರೂ ಕೂಡ ಮೊದಲಲ್ಲಿ ಬ್ರಿಟಿಶ್ ಆಳಿಕೆಯನ್ನು ವಿರೋಧಿಸಿರಲಿಲ್ಲ ಎನ್ನುವದನ್ನು ಗಮನಿಸಬೇಕು.
ಬ್ರಿಟಿಶರು ಯಾವ ರೀತಿಯಲ್ಲಿ ಭಾರತದ ಆರ್ಥಿಕ ಶೋಷಣೆಯನ್ನು ಮಾಡಿದರು ಎನ್ನುವದು ಜನಸಾಮಾನ್ಯರಿಗೆ ಹೊಗಲಿ, ಪಂಡಿತರಿಗೇ ಅರ್ಥವಾಗಿರಲಿಲ್ಲ. ಇದರ ಒಂದು ಉದಾಹರಣೆ ಹೀಗಿದೆ:

ಬ್ರಿಟಿಶರು ಭಾರತವನ್ನು ವ್ಯಾಪಾರಕ್ಕೆಂದು ಪ್ರವೇಶಿಸಿದಾಗ, ಒಂದು ಪೌಂಡಿನ ಬೆಲೆ ಒಂದು ರೂಪಾಯಿಯ ಬೆಲೆಗಿಂತ ಕಮ್ಮಿಯಾಗಿತ್ತು. ಬ್ರಿಟಿಶರು ಇಲ್ಲಿ ಪ್ರಭುತ್ವ ಸ್ಥಾಪಿಸಿದ ಬಳಿಕ ತಮ್ಮ ಪಾರ್ಲಿಮೆಂಟಿನಲ್ಲಿ ಒಂದು ಶಾಸನ ಮಾಡಿ, ರೂಪಾಯಿ ಬೆಲೆಯ ಅಪಮೌಲ್ಯ ಮಾಡಿದರು.
ಇದರಿಂದಾಗಿ ಭಾರತದಿಂದ ಬ್ರಿಟನ್ನಿಗೆ ಹೋಗುವ ಸಾಮಗ್ರಿಗಳು ಸೋವಿಯಾದವು.
ಭಾರತಕ್ಕೆ ಬ್ರಿಟನ್ನಿನಿಂದ ಆಮದಾದ ವಸ್ತುಗಳು ದುಬಾರಿಯಾಗಿ ಬ್ರಿಟಿಶರಿಗೆ ಅಪಾರ ಲಾಭವಾಗತೊಡಗಿತು. ಇದನ್ನು ಅರ್ಥ ಮಾಡಿಕೊಂಡ ಏಕಮೇವ ವ್ಯಕ್ತಿಯಂದರೆ ಮೋತಿಲಾಲ ನೆಹರೂ.
ಅವರು ಅನೇಕ ಭಾರತೀಯ ಗಣ್ಯರಿಗೆ ಈ ಅನರ್ಥವನ್ನು ತಿಳಿಸಿ ಪತ್ರ ಬರೆದರು.
ಆದರೆ ಭಾರತೀಯ ಗಣ್ಯರಿಗೆ ಇದು ಅರ್ಥವಾಗಲೇ ಇಲ್ಲ.
(ಆಧಾರ :ಶ್ರೀ ಬಿ. ಆರ್. ನಂದಾರವರು ಬರೆದ ಪುಸ್ತಕ, The Nehrus.)

ಬ್ರಿಟಿಶರ ಬಹುಮುಖ ಶೋಷಣೆಯ ಮತ್ತೊಂದು ಉದಾಹರಣೆ ಹೀಗಿದೆ:
ಮೈಸೂರಿನಲ್ಲಿ ತಯಾರಾಗುತ್ತಿದ್ದ ಮೈಸೂರು ಸ್ಯಾಂಡಲ್ ಸೋಪ್ ನಿರ್ಮಾಣಕ್ಕೆ ಆಸ್ಟ್ರೇಲಿಯಾದಿಂದ ಕುರಿಗಳ ಕೊಬ್ಬು(=sheep tallow) ಆಮದಾಗುತ್ತಿತ್ತು!
ನಾವು ಸ್ವದೇಶಿ ನಿರ್ಮಿತಿ ಎಂದು ತಿಳಿದ ಸಾಬೂನಿನ ಬೆಲೆಯ ಬಹುಭಾಗವು ಬ್ರಿಟಿಶ್ ಕೊಲೊನಿ ಆಸ್ಟ್ರೇಲಿಯಾದ ಉದ್ಧಾರಕ್ಕಾಗಿ ಹೋಗುತ್ತಿತ್ತು ಎನ್ನುವದನ್ನು ಗಮನಿಸಿದಾಗ ಭಾರತದ ಆರ್ಥಿಕ ಶೋಷಣೆಯ ಕಲ್ಪನೆ ಬಂದೀತು.

ಇವೆಲ್ಲ ವಿಚಾರಗಳು ಆರ್ಥಿಕ ಪಂಡಿತರಿಗೇ ತಿಳಿದಿರಲಿಲ್ಲ.
ಅಲ್ಲದೆ ರಾಜಕಾರಣ ಹಾಗು ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದ ಘಟಾನುಘಟಿಗಳೂ ಸಹ ಬ್ರಿಟಿಶ್ ಪ್ರಭುತ್ವವನ್ನು ಒಪ್ಪಿಕೊಂಡಿದ್ದರು.
ಅಂದ ಮೇಲೆ ಶರೀಫರೂ ಸಹ ಅಂತಹದೇ ಅಭಿಪ್ರಾಯ ಹೊಂದಿದ್ದರೆ ಆಶ್ಚರ್ಯವಾಗಬಾರದು.]

Saturday, November 29, 2008

ಬಿದ್ದೀಯಬೆ ಮುದುಕಿ

ಶರೀಫರ ಹಾಡಿನ ಪೂರ್ತಿಪಾಠ ಹೀಗಿದೆ:

ಬಿದ್ದೀಯಬೆ ಮುದುಕಿ
ನೀ ದಿನ ಹೋದಾಕಿ ಬಲು ಜೋಕಿ
ಬಿದ್ದೀಯಬೆ ಮುದುಕಿ ||ಪ||

ಸದ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದೀಯಬೆ ಮುದುಕಿ ||೧||

ಬುಟ್ಟಿಯೊಳು ಪಟ್ಟೇವನಿಟ್ಟಿ
ಉಟ್ಟರದನ ಚೀಲ ಜೋಕಿ
ಕೆಟ್ಟ ಗಂಟಿಚೌಡೇರ ಬಂದು
ಕತ್ತರಿಸಿಕೊಂಡು ಹೋದಾರ ಮುದುಕಿ
ಬಿದ್ದೀಯಬೆ ಮುದುಕಿ ||೨||

ಶಿಶುನಾಳಧೀಶನ ಮುಂದೆ
ಕೊಸರಿ ಕೊಸರಿ ಹೋಗದಿರು
ಹಸನವಿಲ್ಲ ಹರೆಯವು ಮೀರಿದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬಿದ್ದೀಯಬೆ ಮುದುಕಿ ||೩||

ಶರೀಫರು ೧೯ನೆಯ ಶತಮಾನದ ಹಳ್ಳಿಗಾಡಿನಲ್ಲಿ ಬೆಳೆದವರು.
ಅದಾಗಲೇ, ಧಾರವಾಡದ ಸುತ್ತಮುತ್ತಲಿನ ಪ್ರದೇಶವೆಲ್ಲ ಬ್ರಿಟಿಶರ ಆಡಳಿತಕ್ಕೆ ಒಳಪಟ್ಟಿತ್ತು.
ಹತ್ತಿಯ ಗಿರಣಿ, ರೇಲವೇ ಮೊದಲಾದ ಆಧುನಿಕ ಯಾಂತ್ರಿಕ ಸೌಕರ್ಯಗಳು ಆಗತಾನೇ ಪ್ರಾರಂಭವಾಗಿದ್ದವು.

ಶರೀಫರು ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆಲಕಾಲ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದರು.
ಆದರೆ ಇವರ ಮನೋಧೋರಣೆಗೆ ನೌಕರಿಯು ಒಗ್ಗದ ವಿಷಯವಾಗಿತ್ತು.
ಅದನ್ನೂ ಬಿಟ್ಟುಕೊಟ್ಟು,ಹಳ್ಳಿ ಹಳ್ಳಿ ತಿರುಗುತ್ತ, ಪಾರಮಾರ್ಥಿಕ ಚಿಂತನೆಯಲ್ಲಿಯೇ ಕಾಲ ಕಳೆಯತೊಡಗಿದರು.

ನಿಷ್ಠುರ ಸ್ವಭಾವದ ಶರೀಫರು ತಮಗೆ ಸರಿಕಾಣದ ಯಾವುದನ್ನು ಕಂಡರೂ ತಕ್ಷಣವೇ ಟೀಕಿಸುತ್ತಿದ್ದರು.
ತಮ್ಮ ಸಮಕಾಲೀನರಾದ ನವಲಗುಂದದ ಅಜಾತ ನಾಗಲಿಂಗಸ್ವಾಮಿಗಳು ಪಲ್ಲಕ್ಕಿಯಲ್ಲಿ ಕುಳಿತು ಹೋಗುತ್ತಿದ್ದಾಗ,
“ ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ
ನಾಗಲಿಂಗಯೋಗಿ ತಾನು ತಿರುಗುವದ್ಯಾತಕೆ”
ಎಂದು ಛೇಡಿಸಿದ್ದರು.

ಶರೀಫರ ಹಾಡುಗಳೂ ಸಹ ಹಳ್ಳಿಗರ ಹಾಡುಗಳೇ.
ಅದರಲ್ಲಿ ಶಿಷ್ಟಭಾಷೆಯ ಬಳಕೆ ಇಲ್ಲ.
ಸಹಜಸ್ಫೂರ್ತಿಯಿಂದ, ಹೃದಯದಿಂದ ಹೊರಹೊಮ್ಮಿದ ಹಾಡುಗಳು ಇವು.
ಅನೇಕ ವೇಳೆ ತಮ್ಮ ಕಣ್ಣೆದುರಿನಲ್ಲಿ ಕಂಡ ಘಟನೆಯಿಂದ ಈ ಹಾಡುಗಳು ಪ್ರೇರಿತವಾಗಿವೆ.
ಅಂತಹ ಹಾಡುಗಳಲ್ಲಿ ಒಂದು : “ಬಿದ್ದೀಯಬೆ ಮುದುಕಿ”.

ಹುಲಗೂರು ಇದು ಶಿಗ್ಗಾವಿ ತಾಲೂಕಿನಲ್ಲಿರುವ ಒಂದು ಹಳ್ಳಿ.
ಹಜರತ್ ಶಾ ಖಾದರಿ ಎನ್ನುವ ಸಂತರ ಗೋರಿ ಇಲ್ಲಿದ್ದು ಇದು ಮುಸಲ್ಮಾನರಿಗೆ ಯಾತ್ರಾ ಸ್ಥಳವಾಗಿದೆ.
ಪ್ರತಿ ರವಿವಾರ ಈ ಹಳ್ಳಿಯಲ್ಲಿ ಸಂತೆ ನಡೆಯುತ್ತಿತ್ತು.
ಇಂತಹ ಒಂದು ಸಂತೆಯಲ್ಲಿ ಶರೀಫರು ಒಬ್ಬ ಮುದುಕಿಯನ್ನು ನೋಡುತ್ತಾರೆ.
ವಯಸ್ಸಿಗೆ ಸಹಜವಾದ ಪಕ್ವತೆಯನ್ನು ತೋರದ ರೀತಿಯಲ್ಲಿ ಆ ಮುದುಕಿ ವ್ಯವಹರಿಸುವದನ್ನು ಕಂಡು ಶರೀಫರಿಗೆ ಬೇಸರವಾಗಿರಬಹುದು.
ಆಗ ಶರೀಫರು ಮುದುಕಿಗೆ ಎಚ್ಚರ ಕೊಡುವ ಧಾಟಿಯಲ್ಲಿ ಹಾಡುತ್ತಾರೆ:
“ಬಿದ್ದೀಯಬೇ ಮುದುಕಿ
ನೀ ದಿನ ಹೋದಾಕಿ ಬಲು ಜೋಕಿ!”

“ನೀನು ವಯಸ್ಸಾದ ಮುದುಕಿ, ನೀನು ಬಿದ್ದರೆ ಒಳ್ಳೆ ಪೆಟ್ಟು ತಿನ್ನುತ್ತೀ.
ಏಕೆ ಇಂತಹ ಅಸಹಜ ಹಾರಾಟ ನಿನ್ನದು?
ಮನೆಯಲ್ಲಿ ಕೂಡುವದನ್ನು ಬಿಟ್ಟು ಈ ಸಂತೆಗೆ ಏಕೆ ಬಂದೆ?
ಈ ಗದ್ದಲದಲ್ಲಿ ನೀನು ಬಿದ್ದರೆ ನಿನ್ನನ್ನು ಕೇಳುವವರು ಯಾರೂ ಇಲ್ಲ.
ಎಂತಹ ಬುದ್ಧಿಗೇಡಿ ಮುದುಕಿಯಾಗಿರುವೆ ನೀನು” ಎಂದು ಶರೀಫರು ಅವಳನ್ನು ಬೈಯುತ್ತಾರೆ.
“ಸದ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದೀಯಬೆ ಮುದುಕಿ”

ಈ ಮುದುಕಿಯು ಬಲು ಒಯ್ಯಾರದ ಮುದುಕಿ.
ತನ್ನ ಬುಟ್ಟಿಯಲ್ಲಿ ಜರದ ಪಟ್ಟೆಯ ಸೀರೆಯನ್ನು ಇಟ್ಟುಕೊಂಡು ಬಂದಿದ್ದಾಳೆ.
(ಪಟ್ಟಿ ಎಂದರೆ ರೇಶಮೆ ಸೀರೆ ಎನ್ನುವ ಅರ್ಥವೂ ಇದೆ.)
ಸಂತೆಯಲ್ಲಿ ನೆರೆದವರ ಎದುರಿಗೆ ತನ್ನ ಪಟ್ಟೆಯ ಸೀರೆಯನ್ನು ಉಟ್ಟುಗೊಂಡು ಜಂಭ ಪಡಬೇಕೆನ್ನುವದು ಅವಳ ಆಸೆ.
ಆದರೆ ಇವಳು ಸೀರೆಯನ್ನು ತೆಗೆಯುವ ಹೊತ್ತಿನಲ್ಲಿ ಗಂಟಿಚೌಡೇರು (=ಗಂಟುಕಳ್ಳರು) ಇವಳ ಚೀಲವನ್ನೇ ಕತ್ತರಿಸಬಹುದಲ್ಲ!
ಅದಕ್ಕಾಗಿಯೇ ಶರೀಫರು ಎಚ್ಚರಿಕೆ ನೀಡುತ್ತಾರೆ:
“ಬುಟ್ಟಿಯೊಳು ಪಟ್ಟೇವನಿಟ್ಟಿ
ಉಟ್ಟರದನ ಚೀಲ ಜೋಕಿ
ಕೆಟ್ಟ ಗಂಟಿಚೌಡೇರ ಬಂದು
ಕತ್ತರಿಸಿಕೊಂಡು ಹೋದಾರ ಮುದುಕಿ”

ಶರೀಫರು ಸಂತೆಯ ರೂಪಕವನ್ನು ಸಂಸಾರಕ್ಕೆ ಹೋಲಿಸುತ್ತ , ಈ ಸಂಸಾರಕ್ಕೆ ಬಂದ ಎಲ್ಲ ಜೀವಿಗಳಿಗೂ ಎಚ್ಚರಿಕೆ ನೀಡುತ್ತಿದ್ದಾರೆ.
ಸಂತೆಯಲ್ಲಿ ಹೇಗೊ, ಹಾಗೆಯೇ ಸಂಸಾರದಲ್ಲೂ ಸಹ, ಜೀವಿಯು ಎಚ್ಚರದಿಂದ ಇರಬೇಕು.
ಇಲ್ಲಿ ಜಾರಿ ಬಿದ್ದರೆ ಎಬ್ಬಿಸಲು ಯಾರೂ ಸಹಾಯ ಮಾಡುವದಿಲ್ಲ.
ಪೂರ್ವಜನ್ಮದ ಪುಣ್ಯದಿಂದಾಗಿ(= ತಲೆಯ ಮೇಲಿನ ಬುಟ್ಟಿ), ಈ ಜನ್ಮದಲ್ಲಿ ಇವಳಿಗೆ ಒಂದಿಷ್ಟು ಭೋಗ (=ಪಟ್ಟೆ ಸೀರೆ) ದೊರಕಿದೆ.
ಆದರೆ, ಇಳಿವಯಸ್ಸಾದರೂ ಸಹ ಸಂಸಾರದಲ್ಲಿಯೇ ಮಗ್ನರಾಗಿ, ತನ್ನ ದೊಡ್ಡಸ್ತಿಕೆಯನ್ನೇ ಮೆರೆಯುತ್ತ ಹೋದರೆ, ತಮ್ಮಲ್ಲಿರುವ ಈ ಜನ್ಮದ ಯತ್ಕಿಂಚಿತ್ ಪುಣ್ಯಬಲವೂ(=ಕೈಯಲ್ಲಿಯ ಚೀಲ) ಸಹ ಗಂಟುಕಳ್ಳರ(=ಪುಣ್ಯದಿಂದ ದೊರೆಯುವ ಫಲಗಳು) ಮೂಲಕ ಮಾಯವಾಗುವದು.

ಅದಕ್ಕಾಗಿ, ಮನಸ್ಸನ್ನು ದೇವರಲ್ಲಿ ಇಡಬೇಕೆ ಹೊರತು ಸಂಸಾರದ ವಾಸನೆಗಳಲ್ಲಿ ಅಲ್ಲ.
ಇದನ್ನು ತಿಳಿಯದ ಜೀವಿಯು ಪಿಸರುಗಣ್ಣಿನ, ಪಿಚ್ಚುಗಣ್ಣಿನ ಮುದುಕಿ ಇದ್ದಂತೆ.
ಅವಳಿಗೆ ಹಸನಾದ(=clear) ದೃಷ್ಟಿಯು ಇಲ್ಲ.
ಅಲ್ಲದೆ, ಸಾಧನೆಯನ್ನು ಕೈಕೊಳ್ಳುವ ವಯಸ್ಸೂ ಸಹ ಉಳಿದಿಲ್ಲ.
ಆದುದರಿಂದ, ಮನಸ್ಸನ್ನು ದೇವರ ಕಡೆಗೆ ತಿರುಗಿಸಿ ಜನ್ಮ ಸಾರ್ಥಕ ಮಾಡಿಕೊಳ್ಳುವದೇ ಲೇಸು.

“ಶಿಶುನಾಳಧೀಶನ ಮುಂದೆ
ಕೊಸರಿ ಕೊಸರಿ ಹೋಗದಿರು
ಹಸನವಿಲ್ಲ ಹರೆಯವು ಮೀರಿದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬಿದ್ದೀಯಬೇ ಮುದುಕಿ ||”

ಮುದುಕಿಯ ರೂಪಕದಿಂದ ಶರೀಫರು ನಮಗೆಲ್ಲರಿಗೂ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.

Sunday, November 23, 2008

ಎಲ್ಲರಂಥವನಲ್ಲ ನನ ಗಂಡ

ಶರೀಫರ ಹಾಡಿನ ಪೂರ್ತಿಪಾಠ ಹೀಗಿದೆ:

ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ ||ಪಲ್ಲ||

ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ ||ಅ.ಪ.||

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ ||೧||

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ
ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ
ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ ||೨||

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ ||೩||

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ
ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ ||೪||

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ ||೫||
………………………………………………………………………
ಭಕ್ತಿಮಾರ್ಗದಲ್ಲಿ ಭಕ್ತ ಮತ್ತು ಭಗವಂತನ ನಡುವೆ ಐದು ಬಗೆಯ ಸಂಬಂಧಗಳನ್ನು ಗುರುತಿಸಲಾಗಿದೆ:
೧) ದಾಸ ಭಾವ
೨) ಸಖ್ಯ ಭಾವ
೩) ಮಧುರ ಭಾವ
೪) ವಾತ್ಸಲ್ಯ ಭಾವ
೫) ವಿರೋಧ ಭಾವ

ಭಕ್ತಿಮಾರ್ಗದ ಸಾಧಕರು ಈ ಎಲ್ಲ ಪಥಗಳಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ.
ಶರೀಫರ ಹಾಡುಗಳಲ್ಲಿ ಸಹ ಈ ವಿಭಿನ್ನ ಪ್ರಕಾರಗಳ ವರ್ಣನೆಯನ್ನು ಕಾಣಬಹುದು.

“ಎಲ್ಲರಂಥವನಲ್ಲ ನನ ಗಂಡ” ಎನ್ನುವ ಹಾಡಿನಲ್ಲಿ ಶರೀಫರು ಪರಮಾತ್ಮನನ್ನು ಪತಿಗೆ ಹಾಗೂ ಜೀವಾತ್ಮರಾದ ತಮ್ಮನ್ನು ಸತಿಗೆ ಹೋಲಿಸಿಕೊಂಡು ಹಾಡಿದ್ದಾರೆ.
ಮಧುರ ಭಕ್ತಿಯ ಈ ಸಾಧನಾಮಾರ್ಗದಲ್ಲಿ ತಮಿಳುನಾಡಿನ ಆಂಡಾಳ್, ಕರ್ನಾಟಕದ ಅಕ್ಕ ಮಹಾದೇವಿ ಹಾಗೂ ರಾಜಸ್ಥಾನದ ಮೀರಾಬಾಯಿ ಪ್ರಸಿದ್ಧರಾಗಿದ್ದಾರೆ.
ವೀರಶೈವ ದರ್ಶನದಲ್ಲಿಯೂ ಸಹ “ ಶರಣ ಸತಿ, ಲಿಂಗ ಪತಿ” ಎನ್ನುವದು ಸುಪ್ರಸಿದ್ಧವಾದ ಹೇಳಿಕೆಯೇ ಆಗಿದೆ.
ಆಧುನಿಕ ಕಾಲದಲ್ಲಿ ಮಧುರಚೆನ್ನರೂ ಸಹ ಸಾಧನೆಯ ಪಥದಲ್ಲಿ ಪರಮಾತ್ಮನನ್ನು ತಮ್ಮ “ನಲ್ಲ” ಎಂದು ಗ್ರಹಿಸಿ ಬರೆದ “ನನ್ನ ನಲ್ಲ” ಕಾವ್ಯವು ಕನ್ನಡದ ಅದ್ಭುತ ಕಾವ್ಯಗಳಲ್ಲೊಂದಾಗಿದೆ.

ಶರೀಫರ ಕವನ ಪ್ರಾರಂಭವಾಗುವದು ತಮ್ಮ ಗಂಡನ ಬಗೆಗೆ ಅವರಿಗಿರುವ ಬೆರಗು ಹಾಗು ಮೆಚ್ಚುಗೆಯ ಸಾಲುಗಳಿಂದ:
“ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ”

ಈತ ಬಲ್ಲಿದನಾದ ಗಂಡ ಎಂದು ಇವನ ಹೆಂಡತಿಗೆ ಅಭಿಮಾನವಿದೆ.
ಯಾತರಲ್ಲಿ ಬಲ್ಲಿದ?
ತನ್ನ ಹೆಂಡತಿಯನ್ನು ತನಗೆ ಬೇಕಾದಂತೆ ತಿದ್ದುವದರಲ್ಲಿ ಈತ ಬಲ್ಲಿದ, ಅಂದರೆ ಜಾಣ!
ಅಷ್ಟೇ ಅಲ್ಲ. ಅವಳನ್ನು ಪರಿವರ್ತಿಸುವ ಈ ಕಾರ್ಯವನ್ನು ಆತ ‘ಪುಂಡ’ತನದಿಂದ, agressively ಮಾಡುತ್ತಾನೆ.
ಹೆಂಡತಿಗೆ ಈ ವಿಷಯದಲ್ಲಿ ಸ್ವಲ್ಪವೂ ಸ್ವಾತಂತ್ರ್ಯ ಎನ್ನುವದಿಲ್ಲ.
ಆದರೆ ಅವಳಿಗೆ ಅಸಮಾಧಾನವೂ ಇಲ್ಲ.
ಇದರಲ್ಲಿ ತನ್ನ ಹಿತವೇ ಇದೆ ಎಂದು ಅರಿತ ಅವಳು ಗಂಡನ ಇಂತಹ ವರ್ತನೆಯನ್ನು ಮೆಚ್ಚಿಕೊಂಡಿದ್ದಾಳೆ.

ತನ್ನ ಗಂಡನಾದ ಪರಮಾತ್ಮ ಯಾವ ರೀತಿಯಲ್ಲಿ ತನ್ನನ್ನು ತಿದ್ದಿದ ಎಂದು ಶರೀಫರು ಹೀಗೆ ಹೇಳುತ್ತಾರೆ.
ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ ||

ಹೊಸದಾಗಿ ಮದುವೆಯಾದ ಹೆಂಡತಿ (--ಹಳೆಯ ಸಾಂಪ್ರದಾಯಕ ಸಮಾಜದಲ್ಲಿ ಎನ್ನುವದನ್ನು ನೆನಪಿನಲ್ಲಿ ಇಟ್ಟುಕೊಳ್ಳಿರಿ—) ತನ್ನ ಪತಿಯೊಡನೆ ತನ್ನ ಚಿಕ್ಕ ಪುಟ್ಟ ಬಯಕೆಗಳನ್ನು ಹೇಳಿಕೊಳ್ಳಲು ಬಯಸುತ್ತಾಳೆ. ಅವಳಿಗೆ ಬಾಯಿ ತೆರೆಯಲೇ ಅವಕಾಶ ಕೊಡದಂತೆ, ಈ ಪುಣ್ಯಾತ್ಮ ಮಾತು ಮಾತಿಗೆ (=ಸೊಲ್ಲು ಸೊಲ್ಲಿಗೆ) ಇವಳನ್ನು ಬಯ್ಯುತ್ತಾನೆ. ಇವಳು ಮನೆಯ ಬಿಟ್ಟು ಹೊರಗೆ ಕಾಲಿಡಬಾರದೆನ್ನುವ ಉದ್ದೇಶದಿಂದ ಅವಳ ಕಾಲನ್ನೇ ಮುರಿದು ಬಿಟ್ಟಿದ್ದಾನೆ.

ಶರೀಫರು ಹೊಸದಾಗಿ ಪರಮಾತ್ಮನ ಜೊತೆ ಮದುವೆಯಾಗಿದ್ದಾರೆ.
ತನ್ನಂತಹ ನೆರೆಹೊರೆಯವರೊಡನೆ ಮಾತನಾಡುವ ಹಾಗು ತನ್ನ ಸಂಸಾರದ ದೊಡ್ಡಸ್ತನವನ್ನು ಹೆಮ್ಮೆಯಿಂದ ಹೇಳಿಕೊಂಡು, ಬೀಗುವ ಮನಸ್ಸು ಈ ಹೆಂಡತಿಗೆ ಇದೆ.
ಆದರೆ ಮನೆಯ ಯಜಮಾನನಿಗೆ ಇದು ಬಿಲ್ಕುಲ್ ಬೇಕಾಗಿಲ್ಲ.
ಸರಿ, ಆತ ಇವಳ ಕಾಲನ್ನೇ ಮುರಿದು ಬಿಟ್ಟ.
ಆಧ್ಯಾತ್ಮಿಕ ಅರ್ಥದಲ್ಲಿ ಹೇಳುವದಾದರೆ, ತನ್ನ ಸರಿಕರಾದ ಇತರ ಕೆಲವು ಸಂತರಿಗೆ (ಉದಾ: ಅಜಾತ ನಾಗಲಿಂಗ ಸ್ವಾಮಿಗಳಿಗೆ) ಬಂದಂತಹ ದೊಡ್ಡಸ್ತಿಕೆ ಹಾಗು ಪ್ರಸಿದ್ಧಿ ಶರೀಫರಿಗೆ ಬರದಂತೆ, ಆ ಪರಮಾತ್ಮ ನೋಡಿಕೊಂಡ.
ಇದು ಹೆಂಡತಿಗೂ ಒಪ್ಪಿಗೆಯಾದ ಸಂಗತಿಯೇ!

ಇಷ್ಟಾದ ಮೇಲೆ ಇಂತಹ ಸುಗುಣ ಸಂಪನ್ನ ಗಂಡನೊಡನೆ ತನ್ನ ಒಗೆತನ ಹೇಗೆ ಪ್ರಾರಂಭವಾಯಿತೆಂದು ಶರೀಫರು ಹೇಳುತ್ತಾರೆ:

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ||

ಶರೀಫರಿಗೆ ಇನ್ನೂ ಆಧ್ಯಾತ್ಮದ ಗಂಧ ಬಡೆದಿರಲಿಲ್ಲ.
ಅವರು ತಮ್ಮ ತಂದೆ ತಾಯಿಯ ಮನೆಯಲ್ಲಿ, ಅಂದರೆ ವಿಷಯ ಭಾವನೆ ತುಂಬಿದ ಸಂಸಾರದಲ್ಲಿಯೇ ಇದ್ದರು.
ಅವರಿಗೆ ಮೂವರು ಪ್ರೀತಿಯ ಗೆಳೆಯರು.
ಈ ಮೂವರೆಂದರೆ, ಪ್ರತಿಯೊಂದು ಜೀವಿಗೆ ಸಂಚಲನೆ ನೀಡುವ ಮೂರು ಗುಣಗಳು:
(೧) ತಮಸ್ (೨) ರಜಸ್ ಹಾಗು (೩) ಸತ್ವ
ಪ್ರತಿ ಜೀವಿಯ ಜನ್ಮಾಂತರಗಳಲ್ಲಿ ತಮೋಗುಣ ಕಡಿಮೆಯಾಗುತ್ತ, ಸತ್ವಗುಣ ಅಧಿಕವಾಗುತ್ತ ಹೋಗಬೇಕು.

ಅದಲ್ಲದೆ ಅವರ ಮೂರು ಪ್ರಕಾರದ ಕರ್ಮಗಳು ಅವರನ್ನು ಬೆಂಬತ್ತಿವೆ:
(೧) ಸಂಚಿತ (೨) ಪ್ರಾರಬ್ಧ ಹಾಗೂ (೩) ಆಗಾಮಿ

(ಟಿಪ್ಪಣಿ:
ಈ ಗುಣಗಳ ಮಿಶ್ರಣಕ್ಕೆ ಸರಿಹೋಗುವಂತೆ ಹಾಗೂ ಕರ್ಮಗಳಿಗೆ ಅನುಸಾರವಾಗಿ ಪ್ರತಿ ಜೀವಿಗೆ ಒಂದು ದೇಹ ದೊರಕುತ್ತದೆ.
‘ಗಣಪತಿ ಅಥರ್ವ ಶೀರ್ಷ’ದಲ್ಲಿ ಬರುವ ಈ ಸಾಲನ್ನು ಗಮನಿಸಿರಿ:
“ತ್ವಂ ಗುಣತ್ರಯಾತೀತಃ, ತ್ವಂ ದೇಹತ್ರಯಾತೀತಃ, ತ್ವಂ ಕಾಲತ್ರಯಾತೀತಃ”
ಗಣಪತಿಯು ಸತ್ವ, ರಜಸ್ ಹಾಗೂ ತಮಸ್ ಎನ್ನುವ ಮೂರೂ ಗುಣಗಳಿಗೆ ಅತೀತನಾಗಿರುವದರಿಂದ ಅವನು ಮೂರೂ ದೇಹಗಳಿಗೆ (=ಸ್ಥೂಲ, ಸೂಕ್ಷ್ಮ ಹಾಗೂ ಕಾರಣದೇಹಗಳಿಗೆ) ಅತೀತನಾಗಿದ್ದಾನೆ.
ದೇಹವಿಲ್ಲದವನಿಗೆ ಕಾಲವೆಲ್ಲಿಯದು?
ಆ ಕಾರಣದಿಂದ ಆತನು ಭೂತ, ವರ್ತಮಾನ ಹಾಗೂ ಭವಿಷ್ಯತ್ ಎನ್ನುವ ಮೂರು ಕಾಲಗಳಿಗೂ ಸಹ ಅತೀತನಾಗಿದ್ದಾನೆ.
ದೇಹ ಹಾಗೂ ಕಾಲಗಳಿಂದ ಬದ್ಧನಾಗದವನಿಗೆ ಕರ್ಮಬಂಧನವೆಲ್ಲಿಯದು?
ಹಾಗಾಗಿ ಪರಮಾತ್ಮನಿಗೆ ಕರ್ಮಬಂಧನವಿಲ್ಲ.)

ಈ ರೀತಿಯಾಗಿ ಶರೀಫರು ತಮ್ಮ ಮೂರು ಗುಣಗಳೊಡನೆ ಪ್ರೀತಿಯಿಂದ ಇರುತ್ತಿರಲು, ಈ ಗುಣಗಳಲ್ಲಿ ಸತ್ವಗುಣವೇ ಅಧಿಕವಾಗಿದ್ದರಿಂದ, ಅವರು ಮೈನೆರೆಯುವ ಸಮಯ ಬಂದಿತು.
ಅರ್ಥಾತ್, ಈ ವಿಷಯ ಸಂಸಾರವನ್ನು ಬಿಟ್ಟು, ಆಧ್ಯಾತ್ಮಿಕ ಸಂಸಾರ ಹೂಡುವ ಅವಸ್ಥೆ ಅವರಿಗೆ ಪ್ರಾಪ್ತವಾಯಿತು.
ಅದೂ ಹೇಗೆ? ಮಾಯದಿಂದ ಅಂದರೆ ಅವರಿಗೇ ಅರಿವಾಗದಂತೆ!
ಆದರೆ ಚಿಕ್ಕ ಹುಡುಗಿಯೊಬ್ಬಳು ಮದುವೆಯಾಗುವಾಗ ಸಂಭ್ರಮದ ಜೊತೆಗೇ ಹೆದರಿಕೆಯನ್ನೂ ಅನುಭವಿಸುತ್ತಾಳೆ.
ಅದಕ್ಕಾಗಿಯೇ ಶರೀಫರು,
“ಘಾತವಾಯಿತು ಯವ್ವನವು ಬರಲು”
ಎಂದು ಹೇಳುತ್ತಾರೆ.

ಶರೀಫರಿಗೇನೊ ಸ್ವಲ್ಪ apprehension ಇರಬಹುದು.
ಆದರೆ ತನಗೆ ತಕ್ಕ ಕನ್ಯೆಯನ್ನು ಶೋಧಿಸುತ್ತಿರುವ ವರಮಹಾಶಯ ಸುಮ್ಮನೇ ಕೂತಾನೆ?
‘ವೆಂಕಟೇಶ ಕಲ್ಯಾಣ’ದಲ್ಲಿ ವೆಂಕಟೇಶನು ಮದುವೆಯ ಪ್ರಸ್ತಾಪಕ್ಕಾಗಿ ತಾನೇ ದೂತೆಯಾಗಿ ಕೊರವಂಜಿಯ ವೇಷದಲ್ಲಿ ಬಂದದ್ದನ್ನು ನೆನಪಿಸಿಕೊಳ್ಳಿರಿ.
ಅದೇ ರೀತಿಯಾಗಿ, ಪರಮಾತ್ಮನೂ ಸಹ ಈ ಕನ್ಯೆಯೊಡನೆ ಮದುವೆಯಾಗಲು ಗುರುರೂಪದಲ್ಲಿ ಬರುತ್ತಾನೆ.
ಆ ಗುರುವೇ ಗೋವಿಂದ ಭಟ್ಟರು.

ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ||

ಗುರು ಗೋವಿಂದ ಭಟ್ಟರು ಶರೀಫರ ಮದುವೆಯನ್ನು ಪರಮಾತ್ಮನ ಜೊತೆಗೆ ಮಾಡಿದ್ದಷ್ಟೇ ಅಲ್ಲ, ಶೋಭನ ಶಾಸ್ತ್ರವನ್ನೂ ಸಹ ಮಾಡಿದರು.
ಪರಮಾತ್ಮನೊಡನೆ ಮೈಹೊಂದಿಕೆಯನ್ನು ಮಾಡಿಸಿಕೊಟ್ಟರು.
ಪರಮಾತ್ಮ ಹಾಗೂ ಶರೀಫರು ಪ್ರೀತಿಯಲ್ಲಿ ಒಂದಾದರು.

ಈ ವರ್ಣನೆಯು ಗುರು ಗೋವಿಂದ ಭಟ್ಟರು ಶಕ್ತಿಪಾತದ ಮೂಲಕ ಶರೀಫರಲ್ಲಿ ಕುಂಡಲಿನಿಯನ್ನು ಜಾಗೃತಗೊಳಿಸಿದುದರ ಸೂಚನೆಯಾಗಿದೆ.

ಇದೀಗ ಶರೀಫರ ಹೊಸ ಸಂಸಾರ (ಪರಮಾತ್ಮನೊಡನೆ) ಪ್ರಾರಂಭವಾಯಿತು.
ಸರಿ, ಶರೀಫರ ತವರು ಮನೆಯ ಸುದ್ದಿಯೇನು?
ಹೊಸ ಗಂಡ ಈ ವಿಷಯದಲ್ಲಿ ತುಂಬಾ possessive.
ಶರೀಫರಿಗೆ ಅರಿಷಡ್ವರ್ಗವೆನ್ನುವ ಆರು ಮಂದಿ ಅಕ್ಕ ತಂಗಿಯರಿದ್ದರು.
(ಕಾಮ, ಕ್ರೋಧ, ಮೋಹ, ಲೋಭ, ಮದ ಹಾಗು ಮಾತ್ಸರ್ಯ.)
ಅಲ್ಲದೆ ಅವರಿಗೆ ಐದು ಜನ ಪ್ರಿತಿಯ ಸೋದರರು.
(ಐದು ಕರ್ಮೇಂದ್ರಿಯಗಳು ಹಾಗು ಅವಕ್ಕೆ ಪೂರಕವಾದ ಐದು ಜ್ಞಾನೇಂದ್ರಿಯಗಳು:
ಕಣ್ಣು-ನೋಟ, ಕಿವಿ-ಶ್ರವಣ, ಮೂಗು-ವಾಸನೆ, ನಾಲಗೆ-ರುಚಿ, ಚರ್ಮ-ಸ್ಪರ್ಶ).
ಅವರೆಲ್ಲರನ್ನೂ ಈತ ಅಗಲಿಸಿಯೇ ಬಿಟ್ಟ.
ಅಂದರೆ, ಈ ಸಾಧನಗಳು ಅವರನ್ನು ವಿಷಯ ಸಂಸಾರಕ್ಕೆ ಎಳೆಯಲು ಸಾಧ್ಯವಾಗಲಿಲ್ಲ.

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ

ತನ್ನ ಹೆಂಡತಿ ತನ್ನ ನೆದರನ್ನು(=ನಜರನ್ನು, ನೋಟವನ್ನು) ಎಲ್ಲೂ ಹೊರಳಿಸಕೂಡದು;
ಅವಳು ತನ್ನನ್ನೇ ಸದಾಕಾಲ ನೋಡುತ್ತಿರಬೇಕು ಎನ್ನುವದು ಈ ಗಂಡನ ಅಭಿಲಾಶೆ.
ಹಾಗೆಂದು ಇದರಲ್ಲಿ ಆತನ ಬಲವಂತಿಕೆಯೇನಿಲ್ಲ.
ಅವನ ಆಟಕ್ಕೆ ಇವಳೇ ಮರುಳಾಗಿದ್ದಾಳೆ.

ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ||

ಪರಮಾತ್ಮನ ಜೊತೆಗಿನ ಸಂಸಾರದ ಸುಖವನ್ನು ಶರೀಫರು ಹೀಗೆ ಬಣ್ಣಿಸುತ್ತಾರೆ:

ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ ||

ಈ ಸಾಲುಗಳು ಆಧ್ಯಾತ್ಮಿಕ ಅನುಭವವನ್ನು ಸೂಚಿಸುತ್ತಿದ್ದು, ಅವುಗಳ ಅರ್ಥ ಆಧ್ಯಾತ್ಮಸಿದ್ಧಿ ಪಡೆದವನಿಗೆ ಮಾತ್ರ ಗೊತ್ತಾದೀತು.
(ಬಲ್ಲವನೇ ಬಲ್ಲ ಬೆಲ್ಲದ ಸವಿಯ!)
ಪರಮಾತ್ಮನು ತನ್ನ ಸಾಮರಸ್ಯದ ಸುಖವನ್ನು ಕೊಡುವದಲ್ಲದೇ, ತಾನು ಜಗಿದ ತಾಂಬೂಲದ ರಸದ ಗುಟುಕನ್ನು ಶರೀಫರ ಬಾಯಿಯಲ್ಲಿ ಅಕ್ಕರತೆಯಿಂದ ಇಡುತ್ತಿದ್ದಾನೆ.
ಅಂದರೆ ಪರಮಾತ್ಮನು ಪ್ರೇಮವನ್ನಲ್ಲದೆ, ಪೋಷಣೆಯನ್ನೂ(=ಜ್ಞಾನವನ್ನೂ) ಸಹ ನೀಡುವನು.
ಅಕ್ಕರತಿಯಿಂದ ಎನ್ನುವ ವಿಶೇಷಣವನ್ನು ಗಮನಿಸಿರಿ.
ಇದು ಗಂಡ ಹೆಂಡತಿಯ ಪ್ರೇಮಕ್ಕಿಂತ ಹೆಚ್ಚಾಗಿ ಪೋಷಕ-ಪೋಷಿತ ಭಾವವನ್ನು ತೋರಿಸುವದು.
ಆದುದರಿಂದ ಶರೀಫರು ಪರಮಾತ್ಮನಿಗೆ ‘ಬಹು ಸುಗುಣನೀತಾ’ ಎಂದು ಕರೆದಿದ್ದಾರೆ.

ಹೆಂಡತಿಗೆ ಅಚ್ಛಚ್ಛೆ ಮಾಡಿದರೆ ಸಾಕೆ?
ಈ ಚಿಕ್ಕ ಹುಡುಗಿಗೆ ಒಳ್ಳೆಯ ರೀತಿಯಲ್ಲಿ ಬದುಕು ಮಾಡುವದನ್ನು ಕಲಿಸಬೇಡವೆ?
ಪರಮಾತ್ಮನು ಶರೀಫರು ಎನ್ನುವ ತನ್ನ ಹೊಸ ವಧುವಿಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಿದನೆನ್ನುವದನ್ನು ನೋಡಿರಿ:

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ ||

ಪರಮಾತ್ಮನೇನೊ ಈ ಚಿಕ್ಕ ಹೆಂಡತಿಗೆ ಮನೆಯ ಮಾಡಿ ಕೊಟ್ಟ.
ಗಂಡನಿಲ್ಲದ ವೇಳೆ ಈಕೆ ಮನೆಯ ಹೊರಗೆ ಹೋಗಬಹುದಲ್ಲವೆ?
ಸರಿ, ಹೊರಗೆ ಹೋಗದಂತೆ ಅವಳ ಸೊಂಟವನ್ನೆ ಮುರಿದು ಬಿಟ್ಟ.
ಅವಳು ಹೋಗದಿದ್ದರೇನು?
ಅವಳನ್ನು ಭೆಟ್ಟಿಯಾಗಲು, ಸಮಯಸಾಧಕರು ಮನೆಯ ಒಳಗೆ ಬರಬಹುದಲ್ಲವೆ?
ಅದುದರಿಂದ ಈ ಚಿಕ್ಕ ಹುಡುಗಿಯ ಎದುರಿಗೆ ಪಂಟು ಮಾತನ್ನಾಡಿ(=bogus talk) ಇವಳನ್ನು ಹಾದಿ ತಪ್ಪಿಸುವವರು ಬರದಂತೆ ಆತ ವ್ಯವಸ್ಥೆ ಮಾಡಿದ.
(ಅಂದರೆ ಕ್ಷುದ್ರಸಾಧನೆಗಳು ಸಿಗದಂತೆ ಮಾಡಿದ.)
ಅದರಂತೆ ಗಂಟುಗಳ್ಳರು ಮನೆಗೆ ಬರದಂತೆ ಮಾಡಿದ.
ಈ ಚಿಕ್ಕ ಹುಡುಗಿ ತನ್ನ ಸಾಧನೆಯ ಮೂಲಕ ಒಂದಿಷ್ಟು ದುಡ್ಡನ್ನು (=ಸಾಧನಾಫಲವನ್ನು) ಜತನ ಮಾಡಿ ಇಟ್ಟುಕೊಂಡಿದ್ದಾಳೆ.
ಇವಳಿಗೆ ಏನೇನೊ ಕೊಡಿಸುವ ಆಸೆ ಹುಟ್ಟಿಸಿ, ಇವಳು ಕೂಡಿಸಿಟ್ಟುಕೊಂಡ ದುಡ್ಡನ್ನು ಹೊಡೆಯುವ ಗಂಟುಗಳ್ಳರು ದೂರವಿರುವಂತೆ ಆತ ವ್ಯವಸ್ಥೆ ಮಾಡಿದ.
ಈ ಪಂಟು ಮಾತಿನವರು ಹಾಗೂ ಗಂಟುಗಳ್ಳರು ಸಣ್ಣಪುಟ್ಟ ಕಳ್ಳರು.
ಆದರೆ ೧೮ ಜನ ಕುಂಟಲಗಿತ್ತಿಯರು (ಅಂದರೆ ಗಿರಾಕಿಗಳನ್ನು ಹೊಂದಿಸಿಕೊಡುವ pimp ಹೆಂಗಸರು) ಗಂಟು ಬಿದ್ದರೆ ಏನು ಮಾಡುವದು?

(ಟಿಪ್ಪಣಿ:
ಶ್ರೀಚಕ್ರಕ್ಕೆ ೯ ಆವರಣಗಳಿವೆ. ಮೊದಲನೆಯ ಆವರಣದಲ್ಲಿ ಅಂದರೆ ಭೂಪುರದಲ್ಲಿ ಅಣಿಮಾ, ಲಘಿಮಾ ಮೊದಲಾದ ೧೮ ಸಿದ್ಧಿಗಳು ಇರುತ್ತವೆ. ಈ ಚಕ್ರದಲ್ಲಿ ಸಿದ್ಧಿ ಪಡೆದವನಿಗೆ ಅಣಿಮಾ ಅಂದರೆ ಅತಿ ಸೂಕ್ಷ್ಮವಾಗುವ, ಲಘಿಮಾ ಅಂದರೆ ಭಾರವಿಲ್ಲದಂತಾಗುವ ಮೊದಲಾದ ಸಿದ್ಧಿಗಳು ಸಾಧಿಸುತ್ತವೆ.
ಈ ಸಿದ್ಧಿಗಳಲ್ಲಿಯೇ ಮೋಜು ಅನುಭವಿಸುತ್ತ ಕುಳಿತರೆ, ಮುಂದಿನ ಸಾಧನೆಗೆ ವ್ಯತ್ಯಯವಾಗುವದು.
ಈ ಸಿದ್ಧಿಗಳನ್ನು ಶರೀಫರು ಕುಂಟಲಗಿತ್ತಿಯರು ಎಂದು ಕರೆಯುತ್ತಾರೆ.
ಈ ಸಿದ್ಧಿಗಳು ಸಾಧಕನ ಮನಸ್ಸನ್ನು ಪರಮಾತ್ಮನಿಂದ ಬೇರೆಡೆಗೆ ಸೆಳೆಯುವವು.)

ಆದುದರಿಂದ ಈ ಸಿದ್ಧಿಗಳು ಶರೀಫರಿಗೆ ಲಭಿಸದಂತೆ ಮಾಡಿ, ಪರಮಾತ್ಮನು ತನ್ನ ಚಿಕ್ಕ ಪತ್ನಿಯಾದ ಶರೀಫರನ್ನು ರಕ್ಷಿಸಿದ.
ಅದಕ್ಕಾಗಿಯೇ ಶರೀಫರು “ಎನ್ನ ಕರವ ಪಿಡಿದಾ” ಎಂದು ಪ್ರೀತಿಯಿಂದ ಪರಮಾತ್ಮನನ್ನು ನೆನಸುತ್ತಾರೆ.
ಆತ ಇವಳ ಕರ ಪಿಡಿದದ್ದು ಇವಳಿಗೆ ಅವಲಂಬನ ಕೊಟ್ಟು ಇವಳನ್ನು ಮುನ್ನಡೆಸಲಿಕ್ಕಾಗಿ.

ಈ ಎಲ್ಲ ಸಿದ್ಧಿಗಳು ಸ್ವತಃ ಕುಂಟ ಹಾಗೂ ಕುರುಡರಿದ್ದಂತೆ.
ಅವು ಸಾಧಕನನ್ನು ಸಾಧನೆಯ ಮಾರ್ಗದಲ್ಲಿ ನಡೆಸಲಾರವು.
ಆದುದರಿಂದ ಈ ಸಿದ್ಧಿಗಳಿಗೆ ಆತ ಗಂಟಲಗಾಣನಾದ.
ಅಂದ ಮೇಲೆ, ಶರೀಫರಿಗೆ ತನ್ನ ಗಂಡನ ಮೇಲೆ ಅಭಿಮಾನಪೂರ್ವಕ ಪ್ರೇಮ ಉಕ್ಕದಿದ್ದೀತೆ?
ಆ ಸಂತೋಷ ಭಾವದಲ್ಲಿಯೇ ಶರೀಫರು ಹಾಡುತ್ತಾರೆ:
“ತಕ್ಕವನೆ ಸಿಕ್ಕಾ” !

ತವರು ಮನೆಯನ್ನು ಬಿಡಿಸಿ, ಅತ್ತೆಯ ಮನೆಗೆ ಕರೆತಂದ ಈ ಗಂಡ ಈಗ ಅತ್ತೆಮಾವರ ಮನೆಯನ್ನೂ ಸಹ ಬಿಡಿಸುತ್ತಿದ್ದಾನೆ.

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ

ತವರುಮನೆಯೆಂದರೆ ವಿಷಯ ಸುಖಗಳ ಮನೆಯಾಯಿತು. ಈ ಅತ್ತೆಮಾವರ ಮನೆ ಯಾವುದು?
ಸತ್ ಹಾಗೂ ಅಸತ್ ಇವು ದೇವರ ಎರಡು ಸೃಷ್ಟಿಗಳು. ಅಸತ್ ಅಂದರೆ unreal. ಸತ್ ಅಂದರೆ real.
ಅಸತ್ ಅಥವಾ unreal ಸೃಷ್ಟಿಯು ಕಾಲಮಿತಿಗೆ ಒಳಪಟ್ಟದ್ದು.

“ನಾನು ಕೆಲ ವರ್ಷಗಳ ಹಿಂದೆ ಚಿಕ್ಕ ಹುಡುಗನಾಗಿದ್ದೆ. ಆದರೆ ಈಗ ನಾನು ಚಿಕ್ಕ ಹುಡುಗನಲ್ಲ.”
ಆದುದರಿಂದ ನಾನು ಹುಡುಗ ಎನ್ನುವದು ಕಾಲಮಿತಿಗೆ ಒಳಪಟ್ಟ reality.ನಾನು ಸತ್ತೂ ಹೋಗುವೆ.
ಆದುದರಿಂದ ಈ ದೇಹವು ಕಾಲಮಿತಿಗೆ ಒಳಪಟ್ಟ reality. ಇದು ಅಸತ್ ಸೃಷ್ಟಿ.

ಆದರೆ ಆತ್ಮ ಎನ್ನುವದು ಯಾವಾಗಲೂ ಇರುವಂತಹದು.
ಆದುದರಿಂದ ಅದು ಸತ್ ಸೃಷ್ಟಿ.
ಆತ್ಮನಿಗೆ ಪುರುಷ ಎನ್ನುತ್ತಾರೆ.
(ಪುರುಷ ಅಂದರೆ ಗಂಡಸು ಅನ್ನುವ ಅರ್ಥ ಇಲ್ಲಿಲ್ಲ. ಪುರುಷ ಅಂದರೆ ಉಪಭೋಕ್ತಾ ಆತ್ಮ.)
ಪ್ರಕೃತಿ ಅಂದರೆ ಬದಲಾಗುತ್ತಿರುವ ಅಸತ್ ಸೃಷ್ಟಿ.
ಅಸತ್ ಸೃಷ್ಟಿಯು ಈ ಜೀವಿ ಇಳಿದು ಬಂದಿರುವ ತವರುಮನೆ.
ಅಲ್ಲಿಂದ ಈ ಜೀವಿ ದೈವಿ ಭಾವವೇ ನಿತ್ಯವಾಗಿರುವ ಸತ್ ಸೃಷ್ಟಿಗೆ ಪ್ರವೇಶಿಸುತ್ತದೆ.
ಈ ಸೃಷ್ಟಿಯು ಸತ್ ಸೃಷ್ಟಿಯೇ ಆಗಿರಲಿ, ನಿತ್ಯ ಸೃಷ್ಟಿಯೇ ಆಗಿರಲಿ, ಆದರೆ ಇದೂ ಸಹ ಆತ್ಮನ ಕೊನೆಯ ನಿಲ್ದಾಣ ಅಲ್ಲ.
ಪರಮಾತ್ಮನೊಳಗೆ ಒಂದಾಗುವದೇ ಜೀವಾತ್ಮನ ಕೊನೆಯ ಗತಿ.
ಆದುದರಿಂದ ಆತ ಜೀವಾತ್ಮನ ಮೂರು ವಾಸನಾಶರೀರಗಳಾದ ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಶರೀರಗಳನ್ನು ನಾಶ ಪಡಿಸುತ್ತಾನೆ. ಆ ಶರೀರಗಳ ಸಂಯೋಜಕರಾದ ಐದು ಕೋಶಗಳನ್ನು (ಅನ್ನಮಯ ಕೋಶ, ಪ್ರಾಣಮಯ ಕೋಶ, ಜ್ಞಾನಮಯ ಕೋಶ, ವಿಜ್ಞಾನಮಯ ಕೋಶ, ಆನಂದಮಯ ಕೋಶಗಳನ್ನು) ದೂರಪಡಿಸುತ್ತಾನೆ. ಬಳಿಕ ತನ್ನ ಭಕ್ತನನ್ನು ವಿದೇಹಿಯನ್ನಾಗಿ ಮಾಡಿ ತನ್ನ ಸಾನ್ನಿಧ್ಯಕ್ಕೆ ಕರೆದೊಯ್ಯುತ್ತಾನೆ.
ಅಲ್ಲಿ ದೇಹನಾಶವಾಗಿ ಕೇವಲ ಭಾವ ಮಾತ್ರ ಉಳಿದುಕೊಳ್ಳುತ್ತದೆ.
ಅದನ್ನು ಶರೀಫರು ಹೀಗೆ ವರ್ಣಿಸುತ್ತಾರೆ:

ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ ||

ಶಿವನು ಪ್ರಭೆಯ ಮೂಲ; ಶಕ್ತಿಯೇ ಪ್ರಭೆ.
ಪರಮಾತ್ಮನು ಶರೀಫರನ್ನು ಈಗ ಸತ್ ಲೋಕದಿಂದ ಮೇಲಕ್ಕೆ ಎತ್ತಿ ಪ್ರಭಾಲೋಕದಲ್ಲಿ ಇರಿಸುತ್ತಾನೆ.
ಈ ಲೋಕದಲ್ಲಿ ಪರಮಾತ್ಮನು ಶರೀಫರಿಗೆ ‘ಎನಗೊತ್ತಿನವನು’.
‘ಎನಗೊತ್ತಿನವನು’ ಎನ್ನುವ ಪದ ಅತ್ಯಂತ ಅನ್ಯೋನ್ಯತೆಯನ್ನು ಹಾಗು ವಿಶ್ವಾಸವನ್ನು ಸೂಚಿಸುವ ಪದ.
ಈ ಪದವು ಎನಗೆ ಗೊತ್ತಿನವನು ಹಾಗೂ ಎನಗೆ ಒತ್ತಿನವನು ಎನ್ನುವ ಎರಡೂ ಅರ್ಥಗಳನ್ನು ಸೂಚಿಸುತ್ತದೆ. ಎನಗೆ ಗೊತ್ತಿನವನು ಅಂದರೆ ನಾನು ಅವನನ್ನು ಸಂಪೂರ್ಣವಾಗಿ ಬಲ್ಲೆ ಎಂದು ಹೇಳಿದಂತೆ. ಎನಗೆ ಒತ್ತಿನವನು ಎಂದರೆ ನನಗೆ ಅತ್ಯಂತ ಹತ್ತಿರವಾದವನು ಎಂದು ಹೇಳಿದಂತೆ.

ಈ ಪ್ರಭಾಲೋಕದಲ್ಲಿ ಶರೀಫರ ಮನಸ್ಸು ಬೇರೆಲ್ಲೂ ಹೋಗದು; ಪರಮಾತ್ಮನನ್ನು ಒಂದು ಗಳಿಗೆ ಸಹ ಅಗಲಿ ಇರದು. ಪರಮಾತ್ಮನು ಶರೀಫರನ್ನು ತನ್ನ ಸಾನ್ನಿಧ್ಯದಲ್ಲಿಯೆ (=ಗೊತ್ತಿನಲ್ಲಿಯೆ) ಇಟ್ಟುಕೊಂಡು, ಅವರಿಗೆ ಮುತ್ತಿನ ಮೂಗುತಿಯ ಕೊಟ್ಟನು. ಅಂದರೆ ಶರೀಫರು ಈಗ ಪರಮ ಪತಿವ್ರತೆ ಎಂದು ಹೇಳಿದಂತಾಯಿತು.ತನ್ನನ್ನು ಇಷ್ಟೆಲ್ಲ ತಿದ್ದಿ ಇಂತಹ ಪತಿವ್ರತೆ ಹೆಂಡತಿಯನ್ನಾಗಿ ಮಾಡಿಕೊಂಡ ಪರಮಾತ್ಮನನ್ನು ಶರೀಫರು ‘ಅವನೇನು ದಿಟ್ಟನೇ’ ಎಂದು ಬಣ್ಣಿಸುತ್ತಾರೆ

ಶರೀಫರು ಈ ಪದವಿಯನ್ನು ಪಡೆಯುವ ಯೋಗ್ಯತೆಯುಳ್ಳ ಇತರ ಭಕ್ತರನ್ನು, ತನ್ನ ಸಖಿಯರೆಂದು ಗ್ರಹಿಸಿ ಹೀಗೆ
ಹೇಳುತ್ತಾರೆ:

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ ||

ತಮ್ಮ ಈ ಸಿದ್ಧಿಗೆ ತಮ್ಮ ಪೂರ್ವಪುಣ್ಯವು ಎಷ್ಟು ಕಾರಣವೋ, ಪರಮಾತ್ಮನ ಕರುಣೆಯೂ ಅಷ್ಟೇ ಕಾರಣವೆಂದು
ಶರೀಫರು ಹೇಳುತ್ತಾರೆ.
ಪರಮಾತ್ಮ ಬೇರೆ ಅಲ್ಲ, ಸದ್ಗುರು ಬೇರೆ ಅಲ್ಲ.
ಆತ ಕಾಲ ಕೂಡಿದಾಗ, ಭಕ್ತನನ್ನು ತಾನಾಗಿಯೇ ಏಕಾಂತ ಮಂದಿರದಲ್ಲಿ ಕರೆದೊಯ್ದು (---ಗುರುವು ಉಪದೇಶವನ್ನು ಏಕಾಂತದಲ್ಲಿ ಕೊಡುತ್ತಾನೆ---) ಸದ್ಗತಿಗೆ ಹಚ್ಚುತ್ತಾನೆ.
ಅದರಿಂದಾಗಿ ಭಕ್ತನ ಭ್ರಾಂತಿ ಹಾಗೂ ಈ ಜಗದ ದುರಿತ ಪರಿಹಾರವಾಗುತ್ತವೆ.
ಸದ್ಗತಿಯನ್ನು ಹೇಗೆ ಪಡೆದೇನು ಎನ್ನುವ ಭಕ್ತನ ಚಿಂತೆ ಮಾಯವಾಗುತ್ತದೆ.
…………………………………………………………………………………
ಕನ್ನಡ ನಾಡಿನಲ್ಲಿ ಓಡಾಡಿ, ಹಳ್ಳಿಯ ಕನ್ನಡದಲ್ಲಿಯೆ ಮಹತ್ತತ್ವ ಸಾರಿದ ಶರೀಫರ ಬೋಧನೆ ನಮ್ಮನ್ನೂ ಸದ್ಗತಿಗೆ ಹಚ್ಚಲಿ.

(ಟಿಪ್ಪಣಿ:
ಖ್ಯಾತ ಓಡಿಸ್ಸಿ ನರ್ತನ ವಿದುಷಿಯಾದ ಸಂಯುಕ್ತಾ ಪಾಣಿಗ್ರಾಹಿಯವರು ಬೆಂಗಳೂರಿನಲ್ಲಿ ಕೇಳಿದ ಒಂದು ಪ್ರಶ್ನೆಯನ್ನು ಇಲ್ಲಿ ಉದ್ಧರಿಸುವದು ಅಪ್ರಸ್ತುತವಾಗಲಾರದು:
“ ಎಲ್ಲಾ ಕಲೆಗಳಲ್ಲಿ ಪರಮಾತ್ಮನನ್ನು ಪತಿಗೆ ಹಾಗೂ ಭಕ್ತನನ್ನು ಸತಿಗೆ ಏಕೆ ಹೋಲಿಸುತ್ತಾರೆ; ಪರಮಾತ್ಮನನ್ನು ಪತ್ನಿಗೆ ಹಾಗೂ ಭಕ್ತನನ್ನು ಪತಿಗೆ ಏಕೆ ಹೋಲಿಸಬಾರದು? ”

ಇದಕ್ಕೆ ಉತ್ತರ ಸ್ಪಷ್ಟವಿದೆ:
ದುರ್ದೈವದಿಂದ ನಮ್ಮದು ಪುರುಷ ಪ್ರಧಾನ ಸಮಾಜ ಹಾಗೂ ಪಿತೃಪ್ರಧಾನ ಕುಟುಂಬ ವ್ಯವಸ್ಥೆ.
ಇಂತಹ ಸಮಾಜವ್ಯವಸ್ಥೆಯಲ್ಲಿ, ಗಂಡಸಿನದು super ordinate ಸ್ಥಾನ ಹಾಗೂ ಹೆಣ್ಣಿನದು
sub ordinate ಸ್ಥಾನ.
ಸಂಸ್ಕೃತದಲ್ಲಿ ಪತ್ನಿಗೆ ‘ಭಾರ್ಯಾ’ ಹಾಗೂ ಪತಿಗೆ ‘ಭರ್ತಾ’ ಎನ್ನುವ ಪದಗಳಿರುವದನ್ನು ಗಮನಿಸಿರಿ.
‘ಭಾರ’ ಅಂದರೆ load, ಒಜ್ಜೆ.
ಭರ್ತಾ ಅಂದರೆ ಒಜ್ಜೆ ಹೊರುವವನು. ಭಾರ್ಯಾ ಅಂದರೆ ಹೊರಬೇಕಾದ ಒಜ್ಜೆ.
ಸುಮಾರು ಎರಡು ಶತಮಾನಗಳ ಹಿಂದಿನ ಇಂತಹ ಒಂದು ಸಾಂಪ್ರದಾಯಕ ಸಮಾಜದಲ್ಲಿ ಬಾಳಿದ ಸಂತರು, ಆ ಸಮಾಜದ ಗುಣ,ಲಕ್ಷಣಗಳನ್ನು ಅಳವಡಿಸಿಕೊಂಡಿರುವ ಕವಿಗಳು, ಭಗವಂತನನ್ನು ಭರ್ತಾ(=ಪಾಲಕ) ಎಂದು ತಿಳಿದವರು, ತಮ್ಮನ್ನು ಭಾರ್ಯಾ ಎಂದೇ ಭಾವಿಸಬೇಕಲ್ಲವೆ?

ಭಾರತದಲ್ಲಿ ಮಾತ್ರ ಇಂತಹ conservative society ಇತ್ತು ಎಂದೇನಲ್ಲ.
ಸುಮಾರು ನೂರು ವರ್ಷಗಳ ಹಿಂದಿನ ಇಂಗ್ಲಿಶ್ ಲೇಖಕಿಯರನ್ನೇ ಗಮನಿಸಿರಿ.
ಅವರೆಲ್ಲರೂ male supremacyಯನ್ನು ಮನಃಪೂರ್ವಕವಾಗಿ ಒಪ್ಪಿಕೊಂಡವರೇ!
ಉದಾಹರಣೆಗೆ ಹೇಳಬೇಕೆಂದರೆ ಸುಪ್ರಸಿದ್ಧ ಇಂಗ್ಲಿಶ್ ಲೇಖಕಿಯಾದ Daphne du Maurier.
ಇವಳು ಬರೆದ Frenchman’s Creek ಕಾದಂಬರಿಯು ಈ ಧೋರಣೆಯ ಜ್ವಲಂತ ಉದಾಹರಣೆಯಾಗಿದೆ.

ಇಂತಹ ಒಂದು ಪರಿಸ್ಥಿತಿಗೆ ಕಾರಣವೇನು?
ಗಂಡಸು ಹೆಂಗಸಿಗೆ ಯಾವತ್ತು ಬಳೆ(=ಬೇಡಿ) ತೊಡಿಸಿದನೊ, ಆ ದಿನದಿಂದ ಹೆಂಗಸರ social conditioning ಪ್ರಾರಂಭವಾಯಿತು.
ಸೆರೆಯಾಳುಗಳು ತಮ್ಮನ್ನು ಸೆರೆ ಹಿಡಿದವರನ್ನೇ ಆರಾಧಿಸುವ Stockholm Complexಗೆ ಹೆಂಗಸರು ಬಲಿಯಾದರು.

ಈ ಲಕ್ಷಣವನ್ನು ಮೈಗೂಡಿಸಿಕೊಂಡಂತಹ ಒಂದು ಕಾದಂಬರಿ: Frenchman’s Creek;
ಈ ಸಾಮಾಜಿಕ ಲಕ್ಷಣವನ್ನು ಪ್ರದರ್ಶಿಸುವಂತಹ ಆಧ್ಯಾತ್ಮಿಕ ಕವನ: ಎಲ್ಲರಂಥವನಲ್ಲ ನನ ಗಂಡ.