Friday, August 6, 2010

ಜಗನ್ನಾಥ ಪಂಡಿತ…………ಗಂಗಾಲಹರಿ

ಬೇಂದ್ರೆಯವರು ಕಾಶಿ ಕ್ಷೇತ್ರಕ್ಕೆ ಹೋದಾಗ, ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ‘ಗಂಗಾಷ್ಟಕ’ ಎನ್ನುವ ಕವನವನ್ನು ರಚಿಸಿದರು. ಆ ಕವನದಲ್ಲಿಯ ಒಂದು ನುಡಿ ಹೀಗಿದೆ:

‘ರಾಜರಮಣಿಯರೆದೆಗೆ ಬೆಳಗಿನಲ್ಲುಳಿದಂಥ ಕಸ್ತೂರಿ ಬಿದ್ದು ಕೆಳಕೆ
ಮೈತೊಳೆದ ನೀರಿನೊಡ ಗಂಗೆಯಲಿ ಕೂಡಿದರೆ ಮುಕ್ತಿ ಕಸ್ತೂರಿ ಮೃಗಕೆ’
 ---ಹೀಗೆ ಹಾಡಿದ ಕವಿಯ ನಂಬಿ ನಿನ್ನಲ್ಲಿ ಮಿಂದೆ; ನಾನವನ ಬಟ್ಟೆಯವನು
ನನ್ನ ತಾಯಿಗೆ ಮುಕ್ತಿ ಮಿಂದಂದೆಯಾಗಿತ್ತು; ನಾನವಳ ಹೊಟ್ಟೆಯವನು.

ಈ ನುಡಿಯ ಮೊದಲೆರಡು ಸಾಲುಗಳು ಕವಿ ಜಗನ್ನಾಥ ಪಂಡಿತನ ‘ಗಂಗಾಲಹರಿ’ ಕಾವ್ಯದಿಂದ ಎತ್ತಿಕೊಂಡದ್ದು. ಸಂಸ್ಕೃತ ಕಾವ್ಯದ ಮೂಲಸಾಲುಗಳು ಹೀಗಿವೆ:

“ಪ್ರಭಾತೇ ಸ್ನಾಂತೀನಾಂ ನೃಪತಿ-ರಮಣೀನಾಂ ಕುಚತಟೀ-
ಗತೋ ಯಾವನ್ ಮಾತರ್ ಮಿಲತಿ ತವ ತೋಯೈರ್ಮೃಗಮದ:
ಮೃಗಾಸ್ತಾವದ್ ವೈಮಾನಿಕ ಶತಸಹಸ್ರೈಃ ಪರಿವೃತಾಃ
ವಿಶಂತಿ ಸ್ವಚ್ಛಂದಂ ವಿಮಲವಪುಷೋ ನಂದನವನಮ್”

ಈ ನುಡಿಯ ಭಾವಾರ್ಥ ಹೀಗಿದೆ:
ರಾಜಸ್ತ್ರೀಯರು ಸುಗಂಧಕ್ಕಾಗಿ ಕಸ್ತೂರಿ ಮೃಗದ ಮದವನ್ನು ಪೂಸಿಕೊಂಡಿರುತ್ತಾರೆ. ಬೆಳಗಿನಲ್ಲಿ ಆ ಸ್ತ್ರೀಯರು ಗಂಗಾಸ್ನಾನವನ್ನು ಮಾಡಿದಾಗ ಈ ಮದವು ಗಂಗಾನದಿಯ ನೀರಿನಲ್ಲಿ ಸೇರಿಕೊಳ್ಳುತ್ತದೆ.ಈ ಮದವನ್ನು ನೀಡಿದ ಕಸ್ತೂರಿ ಮೃಗಕ್ಕೆ ಸ್ವರ್ಗಪ್ರಾಪ್ತಿಯಾಗಲು ಇಷ್ಟೇ ಸಾಕು. ಅದು ವಿಮಲದೇಹದೊಂದಿಗೆ ನಂದನವನದಲ್ಲಿ ವಿಹರಿಸುತ್ತದೆ.

ಬೇಂದ್ರೆಯವರು ತಾವೂ ಸಹ ಕವಿಯಾದುದರಿಂದ, ಜಗನ್ನಾಥ ಪಂಡಿತನ ಕಾವ್ಯದ ಅಭಿಮಾನಿಯಾದುದರಿಂದ, ಏಕಲವ್ಯನಂತೆ ಅವನ ಮಾನಸಿಕ ಶಿಷ್ಯರಾದದ್ದರಿಂದ, ’ನಾನವನ ಬಟ್ಟೆಯವನು’ ಎಂದು ಹೇಳುತ್ತಾರೆ. ಬಟ್ಟೆ ಎಂದರೆ ಮಾರ್ಗ, ಪಥ ಎಂದರ್ಥ. ಕವಿ ಜಗನ್ನಾಥ ನಡೆದ ಹಾದಿಯಲ್ಲಿ ನಡೆದೇ ಬೇಂದ್ರೆಯವರು ‘ಗಂಗಾವತರಣ’ ರಚಿಸಿದರು.

ಕಸ್ತೂರಿ ಮೃಗದಿಂದ ಹುಟ್ಟಿದ ಮದವು ಗಂಗೆಯಲ್ಲಿ ಸೇರಿದಾಗ, ಆ ಮೃಗಕ್ಕೆ ಸ್ವರ್ಗಪ್ರಾಪ್ತಿಯಾಯಿತು ಎಂದು ಜಗನ್ನಾಥ ಪಂಡಿತ ಕವನಿಸಿದ್ದಾನೆ. ಅದೇ ರೀತಿಯಲ್ಲಿ, ತಾವು ಗಂಗೆಯಲ್ಲಿ ಮಿಂದದ್ದರಿಂದ, ತಮ್ಮ ತಾಯಿಗೂ ಸ್ವರ್ಗಪ್ರಾಪ್ತಿಯಾಗಬೇಕು ಎನ್ನುವದು ಬೇಂದ್ರೆಯವರ ಆಶಯ.

ಬೇಂದ್ರೆಯವರಿಗೆ ಈ ರೀತಿ ಸ್ಫೂರ್ತಿ ನೀಡಿದ ಜಗನ್ನಾಥ ಪಂಡಿತನು ಸಂಸ್ಕೃತದ ಉದ್ದಾಮ ಪಂಡಿತ ಹಾಗು ಕವಿ. ಈತನು ಮೊಗಲ ಬಾದಶಹರಾದ ಜಹಾಂಗೀರ, ಶಹಾಜಹಾನ ಹಾಗು ಔರಂಗಜೇಬ ಇವರ ಕಾಲದಲ್ಲಿ ಜೀವಿಸಿದ್ದನು.

ಜಗನ್ನಾಥನ ಹುಟ್ಟೂರು ಆಂಧ್ರಪ್ರದೇಶದ ವೆಂಗಿನಾಡು. ತಾಯಿ ಲಕ್ಷ್ಮೀ ಹಾಗು ತಂದೆ ಪೇರುಭಟ್ಟ. ತಂದೆಯಿಂದಲೇ ಶಿಕ್ಷಣ ಪಡೆದ ಈತನು ತನ್ನ ಅಪ್ರತಿಮ ಪಾಂಡಿತ್ಯದಿಂದ ಅನೇಕ ವಿದ್ವಾಂಸರನ್ನು ವಾದದಲ್ಲಿ ಜಯಿಸಿದ. ಇವನೊಡನೆ ವಾದಿಸಲು ಯಾರೂ ಮುಂದಾಗದಿರಲು, ‘ನಖಾನಾಂ ಪಾಂಡಿತ್ಯಂ ಪ್ರಕಟಯತು ಕಸ್ಮಿನ್?’ ಎಂದು ಅಬ್ಬರಿಸಿದ. ಸಿಂಹದ ಶೌರ್ಯವಿರುವದು ಅದರ ನಖ(=ಉಗುರು)ಗಳಲ್ಲಿ. ತಾನೂ ಸಹ ಆ ಸಿಂಹದಂತೆ;  ಇತರ ವಿದ್ವಾಂಸರನ್ನು ಸಿಗಿದು ಹಾಕುವ ಈತನ ಪಾಂಡಿತ್ಯಕ್ಕೆ ಈಗ ಬಲಿಯೇ ಸಿಗುತ್ತಿಲ್ಲವಲ್ಲ ಎನ್ನುವದು ಈ ಗರ್ಜನೆಯ ತಾತ್ಪರ್ಯ. ಜಗನ್ನಾಥನು ಅನೇಕ ಪ್ರಾಚೀನ ವಿದ್ವಾಂಸರ ಶಾಸ್ತ್ರೀಯ ಸಿದ್ಧಾಂತಗಳನ್ನು ಖಂಡಿಸಿ ಉದ್ಗ್ರಂಥಗಳನು ರಚಿಸಿದ. `ಸಿದ್ಧಾಂತ ಕೌಮುದೀ’ ಎನ್ನುವ ಗ್ರಂಥಕ್ಕೆ ಭಟ್ಟೋಜಿ ದೀಕ್ಷಿತರು ಬರೆದ ‘ಮನೋರಮಾ’ ಎನ್ನುವ ವ್ಯಾಖ್ಯಾನಗ್ರಂಥಕ್ಕೆ ಪ್ರತಿಯಾಗಿ ‘ಮನೋರಮಾ ಕುಚಮರ್ದಿನೀ’ ಎನ್ನುವ ಗ್ರಂಥರಚನೆಯನ್ನು ಈತ ಮಾಡಿದ್ದನ್ನು ನೋಡಿದರೆ, ಈತನ ಉದ್ಧಟ ಪಾಂಡಿತ್ಯದ ಅರಿವಾಗದಿರದು.

ಏನಾದರೇನು, ಈತನ ದಾರಿದ್ರ್ಯ ಮಾತ್ರ ಹಿಂಗಲಿಲ್ಲ. ಆದುದರಿಂದ ಜಗನ್ನಾಥನು ರಜಪುತಾನಾದಲ್ಲಿರುವ ಜಯಪುರಕ್ಕೆ ಬಂದು, ಅಲ್ಲಿಯ ರಾಜನ ಆಶ್ರಯದಲ್ಲಿ ನೆಲೆ ನಿಂತ. ಜಯಪುರದಲ್ಲಿ ಓರ್ವ ಮುಸಲ್ಮಾನ ಧರ್ಮಗುರು ಅಲ್ಲಿಯ ಹಿಂದೂ ಪಂಡಿತರನ್ನೆಲ್ಲ ವಾದದಲ್ಲಿ ಸೋಲಿಸಿದ್ದ. ಜಗನ್ನಾಥನು ಅರಬ್ಬಿ ಭಾಷೆಯನ್ನು ಅಭ್ಯಾಸ ಮಾಡಿ ಆ ಯವನ ಪಂಡಿತನೊಡನೆ ವಾದಗೈದು, ಆತನನ್ನು ಸೋಲಿಸಿದ ಬಳಿಕ, ಈತನ ಕೀರ್ತಿಯು ದಿಲ್ಲಿಯವರೆಗೂ ಹಬ್ಬಿತು. ಆ ಸಮಯದಲ್ಲಿ ದಿಲ್ಲಿಯ ಬಾದಶಹನಾದ ಜಹಾಂಗೀರನ ಆಮಂತ್ರಣದ ಮೇರೆಗೆ ಜಗನ್ನಾಥನು ದಿಲ್ಲಿಯ ದರಬಾರಿಗೆ ತೆರಳಿ, ಅಲ್ಪ ಸಮಯದಲ್ಲಿಯೇ ಬಾದಶಹನಿಗೆ ಆಪ್ತನಾದ. ಜಹಾಂಗೀರನ ನಿಧನದ ನಂತರ ಬಾದಶಹನಾದ ಶಹಾಜಹಾನನಿಗೂ ಸಹ ಜಗನ್ನಾಥನು  ಆಪ್ತಮಿತ್ರನೇ ಆಗಿದ್ದ. ಜಗನ್ನಾಥನ ಕಾವ್ಯಪಾಂಡಿತ್ಯವನ್ನು ಮೆಚ್ಚಿದ ಶಹಾಜಹಾನನು ಈತನಿಗೆ ‘ಕವೀಶ್ವರ’ ಎನ್ನುವ ಬಿರುದನ್ನು ನೀಡಿದ್ದ.

ಜಗನ್ನಾಥ ಪಂಡಿತ ಹಾಗು ಶಹಾಜಹಾನರು ರಾಜಮಂದಿರದಲ್ಲಿ ಒಮ್ಮೆ ಚದುರಂಗವಾಡುತ್ತ ಕುಳಿತಿದ್ದರು. ಆ ಸಮಯದಲ್ಲಿ ನೀರಡಿಸಿದ ಬಾದಶಹನಿಗೆ, ಓರ್ವ ತರುಣಿ ಚಿನ್ನದ ಹೂಜೆಯಲ್ಲಿ ನೀರು ನೀಡಿದಳು. ಆಟವಾಡುವ ಬದಲು, ಅವಳನ್ನೇ ನೋಡುತ್ತಲಿದ್ದ ಜಗನ್ನಾಥನಿಗೆ ಬಾದಶಹನು ಆ ತರುಣಿಯನ್ನು ವರ್ಣಿಸುವೆಯಾ ಎಂದು ತುಂಟಾಟದಲ್ಲಿ ಕೇಳಿದ. ಜಗನ್ನಾಥನು ಥಟ್ಟನೇ ನುಡಿದ ಆ  ಕವನವು ಹೀಗಿದೆ:

“ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ
ಕುಸುಂಭಾರುಣಂ ಚಾರು ಚೇಲಂ ವಸಾನಾ
ಸಮಸ್ತಸ್ಯ ಲೋಕಸ್ಯ ಚೇತಃಪ್ರವೃತ್ತೀಮ್
ಗೃಹೀತ್ವಾ ಘುಟೇ ವಿನ್ಯಸ್ಯ ಯಾತೀವ ಭಾತಿ”

(ಅರುಣವರ್ಣದ ಬಟ್ಟೆಯನ್ನುಟ್ಟ, ತಲೆಯ ಮೆಲೆ ಕಳಶವನ್ನು ಹೊತ್ತ, ಈ ಪೀನಪಯೋಧರಿಯು ಸಮಸ್ತ ಲೋಕದ ಚೈತನ್ಯವನ್ನೇ ಹೊತ್ತು ತರುತ್ತಿರುವಂತೆ ಹೊಳೆಯುತ್ತಿದ್ದಾಳೆ.)

ಈ ವರ್ಣನೆಯನ್ನು ಕೇಳಿದ ಶಹಾಜಹಾನನು ಸಂತೋಷಗೊಂಡು ಕವಿಗೆ ಬಹುಮಾನ ಕೊಡಬಯಸಿದ. ಅವರೀರ್ವರ ನಡುವೆ ಆಗ ನಡೆದ ಸಂಭಾಷಣೆ ತುಂಬ ಸ್ವಾರಸ್ಯಕರವಾಗಿದೆ:
ಶಹಾಜಹಾನ:   ಕವೀಶ್ವರ, ನನ್ನ ಅರಮನೆಯ ಆನೆಗಳನ್ನೆಲ್ಲ ನಿನಗೆ ಸಮ್ಮಾನವಾಗಿ ಕೊಡುತ್ತೇನೆ.
ಜಗನ್ನಾಥ:      ‘ನ ಯಾಚೇ ಗಜಾಲೀಂ’ (ನನಗೆ ಆನೆಗಳ ಹಿಂಡು ಬೇಡ.)
ಶಹಾಜಹಾನ:    ನನ್ನ ಎಲ್ಲ ಕುದುರೆಗಳನ್ನು ನಿನಗೆ ಕೊಡುವೆ.
ಜಗನ್ನಾಥ:      ‘ನ ವಾ ವಾಜಿರಾಜೀಂ’ (ಕುದುರೆಗಳೂ ಬೇಡ.)
ಶಹಾಜಹಾನ:    ದಿಲ್ಲೀಶ್ವರನ ಸಕಲ ಸಂಪತ್ತನ್ನೇ ನಿನಗೆ ಕೊಡಲೆ?
ಜಗನ್ನಾಥ:      ‘ನ ವಿತ್ತೇಷು ಚಿತ್ತಂ ಮದೀಯಂ ಕದಾಪಿ’  
                 (ಸಂಪತ್ತನ್ನು ನಾನು ಎಂದೂ ಬಯಸುವದಿಲ್ಲ.)
ಶಹಾಜಹಾನ:    ಹಾಗಾದರೆ ನಿನಗೆ ಬೇಕಾದುದಾದರೂ ಏನು?
ಜಗನ್ನಾಥ:       ‘ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ’  (ಈ ಚೆಲುವೆ!)
ಶಹಾಜಹಾನ:    ‘ಅವಳು ನನ್ನ ಮಗಳು*, ‘ಲವಂಗಿ’!  (*ದಾಸೀಪುತ್ರಿ)
ಜಗನ್ನಾಥ:       ‘ಲವಂಗೀ ಕುರಂಗೀ ದೃಗಂಗೀಕರೋತು’  (ಈ ಚೆಲುವೆ ಲವಂಗಿ ನನ್ನವಳಾಗಬೇಕು.)

ಶಹಾಜಹನನು ಈ ಮದುವೆಯಿಂದ ಜಗನ್ನಾಥನಿಗೆ ಆಗಬಹುದಾದ ಸಮಸ್ಯೆಗಳ ಕಡೆಗೆ ಅವನ ಗಮನವನ್ನು ಸೆಳೆದ. ಆದರೆ ಜಗನ್ನಾಥನ ಬಯಕೆ ದೃಢವಾಗಿತ್ತು. ಜಗನ್ನಾಥ ಅರಮನೆಯ ಅಳಿಯನಾದ.

‘ಬೆಚ್ಚನಾ ಅರಮನೆಯು, ವೆಚ್ಚಕ್ಕೆ ಬಲು ಹೊನ್ನು
ಇಚ್ಚೆಯಾನರಿವ ಲವಂಗಿ ತಾ ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಜಗನ್ನಾಥ!’

ಜಗನ್ನಾಥನ ಆಶ್ರಯದಾತ ಶಹಾಜಹಾನನನ್ನು ಆತನ ಮಗ ಔರಂಗಜೇಬನು ಬಂಧಿಸಿ ಆಗ್ರಾದಲ್ಲಿ ಸೆರೆಯಲ್ಲಿಟ್ಟ ಬಳಿಕ, ಜಗನ್ನಾಥನು ಅರಮನೆಯನ್ನು ತೊರೆದು ಅಲೆಯಬೇಕಾಯಿತು. ಲವಂಗಿಯು ಬೇಕಾದರೆ ರಾಜಕುಟುಂಬದವರ ಜೊತೆಗೇ ಉಳಿಯಬಹುದೆಂದು ಜಗನ್ನಾಥನು ಹೇಳಿದರೂ ಸಹ ಅವಳು ತನ್ನ ಪತಿಯನ್ನೇ ಅನುಸರಿಸಿದಳು. ಜಗನ್ನಾಥನು ಅಲ್ಲಿಂದ ಕಾಮರೂಪಕ್ಕೆ (ಇಂದಿನ ಅಸ್ಸಾಮ) ತೆರಳಿ, ಅಲ್ಲಿಯ ರಾಜನಾದ ಪ್ರಾಣನಾರಾಯಣನ ಆಶ್ರಯ ಪಡೆದ. ಔರಂಗಜೇಬನು ಕಾಮರೂಪವನ್ನೂ ಆಕ್ರಮಿಸಿದ್ದರಿಂದ, ಜಗನ್ನಾಥನದು ಮತ್ತೆ ಅಲೆಮಾರಿ ಜೀವನವಾಯಿತು.

ತನ್ನ ಯೌವನದಲ್ಲಿ ಪಂಡಿತಕುಲವನ್ನೆಲ್ಲ ಚಂಡಾಡಿದ, ಮುಸ್ಲಿಮ್ ದೊರೆಯ ಆಶ್ರಯದಲ್ಲಿದ್ದು ಮುಸ್ಲಿಮ್ ಯುವತಿಯನ್ನು ಮದುವೆಯಾದ ಜಗನ್ನಾಥ ಪಂಡಿತನಿಗೆ ಹಿಂದು ಧರ್ಮೀಯರಿಂದ ಬಹಿಷ್ಕಾರ ಶಿಕ್ಷೆ ಪ್ರಾಪ್ತವಾಯಿತು.

ಜಗನ್ನಾಥನಿಗೆ ಹಾಗು ಲವಂಗಿಗೆ ಈಗ ನಿಲ್ಲಲು ನೆರಳಿಲ್ಲ, ಬಾಯಾರಿಕೆ ತೀರಿಸಲು ಒಂದು ಬೊಗಸೆ ನೀರು ಸಹ ದೊರೆಯಲಿಲ್ಲ. ವ್ಯರ್ಥ ಅಲೆದಾಟದಿಂದ ಬಳಲಿದ ಗಂಡ ಹೆಂಡಿರು ಕಾಶಿಯಲ್ಲಿಯ ಗಂಗಾ ಘಾಟಿಗೆ ಬಂದು ಅಲ್ಲಿಯೇ ಸೋಪಾನದ ಮೇಲೆ ಮಲಗಿಕೊಂಡರು.

ಕಾಶಿಯಲ್ಲಿ ಅರುಣೋದಯದ ಸಮಯ. ಗಂಗಾಸ್ನಾನಕ್ಕಾಗಿ ಜನ ಬರುತ್ತಿದ್ದಾರೆ. ಕಾಶಿಯ ಪಂಡಿತಚಕ್ರವರ್ತಿಗಳಾದ, ಆಧ್ಯಾತ್ಮಗುರುಗಳಾದ ಅಪ್ಪಯ್ಯ ದೀಕ್ಷಿತರು ಸ್ನಾನ ಪೂರೈಸಿ ಬರುತ್ತಿದ್ದಾಗ, ಒಂದು ಸೋಪಾನದ ಮೇಲೆ ಹರಕು ಬಟ್ಟೆಯನ್ನೆ ಹೊದ್ದುಕೊಂಡು ನಿರ್ಲಜ್ಜರಂತೆ ಮಲಗಿದ ದಂಪತಿಯನ್ನು ನೋಡಿದರು. ಆ ಹರಕು ಬಟ್ಟೆಯೊಳಗಿಂದ ಕಂಡ ಬಿಳಿ ಕೂದಲಿನ ಪೊದೆ ಅವರನ್ನು ಮತ್ತಿಷ್ಟು ಕೋಪಗೊಳಿಸಿತು. ಆ ದಂಪತಿಯತ್ತ ತಾತ್ಸಾರದ ದನಿಯಲ್ಲಿ ದೀಕ್ಷಿತರು ಗುಡುಗಿದರು:
‘ಕಿಂ ನಿಃಶಂಕಂ ಶೇಷೇ ಶೇಷೇ ವಯಸಿ ತ್ವಮಾಗತೇ ಮೃತ್ಯೌ’
(ಇದೇನು, ಮರಣ ಸಮೀಪಿಸಿರುವ ಈ ಇಳಿ ವಯಸ್ಸಿನಲ್ಲಿ ನಿರ್ಲಜ್ಜೆಯಿಂದ ಮಲಗಿರುವಿರಲ್ಲ?)  

ಮಲಗಿಕೊಂಡಾತ ಮುಸುಕು ಸರಿಸಿದ. ಅಪ್ಪಯ್ಯ ದೀಕ್ಷಿತರು ತಬ್ಬಿಬ್ಬಾದರು. ತಮ್ಮ ಗ್ರಂಥಗಳನ್ನೆಲ್ಲ ಖಂಡಿಸಿ ಒಗೆದ, ತಮ್ಮ ಪರಮ ವಿರೋಧಿ ಜಗನ್ನಾಥ! ತೊದಲುತ್ತಲೇ ದೀಕ್ಷಿತರು ಮತ್ತೆ ನುಡಿದರು:
‘ಅಥವಾ ಸುಖಂ ಶಯೀಥಾ: ತವ ನಿಕಟೇ ಜಾಗರ್ತಿ ಜಾಹ್ನವೀ ಜನನೀ.’
( ಸರಿ ಸರಿ, ಸುಖವಾಗಿ ಮಲಗಿಕೊಳ್ಳಪ್ಪ; ನಿನ್ನ ಪಕ್ಕದಲ್ಲಿ ತಾಯಿ ಗಂಗಾದೇವಿ ಎಚ್ಚತ್ತೇ ಇದ್ದಾಳೆ.)

ಜಗನ್ನಾಥ ಪಂಡಿತನ ಪಾಲಿಗೆ ಇದು ಎಚ್ಚರಿಕೆಯ ಗಂಟೆಯಾಯಿತು. ತನ್ನ ಬಾಳಿನ ಕಲ್ಮಶಗಳನ್ನು ತೊಳೆಯಲು ಗಂಗಾದೇವಿಯೇ ಸಮರ್ಥಳೆಂದು ಭಾವಿಸಿದ ಜಗನ್ನಾಥ ಲವಂಗಿಯೊಡನೆ ಜಲಸಮಾಧಿಗೆ ಸಿದ್ಧನಾಗಿ, ಸೋಪಾನಗಳನ್ನು ಇಳಿಯತೊಡಗಿದ. ಆದರೆ ಸ್ನಾನಕ್ಕೆ ಬಂದಂತಹ ಅಲ್ಲಿಯ ಧರ್ಮನಿಷ್ಠರು ಈ ಪಾಖಂಡಿಯನ್ನು ಗಂಗಾಸ್ನಾನಕ್ಕೆ ಬರದಂತೆ ಪ್ರತಿಬಂಧಿಸಿದರು.

ಹತಾಶನಾದ ಜಗನ್ನಾಥ ನಿಂತಲ್ಲಿಯೇ ನಿಂತುಕೊಂಡು ಗಂಗಾದೇವಿಯ ಪ್ರಾರ್ಥನೆ ಮಾಡತೊಡಗಿದ. ಅದೇ ಜಗನ್ನಾಥನ ಪ್ರಸಿದ್ಧ ಕಾವ್ಯ:‘ಗಂಗಾಲಹರಿ’. ಇಲ್ಲಿಯವರೆಗೂ ಪಾಂಡಿತ್ಯದ ಕಾವ್ಯವನ್ನು ಸೃಷ್ಟಿಸಿದ್ದ ಜಗನ್ನಾಥ ಪಂಡಿತ, ಇದೀಗ ತನ್ನೆಲ್ಲ ಹಮ್ಮನ್ನು ತೊರೆದು, ಆರ್ತನಾಗಿ ಗಂಗಾದೇವಿಯನ್ನು ಭಕ್ತಿಯಿಂದ ಕೂಗಿ ಕರೆದ. ಇವನ ಒಂದೊಂದು ಶ್ಲೋಕಕ್ಕೂ ಒಂದೊಂದು ಮೆಟ್ಟಿಲೇರಿದ ಗಂಗೆ ಕೊನೆಯ ಅಂದರೆ ಐವತ್ತೆರಡನೆಯ ಶ್ಲೋಕಕ್ಕೆ ಇವನನ್ನು ಹಾಗು ಲವಂಗಿಯನ್ನು ತನ್ನಲ್ಲಿ ಸೆಳೆದುಕೊಂಡೊಯ್ದಳು. ಇದು ದಂತಕಥೆ ಇರಬಹುದು. ವಾಸ್ತವದಲ್ಲಿ ಗಂಗಾಪ್ರಾರ್ಥನೆಯ  ನಂತರ ಜಗನ್ನಾಥನು ಲವಂಗಿಯೊಡನೆ ಗಂಗೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು. ಒಟ್ಟಿನಲ್ಲಿ  ಹೀಗಿದೆ ಒಬ್ಬ ಉದ್ದಾಮ ಕವೀಶ್ವರ ಹಾಗು ಉದ್ಧಟ ಪಂಡಿತರಾಜನ ಜೀವನಕಥೆ!

ಜಗನ್ನಾಥ ಪಂಡಿತನ ಸಂಸ್ಕೃತ ಗಂಗಾಲಹರಿಯನ್ನು ಕನ್ನಡಕ್ಕೆ ತಂದವರು ಉಭಯಭಾಷಾ ವಿದ್ವಾಂಸರೂ, ಲೇಖಕರೂ ಆದ  ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರು.
ಮೂಲದ ಸಂಸ್ಕೃತ ಸೊಬಗನ್ನು ಕನ್ನಡಕ್ಕೆ ತರುವದರಲ್ಲಿ ಆಚಾರ್ಯರು ಯಶಸ್ವಿಯಾಗಿದ್ದಾರೆ. ಇದೇ ಪುಸ್ತಕದಲ್ಲಿ ಜಗನ್ನಾಥನ ಜೀವನಗಾಥೆಯನ್ನೂ ಸಹ ಅವರು ಬರೆದಿದ್ದಾರೆ. ಅದರ ಸಂಕ್ಷಿಪ್ತ ಅವತರಣಿಕೆಯನ್ನೇ ನಾನು ಮೇಲೆ ಕೊಟ್ಟಿದ್ದೇನೆ.

ಜಗನ್ನಾಥ ಪಂಡಿತನ ಸಂಸ್ಕೃತ ಗಂಗಾಲಹರಿಯ ಮೊದಲ ನುಡಿಯನ್ನು ಹಾಗು ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರ ಅನುವಾದವನ್ನು ಓದುಗರ ಅವಗಾಹನೆಗಾಗಿ ಕೆಳಗೆ ಕೊಡುತ್ತಿದ್ದೇನೆ:

ಮೂಲ:
ಸಮೃದ್ಧಂ ಸೌಭಾಗ್ಯಂ ಸಕಲ ವಸುಧಾಯಾ: ಕಿಮಪಿ ತನ್
ಮಹೈಶ್ವರ್ಯಂ ಲೀಲಾಜನಿತ ಜಗತಃ ಖಂಡಪರಶೋ:
ಶ್ರುತೀನಾಂ ಸರ್ವಸ್ವಂ ಸುಕೃತಮಥ ಮೂರ್ತಂ ಸುಮನಸಾಂ
ಸುಧಾಸೌಂದರ್ಯಂ ತೇ ಸಲಿಲಮಶಿವಂ ನಃ ಶಮಯತು.

ಅನುವಾದ:
ಜಗದ ಭಾಗ್ಯ, ಜನಕೆಲ್ಲ ಭೋಗ್ಯ, ಸೌಭಾಗ್ಯಪೂರ್ಣ ಸಿರಿಯು
ಲೀಲೆಯಿಂದ ಜಗಜನಿಪ ಶಿವನ ಐಸಿರಿಯು ದಿವ್ಯ ತೊರೆಯು
ವೇದಸಾರ ಸರ್ವಸ್ವ ದೇವಕುಲ ಪುಣ್ಯ ಮೂರ್ತಿಮಂತ
ಅಮೃತಕಾಂತಿ ಸವಿ ಸಲಿಲ ಸವೆಸಲಿದು ಅಶುಭಗಳನನಂತ.

‘ಗಂಗಾಲಹರಿ’ ಕಾವ್ಯವು ಗಂಗಾನದಿಯ ಪ್ರವಾಹದಂತೆಯೇ ಭೋರ್ಗರೆದಿದೆ. ಗಂಗಾಮಾತೆಯೇ ಕಾವ್ಯರೂಪ ತಾಳಿ ಗಂಗಾಲಹರಿಯಾಗಿದ್ದಾಳೆ ಎಂದರೆ ತಪ್ಪಾಗಲಿಕ್ಕಿಲ್ಲ. ಆದುದರಿಂದ ಗಂಗೆಯಲ್ಲಿ ಮಿಂದ ಅನುಭವವೇ ಗಂಗಾಲಹರಿಯನ್ನು ಓದಿದಾಗ ಸಹ ಆಗುವದು.

ಜಗನ್ನಾಥ ಪಂಡಿತನನ್ನು ಪಾವನಗೊಳಿಸಿದ ತಾಯಿ ಗಂಗೆ, ಗಂಗಾಲಹರಿಯ ಮೂಲಕ ನಮ್ಮನ್ನೂ ಅನುಗ್ರಹಿಸಲಿ.

59 comments:

PARAANJAPE K.N. said...

ಜಗನ್ನಾಥ ಪ೦ಡಿತರ ಗ೦ಗಾಲಹರಿಯ ಬಗ್ಗೆ ಮತ್ತವರ ಜೀವನದ ಬಗ್ಗೆ ಉತ್ತಮ ವಿವರ ಒದಗಿಸಿದ್ದೀರಿ, ನಿಮ್ಮಿ೦ದ ಅನೇಕ ಗೊತ್ತಿಲ್ಲದ ಹೊಸ ವಿಷಯ ತಿಳಿದ೦ತಾಯ್ತು. Thanks.

ಶ್ರೀನಿವಾಸ ಮ. ಕಟ್ಟಿ said...

೧೯೫೯ ರಲ್ಲಿ ನಾನು ಹೈಸ್ಕೂಲಿನಲ್ಲಿದ್ದಾಗ ನಮ್ಮ ಸಂಸ್ಕೃತ ಅಧ್ಯಾಪಕರು ಪಂಡಿತ ಜಗನ್ನಾಥನ ‘ಗಂಗಾಲಹರಿ’ ಯ ಕೆಲವು ಶ್ಲೋಕಗಳನ್ನು ಅರ್ಥಸಹಿತ ಕಲಿಸಿದರು. ನಂತರ ನನ್ನ ಆಣ್ಣ ನನಗೆ ಶ್ರೀ ಪಂಢರೀನಾಥಾಚಾರ್ಯರ ಕನ್ನಡ ‘ಗಂಗಾಲಹರಿ’ ಕಿರು ಕಾವ್ಯವನ್ನು ಕಾಣಿಕೆಯಾಗಿ ಕೊಟ್ಟರು. ಅದಾದಮೇಲೆ ಅದನ್ನು ನೂರಾರು ಸಲ ಓದಿರಬಹುದು. ಓದಿ ತೋರಿಸಿರಬಹುದು. ಆಚಾರ್ಯರ ಈ ಕನ್ನಡ ಕಾವ್ಯಕ್ಕೆ ಬೇಂದ್ರೆಯವರ ಕನ್ನದ ಮೇಘದೂತ ಸ್ಫೂರ್ತಿಯ ಸೆಲೆಯಾಗಿತ್ತು. ಆಚಾರ್ಯರು ನನ್ನ ಪತ್ನಿಯ ಚಿಕ್ಕಪ್ಪ. ೬-೭ ವರ್ಷಗಳ ಕೆಳಗೆ ಬೆಂಗಳೂರಿನ ಪುಣ್ಯಧಾಮದಲ್ಲಿ ಗಂಗಾಲಹರಿ ಕುರಿತು ಅವರ ಪ್ರವಚನವಿತ್ತು. ಆದರೆ ಅವರ ಹತ್ತಿರ ಪುಸ್ತಕವಿರಲಿಲ್ಲ. ನನ್ನಲ್ಲಿದ್ದ ಗಂಗಾಲಹರಿಯ ಪುಸ್ತಕವನ್ನು ಕೊಟ್ಟು ೩ ದಿನ ಅವರ ಶ್ರೀಮುಖದಿಂದಲೇ ಗಂಗಾಲಹರಿಯನ್ನು ಕೇಳುವ ಭಾಗ್ಯ ನನ್ನದಾಗಿತ್ತು.

ಇದಲ್ಲದೇ ಆಚಾರ್ಯರು "ನೇತ್ರದಾನ" ಎಂಬ ಸುಂದರ ಖಂಡಕಾವ್ಯ ರಚಿಸಿರುವರು. ಅದು ಎಲ್ಲಿಯೂ ಪ್ರಕಟವಾದ ಹಾಗೆ ಕಾಣುವದಿಲ್ಲ. ಆ ಕಾವ್ಯವನ್ನು ೧೯೮೦ ರಲ್ಲಿ ಒಂದುಸಲ ನನ್ನ ಪತ್ನಿಯ ಇನ್ನೊಬ್ಬ ಚಿಕ್ಕಪ್ಪನ ಮನೆಯಲ್ಲಿ (ಹುಬ್ಬಳ್ಳಿಯಲ್ಲಿ) ವಾಚಿಸಿದ್ದರು. ಅದ್ಭುತವಾಗಿದೆ. ಅವರ ಮನೆಗೆ ಹೋಗಿ ಕೇಳಿದರೆ ಸಿಗಬಹುದು. ಪ್ರಯತ್ನಿಸುವಿರಾ ? ಈಗ ಆಚಾರ್ಯರ ಆರೋಗ್ಯ ಸರಿ ಇಲ್ಲ. ಹುಬ್ಬಳ್ಳಿಯಲ್ಲಿಯೇ ಇರುವರು.

sunaath said...

ಪರಾಂಜಪೆಯವರೆ,
ಜಗನ್ನಾಥ ಪಂಡಿತನ ಜೀವನದ ವಿವರಗಳನ್ನು ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರು ತಮ್ಮ ಪುಸ್ತಕದಲ್ಲಿ ನೀಡಿದ್ದಾರೆ. ಅದನ್ನು ಆಧರಿಸಿಯೇ ನಾನು ಈ ಕಿರುಚಿತ್ರವನ್ನು ಕೊಟ್ಟಿರುವದು. ಅವರಿಗೆ ನಾವೆಲ್ಲ ಕೃತಜ್ಞರಾಗಿರಬೇಕು.

sunaath said...

ಕಟ್ಟಿಯವರೆ,
೧೯೫೯ರಲ್ಲಿ ನಾನು ಸವದತ್ತಿಯ ಮಾಧ್ಯಮಿಕ ಶಾಲೆಯಲ್ಲಿದ್ದಾಗ
ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರು ತಮ್ಮ ಅನುವಾದದ
ಕೆಲ ಭಾಗವನ್ನು ವಿದ್ಯಾರ್ಥಿಗಳ ಎದುರಿಗೆ ವಾಚಿಸಿದರು. ಅದು ನಮ್ಮ ಶ್ರವಣಭಾಗ್ಯ.
‘ನೇತ್ರದಾನ’ದ ಬಗೆಗೆ ತಿಳಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ಶ್ರೀಮತಿ ಅರುಣಾ ಇಲ್ಲಿ ಬಂದಾಗ, ‘ನೇತ್ರದಾನ’ಕ್ಕಾಗಿ ಪ್ರಯತ್ನಿಸುವೆ.

ಮನಸು said...

ಸುನಾಥ್ ಕಾಕ,
ಅದ್ಭುತ ಎಂತಹಾ ವರ್ಣನೆ ಗಂಗಾ ಮಾತೆಯ ಮೇಲೆ....... ಬೇಂದ್ರೆಯವರ ಸಾಲುಗಳು ತುಂಬಾ ಚೆನ್ನಾಗಿದೆ.... ಜಗನ್ನಾಥರ ಪೂರ್ಣ ಕಥೆ ಓದಿ ಅಬ್ಬಾ ಎನಿಸಿತು.... ಎಂತಾ ರಾಜದರ್ಬಾರಿನಲ್ಲಿದ್ದವರಿಗೆ ಅಲೆದಾಡುವ ಸ್ಥಿತಿ ಬಂದಿತ್ತು ಎನಿಸಿತು.... ಗಂಗಾ ಮಾತೆಯಿಂದ ಪಾವನರಾರುವಂತ ಅವರ ಕವನ ತುಂಬಾ ಚೆನ್ನಾಗಿದೆ........ ನಮಗೆ ಇಂತಹ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು.....

ಪ್ರ. ಭೀ. ಸತ್ಯಪ್ಪ said...

ಜಗನ್ನಾಥ ಪಂಡಿತ ಮತ್ತು ಲವಂಗಿಯರು ಗಂಗೆಯಲ್ಲಿ ಐಕ್ಯವಾದುದು ದಂತಕಥೆಯೇ ಇರಬೇಕು. ಸಂಸ್ಕೃತ ಸಾಹಿತ್ಯ ಪ್ರಪಂಚದಲ್ಲಿ ಜಗನ್ನಾಥ ಪಂಡಿತರು ಪ್ರಸಿದ್ಧರಾಗಿದ್ದುದು ಅವರ ಲಾಕ್ಷಣಿಕ ಕಾವ್ಯ "ರಸ ಗಂಗಾಧರ" ದಿಂದ. ರಸ ಗಂಗಾಧರದ ವೈಶಿಷ್ಟ್ಯವೆಂದರೆ, ಅದರಲ್ಲಿ ಜಗನ್ನಾಥ ಪಂಡಿತರು ಉದಾಹರ‍ಣೆಗಳನ್ನು ತಮ್ಮ ಕಾವ್ಯದಿಂದಲೇ ಕೊಟ್ಟಿದ್ದಾರೆ. ಬೇರೆಯವರ ಕಾವ್ಯವನ್ನು ಎಲ್ಲಿಯೂ ಉದಾಹರಿಸಿಲ್ಲ. ಅವರು ರಸಗಂಗಾಧರ ರಚಿಸಿದ್ದು ತಮ್ಮ ತಾರುಣ್ಯದಲ್ಲಿ. ಉದಾಹರಣೆಗೆ ಗಂಗಾಲಹರಿಯ ಪದ್ಯಗಳನ್ನೂ ಬಳಸಿದ್ದಾರೆ. ಅಂದರೆ ಗಂಗಾಲಹರಿಯ ರಚನೆ ರಸಗಂಗಾಧರಕ್ಕಿಂತಲೂ ಮೊದಲು.

Ittigecement said...

ಸುನಾಥ ಸರ್...

ನನಗೆ ಪಂಡಿತ್ ಜಗನ್ನಾಥರಬಗೆಗೆ ಗೊತ್ತಿಲ್ಲವಾಗಿತ್ತು...
ಬೇಂದ್ರೆಯವರ ಕಲ್ಪನೆಗೆ ಮೂಕನಾಗಿದ್ದೆನೆ...

ಹೊಸ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು...

ಮನಸಿನಮನೆಯವನು said...

ಅವರ ಪಾಂಡಿತ್ಯ ಅದ್ಭುತವಾದುದೆಂದು ನಿಮ್ಮ ಮಾತಿನಲ್ಲಿ ಅರಿಯಬಹುದು..
ಅವರದು ದುರಂತ ಕಥೆಯೆಂದು ತಿಳಿದು ಮನಸಿಗೆ ನೋವಾಯಿತು..

sunaath said...

ಸತ್ಯಪ್ಪನವರೆ,
ಜಗನ್ನಾಥ ಪಂಡಿತನು ಪೂರ್ವಸೂರಿಗಳ ಪದ್ಯಗಳನ್ನು ಉದಾಹರಣೆ ಎಂದು ಎಲ್ಲಿಯೂ ಬಳಸಿಲ್ಲ. ತನ್ನ ರಸಗಂಗಾಧರ ಗ್ರಂಥದಲ್ಲಿ ಆತ ಗಂಗಾಲಹರಿಯ ಪದ್ಯಗಳನ್ನು ಉದಾಹರಣೆಗೆಂದು ಬಳಸಿದ್ದು ನನಗೆ ತಿಳಿದಿಲ್ಲ. ನಾನು ಸಂಪೂರ್ಣವಾಗಿ ಶ್ರೀ ಪಂಢರಿನಾಥಾಚರ್ಯ ಗಲಗಲಿ ಅವರ ಪುಸ್ತಕವನ್ನೇ ಮಾಹಿತಿಗಾಗಿ ಅವಲಂಬಿಸಿದ್ದೇನೆ. ಜಗನ್ನಾಥನು
ಗಂಗೆಯ ತಟಾಕದಲ್ಲಿಯೇ,ತನ್ನ ಕೊನೆಗಾಲದಲ್ಲಿ, ಗಂಗಾಲಹರಿಯನ್ನು ರಚಿಸಿದ ಎನ್ನುವ ಭಾವನೆ ಅಲ್ಲಿದೆ. ನಿಮ್ಮಿಂದ ಹೊಸ ಹೊಳಹು ಸಿಗುತ್ತಿದೆ. ಗಂಗಾಲಹರಿಯು ಮೊದಲೇ ರಚಿತವಾಗಿದ್ದು ಇರಬಹುದು. ಆದರೆ ದಂತಕಥೆಯನ್ನು ರೋಚಕ ಮಾಡುವ ಸಲುವಾಗಿ, ಈ ಕಥೆ ಹುಟ್ಟಿರಲೂ ಬಹುದು.

sunaath said...

ಮನಸು,
ತನ್ನ ಪೂರ್ವಯೌವನದಲ್ಲಿ ಬಡತನದಲ್ಲಿ ಬಳಲಿ, ಮಧ್ಯಜೀವನದಲ್ಲಿ
ಸುಖಸಂಪತ್ತಿನಲ್ಲಿ ಲೋಲಾಡಿ, ವೃದ್ಧಾಪ್ಯದಲ್ಲಿ ಮತ್ತೆ ಸಂಕಟದಲ್ಲಿ ನರಳಿದ ಜಗನ್ನಾಥನ ಜೀವನವು ವಿಧಿಯಾಟಕ್ಕೆ ಒಳ್ಳೆಯ ಉದಾಹರಣೆ ಎನ್ನಬಹುದೇನೊ!

sunaath said...

ಪ್ರಕಾಶ,
ಭಾರತೀಯ ಶ್ರೇಷ್ಠ ಸಾಹಿತಿಗಳ ಬಗೆಗೆ, ವಿಜ್ಞಾನಿಗಳ ಬಗೆಗೆ ನಮ್ಮ ಪಠ್ಯಪುಸ್ತಕಗಳು ಏನೂ ತಿಳಿಸುವದಿಲ್ಲ. ಉದಾಹರಣೆಗೆ ನಮ್ಮ ಎಂಜಿನಿಯರಿಂಗ ಮಟೀರಿಯಲ್ ಟೆಸ್ಟುಗಳಲ್ಲಿ Fatigue Test
ಅಂತ ಒಂದು ಇದೆಯಲ್ಲ, ಅದನ್ನು ಕಂಡು ಹಿಡಿದವರು ಜಗದೀಶಚಂದ್ರ ಬೋಸ್ ಅಂತೆ. ಈ ವಿಷಯ ನನಗೆ ೧೫ ದಿನಗಳ ಹಿಂದೆಯಷ್ಟೆ ತಿಳಿದಿತು!

sunaath said...

ಬೆಳಕಿನ ಮನೆಯವರೆ,
ಜಗನ್ನಾಥನ ಪಾಂಡಿತ್ಯವನ್ನು ನಾನೂ ಸಹ samples ಮೂಲಕವೇ ತಿಳಿದಿದ್ದೇನೆ. ಸಂಸ್ಕೃತ ಭಾಷೆಯ ಪರಿಚಯ ನನಗೆ ಅಷ್ಟಕ್ಕಷ್ಟೇ! ಆದುದರಿಂದ ಶ್ರೀ ಪಂಢರಿನಾಥಾಚಾರ್ಯರ ಅನುವಾದದ
ಮೂಲಕವೇ ನಾನು ಈ ಕಾವ್ಯವನ್ನು ತಿಳಿಯುವಂತಾಯಿತು.

ಮನದಾಳದಿಂದ............ said...

ಸುನಾಥ್ ಸರ್,
ಜಗನ್ನಾಥ ಪಂಡಿತರ ಬಗ್ಗೆ ಅಲ್ಲಲ್ಲಿ ಅಷ್ಟಿಷ್ಟು ಓದಿದ್ದೇನೆ ಹೊರತು ಇಷ್ಟೊಂದು ಮಾಹಿತಿ ಇರಲಿಲ್ಲ. ನಿಮ್ಮಿಂದ ಬಹಳ ಮಾಹಿತಿ ಲಭ್ಯವಾಯಿತು. ಬೇಂದ್ರೆಯವರ ಸಾಲುಗಳು ಸುಂದರ.....
ಮಾಹಿತಿಗೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ನಮಗೆ ಗೊತ್ತಿರದ ಜಗನ್ನಾಥ ಪಂಡಿತರು ಮತ್ತು ಅವರ ಬದುಕಿನ ಬಗ್ಗೆ ಅನೇಕ ವಿಚಾರಗಳನ್ನು ಬೇಂದ್ರೆ ಕಾವ್ಯದ ನೆಪದಲ್ಲಿ ತಿಳಿದುಕೊಂಡಂತೆ ಆಯಿತು..

prabhamani nagaraja said...

ಜಗನ್ನಾಥ ಪ೦ಡಿತರ ಬಗ್ಗೆ ಕೇಳಿದ್ದೆ ಅಷ್ಟೆ. ಅವರ ಜೀವನದ ಪ್ರಮುಖ ಅ೦ಶಗಳನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಿ೦ದ ಇ೦ಥಾ ವಿಶೇಷ ಲೇಖನಗಳು ಇನ್ನೂ ಹೆಚ್ಚು ಮೂಡಿ ಬರಲಿ.

Subrahmanya said...

ಸುಲಭದಲ್ಲಿ ಸಿಗಲಾರದ ಇಂತಹ ವಿಷಯಗಳನ್ನು ಇಲ್ಲಿ ಕೊಡುವುದರ ಮೂಲಕ ಮಾಹಿತಿಯ ಕಣಜವಾಗಿತ್ತಿದೆ ’ಸಲ್ಲಾಪ’. ಇದು ನನ್ನಂತಹವರಿಗೂ ಅಲ್ಲದೆ ಮುಂದಿನ ಪೀಳಿಗೆಗೂ ಬಹು ಉಪಯುಕ್ತವಾಗಲಿದೆ.

ಗಂಗಾಲಹರಿಯನ್ನು ತುಂಬ ಆಸ್ವಾದಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಒಂದಷ್ಟು ಪುಸ್ತಕಗಳನ್ನು ಓದಬೇಕಿದೆ.

ಇನ್ನೂ ಅನೇಕ ಇಂತಹ ಉಪಯುಕ್ತ ವಿಷಯಗಳನ್ನು ಬರೆಯಿರೆಂದು ತಮ್ಮಲ್ಲಿ ವಿನಂತಿಸುತ್ತೇನೆ.

Narayan Bhat said...

ಪಂಡಿತ ಜಗನ್ನಾಥನ ಹೆಸರಷ್ಟೇ ಕೇಳಿ ಗೊತ್ತಿತ್ತು. 'ಗಂಗಾ ಲಹರಿ'ಯ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಕೃತಜ್ಞತೆಗಳು.

ಮನಮುಕ್ತಾ said...

ಕಾಕಾ,
ಜಗನ್ನಾಥ ಪ೦ಡಿತರ ಬಗ್ಗೆ ...ಬೇ೦ದ್ರೆಯವರ ಗ೦ಗಾಷ್ಟಕದ ಬಗ್ಗೆ ತಿಳಿದಿರಲಿಲ್ಲ.. ಒಳ್ಳೆಯ ವಿವರಣೆಯಿ೦ದ ಕೂಡಿದ ನಿಮ್ಮ ಉತ್ತಮ ಬರಹ ಅನೇಕ ಹೊಸ ಮಾಹಿತಿಗಳನ್ನು ಕೊಟ್ಟಿತು. ಧನ್ಯವಾದಗಳು.

Unknown said...

ಪಂಡಿತರಾಜ ಜಗನ್ನಾಥನ ಗಂಗಾಲಹರಿಯನ್ನು ಅನುವಾದಿಸಲು
ಪಂಡಿತಶ್ರೇಷ್ಠರಾದ ಪಂಢರಿನಾಥಾಚಾರ್ಯರಿಗೆ ಮಾತ್ರ ಸಾಧ್ಯ.
ಜಗನ್ನಾಥ ಹಾಗು ಲವಂಗಿಯರ ಜೀವನಕತೆಯನ್ನು ಚಿಕ್ಕವಳಿದ್ದಾಗ
ನನ್ನ ತಾಯಿಯಿಂದ ಕೇಳಿದ್ದೆ. ಇಲ್ಲಿ ಓದಿದಾಗ ಅದೆಲ್ಲ ಮತ್ತೊಮ್ಮೆ ನೆನಪಾಯಿತು.

sunaath said...

ಪ್ರವೀಣ,
ನಮ್ಮ ಸಾಹಿತಿಗಳು, ವಿಜ್ಞಾನಿಗಳು, ಸಂತರು, ಕ್ರಾಂತಿಕಾರರು ಇವರೆಲ್ಲರ ಬಗೆಗೆ ನಮ್ಮ ಇತಿಹಾಸದ ಪಠ್ಯಗಳು ದಿವ್ಯ ಮೌನವನ್ನು ಧರಿಸಿವೆ. ಹೀಗಾಗಿ ನಮ್ಮ ಇತಿಹಾಸದ ಬಗೆಗೆ ನಮಗೇ ಗೊತ್ತಿಲ್ಲದಂತಾಗಿದೆ.

sunaath said...

ಶಿವು,
ಬೇಂದ್ರೆಯವರು ಕನ್ನಡ ಹಾಗು ಸಂಸ್ಕೃತ ಸಾಹಿತ್ಯವನ್ನು ತಳಮೂಲವಾಗಿ ಅಭ್ಯಸಿಸಿದವರು. ಹೀಗಾಗಿ ಅವರ ಕಾವ್ಯದಲ್ಲಿ ಅನೇಕ ಲೇಖಕರ ಉಲ್ಲೇಖಗಳನ್ನು ನೋಡಬಹುದು.

sunaath said...

ಪ್ರಭಾಮಣಿಯವರೆ,
ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರ ಕೃತಿಯನ್ನು ಓದುವವರೆಗೆ ನನಗೂ ಸಹ ಜಗನ್ನಾಥನ ಬಗೆಗೆ ಹೆಚ್ಚಿಗೆ ಗೊತ್ತಿರಲಿಲ್ಲ. ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸಬೇಕು.

sunaath said...

ಪುತ್ತರ್,
ಹಳೆಯ ವಿಷಯಗಳನ್ನು ಮುಂದಿನ ಪೀಳಿಗೆಯವರಿಗೆ ದಾಟಿಸುವದು ನಮ್ಮ ಕರ್ತವ್ಯವೇ ಆಗಿದೆ. ನಾನೂ ಸಹ ಸಾಧ್ಯವಾದಷ್ಟು ಪ್ರಯತ್ನಿಸುವೆ.

sunaath said...

ನಾರಾಯಣ ಭಟ್ಟರೆ,
ನಮ್ಮ ಪಠ್ಯಪುಸ್ತಕಗಳು, ಕೆಲವು ಹೆಸರಾಂತ ಸಾಹಿತಿಗಳ, ಉದಾಹರಣೆಗೆ ಕಾಳಿದಾಸನ, ಕಾವ್ಯದ ಬಗೆಗೆ ಮಾತ್ರ ಹೇಳುತ್ತವೆ. ಆದುದರಿಂದ ನಮಗೆ ಇನ್ನೂ ಅನೇಕ ಶ್ರೇಷ್ಠರ ಕಾವ್ಯ ಗೊತ್ತಾಗದೇ ಹೋಗಿ ಬಿಡುತ್ತದೆ.

sunaath said...

ಮನಮುಕ್ತಾ,
ಭಾರತದ ಅನೇಕ ಸಾಹಿತಿಗಳು ಗಂಗಾನದಿಯನ್ನು ಕಾವ್ಯದಲ್ಲಿ ವರ್ಣಿಸಿದ್ದಾರೆ ಹಾಗು ಪ್ರಾರ್ಥಿಸಿದ್ದಾರೆ. ಉದಾಹರಣೆಗೆ ವಾಲ್ಮೀಕಿ ಹಾಗು ಶಂಕರಾಚಾರ್ಯರು. ಬೇಂದ್ರೆಯವರೂ ಸಹ ಆ ಪದ್ಧತಿಯನ್ನು ಪಾಲಿಸಿ, ಗಂಗಾಷ್ಟಕ ಬರೆದಿದ್ದಾರೆ.

sunaath said...

ವನಮಾಲಾ,
ನಿಮ್ಮ ತಾಯಿಯಿಂದ ನೀವು ಈ ಕತೆಯನ್ನು ಕೇಳಿದ್ದು ತಿಳಿದು ಸಂತೋಷವಾಯಿತು. ಪಂಢರಿನಾಥಾಚಾರ್ಯ ಗಲಗಲಿಯವರ ಬಗೆಗೆ ಹೆಚ್ಚಿನ ಮಾಹಿತಿಯನ್ನು ವಿಕಿಪೀಡಿಯಾದಲ್ಲಿ ಪಡೆಯಬಹುದು.

Ittigecement said...

ಸುನಾಥ ಸರ್...

ನೀವೆನ್ನುವದು ನಿಜ...
ನನಗೆ ಒಂದು ಎಸ್ಸೆಮ್ಮೆಸ್ಸು ಬಂದಿದೆ..

"ಐಸಿಎಸ್" ನ ಆರನೇ ತರಗತಿಯ ಪಠ್ಯ ಪುಸ್ತಕದಲ್ಲಿ...
"ಭಗತ್ ಸಿಂಗ್, ಸುಖದೇವ್, ರಾಜಗುರು" ಇವರುಗಳನ್ನು "ಆತಂಕವಾದಿಗಳು" ಎಂದು ಬಣ್ಣಿಸಲಾಗಿದೆಯಂತೆ...!

ಇದು ಮುದ್ರಾ ದೋಷವಂತೂ ಖಂಡಿತ ಅಲ್ಲ...

ನಮ್ಮ ದೇಶದ ಮಹಾಪುರುಷರನ್ನು ಈ ಥರಹ ಚಿತ್ರಣ ಕೊಡುವದು "ದೇಶದ್ರೋಹ" ಅಲ್ಲವೆ?

sunaath said...

ಪ್ರಕಾಶ,
ಭಾರತದಲ್ಲಿಯೇ ವಿಭಿನ್ನ ಬಣಗಳ ದೇಶದ್ರೋಹಿ ಇತಿಹಾಸಕಾರರಿದ್ದಾರೆ. ಇವರಿಂದಾಗಿಯೇ ಭಾರತದ ನೈಜ ಇತಿಹಾಸವು(--both good and bad--) ನಮ್ಮಿಂದ ಮರೆಯಾಗಿ ಹೋಗಿದೆ.

ಪ್ರ. ಭೀ. ಸತ್ಯಪ್ಪ said...

ಮುಘಲ ದೊರೆ ಶಹಾಜಹಾನನ ಮರಣಾನಂತರ ಜಗನ್ನಾಥ ಪಂಡಿತರು ತಮ್ಮ ಯವನ ಪತ್ನಿ ಲವಂಗಿಯವರೊಂದಿಗೆ ಗಂಗಾ ತೀರದ ವಾರಾಣಸಿಗೆ (ಕಾಶಿಗೆ) ಬಂದು, ನಿರಾಶ್ರಿತರಾಗಿ, ಯವನರಿಂದಲೂ, ಬ್ರಾಹ್ಮಣರಿಂದಲೂ ಬಹಿಷ್ಕೃತರಾಗಿ, ತಮ್ಮ ಮುಪ್ಪಿನ ಜೀವನವನ್ನು ಕಷ್ಟದಲ್ಲಿ ಕಳೆದಿರಬಹುದು.

ಶ್ರೀನಿವಾಸ ಮ. ಕಟ್ಟಿ said...

ಸುನಾಥರೆ, ಗಾಂಧೀಜೀಯವರೆ ಭಗತ್ ಸಿಂಹ, ರಾಜಗುರು, ಸುಖದೇವ್ ಮುಂತಾದವರನ್ನು " ದಾರಿ ತಪ್ಪಿದ ಉಗ್ರಗಾಮಿ ದೇಶಭಕ್ತರು" ಎಂದು ವರ್ಣಿಸಿರುವರೆಂದು ಓದಿದ ನೆನಪು.

V.R.BHAT said...

ಸುನಾಥರೇ, ತಮ್ಮ 'ಗಂಗಾಲಹರಿ'ಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವುದೊಂದೇ ಬಾಕಿ, ವಿದ್ಯೆಗೆ ವಿನಯವೂ ಭೂಷಣ ಎಂದಿದ್ದಾರಲ್ಲ, ಪ್ರಾಯಶಃ ಜಗನ್ನಾಥ ಪಂಡಿತ ಅಹಂ ತ್ಯಜಿಸಿದ್ದರೆ ಇಲ್ಲೀತನಕ ಬರುತ್ತಿರಲಿಲ್ಲವೇನೋ! ಆದ್ರೆ ಆತನ ಸಿಂಹ ಘರ್ಜನೆಯ ಮುಂದೆ ಘನವಿದ್ವಾಂಸ ಅಪ್ಪಯ್ಯದೀಕ್ಷಿತರೇ ಸುಮ್ಮಾನಿದ್ದಾಗ ಇನ್ಯಾರು ಪ್ರಯತ್ನಿಸಿಯಾರು ಬಿಡಿ. ಆದರೂ ಬದುಕಿನ ವೈಚಿತ್ರ್ಯ ಯಾರಿಗೆ ಯಾವಾಗ ಯಾವರೀತಿ ತೊಂದರೆ ಕೊಡುತ್ತದೆ,ಕಷ್ಟ ಕೊಡುತ್ತದೆ, ಸುಖತರುತ್ತದೆ ಇದು ಅರ್ಥವಿಲ್ಲ,ತಿಳಿದಿಲ್ಲ. ತಮ್ಮ ಈ ಪ್ರಬಂಧ ಬಹಳ ಇಷ್ಟವಾಯಿತು, ತಮಗೆ ಸಾವಿರ ಸರ್ತಿ ಗಂಗಾ ಸ್ನಾನದ ಮಾಡಿದ ಪುಣ್ಯ ಸಿಗಲಿ,ಧನ್ಯವಾದಗಳು

sunaath said...

ಸತ್ಯಪ್ಪನವರೆ,
ಶಹಾಜಹಾನನು ಬಂದಿಯಾದ ಬಳಿಕ ಜಗನ್ನಾಥ ಪಂಡಿತನು ಅನುಭವಿಸಿದ ಸಂಕಷ್ಟಗಳ ಬಗೆಗೆ ಎಲ್ಲೆಲ್ಲಿ ಮಾಹಿತಿ ದೊರೆಯುವದೊ ನಾನು ತಿಳಿಯೆ. ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರ ಕೃತಿಯನ್ನು ಆಧರಿಸಿ ನಾನು ಬರೆದಿರುವೆ.

sunaath said...

ಕಟ್ಟಿಯವರೆ,
ಅದು ಗಾಂಧೀಜಿಯವರ ಪ್ರಾಮಾಣಿಕ ಅಭಿಪ್ರಾಯವಾಗಿರಬಹುದು. ಆದರೆ ನಾವು ಅದನ್ನು ಒಪ್ಪಬೇಕಂತಿಲ್ಲ.

sunaath said...

ಭಟ್ಟರೆ,
ಗಂಗಾಲಹರಿಯನ್ನು ಕನ್ನಡಕ್ಕೆ ತಂದ ಶ್ರೇಯಸ್ಸು ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರದು. ನಮ್ಮ ಕೃತಜ್ಞತೆಗಳು ಅವರಿಗೇ ಸಲ್ಲಬೇಕು!

Manjunatha Kollegala said...

ತಮ್ಮ ಓದಿನ ಹರಹು ತುಂಬಾ ದೊಡ್ಡದು. ಜಗನ್ನಾಥ ಪಂಡಿತನ ಬಗ್ಗೆ ಉತ್ತಮ ಬರಹ. "ಇಲ್ಲಿಯವರೆಗೂ ಪಾಂಡಿತ್ಯದ ಕಾವ್ಯವನ್ನು ಸೃಷ್ಟಿಸಿದ್ದ ಜಗನ್ನಾಥ ಪಂಡಿತ, ಇದೀಗ ತನ್ನೆಲ್ಲ ಹಮ್ಮನ್ನು ತೊರೆದು, ಆರ್ತನಾಗಿ ಗಂಗಾದೇವಿಯನ್ನು ಭಕ್ತಿಯಿಂದ ಕೂಗಿ ಕರೆದ" ಎಂಬ ಸಾಲು ಮನಮುಟ್ಟಿತು. ಕಾವ್ಯದ ಮೂಲಸ್ರೋತ ಆರ್ತತೆಯೇ ಅಲ್ಲವೇ?

ಮೈದೊಳೆದ ನೀರಿನೊಡನೆ ಗಂಗೆ ಸೇರಿದ ರಾಜರಮಣಿಯರೆದೆಯ ಕಸ್ತೂರಿಯು ಮೃಗಕ್ಕೆ ಮುಕ್ತಿನೀಡುವಂತೆ, ಹೊಟ್ಟೆಯ ಮಗ ಗಂಗೆಯಲ್ಲಿ ಮಿಂದರೆ ತಾಯಿಗೆ ಮುಕ್ತಿ... ವಾಹ್ ಈ ಬಗೆಯ ಕಾಣ್ಕೆ ಕಲ್ಪನೆ ಬೇಂದ್ರೆಗೆ ಮಾತ್ರ ಸಾಧ್ಯ. ಅದರಲ್ಲೂ ಎದೆಯ ಕಸ್ತೂರಿಗೂ ಹೊಟ್ಟೆಯ ಮಗನಿಗೂ ನೀಡುವ ಹೋಲಿಕೆಯಲ್ಲಿರುವ ಕಾವ್ಯ ಸೂಕ್ಷ್ಮ ಅನನ್ಯ.

ಸುನಾಥರೆ, ಈ ಲೇಖನದ ಮುಂದುವರಿಕೆಯಾಗಿ ತಾವು ಬೇಂದ್ರೆಯವರ ಗಂಗಾಷ್ಟಕದ ಬಗ್ಗೆ ಬರೆಯಲೇ ಬೇಕು, ದಯವಿಟ್ಟು

sunaath said...

ಮಂಜುನಾಥರೆ,
ನಮ್ಮ ಸಾಹಿತ್ಯ ಒಂದು ಸಾಗರದಂತಿದೆ. ಸಂಸ್ಕೃತ ಸಾಹಿತ್ಯವಂತೂ ನನ್ನ ಪಾಲಿಗೆ ಗಗನಕುಸುಮ. ಅನುವಾದ ಓದಿಯೇ ನಾನು ತಿಳಿದುಕೊಳ್ಳಬೇಕು. ಬೇಂದ್ರೆಯವರ ‘ಗಂಗಾಷ್ಟಕ’ವನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತೇನೆ.

Badarinath Palavalli said...

I will take print out of this article sir.

ನಿಮ್ಮೆಲ್ಲರ ಪ್ರೀತಿಗೆ ನನ್ನ ಶರಣು.

ನಮ್ಮ ಕಸ್ತೂರಿ ಛಾನೆಲ್ ಹೊಸ ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಸ್ವಲ್ಪವೂ ಬಿಡುವಿಲ್ಲದೆ ಶೂಟಿಂಗ್ ನಡೆಯುತ್ತಿದೆ. ಆ ಕಾರಣಕ್ಕೆ ಬರೆಯಲಾಗಿರಲಿಲ್ಲ.

ಕೀರಂರವರ ಅಕಾಲೀನ ಸಾವು ನನ್ನನ್ನು ಬಹಳ ಕಾಡುತ್ತಿದೆ.

sunaath said...

ಬದರಿನಾಥರೆ,
ಕಿ.ರಂ. ರವರ ಸಾವು ನಮಗೆಲ್ಲರಿಗೂ ಆಘಾತ ಮಾಡಿದೆ. ಕನ್ನಡದ ಶ್ರದ್ಧಾವಂತ ಪರಿಚಾರಕನನ್ನು ಕಳೆದುಕೊಂಡೆವು.
ನಿಮ್ಮ ಕಾರ್ಯಕ್ರಮಗಳಲ್ಲಿ ಬಿಡುವು ಮಾಡಿಕೊಂಡು ಬ್ಲಾಗಿನಲ್ಲಿ ಬರೆಯುತ್ತಿರಿ.

ಸೀತಾರಾಮ. ಕೆ. / SITARAM.K said...

ಜಗನ್ನಾಥ ಪಂಡಿತ-ಗಂಗಾಲಹರಿ-ಬೇಂದ್ರೆಯವರು-ಗಲಗಲಿ ಆಚಾರ್ಯರುಎಂದು ಹಲವಾರು ಇತಿಹಾಸದ ಮಹತ್ವದ ಕಾವ್ಯ-ಜನ-ಅವರ ಬದುಕು ಈಗಿನೊಂದಿಗಿನ ಜನರೊಡನೆ ಅವರ ಕಾವ್ಯಗಳೊಂದಿಗೆ ಹೇಳಿ ಉಪಯುಕ್ತ ಮಾಹಿತಿ ನೀಡಿದ್ದೀರಾ... ಧನ್ಯವಾದಗಳು.
ಗಲಗಲಿ ಆಚಾರ್ಯರು ಉದ್ಧಾನ ಪಂಡಿತರು ಮತ್ತು ಅದ್ಭುತ ಪ್ರವಚನಕಾರರು- ಧಾರವಾಡದ ಮಾಳಮಡ್ಡಿಯ ವಿದ್ಯಾರ್ಥಿನಿಲಯದಲ್ಲಿದ್ದಾಗ ರಾಮಮಂದಿರದಲ್ಲಿ ಪ್ರತಿವರ್ಷಡ ಅವರ ಪ್ರವಚನ ಕೇಳುತ್ತಿದ್ದದ್ದು ನೆನಪಾಯಿತು.

AntharangadaMaathugalu said...

ಸುನಾಥ ಕಾಕಾ
ಜಗನ್ನಾಥ ಪಂಡಿತರ ಮತ್ತು ಲವಂಗಿಯ ಕಥೆ ತಿಳಿಸಿದ ನಿಮಗೆ ಧನ್ಯವಾದಗಳು. ಗಂಗಾಲಹರಿಯ ಗುಂಗಿನಿಂದ ಹೊರಬರಲು ತುಂಬಾ ಸಮಯ ಬೇಕು. ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆ...... ಧನ್ಯವಾದಗಳು

ಶ್ಯಾಮಲ

ಸಾಗರದಾಚೆಯ ಇಂಚರ said...

ಸುನಾಥ್ ಸರ್
ಅದ್ಭುತ ಬರಹ ಎಂದಿನಂತೆ

ಉಪಯುಕ್ತ ಮಾಹಿತಿ

sunaath said...

ಸೀತಾರಾಮರೆ,
ಆಚಾರ್ಯರ ಹಲವು ಪ್ರವಚನಗಳನ್ನು ಕೇಳಿದ ನೀವೇ ಧನ್ಯರು.
ನಾನು ಒಂದೇ ಸಲ ಅವರ ಗಂಗಾಲಹರಿ ಉಪನ್ಯಾಸ ಕೇಳಿದ್ದೇನೆ.

sunaath said...

ಶ್ಯಾಮಲಾ,
ಗಂಗಾಲಹರಿಯ ಓದು ಎಂದರೆ, ಭೋರ್ಗರೆಯುವ ನದಿಯಲ್ಲಿ ಈಜಿದಂತೆ. ಸಹಜವಾಗಿಯೇ ಅದು ಗುಂಗು ಹಿಡಿಸುವಂತಹದು.

sunaath said...

ಗುರುಮೂರ್ತಿಯವರೆ,
ನಮ್ಮ ಪೂರ್ವಸಾಹಿತಿಗಳ, ವಿಜ್ಞಾನಿಗಳ ಮಾಹಿತಿ ನಮಗೆ ಬೇಕು. ಮೇರಾ ಭಾರತ ಮಹಾನ್ ಎನ್ನುತ್ತೇವಲ್ಲ, ಅದು ಬಹುಶ; ಹಳೆಯ ಭಾರತಕ್ಕೇ ಇರಬೇಕು!

ಜಲನಯನ said...

ಸುನಾಥಣ್ಣನಿಗೆ ನಮನ ಮತ್ತೊಂದು ಮನೋಹರ..ಮಾಹಿತೀಪೂರ್ಣ ಉದ್ದಾಮಪಂಡಿತ ಕವಿಯ ಪರಿಚಯಕ್ಕೆ..ಬೇಂದ್ರೆಯಂಥವರು ಇವರ ಕೃತಿಗಳಿಂದ ಪ್ರೇರಿತರಾದರು ಎಂದರೆ ನಿಜಕ್ಕೂ ಎಂಥ ಶ್ರೇಣಿಯ ಪಂಡಿತ ಕವಿಯಾಗಿದ್ದರು ಜಗನಾಥರು ಎನ್ನುವುದು ವಿದಿತ. ಉದ್ದಾಮಪಾಂಡಿತ್ಯ ಧರ್ಮಗಳ ಕಟ್ಟುಪಾಡುಗಳಿಗೆ ಸೊಪ್ಪು ಹಾಕುವುದಿಲ್ಲ ಎಂದೆನಿಸುತ್ತದೆ ಅಲ್ಲವೇ..? ಆದರೆ ಇಂತಹ ಗಹನವಿಚಾರವಾದಿಗಳು ಕೆಲವು ಉತ್ಕಟತೆಗಳಿಗೆ ಈಡಾಗುತ್ತಾರೆ ಎನ್ನುವುದು ವಿಪರ್ಯಾಸ ಅಲ್ಲವೇ..? ರಾಜಾಶ್ರಯದ ಮಹಾನ್ ಪಂಡಿತರು, ಗಾಯಕರು ದಾಸಿಯರಿಗೆ ಮರುಳಾಗಿ ಅವರ ದಾಸರಾದ ಕಥೆಗಳು ಇವೆಯಲ್ಲ...
ಒಟ್ಟಿನಲ್ಲಿ ಇದು ಬಹು ಮಾಹಿತಿಪೂರ್ಣ...ತಿಳೆಬಿಡಿಸಿದ ಮತ್ತೊಂದು ಹಣ್ಣು,,,ನಮಗೆ...ಧನ್ಯವಾದ..

sunaath said...

ಜಲನಯನ,
ಅಂತಃಪುರದ ಆಮಿಷಗಳಿಗೆ ಬಲಿಯಾಗದವರಾರು? ಆದರೂ ಸಹ ಕವಿಗಳಿಗೆ, ಪಂಡಿತರಿಗೆ ರಾಜಾಶ್ರಯ ಅವಶ್ಯವಿದೆ. ಒಟ್ಟಿನಲ್ಲಿ ಜಗನ್ನಾಥ
ಪಂಡಿತನದು ಒಂದು ರಂಗೀನ ಬದುಕು!

ಅಪ್ಪ-ಅಮ್ಮ(Appa-Amma) said...

ಸುನಾಥ್ ಕಾಕಾ,

ಜಗನ್ನಾಥ ಪಂಡಿತರು, ಗಲಗಲಿಯವರು ಮತ್ತು ಬೇಂದ್ರೆಜ್ಜರವರ ಗಂಗಾಲಹರಿಯಲ್ಲಿ ನಮ್ಮನ್ನು ಮೀಯಲು ಕರೆದೊಯ್ದದಕ್ಕೆ ನಿಮಗೆ ವಂದನೆಗಳು

sunaath said...

ಶಿವಶಂಕರ ದಂಪತಿಗಳೆ,
ನವಜಾತ ಮಗುವಿನ ಬಗೆಗಿರುವ ನಿಮ್ಮ ವಾತ್ಸಲ್ಯವು ನಿಮ್ಮ ಉಳಿದೆಲ್ಲ identityಗಳಿಗಿಂತ, ‘ಅಪ್ಪ-ಅಮ್ಮ’ ಎನ್ನುವ identityಯನ್ನೇ ನಿಮಗೆ ಪ್ರಿಯವಾಗಿಸಿದೆಯೆಲ್ಲವೆ? ಸಂತಾನವಾತ್ಸಲ್ಯವೇ ಸೃಷ್ಟಿರಹಸ್ಯ!

‘ಗಂಗಾಲಹರಿ’ ಜಗನ್ನಾಥನದು, ಕನ್ನಡಿಸಿದವರು ಪಂಢರಿನಾಥಾಚಾರ್ಯರು. ನಾನು ಕೇವಲ tourist guide!

ದಿನಕರ ಮೊಗೇರ said...

nimma blog nijakkoo maahitiya kanaja.... GANGAA LAHARI odi taNNagaaytu mana....

tumbaa tumbaa dhanyavaada...
aaug 22 kke banni sir... ellaru nimmannu nodida haagaagatte.... banni sir....

Umesh Balikai said...

ಸುನಾಥ ಅಂಕಲ್,

ಜಗನ್ನಾಥ ಪಂಡಿತರ ಮತ್ತು ಬೇಂದ್ರೆಯವರ ಸಾಹಿತ್ಯಿಕ ಸಂಬಧದ ಬಗ್ಗೆ ನಮಗೆ ತುಂಬ ಉಪಯುಕ್ತ ಮಾಹಿತಿಯನ್ನು ಒದಗಿಸಿ ಕೊಟ್ಟಿದ್ದೀರಿ.

ಧನ್ಯವಾದಗಳು

sunaath said...

ದಿನಕರ,
‘ಗಂಗಾಲಹರಿ’ಯು ಗಂಗಾನದಿಯಂತೆ ಇರುವ ಕಾವ್ಯಪ್ರವಾಹ.
ಅಲ್ಲಿ ಈಜುವವರಿಗೆ ಉಲ್ಲಾಸ ದೊರೆಯದೇ ಇರದು.

sunaath said...

ಉಮೇಶ,
Pleasure is mine!

shridhar said...

ಕಾಕಾ,
ತುಂಬ ಉಪಯುಕ್ತ ಮಾಹಿತಿ ..

sunaath said...

ಶ್ರೀಧರ,
ನಿಮಗೆ ಧನ್ಯವಾದಗಳು.

ಶ್ರೀನಿವಾಸ ಮ. ಕಟ್ಟಿ said...

ಅರವತ್ಮೂರು ವರ್ಷಗಳ ( ೮-೧೦ ವರ್ಷ ಬಿಟ್ಟು) ಕಾಂಗ್ರೆಸ್ ರಾಜ್ಯದಲ್ಲಿ, ಗಾಂಧಿಯವರ ಅಭಿಪ್ರಾಯವೇ ( ಅದು ಪ್ರಾಮಾಣಿಕವಾಗಿರಲಿ ಅಥವಾ ಬಿಡಲಿ)ಪರಮ ಸತ್ಯವೆಂದು ಬಿಂಬಿಸಲಾಗಿದೆ. ಅದನ್ನು ಒಪ್ಪದವರು ದೇಶದ್ರೋಹಿಗಳೆಂಬ ಭಾವನೆ ಹುಟ್ಟುವ ಮಟ್ಟದವರೆಗೆ ಪ್ರಜೆಗಳಿಗೆ "ಬ್ರೇನ್‍ವಾಷ್" ಮಾಡಲಾಗಿದೆ. ಗಾಂಧಿಯವರು ಬೋಸ್‍ರನ್ನು ಕಾಂಗ್ರೆಸ್ ಬಿಡುವಂತಹ ಪರಿಸ್ಥಿತಿ ನಿರ್ಮಿಸಿದ್ದು, ಪಟೇಲರ ಬದಲು ನೆಹರೂರನ್ನು ಪ್ರಧಾನಿ ಮಾಡಿದ್ದು, ದೇಶದ ವಿಭಜನೆಗೆ ಕಾರಣರಾದದ್ದು, ನಂತರ ಪಾಕಿಸ್ತಾನಕ್ಕೆ ನೂರಾರು ಕೋಟಿ ಹಣವನ್ನು ಕೊಡಲು ಒತ್ತಾಯಿಸಿ ಉಪವಾಸ ಮಾಡಿದ್ದು ಎಲ್ಲವೂ ದೇಶದ ಪ್ರಾಮಾಣಿಕ ಸೇವೆಯೇ ! ಈ ರಾಷ್ಟ್ರ ೧೯೪೭ರಲ್ಲಿ ಹುಟ್ಟಲಿಲ್ಲ. ಇಲ್ಲಿ ಹುಟ್ಟಿದವರು ಭಾರತಮಾತೆಯ ಸುಪುತ್ರ-ಸುಪುತ್ರಿಯರು. ಗಾಂಧಿಯವರು ಹುಟ್ಟುವದಕ್ಕಿಂತ ಸಾವಿರಾರು ವರ್ಷಗಳ ಮೊದಲೇ ಭರತಖಂಡ ಅಸ್ತಿತ್ವದಲ್ಲಿತ್ತು. ಅಂತಹದರಲ್ಲಿ ಗಾಂಧಿ ಭಾರತದ "ರಾಷ್ಟ್ರಪಿತ" ಹೇಗಾದಾರು ? ಭಟ್ಟಂಗಿತನಕ್ಕೂ (sycophancy)ಒಂದು ಮಿತಿ ಬೇಡವೇ ?

sunaath said...

ಕಟ್ಟಿಯವರೆ,
ಗಾಂಧೀಜಿಯವರು ಒಬ್ಬ ಪಾರದರ್ಶಕ ಸಂತ. ಅವರ ಪ್ರಾಮಾಣಿಕತೆ ಅಪ್ರಶ್ನಾರ್ಹ.

ಶ್ರೀನಿವಾಸ ಮ. ಕಟ್ಟಿ said...

ಪಂಚಭೂತಗಳಿಂದಾದ ದೇಹ ಹೊಂದಿದ ಯಾವ ಮಾನವನೂ ಅ-ಪ್ರಶ್ನಾರ್ಹನಾಗಲಾರನು.

Nanda Kishor B said...

ಬರಹ ಖುಶಿಕೊಟ್ಟಿತು sir..
ಶ್ರೀವತ್ಸ ಜೋಶಿಯವರ ಲೇಖನದ ಮೂಲಕ ಇಲ್ಲಿಗೆ ಬಂದೆ.. ಸಂತೋಶವಾಯಿತು:):)

hamsanandi said...

ಸುನಾಥ ಅವರೆ, ಬಹಳ ಚೆನ್ನಾಗಿದೆ ಬರಹ!

ಜಗನ್ನಾಥ ಪಂಡಿತನ ಶ್ಲೋಕವೊಂದನ್ನು, ನಾನು ಅವನದು ಎಂದು ತಿಳಿಯುವುದಕ್ಕೆ ಮೊದಲು ಅನುವಾದಿಸಿದ್ದೆ. ಅದನ್ನ ಇಲ್ಲಿ ನೋಡಬಹುದು: http://hamsanada.blogspot.com/2008/01/blog-post_21.html