Wednesday, January 20, 2010

ಪದಶೋಧ

ಅಡುಗೆಯ ಸ್ಟೋ, ಸೈಕಲ್ ಅಥವಾ ಮತ್ಯಾವುದೇ ಚಿಕ್ಕಪುಟ್ಟ ಯಂತ್ರೋಪಕರಣಗಳನ್ನು  ರಿಪೇರಿ ಮಾಡಿಸಲು ಒಯ್ದಾಗ, ರಿಪೇರಿ ಮಾಡುವವನು , “ಇದರ ‘ವ್ಹಾಯ್ಸರ್’ ಹೋಗೇದರಿ; ಬ್ಯಾರೆ ವ್ಹಾಯ್ಸರ್ ಹಾಕಿಕೊಡ್ತೇನಿ”, ಎಂದು ಹೇಳುವದನ್ನು ನೀವು ಕೇಳಿರಬಹುದು. ಈ ‘ವ್ಹಾಯ್ಸರ್’ ಅನ್ನೋದು ನಿಜವಾಗಿಯೂ washer ಅನ್ನುವ ಆಂಗ್ಲ ಪದದ ಅಪಭ್ರಂಶ. ರಿಪೇರಿ ಮಾಡುವವನಿಗೆ ‘ವಾಶರ್’ ಅನ್ನೋದು ಸಾಕಷ್ಟು ಇಂಗ್ಲಿಶ್ ಅನ್ನಿಸುತ್ತಿರಲಿಕ್ಕಿಲ್ಲ. ಆಂಗ್ಲ ಪದವನ್ನು ಮತ್ತಷ್ಟು ಆಂಗ್ಲೀಕರಣ ಮಾಡುವ ಉದ್ದೇಶದಿಂದ ಆತ ‘ವಾಶರ್’ಅನ್ನು ‘ವ್ಹಾಯ್ಸರ್’ ಮಾಡಿದ್ದಾನೆ.

ಆಂಗ್ಲ ಪದಗಳನ್ನು  ಇನ್ನಷ್ಟು ಆಂಗ್ಲೀಕರಿಸುವಂತೆಯೇ ಸಂಸ್ಕೃತ ಪದಗಳನ್ನು ಇನ್ನಷ್ಟು ಸಂಸ್ಕೃತೀಕರಿಸುವದರಲ್ಲಿಯೂ ನಮ್ಮವರಿಗೆ ಅಂದರೆ ಕನ್ನಡಿಗರಿಗೆ ತುಂಬಾ ಪ್ರೀತಿ ಹಾಗು ಅಪರಿಮಿತ ಕೌಶಲ್ಯ.
ಅದರಲ್ಲಿಯೂ ನಮ್ಮ ಕನ್ನಡ ಚಿತ್ರನಿರ್ಮಾಪಕರ ಕೈಯಲ್ಲಿ ಸಿಕ್ಕ ಪದಗಳ ಗೋಳನ್ನಂತೂ ಕೇಳುವದೇ ಬೇಡ.
ದ್ವಾರಕೀಶರು ‘ಗಿರಿಜಾ’ ಎನ್ನುವ ಯುವತಿಯನ್ನು ಚಿತ್ರೋದ್ಯಮಕ್ಕೆ ಪರಿಚಯಿಸುವಾಗ ಅವಳ ಹೆಸರನ್ನು ಬದಲಾಯಿಸಿ ‘ಶೃತಿ’ ಎಂದು ಕರೆದರು. ‘ಶೃತಿ’ ಪದಕ್ಕೆ cooked, boiled, dressed ಎನ್ನುವ ಅರ್ಥವಿದೆ. ‘ಶ್ರುತಿ’ ಪದಕ್ಕೆ ವೇದ, ಉಪನಿಷತ್ತು ಹಾಗು ಸಂಗೀತದ tuning ಎನ್ನುವ ಅರ್ಥವಿದೆ. ದ್ವಾರಕೀಶರ ಮನಸ್ಸಿನಲ್ಲಿ ಇರುವ ಅರ್ಥ ಯಾವುದೋ ಅವರಿಗೇ ಗೊತ್ತು. (ಹೌದೆ?)  ಬಹುಶ: ಅವರಿಗೆ ‘ಶ್ರುತಿ’ ಇದು ‘ಶೃತಿ’ಯಷ್ಟು ಸಂಸ್ಕೃತ ಎನ್ನಿಸಿರಲಿಕ್ಕಿಲ್ಲ. ಒಟ್ಟಿನಲ್ಲಿ ದ್ವಾರಕೀಶರ ಕೈಯಲ್ಲಿ ಸಿಕ್ಕ ಗಿರಿಜಾ ಸಂಗೀತದ ಶ್ರುತಿಯಾಗುವ ಬದಲು ಬೇಯಿಸಿದ ಕೋಳಿಯಾಗಿ ಬಿಟ್ಟಳು!
ಇದರಂತೆಯೇ ‘ಧ್ರುವ’ ಪದವನ್ನು ‘ಧೃವ’ ಎಂದು, ‘ಶ್ರದ್ಧಾ’ ಪದವನ್ನು ‘ಶೃದ್ಧಾ’ ಎಂದು ಬರೆದು ಮತ್ತಷ್ಟು ಸಂಸ್ಕೃತೀಕರಿಸುವ ಒಲವು ಹಲವು ಕನ್ನಡಿಗರಲ್ಲಿದೆ.

ಚಿತ್ರನಿರ್ಮಾಪಕರೇನೋ ಭಾಷಾ-ಅಜ್ಞಾನಿಗಳಿರಬಹುದು. ಆದರೆ ನಮ್ಮ ಪತ್ರಿಕೋದ್ಯಮಿಗಳ ಕತೆ ಏನು? ಅವರೂ ಅಜ್ಞಾನಿಗಳೇ?  ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ಈ ಪತ್ರಿಕೆ ತನ್ನ ಸೋಮವಾರದ ಪುರವಣಿಯ ಶೀರ್ಷಿಕೆಯನ್ನು ‘ಸಿಂಧೂರ’ ಎಂದು ಢಾಳಾದ ಅಕ್ಷರಗಳಲ್ಲಿ  ಮುದ್ರಿಸುತ್ತದೆ. ಸಿಂಧೂರ ಪದದ ಅರ್ಥ ‘ಆನೆ’. ಈ ಪುರವಣಿಯು ಮಹಿಳಾಪುರವಣಿ. ಮಹಿಳಾಪುರವಣಿಗೆ ‘ಸಿಂಧೂರ (=ಆನೆ)’ ಎಂದು ಕರೆಯುವ ಮೂಲಕ ಪತ್ರಿಕೆಯ ಸಂಪಾದಕರು ‘ಮಹಿಳೆಯರು ಆನೆಗಳಂತೆ’ ಎನ್ನುವ ಸಾಂಕೇತಿಕ ಅರ್ಥವನ್ನು ಸೂಚಿಸುತ್ತಿದ್ದಾರೆಯೆ?  ‘ಸಿಂದೂರ’ ಎಂದರೆ ಕುಂಕುಮ. ಕುಂಕುಮಕ್ಕೂ ಭಾರತೀಯ ಮಹಿಳೆಯರಿಗೂ ಪುರಾತನ ಸಂಬಂಧವಿದೆ. ಹಾಗಿದ್ದರೆ ಮಹಿಳಾಪುರವಣಿಯನ್ನು ‘ಸಿಂದೂರ’ ಎಂದು ಕರೆಯಬೇಕಾಗಿತ್ತಲ್ಲವೆ?   ಬಹುಶ: ಮಹಿಳಾ ಪುರವಣಿಯ ಅಲ್ಪಪ್ರಾಣೀಕರಣವು ಅವರಿಗೆ ‘ಅಸಂಸ್ಕೃತ’ ಎನ್ನಿಸಿರಬಹುದು! ಸಂಯುಕ್ತ ಕರ್ನಾಟಕ ಪತ್ರಿಕೆಯು ಇಂತಹ ಅನೇಕ ಮಹಾಪ್ರಾಣೀಕೃತ ಪದಗಳನ್ನು ಸೃಷ್ಟಿಸಿ ಸಂಸ್ಕೃತ ಶಬ್ದಕೋಶಕ್ಕೆ ಕಾಣಿಕೆಯಾಗಿ ನೀಡಿದೆ. ಉದಾಹರಣೆಗೆ: ಸರ್ವೋಚ್ಛ, ಉಚ್ಛಾರ ಇತ್ಯಾದಿ. ದುರದೃಷ್ಟವೆಂದರೆ, ಅಮಾಯಕ ಓದುಗರು, ವಿಶೇಷತಃ ಚಿಕ್ಕ ಹುಡುಗರು ಹಾಗು ವಿದ್ಯಾರ್ಥಿಗಳು ಈ ತಪ್ಪು ಪದಗಳನ್ನೇ ಸರಿಯಾದ ಪದಗಳೆಂದು ತಿಳಿದುಬಿಡುವದು.

ಸಂಯುಕ್ತ ಕರ್ನಾಟಕ ಹಾಗು ವಿಜಯ ಕರ್ನಾಟಕ ಈ ಎರಡೂ ಪತ್ರಿಕೆಗಳು ‘ಅಲ್-ಕೈದಾ’ ವನ್ನು ‘ಅಲ್-ಖೈದಾ’ ಎಂದು ಮುದ್ರಿಸುತ್ತಾರೆ. ಯಾಕೆ? ಉಗ್ರಗಾಮಿಗಳು ಅಲ್ಪಪ್ರಾಣಿಗಳಾಗಿರಲು ಸಾಧ್ಯವಿಲ್ಲವೆಂದೆ? ಹಾಗಿದ್ದರೆ ‘ಕುರ್ಬಾನಿ’ಯಂತಹ(=ತ್ಯಾಗ) ಒಳ್ಳೆಯ ಪದವನ್ನು ‘ಖುರ್ಬಾನಿ’ ಎಂದು ಯಾಕೆ ಬರೆಯುತ್ತಾರೊ ತಿಳಿಯದು!
ಹಾಗೆಂದು ಎಲ್ಲಾ ಹಿಂದಿ/ಉರ್ದು ಪದಗಳನ್ನು ಮಹಾಪ್ರಾಣೀಕರಿಸುತ್ತಾರೆ ಎನ್ನುವಂತಿಲ್ಲ. ‘ಧಾಬಾ’ ಎನ್ನುವ ಹಿಂದಿ ಪದದ ಅರ್ಥ ಹುಲ್ಲಿನ ಗುಡಿಸಲು. ಇದನ್ನು ಕನ್ನಡದಲ್ಲಿ ‘ಡಾಬಾ’ ಮಾಡಲಾಗಿದೆ! ಒಟ್ಟಿನಲ್ಲಿ, ನಮ್ಮ ಪತ್ರಿಕೆಗಳು ಒಂದು ಭಾಷೆಯ ಪದವನ್ನು ಕನ್ನಡ ಭಾಷೆಗೆ ತೆಗೆದುಕೊಳ್ಳುವಾಗ ಅಪಭ್ರಂಶ ಮಾಡಲೇಬೇಕೆನ್ನುವದನ್ನು ವ್ಯಾಕರಣದ ನಿಯಮದಂತೆ ಪರಿಪಾಲಿಸುತ್ತಿದ್ದಾರೆ.

ಸಂಯುಕ್ತ ಕರ್ನಾಟಕ ಪತ್ರಿಕೆಯು ಮಾಡುತ್ತಿರುವ ಭಾಷಾದೋಷಗಳನ್ನು ಈ ಮೊದಲೇ ನಾನು ಇಲ್ಲಿ, ಹಾಗು ಇಲ್ಲಿ  ತೋರಿಸಿದ್ದೇನೆ. ವಿಜಯ ಕರ್ನಾಟಕ ಪತ್ರಿಕೆಯೂ ಸಹ ಈ ವಿಷಯದಲ್ಲಿ ಹಿಂದೆ ಬೀಳಲು ಸುತರಾಮ್ ತಯಾರಿಲ್ಲ! ವಿಜಯ ಕರ್ನಾಟಕ ಪತ್ರಿಕೆಯ ‘ಪದೋನ್ನತಿ’ ಎನ್ನುವ ಸ್ಥಿರ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾಗುವ ಮಾಹಿತಿಯು ಸಹ ತಪ್ಪಿನಿಂದ ಕೂಡಿರುತ್ತದೆ. ದಿ:೧೯ ಜನೆವರಿಯಂದು ಪ್ರಕಟವಾದ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇನೆ:

‘ಶೀತ್ನಿ’ ಪದದ ಅರ್ಥ ‘ಸೀ ತೆನೆ’. ‘ಸೀ ತೆನೆ’ಗೆ ‘ಬೆಳಸಿ’ ಎಂದೂ ಕರೆಯುತ್ತಾರೆ, ‘ಹಾಲು ತೆನೆ’ ಎಂದೂ ಕರೆಯುತ್ತಾರೆ. ಜೋಳದ ಬೆಳೆಗೆ ತೆನೆ ಬಿಟ್ಟಾಗ, ಈ ತೆನೆಯು ಇನ್ನೂ ಬಲಿಯದೆ ಇದ್ದಾಗ, ಇದನ್ನು ಹಾಗೇ ತಿನ್ನಬಹುದು. ಆ ಕಾರಣಕ್ಕಾಗಿಯೇ ಇದಕ್ಕೆ ‘ಸೀ ತೆನೆ’, sweet corn ಎಂದು ಕರೆಯುವದು. ವಿಜಯ ಕರ್ನಾಟಕದ ‘ಪದೋನ್ನತಿ’ಯ ಪಂಡಿತರಿಗೆ ಇದು ಚಾದಂಗಡಿಯಲ್ಲಿ ದೊರೆಯುವ ‘ಸಿಹಿ ತಿನಿಸು’ ತರಹ ಕಂಡಿದ್ದು ಆಶ್ಚರ್ಯಕರವಾಗಿದೆ!
………………………………………………………………..
ಕನ್ನಡಿಗರು ವ್ಯಾಕರಣದ ನಿಯಮಗಳನ್ನು ನಾಲಿಗೆಗೆ ಅನುಕೂಲವಾಗುವಂತೆ ಹೊಂದಿಸಿಕೊಳ್ಳುವದರಲ್ಲಿ ನಿಸ್ಸೀಮರು. ‘ಹೆಣ್ಣು ಕೂಸು’ ಎನ್ನುವ ಜೋಡು ಪದವು ಮೊದಲು ‘ಹೆಂಗೂಸು’ ಆಗಿ, ಬಳಿಕ ‘ಹೆಂಗಸು’ ಆಯಿತು.
ಅದರತೆಯೇ, ‘ಗಂಡು ಕೂಸು’ ಪದವು ‘ಗಂಡಸು’ ಆಯಿತು. ಇದರಿಂದ ಉಚ್ಚಾರ ಸುಲಭವಾಯಿತು. ಆದರೆ ವ್ಯಾಕರಣಕ್ಕೇನೂ ಭಂಗ ಬರಲಿಲ್ಲ. ಇದೇ ಮಾತನ್ನು ‘ಆಕಳು’ ಪದಕ್ಕೆ ಹೇಳುವಂತಿಲ್ಲ. ‘ಆವು’ ಪದದ ಬಹುವಚನ ‘ಆವುಗಳು’. ಇದೇ ಕಾಲಾಂತರದಲ್ಲಿ ‘ಆಕಳು’ ಆಗಿದೆ. ಆದುದರಿಂದ ‘ಆಕಳು ಬಂದಿದೆ’ ಎಂದು ಹೇಳುವದು ಸರಿಯಲ್ಲ. ಇದು ‘ಆವು ಬಂದಿದೆ’ , ಅಥವಾ ‘ಆಕಳು ಬಂದಿವೆ’ ಎಂದು ಇರಬೇಕು!

ಕೆಲವೊಂದು ರೂಪಾಂತರಗಳಂತೂ ವಿನೋದವನ್ನು ಹುಟ್ಟಿಸುವಂತಿವೆ.  ಬೀದರ ಜಿಲ್ಲೆಯಲ್ಲಿ ‘ಹುಡುಗಿ’ ಎನ್ನುವ ಊರಿದೆ. ಈ ಊರಿಗೆ ಹೋಗಬಯಸುವ ಬಸ್ ಪ್ರಯಾಣಿಕರು ನಿರ್ವಾಹಕನಿಗೆ “ಒಂದು ಹುಡುಗಿ ಕೊಡಪ್ಪಾ” ಎಂದು ಚೇಷ್ಟೆ ಮಾಡುವದು ಸಾಮಾನ್ಯವಾಗಿದೆ. ಹುಡುಗಿ ಪದದ ಮೂಲರೂಪ ‘ಪುದುಗಿ’.   ‘ಪುದು’ ಇದರ ಅರ್ಥ ಹೊಸದಾದದ್ದು. 
‘ಪುದು’=new ;`ಗಿ’=habitat. 
ಹುಡುಗಿ=ಪುದುಗಿ= new habitat=ಹೊಸೂರು.
ತಮಿಳಿನಲ್ಲಿ ಹುಡುಗಿ ಅಥವಾ ಪುದುಗಿ ಎನ್ನುವ ಪದಕ್ಕೆ ಸಮಾನವಾದ ಪದ=ಪುದುಚೆರಿ. 
ಇಲ್ಲಿಯೂ ಸಹ ಪುದು=ಹೊಸ ಹಾಗೂ ಚೆರಿ=ಊರು.

ಅದರಂತೆಯೇ ಹೊಸದಾಗಿ ಜನ್ಮ ಪಡೆದ ಕೂಸು ಪುದುಕ ಅಥವಾ ಪುದುಕಿಯಾಯಿತು.  ಈ ಪದಗಳೇ ಕಾಲಾಂತರದಲ್ಲಿ ‘ಹುಡುಗ’, ‘ಹುಡುಗಿ’ ಎಂದು ಮಾರ್ಪಾಡಾಗಿವೆ.
ಪುದು ಪದಕ್ಕೆ ವಿರುದ್ಧವಾದದ್ದು ಮುದು ಎನ್ನುವ ಪದ. ಮುದು=old. ಈ ಪದದಿಂದಲೇ ಮುದುಕ, ಮುದುಕಿ ಎನ್ನುವ ಪದಗಳು ಬಂದಿವೆ. ಮುದಗಲ್ಲು ಎನ್ನುವ ಊರಿನ ಅರ್ಥ ಹಳೆಯ ಊರು. ಇದಕ್ಕೆ ಸಮಾನವಾದ ಮತ್ತೊಂದು ಕನ್ನಡ ಪದ ಹಳೇಬೀಡು.

ಕನ್ನಡ ನುಡಿಯಲ್ಲಿ ‘ಪ’ಕಾರವು ‘ಹ’ಕಾರವಾಗಿ ಮಾರ್ಪಟ್ಟಿದ್ದರಿಂದ  ಅನೇಕ ಪದಗಳ ಉಚ್ಚಾರಗಳು ಬದಲಾದವು. ಉದಾಹರಣೆಗೆ ‘ಪಾವು’ ಪದವು ‘ಹಾವು’ ಎಂದು ಬದಲಾಯಿತು ; ‘ಪಣ್ಣು’ ಪದವು ‘ಹಣ್ಣಾ’ಯಿತು; ‘ಪೆಣ್ಣು’ ‘ಹೆಣ್ಣಾ’ದಳು. ಸಂಸ್ಕೃತದ ‘ಪರ್ವ’ವು ಕನ್ನಡದಲ್ಲಿ ‘ಹಬ್ಬ’ವಾಯಿತು. ಆದರೆ ‘ಪೆಂಟಿ’ ಎನ್ನುವ ಪದವು ‘ಹೆಂಟಿ’ಯಾಗಿ ಬದಲಾದಾಗ, ರೂಪಾಂತರದೊಡನೆ ಅರ್ಥಾಂತರವೂ ಆಯಿತು. ಬೆಲ್ಲದ ಗಟ್ಟಿಗೆ ಬೆಲ್ಲದ ಪೆಂಟಿ ಎಂದು ಕರೆಯುತ್ತೇವೆ, ಬೆಲ್ಲದ ಹೆಂಟಿ ಎಂದು ಕರೆಯುವದಿಲ್ಲ. ಹೆಂಟಿ ಪದವು ಮಣ್ಣಿನ ಗಟ್ಟಿಗೆ reserve ಆಗಿದೆ. ಇದೇ ರೀತಿಯಲ್ಲಿ ಗೆಳತಿ ಪದವು ಕೆಳದಿ ಪದದಿಂದಲೇ ಬಂದಿದ್ದರೂ ಸಹ ಅರ್ಥಗಳಲ್ಲಿ ಅಜಗಜಾಂತರವಿದೆ.
ಅದರಂತೆ, ತ ಮತ್ತು ದ ಧ್ವನಿಗಳು ಬದಲಾಗಬಲ್ಲ ಧ್ವನಿಗಳಾದರೂ ಸಹ (ಉದಾಹರಣೆ: ಹುಲಿಯ ತೊಗಲು=ಹುಲಿದೊಗಲು), ತಣಿವು ಮತ್ತು ದಣಿವು ಈ ಪದಗಳು ಅರ್ಥದಲ್ಲಿ ಪೂರ್ಣ ವಿಭಿನ್ನವಾಗಿವೆ.

ಒಂದು ಕಾಲದಲ್ಲಿ ದ್ರಾವಿಡ ಭಾಷೆಗಳಿಗೆಲ್ಲ common ಆದ ಕೆಲವು ಪದಗಳು ಕಾಲಾಂತರದಲ್ಲಿ ಒಂದೆರಡು ಭಾಷೆಗಳಿಂದ ವಜಾ ಆಗಿಬಿಟ್ಟಿವು. ಉದಾಹರಣೆಗೆ ತುಳು ಭಾಷೆಯಲ್ಲಿಯ ‘ವಣಸ’ ಪದವನ್ನೇ ತೆಗೆದುಕೊಳ್ಳಿರಿ. ತುಳು ಭಾಷೆಯಲ್ಲಿ ‘ಊಟ ಆಯಿತೆ?’ ಎಂದು ಕೇಳಲು ‘ವಣಸ ಆಂಡಾ?’ ಎಂದು ಕೇಳುತ್ತಾರೆ. ಈ ಪದವು ಕನ್ನಡದಲ್ಲಿಯೂ ಒಮ್ಮೆ ಬಳಕೆಯಲ್ಲಿ ಇದ್ದಿರಬಹುದು.  ವಣಸ ಪದದಿಂದ ವಾಣಸಿಗ ಪದ ಉತ್ಪನ್ನವಾಗಿದ್ದು, ಕನ್ನಡದಲ್ಲಿ ಅದು ‘ಬಾಣಸಿಗ’ ಎಂದು ಮಾರ್ಪಟ್ಟಿದೆ. 

ಇದರಂತೆಯೇ ‘ಬಾಗಿಲು’ ಎನ್ನುವ ಪದ.
ತುಳುವಿನಲ್ಲಿ ಮನೆ ಪದಕ್ಕೆ ಇಲ್ ಎನ್ನುವ ಪದವನ್ನೇ ಇನ್ನೂ ಬಳಸುತ್ತಾರೆ. ಇಲ್  (=ಮನೆ) ಹಾಗೂ ವಾಯಿ(=ಬಾಯಿ) ಪದಗಳು ಕೂಡಿ ‘ವಾಯಿಲ್’ (=ಮನೆಯ ಬಾಯಿ) ಪದವು ಉತ್ಪನ್ನವಾಯಿತು. ವಾಯಿಲ್ ಪದವು ವಾಕಿಲ್ ಆಯಿತು. ಕಾಲಾಂತರದಲ್ಲಿ  ಇದೇ ಪದವು ಬಾಗಿಲು  ಎಂದು ರೂಪಾಂತರಗೊಂಡಿತು. ಅದರಂತೆ ಇಲ್ (ಮನೆ) ಹಾಗೂ ಹಿಂತು ಪದಗಳು ಕೂಡಿ ‘ಹಿಂತಿಲ್’ (=ಹಿತ್ತಲು) ಪದ ರೂಪಗೊಂಡಿದೆ. ‘ಹಿಂತಿಲು’ ಈಗ ಹಿತ್ತಲಾಗಿದೆ. ಕನ್ನಡಿಗರು ‘ಇಲ್’ ಪದದ ಬದಲಾಗಿ ‘ಮನೆ’ಗೆ ಅಂಟಿಕೊಂಡಿದ್ದರಿಂದ, ಬಾಗಿಲು, ಹಿತ್ತಲು ಇವುಗಳ ಮೂಲರೂಪಗಳು ಮಸುಕಾಗಿ ಬಿಟ್ಟಿವೆ.

ಪದಮೂಲವನ್ನು ಶೋಧಿಸುವದು ನದೀಮೂಲವನ್ನು ಶೋಧಿಸುವಷ್ಟೇ ಸಾಹಸಕರವಾಗಿದೆ!


Sunday, January 10, 2010

‘ನನ್ನಾಸೆ’ (--ಶ್ರೀಮತಿ ಊರ್ಮಿಳಾ ದೇಶಪಾಂಡೆ)

ನಗರಸಂಸ್ಕೃತಿಯು ತನ್ನ ಒಡಲಿನಲ್ಲಿರುವ ನಾಗರಿಕರನ್ನು ಮರಳು ಮಾಡುವ ಮಾಯಾವಿ ಸಂಸ್ಕೃತಿಯಾಗಿದೆ. ಟೀವಿ, ಸಿನೆಮಾ ಮತ್ತು ಝಗಝಗಿಸುವ ಅಂಗಡಿಗಳು ನಾಗರಿಕರನ್ನು ಭ್ರಮಾಲೋಕಕ್ಕೆ ಸೆಳೆಯುತ್ತವೆ ಹಾಗು ಜೀವನವೆಂದರೆ ಇದೇ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತವೆ. ಇದಕ್ಕೆ ತೀರ ವಿರುದ್ಧವಾದ, ಇದಕ್ಕಿಂತ ಹೆಚ್ಚು fulfilling ಆದಂತಹ ಬದುಕು ಸಾಧ್ಯವಿಲ್ಲವೆ? 
ಹಳ್ಳಿಗಳಲ್ಲಿ ಹಾಗು ನಿಸರ್ಗದ ಮಡಿಲಲ್ಲಿ ಬಾಳಿದ ನಮ್ಮ ಪೂರ್ವಜರ ಬದುಕು ನಗರಸಂಸ್ಕೃತಿಗಿಂತ ಹೆಚ್ಚು ಶ್ರೀಮಂತವಾಗಿತ್ತು. ಇಂತಹ ಒಂದು ಸಂಸ್ಕೃತಿಯ ಕನಸು ಶ್ರೀಮತಿ ಊರ್ಮಿಳಾ ದೇಶಪಾಂಡೆಯವರು ಬರೆದ ‘ನನ್ನಾಸೆ’ ಎನ್ನುವ ಈ ಕವನದಲ್ಲಿ ವ್ಯಕ್ತವಾಗಿದೆ.

 ಈ ಕವನದಲ್ಲಿ ಕವಯಿತ್ರಿಯ ಆಸೆಯನ್ನು ಎರಡು ವಿಧವಾಗಿ ವಿಶ್ಲೇಷಿಸಬಹುದು:
ಮೊದಲನೆಯದಾಗಿ ನಿಸರ್ಗದೊಡನೆ ಸಮರಸವಾಗಿ ಬಾಳುವ ಆಸೆ. ಎರಡನೆಯದಾಗಿ, ಯಾವುದೇ ಮಹತ್ವಾಕಾಂಕ್ಷೆ ಇಲ್ಲದ ಪುಟ್ಟ ಬದುಕೇ ಸಾಕು ಎನ್ನುವ ಆಸೆ,‘Small is beautiful’ ಎನ್ನುತ್ತಾರಲ್ಲ ಹಾಗೆ.
ಪರಿಮಳ ಬೀರುವ ಪುಟ್ಟ ಹೂವು, ಸ್ವಚ್ಛಂದವಾಗಿ ಹಾರುವ  ಮರಿಹಕ್ಕಿ, ಜುಳುಜುಳು ಹರಿಯುವ ಪುಟ್ಟ ತೊರೆ, ಕಮಲದೆಲೆಯ ಮೇಲಿನ ಇಬ್ಬನಿ ಇವು ಕವಯಿತ್ರಿ ಬಯಸುವ ಬದುಕಿನ ರೂಪಗಳು.

ಕೊನೆಯ ಸಾಲಿನಲ್ಲಿರುವ ಕಮಲದೆಲೆಯ ಮೇಲಿನ ಇಬ್ಬನಿಯ ಪ್ರತೀಕವನ್ನು ಗಮನಿಸಿರಿ. ಇಬ್ಬನಿಯ ಕ್ಷಣಭಂಗುರ ಜೀವನವನ್ನು ಈ ಪ್ರತೀಕ ಅಭಿವ್ಯಕ್ತಿಗೊಳಿಸುತ್ತದೆ. ಇದರೊಂದಿಗೇ ಭಾರತೀಯ ತತ್ವಜ್ಞಾನದ ಮಹತ್ವದ ಸಂದೇಶವೊಂದನ್ನೂ ಇದು ಸಾರುತ್ತದೆ: ‘ಕಮಲಪತ್ರಮಿವಾಂಭಸಿ.’ ಕಮಲದ ಎಲೆಯ ಮೇಲಿನ ನೀರಬಿಂದು ಹೇಗೆ ಕಮಲದೆಲೆಗೆ ಅಂಟಿಕೊಂಡಿರುವದಿಲ್ಲವೊ, ಅದೇ ರೀತಿಯಲ್ಲಿ  ಮನುಷ್ಯನು ಸಂಸಾರಕ್ಕೆ ಅಂಟಿಕೊಂಡಿರಬಾರದು ಎನ್ನುವದು ಈ ಸಂದೇಶ. ಆದರೆ, ಈ ಪ್ರತೀಕದಲ್ಲಿ ಇನ್ನೂ ಹೆಚ್ಚಿನ, ಇನ್ನೂ ಸುಂದರವಾದ ಮತ್ತೊಂದು ಸಂದೇಶವಿದೆ.
“ಸುತ್ತಲಿನ ನಿಸರ್ಗವನು ತನ್ನಲ್ಲಿ ಪ್ರತಿಫಲಿಸಿ……
.....ನನ್ನಲ್ಲಿ ಅಡಗಿದ ಆ ಸೌಂದರ್ಯವು ಅಮರವಹುದು…..”
ಸಂಸಾರಕ್ಕೆ ಅಂಟಿಕೊಳ್ಳಬಾರದು ಎನ್ನುವದು ನಿಜ. ಆದರೆ, ಈ ಜೀವನವೆಲ್ಲ ಭಗವಂತನ ನಿರ್ಮಿತಿ ; ಅದನ್ನು ತಾನು ಶುದ್ಧ ರೂಪದಲ್ಲಿ ಪ್ರತಿಫಲಿಸುತ್ತೇನೆ ಎನ್ನುವ ತಿಳಿವಳಿಕೆ ಈ ಸಾಲಿನಲ್ಲಿದೆ. ಇದು ಜೀವನವನ್ನು ‘ಸತ್ಯಮ್, ಶಿವಮ್, ಸುಂದರಮ್’ ಎಂದು ಭಾವಿಸುವ ತಿಳಿವಳಿಕೆ.


ಶ್ರೀಮತಿ ಊರ್ಮಿಳಾ ದೇಶಪಾಂಡೆ ನನ್ನ ತಾಯಿ. ಅತ್ಯಂತ ತೀಕ್ಷ್ಣ ಬುದ್ಧಿಯ ಇವಳು, ಮುಲ್ಕಿ (೭ನೆಯ) ತರಗತಿಯಲ್ಲಿದ್ದಾಗ, ತನ್ನ ತರಗತಿಯ ಅತ್ಯಂತ ಕಿರಿಯ ವಯಸ್ಸಿನ ವಿದ್ಯಾರ್ಥಿಯಾಗಿದ್ದಳು. ಕಾ^ಲೇಜಿನಲ್ಲಿ ಕಲಿಯುವಾಗ, ಹಣದ ಅಭಾವದಿಂದ ಪಠ್ಯಪುಸ್ತಕಗಳನ್ನು ಕೊಳ್ಳುವದು ಹೋಗಲಿ,ನೋಟುಬುಕ್ಕುಗಳನ್ನು  ಕೊಳ್ಳಲೂ ಇವಳಿಗೆ ಸಾಧ್ಯವಿರಲಿಲ್ಲ.

‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿಯ ಅಕ್ಷರಗಳನ್ನು ತೋರಿಸುತ್ತ ನನಗೆ ವರ್ಣಮಾಲೆಯನ್ನು ಕಲಿಸಿದ  ಗುರು ಇವಳು. ಸ್ವತಃ voracious reader ಆದ ಇವಳಿಂದಾಗಿಯೇ ನನಗೆ  ಹಾಗು ನನ್ನ ಒಡಹುಟ್ಟಿದವರಿಗೆ  ಸಾಹಿತ್ಯವನ್ನು ಓದುವ, ಬರೆಯುವ ಚಟ ಅಂಟಿಕೊಂಡಿತು.

ನಾಲ್ಕು ವರ್ಷಗಳ ಹಿಂದೆ, ತನ್ನ ಎಂಬತ್ತೊಂದನೆಯ ವಯಸ್ಸಿನಲ್ಲಿ , ನನ್ನ ತಾಯಿ ತೀರಿಕೊಂಡಳು.

Tuesday, January 5, 2010

“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ!”

ರೈತರ ಆತ್ಮಹತ್ಯೆಗಳು ೨೦೦೯ನೆಯ ವರ್ಷದಲ್ಲಿ ಎಂದಿನಂತೆ ನಡೆದವು.
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”, ಎಂದು ಸಚಿವರು ಭರವಸೆ ನೀಡಿದರು.
 ‘ರೈತರು ಸಾಲಕ್ಕೆ ಅಂಜಬಾರದು, ಗಟ್ಟಿ ಮನಸ್ಸಿನವರಾಗಬೇಕು, ಸರಕಾರ ರೈತರ ಹಿಂದೆಯೇ ಇದೆ’, ಎಂದು ರೈತರಲ್ಲಿ ವಿಶ್ವಾಸ ತುಂಬುವ, ಮನ:ಶಾಸ್ತ್ರ ಆಧಾರಿತ  ಕಾರ್ಯಕ್ರಮ ನಡೆಯಿತು. ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧ್ಯಯನ ಮಾಡಲು ಆಯೋಗವನ್ನು ರಚಿಸಲಾಯಿತು. ‘ರೈತರ ಆತ್ಮಹತ್ಯೆಗೆ ಸರಕಾರ ಕಾರಣವಲ್ಲ ; ಕೌಟಂಬಿಕ ಕಾರಣಗಳಿಗಾಗಿ ಸಾಲ ಮಾಡಿದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆಯೋಗ ಗಿಳಿಪಾಠ ಹೇಳಿತು.

ಬೆಳೆಸಾಲ ತೀರಿಸಲಾರದ ರೈತ ತನ್ನ ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುವದನ್ನು ನಮ್ಮ ಮಾನಗೇಡಿ ಸಚಿವರು ಹೇಗೆ ತಾನೆ ಅರ್ಥ ಮಾಡಿಕೊಂಡಾರು? ಇತ್ತ ಗ್ರಾಹಕನಿಗೂ ಸಹ ಏನೂ ಸುಖವಿಲ್ಲ. ಆಹಾರ ಧಾನ್ಯಗಳ ಬೆಲೆ ಆಕಾಶವನ್ನು ಮುಟ್ಟಿದೆ. ನಮ್ಮ ಸಚಿವರು ಮಾತ್ರ ಭರವಸೆ ನೀಡುತ್ತಲೇ ಇದ್ದಾರೆ:
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ!”

ಮುಂಬಯಿಯಲ್ಲಿ, ಬೆಂಗಳೂರಿನಲ್ಲಿ ಉಗ್ರವಾದಿಗಳ ದಾಳಿಗಳು ನಡೆದವು.
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”, ಎಂದು ಸಚಿವರು ಮತ್ತೊಮ್ಮೆ ಭರವಸೆ ನೀಡಿದರು.
ಸಿಕ್ಕಿ ಬಿದ್ದ ಉಗ್ರವಾದಿಗಳಿಗೆ ಕಾರಾಗೃಹದಲ್ಲಿ ರಾಜೋಪಚಾರ ನಡೆಯುತ್ತಿದ್ದರೆ ಉಗ್ರವಾದಿಗಳಿಗೆ ಬಲಿಯಾದವರ ಕುಟುಂಬದ ಸದಸ್ಯರು ದಿಕ್ಕೇಡಿಗಳಾಗಿದ್ದಾರೆ. ಮತ್ತೊಮ್ಮೆ ಉಗ್ರರ ದಾಳಿ ನಡೆಯುವವರೆಗೆ, ಪರಿಸ್ಥಿತಿ ಹತೋಟಿಯಲ್ಲಿಯೇ ಇರುತ್ತದೆ.

ಪರದೇಶಗಳ ಆಕ್ರಮಣದ ವಿರುದ್ಧ ಭಾರತವು ಅನೇಕ ಸಲ ನೆಲ ಕಚ್ಚಿದೆ. ಈ ಅಪಜಯಕ್ಕೆ ಎರಡು ಮಹತ್ವದ ಕಾರಣಗಳಿವೆ. ಮೊದಲನೆಯದು ಭಾರತೀಯರಲ್ಲಿ ಭದ್ರವಾಗಿ ಮನೆ ಮಾಡಿರುವ ಅಹಿಂಸಾ ಮನೋಭಾವ. ಎರಡನೆಯ ಕಾರಣವು ನಮ್ಮ  inferior weaponry.

ಇದನ್ನು ಅರಿತಿದ್ದ ನೆಹರೂರವರು ಭಾರತವು ಅಣ್ವಸ್ತ್ರ ಶಕ್ತ ರಾಷ್ಟ್ರವಾಗಲು ತಳಪಾಯವನ್ನು ಹಾಕಿದರು.
ಉತ್ತರ ಪ್ರದೇಶದ ನರೋರಾದಲ್ಲಿ ಸ್ಥಾಪಿಸಿದ ‘ಅಣು ಶಕ್ತಿ ಕೇಂದ್ರ’ವು ಅಯಶಸ್ವಿಯಾಗಿದೆ ಎನ್ನುವ ಸುದ್ದಿಯನ್ನು ಗಾಳಿಯಲ್ಲಿ ತೇಲಿ ಬಿಡಲಾಗಿತ್ತು. ಆ ಸಮಯದಲ್ಲಿ, ಆ ಕೇಂದ್ರದಲ್ಲಿ ನಮ್ಮ ಅಣು ವಿಜ್ಞಾನಿಗಳು ದೇಸಿ ಅಣು ಬಾಂ^ಬಿನ ಉತ್ಪಾದನೆಯ ಪ್ರಯತ್ನದಲ್ಲಿ ತೊಡಗಿಕೊಂಡಿದ್ದರು. ಕಾಲಾಂತರದಲ್ಲಿ ಈ ಪ್ರಯತ್ನಕ್ಕೆ ಯಶಸ್ಸು ದೊರೆತದ್ದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.

‘ಕುಂಬಾರನಿಗೊಂದು ವರುಷ, ಡೊಣ್ಣೆಗೊಂದು ನಿಮಿಷ’ ಎನ್ನುವಂತೆ, ಈಗಿನ ಪ್ರಧಾನಿ ಮನಮೋಹನ ಸಿಂಗರು ನಮ್ಮ ಅಣುಶಕ್ತಿ ಉತ್ಪಾದನ ಕೇಂದ್ರಗಳನ್ನು ಅಮೇರಿಕಾದ ಪರಿಶೀಲನೆಗೆ ಸಮರ್ಪಿಸಿ ಬಿಟ್ಟರು. ಭಾರತದ ಅಣುವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಬೇಕಾಗುವ ಇಂಧನವನ್ನು  ಪೂರೈಸಲು ನಮಗೆ ಅಮೆರಿಕಾದ ಮರ್ಜಿ ಹಿಡಿಯಲೇ ಬೇಕು ಎನ್ನುವ ಸೋಗನ್ನು ಮನಮೋಹನ ಸಿಂಗರು ಅಮಾಯಕ ಭಾರತೀಯರ ಎದುರಿಗೆ ಹಾಕಿದರು. ಈಗಿನ ಪರಿಸ್ಥಿತಿ ಏನೆಂದರೆ ಅಣುಶಕ್ತಿ ಸಬಲ ರಾಷ್ಟ್ರಗಳು ಭಾರತದ ಅಣು ಕೇಂದ್ರಗಳಿಗೆ ಇಂಧನ ಪೂರೈಸಲು ಹೊಸ ಹೊಸ ಶರತ್ತುಗಳನ್ನು ಹಾಕುತ್ತಿವೆ. ಅಲ್ಲದೆ, ಈ ಇಂಧನದ ಬೆಲೆಯನ್ನು ಆಕಾಶದೆತ್ತರಕ್ಕೆ ಏರಿಸುವದರಲ್ಲಿ ಏನೂ ಸಂದೇಹವಿಲ್ಲ. ಇಂತಹ ಮೋಸದ ವರ್ತನೆಯೂ ಮೊದಲೂ ಆಗಿದೆ.

ಭಾರತವು ಸ್ವದೇಶಿ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುವ ಹಂತದಲ್ಲಿದ್ದಾಗ, ಈ ಕ್ಷಿಪಣಿಗಳಿಗೆ ಅವಶ್ಯವಿರುವ ಇಂಧನವನ್ನು (ಆಗಿನ) ಸೋವಿಯಟ್ ರಶಿಯಾದಿಂದ ಖರೀದಿಸಲು ಪ್ರಾರಂಭಿಸಿತು. ತಕ್ಷಣವೇ ಅಮೆರಿಕಾವು ಒಂದು ‘Cryogenic Fuel Suppliers’ Club’ಅನ್ನು ಸ್ಥಾಪಿಸಿ, ಇಂಧನದ ಬೆಲೆಯನ್ನು ಎತ್ತರಿಸಿತು.
ಇದೆಲ್ಲಾ ಮನಮೋಹನ ಸಿಂಗರಿಗೆ ಗೊತ್ತಿಲ್ಲವೆಂತಲ್ಲ. ಆದರೆ ಅವರಿಗೆ ಒಂದು International Good Boy Image ಬೇಕಾಗಿದೆ,  at the cost of his motherland!

ಈ International Good Boy Image ಅಂದರೆ, ಕಾಲು ಕೆರೆದು ಒದೆಯಲು ಸಿದ್ಧವಿರುವ ರೌಡಿ ರಾಷ್ಟ್ರಗಳಿಂದ ಒದೆಯಿಸಿಕೊಳ್ಳಲು ಬೆನ್ನು ಕೊಟ್ಟು ನಿಂತ ಮೆದುಗ ಹುಡುಗನಂತೆ.
ಮನಮೋಹನ ಸಿಂಗರೆ, ನಿಮ್ಮ Good Boy Imageಗಾಗಿ ನಿಮಗೇನೂ Nobel Prize for Peace ಸಿಗುವದಿಲ್ಲ. ಅದೆಲ್ಲ ದಾಳಿಕೋರ USA Presidentರಿಗೇ ಮೀಸಲು!

ಚೀನಾ ಅಂತೂ ಭಾರತವನ್ನು ಒದೆಯುತ್ತಲೇ ಇದೆ. ಬ್ರಹ್ಮಪುತ್ರಾ ನದಿಯ ಮಾರ್ಗವನ್ನು ಚೀನಾ ತಿರುಗಿಸಲು ಹೊರಟರೆ, ಅದಕ್ಕೆ ಭಾರತದಿಂದ ಯಾವುದೇ ಪ್ರತಿಭಟನೆ ಇಲ್ಲ. ನಮ್ಮ ಪ್ರದೇಶದಲ್ಲಿ ಅವರು ತಮ್ಮ ಗಡಿಕಲ್ಲುಗಳನ್ನು ನೆಟ್ಟರೆ, ಅದಕ್ಕೆ ನಮ್ಮ ಪ್ರತಿಭಟನೆ ಇಲ್ಲ. ನಮ್ಮದೇ ಪ್ರದೇಶವಾದ ಲಡಾಖದಲ್ಲಿ ನಾವು ರಸ್ತೆ ನಿರ್ಮಿಸುತ್ತಿರುವಾಗ, ಚೀನಾ ಪ್ರತಿಭಟಿಸಿದರೆ, ನಮ್ಮ ಕೆಲಸವನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು! ಆ^ಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಚಚ್ಚುತ್ತಲೇ ಇದ್ದಾರೆ. ಈ ನೀಚ ಕೃತ್ಯವನ್ನು Racist ಎಂದು ಕರೆದು ಆ^ಸ್ಟ್ರೇಲಿಯಾಕ್ಕೆ ಅಂತಾರಾಷ್ಟ್ರೀಯ ಛೀಮಾರಿ ಹಾಕಿಸುವ ಧೈರ್ಯವನ್ನು ನಮ್ಮ ಸರಕಾರ ತೋರಿಸುತ್ತಿಲ್ಲ.
ಇದೆಂತಹ ಛಕ್ಕಾ ಸರಕಾರ!
ಇದಕ್ಕೆಲ್ಲ ಮನಮೋಹನ ಸಿಂಗರದು ಒಂದೇ ಪ್ರತಿಕ್ರಿಯೆ:
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”!
ಯಾರ ಹತೋಟಿಯಲ್ಲಿ?

೧೯೬೨ರಲ್ಲಿ ಚೀನಾ ಭಾರತವನ್ನು ಪೂರ್ಣವಾಗಿ ಸದೆ ಬಡಿದದ್ದು ಎಲ್ಲರಿಗೂ  ಗೊತ್ತಿರುವ ಸಂಗತಿಯೇ. ಆದರೆ, ಈ ಸಂದರ್ಭದಲ್ಲಿ ಜರುಗಿದ ಒಂದು ಘಟನೆ ಬಹುಶ: ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.
ಒಂದು ಪ್ರದೇಶದಲ್ಲಿ ಶತ್ರುಸೈನಿಕರ ಕೈ ಮೇಲಾಗುತ್ತಿರುವಂತಹ ಪರಿಸ್ಥಿತಿ ಒದಗಿದಲ್ಲಿ, ಕೇಂದ್ರಸರಕಾರವು ತನ್ನ ಪ್ರಭುತ್ವವನ್ನು ಆ ಪ್ರದೇಶದಿಂದ ತೆರವು ಮಾಡಿರುವದಾಗಿ ಘೋಷಿಸಬಹುದು. ಆ ಸಂದರ್ಭದಲ್ಲಿ ಅಲ್ಲಿಯ ನಾಗರಿಕರನ್ನು ರಕ್ಷಿಸುವ ಹೊಣೆಗಾರಿಕೆ ಸರಕಾರಕ್ಕೆ ಇರುವದಿಲ್ಲ.

೧೯೬೨ರ ಚೀನೀ ಆಕ್ರಮಣದ ಸಂದರ್ಭದಲ್ಲಿ, NEFA (ಈಗಿನ ಅರುಣಾಚಲ ಪ್ರದೇಶ)ದಲ್ಲಿಯ ತವಾಂಗ ಜಿಲ್ಲೆಯು ಚೀನೀ ಸೈನಿಕರ ಕೈವಶವಾಯಿತು. ಅಲ್ಲಿಂದ ಆಸಾಮ ರಾಜ್ಯದಲ್ಲಿಯ ದರಾಂಗ ಜಿಲ್ಲೆಯ ಕೇಂದ್ರಸ್ಥಳವಾದ ತೇಜಪುರವು  ಕೆಲವೇ ತಾಸುಗಳ ದೂರದಲ್ಲಿದೆ. ಚೀನೀ ಸೈನಿಕರು ತೇಜಪುರವನ್ನೂ ಆಕ್ರಮಿಸಬಹುದೆನ್ನುವ ಭೀತಿಯಿಂದ  ದರಾಂಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಲ್ಲಿಯ ನಿವಾಸಿಗಳ ವಿತ್ತ, ಜೀವಿತಗಳಿಗೆ ಸರಕಾರವು ಹೊಣೆಯಾಗುವದಿಲ್ಲವೆಂದು ಘೋಷಿಸಿ, ನಗರವನ್ನು ತ್ಯಜಿಸಲು ನಾಗರಿಕರಿಗೆ ಸೂಚನೆ ನೀಡಿದರು. ಸೆರೆಮನೆಯಲ್ಲಿರುವ ಕೈದಿಗಳನ್ನೆಲ್ಲ ಬಿಡುಗಡೆ ಮಾಡಲಾಯಿತು. ಸರಕಾರಿ ಕೋಶದಲ್ಲಿರುವ ಹಣವನ್ನೆಲ್ಲ ಸುಟ್ಟು ಹಾಕಲಾಯಿತು. ಆ ಅವಧಿಯಲ್ಲಿ ಭಾರತ ಸರಕಾರದ ಪ್ರಭುತ್ವವು ಆ ಜಿಲ್ಲೆಯಲ್ಲಿ NIL ಆಯಿತು. ಜಿಲ್ಲಾಧಿಕಾರಿಗಳು ಈ ಎಲ್ಲ ಕ್ರಮಗಳನ್ನು ಕೈಕೊಳ್ಳುತ್ತಿದ್ದಾಗ, ಲೋಕಸಭೆಯಲ್ಲಿ ನಮ್ಮ ಪ್ರಧಾನಿಗಳು  ಜನತೆಗೆ ಭರವಸೆ ನೀಡುತ್ತಿದ್ದರು:
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”!

ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಸ್ಥಿತಪ್ರಜ್ಞನ ಲಕ್ಷಣಗಳನ್ನು ಸಾರಿದ್ದಾನೆ. ಯಾರು ಲಾಭ,ಹಾನಿಗಳಲ್ಲಿ ; ಜಯ, ಅಪಜಯಗಳಲ್ಲಿ ಮನಸ್ಸಿನ ಸಮಸ್ಥಿತಿಯನ್ನು ಕಾಯ್ದುಕೊಳ್ಳುತ್ತಾರೊ ಅವರೇ ಸ್ಥಿತಪ್ರಜ್ಞರೆಂದು ಭಗವಂತನು ಅಪ್ಪಣೆ ಕೊಡಿಸಿದ್ದಾನೆ. ಈ ಪ್ರಮಾಣದ ಮೇರೆಗೆ ನಮ್ಮ ರಾಜಕಾರಣಿಗಳೆಲ್ಲರೂ ಸ್ಥಿತಪ್ರಜ್ಞರೇ. ಯಾಕೆಂದರೆ ಇವರೆಲ್ಲರ ಸಂಪತ್ತು ಸ್ವಿಸ್ ಬ್ಯಾಂಕುಗಳಲ್ಲಿ ಭದ್ರವಾಗಿದೆ. ಇವರ ಮಕ್ಕಳು ವಿದೇಶಗಳಲ್ಲಿ ನೆಲಸಿದ್ದಾರೆ! ಭಾರತಕ್ಕೆ ಏನೇ ಆದರೂ ಇವರಿಗೆ ಆತಂಕವಿಲ್ಲ. ಪುರಾಣಕಾಲದಲ್ಲಿ ಮಿಥಿಲಾ ಪಟ್ಟಣವು ಬೆಂಕಿ ಬಿದ್ದು ಉರಿಯುತ್ತಿರುವಾಗ, ಆ ದೇಶದ ರಾಜನಾದ ಜನಕ ಮಹಾರಾಜನು ಹೇಳಿದನಂತೆ: “ಉರಿಯುತ್ತಿರುವ ಮಿಥಿಲೆಯಲ್ಲಿ ನನ್ನದೇನೂ ಉರಿಯುತ್ತಿಲ್ಲ!”
ನಮ್ಮ ರಾಜಕಾರಣಿಗಳೂ ಜನಕನಂಥವರೇ! ಉರಿಯುತ್ತಿರುವ ಭಾರತದಲ್ಲಿ ಇವರದೇನೂ ಉರಿಯುವದಿಲ್ಲ!
ಇಂತಹ ರಾಜಕಾರಣಿಗಳನ್ನು ಪ್ರಭುಗಳನ್ನಾಗಿ ಪಡೆದ ಪ್ರಜೆಗಳ ಭಾಗ್ಯವೇ ಭಾಗ್ಯ.

“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”!
Happy New Year!

Tuesday, December 15, 2009

ಸಾಹಿತ್ಯಲೋಕದ ಸುತ್ತ-ಮುತ್ತ (ಗಿರಡ್ಡಿ ಗೋವಿಂದರಾಜ)

‘ಮನೋಹರ ಗ್ರಂಥಮಾಲಾ’ ಸಂಸ್ಥೆಯು ಗಿರಡ್ಡಿ ಗೋವಿಂದ್ ರಾಜ್ ಬರೆದ ‘ಸಾಹಿತ್ಯಲೋಕದ ಸುತ್ತ-ಮುತ್ತ’ ಎನ್ನುವ ಪುಸ್ತಕವನ್ನು ಇತ್ತೀಚೆಗೆ ಹೊರತಂದಿದೆ. ಇದು ಈ ಸಂಸ್ಥೆಯ ೨೦೦೯ನೆಯ ವರ್ಷದ ನಾಲ್ಕನೆಯ ಪುಸ್ತಕ.
ಗಿರಡ್ಡಿಯವರು ದೀರ್ಘಕಾಲದಿಂದ ಕನ್ನಡ ಸಾಹಿತ್ಯಲೋಕದಲ್ಲಿ ವಿಮರ್ಶಕರೆಂದು ಹೆಸರು ದಾಖಲಿಸಿಕೊಂಡವರು. ಅವರಿಗೆ ಏನು ಉಮೇದಿ ಬಂದಿತೋ, ಪ್ರಬಂಧಸಾಹಿತ್ಯಕ್ಕೆ  ಕೈ ಹಚ್ಚಿದರು. ಎರಡು ವರ್ಷಗಳ ಹಿಂದೆ ಇದೇ ಸಂಸ್ಥೆಯು ಅವರ ಲಲಿತಪ್ರಬಂಧಗಳ ಸಂಕಲನವೊಂದನ್ನು ಪ್ರಕಟಿಸಿತು. ‘ಹಿಡಿಯದ ಹಾದಿ’ ಎಂದು ಅದರ ಹೆಸರು. ಅದನ್ನು ಓದಿದಾಗ ಅನ್ನಿಸಿದ್ದು : ಗಿರಡ್ಡಿಯವರು ಪ್ರಬಂಧಬರಹದ ಈ ಹಾದಿಯನ್ನು ಹಿಡಿಯದಿದ್ದರೇ ಚೆನ್ನಾಗಿತ್ತು.

ಈ ವರ್ಷ(೨೦೦೯) ಇದೇ ಸಂಸ್ಥೆಯು ಗಿರಡ್ಡಿಯವರ ‘ಸಾಹಿತ್ಯಲೋಕದ ಸುತ್ತ-ಮುತ್ತ’ ಎನ್ನುವ ಲೇಖನಸಂಕಲನವೊಂದನ್ನು ಪ್ರಕಟಗೊಳಿಸಿದೆ. ಗಿರಡ್ಡಿಯವರು ತಮ್ಮ ಲೇಖನಗಳಿಗೆ ಪ್ರಸಂಗಸಾಹಿತ್ಯವೆಂದು ಕರೆಯುತ್ತ ಈ ರೀತಿಯಾಗಿ ಹೇಳಿದ್ದಾರೆ:


ಗಿರಡ್ಡಿಯವರ ಸಂಕಲನದ ಉದ್ದೇಶ ಹಾಗು ತಿರುಳು ಅರ್ಥವಾಯಿತೆ? ಸಾಹಿತಿಗಳಿಗೆ ಸಂಬಂಧಿಸಿದ “ಋಣಾತ್ಮಕ ಅಂಶ”ಗಳನ್ನು  ಅವರು ಈ ಸಂಕಲನದಲ್ಲಿಬಣ್ಣಿಸಿದ್ದಾರೆ. “ಋಣಾತ್ಮಕ ಅಂಶ”ಗಳೆಂದರೇನು? ಇದು ಅವರವರ ನಿಲುವು ಹಾಗೂ ವ್ಯಾಖ್ಯಾನದ ಮೇಲೆ ಹೋಗುತ್ತದೆ. ಉದಾಹರಣೆಗೆ ‘ಸುರಾಪಾನ’ವು ಹಿರಿಯ ಕನ್ನಡ ಸಾಹಿತಿಗಳಾದ ಮಾಸ್ತಿ, ಬೇಂದ್ರೆ, ಕುವೆಂಪು, ದೇವುಡು ಹಾಗು ಡಿವಿಜಿ ಇಂಥವರಿಗೆ ಋಣಾತ್ಮಕ ಅಂಶವಾಗಿ ಕಂಡರೆ, ನವ್ಯ ಸಾಹಿತಿಗಳಿಗೆ ಅಂದರೆ ಅನಂತ ಮೂರ್ತಿ, ಗಿರೀಶ ಕಾರ್ನಾಡ ಹಾಗು ಗಿರಡ್ಡಿಯಂಥವರಿಗೆ ಅದು ಧನಾತ್ಮಕ ಅಂಶವಾಗಿ ಕಾಣಬಹುದು. ಹಿರಿಯ ಸಾಹಿತಿಗಳಲ್ಲಿ ಸುರಾಪಾನಿಗಳು ಸಿಗುವದಿಲ್ಲ. ಕೆಲವರಂತೂ ‘ಚಾ-ಪಾಣಿ’ಗಳೂ ಆಗಿರಲಿಕ್ಕಿಲ್ಲ.ಆದುದರಿಂದ ಇವರಲ್ಲಿ ಇರಬಹುದಾದ ಮಾನವಸಹಜ ಕುಂದು ಕೊರತೆಗಳಿಗೆ ಬಣ್ಣ ಕೊಟ್ಟು, ಹಿಗ್ಗಿಸಿ ಬರೆದಾಗ, ಲೇಖನಕ್ಕೆ ‘ಸಂಕೀರ್ಣತೆ’ ಬರುತ್ತದೆ! ಇಂತಹ ಸಂಕೀರ್ಣತೆ ವ್ಯಕ್ತಿಚಿತ್ರಗಳಲ್ಲಿ ಅಥವಾ ಅಭಿನಂದನ ಗ್ರಂಥಗಳಲ್ಲಿ ಸಿಗುವದಿಲ್ಲ ಎನ್ನುವದು ಗಿರಡ್ಡಿಯವರ ಕೊರಗು ಹಾಗು ಅಮೂಲ್ಯ ಅಭಿಪ್ರಾಯ.
ಹೀಗಾಗಿ ತಮ್ಮ ಸಂಕಲನದ ಅನೇಕ ಲೇಖನಗಳನ್ನು ಗಿರಡ್ಡಿಯವರು ಈ ‘ಋಣಾತ್ಮಕ ಸಂಕೀರ್ಣತೆ’ಗಾಗಿಯೇ ಮೀಸಲಿಟ್ಟಿದ್ದಾರೆ. ಅವು ಇಂತಿವೆ:

(೧) ರಾಜೀ ಊಟ 
(ಬೇಂದ್ರೆ-ಕುವೆಂಪು ವೈಮನಸ್ಸು!)
(೨) ಕವಿತೆಯ ಓದು 
(ಸುಮತೀಂದ್ರ ನಾಡಿಗರ ಸ್ವಮೋಹ)
(೩) ಅನ್ನದ ರಿಣ 
(ರಂ.ಶ್ರೀ. ಮುಗಳಿಯವರ ಸ್ವಮೋಹ)
(೪) ಒಂದು ಲೋಟ ನೀರು 
(ಕುವೆಂಪುರವರ unhospitality)
(೫) ಕುರ್ಚಿಯ ಗೌರವ 
(ಗಿರಡ್ಡಿಯವರು ಸರೋಜಿನಿ ಶಿಂತ್ರಿಯವರ ಬಾಲ ಕತ್ತರಿಸಿದ್ದು)
(೬) ಬೀದಿ ಬದಿಯ ರದ್ದಿ ಪುಸ್ತಕಗಳ ಅಂಗಡಿಯಲ್ಲಿ 
( ಹಾ. ಮಾ. ನಾಯಕರ complex)
(೭) ಜಾರೆ ಅಮೃತಮತಿ 
(ಬಿ.ವಿ. ಕಾರಂತರ ಕುಡುಕತನ)
(೮) ಮೈ ಹಿಂದೀ ಮೆ ನಹೀ ಬೋಲೂಂಗಾ 
(ಬಿ.ವಿ. ಕಾರಂತರ ಕುಡುಕತನ)
(೯) ಬಿ. ವಿ. ಕಾರಂತರ ಬಾಥ್ ರೂಮ್ 
(ಬಿ.ವಿ. ಕಾರಂತರ ಕುಡುಕತನ)
(೧೦) ಸಾಲಿ ರಾಮಾಯಣ 
(ಬೇಂದ್ರೆಯವರ ಕ್ಷುಲ್ಲಕತನ ಹಾಗು ಗುಂಪುಗಾರಿಕೆ)
(೧೧) ಒಂದು ಸ್ನೇಹದ ಕಥೆ 
(ಬೇಂದ್ರೆಯವರಿಗೆ ಮಾಸ್ತಿಯವರ ಬಗೆಗಿದ್ದ ಅಸಮಾಧಾನ)
(೧೨) ಯುಗದ ಕವಿ, ಜಗದ ಕವಿ 
(ಬೇಂದ್ರೆಯವರಿಗೆ ಕುವೆಂಪು ಬಗೆಗಿದ್ದ ಅಸೂಯೆ)
(೧೩) ತಂದೆ-ಮಗ 
(ಶ್ರೀರಂಗರ ತಂದೆಗೆ ಶ್ರೀರಂಗರ ಬಗೆಗಿದ್ದ ಅಸಮಾಧಾನ)
(೧೪) ಶಂಬಾ-ಬೇಂದ್ರೆ ಪುರಾಣ 
( ಬೇಂದ್ರೆ-ಶಂ. ಬಾ. ಜೋಶಿಯವರ ಜಗಳ)
(೧೫) ಶಂ.ಬಾ. ಅವರ ಬಲೂನುಗಳು 
(ಶಂ. ಬಾ. ಜೋಶಿಯವರ ತಿಕ್ಕಲುತನ)
(೧೬) ಹದಿನೈದು ಪೈಸೆ ಕಾರ್ಡುಗಳು 
(ಶಂ. ಬಾ. ಜೋಶಿಯವರ ತಿಕ್ಕಲುತನ)

ಒಟ್ಟು ೫೬ ಪ್ರಸಂಗಗಳಲ್ಲಿ ೧೬ ಪ್ರಸಂಗಗಳು ಈ ತರಹದ ಋಣಾತ್ಮಕ ಸಂಕೀರ್ಣತೆಗೆ ಮೀಸಲಾಗಿವೆ. (ವ್ಯವಹಾರದ ಭಾಷೆಯಲ್ಲಿ ಇದಕ್ಕೆ ‘ಛಿದ್ರಾನ್ವೇಷಣೆ’ ಎನ್ನಬಹುದೇನೊ?) ಕೇವಲ ‘ಋಣಾತ್ಮಕ’ ಪ್ರಸಂಗಗಳನ್ನು ವರ್ಣಿಸಿದರೆ ಪುಸ್ತಕವೇ ‘ಋಣಾತ್ಮಕ ಸಂಕಲನ ’ ಎನ್ನುವ ಹೊಗಳಿಕೆಗೆ ಪಾತ್ರವಾಗಬಹುದಲ್ಲವೆ? ಆದುದರಿಂದ ಗಿರಡ್ಡಿಯವರು ಧನಾತ್ಮಕವಾದ, ಪ್ರಶಂಸಾಪೂರ್ವಕವಾದ ಹಲವು ಲೇಖನಗಳನ್ನೂ  ಬರೆದಿದ್ದಾರೆ. ಈ ಲೇಖನಗಳೆಲ್ಲ ಸಂಕಲನದ ಮೊದಲಲ್ಲೇ ಬಂದಿವೆ.  ಆದರೆ ಈ ಪ್ರಶಂಸೆ ಎಲ್ಲ ಸ್ವಪ್ರಶಂಸೆಯಾಗಿರುವದೇ ಓದುಗರಿಗೆ ಮನೋರಂಜನೆಯನ್ನು ಒದಗಿಸಬಹುದು! ಇಂತಹ ಲೇಖನಗಳ ಪಟ್ಟಿ ಇಲ್ಲಿದೆ. ಸಂಕಲನದ ಮೊದಲನೆಯ ಲೇಖನವೇ ಇವರ ‘ಬಾಲ್ಯಪ್ರತಿಭೆ’ಯ ಕೊಂಡಾಟವಾಗಿರುವದನ್ನು ಗಮನಿಸಬೇಕು:

(೧) ಮೂಗಿನ ಕೆಳಗೆ ಮೀಸೆ
(ಬಂಕಾಪುರ ಎನ್ನುವ ಪತ್ರಕರ್ತರು ಗಿರಡ್ಡಿಯವರ ಕಿಶೋರಾವಸ್ಥೆಯ ಲೇಖನ ಮೆಚ್ಚಿಕೊಂಡಿದ್ದು)
(೨) ಕೈತೋಟದ ಎರಡು ಹಗರಣಗಳು
(ಭೈರಪ್ಪನವರು ಇವರ ಕತೆಗಳನ್ನು ಮೆಚ್ಚಿಕೊಂಡಿದ್ದು)
(೩) ಸಾಹಿತ್ಯದ ಕಾಡುವ ಗುಣ
( ಸಾಮಾನ್ಯ ಓದುಗಳೊಬ್ಬಳು ಇವರ ಕತೆ ಮೆಚ್ಚಿಕೊಂಡಿದ್ದು)
(೪) Brilliant Young Man
( ವಿ.ಸೀ.ಯವರು ಇವರ ಲೇಖನ ಮೆಚ್ಚಿಕೊಂಡಿದ್ದು)
(೫) ಹದಿನಾರೂವರೆ ವರ್ಷದ ವಿವೇಕ
(ಕಿಶೋರಾವಸ್ಥೆಯ ವಿವೇಕ ಶಾನಭಾಗ ಇವರ ಕತೆ ಮೆಚ್ಚಿಕೊಂಡಿದ್ದು)
(೬) ಅಜ್ಞಾತದಿಂದ ಒಂದು ಪತ್ರ
(ಲಕ್ಷ್ಮೀನರಸಿಂಹ ಎನ್ನುವ ಅಪರಿಚಿತರು ಇವರ ಸಾಹಿತ್ಯವನ್ನು ಮೆಚ್ಚಿಕೊಂಡಿದ್ದು)
(೭) Felicity of Expression
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ  ಕವನಗಳನ್ನು ಮೆಚ್ಚಿಕೊಂಡಿದ್ದು)
(೮) ಸ್ವಾತಂತ್ರ್ಯೋತ್ಸವದ ಆ ದಿನ
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ ಕವನಗಳನ್ನು ಮೆಚ್ಚಿಕೊಂಡಿದ್ದು)
(೯) Promising Poet
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ ಕವನಗಳನ್ನು ಮೆಚ್ಚಿಕೊಂಡಿದ್ದು)
(೧೦) ನಿನ್ನ ಕಾವ್ಯಸ್ಫೂರ್ತಿ ಮುಂಬರಿಯಲಾವುದಡ್ಡಿ?
(ಪ್ರಿನ್ಸಿಪಾಲ್ ವ್ಹಿ.ಕೆ. ಗೋಕಾಕರು ವಿದ್ಯಾರ್ಥಿ ಗಿರಡ್ಡಿಯವರ ಕವನಗಳನ್ನು ಮೆಚ್ಚಿಕೊಂಡಿದ್ದು)
(೧೧) ಬಾಣದ ಬಿರಸು
(ಗಿರಡ್ಡಿಯವರು ವಿದ್ಯಾರ್ಥಿಯಾಗಿದ್ದಾಗ ಪ್ರೊಫೆಸರ್ ಮಾಳವಾಡರ ಎದುರಿಗೆ ತೋರಿದ ಧೈರ್ಯ)
(೧೨) ಚಮತ್ಕಾರ
(ಗಿರಡ್ಡಿಯವರು ಬೇಂದ್ರೆಯವರನ್ನು ತಮಾಶೆ ಮಾಡಿದ್ದು)

ಈ ರೀತಿಯಾಗಿ ೫೬ ಪ್ರಸಂಗಗಳಲ್ಲಿ ಮೊದಲಿನ ೧೨ ಪ್ರಸಂಗಗಳು ಧನಾತ್ಮಕ ಸಂಕೀರ್ಣತೆಗೂ (ಸ್ವಪ್ರಶಂಸೆಗೂ),ನಂತರದ ೧೬ ಪ್ರಸಂಗಗಳು ಋಣಾತ್ಮಕ ಸಂಕೀರ್ಣತೆಗೂ (ಛಿದ್ರಾನ್ವೇಷಣೆಗೂ) ಮೀಸಲಾಗಿವೆ.ಇಂತಹ ಲೇಖನಗಳನ್ನು ನೋಡಿಯೇ ಚೆನ್ನವೀರ ಕಣವಿಯವರು ಈ ಪುಸ್ತಕಕ್ಕೆ ‘ಅಧಿಕ ಪ್ರಸಂಗಗಳು’ ಎನ್ನುವ ಹೆಸರನ್ನು ಸೂಚಿಸಿರಬಹುದು!  ಉಳಿದ ೨೮ ಪ್ರಸಂಗಗಳು ಅಂದರೆ ಶೇಕಡಾ ೫೦ ಪ್ರಸಂಗಗಳು ಅತಿ ಸಾಮಾನ್ಯವೆನ್ನಿಸಬಹುದಾದ ಲೇಖನಗಳು. ಉದಾಹರಣೆಗೆ ‘ಧಾರವಾಡದಲ್ಲಿ ಕವಿಗಳು’ ಎನ್ನುವ ಲೇಖನ ನೋಡಬಹುದು. ಈ ಲೇಖನವನ್ನು ಗಿರಡ್ಡಿಯವರು ಯಾಕೆ ಬರೆದರೋ ತಿಳಿಯದು. ಮಾಧ್ಯಮಿಕ ಶಾಲೆಯ ಹುಡುಗರು ಇಂತಹ ನಿಬಂಧವನ್ನು ಬರೆಯಬಹುದು. ಓದುಗರು ಈ ನಿಬಂಧದ evaluationಅನ್ನು ಸ್ವತಃ ಮಾಡಲಿ ಎನ್ನುವ ಉದ್ದೇಶದಿಂದ ಲೇಖನದ ಕೊನೆಯಲ್ಲಿ ಆ ನಿಬಂಧವನ್ನು ಅಂದರೆ ಅವರ ಪ್ರತಿಭೆಯ ಒಂದು ಸ್ಯಾಂಪಲ್ ಅನ್ನು ಉದ್ಧರಿಸುತ್ತಿದ್ದೇನೆ. ದಯವಿಟ್ಟು ಕ್ಷಮಿಸಬೇಕು. 

ವ್ಯಕ್ತಿಚರಿತ್ರೆ ಹಾಗು ಆತ್ಮಚರಿತ್ರೆಗಳು ಕನ್ನಡ ಸಾಹಿತ್ಯದಲ್ಲಿ ಅಪರೂಪವೇನಲ್ಲ. ಅದೇ ರೀತಿಯಾಗಿ ನಾಡಿಗೆ ಸೇವೆ ಸಲ್ಲಿಸಿದ ವ್ಯಕ್ತಿಗಳ ತುಣುಕು ಚರಿತ್ರೆಗಳು, ಪ್ರಸಿದ್ಧರಾಗಿರದಿದ್ದರೂ ಸಹ ಶೀಲವಂತರಾದ ವ್ಯಕ್ತಿಗಳ ತುಣುಕು ಪ್ರಸಂಗಗಳೂ ಸಹ ಕನ್ನಡ ಸಾಹಿತ್ಯದಲ್ಲಿ ಸ್ಥಾನ ಪಡೆದಿವೆ. ಇಂತಹ ಸಾಹಿತ್ಯವನ್ನು ನಿರ್ಮಿಸಿದ ಹಿರಿಯರಲ್ಲಿ ಡಿ. ವ್ಹಿ. ಗುಂಡಪ್ಪನವರು, ಗೊರೂರು ರಾಮಸ್ವಾಮಿ ಅಯ್ಯಂಗಾರರು, ವಿ. ಸೀತಾರಾಮಯ್ಯನವರು ಹಾಗು ಸಿದ್ಧವ್ವನಹಳ್ಳಿ ಕೃಷ್ಣಶರ್ಮರು ಪ್ರಮುಖರು. ಗುಂಡಪ್ಪನವರ ‘ಜ್ಞಾಪಕ ಚಿತ್ರಶಾಲೆ’, ಗೊರೂರರ ‘ಹಳ್ಳಿಯ ಹತ್ತು ಸಮಸ್ತರು’, ವಿ.ಸೀ.ಯವರ ‘ವ್ಯಕ್ತಿಚಿತ್ರಸಂಪುಟ’ ಹಾಗು ಕೃಷ್ಣಶರ್ಮರ ‘ದೀಪಮಾಲೆ’ ಕೃತಿಗಳಲ್ಲಿ ಬಾಳಿಗೆ ಬೆಳಕು ಕೊಡುವಂತಹ ವ್ಯಕ್ತಿಚಿತ್ರಣಗಳಿವೆ. ಅದರ ಜೊತೆಗೆ, ಆ ಕಾಲದ ಸಂಸ್ಕೃತಿಯ ಹಾಗು ಜೀವನವಿಧಾನದ ಮಿಂಚು ನೋಟ ಸಹ ಈ ಕೃತಿಗಳಲ್ಲಿ ಚಿತ್ರಿತವಾಗಿದೆ. ಅದರಂತೆ ದೀರ್ಘ ಹಾಗು ಗಾಢವಾದ ವ್ಯಕ್ತಿಚಿತ್ರಗಳ ಬದಲು, ಕೆಲವು ಪ್ರಸಂಗಗಳ ಮೂಲಕ ಕೆಲವಾರು ವ್ಯಕ್ತಿಗಳ ಪಾರ್ಶ್ವನೋಟದ ಚಿತ್ರವನ್ನು ಕೊಡುವ ಸಾಹಿತ್ಯಕೃತಿಗಳೂ ನಮ್ಮಲ್ಲಿ ಸಾಕಷ್ಟಿವೆ. ಹಾ. ಮಾ. ನಾಯಕರು ಬರೆದ ‘ವೆಂಕಣ್ಣಯ್ಯ ಕೆಲ ಪ್ರಸಂಗಗಳು’, ಬೆಳಗೆರೆ ಕೃಷ್ಣಶಾಸ್ತ್ರೀಯವರು ಬರೆದ ‘ಸಾಹಿತಿಗಳ ಸಂಗದಲ್ಲಿ’, ‘ಮರೆಯಲಾದೀತೆ?’, ‘ಎಲೆಮರೆಯ ಅಲರು’, ಬಿ. ಎಸ್. ಕೇಶವರಾವರು ಬರೆದ ‘ಪ್ರಸಂಗಪ್ರವಾಹ’, ‘ನಾ ಕಂಡ ಪುಂಡ ಪಾಂಡವರು’ ಹಾಗು ವಿಷ್ಣು ನಾಯ್ಕರು ಬರೆದ ‘ಅರೆ ಖಾಸಗಿ’ ಕೃತಿಗಳನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಒಬ್ಬನೇ ಸಾಹಿತಿಯ ಬಗೆಗೆ ಅನೇಕ ಲೇಖಕರು ಬರೆದ ಅಭಿನಂದನೆಯ ಗ್ರಂಥಗಳು ಅಥವಾ ಸ್ಮರಣೆಯ ಕೃತಿಗಳೂ ಸಹ ಸಾಕಷ್ಟಿವೆ. (ಉದಾಹರಣೆ: ‘ತೇಜಸ್ವಿ ನೆನಪು’). ಲಂಕೇಶರು ತಮ್ಮ ಪತ್ರಿಕೆಯಲ್ಲಿ ಅನೇಕ ಸಾಹಿತಿಗಳನ್ನು ಹಾಗು ತಮ್ಮ ಗೆಳೆಯರನ್ನೇ ಟೀಕಿಸಿದ್ದಾರೆ. ಆದರೆ ಅದು ಸಾಹಿತ್ಯಕ ಹಾಗು ಸಾಮಾಜಿಕ ಕಾರಣಗಳಿಗಾಗಿಯೇ ಹೊರತು, ವೈಯಕ್ತಿಕ ಛಿದ್ರಾನ್ವೇಷಣೆಗಾಗಿ ಅಲ್ಲ.

ಇದಲ್ಲದೆ, ನಮ್ಮ ಪತ್ರಿಕೆಗಳಲ್ಲೂ ಸಹ ಇಂತಹ ಲೇಖನಮಾಲೆಗಳು ಪ್ರಕಟವಾಗಿವೆ. ‘ಪ್ರಪಂಚ’ ವಾರಪತ್ರಿಕೆಯ ಸಂಪಾದಕರಾದ ಶ್ರೀ ಪಾಟೀಲ ಪುಟ್ಟಪ್ಪನವರು ಐದು ದಶಕಗಳಷ್ಟು ಹಿಂದೆಯೇ ತಮ್ಮ ವಾರಪತ್ರಿಕೆಯಲ್ಲಿ ‘ದೊಡ್ಡವರ ಸಣ್ಣತನ’ ಎನ್ನುವ ಸ್ಥಿರಮಾಲಿಕೆಯಲ್ಲಿ ಅನೇಕ ರಾಜಕೀಯ ಮುಂದಾಳುಗಳ ಸಣ್ಣತನದ ಪ್ರಸಂಗಗಳನ್ನು ರೋಚಕವಾಗಿ ಬಣ್ಣಿಸುತ್ತಿದ್ದರು. ಅವರೇ ಮುಂದೆ ‘ಪಾಪು ಪ್ರಪಂಚ’ ಎನ್ನುವ ಪುಸ್ತಕವನ್ನೂ ಹೊರತಂದರು. ತಮ್ಮ  ಲೇಖನಗಳಲ್ಲಿ ಪಾಟೀಲ  ಪುಟ್ಟಪ್ಪನವರು ರಾಜಕಾರಣಿಗಳ ಹುಳಕನ್ನು ಬಯಲಿಗೆಳದಿದ್ದಾರೆ. ಪುಟ್ಟಪ್ಪನವರ ಉದ್ದೇಶ ನಾಗರಿಕಪ್ರಜ್ಞೆಯನ್ನು ಜಾಗೃತಗೊಳಿಸುವದಾಗಿತ್ತೇ ಹೊರತು ಛಿದ್ರಾನ್ವೇಷಣೆಯಾಗಿರಲಿಲ್ಲ.  ಈ ರೀತಿಯಾಗಿ ಎರಡು ಶತಮಾನಗಳ ಕಾಲವನ್ನು  ವ್ಯಾಪಿಸಿದ, ಅದರಂತೆ ಇದೇ ದಶಕದಲ್ಲಿ ಪ್ರಕಟವಾದ ಸಾಹಿತ್ಯಕೃತಿಗಳು ಕನ್ನಡದಲ್ಲಿ ಸಾಕಷ್ಟಿದ್ದರೂ ಸಹ, ಕರ್ನಾಟಕದ ಹೆಮ್ಮೆಯ ಪ್ರಕಾಶನಸಂಸ್ಥೆಯೆಂದು ಹೇಳಿಕೊಳ್ಳುವ ‘ಮನೋಹರ ಗ್ರಂಥಮಾಲಾ’ ಸಂಸ್ಥೆಯ ಮಾಲಕರಾದ ರಮಾಕಾಂತ ಜೋಶಿಯವರಿಗೆ  ಪ್ರಸಂಗಸಾಹಿತ್ಯವು ಇತ್ತೀಚಿನ ಬೆಳವಣಿಗೆಯಂತೆ ಕಾಣುತ್ತಿರುವದು  ಅಚ್ಚರಿಯ ಸಂಗತಿ. (ಪ್ರಕಾಶಕರ ಮಾತು ನೋಡಿರಿ: “ಇತ್ತೀಚೆಗೆ ಸಾಹಿತ್ಯಪ್ರಕಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗತೊಡಗಿದ್ದು, ಶುದ್ಧ ಸಾಹಿತ್ಯಕ್ಕಿಂತ ಹೆಚ್ಚಾಗಿ ಸಾಹಿತ್ಯ ಲೋಕದ ಆಜೂ ಬಾಜೂ ನಡೆದಿರಬಹುದಾದ, ನಡೆದ ಪ್ರಸಂಗಗಳನ್ನು ಅರಿಯುವ ಕುತೂಹಲ ಓದುಗರಿಗೆ ಹೆಚ್ಚಾಗತೊಡಗಿದೆ.)

ಗಿರಡ್ಡಿಯವರ ಶೈಲಿಯ ಬಗೆಗೆ ಒಂದು ಮಾತು. ತಮ್ಮ ಸ್ವಪ್ರಶಂಸೆಯು ಢಾಳಾಗಿ ಕಾಣಬಾರದೆಂದೊ ಅಥವಾ gentleman image ಇಟ್ಟುಕೊಳ್ಳುವ ಉದ್ದೇಶದಿಂದಲೋ ಗಿರಡ್ಡಿಯವರು ತಮ್ಮ ಲೇಖನಗಳನ್ನು ಸಂಕೋಚಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಆದರೆ ಇದರ ಪರಿಣಾಮ ಹೇಗಾಗಿದೆಯಂದರೆ ಇವರ ಲೇಖನಗಳು ನಿಸ್ಸತ್ವ, ನಿಸ್ಸಾರ ಶೈಲಿಯ ನಿರರ್ಥಕ ಚಿತ್ರಗಳಂತೆ ಕಾಣುತ್ತವೆ. ಪುಸ್ತಕವನ್ನು ಓದಿದ ಬಳಿಕ ಓದುಗನಿಗೆ ತನ್ನ ಸಮಯವು ಹಾಳಾಯಿತಲ್ಲ ಎಂದು ಪರಿತಾಪವಾಗಲಾರದೆ ಇರಲಾರದು. ಗುಜರಿಯಲ್ಲಿ ಬಿಕರಿಯಾಗಬೇಕಾದ ಕೃತಿಯನ್ನು ಮನೋಹರ ಗ್ರಂಥಮಾಲೆಯು ತನ್ನ ಚಂದಾದರರಿಗೆ ಕೊಡಮಾಡಿದೆ ಎನ್ನಲು ವಿಷಾದವಾಗುತ್ತಿದೆ.

ಗಿರಡ್ಡಿಯವರ ನಿಬಂಧ ಇಲ್ಲಿದೆ. ತಾಳ್ಮೆ ಇದ್ದವರು ಓದಬಹುದು. ದಯವಿಟ್ಟು ನನ್ನನ್ನು ಕ್ಷಮಿಸಿರಿ.


Friday, November 27, 2009

ಶೋಷಣೆಯ ವಿವಿಧ ಮುಖಗಳು (ಅಮರೇಶ ನುಗಡೋಣಿ)

ಅನೇಕ ಶತಮಾನಗಳಿಂದ ಭಾರತೀಯ ಸಮಾಜದಲ್ಲಿ ಊಳಿಗಮಾನ್ಯ  ಕೃಷಿ ಸಂಸ್ಕೃತಿಯು (feudal agricultural society) ಭದ್ರವಾಗಿ ಸ್ಥಾಪಿತವಾಗಿತ್ತು. ಈ ಸಂಸ್ಕೃತಿಯಲ್ಲಿ ಜಮೀನುದಾರರ ದಬ್ಬಾಳಿಕೆ ಹಾಗು ಅಸಹಾಯಕರ ಶೋಷಣೆ ನಡದೇ ಇದ್ದವು. ಈ ಕ್ರೌರ್ಯ ಹಾಗು ಮೂಢನಂಬಿಕೆಗಳ ಹೊರತಾಗಿಯೂ, ನಮ್ಮ ಸಾಂಪ್ರದಾಯಕ ಗ್ರಾಮೀಣ ಸಂಸ್ಕೃತಿಯಲ್ಲಿ ಅನೇಕ ಒಳ್ಳೆಯ ಅಂಶಗಳೂ ಇದ್ದವು.  ಗ್ರಾಮೀಣ ಜನರಲ್ಲಿದ್ದ ಮಾನವೀಯ ಸಂಬಂಧಗಳು, ನೈತಿಕ ಶ್ರದ್ಧೆ, ದೈವನಿಷ್ಠೆ ಹಾಗು ಪರಿಸರದ ಜೊತೆಗೆ ಅವರಿಗಿದ್ದ ಅಭಿನ್ನತೆ (symbiosis) ಇವು ಈ ಸಂಸ್ಕೃತಿಯ ಒಳ್ಳೆಯ ಅಂಶಗಳು.

ಔದ್ಯೋಗೀಕರಣದ ಫಲವಾಗಿ ಇದೀಗ ಭಾರತದಲ್ಲಿ ಹಬ್ಬಿಕೊಂಡ ಆಧುನಿಕ, ವ್ಯಾಪಾರೀ ನಾಗರಿಕತೆಯು ಗ್ರಾಮೀಣರ ಶೋಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ; ಜೊತೆಗೇ  ಗ್ರಾಮೀಣ ಸಂಸ್ಕೃತಿಯ ಉತ್ತಮ ಅಂಶಗಳನ್ನು  ನಾಶ ಮಾಡುತ್ತಲಿದೆ. ಅಮರೇಶ ನುಗಡೋಣಿಯವರ  ‘ಸವಾರಿ’ ಹಾಗು‘ಮುಸ್ಸಂಜೆಯ ಕಥಾನಕಗಳು’ ಸಂಕಲನಗಳಲ್ಲಿ ಬರುವ ಕತೆಗಳಲ್ಲಿ ಈ ಸಂಸ್ಕೃತಿವಿನಾಶದ ವಿಧಾನ ಹಾಗು ಇದರ  ಪರಿಣಾಮಗಳು  ಸಮರ್ಥವಾಗಿ ಚಿತ್ರಿಸಲ್ಪಟ್ಟಿವೆ.
ನಗರಗಳಲ್ಲಿ ಹಬ್ಬಿರುವ ನಯವಂಚಕ, ವ್ಯಾಪಾರೀ ನಾಗರಿಕತೆಯ ಹಾಗೂ ಅದಕ್ಕೆ ನಿಧಾನವಾಗಿ ಬಲಿಯಾದ ಗ್ರಾಮೀಣ ಮುಗ್ಧರ ವರ್ಣನೆ “ ದೈವಕ್ಕೆ ಮೊದಲು ಶರಣೆಂಬೆವು” ಕತೆಯಲ್ಲಿ ಬರುತ್ತದೆ.

ಮಾದಪ್ಪ ಹಾಗು ಪಾತವ್ವ ಇವರು ಕೃಷ್ಣಾ ನದಿಯ ನಡುಗಡ್ಡೆಯ ಊರೊಂದರಲ್ಲಿ ಇರುವ ಮುದಿ ದಂಪತಿಗಳು. `ಪಾತಪ್ಪ ದೇವರ' ಕತೆ ಹೇಳುವದೇ ಇವರ ಪಾರಂಪಾರಿಕ ಕಾಯಕ. ಪಾತಪ್ಪ ದೇವರ ಜಾತ್ರೆ ಆದಾಗ ಹಾಗು ಸುತ್ತು ಮುತ್ತಲಿನ ಹಳ್ಳಿಗಳಲ್ಲಿ ಇರುವ ಮನೆಗಳಲ್ಲಿ ಯಾವುದೇ ಒಂದು ಶುಭಕಾರ್ಯ ಜರಗುವ ಮೊದಲು ಈ ದಂಪತಿಗಳಿಂದ ಪಾತಪ್ಪ ದೇವರ ಕತೆ ಹೇಳಿಸುವದು ಅಲ್ಲಿಯ ವಾಡಿಕೆ. ಆ ಊರಿನ ಹುಡುಗನೊಬ್ಬ ಪಟ್ಟಣದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾನೆ. ಆತನ ವಿಷಯ ಜಾನಪದ ಅಧ್ಯಯನ.  ಈ ದಂಪತಿಗಳನ್ನು ಪುಸಲಾಯಿಸಿ, ಇವರಿಂದ ಪಾತಪ್ಪ ದೇವರ ಹಾಡನ್ನು ಹಾಡಿಸಿ, ಟೇಪ್ ಮಾಡಿಕೊಂಡು ಹೋದ ಆ ಹುಡುಗ ತನ್ನ ಪದವಿಗಾಗಿ ಅದನ್ನು ಬಳಸಿಕೊಳ್ಳುತ್ತಾನೆ. ಆ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥರು ಅದನ್ನೇ ತಮ್ಮ ಸಂಶೋಧನೆ ಎಂದು ತೋರಿಸಿಕೊಳ್ಳುತ್ತಾರೆ. ರೇಡಿಯೋ ಹಾಗು ಟೀವಿಗಳಲ್ಲಿ ಇವರ ಸಂದರ್ಶನಗಳಾಗುತ್ತವೆ. ಇವರ ಹಾಡಿನ ಕ್ಯಾಸೆಟ್ ಹೊರಬರುತ್ತದೆ. ಇವರನ್ನು ಬಳಸಿಕೊಂಡವರು ಸಾಕಷ್ಟು ದುಡ್ಡು ಮಾಡಿಕೊಳ್ಳುತ್ತಾರೆ. ಆದರೆ ಅದಾವದೂ ಇವರ ಅರಿವಿಗೇ ಬಂದಿಲ್ಲ. ಅವರು ಬಿಸಾಕಿದ ಸ್ವಲ್ಪ ಹಣವೇ ಮಾದಪ್ಪನಲ್ಲಿ ನವಿರಾದ ಧಿಮಾಕನ್ನು ಹುಟ್ಟಿಸಲು ಕಾರಣವಾಗಿ ಬಿಡುತ್ತದೆ. ತಮ್ಮ ಮನೆಗಳಲ್ಲಿಯ ಶುಭಕಾರ್ಯಗಳಿಗಾಗಿ ಹಾಡಲೆಂದು ಹಳ್ಳಿಗರು ಇವರನ್ನು ಆಹ್ವಾನಿಸಿದಾಗ, ಇವರು ತಮ್ಮ ಪಟ್ಟಣದಲ್ಲಿಯ ಕಾರ್ಯಕ್ರಮಗಳಿಂದಾಗಿ ಹಳ್ಳಿಗರ ಮನೆಗಳಿಗೆ ಹೋಗಲಾರದಂತಹ ಪ್ರಸಂಗಗಳು ನಡೆಯುತ್ತವೆ. ಬೇಸತ್ತ ಹಳ್ಳಿಗರು ಈ ದಂಪತಿಗಳನ್ನು ಜಾತ್ರೆಯಿಂದ ದೂರವಿಡುವ ನಿರ್ಧಾರ ಕೈಗೊಳ್ಳುತ್ತಾರೆ. ಈ ಸಲದ ಪಾತಪ್ಪ ದೇವರ ಜಾತ್ರೆಗೆ ಈ ದಂಪತಿಗಳ ಬದಲಾಗಿ, ಹಾಡು ಬಲ್ಲ ಮತ್ತೊಬ್ಬನನ್ನು ಕರೆಯುತ್ತಾರೆ. ಮಾದಪ್ಪ ಹಾಗು ಪಾತಮ್ಮ ಇವರಿಗೆ ಎಲ್ಲಿಯೂ ನೆಲೆ ಇಲ್ಲದಂತಾಗುತ್ತದೆ. ತಮ್ಮ ತಪ್ಪನ್ನು ಅರಿತ ಈ ದಂಪತಿಗಳು ಸಮಸ್ತ ಹಳ್ಳಿಗಳ ದೈವದವರಿಗೆ ದೈನ್ಯದಿಂದ ಮೊರೆ ಇಡುತ್ತಾರೆ. ಆದರೆ ಅದಕ್ಕೆ  ದೈವದವರು ಒಪ್ಪುವದಿಲ್ಲ. ಕೊನೆಗೂ ಈ ದಂಪತಿಗಳು ತಮ್ಮ ತಪ್ಪಿಗೆ ಪಶ್ಚಾತ್ತಾಪರೂಪದಲ್ಲಿ ದೇವರ ಹಾಡು ಹೇಳಲು ಅಲ್ಲಿಗೆ ಬರದೆ ಬಿಡುವದಿಲ್ಲ.  ನಗರ ಸಂಸ್ಕೃತಿಯ  ವಿಷವು ಈ ಮುಗ್ದ ಗ್ರಾಮೀಣರನ್ನು ಬಲಿ ತೆಗೆದುಕೊಂಡ ಬಗೆಯನ್ನು ನುಗಡೋಣಿಯವರು ಈ ಕತೆಯಲ್ಲಿ ಚಿತ್ರಿಸಿದ್ದಾರೆ.
…………………………………………………….
ಜಮೀನುದಾರಿಕೆಯ ವ್ಯವಸ್ಥೆಯಲ್ಲಿ ಶೋಷಣೆಯಿದ್ದರೂ ಸಹ, ಜಮೀನುದಾರನಿಗೆ ಹಾಗೂ ಆತನ ಆಳುಗಳಿಗೆ ವೈಯಕ್ತಿಕ ಹಾಗೂ ಮುಖಾಮುಖಿ ಸಂಬಂಧವಿರುತ್ತಿತ್ತು. ಜಮೀನುದಾರಿಕೆಯ ಬದಲಾಗಿ ಈಗ ಗಣಿಗಾರಿಕೆ ಬಂದಿದೆ. ಜಮೀನುದಾರಿಕೆಗಿಂತಲೂ ಹೆಚ್ಚು ಕ್ರೂರವಾದ ವ್ಯವಸ್ಥೆಯಿದು. ಇಲ್ಲಿ ಶೋಷಕನ ಅಪಾರವಾದ ಧನಬಲದ ಎದುರಿಗೆ ಶೋಷಿತನು ಮುಖವಿಲ್ಲದ ಗುಲಾಮ. ಶೋಷಕರ ಇಂತಹ ಬಕಾಸುರ ರೂಪವನ್ನು ತೋರಿಸುವ  ಕತೆ : “ಒಡಲುಗೊಂಡವರು”.

ಹಳ್ಳಿಯೊಂದರಲ್ಲಿ ಘನತೆಯಿಂದ ಬಾಳಿದ ಕೆಳವರ್ಗದ ಕುಟುಂಬವೊಂದರ ಯಜಮಾನ ತನ್ನ ಒಬ್ಬ ಮಗಳನ್ನು ದೇವರಿಗೆ ಬಿಟ್ಟಿದ್ದಾನೆ. ಅವನ ಕಾಲ ಈಗ ಮುಗಿದಿದೆ. ಹಳ್ಳಿಯ ದುಡಿಮೆಯಿಂದ ಹೊಟ್ಟೆ ತುಂಬದ ಕಾರಣದಿಂದ ಈತನ ಒಬ್ಬ ಮಗ ಹಾಗು ಸೊಸೆ ದುಡಿಯಲು ಗೋವಾಕ್ಕೆ ಹೋಗಿದ್ದಾರೆ. ಈತನ ನಿಧನದ ನಂತರ ಈತನ ಮುದುಕಿ ಹೆಂಡತಿ ತನ್ನ ಕೊನೆಯ ಮಗ ಹರಿಶ್ಚಂದ್ರನ ಜೊತೆಗೆ ಇದ್ದಾಳೆ. ಮಗಳ ಮಗಳಾದ ರೇಣುಕಾಳನ್ನು ಈತ ಮದುವೆ ಮಾಡಿಕೊಳ್ಳಲಿ ಎನ್ನುವದು ಮುದುಕಿಯ ಹಾಗು ಹಿರಿಸೊಸೆಯ ಆಸೆ.  ಹರಿಶ್ಚಂದ್ರನಾದರೋ ಗಣಿದಣಿಗಳ ವಿರುದ್ಧದ ಚಳುವಳಿಯಲ್ಲಿ ಭಾಗವಹಿಸುತ್ತ ಯೂನಿಯನ್ ನಾಯಕರೊಡನೆ ತಿರುಗುತ್ತಿರುತ್ತಾನೆ.  ಇತ್ತ ಮೊಮ್ಮಗಳು ರೇಣುಕಾ ಸಹ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ನಗರದಲ್ಲಿ  ನೌಕರಿಯನ್ನು ಮಾಡುತ್ತಿರುತ್ತಾಳೆ.

ಸಾಯಲಾಗಿದ್ದ ಮುದುಕಿಗೆ ತನ್ನ ಗಂಡನ ಸಮಾಧಿಯ ಪಕ್ಕದಲ್ಲೇ ಮಣ್ಣಾಗುವ ಆಸೆ. ಆದರೆ, ಹರಿಶ್ಚಂದ್ರ ತನ್ನ ಬಂಧುಗಳಾರಿಗೂ ತಿಳಿಯದಂತೆ ಆ ಜಮೀನನ್ನು ಗಣಿಗಾರಿಕೆಗೆ ಮಾರಿಕೊಂಡು ದುಡ್ಡು ಎತ್ತಿ ಹಾಕಿ ಬಿಟ್ಟಿದ್ದಾನೆ. (ಅಹಾ, ಹರಿಶ್ಚಂದ್ರ!) ತನ್ನ ಅವ್ವ ಸತ್ತರೆ ಮಣ್ಣು ಮಾಡಲು ಜಾಗವಿಲ್ಲದ್ದಕ್ಕಾಗಿ ಈತ ಗಣಿಧಣಿಯ ಕಾಲು ಕಟ್ಟಿಕೊಳ್ಳುವದು ಅನಿವಾರ್ಯವಾಗಿದೆ. ಬಡತನದಿಂದಾಗಿ ವ್ಯವಸ್ಥೆಯ ವಿರುದ್ದ ಹೋರಾಡಲಾಗದೆ, ಈತ ಬದುಕಿನಲ್ಲಿ ‘ರಾಜೀ’ ಮಾಡಿಕೊಳ್ಳುತ್ತಲೇ ಇದ್ದಾನೆ.

ಇತ್ತ ರೇಣುಕಾ ಸಹ ತನ್ನ ನೌಕರಿಗಾಗಿ ‘ಸಹಾಯದಾತರ’ ಜೊತೆಗೆ  ರಾಜಿ ಮಾಡಿಕೊಂಡಾಗಿದೆ. ಇಂಥವಳೊಡನೆ ಮದುವೆಯಾಗಲು ಹರಿಶ್ಚಂದ್ರ ಸಿದ್ಧನಿಲ್ಲ. ಅವನಂತಹ ವಂಚಕನೊಡನೆ ಮದುವೆಯಾಗಲು ಅವಳೂ ಸಿದ್ಧಳಿಲ್ಲ.
ಧನಬಲದ ಎದುರು ಬಡವರ ನೈತಿಕತೆ, ಹೋರಾಟ ಹೇಗೆ ಕರಗಿ ಹೋಗುತ್ತದೆ, ಅವರ ಕುಟುಂಬಗಳು ಹೇಗೆ ಒಡೆದು ನುಚ್ಚುನೂರಾಗುತ್ತವೆ ಎನ್ನುವ ಚಿತ್ರಣ ಈ ಕತೆಯಲ್ಲಿದೆ.
..........................................................................................
ಗ್ರಾಮಸಂಸ್ಕೃತಿಯ ವಿನಾಶವು ಅಮರೇಶ ನುಗಡೋಣಿಯವರ ಕತೆಗಳ motif ಎನ್ನಬಹುದು. ಬಳ್ಳಾರಿಯಲ್ಲಿ ನಡೆದಿರುವ ಗಣಿಗಾರಿಕೆಯಿಂದಾಗಿ ಅಲ್ಲಿಯ ಹಳ್ಳಿಗರ ಕೌಟಂಬಿಕ ಜೀವನ ಹೇಗೆ ಛಿದ್ರವಾಗುತ್ತಿದೆ ಹಾಗು ಪರಂಪರಾಗತ ಗ್ರಾಮೀಣ ಸಂಸ್ಕೃತಿ ಹೇಗೆ ಹುಳಹತ್ತಿ ಹೋಗುತ್ತಿದೆ ಎನ್ನುವ ಚಿತ್ರಣವನ್ನು“ದಾಳಿ ನಡೆದಾವೋ ಅಣ್ಣಾ”  ಕತೆಯಲ್ಲಿ ಕಾಣಬಹುದು :

ಚಿಕ್ಕ ಹಳ್ಳಿಯೊಂದರಲ್ಲಿ ಒಕ್ಕಲುತನ ಮಾಡುತ್ತ ಬದುಕು ಸಾಗಿಸುತ್ತಿರುವ  ರೈತ ಮಲ್ಲಯ್ಯನಿಗೆ ತಾನು, ತನ್ನ ಪರಿಸರ ಹಾಗೂ ತನ್ನ ದೈವ ಮೈಲಾರಲಿಂಗ ಇವರಲ್ಲಿ ಭಿನ್ನತೆಯೇ ಇಲ್ಲ. ಈತನ ಎರಡು ಎತ್ತುಗಳಲ್ಲಿ ಒಂದರ ಹೆಸರು ಮಲ್ಲಯ್ಯ ; ಮತ್ತೊಂದರ ಹೆಸರು ಮೈಲಾರ.ಈತನ ತುಂಡು ಹೊಲ ಹಾಗೂ ಗುಡಿಸಿಲಿನ ನಡುವಿನ ಶಿವನಕೊಳ್ಳದಲ್ಲಿ ಒಂದು ಹಳ್ಳ  ಹರಿದಿದೆ. ಒಮ್ಮೆ ಹಳ್ಳ ದಾಟುವಾಗ ಏಕಾಏಕಿ ಪ್ರವಾಹ ಬಂದಾಗ ಈತ ಮೈಲಾರನ ಬಾಲ ಹಿಡಿದುಕೊಂಡೇ  ಹಳ್ಳ ದಾಟಿದ್ದಾನೆ. ಆದರೆ ಮತ್ತೊಂದು ಎತ್ತು ಮಲ್ಲಯ್ಯ ಆ ದುರ್ಘಟನೆಯಲ್ಲಿ ಜೀವ ನೀಗಿತು. ಅಂದಿನಿಂದ ಮಲ್ಲಯ್ಯ ಗಳೇ ಹೂಡಲಿಲ್ಲ.
ಮಲ್ಲಯ್ಯನ ಮಗಳು ಹುಲುಗಮ್ಮ ತನ್ನ ಗಂಡ ಹಾಗೂ ಮಕ್ಕಳೊಡನೆ ತಾಲೂಕು ಸ್ಥಾನದಲ್ಲಿದ್ದಾಳೆ. ಅವಳ ಗಂಡ ಕಾರಖಾನೆಯಲ್ಲಿ ದುಡಿಯುತ್ತಿದ್ದಾನೆ. ಕೆಲಸ ಮಾಡದ ಮಗ ಮೈಲಾರನದೇ ಚಿಂತೆ ಮಲ್ಲಯ್ಯನಿಗೆ. ಗಣಿದಣಿಗಳಿಗೆ ಹೊಲ ಮಾರುವಂತೆ ಮಲ್ಲಯ್ಯ ತನ್ನ ಅಪ್ಪ ಮೈಲಾರನನ್ನು ಪೀಡಿಸುತ್ತಿದ್ದಾನೆ. ಕೊನೆಗೊಮ್ಮೆ ಮಗ ಮನೆಯಿಂದ ಕಾಣದಾದ. ಲಾರಿ ಡ್ರೈವರ ಆಗಿದ್ದಾನೆ ಎಂದು ನೋಡಿದವರು ಹೇಳಿದರು. ಮಗನನ್ನು ನೋಡಲು ಅವನ ತಾಯಿ ನೀಲವ್ವ ಇಡೀ ದಿನವೆಲ್ಲ ಹೆದ್ದಾರಿಯ ಮೇಲೆ ಕಾಯುತ್ತ ನಿಂತಳು. ಬರುವ, ಹೋಗುವ ಲಾರಿಗಳಿಗೆಲ್ಲ ಕೈ ಮಾಡುತ್ತ ನಿಂತಳು. ತನ್ನನ್ನು ಕಂಡರೆ ಮಗ ನಿಲ್ಲಿಸದೆ ಹೋಗಲಾರ ಎನ್ನುವ ಭಾವನೆ ಅವಳದು. ಆದರೆ ಮಗ ಸಿಕ್ಕಿದ್ದು ಹೆಣವಾಗಿ.
ಇತ್ತ ಅಳಿಯ ಕೆಲಸ ಮಾಡುತ್ತಿದ್ದ ಕಾರಖಾನೆ ಮುಚ್ಚಿದ್ದರಿಂದ ಮಗಳ ಬಾಳುವೆಯೂ ಹದಗೆಟ್ಟಿತು. ಮಗಳೂ ಸಹ ಹೊಲ ಮಾರಿಕೊಂಡು ತನ್ನೊಡನೇ ಬಂದು ಇರು ಎಂದು ಅಪ್ಪನಿಗೆ ಹೇಳಿದಳು. ಆದರೆ ಮಲ್ಲಯ್ಯನಿಗೆ ಹೊಲ ಎಂದರೆ ಉಪಜೀವನದ ಸಾಧನ ಅಲ್ಲ ; ಅದೇ ಅವನ ಜೀವನ. ಆದರೆ ಅವನ ಈ ಜೀವನದ ದಾರಿಯನ್ನು ಸಹ ಸರಕಾರದವರು ಮುಚ್ಚಿ ಬಿಟ್ಟಿದ್ದಾರೆ. ತನ್ನ ಹೊಲಕ್ಕೆ ಹೋಗುವ ದಾರಿಯಾದ ಶಿವನಕೊಳ್ಳ ಇಲ್ಲಿಯವರೆಗೂ ಈ ಹಳ್ಳಿಗರ  ನಿತ್ಯಜೀವನದ ಒಂದು ಭಾಗವಾಗಿತ್ತು. ಸರಕಾರವು ಅದನ್ನೀಗ ‘ರೆಸಾ^ರ್ಟ’ ಮಾಡಲು ಯಾರೋ ಖಾಸಗಿಯವರಿಗೆ ನೀಡಿದೆ.

ಅಂತಹ ಮಲ್ಲಯ್ಯನ ಶಿವನಕೊಳ್ಳ ಈಗ ಏನಾಗಿದೆ?
ಮಲ್ಲಯ್ಯನ ಊರ ಜನ ಈಗ ಏನಾಗಿದ್ದಾರೆ?

ಮಲ್ಲಯ್ಯ ಈಗ ಬಳಸುದಾರಿ ಹಿಡಿದು ತನ್ನ ಹೊಲಕ್ಕೆ ಹೋಗಬೇಕು. ಅಲ್ಲಿಂದ ನೋಡಿದಾಗ ಮೈಲಾರಲಿಂಗನ ಬೆಟ್ಟವೆಲ್ಲ ವಿಕಾರಗೊಂಡಿತ್ತು. ಧೂಳಿನಿಂದಾಗಿ ಹಕ್ಕಿಗಳು ದೇಶಾಂತರ ಹೋಗಿದ್ದವು. ಬೆಳೆ ಕುಂಠಿತವಾಗಿತ್ತು. ಹಳ್ಳದ ನೀರು ಕಲುಷಿತವಾಗಿತ್ತು. ನೀರು ಕುಡಿದ ಕೆಲವು ಜಾನುವಾರುಗಳು ಸತ್ತಿದ್ದವು.

ಮಲ್ಲಯ್ಯ ಹಿಂಬದಿಯ ಬೆಟ್ಟ ಹತ್ತಿ ತನ್ನ ಹೊಲಕ್ಕೆ ಬಂದ. ಹೊಲ ಈಗ ಹದಗೊಂಡಿತ್ತು.
ಒಂದು ಮಳೆಯಾದರೆ ಸಾಕು , ಬಿತ್ತಿಗೆ ಮಾಡಬಹುದು ಎಂದುಕೊಂಡ.
ಆದರೆ, ಅವನ ಹೊಲ ಅಲ್ಲಿ ಎಲ್ಲಿತ್ತು?

ಮಲ್ಲಯ್ಯನ ಸಮಸ್ತ ಪ್ರಪಂಚವೇ ಮುಳುಗಿ ಹೋದಂತಾಯಿತು.

ಊಳಿಗಮಾನ್ಯ ಕೃಷಿ ಸಂಸ್ಕೃತಿ ಈಗ ನಮ್ಮ ನಾಡಿನಿಂದ ಮಾಯವಾಗಿರಬಹುದು. ಆದರೆ ಅದಕ್ಕಿಂತ ಭಯಂಕರವಾದ ‘ಹಣ ಸಂಸ್ಕೃತಿ’ ನಮ್ಮ ಸಮಾಜದ ಸತ್ವವನ್ನು ಹಿಂಡಿ ಹಾಕಿದೆ. ಈ ಸಂಸ್ಕೃತಿಯಲ್ಲಿ ಉಳ್ಳವರು ಅನೈತಿಕ ಬಕಾಸುರರಾಗಿದ್ದರೆ, ಇಲ್ಲದವರು faceless zombieಗಳಾಗಿದ್ದಾರೆ. ತಮ್ಮ ಕತೆಗಳ ಮೂಲಕ ಅಮರೇಶ ನುಗಡೋಣಿಯವರು ಈ ದುಷ್ಟ ಸಂಸ್ಕೃತಿಯ ಮುಖಕ್ಕೆ ಕನ್ನಡಿ ಹಿಡಿದಿದ್ದಾರೆ.

ಒಂದು ಟಿಪ್ಪಣಿ:
ಇಬ್ಬರು ಸಮಕಾಲೀನ ಲೇಖಕರ ಸಾಹಿತ್ಯವನ್ನು ತುಲನೆ ಮಾಡುವದು ಸಾಧುವಲ್ಲ. ಆದರೂ ಸಹ ಕನ್ನಡದ ಇಬ್ಬರು ಶ್ರೇಷ್ಠ ಕತೆಗಾರರಾದ ಅಮರೇಶ ನುಗಡೋಣಿ ಹಾಗು ವಸುಧೇಂದ್ರ ಇವರ ಕತೆಗಳಲ್ಲಿಯ ಸಾಮ್ಯ ಹಾಗು ವೈಷಮ್ಯಗಳ ಬಗೆಗೆ ಒಂದೆರಡು ಸಾಲು ಬರೆಯಲು ತುಂಬಾ temptation ಆಗುತ್ತಿದೆ.

ಇವರಿಬ್ಬರೂ ಲೇಖಕರ ಬಹುತೇಕ ಕತೆಗಳು  ಶೋಷಣೆಯ ಬಗೆಗೆ ಇವೆ. ನುಗಡೋಣಿಯವರ ಕತೆಗಳು ಗ್ರಾಮೀಣ ಹಿನ್ನೆಲೆ ಹೊಂದಿದಂತಹವು;ವಸುಧೇಂದ್ರರ ಬಹುತೇಕ ಕತೆಗಳಿಗೆ ನಗರದ ಹಿನ್ನೆಲೆ ಇದೆ. ನುಗಡೋಣಿಯವರ ಕತೆಗಳ ಪಾತ್ರಗಳು so called ಕೆಳವರ್ಗದ ಪಾತ್ರಗಳು; ವಸುಧೇಂದ್ರರ ಕತೆಗಳಲ್ಲಿ ಕಾಣುವವರು so called ಮೇಲುವರ್ಗದ ಪಾತ್ರಗಳು. ವಸುಧೇಂದ್ರರ ಕತೆಗಳಲ್ಲಿ ಕೌಟಂಬಿಕ ಚೌಕಟ್ಟಿದೆ; ನುಗಡೋಣಿಯವರ  ಕತೆಗಳಿಗೆ ಸಾಮಾಜಿಕ ಚೌಕಟ್ಟಿದೆ. ವಸುಧೇಂದ್ರರ ಕತೆಗಳಲ್ಲಿ ಶೋಷಿತ ವ್ಯಕ್ತಿಗಳು ಶೋಷಣೆಯಲ್ಲಿಯೂ ಸಹ ವೈಯಕ್ತಿಕ ಗೆಲವನ್ನು ಸಾಧಿಸಿದವರು. ನುಗಡೋಣಿಯವರ ಪಾತ್ರಗಳು ದುರಂತ ಪಾತ್ರಗಳು. ವಸುಧೇಂದ್ರರ ಶೈಲಿಯಲ್ಲಿ ರಂಜನೆಯ ಅಂಶವಿದೆ; ನುಗಡೋಣಿಯವರದು ಗಂಭೀರ ಶೈಲಿ.

ಒಟ್ಟಿನಲ್ಲಿ, ಅಮರೇಶ ನುಗಡೋಣಿ ಹಾಗು ವಸುಧೇಂದ್ರ ಇವರೀರ್ವರು ಇಂದಿನ ಕನ್ನಡ ಕಥಾಸಾಹಿತ್ಯದ ಶ್ರೇಷ್ಠ ಪ್ರತಿನಿಧಿಗಳು ಎನ್ನಬಹುದು.

Sunday, November 8, 2009

"ತಮಂಧದ ಕೇಡು"----ಲೇ: ಅಮರೇಶ ನುಗಡೋಣಿ

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ ೧೯೬೦ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು.

ಊಳಿಗಮಾನ್ಯಸಂಸ್ಕೃತಿಯ ಮೂಲರೂಪ ಅರ್ಥಾತ್ classical model of feudal structure ಇದರ ಮುಖ್ಯ ಗುಣವೆಂದರೆ, ಶೋಷಿತನು ತನ್ನ ತನು ಹಾಗು ಮನವನ್ನಷ್ಟೇ ಅಲ್ಲ, ತನ್ನ ಆತ್ಮವನ್ನೂ ಸಹ ತನ್ನ ಯಜಮಾನನ ಊಳಿಗಕ್ಕೆ ಬೇಶರತ್ತಾಗಿ ಒಪ್ಪಿಸಿಬಿಟ್ಟಿರುತ್ತಾನೆ. ಇದಕ್ಕೆ ಪ್ರತಿಯಾಗಿ ಯಜಮಾನನು ದರ್ಪ, ದಬ್ಬಾಳಿಕೆ ಹಾಗು ಸರ್ವಸ್ವಾಮಿತ್ವವನ್ನು ಪ್ರದರ್ಶಿಸುತ್ತಾನೆ. ಇಂತಹ ತಮಂಧದ ಕೇಡಿನಿಂದ ಹೊರಬರಬೇಕಾದರೆ ಶಿಕ್ಷಣದ ಬೆಳಕು ಬೇಕು. ಆದರೆ ಈ ವ್ಯವಸ್ಥೆಯು ಅಂತಹ ಶಿಕ್ಷಿತ ಪ್ರತಿಭಟನಾಕಾರರನ್ನೂ ಸಹ ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕಿ ಬಿಡುತ್ತದೆ.

ನುಗಡೋಣಿಯವರ "ತಮಂಧದ ಕೇಡು" ಎನ್ನುವ ಕತೆಯಲ್ಲಿ ದುರುಗ ಎನ್ನುವ ಜೀತದಾಳಿನ ದುಃಸ್ವಪ್ನದೊಂದಿಗೆ ಕತೆ ಪ್ರಾರಂಭವಾಗುತ್ತದೆ. ತನ್ನ ಒಡೆಯನಾದ ಶಾಂತಗೌಡನ ಜಮೀನಿನಲ್ಲಿರುವ ಎರಡು ದೊಡ್ಡ ಮರಗಳ ನಡುವೆ ಜೋಪಡಿ
ಹಾಕಿಕೊಂಡು, ದುರುಗ ತನ್ನ ಹೆಂಡತಿ ಚಂದವ್ವ ಹಾಗು ಜೋಳಿಗೆ ಕೂಸು ಚೆನ್ನಮಲ್ಲಪ್ಪನೊಂದಿಗೆ ಬದುಕು ಸಾಗಿಸುತ್ತಿದ್ದಾನೆ.
ಒಡೆಯನಿಗೆ ನಿಷ್ಠೆಯಿಂದ ದುಡಿಯುವದರಿಂದ ದುರುಗ ಶಾಂತಗೌಡನ ನೆಚ್ಚಿನ ಆಳಾಗಿದ್ದಾನೆ. ಶಾಂತಗೌಡ ‘ದುರುಗಾ’ ಎಂದು ಕೂಗಿದಾಗ, ದುರುಗನಿಗೆ ಇದು ಪುಣ್ಯದ ಕರೆಯಂತೆ ಕೇಳಿಸುವಷ್ಟು ಈತ ಶಾಂತಗೌಡನ ದಾಸನಾಗಿದ್ದಾನೆ.

ಇಂತಹ ದುರುಗನ ಚಂದದ ಹೆಂಡತಿ ಚಂದಮ್ಮನ ಮೇಲೆ ಶಾಂತಗೌಡನಿಗೆ ಮನಸ್ಸಾಗುತ್ತದೆ.

ಚಂದಮ್ಮ ತನ್ನ ದಣಿಗೆ ಪ್ರತಿಭಟನೆ ಇಲ್ಲದೆ ವಶವಾದಳು. ಆದರೆ ಈ ಕೆಂಡವನ್ನು ಮನದಲ್ಲಿಯೇ ಇಟ್ಟುಕೊಂಡಿರಲು ಅವಳಿಂದ ಸಾಧ್ಯವಾದೀತೆ? ಕೊನೆಗೊಮ್ಮೆ ತನ್ನ ಗಂಡ ದುರುಗನೆದುರಿಗೆ ಅವಳು ತನ್ನ ಸಂಕಟವನ್ನು ಬಿಚ್ಚಿಟ್ಟಳು. ದುರುಗನಾದರೋ ತನ್ನ ತನು, ಮನಗಳನ್ನು ತನ್ನ ದಣಿಗೆ ಒಪ್ಪಿಸಿಬಿಟ್ಟ ಊಳಿಗದಾಳು. ಆತ ಏನು ಮಾಡಿಯಾನು?
ತಪ್ಪು ಮಾಡಿದವನು ದಣಿ. ಆದರೆ ದುರುಗನೇ ಆತನ ಕಾಲಿಗೆ ಬಿದ್ದು ಅತ್ತು ಬಿಡುತ್ತಾನೆ! ತನ್ನ ಹೆಂಡತಿಯನ್ನು ಮರಳಿ ಕರೆ ತರುತ್ತಾನೆ. ಶಾಂತಗೌಡ ದಣಿಯ ಹಕ್ಕನ್ನು ದುರುಗನ ಹೆಂಡತಿಯ ಮೇಲೆ ಮರುಸ್ಥಾಪಿಸುತ್ತಾನೆ. ಇಷ್ಟಾದರೂ ದುರುಗ ಆ ಹಳ್ಳಿಯನ್ನು ಬಿಟ್ಟು, ತನ್ನ ದಣಿಯನ್ನು ಬಿಟ್ಟು ಬೇರೆಲ್ಲೂ ಹೋಗುವದಿಲ್ಲ! ಯಾಕೆಂದರೆ ಆತ ತನ್ನ ದಾಸ್ಯತ್ವವನ್ನು ಕಾಯಾ, ವಾಚಾ, ಮನಸಾ ಒಪ್ಪಿಕೊಂಡು ಬಿಟ್ಟಿದ್ದಾನೆ.
ಇತ್ತ ಚಂದಮ್ಮನೂ ಬಹಳ ದಿನ ಬದುಕುವದಿಲ್ಲ. ದುರುಗನ ಮಗ ಊರ ಮಗನಾಗಿ ಬೆಳೆದವನು ಹೆಚ್ಚಿನ ಕಲಿಕೆಗಾಗಿ ಶಹರಕ್ಕೆ ಹೋಗುತ್ತಾನೆ. ಯಜಮಾನ ಶಾಂತಗೌಡ ತನ್ನ ನೆಚ್ಚಿನ ಬಂಟನ ಮಗನ ಶಿಕ್ಷಣಕ್ಕೆ ಉದಾರವಾಗಿ ನೆರವು ನೀಡುತ್ತಾನೆ. ಚೆನ್ನಮಲ್ಲಪ್ಪ ಆ ಶಹರದ ಶಾಲೆಯಲ್ಲಿಯೇ ಶಿಕ್ಷಕನಾಗುತ್ತಾನೆ.

ಶಾಂತಗೌಡನ ಒಬ್ಬಳೇ ಸಂತಾನವಾದ ಅಕ್ಕಮಹಾದೇವಿ ಕಲಿಯಲೆಂದು ಶಹರದಲ್ಲಿಯೇ ಇದ್ದವಳು ಚೆನ್ನಮಲ್ಲಪ್ಪನಲ್ಲಿ ಅನುರಕ್ತಳಾಗುತ್ತಾಳೆ. ಈ ಆಘಾತಕಾರಿ ಸುದ್ದಿ ತನಗೆ ಬಂದು ಮುಟ್ಟಿದೊಡನೆಯೆ ದುರುಗ ನಿರ್ವಿಣ್ಣನಾಗಿ ತನ್ನ ಮಗನಿಗೆ ಬುದ್ಧಿ ಹೇಳುತ್ತಾನೆ. ಆ ಬುದ್ಧಿಮಾತಿನಲ್ಲೂ ಸಹ ಆತನ ದಾಸ್ಯಭಾವ ಹೇಗೆ ಮೇಲುಗೈಯಾಗಿದೆಯೆನ್ನುವದನ್ನು ನೋಡಿರಿ:


"ನನ್ಗ ಇಲ್ಲಿ ಬುಡಾದ ನಂಟದ" ಎಂದು ಹೇಳುವ ದುರುಗನಿಗೆ ಇರುವ ನಂಟು ಎಂತಹದು? ದುರುಗ ಇರುತ್ತಿದ್ದ ಮರಗಳ ನಡುವಿನ ಜೋಪಡಿ ಈಗಿಲ್ಲ. ಮರಮಟ್ಟುಗಳನ್ನು ಮಾಡಿಸಲು ಶಾಂತಗೌಡ ಆ ಮರಗಳನ್ನು ಕಡಿಸಿ ಹಾಕಿದ್ದಾನೆ. ದುರುಗನಿಗೆ ಹಾಗೂ ನೂರಾರು ಹಕ್ಕಿಗಳಿಗೆ ಆಸರೆಯಾಗಿದ್ದ ಆ ಮರಗಳು, ಯಜಮಾನಿಕೆಯ ಉಪಭೋಗಕ್ಕಾಗಿ ನಷ್ಟವಾಗಿವೆ. ದುರುಗ ಹಾಗು ಆ ಮರಗಳ ನಡುವೆ ಭಾವನಾತ್ಮಕ ಸಂಬಂಧವಿತ್ತು. ದುರುಗ ದೈನಾಸಪಡುತ್ತ ಆ ಮರಗಳನ್ನು ಉಳಿಸಲು ಶಾಂತಗೌಡನಿಗೆ ಬೇಡಿಕೊಳ್ಳುವದು ಹೀಗೆ:
ಇದಕ್ಕೆ ಪ್ರತಿಯಾಗಿ ಶಾಂತಗೌಡನಲ್ಲಿರುವದು ದರ್ಪ ಹಾಗು ಸಿಟ್ಟಿನ ಸ್ವಭಾವ. ಎಲ್ಲವೂ ತನಗಾಗಿಯೇ, ತನ್ನ ಉಪಭೋಗಕ್ಕಾಗಿಯೇ ಇರುವದು ಎನ್ನುವ ಅಹಂಭಾವ. (‘ಶಾಂತಗೌಡ’ ಎನ್ನುವ ಹೆಸರಿನ ಅಸಂಗತತೆಯನ್ನು ಗಮನಿಸಿರಿ.) ದುರುಗನ ಮೇಲಿನ ತನ್ನ ಸಿಟ್ಟನ್ನು ಆತ ಇತರ ಆಳುಗಳ ಮೇಲೆ ಹಾಗು ಜಾನುವಾರುಗಳ ಮೇಲೆ ತಿರುಗಿಸುವದರ ವರ್ಣನೆ ಹೀಗಿದೆ:

ಶಾಂತಗೌಡ ಹೊಳೆಯ ಈಚೆಯ ಹಳ್ಳಿಯಲ್ಲಿದ್ದರೆ, ಹೊಳೆಯ ಆಚೆಯ ಬದಿಯಲ್ಲಿ ಅವನ ಅಕ್ಕ ಇದ್ದಾಳೆ. ವಿಧವೆಯಾದ ಮೇಲೆ
ತಾನೇ ಜಮೀನುದಾರಿಕೆಯನ್ನು ಗೌಡತಿಯ ಎಲ್ಲಾ ಗತ್ತಿನೊಂದಿಗೆ ನಡೆಯಿಸಿಕೊಂಡು ಹೋಗುತ್ತಿದ್ದಾಳೆ. ಸೇತುವೆ ಇಲ್ಲಿ ಇಲ್ಲದ್ದರಿಂದ ದುರುಗನೇ ಶಾಂತಗೌಡನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೊಳೆ ದಾಟಿಸುತ್ತಿದ್ದ.

ಶಾಂತಗೌಡನ ಮಗಳನ್ನು ತನ್ನ ಸೊಸೆಯನ್ನಾಗಿ ಮಾಡಿಕೊಂಡರೆ, ತಮ್ಮನ ಆಸ್ತಿ ಎಲ್ಲ ತನಗೇ ಬರುವದೆನ್ನುವ ಒಳ ಆಸೆ ಈ ಅಕ್ಕನಿಗಿದೆ. ಆದರೆ ಅಕ್ಕಮಹಾದೇವಿ ಊಳಿಗದ ಆಳಾದ ದುರುಗನ ಮಗ ಚೆನ್ನಮಲ್ಲಪ್ಪನಲ್ಲಿ ಅನುರಕ್ತಳಾಗಿದ್ದಾಳೆ. ಶಾಂತಗೌಡನು ದುರುಗನ ಹೆಗಲ ಮೇಲೆ ಸವಾರಿ ಮಾಡಿಕೊಂಡು, ಹೊಳೆ ದಾಟಿ ತನ್ನ ಅಕ್ಕನಿದ್ದಲ್ಲಿಗೆ ಬಂದು ಅವಳೊಡನೆ ಈ ಸಮಸ್ಯೆಯ ಬಗೆಗೆ ಆಪ್ತಾಲೋಚನೆ ಮಾಡುತ್ತಾನೆ.

ಯಜಮಾನಸಂಸ್ಕೃತಿಯ ಪಟ್ಟದಲ್ಲಿರುವ ವ್ಯಕ್ತಿಗೆ ತನ್ನ ಪಟ್ಟದ ಭದ್ರತೆಯೊಂದೇ ಮುಖ್ಯ. ಸ್ವಾರ್ಥಸಾಧನೆಯ ಕ್ರೌರ್ಯ ಈ ವ್ಯಕ್ತಿಯ ಅಂತರಾಳದಲ್ಲಿ ಲಿಂಗಭೇದವಿಲ್ಲದೇ ಹುದುಗಿರುತ್ತದೆ. ತನ್ನ ತಮ್ಮನಿಗೆ ಅವಳು ಕೊಡುವ ಸಲಹೆಯು ಅವಳ ತಮ್ಮನನ್ನೂ ಸಹ ಒಂದು ನಿಮಿಷ ನಡುಗಿಸಿ ಬಿಡುತ್ತದೆ:
ಶಾಂತಗೌಡ ಹಳ್ಳಿಗೆ ಮರಳುವಾಗ ಮತ್ತೆ ದುರುಗನ ಮೇಲೆ ಸವಾರಿ ಮಾಡಿ ಹೊಳೆ ದಾಟಬೇಕು. ಹೊಳೆ ದಾಟುವಾಗ ತನ್ನ ದಣಿಯನ್ನು ಹೊಳೆಯಲ್ಲಿ ಮುಳುಗಿಸಿಬಿಡುವದು ದುರುಗನಿಗೆ ಸುಲಭವಾದ ಕೆಲಸ; ಆದರೆ ಸರಳವಾದ ಕೆಲಸವಲ್ಲ. ಯಾಕೆಂದರೆ ಜೀತದಾಳಾದ ಆತನು ತನ್ನ ಒಡೆಯನ ಕೇಡನ್ನು  ಕನಸುಮನಸಿನಲ್ಲೂ ಎಣಿಸಲಾರ. ದುರುಗನ ಮನದಲ್ಲಿ ನಡೆದ ತುಮುಲದ ವರ್ಣನೆಯನ್ನು ನುಗಡೋಣಿಯವರು ಈ ರೀತಿಯಾಗಿ ಮಾಡಿದ್ದಾರೆ:
ನುಗಡೋಣಿಯವರ ವೈಶಿಷ್ಟ್ಯವೆಂದರೆ, ಅವರು ಶೋಷಿತನ ಬವಣೆಯ ವರ್ಣನೆಗಿಂತ, ಶೋಷಣಾವ್ಯವಸ್ಥೆಯ ಚಿತ್ರಣಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಇಲ್ಲಿ ದರ್ಪವೇ ಮೂರ್ತಿವೆತ್ತ ಯಜಮಾನ ಹಾಗು ದಾಸ್ಯವೇ ಮೂರ್ತಿವೆತ್ತ ಊಳಿಗದಾಳನ್ನು ಕಾಣುತ್ತೇವೆ.
ಈ ಶೋಷಣಾವ್ಯವಸ್ಥೆಯಲ್ಲಿ ಯಜಮಾನನ ಮನೆತನಕ್ಕೊಬ್ಬ ಹಿತಚಿಂತಕ ಗುರುಗಳೂ ಇರುತ್ತಾರೆ. ಆದರೆ ಬುದ್ಧಿ ಹೇಳುವ ಶಕ್ತಿ ಅವರಿಗಿರುವದಿಲ್ಲ. ಇಂತಹ ಕತೆಗಳ ಅನಿವಾರ್ಯ ದುರಂತವನ್ನು ನಿರ್ಲಿಪ್ತ ಶೈಲಿಯಲ್ಲಿ ಚಿತ್ರಿಸುವದು ನುಗಡೋಣಿಯವರ ಹೆಗ್ಗಳಿಕೆ.

Wednesday, October 14, 2009

ಪತ್ರಿಕಾಪ್ರದೂಷಣ

ಉತ್ತರ ಕರ್ನಾಟಕದಲ್ಲಿ  ರಾಜಕೀಯ ಹಾಗೂ ಸಾಮಾಜಿಕ ಜಾಗೃತಿಯ ಉದ್ದೇಶದಿಂದ ೧೯೩೩ನೆಯ ಇಸವಿಯಲ್ಲಿ , ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು ಬೆಳಗಾವಿಯಲ್ಲಿ ಪ್ರಾರಂಭವಾಯಿತು. ಅನೇಕ ವರ್ಷಗಳವರೆಗೆ ಈ ಪತ್ರಿಕೆಯು ತನ್ನ ಆದರ್ಶ ಮತ್ತು ಧ್ಯೇಯಗಳಿಗೆ ಅನುಸಾರವಾಗಿ ಅತ್ಯುತ್ತಮ ಕೆಲಸವನ್ನು ಮಾಡಿತು. ಈ ಪತ್ರಿಕೆಯ ಪೂರ್ವಕಾಲದ ಸಂಪಾದಕರಾದ ಮೊಹರೆ ಹಣಮಂತರಾಯರು, ಹ.ರಾ.ಪುರೋಹಿತರು ಹಾಗು ಸಂಪಾದಕವರ್ಗದಲ್ಲಿದ್ದ ಪಾ.ವೆಂ.ಆಚಾರ್ಯರು ಇವರೆಲ್ಲ ತಮ್ಮ ಶ್ರದ್ಧೆ ಹಾಗು ನಿಷ್ಠೆಯ ಪರಿಶ್ರಮದಿಂದ ಪತ್ರಿಕೆಯನ್ನು ಉನ್ನತ ಮಟ್ಟಕ್ಕೆ ತಲುಪಿಸಿದರು.

ಕನ್ನಡದಲ್ಲಿ ಪತ್ರಿಕೆಗಳು ಬಳಸಬಹುದಾದ ಪ್ರಮಾಣಿತ ಪದಗಳು ಇನ್ನೂ ಇರದಂತಹ ಆ ಸಮಯದಲ್ಲಿ ‘ಸಂಯುಕ್ತ ಕರ್ನಾಟಕ’ವು ಇಂತಹ ಪತ್ರಿಕಾಪದಗಳನ್ನು ಅಂದರೆ standard journalistic terminologyಯನ್ನು ರೂಪಿಸಿತು. ಇದು ಪತ್ರಿಕಾಭಾಷೆಗೆ ‘ಸಂಯುಕ್ತ ಕರ್ನಾಟಕ’ವು ನೀಡಿದ ದೊಡ್ಡ ಕೊಡುಗೆಯಾಗಿದೆ.

ಒಂದು ಕಾಲದಲ್ಲಿ ಪತ್ರಿಕೋದ್ಯಮವು ಲೋಕಶಿಕ್ಷಣದ ಸಾಧನವಾಗಿತ್ತು. ಇಂದು ಅದು ದೊಡ್ಡ ಉದ್ದಿಮೆಯಾಗಿದೆ. ಈ ಉದ್ದಿಮೆಯಲ್ಲಿ ಭಾಷೆಗೆ, ವ್ಯಾಕರಣಕ್ಕೆ ಅಥವಾ ಕಾಗುಣಿತಕ್ಕೆ ಏನೂ ಬೆಲೆ ಇಲ್ಲವೇನೋ ಎನ್ನುವ ಕಳವಳವು ‘ಸಂಯುಕ್ತ ಕರ್ನಾಟಕ’ದ ಓದುಗರನ್ನು ಬಾಧಿಸುತ್ತದೆ. ‘ಸಂಯುಕ್ತ ಕರ್ನಾಟಕ’ದ ನಿಯಮಿತ ಓದುಗನಾದ ನನಗೆ, ಈ ನನ್ನ ಪ್ರಿಯ ಪತ್ರಿಕೆಯಲ್ಲಿ ಐದು ನಮೂನೆಯ ತಪ್ಪುಗಳು ಕಂಡು ಬರುತ್ತಿವೆ. ಇವುಗಳನ್ನು ‘ಪತ್ರಿಕಾಪ್ರಪಂಚದ ಪಂಚ ಮಹಾಪಾತಕ’ಗಳು ಎಂದು ಕರೆದರೆ ತಪ್ಪಿಲ್ಲ. ಇದರಿಂದ ದುಃಖಿತನಾದ ನಾನು ನನ್ನ ಚಡಪಡಿಕೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನನ್ನ ತಿಳಿವಳಿಕೆಯಲ್ಲಿಯೇ ತಪ್ಪಿದ್ದರೆ, ದಯವಿಟ್ಟು ನನ್ನನ್ನು  ತಿದ್ದಲು ಕೋರಿಕೊಳ್ಳುತ್ತೇನೆ.

(೧) ಕಾಗುಣಿತದ ತಪ್ಪುಗಳು:
ಕಾಗುಣಿತದ ತಪ್ಪುಗಳು ಅತ್ಯಂತ ಪ್ರಾಥಮಿಕ ತಪ್ಪುಗಳು. ಅಚ್ಚುಮೊಳೆಗಳನ್ನು ಜೋಡಿಸಿ ಪತ್ರಿಕೆಗಳನ್ನು ಮುದ್ರಿಸುವ ಕಾಲವೊಂದಿತ್ತು. ಅಂತಹ ಸಮಯದಲ್ಲಿಯೂ ಸಹ ಮುದ್ರಣದೋಷಗಳು ವಿರಳವಾಗಿದ್ದವು. ಗಣಕಯಂತ್ರದ ಬಳಕೆ ಮಾಡುವ ಈ ಕಾಲದಲ್ಲಿ ಕಾಗುಣಿತದ ತಪ್ಪುಗಳು ಹೇರಳವಾಗಿ ಕಂಡುಬರುವದು ಆಘಾತಕರವಾಗಿದೆ. ಒಂದು ಪರಿಚ್ಛೇದದಲ್ಲಿ ಅಥವಾ ಒಂದು ಪುಟದಲ್ಲಿ ಕಾಗುಣಿತದ ಎಷ್ಟು ತಪ್ಪುಗಳು ಕಂಡು ಬರಬಹುದು? ‘ಸಂಯುಕ್ತ ಕರ್ನಾಟಕ’ದ ಒಂದೇ ಪುಟದಲ್ಲಿ ನಾನು ಸ್ವೈಚ್ಛಿಕ ಅವಲೋಕನ ಮಾಡಿದಾಗ ಹನ್ನೊಂದು ತಪ್ಪುಗಳು ಕಂಡು ಬಂದವು. ಇವು ಅಚ್ಚಿನ ದೋಷಗಳಲ್ಲ ; ಆದರೆ ಕಾಗುಣಿತದ ತಪ್ಪುಗಳು ಎನ್ನುವ ಸಂಗತಿಯನ್ನು ನಾನು ವಿಷಾದಪೂರ್ವಕವಾಗಿ ನಿಮ್ಮ ಗಮನಕ್ಕೆ ತರಬಯಸುತ್ತೇನೆ. ನಾನು ತಿಳಿದಂತಹ ಕೆಲವು ತಪ್ಪುಗಳನ್ನು ಉದಾಹರಣೆಗೆಂದು ನಿಮ್ಮ ಮುಂದೆ ಇಡುತ್ತಿದ್ದೇನೆ. Standard News Paper ಎಂದು ಭಾವಿಸಲಾದ ಪತ್ರಿಕೆಯಲ್ಲಿ ಇಷ್ಟು ತಪ್ಪುಗಳು ಕಾಣಬಾರದು, ಅಲ್ಲವೆ?

ದಿನಾಂಕ                                ತಪ್ಪು                     ಒಪ್ಪು
೨೩--೯-೦೯                           ಸ್ಕೈಐವಿಂಗ್                   ಸ್ಕೈಡೈವಿಂಗ್
೨೩--೯-೦೯                           ಶೀಖರ                           ಶಿಖರ
೨೬-೯-೦೯                            ವಿಶಿಷ್ಠ                          ವಿಶಿಷ್ಟ
೨೬-೯-೦೯                            ದಿಕ್ಷಿತಲು                        ದೀಕ್ಷಿತರು
೨೬-೯-೦೯                            ಪ್ರೀಟಿ                            ಪ್ರೀತಿ
೨೬-೯-೦೯                            ನಿಗಧಿತ                          ನಿಗದಿತ
೨೬-೯-೦೯                             ಸ್ಕಂಧ್                         ಸ್ಕಂದ
೨೬-೯-೦೯                            ಮಾಲಿದ್ದಾರೆ                  ಮಾಡಲಿದ್ದಾರೆ
೨೬-೯-೦೯                            ಎದು                             ಎಂದು
೨೬-೯-೦೯                            ಪ್ರೊಬೆಷನರಿ                     ಪ್ರೊಬೇಷನರಿ
೨೬-೯-೦೯                             ಪರಿಶಿಷ್ಠ                        ಪರಿಶಿಷ್ಟ
೨೭-೯-೦೯                            ದಿಗ್ಭಂದನ                       ದಿಗ್ಬಂಧನ
೨೭-೯-೦೯                            ಹಲ್ಯೆಯನ್ನು                   ಹಲ್ಲೆಯನ್ನು
೨೭-೯-೦೯                            ಪರೀಶಿಲಿಸಿ                       ಪರಿಶೀಲಿಸಿ
೨೭-೯-೦೯                            ಘಂಟೇಪ್ಪನವರ                ಘಂಟೆಪ್ಪನವರ
೨೭-೯-೦೯                            ಅದಿಕಾರಿಗಳಲ್ಲಿ                 ಅಧಿಕಾರಿಗಳಲ್ಲಿ
೨೭-೯-೦೯                            ವಿಶ್ವಬ್ಯಾಂಕನಂಥ              ವಿಶ್ವಬ್ಯಾಂಕನಂತಹ
೨೯-೯-೦೯                            ಬ್ರೀಜ್                           ಬ್ರಿಜ್
೨೯-೯-೦೯                             ಮಥ                             ಮೃತ
೨೯-೯-೦೯                            ಹರ್ಷೋದ್ಘಾರ                ಹರ್ಷೋದ್ಗಾರ
೨೯-೯-೦೯                            ಸ್ತಬ್ದ                             ಸ್ತಬ್ಧ
೨೯-೯-೦೯                            ಕೈಗೂಳ್ಳುವದಾಗಿ              ಕೈಗೊಳ್ಳುವದಾಗಿ
೨೯-೯-೦೯                            ಅನಿಷ್ಠಾನ                        ಅನುಷ್ಠಾನ
೨೯-೯-೦೯                            ಅಂಕೀತ                            ಅಂಕಿತ
೨೯-೯-೦೯                             ಹರಿಸಿದ್ದಾರೆ                     ಹರಸಿದ್ದಾರೆ.
೨೯-೯-೦೯                            ಶುಭಾಷಯ                       ಶುಭಾಶಯ
೨೯-೯-೦೯                           ವಿಜಯದಶಿಮಿ                    ವಿಜಯದಶಮಿ
೨೯-೯-೦೯                           ಅವ್ವಾಹತವಾಗಿ                  ಅವ್ಯಾಹತವಾಗಿ
೨೯-೯-೦೯                            ಪುನಶ್ಛೇತನ                      ಪುನಶ್ಚೇತನ
೨೯-೯-೦೯                           ವಿಶಿಷ್ಠ                              ವಿಶಿಷ್ಟ
೩೦-೯-೦೯                           ಅನುಷ್ಟಾನ                         ಅನುಷ್ಠಾನ
೩೦-೯-೦೯                            ಮಧ್ಯಾನ್ಹದಿಂದ                 ಮಧ್ಯಾಹ್ನದಿಂದ
೩೦-೯-೦೯                           ಕಾಲ್ಕಿತಿತ್ತು                         ಕಾಲ್ಕಿತ್ತಿತು

(೨) ವ್ಯಾಕರಣದೋಷಗಳು:
ಕಾಗುಣಿತದ ತಪ್ಪುಗಳನ್ನು ಅಚ್ಚಿನ ದೋಷಗಳೆಂದು ಹೇಳಿ ಪಾರಾಗಬಹುದು. ಆದರೆ ವ್ಯಾಕರಣದ ತಪ್ಪುಗಳಿಗೆ ಯಾರು ಹೊಣೆ? ತಮ್ಮಲ್ಲಿ ಪರಿಶೀಲನೆಗೆ ಬಂದಂತಹ ವರದಿಗಳನ್ನು ಸಂಪಾದಕರು ಕಣ್ಣು ಮುಚ್ಚಿಕೊಂಡು ಓದುತ್ತಾರೆಯೆ? ಅಥವಾ ಕನ್ನಡ ವ್ಯಾಕರಣವನ್ನು ಚಿತ್ರಹಿಂಸೆಗೆ ಒಳಪಡಿಸುತ್ತಿರುವಾಗ ಇವರಿಗೆ ಏನೂ ನೋವಾಗುವದಿಲ್ಲವೆ? ಇದು ಸಂಪಾದಕರ ಹೊಣೆಗಾರಿಕೆ ಅಲ್ಲವೆ? ವ್ಯಾಕರಣದ ಮೃಗಯಾವಿಹಾರದ ಕೆಲವೊಂದು ಉದಾಹರಣೆಗಳು ಹೀಗಿವೆ:

೨೬-೯-೦೯
(೧)ತಪ್ಪು: ಮಳೆಗೆ ಕೋಟ್ಯಂತರ ಆಸ್ತಿ ನಷ್ಟ
ಒಪ್ಪು: ಮಳೆಯಿಂದ ಕೋಟ್ಯಂತರ ಆಸ್ತಿ ನಷ್ಟ
(೨) ತಪ್ಪು: ಮಿಷಿನ್ ಗಳ
ಒಪ್ಪು: ಮಶೀನುಗಳ
೨೭-೯-೦೯
(೧) ತಪ್ಪು: ಸೂಕ್ತ ಆರೋಪಿಗಳನ್ನು
ಒಪ್ಪು: ನೈಜ ಅಪರಾಧಿಗಳನ್ನು
(ಟಿಪ್ಪಣಿ: ಸೂಕ್ತ ಎಂದರೆ ವಿಧಿ-ವಿಧಾನಗಳಲ್ಲಿ ಹೇಳಿದ ಮೇರೆಗೆ ಎಂದು ಅರ್ಥ.
ಆರೋಪಿಗಳು ಅಪರಾಧಿಗಳಾಗಿರಬೇಕಿಲ್ಲ.)
(೨) ತಪ್ಪು: ಬೆಳಗ್ಗೆ ನಿಲ್ದಾಣಕ್ಕೆ ಆಗಮಿಸಿತ್ತು.
ಒಪ್ಪು: ಬೆಳಗಿನ ಸಮಯದಲ್ಲಿ ನಿಲ್ದಾಣಕ್ಕೆ ಆಗಮಿಸಿತ್ತು.
(೩) ತಪ್ಪು: ಅಂತಾರಾಷ್ಟ್ರೀಯ (=inland)
ಒಪ್ಪು: ಅಂತರರಾಷ್ಟ್ರೀಯ (=international)
೨೯-೯-೦೯
(೧) ತಪ್ಪು: ಪೋಲೀಸ ಠಾಣೆ ಸಂಪರ್ಕಿಸಲು
ಒಪ್ಪು: ಪೋಲೀಸ ಠಾಣೆಯನ್ನು ಸಂಪರ್ಕಿಸಲು
(೨) ತಪ್ಪು: ಜನತೆ ದಸರಾ ಹಬ್ಬವನ್ನು ಆಚರಿಸಿದರು
ಒಪ್ಪು: ಜನತೆ ದಸರಾ ಹಬ್ಬವನ್ನು ಆಚರಿಸಿತು (ಅಥವಾ, ಜನರು .....ಆಚರಿಸಿದರು.)
(೩) ತಪ್ಪು: ಶುಭ್ರವರ್ಣದ ಹೊಸ ಬಟ್ಟೆಗಳನ್ನು
ಒಪ್ಪು: ಶುಭ್ರವಾದ ಹೊಸ ಬಟ್ಟೆಗಳನ್ನು
(ಟಿಪ್ಪಣಿ: ಶುಭ್ರ=ಸ್ವಚ್ಛ. ವರ್ಣ ಶುಭ್ರವಾಗಿರುವದೊ ಅಥವಾ ಬಟ್ಟೆ ಶುಭ್ರವಾಗಿರುವದೊ?)

(೩) ಭಾಷೆಯ ತಪ್ಪುಗಳು:
ವ್ಯಾಕರಣವು ಸಂಪಾದಕರಿಗೆ ಮಹತ್ವದ ವಿಷಯವೆಂದು ಅನ್ನಿಸಿರಲಿಕ್ಕಿಲ್ಲ ಎಂದು ಭಾವಿಸೋಣ. ಆದರೆ ಭಾಷೆಯ ತಪ್ಪು ಮಾತ್ರ ಒಂದು ಪತ್ರಿಕೆಯು ಎಂದೂ ಮಾಡಬಾರದ ತಪ್ಪು. ಓದುಗರನ್ನು ಸುಶಿಕ್ಷಿತರನ್ನಾಗಿ ಮಾಡುವದು ಯಾವುದೇ ಪತ್ರಿಕೆಯ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಪತ್ರಿಕೆಯ ಭಾಷೆಯನ್ನು ಪ್ರಮಾಣಿತ ಭಾಷೆ ಎಂದು ಗ್ರಹಿಸಿಕೊಳ್ಳುವ ಓದುಗರು ಭಾಷಾದೋಷಗಳನ್ನು ಅರಿಯದೇ ಅಂತರ್ಗತಗೊಳಿಸಿಕೊಳ್ಳುತ್ತಾರೆ. ಆ ತಪ್ಪುಗಳನ್ನು ತಾವೂ ಎಲ್ಲೆಡೆ ಹರಡುತ್ತಾರೆ. ಇದರಿಂದ ಾಷಾದೋಷವು ಸರ್ವವ್ಯಾಪಿಯಾಗಿ ಬಿಡುತ್ತದೆ. ‘ಸಂಯುಕ್ತ ಕರ್ನಾಟಕ’ದಲ್ಲಿಯ ಕೆಲವು ಭಾಷಾದೋಷಗಳನ್ನು ಗಮನಿಸೋಣ:
"ಸಾರ್ವಜನಿಕ ಸ್ಥಳದಲ್ಲಿ ಗುಡಿ ನಿರ್ಮಾಣಕ್ಕೆ ಸುಪ್ರೀಂ ನಿರ್ಬಂಧ" ಎನ್ನುವ ಈ ವರದಿಯನ್ನು ನೋಡಿರಿ. ಸಂಯುಕ್ತ ಕರ್ನಾಟಕವು ಹಾಗೂ ಇತರ ಪತ್ರಿಕೆಗಳು ಅನೇಕ ವರ್ಷಗಳಿಂದ ‘ಸರ್ವೋಚ್ಚ ನ್ಯಾಯಾಲಯ’ ಎನ್ನುವ ಪದವನ್ನು ಬಳಸುತ್ತಲೇ ಬಂದಿವೆ. ಈ ಪದವು ಕನ್ನಡ ಓದುಗರಿಗೆ ಅರ್ಥವಾಗುವಂತಹ ಪದವೇ ಆಗಿದೆ. ಏಕಾಏಕಿಯಾಗಿ ಈ ಪದಕ್ಕೆ ಬದಲಾಗಿ  ‘ಸುಪ್ರೀಂ ಕೋರ್ಟ’ ಎನ್ನುವ ಆಂಗ್ಲ ಪದ ಬಳಸುವ ಅನಿವಾರ್ಯತೆಯನ್ನು ಸಂಪಾದಕರೇ ಹೇಳಬೇಕು! ಸರಿ ಬಿಡಿ, ಯಾವುದೋ ಗಡಿಬಿಡಿಯಲ್ಲಿ ಸಂಪಾದಕರು ಕನ್ನಡ ಪದ ನನಪಾಗದೇ ಆಂಗ್ಲ ಪದವನ್ನು ಉಳಿಸಿಕೊಂಡರು ಎಂದುಕೊಳ್ಳೋಣ. ಆದರೆ ಕನ್ನಡ ವಾಕ್ಯದ ಮಧ್ಯಭಾಗದಲ್ಲಿ ಆಂಗ್ಲ ಪದಪುಂಜವನ್ನು ಬಳಸಿಕೊಳ್ಳುವದರ ಕಾರಣವೇನು? ಮನೋರಮೆಯು ಮುದ್ದಣನಿಗೆ ಹೇಳುವಂತೆ ಇದು ಮುತ್ತಿನ ಸರದಲ್ಲಿ ಮೆಣಸನ್ನು ಪೋಣಿಸಿದಂತೆ ಅಲ್ಲವೆ? ಉದಾಹರಣೆಯನ್ನು ನೋಡಿರಿ:
"ಸದಾ ಮಂತ್ರಿಗಳ ಕಾರುಬಾರಿನಲ್ಲಿದ್ದ ವಿಧಾನಸೌಧ ಇಂದು ಫಾರ್ ಎ ಚೇಂಜ್ ಅಧಿಕಾರಿಗಳ ದರ್ಬಾರಿನಲ್ಲಿ ಕಾಲ ಕಳೆಯುವಂತಾಗಿತ್ತು."
ಸಂಪಾದಕರು ಓದುಗರೊಡನೆ ಹರಟೆ ಹೊಡೆಯುವ ಧಾಟಿಯಲ್ಲಿ ಸುದ್ದಿಯನ್ನು ಹೇಳುತ್ತಿದ್ದಾರೆಂದರೆ, ಈ ಶೈಲಿಯನ್ನು ಒಪ್ಪಿಕೊಳ್ಳಬಹುದು. ಆದರೆ ಗಂಭೀರ ವರದಿಗೆ ಇದು ತಕ್ಕ ಧಾಟಿಯೆನಿಸುವದಿಲ್ಲ.

ಅಕ್ಟೋಬರ ೧೧ರಂದು ಪ್ರಕಟವಾದ ವರದಿಯ ಭಾಷೆ ಇನ್ನೂ ವಿಚಿತ್ರವಾಗಿದೆ:
ಈ ವರದಿಯ ಮೊದಲನೆಯ ದೋಷವೆಂದರೆ ‘ಸವದತ್ತಿ’ಯನ್ನು ‘ಸೌಂದತ್ತಿ’ ಎಂದು ಗ್ರಾಮ್ಯವಾಗಿ ಬರೆದಿದ್ದು. ಈ ವರದಿಯ  ಪರಿಚ್ಛೇದ ಒಂದರ ಕೊನೆಯ ಸಾಲು ಹೀಗಿದೆ:
"ಇತ್ತೀಚೆಗೆ ಸುರಿದ ದಾರಕಾರ ಮಳೆಯ ಕೊನೆಯ ದಿನ ತನ್ನ ಕಿರಿಯ ಮಗನ ಮಾತು ನಿರ್ಲಕ್ಷಿಸಿ ಪ್ರತಿದಿನ ಸ್ಥಳದಲ್ಲಿ ಮಲಗಿಕೊಂಡಿದ್ದರೆ ಆತನ ಕುಟುಂಬಕ್ಕೆ ಇಂದು ಬೆಳಕು ಕಾಣುತ್ತಿರಲಿಲ್ಲ."
ಅರ್ಥವಾಯಿತೆ? ಸ್ವಲ್ಪ ತಿಣುಕಾಡಿದರೆ ಅರ್ಥ ಮಾಡಿಕೊಳ್ಳುವದು ಕಷ್ಟವೇನಲ್ಲ. ಆದರೆ ಸರಿಯಾದ ವಾಕ್ಯ ಹೀಗಿರಬೇಕಿತ್ತು:
"ಇತ್ತೀಚೆಗೆ ಸುರಿದ ಧಾರಾಕಾರ ಮಳೆಯ ಕೊನೆಯ ದಿನ ತನ್ನ ಕಿರಿಯ ಮಗನ ಮಾತನ್ನು ನಿರ್ಲಕ್ಷಿಸಿ ಪ್ರತಿ ದಿನದಂತೆಯೆ ಮಲಗಿಕೊಂಡಿದ್ದರೆ, ಆತನ ಕುಟುಂಬವು ಇಂದು ಬೆಳಕನ್ನು ಕಾಣುತ್ತಿರುತ್ತಿಲ್ಲ."

(೪) ವರದಿಯ ದೋಷಗಳು:
ವರದಿಯ ದೋಷಗಳಿಗಾಗಿ ಈ ವರದಿಗಳನ್ನು ನೋಡಬಹುದು:
ಮೊದಲನೆಯ ವರದಿ ‘ಸಂಯುಕ್ತ ಕರ್ನಾಟಕ’ದಲ್ಲಿ ಸಪ್ಟಂಬರ ೩೦ರಂದು ಮೂರನೆಯ ಪುಟದಲ್ಲಿ ಪ್ರಕಟವಾಗಿದೆ. ಒಳ್ಳಯ ವರದಿಗೆಬೇಕಾದ ನಿಖರತೆ ಹಾಗೂ ಸಂಕ್ಷಿಪ್ತತೆಯ ಬದಲಾಗಿ ಜೊಳ್ಳು ಜೊಳ್ಳಾದ ವರ್ಣನೆ ಇಲ್ಲಿದೆ ಎಂದು ನನ್ನ ಅನಿಸಿಕೆ.

"ಜಿಲ್ಲೆಯಾದ್ಯಂತ ಇಂದು ಮಧ್ಯಾನ್ಹದಿಂದ ಬಿಟ್ಟುಬಿಡದೇ ಮಳೆ ಸುರಿದ ಹಿನ್ನೆಲೆಯಲ್ಲಿ ಎಲ್ಲೆಡೆ ನೀರೇ ನೀರು." ಎಂದು ಈ ವರದಿ ಪ್ರಾರಂಭವಾಗುತ್ತದೆ.
ಧಾರವಾಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ. ಕಲಘಟಗಿಯಂತಹ ಮಲೆನಾಡು ಹಾಗೂ ನವಲಗುಂದದಂತಹ ಬಯಲಸೀಮೆ ಈ ಜಿಲ್ಲೆಯಲ್ಲಿವೆ. ಇವುಗಳ ನಡುವಿನ ನೇರ ಅಂತರವು ಸುಮಾರು ೬೦ ಕಿಲೊಮೀಟರುಗಳಷ್ಟಾದರೂ ಇದ್ದೀತು. ’ಇಲ್ಲೆಲ್ಲಾ ಮಳೆ ಇಂದು ಮಧ್ಯಾಹ್ನವೇ ಪ್ರಾರಂಭವಾಯಿತೆ’, ಎನ್ನುವ ಸಂದೇಹ ಓದುಗನಿಗೆ ಬಾರದಿರದು. ಪತ್ರಿಕೆಯು ಇಂತಹ ಸಂದರ್ಭಗಳಲ್ಲಿ ಸಂದಿಗ್ಧ ಭಾಷೆಯನ್ನು ಬಳಸಬಾರದು. ಎರಡನೆಯದಾಗಿ ಮಳೆ ಸುರಿದದ್ದು ಹಿನ್ನೆಲೆಯಾಗುವದಿಲ್ಲ, ಕಾರಣವಾಗುತ್ತದೆ. ಈಗ ಈ ವಾಕ್ಯದ ವ್ಯಾಕರಣದ ತಪ್ಪುಗಳನ್ನಷ್ಟು ಗಮನಿಸಿರಿ: ‘ಮಧ್ಯಾಹ್ನ’ ಪದವನ್ನು ‘ಮಧ್ಯಾನ್ಹ’ ಎಂದು ಬರೆಯಲಾಗಿದೆ. ’ಬಿಟ್ಟೂಬಿಡದೆ’ ಎನ್ನುವದನ್ನು ‘ಬಿಟ್ಟುಬಿಡದೇ’ ಎಂದು ಬರೆಯಲಾಗಿದೆ.

ಈ ಒಂಟಿ ಸಾಲಿನ ಮುಂದಿನ ಪರಿಚ್ಛೇದವನ್ನು ಈಗ ಗಮನಿಸಿರಿ:
"ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ನಂತರ ಮಧ್ಯಾನ್ಹ 2ರ ಸುಮಾರಿಗೆ ಸಣ್ಣಗೆ ಸುರಿಯುತ್ತಿದ್ದ ಮಳೆ ಒಮ್ಮಿಂದೊಮ್ಮೆಲೇ ಜೋರಾಗಿ ಸುರಿಯಲು ಪ್ರಾರಂಭಿಸಿತು. ಮಳೆ ಬೀಳುವ ಸಂದರ್ಭದಲ್ಲಿ ಗಾಳಿಯೂ ಬೀಸುತ್ತಿರಲಿಲ್ಲ."
ಮೊದಲನೆಯದಾಗಿ, ವರದಿಗಾರರು ಜಿಲ್ಲೆಯನ್ನು ಬಿಟ್ಟುಕೊಟ್ಟು ಧಾರವಾಡ ಶಹರಕ್ಕೆ ಜಿಗಿದಂತೆ ಭಾಸವಾಗುತ್ತದೆ. ಎರಡನೆಯದಾಗಿ ಸಾಮಾನ್ಯ ಓದುಗನಿಗೆ ನಿಖರವಾದ ಹಾಗೂ ಸಂಕ್ಷಿಪ್ತವಾದ ಮಾಹಿತಿ ಬೇಕಾಗಿರುತ್ತದೆ. ಸಂತೆಯಲ್ಲಿ ಭೆಟ್ಟಿಯಾದ ಜನರು ತಮ್ಮತಮ್ಮಲ್ಲಿ ವಿನಿಮಯ ಮಾಡಿಕೊಳ್ಳುವಂತಹ ಜೊಳ್ಳು ಮಾತಿನಲ್ಲಿ ಅವನಿಗೆ ಆಸಕ್ತಿ ಇರುವದಿಲ್ಲ. ಮಳೆ ಒಮ್ಮಿಂದೊಮ್ಮೆಲೆ ಜೋರಾಯಿತೊ ಅಥವಾ ಕಾಲಕ್ರಮೇಣ ಜೋರಾಯಿತೊ ; ಮಳೆ ಬೀಳುವ ಸಂದರ್ಭದಲ್ಲಿ ಗಾಳಿ ಬೀಸುತ್ತಿತ್ತೊ ಇಲ್ಲವೊ ಎನ್ನುವ ಮಾಹಿತಿ ಓದುಗನಿಗೆ ಅನವಶ್ಯಕವಾಗಿದೆ. ಇಂತಿಷ್ಟು ಮಿಲಿಮೀಟರ ಮಳೆ ಆಗಿದೆ ಎಂದು ತಿಳಿಯುವದಷ್ಟೇ ಅವನಿಗೆ ಬೇಕಾಗಿರುತ್ತದೆ.

ಇದರ ಮುಂದಿನ ಪರಿಚ್ಛೇದದಲ್ಲಿ ಅಸ್ಪಷ್ಟತೆ ಇನ್ನೂ ಹೆಚ್ಚಾಗಿದೆ:
"ಸಂಜೆ 4ರ ಸಮಯದಲ್ಲಿ ಆಕಾಶದಲ್ಲಿ ಕಪ್ಪನೇ ಮೋಡಗಳು ಗೋಚರಿಸುತ್ತಿತ್ತು. ನಂತರ ಐದು ನಿಮಿಷಗಳ ಕಾಲ ಮಳೆ ನಿಂತಿತಾದರೂ ಮತ್ತೆ ಸುರಿಯಲು ಪ್ರಾರಂಬಿಸಿತು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಳ್ಳ ತುಂಬಿದ ವರದಿಗಳು ಬಂದಿವೆ. ನಗರದ ತಗ್ಗು ಪ್ರದೇಶಗಳಾದ ಬಾವಿಕಟ್ಟಿ ಪ್ಲಾಟ್, ಜನ್ನತ್ ನಗರ ಮತ್ತು ಲಕ್ಷ್ಮಿಸಿಂಗನ ಕೆರೆಯಲ್ಲಿ ನೀರು ತುಂಬಿವೆಯಾದರೂ ಅನಾಹುತಗಳು ಸಂಭವಿಸಿಲ್ಲ. ನಗರದ ಗಟಾರುಗಳು ತುಂಬಿದ್ದು ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲಿಯೂ ಮಳೆ ಬಿದ್ದ ವರದಿಯಾಗಿವೆ. ಹೊಲಗಳಲ್ಲಿ ನೀರು ಹರಿದಿವೆ. ಹಳ್ಳಗಳಲ್ಲಿ ನೀರು ಬಂದಿವೆಯಾದರೂ ಸಂಚಾರಕ್ಕೆ ಅಡ್ಡಿಯಾಗಿಲ್ಲ."
ವರದಿಯ ಪ್ರಕಾರ ಮೋಡ ಕವಿದ ವಾತಾವರಣ ಮುಂಜಾನೆಯಿಂದಲೇ ಇದೆ. ಮಳೆಯೂ ಸಹ ಬಿಟ್ಟೂಬಿಡದೇ ಬೀಳುತ್ತಿದೆ. ಅಂದ ಮೇಲೆ ಸಂಜೆ ನಾಲ್ಕರ ಸಮಯದಲ್ಲಿ ಆಕಾಶದಲ್ಲಿ ಕಪ್ಪನೆಯ ಮೋಡಗಳು ಗೋಚರಿಸುತ್ತಿದ್ದವು ಎಂದು ಹೇಳುವದರ ಔಚಿತ್ಯವೇನು? ಅಲ್ಲದೆ, "ಕಪ್ಪನೇ ಮೋಡಗಳು ಗೋಚರಿಸುತ್ತಿತ್ತು" ಎನ್ನುವದು ವ್ಯಾಕರಣದ ಕೊಲೆಯಲ್ಲವೆ?
"ಐದು ನಿಮಿಷಗಳ ನಂತರ ಮಳೆ ಸುರಿಯಲಾರಂಭಿಸಿತು" ಅಂದರೆ, ನಾಲ್ಕು ಹೊಡೆದು ಐದು ನಿಮಿಷಕ್ಕೆ ಮಳೆ ಪ್ರಾರಂಭವಾಯಿತೆ?
ಈ ಸಮಯವು ಇಡೀ ಧಾರವಾಡ ಜಿಲ್ಲೆಗೆ ಅನ್ವಯಿಸುವದೊ ಅಥವಾ ಧಾರವಾಡ ನಗರಕ್ಕೆ ಅನ್ವಯಿಸುವದೊ? ಧಾರವಾಡ ನಗರದಲ್ಲಿಯೇ ಒಂದೆಡೆ ಮಳೆ ಬೀಳುತ್ತಿದ್ದಾಗ, ಇನ್ನೊಂದೆಡೆ ಮಳೆ ಇರುವದಿಲ್ಲ. ಬಹುಶ: ಈ ಮಳೆ ವರದಿಗಾರರ ಮನೆಯ ಮೇಲೆ ಬೀಳುತ್ತಿತ್ತೇನೊ?!

ನಗರದಲ್ಲಿ ಬೀಳುತ್ತಿದ್ದ ಮಳೆಯ ವರದಿ ಒಮ್ಮೆಲೆ ಹಳ್ಳಿಗಳಿಗೆ ಜಿಗಿದು, ಅಲ್ಲಿ ಹಳ್ಳಗಳು ತುಂಬಿದ್ದನ್ನು ಅವಲೋಕಿಸಿ,       ಮತ್ತೆ ನಗರದಲ್ಲಿ ನೀರು ತುಂಬಿದ ಭಾಗಗಳ ವರ್ಣನೆಗೆ ಮರಳುತ್ತದೆ! ಇದರ ಮುಂದಿನ ಪರಿಚ್ಛೇದವಂತೂ ಕನ್ನಡ ಸಾಲೆಯ ಹುಡುಗನ ನಿಬಂಧ(--’ಒಂದು ಮಳೆಗಾಲದ ದಿನ’--)ದಂತೆ ಭಾಸವಾಗುತ್ತದೆ:
"ಇಂದು ಸಂಜೆ ಜನರು ಕೊಡೆ ಹಿಡಿದುಕೊಂಡೇ ಅಡ್ಡಾಡುವ ದೃಶ್ಯ ಸಾಮಾನ್ಯವಾಗಿತ್ತು. ನಗರದಲ್ಲಿ ವಾಹನಗಳು ಪಕ್ಕಕ್ಕೆ ಹಾಯ್ದು ಹೋದರೆ ಅಲ್ಲಿ ನೀರಿನ ಸ್ನಾನ ಮಾಡಿಸುವದಂತೂ ಸತ್ಯವಿತ್ತು."
ವರದಿಯ ಕೊನೆಯ ಸಾಲಿನಲ್ಲಿ ‘ರವಿ ಕರಲಿಂಗಣ್ಣವರ’ ಎಂದು ಬಿಡಿಸಿ ಬರೆಯದೆ, ‘ರವಿಕರಲಿಂಗಣ್ಣವರ’ ಎಂದು ಕೂಡಿಸಿ ಬರೆಯಲಾಗಿದೆ.

ಇದೇ ದಿನಾಂಕದ ಮತ್ತೊಂದು ಪುಟದಲ್ಲಿರುವ ವರದಿ ಹೀಗಿದೆ:
"ಬರಗಾಲ ಪೀಡಿತ ಎಂದು ಘೋಷಿಸಲಾಗಿದ್ದ ಶಿರಹಟ್ಟಿ ಮತ್ತು ಮುಂಡರಗಿ ತಾಲೂಕಿನಲ್ಲಿ ಅಂಕಿ ಅಂಶಗಳ ಪ್ರಕಾರ ಉತ್ತಮವಾಗಿ ಮಳೆ ಸುರಿಯುತ್ತಿದೆ."
"ಅಂಕಿ ಅಂಶಗಳ ಪ್ರಕಾರ ಮಳೆ ಸುರಿಯುತ್ತಿದೆ" ಎಂದು ಹೇಳಿದರೆ, ವಾಸ್ತವದಲ್ಲಿ ಹಾಗಿಲ್ಲ ಎನ್ನುವ ಅರ್ಥ ಹೊಮ್ಮುವದಿಲ್ಲವೆ? ಎರಡನೆಯದಾಗಿ  ಅಂಕಿ ಅಂಶಗಳು ಪತ್ರಿಕೆಯನ್ನು ತಲುಪಿದಾಗ ಮಳೆ ಸುರಿದು ಮುಗಿದಿರುತ್ತಿದೆ. ಆದುದರಿಂದ ‘ಮಳೆ ಸುರಿಯುತ್ತಿದೆ’ ಎಂದು ವರ್ತಮಾನಕಾಲದಲ್ಲಿ ಹೇಳಬಾರದು. ಮೂರನೆಯದಾಗಿ ಈ ಮಳೆ ಜನರಿಗೆ ಬೇಕಾಗಿರಲಿಲ್ಲ. ಆದುದರಿಂದ ‘ಉತ್ತಮವಾಗಿ’ ಎಂದು ವರ್ಣಿಸಬಾರದು ; ‘ಜೋರಾಗಿ’ ಎಂದು ಹೇಳಬಹುದಿತ್ತು.

ಅಕ್ಟೋಬರ ೮ನೆಯ ದಿನಾಂಕದ ೫ನೆಯ ಪುಟದಲ್ಲಿ, ರಸಾಯನ ಶಾಸ್ತ್ರದಲ್ಲಿ ನೋಬೆಲ್ ಪದಕವನ್ನು ಪಡೆದ ಶ್ರೀ ರಾಮಕೃಷ್ಣನ್ ವೆಂಕಟರಾಮನ್ ಅವರನ್ನು "ಅಮೆರಿಕ ಮೂಲದ ಭಾರತೀಯ ವಿಜ್ಞಾನಿ" ಎಂದು ಬರೆಯಲಾಗಿದೆ. ಈ ವ್ಯತ್ಯಸ್ತ ವರ್ಣನೆಯನ್ನು ರೋಚಕ ಪ್ರಮಾದವೆಂದು ಭಾವಿಸಿ ಸಮಾಧಾನಪಟ್ಟುಕೊಳ್ಳಬೇಕಷ್ಟೆ!

(೫) ಮಾಹಿತಿಯ ತಪ್ಪುಗಳು:
ಅಕ್ಟೋಬರ ೧೩ನೆಯ ದಿನಾಂಕದ ‘ಸಂಯುಕ್ತ ಕರ್ನಾಟಕ’ದ ‘ರಸಪ್ರಶ್ನೆ’ ವಿಭಾಗದಲ್ಲಿ ಕೇಳಲಾದ ಪ್ರಶ್ನೆ ಹಾಗೂ ಕೊಡಲಾದ ಉತ್ತರ ಹೀಗಿವೆ:
ಪ್ರಶ್ನೆ: ‘ಸಂಸ್ಕಾರ’ ಚಲನಚಿತ್ರದ ನಿರ್ದೇಶಕರು ಯಾರು?
ಕೊಟ್ಟ ಉತ್ತರ: ಗಿರೀಶ್ ಕಾರ್ನಾಡ್.
ಇದು ತಪ್ಪು ಉತ್ತರ. ‘ಸಂಸ್ಕಾರ’ ಚಲನಚಿತ್ರವನ್ನು ನಿರ್ದೇಶಿಸಿದವರು ಪಟ್ಟಾಭಿ ರೆಡ್ಡಿಯವರು. ಅವರ ಹೆಂಡತಿ ಸ್ನೇಹಲತಾ ರೆಡ್ಡಿಯವರು ಈ ಚಿತ್ರದ ಮುಖ್ಯ ಸ್ತ್ರೀ ಪಾತ್ರದಲ್ಲಿ ಹಾಗು ಗಿರೀಶ ಕಾರ್ನಾಡರು ಮುಖ್ಯ ಪುರುಷಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನದಲ್ಲಿ ಕಾರ್ನಾಡರ ಪಾಲು ಇದ್ದಿರಬಹುದು. ಆದರೆ ಚಿತ್ರದ ಶೀರ್ಷಿಕೆಗಳ ಪ್ರಕಾರ ಪಟ್ಟಾಭಿಯವರೇ ನಿರ್ದೇಶಕರು.

ಎಪ್ಪತ್ತಾರು ವರ್ಷಗಳ ಇತಿಹಾಸವಿರುವ ‘ಸಂಯುಕ್ತ ಕರ್ನಾಟಕ’ ಯಾಕೆ ಈ ರೀತಿ ಎಡವುತ್ತ ನಡೆಯುತ್ತಿದೆ?