Saturday, March 13, 2010

ಧೀಮಂತ ನಾಡು

Where the mind is without fear and the head is held high;
Where knowledge is free;
Where the world has not been broken up into fragments by narrow domestic walls;
Where words come out from the depth of truth;
Where tireless striving stretches its arms towards perfection;
Where the clear stream of reason has not lost its way into the dreary desert sand of dead habit;
Where the mind is lead forward by thee into ever-widening thought and action-
Into that heaven of freedom, my Father, let my country awake.

ಗುರುದೇವ ರವೀಂದ್ರನಾಥ ಠಾಕೂರರ ‘ಗೀತಾಂಜಲಿ’ ಕವನ ಸಂಕಲನದಲ್ಲಿ ಬರುವ ಗೀತೆಯಿದು. ಈ ಕವನಕ್ಕೆ ಶೀರ್ಷಿಕೆ ಇಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಬರೆದ ಈ (ಮೂಲ ಬಂಗಾಲಿ) ಕವನದಲ್ಲಿ ಠಾಕೂರರು ದೇವರಲ್ಲಿ ಪ್ರಾರ್ಥಿಸುತ್ತಿರುವುದು, ಕೇವಲ ತಮ್ಮ ದೇಶದ ರಾಜಕೀಯ ಸ್ವಾತಂತ್ರ್ಯವನ್ನಷ್ಟೇ ಅಲ್ಲ. ತಮ್ಮ ನಾಡಿನ ಜನ ಧೀಮಂತರಾಗಬೇಕು ಎನ್ನುವದು ಅವರ ಅಭೀಪ್ಸೆ. ಆದುದರಿಂದ ನಾವು ಈ ಗೀತೆಗೆ ‘ಧೀಮಂತ ನಾಡು’ ಎನ್ನುವ ಶೀರ್ಷಿಕೆಯನ್ನು ಕೊಡಬಹುದೇನೊ? ಈ ಕವನದ ಭಾವಾನುವಾದ ಇಂತಿದೆ:

ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ,
ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು,
ಎಲ್ಲಿ ಜ್ಞಾನಸಾಧನೆಗೆ ಇರುತಿಹುದು
ಸಂಕೋಲೆಯಿರದ ಒಲವು;

ಎಲ್ಲಿ ಸಂಕುಚಿತ ಗೋಡೆಯಿಂದ
ಒಡೆದಿಲ್ಲ ನಮ್ಮ ಧರೆಯು;
ಎಲ್ಲಿ ನಿಜದ ಒಡಲಾಳದಿಂದ
ಹೊಮ್ಮುವುದು ನಮ್ಮ ನುಡಿಯು;

ಎಲ್ಲಿ ಪೂರ್ಣತೆಯ ಸಾಧಿಸಲು ಶ್ರಮವು
ನಡೆದಿಹುದು ಹಗಲು ಇರುಳು;
ತಿಳಿಯಾದ ತಿಳಿವನ್ನು ತಡೆದಿಲ್ಲ ಎಲ್ಲಿ
ಕುರುಡು ನಂಬಿಕೆಯ ಮರಳು;

ಅನವರತ ಅರಳುತಿಹ ತಿಳಿವನ್ನು, ಕ್ರಿಯೆಯನ್ನು
ಎಲ್ಲಿ ನಿನ್ನಯ ಬೆಳಕು ನಡೆಸುತಿಹುದು;
ಆವೊಂದು ಸ್ವಾತಂತ್ರ್ಯ-ಸ್ವರ್ಗದಲಿ, ತಂದೆಯೆ,
ಉದಯವಾಗಲಿ ನನ್ನ ಧೀಮಂತ ನಾಡು.


‘ಗೀತಾಂಜಲಿ’ ಕ್ರಿ.ಶ. ೧೯೧೩ರ ಸುಮಾರಿಗೆ ಇಂಗ್ಲೀಶಿನಲ್ಲಿ ಪ್ರಕಟವಾಯಿತು. ಅದಕ್ಕೂ ಮೊದಲೇ ಬಂಗಾಲಿಯಲ್ಲಿ ಈ ಗೀತೆಗಳು ತುಂಬ ಜನಪ್ರಿಯವಾಗಿದ್ದವು. ಇಂಗ್ಲಿಶ್ ಆವೃತ್ತಿಗೆ ಇದೀಗ ೯೭ ವರ್ಷಗಳು ತುಂಬಿದವು. ಬಹುಶ: ರವೀಂದ್ರನಾಥ ಠಾಕೂರರು ಈ ಮೇಲಿನ ಗೀತೆಯನ್ನು ರಚಿಸಿ ಈಗ ನೂರು ವರ್ಷಗಳು ಆಗಿರಬಹುದು. ಆದರೆ ‘ಧೀಮಂತ ನಾಡಿ’ನ ಅವರ ಕನಸು ಕನಸಾಗಿಯೇ ಉಳಿದಿದೆ. ದೇವರಲ್ಲಿ ಅವರು ಮಾಡಿದ ಪ್ರಾರ್ಥನೆ ಇನ್ನೂ ಫಲಪ್ರದವಾಗಬೇಕಾಗಿದೆ.

ಈ ಗೀತೆಯ ಮೊದಲ ನುಡಿಯನ್ನು ನೋಡಿರಿ:
ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ,
ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು;
ಎಲ್ಲಿ ಜ್ಞಾನಸಾಧನೆಗೆ ಇರುತಿಹುದು
ಸಂಕೋಲೆಯಿರದ ಒಲವು;

ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ, ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು;
 ‘ನಿರ್ಭೀತ ಮನ’ ಎಂದರೇನು? ತನಗೆ ಕಂಡ ಸತ್ಯವನ್ನು ಭಯವಿಲ್ಲದೇ ಹೇಳುವ ಮನಸ್ಸು. ಈ ಭಯ ಯಾತಕ್ಕೆ ಬರಬೇಕು? ಸಮಾಜದಲ್ಲಿ oppression ಇದ್ದಾಗ ಭಯವಿರುತ್ತದೆ. ಇದು ಸರಕಾರದ ಭಯವಿರಬಹುದು ಅಥವಾ ಸಮಾಜದ ಭಯವಿರಬಹುದು. ಸದ್ಯಕ್ಕೆ ನಮ್ಮ ದೇಶದಲ್ಲಿ ಒಂದು ಮಣ್ಣು ಹುಳವೂ ಸಹ ಸರಕಾರಕ್ಕೆ ಅಂಜುತ್ತಿಲ್ಲ. ಅಂದ ಮೇಲೆ ಉಳಿದದ್ದು ಸಮಾಜದ ಭಯ.

ಭಾರತ ದೇಶದಲ್ಲಿ ಅನೇಕ ಧರ್ಮಗಳಿವೆ, ಅನೇಕ ಸಮಾಜಗಳಿವೆ. ಇವುಗಳಲ್ಲಿ ಕೆಲವು ಸಮಾಜಗಳು ಮುಕ್ತ ಸಮಾಜಗಳು. ಅಂದರೆ ಇಲ್ಲಿ ಆಂತರಿಕ ಟೀಕೆ, ಟಿಪ್ಪಣಿಗಳಿಗೆ ಅವಕಾಶವಿದೆ. ಕೆಲವು ಸಮಾಜಗಳು ಮುಚ್ಚಿದ ಸಮಾಜಗಳು. ಇಲ್ಲಿ ಟೀಕೆಗಳಿಗೆ, ಸ್ವತಂತ್ರ ಆಲೋಚನೆಗಳಿಗೆ ಅವಕಾಶವಿಲ್ಲ. ಇಂತಹ ಸಮಾಜಗಳು ಸುಧಾರಿಸುವದು ಹೇಗೆ? ನಮ್ಮ ದೇಹದ ಒಂದು ಭಾಗದಲ್ಲಿ ಹುಣ್ಣಾದರೆ, ಅದನ್ನು ತಕ್ಷಣವೇ ಗುಣಪಡಿಸದಿದ್ದರೆ, ಇಡೀ ದೇಹಕ್ಕೇ ಅಪಾಯ. ಅದೇ ರೀತಿಯಲ್ಲಿ, ಒಂದು ಸಮಾಜವು ರೋಗಗ್ರಸ್ತವಾದರೆ, ಇಡೀ ದೇಶವೇ ರೋಗಿಯಾಗುತ್ತದೆ. ಇದನ್ನು ಅರಿತುಕೊಂಡು, ಆ ಸಮಾಜವು ತನ್ನನ್ನು ತಾನು ತಿದ್ದಿಕೊಳ್ಳಬೇಕು. ಅದಾಗದಿದ್ದರೆ, ಸರಕಾರವೇ ಶಸ್ತ್ರಚಿಕಿತ್ಸೆಗೆ ಮುಂದಾಗಬೇಕು. ಅದು ಸದ್ಯದ ‘ಮತಪ್ರಜಾಪ್ರಭುತ್ವ’ದಲ್ಲಿ ಸಾಧ್ಯವೆ?  ಹಾಗಿದ್ದಾಗ, ರವೀಂದ್ರನಾಥ ಠಾಕೂರರ ಈ ಕನಸು ಕನಸಾಗಿಯೇ ಉಳಿಯುವದು.

ಯಾವುದೇ ಸಮಾಜದಲ್ಲಿಯ ದೋಷವನ್ನು ತೋರಿಸುವ ಮುಕ್ತ ಮನಸ್ಸು ಭಾರತೀಯನಿಗೆ ಇರಬೇಕು. ಆದರೆ ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ, ನಿಮ್ಮ ಸಮಾಜವನ್ನೇ ನೀವು ಟೀಕಿಸಿದಾಗ ಪಾಖಂಡಿಗಳಾಗುತ್ತೀರಿ. ಬೇರೆ ಸಮಾಜವನ್ನು ಟೀಕಿಸಿದರೆ ಕೋಮುವಾದಿ ಆಗುತ್ತೀರಿ. ಹೀಗಿದ್ದಾಗ, ಗುರುದೇವ ಠಾಕೂರರು ಬಯಸುವ ‘ತಲೆ ಎತ್ತಿ ನಿಲುವ ನಿಲುವು’ ಹೇಗೆ ಸಾಧ್ಯವಾದೀತು? ಅದರ ಬದಲಾಗಿ ತಲೆ ತಪ್ಪಿಸಿ ಬದುಕುವ ಪರಿಸ್ಥಿತಿ ಬಂದಿದೆ, ಸತ್ಯವಂತರಿಗೆ.  ಇಂಥವರ ಅಜ್ಞಾತವಾಸವು ನಿಜಕ್ಕೂ ಮರುಕವನ್ನು ಹುಟ್ಟಿಸುವಂತಹದು.

ಎಲ್ಲಿ ಜ್ಞಾನಸಾಧನೆಗೆ ಇರುತಿಹುದು ಸಂಕೋಲೆಯಿರದ ಒಲವು”:
ಹಿಂದೂ ಸಮಾಜದಲ್ಲಿರುವ ವ್ಯಕ್ತಿಗಳಿಗೆ ಒಂದೇ faith ಎನ್ನುವದಿಲ್ಲ. ಆತ ವೈದಿಕನಿರಬಹುದು, ಅವೈದಿಕನಿರಬಹುದು, pagan ಇರಬಹುದು ಅಥವಾ ನಾಸ್ತಿಕನೂ ಆಗಿರಬಹುದು. ಆತನು Hindu by culture. ಆದರೆ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಸಮಾಜಗಳಲ್ಲಿ ಆ ವ್ಯಕ್ತಿಯು ತನ್ನ ಸಮಾಜದ ಮೂಲತತ್ವಗಳಲ್ಲಿ ಶ್ರದ್ಧೆ ಇಡಬೇಕಾಗುತ್ತದೆ. ಅಂದರೆ ಅವನು ಕ್ರಿಶ್ಚಿಯನ್ ಅಥವಾ ಮುಸ್ಲಿಮ್ ಆಗಿರುವದು by faith.

ಈ ರೀತಿಯ ವ್ಯವಸ್ಥೆಯಿಂದಾಗಿ ಹಿಂದೂ ಸಮಾಜಕ್ಕೆ ಒಳ್ಳೆಯದೂ ಆಗಿದೆ, ಕೆಟ್ಟದ್ದೂ ಆಗಿದೆ. ಒಳ್ಳೆಯದೆಂದರೆ ಆತನಿಗೆ ಸಂಕೋಲೆಯಿಲ್ಲದ ಜ್ಞಾನಸಾಧನೆಗೆ ಅನುಕೂಲವಾಯಿತು. ಈ ಉದಾಹರಣೆ ನೋಡಿರಿ:
ಸೂರ್ಯನ ಸುತ್ತಲೂ ಪೃಥ್ವಿಯು ತಿರುಗುತ್ತಿದೆ ಎಂದು ಗೆಲಿಲಿಯೋ ಹೇಳಿದಾಗ, ಧರ್ಮನಿಂದನೆಯ ಅಪವಾದಕ್ಕೆ ಗುರಿಯಾಗಬೇಕಾಯಿತು. ಯಾಕೆಂದರೆ ಇದು ಕ್ರಿಶ್ಚಿಯನ್ ಶ್ರದ್ದೆಯ ವಿರುದ್ಧವಾದ ಹೇಳಿಕೆ ಎಂದು. ಆದರೆ, ಗೆಲಿಲಿಯೋನಿಗಿಂತ ಸಾವಿರ ವರ್ಷಗಳ ಮೊದಲೇ ಆರ್ಯಭಟನು ಪೃಥ್ವಿ ಹಾಗು ಇತರ ಗ್ರಹಗಳು ಸೂರ್ಯನ ಸುತ್ತಲೂ ತಿರುಗುತ್ತವೆ ಎಂದು ಹೇಳಲು ಹೆದರಿಕೆ ಅಥವಾ ಸಂಕೋಚ ಪಡಬೇಕಾಗಿರಲಿಲ್ಲ. ವೇದಗಳಲ್ಲಿ ಏನೇ ಹೇಳಿರಲಿ, ಶಾಸ್ತ್ರಗಳ ಶ್ರದ್ಧೆ ಏನೇ ಇರಲಿ, ಜ್ಞಾನಸಾಧನೆಗೆ ಅದು ಸಂಕೋಲೆಯಾಗಬಾರದು ಎನ್ನುವ ವಿವೇಕ ಇಲ್ಲಿದೆ.

ಇನ್ನು  ಈ ವ್ಯವಸ್ಥೆಯಿಂದ ಆದಂತಹ ಕೆಡಕೆಂದರೆ ಹಿಂದೂ ಸಮಾಜವು ವಿಭಿನ್ನ ತತ್ವಗಳನ್ನು ಪ್ರತಿಪಾದಿಸುವ ಉಪಸಮಾಜಗಳಲ್ಲಿ ಒಡೆದು ಹೋಯಿತು. ಶ್ರದ್ಧೆಯನ್ನು ಪ್ರಶ್ನಿಸುವ ವ್ಯಕ್ತಿಗಳೇ ಇಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವದರಿಂದ ಹಿಂದೂ ಸಮಾಜದಲ್ಲಿ ಒಕ್ಕಟ್ಟು ಎನ್ನುವದು ಇರದೇ ಹೋಯಿತು. ಇರಲಿ, ಗುರುದೇವ ಠಾಕೂರರು ಇಂತಹ ಜ್ಞಾನಾನ್ವೇಷಣೆಯ ಒಲವನ್ನು ಎಲ್ಲ ಭಾರತೀಯರಲ್ಲೂ ಮೂಡಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.

ಈಗ ಈ ಗೀತೆಯ ಎರಡನೆಯ ನುಡಿ:
ಎಲ್ಲಿ ಸಂಕುಚಿತ ಗೋಡೆಯಿಂದ
ಒಡೆದಿಲ್ಲ ನಮ್ಮ ಧರೆಯು;
ಎಲ್ಲಿ ನಿಜದ ಒಡಲಾಳದಿಂದ
ಹೊಮ್ಮುವುದು ನಮ್ಮ ನುಡಿಯು;

‘ವಸುಧೈವ ಕುಟುಂಬಕಮ್’, ಇಡೀ ಜಗತ್ತೇ ಒಂದು ಕುಟುಂಬ.
ಈ ಜಗತ್ತು ದೇಶದೇಶಗಳಲ್ಲಿ, ಧರ್ಮಗಳಲ್ಲಿ ಒಡೆದು  ಹೋಗುವದು ಬೇಡವೆನ್ನುವದು ಗುರುದೇವರ ಆಶಯವಾಗಿದೆ. ಆದರೆ ಅವರ ಈ ಆಶಯವೂ ಸಹ ಫಲಿಸಲಿಲ್ಲ. ವಾಸ್ತವದಲ್ಲಿ, ನಮ್ಮ ದೇಶದಲ್ಲಿಯೇ ನೂರಾರು ಹೊಸ ಗೋಡೆಗಳು ಎದ್ದಿವೆ. ಈ ಗೋಡೆಗಳನ್ನು ಸಮರ್ಥಿಸುವವರಿಗೇ ಮನ್ನಣೆ ಸಿಗುತ್ತಿದೆ.
ನಿಜವನ್ನು ಅರಿತವರು, ಕೆಲವೊಮ್ಮೆ ಕಣ್ಣು ಮುಚ್ಚಿಕೊಂಡಿರುತ್ತಾರೆ, ಕೆಲವೊಮ್ಮೆ ಭಯದಿಂದ ಬಾಯಿ ಮುಚ್ಚಿಕೊಂಡಿರುತ್ತಾರೆ.
ನಿಷ್ಠುರವಾದ ಒಡಲಾಳದ ನಿಜವು ಅನಾಥವಾಗಿದೆ.

ಗುರುದೇವರ ಗೀತೆಯ ಮೂರನೆಯ ನುಡಿಯು ಹೀಗಿದೆ:
ಎಲ್ಲಿ ಪೂರ್ಣತೆಯ ಸಾಧಿಸಲು ಶ್ರಮವು
ನಡೆದಿಹುದು ಹಗಲು ಇರುಳು;
ತಿಳಿಯಾದ ತಿಳಿವನ್ನು ತಡೆದಿಲ್ಲ ಎಲ್ಲಿ
ಕುರುಡು ನಂಬಿಕೆಯ ಮರಳು;

ಪೂರ್ಣತೆಯನ್ನು ಸಾಧಿಸಲು ಅನವರತ ಶ್ರಮ ಬೇಕು. ರವೀಂದ್ರನಾಥ ಠಾಕೂರರೇ, ಮತ್ತೊಂದೆಡೆಯಲ್ಲಿ ಹೀಗೆ ಹೇಳಿದ್ದಾರೆ: ‘ಒಂದು ಗುಲಾಬಿ ಹೂವನ್ನು ರೂಪಿಸಲು ದೇವರು ಲಕ್ಷ ವರ್ಷಗಳನ್ನು ತೆಗೆದುಕೊಂಡಿದ್ದಾನೆ.’
ಆದುದರಿಂದ ಈಗಿನ ನಮ್ಮ ಲಘುಸಾಧನೆಯೇ ಪರಮೋಚ್ಚವೆನ್ನುವ ಭ್ರಮೆ ಹೋಗಬೇಕು.
ಆದರೆ ಈ ಸಾಧನೆಗೆ ಜ್ಞಾನವೂ ಬೇಕಲ್ಲವೆ? ನಮ್ಮ ಕುರುಡು ಸಂಪ್ರದಾಯಗಳೆನ್ನುವ ಮರಳುಗಾಡಿನಲ್ಲಿ ತಿಳಿವಿನ ತೊರೆಯು ಬತ್ತಿ ಹೋಗಿ ಬಿಡಬಹುದು. ಆದುದರಿಂದ, ನಮ್ಮ ತಿಳಿವು, ನಮ್ಮ ತರ್ಕ ಇವು ಸಂಪ್ರದಾಯವನ್ನು ಯಾವಾಗಲೂ ಪರೀಕ್ಷಿಸುತ್ತಲೇ ಇರಬೇಕು ಹಾಗೂ ತಪ್ಪು ಸಂಪ್ರದಾಯಗಳನ್ನು ದಾಕ್ಷಿಣ್ಯವಿಲ್ಲದೇ ತ್ಯಜಿಸಬೇಕು.

ನಾಲ್ಕನೆಯ ನುಡಿ:
ಅನವರತ ಅರಳುತಿಹ ತಿಳಿವನ್ನು,ಕ್ರಿಯೆಯನ್ನು
ಎಲ್ಲಿ ನಿನ್ನಯ ಬೆಳಕು ನಡೆಸುತಿಹುದು;
ಆವೊಂದು ಸ್ವಾತಂತ್ರ್ಯ-ಸ್ವರ್ಗದಲಿ, ತಂದೆಯೆ,
ಉದಯವಾಗಲಿ ನನ್ನ ಧೀಮಂತ ನಾಡು.

ತಮ್ಮ ತಿಳಿವು ಕೊನೆಯ ಘಟ್ಟವನ್ನು ಮುಟ್ಟಿಬಿಟ್ಟಿದೆ ಎಂದು ಗುರುದೇವರು ಭಾವಿಸುವದಿಲ್ಲ. ಇದು ಯಾವಾಗಲೂ ಅರಳುತ್ತಿರಲೇ ಇರಬೇಕಾದ ತಿಳಿವು. ಆದುದರಿಂದ ಇದು ದೈವಶ್ರದ್ಧೆಯಿಂದ ಲಭಿಸುವ ತಿಳಿವು. ಈ ತಿಳಿವಿಗೆ ತಕ್ಕಂತೆ ನಮ್ಮ ಕ್ರಿಯೆಯೂ ಸಹ ಉನ್ನತ ಸ್ತರಕ್ಕೆ ಏರುತ್ತಿರಬೇಕು. ಆ ತಿಳಿವಳಿಕೆ ಮೂಡಿದ ನಾಡೇ ನಿಜವಾದ ಸ್ವತಂತ್ರ ನಾಡು. ದೇವರೆ, ನಿನ್ನ ಅನುಗ್ರಹದಿಂದ ನನ್ನ ನಾಡಿಗೆ ಅಂತಹ ಸ್ವಾತಂತ್ರ್ಯ ಲಭಿಸಲಿ ಎಂದು ಗುರುದೇವರು ಪ್ರಾರ್ಥಿಸುತ್ತಾರೆ.

ಗುರುದೇವರ ಬಯಕೆ ಸಫಲವಾಗಲಿ.
Amen!

54 comments:

ಚುಕ್ಕಿಚಿತ್ತಾರ said...

kanasu nanasaaguvude....? kaayabekide... innoo bahudinagalu.....????????

Subrahmanya said...

ಕಾಕಾಶ್ರೀ,
ಗೀತಾಂಜಲಿಯಿಂದ ಹೆಕ್ಕಿ ಅನುವಾದಿಸಿ ಉತ್ತಮ ವಿಚಾರಗಳನ್ನು ತಿಳಿಸಿದ್ದೀರಿ. "ನಿಮ್ಮ ಸಮಾಜವನ್ನೇ ನೀವು ಟೀಕಿಸಿದಾಗ ಪಾಖಂಡಿಗಳಾಗುತ್ತೀರಿ. ಬೇರೆ ಸಮಾಜವನ್ನು ಟೀಕಿಸಿದರೆ ಕೋಮುವಾದಿ ಆಗುತ್ತೀರಿ."...ಸತ್ಯವಾದ, ವಾಸ್ತವದ ಮಾತು. ಧೀಮಂತ ನಾಡು , ಸದ್ಯಕ್ಕೆ ಕನಸೇ ಎನಿಸುತ್ತದೆ. Lets have hopes !.

Pavan said...

ಸುನಾಥ ಅವರೇ, ಒಂದು ಸಮಾಜ ವೈವಿಧ್ಯತೆಯನ್ನು ಹೇಗೆ ಅರಾಧಿಸಬಹುದು ಎಂದು ಚೆನ್ನಾಗಿ articulate ಮಾಡಿದ್ದಿರಿ. ಧರ್ಮವು ಸಮಾಜ ಕೇಂದ್ರಿತವಾಗದೆ ವ್ಯಕ್ತಿ ಕೇಂದ್ರಿತ ವಾದರೆ ಅದು ಎಷ್ಟು tolerant ಆಗಬಹುದು ಎನ್ನುವುದಕ್ಕೆ ಹಿಂದೂ ಧರ್ಮ ಒಂದು live testimony .

Unknown said...

ಸುನಾಥರೆ,
ನೀವು ಮಾಡಿದ ಭಾವಾನುವಾದ ನನಗೆ ತುಂಬ ಹಿಡಿಸಿತು.
ಕೊನೆಯ ಸಾಲು.."ಆವೊಂದು ಸ್ವಾತಂತ್ರ್ಯ-ಸ್ವರ್ಗದಲಿ, ತಂದೆಯೆ,ಉದಯವಾಗಲಿ ನನ್ನ ಧೀಮಂತ ನಾಡು."...ನನಗೆ ಮೆಚ್ಚುಗೆಯಾಯಿತು.

Raghu said...

yestu chennagide..yestu arthavattagide...!
Raaghu

sunaath said...

ವಿಜಯಶ್ರೀ,
Let us hope for the best!

sunaath said...

ಪುತ್ತರ್,
ನೂರು ವರುಷಗಳ ಹಿಂದಿನ ಕನಸು.
ತಾಳ್ಮೆಯಿಂದ ಕಾಯೋಣ!

sunaath said...

ಪವನ,
ನೀವು ಹೇಳುತ್ತಿರುವದು ನಿಜ. ವ್ಯಕ್ತಿಕೇಂದ್ರಿತವಾದ ಸಮಾಜಗಳಲ್ಲಿಯೇ ಪ್ರಗತಿಯಾಗುತ್ತಿರುವದು ನಮ್ಮ ಕಣ್ಣಿಗೆ ಕಾಣುತ್ತಿರುವ ವಾಸ್ತವ.

sunaath said...

ವನಮಾಲಾ,
ಅನುವಾದ ಮೆಚ್ಚಿಕೊಂಡಿದ್ದೀರಿ. ನಿಮಗೆ ಧನ್ಯವಾದಗಳು.

sunaath said...

ರಾಘು,
ಗುರುದೇವರ ಕಾವ್ಯವೆಂದ ಮೇಲೆ ಹೇಳುವದೇನಿದೆ?
ಈ ಕವನದಲ್ಲಂತೂ ಅವರ ಮನದಾಳದ ಮಿಡಿತವು ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ.

ದೀಪಸ್ಮಿತಾ said...

ಭಾರತೀಯ ಪ್ರಸ್ತುತ ಸಮಾಜದ ಬಗ್ಗೆ ಸರಿಯಾಗಿ ವಿಶ್ಲೇಷಿಸಿದ್ದೀರಿ

ಮನಮುಕ್ತಾ said...

ಕಾಕಾ,
ಗೀತಾ೦ಜಲಿ ಕವನ ಸ೦ಕಲನದ ಗೀತೆಯ ಭಾವಾನುವಾದ ಮಾಡಿ ಅರ್ಥ ತಿಳಿಸಿದ್ದಕ್ಕೆ ಧನ್ಯವಾದಗಳು.ಓದಿ ತು೦ಬಾ ಖುಶಿಯಾಯ್ತು.

ಉನ್ನತ ಸ್ಥರದ ತಿಳುವಳಿಕೆ ಮೂಡಿದ೦ತಹ ನಿಜವಾದ ಸ್ವತ೦ತ್ರ ನಾಡು ನಮ್ಮದಾಗಲಿ,ಎ೦ಬ ರವೀ೦ದ್ರರ ಬಯಕೆ, ಬೇಡಿಕೆಗಳು ಎಲ್ಲರ ಬಯಕೆ,ಬೇಡಿಕೆಗಳಾಗಿ ನಿಜವಾದ ಸ್ವತ೦ತ್ರ ನಾಡು ನಮ್ಮದಾಗಲಿ ಎ೦ದು ಆಶಿಸುತ್ತೇನೆ.

sunaath said...

ದೀಪಸ್ಮಿತಾ,
ಸದ್ಯದ ಭಾರತೀಯ ಸಮಾಜವು ಗುರುದೇವರ ಪ್ರಾರ್ಥನೆಯ ವಿರುದ್ಧ ದಿಕ್ಕಿನಲ್ಲಿಯೇ ಸಾಗಿದೆ! ನಮ್ಮ ಸಮಾಜದ ಸುಧಾರಣೆಗೆ ಕಲ್ಕಿಯ ಅವತಾರವೇ ಆಗಬೇಕೇನೊ?

sunaath said...

ಮನಮುಕ್ತಾ,
ನಾವೆಲ್ಲರೂ ಒಂದಾಗಿ ಪ್ರಾರ್ಥಿಸಿದರೆ, ಗುರುದೇವರ ಅಭೀಪ್ಸೆ
ಕೈಗೂಡಬಹುದು.

ತೇಜಸ್ವಿನಿ ಹೆಗಡೆ said...

ಕಾಕಾ,
ನಮ್ಮ ಪ್ರೈಮರಿ ಸ್ಕೂಲ್‌ನಲ್ಲಿ ನಾವು ಇದೇ ಪ್ರಾರ್ಥನೆ ಹಾಡುತ್ತಿದ್ದೆವು. ಎನೋ ಧನ್ಯತಾ ಭಾವ ಓದುವಾಗ.... ಅಲ್ಲಿಯ ಟೀಚರ್ ಒಬ್ಬರು ಈ ಕವನವನ್ನು ಹೀಗೆ ಅನುವಾದಿಸಿದ್ದರು.

"ಎಲ್ಲಿ ಮನಕಳುಕಿರದೋ
ಎಲ್ಲಿ ತೆಲೆಬಾಗಿರದೋ
ಎಲ್ಲಿ ತಿಳಿವಗೆ ತೊಡಕು
ತೋರದಿಹುದಲ್ಲಿ"

ಹೀಗೇ ಸಾಗುತ್ತದೆ ಹಾಡು. ಪೂರ್ತಿ ಅನುವಾದ ಈಗ ಮರೆತುಹೋಗಿದೆ. ಆದರೆ ನನ್ನ ಸಂಗ್ರಹದಲ್ಲಿದೆ.

ಮತ್ತೆ ಹಳೆಯ ಸವಿ ನೆನಪುಗಳನ್ನು ನೆನಪಿಸಿದ್ದಕ್ಕೆ ತುಂಬಾ ಧನ್ಯವಾದಗಳು.

ಇಂತಹ ನಾಡೊಂದನ್ನು ಕಟ್ಟಲು ಖಂಡಿತ ಇಂದಿನ ಸಮಾಜದಿಂದ ಅಸಾಧ್ಯ!!! :(

ಜಲನಯನ said...

ಸುನಾಥ್ ಸರ್, ಗುರೂಜಿಯ ಅಂದಿನ ವಸ್ತುಸ್ಥಿತಿಯೇ ಬೇರೆಯಿತ್ತು..ಅಂದು ದಾಸ್ಯದ ಅಳುಕು, ಭಯ, ಹೊಅರಬರುವ ತವಕ, ತುಡಿತ, ಅಕ್ರೋಷ...ಹೀಗೆಲ್ಲಾ...ಆದರೂ ಮೂಲಭೂತ ಗ್ರಹಿಕೆಯನ್ನು ಇಂದಿನ ಸ್ಥಿತಿಗೆ ಸರಿಹೊಂದಿಸಿ..ಮಾರ್ಪಡಿಸಿ, ಅಳವಡಿಸಿ ಮುನ್ನಡೆಯುವ ಎದೆಗಾರಿಕೆ ಸರ್ವರಲ್ಲಿ ಬರಬೇಕು..ಅಂತಹ ಮಾರ್ಗದರ್ಶಕರೂ ಹುಟ್ಟಿಬರಬೇಕು... ನಮ್ಮ ಶಾಲೆಯ ಸಮಯದ ಪದ್ಯವನ್ನು ನೆನಪಿಸಿ ಭಾವಾನುವಾದ ಕೊಟ್ಟು ವಿವವರಿಸಿದಿರಿ ಧನ್ಯವಾದ

ಹರೀಶ ಮಾಂಬಾಡಿ said...

ಕಾಲೇಜಿನಲ್ಲಿ ಈ ಹಾಡಿನ ಕುರಿತು ಮೇಷ್ಟ್ರು ಹೇಳಿದ್ದು ನೆನಪು. ಮತ್ತೆ ಆ ವಾಸ್ತವ ವಿಚಾರ ತಂದದ್ದಕ್ಕೆ ಧನ್ಯವಾದ ಸರ್.

umesh desai said...

ಕಾಕಾ ವಿರೋಧಿ ಮುಗೀತು ವಿಕೃತಿ ಬಾಗಿಲಹೊರಗಿದೆ ಅದರಲ್ಲಾದರೂ ಕನಸಿನ ಗಿಡ ನಳನಳಿಸಲಿ..
ನಿಮ್ಮ ಭಾವಾನುವಾದ ಹಾಗೂ ವಿಶ್ಲೇಷಣೆಗೊಂದು ಸಲಾಮು....

sunaath said...

ತೇಜಸ್ವಿನಿ,
ನಿಮ್ಮ ಶಾಲೆಯಲ್ಲಿಯ ಆ ಪ್ರಾರ್ಥನೆ ನಿಮ್ಮ ಸಂಗ್ರಹದಲ್ಲಿ ನಿಮಗೆ ದೊರಕುವದು ಸಾಧ್ಯವಾದರೆ, ದಯವಿಟ್ಟು ಕಳುಹಿಸಿ ಕೊಡಿ.

sunaath said...

ಜಲನಯನ,
ಲೋಕಮಾನ್ಯ ತಿಲಕರು ೧೮೯೩-೯೪ರ ಸುಮಾರಿಗೆ ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂದು ಗುಡುಗಿದರು. ಈ ಸ್ವರಾಜ್ಯದ ಅರ್ಥವನ್ನು self rule ಎಂದು ಮಾಡಲಾಗಿದೆಯೇ ಹೊರತು ಸ್ವಾತಂತ್ರ್ಯ ಎಂದು ಮಾಡಲಾಗಿಲ್ಲ.
೧೯೨೯ರಲ್ಲಿ ಕಾಂಗ್ರೆಸ್ ಪಕ್ಷವು ಪೂರ್ಣ ಸ್ವಾತಂತ್ರ್ಯವನ್ನು ಕೋರಿ ಗೊತ್ತುವಳಿಯನ್ನು ಪಾಸು ಮಾಡಿತು.
ಆದರೆ, ೧೯೧೩ಕ್ಕೂ ಮೊದಲೇ, ರವೀಂದ್ರನಾಥ ಠಾಕೂರರು,
"Into that HEAVEN OF FREEDOM,my Father, let my country awake" ಎಂದದ್ದು ಗಮನಿಸತಕ್ಕ ಮಾತಾಗಿದೆ.

sunaath said...

ಹರೀಶರೆ,
ಸುಮಾರು ನೂರು ವರ್ಷಗಳಷ್ಟು ಹಿಂದೆ ಬರೆದ ಈ ಗೀತೆ, ಈಗಲೂ relevant ಆಗುತ್ತಿರುವದು ಸೋಜಿಗದ ವಿಷಯ!

sunaath said...

ಉಮೇಶ,
ವಿರೋಧಿ, ವಿಕೃತಿ ಇವು ಬಾಳಿನಲ್ಲಿ ಬರದೇ ಇರಲಿ ಎಂದು ಬೇಡಿಕೊಳ್ಳೋಣ!

ಮನಸಿನಮನೆಯವನು said...

'sunaath' ಅವ್ರೆ..,

ಚಂದದ ಬರಹ..
ನಿಮ್ಮ ಬ್ಲಾಗಿನಲ್ಲಿ ಓದಲು ಸ್ವಲ್ಪ ಕ್ಲಿಷ್ಟವೆನಿಸುತ್ತಿದೆ.. ಲಿಪಿ ಬದಲಿಸಿ.

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

ಸೀತಾರಾಮ. ಕೆ. / SITARAM.K said...

ಸುನಾಥರೇ,
ರವಿ೦ದ್ರನಾಥ ಟ್ಯಾಗೋರ್-ರ ಅತ್ಯುತ್ತಮ ಕೃತಿ ಪರಿಚಯಿಸಿದ್ದಲ್ಲದೇ ಮುದ್ದಾಗಿ ಸುಲಲಿತ ಪದಗಳಲ್ಲಿ ಅನುವಾದಿಸಿದ್ದಿರಿ. ಎಲ್ಲಕ್ಕಿ೦ತಾ ಹೆಚ್ಚ್ಚಾಗಿ ಅವರ ಆಶಯ ಮಸ್ತು ಪ್ರಸ್ತುತ ವಸ್ತುಸ್ಥಿತಿಯನ್ನ ವಿಶದವಾಗಿ ವಿವರಿಸಿ ಅವರ ಆಶಯದಲ್ಲಿ ನಾವೆಲ್ಲಿದ್ದೇವೆ ಎ೦ಬ ಮೂಲ ಶೋಧಿಸಿದ್ದಿರಿ. ಮನಸ್ಸು ವಗ್ರವಾಗುತ್ತದೆ ಇದನ್ನು ನೆನೆದಾಗ. ಶುಭದಿನಗಳಿಗೆ ಕಾಯುವಾ ಆಷ್ಟೇ!
ವೈಚರಿಕ ಬರಹಕ್ಕಾಗಿ ಧನ್ಯವಾದಗಳು.

ಶೆಟ್ಟರು (Shettaru) said...

ಕಾಕಾ,

ಒಳ್ಳೆಯ ಅನುವಾದ, ಗೀತಾಂಜಲಿಯ ಇನ್ನಷ್ಟು ಅನುವಾದಗಳು ನಮಗೆ ಓದಲು ಸಿಗಲಿ

-ಶೆಟ್ಟರು

sunaath said...

ಗುರು-ದೆಸೆ,
ನನಗೆ ಗಣಕ-ತಾಂತ್ರಿಕ ಮಾಹಿತಿ ತಿಳಿಯದು. ಸ್ವಲ್ಪ ವಿವರ ಕೊಟ್ಟರೆ ಪ್ರಯತ್ನಿಸುತ್ತೀನಿ. ಧನ್ಯವಾದಗಳು.

sunaath said...

ಸೀತಾರಾಮರೆ,
Let us not loose hope, ಅಲ್ಲವೆ?

sunaath said...

ಶೆಟ್ಟರ,
ಗುರುದೇವರ ಒಂದು ಕವನದ ಅನುವಾದವೇನೋ, by Providence, ಸಾಧ್ಯವಾಯಿತು. ಅಷ್ಟೇ ನನ್ನ ಸಾಮರ್ಥ್ಯ.

ಬಿಸಿಲ ಹನಿ said...

ನಾನು ಈ ಕವನವನ್ನು ಅನುವಾದಿಸಲು ಹೋಗಿ ಸೋತಿದ್ದೇನೆ. ಆದರೆ ನಿಮ್ಮ ಅನುವಾದ ಅನುವಾದವಲ್ಲವೇನೋ ಎಂಬಷ್ಟು ಚನ್ನಾಗಿ ಬಂದಿದೆ. ನಾನು ಇಂಗ್ಲೀಷ ಸಾಹಿತ್ಯದ ವಿದ್ಯಾರ್ಥಿಯಾಗಿದ್ದಾಗ ಇದನ್ನು ಓದಿದ್ದೆ. ಮತ್ತು ಒಬ್ಬ ಅಧ್ಯಾಪಕನಾಗಿ ಬೇರೆ ಬೇರೆ ತರಗತಿಗಳಿಗೆ ಬೇರೆ ಬೇರೆ ಸ್ತರದಲ್ಲಿ ಪಾಠ ಮ್ಮಾಡಿದ್ದೇನೆ. ಪ್ರತಿ ಸಾರಿ ಪಾಠ ಮಾಡುವಾಗ ಹೊಸ ಹೊಸ ಅರ್ಥಗಳನ್ನು ಕಂಡುಕೊಂಡಿದ್ದೇನೆ.
ನಿಮ್ಮ ಅನುವಾದ ಮತ್ತು ವಿಶ್ಲೇಷಣೆಗೆ ಧನ್ಯವಾದಗಳು.

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

sunaath said...

ಉದಯ,
ಕೆಲವೊಮ್ಮೆ ಆಕಸ್ಮಿಕವಾಗಿ ಒಳ್ಳೆಯ ಭಾವಾನುವಾದ ಸಾಧ್ಯವಾಗುವದು. ಇದು ಹಾಗೆಯೆ. ಈ ಅನುವಾದವನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

sunaath said...

ಪ್ರಿಯ ಭಟ್ಟರೆ,
ಮನದ ಹತ್ತಿರ ಬಂದು ನೀವು ಹೇಳಿದ ಶುಭಾಶಯ ಮನಕೆ ತಟ್ಟದೆ ಇರುತ್ತದೆಯೆ? ನಿಮಗೂ ಸಹ ನನ್ನ ಹೃತ್ಪೂರ್ವಕ ಶುಭಾಶಯಗಳು.

ತೇಜಸ್ವಿನಿ ಹೆಗಡೆ said...

ಕಾಕಾ,

ಸಧ್ಯ ಆ ಹಾಡು ಮಂಗಳೂರಿನಲ್ಲಿದೆ. ಆದಷ್ಟು ಬೇಗ ನಿಮಗೆ ಮೈಲ್ ಮಾಡುವೆ.

sunaath said...

ತೇಜಸ್ವಿನಿ,
ಥ್ಯಾಂಕ್ಸ!

ಮನಸಿನ ಮಾತುಗಳು said...

sunaath ಅವರೇ,
ಈ ಗೀತೆ ಮೊದಲೇ ಕೇಳಿದ್ದೆ.. ಆದ್ರೆ ಇಷ್ಟು ಚೆನ್ನಾಗಿ ಇದರ ಅರ್ಥವನ್ನು ಬಿಡಿಸಿಡುವ ಪ್ರಯತ್ನವನ್ನು ಮಾಡಿರಲಿಲ್ಲ...
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಿರಿ...
ಖುಷಿ ಆಯ್ತು... ಈ ಗೀತೆ one of my favourites ... :-)

sunaath said...

ದಿವ್ಯಾ,
ಇದು ನನ್ನ favourite ಗೀತೆಯೂ ಅಹುದು. ಇದು ಒಂದು ರೀತಿಯಲ್ಲಿ ರಾಷ್ಟ್ರಗೀತೆಯೇ ಆಗಿದೆ.

ಸಾಗರಿ.. said...

ಕಾಕಾ,
ಬಹಳ ಚೆನ್ನಾಗಿದೆ ಭಾವಾನುವಾದ. ಎಷ್ಟು ಎತ್ತರದ ನಿಲುವು ಮತ್ತು ಬಯಕೆಗಳಿವೆ ಕವನಗಳಲ್ಲಿ

ಗೌತಮ್ ಹೆಗಡೆ said...

ಸುನಾಥ್ ಜಿ ತುಜೆ ಸಲಾಂ :)ನಿಮ್ಮ ಬ್ಲಾಗ್ ಪೋಸ್ಟ್ ಅಂದ್ರೆ ಸುಮ್ಮನೆ ಅಲ್ಲ .ತುಂಬಾ ತಯ್ಯಾರಿ ನಡೆಸಿ ವಿಷಯದ ಆಳಕ್ಕೆ ಹೊಕ್ಕು ನಮ್ಮೆದುರು ಒಳ ತಿರುಳನ್ನ ಸುಲಿದ ಬಾಳೆ ಹಣ್ಣಿನ ತೆರದಿ ತೆರೆದಿಡುತ್ತೀರಿ...:)

sunaath said...

ಸಾಗರಿ,
ಧನ್ಯವಾದಗಳು. ಉನ್ನತ ವ್ಯಕ್ತಿತ್ವದ ವಿಚಾರಗಳು ಉನ್ನವಾಗಿರುವದು ಸಹಜವೇ ಆಗಿದೆ.

sunaath said...

ಗೌತಮ,
ಸುಲಿದದ್ದೇ ಆಗಿರಲಿ, ಹಾಗೇ ಇರಲಿ, ಒಟ್ಟಿನಲ್ಲಿ ನಿಮಗೆ ಬಾಳೆ ಹಣ್ಣು ತಿನ್ನಿಸಿದರೆ, ನನಗೆ ಅದೇ ಸಂತೋಷ.

ಶ್ರೀನಿವಾಸ ಮ. ಕಟ್ಟಿ said...

ಇದು ರವೀಂದ್ರರ ಬಹು ಸುಂದರ ಕವನ. ನಾನು ೧೯೬೧-೬೨ ರಲ್ಲಿ ೧೧ನೇ ಕ್ಲಾಸಿನಲ್ಲಿದ್ದಾಗ ಓದಿದ್ದು. ಭಾವ ಪೂರ್ಣವಾಗಿ, ದೇಶಭಕ್ತಿ ಉಕ್ಕುವಂತೆ ನನಗೆ ಅಥಣಿಯ ಜೆ.ಏ.ಹಾಯಸ್ಕೂಲಿನಲ್ಲಿ ಓದಿಸಿದವರು ಶ್ರೀ ವಿ. ಡಿ. ದೇಶಪಾಂಡೆ(ವಸಂತ ಮಾಸ್ತರು) ಮತ್ತು ಶ್ರೀ ವಿ. ಕೆ.ಕಡಕೋಳ ಮಾಸ್ತರರು. ಈ ಕವನವನ್ನು ಪ್ರಾತಃಸ್ಮರಣೀಯರಾದ ಶ್ರೀ ಬಿ.ಎಮ್.ಶ್ರೀ ಯವರೂ ಕನ್ನಡದಲಿ ಭಾವಾನುವಾದ ಮಾಡಿದ್ದಾರೆಂದು ನೆನಪು. ನೀವು "ಧೀಮಂತ ನಾಡು" ಎಂದು ಬಹು ಸುಂದರವಾಗಿ ಹೆಸರಿಸಿದ್ದೀರಿ. "ಗೀತಾಂಜಲಿ"ಯ ಇನ್ನೂ ಕೆಲ ಕವಿತೆಗಳನ್ನು ಹೀಗೆಯೇ ಬರೆಯಿರಿ. ಚೆನ್ನಾಗಿರುವದು.

ನೀವು ಈ ಹಿಂದೆ ‘ಶ್ರುತಿ’ ಮತ್ತು ‘ಶೃತಿ’ ಕುರಿತು ಬರೆದಿದ್ದು, ಅದರ ಕುರಿತು ನಾನು ಶ್ರೀ ದ್ವಾರಕೀಶ್ ಅವರೊಡನೆ ಚರ್ಚಿಸಿದೆ. ಅವರು ಹೇಳಿದ ಪ್ರಕಾರ, ಅವರು ಇಟ್ಟ ಹೆಸರು ‘ಶ್ರುತಿ’ ಎಂದು. ಸಂಗೀತದ ‘ತಾಳ’ ಎಂಬರ್ಥದಲ್ಲಿ. ಅದು ‘ಶೃತಿ’ ಯಾವಾಗ, ಹೇಗೆ ಆಯಿತು ಎಂಬುದು ಅವರಿಗೆ ಗೊತ್ತಿಲ್ಲವಂತೆ. ಇನ್ನೊಂದು ಮಾತು, ‘ಶೃತಿ’ ಶಬ್ದಕ್ಕೆ ಬೇಯಿಸಿದ ಕೋಳಿ ಅಥವಾ ಕೋಳಿ ಮೊಟ್ಟೆ ಎಂಬರ್ಥವಿದೆ ಎಂದು ಬರೆದಿರುವಿರಿ. ನನಗೆ ಕನ್ನಡದ / ಸಂಸ್ಕೃತದ ಯಾವ ನಿಘಂಟುವಿನಲ್ಲಿಯೂ ಈ ‘ಶೃತಿ’ ಶಬ್ದ ದೊರೆಯಲೇ ಇಲ್ಲ.ನಿಮಗೆ ಈ ಅರ್ಥ ಎಲ್ಲಿ ದೊರೆಯಿತು ? ಮತ್ತು ಈ ಶಬ್ದದ ಉತ್ಪತ್ತಿ ಹೇಗೆ ? ತಿಳಿಸುವಿರಾ ?

ಆರ್. ವಿಮಲ್, ಧಾರವಾಡ. said...

ರಾಷ್ಟ್ರಭಕ್ತಿ ಮತ್ತು ರಾಷ್ಟ್ರಪ್ರೇಮವನ್ನು ಉಕ್ಕಿಸುವ ಈ ಕವನವನ್ನು ಬರೆದ ಮಹಾಕವಿ ರವೀಂದ್ರರೇ ಬ್ರಿಟಿಷ್ ದೊರೆಯನ್ನು ಸ್ವಾಗತಿಸಲು ‘ಜನ ಗಣ ಮನ ’ ವನ್ನೂ ಬರೆದರೆಂದರೆ ಆಶ್ಚರ್ಯವಲ್ಲವೆ ?

sunaath said...

ಪ್ರಿಯ ಶ್ರೀ ಕಟ್ಟಿಯವರೆ,
ಧನ್ಯವಾದಗಳು. ಅನುವಾದದಲ್ಲಿ ಮೂಲದ ಸೊಬಗು ಹಾಗು spirit ಬರುವದು ಬಹಳ ಕಠಿಣ ಕಾರ್ಯ. ಬೇಂದ್ರೆಯವರೊಬ್ಬರೆ ಅದನ್ನು ಸಾಧ್ಯ ಮಾಡಿದ್ದಾರೆ. ಅವರ ‘ಮೇಘದೂತ’ ಹಾಗು ‘ನಾಳೆ ಬೆಳಗ್ಗೆ ಬಂದೈತಿ ಮಹಾಮರಣಾ’ ಇವು ಅನುವಾದವೆಂದು ಅನಿಸದಂತಿವೆ.
ಶೃತಿ ಪದಕ್ಕೆ cooked, boiled, dressed ಅನ್ನುವ ಅರ್ಥವನ್ನು ನಾನು ನೋಡಿದ್ದೇನೆ. ನಿಘಂಟು ಯಾವುದೆಂದು ಹುಡುಕಿ ನಿಮಗೆ ತಿಳಿಸುತ್ತೇನೆ. ನಿರ್ದೇಶಕರ ಅಥವಾ ನಿರ್ಮಾಪಕರ ಕಣ್ತಪ್ಪಿ ಕೆಲವು ಚಲನಚಿತ್ರಗಳಲ್ಲಿ ಹೀಗೆ ಆಗುವದುಂಟು. ಉದಾಹರಣೆಗೆ ಗಿರೀಶ ಕಾರ್ನಾಡರು ನಿರ್ದೇಶಿಸಿದ ‘ಉತ್ಸವ’ ಚಲನಚಿತ್ರವು ಶೂದ್ರಕನ ‘ಮೃಚ್ಛಕಟಕಮ್’ ಮೇಲೆ ಆಧಾರಿತವಾಗಿದ್ದು, Titlesಗಳಲ್ಲಿ ಭಾಸನ ನಾಟಕದ ಆಧಾರ ಎಂದು ಬಂದಿದೆ. ಇದು ಕಾರ್ನಾಡರ ತಪ್ಪು ಇರಲಾರದು.

sunaath said...

ವಿಮಲ್,
ತಾವು ‘ಅಧಿನಾಯಕ’ ಎಂದು ಮಾಡಿದ ಸಂಬೋಧನೆ ದೇವರ ಪ್ರತಿಯಾಗಿದೆಯೇ ಹೊರತು ಕಿಂಗ್ ಜಾರ್ಜ ಬಗೆಗೆ ಅಲ್ಲ ಎಂದು ಠಾಕೂರರೇ ಸ್ಪಷ್ಟೀಕರಿಸಿದ್ದಾರೆ. ಈಗಂತೂ, ಅಧಿನಾಯಕ ಎಂದರೆ ಮಹಾತ್ಮಾ ಗಾಂಧಿ ಎನ್ನುವ ಭಾವನೆ ಸಾರ್ವತ್ರಿಕವಾಗಿದೆ.
So, ಸತ್ಯ ಯಾವುದು? ಠಾಕೂರ ಮತ್ತು ದೇವರು ಇಬ್ಬರೇ ಬಲ್ಲರು!

shivu.k said...

ಸುನಾಥ್ ಸರ್,

ಕೆಲಸ ಜಾಸ್ತಿ ಇದ್ದಿದ್ದರಿಂದ ತಡವಾಗಿ ಬರುತ್ತಿದ್ದೇನೆ ಕ್ಷಮೆಯಿರಲಿ. ರವೀಂದ್ರ ನಾಥ ಟ್ಯಾಗೋರರ ಒಂದು ಸುಂದರ ಕವಿತೆಯನ್ನು ಅನುವಾದಿಸಿ ಭಾವಾರ್ಥವನ್ನು ವಿವರಿಸಿದ್ದೀರಿ..
ಸದ್ಯದ ಸ್ಥಿತಿಯನ್ನು ವಿವರಿಸಿ ನಾವು ಹೇಗಿದ್ದೇವೆ ಅಂತ ತೋರಿಸಿಕೊಟ್ಟಿದ್ದೀರಿ...ಅದಕ್ಕಾಗಿ ಧನ್ಯವಾದಗಳು.
ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ..

sunaath said...

ಶಿವು,
ಕ್ಷಮೆಯ ಪ್ರಶ್ನೆ ಎಲ್ಲಿದೆ? ಕಾರ್ಯಬಾಹುಲ್ಯದಿಂದ ಹೀಗಾಗುವದು ಸಹಜ.

ಶ್ರೀನಿವಾಸ ಮ. ಕಟ್ಟಿ said...

ಶೂದ್ರಕನ ನಾಟಕದ ಹೆಸರು "ಮೃಛ್ಚಕಟಿಕ", "ಮೃಛ್ಚಕಟಕ" ಅಲ್ಲ. ಗಿರೀಶ್ ಕಾರ್ನಾಡರು ತಪ್ಪು ಮಾಡವದು ಸಾಧ್ಯವೇ ಇಲ್ಲ ಎಂಬುದೇನಿಲ್ಲವಲ್ಲ ! ತಪ್ಪು ಮಾಡಿರಲೂ ಬಹುದು! ಎಲ್ಲರೂ ಮನುಷ್ಯರೇ ತಾನೇ ? "ಅಕಸ್ಮಾತ್" ತಪ್ಪು ಆಗಿರಲೂ ಬಹುದು.

ನೀವು ಬಿ.ಎಮ್.ಶ್ರೀ ಯವರ "ಇಂಗ್ಲಿಷ್ ಗೀತೆ"ಗಳನ್ನು ಓದಿರಬಹುದು. ಭಾಷಾಂತರವೆಂದು ಅನಿಸುವದೇ ಇಲ್ಲ.
"ಪಡುವ ದಿಬ್ಬದ ಗೌಡನೊಬ್ಬನು,
ಬಿಡದೆ ತೊರೆಯನ ಕೂಗಿಕೊಂಡನು,
ತಡೆಯದೀಗಲೆ ಗಡುವ ಹಾಯಿಸು,
ಕೊಡುವೆ ಕೇಳಿದ ಹೊನ್ನನು"

ಅಥವಾ,

"ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ,
ಕೈ ಹಿಡಿದು ನಡೆಸೆನ್ನನು" ಪದ್ಯಗಳು ಉದಾಹರಣೆ.

"ಶೃತಿ" ಶಬ್ದದ ನಿಘಂಟುವಿನ ಅರ್ಥ ಮತ್ತು ಶಬ್ದೊತ್ಪತ್ತಿಯನ್ನು ನಿಮಗೆ ಸಿಕ್ಕರೆ ತಿಳಿಸಿ. ನಾನು ಇಲ್ಲಿಯ ಒಂದಿಬ್ಬರು ಸಂಸ್ಕೃತ ಪಂಡಿತರೊಡನೆ ಚರ್ಚಿಸಿದೆ. ನನ್ನ ಸಮಸ್ಯೆಗೆ ಪರಿಹಾರ ದೊರೆಯಲಿಲ್ಲ.

ಆರ್. ವಿಮಲ್ said...

ಲೋಕಮಾನ್ಯ ಬಾಲ ಗಂಗಾಧರ ತಿಲಕರು "ಸ್ವರಾಜ್ಯ" ಕ್ಕೆ ಸ್ವಾತಂತ್ರ್ಯ ಎಂಅರ್ಥದಲ್ಲಿಯೇ ಹೇಳಿದ್ದು ! ಕಾಂಗ್ರೆಸ್ಸನ್ನು ಬಿಡಿ, ದೇಶಕ್ಕೆ ಸ್ವಾಧೀನತೆ ದೊರೆತದ್ದು ಕೇವಲ ಕಾಂಗ್ರೆಸ್ಸ ಮತ್ತು ಎಮ್. ಕೆ. ಗಾಂಧಿಯವರಿಂದ ಎಂದೇ ಬಿಂಬಿಸುತ್ತಾರೆ. ಅದಕ್ಕೆ ಮೂಲ ಕಾರಣ ಇವರಾರೂ ಅಲ್ಲ! ಎರಡನೇ ವಿಶ್ವ ಮಹಾಯುದ್ಧ ! ಯುದ್ಧದ ನಂತರ ಇಂಗ್ಲಿಷರಿಗೆ ಭಾರತ ಒಂದು ಹೊರೆ ಎನಿಸಿತು. ಇಲ್ಲಿಂದ ಲೂಟಿ ಮಾಡುವದು ಏನೂ ಉಳಿದಿರಲಿಲ್ಲ ! ಅದಕ್ಕಾಗಿಯೇ ಬಿಟ್ಟುಕೊಟ್ಟದ್ದು ! ಹೊರತು, ಕಾಂಗ್ರೆಸ್ಸ ಅಥವಾ ಗಾಂಧಿಗಾಗಿ ಅಲ್ಲ. ಕಾಂಗ್ರೆಸ್ಸಿನ ಮತ್ತು ಗಾಂಧಿಯವರ ತಥಾಕಥಿತ "ಅಹಿಂಸೆ" ಹೋರಾಟ ಅದಕ್ಕೆ ಸಹಾಯವಾಗಿರಬಹುದು. ಅದೇ ಕಾರಣವಲ್ಲ. ಇದು ಐತಿಹಾಸಿಕ ಸತ್ಯವಲ್ಲವೆ ?

ಇನ್ನು "ಅಧಿನಾಯಕ" ಎಂದರೆ ದೇವರೆಂದು ಹೇಳಿದ್ದೀರಿ. ಹಾಗೆ ನೋಡಿದರೆ ಸರ್ವ ಶಬ್ದಗಳೂ "ಪರಮಾತ್ಮ" ವಾಚಕವೆ !ಆದರೆ ದೊರೆಯನ್ನು ಸ್ವಾಗತಿಸುವ ಗೀತೆಯಲ್ಲಿ, ಅಧಿನಾಯಕ ದೇವರಾಗಲಾರ ! ಗಾಂಧಿಯವರಂತೂ ಅಲ್ಲವೇ ಅಲ್ಲ

sunaath said...

ಕಟ್ಟಿಯವರೆ,
ಮೃಚ್ಛಕಟಿಕಮ್ ಬರೆಯುವ ಬದಲಾಗಿ ನಾನು ಮೃಚ್ಛಕಟಕ ಎಂದು ತಪ್ಪಾಗಿ ಬರೆದಿದ್ದನ್ನು ತೋರಿದ್ದಕ್ಕಾಗಿ ಧನ್ಯವಾದಗಳು. ಇನ್ನು ಗಿರೀಶ ಕಾರ್ನಾಡರು ನಿರ್ದೇಶಿಸಿದ ‘ಉತ್ಸವ’ ಸಿನೆಮಾ. ಕಾರ್ನಾಡರು ಈ ವಿಷಯದಲ್ಲಿ ಮೇಧಾವಿಗಳು. ಅವರಿಂದ ತಪ್ಪು ಆಗಿರಬಹುದೆಂದು ನನಗೆ ತೋರುವದಿಲ್ಲ. ಇದು ಬೇರಾರದೋ ತಪ್ಪಿರಬಹುದು.

ನಮ್ಮ ಬ್ಲಾ^ಗ್ ಸ್ನೇಹಿತ ಶ್ರೀ ಸುಬ್ರಹ್ಮಣ್ಯರು ಶೃತ=cooked,boiled ಎನ್ನುವ ಅರ್ಥವನ್ನು ಶ್ರೀ ಗುರುನಾಥ ಜೋಶಿ ಅವರು ಸಂಪಾದಿಸಿದ ಕನ್ನಡ-ಕನ್ನಡ-ಇಂಗ್ಲಿಶ್ ಅರ್ಥಕೋಶದಲ್ಲಿ ಶೋಧಿಸಿದ್ದಾರೆ. ಈ ಅರ್ಥಕೋಶವನ್ನು ಶ್ರೀ ಬಿ.ಜಿ.ಸಂಕೇಶ್ವರ ಪ್ರಕಟಿಸಿರುತ್ತಾರೆ.
ನಾನು ನೋಡಿದ ಪದವು ಯಾವುದೋ ಸಂಸ್ಕೃತ ಅರ್ಥಕೋಶದಲ್ಲಿದ್ದು ಅದನ್ನು ಹುಡುಕಿ ನಿಮಗೆ ಮತ್ತೊಮ್ಮೆ ತಿಳಿಸುತ್ತೇನೆ.

ಶ್ರೀಕಂಠಯ್ಯನವರ ಕೆಲವು ಅನುವಾದಗಳು ಅತ್ಯುತ್ತಮ ಅನುವಾದಗಳು.ಆದರೆ ಮೂಲಕವನದಲ್ಲಿರುವ spirit,ಜೋಶ್ ಅಥವಾ ಆರ್ತತೆ ಮೊದಲಾದ ಗುಣಗಳು
ಅನುವಾದದಲ್ಲಿ ಮಾಯವಾಗುವ ಸಂಭವವು ಅಧಿಕವಾಗಿರುತ್ತದೆ. ಉದಾಹರಣೆಗೆ ಶೆಲ್ಲಿ ರಚಿಸಿದ ಕವನವನ್ನೇ
ನೋಡಿರಿ:
"One word is too often profaned.."
ಶ್ರೀಯವರ ಅನುವಾದ ಇಂತಿದೆ:
"ಒಂದು ಮಾತನು ಲೋಕ ಹೊಲೆಗೆಡಿಸಿಕೊಂಡಿಹುದು.."
ಶಬ್ದಶಃ ಇದು ಅತ್ಯುತ್ತಮ ಅನುವಾದ.
ಆದರೆ ಮೂಲಕವನದಲ್ಲಿರುವ yearning ಅನುವಾದದಲ್ಲಿ
ಕಾಣದಾಗಿದೆ.

ಬೇಂದ್ರೆಯವರು ಅನುವಾದಿಸಿದ ‘ಮೇಘದೂತ’ದಲ್ಲಾಗಲೀ ಅಥವಾ ‘ಫಿಲಿಪೀನಾ ನಾಡಗೀತೆ’ಯಲ್ಲಾಗಲೀ ಮೂಲದ ಸಾರ್ವತ್ರಿಕ ವಿರಹಾನುಭವ ಅಥವಾ ನಾಡಪ್ರೇಮಕ್ಕೆ ಸ್ವಲ್ಪವೂ
ಕುಂದು ಬಂದಿಲ್ಲ ಎಂದು ನನಗೆ ಭಾಸವಾಗುತ್ತದೆ.

ನಿಮ್ಮ ಜಿಜ್ಞಾಸೆಗಾಗಿ ಧನ್ಯವಾದಗಳು. ಇದು ನನ್ನ ತಿಳಿವಳಿಕೆಯನ್ನೂ ವಿಸ್ತರಿಸುತ್ತದೆ.

sunaath said...

ವಿಮಲರೆ,
ತಿಲಕರ ‘ಸ್ವರಾಜ್’ಘೋಷಣೆಗೆ ಬಹುಶ: ಶಿವಾಜಿಯ ‘ಹಿಂದ್-ಸ್ವರಾಜ್’ ಘೋಷಣೆಯು ಪ್ರೇರಣೆಯಾಗಿರಬಹುದು. ತುರುಕರು, ಮೊಗಲರು ಮೊದಲಾದ ಪರಕೀಯರ ದಬ್ಬಾಳಿಕೆಯಿಂದ, ಹಿಂದುಸ್ತಾನದ ನಿವಾಸಿಗಳನ್ನು ಮುಕ್ತಗೊಳಿಸುವದೇ ಈ ‘ಹಿಂದ್-ಸ್ವರಾಜ್’ ಘೋಷಣೆಯ ಹಿಂದಿನ ಭಾವವಾಗಿರಬಹುದು.
ಇದೇ ಅರ್ಥದಲ್ಲಿ, ಭಾರತೀಯರನ್ನು ಇಂಗ್ಲೀಶರ ಪರಕೀಯ ಆಡಳಿತೆಯಿಂದ ಸ್ವತಂತ್ರಗೊಳಿಸುವ ಅರ್ಥದಲ್ಲಿಯೇ, ತಿಲಕರು
ಸ್ವರಾಜ್ ಘೋಷಣೆಯನ್ನು ಮಾಡಿರುವದರಲ್ಲಿ ಸಂದೇಹವಿಲ್ಲ.
‘ಜನಗಣಮನ ಅಧಿನಾಯಕ ಜಯಹೇ’ ಎನ್ನುವ ಸಾಲನ್ನು ಕೇಳುವಾಗ ಇದು ಪರಮಾತ್ಮನನ್ನು ಉದ್ದೇಶಿಸಿ ಬರೆದ ಸಾಲು ಎಂದು ನನಗೂ ಅನ್ನಿಸುವದಿಲ್ಲ. ಆದರೆ, ಸ್ವತಃ ಠಾಕೂರರೇ ಆ ತರಹದ ವಿವರಣೆ ಕೊಟ್ಟಿದ್ದಾರೆ. ಇದು ಜಾ^ರ್ಜ ಅರಸನಿಗೆ ಸಂಬೋಧಿಸಿದ ಗೀತೆ ಅಲ್ಲ ಎಂದು ಅವರೇ ಸ್ಪಷ್ಟವಾಗಿ ತಿಳಿಸಿದ್ದಾರೆ.ಕವಿಯ ಸ್ಪಷ್ಟೀಕರಣವನ್ನು
ಅದರ face value ಮೇಲೆ ತೆಗೆದುಕೊಳ್ಳಲೇ ಬೇಕಲ್ಲವೆ?

Subrahmanya said...

ಮಾನ್ಯ ಶ್ರೀ ಕಟ್ಟಿಯವರೆ,

" ಶೃ " ಎಂಬ ವಿಶೇಷಣಕ್ಕೆ ಎರಡು ಉದಾಹರಣೆಗಳು..

ಋಗ್ವೇದ ಸಂಹಿತೆಯ ಪ್ರಥಮ ಮಂಡಲದ ೧೦೪ ನೆಯ ಸೂಕ್ತದ ೯ನೆಯ ಋಕ್ಸಂಖ್ಯೆಯಲ್ಲಿ ಹೀಗೆ ಹೇಳಲ್ಪಟ್ಟಿದೆ..

೧) " ಉರುವ್ಯಚಾ ಜಠರ ಆ ವೃಷಸ್ವ ಪಿತೇವ ನಃ ಶೃಣುಹಿ ಹೂಯಮಾನಃ ||

ಹೀಗೆ ಶೃ ಎಂಬ ಅಥವ ಶೃತ ಎಂಬ ಪದವು ಋಗ್ವೇದ ಸಂಹಿತೆಯಲ್ಲೇ ಪುನರಾವರ್ತಿತಗೊಂಡಿದೆ. ಋಗ್ವೇದದಲ್ಲಿ ಅಗ್ನಿ ಮತ್ತು ಅಗ್ನಿಗೆ ಸಮರ್ಪಿಸುವ ಹವಿಸ್ಸುಗಳ ಪ್ರಸ್ತಾವವೂ ಹೆಚ್ಚು ಇದೆ. ಹೀಗೆ ಸಮರ್ಪಿತವಾದ ಹವಿಸ್ಸು "ಹುತ" (ಹುತಾಶನ) ವಾಗುವುದು ಅಥವಾ ಮೂಲಾರ್ಥದಲ್ಲಿ ಶೃತ ವಾಗುವುದು. ಇದು ನಾನು ಕಂಡುಕೊಂಡಿರುವ ವಿಚಾರ..ಇದಕ್ಕೆ ಅಪವಾದಗಳು, ಬೇರೆ ಅರ್ಥಗಳಿದ್ದಲ್ಲಿ ದಯಮಾಡಿ ತಿಳಿಸಿಕೊಡಿ.

ಮತ್ತು

೨) ಅತ್ಯಂತ ಜನಪ್ರಿಯ ಮತ್ತು ಪುರಾಣೋಕ್ತ ’ಅಯಿಗಿರಿ ನಂದಿನಿ’ ಸ್ತೋತ್ರದಲ್ಲಿ ಹೀಗೆ ಹೇಳಲ್ಪಟ್ಟಿದೆ

"ಅಯಿ ಸುಮನಃ ಸುಮನಃ ಸುಮನಃ ಸುಮನಃ ಸುಮನೋಹರ ಕಾಂತಿಯುತೇ
ಶೃತ ರಜನೀ ರಜನೀ ರಜನೀ ರಜನೀ ರಜನೀಕರವಕ್ತ್ರವೃತೇ
ಸುನಯನ ವಿಭ್ರಮ ರಭ್ರಮ ರಭ್ರಮ ರಭ್ರಮ ರಭ್ರಮರಾಧಿಪತೇ ......"

ಇಲ್ಲಿ ಶೃತ ರಜನೀ ಎಂಬ ಪದವನ್ನು ಗಮನಿಸಿದರೆ ಇನ್ನೊಂದಷ್ಟು ವಿಷಯಗಳು ಹೊರಬರಬಹುದೆನಿಸುತ್ತದೆ.

... ಇನ್ನು ಶ್ರೀಯುತ ಸುನಾಥರು ತಿಳಿಸಿರುವಂತೆ ಈ ಪದವು "ಶ್ರ‍ೀ ಜೋಶಿ"ಯವರ ನಿಘಂಟಿನಲ್ಲಿ ಪ್ರಸ್ತಾವವಾಗಿದೆ

ವೈರುಧ್ಯಗಳಿದ್ದಲ್ಲಿ ದಯಮಾಡಿ ತಿಳಿಸಿ. ಧನ್ಯವಾದಗಳು.

ಶ್ರೀನಿವಾಸ ಮ. ಕಟ್ಟಿ said...

ಶ್ರೀ ಸುಬ್ರಮಣ್ಯರಿಗೆ ಮತ್ತು ನಿಮಗೆ ‘ಶೃತಿ’ ಕುರಿತು ಬರೆದದ್ದಕ್ಕೆ ಬುಟ್ಟಿ ತುಂಬ ಧನ್ಯವಾದಗಳು. ‘ಶೃ’ ದ ವೇದಾರ್ಥದ ಬಗ್ಗೆ ಇಲ್ಲಿಯ ಸಂಸ್ಕೃತ ಪಂಡಿತರೊಬ್ಬರೊಡನೆ ಚರ್ಚಿಸಿ ಬರೆಯುವೆ. ಇದರ ಮೂಲ ಕ್ರಿಯಾಪದ ಯಾವದು ? ನಿಮಗೆ ತಿಳಿದಿದ್ದರೆ ತಿಳಿಸಿ.

sunaath said...

ಪ್ರಿಯ ಕಟ್ಟಿಯವರೆ,
ಶೃತ ಪದದ ಅರ್ಥವನ್ನು boiled, cooked ಎಂದು ಆಪ್ಟೆಯವರ ಸಂಸ್ಕೃತ-ಇಂಗ್ಲಿಶ್ ಅರ್ಥಕೋಶದಲ್ಲಿ ಕೊಡಲಾಗಿದೆ.

ಮನಸು said...

habba!!! estu chennagide ... tumba istavaytu sir nimma lekhana yaavagalu visheshavaage irutte..

dayavittu kshamisi tadavaada anisikegaLige...