‘ಸಖೀಗೀತ’ದಲ್ಲಿ ಬೇಂದ್ರೆಯವರು ತಮ್ಮ
ಹೆಂಡತಿಯನ್ನು ‘ವಿಧಿ ತಂದ ವಧು’ ಎಂದು
ಬಣ್ಣಿಸಿದ್ದಾರೆ. ಅದೇ ರೀತಿಯಲ್ಲಿ ಅವರ ಹೆಂಡತಿ ಲಕ್ಷ್ಮೀಬಾಯಿಯವರಿಗೆ ಬೇಂದ್ರೆ ‘ವಿಧಿ ತಂದ ವರ’ ಆಗಿರಲಿಕ್ಕೆ ಸಾಕು. ಮದುವೆಯಾದಾಗ
ಬೇಂದ್ರೆಯವರಿಗೆ ೨೩ ವರ್ಷ ವಯಸ್ಸು. ಲಕ್ಷ್ಮೀಬಾಯಿ ಕೇವಲ ಹದಿಮೂರು ವರ್ಷದ ಹುಡುಗಿ.ಇತರ
ಹುಡುಗಿಯರಿಗೆ ಇರುವಂತೆ ಈ ಹುಡುಗಿಗೂ ತನ್ನ ಸಂಸಾರದ ಬಗೆಗೆ ಬಣ್ಣ ಬಣ್ಣದ ಕನಸುಗಳು
ಇದ್ದಿರಬಹುದು.
ಬೇಂದ್ರೆಯವರು ೧೯೨೬ರಲ್ಲಿ ‘ಸ್ವಧರ್ಮ’ ಪತ್ರಿಕೆಯ ಹಾಗೂ ೧೯೨೯ರಲ್ಲಿ ‘ಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾಗಿದ್ದರು. ಇವರು ಬರೆದ ‘ನರಬಲಿ’ ಕವನಕ್ಕಾಗಿ ಬ್ರಿಟಿಶ್ ಸರಕಾರವು ಇವರನ್ನು ೧೯೩೨ರಲ್ಲಿ ಹಿಂಡಲಗಿಯ ಜೇಲಿಗೆ ಕಳುಹಿಸಿತು. ಕೆಲ ಕಾಲ ಮುಗದ ಎನ್ನುವ ಹಳ್ಳಿಯಲ್ಲಿ ದಿಗ್ಬಂಧನದಲ್ಲಿರಿಸಿತು. ಆರು ವರ್ಷಗಳ ವರೆಗೆ ಇವರಿಗೆ ಯಾರೂ ಯಾವುದೇ ನೌಕರಿಯನ್ನು ಕೊಡಕೂಡದೆಂದು ಸರಕಾರವು ಆಜ್ಞೆ ಹೊರಡಿಸಿತು. ಆರು ವರ್ಷಗಳವರೆಗೆ ಬೇಂದ್ರೆಯವರು ನಿರುದ್ಯೋಗಿಯಾಗಿ ಉಳಿಯಬೇಕಾಯಿತು. ಬಳಿಕ ೧೯೩೮ರಲ್ಲಿ ಮಾಸ್ತಿಯವರು ಬೇಂದ್ರೆಯವರನ್ನು ‘ಜೀವನ’ ಪತ್ರಿಕೆಯ ಸಂಪಾದಕರನ್ನಾಗಿ ಮಾಡಿದರು.
ಈ ನಡುವಿನ ಅವಧಿಯಲ್ಲಿ ಬೇಂದ್ರೆಯವರು ಪುಣೆಯಲ್ಲಿ ಎಮ್. ಏ. ಪದವಿಯನ್ನು ಪಡೆದರು. ‘ಗರಿ’ ,‘ಮೂರ್ತಿ’, ’ಕಾಮಕಸ್ತೂರಿ’, ‘ಸಖೀಗೀತ’, ‘ನಾದಲೀಲೆ’ ಹಾಗೂ ‘ಉಯ್ಯಾಲೆ’ ಕವನಸಂಕಲನಗಳನ್ನು ಪ್ರಕಟಿಸಿದರು. ಸಾಹಿತ್ಯಸಮ್ಮೇಳನಗಳಲ್ಲಿ ಭಾಗವಹಿಸಿದರು. ಅವರ ಕೀರ್ತಿಸೂರ್ಯನು ನಡುನೆತ್ತಿಗೇರಿದನು. ಆದರೆ ಸಂಸಾರತಾಪದಲ್ಲಿ ಬೆಂದವರು ಇವರ ಧರ್ಮಪತ್ನಿ.
ಬೇಂದ್ರೆಯವರು ೧೯೨೬ರಲ್ಲಿ ‘ಸ್ವಧರ್ಮ’ ಪತ್ರಿಕೆಯ ಹಾಗೂ ೧೯೨೯ರಲ್ಲಿ ‘ಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾಗಿದ್ದರು. ಇವರು ಬರೆದ ‘ನರಬಲಿ’ ಕವನಕ್ಕಾಗಿ ಬ್ರಿಟಿಶ್ ಸರಕಾರವು ಇವರನ್ನು ೧೯೩೨ರಲ್ಲಿ ಹಿಂಡಲಗಿಯ ಜೇಲಿಗೆ ಕಳುಹಿಸಿತು. ಕೆಲ ಕಾಲ ಮುಗದ ಎನ್ನುವ ಹಳ್ಳಿಯಲ್ಲಿ ದಿಗ್ಬಂಧನದಲ್ಲಿರಿಸಿತು. ಆರು ವರ್ಷಗಳ ವರೆಗೆ ಇವರಿಗೆ ಯಾರೂ ಯಾವುದೇ ನೌಕರಿಯನ್ನು ಕೊಡಕೂಡದೆಂದು ಸರಕಾರವು ಆಜ್ಞೆ ಹೊರಡಿಸಿತು. ಆರು ವರ್ಷಗಳವರೆಗೆ ಬೇಂದ್ರೆಯವರು ನಿರುದ್ಯೋಗಿಯಾಗಿ ಉಳಿಯಬೇಕಾಯಿತು. ಬಳಿಕ ೧೯೩೮ರಲ್ಲಿ ಮಾಸ್ತಿಯವರು ಬೇಂದ್ರೆಯವರನ್ನು ‘ಜೀವನ’ ಪತ್ರಿಕೆಯ ಸಂಪಾದಕರನ್ನಾಗಿ ಮಾಡಿದರು.
ಈ ನಡುವಿನ ಅವಧಿಯಲ್ಲಿ ಬೇಂದ್ರೆಯವರು ಪುಣೆಯಲ್ಲಿ ಎಮ್. ಏ. ಪದವಿಯನ್ನು ಪಡೆದರು. ‘ಗರಿ’ ,‘ಮೂರ್ತಿ’, ’ಕಾಮಕಸ್ತೂರಿ’, ‘ಸಖೀಗೀತ’, ‘ನಾದಲೀಲೆ’ ಹಾಗೂ ‘ಉಯ್ಯಾಲೆ’ ಕವನಸಂಕಲನಗಳನ್ನು ಪ್ರಕಟಿಸಿದರು. ಸಾಹಿತ್ಯಸಮ್ಮೇಳನಗಳಲ್ಲಿ ಭಾಗವಹಿಸಿದರು. ಅವರ ಕೀರ್ತಿಸೂರ್ಯನು ನಡುನೆತ್ತಿಗೇರಿದನು. ಆದರೆ ಸಂಸಾರತಾಪದಲ್ಲಿ ಬೆಂದವರು ಇವರ ಧರ್ಮಪತ್ನಿ.
ಇಂತಹ ಸಹನಾಲಕ್ಷ್ಮಿಯ
ಬಗೆಗೂ ಬೇಂದ್ರೆಯವರಿಗೆ ಸಹನೆ ಇರಲಿಲ್ಲ. ಎಲ್ಲ ಹೆಂಡತಿಯರು ಬಯಸುವಂತೆ ಇವಳೂ ಸಹ ಒಡವೆ ಕೊಡಿಸಲು ಬೇಂದ್ರೆಯವರನ್ನು ಯಾವಾಗಲೋ ಕೇಳಿದ್ದಾಳು. ಈ
ಕವಿಪುಂಗವರು ಅವಳಿಗೆ ಕೇವಲ ಕವನಗಳ ಒಡವೆಗಳನ್ನಷ್ಟೇ ತೊಡಿಸಿದರು !
"ಆತ ಕೊಟ್ಟ ವಸ್ತು, ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆತುಂಬ ಮುತ್ತು"
ಬೇಂದ್ರೆಯವರಿಗೆ ತನ್ನ ಕಾವ್ಯಾಲಂಕಾರದ ಮಿತಿ ಗೊತ್ತಿರಲಿಲ್ಲ ಎಂದಲ್ಲ.
ಅವರೇ ತಮ್ಮ ಮತ್ತೊಂದು ಕವನದಲ್ಲಿ,
"ನೀನು ಕೊಡುವೆ ನನಗೆ ದವನ
ನಾನು ಕೊಡುವೆ ನಿನಗೆ ಕವನ....." ಎಂದೆಲ್ಲ ಹೇಳುತ್ತ ತಮ್ಮ ಕವನಕ್ಕೆ
"ಬರಿಯ ಮಾತಿನ ಪೋಣಿಕೆ" ಎಂದು ಬಣ್ಣಿಸಿದ್ದಾರೆ.
ಬಹುಶ: ‘ಒಂದು ಮುತ್ತಿನ ಸರವನ್ನಾದರೂ ಕೊಡಿಸಿ’ ಎಂದು ಹೆಂಡತಿ ಆಗ್ರಹಪಡಿಸಿದಾಗ, ಈ ಕವಿ ಒಂದು ಉದ್ದವಾದ ಕವನವನ್ನೇ ಹೊಸೆದು ಹೆಂಡತಿಗೆ ಕೊಟ್ಟರು. ಸುಮಾರು ೫೦೦೦
ಅಮೂಲ್ಯ ಪುಸ್ತಕಗಳನ್ನು ಸಂಗ್ರಹಿಸಿದ ಹಾಗು ಅನೇಕ ಅವಧಿಗಳಲ್ಲಿ ನಿರುದ್ಯೋಗಿಯಾಗಿದ್ದ ಬೇಂದ್ರೆಯವರಿಗೆ
ಸಂಸಾರಕ್ಕಾಗಿ ದುಡ್ಡಿನ ಅಭಾವವಾಗುವುದು ಸಹಜವಾದ ಸಂಗತಿಯೇ ಆಗಿದೆ. ಆದರೆ ಕಲ್ಪನೆಯ ಅಭಾವ
ಅವರನ್ನು ಎಂದೂ ಕಾಡಿಸಲಿಲ್ಲ. ಅನಂತ ಕಲ್ಪನಾಸಾಮ್ರಾಜ್ಯದ ಸಾರ್ವಭೌಮರವರು. ‘ಪ್ರೀತಿಯನ್ನು (ಒಡವೆಗಳಿಂದ) ಅಳೆಯಬೇಡ’ ಎಂದು ತಮ್ಮ ಧರ್ಮಪತ್ನಿಗೆ ಹೇಳುವ ಬೇಂದ್ರೆಯವರ ಕವನದ ಪೂರ್ಣಪಾಠ
ಹೀಗಿದೆ:
ಅಷ್ಟು ಪ್ರೀತಿ ಇಷ್ಟು ಪ್ರೀತಿ--
ಎಣಿಸಿ ಕಷ್ಟಬಡದಿರು
ಒಲೆದು ಒಲಿಸಿ ಸುಖವಿರು
ಎಷ್ಟೆಯಿರಲಿ ಅಷ್ಟೆ ಮಿಗಿಲು....
ತಮ್ಮ ಕಿರಣ ತಮಗೆ ಹಗಲು;
ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು.
ಮುತ್ತಿನೆಕ್ಕಸರವನಿಕ್ಕೆ
ಮುದ್ದಿಗೆ ಕಳೆ
ಕಟ್ಟಿತೆ
ತೊಯ್ದ ಎವೆಗೆ ಮುದ್ದನಿಡಲು
ಮುದ್ದಿಗೆ ಅದು
ತಟ್ಟಿತೆ?
ಕುದಿದು ಬಂದ ಕಂಬನಿಯೊಲು
ಕಂಪು ಬರದೆ ಬಿಟ್ಟಿತೆ?
ಮುತ್ತು ರತುನ ಹೊನ್ನು ಎಲ್ಲ
ಕಲ್ಲು ಮಣ್ಣ ವೈಭವಾ
ಎಲವೊ ಹುಚ್ಚ ಮಾನವಾ
ಒಂದು ಷೋಕು-----ಬರಿಯ ಝೋಕು
ಬದುಕಿನೊಂದು ಜಂಬವು
ಒಲವೆ ಮೂಲ ಬಿಂಬವು.
ಸಪ್ತ ನಾಕ ಸಪ್ತ ನರಕ
ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
ಅದರ ಕೋಟೆ ಕತ್ತಲು
ಸಿಂಹಾಸನವನೇರಿ ಕುಳಿತೆ;
ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ
ತೋಳಿಗಿಂತ
ಅದರೊಳೇನು ಹೆಚ್ಚಿದೆ ?
ಎದೆಯ ಕಣ್ಣ ಮುಚ್ಚಿಕೊಂಡು
ಏಕೊ ಎನೊ ಮೆಚ್ಚಿದೆ
ಮರದ ಅಡಿಗೆ ಗುಡಿಸಲಿರಲಿ
ಅಲ್ಲೆ ಒಲವು ಮೆರೆಯದೇ
ನಲಿವು ಮೇರೆವರಿಯದೇ?
ಬೇಂದ್ರೆಯವರ ಹೆಂಡತಿ ಒಂದು ಪ್ರಾಪಂಚಿಕ
ವಸ್ತುವನ್ನು ಆಸೆಪಟ್ಟು ಕೇಳಿದಾಗ, ಬೇಂದ್ರೆಯವರು
ಅದಕ್ಕೊಂದು ತಾತ್ವಿಕ ಸಮಾಧಾನವನ್ನು ನೀಡುತ್ತಿದ್ದಾರೆ. ಮೊದಲನೆಯ ನುಡಿಯನ್ನು ನೋಡಿರಿ:
ಅಷ್ಟು ಪ್ರೀತಿ ಇಷ್ಟು ಪ್ರೀತಿ--
ಎಣಿಸಿ ಕಷ್ಟಬಡದಿರು
ಒಲೆದು ಒಲಿಸಿ ಸುಖವಿರು
ಎಷ್ಟೆಯಿರಲಿ ಅಷ್ಟೆ ಮಿಗಿಲು....ತಮ್ಮ ಕಿರಣ ತಮಗೆ ಹಗಲು;
ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು.
ಪ್ರೀತಿಯ ಮಡದಿಯೆ, ನನಗೆ ನಿನ್ನಲ್ಲಿರುವ ಪ್ರೀತಿಯನ್ನು ಇಷ್ಟು , ಇಷ್ಟೇ ಎಂದು ಎಣಿಸಿ ಕಷ್ಟಪಡಬೇಡ. ಇಲ್ಲಿ ಎಣಿಸು ಎನ್ನುವದಕ್ಕೆ ಎರಡು
ಅರ್ಥಗಳಿವೆ. ಎಣಿಸು=counting ಎನ್ನುವದು ಒಂದು
ಅರ್ಥವಾದರೆ , ಭಾವಿಸು ಎನ್ನುವುದು
ಎರಡನೆಯ ಅರ್ಥ. ನನಗೆ ಒಲೆದು ಎಂದರೆ ನನ್ನಲ್ಲಿ ಅನುರಕ್ತಳಾಗು ; ಒಲಿಸಿ ಎಂದರೆ ನನ್ನನ್ನು ಒಲಿಸಿಕೊಳ್ಳು ಅರ್ಥಾತ್ ನನ್ನ
ಒಲವನ್ನು (ಕಷ್ಟಪಟ್ಟು) ಸಂಪಾದಿಸಿಕೊ ಹಾಗೂ ಸುಖದಿಂದಿರು!
ಕವಿಯು ಪ್ರೀತಿಯ ಈ
ವ್ಯಾಪಾರದ ಎಲ್ಲಾ ಭಾರವನ್ನು ಹೆಂಡತಿಯ ಮೇಲೆ ಹಾಕುತ್ತಿದ್ದಾನೆ. ನೀನು ಒಡವೆಯನ್ನು ಕೇಳದೇ,
ನನ್ನ ಪ್ರೀತಿಯನ್ನು ಪಡೆಯಲು ನೀನೇ ಪ್ರಯತ್ನ ಮಾಡು(!) ಎನ್ನುವುದು ಈ ಕವಿಯ ಸಂದೇಶ. ಇಂತಹ
ಸಂದೇಶಕ್ಕೆ ಕವಿ ಕೊಡುವ ತಾತ್ವಿಕ ಆಧಾರ ಈ ರೀತಿಯಾಗಿದೆ:
“ಎಷ್ಟೆಯಿರಲಿ ಅಷ್ಟೆ ಮಿಗಿಲು....
ತಮ್ಮ ಕಿರಣ ತಮಗೆ ಹಗಲು;
ಉಳಿದ ಬೆಳಕು ಕತ್ತಲು.”
ಪಾಲಿಗೆ ಬಂದದ್ದು ಪಂಚಾಮೃತ.
ನಮ್ಮ ಹಣೆಯಲ್ಲಿ ಎಷ್ಟೇ ಸ್ವಲ್ಪವಿದ್ದರೂ ಅದನ್ನೇ ಬಹಳ ಎಂದು ತಿಳಿಯಬೇಕು.
ಯಾಕೆಂದರೆ, “ತಮ್ಮ ಕಿರಣ ತಮಗೆ
ಹಗಲು ;ಉಳಿದ ಬೆಳಕು
ಕತ್ತಲು.” ನಮ್ಮ ಮನೆಯ ಕಿಡಕಿಯಿಂದ
ಒಳಗೆ ತೂರಿದ ಸೂರ್ಯನ ಒಂದೇ ಕಿರಣವು ನಮ್ಮ ಕತ್ತಲೆ ಕೋಣೆಗೆ ಬೆಳಕು ನೀಡುವದೇ ಹೊರತು, ಇತರ ನಕ್ಷತ್ರಗಳ ಕಿರಣಗಳಿಂದ ನಮ್ಮ ಮನೆಗೆ ಹಗಲು ಸಿಗಲಾರದು. ಆ ಬೆಳಕು ನಮ್ಮ ಮಟ್ಟಿಗೆ
ಕತ್ತಲೆಯೇ ಸೈ! ನಿನ್ನ ಜೀವನದಲ್ಲಿ ಪ್ರೀತಿಯ ಬೆಳಕನ್ನು ಕಾಣಬೇಕಾಗಿದ್ದರೆ
ಹುಚ್ಚು ಹಂಬಲಗಳನ್ನು ಬಿಟ್ಟುಬಿಟ್ಟು, ನಿನ್ನ ಕವೀಶ್ವರ ಪತಿ
ಕೊಡುವ ಪ್ರೀತಿಯನ್ನಷ್ಟೇ ನೆಚ್ಚಿಕೊ! ವರಕವಿಗಳು ತಮ್ಮ ಕಲ್ಪನಾಶಕ್ತಿಯ ಬಲದಿಂದ ಇನ್ನಿಷ್ಟು
ಉದಾಹರಣೆಗಳನ್ನು ಸೃಷ್ಟಿಸುತ್ತಾರೆ:
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು.
ಬೇರೆಯವರ ಅನುಕರಣೆ, ಅನುಸರಣೆ ಬೇಡ ; ನಾವು ಎಲ್ಲಿ
ನಿಲ್ಲುತ್ತೇವೆಯೊ ಅದೇ ನಮ್ಮ ಬೀಡು , ಅದೇ ನಮ್ಮ ನೆಲೆ. ನಾವು
ಎಲ್ಲಿ ಆಡುತ್ತೇವೊ ಅದೇ ನಮ್ಮ ಮನೆಯ ಅಂಗಳು.
“ ಅಲ್ಲಾ, ಉಳಿದವರು ಎಷ್ಟು
ಚೆನ್ನಾಗಿರೊ ಬೀಡಿನಲ್ಲಿ ಇದ್ದಾರಲ್ಲಾ” ಎಂದು ಅವರ ಹೆಂಡತಿ
ಏನಾದರೂ ಅನುಮಾನ ವ್ಯಕ್ತ ಪಡಿಸಿದರೆ, ವರಕವಿಗಳ ಉತ್ತರ
ಅದಕ್ಕೂ ಸಿದ್ಧವಾಗಿದೆ : “ಉಳಿದ ಲೋಕ ಹಿತ್ತಲು.” (=ಅದೆಲ್ಲಾ ನಮ್ಮ
ಹಿಂದೆ ಇರೋದು, ನಾವು ಅದನ್ನೆಲ್ಲ
ನೋಡೋದು ಬೇಡ !)
ಈ ರೀತಿಯಾಗಿ ಹೆಂಡತಿಗೆ
ತತ್ವಜ್ಞಾನದ ಪಾಠವನ್ನು ಹೇಳಿ ಮುಗಿಸಿದ ಕವಿ,
ತನ್ನ ಮಾತುಗಳಿಂದ ತಾನೇ ಕಸಿವಿಸಿಗೊಳ್ಳುತ್ತಾನೆ. ಆತನಿಗೆ ಗೊತ್ತು: ತನ್ನ ಹೆಂಡತಿಯ ಒಂದೇ ಒಂದು ಸಣ್ಣ ಅಪೇಕ್ಷೆಯನ್ನು
ತಾನು ಪೂರೈಸುತ್ತಿಲ್ಲ ಎಂದು. ತನ್ನ ಮೇಲೆ ತನಗೇ ಬರುತ್ತಿರುವ ಕೋಪವನ್ನು ಈಗ ಆತ
ಅವಳ ಮೆಲೆ ತಿರುಗಿಸುತ್ತಾನೆ. ಹತಾಶನಾದ ಗಂಡ ಹೆಂಡತಿಯ ಮೇಲೆ ಹರಿಹಾಯುವದು ಒಂದು
ಸಾಮಾನ್ಯ ಸಂಗತಿ. ‘ಒಂದು ಮುತ್ತಿನ
ಸರವನ್ನು ಪಡೆದು, ನೀನು ಏನು ಮಹಾ ಸಾಧಿಸಿಕೊಂಡಂತಾಯ್ತು’ ಎಂದು ಆತ ಅವಳ ಮೇಲೆ ಹಾರಾಡುತ್ತಾನೆ :
ಮುತ್ತಿನೆಕ್ಕಸರವನಿಕ್ಕೆ
ಮುದ್ದಿಗೆ ಕಳೆ
ಕಟ್ಟಿತೆ
ತೊಯ್ದ ಎವೆಗೆ ಮುದ್ದನಿಡಲು
ಮುದ್ದಿಗೆ ಅದು
ತಟ್ಟಿತೆ?
ಕುದಿದು ಬಂದ ಕಂಬನಿಯೊಲು
ಕಂಪು ಬರದೆ ಬಿಟ್ಟಿತೆ?
ಮುತ್ತಿನ ಸರ ತೊಡಿಸುವದರಿಂದ
ಮಾತ್ರ ಪ್ರೀತಿಗೆ ಕಳೆ ಬರುವದೆ? ನಿನ್ನ ಕಣ್ಣೀರಿನಿಂದ
ತೊಯ್ದ ರೆಪ್ಪೆಗಳಿಗೆ ನಾನು ಮುತ್ತು ಕೊಟ್ಟರೆ, ಅದು ನಿನ್ನ
ಪ್ರೀತಿಗೆ ತಟ್ಟಲಾರದೆ? ನಿನ್ನ ಕುದಿಯುತ್ತಿರುವ
ಮನಸ್ಸು ಹೊರಚೆಲ್ಲಿದ ಕಂಬನಿಗಳಲ್ಲಿ ಸಹ ಒಲವಿನ ಕಂಪು ಇಲ್ಲವೆ? ಗಂಡ ಹೆಂಡಿರಲ್ಲಿ ಪರಸ್ಪರ ಒಲವಿನ ಭಾವನೆಗಳೇ ಮುಖ್ಯವಲ್ಲವೆ? ಇದು ಕವಿಯು ದಾಂಪತ್ಯದ ನೆಲೆಗಟ್ಟಿನಲ್ಲಿ ಮಾಡುತ್ತಿರುವ ತರ್ಕವಾದ. ಆದರೆ ಹೆಂಡತಿಯು ಮುಖವನ್ನು
ಬೇರೆಡೆಗೆ ಹೊರಳಿಸಿ ಬಿಟ್ಟಿದ್ದಾಳೆ. ಮಾನವ ಕುಲದ ಮೂರ್ಖತನಕ್ಕೆ ಬೇಸತ್ತು ಹೋದ ಕವಿ , ವ್ಯಥೆಪಟ್ಟು ಉದ್ಗರಿಸುತ್ತಾನೆ:
“ಮುತ್ತು ರತುನ ಹೊನ್ನು ಎಲ್ಲ
ಕಲ್ಲು ಮಣ್ಣ ವೈಭವಾ
ಎಲವೊ ಹುಚ್ಚ ಮಾನವಾ
ಒಂದು ಷೋಕು-----ಬರಿಯ ಝೋಕು
ಬದುಕಿನೊಂದು ಜಂಬವು
ಒಲವೆ ಮೂಲ ಬಿಂಬವು.”
ಈ precious stonesಗಳೆಲ್ಲ earthly glory ಮಾತ್ರ. ಅವು
ಸತ್ಯವಲ್ಲ.
(ಟಿಪ್ಪಣಿ: ರತ್ನಗಳು ಭೂಗರ್ಭದಲ್ಲಿ ಸಿಗುವುದರಿಂದ ಅವುಗಳಿಗೆ ಕಲ್ಲು ಮಣ್ಣ
ವೈಭವಾ ಎಂದು ಕರೆಯುವುದು ಒಂದು ವ್ಯಂಗ್ಯೋಕ್ತಿ).
ಇದೆಲ್ಲ ಬರಿಯ ಶೋಕಿ, ಬರಿಯ
ಡೌಲು, ಬದುಕಿನ ಒಣ ಜಂಬ ಅಷ್ಟೆ! ಪ್ರೀತಿಯೇ ಸತ್ಯ,
ಬೇರೆ ಎಲ್ಲ ಮಿಥ್ಯ!
ಕವಿ ಮುಂದುವರಿದು
ಸಂಪತ್ತಿನ ಸಂಭ್ರಮವನ್ನಷ್ಟೇ ಅಲ್ಲ, ಅಧಿಕಾರದ ವೈಭವವನ್ನೂ
ಸಹ ತುಚ್ಛೀಕರಿಸುತ್ತಾನೆ. ಕೇವಲ ಭೂಮಿಯ ಒಡೆತನವಲ್ಲ, ಸಪ್ತಸ್ವರ್ಗ ಹಾಗೂ ಸಪ್ತನರಕಗಳನ್ನು ಒಳಗೊಂಡ ಇಂದ್ರಾಧಿಕಾರದ ವೈಭೋಗಕ್ಕೂ ಸಹ ಏನು ಬೆಲೆ ಇದೆ?
ಸಪ್ತ ನಾಕ ಸಪ್ತ ನರಕ
ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
ಅದರ ಕೋಟೆ ಕತ್ತಲು
ಸಿಂಹಾಸನವನೇರಿ ಕುಳಿತೆ;
ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ
ತೋಳಿಗಿಂತ
ಅದರೊಳೇನು ಹೆಚ್ಚಿದೆ ?
ಕವಿ ತಮ್ಮ ಹೆಂಡತಿಗೆ
ಆಹ್ವಾನ ನೀಡುತ್ತಿದ್ದಾರೆ. ಇಂತಹ ಲೋಕಾಧಿಪತಿಯ ಹೆಂಡತಿಯಾಗಿ ನೀನೂ ಸಹ ಸಿಂಹಾಸನವನ್ನೇರಬಹುದು.
ಸಾಮ್ರಾಟನ ತೊಡೆಗೆ ತೊಡೆ ಹಚ್ಚಿ ಕುಳಿತುಕೊಳ್ಳಬಹುದು. ಅವನ ಅಧಿಕಾರ ಮತ್ತು ವೈಭೋಗದಲ್ಲಿ ನೀನೂ
ಭಾಗಿಯಾಗಬಹುದು. ಇದೆಲ್ಲ ಸರಿ; ಒಲಿದಂತಹ ನಲ್ಲನ ತೋಳುಗಳ ಅಪ್ಪುಗೆಗಿಂತ ಇದೆಲ್ಲ ಹೆಚ್ಚಿನದೆ?
ಕವಿ ತನ್ನೆಲ್ಲ ತರ್ಕವಾದಗಳನ್ನು
ತನ್ನ ಅರ್ಧಾಂಗಿಗೆ ಹೇಳಿದ್ದಾನೆ. ಮುತ್ತಿನ ಹಾರಕ್ಕಿಂತ
ಪತಿಯ ಪ್ರೇಮವೇ ಹೆಚ್ಚಿನದು ಎಂದು ಅವಳಿಗೆ ತಿಳಿಸಿದ್ದಾನೆ. ತನ್ನ ಹತಾಶೆ, ತನ್ನ ಅಸಹಾಯಕತೆಯನ್ನೆಲ್ಲ ಹೊರಕಕ್ಕಿ, ಆತನೀಗ ನಿರುಮ್ಮಳನಾಗಿದ್ದಾನೆ. ಇಂತಹ ಸಮಾಧಾನದ ಸ್ಥಿತಿಯಲ್ಲಿ ಆತ ಅಂತರ್ಮುಖಿಯಾಗಿ ಏನನ್ನೊ
ಧ್ಯಾನಿಸುತ್ತಾನೆ :
ಎದೆಯ ಕಣ್ಣ ಮುಚ್ಚಿಕೊಂಡು
ಏಕೊ ಎನೊ ಮೆಚ್ಚಿದೆ
ಮರದ ಅಡಿಗೆ ಗುಡಿಸಲಿರಲಿ
ಅಲ್ಲೆ ಒಲವು ಮೆರೆಯದೇ
ನಲಿವು ಮೇರೆವರಿಯದೇ?
ನಿಜ, ಒಲವಿನ ವೈಭವಕ್ಕೆ ಲೌಕಿಕ ಸಂಪತ್ತು ಬೇಕಾಗಿಲ್ಲ. ಪುಟ್ಟ
ಗುಡಿಸಲಿನಲ್ಲಿಯೂ ಸಹ ಒಲವು ಹಾಗೂ ನಲಿವು ಮಹಾಪೂರದಂತೆ ಹರಿಯಬಲ್ಲವು ! ಈ ರೀತಿಯಾಗಿ ವರಕವಿಗಳು ತಮ್ಮ ಅರ್ಧಾಂಗಿಯನ್ನು ಸಮಾಧಾನಿಸುತ್ತಾರೆ. ಅವರೂ ಸಹ ’ಕವನದ ಹಾರ’ದಿಂದಲೇ ತೃಪ್ತಿ ಪಟ್ಟಿರವಹುದು!
ಟಿಪ್ಪಣಿ: ಬೇಂದ್ರೆಯವರು ೧೯೪೩ರಲ್ಲಿ
ಕಾಳಿದಾಸನ ‘ಮೇಘದೂತ ’ವನ್ನು ಕನ್ನಡಕ್ಕೆ ಅನುವಾದಿಸಿದರು. ಆ ಅನುವಾದದ ಗೌರವಧನದಿಂದ ತಮ್ಮ
ಹೆಂಡತಿಗೆ ಮುತ್ತಿನ ಏಕಾಕ್ಷಿ ಸರವನ್ನು ಕೊಡಿಸಿ ಅವಳ ಹಂಬಲವನ್ನು ಪೂರೈಸಿದರು.
ಈ ಕವನದಲ್ಲಿ ಕವಿಯ
ಲಂಬಿತ ಉದಾಸ ಭಾವಕ್ಕೆ ತಕ್ಕಂತೆ ಹಾಗೂ ಅವನ ಲಂಬಿತ ವಾದ ಗಳಿಗೆ ಹೊಂದುವಂತೆ, ಕವನವು ಲಂಬಿತ ಛಂದಸ್ಸಿನಲ್ಲಿ ಇರುವದನ್ನು ಗಮನಿಸಬಹುದು.