Wednesday, February 27, 2008

ಕರಗಿದ ಕನಸಲ್ಲಿ . .

ಶ್ರೀಮತಿ ಎಸ್. ಅರುಂಧತಿ ಇವರು ಉತ್ತರ ಕನ್ನಡ ಜಿಲ್ಲೆಯ ನವ್ಯೋತ್ತರ ಕವಯಿತ್ರಿ. ’ಉಳಿದ ತಂತು’ ಹಾಗು ’ಹರಿಯುತ್ತಿರಲಿ ನದಿ’ ಇವು ಇವರ ಪ್ರಕಟಿತ ಕವನ ಸಂಕಲನಗಳು. ’ಹರಿಯುತಿರಲಿ ನದಿ’ ಸಂಕಲನದಿಂದ ಒಂದು ಕವನವನ್ನು ಆಯ್ದು ಇಲ್ಲಿ ಕೊಡಲಾಗಿದೆ.



ಕರಗಿದ ಕನಸಲ್ಲಿ . .

ಎದುರಲ್ಲಿ ಸುಳಿದ ಚಲುವ
ಕನಸಲ್ಲಿ ಬಂದೇ ಬಿಟ್ಟ
ಚಂದ್ರ ನಕ್ಷತ್ರಗಳ ದಿಬ್ಬಣ ತಂದೇ ಬಿಟ್ಟ
ಮೈ ತುಂಬ ಹುಣ್ಣಿಮೆಯ ಹರಿಸಿದ
ತಂಗಾಳಿಯಾಗಿ ತೀಡಿ
ನೈದಿಲೆಯ ಕೆನ್ನೆಗೆ ಸವರಿ
ಸಾಕೆ? ಇನ್ನೂ ಬೇಕೆ? ಎಂದ
ಬೇಕೆನಲು ಬಿಗಿದಪ್ಪಿ ಮುತ್ತಿಟ್ಟ
ಬೆಳಕು ಹರಿಯಲು ಚಲುವ
ಕಣ್ಣಲ್ಲೇ ಕರಗಿ ಹೋಗಿ ಬಿಟ್ಟ

6 comments:

Anonymous said...

ಹೊಸ ಕವಿ, ಕವಿತೆಯ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು. ಹಳೆ ಕಥೆಗೆ ಹೊಸ ಮೆರಗನ್ನು ಕೊಟ್ಟು, ಹೊಸ ಆಯಾಮಗಳನ್ನು ಕಂಡುಕೊಡಿದೆ ಈ ಕವನ.

ಮುಂಚೆ ಓದಿರದಿದ್ದ ಕವಿಗಳ ಕವಿತೆಗಳು ಹೆಚ್ಚು ತಟ್ಟುತ್ತವೆ, ಮುಟ್ಟುತ್ತವೆ.

ಅಂದ ಹಾಗೆ...ಹೀಗೆ, ಬೇರೆ ಬೇರೆ ಬ್ಲಾಗುಗಳಲ್ಲಿ ನೆಗೆದಾಡುತ್ತಿದ್ದಾಗ, ನಿಮ್ಮದು ಸಿಕ್ಕಿತು.

ನಾನು ಬೇಂದ್ರೆಯವರ ಪರಮಭಕ್ತರಲ್ಲಿ ಒಬ್ಬ. ಹೆಚ್ಚೇನು ಹೇಳಬೇಕಿಲ್ಲವಲ್ಲ, ಬ್ಲಾಗ್ ಬಹಳ ಹಿಡಿಸಿತು :)

sunaath said...

ಪ್ರಿಯ deemberstud,
ಹೊಸ ಚಿಗುರುಗಳ ಸೊಗಸೇ ಬೇರೆ ಅಲ್ಲವೆ?
ಬೇಂದ್ರೆಯವರ ಭಕ್ತರನ್ನು ಭೇಟಿಯಾದಾಗ ಭಾರಿ ಖುಶಿ ಆಗುತ್ತದೆ. ಅವರ ಕವನಗಳ ರುಚಿಯನ್ನು ಮತ್ತೆ ಮತ್ತೆ ಕೂಡಿ ಸವಿಯೋಣ.

Unknown said...

ಸುನಾಥರೆ,
ಬೆಳಕು ಹರಿಯಲುಈ ಕವಿತೆಯ ಚಲುವ
ಕಣ್ಣಲ್ಲೇ ಕರಗಿ ಹೋಗಿ ಬಿಟ್ಟ. ವಾಹ್!
ಆದರೆ ನನ್ನ ಚಲುವ ಕನಸಿನಲ್ಲೆ ಕರಗಿ ಹೋದ.

sunaath said...

ವನಮಾಲಾ,
ಮರಳಿ ಯತ್ನವ ಮಾಡಿ. ಕನಸಿನ ಚೆಲುವ ಕಣ್ಣೆದುರಿಗೂ ಬಂದಾನು!

ಸುಪ್ತದೀಪ್ತಿ suptadeepti said...

ಕಣ್ಣೆದುರಿಗೆ ಬಂದವನ ಚಂದ ಏನೇನೋ ಹೋಲಿಕೆಗಳಿಗೆ ಸಿಲುಕುವ ಅಪಾಯವಿರುತ್ತದೆ. ಕನಸಲ್ಲಿ ಬಂದವನೇ ಸುರಸುಂದರಾಂಗ. ಈ ಕವನದಲ್ಲಂತೂ ಬಂದವನು ತಾರೆಗಳ ದಿಬ್ಬಣವನ್ನೂ ತಂದ, ಇನ್ನೂ ಚಂದ...

sunaath said...

ಪ್ರೀತಿಸುವವರ ಕಣ್ಣುಗಳಲ್ಲಿ ಪ್ರಿಯರು ಸುಂದರಾಂಗರೆ, ಅಲ್ಲವೆ,ಸುಪ್ತದೀಪ್ತಿ? ನಿಮ್ಮಿಂದಾಗಿ ಹಳೆಯ ಕನ್ನಡ ಚಲನಚಿತ್ರದ ಹಾಡೊಂದು ನೆನಪಾಯಿತು:
"ದೂರದಿಂದ ಬಂದಂಥ ಸುಂದರಾಂಗ ಜಾಣ,
ನೋಟದಲ್ಲೆ ಸೂರೆಗೊಂಡ ಅಂತರಂಗ ಪ್ರಾಣ!"