Thursday, April 23, 2015

ಮತ್ತಿಷ್ಟು ಪದಗಳು


‘ಅಂತರ್ರಾಷ್ಟ್ರೀಯ’ ಎನ್ನುವ ಪದವು ಸರಿಯೊ ಅಥವಾ ‘ಅಂತರರಾಷ್ಟ್ರೀಯ’ ಎನ್ನುವ ಪದವು ಸರಿಯೋ ಎನ್ನುವ ಚರ್ಚೆಯು ಆಗಾಗ ನಡೆಯುತ್ತಿರುತ್ತದೆ. ಈ ಪದಗಳ ವ್ಯತ್ಯಾಸವನ್ನು ಅರಿತುಕೊಳ್ಳಲು, ‘ಅಂತಃ’ ಮತ್ತು ‘ಅಂತರ’ ಈ ಪದಗಳ ವ್ಯತ್ಯಾಸವನ್ನು ಪರಿಶೀಲಿಸಬೇಕು.

‘ಅಂತಃ’ ಪದದ ಅರ್ಥವು ‘ಒಳಗಿನ’ ಎಂದಾಗುತ್ತದೆ. ಉದಾಹರಣೆಗೆ ಅಂತಃಪುರ; ರಾಜವನಿತೆಯರಿಗಾಗಿ ಅರಮನೆಯ ಒಳಭಾಗದಲ್ಲಿ ಕಟ್ಟಲಾಗಿರುವ ಭಾಗವೇ ಅಂತಃಪುರ. ಇದರಂತೆ ಅಂತಃಕರಣ, ಅಂತಃಶತ್ರು ಇತ್ಯಾದಿ. Inland letter ಎನ್ನುವ ಆಂಗ್ಲ ಪದದ ಅರ್ಥವು ‘ಒಳನಾಡ ಅಂಚೆ’. ಇದರ ಸಂಸ್ಕೃತ ಅಥವಾ ಹಿಂದಿ ಅನುವಾದವು ‘ಅಂತಃ+ದೇಶೀಯ = ಅಂತರ್ದೇಶೀಯ’ ಎಂದಾಗುತ್ತದೆ. ಅದರಂತೆ ರಾಷ್ಟ್ರದ ಆಂತರಿಕ ಸಂದರ್ಭವನ್ನು ಸೂಚಿಸಲು, ‘ಅಂತಃ + ರಾಷ್ಟ್ರೀಯ = ಅಂತರ್ರಾಷ್ಟ್ರೀಯ’ ಎನ್ನುವ ಪದವನ್ನು ಬಳಸಬಹುದು. ಉದಾಹರಣೆಗೆ, ರಾಷ್ಟ್ರದ ಒಳಗಿನ ತುರ್ತು ಪರಿಸ್ಥಿತಿಗೆ ‘ಅಂತರ್ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಎನ್ನಬಹುದು.

ಇನ್ನು ‘ಅಂತರ’ ಎನ್ನುವ ಪದವನ್ನು ಬಳಸಿದ ಸಂದರ್ಭಗಳನ್ನು ನೋಡಿರಿ:
ದೇಶಾಂತರಮ್ = ಅನ್ಯೋ ದೇಶಃ = ಬೇರೊಂದು ದೇಶ
ಕಾಲಾಂತರಮ್ = ಅನ್ಯೋ ಕಾಲಮ್ = ಬೇರೊಂದು ಕಾಲ

ಒಟ್ಟಿನಲ್ಲಿ,  ಬಾಹ್ಯ ಸಂಗತಿಯನ್ನು ಸೂಚಿಸಲು ‘ಅಂತರ’ ಪದವನ್ನು ಬಳಸುತ್ತಾರೆ ಎಂದು ಅರ್ಥೈಸಿಕೊಳ್ಳಬಹುದು. ಆದುದರಿಂದ ‘ವಿಭಿನ್ನ ರಾಷ್ಟ್ರಗಳ’ ನಡುವಿನ ಸಮಸ್ಯೆಯನ್ನು ಸೂಚಿಸಲು ‘ಅಂತರರಾಷ್ಟ್ರೀಯ ಸಮಸ್ಯೆ’ ಎಂದು  ಹೇಳುವುದು ಉಚಿತವಾಗಿದೆ. ಭಿನ್ನ ಜಾತಿಯ ಗಂಡು, ಹೆಣ್ಣುಗಳ ವಿವಾಹವನ್ನು ಅಂತರಜಾತೀಯ ಎಂದು ಹೇಳಬೇಕೇ ಹೊರತು, ಅಂತರ್ಜಾತೀಯ ಎಂದಲ್ಲ! (ಅಂತರ್ಜಾತೀಯ ಪದದ ಅರ್ಥವು ‘ಜಾತಿಯ ಒಳಗಿನ’ ಎಂದಾಗುತ್ತದೆ.) ಇದೇ ರೀತಿಯಲ್ಲಿ internet ಪದದ ಅನುವಾದವು  ‘ಅಂತರಜಾಲ’ ಎಂದು ಆಗುತ್ತದಯೆ ಹೊರತು ‘ಅಂತರ್‍ಜಾಲ’ ಎಂದಲ್ಲ. ‘ಅಂತರ್ಜಾಲ’ಕ್ಕೆ intranet ಎನ್ನುವ ಅರ್ಥ ಬರುತ್ತದೆ.
(ಖ್ಯಾತ ಸಾಹಿತಿ ಶ್ರೀರಂಗರು ‘ಗಂಡಾಂತರ’ ಪದವನ್ನು ‘ಅನ್ಯೋ ಗಂಡಃ (ಬೇರೊಬ್ಬರ ಗಂಡ) = ಗಂಡಾಂತರಮ್’ ಎಂದು ತಮಾಶೆ ಮಾಡುತ್ತಿದ್ದರು.)

ಆಧುನೀಕರಣ ಹಾಗು ಅಧುನಿಕೀಕರಣ ಪದಗಳ ನಡುವೆ ಇದೇ ತರಹದ ಸಂದಿಗ್ಧತೆಯನ್ನು ನೋಡುತ್ತೇವೆ. ‘ಆಧುನಿಕ’ ಪದವು ‘ಅಧುನಾ’ ಎನ್ನುವ ಸಂಸ್ಕೃತ ಪದದ ಮೂಲಕ ಬಂದಿದೆ. ಅಧುನಾ ಎಂದರೆ ಈಗ, ಈ ಕ್ಷಣದಲ್ಲಿ, ಸದ್ಯದಲ್ಲಿ ಇತ್ಯಾದಿ ಅರ್ಥಗಳನ್ನು ಕೊಡುತ್ತದೆ. ಹೀಗಾಗಿ ‘ಆಧುನಿಕ’ ಪದದ ಅರ್ಥವು ‘up to date person’, ಆದುದರಿಂದ ‘modern person’ ಎಂದಾಗುತ್ತದೆ. ಹೀಗಾಗಿ ‘updating ಅಥವಾ modernization’ ಎನ್ನುವ ಪದಗಳಿಗೆ ‘ಆಧುನೀಕರಣ’ ಎನ್ನುವುದೇ ಸಮಂಜಸವಾಗಿದೆ.

‘ಶಾಕ’ ಅಂದರೆ ಕಾಯಿಪಲ್ಲೆ. ‘ಶಾಕಾಹಾರ’ ಎಂದರೆ ‘ಸಸ್ಯಮೂಲ ಆಹಾರ = ಸಸ್ಯಾಹಾರ’. ಆದರೆ ಅನೇಕರು ಇದನ್ನು ‘ಶಾಖಾಹಾರ’ ಎಂದು ತಪ್ಪಾಗಿ ಬರೆಯುತ್ತಾರೆ. ‘ಶಾಖ’ ಎಂದರೆ ಬಿಸಿಯಾದದ್ದು. ಆದುದರಿಂದ ‘ಶಾಖಾಹಾರ’ ಇದರ ಅರ್ಥವು ‘ಬಿಸಿಯಾದ ಅಡುಗೆ’ ಎಂದಾಗುತ್ತದೆ!

ಬಿಸಿಲು ಹೆಚ್ಚಾದಾಗ ನಮಗೆ ‘ಶಕೆ’ಯಾಗುವುದಲ್ಲವೆ? ಕನ್ನಡದ ‘ಶಕೆ’ ಎನ್ನುವ ಪದವು ಸಂಸ್ಕೃತದ ‘ಶಾಖ’ ಪದದ ತದ್ಭವವಾಗಿದೆ. ವೈಶಾಖ ಮಾಸದಲ್ಲಿ ಶಕೆ ಹೆಚ್ಚು. ನಮ್ಮ ‘ಬೇಸಿಗೆ’ ಪದವು ‘ವೈಶಾಖ’ ಪದದ ತದ್ಭವವಾಗಿದೆ. ಉತ್ತರ ಭಾರತೀಯರಿಗೆ ಸೂರ್ಯನು ವಿಶಾಖಾ ನಕ್ಷತ್ರದ ಸನಿಹದಲ್ಲಿದ್ದಾಗ  ವೈಶಾಖ ಮಾಸವು ಪ್ರಾರಂಭವಾಗುತ್ತದೆ. (ಉತ್ತರ ಭಾರತದಲ್ಲಿ ಮಾಸಗಳು ಕೃಷ್ಣ ಪ್ರತಿಪದೆಯಿಂದ ಪ್ರಾರಂಭವಾಗುತ್ತವೆ; ನಮ್ಮಲ್ಲಿ ಶುಕ್ಲ ಪ್ರತಿಪದೆಯಿಂದ ಪ್ರಾರಂಭವಾಗುತ್ತವೆ.) ವಿಶಾಖಾ ಎಂದರೆ ವಿಶೇಷವಾದ ಶಾಖವುಳ್ಳದ್ದು. ಜ್ಯೋತಿಷ್ಯ ಶಾಸ್ತ್ರದ ಮೇರೆಗೆ, ಅಗ್ನಿಯು ವಿಶಾಖಾ ನಕ್ಷತ್ರದ ಅಧಿಪತಿಯಾಗಿದ್ದಾನೆ!

Saturday, April 11, 2015

ಕನ್ನಡ-ಸಂಸ್ಕೃತ



ಕನ್ನಡಿಗರು ನಿತ್ಯಜೀವನದಲ್ಲಿ ಬಳಸುವ ಪದಗಳನ್ನು ಪರೀಕ್ಷಿಸಿದಾಗ, ಇವರು ನಿಧಾನ ಸ್ವಭಾವದವರು ಅಂತ ತೋರುತ್ತದೆ. ಏಕೆಂದರೆ ಕನ್ನಡ ಭಾಷೆಯಲ್ಲಿ fast ಅನ್ನುವ ಪದಕ್ಕೆ ಸಮಾನವಾದ ಕನ್ನಡ ಮೂಲದ ಪದಗಳು ಇದ್ದಂತೆ ಕಾಣುವದಿಲ್ಲ. ‘ಬೇಗ’ ಎನ್ನುವ ಪದವು ಸಂಸ್ಕೃತದ ‘ವೇಗ’ ಪದದ ತದ್ಭವವಾಗಿದೆ. ‘ಲಗು’ ಎನ್ನುವ ಪದವು ‘ಲಘು’ ಎನ್ನುವ ಪದದ ರೂಪಾಂತರವಾಗಿದೆ. ‘ಜೋರ’ ಮತ್ತು ‘ದೌಡ’ ಎನ್ನುವ ಪದಗಳು ಹಿಂದೀ ಪದಗಳಾಗಿವೆ. ಆದುದರಿಂದ ಕನ್ನಡಿಗರು ಸ್ವಭಾವತಃ fast ಅಲ್ಲ! ಇನ್ನು  slow  ಎನ್ನುವ ಪದಕ್ಕೆ ಸಮಾನವಾದ ‘ಮೆಲ್ಲಗೆ’  ಎನ್ನುವ ಪದವು ಕನ್ನಡದಲ್ಲಿ ಸಿಗುತ್ತದೆ. ಆದುದರಿಂದ ಕನ್ನಡಿಗರನ್ನು ನಿಧಾನಸ್ಥರೆಂದು ಕರೆಯುವುದೇ ಸರಿ.ಈಗ ಈ ವಿನೋದವನ್ನು ಬದಿಗಿರಿಸಿ ಪರಾಮಱ್ಷಿಸಿದಾಗ ಹೊಳೆಯುವದೇನೆಂದರೆ ದೈನಂದಿನ ಕನ್ನಡಕ್ಕೆ ಸಂಸ್ಕೃತದಿಂದ ಅನೇಕ ಪದಗಳ ಆಯಾತವಾಗಿದೆ. ವಾಸ್ತವದಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ಬಂದಷ್ಟೇ ಪದಗಳು, ಕನ್ನಡದಿಂದ ಸಂಸ್ಕೃತಕ್ಕೂ ಹೋಗಿವೆ. ಇದು ಕನ್ನಡ ಹಾಗು ಸಂಸ್ಕೃತದ ಅನ್ಯೋನ್ಯ ಸಂಬಂಧವನ್ನು ತೋರಿಸುತ್ತದೆ. (ಈ ಮಾತು ಇತರ ಭಾರತೀಯ ಭಾಷೆಗಳಿಗೂ ಅನ್ವಯಿಸುತ್ತದೆ, ಉಱ್ದು ಹಾಗು ಇಂಗ್ಲಿಶ್ ಹೊರತುಪಡಿಸಿ.)

‘ಸಂಸ್ಕೃತಮ್’ ಎನ್ನುವ ಪದದ ಅರ್ಥ: refined, processed, ಸಂಸ್ಕರಿಸಲ್ಪಟ್ಟದ್ದು ಇತ್ಯಾದಿ. ಜನಸಾಮಾನ್ಯರು (ಅಂದರೆ ಆಱ್ಯ ಜನಸಾಮಾನ್ಯರು) ತಮ್ಮ ದೈನಂದಿನ ಮಾತುಕತೆಯಲ್ಲಿ ಇಂತಹ ವ್ಯಾಕರಣಬದ್ಧ‘ಸಂಸ್ಕೃತ’ವನ್ನು ಬಳಸುತ್ತಿದ್ದಿಲ್ಲ. (ಯಾರು ಬಳಸುತ್ತಾರೆ, ಹೇಳಿ!) ಆದುದರಿಂದ ಆಱ್ಯಜನಾಂಗದ ಆಡುಭಾಷೆಗೆ ‘ಆಱ್ಯಭಾಷೆ’ ಎಂದಷ್ಟೇ ಕರೆಯುವುದು ಸಮಂಜಸವಾಗಿದೆ. ಆಱ್ಯರ ಆಡುಭಾಷೆಯನ್ನು ವ್ಯಾಕರಣದ ಚೌಕಟ್ಟಿಗೆ ಒಳಪಡಿಸಿ, ಸಂಸ್ಕರಿಸಿ ‘ಸಂಸ್ಕೃತ’ವನ್ನಾಗಿ ಪರಿವರ್ತಿಸಿದವರು ವೈಯಾಕರಣಿಗಳು. ಆಱ್ಯರು ಉತ್ತರ ಭಾರತವನ್ನು ಪ್ರವೇಶಿಸಿದಾಗ ಅಲ್ಲಿ ವಾಸವಾಗಿದ್ದ ಮೂಲನಿವಾಸಿಗಳ ಜೊತೆಗೆ --(ಉದಾ: ಕನ್ನಡಿಗರು, ಕೋಲರು, ಗೊಂಡರು, ಮುಂಡರು ಇತ್ಯಾದಿ)-- ಮುಖ್ಯತಃ ಕನ್ನಡಿಗರ ಜೊತೆಗೆ ಆಱ್ಯರ ಮುಖಾಮುಖಿಯಾಯಿತು. ಇವರೀಱ್ವರ ಆಡುನುಡಿಗಳು ಬೆರೆತುಕೊಂಡು, ವಿವಿಧ ಬಗೆಯ ಪ್ರಾಕೃತ ಭಾಷೆಗಳು ಹುಟ್ಟಿಕೊಂಡವು, ಉದಾಹರಣೆಗೆ ಶೂರಸೇನೀ, ಮಾಗಧೀ, ಮಹಾರಾಷ್ಟ್ರೀ ಇತ್ಯಾದಿ. ಪ್ರಾಕೃತ ಎಂದರೆ ಪ್ರಕೃತಿಸಹಜವಾದದ್ದು; ಸಂಸ್ಕೃತಮ್ ಎಂದರೆ ಸಂಸ್ಕರಿಸಲ್ಪಟ್ಟದ್ದು.

ಈ ಪ್ರಾಕೃತ ಭಾಷೆಗಳಿಗೆ ಕನ್ನಡದ ಕೊಡುಗೆ ಗಣನೀಯವಾಗಿದೆ. ಉದಾಹರಣೆಗೆ ಹಿಂದೀ ಭಾಷೆಯ ‘ಪೌಧಾ’ ಎನ್ನುವ ಪದವು ಕನ್ನಡದ ‘ಪೊದೆ’ ಎನ್ನುವ ಪದದಿಂದ ಬಂದಿದೆ. ಮರಾಠಿಯ ‘ಚಾಂಗಲಾ’ ಪದವು ಕನ್ನಡದ ‘ಚಾಂಗು’ ಪದದಿಂದ ಬಂದಿದೆ.  ಉತ್ತರ ಭಾರತದಲ್ಲಿಇರುವ ಅನೇಕ ಸ್ಥಳನಾಮಗಳು ಕನ್ನಡ ಹೆಸರುಗಳೇ ಆಗಿವೆ. ಮರಾಠೀ ಹಾಗು ಗುಜರಾತಿ ಭಾಷೆಗಳು ಕನ್ನಡ ಭಾಷೆಯ ತಳಪಾಯದ ಮೇಲೆ ನಿಂತಿವೆ ಎನ್ನುವುದನ್ನು ಭಾಷಾತಜ್ಞರು ತೋರಿಸಿದ್ದಾರೆ.

ಆಱ್ಯಭಾಷೆಯನ್ನು ಸಂಸ್ಕರಿಸಿದ ವೈಯಾಕರಣಿಗಳಿಗೆ ಭಾರತೀಯರೆಲ್ಲರೂ ಕೃತಜ್ಞರಾಗಿರಬೇಕು. ಸಂಸ್ಕೃತ ಭಾಷೆಯ ವ್ಯಾಕರಣದಂತಹ ಸುವ್ಯವಸ್ಥಿತ ವ್ಯಾಕರಣವನ್ನು ನಾವು ಜಗತ್ತಿನ ಯಾವ ಭಾಷೆಯಲ್ಲಿಯೂ ಕಾಣುವದಿಲ್ಲ. ಈ ವೈಯಾಕರಣಿಗಳು ಧ್ವನಿಯ ಮೂಲವನ್ನು ಆಧರಿಸಿ, ಈ ಧ್ವನಿಗಳನ್ನು ‘ತಾಲವ್ಯ, ಕಂಠವ್ಯ, ದಂತವ್ಯ,ಓಷ್ಠವ್ಯ,ಮೂರ್ಧನ್ಯ’ ಎಂದು ವಱ್ಗೀಕರಿಸಿದರು. ಒಂದು ಮೂಲಪದದಿಂದ ಅನೇಕ ಪದಗಳನ್ನು ಸೃಷ್ಟಿಸುವ ಬಗೆಗಳನ್ನು ತೋರಿಸಿದರು. ಈ ವ್ಯಾಕರಣವನ್ನೇ ಎಲ್ಲ ಭಾರತೀಯ ಭಾಷೆಗಳು ಹೆಚ್ಚುಕಡಿಮೆ ಅನುಸರಿಸುತ್ತಿವೆ (ಉರ್ದು ಹಾಗು ಇಂಗ್ಲಿಶ್ ಹೊರತುಪಡಿಸಿ!) ಹೀಗಾಗಿ ಈ ಎಲ್ಲ ಭಾರತೀಯ ಭಾಷೆಗಳಲ್ಲಿ ಒಂದು ಸಾಮ್ಯತೆ ಇದೆ. ಕನ್ನಡದ ಕೆಲವು ವಿತಂಡವಾದಿಗಳು ‘ಕನ್ನಡದ ಜಾಯಮಾನವೇ ಬೇರೆ; ಆದುದರಿಂದ ಕನ್ನಡದ ವ್ಯಾಕರಣವೇ ಬೇರೆ’ ಎಂದು ವಾದಿಸುತ್ತಾರೆ. ಇವರ ವಾದದ ಒಂದು ಪ್ರಮುಖ ಗುರಿ ಎಂದರೆ ಅಲ್ಪಪ್ರಾಣ ಹಾಗು ಮಹಾಪ್ರಾಣಗಳು! ಮಹಾಪ್ರಾಣವನ್ನು ಉಚ್ಚರಿಸಲಾರದಷ್ಟು ಮಂದಮತಿಗಳೇ ಕನ್ನಡಿಗರು? ಇಂಗ್ಲೀಶಿನ fast ಪದವನ್ನು ಇವರೇನು past ಎಂದು ಉಚ್ಚರಿಸುತ್ತಾರೆಯೆ? ಅನೇಕ ಕನ್ನಡಿಗರು ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ; ಅಲ್ಲಿಯೇ ನೆಲಸಿಯೂ ಇದ್ದಾರೆ. ಇವರೆಲ್ಲ ವಿದೇಶಗಳಲ್ಲಿ ಮಹಾಪ್ರಾಣ ಪದಗಳನ್ನು ಸರಿಯಾಗಿ ಉಚ್ಚರಿಸಬಲ್ಲರು; ಇಲ್ಲಿ ಬಂದ ತಕ್ಷಣ ಅಲ್ಪಪ್ರಾಣಿಗಳಾಗಿ ಬದಲಾಗುತ್ತಾರೆಯೆ? ಇದನ್ನು ಗಮನಿಸಿದಾಗ, ಈ ‘ಜಾಯಮಾನ ಪ್ರಚಾರ’ವು  ಕೆಲವು ವಿಶಿಷ್ಟ ಹಿತಾಸಕ್ತಿಗಳ ದುರುದ್ದೇಶಪೂರ್ಣ ತಿಪ್ಪರಲಾಗ ಎಂದು ಭಾಸವಾಗುತ್ತದೆ. (ಲಾಗ ಎನ್ನುವ ಕನ್ನಡ ಪದವು ಲಾಘವ ಎನ್ನುವ ಸಂಸ್ಕೃತ ಪದದ ತದ್ಭವವಾಗಿದೆ.) ಅದೂ ಅಲ್ಲದೆ, ‘ಜಾಯಮಾನಕ್ಕಿಂತ ಕಾಲಮಾನ ಹೆಚ್ಚಿನದು’  ಎನ್ನುವುದನ್ನು ನಾವು ಅರಿಯಬೇಕು. ಸಾವಿರಾರು ವಱ್ಷಗಳ ಹಿಂದೆ, ಕನ್ನಡಿಗರು ದಂಡಕಾರಣ್ಯದಲ್ಲಿ ಮರಗಳ ಮೇಲೆ ಜಿಗಿದಾಡುತ್ತಿದ್ದರು, ಶಿಲಾಯುಧಗಳನ್ನು ಬಳಸುತ್ತಿದ್ದರು ಹಾಗು ತೊಗಟೆಯನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಿದ್ದರು. ಇದು ಕನ್ನಡಿಗರ ಜಾಯಮಾನವೆಂದು ಈಗಲೂ ಸಹ ಅವೇ ಪದ್ಧತಿಗಳನ್ನು ನಾವು ಅನುಸರಿಸಬಹುದೆ? ಈ ತಿಳಿಗೇಡಿತನಕ್ಕೆ ನಾವು ಶರಣಾದರೆ, ಕನ್ನಡ ಭಾಷೆಯು ಮಲೆತ ಮಡುವಾಗುತ್ತದೆ. ಕನ್ನಡಿಗರು ಆ ಮಲೆತ ಕೆಸರಿನಲ್ಲಿ ಕಿರಚುವ ಕಪ್ಪೆಗಳಾಗುತ್ತಾರೆ!

ಎಲ್ಲ ಭಾರತೀಯ ಲಿಪಿಗಳಿಗೆ ಬ್ರಾಹ್ಮೀ ಲಿಪಿಯೇ ಮೂಲವಾಗಿದೆ. ಆದರೆ ಈ ಎಲ್ಲ ಸೋದರ ಲಿಪಿಗಳಲ್ಲಿ ಕನ್ನಡ ಲಿಪಿಯೇ ಶ್ರೇಷ್ಠವಾಗಿದೆ. ಕನ್ನಡ ಲಿಪಿಯ ಶ್ರೇಷ್ಠತೆಯನ್ನು ಅರಿಯಲು ಭಾರತದ ಇತರ ಭಾಷೆಗಳ ಲಿಪಿಗಳ ಜೊತೆಗೆ ಕನ್ನಡ ಲಿಪಿಯನ್ನು ಹೋಲಿಸಿ ಪರೀಕ್ಷಿಸಬೇಕು. ಉದಾಹರಣೆಗೆ ಬಂಗಾಲೀ ಲಿಪಿಯಲ್ಲಿ ‘ವ್’ ಎನ್ನುವ ವ್ಯಂಜನವಿಲ್ಲ. ಹೀಗಾಗಿ ಬಂಗಾಲಿಗಳು ‘ವಂಗಹಾಳ’ವನ್ನು ‘ಬೊಂಗ್ಲಾ’ ಎಂದು ಕರೆಯುತ್ತಾರೆ. ಬಂಗಾಲಿಯಲ್ಲಿ ತ್ ಹಾಗು ದ್ ವ್ಯಂಜನಗಳಿದ್ದಾಗೂ ಸಹ ‘ತುರಂತ’ ಪದಕ್ಕೆ ಇವರು ‘ದುರಂತೊ’ ಎಂದು ಯಾಕೆ ಅನ್ನುತ್ತಾರೊ, ದೇವರಿಗೇ ಗೊತ್ತು. ಹೀಗಾಗಿ ಮೊಮೊತಾ ಬಂದೋಪಾಧ್ಯಾಯರು (=ಮಮತಾ ಬ್ಯಾನಱ್ಜೀಯವರು) ಕೇಂದ್ರದಲ್ಲಿ ರೇಲವೆ ಮಂತ್ರಿಗಳಾಗಿದ್ದಾಗ, ‘ದಿಲ್ಲಿ-ಕೋಲಕತ್ತಾ ಎಕ್ಸಪ್ರೆಸ್ಸಿ’ಗೆ ‘ತುರಂತ ಎಕ್ಸಪ್ರೆಸ್’ ಎನ್ನುವದರ ಬದಲಾಗಿ ‘ದುರಂತೊ ಎಕ್ಸಪ್ರೆಸ್’ ಎಂದು ನಾಮಕರಣವನ್ನು ಮಾಡಿದರು. ಎಂತಹ ದುರಂತ, ಬಂಧುಗಳೆ!  

ಬ್ರಾಹ್ಮೀ ಲಿಪಿಯಿಂದ ಹುಟ್ಟಿದ ದೇವನಾಗರೀ, ಬಂಗಾಲೀ, ಗುಜರಾತೀ, ಮರಾಠೀ ಇತ್ಯಾದಿ ಲಿಪಿಗಳಲ್ಲಿ ‘ಏ,ಓ’ ಎನ್ನುವ ದೀಱ್ಘ ಸ್ವರಗಳಿಲ್ಲ. ಹೀಗಾಗಿ ಈ ಭಾಷೆಗಳಲ್ಲಿ red ಹಾಗೂ raid ಎರಡನ್ನೂ ‘ರೇಡ್’ ಎಂದೇ ಉಚ್ಚರಿಸುತ್ತಾರೆ. ಕನ್ನಡದ ‘ಕೊಡು’ ಹಾಗು ‘ಕೋಡು’ ಈ ಭಾಷೆಗಳಲ್ಲಿ ‘ಕೋಡು’ ಮಾತ್ರ ಆಗುತ್ತವೆ. ಈ ಧ್ವನಿಸಂಕೇತಗಳ ಕೊರತೆಯಿಂದಾಗಿ, ಈ ಭಾಷೆಗಳಲ್ಲಿ ಪದಸಂಪತ್ತು ಕಡಿಮೆಯಾಗುವುದು ಸಹಜ. ತಮಿಳು ಭಾಷೆಯಂತೂ ಆಂಡವನಿಗೇ ಪ್ರೀತಿ. ಧ್ವನಿಸಂಕೇತಗಳ ಕೊರತೆ ಹಾಗು ವಿಚಿತ್ರ ಭಾಷಾರೂಢಿಯಿಂದಾಗಿ ‘ಗೋಕಱ್ಣದ ಗಣಪತಿ’ಯು ತಮಿಳಿನಲ್ಲಿ ‘ಕೋಗಱ್ಣದ ಕಣಪದಿ’ಯಾಗುತ್ತಾನೆ; ‘ಗಿಟಾರ್’ ಪದವು ‘ಕಿಟಾರ್’ ಎಂದು ಕಿರಿಚಿಕೊಳ್ಳುತ್ತದೆ. ‘ಗಾಂಧೀ’ಯವರು ‘ಕಾಂದೀ’ ಆಗುತ್ತಾರೆ; ‘ಕಾಂತೀ’ ಸಹ ‘ಕಾಂದೀ’ ಆಗುತ್ತಾಳೆ. (ಇದು ತಮಿಳಿನ ಜಾಯಮಾನ?!) ಬಂಗಾಲಿ ಹಾಗು ತಮಿಳು ಲಿಪಿಯಲ್ಲಿ ಕೆಲವು ಕಾಗುಣಿತಗಳು ಉಚ್ಚಾರವನ್ನು ಅನುಸರಿಸುವದಿಲ್ಲ. ಉದಾಹರಣೆಗೆ ‘ಕೈ’ ಪದವನ್ನು ತಮಿಳಿನಲ್ಲಿ ‘ಕ್‍ಅಇ’ ಎಂದು ಸಂಯೋಜಿಸದೆ, ‘ಅಕ್‍ಇ’ ಎಂದು ಲೇಖಿಸುತ್ತಾರೆ. ಬಂಗಾಲಿಯಲ್ಲಂತೂ ಈ ಸ್ವರಸಂಕೇತಗಳನ್ನು ಹಿಂದೆ ಅಥವಾ ಮುಂದೆ ಎಲ್ಲಾದರೂ ಬರೆಯಬಹುದಂತೆ! ಇದೆಲ್ಲವನ್ನು ಗಮನಿಸಿದಾಗ ನಮ್ಮ ಕನ್ನಡ ಲಿಪಿಯು ಇವೆಲ್ಲ ಲಿಪಿಗಳಿಗಿಂತ ಎಷ್ಟೋ ಪಾಲು ಉತ್ತಮವಾಗಿದೆ ಹಾಗು ಸುಸಂಬದ್ಧ ಲಿಪಿಯಾಗಿದೆ ಎನ್ನುವದರ ಅರಿವಾಗುತ್ತದೆ; ಕನ್ನಡ ಲಿಪಿಯ ಶ್ರೀಮಂತಿಕೆಯ ಬಗೆಗೆ ಹೆಮ್ಮೆಯಾಗುತ್ತದೆ. ಆದರೆ ಕೆಲವರು ಕುಲಕುಠಾರರು ಕನ್ನಡದ ಬುಡಕ್ಕೇ ಕೊಡಲಿ ಏಟು ಹಾಕಲು ಬಯಸುತ್ತಿರುವುದು ವಿಷಾದದ ಸಂಗತಿಯಾಗಿದೆ.

ಕನ್ನಡಿಗರನ್ನು ತಪ್ಪು ದಾರಿಗೆ ಎಳೆಯುವ ದುರುದ್ದೇಶದಿಂದಲೇ ಒಬ್ಬ ಭಟ್ಟರು ಭಾಷೆಯಲ್ಲಿ ರಾಜಕೀಯವನ್ನು ಮಾಡುತ್ತಿದ್ದಾರೆ. ಕನ್ನಡದ ಬರಹವು ಹಿಂದುಳಿದವರನ್ನು ಹಿಂದೆ ಉಳಿಸುವ ಸಲುವಾಗಿಯೇ ಸಂಕೀಱ್ಣಗೊಳಿಸಲ್ಪಟ್ಟಿದೆ ಎನ್ನುವ ವಿಚಿತ್ರ ತಱ್ಕವನ್ನು ಇವರು ಅಮಾಯಕರ ಕಿವಿಯಲ್ಲಿ ಊದುತ್ತಿದ್ದಾರೆ. ಈ ತಱ್ಕವನ್ನು ವಿಸ್ತರಿಸುತ್ತ, ಬಾಯಿಲೆಕ್ಕದ ಗಣಿತವು ಸಾಕಾಗುತ್ತಿದ್ದಾಗಲೂ ಸಹ, ಹಿಂದುಳಿದವರನ್ನು ಹಿಂದೆ ಎಳೆಯುವ ಉದ್ದೇಶದಿಂದಲೇ ಬೀಜಗಣಿತ, ಭೂಮಿತಿ ಮೊದಲಾದ ಸಂಕೀಱ್ಣ ಗಣಿತವನ್ನು ಹೇರಲಾಯಿತು ಎಂದು ಇವರು ಹೇಳಿಯಾರು! ಸಂಕೀಱ್ಣ ಗಣಿತ ಹಾಗು ಸಂಕೀಱ್ಣ ವಿಜ್ಞಾನದಲ್ಲಿ ಮೇಲ್ಮೆಯನ್ನು ಸಾಧಿಸಿದ ಅನೇಕ ಭಾರತೀಯರು ತಥಾಕಥಿತ ಹಿಂದುಳಿದ ವಱ್ಗಗಳಿಂದ ಬಂದವರು ಎನ್ನುವುದನ್ನು ನೋಡಿದಾಗ ಭಟ್ಟರ ಬುಡುಬುಡಿಕೆ ಅಱ್ಥವಾಗದಿರದು. ಅಷ್ಟೇ ಏಕೆ, ರಾಮಾಯಣ ಮೊದಲಾದ ಮಹಾಕಾವ್ಯಗಳನ್ನು ರಚಿಸಿದವರು, ಅನೇಕ ಉಪನಿಷತ್ತುಗಳನ್ನು ರಚಿಸಿದವರು ತಥಾಕಥಿತ ಹಿಂದುಳಿದ ವಱ್ಗದವರೇ ಆಗಿದ್ದಾರೆ.


ಲಿಪಿಯ ಬಗೆಗೆ ನಾನು ಮಾಡಿದ  ಟೀಕೆಯನ್ನು ದಯವಿಟ್ಟು ಈ ಭಾಷೆಗಳ ಸಾಹಿತ್ಯಕ್ಕೆ ಅನ್ವಯಿಸಬಾರದೆಂದು ನಾನು ನಮ್ರತೆಯಿಂದ ಕೋರುತ್ತೇನೆ. ತಮಿಳು,ತೆಲಗು, ಬಂಗಾಲಿ ಹಾಗು ಮರಾಠಿ ಭಾಷೆಯ ಸಾಹಿತ್ಯವನ್ನು ಕನ್ನಡ ಅನುವಾದದಲ್ಲಿ ಓದಿದ ನಾನು, ಆ ಭಾಷೆಗಳ ಸಾಹಿತ್ಯವು ಶ್ರೇಷ್ಠವಾಗಿದೆ ಎಂದು ಅರಿತಿದ್ದೇನೆ. ಬೊಂಗ್ಲಾ ಭಾಷೆಯ ಲಿಪಿಯಲ್ಲಿ ಎಷ್ಟೇ ಕೊರತೆಗಳಿದ್ದರೂ ಸಹ, ಭಾರತಕ್ಕೆ ‘ನೋಬೆಲ್ ಬಹುಮಾನ’ವನ್ನು ಗಳಿಸಿಕೊಟ್ಟದ್ದು ಇದೇ ಭಾಷೆ. ಲಿಪಿಯ ಕೊರತೆಯು ಸಾಹಿತ್ಯದ ಕೊರತೆಯಲ್ಲ.

ಸಂಸ್ಕೃತ ಜ್ಞಾನವಿಲ್ಲದ ನಮ್ಮ ಪತ್ರಿಕಾಕಱ್ತರು ಕನ್ನಡದಲ್ಲಿ ಎಷ್ಟೆಲ್ಲ ತಪ್ಪುಗಳನ್ನು ಮಾಡುತ್ತಾರೆ ಎನ್ನುವುದು ಓದುಗರೆಲ್ಲರಿಗೆ ಬಂದಂತಹ ಅನುಭವವಾಗಿದೆ. ಒಂದು ಉದಾಹರಣೆಯನ್ನು ನೋಡೋಣ:
ದಿನಾಂಕ ೨-೧೧-೨೦೧೪ರಂದು ಪ್ರಕಟವಾದ ‘ಸಂಯುಕ್ತ ಕಱ್ನಾಟಕ’ ಪತ್ರಿಕೆಯಲ್ಲಿ ಲಿಖಿತವಾದ ಐದು ಕಾ*ಲಮ್ಮುಗಳ ಶೀಱ್ಷಿಕೆಯೊಂದು ಹೀಗಿದೆ:
‘ಗಡಿ ಸಮಸ್ಯೆ, ಜನಪ್ರತಿನಿಧಿಗಳಲ್ಲಿ ಇಚ್ಚಾಸಕ್ತಿ ಕೊರತೆ’
ಈ ಶೀಱ್ಷಿಕೆ ಹೀಗಿರಬೇಕಿತ್ತು:
‘ಗಡಿ ಸಮಸ್ಯೆ: ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿಯ ಕೊರತೆ’
ಬಹುಶಃ ‘ಸಂಯುಕ್ತ ಕಱ್ನಾಟಕ’ದ ಪತ್ರಿಕಾವರದಿಗಾರರು ಅನಕ್ಷರಸ್ಥರಿರಬೇಕೆಂದು ನನಗೆ ಭಾಸವಾಗುತ್ತದೆ. ಇನ್ನು ಸಂಪಾದಕರು? ಇಂತಹ ವರದಿಯನ್ನು ತಿದ್ದಲು ತಿಳಿಯದ ಸಂಪಾದಕರನ್ನು ಅಕ್ಷರಜ್ಞಾನಿಗಳು ಎಂದು ಕರೆಯಬಹುದೆ? ಇಂತಹ ಪರಿಸ್ಥಿತಿಗೆ ಮೂಲ ಕಾರಣವೆಂದರೆ ನಮ್ಮ ಶಾಲೆಗಳಲ್ಲಿ ಸಂಸ್ಕೃತ ಬೋಧನೆಯನ್ನು ಅಲಕ್ಷಿಸುತ್ತಿರುವುದು.

ಸಂಸ್ಕೃತ ಹಾಗು ಭಾರತೀಯ ಭಾಷೆಗಳಿಗೆ (-ಉರ್ದು ಹಾಗು ಇಂಗ್ಲಿಶ್ ಹೊರತುಪಡಿಸಿ-) ಅನ್ಯೋನ್ಯ ಸಂಬಂಧವಿದೆ. ಸಂಸ್ಕೃತದ ಸದ್ಬಳಕೆಯ ಮೂಲಕ ಕನ್ನಡವನ್ನು ಇನ್ನಷ್ಟು ಬಲಪಡಿಸಬಹುದು. ಆ ಕಾಱ್ಯಕ್ಕಾಗಿ ನಾವು ಕಟಿಬದ್ಧರಾಗೋಣ.

Monday, April 6, 2015

ಶಾಸಕರ ಹೊಣೆಗಾರಿಕೆ



ರಾಹುಲ ಗಾಂಧಿಯವರು ಅಮೇಠಿ ಕ್ಷೇತ್ರದಿಂದ ಚುನಾಯಿತರಾದ ಶಾಸಕರು. ಆ ಕ್ಷೇತ್ರದ ಜನತೆಗೆ ಇವರು ಜವಾಬುದಾರರು ಹಾಗು ಲೋಕಸಭೆಯು ನಿಗದಿಪಡಿಸಿದ ಕರ್ತವ್ಯಗಳಿಗೆ ಇವರು ಬಾಧ್ಯಸ್ಥರು. ಆದರೆ ಇವರು ಇತ್ತೀಚೆಗೆ ‘ಕಾಣದಂತೆ ಮಾಯವಾದನೊ ಶಿವಾ’ ಎಂದು ಮಾಯವಾಗಿ ಬಿಟ್ಟಿದ್ದಾರೆ. ಇದು ಅಕ್ಷಮ್ಯ ಕರ್ತವ್ಯಚ್ಯುತಿ. ಲೋಕಸಭೆಯ ಸದಸ್ಯರಾಗಿ ಇವರು ವೇತನ, ಭತ್ತೆ ಹಾಗು ಇತರ ಅನೇಕ  ಹೆಚ್ಚುವರಿ ಸೌಲಭ್ಯಗಳನ್ನು ಪಡೆಯುತ್ತಾರೆ. ತಮ್ಮ ದೀರ್ಘಕಾಲೀನ ಅನುಪಸ್ಥಿತಿಯಲ್ಲಿ ಈ ‘ಸಂಪಾದನೆ’ಯನ್ನು ಅವರು ತ್ಯಾಗ ಮಾಡುತ್ತಾರೆಯೆ?

ಒಬ್ಬ ಚುನಾಯಿತ ಶಾಸಕನು ತನ್ನ ಸಂಪೂಱ್ಣ ಸಮಯವನ್ನು ತನ್ನ ಕರ್ತವ್ಯಗಳಿಗೆ ಮೀಸಲಿಡಬೇಕು. ಯಾಕೆಂದರೆ ಅವನು ‘ಅರೆಕಾಲೀನ ಶಾಸಕ’ನಲ್ಲ. ಅವರು ತಾವು ಗಳಿಸಿದ ಆಸ್ತಿಯ ಬಗೆಗೆ ಪಾರದಱ್ಶಕರಾಗಿದ್ದರೆ ಸಾಲದು; ತಮ್ಮ ಸಮಯವಿನಿಯೋಗದ ಬಗೆಗೂ ಅವರು ಪಾರದಱ್ಶಕರಾಗಿರಬೇಕು. ಆದರೆ ನಮ್ಮ ಅನೇಕ ಶಾಸಕರು ಶಾಸನಸಭೆಯ ಅವಧಿಯಲ್ಲಿ ಮಾತ್ರ ರಾಜಧಾನಿಯಲ್ಲಿ ಇರುತ್ತಾರೆ. ಉಳಿದ ಸಮಯದಲ್ಲಿ ಅವರು ಎಲ್ಲಿ ಇರುತ್ತಾರೆ, ಏನು ಮಾಡುತ್ತಾರೆ ಎನ್ನುವುದು ನಮಗಾರಿಗೂ ತಿಳಿದಿರುವುದಿಲ್ಲ. ಕೇವಲ ಆಕಸ್ಮಿಕವಾಗಿ ಅವರ ‘ಹಾಲಿ ವಸ್ತಿ’ ನಮಗೆ ತಿಳಿದು ಬಿಡುತ್ತದೆ. ಉದಾಹರಣೆಗೆ ನಮ್ಮ ಶಾಸಕರೊಬ್ಬರು ಕೆಲ ವಱ್ಷಗಳ ಹಿಂದೆ ವಿದೇಶಪ್ರಯಾಣ ಮಾಡಿದ್ದು ತಿಳಿದು ಬಂದ ಕಾರಣವೆಂದರೆ, ಆ ದೇಶದಲ್ಲಿ ಅವರು ಏನೋ ತೊಂದರೆಯನ್ನು ಎದುರಿಸಿ, ಸರಕಾರದ ನೆರವನ್ನು ಕೋರಿದ್ದು!

ನಮ್ಮ ಮುಖ್ಯ ಮಂತ್ರಿ ಒಬ್ಬರು ಒಮ್ಮೆ ಸಿಂಗಪೂರಕ್ಕೆ ತೆರಳುತ್ತಿದ್ದವರು, ತುಱ್ತು ಕಾರಣದಿಂದ ಪ್ರಯಾಣವನ್ನು ರದ್ದುಗೊಳಿಸಿ, ಬೆಂಗಳೂರು ವಿಮಾನನಿಲ್ದಾಣದಲ್ಲಿಯೇ ಮರಳಿದರು. ಸೂಟು, ಬೂಟು ಹಾಕಿಕೊಂಡು ಮಿರಮಿರ ಮಿಂಚುತ್ತ,ಅವರು ಯಾವುದೋ ಖಾಸಗಿ ಉದ್ದೇಶದಿಂದ ವಿದೇಶಪ್ರವಾಸ ಕೈಕೊಂಡಿದ್ದರು. ಆದರೆ, ದುರದೃಷ್ಟವಶಾತ್ ಅದು ಆರಂಭದಲ್ಲಿಯೇ ಮೊಟಕುಗೊಂಡಿತು. ಆ ಸಮಾಚಾರವನ್ನು ಹಾಗು ಅವರ ಮರಳುತ್ತಿರುವ ಚಿತ್ರವನ್ನು ನೋಡಿರದಿದ್ದರೆ, ನಮಗೆ ಅಂದರೆ ಕಱ್ನಾಟಕದ ಪ್ರಜೆಗಳಿಗೆ ಈ ವಿಷಯ ತಿಳಿಯುತ್ತಲೇ ಇರಲಿಲ್ಲ.

ಶಾಸಕರ ಸಮಯದ ಮೇಲೆ ಕ್ಷೇತ್ರದ ಜನತೆಗೆ ಅನಿಱ್ಬಂಧಿತ ಹಕ್ಕು ಇದೆ. ಆದುದರಿಂದ ಅವರು ಎಲ್ಲೆಲ್ಲಿ ಹೋಗುತ್ತಿದ್ದಾರೆ ಎನ್ನುವದನ್ನು ತಿಳಿಯುವುದು ಪ್ರಜೆಗಳ ಅಧಿಕಾರವಾಗಿದೆ. ಅವರ ಪ್ರಯಾಣವು ಸರಕಾರಿ ಉದ್ದೇಶದ ಪ್ರಯಾಣವೊ ಅಥವಾ ಖಾಸಗಿ ಉದ್ದೇಶದ ಪ್ರಯಾಣವೊ ಎನ್ನುವುದನ್ನು ಅವರು ಸ್ಪಷ್ಟ ಪಡಿಸಬೇಕು. ಖಾಸಗಿ ಉದ್ದೇಶದ ಪ್ರಯಾಣವಾಗಿದ್ದರೆ, ಶಾಸಕರು ಆ ಖರ್ಚನ್ನು ತಮ್ಮ ಸ್ವಂತ ಜೇಬಿನಿಂದ ನಿಭಾಯಿಸುತ್ತಿದ್ದಾರೊ ಅಥವಾ ಬೇರೊಬ್ಬರಿಂದ ಪ್ರಾಯೋಜಿತರಾಗುತ್ತಿದ್ದಾರೊ ಎನ್ನುವುದನ್ನು ಪ್ರಜೆಗಳಿಗೆ ತಿಳಿಸಬೇಕು. ಸ್ವಂತ ಖಱ್ಚಾದರೆ, ಅಷ್ಟು ಹಣವನ್ನುಅವರು ಖಱ್ಚು ಮಾಡಲು ಹೇಗೆ ಶಕ್ತರಾದರು ಎನ್ನುವುದನ್ನು ಜನತೆ ತಿಳಿಯಬೇಕು. ಒಂದು ವೇಳೆ, ಖಾಸಗಿ ವ್ಯಕ್ತಿಯಿಂದ ಅಥವಾ ಸಂಸ್ಥೆಯಿಂದ ಪ್ರಾಯೋಜಿತ ಪ್ರವಾಸವಾಗಿದ್ದರೆ, ಇದರಲ್ಲಿ ಏನಾದರೂ ‘ಪರಸ್ಪರ ಲಾಭ’ವಿದೆಯೋ (quid pro quo) ಎನ್ನುವುದರ ತನಿಖೆಯಾಗಬೇಕು.

ರಾಹುಲ ಗಾಂಧಿಯವರು ತಮ್ಮ ಕ್ಷೇತ್ರವಾದ ಅಮೇಠಿಯಿಂದ ಹಾಗು ಲೋಕಸಭೆಯ ಕಲಾಪಗಳಿಂದ ದೀಱ್ಘಕಾಲದವರೆಗೆ ದೂರವಾಗಿ ಉಳಿದಿದ್ದಾರೆ. ಅವರ ಹೊಗಳುಭಟ್ಟರು ಈ ಅನುಪಸ್ಥಿತಿಗೆ ಅನೇಕ ಪ್ರಶಂಸನೀಯ ಕಾರಣಗಳನ್ನು (ಉದಾಹರಣೆಗೆ ಆತ್ಮಾವಲೋಕನ, ಜ್ಞಾನಾರ್ಜನೆ ಇತ್ಯಾದಿ) ಕೊಡುತ್ತಿದ್ದಾರೆ. ಆದರೆ ಜನತೆ ಇದನ್ನು ನಂಬುವುದೆ? ಸೋನಿಯಾರಿಗೆ ಆದಂತೆ ರಾಹುಲ ಗಾಂಧಿಯವರಿಗೂ ಏನಾದರೂ ರೋಗವಾಗಿದೆಯೆ, ಅಥವಾ ಅವರು ಕೇವಲ ವಿಶ್ರಾಂತಿಗಾಗಿ ‘ಯಾರಿಗೂ ಹೇಳೋಣ ಬ್ಯಾಡಾ’ ಎಂದು ಎಲ್ಲಾದರೂ ಜಿಗಿದಿದ್ದಾರೆಯೊ ಎನ್ನುವಂತಹ ಸಂಶಯಗಳು ಜನರ ಮನಸ್ಸಿನಲ್ಲಿ ಏಳುವುದು ಸ್ವಾಭಾವಿಕವಾಗಿದೆ. ಅಥವಾ ಅವರು ನಿಜವಾಗಿಯೂ ಬೋಧಿವೃಕ್ಷದ ಕೆಳಗೆ ತಪಸ್ಸು ಮಾಡಲು ತೆರಳಿದ್ದಾರೊ? ಈ ಪ್ರಹಸನವನ್ನು ನೋಡಿದಾಗ, ವರಕವಿ ಬೇಂದ್ರೆಯವರ ಸಾಲೊಂದು ನೆನಪಿಗೆ ಬರುತ್ತದೆ:
‘ಬುದ್ಧ—
ಜಗವೆಲ್ಲ ಮಲಗಿರಲು, ಇವನೊಬ್ಬ ಎದ್ದ!’
ಸಿದ್ಧಾರ್ಥನು ಬುದ್ಧನಾದಂತೆ, ಸಿದ್ಧಾರ್ಥನ ಮಗನ ಹೆಸರನ್ನು ಇಟ್ಟುಕೊಂಡ ರಾಹುಲರೂ ಸಹ ಪ್ರಬುದ್ಧರಾಗಲಿ ಎಂದು ಹಾರೈಸುತ್ತೇನೆ. ನಮ್ಮ ಎಲ್ಲ ಶಾಸಕರು ಸಂಪೂಱ್ಣವಾಗಿ ಪಾರದಱ್ಶಕರಾಗಲಿ ಹಾಗು ತಮ್ಮ ಹೊಣೆಗಾರಿಕೆಯನ್ನು ಅರಿತುಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

Tuesday, March 31, 2015

ಭಾಷೆಯ ಕೊಲೆಗಡುಕರು


ನಮ್ಮ ಕನ್ನಡ ಟೀವಿ ಚಾನೆಲ್‍ಗಳಿಗೆ ಏನಾಗಿದೆ? ಅಶುದ್ಧ ಉಚ್ಚಾರ, ಅಶುದ್ಧ ಬರಹ ಹಾಗು ಅಶುದ್ಧ ವ್ಯಾಕರಣಗಳು ಈ ಚಾನೆಲ್‍ಗಳಲ್ಲಿ ಮಾಮೂಲು ಸಂಗತಿಯಾಗಿವೆ. ಈಗೀಗ ಅಶುದ್ಧ ಪದಪ್ರಯೋಗಗಳನ್ನೂ ಈ ಚಾನೆಲ್‍ಗಳು ಧಾರಾಳವಾಗಿ ಮಾಡುತ್ತಿವೆ. ನನ್ನ ಕಣ್ಣಿಗೆ ಬಿದ್ದ ಒಂದು ಉದಾಹರಣೆಯನ್ನು ಇಲ್ಲಿ ಕೊಡುತ್ತಿದ್ದೇನೆ:

ಇತ್ತೀಚೆಗೆ ಅಸ್ವಾಭಾವಿಕವಾಗಿ ನಿಧನರಾದ, ಭಾರತೀಯ ಆಡಳಿತ ಸೇವೆಯ ಶ್ರೀ ರವಿ ಇವರ ಪ್ರಕರಣವನ್ನು ಸಿ.ಬಿ.ಆಯ್.ಗೆ ಒಪ್ಪಿಸಬೇಕೆನ್ನುವ ಬೇಡಿಕೆಯನ್ನು ವಿರೋಧಪಕ್ಷದ ಶಾಸಕರು ವಿಧಾನಸಭೆಯಲ್ಲಿ ಮಂಡಿಸಿದಾಗ, ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರು ಈ ಬೇಡಿಕೆಯನ್ನು ಒಪ್ಪಿಕೊಳ್ಳಲಿಲ್ಲ. ಕನ್ನಡದ ಒಂದು ಟೀವಿ ಚಾನೆಲ್ ಈ ಸಮಾಚಾರಕ್ಕೆ ಕೊಟ್ಟ ಅಡಿಬರಹ ಹೀಗಿತ್ತು: ‘ಸಿದ್ದರಾಮಯ್ಯನವರು  ಸಿ.ಬಿ.ಆಯ್  ಬೇಡಿಕೆಯನ್ನು ನಿರಾಕರಿಸಿದರು.’

ವಾಸ್ತವದಲ್ಲಿ, ಮುಖ್ಯ ಮಂತ್ರಿಗಳು ಏನನ್ನೂ ನಿರಾಕರಿಸಿಲ್ಲ. ಅವರು ಸಿ.ಬಿ.ಆಯ್‍ಗೆ ರವಿ-ಪ್ರಕರಣವನ್ನು ಒಪ್ಪಿಸಬೇಕೆನ್ನುವ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ, ಅಷ್ಟೇ! ಈ ಚಾನೆಲ್‍ಗೆ ನಿರಾಕರಣೆ ಹಾಗು ತಿರಸ್ಕಾರ ಈ ಎರಡು ಪದಗಳ ಅರ್ಥವ್ಯತ್ಯಾಸ ತಿಳಿಯದು. ನಿರಾಕರಿಸುವುದು ಅಂದರೆ denying; ತಿರಸ್ಕರಿಸುವುದು ಎಂದರೆ rejecting. ಇದನ್ನು ಸ್ಪಷ್ಟ ಪಡಿಸಲು ಒಂದು ಕಾಲ್ಪನಿಕ ಉದಾಹರಣೆಯನ್ನು ನೋಡೋಣ:

ನ್ಯಾಯಾಲಯದಲ್ಲಿ ನ್ಯಾಯಾಧೀಶರು ಆರೋಪಿಯನ್ನು ಕೇಳುತ್ತಿದ್ದಾರೆ:
“ನಿಮ್ಮ ಮೇಲಿನ ಕಳ್ಳತನದ ಆರೋಪವನ್ನು ನೀವು ಒಪ್ಪಿಕೊಳ್ಳುತ್ತೀರಾ?”
ಆರೋಪಿತ: “ನಾನು ಕಳ್ಳತನದ ಆರೋಪವನ್ನು ನಿರಾಕರಿಸುತ್ತೇನೆ.” (I deny the charges of theft).
ನ್ಯಾಯಾಧೀಶರು ವಕೀಲರಿಗೆ:  “ I reject your argument.”
(ನಾನು ನಿಮ್ಮ ವಾದವನ್ನು ತಿರಸ್ಕರಿಸುತ್ತೇನೆ.)

ಕನ್ನಡದಲ್ಲೇ ಇಂತಹ ತಪ್ಪುಗಳನ್ನು ಮಾಡುವವರು ಇಂಗ್ಲೀಶಿನಲ್ಲಿ ಮಾಡದಿರುತ್ತಾರೆಯೆ? ಇಂಗ್ಲೀಶಿನ suspect ಹಾಗು doubt ಪದಗಳನ್ನು ಕನ್ನಡಿಗರು ಬೇಕಾಬಿಟ್ಟಿಯಾಗಿ ಬಳಸುವ ಒಂದು ಉದಾಹರಣೆಯನ್ನು ಇಲ್ಲಿ ಕೊಡುವುದು ಅಪ್ರಸ್ತುತವಾಗಲಾರದು.

ಕನ್ನಡಿಗ: ಈತನೇ ಕಳ್ಳತನ ಮಾಡಿದ್ದಾನೆ. ಈತನ ಮೇಲೆ ನನಗೆ full doubt ಇದೆ.
ವಾಸ್ತವದಲ್ಲಿ ನಮ್ಮ ಕನ್ನಡಿಗನಿಗೆ ಇದ್ದದ್ದು suspicionಏ ಹೊರತು doubt ಅಲ್ಲ. ಕನ್ನಡದಲ್ಲಿ suspicion ಹಾಗು doubt ಎರಡಕ್ಕೂ ಸಂಶಯ ಎನ್ನುವ ಪದವನ್ನೇ ಬಳಸುವುದರಿಂದ ನಮ್ಮ ಕನ್ನಡಿಗನು ಇಂತಹ ತಪ್ಪು ಪ್ರಯೋಗಗಳನ್ನು ಮಾಡುತ್ತಾನೆ. ಈತನ ಮಾತನ್ನು ಕೇಳುತ್ತಿರುವ ಇಂಗ್ಲೀಶರವನಿಗೆ ಅನೇಕ doubts ಬರುವುದು ಸಹಜ!

(ಶ್ರೀ ಶಿವಪ್ರಕಾಶರು doubt ಎನ್ನುವ ಪದಕ್ಕೆ ‘ಸಂದೇಹ’ ಎನ್ನುವುದು ಸರಿಯಾದ ಪದ ಎಂದು ಸೂಚಿಸಿದ್ದಾರೆ. ಇದು doubt ಎನ್ನುವ ಪದದ ಮತ್ತೊಂದು ಅರ್ಥವಾಗುತ್ತಿದ್ದು, ಈ ವಿವರಣೆಗಾಗಿ ನಾನು ಶ್ರೀ ಶಿವಪ್ರಕಾಶರಿಗೆ ಕೃತಜ್ಞನಾಗಿದ್ದೇನೆ. Doubt ಪದವನ್ನು ಈ ಅರ್ಥದಲ್ಲಿ ಬಳಸುವ ಸಂದರ್ಭದ ಉದಾಹರಣೆ:
ಅಧ್ಯಾಪಕರು: Any doubts? = ಏನಾದರೂ ಸಂದೇಹಗಳು ಇವೆಯೆ?)

ಇಂಗ್ಲೀಶಿನ ಇನ್ನೂ ಕೆಲವು ಪದಗಳನ್ನು ಕನ್ನಡಿಗರು ಬೇಕಾಬಿಟ್ಟಿಯಾಗಿ ಬಳಸುತ್ತಾರೆ. ಉದಾಹರಣೆಗೆ beside ಮತ್ತು besides. Beside ಎಂದರೆ ಪಕ್ಕದಲ್ಲಿ ಅನ್ನುವ ಅರ್ಥ. ಉದಾಹರಣೆಗೆ There is a tree beside the temple. ಇನ್ನು besides ಎಂದರೆ ‘ಅದೂ ಅಲ್ಲದೆ’ ಎನ್ನುವ ಅರ್ಥವನ್ನು ಕೊಡುತ್ತದೆ. ಉದಾಹರಣೆಗೆ He is a gambler. Besides he is an alcoholic!

Be ಎನ್ನುವುದು ಒಂದು ಪ್ರತ್ಯಯ. Beside ಎಂದರೆ by the side of ಎಂದಾಗುತ್ತದೆ. ಇದರಂತೆಯೆ, behind ಎಂದರೆ by the hind of, before ಎಂದರೆ by the fore of, beneath ಎಂದರೆ by the neath of ಎಂದೆಲ್ಲ ಪದಗಳ ಹೃಸ್ವೀಕರಣವು ಇಂಗ್ಲೀಶಿನಲ್ಲಿ ಆಗಿದೆ.

ಇಂಗ್ಲೀಶಿನ truth ಹಾಗು reality ಪದಗಳನ್ನು ಕನ್ನಡಿಗರು ತಿರುವು ಮುರುವಾಗಿ ಉಪಯೋಗಿಸಿದ ಸಂದರ್ಭಗಳನ್ನು ನಾನು ನೋಡಿದ್ದೇನೆ. Truth ಎಂದರೆ ಸತ್ಯ. Reality ಎಂದರೆ ವಾಸ್ತವತೆ. ಈ ಪದಗಳ ಉದಾಹರಣೆಗಳು ಹೀಗಿವೆ:
God’s existence is truth; we can not see him is reality.

ಅನುಮಾನ ಎನ್ನುವ ಪದದ ಅರ್ಥ ತರ್ಕಸಿದ್ಧ ಎಂದಾಗುತ್ತದೆ. ಉದಾಹರಣೆಗೆ ‘ಹೊಗೆ ಇದ್ದಲ್ಲಿ ಬೆಂಕಿ ಇರುತ್ತದೆ’ ಎನ್ನುವುದು ಅನುಮಾನ ಅರ್ಥಾತ್ ತರ್ಕ. ಆದರೆ ಈ ಪದವನ್ನು ಅನೇಕರು ಋಣಾತ್ಮಕವಾಗಿ, ಸಂಶಯಾತ್ಮಕವಾಗಿ ಬಳಸುತ್ತಾರೆ. ಉದಾಹರಣೆಗೆ, ‘ಆತ ಹೊತ್ತಿಗೆ ಸರಿಯಾಗಿ ಬರುತ್ತಾನೆ ಎನ್ನೋದು ನನಗೇನೋ ಅನುಮಾನ ಕಣಯ್ಯ!’ ಇದು ತಪ್ಪು ಪ್ರಯೋಗ.

ಇದರಂತೆ ಭೇದ ಹಾಗು ಬೇಧ ಎನ್ನುವ ಪದಗಳ ವ್ಯತ್ಯಾಸವನ್ನು ಪರೀಕ್ಷಿಸೋಣ. ವಾಸ್ತವದಲ್ಲಿ ಬೇಧ ಎನ್ನುವ ಪದವು ಸಂಸ್ಕೃತದಲ್ಲಿ ಇಲ್ಲ; ಭೇದ ಎನ್ನುವ ಪದ ಇದೆ. ಭೇದ ಪದದ ಅರ್ಥವು ಬೇರ್ಪಡಿಸು, ಭಿನ್ನತೆ, penetrate ಎಂದೆಲ್ಲ ಆಗುತ್ತದೆ. ಆದರೆ ಸಂಸ್ಕೃತದಲ್ಲಿ ವೇಧ ಎನ್ನುವ ಪದವಿದ್ದು, ಇದರ ಅರ್ಥವೂ ಸಹ penetrate ಎಂದೇ ಆಗುತ್ತದೆ. ಇದೀಗ ನಾವು ‘ಕರ್ಣಭೇದ ಹಾಗು ಕರ್ಣವೇಧ’ ಎನ್ನುವ ಪದಗಳನ್ನು ಪರೀಕ್ಷಿಸೋಣ. ಪಾಂಡವರು ವಾಸ್ತವದಲ್ಲಿ ಕರ್ಣನ ಸಹೋದರರು ಎನ್ನುವ ಸತ್ಯವನ್ನು ಶ್ರೀಕೃಷ್ಣನು ಕರ್ಣನಿಗೆ ತಿಳಿಸುವ ಮೂಲಕ ಆತನಲ್ಲಿ ಭೇದಭಾವವನ್ನು ಹುಟ್ಟಿಸಲು ಪ್ರಯತ್ನ ಪಡುತ್ತಾನೆ. ಇದು ‘ಕರ್ಣಭೇದ’.

ಕೂಸಿನ ಕಿವಿಯನ್ನು ಅಂದರೆ ಕರ್ಣವನ್ನು ಚುಚ್ಚುವುದಕ್ಕೆ ‘ಕರ್ಣವೇಧ’ ಎನ್ನುತ್ತಾರೆ. ಅದರಂತೆಯೇ ‘ಶಬ್ದವೇಧಿ’ ಎನ್ನುವ ಪದ. ಈ ವೇಧ ಪದವನ್ನು ಕನ್ನಡಿಗರು ‘ಬೇಧ’ ಎಂದು ಬಳಸಿದರೆ ತಪ್ಪಿಲ್ಲ. ಯಾಕೆಂದರೆ ‘ವ’ಕಾರವು ಕನ್ನಡದಲ್ಲಿ ‘ಬ’ಕಾರವಾಗುವ ರೂಢಿ ಇದೆ. ಉದಾಹರಣೆಗೆ ‘ವಾಣಸಿಗ’ ಎನ್ನುವ ಮೂಲ ಪದವು ಕನ್ನಡದಲ್ಲಿ ‘ಬಾಣಸಿಗ’ ಆಗಿದೆ; ವಾಯಿಲ್ ಎನ್ನುವ ಪದವು ಬಾಗಿಲು ಎಂದಾಗಿದೆ. ಆದುದರಿಂದ ‘ಭೇದ’ ಹಾಗು ‘ಬೇಧ’ ಎನ್ನುವ ಎರಡೂ ಪದಗಳನ್ನು penetration ಎನ್ನುವ ಅರ್ಥದಲ್ಲಿ ಬಳಸಿದರೆ ತಪ್ಪಿಲ್ಲ. ಈಗಲೂ ಸಹ loose motion ಎನ್ನುವ ಪದಕ್ಕೆ ಕೆಲವು ಪ್ರದೇಶಗಳಲ್ಲಿ ‘ಬೇಧಿ’ ಎನ್ನುವ ಪದವನ್ನು ಬಳಸುತ್ತಾರೆ. ಬೀchiಯವರು ತಮ್ಮ ಒಂದು ಪುಸ್ತಕದಲ್ಲಿ laxative ಎನ್ನುವ ಪದಕ್ಕೆ ‘ಸುಖಬೇಧಿ’ ಎನ್ನುವ ಕನ್ನಡ ಪದವನ್ನು ಟಂಕಿಸಿ ಬಳಸಿದ್ದಾರೆ.

ಕನ್ನಡಿಗರು ಒಂದು ದಿನದಲ್ಲಿ ಬಳಸುವ ವಿವಿಧ ಪದಗಳ ಸಂಖ್ಯೆ ತುಂಬಾ ಕಮ್ಮಿ ಎಂದು ಅನ್ನಿಸುತ್ತದೆ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿಯೂ ಸಹ ವಿಭಿನ್ನ ಪದಗಳನ್ನು ಬಳಸದೇ, ಒಂದೇ ಸಾಮಾನ್ಯ ಪದವನ್ನು ಉಪಯೋಗಿಸುವುದು ಕನ್ನಡಿಗರಲ್ಲಿ ರೂಢಿಯಾಗಿದೆ. ಉದಾಹರಣೆಗೆ ‘ಕನ್ಯಾಪರೀಕ್ಷೆಯ (!)’ ಒಂದು ಸಂದರ್ಭವನ್ನು ನೋಡೋಣ:

ತಾಯಿ ಮಗನಿಗೆ: ಹುಡುಗಿ ಹ್ಯಾಂಗಿದ್ದಾಳೊ?
ಮಗ: ಛಲೋ ಇದ್ದಾಳಮ್ಮ.
ತಾಯಿ: ಉಪ್ಪಿಟ್ಟು ಹ್ಯಾಂಗಾಗಿತ್ತೊ?
ಮಗ: ಛಲೋ ಆಗಿತ್ತಮ್ಮ.
ತಾಯಿ: ಹುಡುಗಿ ಹೆಂಗ ಹಾಡಿದಳೊ?
ಮಗ: ಛಲೋ ಹಾಡಿದಳಮ್ಮ.
ಈ ಹುಡುಗನಿಗೆ ಚೆಲುವೆ, ರುಚಿ ಹಾಗು ಇಂಪು ಎನ್ನುವ ಪದಗಳು ಗೊತ್ತಿಲ್ಲವೇನೊ? ಎಲ್ಲದಕ್ಕೂ ಛಲೋ ಎನ್ನುವ ಒಂದೇ ಪದವನ್ನು ಈತ ಬಳಸುತ್ತಾನೆ. ಇನ್ನು ಕನ್ನಡ ಬದಲು ಇಂಗ್ಲೀಶ ಬಳಸುವ ಹುಡುಗನ ಉತ್ತರ ಹೇಗಿರಬಹುದು?

ತಾಯಿ ಮಗನಿಗೆ: ಹುಡುಗಿ ಹ್ಯಾಂಗಿದ್ದಾಳೊ?
ಮಗ: Awesome, mummy!
ತಾಯಿ: ಉಪ್ಪಿಟ್ಟು ಹ್ಯಾಂಗಾಗಿತ್ತೊ?
ಮಗ: Awesome, mummy!
ತಾಯಿ: ಹುಡುಗಿ ಹಾಡು ಹೆಂಗ ಹಾಡಿದಳೊ?
ಮಗ: Awesome, mummy!

ಕನ್ನಡಿಗರೇ ಕನ್ನಡವನ್ನು ಮರೆಯುತ್ತಿರುವ ಹಾಗು ತಪ್ಪಾಗಿ ಬಳಸುವ ಈ ಕಾಲದಲ್ಲಿ, ನಮ್ಮ ಸಮಾಚಾರ ಪತ್ರಿಕೆಗಳು ಕನ್ನಡದ ಕೊಲೆಗೆ ಕೈ ಎತ್ತಿ ನಿಂತಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಅಪದ್ಧ ಪ್ರಯೋಗಗಳನ್ನು ಈಗಾಗಲೇ ಇಲ್ಲಿ ನೋಡಿದ್ದೇವೆ. ಆ ಪತ್ರಿಕೆಯು ಕೆಲ ಕಾಲದ ಹಿಂದೆ ಪ್ರಕಟಿಸಿದ ಒಂದು ತಲೆಬರಹವನ್ನು ಇಲ್ಲಿ ಕೊಡುತ್ತಿದ್ದೇನೆ:
“ಸವಿತಾ ಕೊಂದ ವೈದ್ಯರು”
ಈ ತಲೆಬರಹದ ಅರ್ಥವೇನು? ಸವಿತಾ(ಳು) ಕೆಲವು ವೈದ್ಯರನ್ನು ಕೊಂದಳು ಎಂದೆ, ಅಥವಾ ಸವಿತಾ(ಳನ್ನು) ಕೊಂದಂತಹ ವೈದ್ಯರು ಎಂದೆ? ‘ಳನ್ನು’ ಎನ್ನುವ ವಿಭಕ್ತಿ ಪ್ರತ್ಯಯವನ್ನು ಸೇರಿಸಿದರೆ ಸಂಯುಕ್ತ ಕರ್ನಾಟಕಕ್ಕೆ ಅಪಾರ ನಷ್ಟವಾಗುತ್ತದೆಯೆ?
ಬಹುಶಃ ನಮ್ಮ ಪತ್ರಿಕೆಗಳು ಹಾಗು ಟೀವಿ ಚಾನೆಲ್‍ಗಳು ಭಾಷೆಯ ಕೊಲೆಗಡುಕರಿಂದ ತುಂಬಿಕೊಂಡಿವೆ ಎನಿಸುತ್ತದೆ.

Saturday, March 21, 2015

ನನ್ನ ಕೈಯ ಹಿಡಿದಾಕೆ !............ಬೇಂದ್ರೆ



ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
                        ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
                        ಹುದುಲಾಗ ಸಿಕ್ಕೇನs

                       
ಜಗದಾಗ ಯಾವಾವ ನೆರಳು ಬೆಳಕಿನಾಗ
                ಹಗಲಿರುಳು ಇದ್ದಾವಾ
ಎದ್ದೇನs ಬಿದ್ದೇನs ಕತ್ತಲು ಬಿಸಲೇನ
               ನಕ್ಕಾವಾ ಗೆದ್ದಾವಾ !

                       
ಹುಸಿ ನಗುತ ಬಂದೇವ ನಸುನಗುತ ಬಾಳೋಣ
                  ತುಸು ನಗುತ ತೆರಳೋಣ
ಬಡ ನೂರು ವರುಷಾನ ಹರುಷಾದಿ ಕಳೆಯೋಣ
                  ಯಾಕಾರೆ ಕೆರಳೋಣ !

                       
ಬಡತನ ಒಡೆತನ ಕಡೆತನಕುಳಿದಾವೇನ
              ಎದೆಹಿಗ್ಗು ಕಡೆಮುಟ್ಟ
ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ
              ಕಡೆಗೋಲು ಹಿಡಿಹುಟ್ಟ !

                       
ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
                        ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
                        ಹುದುಲಾಗ ಸಿಕ್ಕೇನs !

ತಮ್ಮ ಹುದುಗಲಾರದ ದುಃಖಕವನದಲ್ಲಿ ಬೇಂದ್ರೆಯವರು ತಮ್ಮ ಹೆಂಡತಿಗೆ ಸುಖದ ನಟನೆಯನ್ನು ಮಾಡಬೇಡ; ನಿನ್ನ ದುಃಖವನ್ನು ಕಣ್ಣೀರಿನಲ್ಲಿ ಹರಿಯಬಿಡುಎಂದು ಹೇಳುತ್ತಾರೆ. ಆ ಸಂದರ್ಭವು ಒಂದು ದುಃಖದ ಪ್ರಸಂಗವಾಗಿತ್ತು. ಆದುದರಿಂಬೇಂದ್ರೆಯವರು ತಮ್ಮ ಹೆಂಡತಿಗೆ ಆ ರೀತಿ ಹೇಳುವುದು ಉಚಿತವೇ ಆಗಿತ್ತು. ಆದರೆ, ‘ನನ್ನ ಕೈಯ ಹಿಡಿದಾಕೆಎನ್ನುವ ಈ ಕವನದಲ್ಲಿ, ಬೇಂದ್ರೆಯವರು ‘ನಿನ್ನಅಳಲನ್ನು ನುಂಗಿಕೊಂಡು ಒಮ್ಮೆ ಕ್ಕು ಬಿಡುಎನ್ನುವ ಬೇಡಿಕೆಯನ್ನು ತಮ್ಮ ಪತ್ನಿಯ ಮುಂದೆ ಇಡುತ್ತಿದ್ದಾರೆ. ಏಕೆಂದರೆ ಇದು ಬೇಂದ್ರೆಯವರ ಬದುಕಿನ ಹತಾಶೆಯ ಸನ್ನಿವೇಶವಾಗಿದೆ.
ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
                   ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
                   ಹುದುಲಾಗ ಸಿಕ್ಕೇನs
ನನ ಕೈಯ ಹಿಡಿದಾಕೆಎನ್ನುವ ಪದಪುಂಜವು ಸೂಚಿಸುವ ಅನೇಕ ಅರ್ಥಗಳನ್ನು ನಾವು ಇಲ್ಲಿ ಸ್ಮರಿಸಬೇಕು. ಸಾಮಾನ್ಯ ಅರ್ಥವೆಂದರೆ ಪಾಣಿಗ್ರಹಣ’; ಅರ್ಥಾತ್ ಇವಳು ಬೇಂದ್ರೆಯವರ ಧರ್ಮಪತ್ನಿ. ಆದುದರಿಂದ ಇವಳು ತನ್ನ ಗಂಡನನ್ನು ಅಂದರೆ ಬೇಂದ್ರೆಯವರನ್ನು ಅವಲಂಬಿಸಿ, ಅನುಸರಿಸಿ ನಡೆಯಬೇಕಾದವಳು. ಇಲ್ಲಿಯ ಸೂಚ್ಯಾರ್ಥವೇನೆಂದರೆ, ಇವಳು ಬದುಕಿನ ದಾರಿಯಲ್ಲಿ ಬೇಂದ್ರೆಯವರನ್ನೇ ಕೈಹಿಡಿದು ನಡೆಯಿಸುವವಳು. ಈ ಪರಸ್ಪರ ಅವಲಂಬನ, ಪರಸ್ಪರ ಸಹಕಾರ ಇವು ಎಲ್ಲ ದಾಂಪತ್ಯಗಳಲ್ಲೂ ಇರಬೇಕಾದಂತಹ ಗುಣಗಳೇ ಆಗಿವೆ. ಇಂತಹ ಸಹಧರ್ಮಿಣಿಯಿಂದ ಬೇಂದ್ರೆಯವರು ಕೋರುವುದು ಏನನ್ನು? ‘ನಿನ್ನ ದುಃಖ ಅಪಾರವಾಗಿದ್ದರೂ ಸಹ, ಅದೆಲ್ಲವನ್ನೂ ನುಂಗಿಕೊಂಡು, ಒಂದು ಸಲ ನಕ್ಕು ಬಿಡು! ಆಗ ನಾನೂ ಸಹ ನನ್ನ ಹತಾಶೆಯನ್ನು ಮರೆತು, ಸಮಾಧಾನವನ್ನು ಪಡೆದೇನು.’ ಇದು ಸಾಧ್ಯವಾಗದಿದ್ದರೆ? ಬೇಂದ್ರೆಯವರ ಹೆಂಡತಿಗೆ ತನ್ನ ದುಃಖವನ್ನು ಮರೆಮಾಚುವುದು, ಕಣ್ಣೀರನ್ನು ನುಂಗಿಕೊಳ್ಳುವುದು ಸಾಧ್ಯವಾಗದಿದ್ದರೆ? ಅದರ ಘೋರ ಪರಿಣಾಮವನ್ನು ಬೇಂದ್ರೆ ಹೀಗೆ ಉಸುರುತ್ತಾರೆ:
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳಹುದುಲಾಗ ಸಿಕ್ಕೇನs.

ಬಯಲುಸೀಮೆಯ ಹಳ್ಳಗಳಲ್ಲಿ ಪ್ರವಾಹವು ಬೇಸಿಗೆಯ ಕಾಲದಲ್ಲಿ ಇರುವುದಿಲ್ಲ. ಮಳೆಗಾಲದಲ್ಲಿ ಈ ಹಳ್ಳಗಳು ಏಕಾಏಕಿಯಾಗಿ ಉಕ್ಕಿ ಹರಿಯತೊಡಗುತ್ತವೆ. ತಮ್ಮ ದಂಡೆಗಳನ್ನು ಕೊರೆಯುತ್ತ ಮುಂದೆ ಸಾಗುತ್ತವೆ. ಅಕಸ್ಮಾತ್ ಈ ಹಳ್ಳಗಳಲ್ಲಿ ಸಿಕ್ಕ ಜಾನುವಾರುಗಳಾಗಲೀ, ಮನುಷ್ಯರಾಗಲೀ ಅಲ್ಲಿಯ ಹುದಲಿನಲ್ಲಿ ಅಂದರೆ ಕೆಸರಿನಲ್ಲಿ ಸಿಕ್ಕಿಕೊಂಡರೆ,  ಹೊರಗೆ ಬರುವುದು ಅಸಾಧ್ಯ. ಇನ್ನು ‘ಕಳ್ಳಹುದಲು’ ಎನ್ನುವುದು ಮತ್ತೂ ಭೀಕರ. ಇದಕ್ಕೆ ಇಂಗ್ಲೀಶಿನಲ್ಲಿ quicksand ಎಂದು ಹೇಳುತ್ತಾರೆ. ತೋರಿಕೆಗೆ ಅಮಾಯಕವಾಗಿರುವ ಇದರಲ್ಲಿ ಸಿಕ್ಕಿಹಾಕಿಕೊಂಡ ವ್ಯಕ್ತಿ, ಪ್ರಯತ್ನ ಪಟ್ಟಷ್ಟೂ ಕೆಳಗೆ ಹೋಗುತ್ತಾನೆ. ಬೇಂದ್ರೆಯವರ ಪತ್ನಿ ಸಹಸಾ ತನ್ನ ದುಃಖವನ್ನು ಅದುಮಿ ಇಟ್ಟಿರುತ್ತಾರೆ. ಆದರೆ ತನ್ನ ಗಂಡನನ್ನು ನೋಡಿದೊಡನೆ ಅವರ ಕಣ್ಣೀರು ಏಕಾಏಕಿಯಾಗಿ, ಉಕ್ಕುಕ್ಕಿ ಹೊರಬರುತ್ತದೆ. ಆದುದರಿಂದ ಬೇಂದ್ರೆ ಹೇಳುತ್ತಾರೆ: ‘ನಿನ್ನ ಹುಚ್ಚು ಹಳ್ಳದಂತಿರುವ ಕಣ್ಣೀರ ಪ್ರವಾಹದಲ್ಲಿ ನನ್ನನ್ನು ಮುಳುಗಿಸಬೇಡ!’

‘ಸಮಾಧಾನದಿಂದಿರು’ ಎಂದು ತಮ್ಮ ಹೆಂಡತಿಗೆ ಹೇಳಿದರೆ ಆಯಿತೆ? ಅದಕ್ಕೆ ಸಮರ್ಪಕವಾದ ಕಾರಣವನ್ನು ಹೇಳಬೇಡವೆ? ಬೇಂದ್ರೆಯವರು ಈಗ ಒಂದು ವಿಶಾಲವಾದ ತರ್ಕವನ್ನು ತಮ್ಮ ಹೆಂಡತಿಯ ಮುಂದೆ ಇಡುತ್ತಾರೆ:
ಜಗದಾಗ ಯಾವಾವ ನೆರಳು ಬೆಳಕಿನಾಗ
              ಹಗಲಿರುಳು ಇದ್ದಾವಾ
ಎದ್ದೇನs ಬಿದ್ದೇನs ಕತ್ತಲು ಬಿಸಲೇನ
             ನಕ್ಕಾವಾ ಗೆದ್ದಾವಾ !
ನೆರಳು ಅಂದರೆ ಬಿಸಿಲಿನ ತಾಪ ಇಲ್ಲದೆ ಇರುವುದು; ಬೆಳಕು ಎಂದರೆ ತನ್ನನ್ನು ಗೊಂದಲಕ್ಕೆ ಈಡು ಮಾಡುವಂತಹ ಕತ್ತಲೆ ಇಲ್ಲದಿರುವುದು. ಇಂತಹ ಒಂದು ಸುಸ್ಥಿತಿ ಈ ಜಗತ್ತಿನಲ್ಲಿ ಯಾರಿಗಾದರೂ ಎಲ್ಲ ಕಾಲದಲ್ಲಿಯೂ ಸಿಕ್ಕೀತೆ? ನೆರಳಿನ ಬದಲಾಗಿ, ಬಿಸಲೇ ಇರಲಿ; ಬೆಳಕಿನ ಬದಲು ಕತ್ತಲೆಯೇ ಇರಲಿ, ಅಂತಹದರಲ್ಲಿಯೇ ಏಳುತ್ತ, ಬೀಳುತ್ತ ದಾರಿಯನ್ನು ಸವಿಸಬೇಕು. ನಗುನಗುತ್ತಲೆ ಮುನ್ನಡೆಯಬೇಕು. ಏಕೆಂದರೆ, ‘ನಕ್ಕಾವಾ ಗೆದ್ದಾವಾ! ’ ಅಳುವು ಸೋತವರ ಲಕ್ಷಣ; ಎಲ್ಲವನ್ನು ಕಳೆದುಕೊಂಡರೂ ಸಹ ನಗುವುದೇ ಬದುಕನ್ನು ಗೆದ್ದವರ ಲಕ್ಷಣ!

ಈ ವಿಶಾಲವಾದ ತರ್ಕವನ್ನು ಇದೀಗ ಬೇಂದ್ರೆಯವರು ತಮ್ಮ ವೈಯಕ್ತಿಕ ಬದುಕಿನ ಅಳತೆಗಳಿಗೆ ಹೊಂದಿಸಲು ಪ್ರಯತ್ನಿಸುತ್ತಾರೆ.
ಹುಸಿ ನಗುತ ಬಂದೇವ ನಸುನಗುತ ಬಾಳೋಣ
                ತುಸು ನಗುತ ತೆರಳೋಣ
ಬಡ ನೂರು ವರುಷಾನ ಹರುಷಾದಿ ಕಳೆಯೋಣ
                  ಯಾಕಾರೆ ಕೆರಳೋಣ !
ಪುಟ್ಟ ಕೂಸುಗಳನ್ನು ಗಮನಿಸಿರಿ. ಅವು ಯಾವಾಗಲೂ ಕಾರಣವಿಲ್ಲದೇ ನಗುತ್ತಿರುತ್ತವೆ. ಇದು ಬಾಲರ ನಿಷ್ಕಪಟವಾದ ನಗು. ಬೇಂದ್ರೆಯವರು ಈ ನಗುವಿಗೆ ‘ಹುಸಿನಗು’ ಎಂದು ಕರೆದಿದ್ದಾರೆ. ಹುಸಿನಗುವಿಗೆ ಸುಳ್ಳುನಗೆ ಎನ್ನುವ ಶ್ಲೇಷಾರ್ಥವನ್ನೂ ಸಹ ಬೇಂದ್ರೆಯವರು ಇಲ್ಲಿ ಸೂಚಿಸುತ್ತಿದ್ದಾರೆ. 

ನಸುನಗು ಅಂದರೆ ಮಂದಹಾಸ. ಇದು ಅಲ್ಪಸಂತೃಪ್ತಿಯ, ಆತ್ಮಸಂತೋಷದ ನಗು. ಈ ರೀತಿಯಾಗಿ ನಾವು ಬಾಳಬೇಕು. ಹಾಗು, ಈ ಲೋಕವನ್ನು ಬಿಟ್ಟು ಹೋಗಬೇಕಾದಾಗ, ತುಸುನಗುವಿನೊಡನೆ ತೆರಳಬೇಕು. ‘ಯಾಕಪ್ಪಾ, ಈ ‘ತುಸು ನಗು?’ ಎಂದು ಯಾರಾದರೂ ಕೇಳಬಹುದು. ಬಾಳಿನಲ್ಲಿ ದುಃಖ ಇದ್ದೇ ಇರುತ್ತದೆ. ಅದರ ಒಜ್ಜೆಯನ್ನು ಕಡಿಮೆ ಮಾಡಿಕೊಳ್ಳಲು ‘ಹುಸಿ ನಗು’ ಹಾಗು ‘ತುಸು ನಗು’ ಬೇಕೇ ಬೇಕು! ಅದನ್ನೇ ಬೇಂದ್ರೆ ಹೀಗೆ ಹೇಳುತ್ತಾರೆ: ಹುಟ್ಟು ಸಾವಿನ ನಡುವಿನ ಈ ಅವಧಿಯಲ್ಲಿ ನಮಗೆ ಸುಖದ ಸಮೃದ್ಧಿ ಬರುವದಿಲ್ಲ. ಆದರೂ ಅದಕ್ಕಾಗಿ ಕೆರಳುವುದು ಬೇಡ; ಇದ್ದುದರಲ್ಲಿಯೇ ತೃಪ್ತಿ ಪಟ್ಟುಕೊಂಡು, ನಸುನಗುತ್ತ ಹರ್ಷಚಿತ್ತರಾಗಿ ಇರೋಣ!

ಬೇಂದ್ರೆ ದಂಪತಿಗಳ ಸಂಕಷ್ಟಕ್ಕೆ ಸ್ವತಃ ಬೇಂದ್ರೆಯವರೇ ಕಾರಣರು! ಸರಿಯಾದ ಉದ್ಯೋಗವಿಲ್ಲ; ಹೆಂಡತಿ ಮಕ್ಕಳು ಪರಾಶ್ರಯದಲ್ಲಿ! ಆದುದರಿಂದ ಬೇಂದ್ರೆಯವರಿಗೆ ತಮ್ಮ ಹೆಂಡತಿಯೆದುರಿಗೆ ತಮ್ಮನ್ನು ಸಮರ್ಥಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅದಕ್ಕಾಗಿಯೇ ಅವರು ತಮ್ಮ ಹೆಂಡತಿಗೆ ‘ತಿಳಿಸಿ ಹೇಳುತ್ತಾರೆ’ (!): ಈ ಬಡತನ, ಈ ಸಿರಿವಂತಿಕೆ, ಈ ಪರಾಶ್ರಯ ಇವೆಲ್ಲವೂ ಕ್ಷಣಿಕವಾದವುಗಳೇ. ಹಾಗಿದ್ದರೆ, ಸದಾಕಾಲವೂ ಸ್ಥಿರವಾಗಿ ಇರುವಂತಹದು ಯಾವುದು? ಬೇಂದ್ರೆಯವರ ಪ್ರಕಾರ ಅದು ‘ಎದೆಹಿಗ್ಗು’ (ಸ್ವಸಂತೋಷ)! ಈ ಬಾಳೆಂಬ ಸಮುದ್ರದಲ್ಲಿ ನಮ್ಮ ಒಡಕಲು ದೋಣಿಯನ್ನು ನಾವು ಯಶಸ್ವಿಯಾಗಿ ಸಾಗಿಸಬೇಕಾದರೆ, ನಮಗೆ ಬೇಕಾದದ್ದು ಆತ್ಮಸಂತೋಷವೆನ್ನುವ ಹುಟ್ಟುಗಳು. ಆ ಕಡೆಗೋಲನ್ನು (ಹುಟ್ಟುಗಳನ್ನು) ಮುಳುಗಿಸಬೇಡ’, ಇದು ಬೇಂದ್ರೆಯವರು ತಮ್ಮ ಹೆಂಡತಿಗೆ ನೀಡುವ (ಅಸಹಾಯಕ) ಉಪದೇಶ!
ಬಡತನ ಒಡೆತನ ಕಡೆತನಕುಳಿದಾವೇನ
            ಎದೆಹಿಗ್ಗು ಕಡೆಮುಟ್ಟ
ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ
            ಕಡೆಗೋಲು ಹಿಡಿಹುಟ್ಟ !

ಈ ಎಲ್ಲ ತತ್ವಜ್ಞಾನ, ಈ ಎಲ್ಲ ಉಪದೇಶ ನಿಜವಾಗಿಯೂ ನಿರರ್ಥಕ ಎನ್ನುವುದು ಬೇಂದ್ರೆಯವರಿಗೂ ಗೊತ್ತು. ಆದುದರಿಂದ ಅವರು ಮತ್ತೊಮ್ಮೆ ವಾಸ್ತವತೆಗೆ ಮರಳುತ್ತಾರೆ:
ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
                   ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
                   ಹುದುಲಾಗ ಸಿಕ್ಕೇನs !
ಇದು ಮೊದಲ ನುಡಿಯ ಪುನರಾವರ್ತನೆಯೇ ಆದರೂ ಸಹ, ಈ ಸಲ ಕೊನೆಯ ಸಾಲಿನ ಕೊನೆಗೆ ಉದ್ಗಾರವಾಚಕ ಚಿಹ್ನೆ ಇರುವುದನ್ನು ಗಮನಿಸಬೇಕು. ಬೇಂದ್ರೆಯವರ ನಿಸ್ಸಹಾಯಕತೆಯನ್ನು ಈ ಚಿಹ್ನೆ ಸ್ಪಷ್ಟಪಡಿಸುತ್ತದೆ.
……………………………………………………………………..
ಟಿಪ್ಪಣಿ:
ತಮ್ಮ ಹೆಂಡತಿಯ ಅಸೆಯನ್ನು ಪೂರೈಸಲು ತಮ್ಮಿಂದ ಸಾಧ್ಯವಾಗದಾಗ ಅಥವಾ ಅವಳು ದುಃಖದಲ್ಲಿದ್ದಾಗ, ತತ್ವಜ್ಞಾನವನ್ನು ಹೇಳಿ, ಅವಳಿಗೆ (ಕವನದ ಮೂಲಕ) ಸಮಾಧಾನಿಸುವುದು ಬೇಂದ್ರೆಯವರಿಗೆ ಒಂದು ಪರಿಪಾಠವೇ ಆದಂತೆ ಕಾಣುತ್ತದೆ. ಹೆಂಡತಿಗೆ ಮುತ್ತಿನ ಏಕಾವಳಿ ಸರವನ್ನು ಕೊಡಿಸಲು ಅಗದ ಬೇಂದ್ರೆ ಅವಳಿಗೆ ‘ಅಷ್ಟು ಪ್ರೀತಿ ಇಷ್ಟು ಪ್ರೀತಿ’ ಎನ್ನುವ ಕವನದ ಸರವನ್ನು ತೊಡಿಸಿದರು. ಈ ಕವನಕ್ಕೆ ಪ್ರತಿಯಾಗಿ, ತಮ್ಮ ಹೆಂಡತಿ ತಮಗೆ, ‘ನಾನು ಕೊಡುವೆ ನಿಮಗೆ ದವನ, ನೀವು ಕೊಡುವಿರೆನಗೆ ಕವನ’ ಎಂದು ಹಂಗಿಸುತ್ತಿರುವಂತಹ ಒಂದು ಕವನವನ್ನೂ ಬರೆದಿದ್ದಾರೆ!

ಬೇಂದ್ರೆಯವರ ಹತ್ತಿರ ಐದುಸಾವಿರಕ್ಕೂ ಹೆಚ್ಚಿಗೆ ಅಮೂಲ್ಯವಾದ ಪುಸ್ತಕಗಳು ಇದ್ದವಂತೆ. ಅವೇನು ನಾಲ್ಕಾಣೆಯ ಪತ್ತೇದಾರಿ ಕಾದಂಬರಿಗಳಲ್ಲ! ಈಗಿನ ಲೆಕ್ಕದಲ್ಲಿ ಒಂದೊಂದಕ್ಕೂ ೫೦೦ ರೂಪಾಯಿಗಳಷ್ಟು ಬೆಲೆ ಎಂದುಕೊಂಡರೂ ಸಹ ಈ ಎಲ್ಲ ಗ್ರಂಥಗಳ ಒಟ್ಟು ಬೆಲೆ ಈಗಿನ ಲೆಕ್ಕದಲ್ಲಿ ೨೫ ಲಕ್ಷದಷ್ಟಾಗಬಹುದು! ತಮ್ಮ ಹೆಂಡತಿಗೆ ಒಂದು ಮುತ್ತಿನ ಸರವನ್ನು ಕೊಡಿಸಲು ಜೀನತನ ತೋರಿಸುತ್ತಿದ್ದ ಈ ಮಹಾನುಭಾವನ ಹೆಂಡತಿಯ ದಾಂಪತ್ಯದ ಔದಾರ್ಯವನ್ನು ನಾವು ಮೆಚ್ಚಬೇಕು. ವರಕವಿಯ ಬಾಳಬಂಡಿಯನ್ನು ಸಹನೆಯಿಂದ ಎಳೆದ ಆ ಸಾಧ್ವಿಗೆ ನನ್ನ ಸಾವಿರ ನಮಸ್ಕಾರಗಳು.