Monday, September 26, 2011

ಡೊಂಕು ಬಾಲದ ನಾಯಕರೆ...


ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?

ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!

ಪುರಂದರದಾಸರ ಜನಪ್ರಿಯ ಗೀತೆಯಿದು. ಈ ಗೀತೆಯಲ್ಲಿ ದಾಸರು ಮನುಷ್ಯನ ಮನಸ್ಸನ್ನು ನಾಯಿಯ ಡೊಂಕು ಬಾಲಕ್ಕೆ ಹೋಲಿಸಿದ್ದಾರೆ. ‘ನಾಯಿಯ ಬಾಲ ಲಳಿಗೆಯಲ್ಲಿ ಹಾಕಿದರೂ ಡೊಂಕೇ’ ಎನ್ನುವ ಗಾದೆ ಮಾತು ಇದೆಯಲ್ಲ! ಅದೇ ತರಹ, ಮನುಷ್ಯನ ಮನಸ್ಸೂ ಸಹ ಮತ್ತೆ ಮತ್ತೆ ವಿಷಯಭೋಗಗಳ ಕಡೆಗೇ ಹರಿಯುತ್ತದೆ. ಕಣಕದ ಅಥವಾ ಹುಗ್ಗಿಯ ವಾಸನೆಯನ್ನು ಹಿಡಿದು ಹೋದ ನಾಯಿಗೆ ಒನಕೆಯ ಅಥವಾ ಸವಟಿನ ಪೆಟ್ಟು ತಪ್ಪಿದ್ದಲ್ಲ. ಅದೇ ರೀತಿ ವಿಷಯವಾಸನೆಯನ್ನು ಹಿಡಿದು ಹೋಗುವ ಮನುಷ್ಯನಿಗೂ ಸಹ ವಿಧಿಯ ಪೆಟ್ಟು ತಪ್ಪಿದ್ದಲ್ಲ. ಈ ಪೆಟ್ಟೇ ಮನುಷ್ಯನಿಗೆ ಸಿಗುವ ಊಟ ಅಥವಾ ಕರ್ಮಫಲ! ಇದು ದಾಸರ ಸಂದೇಶ. ಹಾಗೆಂದ ಮಾತ್ರಕ್ಕೆ ಈ ವಿಷಯದಲ್ಲಿ ಮನುಷ್ಯನನ್ನೇ ಸಂಪೂರ್ಣವಾಗಿ ದೂರುವಂತಿಲ್ಲ. ಮನುಷ್ಯನು ಭಗವಂತನ ಸೂತ್ರದ ಗೊಂಬೆ. ಆದುದರಿಂದ ಪುರಂದರ ವಿಠ್ಠಲನು ತೋರಿದ ಆಟಗಳನ್ನು ಈ ಗೊಂಬೆ ಆಡುತ್ತಿದೆ ಎನ್ನುವದು ದಾಸರು ಕೊಡುವ ಸಮಾಧಾನ.

ಪುರಂದರದಾಸರ ಗೀತೆಗಳೆಲ್ಲವೂ ಸರಳ ಗೀತೆಗಳು. ಅವುಗಳಲ್ಲಿಯ ಸಂದೇಶ ಅಥವಾ ನೀತಿಬೋಧೆ ಸರಳವಾಗಿಯೇ ಇರುತ್ತದೆ. ಆದರೆ ‘ಡೊಂಕು ಬಾಲದ ನಾಯಕರೆ’ ಎನ್ನುವ ಈ  ಗೀತೆಯಲ್ಲಿ ಒಂದು ಸ್ವಾರಸ್ಯಕರವಾದ ಶ್ಲೇಷೆ ಇದೆ. ಅದೇ ಈ ಗೀತೆಗೆ ವಿಶೇಷ ಅರ್ಥವನ್ನು ಕೊಡಲು ಕಾರಣವಾಗಿದೆ. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕ ಎನ್ನುವದು ಎಲ್ಲರಿಗೂ ತಿಳಿದ ಸಂಗತಿ. ಈ ಹಾಡಿನ ಪಲ್ಲವಿಯಲ್ಲಿ ‘ಡೊಂಕು ಬಾಲದ ನಾಯಕರೆ’ ಎನ್ನುವ ಪದಪುಂಜವನ್ನು ಗಮನಿಸಿ. ಈ ಸಂಬೋಧನೆಯು ನಾಯಿಯನ್ನು ಉದ್ದೇಶಿಸಿರುವದು ಎನ್ನುವದು ಸಾಮಾನ್ಯ ಅರ್ಥ. ಅದರ ಜೊತೆಗೇ ದಾಸರು ‘ನಾಯಕರೆ’ ಎಂದು ಶ್ರೀನಿವಾಸ ನಾಯಕರನ್ನು ಅಂದರೆ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿರುವದು ಇಲ್ಲಿಯ ವಿಶೇಷಾರ್ಥ. ಬಹುಶಃ ದಾಸರು ತಮಗೆ ತಾವೇ ಹೀಗೆ ಹೇಳಿಕೊಳ್ಳುತ್ತಿರಬಹುದು:

ನಾಯಕಾ, ನೀನು ವೈರಾಗ್ಯವೃತ್ತಿಯನ್ನು ತಾಳಿ ದಾಸನಾದೆ ಎಂದು ಹೇಳಿಕೊಳ್ಳುತ್ತೀಯಾ. ಆದರೆ ನಿನ್ನ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಇದೆ. ಮತ್ತೆ ಮತ್ತೆ ನಿನ್ನ ಮನಸ್ಸು ಸಂಸಾರದ ಸುಖಗಳ ಕಡೆಗೆ ಹರಿಯುತ್ತದೆ. ಇದನ್ನು ನಿಯಂತ್ರಿಸದಿದ್ದರೆ, ನೀನು ಮತ್ತೆ ಮತ್ತೆ ಪೆಟ್ಟು ತಿನ್ನುತ್ತೀಯಾ!
ಭಗವಂತಾ, ವಿಠ್ಠಲಾ! ನನ್ನ ಮನಸ್ಸಿನ ಆಟಗಳೆಲ್ಲಕ್ಕೂ ನೀನೆ ಹೊಣೆ. ನೀನು ಆಡಿಸಿದಂತೆ ನಾನು ಆಡುತ್ತಿದ್ದೇನೆ.

ಆದುದರಿಂದ ‘ನಾಯಕರೆ’ ಎಂದು ಹೇಳುವ ಮೂಲಕ, ದಾಸರು ಈ ಹಾಡನ್ನು  ಕೇವಲ ಪರರಿಗೆ ನೀತಿಬೋಧೆಯನ್ನು ಮಾಡಲು ಹಾಡಿಲ್ಲ, ತಮಗೆ ತಾವೇ ಆತ್ಮಬೋಧೆಗಾಗಿ ಹಾಡಿದ್ದಾರೆ ಎಂದೆನಿಸುವದು.

ಪುರಂದರದಾಸರ ಪರಿವರ್ತನೆಯ ಬಗೆಗಿರುವ ಜನಜನಿತ ಕತೆಯಿಂದಾಗಿ ಅವರ ವ್ಯಕ್ತಿತ್ವದ ಅನೇಕ ಆಯಾಮಗಳು ಮಸುಕಾಗಿ ಹೋಗಿವೆ. ಶ್ರೀನಿವಾಸ ನಾಯಕರು ಪುರಂದರದಾಸರಾಗಿ ಬದಲಾಗುವದಕ್ಕಿಂತ ಮೊದಲಿನಿಂದಲೂ ಸಂಗೀತವಿದ್ವಾಂಸರು, ಅಧ್ಯಯನಶೀಲರು, ಬಹುಶ್ರುತರು ಹಾಗು ದೇವಭಕ್ತರು ಆಗಿರಬೇಕು. ಅವರ ಕೀರ್ತನೆಗಳಲ್ಲಿ ಬರುವ ಕೆಲವು ಸಾಲುಗಳನ್ನು ಗಮನಿಸಿರಿ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ಹೂವ ತರುವರ ಮನೆಗೆ ಹುಲ್ಲ ತರುವ’, ‘ಉದರವೈರಾಗ್ಯವಿದು’,‘ದಾರಿ ಯಾವುದಯ್ಯಾ ವೈಕುಂಠಕೆ’, ‘ಅಲ್ಲಿರುವದು ನಮ್ಮ ಮನೆ, ಇಲ್ಲಿರುವದು ಸುಮ್ಮನೆ’ ಇಂತಹ ಅನೇಕ ಸಾಲುಗಳಲ್ಲಿ, ಗೀತೆಗಳಲ್ಲಿ ದಾಸರ ಸಾಹಿತ್ಯಪ್ರತಿಭೆ ವ್ಯಕ್ತವಾಗುತ್ತದೆ.  

ಪುರಂದರದಾಸರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯಲಾಗುತ್ತಿದೆ. ದಾಸರಾಗುವ ಮೊದಲೂ ಸಹ ಅವರಿಗೆ ಸಾಹಿತ್ಯದಲ್ಲಿ ಹಾಗು ಸಂಗೀತದಲ್ಲಿ ಪರಿಣತಿ ಇರಲೇ ಬೇಕಲ್ಲವೆ? ಇಲ್ಲದೆ ಹೋದರೆ, ಅವರು ತಮ್ಮ ನೂರಾರು ಕೀರ್ತನೆಗಳನ್ನು ರಾಗಬದ್ಧವಾಗಿ ರಚಿಸಲು ಸಾಧ್ಯವಾಗುತ್ತಿರಲಿಲ್ಲ. ದಾಸರಾಗುವ ಪೂರ್ವದಲ್ಲಿ ಶ್ರೀನಿವಾಸ ನಾಯಕರ ಐಹಿಕ ಆಸೆಗಳು ಏನೇ ಇರಲಿ, ಈ ಲೌಕಿಕಕ್ಕೆ ಅವರ ಮನಸ್ಸು ಎಷ್ಟೇ ಕಟ್ಟು ಬಿದ್ದಿರಲಿ, ತಮ್ಮ ಮನೆಯಲ್ಲಿ, ತಮ್ಮ ಮನದಲ್ಲಿ ಅವರು ದೇವರನ್ನು ಶ್ರದ್ಧಾಪೂರ್ವಕವಾಗಿ ಪೂಜಿಸುತ್ತಿರಬಹುದು. ಆ ಸಮಯದಲ್ಲಿ ಸಂಗೀತದ ಮೂಲಕ ದೇವರನ್ನು ಭಜಿಸುತ್ತಿರಬಹುದು. ಅವರ ಕೀರ್ತನೆಯೊಂದನ್ನು ಗಮನಿಸಿದರೆ ಅವರಿಗಿರುವ ಅಪಾರ ಸಂಗೀತಜ್ಞಾನದ ಕಲ್ಪನೆಯಾಗುತ್ತದೆ:

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ
ಮಂಗಳ ನಾಮವ ಪಾಡಿ ರಂಗನ ಕುಣಿಸುವರು
ಪಾಡಿ ಮಲ್ಹಾರಿ ಭೈರವಿ ಸಾರಂಗಿ ದೇಸಿ
ಗುಂಡಕ್ರಿಯೆ ಗುರ್ಜರಿ ಕಲ್ಯಾಣಿ ರಾಗದಿ
ತಂಡ ತಂಡದಲಿ ನೆರೆದು ರಂಗನ ಉಡಿಯ ಘಂಟೆ
ಘಣ ಘಣ್ ಘಣಿರೆಂದು ಹಿಡಿದು ಕುಣಿಸುವರು

ಅವರು ಲೌಕಿಕರಿದ್ದಾಗ ದೇವರ ಪೂಜೆಯನ್ನು ಬಲು ಆಡಂಬರದಿಂದ ನೆರವೇರಿಸುತ್ತಿರಬಹುದು. ಜ್ಞಾನೋದಯವಾದ ಬಳಿಕ ಈ ಆಡಂಬರದ ವ್ಯರ್ಥತೆಯನ್ನು ಅರಿತ ಅವರು ‘ಉದರವೈರಾಗ್ಯವಿದು ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ’ ಎಂದು ಹಾಡಿರಬಹುದು. ಅಷ್ಟೇ ಏಕೆ, ತಾವೇ ಮೊದಲು ಮಾಡುತ್ತಿರಬಹುದಾದ ‘ಮಡಿ ಆಚರಣೆ’ ವ್ಯರ್ಥವೆಂದು ಅರಿತುಕೊಂಡೇ ಅವರು ‘ಮಡಿ ಮಡಿ ಎಂದು ಅಡಿಗಡಿಗೆ ಹಾರುವಿ’ ಎಂದು ‘ಮಡಿವಂತ’ರನ್ನು ಹೀಯಾಳಿಸಿರಬಹುದು.

ಈ ಆಡಂಬರ, ಈ ಮಡಿ ‘ಈ ಆನೆ, ಕುದುರೆ, ಒಂಟೆ ಎಲ್ಲಾ’ ಲೊಳಲೊಟ್ಟೆ ಎಂದು ಶ್ರೀನಿವಾಸ ನಾಯಕರಿಗೆ ಅರಿವಾದದ್ದು ಹೇಗೆ?  ಜನಪ್ರಿಯ ಕತೆಯು ಹೇಳುವಂತೆ ಶ್ರೀನಿವಾಸ ನಾಯಕರು ಜಿಪುಣಾಗ್ರೇಸರರು. ತಮ್ಮ ಹೆಂಡತಿಯು ತನ್ನ ಮೂಗುತಿಯನ್ನು ದಾನವಾಗಿ ಕೊಟ್ಟಿರಬಹುದು ಎನ್ನುವ ಸಂದೇಹದಿಂದ ಅವಳನ್ನು ಪರೀಕ್ಷಿಸುತ್ತಾರೆ. ವಿಷ ತೆಗೆದುಕೊಳ್ಳಲು ಹೋದ ಅವಳಿಗೆ ವಿಷದ ಬಟ್ಟಲಿನಲ್ಲಿ ಮೂಗುತಿ ದೊರೆತುದರಿಂದ, ಆ ವಿಷಮ ಸನ್ನಿವೇಷದಿಂದ ಅವಳು ಪಾರಾಗುತ್ತಾಳೆ. ಇದು ನಾಯಕರ ಮನಃಪರಿವರ್ತನೆಗೆ ಕಾರಣವಾಗುತ್ತದೆ. ಈ ಪವಾಡವು ನಿಜವೆ? ನಿಜವಾಗಿಯೂ ಏನಾಯಿತು ಎನ್ನುವದನ್ನು ಈಗ ತಿಳಿಯಲು ಸಾಧ್ಯವಾಗಲಿಕ್ಕಿಲ್ಲ. ಆದರೆ ಇದರ ಸಂಭಾವ್ಯತೆಗಳನ್ನು ಹೀಗೆ ಊಹಿಸಬಹುದು:

(೧) ಇದು ನಿಜವಾಗಿಯೂ ಆದಂತಹ ಪವಾಡ.
(೨) ಮನೋಚಲನ ಶಕ್ತಿ ಎನ್ನುವದು ಒಂದು ಇದೆ ಎನ್ನುವದನ್ನು ಪರಾಮನೋವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಮೂಗುತಿಯು ಬಟ್ಟಲಿನಲ್ಲಿ ಬಂದಿದ್ದು ಹಾಗು ಮರಳಿ ನಾಯಕರ ತಿಜೋರಿಗೆ ಹೋಗಿದ್ದು ಅವರ ಸಾಧ್ವಿ ಹೆಂಡತಿಯ ಮನೋಚಲನ ಶಕ್ತಿಯಿಂದ ಆಗಿರಬಹುದು.
(೩) ವಿಷಪ್ರಾಶನ ಮಾಡಲು ಉದ್ಯುಕ್ತಳಾದ ಅಥವಾ ಮಾಡಿದಂತಹ ಹೆಂಡತಿಯನ್ನು ಕಂಡು, ನಾಯಕರ ಮನಸ್ಸಿನ ಮೇಲೆ ವಿಪರೀತ ಪರಿಣಾಮವಾಗಿ ಅವರು ಬದಲಾಗಿರಬಹುದು.

ಏನೇ ಆಗಿರಲಿ, ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ಸಂಭವಿಸಿದೆ. ಈ ಘಟನೆಯ ಪರಿಣಾಮವಾಗಿ ಅವರ ಮೊದಲಿನ ವ್ಯಾವಹಾರಿಕ ನಂಬಿಕೆಗಳು ಅಳಿದು, ಅವರಲ್ಲಿ ಆಧ್ಯಾತ್ಮಿಕ ನಂಬಿಕೆಗಳು ಮೂಡಿವೆ. ಈ ತರಹದ ಪರಿವರ್ತನೆಯನ್ನು ರಶಿಯದ ಖ್ಯಾತ ವರ್ತನಾವಿಜ್ಞಾನಿ ಪಾವ್ಲೋವ್(೧೮೪೯-೧೯೩೬) ಗಮನಿಸಿದ್ದಾನೆ. ಆತನ ಪ್ರಯೋಗಶಾಲೆಗೆ ಒಮ್ಮೆ ಪ್ರವಾಹದ ನೀರು ನುಗ್ಗಿದಾಗ, ಅಲ್ಲಿದ್ದ ನಾಯಿಗಳಲ್ಲಿ ಕೆಲವು ಸತ್ತೇ ಹೋದವು. ಬದುಕುಳಿದ ನಾಯಿಗಳಲ್ಲಿದ್ದ ‘ಸಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ(=strong  conditioned reflexes) ನಶಿಸಿ, ದುರ್ಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ (= weak conditioned reflexes) ಮೇಲೆದ್ದವು’ ಎಂದು ಪಾವ್ಲೋವ್ ದಾಖಲಿಸಿದ್ದಾನೆ.

ಒಟ್ಟಿನಲ್ಲಿ ಶ್ರೀನಿವಾಸ ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ನಡೆಯಿತು. ಆಧ್ಯಾತ್ಮವನ್ನು ನಂಬದವರು ಈ ಘಟನೆಯು ಅವರ ಮೊದಲಿನ ನಂಬುಗೆಗಳನ್ನು ಅಂದರೆ ವ್ಯಾವಹಾರಿಕ ಮನೋಭಾವನೆಯನ್ನು ಬದಲಾಯಿಸಿತು ಎಂದು ಹೇಳಬಹುದು. ಆಧ್ಯಾತ್ಮಜೀವನದಲ್ಲಿ ನಂಬುಗೆ ಇದ್ದವರು ಈ ಘಟನೆಯಿಂದಾಗಿ ನಾಯಕರ ಕಣ್ಣು ತೆರೆಯಿತು ಎಂದು ಹೇಳಬಹುದು. ಏನೇ ಆಗಲಿ, ಈ ಆಘಾತಕಾರಿ ಘಟನೆಯಿಂದಾಗಿ ಕನ್ನಡಿಗರಿಗೆ ಓರ್ವ ಶ್ರೇಷ್ಠ ದಾರ್ಶನಿಕ ಮಾರ್ಗದರ್ಶಕರು ದೊರೆತರು, ಕರ್ನಾಟಕ ಸಂಗೀತ ಪಿತಾಮಹ ದೊರೆತರು. ಇದಕ್ಕೆಲ್ಲ ಕಾರಣಳಾದವರು ನಾಯಕರ ಹೆಂಡತಿ.
‘ಹೆಂಡತಿ ಸಂತತಿ ಸಾವಿರವಾಗಲಿ,
ದಂಡಿಗೆ ಬೆತ್ತ ಹಿಡಿಸಿದಳಯ್ಯ’ ಎಂದು ದಾಸರೇ ತಮ್ಮ ಹೆಂಡತಿಯ ಉಪಕಾರವನ್ನು ಸ್ಮರಿಸಿದ್ದಾರೆ.
ಆ ಸಾಧ್ವಿಗೆ ಕನ್ನಡಿಗರು ಚಿರಕೃತಜ್ಞರು.

ಪ್ರತಿಯೊಬ್ಬ ಮಹಾನುಭಾವನ ಹಿಂದೆ ಒಬ್ಬ ಮಹಾನ್ ಸ್ತ್ರೀ ಇರುತ್ತಾಳೆ ಎನ್ನುವ ಮಾತಿಗೆ ಈ ಘಟನೆ ನಿದರ್ಶನವಾದೀತು. ಕೆಲವು ನಗೆಗಾರರು `ದಾರ್ಶನಿಕರಾಗಲು ಮದುವೆಯಾಗಬೇಕು ಎಂದು ಸಾಕ್ರೆಟೀಸನ ಉದಾಹರಣೆ ಕೊಟ್ಟು ಹಾಸ್ಯ ಮಾಡಲೂ ಬಹುದು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲನ್ನು ಓದಿದಾಗ ನನಗೆ ನೆನಪಾಗುವದು ಇಂಗ್ಲೀಶ ಕವನವೊಂದರ ಸಾಲು:
Abou Ben Adhem
(may his tribe increase)
ಲೀ ಹಂಟ್ ಎನ್ನುವ ಇಂಗ್ಲಿಶ್ ಕವಿ ಈ ಕವನವನ್ನು  ಕ್ರಿ. ಶ. ೧೮೩೪ರಲ್ಲಿ ಬರೆದನು. ದಾಸರು ಕ್ರಿ.ಶ. ೧೪೮೪-೧೫೬೪ರಲ್ಲಿ ಬಾಳಿದವರು. ಇಬ್ಬರೂ ಬೇರೆ ಬೇರೆ ದೇಶ ಹಾಗು ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೆಳೆದವರು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲಿಗೂ ‘may his tribe increase ಎನ್ನುವ ಸಾಲಿಗೂ ಎಂಥಾ ಸಾಮ್ಯತೆ ಇದೆಯಲ್ಲವೆ! ಕಾವ್ಯಕ್ಕೆ ಕಾಲ, ದೇಶ ಹಾಗು ಸಂಸ್ಕೃತಿಯ ಭೇದ ಇದ್ದೀತೆ?

ವೈರಾಗ್ಯವನ್ನು ತಾಳಿ, ಸನ್ಯಾಸವನ್ನು ಸ್ವೀಕರಿಸಿದವರು ಅನೇಕರಿದ್ದಾರೆ. ಇವರೆಲ್ಲ ತಮ್ಮ ಸಂಪತ್ತನ್ನು ತಮ್ಮ ಹೆಂಡತಿ, ಮಕ್ಕಳಿಗೆ ಬಿಟ್ಟು ಸನ್ಯಾಸಿಯಾದವರು. ಆದರೆ ಪುರಂದರದಾಸರು ತಾವಷ್ಟೇ ದಾಸರಾಗಲಿಲ್ಲ. ಅವರ ಜೊತೆಗೆ ಅವರ ಹೆಂಡತಿ ಹಾಗು ಮಕ್ಕಳೂ ಸಹ ಗೋಪಾಳಬುಟ್ಟಿಯನ್ನು ಹಿಡಿದರು. ತಾವು ಕಂಡ ಸತ್ಯದ ದಾರಿಯನ್ನು ತಮ್ಮವರೂ ತುಳಿಯಬೇಕು ಎನ್ನುವದು ಸತ್ಯಪ್ರಜ್ಞರ ತಿಳಿವು. ದಾಸರ ಬಳಿಕ ಐದು ಶತಮಾನಗಳ ನಂತರ ಮತ್ತೊಬ್ಬ ಸಂತ ಇಂತಹ ಸತ್ಯನಿಷ್ಠೆಯನ್ನು ತೋರಿಸಿದ. ಆತ ಮೋಹನದಾಸ ಗಾಂಧೀ.

ಪುರಂದರದಾಸರ ಒಂದು ಕೀರ್ತನೆ  ತುಂಬ ಜನಪ್ರಿಯವಾಗಿದೆ. ಪ್ರತಿ ಶುಕ್ರವಾರವೂ ಅನೇಕರು ಈ ಭಜನೆಯನ್ನು ಹಾಡುತ್ತಾರೆ:
ಭಾಗ್ಯದಾ ಲಕ್ಷ್ಮೀ ಬಾರಮ್ಮಾ, ನಮ್ಮಮ್ಮಾ ನೀ ಸೌ-
ಭಾಗ್ಯದಾ ಲಕ್ಷ್ಮೀ ಬಾರಮ್ಮಾ.

ಲೌಕಿಕ ಸಂಪತ್ತೆನ್ನೆಲ್ಲ ಬಿಸುಟು ಹೋದ ದಾಸರು ಯಾವ ಭಾಗ್ಯಲಕ್ಷ್ಮಿಯನ್ನು ಕರೆಯುತ್ತಿರಬಹುದು?
ಕನಕವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ತೋರೆ
ದಿನಕರಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ
ಈ ನುಡಿಯನ್ನು ನೋಡಿದಾಗ ದಾಸರು ಲೌಕಿಕ ಸಂಪತ್ತಿನ ಲಕ್ಷ್ಮಿಯನ್ನು ಕರೆಯುತ್ತಿರಬಹುದೆ ಎನ್ನುವ ಅನುಮಾನ ಬಾರದಿರದು. ಆದರೆ,
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಗೊಂಬೆ”
ಎನ್ನುವ ಸಾಲುಗಳನ್ನು ನೋಡಿದಾಗ, ದಾಸರು ಕರೆಯುತ್ತಿರುವದು ವೈರಾಗ್ಯಲಕ್ಷ್ಮಿಯನ್ನು ಎಂದು ಭಾಸವಾಗುತ್ತದೆ.
‘ಲಂಗೋಟಿ ಬಲು ದೊಡ್ಡದಣ್ಣ’ ಎಂದು ಹಾಡಿದ ದಾಸರು, ತಾವು ತ್ಯಜಿಸಿದ ಸಿರಿ ಸಂಪತ್ತನ್ನು ವಿಜೃಂಭಿಸಿ ಕೀರ್ತಿಸುವದು ಸಾಧ್ಯವಿಲ್ಲ. ಏನೇ ಆಗಲಿ, ಅವರವರ ಭಾವಕ್ಕೆ ತಕ್ಕಂತಹ ಫಲ ಅವರವರಿಗೆ ಲಭಿಸುತ್ತದೆ. ಆದುದರಿಂದ ಲೌಕಿಕ ಸಂಪತ್ತನ್ನು ಬಯಸುವವರು ದಾಸರ ಗೀತೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವದು ಶ್ರೇಯಸ್ಕರ:

ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?

ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!

58 comments:

ಈಶ್ವರ said...

ಇದು ನಮಗೆ ಶಾಲೆಯಲ್ಲಿ ಪಾಠವಾಗಿತ್ತು. ಇಂತಹ ವಿಶ್ಲೇಷಣೆ ಮಾಡಿದವರಿಲ್ಲ. ತುಂಬಾ ಚೆನ್ನಾಗಿದೆ ಕಾಕಾ :)

ಸಾಗರದಾಚೆಯ ಇಂಚರ said...

Sir, matte baalayada dingala shaaleyalli kalita haadugalau, daasra keertanagalu nenapaadavu.

eshtondu artha irta ittu agina kaalada saahityadalli

tumba olleya vivarane sir

ಚುಕ್ಕಿಚಿತ್ತಾರ said...

ಕಾಕ..
ಸು೦ದರವಾಗಿ ವಿವರಿಸಿದ್ದೀರಿ.. ಮನಸ್ಸನ್ನು ನಾಯಿಗೆ ಹೋಲಿಸಿದ್ದಾರೆ ಎನ್ನುವುದು ಗೊತ್ತಿದ್ದರೂ ಇಷ್ಟರ ಮಟ್ಟಿಗೆ ಅರ್ಥವಾಗಿರಲಿಲ್ಲ..
ಧನ್ಯವಾದಗಳು.

sunaath said...

ಶಾಲೆಗಳಲ್ಲಿ ನಮ್ಮ ಹಳೆಯ ಸಾಹಿತ್ಯವನ್ನು ಕಲಿಯುತ್ತಿರುವಾಗ, ಆ ಸಾಹಿತ್ಯದ ಒಳಗಿನ ಚೆಲುವು ಆಗಲೆ ಅರ್ಥವಾಗಿರುವದಿಲ್ಲ. ನಮಗೆ ಪ್ರೌಢತೆ ಬಂದ ಮೇಲೆಯೇ, ಆ ಸಾಹಿತ್ಯದ ಪ್ರೌಢತೆ ಅರ್ಥವಾಗುತ್ತದೆ. ಅಲ್ಲವೆ?

sunaath said...

ಗುರುಮೂರ್ತಿಯವರೆ,
ಇದೆಲ್ಲ ನಮ್ಮ ಪ್ರಾಚೀನ ಸಂಪತ್ತು. ಇದರ ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ.

sunaath said...

ವಿಜಯಶ್ರೀ,
ಪುರಂದರದಾಸರ ಪೂರ್ವಾಶ್ರಮದ ಹೆಸರು ಶ್ರೀನಿವಾಸ ನಾಯಕ ಎನ್ನುವದು ಗೊತ್ತಾಗುವವರೆಗೂ, ನನಗೆ ಈ ವಿಶೇಷ ಅರ್ಥ ಹೊಳೆದಿರಲಿಲ್ಲ! ವಿನೋದ ಎನಿಸಬಹುದಾದ ಮತ್ತೊಂದು ಸಂಗತಿಯನ್ನು ನಿಮಗೆ ಹೇಳುತ್ತೇನೆ:
‘ಸಂಗ್ಯಾ ಬಾಳ್ಯಾ’ ನಾಟಕದ ಮೂಲ ಕರ್ತೃ ಪತ್ತಾರ ಮಾಸ್ತರ ಎನ್ನುವವರು. ಈ ನಾಟಕದ ನಾಯಕಿಯು ನಾಟಕದಲ್ಲಿಯ ಮಾಸ್ತರರಿಗೆ ಪತ್ರವೊಂದನ್ನು ಬರೆದು ಕೊಡಲು ವಿನಂತಿಸುತ್ತ, "ಒತ್ತರದಿಂದ ಪತ್ತರ ಬರೆಯಿರಿ ಮಾಸ್ತರಾ" ಎನ್ನುತ್ತಾಳೆ. ಪತ್ತಾರ ಮಾಸ್ತರರು ತಮ್ಮ ಹೆಸರನ್ನು ಇಲ್ಲಿ ಅಡಗಿಸಿದ್ದಾರೆ!

ಮಂಜುಳಾದೇವಿ said...

nimma sudheergavaada vivarane manamuttuvantide. abhinandanegalu sir.

sunaath said...

ಮಂಜುಳಾದೇವಿಯವರೆ,
ಸ್ಪಂದನೆಗೆ ಧನ್ಯವಾದಗಳು.

ಸಿಂಧು sindhu said...

ಪ್ರಿಯ ಸುನಾಥ,

ನನ್ನ ಅಜ್ಜ ನಾನು ಚಿಕ್ಕವಳಿದ್ದಾಗ ಇದನ್ನು ಹಾಡಿ ನನ್ನನ್ನು ನಗಿಸುತ್ತಿದ್ದರು. ಶ್ರೀನಿವಾಸ ನಾಯಕರನ್ನು ಸೂಚಿಸುವ ಸಂಬೋಧನೆ ಇದರಲ್ಲಿ ಅಡಗಿರುವುದು ಎಂಬ ವಿಶೇಷ ಅರ್ಥ ವಿವರಣೆ ಆಸಕ್ತಿಕರವಾಗಿದೆ.
ಗಝಲ್ ಗಳಲ್ಲಿ ಕರ್ತೃ ತನ್ನ ಹೆಸರನ್ನು ಕೊನೆಯ ಚರಣದಲ್ಲಿ ಸೇರಿಸಿ ನೇಯುವುದನ್ನು ಗಮನಿಸುವುದು ನನಗೆ ಇಷ್ಟ.
ಇನ್ನು ಪತ್ತಾರ ಮಾಸ್ತರರ ನೇಯ್ಗೆ ಸೂಚಿಸಿದ್ದೀರಿ. ಅದು ಛಂದಿದೆ.
ಈ ಮುದ ನೀಡುವ ಹಾಡಿನ ವಿಶ್ಲೇಷಣೆ ನೀವು ತಿಳಿದವರ ಬಾಯಲ್ಲಿ ಕೇಳುವುದೇ ಚಂದ.
ಧನ್ಯವಾದಗಳು.

ಪ್ರೀತಿಯಿಂದ,
ಸಿಂಧು

sunaath said...

ಸಿಂಧು,
ನಾನು ಕನ್ನಡ ಶಾಲೆಯಲ್ಲಿದ್ದಾಗ, ಹುಡುಗರನ್ನು ತಮಾಶೆ ಮಾಡಲು ಈ ಹಾಡನ್ನು ಬಳಸುತ್ತಿದ್ದೆವು. ಪುರಂದರದಾಸರ ಚರಿತ್ರೆಯನ್ನು ಓದಿ, ಅವರ ಮೊದಲ ಹೆಸರು ತಿಳಿದ ಮೇಲಷ್ಟೆ
ನನಗೆ ‘ನಾಯಕರೆ’ ಎನ್ನುವ ಸಂಬೋಧನೆಯ ವಿಶೇಷ ಅರ್ಥದ ಅರಿವಾಯಿತು.

Dr.D.T.Krishna Murthy. said...

ಸುನಾತ್ ಸರ್;ಪುರಂದರ ದಾಸರ ಹಾಡಿನ ಅರ್ಥದ ವಿವರಣೆ ತುಂಬಾ ಇಷ್ಟವಾಯಿತು.ಇದು ನನಗೆ ತಿಳಿದಿರಲಿಲ್ಲ.
ತಿಳಿಸಿಕೊಟ್ಟಿದ್ದಕ್ಕೆ ಅನಂತ ಧನ್ಯವಾದಗಳು.ನಮಸ್ಕಾರ.

Subrahmanya said...

"ನಾಯಕರೆ" ಎನ್ನುವುದಕ್ಕೆ ’ಶ್ರೀನಿವಾಸ ನಾಯಕ’ ಎನ್ನುವ ಅರ್ಥವೂ ಇರಬಹುದೆನ್ನುವ ಅನುಮಾನವಿತ್ತು. ಈಗ ನಿಮ್ಮ ವಿವರಣೆಯಿಂದ ಎಲ್ಲವೂ crystal clear.
ಮಡಿಯ ಬಗ್ಗೆ ಪುರಂದರದಾಸರಲ್ಲ, ಯಾರು ಹೇಳಿದರೂ ’ಮಡಿವಂತ’ರು ಬದಲಾಗುವುದಿಲ್ಲ ಬಿಡಿ !.
ಪೂರಕ ಮಾಹಿತಿಯೊಂದಿಗೆ ಬಹಳಷ್ಟು ಹೊಸ ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.

hamsanandi said...

ಚೆನ್ನಾಗಿದೆ!

sunaath said...

ಕೃಷ್ಣಮೂರ್ತಿಯವರೆ,
ನಾನು ನನಗೆ ತಿಳಿದದ್ದನ್ನು ನಿಮಗೆ, ನೀವು ನಿಮಗೆ ತಿಳಿದದ್ದನ್ನು ನನಗೆ, ಈ ರೀತಿಯಾಗಿ ಹಂಚಿಕೊಳ್ಳುತ್ತ ಹೋಗುವದೇ ಆನಂದಕರವಾದದ್ದು.

Unknown said...

Good one

prabhamani nagaraja said...

ಪುರ೦ದರ ದಾಸರ ಕೀರ್ತನೆಗಳ ಅ೦ತರಾರ್ಥವನ್ನು ಬಹಳ ಚೆನ್ನಾಗಿ ತಿಳಿಸಿದ್ದೀರಿ ಸರ್, `ನಾಯಕರೆ' ಎನ್ನುವುದರ ಔಚಿತ್ಯದ ಬಗ್ಗೆ ನಿಮ್ಮ೦ತೆ ಯೋಚಿಸಿರಲೇ ಇಲ್ಲ!ಉತ್ತಮ ಲೇಖನ ನೀಡಿದ್ದಕ್ಕಾಗಿ ಧನ್ಯವಾದಗಳು.

Manjunatha Kollegala said...

ಅದಾವ ವಿಷಯವನ್ನೇ/ವ್ಯಕ್ತಿಯನ್ನೇ ತೆಗೆದುಕೊಂಡರೂ ಅದರ ಅಚ್ಚುಕಟ್ಟಾದ ವಿಶ್ಲೇಷಣೆಕೊಟ್ಟು ವಿಷಯದ ಎಲ್ಲ ಮಗ್ಗುಲನ್ನೂ ಪರಿಚಯಿಸುವ ನಿಮ್ಮ ಶೈಲಿ ನಿಮಗೇ ವಿಶಿಷ್ಟ.

ಡೊಂಕುಬಾಲದ ನಾಯಕರೇ ಎಂಬ ಸಂಬೋಧನೆ ನಾಯಿಯ ನಿಮಿತ್ತದಿಂದ ಮನುಷ್ಯನನ್ನು ಕುರಿತು ಹೇಳಿದ ಮಾತು, ಜೊತೆಗೆ ಇಲ್ಲೊಂದು ರೀತಿಯ ಆತ್ಮಾವಲೋಕನ ಕೂಡ ಇದೆ ಎಂಬುದು ಗ್ರಹಿಸಿದ್ದೆ, ಜೊತೆಗೆ ನಾಯಕರೇ ಎಂಬಲ್ಲಿನ ವ್ಯಂಗ್ಯವನ್ನೂ; ಆದರೆ "ನಾಯಕರೇ" ಮತ್ತು "ಶ್ರೀನಿವಾಸನಾಯಕ"ರ ಸಂಬಂಧ ಹೊಳೆದಿರಲಿಲ್ಲ.

ಭಾಗ್ಯದ ಲಕ್ಷ್ಮಿ ಬಾರಮ್ಮಾ ಉತ್ತಮ ಅನ್ವಯಿಕೆ.

ಇಂಥಾ ಇನ್ನಷ್ಟು ಲೇಖನಗಳು ನಿಮ್ಮಿಂದ ಒಡಮೂಡಲಿ.

ಮನಸು said...

ಕಾಕ ತುಂಬಾ ಸುಂದರ ವಿವರಣೆ, ಸಾಮಾನ್ಯರಿಗೂ ಅರ್ಥವಾಗುವಂತೆ ವಿಶ್ಮೇಷಿಸುತ್ತೀರಿ.. ನಿಮಗೆ ನಮ್ಮ ಧನ್ಯವಾದಗಳು... ಶಾಲೆಯಲ್ಲಿ ಓದಿದಕ್ಕೂ ಆಗ ಅರ್ಥ ಮಾಡಿಕೊಂಡಿದ್ದಕ್ಕೂ ಈಗ ಅರ್ಥ ಮಾಡಿಸಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ... ಆಗ ನಾಯಿ ಬಗ್ಗೆ ಹಾಡು ಹೇಳಿದರು ಎಂದು ಖುಷಿಯಾಗಿ ಆ ಹಾಡು ಕಲಿತಿದ್ದೆವು...

sunaath said...

ಸುಬ್ರಹ್ಮಣ್ಯರೆ,
ಇಂತಹ ಚಮತ್ಕಾರಿಕ ಶ್ಲೇಷೆಯು ಮತ್ತೋರ್ವ ದಾಸರ ಕೀರ್ತನೆಯಲ್ಲಿಯೂ ಇದೆ. ಸದ್ಯಕ್ಕೆ ಆ ಕೀರ್ತನೆ ನನ್ನ ನೆನಪಿನಲ್ಲಿಲ್ಲ.

sunaath said...

ಹಂಸಾನಂದಿಯವರೆ,
ನಿಮ್ಮ ಒಪ್ಪಿಗೆಯಿಂದ ಖುಶಿಯಾಗುತ್ತಿದೆ.

sunaath said...

ರವಿಕಾಂತ,
Thank you so much.

sunaath said...

ಪ್ರಭಾಮಣಿಯವರೆ,
ಸ್ಪಂದನೆಗಾಗಿ ಧನ್ಯವಾದಗಳು

sunaath said...

ಮಂಜುನಾಥರೆ,
ಪುರಂದರದಾಸರ ಅನೇಕ ಗೀತೆಗಳಲ್ಲಿ ಆತ್ಮಾವಲೋಕನ ಹಾಗು ನೀತಿಬೋಧೆ ಅಡಕವಾಗಿವೆ. ಕಾಣಲು ಸರಳವಾದ ಅವರ ಗೀತೆಗಳಲ್ಲಿ ಉಚ್ಚ ತತ್ವಜ್ಞಾನ ಅಡಗಿದೆ. ಶರಣರ ಹಾಗು ದಾಸರ ಸಾಹಿತ್ಯವು ಕನ್ನಡಿಗರಿಗೆ ದೊರೆತ ಅಮೂಲ್ಯ heritage ಎನ್ನಬಹುದು.

sunaath said...

ಮನಸು,
ಈ ಗೀತೆಯನ್ನು ಶಾಲೆಯಲ್ಲಿ ಕಲಿತಾಗ ಸಿಗುವ ವಿನೋದಪೂರ್ಣ ಖುಶಿಯೇ ಬೇರೆ. ನಮಗೆ ಪ್ರಬುದ್ಧತೆ ಬಂದ ಬಳಿಕ ಈ ಗೀತೆ ನೀಡುವ ಖುಶಿಯೇ ಬೇರೆ, ಅಲ್ಲವೆ?

ಗಿರೀಶ್.ಎಸ್ said...

ishtella ola artha ide antha gotte iralilla sir.....thumba dhanyavaadagalu ishtu sulalitavaagi vivarisiddakke...

sunaath said...

ಗಿರೀಶ,
ಗೀತೆಯನ್ನು appreciate ಮಾಡಿದ ನಿಮಗೂ ಧನ್ಯವಾದಗಳು.

Keshav.Kulkarni said...

ದಾಸರೆಂದರೆ ಪುರಂದರದಾಸರೈಯ್ಯ..

ದಾಸ’ಸಾಹಿತ್ಯ’ದ ಒಳನೋಟ ಚೆನ್ನಾಗಿದೆ.

ಇನ್ನೂ ಬರಲಿ.

sunaath said...

ಧನ್ಯವಾದಗಳು,ಕೇಶವ.

Badarinath Palavalli said...

ಮೊದಲು ಸಂಭಾವ್ಯತೆಗಳಿಂದ ಬರೋಣ:

೧). ನಿವಾಗಲೂ ಸಂಭವಿಸಿದಾಗಲೇ ಅದು ಪವಾಡವಾಗುವುದು.
೨). ಮನೋಚಲನ ಶಕ್ತಿಯ ಬಗ್ಗೆ ನಾನೂ ಓದಿದ್ದೇನೆ. ಅದರ ತಾಕತ್ತು ಅನುಭವಿಸಿ ನೋಡಬೇಕು.
೩). ಇದು ಸರಿಯಾದ ಸಂಭಾವ್ಯ ಅನಿಸಿತು.

ಪುರಂದರ ದಾಸರು ಎಂತ ಕಾಲಕ್ಕೂ ಸಲ್ಲುವ ಕವಿ. ಅವರು ಬಳಸಿರುವ ಕನ್ನಡವೂ ಇಂದಿಗೂ ಸಮಕಾಲೀನ.

ಈ ದಾಸರ ಪದವನ್ನು ನೀವು ಬಹಳ ಪ್ರೌಡಿಮೆಯಿಂದ ವಿಶ್ಲೇಷಿಸಿದ್ದೀರ ಸಾರ್.

ಮನದಾಳದಿಂದ............ said...

ಗುರುಗಳೇ,
ಪುರಂದರ ದಾಸರ 'ಡೊಂಕು ಬಾಲದ ನಾಯಕರೆ' ಏನಾದರೆ ಅದು ವ್ಯವಸ್ಥೆಯ ನಾಯಕರನ್ನು, ಎಂಬ ಭಾವನೆ ನನ್ನಲ್ಲಿತ್ತು. ಜೊತೆಗೆ ನಮ್ಮ ಮನಸ್ಸಿನ ಚಂಚಲತೆಗೆ ಹೋಲಿಸಿದ್ದು ಅಂತ ಅಂದುಕೊಂಡಿದ್ದೆ. ನಿಮ್ಮಿಂದ ಹೆಚ್ಚಿನ ಮಾಹಿತಿ ದೊರಕಿತು.
ಧನ್ಯೋಸ್ಮಿ...............!

ಮನಮುಕ್ತಾ said...

ಕಾಕಾ,
ಸರಳ ಹಾಗೂ ಸು೦ದರವಾಗಿ ವಿವರಿಸಿದ್ದೀರಿ.

sunaath said...

ಪ್ರವೀಣ,
ನೀವು ಹೇಳಿದ್ದು ಸರಿಯಾಗಿಯೇ ಇದೆ. ಸ್ವಸಂಬೋಧನೆಯು ಒಂದು ಹೆಚ್ಚಿನ ಅರ್ಥವಾಗಿದೆ.

sunaath said...

ಮನಮುಕ್ತಾ,
ದಾಸರ ಹಾಡೇ ಸರಳ,ಸುಂದರ ಹಾಗು ಅರ್ಥಗರ್ಭಿತ.

ಜಲನಯನ said...

ಸುನಾಥಣ್ಣ..ಪುರಂದರರಲ್ಲಿ ಒಬ್ಬ ಅದ್ಭುತ ದಾರ್ಶನಿಕ, ಸಾಹಿತಿ, ಸಂಗೀತಜ್ಞ, ಸಮಾಜಸುಧಾರಕ, ಎಲ್ಲರನ್ನೂ ಕಾಣಬಹುದು..ನಿಜಕ್ಕೂ ಕರ್ನಾಟಿಕ್ ಸಂಗೀತಕ್ಕೆ ಇವರ ಕೊಡುಗೆ ಅದ್ವಿತೀಯ, ಇವರ ಹಾಡಿನ ಪ್ರತಿಸಾಲಿನಲ್ಲಿ ಹಲವು ಆಯಾಮಗಳಿರುತ್ತವೆ ಎನ್ನುವುದನ್ನು ಸುಂದರವಾಗಿ ಉದಹರಿಸಿ ತೋರಿಸಿದ್ದೀರಿ,,ಧನ್ಯವಾದ,,.

Kavitha said...

beautiful write up Sunaath. Thanks for sharing your thoughts.

ರಾಘವೇಂದ್ರ ಜೋಶಿ said...

ಸುನಾಥ್ ಸರ್,
ಈ ಸಲದ ನಿಮ್ಮ interpretation ಮಜಬೂತಾಗಿದೆ."ಡೊಂಕು ಬಾಲದ ನಾಯಕರೆ.." ಅಂತ ದಾಸರು ತಮ್ಮ ಕುರಿತೇ ಗೇಲಿಮಾಡಿಕೊಂಡಿರಬಹುದೆಂಬ ನಿಮ್ಮ ಗ್ರಹಿಕೆಯೇ ಅದ್ಭುತವಾಗಿದೆ.ಇಲ್ಲೊಂದು ಮಾತು ಹೇಳುವ ಆಸೆಯಾಗುತ್ತಿದೆ.
ತುಂಬ ಹಿಂದೆ ಪುರಂದರದಾಸರ ಬಗ್ಗೆ ನಾನೊಂದು ಬರಹ ಬರೆಯಬೇಕೆಂದುಕೊಂಡು ವಿಷಯ ಸಂಗ್ರಹಣೆ ಮಾಡಿದ್ದೆ.ಅದರ ಪ್ರಕಾರ-ಅವರ ಹುಟ್ಟಿದ ಇಸವಿ,ಅವರಿಗೆ ಜ್ಞಾನೋದಯವಾದ ವರ್ಷ ಮತ್ತು ಅವರು ದೇಹ ತ್ಯಜಿಸಿದ ಇಸವಿ-ಇವೆಲ್ಲವನ್ನೂ ತಾಳೆ ಮಾಡಿ ನೋಡಿದಾಗ
ನಂಬಲಾಗದ ಸಂಗತಿಗಳು ನನ್ನ ಮುಂದಿದ್ದವು.ಒಂದು ಅಂದಾಜಿನ ಪ್ರಕಾರ,ದಾಸರು ನಾಲ್ಕು ಲಕ್ಷಕ್ಕೂ ಹೆಚ್ಚಿನ ಭಜನೆ/ಕೀರ್ತನೆಗಳನ್ನು ರಚಿಸಿದ್ದಾರೆಂದು ಹೇಳಲಾಗುತ್ತದೆ.ಆದರೆ ನಮಗೆ ಇವತ್ತಿನ ಮಟ್ಟಿಗೆ ಸಿಕ್ಕಿರುವ ಕೀರ್ತನೆಗಳು ಸುಮಾರು ಒಂದೂ ಕಾಲು ಲಕ್ಷದಷ್ಟು.
ನಾವಿಲ್ಲಿ ದಾಸರಿಗೆ ಅರಿವಿನ ಮನಸ್ಸು ಮೂಡಿದ ವರ್ಷ ಮತ್ತು ಅವರು ದೇಹ ತ್ಯಜಿಸಿದ ವರ್ಷ-ಇವೆರಡರ ಲೆಕ್ಕ ತೆಗೆದುಕೊಂಡರೆ,
ಅವರು ಪ್ರತಿದಿನ ಏನಿಲ್ಲವೆಂದರೂ ನೂರಕ್ಕೂ ಹೆಚ್ಚಿನ ಕೀರ್ತನೆ ರಚಿಸಿದ್ದಾರೆಂಬ ಅಂಶ ಹೊಳೆಯುತ್ತದೆ...!
ಗಮನಿಸಿ,ನಮ್ಮ ಇವತ್ತಿನ ಸಿನೆಮಾ ಸಂಗೀತ ನಿರ್ದೇಶಕರು,ಗೀತರಚನೆಕಾರರಿಗೆ ಸ್ಟಾರ್ ಹೋಟೆಲ್ ರೂಂ ಮಾಡಿಕೊಟ್ಟು,ಸಕಲ ಸೌಲಬ್ಯ ಮಾಡಿಕೊಟ್ಟರೂ ಕೂಡ ಅವರು ನಾಲ್ಕೈದು ಹಾಡು ಬರೆಯಲು ತಿಂಗಳು ಸಮಯ ಬೇಡುವದುಂಟು..ಅಂಥಾದ್ದರಲ್ಲಿ ಕೈಯಲ್ಲೊಂದು ತಂಬೂರಿ ಹಿಡಿದ ದಾಸರು ದಿನಕ್ಕೆ ನೂರಕ್ಕೂ ಹೆಚ್ಚಿನ ಹಾಡುಗಳನ್ನು
ರಚಿಸುತ್ತಾರೆ;ಅದೂ ಟ್ಯೂನ್ ಸಮೇತ!
'ಸಂಗೀತ ಪಿತಾಮಹ' ಅನ್ನುವ ಬಿರುದು ಸುಮ್ಮನೇ ಬರೋದಿಲ್ಲ..
ಅವರ ಭಜನೆಗಳ ಬಗ್ಗೆ ನನಗೆ ಅತ್ಯಂತ ಪ್ರೀತಿಯಿದೆ.
ನೀವು ಅವರ ಬಗ್ಗೆ ಬರೆದಿದ್ದು ನೋಡಿ ಖುಷಿಯಾಯ್ತು.ಧನ್ಯವಾದ ಸರ್.. :-)

sunaath said...

ಜಲನಯನ,
ಸಂಗೀತ,ಸಾಹಿತ್ಯ ಹಾಗು ಅಧ್ಯಾತ್ಮ ಮೂರೂ ಮುಪ್ಪುರಿಗೊಂಡ ಚೈತನ್ಯವು ಕರ್ನಾಟಕದಲ್ಲಿ ಜನಿಸಿದ್ದು ಕನ್ನಡಿಗರ ಭಾಗ್ಯ!

sunaath said...

Kavita,
Thank you for your response.

sunaath said...

RJ,
ದಾಸರ ಮನಃಪರಿವರ್ತನೆಯಾದ ಬಳಿಕ, ಅವರು ದೇವರ ಸೇವೆಯನ್ನೇ ಉಸಿರಾಡಿಸಿದರು. ಕೂತಾಗ ಕೀರ್ತನೆ, ನಿಂತಾಗ ನರ್ತಿಸುತ್ತ ಭಜನೆ ಇವೇ ಅವರ ಸತತ ಕ್ರಿಯೆಯಾಯಿತು. ಅಂದ ಮೇಲೆ ಅವರು ಹಾಡುಗಳ ಸಂಖ್ಯೆ ಅಪಾರವಾಗಿರಬೇಕು.
ದಾಸರಿಗೆ ದೇವರ ಸೇವೆಯೇ ಜೀವನವಾಗಿತ್ತು. ನಮ್ಮ ಸಿನೆಮಾ ಹಾಡುಗಾರರಿಗೆ ಗೀತರಚನೆ ಉಪಜೀವನದ ಮಾರ್ಗವಷ್ಟೆ!

ನಿಮ್ಮ ಸಂಶೋಧನೆಯು ಆಳವಾಗಿರಬೇಕು ಎಂದು ಅನಿಸುತ್ತದೆ. ಕೊನೆಯ ಪಕ್ಷ ನಿಮ್ಮ blogನಲ್ಲಾದರೂ ಹಂತ ಹಂತವಾಗಿ ಪ್ರಕಟಿಸಿದರೆ ನಮಗೆಲ್ಲರಿಗೂ ಪ್ರಯೋಜನವಾಗುತ್ತದೆ.

sunaath said...

ನೀವು ಹೇಳುವದು ನಿಜ, ವಸಂತ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.

Harisha - ಹರೀಶ said...

ನಮಗೆ ಶಾಲೆಯಲ್ಲಿ ಈ ರೀತಿ ವಿಶ್ಲೇಷಿಸಿ ಪಾಠ ಮಾಡಿದ್ದಿದ್ದರೆ ನಮಗೆ ಎಷ್ಟು ಚೆನ್ನಾಗಿತ್ತು ಅನ್ನಿಸುತ್ತಿದೆ :-)

ಶ್ರೀನಿವಾಸ ಮ. ಕಟ್ಟಿ said...

ಯಾವದೇ ವಸ್ತು ಅತಿಯಾದಾಗ ಅದರ ಪರಿಣಾಮ ವಿಪರೀತವೇ ಆಗುವದು. ಈ ವೈಪರಿತ್ಯ ಒಳ್ಳೆಯದು ಇರಬಹುದು, ಕೆಟ್ಟದ್ದೂ ಇರಬಹುದು. ಶ್ರೀನಿವಾಸ ನಾಯಕರು ನವಕೋಟಿ ನಾರಾಯಣ ಆದಮೇಲೆ ಸಂಪತ್ತಿನ ಬಗ್ಗೆ ಜುಗುಪ್ಸೆ ಹುಟ್ಟಿರಬಹುದು. ಅದಾಗಲಿಕ್ಕೆ ಸಣ್ಣ ಕಾರಣವೂ ಸಾಕಾದೀತು. ನತ್ತಿನ ಕಥೆ ಸತ್ಯವಾಗಿರಬೇಕು. ಆದರೆ, ನತ್ತು ವಿಷದಲ್ಲಿ ಬಿದ್ದಿರಲಾರದು. ಭಗವಂತನ ಸೃಷ್ಟಿಯಲ್ಲಿ ಯಾವದೂ ಪೃಕೃತಿ ನಿಯಮಕ್ಕೆ ವಿರುದ್ಧವಾಗಿ ಸಂಭವಿಸಲಾರದು. ನತ್ತನ್ನು ಕೇಳಿದಾಗ, ಅವರ ಹೇಂಡತಿ ವಿಷ ತೆಗೆದುಕೊಳ್ಳುವ ಸಂಗತಿ ಅವರ ಗಮನಕ್ಕೆ ಬಂದು, ಮನ ಪರಿವರ್ತನೆ ಆಗಿರಲೂ ಸಾಧ್ಯ. ಅಲ್ಲವೆ ? ಇನ್ನು ಅವರ ಸಂಗೀತದ ಆಳ ಜ್ಞಾನ. ಅವರು ದಾಸರಾದ ಮೇಲೆಯೂ ಕಲೆತಿರಬಹುದು. ಆನಂದತೀರ್ಥರ ಗ್ರಂಥಗಳಿಗೆ ಅತ್ಯಂತ ಪ್ರಬುದ್ಧ ಟೀಕೆಗಳನ್ನು ಬರೆದ ಶ್ರೀ ಯಾದವಾರ್ಯರು ತಮ್ಮ ೪೦ ನೇ ವರ್ಷದಲ್ಲಿ ರಾಮ ನಾಮದಿಂದ ಸಂಸ್ಕೃತ ಕಲಿಯಲು ಆರಂಭಿಸಿ, ಪ್ರಕಾಂಡ ಪಂಡಿತರಾಗಿ ತಮ್ಮ ೪೫ನೇ ವರ್ಷದಿಂದ ಬ್ರಹ್ಮಸೂತ್ರ ಭಾಷ್ಯಕ್ಕೆ ಟಿಪ್ಪಣಿ ಬರೆಯಲು ಆರಂಭಿಸಿ, ತಮ್ಮ ೬೫ನೇ ವರ್ಷದ ಪೂರ್ವದಲ್ಲಿಯೇ ಶ್ರೀಮಧ್ವಾಚಾರ್ಯರ ಎಲ್ಲ ಗ್ರಂಥಗಳಿಗೂ ವಿಷದವಾದ ಪಾಂಡಿತ್ಯಪೂರ್ಣವಾದ ಟಿಪ್ಪಣಿ ಬರೆದಿರುವರು. ಪುಅಂದರದಾಸರೂ ಹಾಗೆ ಆಗಿರಬಹುದು. ಅದಕ್ಕೆ ಪೂರ್ವ ಸಂಸ್ಕಾರವೂ ಕಾರಣವಾಗಿರಬಹುದು.

sunaath said...

ಹರೀಶರೆ,
ಪ್ರಾಥಮಿಕ ಅಥವಾ ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿರುವವರಿಗೆ ಈ ವಿಷಯಗಳನ್ನು ತಿಳಿಯಾದ ರೀತಿಯಲ್ಲಿ ತಿಳಿಸುವದು ಅಸಾಧ್ಯವೇನಲ್ಲ. ಆದರೆ ಶಿಕ್ಷಕರಿಗೆ ಆಸಕ್ತಿ ಬೇಕಷ್ಟೆ!

sunaath said...

ಕಟ್ಟಿಯವರೆ,
ಇತಿಹಾಸವು ಮಸಕಾಗಿರುವದರಿಂದ ‘ಇದಮಿತ್ಥಂ’ ಎಂದು ಹೇಳಲು ಸಾಧ್ಯವಾಗದಂತಾಗಿದೆ!

Swarna said...

ಯಾವಗಲಿನ ಹಾಗೆ ತುಂಬಾ ಚೆನ್ನಾಗಿದೆ ಸರ್.
ಈ ಪದ, ಇಲ್ಲಿ ಬಹು ಜನರು ಹೇಳಿದ ಹಾಗೆ
ತಮಾಷೆಗೆ ಸೀಮಿತವಾಗಿತ್ತು. ಅರ್ಥೈಸಿದ್ದಕ್ಕಾಗಿ
ಧನ್ಯವಾದಗಳು .
ಕನಕ ದಾಸರ ಪದಗಳನ್ನು, ಅದರಲ್ಲೂ ಮುಂಡಿಗೆಗಳನ್ನೂ
ಅರ್ಥೈಸಬೇಕಾಗಿ ವಿನಂತಿ.
ಸ್ವರ್ಣ

sunaath said...

ಸ್ವರ್ಣಾ,
ಧನ್ಯವಾದಗಳು. ಕನಕದಾಸರ ಬಗೆಗೆ ಬರೆಯುವ ವಿಚಾರವಿದೆ.

ಈಶ್ವರ said...

ಲೇಖನ, ವಿಶ್ಲೇಷಣೆಯ ಜೊತೆ ಪ್ರತಿಕ್ರಿಯೆಗಳ ರಾಶಿಯನ್ನು ಓದಿದಾಗ ಒಂದು ದೊಡ್ಡ ಪುಸ್ತಕ ಓದಿದಂತೆ. ಎಷ್ಟೋ ಹೊಸ ವಿಷಯಗಳನ್ನ ತಿಳಿದುಕೊಳ್ಳಬಹುದು. ನೀವು ಬಡಿಸಿದ ಊಟದ ಜೊತೆ ಈ ಸಿಹಿ ಪ್ರತಿಕ್ರಿಯೆಗಳನ್ನೂ ಓದುವುದು ಖುಷಿಯೆನಿಸುತ್ತದೆ. :) :)

sunaath said...

ಈಶ್ವರ ಭಟ್ಟರೆ,
ಪ್ರತಿಕ್ರಿಯೆಗಳಲ್ಲಿಯೂ ಸಹ ಅನೇಕ ಮಾಹಿತಿಗಳು ಇರುತ್ತವೆ.
(ಬೇಂದ್ರೆಯವರು ಹೇಳುವಂತೆ)ಮಾತಿಗೆ ಮಾತು ಮಥಿಸಿ ಹುಟ್ಟುವದು ನವನೀತ!

ಅನಂತರಾಜ್ said...

ತಿದ್ದಲಾಗದ ಬುಧ್ಧಿಯ ದುರ್ಜನರೇ, ನೀವೇನ್ ಆರ್ಜನ ಮಾಡುವಿರಿ? ಖಜಾನೆ ತು೦ಬಾ ಸುವರ್ಣ ಅಡಗಿಸಿ, ಮುಗ್ಧತೆ ಪೋಸನು ನೀಡುವಿರಿ. ಸಿಬಿಐ ದಾಳಿಗೆ ತರಗುಟ್ಟುತ್ತ ಕ೦ಯ್ ಕು೦ಯ್ ರಾಗವ ಮಾಡುವಿರಿ.
ದಾಸನುಡಿಗಳು ಯಾವ ಕಾಲಕ್ಕೂ ಪ್ರಸ್ತುತವೇ. ಪುರ೦ದರ ದಾಸರ ಕೀರ್ತನೆಗಳ ಸ೦ಗ್ರಹಕ್ಕೆ ಪುರ೦ದರೋಪನಿಷತ್ ಎ೦ದು ಉಪನಿಷತ್ತಿನ ಸ್ಥಾನವನ್ನು ಕೊಡಲಾಗಿದೆ.
ಸುನಾತ್ ಸರ್, ದಾಸವಾಣಿಯ ಈ ಬರಹ ತು೦ಬಾ ಉತ್ಕೃಷ್ಟವಾಗಿದೆ. ಅಭಿನ೦ದನೆಗಳು.

ಅನ೦ತ್

sunaath said...

ಅನಂತರಾಜರೆ,
ದಾಸರ ಗೀತೆಯನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಮಾರ್ಪಡಿಸಿ ಹೇಳಿದ್ದೀರಿ. ತುಂಬ appropriate ಆಗಿದೆ!

KalavathiMadhusudan said...

sir vichaarapoorna vishleshanegaagi
dhanyavaadagalu.

sunaath said...

ಕಲರವ,
ನಿಮಗೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಡೊಂಕುಬಾಲದ ನಾಯಕರೆ ಪದ್ಯ ಪೂರ್ತಿ ಓದಿದ ಅಥವಾ ಕೇಳಿದ್ದ ನೆನಪಿರಲಿಲ್ಲ...ಆದರೆ ಮೊದಲ ಚರಣ ಗೊತ್ತಿತ್ತು ಅದು ರಾಜಕೀಯ ನಾಯಕರನ್ನು ಉದ್ದೇಶಿಸಿ ಬರೆದ ಅಂದುಕೊಂಡಿದ್ದೆ.
ತಮ್ಮಿಂದ ಸತ್ಯದರ್ಶನವಾಯಿತು...
ಜೊತೆಗೆ ವೈಚಾರಿಕ ಬರಹದ ಆಂತರ್ಯವೂ ವೇದ್ಯವಾಯಿತು.

sunaath said...

ಸೀತಾರಾಮರೆ,
ದಾಸರ ಬದಲಾಗಿ ಆಧುನಿಕರು ಬರೆದಿದ್ದರೆ, ಈ ಗೀತೆಯು ರಾಜಕೀಯ ಗೀತೆಯೇ ಆಗಿರುತ್ತಿತ್ತು!

V.R.BHAT said...

ಸುನಾಥರೇ, ಡೊಂಕು ಬಾಲದ ನಾಯಕರೇ ಎನ್ನುವುದು 'ನಾಯಿ' ಎನ್ನುವುದಕ್ಕೆ ಪರ್ಯಾಯವಾದರೂ ಇಂದಿನ ನಮ್ಮ ಸಮಾಜದ ಅನೇಕ ನಾಯಕರು ಡೊಂಕು ಬಾಲದವರೇ ಆಗಿದ್ದಾರೆ, ಬಾಲಮಾತ್ರ ಹೊರಗೇ ಕಾಣಿಸುತ್ತಿಲ್ಲ,ಆದರೆ ಅಲ್ಲಲ್ಲಿ ಅದೇ ಬಾಲ ಸಿಕ್ಕಾಕಿಕೊಂಡು ಒದ್ದಾಡುವುದನ್ನು ಕಾಣಬಹುದಾಗಿದೆ, ಮನುಷ್ಯನ ಮನಸ್ಸು ಕೂಡ ಡೊಂಕು ಬಾಲದ ನಾಯಕನೇ ಸರಿ! ದಾಸರ ಪದಗಳಲ್ಲಿ ಎಂತಹ ತಥ್ಯ ಅಡಗಿದೆ ಎಂಬುದು ನಿಮ್ಮ ವಿಸ್ತೃತ ವಿಶ್ಲೇಷಣೆಯಿಂದ ಎಂತಹ ಅವಿವೇಕಿಗೂ ಅರ್ಥವಾಗುತ್ತದೆ ಎಂದುಕೊಳ್ಳಲೇ ? ಧನ್ಯವಾದಗಳು.

sunaath said...

ಭಟ್ಟರೆ,
ದಾಸರು ಏನೆಲ್ಲ ಅರ್ಥ ಇಟ್ಟುಕೊಂಡು ಈ ಹಾಡನ್ನು ಹಾಡಿದ್ದಾರೆ. ನಮ್ಮ ‘ನಾಯಕರ’ ಬಾಲ ಮಾತ್ರ ಯಾವಾಗಲೂ ಡೊಂಕೇ!

suragange.blogspot.com said...

please write more on song '5 kalina mancha' by purandara dasa also

sunaath said...

It is OK, Shree. Never mind.