Saturday, March 13, 2010

ಧೀಮಂತ ನಾಡು

Where the mind is without fear and the head is held high;
Where knowledge is free;
Where the world has not been broken up into fragments by narrow domestic walls;
Where words come out from the depth of truth;
Where tireless striving stretches its arms towards perfection;
Where the clear stream of reason has not lost its way into the dreary desert sand of dead habit;
Where the mind is lead forward by thee into ever-widening thought and action-
Into that heaven of freedom, my Father, let my country awake.

ಗುರುದೇವ ರವೀಂದ್ರನಾಥ ಠಾಕೂರರ ‘ಗೀತಾಂಜಲಿ’ ಕವನ ಸಂಕಲನದಲ್ಲಿ ಬರುವ ಗೀತೆಯಿದು. ಈ ಕವನಕ್ಕೆ ಶೀರ್ಷಿಕೆ ಇಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಬರೆದ ಈ (ಮೂಲ ಬಂಗಾಲಿ) ಕವನದಲ್ಲಿ ಠಾಕೂರರು ದೇವರಲ್ಲಿ ಪ್ರಾರ್ಥಿಸುತ್ತಿರುವುದು, ಕೇವಲ ತಮ್ಮ ದೇಶದ ರಾಜಕೀಯ ಸ್ವಾತಂತ್ರ್ಯವನ್ನಷ್ಟೇ ಅಲ್ಲ. ತಮ್ಮ ನಾಡಿನ ಜನ ಧೀಮಂತರಾಗಬೇಕು ಎನ್ನುವದು ಅವರ ಅಭೀಪ್ಸೆ. ಆದುದರಿಂದ ನಾವು ಈ ಗೀತೆಗೆ ‘ಧೀಮಂತ ನಾಡು’ ಎನ್ನುವ ಶೀರ್ಷಿಕೆಯನ್ನು ಕೊಡಬಹುದೇನೊ? ಈ ಕವನದ ಭಾವಾನುವಾದ ಇಂತಿದೆ:

ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ,
ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು,
ಎಲ್ಲಿ ಜ್ಞಾನಸಾಧನೆಗೆ ಇರುತಿಹುದು
ಸಂಕೋಲೆಯಿರದ ಒಲವು;

ಎಲ್ಲಿ ಸಂಕುಚಿತ ಗೋಡೆಯಿಂದ
ಒಡೆದಿಲ್ಲ ನಮ್ಮ ಧರೆಯು;
ಎಲ್ಲಿ ನಿಜದ ಒಡಲಾಳದಿಂದ
ಹೊಮ್ಮುವುದು ನಮ್ಮ ನುಡಿಯು;

ಎಲ್ಲಿ ಪೂರ್ಣತೆಯ ಸಾಧಿಸಲು ಶ್ರಮವು
ನಡೆದಿಹುದು ಹಗಲು ಇರುಳು;
ತಿಳಿಯಾದ ತಿಳಿವನ್ನು ತಡೆದಿಲ್ಲ ಎಲ್ಲಿ
ಕುರುಡು ನಂಬಿಕೆಯ ಮರಳು;

ಅನವರತ ಅರಳುತಿಹ ತಿಳಿವನ್ನು, ಕ್ರಿಯೆಯನ್ನು
ಎಲ್ಲಿ ನಿನ್ನಯ ಬೆಳಕು ನಡೆಸುತಿಹುದು;
ಆವೊಂದು ಸ್ವಾತಂತ್ರ್ಯ-ಸ್ವರ್ಗದಲಿ, ತಂದೆಯೆ,
ಉದಯವಾಗಲಿ ನನ್ನ ಧೀಮಂತ ನಾಡು.


‘ಗೀತಾಂಜಲಿ’ ಕ್ರಿ.ಶ. ೧೯೧೩ರ ಸುಮಾರಿಗೆ ಇಂಗ್ಲೀಶಿನಲ್ಲಿ ಪ್ರಕಟವಾಯಿತು. ಅದಕ್ಕೂ ಮೊದಲೇ ಬಂಗಾಲಿಯಲ್ಲಿ ಈ ಗೀತೆಗಳು ತುಂಬ ಜನಪ್ರಿಯವಾಗಿದ್ದವು. ಇಂಗ್ಲಿಶ್ ಆವೃತ್ತಿಗೆ ಇದೀಗ ೯೭ ವರ್ಷಗಳು ತುಂಬಿದವು. ಬಹುಶ: ರವೀಂದ್ರನಾಥ ಠಾಕೂರರು ಈ ಮೇಲಿನ ಗೀತೆಯನ್ನು ರಚಿಸಿ ಈಗ ನೂರು ವರ್ಷಗಳು ಆಗಿರಬಹುದು. ಆದರೆ ‘ಧೀಮಂತ ನಾಡಿ’ನ ಅವರ ಕನಸು ಕನಸಾಗಿಯೇ ಉಳಿದಿದೆ. ದೇವರಲ್ಲಿ ಅವರು ಮಾಡಿದ ಪ್ರಾರ್ಥನೆ ಇನ್ನೂ ಫಲಪ್ರದವಾಗಬೇಕಾಗಿದೆ.

ಈ ಗೀತೆಯ ಮೊದಲ ನುಡಿಯನ್ನು ನೋಡಿರಿ:
ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ,
ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು;
ಎಲ್ಲಿ ಜ್ಞಾನಸಾಧನೆಗೆ ಇರುತಿಹುದು
ಸಂಕೋಲೆಯಿರದ ಒಲವು;

ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ, ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು;
 ‘ನಿರ್ಭೀತ ಮನ’ ಎಂದರೇನು? ತನಗೆ ಕಂಡ ಸತ್ಯವನ್ನು ಭಯವಿಲ್ಲದೇ ಹೇಳುವ ಮನಸ್ಸು. ಈ ಭಯ ಯಾತಕ್ಕೆ ಬರಬೇಕು? ಸಮಾಜದಲ್ಲಿ oppression ಇದ್ದಾಗ ಭಯವಿರುತ್ತದೆ. ಇದು ಸರಕಾರದ ಭಯವಿರಬಹುದು ಅಥವಾ ಸಮಾಜದ ಭಯವಿರಬಹುದು. ಸದ್ಯಕ್ಕೆ ನಮ್ಮ ದೇಶದಲ್ಲಿ ಒಂದು ಮಣ್ಣು ಹುಳವೂ ಸಹ ಸರಕಾರಕ್ಕೆ ಅಂಜುತ್ತಿಲ್ಲ. ಅಂದ ಮೇಲೆ ಉಳಿದದ್ದು ಸಮಾಜದ ಭಯ.

ಭಾರತ ದೇಶದಲ್ಲಿ ಅನೇಕ ಧರ್ಮಗಳಿವೆ, ಅನೇಕ ಸಮಾಜಗಳಿವೆ. ಇವುಗಳಲ್ಲಿ ಕೆಲವು ಸಮಾಜಗಳು ಮುಕ್ತ ಸಮಾಜಗಳು. ಅಂದರೆ ಇಲ್ಲಿ ಆಂತರಿಕ ಟೀಕೆ, ಟಿಪ್ಪಣಿಗಳಿಗೆ ಅವಕಾಶವಿದೆ. ಕೆಲವು ಸಮಾಜಗಳು ಮುಚ್ಚಿದ ಸಮಾಜಗಳು. ಇಲ್ಲಿ ಟೀಕೆಗಳಿಗೆ, ಸ್ವತಂತ್ರ ಆಲೋಚನೆಗಳಿಗೆ ಅವಕಾಶವಿಲ್ಲ. ಇಂತಹ ಸಮಾಜಗಳು ಸುಧಾರಿಸುವದು ಹೇಗೆ? ನಮ್ಮ ದೇಹದ ಒಂದು ಭಾಗದಲ್ಲಿ ಹುಣ್ಣಾದರೆ, ಅದನ್ನು ತಕ್ಷಣವೇ ಗುಣಪಡಿಸದಿದ್ದರೆ, ಇಡೀ ದೇಹಕ್ಕೇ ಅಪಾಯ. ಅದೇ ರೀತಿಯಲ್ಲಿ, ಒಂದು ಸಮಾಜವು ರೋಗಗ್ರಸ್ತವಾದರೆ, ಇಡೀ ದೇಶವೇ ರೋಗಿಯಾಗುತ್ತದೆ. ಇದನ್ನು ಅರಿತುಕೊಂಡು, ಆ ಸಮಾಜವು ತನ್ನನ್ನು ತಾನು ತಿದ್ದಿಕೊಳ್ಳಬೇಕು. ಅದಾಗದಿದ್ದರೆ, ಸರಕಾರವೇ ಶಸ್ತ್ರಚಿಕಿತ್ಸೆಗೆ ಮುಂದಾಗಬೇಕು. ಅದು ಸದ್ಯದ ‘ಮತಪ್ರಜಾಪ್ರಭುತ್ವ’ದಲ್ಲಿ ಸಾಧ್ಯವೆ?  ಹಾಗಿದ್ದಾಗ, ರವೀಂದ್ರನಾಥ ಠಾಕೂರರ ಈ ಕನಸು ಕನಸಾಗಿಯೇ ಉಳಿಯುವದು.

ಯಾವುದೇ ಸಮಾಜದಲ್ಲಿಯ ದೋಷವನ್ನು ತೋರಿಸುವ ಮುಕ್ತ ಮನಸ್ಸು ಭಾರತೀಯನಿಗೆ ಇರಬೇಕು. ಆದರೆ ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ, ನಿಮ್ಮ ಸಮಾಜವನ್ನೇ ನೀವು ಟೀಕಿಸಿದಾಗ ಪಾಖಂಡಿಗಳಾಗುತ್ತೀರಿ. ಬೇರೆ ಸಮಾಜವನ್ನು ಟೀಕಿಸಿದರೆ ಕೋಮುವಾದಿ ಆಗುತ್ತೀರಿ. ಹೀಗಿದ್ದಾಗ, ಗುರುದೇವ ಠಾಕೂರರು ಬಯಸುವ ‘ತಲೆ ಎತ್ತಿ ನಿಲುವ ನಿಲುವು’ ಹೇಗೆ ಸಾಧ್ಯವಾದೀತು? ಅದರ ಬದಲಾಗಿ ತಲೆ ತಪ್ಪಿಸಿ ಬದುಕುವ ಪರಿಸ್ಥಿತಿ ಬಂದಿದೆ, ಸತ್ಯವಂತರಿಗೆ.  ಇಂಥವರ ಅಜ್ಞಾತವಾಸವು ನಿಜಕ್ಕೂ ಮರುಕವನ್ನು ಹುಟ್ಟಿಸುವಂತಹದು.

ಎಲ್ಲಿ ಜ್ಞಾನಸಾಧನೆಗೆ ಇರುತಿಹುದು ಸಂಕೋಲೆಯಿರದ ಒಲವು”:
ಹಿಂದೂ ಸಮಾಜದಲ್ಲಿರುವ ವ್ಯಕ್ತಿಗಳಿಗೆ ಒಂದೇ faith ಎನ್ನುವದಿಲ್ಲ. ಆತ ವೈದಿಕನಿರಬಹುದು, ಅವೈದಿಕನಿರಬಹುದು, pagan ಇರಬಹುದು ಅಥವಾ ನಾಸ್ತಿಕನೂ ಆಗಿರಬಹುದು. ಆತನು Hindu by culture. ಆದರೆ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಸಮಾಜಗಳಲ್ಲಿ ಆ ವ್ಯಕ್ತಿಯು ತನ್ನ ಸಮಾಜದ ಮೂಲತತ್ವಗಳಲ್ಲಿ ಶ್ರದ್ಧೆ ಇಡಬೇಕಾಗುತ್ತದೆ. ಅಂದರೆ ಅವನು ಕ್ರಿಶ್ಚಿಯನ್ ಅಥವಾ ಮುಸ್ಲಿಮ್ ಆಗಿರುವದು by faith.

ಈ ರೀತಿಯ ವ್ಯವಸ್ಥೆಯಿಂದಾಗಿ ಹಿಂದೂ ಸಮಾಜಕ್ಕೆ ಒಳ್ಳೆಯದೂ ಆಗಿದೆ, ಕೆಟ್ಟದ್ದೂ ಆಗಿದೆ. ಒಳ್ಳೆಯದೆಂದರೆ ಆತನಿಗೆ ಸಂಕೋಲೆಯಿಲ್ಲದ ಜ್ಞಾನಸಾಧನೆಗೆ ಅನುಕೂಲವಾಯಿತು. ಈ ಉದಾಹರಣೆ ನೋಡಿರಿ:
ಸೂರ್ಯನ ಸುತ್ತಲೂ ಪೃಥ್ವಿಯು ತಿರುಗುತ್ತಿದೆ ಎಂದು ಗೆಲಿಲಿಯೋ ಹೇಳಿದಾಗ, ಧರ್ಮನಿಂದನೆಯ ಅಪವಾದಕ್ಕೆ ಗುರಿಯಾಗಬೇಕಾಯಿತು. ಯಾಕೆಂದರೆ ಇದು ಕ್ರಿಶ್ಚಿಯನ್ ಶ್ರದ್ದೆಯ ವಿರುದ್ಧವಾದ ಹೇಳಿಕೆ ಎಂದು. ಆದರೆ, ಗೆಲಿಲಿಯೋನಿಗಿಂತ ಸಾವಿರ ವರ್ಷಗಳ ಮೊದಲೇ ಆರ್ಯಭಟನು ಪೃಥ್ವಿ ಹಾಗು ಇತರ ಗ್ರಹಗಳು ಸೂರ್ಯನ ಸುತ್ತಲೂ ತಿರುಗುತ್ತವೆ ಎಂದು ಹೇಳಲು ಹೆದರಿಕೆ ಅಥವಾ ಸಂಕೋಚ ಪಡಬೇಕಾಗಿರಲಿಲ್ಲ. ವೇದಗಳಲ್ಲಿ ಏನೇ ಹೇಳಿರಲಿ, ಶಾಸ್ತ್ರಗಳ ಶ್ರದ್ಧೆ ಏನೇ ಇರಲಿ, ಜ್ಞಾನಸಾಧನೆಗೆ ಅದು ಸಂಕೋಲೆಯಾಗಬಾರದು ಎನ್ನುವ ವಿವೇಕ ಇಲ್ಲಿದೆ.

ಇನ್ನು  ಈ ವ್ಯವಸ್ಥೆಯಿಂದ ಆದಂತಹ ಕೆಡಕೆಂದರೆ ಹಿಂದೂ ಸಮಾಜವು ವಿಭಿನ್ನ ತತ್ವಗಳನ್ನು ಪ್ರತಿಪಾದಿಸುವ ಉಪಸಮಾಜಗಳಲ್ಲಿ ಒಡೆದು ಹೋಯಿತು. ಶ್ರದ್ಧೆಯನ್ನು ಪ್ರಶ್ನಿಸುವ ವ್ಯಕ್ತಿಗಳೇ ಇಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವದರಿಂದ ಹಿಂದೂ ಸಮಾಜದಲ್ಲಿ ಒಕ್ಕಟ್ಟು ಎನ್ನುವದು ಇರದೇ ಹೋಯಿತು. ಇರಲಿ, ಗುರುದೇವ ಠಾಕೂರರು ಇಂತಹ ಜ್ಞಾನಾನ್ವೇಷಣೆಯ ಒಲವನ್ನು ಎಲ್ಲ ಭಾರತೀಯರಲ್ಲೂ ಮೂಡಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.

ಈಗ ಈ ಗೀತೆಯ ಎರಡನೆಯ ನುಡಿ:
ಎಲ್ಲಿ ಸಂಕುಚಿತ ಗೋಡೆಯಿಂದ
ಒಡೆದಿಲ್ಲ ನಮ್ಮ ಧರೆಯು;
ಎಲ್ಲಿ ನಿಜದ ಒಡಲಾಳದಿಂದ
ಹೊಮ್ಮುವುದು ನಮ್ಮ ನುಡಿಯು;

‘ವಸುಧೈವ ಕುಟುಂಬಕಮ್’, ಇಡೀ ಜಗತ್ತೇ ಒಂದು ಕುಟುಂಬ.
ಈ ಜಗತ್ತು ದೇಶದೇಶಗಳಲ್ಲಿ, ಧರ್ಮಗಳಲ್ಲಿ ಒಡೆದು  ಹೋಗುವದು ಬೇಡವೆನ್ನುವದು ಗುರುದೇವರ ಆಶಯವಾಗಿದೆ. ಆದರೆ ಅವರ ಈ ಆಶಯವೂ ಸಹ ಫಲಿಸಲಿಲ್ಲ. ವಾಸ್ತವದಲ್ಲಿ, ನಮ್ಮ ದೇಶದಲ್ಲಿಯೇ ನೂರಾರು ಹೊಸ ಗೋಡೆಗಳು ಎದ್ದಿವೆ. ಈ ಗೋಡೆಗಳನ್ನು ಸಮರ್ಥಿಸುವವರಿಗೇ ಮನ್ನಣೆ ಸಿಗುತ್ತಿದೆ.
ನಿಜವನ್ನು ಅರಿತವರು, ಕೆಲವೊಮ್ಮೆ ಕಣ್ಣು ಮುಚ್ಚಿಕೊಂಡಿರುತ್ತಾರೆ, ಕೆಲವೊಮ್ಮೆ ಭಯದಿಂದ ಬಾಯಿ ಮುಚ್ಚಿಕೊಂಡಿರುತ್ತಾರೆ.
ನಿಷ್ಠುರವಾದ ಒಡಲಾಳದ ನಿಜವು ಅನಾಥವಾಗಿದೆ.

ಗುರುದೇವರ ಗೀತೆಯ ಮೂರನೆಯ ನುಡಿಯು ಹೀಗಿದೆ:
ಎಲ್ಲಿ ಪೂರ್ಣತೆಯ ಸಾಧಿಸಲು ಶ್ರಮವು
ನಡೆದಿಹುದು ಹಗಲು ಇರುಳು;
ತಿಳಿಯಾದ ತಿಳಿವನ್ನು ತಡೆದಿಲ್ಲ ಎಲ್ಲಿ
ಕುರುಡು ನಂಬಿಕೆಯ ಮರಳು;

ಪೂರ್ಣತೆಯನ್ನು ಸಾಧಿಸಲು ಅನವರತ ಶ್ರಮ ಬೇಕು. ರವೀಂದ್ರನಾಥ ಠಾಕೂರರೇ, ಮತ್ತೊಂದೆಡೆಯಲ್ಲಿ ಹೀಗೆ ಹೇಳಿದ್ದಾರೆ: ‘ಒಂದು ಗುಲಾಬಿ ಹೂವನ್ನು ರೂಪಿಸಲು ದೇವರು ಲಕ್ಷ ವರ್ಷಗಳನ್ನು ತೆಗೆದುಕೊಂಡಿದ್ದಾನೆ.’
ಆದುದರಿಂದ ಈಗಿನ ನಮ್ಮ ಲಘುಸಾಧನೆಯೇ ಪರಮೋಚ್ಚವೆನ್ನುವ ಭ್ರಮೆ ಹೋಗಬೇಕು.
ಆದರೆ ಈ ಸಾಧನೆಗೆ ಜ್ಞಾನವೂ ಬೇಕಲ್ಲವೆ? ನಮ್ಮ ಕುರುಡು ಸಂಪ್ರದಾಯಗಳೆನ್ನುವ ಮರಳುಗಾಡಿನಲ್ಲಿ ತಿಳಿವಿನ ತೊರೆಯು ಬತ್ತಿ ಹೋಗಿ ಬಿಡಬಹುದು. ಆದುದರಿಂದ, ನಮ್ಮ ತಿಳಿವು, ನಮ್ಮ ತರ್ಕ ಇವು ಸಂಪ್ರದಾಯವನ್ನು ಯಾವಾಗಲೂ ಪರೀಕ್ಷಿಸುತ್ತಲೇ ಇರಬೇಕು ಹಾಗೂ ತಪ್ಪು ಸಂಪ್ರದಾಯಗಳನ್ನು ದಾಕ್ಷಿಣ್ಯವಿಲ್ಲದೇ ತ್ಯಜಿಸಬೇಕು.

ನಾಲ್ಕನೆಯ ನುಡಿ:
ಅನವರತ ಅರಳುತಿಹ ತಿಳಿವನ್ನು,ಕ್ರಿಯೆಯನ್ನು
ಎಲ್ಲಿ ನಿನ್ನಯ ಬೆಳಕು ನಡೆಸುತಿಹುದು;
ಆವೊಂದು ಸ್ವಾತಂತ್ರ್ಯ-ಸ್ವರ್ಗದಲಿ, ತಂದೆಯೆ,
ಉದಯವಾಗಲಿ ನನ್ನ ಧೀಮಂತ ನಾಡು.

ತಮ್ಮ ತಿಳಿವು ಕೊನೆಯ ಘಟ್ಟವನ್ನು ಮುಟ್ಟಿಬಿಟ್ಟಿದೆ ಎಂದು ಗುರುದೇವರು ಭಾವಿಸುವದಿಲ್ಲ. ಇದು ಯಾವಾಗಲೂ ಅರಳುತ್ತಿರಲೇ ಇರಬೇಕಾದ ತಿಳಿವು. ಆದುದರಿಂದ ಇದು ದೈವಶ್ರದ್ಧೆಯಿಂದ ಲಭಿಸುವ ತಿಳಿವು. ಈ ತಿಳಿವಿಗೆ ತಕ್ಕಂತೆ ನಮ್ಮ ಕ್ರಿಯೆಯೂ ಸಹ ಉನ್ನತ ಸ್ತರಕ್ಕೆ ಏರುತ್ತಿರಬೇಕು. ಆ ತಿಳಿವಳಿಕೆ ಮೂಡಿದ ನಾಡೇ ನಿಜವಾದ ಸ್ವತಂತ್ರ ನಾಡು. ದೇವರೆ, ನಿನ್ನ ಅನುಗ್ರಹದಿಂದ ನನ್ನ ನಾಡಿಗೆ ಅಂತಹ ಸ್ವಾತಂತ್ರ್ಯ ಲಭಿಸಲಿ ಎಂದು ಗುರುದೇವರು ಪ್ರಾರ್ಥಿಸುತ್ತಾರೆ.

ಗುರುದೇವರ ಬಯಕೆ ಸಫಲವಾಗಲಿ.
Amen!

Friday, March 5, 2010

ಸಾರ್ವಜನಿಕ ಪ್ರಮಾಣ, ಸಾಂಸ್ಕೃತಿಕ ಆದರ್ಶ ಹಾಗು ತಸ್ಲೀಮಾ ನಸರೀನ್

ಶಿವಮೊಗ್ಗಿ ಹಾಗು ಹಾಸನಗಳಲ್ಲಿ ತಸ್ಲೀಮಾ ನಸರೀನ್ ಇವರ ವಿರುದ್ಧ ಜರುಗಿದ ಹಿಂಸಾತ್ಮಕ ಪ್ರತಿಭಟನೆಗಳು ಕರ್ನಾಟಕದ ಸಾರ್ವಜನಿಕ ಹಾಗು ಸಾಂಸ್ಕೃತಿಕ ಜೀವನಕ್ಕೆ ಘೋರ ಕಳಂಕವನ್ನು ತಂದಿವೆ. ಈ ಹಿಂಸಾತ್ಮಕ ಪ್ರತಿಭಟನೆಗಿಂತ ಘೋರವಾದದ್ದು, ಈ ಘಟನೆಗಳಿಗೆ ವಿಚಾರವಂತರ ಪ್ರತಿಕ್ರಿಯೆ ಅಥವಾ ಪ್ರತಿಕ್ರಿಯೆಯ ಅಭಾವ. ತಸ್ಲೀಮಾ ಅವರ ಮೂಲಲೇಖನದ ಅನುವಾದವೆಂದು ಹೇಳಲಾದ ಲೇಖನವೊಂದು ‘ಕನ್ನಡ ಪ್ರಭಾ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ತಾನು ಅಂತಹ ಯಾವುದೇ ಅನುವಾದಕ್ಕೆ ಒಪ್ಪಿಗೆಯನ್ನೇ ನೀಡಿಲ್ಲ ಎನ್ನುವ ಅವರ ಹೇಳಿಕೆಯೂ ಪತ್ರಿಕೆಗಳಲ್ಲಿ ಪ್ರಕಟವಾಗಿದೆ !
ಇಲ್ಲಿ ಮೂಡುವ ಪ್ರಶ್ನೆಗಳು ಇಂತಿವೆ:
(೧) ಈ ಗಲಭೆಯು ಪೂರ್ವ ನಿಯೋಜಿತ ಹಾಗು ರಾಜಕೀಯ ಪ್ರೇರಿತ ಘಟನೆಯೆ ಅಥವಾ ಸ್ವಯಂಸ್ಫೂರ್ತ ಘಟನೆಯೆ?
(೨) ಸಾರ್ವಜನಿಕ ಹಾಗು ಸಾಂಸ್ಕೃತಿಕ ಜೀವನಕ್ಕೆ ಸಂಬಂಧಿಸಿದಂತೆ ವಿಚಾರವಂತರ ಹೊಣೆಗಾರಿಕೆ ಏನು?

(೧) ಈ ಗಲಭೆಯು ಪೂರ್ವ ನಿಯೋಜಿತ ಹಾಗು ರಾಜಕೀಯ ಪ್ರೇರಿತ ಘಟನೆಯೆ?:
 ಮಾಧ್ಯಮ ವಿದ್ಯಾರ್ಥಿಯಾದ ರಾಕೇಶ ಮಥಾಯಸರು ಈ ಹಿಂಸಾತ್ಮಕ ಪ್ರತಿಭಟನೆಯು ಪೂರ್ವ ನಿಯೋಜಿತ ಹಾಗು ರಾಜಕೀಯ ಪ್ರೇರಿತ ಸಂಚು ಎಂದು ಹೇಳುತ್ತಾರೆ. ನಮ್ಮ ಮಹಾನ್ ಭಾರತ ದೇಶದ ಪೂರ್ವ ಪ್ರಧಾನಿಯೊಬ್ಬರು ಈ ಸಂಚಿನ ಪ್ರೇರಕರು ಎನ್ನುವದು ಅವರ ಅಭಿಪ್ರಾಯ. ಅವರ ಕನ್ನಡ ಬ್ಲಾ^ಗು  ‘ಕ್ಷಕಿರಣ’ದಲ್ಲಿ ಅವರ ಅಭಿಪ್ರಾಯವನ್ನು ನೋಡಬಹುದು. 

ಇದು ನಿಜವೇ ಆಗಿದ್ದರೆ, ಇದಕ್ಕಿಂತ ಹೀನ ರಾಜಕೀಯ ಮತ್ತೊಂದಿಲ್ಲ. ಕೋಟಿಗಟ್ಟಲೆ ಬೆಲೆ ಬಾಳುವ  ಸಾರ್ವಜನಿಕ ಹಾಗು ಖಾಸಗಿ ಆಸ್ತಿಯ ನಾಶವಂತೂ ಆಯಿತು. ಅದಕ್ಕಿಂತ ಹೆಚ್ಚಾಗಿ ಈ ಲೇಖನದ ಬಗೆಗೆ ಏನೂ ಗೊತ್ತಿರದ ಅಮಾಯಕರ ಜೀವಹಾನಿಯೂ ಆಯಿತು. ಆ ರಾಜಕಾರಣಿಗೆ ಇದರಿಂದ ಏನು ಲಾಭವಾಯಿತೊ ತಿಳಿಯದು!
ಇನ್ನು ಇದು ಸ್ವಯಂಸ್ಫೂರ್ತ ಪ್ರತಿಭಟನೆಯಾಗಿದ್ದರೆ, ಪ್ರತಿಭಟನಾಕಾರರಿಗೆ ಪ್ರಜಾಪ್ರಭುತ್ವದ ವಿಧಾನಗಳಲ್ಲಿ ವಿಶ್ವಾಸವೇ ಇಲ್ಲ ಎಂದು ಹೇಳಬೇಕಾಗುತ್ತದೆ. ಅವರಿಗೆ ತಮ್ಮ ತೋಳ್ಬಲದ ಪ್ರದರ್ಶನ ಮಾಡುವದಷ್ಟೇ ಬೇಕಾಗಿದೆ ! ಅವರು ಕೊಡುವ ಸಂದೇಶವು ಹೀಗಿದೆ: ‘ನೋಡು, ನನ್ನ ಅಭಿಪ್ರಾಯಕ್ಕೆ ವಿರುದ್ಧವಾದದ್ದನ್ನು ನೀನು ಹೇಳಿದರೆ, ನಾನು ನಿನ್ನ ಗಂಟಲನ್ನು ಹಿಸುಕುತ್ತೇನೆ!’

‘ಕನ್ನಡ ಪ್ರಭಾ’ದಲ್ಲಿ ಪ್ರಕಟವಾದ ಲೇಖನದಲ್ಲಿ ಧರ್ಮನಿಂದೆಯ (blasphemy) ಅಥವಾ ಅವಹೇಳನದ (slander) ಅಂಶಗಳಿದ್ದರೆ, ನ್ಯಾಯಲಯಕ್ಕೆ  ಹೋಗಲು ಅವಕಾಶವಿದೆ. ಭಾರತೀಯ ನ್ಯಾಯಾಲಯಗಳು ಸತ್ಯ ಹಾಗು ನ್ಯಾಯವನ್ನು ಎತ್ತಿ ಹಿಡಿಯುವ ಪರಂಪರೆಯನ್ನೇ ಹೊಂದಿವೆ. ಅಲ್ಲಿ ಖಂಡಿತವಾಗಿಯೂ ಪ್ರತಿಭಟನಾಕಾರರಿಗೆ ಜಯವು ದೊರೆಯುತ್ತಿತ್ತು. ಆದರೆ, ಗಲಭೆಕೋರರಿಗೆ ತರ್ಕಜಿಜ್ಞಾಸೆಯಲ್ಲಿ ನಂಬಿಕೆ ಇಲ್ಲ. ಅವರಿಗೆ ಒಂದು ಸಮಾಜದಲ್ಲಿಯ status quoಅನ್ನು ಮುಂದುವರಿಸುವದು ಮಾತ್ರ ಬೇಕಾಗಿದೆ. ಆದುದರಿಂದಲೇ ಅವರು ಹಿಂಸಾತ್ಮಕ ದೊಂಬಿಗೆ ಮುಂದಾಗಿದ್ದಾರೆ. ಎರಡು ಪೂರ್ವನಿದರ್ಶನಗಳನ್ನು ಇಲ್ಲಿ ಗಮನಿಸಬಹುದು. ಒಂದು ಪೂರ್ವನಿದರ್ಶನವು ಸ್ವತಃ ಶ್ರೀಮತಿ ತಸ್ಲೀಮಾ ನಸರೀನ್ ಅವರಿಗೇ ಸಂಬಂಧಿಸಿದ್ದು. ಎರಡನೆಯದು ಕಲಾವಿದ ಶ್ರೀ ಎಮ್.ಎಫ್.ಹುಸೇನರಿಗೆ ಸಂಬಂಧಿಸಿದ್ದು.

ಕನ್ನಡ ನಾಡಿನಲ್ಲಿ ಸ್ತ್ರೀಸಂವೇದಿಯಾದ ಹಾಗು ಉದಾರ ಮನೋಭಾವದ ಅನೇಕ ಲೇಖಕಿಯರಿದ್ದಾರೆ. (ಉದಾಹರಣೆಗೆ ಶ್ರೀಮತಿ ಸಾರಾ ಅಬೂಬಕ್ಕರ.) ಶ್ರೀಮತಿ ತಸ್ಲೀಮಾ ನಸರೀನ್ ಸಹ ಇವರಂತಹ ಬಂಗ್ಲಾ ದೇಶೀಯ ಲೇಖಕಿ. ಇವರು ರಚಿಸಿದ ಕೆಲವೊಂದು ದಿಟ್ಟ ಬಂಗಾಲಿ ಕವನಗಳನ್ನು ಕನ್ನಡದಲ್ಲಿ ಅನುವಾದಿಸಿ, ಶ್ರೀ ಉದಯ ಇಟಗಿ ಅವರು ತಮ್ಮ ಬ್ಲಾ^ಗ್ ‘ಬಿಸಿಲ ಹನಿ’ಯಲ್ಲಿ ನೀಡಿದ್ದಾರೆ. 


ಬಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾದ ಹಿಂದೂ ಧರ್ಮೀಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ಶ್ರೀಮತಿ ತಸ್ಲೀಮಾ ನಸರೀನ್ ಅವರು ತಮ್ಮ ಕಿರು ಕಾದಂಬರಿ ‘ಲಜ್ಜಾ’ದಲ್ಲಿ ಚಿತ್ರಿಸಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಮೂಲಭೂತವಾದಿ ಮುಲ್ಲಾಗಳು ಇವರ ಮೇಲೆ ಫತ್ವಾ ಹೊರಡಿಸಿದರು. ಶ್ರೀಮತಿ ತಸ್ಲೀಮಾ ನಸರೀನ್ ಭಾರತಕ್ಕೆ ಓಡಿ ಬಂದರು. ಆದರೆ ಮತಬ್ಯಾಂಕಿನ ಮೇಲೆ ಕಣ್ಣಿಟ್ಟ ಕೇಂದ್ರ ಸರಕಾರವು  ಶ್ರೀಮತಿ ತಸ್ಲೀಮಾ ನಸರೀನ್ ಇವರಿಗೆ ಆಶ್ರಯ ಕೊಡಲು ನಿರಾಕರಿಸಿತು. ಭಾರತದಲ್ಲಿಯೂ ಸಹ ಇವರಿಗೆ ಮೂಲಭೂತವಾದಿಗಳ ಕಾಟ ತಪ್ಪಲಿಲ್ಲ. ಈ ದಿಟ್ಟ ಲೇಖಕಿ ಈಗ ಅಜ್ಞಾತವಾಸದಲ್ಲಿ ಇರಬೇಕಾಗಿದೆ (ಸಲ್ಮಾನ್ ರಶ್ದಿಯ ತರಹ).  ಬಂಗ್ಲಾ ದೇಶದಲ್ಲಿಯ ಅಸಹಾಯಕ ಹಿಂದೂಗಳ ಪರವಾಗಿ ದನಿ ಎತ್ತಿದ ಈ ದಿಟ್ಟ ಮಹಿಳೆಗೆ ಭಾರತದಲ್ಲಿಯ ಮುಸ್ಲಿಮರಿಂದ  ವಿರೋಧ ಬರಲು ಕಾರಣವೇನು? ಇದು ಭಾರತೀಯ ಮುಸ್ಲಿಮರ ಯಾವ ಮನೋಧರ್ಮವನ್ನು ತೋರಿಸುತ್ತದೆ?

ಇನ್ನು ಎರಡನೆಯ ಉದಾಹರಣೆಯನ್ನು ನೋಡಿರಿ. ಶ್ರೀ ಎಮ್.ಎಫ್.ಹುಸೇನರು ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿದ್ದರಿಂದ ಮನನೊಂದ ಅನೇಕ ಹಿಂದೂ ಸಂಘಟನೆಗಳು ನ್ಯಾಯಾಲಕ್ಕೆ ಹೋಗಿವೆ. ಅಲ್ಲಿ ಇವರ ವಿರುದ್ಧ ಧರ್ಮನಿಂದೆ ಹಾಗು ಅವಹೇಳನದ ಆರೋಪಗಳು ಸಾಬೀತು ಆಗುವ ಸಾಧ್ಯತೆಗಳಿವೆ. ಅರ್ಥಾತ್ ಶ್ರೀ ಹುಸೇನರು ದಂಡ ಮತ್ತು ಸೆರೆಮನೆಯ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಇದನ್ನು ತಪ್ಪಿಸಲು ಶ್ರೀ ಹುಸೇನರು ಮುಸ್ಲಿಮ್ ದೇಶವೊಂದಕ್ಕೆ ಪಲಾಯನಗೈದರು. ಸಾರ್ವಜನಿಕವಾಗಿ, ಜೀವಭಯದ ನೆಪವನ್ನು ತೋರಿಸಿದರು.  ಈ ದೇಶದೊಡನೆ ಭಾರತಕ್ಕೆ extradition ಒಪ್ಪಂದವಿಲ್ಲ. ಆದುದರಿಂದಲೇ ಭಾರತದಿಂದ ಓಡಿ ಹೋದ ಅಪರಾಧಿಗಳೆಲ್ಲ ಗಲ್ಫ್ ದೇಶಗಳಲ್ಲಿ ಆಶ್ರಯ ಪಡೆಯುವದು ! ಇದೀಗ ಶ್ರೀ ಹುಸೇನರಿಗೆ ಕತಾರದ ಪೌರತ್ವ ಸಹ ದೊರೆತಿದೆ !
ಈ ಎರಡೂ ಘಟನೆಗಳಲ್ಲಿ ಕಂಡು ಬರುವದೇನು?
ಮುಸ್ಲಿಮೇತರ ಸಮಾಜಗಳು ನ್ಯಾಯಾಲಯದಿಂದ ನ್ಯಾಯ ಪಡೆಯಲು ಪ್ರಯತ್ನಿಸುತ್ತವೆ. ಆದರೆ ಮುಸ್ಲಿಮ್ ಸಮಾಜವು ತನ್ನಲ್ಲಿಯ ಉದಾರವಾದಿಗಳನ್ನು ನಿರ್ದಯವಾಗಿ ಬೇಟೆಯಾಡುತ್ತದೆ !

(೨) ಸಾರ್ವಜನಿಕ ಹಾಗು ಸಾಂಸ್ಕೃತಿಕ ಜೀವನಕ್ಕೆ ಸಂಬಂಧಿಸಿದಂತೆ ವಿಚಾರವಂತರ ಹೊಣೆಗಾರಿಕೆ ಏನು?
ನಮ್ಮ ನಾಡಿನಲ್ಲಿಯ ಢೋಂಗಿ ವಿಚಾರವಂತರು ಸಾಮಾಜಿಕ ಹಾಗು ಸಾಂಸ್ಕೃತಿಕ ಸ್ವಾಸ್ಥ್ಯಕ್ಕಿಂತ ತಮ್ಮ ಮುಖವಾಡಗಳಿಗೆ, ಹಾಗು ಆ ಮೂಲಕ ಲಭಿಸುವ ಪ್ರಶಸ್ತಿಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಅಭಿಪ್ರಾಯ ಸ್ವಾತಂತ್ರ್ಯದ ಬಗೆಗೆ ವೇದಿಕೆಗಳ ಮೇಲೆ ತಾಸುಗಟ್ಟಲೆ ಮಾತನಾಡುವ ನಮ್ಮ ಜ್ಞಾನಪೀಠಸ್ಥರು ಕೆಲವೊಂದು ಸಂದರ್ಭಗಳಲ್ಲಿ ತತ್ಕಾಲಕ್ಕೆ ತುಟಿ ಹೊಲಿದುಕೊಂಡು ಕೂತಿರುವ ಕಾರಣವನ್ನು ತಿಳಿಯಬಹುದೆ? ನನಗೆ ನೆನಪಿರುವ ಇಂತಹ ಕೆಲವು ಘಟನೆಗಳನ್ನು ಉಲ್ಲೇಖಿಸುತ್ತೇನೆ:

 (೧) ಖ್ಯಾತ ಸಂಶೋಧಕರಾದ ಡಾ^. ಎಮ್. ಎಮ್.  ಕಲಬುರ್ಗಿಯವರು ತಮ್ಮ ಸಂಶೋಧನಾ ಕೃತಿ ‘ಮಾರ್ಗ’ದಲ್ಲಿ ವೀರಶೈವ ಶರಣ ಚೆನ್ನಬಸವಣ್ಣನ ಹುಟ್ಟಿನ ಬಗೆಗೆ ಕೆಲವು ಮಾತು ಹೇಳಿದ್ದರು. ಇದಕ್ಕೆ ತೀವ್ರವಾದ ಪ್ರತಿಭಟನೆ ನಡೆದು, ಕೊನೆಗೆ ಅವರು ಮಠಾಧೀಶರಲ್ಲಿ ಕ್ಷಮೆ ಕೇಳಿಕೊಳ್ಳಬೇಕಾಯಿತು.

(೨) ಬಂಜಗೆರೆ ಜಯಪ್ರಕಾಶರು ಬಸವಣ್ಣನ ಕುಲದ ಬಗೆಗೆ ಬರೆದ “ಆನು ದೇವಾ ಹೊರಗಿವನು” ಸಂಶೋಧನಾತ್ಮಕ ಕೃತಿಗೆ ವಿರೋಧ ವ್ಯಕ್ತವಾಗಿದ್ದರಿಂದ ಸರಕಾರವು ಈ ಕೃತಿಯ ಮೇಲೆ ಪ್ರತಿಷೇಧ ಹೇರಿತು.

(೩) ಡ್ಯಾನ್ ಬ್ರೌನ್ ಅವರ The Da Vinci Code ಕಾದಂಬರಿಯನ್ನು ವಿರೋಧಿಸಿ ಬೆಂಗಳೂರಿನ ಕ್ರಿಶ್ಚಿಯನ್ ಸಮುದಾಯದವರು ಮೆರವಣಿಗೆ ಮಾಡಿದರು. (ಯುರೋಪ್ ಅಥವಾ ಅಮೇರಿಕಾದಲ್ಲಿ ಆಗದ ಪ್ರತಿಭಟನೆ ಭಾರತದಲ್ಲಾಯಿತು!)

(೪) ಪ್ರವಾದಿ ಮೊಹಮ್ಮದರ ವ್ಯಂಗ್ಯಚಿತ್ರವೊಂದು ಡ್ಯಾನಿಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದಕ್ಕಾಗಿ ಭಾರತದಲ್ಲಿ ಗಲಭೆಗಳಾದವು.

(೫) ಕೆಲವು ವರ್ಷಗಳ ಹಿಂದೆ ಮಲೆಯಾಳಿ ಕತೆಯ ಅನುವಾದವೊಂದು ಡೆಕ್ಕನ್ ಹೆರಾಲ್ಡ ಪತ್ರಿಕೆಯಲ್ಲಿ ಪ್ರಕಟವಾದಾಗ, ಅದರ ವಿರುದ್ಧ ಗಲಭೆ ನಡೆದಿತ್ತು. ( ಆ ಕತೆಯ ಪಾತ್ರವೊಂದರ ಹೆಸರು ಮಹಮ್ಮದ ಎಂದಿತ್ತು.)

(೬) ತಸ್ಲೀಮಾ ನಸರೀನ್ ಅವರು ಇತ್ತೀಚೆಗೆ ಕೊಲ್ಕತ್ತಾದಲ್ಲಿ ಹಾಗು ಹೈದರಾಬಾದಿನಲ್ಲಿ ಭಾಗವಹಿಸಿದ್ದ ವೇದಿಕೆಯಲ್ಲಿ ಗಲಾಟೆಯನ್ನು ನಡೆಸಲಾಯಿತು.

ಈ ಎಲ್ಲ ಪ್ರಸಂಗಗಳು ನಡೆದ ಸಂದರ್ಭದಲ್ಲಿ ನಮ್ಮ ಬುದ್ಧಿಜೀವಿಗಳು ಅಭಿಪ್ರಾಯಸ್ವಾತಂತ್ರ್ಯದ ಪರವಾಗಿ ಒಂದು ಮಾತನ್ನೂ ಆಡಲಿಲ್ಲ. ಆ ಬಳಿಕ ವೇದಿಕೆಗಳ ಮೇಲೆ ಅಥವಾ ಪತ್ರಿಕೆಗಳ ಎದುರಿನಲ್ಲಿ ಅಭಿಪ್ರಾಯ ಸ್ವಾತಂತ್ರ್ಯದ ಚಾಂಪಿಯನ್ನರ ತರಹ ಸೋಗು ಹಾಕಿದರು.

ವಿಚಾರವಾದಿಗಳ ಬಾಯಿ ಮುಚ್ಚಿಸುವ ಇಂತಹ ಘಟನೆಗಳು ಭಾರತದಲ್ಲಿ ಏಕೆ ನಡೆಯುತ್ತವೆ, ಯುರೋಪ್ ಅಥವಾ ಅಮೇರಿಕಾದಲ್ಲಿ ಏಕೆ ನಡೆಯುವದಿಲ್ಲ?
ಕಾರಣಗಳು ಹೀಗಿರಬಹುದು:
(೧) ಯುರೋಪ್ ಮತ್ತು ಅಮೇರಿಕಾದಲ್ಲಿ ಇರುವಂತಹ ಸಂಶೋಧಕ ಹಾಗು ವೈಚಾರಿಕ ಪ್ರವೃತ್ತಿ ಭಾರತದಲ್ಲಿ ಮಾಯವಾಗಿದೆ. ಇದಕ್ಕೆ ಕಾರಣರಾದವರು ನಮ್ಮ ಮುಖವಾಡದ ಬುದ್ಧಿಜೀವಿಗಳು.
(೨) ನಮ್ಮ ಸರಕಾರಕ್ಕೆ ಇಂತಹ ಹಿಂಸಾತ್ಮಕ ಗಲಭೆಗಳನ್ನು ದಮನಗೊಳಿಸುವ ಧೈರ್ಯವಿಲ್ಲ. (ಮತಬ್ಯಾಂಕಿನ ಕಾರಣದಿಂದಾಗಿ).

(೧) ಮೊದಲನೆಯ ಕಾರಣವನ್ನು ನೋಡಿರಿ. ಅನೇಕ ವರ್ಷಗಳ ಹಿಂದೆ ಭಾರತದಲ್ಲಿ The Illustrated Weekly of India ಎನ್ನುವ ಜನಪ್ರಿಯ ಆಂಗ್ಲ ವಾರಪತ್ರಿಕೆಯು ಹೊರಡುತ್ತಿತ್ತು. ಈ ವಾರಪತ್ರಿಕೆಯಲ್ಲಿ ಯೇಸುವಿನ ಬಗೆಗೆ ಯುರೋಪಿನಲ್ಲಿ ನಡೆದ ಸಂಶೋಧನೆಯನ್ನು ಉಲ್ಲೇಖಿಸಿ ಒಂದು ಲೇಖನ ಪ್ರಕಟವಾಗಿತ್ತು. ಯೇಸುವಿನ ತಂದೆ ಒಬ್ಬ ರೋಮನ್ ನಾವಿಕ ಹಾಗು ತಾಯಿ ಒಬ್ಬ ಯಹೂದಿ ವೇಶ್ಯೆ ಎಂದು ಈ ಲೇಖನದಲ್ಲಿ ಬರೆಯಲಾಗಿತ್ತು. ಆದರೆ ಈ ಸಂಶೋಧನಾತ್ಮಕ ಲೇಖನದ ಬಗೆಗೆ ಆ ಸಮಯದಲ್ಲಿ ಎಲ್ಲಿಯೂ ಯಾವುದೇ ತರಹದ ಗಲಭೆ ನಡೆಯಲಿಲ್ಲ.  ಧಾರ್ಮಿಕ ಭಾವನೆಗಳಿಗಿಂತ ಸತ್ಯವೇ ಹೆಚ್ಚಿನದು ಎನ್ನುವ ಗ್ರಹಿಕೆ ಆ ಕಾಲದ ನೈಜ ವಿಚಾರವಾದಿಗಳಿಗೆ ಇದ್ದುದೇ ಇದಕ್ಕೆ ಕಾರಣವಾಗಿರಬಹುದು. ಈಗಿನ ಸೋಗಿನ ವಿಚಾರವಾದಿಗಳಾದರೋ ತಮ್ಮ ತರ್ಕದ ದೊಂಬರಾಟವನ್ನು ತಮಗೆ ಅನುಕೂಲವಾಗುವಂತೆ ಕುಣಿಸುತ್ತಾರೆ. ನಮ್ಮ ಈರ್ವರು ಜ್ಞಾನಪೀಠಸ್ಥರಾದ ಅನಂತಮೂರ್ತಿ ಹಾಗು ಕಾರ್ನಾಡರ ಉದಾಹರಣೆಗಳನ್ನೇ ನೋಡಬಹುದು.

‘ಟೀಪು ಸುಲ್ತಾನನ ಕನಸುಗಳು’ ಎನ್ನುವ ನಾಟಕವನ್ನು ಕಾರ್ನಾಡರು ಬರೆದಾಗ ಕೆಲವರು ಟೀಪು ಸುಲ್ತಾನನು ಮತಾಂಧನಿರಲಿಲ್ಲವೆ? ಎನ್ನುವ ಪ್ರಶ್ನೆಯನ್ನು ಕಾರ್ನಾಡರ ಎದುರಿಗೆ ಇಟ್ಟರು. ಟೀಪು ಸುಲ್ತಾನನ ಕಾಲದಲ್ಲಿ ಧರ್ಮನಿರಪೇಕ್ಷತೆಯ ಕಲ್ಪನೆಯೆ ಇರಲಿಲ್ಲವೆನ್ನುವ ಜಾಣತನದ ಉತ್ತರ ಕೊಟ್ಟು ಕಾರ್ನಾಡರು ಜಾರಿಕೊಂಡರು. ಟೀಪು ಸುಲ್ತಾನನಿಗೆ ದಕ್ಷಿಣ ಭಾರತವನ್ನೆಲ್ಲ ಇಸ್ಲಾಮೀಕರಿಸಬೇಕೆನ್ನುವ ಹೆಬ್ಬಯಕೆ ಇತ್ತು ಎನ್ನುವದು ಕಾರ್ನಾಡರಿಗೆ ಮತಾಂಧತೆಯಂತೆ ಕಂಡಿರಲಿಕ್ಕಿಲ್ಲ. ಟೀಪು ಸುಲ್ತಾನನಿಗಿಂತಲೂ ನೂರಾರು ವರ್ಷಗಳಷ್ಟು ಮೊದಲೇ ರಾಜ್ಯವಾಳಿದ ಹಿಂದೂ ರಾಜರಲ್ಲಿ ಯಾರೂ ಮುಸ್ಲಿಮ್ ಪ್ರಜೆಗಳನ್ನು ಭೇದಭಾವದಿಂದ ಕಂಡ ಉದಾಹರಣೆಗಳು ಇಲ್ಲ. ವಿಜಯನಗರದ ರಾಜನಾದ ಕೃಷ್ಣದೇವರಾಯನಂತೂ ತನ್ನ ಧರ್ಮನಿರಪೇಕ್ಷ ಆಡಳಿತೆಗೆ ಹೆಸರಾದವನು. ಕಾರ್ನಾಡರಂತಹ ಬುದ್ಧಿವಂತರಿಗೆ ಈ ಇತಿಹಾಸವೇ ಗೊತ್ತಿಲ್ಲ ಎಂದುಕೊಳ್ಳೋಣವೆ?
ಇನ್ನು ಅನಂತಮೂರ್ತಿಯವರ ಬಗೆಗೆ ಏನು ಹೇಳಲಾದೀತು? ಇವರು ಎಷ್ಟು ಎತ್ತರದಲ್ಲಿದ್ದಾರೆಂದರೆ ತಸ್ಲೀಮಾ ನಸರೀನಳು ಇವರ ಕಣ್ಣಿಗೇ ಬೀಳುವದಿಲ್ಲ!
ಒಂದು ವೇಳೆ ತಸ್ಲೀಮಾ ನಸರೀನ್ ರನ್ನು ಹಿಂದೂ ಸಂಘಟನೆಗಳು ವಿರೋಧಿಸಿದ್ದರೆ, ಅನಂತಮೂರ್ತಿ ಹಾಗು ಕಾರ್ನಾಡರಿಗೆ ಅಭಿಪ್ರಾಯ ಸ್ವಾತಂತ್ರ್ಯದ ನೆನಪು ತಕ್ಷಣವೇ ಆಗುತ್ತಿತ್ತೇನೊ?
ಈ ಸೋಗಿನ ಜ್ಞಾನಮೂರ್ತಿಗಳನ್ನು ಬಿಡೋಣ. ನಮ್ಮವರೇ ಆದ, ನಾವು ತುಂಬ ಪ್ರೀತಿಸುವ ಹಾಗು ಬೆಲೆ ಕೊಡುವ ಶ್ರೀ ಅಬ್ದುಲ್ ರಶೀದ ಹಾಗು ಶ್ರೀ ಫಕೀರ ಮುಹಮ್ಮದ ಕಟ್ಪಾಡಿಯವರು ಈ ವಿಷಯಕ್ಕೆ ಏನೆನ್ನುತ್ತಾರೆ?

ನಮ್ಮ ಜನಪ್ರಿಯ online ಪತ್ರಿಕೆ ‘ಕೆಂಡಸಂಪಿಗೆ’ಯಲ್ಲಿ ಅದರ ಸಂಪಾದಕ ಅಬ್ದುಲ್ ರಶೀದರು ತಸ್ಲೀಮಾ ಇಂತಹ ಲೇಖನ ಬರೆದದ್ದರಿಂದಲೇ ಅಮಾಯಕರ ಜೀವಹಾನಿಯಾಯಿತು ಎನ್ನುವ ತರ್ಕವನ್ನು ಮುಂದಿಟ್ಟಿದ್ದಾರೆ. (ಇಲ್ಲಿ ನೋಡಿ.) 
ತಸ್ಲೀಮಾ ಅವರು ಧರ್ಮನಿಂದೆಯನ್ನು ಅಥವಾ ಅವಹೇಳನವನ್ನು ಮಾಡಿದ್ದರೆ, ಆ ಅಂಶಗಳನ್ನು ಸ್ಪಷ್ಟೀಕರಿಸಬೇಕು. ಆದರೆ ಅವರ ಅಭಿಪ್ರಾಯ ಸ್ವಾತಂತ್ರ್ಯವನ್ನೇ ನಿರಾಕರಿಸುವದು ಸರಿಯಲ್ಲ. ಎರಡನೆಯದಾಗಿ, ಅವಳಿಂದಲೇ ಜೀವಹಾನಿಯಾಯಿತು ಎನ್ನುವದು, ಗಲಭೆಕೋರರ The Right to Riotಅನ್ನು ಎತ್ತಿ ಹಿಡಿದಂತಾಗುವದಿಲ್ಲವೆ? ಇದು ಸರಿಯೆ? ದೊಂಬಿಕೋರರು ಕಾಯದೆಯನ್ನು ಕೈಗೆತ್ತಿಕೊಂಡರೆ, ವಿಚಾರವಾದಿಗಳು ಅದನ್ನೇ ಸರಿ ಎನ್ನಬೇಕೆ?
ಕೆಂಡಸಂಪಿಗೆಯಲ್ಲಿಯೇ ಮತ್ತೊಂದು ಲೇಖನ ಬಂದಿದೆ. ಅದನ್ನು ಬರೆದ ಕನ್ನಡದ ಖ್ಯಾತ ಲೇಖಕ ಕಟ್ಪಾಡಿಯವರಂತೂ ತಸ್ಲೀಮಾ ಬರೆದ ಲೇಖನ ಕೆಟ್ಟ ಲೇಖನ ಎಂದಿದ್ದಾರೆಯೇ ಹೊರತು ಅದರಲ್ಲಿರುವ ಕೆಟ್ಟತನವು ಏನು ಎನ್ನುವದನ್ನು ತಿಳಿಸಿಲ್ಲ. 

ಅನಂತಮೂರ್ತಿ, ಗಿರೀಶ ಕಾರ್ನಾಡ, ಅಬ್ದುಲ್ ರಶೀದ ಮತ್ತು ಫಕೀರ ಮಹಮ್ಮದ ಕಟಪಾಡಿ ಇವರೆಲ್ಲರೂ  ನಮ್ಮ ಸಾರ್ವಜನಿಕ ಪ್ರಮಾಣವನ್ನು ರೂಪಿಸಬಲ್ಲ ಸಾಮರ್ಥ್ಯವಿರುವವರು.  ಸಾಂಸ್ಕೃತಿಕ ಆದರ್ಶಗಳ ರೂವಾರಿಗಳಾಗಬಲ್ಲವರು. ಇಂತಹ ವಿಚಾರವಾದಿಗಳೇ ಅಭಿಪ್ರಾಯ ಸ್ವಾತಂತ್ರ್ಯವನ್ನು ಹಾಗು ಸ್ತ್ರೀಸ್ವಾತಂತ್ರ್ಯವನ್ನು ಧಿಕ್ಕರಿಸುವದು ಸರಿಯೆ? ಇದರಿಂದ ನಮ್ಮ ಸಮಾಜದಲ್ಲಿ ಸುಧಾರಣೆಯಾಗಲು ಶಕ್ಯವಿದೆಯೆ? (ನಮ್ಮ ಸಮಾಜವೆಂದು ಹೇಳುವಾಗ, ನಾನು ಹಿಂದೂ ಹಾಗು ಮುಸ್ಲಿಮ್ ಸಮಾಜಗಳಲ್ಲಿ ಭೇದವೆಣಿಸುವದಿಲ್ಲ.)

ನಮ್ಮ ಎಲ್ಲಾ ರಾಜಕಾರಣಿಗಳೂ ಸ್ವಾರ್ಥಿಗಳೇ ಆಗಿದ್ದಾರೆ, ಸಮಯಸಾಧಕರೇ ಆಗಿದ್ದಾರೆ ಎಂದುಕೊಳ್ಳೋಣ. ಆದುದರಿಂದಲೇ ನಮ್ಮ ಸಾರ್ವಜನಿಕ ಹಾಗು ಸಾಂಸ್ಕೃತಿಕ ಆದರ್ಶವನ್ನು ಕಾಯ್ದುಕೊಳ್ಳುವದು ಈಗ ನಮ್ಮ ವೈಚಾರಿಕರ ಹೊಣೆಗಾರಿಕೆಯಾಗಿದೆ.

Saturday, February 27, 2010

“ಎಡಿ ಒಯ್ಯನು ಬಾರೆ ದೇವರಿಗೆ”----ಶರೀಫ ಸಾಹೇಬರು

ಇಂದು ಈದ ಮಿಲಾದ ಹಬ್ಬ. ಇಸ್ಲಾಮ ಧರ್ಮದ ಪ್ರವರ್ತಕರಾದ ಮೊಹಮ್ಮದ ಪೈಗಂಬರರ ಹುಟ್ಟುದಿನ.
ಮುಸ್ಲಿಮ್ ಶಿವಯೋಗಿ ಎಂದು ಕರೆಯಬಹುದಾದ ಶಿಶುನಾಳ ಶರೀಫರು ಹಿಂದು ಹಾಗು ಮುಸ್ಲಿಮ ಧರ್ಮಗಳಲ್ಲಿ ಸಾಧಿಸಿದ ಸಾಮರಸ್ಯವನ್ನು ಅರಿಯಬೇಕಾದರೆ ಅವರು ರಚಿಸಿದ ಈ ಹಾಡನ್ನು ನೋಡಬಹುದು:

ಎಡಿ ಒಯ್ಯನು ಬಾರೆ ದೇವರಿಗೆ
ಎಡಿ ಒಯ್ಯನು ಬಾರೆ ||ಪಲ್ಲ||

ಎಡಿ ಒಯ್ಯನು ಬಾ
ಮಡಿಹುಡಿಯಿಂದಲಿ
ಪೊಡವಿಗಧಿಕ ಎನ್ನ
ಒಡಿಯ ಅಲ್ಲಮನಿಗೆ ||ಅನುಪಲ್ಲ||

ಕರ್ಮದ ಕುರಿ ಕೊಯ್ಸಿ ಅದಕೆ
ಗುರುಮಂತ್ರವ ಜಪಿಸಿ
ಅರುವಿನ ಎಡಿಯನು
ಕರದೊಳು ಪಿಡಿಕೊಂಡು
ಸ್ಥಿರವಾದ ದೇವರು
ಇರುವ ಮಸೀದಿಗೆ ||೧||

ಆದಿ ಅಲ್ಲಮ ಗುರುವು ದೊಡ್ಡ
ಪಾದಗಟ್ಟಿ ಏರು
ದಿಮಿ ದಿಮಿ ಸದ್ಗುರು
ಆದಿ ಶಿಶುನಾಳ
ಸಾಧು ಇರುವ ಬ್ರಹ್ಮ-
ನಾದ ಮಸೀದಿಗೆ  ||೨||

ಶರೀಫರು ಅಲ್ಲಮ ಎಂದು ಹೇಳುವಾಗ ಶಿವಯೋಗಿ ಅಲ್ಲಮನನ್ನು ಸೂಚಿಸುವಂತೆಯೇ, ‘ಅಲ್ಲಾ’ ನನ್ನೂ ಸೂಚಿಸುತ್ತಾರೆ. ಆದಿ ಅಲ್ಲಮ ಗುರು ಎಂದರೆ ಇಡೀ ವಿಶ್ವಕ್ಕೆ ಗುರುವಾದ ದೇವರು. ಅಲ್ಲಮ ಪದವನ್ನು ಶೂನ್ಯಾರ್ಥದಲ್ಲಿ ಗ್ರಹಿಸಿದಾಗ ಈ ಪದವು ನಿರ್ಗುಣ ಬ್ರಹ್ಮನನ್ನೂ ಸೂಚಿಸುತ್ತದೆ.

Friday, February 12, 2010

ಸಮಸ್ಯೆಯನ್ನು ನೋಡುವ ಬಗೆಯಲ್ಲೇ ಇದೆ ಸಮಸ್ಯೆ

‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ಟರು ಜನೆವರಿ ೨೧ರ ಸಂಚಿಕೆಯಲ್ಲಿ, ‘ನೂರೊಂದು ಮಾತು’ ಎನ್ನುವ ತಮ್ಮ ಅಂಕಣಬರಹದಲ್ಲಿ ಒಂದು ಲೇಖನ ಬರೆದಿದ್ದಾರೆ. ‘ಸಮಸ್ಯೆಯನ್ನು ನೋಡುವ ಬಗೆಯಲ್ಲೇ ಇದೆ ಸಮಸ್ಯೆ’ ಎನ್ನುವ ಈ ಲೇಖನವನ್ನು ಇಲ್ಲಿ ಪ್ರಸ್ತಾಪಿಸಲಿಕ್ಕೆ ನನಗೆ ಎರಡು ಕಾರಣಗಳಿವೆ:

(೧) ಶ್ರೀ ಭಟ್ಟರಂತಹ ಮೇಧಾವಿ, ತರ್ಕಚತುರ ಹಾಗು ವಿಸ್ತಾರ ಅಧ್ಯಯನದ ವ್ಯಕ್ತಿಯೊಬ್ಬರು ‘ಪ್ರಭಾವಿ’ ವ್ಯಕ್ತಿಗಳ ಸಮ್ಮುಖದಲ್ಲಿರುವಾಗ ಎಷ್ಟು ವೇಗವಾಗಿ ತಮ್ಮ ಮೇಧಾವಿತನ, ತರ್ಕಚತುರತೆ ಹಾಗು ವಿಸ್ತಾರ ಅಧ್ಯಯನದ ವ್ಯಕ್ತಿತ್ವವನ್ನು ಕಳೆದುಕೊಂಡು ಬಿಡುತ್ತಾರಲ್ಲ! Glamour ಎದುರಿಗೆ, ಸಮ್ಮೋಹಿನಿಗೆ ಒಳಗಾದವರಂತೆ ಮರುಳಾಗಿ ಬಿಡುತ್ತಾರಲ್ಲ! ಇದು ವಿಸ್ಮಯದ ಮಾತು.

(೨) ಶ್ರೀ ಭಟ್ಟರು ಆ ‘ಪ್ರಭಾವಿ’ ವ್ಯಕ್ತಿಯ ತರ್ಕದಲ್ಲಿದ್ದ ಮಿಥ್ಯೆ(fallacy)ಯನ್ನು ಗುರುತಿಸದೆ ಹೋದರಲ್ಲ ಎನ್ನುವ ವ್ಯಥೆ. ಈ ಮಿಥ್ಯಾತರ್ಕವನ್ನು ತಮ್ಮ ಪತ್ರಿಕೆಯ ಮೂಲಕ ಇನ್ನಷ್ಟು ಪ್ರಚುರಪಡಿಸುತಿದ್ದಾರಲ್ಲ ಎನ್ನುವ ದುಃಖ.

ಎಲ್ಲಕ್ಕೂ ಮೊದಲಿಗೆ ಅವರ ಲೇಖನದಲ್ಲಿ ನಮಗೆ ಸಂಬಂಧಪಡುವಂತಹ ಭಾಗವನ್ನು ಇಲ್ಲಿ ಉದ್ಧರಿಸುತ್ತಿದ್ದೇನೆ. ದಯವಿಟ್ಟು ಗಮನಿಸಿ:

ಈ ಲೇಖನಾಂಶವನ್ನು ಓದಿದ ಬಳಿಕ ನಮಗೆ ಅನಿಸುವದೇನು?
ವಿಶ್ವೇಶ್ವರ ಭಟ್ಟರು ಒಬ್ಬ ಅತಿ ಗಣ್ಯ ವ್ಯಕ್ತಿಯೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾರೆ. ಭಟ್ಟರು ವರ್ಣಿಸುವ ಮೇರೆಗೆ ಆ ವ್ಯಕ್ತಿ ಕೋಟ್ಯಾಧಿಪತಿಗಳಿಗೆ ಪಾಠ ಹೇಳುವ ಅಧ್ಯಾಪಕ. ಅಂತಹ ವ್ಯಕ್ತಿ ಇನ್ನೋರ್ವ ಗಣ್ಯ ವ್ಯಕ್ತಿಯೊಡನೆ ಅಂದರೆ ಆ^ಸ್ಟ್ರೇಲಿಯನ್ ಹಡಗಿನ ದಳಪತಿಯೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಆ ದಳಪತಿಯ ಅಭಿಪ್ರಾಯದ ಪ್ರಕಾರ ಒಂದು ದೇಶದ ಸಂಪತ್ತೆಂದರೆ ಅಲ್ಲಿಯ ಜನಸಂಖ್ಯೆಯೇ ಹೊರತು ಅಲ್ಲಿಯ ಧನಸಂಪತ್ತಲ್ಲ. ಜನಸಂಖ್ಯೆಯು ನಮ್ಮ ದೇಶದ ಜಟಿಲ ಸಮಸ್ಯೆಯೆಂದು ಭಾವಿಸಿದ ಆ ಅಧ್ಯಾಪಕರು ಹಡಗಿನ ದಳಪತಿಯ ಲೋಕಾಭಿರಾಮ ಹರಟೆಯಿಂದ ಪ್ರಭಾವಿತರಾದರು. ‘ಹೌದಲ್ಲ! ನಾವು ಜನಸಂಖ್ಯಾಸ್ಫೋಟವನ್ನು ಸಮಸ್ಯೆಯೆಂದು ಏಕೆ ಭಾವಿಸಬೇಕು? ಇದೇ ನಮ್ಮ ಬಲವೂ ಆಗಬಹುದು’ ಎಂದು ಈ ಅಧ್ಯಾಪಕರಿಗೆ ಅನಿಸಿತು. ತಮಗೆ ಅನಿಸಿದ್ದನ್ನು ಈ ದೊಡ್ಡ ಅಧ್ಯಾಪಕರು ಭಟ್ಟರಿಗೆ ಹೇಳಿದರು. ಸರಿ, ಭಟ್ಟರಿಗೂ ಹಾಗೆಯೇ ಅನ್ನಿಸತೊಡಗಿತು.

ಭಟ್ಟರೆ, ನಿಮ್ಮ ಮೇಧಾವಿತನ, ತೀಕ್ಷ್ಣ ತರ್ಕಚಾತುರ್ಯ ಹಾಗು ವಿಸ್ತಾರ ಅಧ್ಯಯನದ ಫಲವಾದ ಪಾಂಡಿತ್ಯ ಇವೆಲ್ಲ ಎಲ್ಲಿ ಮಾಯವಾದವು? ನಿಮ್ಮೆದುರಿಗಿನ ವ್ಯಕ್ತಿ ಎಷ್ಟೇ ‘ಪ್ರಭಾವಶಾಲಿ’ಯಾಗಿರಲಿ, ನೀವು ಇಷ್ಟು ವೇಗವಾಗಿ ಅವರ ಸಮ್ಮೋಹಿನಿಗೆ ಒಳಗಾಗಬಹುದೆ? ಅವರ ಮಾತಿಗೆ ಮರುಳಾಗಬಹುದೆ?

Of course, ಒಪ್ಪಿಕೊಳ್ಳುತ್ತೇನೆ—Consistancy is the virtue of an ass.
ಒಬ್ಬ ವ್ಯಕ್ತಿಯ ಅಭಿಪ್ರಾಯವು ಯಾವಾಗಲೂ ಏಕಪ್ರಕಾರವಾಗಿರಬೇಕಿಲ್ಲ. ಆದರೆ, ಅಭಿಪ್ರಾಯದ ಬದಲಾವಣೆಯು ತರ್ಕಬದ್ಧವಾಗಿರಬೇಕಲ್ಲವೆ? ಆ ಪ್ರಭಾವಿ ಅಧ್ಯಾಪಕರು ‘ಜನಸಂಖ್ಯೆಯೇ ಒಂದು ದೇಶದ ಸಂಪತ್ತು’ ಎಂದು ಹೇಳಿದಾಗ, ಅವರ ಕಣ್ಣಿಗೆ ಬಿದ್ದಿರಲಾರದ ಒಂದು ಸತ್ಯ ನಿಮ್ಮ ಕಣ್ಣಿಗೂ ಬೀಳಲಿಲ್ಲವೆ? ಅದೇನೆಂದರೆ, ನಮ್ಮ ದೇಶದ ಜನಸಂಖ್ಯೆಯ ಬಹುಭಾಗ ಎಂತಹುದು? ಅರ್ಧಕ್ಕೂ ಹೆಚ್ಚು ಭಾರತೀಯರು ನಿರಕ್ಷರಿಗಳು. ಸಾಕ್ಷರ ಭಾರತೀಯರಲ್ಲಿ ಅರ್ಧಕ್ಕೂ ಹೆಚ್ಚಿನವರ ಶಿಕ್ಷಣ ನಿರುಪಯುಕ್ತ ಶಿಕ್ಷಣ. ಮುಕ್ಕಾಲು ಭಾಗ ಭಾರತೀಯರು ಅರೆಕಾಲೀನ ಉದ್ಯೋಗಿಗಳು. ಇಲ್ಲಿ ಉದ್ಯೋಗ ಸಿಗಲಾರದ ಕಾರಣಕ್ಕಾಗಿ, ಕೆಳದರ್ಜೆಯ ಉದ್ಯೋಗ ಮಾಡುವ ಭಾರತೀಯರೂ ಸಹ ದುಬಾಯಿ ಮೊದಲಾದ ಅರಬ ರಾಷ್ಟ್ರಗಳಿಗೆ ಉದ್ಯೋಗವನ್ನರಸಿ ಹೋಗುತ್ತಿದ್ದಾರೆ. ಭಾರತೀಯ ಹೆಂಗಸರೂ ಸಹ ಆ ದೇಶಗಳಲ್ಲಿ ಮನೆಗೆಲಸಕ್ಕೆ ಹೋಗಿ, ಅಲ್ಲಿ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಮೂರು ವರ್ಷದ ಹೆಣ್ಣು ಶಿಶುಗಳೂ ಸಹ ಭಾರತದಲ್ಲಿ ವೇಶ್ಯಾವಾಟಿಕೆಗೆ ಬಿಕರಿಯಾಗುತ್ತಿವೆ. ಶಿಕ್ಷಣ ಪಡೆಯಲು ಇಲ್ಲಿಂದ ಹೊರದೇಶಗಳಿಗೆ ತೆರಳಿದ ನಮ್ಮ ವಿದ್ಯಾರ್ಥಿಗಳು, ಅಲ್ಲಿ ಏಟು ತಿನ್ನುತ್ತಿದ್ದಾರೆ.

ಭಟ್ಟರೆ, ಇದು ನಮ್ಮ ದೇಶದ ಜನಸಂಪತ್ತು ; ಬೇಕಾದರೆ ಇದನ್ನು ದನಸಂಪತ್ತು ಎಂದು ಕರೆಯಿರಿ. ಅದೂ ತಪ್ಪೇ!
ಭಟ್ಟರೆ, ನಮ್ಮವರಿಗೆ ಒಳ್ಳೆಯ ಶಿಕ್ಷಣ, ಒಳ್ಳೆಯ ಉದ್ಯೋಗ ಹಾಗು ಒಳ್ಳೆಯ ಬದುಕನ್ನು ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮ ಜನಸಂಖ್ಯೆಯು ಈ ಮಿತಿಯನ್ನು ಮೀರಿ ಬೆಳೆದಿದೆ.

ದೊಡ್ಡ ಹಡಗವೊಂದು ಸಮುದ್ರ ಮಧ್ಯದಲ್ಲಿ ತೇಲುತ್ತಿದೆ ಎಂದು ಕಲ್ಪಿಸಿಕೊಳ್ಳಿ. ಒಂದು ಸಾವಿರ ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯವಿರುವ ಹಡಗು ಇದು ಎಂದು ಇಟ್ಟುಕೊಳ್ಳಿ. ಈ ಹಡಗಿನಲ್ಲಿ ಎರಡು ಸಾವಿರ ಪ್ರಯಾಣಿಕರನ್ನು ತುಂಬಿದರೆ ಏನಾಗುತ್ತದೆ? ಹಡಗು ಮುಳುಗಿ ಹೋಗುತ್ತದೆ. ಇದು ಸಾಮಾನ್ಯ ಜ್ಞಾನದ ಮಾತು.

ಎರಡನೆಯದಾಗಿ, ಭಟ್ಟರು ಸಮಸ್ಯೆಯನ್ನು ಬೇರೊಂದು ದೃಷ್ಟಿಕೋನದಿಂದ ನೋಡಿದರೆ ಅದು ಸಮಸ್ಯೆಯೇ ಅಲ್ಲ ಎನ್ನುವ ಮಿಥ್ಯಾತರ್ಕಕ್ಕೆ ಬಲಿಯಾಗಿದ್ದಾರೆ. ಇಂತಹ ಮಿಥ್ಯಾತರ್ಕದ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡೋಣ.

(೧) ಪೋಲೀಸ ಸ್ಟೇಶನ್ನಿಗೆ ಹೋದ ಓರ್ವ ವ್ಯಕ್ತಿ, ಪೋಲೀಸ ಅಧಿಕಾರಿಗೆ: “ಸಾಹೇಬರ, ನನ್ನ ಹೇಣತಿ ಮನಿ ಬಿಟ್ಟು ಓಡಿ ಹೋಗ್ಯಾಳರೀ!”
ಪೋಲೀಸ ಅಧಿಕಾರಿ: “ಛಲೋ ಆತಲ್ಲಪಾ! ಆಕೀ ಹೊಟ್ಟಿಗೆ ಹಾಕೋ ತ್ರಾಸು ತಪ್ಪಿತು ನಿನಗ.
ಅರಾಮ ಇರು, ಹೋಗು!”

(೨) ಅಪ್ಪ ಮಗನಿಗೆ: “ಮಗನs, ಈ ಸಲಾನೂ SSLC ಒಳಗ ಢುಮ್ಕಿ ಹೊಡದೇನು?”
ಮಗ: “ ಅಪ್ಪಾ, ನಿಮಗ ಈ ಸಲಾ tution fees ಉಳಿತಾಯ ಮಾಡೇನಿ ಅಂತ ಯಾಕ ತಿಳ್ಕೋಬಾರ್ದು ನೀವು?”

ಇಂತಹ ಮಿಥ್ಯಾತರ್ಕದಲ್ಲಿ ನಮ್ಮ ರಾಜಕಾರಣಿಗಳು ಬಹು ಚತುರರು. ತಮ್ಮ ತಂದೆ ಇನ್ನೂ ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ, ಶ್ರೀಮತಿ ಇಂದಿರಾ ಗಾಂಧಿಯವರು ಒಮ್ಮೆ ಓಡಿಸಾ ರಾಜ್ಯಕ್ಕೆ ಭೆಟ್ಟಿ ಕೊಟ್ಟಿದ್ದರು. ಓಡಿಸಾದಲ್ಲಿ ಆಗ ಭೀಕರ ಬರಗಾಲವಿತ್ತು. ಅಕ್ಕಿಯಂತೂ ಕಾಳಸಂತೆಯಲ್ಲಿ ಮಾತ್ರ ಲಭ್ಯವಿತ್ತು. ಆಗ ಶ್ರೀಮತಿ ಇಂದಿರಾ ಗಾಂಧಿಯವರು ಜನತೆಗೆ ಕೊಟ್ಟ ಸಲಹೆ: “ ಅಕ್ಕಿ ಸಿಗದೇ ಹೋದರೆ, ಬಟಾಟೆ ತಿನ್ನಿರಿ!”
ಇತ್ತೀಚೆಗೆ, ಕೇಂದ್ರಸಚಿವರಾದ ನಮ್ಮ ಕನ್ನಡಿಗರೊಬ್ಬರು , ‘ವಾರದಲ್ಲಿ ಒಂದು ದಿನ ಉಪವಾಸ ಮಾಡಿರಿ’ ಎಂದು ಹೇಳಲಿಲ್ಲವೆ? ವಾಸ್ತವ ಸ್ಥಿತಿ ಏನಿದೆಯೆಂದರೆ, ಕರ್ನಾಟಕದಲ್ಲಿ ಅನೇಕ ನೆರೆ ಸಂತ್ರಸ್ತರು ವಾರದಲ್ಲಿ ಒಂದೇ ದಿನ ಊಟ ಮಾಡುತ್ತಿದ್ದಾರೆ!

ಇದು ನಮ್ಮ ದೇಶದ ಜನಸಂಪತ್ತು. ಇದು ಇಮ್ಮಡಿ, ಮುಮ್ಮಡಿಯಾಗಲಿ ಎಂದು ವಿಶ್ವೇಶ್ವರ ಭಟ್ಟರು ಬಯಸುತ್ತಿದ್ದಾರೆಯೆ? ಭಟ್ಟರೆ, ಹಾಗಿದ್ದರೆ ಒಂದು ಕಿವಿಮಾತನ್ನು ನಿಮಗೆ ಹೇಳಬಯಸುತ್ತೇನೆ:
‘ದೇಶದ ಪ್ರಗತಿಯನ್ನು ನಿಮ್ಮ ಮನೆಯಿಂದಲೇ ಪ್ರಾರಂಭಿಸಬೇಕು!

Wednesday, January 20, 2010

ಪದಶೋಧ

ಅಡುಗೆಯ ಸ್ಟೋ, ಸೈಕಲ್ ಅಥವಾ ಮತ್ಯಾವುದೇ ಚಿಕ್ಕಪುಟ್ಟ ಯಂತ್ರೋಪಕರಣಗಳನ್ನು  ರಿಪೇರಿ ಮಾಡಿಸಲು ಒಯ್ದಾಗ, ರಿಪೇರಿ ಮಾಡುವವನು , “ಇದರ ‘ವ್ಹಾಯ್ಸರ್’ ಹೋಗೇದರಿ; ಬ್ಯಾರೆ ವ್ಹಾಯ್ಸರ್ ಹಾಕಿಕೊಡ್ತೇನಿ”, ಎಂದು ಹೇಳುವದನ್ನು ನೀವು ಕೇಳಿರಬಹುದು. ಈ ‘ವ್ಹಾಯ್ಸರ್’ ಅನ್ನೋದು ನಿಜವಾಗಿಯೂ washer ಅನ್ನುವ ಆಂಗ್ಲ ಪದದ ಅಪಭ್ರಂಶ. ರಿಪೇರಿ ಮಾಡುವವನಿಗೆ ‘ವಾಶರ್’ ಅನ್ನೋದು ಸಾಕಷ್ಟು ಇಂಗ್ಲಿಶ್ ಅನ್ನಿಸುತ್ತಿರಲಿಕ್ಕಿಲ್ಲ. ಆಂಗ್ಲ ಪದವನ್ನು ಮತ್ತಷ್ಟು ಆಂಗ್ಲೀಕರಣ ಮಾಡುವ ಉದ್ದೇಶದಿಂದ ಆತ ‘ವಾಶರ್’ಅನ್ನು ‘ವ್ಹಾಯ್ಸರ್’ ಮಾಡಿದ್ದಾನೆ.

ಆಂಗ್ಲ ಪದಗಳನ್ನು  ಇನ್ನಷ್ಟು ಆಂಗ್ಲೀಕರಿಸುವಂತೆಯೇ ಸಂಸ್ಕೃತ ಪದಗಳನ್ನು ಇನ್ನಷ್ಟು ಸಂಸ್ಕೃತೀಕರಿಸುವದರಲ್ಲಿಯೂ ನಮ್ಮವರಿಗೆ ಅಂದರೆ ಕನ್ನಡಿಗರಿಗೆ ತುಂಬಾ ಪ್ರೀತಿ ಹಾಗು ಅಪರಿಮಿತ ಕೌಶಲ್ಯ.
ಅದರಲ್ಲಿಯೂ ನಮ್ಮ ಕನ್ನಡ ಚಿತ್ರನಿರ್ಮಾಪಕರ ಕೈಯಲ್ಲಿ ಸಿಕ್ಕ ಪದಗಳ ಗೋಳನ್ನಂತೂ ಕೇಳುವದೇ ಬೇಡ.
ದ್ವಾರಕೀಶರು ‘ಗಿರಿಜಾ’ ಎನ್ನುವ ಯುವತಿಯನ್ನು ಚಿತ್ರೋದ್ಯಮಕ್ಕೆ ಪರಿಚಯಿಸುವಾಗ ಅವಳ ಹೆಸರನ್ನು ಬದಲಾಯಿಸಿ ‘ಶೃತಿ’ ಎಂದು ಕರೆದರು. ‘ಶೃತಿ’ ಪದಕ್ಕೆ cooked, boiled, dressed ಎನ್ನುವ ಅರ್ಥವಿದೆ. ‘ಶ್ರುತಿ’ ಪದಕ್ಕೆ ವೇದ, ಉಪನಿಷತ್ತು ಹಾಗು ಸಂಗೀತದ tuning ಎನ್ನುವ ಅರ್ಥವಿದೆ. ದ್ವಾರಕೀಶರ ಮನಸ್ಸಿನಲ್ಲಿ ಇರುವ ಅರ್ಥ ಯಾವುದೋ ಅವರಿಗೇ ಗೊತ್ತು. (ಹೌದೆ?)  ಬಹುಶ: ಅವರಿಗೆ ‘ಶ್ರುತಿ’ ಇದು ‘ಶೃತಿ’ಯಷ್ಟು ಸಂಸ್ಕೃತ ಎನ್ನಿಸಿರಲಿಕ್ಕಿಲ್ಲ. ಒಟ್ಟಿನಲ್ಲಿ ದ್ವಾರಕೀಶರ ಕೈಯಲ್ಲಿ ಸಿಕ್ಕ ಗಿರಿಜಾ ಸಂಗೀತದ ಶ್ರುತಿಯಾಗುವ ಬದಲು ಬೇಯಿಸಿದ ಕೋಳಿಯಾಗಿ ಬಿಟ್ಟಳು!
ಇದರಂತೆಯೇ ‘ಧ್ರುವ’ ಪದವನ್ನು ‘ಧೃವ’ ಎಂದು, ‘ಶ್ರದ್ಧಾ’ ಪದವನ್ನು ‘ಶೃದ್ಧಾ’ ಎಂದು ಬರೆದು ಮತ್ತಷ್ಟು ಸಂಸ್ಕೃತೀಕರಿಸುವ ಒಲವು ಹಲವು ಕನ್ನಡಿಗರಲ್ಲಿದೆ.

ಚಿತ್ರನಿರ್ಮಾಪಕರೇನೋ ಭಾಷಾ-ಅಜ್ಞಾನಿಗಳಿರಬಹುದು. ಆದರೆ ನಮ್ಮ ಪತ್ರಿಕೋದ್ಯಮಿಗಳ ಕತೆ ಏನು? ಅವರೂ ಅಜ್ಞಾನಿಗಳೇ?  ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ಈ ಪತ್ರಿಕೆ ತನ್ನ ಸೋಮವಾರದ ಪುರವಣಿಯ ಶೀರ್ಷಿಕೆಯನ್ನು ‘ಸಿಂಧೂರ’ ಎಂದು ಢಾಳಾದ ಅಕ್ಷರಗಳಲ್ಲಿ  ಮುದ್ರಿಸುತ್ತದೆ. ಸಿಂಧೂರ ಪದದ ಅರ್ಥ ‘ಆನೆ’. ಈ ಪುರವಣಿಯು ಮಹಿಳಾಪುರವಣಿ. ಮಹಿಳಾಪುರವಣಿಗೆ ‘ಸಿಂಧೂರ (=ಆನೆ)’ ಎಂದು ಕರೆಯುವ ಮೂಲಕ ಪತ್ರಿಕೆಯ ಸಂಪಾದಕರು ‘ಮಹಿಳೆಯರು ಆನೆಗಳಂತೆ’ ಎನ್ನುವ ಸಾಂಕೇತಿಕ ಅರ್ಥವನ್ನು ಸೂಚಿಸುತ್ತಿದ್ದಾರೆಯೆ?  ‘ಸಿಂದೂರ’ ಎಂದರೆ ಕುಂಕುಮ. ಕುಂಕುಮಕ್ಕೂ ಭಾರತೀಯ ಮಹಿಳೆಯರಿಗೂ ಪುರಾತನ ಸಂಬಂಧವಿದೆ. ಹಾಗಿದ್ದರೆ ಮಹಿಳಾಪುರವಣಿಯನ್ನು ‘ಸಿಂದೂರ’ ಎಂದು ಕರೆಯಬೇಕಾಗಿತ್ತಲ್ಲವೆ?   ಬಹುಶ: ಮಹಿಳಾ ಪುರವಣಿಯ ಅಲ್ಪಪ್ರಾಣೀಕರಣವು ಅವರಿಗೆ ‘ಅಸಂಸ್ಕೃತ’ ಎನ್ನಿಸಿರಬಹುದು! ಸಂಯುಕ್ತ ಕರ್ನಾಟಕ ಪತ್ರಿಕೆಯು ಇಂತಹ ಅನೇಕ ಮಹಾಪ್ರಾಣೀಕೃತ ಪದಗಳನ್ನು ಸೃಷ್ಟಿಸಿ ಸಂಸ್ಕೃತ ಶಬ್ದಕೋಶಕ್ಕೆ ಕಾಣಿಕೆಯಾಗಿ ನೀಡಿದೆ. ಉದಾಹರಣೆಗೆ: ಸರ್ವೋಚ್ಛ, ಉಚ್ಛಾರ ಇತ್ಯಾದಿ. ದುರದೃಷ್ಟವೆಂದರೆ, ಅಮಾಯಕ ಓದುಗರು, ವಿಶೇಷತಃ ಚಿಕ್ಕ ಹುಡುಗರು ಹಾಗು ವಿದ್ಯಾರ್ಥಿಗಳು ಈ ತಪ್ಪು ಪದಗಳನ್ನೇ ಸರಿಯಾದ ಪದಗಳೆಂದು ತಿಳಿದುಬಿಡುವದು.

ಸಂಯುಕ್ತ ಕರ್ನಾಟಕ ಹಾಗು ವಿಜಯ ಕರ್ನಾಟಕ ಈ ಎರಡೂ ಪತ್ರಿಕೆಗಳು ‘ಅಲ್-ಕೈದಾ’ ವನ್ನು ‘ಅಲ್-ಖೈದಾ’ ಎಂದು ಮುದ್ರಿಸುತ್ತಾರೆ. ಯಾಕೆ? ಉಗ್ರಗಾಮಿಗಳು ಅಲ್ಪಪ್ರಾಣಿಗಳಾಗಿರಲು ಸಾಧ್ಯವಿಲ್ಲವೆಂದೆ? ಹಾಗಿದ್ದರೆ ‘ಕುರ್ಬಾನಿ’ಯಂತಹ(=ತ್ಯಾಗ) ಒಳ್ಳೆಯ ಪದವನ್ನು ‘ಖುರ್ಬಾನಿ’ ಎಂದು ಯಾಕೆ ಬರೆಯುತ್ತಾರೊ ತಿಳಿಯದು!
ಹಾಗೆಂದು ಎಲ್ಲಾ ಹಿಂದಿ/ಉರ್ದು ಪದಗಳನ್ನು ಮಹಾಪ್ರಾಣೀಕರಿಸುತ್ತಾರೆ ಎನ್ನುವಂತಿಲ್ಲ. ‘ಧಾಬಾ’ ಎನ್ನುವ ಹಿಂದಿ ಪದದ ಅರ್ಥ ಹುಲ್ಲಿನ ಗುಡಿಸಲು. ಇದನ್ನು ಕನ್ನಡದಲ್ಲಿ ‘ಡಾಬಾ’ ಮಾಡಲಾಗಿದೆ! ಒಟ್ಟಿನಲ್ಲಿ, ನಮ್ಮ ಪತ್ರಿಕೆಗಳು ಒಂದು ಭಾಷೆಯ ಪದವನ್ನು ಕನ್ನಡ ಭಾಷೆಗೆ ತೆಗೆದುಕೊಳ್ಳುವಾಗ ಅಪಭ್ರಂಶ ಮಾಡಲೇಬೇಕೆನ್ನುವದನ್ನು ವ್ಯಾಕರಣದ ನಿಯಮದಂತೆ ಪರಿಪಾಲಿಸುತ್ತಿದ್ದಾರೆ.

ಸಂಯುಕ್ತ ಕರ್ನಾಟಕ ಪತ್ರಿಕೆಯು ಮಾಡುತ್ತಿರುವ ಭಾಷಾದೋಷಗಳನ್ನು ಈ ಮೊದಲೇ ನಾನು ಇಲ್ಲಿ, ಹಾಗು ಇಲ್ಲಿ  ತೋರಿಸಿದ್ದೇನೆ. ವಿಜಯ ಕರ್ನಾಟಕ ಪತ್ರಿಕೆಯೂ ಸಹ ಈ ವಿಷಯದಲ್ಲಿ ಹಿಂದೆ ಬೀಳಲು ಸುತರಾಮ್ ತಯಾರಿಲ್ಲ! ವಿಜಯ ಕರ್ನಾಟಕ ಪತ್ರಿಕೆಯ ‘ಪದೋನ್ನತಿ’ ಎನ್ನುವ ಸ್ಥಿರ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾಗುವ ಮಾಹಿತಿಯು ಸಹ ತಪ್ಪಿನಿಂದ ಕೂಡಿರುತ್ತದೆ. ದಿ:೧೯ ಜನೆವರಿಯಂದು ಪ್ರಕಟವಾದ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇನೆ:

‘ಶೀತ್ನಿ’ ಪದದ ಅರ್ಥ ‘ಸೀ ತೆನೆ’. ‘ಸೀ ತೆನೆ’ಗೆ ‘ಬೆಳಸಿ’ ಎಂದೂ ಕರೆಯುತ್ತಾರೆ, ‘ಹಾಲು ತೆನೆ’ ಎಂದೂ ಕರೆಯುತ್ತಾರೆ. ಜೋಳದ ಬೆಳೆಗೆ ತೆನೆ ಬಿಟ್ಟಾಗ, ಈ ತೆನೆಯು ಇನ್ನೂ ಬಲಿಯದೆ ಇದ್ದಾಗ, ಇದನ್ನು ಹಾಗೇ ತಿನ್ನಬಹುದು. ಆ ಕಾರಣಕ್ಕಾಗಿಯೇ ಇದಕ್ಕೆ ‘ಸೀ ತೆನೆ’, sweet corn ಎಂದು ಕರೆಯುವದು. ವಿಜಯ ಕರ್ನಾಟಕದ ‘ಪದೋನ್ನತಿ’ಯ ಪಂಡಿತರಿಗೆ ಇದು ಚಾದಂಗಡಿಯಲ್ಲಿ ದೊರೆಯುವ ‘ಸಿಹಿ ತಿನಿಸು’ ತರಹ ಕಂಡಿದ್ದು ಆಶ್ಚರ್ಯಕರವಾಗಿದೆ!
………………………………………………………………..
ಕನ್ನಡಿಗರು ವ್ಯಾಕರಣದ ನಿಯಮಗಳನ್ನು ನಾಲಿಗೆಗೆ ಅನುಕೂಲವಾಗುವಂತೆ ಹೊಂದಿಸಿಕೊಳ್ಳುವದರಲ್ಲಿ ನಿಸ್ಸೀಮರು. ‘ಹೆಣ್ಣು ಕೂಸು’ ಎನ್ನುವ ಜೋಡು ಪದವು ಮೊದಲು ‘ಹೆಂಗೂಸು’ ಆಗಿ, ಬಳಿಕ ‘ಹೆಂಗಸು’ ಆಯಿತು.
ಅದರತೆಯೇ, ‘ಗಂಡು ಕೂಸು’ ಪದವು ‘ಗಂಡಸು’ ಆಯಿತು. ಇದರಿಂದ ಉಚ್ಚಾರ ಸುಲಭವಾಯಿತು. ಆದರೆ ವ್ಯಾಕರಣಕ್ಕೇನೂ ಭಂಗ ಬರಲಿಲ್ಲ. ಇದೇ ಮಾತನ್ನು ‘ಆಕಳು’ ಪದಕ್ಕೆ ಹೇಳುವಂತಿಲ್ಲ. ‘ಆವು’ ಪದದ ಬಹುವಚನ ‘ಆವುಗಳು’. ಇದೇ ಕಾಲಾಂತರದಲ್ಲಿ ‘ಆಕಳು’ ಆಗಿದೆ. ಆದುದರಿಂದ ‘ಆಕಳು ಬಂದಿದೆ’ ಎಂದು ಹೇಳುವದು ಸರಿಯಲ್ಲ. ಇದು ‘ಆವು ಬಂದಿದೆ’ , ಅಥವಾ ‘ಆಕಳು ಬಂದಿವೆ’ ಎಂದು ಇರಬೇಕು!

ಕೆಲವೊಂದು ರೂಪಾಂತರಗಳಂತೂ ವಿನೋದವನ್ನು ಹುಟ್ಟಿಸುವಂತಿವೆ.  ಬೀದರ ಜಿಲ್ಲೆಯಲ್ಲಿ ‘ಹುಡುಗಿ’ ಎನ್ನುವ ಊರಿದೆ. ಈ ಊರಿಗೆ ಹೋಗಬಯಸುವ ಬಸ್ ಪ್ರಯಾಣಿಕರು ನಿರ್ವಾಹಕನಿಗೆ “ಒಂದು ಹುಡುಗಿ ಕೊಡಪ್ಪಾ” ಎಂದು ಚೇಷ್ಟೆ ಮಾಡುವದು ಸಾಮಾನ್ಯವಾಗಿದೆ. ಹುಡುಗಿ ಪದದ ಮೂಲರೂಪ ‘ಪುದುಗಿ’.   ‘ಪುದು’ ಇದರ ಅರ್ಥ ಹೊಸದಾದದ್ದು. 
‘ಪುದು’=new ;`ಗಿ’=habitat. 
ಹುಡುಗಿ=ಪುದುಗಿ= new habitat=ಹೊಸೂರು.
ತಮಿಳಿನಲ್ಲಿ ಹುಡುಗಿ ಅಥವಾ ಪುದುಗಿ ಎನ್ನುವ ಪದಕ್ಕೆ ಸಮಾನವಾದ ಪದ=ಪುದುಚೆರಿ. 
ಇಲ್ಲಿಯೂ ಸಹ ಪುದು=ಹೊಸ ಹಾಗೂ ಚೆರಿ=ಊರು.

ಅದರಂತೆಯೇ ಹೊಸದಾಗಿ ಜನ್ಮ ಪಡೆದ ಕೂಸು ಪುದುಕ ಅಥವಾ ಪುದುಕಿಯಾಯಿತು.  ಈ ಪದಗಳೇ ಕಾಲಾಂತರದಲ್ಲಿ ‘ಹುಡುಗ’, ‘ಹುಡುಗಿ’ ಎಂದು ಮಾರ್ಪಾಡಾಗಿವೆ.
ಪುದು ಪದಕ್ಕೆ ವಿರುದ್ಧವಾದದ್ದು ಮುದು ಎನ್ನುವ ಪದ. ಮುದು=old. ಈ ಪದದಿಂದಲೇ ಮುದುಕ, ಮುದುಕಿ ಎನ್ನುವ ಪದಗಳು ಬಂದಿವೆ. ಮುದಗಲ್ಲು ಎನ್ನುವ ಊರಿನ ಅರ್ಥ ಹಳೆಯ ಊರು. ಇದಕ್ಕೆ ಸಮಾನವಾದ ಮತ್ತೊಂದು ಕನ್ನಡ ಪದ ಹಳೇಬೀಡು.

ಕನ್ನಡ ನುಡಿಯಲ್ಲಿ ‘ಪ’ಕಾರವು ‘ಹ’ಕಾರವಾಗಿ ಮಾರ್ಪಟ್ಟಿದ್ದರಿಂದ  ಅನೇಕ ಪದಗಳ ಉಚ್ಚಾರಗಳು ಬದಲಾದವು. ಉದಾಹರಣೆಗೆ ‘ಪಾವು’ ಪದವು ‘ಹಾವು’ ಎಂದು ಬದಲಾಯಿತು ; ‘ಪಣ್ಣು’ ಪದವು ‘ಹಣ್ಣಾ’ಯಿತು; ‘ಪೆಣ್ಣು’ ‘ಹೆಣ್ಣಾ’ದಳು. ಸಂಸ್ಕೃತದ ‘ಪರ್ವ’ವು ಕನ್ನಡದಲ್ಲಿ ‘ಹಬ್ಬ’ವಾಯಿತು. ಆದರೆ ‘ಪೆಂಟಿ’ ಎನ್ನುವ ಪದವು ‘ಹೆಂಟಿ’ಯಾಗಿ ಬದಲಾದಾಗ, ರೂಪಾಂತರದೊಡನೆ ಅರ್ಥಾಂತರವೂ ಆಯಿತು. ಬೆಲ್ಲದ ಗಟ್ಟಿಗೆ ಬೆಲ್ಲದ ಪೆಂಟಿ ಎಂದು ಕರೆಯುತ್ತೇವೆ, ಬೆಲ್ಲದ ಹೆಂಟಿ ಎಂದು ಕರೆಯುವದಿಲ್ಲ. ಹೆಂಟಿ ಪದವು ಮಣ್ಣಿನ ಗಟ್ಟಿಗೆ reserve ಆಗಿದೆ. ಇದೇ ರೀತಿಯಲ್ಲಿ ಗೆಳತಿ ಪದವು ಕೆಳದಿ ಪದದಿಂದಲೇ ಬಂದಿದ್ದರೂ ಸಹ ಅರ್ಥಗಳಲ್ಲಿ ಅಜಗಜಾಂತರವಿದೆ.
ಅದರಂತೆ, ತ ಮತ್ತು ದ ಧ್ವನಿಗಳು ಬದಲಾಗಬಲ್ಲ ಧ್ವನಿಗಳಾದರೂ ಸಹ (ಉದಾಹರಣೆ: ಹುಲಿಯ ತೊಗಲು=ಹುಲಿದೊಗಲು), ತಣಿವು ಮತ್ತು ದಣಿವು ಈ ಪದಗಳು ಅರ್ಥದಲ್ಲಿ ಪೂರ್ಣ ವಿಭಿನ್ನವಾಗಿವೆ.

ಒಂದು ಕಾಲದಲ್ಲಿ ದ್ರಾವಿಡ ಭಾಷೆಗಳಿಗೆಲ್ಲ common ಆದ ಕೆಲವು ಪದಗಳು ಕಾಲಾಂತರದಲ್ಲಿ ಒಂದೆರಡು ಭಾಷೆಗಳಿಂದ ವಜಾ ಆಗಿಬಿಟ್ಟಿವು. ಉದಾಹರಣೆಗೆ ತುಳು ಭಾಷೆಯಲ್ಲಿಯ ‘ವಣಸ’ ಪದವನ್ನೇ ತೆಗೆದುಕೊಳ್ಳಿರಿ. ತುಳು ಭಾಷೆಯಲ್ಲಿ ‘ಊಟ ಆಯಿತೆ?’ ಎಂದು ಕೇಳಲು ‘ವಣಸ ಆಂಡಾ?’ ಎಂದು ಕೇಳುತ್ತಾರೆ. ಈ ಪದವು ಕನ್ನಡದಲ್ಲಿಯೂ ಒಮ್ಮೆ ಬಳಕೆಯಲ್ಲಿ ಇದ್ದಿರಬಹುದು.  ವಣಸ ಪದದಿಂದ ವಾಣಸಿಗ ಪದ ಉತ್ಪನ್ನವಾಗಿದ್ದು, ಕನ್ನಡದಲ್ಲಿ ಅದು ‘ಬಾಣಸಿಗ’ ಎಂದು ಮಾರ್ಪಟ್ಟಿದೆ. 

ಇದರಂತೆಯೇ ‘ಬಾಗಿಲು’ ಎನ್ನುವ ಪದ.
ತುಳುವಿನಲ್ಲಿ ಮನೆ ಪದಕ್ಕೆ ಇಲ್ ಎನ್ನುವ ಪದವನ್ನೇ ಇನ್ನೂ ಬಳಸುತ್ತಾರೆ. ಇಲ್  (=ಮನೆ) ಹಾಗೂ ವಾಯಿ(=ಬಾಯಿ) ಪದಗಳು ಕೂಡಿ ‘ವಾಯಿಲ್’ (=ಮನೆಯ ಬಾಯಿ) ಪದವು ಉತ್ಪನ್ನವಾಯಿತು. ವಾಯಿಲ್ ಪದವು ವಾಕಿಲ್ ಆಯಿತು. ಕಾಲಾಂತರದಲ್ಲಿ  ಇದೇ ಪದವು ಬಾಗಿಲು  ಎಂದು ರೂಪಾಂತರಗೊಂಡಿತು. ಅದರಂತೆ ಇಲ್ (ಮನೆ) ಹಾಗೂ ಹಿಂತು ಪದಗಳು ಕೂಡಿ ‘ಹಿಂತಿಲ್’ (=ಹಿತ್ತಲು) ಪದ ರೂಪಗೊಂಡಿದೆ. ‘ಹಿಂತಿಲು’ ಈಗ ಹಿತ್ತಲಾಗಿದೆ. ಕನ್ನಡಿಗರು ‘ಇಲ್’ ಪದದ ಬದಲಾಗಿ ‘ಮನೆ’ಗೆ ಅಂಟಿಕೊಂಡಿದ್ದರಿಂದ, ಬಾಗಿಲು, ಹಿತ್ತಲು ಇವುಗಳ ಮೂಲರೂಪಗಳು ಮಸುಕಾಗಿ ಬಿಟ್ಟಿವೆ.

ಪದಮೂಲವನ್ನು ಶೋಧಿಸುವದು ನದೀಮೂಲವನ್ನು ಶೋಧಿಸುವಷ್ಟೇ ಸಾಹಸಕರವಾಗಿದೆ!


Sunday, January 10, 2010

‘ನನ್ನಾಸೆ’ (--ಶ್ರೀಮತಿ ಊರ್ಮಿಳಾ ದೇಶಪಾಂಡೆ)

ನಗರಸಂಸ್ಕೃತಿಯು ತನ್ನ ಒಡಲಿನಲ್ಲಿರುವ ನಾಗರಿಕರನ್ನು ಮರಳು ಮಾಡುವ ಮಾಯಾವಿ ಸಂಸ್ಕೃತಿಯಾಗಿದೆ. ಟೀವಿ, ಸಿನೆಮಾ ಮತ್ತು ಝಗಝಗಿಸುವ ಅಂಗಡಿಗಳು ನಾಗರಿಕರನ್ನು ಭ್ರಮಾಲೋಕಕ್ಕೆ ಸೆಳೆಯುತ್ತವೆ ಹಾಗು ಜೀವನವೆಂದರೆ ಇದೇ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತವೆ. ಇದಕ್ಕೆ ತೀರ ವಿರುದ್ಧವಾದ, ಇದಕ್ಕಿಂತ ಹೆಚ್ಚು fulfilling ಆದಂತಹ ಬದುಕು ಸಾಧ್ಯವಿಲ್ಲವೆ? 
ಹಳ್ಳಿಗಳಲ್ಲಿ ಹಾಗು ನಿಸರ್ಗದ ಮಡಿಲಲ್ಲಿ ಬಾಳಿದ ನಮ್ಮ ಪೂರ್ವಜರ ಬದುಕು ನಗರಸಂಸ್ಕೃತಿಗಿಂತ ಹೆಚ್ಚು ಶ್ರೀಮಂತವಾಗಿತ್ತು. ಇಂತಹ ಒಂದು ಸಂಸ್ಕೃತಿಯ ಕನಸು ಶ್ರೀಮತಿ ಊರ್ಮಿಳಾ ದೇಶಪಾಂಡೆಯವರು ಬರೆದ ‘ನನ್ನಾಸೆ’ ಎನ್ನುವ ಈ ಕವನದಲ್ಲಿ ವ್ಯಕ್ತವಾಗಿದೆ.

 ಈ ಕವನದಲ್ಲಿ ಕವಯಿತ್ರಿಯ ಆಸೆಯನ್ನು ಎರಡು ವಿಧವಾಗಿ ವಿಶ್ಲೇಷಿಸಬಹುದು:
ಮೊದಲನೆಯದಾಗಿ ನಿಸರ್ಗದೊಡನೆ ಸಮರಸವಾಗಿ ಬಾಳುವ ಆಸೆ. ಎರಡನೆಯದಾಗಿ, ಯಾವುದೇ ಮಹತ್ವಾಕಾಂಕ್ಷೆ ಇಲ್ಲದ ಪುಟ್ಟ ಬದುಕೇ ಸಾಕು ಎನ್ನುವ ಆಸೆ,‘Small is beautiful’ ಎನ್ನುತ್ತಾರಲ್ಲ ಹಾಗೆ.
ಪರಿಮಳ ಬೀರುವ ಪುಟ್ಟ ಹೂವು, ಸ್ವಚ್ಛಂದವಾಗಿ ಹಾರುವ  ಮರಿಹಕ್ಕಿ, ಜುಳುಜುಳು ಹರಿಯುವ ಪುಟ್ಟ ತೊರೆ, ಕಮಲದೆಲೆಯ ಮೇಲಿನ ಇಬ್ಬನಿ ಇವು ಕವಯಿತ್ರಿ ಬಯಸುವ ಬದುಕಿನ ರೂಪಗಳು.

ಕೊನೆಯ ಸಾಲಿನಲ್ಲಿರುವ ಕಮಲದೆಲೆಯ ಮೇಲಿನ ಇಬ್ಬನಿಯ ಪ್ರತೀಕವನ್ನು ಗಮನಿಸಿರಿ. ಇಬ್ಬನಿಯ ಕ್ಷಣಭಂಗುರ ಜೀವನವನ್ನು ಈ ಪ್ರತೀಕ ಅಭಿವ್ಯಕ್ತಿಗೊಳಿಸುತ್ತದೆ. ಇದರೊಂದಿಗೇ ಭಾರತೀಯ ತತ್ವಜ್ಞಾನದ ಮಹತ್ವದ ಸಂದೇಶವೊಂದನ್ನೂ ಇದು ಸಾರುತ್ತದೆ: ‘ಕಮಲಪತ್ರಮಿವಾಂಭಸಿ.’ ಕಮಲದ ಎಲೆಯ ಮೇಲಿನ ನೀರಬಿಂದು ಹೇಗೆ ಕಮಲದೆಲೆಗೆ ಅಂಟಿಕೊಂಡಿರುವದಿಲ್ಲವೊ, ಅದೇ ರೀತಿಯಲ್ಲಿ  ಮನುಷ್ಯನು ಸಂಸಾರಕ್ಕೆ ಅಂಟಿಕೊಂಡಿರಬಾರದು ಎನ್ನುವದು ಈ ಸಂದೇಶ. ಆದರೆ, ಈ ಪ್ರತೀಕದಲ್ಲಿ ಇನ್ನೂ ಹೆಚ್ಚಿನ, ಇನ್ನೂ ಸುಂದರವಾದ ಮತ್ತೊಂದು ಸಂದೇಶವಿದೆ.
“ಸುತ್ತಲಿನ ನಿಸರ್ಗವನು ತನ್ನಲ್ಲಿ ಪ್ರತಿಫಲಿಸಿ……
.....ನನ್ನಲ್ಲಿ ಅಡಗಿದ ಆ ಸೌಂದರ್ಯವು ಅಮರವಹುದು…..”
ಸಂಸಾರಕ್ಕೆ ಅಂಟಿಕೊಳ್ಳಬಾರದು ಎನ್ನುವದು ನಿಜ. ಆದರೆ, ಈ ಜೀವನವೆಲ್ಲ ಭಗವಂತನ ನಿರ್ಮಿತಿ ; ಅದನ್ನು ತಾನು ಶುದ್ಧ ರೂಪದಲ್ಲಿ ಪ್ರತಿಫಲಿಸುತ್ತೇನೆ ಎನ್ನುವ ತಿಳಿವಳಿಕೆ ಈ ಸಾಲಿನಲ್ಲಿದೆ. ಇದು ಜೀವನವನ್ನು ‘ಸತ್ಯಮ್, ಶಿವಮ್, ಸುಂದರಮ್’ ಎಂದು ಭಾವಿಸುವ ತಿಳಿವಳಿಕೆ.


ಶ್ರೀಮತಿ ಊರ್ಮಿಳಾ ದೇಶಪಾಂಡೆ ನನ್ನ ತಾಯಿ. ಅತ್ಯಂತ ತೀಕ್ಷ್ಣ ಬುದ್ಧಿಯ ಇವಳು, ಮುಲ್ಕಿ (೭ನೆಯ) ತರಗತಿಯಲ್ಲಿದ್ದಾಗ, ತನ್ನ ತರಗತಿಯ ಅತ್ಯಂತ ಕಿರಿಯ ವಯಸ್ಸಿನ ವಿದ್ಯಾರ್ಥಿಯಾಗಿದ್ದಳು. ಕಾ^ಲೇಜಿನಲ್ಲಿ ಕಲಿಯುವಾಗ, ಹಣದ ಅಭಾವದಿಂದ ಪಠ್ಯಪುಸ್ತಕಗಳನ್ನು ಕೊಳ್ಳುವದು ಹೋಗಲಿ,ನೋಟುಬುಕ್ಕುಗಳನ್ನು  ಕೊಳ್ಳಲೂ ಇವಳಿಗೆ ಸಾಧ್ಯವಿರಲಿಲ್ಲ.

‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿಯ ಅಕ್ಷರಗಳನ್ನು ತೋರಿಸುತ್ತ ನನಗೆ ವರ್ಣಮಾಲೆಯನ್ನು ಕಲಿಸಿದ  ಗುರು ಇವಳು. ಸ್ವತಃ voracious reader ಆದ ಇವಳಿಂದಾಗಿಯೇ ನನಗೆ  ಹಾಗು ನನ್ನ ಒಡಹುಟ್ಟಿದವರಿಗೆ  ಸಾಹಿತ್ಯವನ್ನು ಓದುವ, ಬರೆಯುವ ಚಟ ಅಂಟಿಕೊಂಡಿತು.

ನಾಲ್ಕು ವರ್ಷಗಳ ಹಿಂದೆ, ತನ್ನ ಎಂಬತ್ತೊಂದನೆಯ ವಯಸ್ಸಿನಲ್ಲಿ , ನನ್ನ ತಾಯಿ ತೀರಿಕೊಂಡಳು.

Tuesday, January 5, 2010

“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ!”

ರೈತರ ಆತ್ಮಹತ್ಯೆಗಳು ೨೦೦೯ನೆಯ ವರ್ಷದಲ್ಲಿ ಎಂದಿನಂತೆ ನಡೆದವು.
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”, ಎಂದು ಸಚಿವರು ಭರವಸೆ ನೀಡಿದರು.
 ‘ರೈತರು ಸಾಲಕ್ಕೆ ಅಂಜಬಾರದು, ಗಟ್ಟಿ ಮನಸ್ಸಿನವರಾಗಬೇಕು, ಸರಕಾರ ರೈತರ ಹಿಂದೆಯೇ ಇದೆ’, ಎಂದು ರೈತರಲ್ಲಿ ವಿಶ್ವಾಸ ತುಂಬುವ, ಮನ:ಶಾಸ್ತ್ರ ಆಧಾರಿತ  ಕಾರ್ಯಕ್ರಮ ನಡೆಯಿತು. ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧ್ಯಯನ ಮಾಡಲು ಆಯೋಗವನ್ನು ರಚಿಸಲಾಯಿತು. ‘ರೈತರ ಆತ್ಮಹತ್ಯೆಗೆ ಸರಕಾರ ಕಾರಣವಲ್ಲ ; ಕೌಟಂಬಿಕ ಕಾರಣಗಳಿಗಾಗಿ ಸಾಲ ಮಾಡಿದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆಯೋಗ ಗಿಳಿಪಾಠ ಹೇಳಿತು.

ಬೆಳೆಸಾಲ ತೀರಿಸಲಾರದ ರೈತ ತನ್ನ ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುವದನ್ನು ನಮ್ಮ ಮಾನಗೇಡಿ ಸಚಿವರು ಹೇಗೆ ತಾನೆ ಅರ್ಥ ಮಾಡಿಕೊಂಡಾರು? ಇತ್ತ ಗ್ರಾಹಕನಿಗೂ ಸಹ ಏನೂ ಸುಖವಿಲ್ಲ. ಆಹಾರ ಧಾನ್ಯಗಳ ಬೆಲೆ ಆಕಾಶವನ್ನು ಮುಟ್ಟಿದೆ. ನಮ್ಮ ಸಚಿವರು ಮಾತ್ರ ಭರವಸೆ ನೀಡುತ್ತಲೇ ಇದ್ದಾರೆ:
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ!”

ಮುಂಬಯಿಯಲ್ಲಿ, ಬೆಂಗಳೂರಿನಲ್ಲಿ ಉಗ್ರವಾದಿಗಳ ದಾಳಿಗಳು ನಡೆದವು.
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”, ಎಂದು ಸಚಿವರು ಮತ್ತೊಮ್ಮೆ ಭರವಸೆ ನೀಡಿದರು.
ಸಿಕ್ಕಿ ಬಿದ್ದ ಉಗ್ರವಾದಿಗಳಿಗೆ ಕಾರಾಗೃಹದಲ್ಲಿ ರಾಜೋಪಚಾರ ನಡೆಯುತ್ತಿದ್ದರೆ ಉಗ್ರವಾದಿಗಳಿಗೆ ಬಲಿಯಾದವರ ಕುಟುಂಬದ ಸದಸ್ಯರು ದಿಕ್ಕೇಡಿಗಳಾಗಿದ್ದಾರೆ. ಮತ್ತೊಮ್ಮೆ ಉಗ್ರರ ದಾಳಿ ನಡೆಯುವವರೆಗೆ, ಪರಿಸ್ಥಿತಿ ಹತೋಟಿಯಲ್ಲಿಯೇ ಇರುತ್ತದೆ.

ಪರದೇಶಗಳ ಆಕ್ರಮಣದ ವಿರುದ್ಧ ಭಾರತವು ಅನೇಕ ಸಲ ನೆಲ ಕಚ್ಚಿದೆ. ಈ ಅಪಜಯಕ್ಕೆ ಎರಡು ಮಹತ್ವದ ಕಾರಣಗಳಿವೆ. ಮೊದಲನೆಯದು ಭಾರತೀಯರಲ್ಲಿ ಭದ್ರವಾಗಿ ಮನೆ ಮಾಡಿರುವ ಅಹಿಂಸಾ ಮನೋಭಾವ. ಎರಡನೆಯ ಕಾರಣವು ನಮ್ಮ  inferior weaponry.

ಇದನ್ನು ಅರಿತಿದ್ದ ನೆಹರೂರವರು ಭಾರತವು ಅಣ್ವಸ್ತ್ರ ಶಕ್ತ ರಾಷ್ಟ್ರವಾಗಲು ತಳಪಾಯವನ್ನು ಹಾಕಿದರು.
ಉತ್ತರ ಪ್ರದೇಶದ ನರೋರಾದಲ್ಲಿ ಸ್ಥಾಪಿಸಿದ ‘ಅಣು ಶಕ್ತಿ ಕೇಂದ್ರ’ವು ಅಯಶಸ್ವಿಯಾಗಿದೆ ಎನ್ನುವ ಸುದ್ದಿಯನ್ನು ಗಾಳಿಯಲ್ಲಿ ತೇಲಿ ಬಿಡಲಾಗಿತ್ತು. ಆ ಸಮಯದಲ್ಲಿ, ಆ ಕೇಂದ್ರದಲ್ಲಿ ನಮ್ಮ ಅಣು ವಿಜ್ಞಾನಿಗಳು ದೇಸಿ ಅಣು ಬಾಂ^ಬಿನ ಉತ್ಪಾದನೆಯ ಪ್ರಯತ್ನದಲ್ಲಿ ತೊಡಗಿಕೊಂಡಿದ್ದರು. ಕಾಲಾಂತರದಲ್ಲಿ ಈ ಪ್ರಯತ್ನಕ್ಕೆ ಯಶಸ್ಸು ದೊರೆತದ್ದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.

‘ಕುಂಬಾರನಿಗೊಂದು ವರುಷ, ಡೊಣ್ಣೆಗೊಂದು ನಿಮಿಷ’ ಎನ್ನುವಂತೆ, ಈಗಿನ ಪ್ರಧಾನಿ ಮನಮೋಹನ ಸಿಂಗರು ನಮ್ಮ ಅಣುಶಕ್ತಿ ಉತ್ಪಾದನ ಕೇಂದ್ರಗಳನ್ನು ಅಮೇರಿಕಾದ ಪರಿಶೀಲನೆಗೆ ಸಮರ್ಪಿಸಿ ಬಿಟ್ಟರು. ಭಾರತದ ಅಣುವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಬೇಕಾಗುವ ಇಂಧನವನ್ನು  ಪೂರೈಸಲು ನಮಗೆ ಅಮೆರಿಕಾದ ಮರ್ಜಿ ಹಿಡಿಯಲೇ ಬೇಕು ಎನ್ನುವ ಸೋಗನ್ನು ಮನಮೋಹನ ಸಿಂಗರು ಅಮಾಯಕ ಭಾರತೀಯರ ಎದುರಿಗೆ ಹಾಕಿದರು. ಈಗಿನ ಪರಿಸ್ಥಿತಿ ಏನೆಂದರೆ ಅಣುಶಕ್ತಿ ಸಬಲ ರಾಷ್ಟ್ರಗಳು ಭಾರತದ ಅಣು ಕೇಂದ್ರಗಳಿಗೆ ಇಂಧನ ಪೂರೈಸಲು ಹೊಸ ಹೊಸ ಶರತ್ತುಗಳನ್ನು ಹಾಕುತ್ತಿವೆ. ಅಲ್ಲದೆ, ಈ ಇಂಧನದ ಬೆಲೆಯನ್ನು ಆಕಾಶದೆತ್ತರಕ್ಕೆ ಏರಿಸುವದರಲ್ಲಿ ಏನೂ ಸಂದೇಹವಿಲ್ಲ. ಇಂತಹ ಮೋಸದ ವರ್ತನೆಯೂ ಮೊದಲೂ ಆಗಿದೆ.

ಭಾರತವು ಸ್ವದೇಶಿ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುವ ಹಂತದಲ್ಲಿದ್ದಾಗ, ಈ ಕ್ಷಿಪಣಿಗಳಿಗೆ ಅವಶ್ಯವಿರುವ ಇಂಧನವನ್ನು (ಆಗಿನ) ಸೋವಿಯಟ್ ರಶಿಯಾದಿಂದ ಖರೀದಿಸಲು ಪ್ರಾರಂಭಿಸಿತು. ತಕ್ಷಣವೇ ಅಮೆರಿಕಾವು ಒಂದು ‘Cryogenic Fuel Suppliers’ Club’ಅನ್ನು ಸ್ಥಾಪಿಸಿ, ಇಂಧನದ ಬೆಲೆಯನ್ನು ಎತ್ತರಿಸಿತು.
ಇದೆಲ್ಲಾ ಮನಮೋಹನ ಸಿಂಗರಿಗೆ ಗೊತ್ತಿಲ್ಲವೆಂತಲ್ಲ. ಆದರೆ ಅವರಿಗೆ ಒಂದು International Good Boy Image ಬೇಕಾಗಿದೆ,  at the cost of his motherland!

ಈ International Good Boy Image ಅಂದರೆ, ಕಾಲು ಕೆರೆದು ಒದೆಯಲು ಸಿದ್ಧವಿರುವ ರೌಡಿ ರಾಷ್ಟ್ರಗಳಿಂದ ಒದೆಯಿಸಿಕೊಳ್ಳಲು ಬೆನ್ನು ಕೊಟ್ಟು ನಿಂತ ಮೆದುಗ ಹುಡುಗನಂತೆ.
ಮನಮೋಹನ ಸಿಂಗರೆ, ನಿಮ್ಮ Good Boy Imageಗಾಗಿ ನಿಮಗೇನೂ Nobel Prize for Peace ಸಿಗುವದಿಲ್ಲ. ಅದೆಲ್ಲ ದಾಳಿಕೋರ USA Presidentರಿಗೇ ಮೀಸಲು!

ಚೀನಾ ಅಂತೂ ಭಾರತವನ್ನು ಒದೆಯುತ್ತಲೇ ಇದೆ. ಬ್ರಹ್ಮಪುತ್ರಾ ನದಿಯ ಮಾರ್ಗವನ್ನು ಚೀನಾ ತಿರುಗಿಸಲು ಹೊರಟರೆ, ಅದಕ್ಕೆ ಭಾರತದಿಂದ ಯಾವುದೇ ಪ್ರತಿಭಟನೆ ಇಲ್ಲ. ನಮ್ಮ ಪ್ರದೇಶದಲ್ಲಿ ಅವರು ತಮ್ಮ ಗಡಿಕಲ್ಲುಗಳನ್ನು ನೆಟ್ಟರೆ, ಅದಕ್ಕೆ ನಮ್ಮ ಪ್ರತಿಭಟನೆ ಇಲ್ಲ. ನಮ್ಮದೇ ಪ್ರದೇಶವಾದ ಲಡಾಖದಲ್ಲಿ ನಾವು ರಸ್ತೆ ನಿರ್ಮಿಸುತ್ತಿರುವಾಗ, ಚೀನಾ ಪ್ರತಿಭಟಿಸಿದರೆ, ನಮ್ಮ ಕೆಲಸವನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು! ಆ^ಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಚಚ್ಚುತ್ತಲೇ ಇದ್ದಾರೆ. ಈ ನೀಚ ಕೃತ್ಯವನ್ನು Racist ಎಂದು ಕರೆದು ಆ^ಸ್ಟ್ರೇಲಿಯಾಕ್ಕೆ ಅಂತಾರಾಷ್ಟ್ರೀಯ ಛೀಮಾರಿ ಹಾಕಿಸುವ ಧೈರ್ಯವನ್ನು ನಮ್ಮ ಸರಕಾರ ತೋರಿಸುತ್ತಿಲ್ಲ.
ಇದೆಂತಹ ಛಕ್ಕಾ ಸರಕಾರ!
ಇದಕ್ಕೆಲ್ಲ ಮನಮೋಹನ ಸಿಂಗರದು ಒಂದೇ ಪ್ರತಿಕ್ರಿಯೆ:
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”!
ಯಾರ ಹತೋಟಿಯಲ್ಲಿ?

೧೯೬೨ರಲ್ಲಿ ಚೀನಾ ಭಾರತವನ್ನು ಪೂರ್ಣವಾಗಿ ಸದೆ ಬಡಿದದ್ದು ಎಲ್ಲರಿಗೂ  ಗೊತ್ತಿರುವ ಸಂಗತಿಯೇ. ಆದರೆ, ಈ ಸಂದರ್ಭದಲ್ಲಿ ಜರುಗಿದ ಒಂದು ಘಟನೆ ಬಹುಶ: ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.
ಒಂದು ಪ್ರದೇಶದಲ್ಲಿ ಶತ್ರುಸೈನಿಕರ ಕೈ ಮೇಲಾಗುತ್ತಿರುವಂತಹ ಪರಿಸ್ಥಿತಿ ಒದಗಿದಲ್ಲಿ, ಕೇಂದ್ರಸರಕಾರವು ತನ್ನ ಪ್ರಭುತ್ವವನ್ನು ಆ ಪ್ರದೇಶದಿಂದ ತೆರವು ಮಾಡಿರುವದಾಗಿ ಘೋಷಿಸಬಹುದು. ಆ ಸಂದರ್ಭದಲ್ಲಿ ಅಲ್ಲಿಯ ನಾಗರಿಕರನ್ನು ರಕ್ಷಿಸುವ ಹೊಣೆಗಾರಿಕೆ ಸರಕಾರಕ್ಕೆ ಇರುವದಿಲ್ಲ.

೧೯೬೨ರ ಚೀನೀ ಆಕ್ರಮಣದ ಸಂದರ್ಭದಲ್ಲಿ, NEFA (ಈಗಿನ ಅರುಣಾಚಲ ಪ್ರದೇಶ)ದಲ್ಲಿಯ ತವಾಂಗ ಜಿಲ್ಲೆಯು ಚೀನೀ ಸೈನಿಕರ ಕೈವಶವಾಯಿತು. ಅಲ್ಲಿಂದ ಆಸಾಮ ರಾಜ್ಯದಲ್ಲಿಯ ದರಾಂಗ ಜಿಲ್ಲೆಯ ಕೇಂದ್ರಸ್ಥಳವಾದ ತೇಜಪುರವು  ಕೆಲವೇ ತಾಸುಗಳ ದೂರದಲ್ಲಿದೆ. ಚೀನೀ ಸೈನಿಕರು ತೇಜಪುರವನ್ನೂ ಆಕ್ರಮಿಸಬಹುದೆನ್ನುವ ಭೀತಿಯಿಂದ  ದರಾಂಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಲ್ಲಿಯ ನಿವಾಸಿಗಳ ವಿತ್ತ, ಜೀವಿತಗಳಿಗೆ ಸರಕಾರವು ಹೊಣೆಯಾಗುವದಿಲ್ಲವೆಂದು ಘೋಷಿಸಿ, ನಗರವನ್ನು ತ್ಯಜಿಸಲು ನಾಗರಿಕರಿಗೆ ಸೂಚನೆ ನೀಡಿದರು. ಸೆರೆಮನೆಯಲ್ಲಿರುವ ಕೈದಿಗಳನ್ನೆಲ್ಲ ಬಿಡುಗಡೆ ಮಾಡಲಾಯಿತು. ಸರಕಾರಿ ಕೋಶದಲ್ಲಿರುವ ಹಣವನ್ನೆಲ್ಲ ಸುಟ್ಟು ಹಾಕಲಾಯಿತು. ಆ ಅವಧಿಯಲ್ಲಿ ಭಾರತ ಸರಕಾರದ ಪ್ರಭುತ್ವವು ಆ ಜಿಲ್ಲೆಯಲ್ಲಿ NIL ಆಯಿತು. ಜಿಲ್ಲಾಧಿಕಾರಿಗಳು ಈ ಎಲ್ಲ ಕ್ರಮಗಳನ್ನು ಕೈಕೊಳ್ಳುತ್ತಿದ್ದಾಗ, ಲೋಕಸಭೆಯಲ್ಲಿ ನಮ್ಮ ಪ್ರಧಾನಿಗಳು  ಜನತೆಗೆ ಭರವಸೆ ನೀಡುತ್ತಿದ್ದರು:
“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”!

ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಸ್ಥಿತಪ್ರಜ್ಞನ ಲಕ್ಷಣಗಳನ್ನು ಸಾರಿದ್ದಾನೆ. ಯಾರು ಲಾಭ,ಹಾನಿಗಳಲ್ಲಿ ; ಜಯ, ಅಪಜಯಗಳಲ್ಲಿ ಮನಸ್ಸಿನ ಸಮಸ್ಥಿತಿಯನ್ನು ಕಾಯ್ದುಕೊಳ್ಳುತ್ತಾರೊ ಅವರೇ ಸ್ಥಿತಪ್ರಜ್ಞರೆಂದು ಭಗವಂತನು ಅಪ್ಪಣೆ ಕೊಡಿಸಿದ್ದಾನೆ. ಈ ಪ್ರಮಾಣದ ಮೇರೆಗೆ ನಮ್ಮ ರಾಜಕಾರಣಿಗಳೆಲ್ಲರೂ ಸ್ಥಿತಪ್ರಜ್ಞರೇ. ಯಾಕೆಂದರೆ ಇವರೆಲ್ಲರ ಸಂಪತ್ತು ಸ್ವಿಸ್ ಬ್ಯಾಂಕುಗಳಲ್ಲಿ ಭದ್ರವಾಗಿದೆ. ಇವರ ಮಕ್ಕಳು ವಿದೇಶಗಳಲ್ಲಿ ನೆಲಸಿದ್ದಾರೆ! ಭಾರತಕ್ಕೆ ಏನೇ ಆದರೂ ಇವರಿಗೆ ಆತಂಕವಿಲ್ಲ. ಪುರಾಣಕಾಲದಲ್ಲಿ ಮಿಥಿಲಾ ಪಟ್ಟಣವು ಬೆಂಕಿ ಬಿದ್ದು ಉರಿಯುತ್ತಿರುವಾಗ, ಆ ದೇಶದ ರಾಜನಾದ ಜನಕ ಮಹಾರಾಜನು ಹೇಳಿದನಂತೆ: “ಉರಿಯುತ್ತಿರುವ ಮಿಥಿಲೆಯಲ್ಲಿ ನನ್ನದೇನೂ ಉರಿಯುತ್ತಿಲ್ಲ!”
ನಮ್ಮ ರಾಜಕಾರಣಿಗಳೂ ಜನಕನಂಥವರೇ! ಉರಿಯುತ್ತಿರುವ ಭಾರತದಲ್ಲಿ ಇವರದೇನೂ ಉರಿಯುವದಿಲ್ಲ!
ಇಂತಹ ರಾಜಕಾರಣಿಗಳನ್ನು ಪ್ರಭುಗಳನ್ನಾಗಿ ಪಡೆದ ಪ್ರಜೆಗಳ ಭಾಗ್ಯವೇ ಭಾಗ್ಯ.

“ಆತಂಕ ಬೇಡ, ಪರಿಸ್ಥಿತಿ ಹತೋಟಿಯಲ್ಲಿ ಇದೆ”!
Happy New Year!