Sunday, April 18, 2021

‘ಅನುಪಮಾಆಖ್ಯಾನ ಹಾಗು ಇತರೆ ಕಥೆಗಳು’...........ಉಮೇಶ ದೇಸಾಯಿ

ಉಮೇಶ ದೇಸಾಯಿಯವರು ಕನ್ನಡ ಸಾಹಿತ್ಯದಲ್ಲಿ ಆಧುನಿಕ ಪರಿಸರದ ಸುಳಿಗಾಳಿಯನ್ನು ಸಂಚಲಿಸಿದವರು. ಈ ನನ್ನ ಮಾತಿಗೆ ಕೆಲವೊಂದು ಆಕ್ಷೇಪಣೆಗಳು ಬರಬಹುದು. ದೇಸಾಯಿಯವರಿಗಿಂತ ಮೊದಲು ಆಧುನಿಕತೆ ಕನ್ನಡ ಸಾಹಿತ್ಯದಲ್ಲಿ ಇರಲಿಲ್ಲವೆ; ಕನ್ನಡ ಸಾಹಿತಿಗಳು ಆಧುನಿಕರಿರಲಿಲ್ಲವೆ?; ಇತ್ಯಾದಿ. ಯಾರು ಇಲ್ಲವೆನ್ನುತ್ತಾರೆ? ನನ್ನ ಹೇಳಿಕೆಯನ್ನು ದಯವಿಟ್ಟು ಸೂಕ್ಷ್ಮವಾಗಿ ಗಮನಿಸಿರಿ.

ಆಧುನಿಕತೆ ಪದವೇಅಧುನಾಎನ್ನುವ ಸಂಸ್ಕೃತ ಪದದಿಂದ ಬಂದಿದೆ. ‘ಅಧುನಾಪದದ ಅರ್ಥಈ ಕ್ಷಣದ’, ಅಂದರೆ  `up to date’ ಎನ್ನುವ ಅರ್ಥ. ಕನ್ನಡ ಸಾಹಿತ್ಯದಲ್ಲಿ up-to-date ಆಗಿರುವ ಸಾಹಿತ್ಯವನ್ನು ಯಾವ ಸಾಹಿತಿಗಳು ರಚಿಸಿದ್ದಾರೆ, ಹೇಳಿ. ನವೋದಯ ಕಾಲದ ಸಾಹಿತ್ಯವು ಹೊಸ ಭಾಷೆಯನ್ನು ಕಟ್ಟಿತು; ಹೊಸ ಶೈಲಿಯನ್ನು ಕಟ್ಟಿತು. ಆದರೆ ಈ ಸಾಹಿತ್ಯದ ತಿರುಳು ಮಾತ್ರ ಹಳೆಯ ಹೂರಣವೇ, ಅರ್ಥಾತ್ ಆದರ್ಶ, ನಿಸರ್ಗ ಇತ್ಯಾದಿ. ಮುಂಬಯಿ ನಗರದಲ್ಲಿರುವ ಸಾಹಿತಿಗಳಲ್ಲಿ ಕೆಲವರು ಕರ್ನಾಟಕದ ಸಿದ್ಧಭಾಷೆಯನ್ನು ಬಿಟ್ಟು ಬೇರೆ ರೀತಿಯಲ್ಲಿ ಬರೆದಿದ್ದರೆ ಅದಕ್ಕೆ ಮುಂಬಯಿ ನಗರವೇ ಕಾರಣವಾಗಿದೆ. ಇದರಂತೆಯೇ ಕೊಡಗಿನ ಗೌರಮ್ಮನವರು ಆಧುನಿಕವಾಗಿ ಬರೆದದ್ದರ ಕಾರಣವೆಂದರೆ ಅವರು ಬೆಂಗಳೂರು, ಮೈಸೂರುಗಳಿಂದ ದೂರವಾಗಿದ್ದ ಕೊಡಗಿನಲ್ಲಿ ಇದ್ದದ್ದರಿಂದ. ಕನ್ನಡದಲ್ಲಿ ನಾನು ಓದಿದ್ದ ಮೊದಲ ಆಧುನಿಕ ಕಥೆಯನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದವರುಆನಂದಎನ್ನುವ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಏ. ಸೀತಾರಾಮ ಎನ್ನುವ ಖ್ಯಾತ ಲೇಖಕರು. ಈ ಕಥೆಯನ್ನು ಇವರು ಸುಮಾರು ೬೫ ವರ್ಷಗಳ ಹಿಂದೆ ಆನುವಾದಿಸಿರಬಹುದು.

೬೫ ವರ್ಷಗಳ ಹಿಂದಿನ ಮರಾಠಿ ಸಾಹಿತ್ಯವು ಈಗಿನ ಕನ್ನಡ ಸಾಹಿತ್ಯಕ್ಕಿಂತ ಹೆಚ್ಚು ಆಧುನಿಕವೆ? ನಾನುಆಧುನಿಕ ಪರಿಸರದ ಬಗೆಗೆ ಹೇಳುತ್ತಿದ್ದೇನೆ ಎನ್ನುವುದನ್ನು ದಯವಿಟ್ಟು ನೆನಪಿಸಿಕೊಳ್ಳಿರಿ. ಮುಂಬಯಿ ನಗರಕ್ಕೆ ಭಾರತದ ಮೂಲೆ ಮೂಲೆಗಳಿಂದ ವಿಭಿನ್ನ ಮಾದರಿಯ ಜನರು ವಲಸೆ ಬರುತ್ತಿದ್ದರು. ಅವರ ಮಿಲನದಿಂದ ಮುಂಬಯಿ ನಗರವು ಆಧುನಿಕ ನಗರವಾಯಿತು. ಈ ಭಾಗ್ಯವು ಭಾರತದ ಇತರ ನಗರಗಳಿಗೆ ಸಿಕ್ಕಿಲ್ಲ!

ಕನ್ನಡ ಸಾಹಿತ್ಯದಲ್ಲಿಆಧುನಿಕತೆಇಲ್ಲವೇ ಇಲ್ಲವೆ? ಯಾಕಿಲ್ಲ? ಎಚ್. ಸಾವಿತ್ರಮ್ಮ, ತ್ರಿವೇಣಿ ಇವರಂತಹ ಲೇಖಕಿಯರು ತಮ್ಮ ಸಾಹಿತ್ಯದಲ್ಲಿ ಹೆಣ್ಣಿನ ಮನಸ್ಸನ್ನು ಬಿಚ್ಚುಬೀಸಾಗಿ ಚರ್ಚಿಸಿದ್ದಾರೆ. ಆದರೆ ಕಥೆಗಳ ಪರಿಸರಮಾತ್ರ ಸಾಂಪ್ರದಾಯಿಕ ಪರಿಸರವೇ!

ಕನ್ನಡ ಸಾಹಿತ್ಯಕ್ಕೆ ಈವರೆಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ, ಶಿವರಾಮ ಕಾರಂತ, ದೇವನೂರು ಮಹಾದೇವರಂತಹ ಶ್ರೇಷ್ಠ ಕತೆಗಾರರು ನಮ್ಮವರು. ಅನಂತಮೂರ್ತಿಯವರು ತಮ್ಮ ವೈಯಕ್ತಿಕ ದ್ವಂದವನ್ನು ಸಾಹಿತ್ಯದಲ್ಲಿ ಪರಿವರ್ತಿಸಿ ಹೆಸರು ಪಡೆದರು. ಲಂಕೇಶರು ತಮ್ಮ ಪೂರ್ವಭಾಗದಲ್ಲಿ ಶ್ರೇಷ್ಠ ಕತೆಗಾರರಾಗಿದ್ದರೂ ಸಹ ಉತ್ತರಭಾಗದಲ್ಲಿ ಕೆಳಗೆ ಜಾರಿದರು. ಭೈರಪ್ಪನವರು ಸ್ತ್ರೀಯರನ್ನು ಎರಡನೆಯ ದರ್ಜೆಯ, ಪುರುಷವಿಧೇಯಿ ಜೀವಿಗಳನ್ನಾಗಿ ಮಾಡುವ ಪಕ್ಕಾ ಸಂಪ್ರದಾಯವಾದಿಗಳು. ಇವರಲ್ಲಿ ಯಾರೂಆಧುನಿಕ ಪರಿಸರವನ್ನು ತಮ್ಮ ಸಾಹಿತ್ಯದಲ್ಲಿ ಸೃಷ್ಟಿಸಿಲ್ಲ.

ಇಂತಹ ಒಂದು ಸಾಹಿತ್ಯಿಕವಾಗಿ ಉಸುರುಗಟ್ಟಿಸುವ ವಾತಾವರಣದಲ್ಲಿ ಆಧುನಿಕ ಪರಿಸರವನ್ನು ಕೆಲವೇ ಸಾಹಿತಿಗಳು ಸೃಷ್ಟಿಸಿದ್ದಾರೆ. ಇವರಲ್ಲಿ ನಾನು ಸಿಂಧೂ ರಾವ, ತೇಜಸ್ವಿನಿ ಭಟ್ಟ, ಶ್ರೀದೇವಿ ಕಳಸದ ಹಾಗು ಜಯಶ್ರೀ ದೇಶಪಾಂಡೆ ಇವರನ್ನು ನೆನೆಯುತ್ತೇನೆ. ಆದರೆ ಇಲ್ಲಿಯೂ ಸಹ ಇವರ ಎಲ್ಲ ಕಥೆಗಳು ಆಧುನಿಕ ವಾತಾವರಣದ ಕೊಡುಗೆಗಳಲ್ಲ!

ಉಮೇಶ ದೇಸಾಯಿಯವರು ಆಧುನಿಕ ಮರಾಠಿ ಸಾಹಿತ್ಯವನ್ನು ಓದಿಕೊಂಡವರು. ಪುಣೆ, ಮುಂಬಯಿ ಮೊದಲಾದ ವಿಶಾಲ ನಗರಗಳೊಡನೆ ಸಂಪರ್ಕ ಹೊಂದಿದವರು. ಇದು ಇವರ ಸಾಹಿತ್ಯವನ್ನುಆಧುನಿಕ ಪರಿಸರದ ಸಾಹಿತ್ಯವನ್ನಾಗಿ ಮಾಡಲು ನೆರವಾಗಿದೆ.

ಇವರು ಇತ್ತೀಚೆಗೆ ಪ್ರಕಟಿಸಿದಅನುಪಮಾ ಆಖ್ಯಾನವು ಸಂಪೂರ್ಣವಾಗಿ ಆಧುನಿಕ ಪರಿಸರದ ಕಥೆ. ಈ ನೀಳ್ಗತೆಯ ಬಗೆಗೆ ನಾನು ಈಗಾಗಲೇ ಟಿಪ್ಪಣಿಯನ್ನು ಬರೆದಿದ್ದು, ಅದನ್ನು ನೋಡಲು ಈ ಕೊಂಡಿಯನ್ನು ಬಳಸಿರಿ: https://sallaap.blogspot.com/2020/09/blog-post.html

ಅನುಪಮಾ ಆಖ್ಯಾನಕಥಾಸಂಕಲನದಲ್ಲಿ ಇನ್ನೂಐದು ಕಥೆಗಳಿವೆ.

ಅಪ್ಪ, ಅಮ್ಮ ಇವರಿಬ್ಬರೂ ದುಡಿಯುತ್ತಿರುವ ಕಥೆಆಯ್ಕೆಗಳು’. ಇವರ ಮಗುವಿನ ಮಾನಸಿಕ ಚಿತ್ರಣವೇ ಈ ಕಥೆಯ ವಿಷಯ. ‘ಬಿಡುಗಡೆಕಥೆಯ ವಿಷಯ ಇನ್ನೂ ಗಂಭೀರವಾದದ್ದು. ಚಿತ್ರನಟಿಯೊಬ್ಬಳ ಮಗಳ ಲೈಂಗಿಕ ಆಯ್ಕೆ ಹಾಗು ಅವಳ ಅಮ್ಮ ಅಂದರೆ ಆ ಚಿತ್ರನಟಿ ತೆಗೆದುಕೊಳ್ಳುವ ನಿರ್ಣಯ ಈ ಕಥೆಯ ವಸ್ತು. ‘ದಾಟುಕಥೆಯಲ್ಲಿ ಮಧ್ಯಮ ವರ್ಗದ ತಂದೆಯೊಬ್ಬ  ತನ್ನ ಮಗಳ ಲೈಂಗಿಕ ಆಯ್ಕೆಯನ್ನು ಒಪ್ಪಿಕೊಳ್ಳುವ ವಿಷಯವಿದೆ. ‘ದೀಪದ ಕೆಳಗಿನ ಕತ್ತಲೆಯು ಸಂಕೀರ್ಣವಾದ ಕಥಾವಸ್ತುವನ್ನು ಹೊಂದಿದೆ. ‘ವಿದಾಯಕಥೆಯಲ್ಲಿ ಆಧುನಿಕ ಪರಿಸರ ಇದೆ ಎಂದು ಹೇಳಲು ಆಗಲಾರದು. ಆದರೆ ಲೇಖಕರ ಮನೋಧರ್ಮ ಮಾತ್ರ ಆಧುನಿಕವಾಗಿಯೇ ಇದೆ.

ಆಧುನಿಕ ಪರಿಸರದ ಕಥೆಗಳನ್ನು ನಮಗೆ ಕೊಡುತ್ತಿರುವ ಉಮೇಶ ದೇಸಾಯರಿಗೆ ಅಭಿನಂದನೆಗಳು. ಇನ್ನಿಷ್ಟು ಇಂತಹ ಕಥೆಗಳನ್ನು ಅವರು ನಮಗೆ ನೀಡಲಿ ಎಂದು ಹಾರೈಸುತ್ತೇನೆ.

5 comments:

ಮನಮುಕ್ತಾ said...

ಒಳ್ಳೆಯ ಬರಹ. ನಿಜ. ಸಾಹಿತ್ಯ up to date ಆಗಿದ್ದರೆ ಓದುಗ ಅಲ್ಲಿನ ಭಾವನೆಗಳಿಗೆ ಸುಲಭವಾಗಿ ಸ್ಪಂದಿಸಿಕೊಂಡು ಓದಬಹುದು.

sunaath said...

ಧನ್ಯವಾದಗಳು, ಮನಮುಕ್ತಾ!

sunaath said...

ಧನ್ಯವಾದಗಳು, ವಸಂತಕುಮಾರರೆ.

Gururaj Kallihal said...

ಸುಧಣ್ಣಾ,ಒಂದು ಓದನ್ನು ಓದಿ ಸುಮ್ಮನಿರುವ ಬದಲು ಈ ರೀತಿಯ ಆಖ್ಯಾನ ಅರೋಗ್ಯಕರ...ಕಲ್ಲಿಹಾಳ

sunaath said...

ಗುರುರಾಜರೆ, ನೀವು ಹೇಳುವುದು ಸರಿಯಾಗಿದೆ. ಒಂದು ಓದಿಗೆ ಕೊಮೆಂಟ್ ಬರೆಯಲು ಹೋದಾಗ, ನಮ್ಮಲ್ಲಿಯೇ ಅಸ್ಪಷ್ಟವಾಗಿರುವ ವಿಷಯಗಳು ನಮಗೇ ಸ್ಪಷ್ಟವಾಗುವುವು. ಧನ್ಯವಾದಗಳು.