Tuesday, May 20, 2014

‘ಸಾರಾಸಾರ ವಿಚಾರ ಮಾಡಿದರ............’ ---ಶ್ರೀಧರ ಖಾನೋಳಕರ



ದಿವಂಗತ ಶ್ರೀಧರ ಖಾನೋಳಕರ ಇವರು ಬೇಂದ್ರೆಯವರ ಸಹಪಾಠಿಗಳಾಗಿದ್ದರು. ಜಾನಪದ ಸಾಹಿತ್ಯದಲ್ಲಿ ವಿಶೇಷ ಒಲವು ಹೊಂದಿದ ಇವರು ಉಪಯುಕ್ತ ಜಾನಪದ ಸಂಶೋಧನೆಗಳನ್ನು ಮಾಡಿದವರಾಗಿದ್ದರು. ‘ಸಾರಾಸಾರ ವಿಚಾರ ಮಾಡಿದರ............’ ಎನ್ನುವುದು ಇವರು ‘ಹರದೇಶಿ-ನಾಗೇಶಿ’ ಪದ್ಧತಿಯಲ್ಲಿ ರಚಿಸಿದ ಕನ್ನಡ ಕವಾಲಿಯಾಗಿದೆ. ಈ ಕವಾಲಿಯ ಒಂದು ನುಡಿಯನ್ನು ಹೆಂಗಸರ ಗುಂಪು ಹಾಗು ಮುಂದಿನ ನುಡಿಯನ್ನು ಗಂಡಸರ ಗುಂಪು ಹಾಡುತ್ತದೆ. ಇಂತಹ ಕವಾಲಿಗಳು ಒಂದು ಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ರಾತ್ರಿಯಿಡೀ ಜರಗುತ್ತಿದ್ದವು. ಎರಡೂ ಗುಂಪುಗಳ ನಡುವೆ ತುರುಸಿನ ಸ್ಪರ್ಧೆ ಇರುತ್ತಿತ್ತು.

ಶ್ರೀಧರ ಖಾನೋಳಕರರು ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು.  ಅವರು ರಚಿಸಿದ ಈ ಕವಾಲಿ ಒಂದು ಕಾಲದಲ್ಲಿ ತುಂಬ ಜನಪ್ರಿಯವಾಗಿತ್ತು.
(ಟಿಪ್ಪಣಿ: ‘ಪಿಂಜಾರ’ ಎಂದರೆ ಅರಳಿಯನ್ನು ಹಿಂಜಿ ಗಾದಿಯನ್ನು ತಯಾರಿಸುವವರು. ಇವರು ಮನೆಯಿಂದ ಮನೆಗೆ ತಿರುಗುತ್ತ ತಮ್ಮ ಕುಲಕಸಬನ್ನು ಮಾಡುತ್ತಿದ್ದರು. ಇವರು ಮುಸಲ್ಮಾನ ಧರ್ಮದವರು. ಈ ಕವಾಲಿಯಲ್ಲಿ ಪಿಂಜಾರ ಎಂದರೆ ಸೇವಕ ಎಂದು ಅರ್ಥೈಸಿಕೊಳ್ಳಬೇಕು.
ಖಾನಾವಳಿ ಎಂದರೆ ಊಟದ ಹೊಟೆಲ್.)
ಕವಾಲಿಯ ಪೂರ್ತಿಪಾಠ ಹೀಗಿದೆ:
 
ಸಾರಾಸಾರ ವಿಚಾರ ಮಾಡಿದರ
ಹೆಣ್ಣು ಆಳತದ ಸಂಸಾರಾ
ಸಾವಿರ ಕುದರಿ ಸರದಾರಾ
ಮನೀ ಹೆಂಡತಿ ಪಿಂಜಾರಾ || ಪಲ್ಲ ||

ಹೆಣ್ಣು : ಹೆಣ್ಣು ಇದ್ದರ ಹಬ್ಬ ಹುಣ್ಣವಿ
           ಹೆಣ್ಣು ಇದ್ದರ ಎಲ್ಲಾ ಪರಿವಾರ
 ಹೆಣ್ಣು ಇದ್ದರ ಮದುವಿ, ಮುಂಜಿವಿ
 ಹೆಣ್ಣಿದ್ದರ ಜೀವನ ಪೂರಾ || ೧ ||

ಗಂಡು :  ಸಾರಾಸಾರ ವಿಚಾರ ಮಾಡಿದರ
            ಗಂಡು ಆಳತದ ಸಂಸಾರಾ
            ರತಿಯ ನಾಚಿಸುವ ರೂಪವಿದ್ದರೂ
            ಕುಂಕುಮ ಹೆಣ್ಣಿಗೆ ಸಿಂಗಾರಾ || ೨ ||

ಹೆಣ್ಣು : ಹೆಣ್ಣು ಇದ್ದರ ಬರ್ರೀ ರಾಯರ
            ಅಂತ ಕರಿಯತಾರ ಎಲ್ಲ ಜನ
            ಹೆಣ್ಣು ಇಲ್ಲದೆ ತಿರುಗುವ ಖೋಡಿಯ
            ಮಾರಿ ಸುರಿಯತದ ಭಣಭಣ || ೩ ||

ಗಂಡು :  ಮನೆತನವೆಂಬುವ ಅರಮನೆ ಇರುವಿಗೆ
            ಗಂಡುಗೋಡೆಗಳೆ ಆಧಾರ
            ಹೆಣ್ಣು ನೋಡಿದರ ಗೋಡೆಗಂಟಿಸಿದ
            ಬಗೆ ಬಗೆ ಬಣ್ಣದ ಚಿತ್ತಾರಾ || ೪ ||

ಹೆಣ್ಣು : ಹೆಣ್ಣು ಇದ್ದರ ಹೋಳಿಗೆ ತುಪ್ಪಾ
            ಕರಿದ ಕಡಬು ಶ್ಯಾವಿಗೆ ಖೀರು
            ಹೆಣ್ಣು ಇಲ್ಲದವನ ಬಾಯಿಗೆ ಹುಳಿ ಹುಳಿ
            ಖಾನಾವಳಿ ಮಜ್ಜಿಗೆ ನೀರಾ || ೫ ||

ಗಂಡು :  ಗಂಡೆಂಬುದೆ ದುಂಡು ಕುಂಕುಮಾ
            ಹೆಣ್ಣಿನ ಚಲುವಿನ ಚಂದ್ರಾಮಾ
            ಹೆಣ್ಣಿನ ಜನುಮದ ಮುಗಿಲು ಬೆಳಗುವುದು
            ಹುಣ್ಣಿಮೆ ಬೆಳದಿಂಗಳ ಬೆಳಕಾ || ೬ ||

ಹೆಣ್ಣು : ಹೆಣ್ಣು ಇದ್ದರ ಸೊಗಸು ಮನಿವಳಗ
            ಹೋಗಿ ಬರೋರಿಗೆ ತೆರಪಿಲ್ಲ
            ಹುಡುಗರು ಹುಪ್ಪಡಿ ತಿಂದು ಉಳಿಯತಾವ
            ನಕ್ಕು ನಲಿಯತಾವ ಹಗಲೆಲ್ಲ || ೭ ||

ಇಬ್ಬರೂ : ಸಾರಾಸಾರ ವಿಚಾರ ಮಾಡಿದರ
ಪ್ರೀತಿ ಆಳತದ ಸಂಸಾರಾ
ಗಂಡೂ ಹೆಣ್ಣೂ ಕೂಡಿ ನಡೆದರ
ಬಾಳು ಆಗತದ ಬಂಗಾರಾ || ೮ ||
ಗಂಡು ಹೆಣ್ಣು ಕೂಡಿ ನಡೆದರ
            ಕೆನೆ ಹಾಲು ಸಕ್ಕರೆಯ ರುಚಿ
            ಕಬ್ಬಿನ ರಸದಾಗೆ ಜೇನು ಕೂಡಿದರ
            ಎನು ಹೇಳಬೇಕದರ ರುಚಿ || ೯ ||
           
ಸಾರಾಸಾರ ವಿಚಾರ ಮಾಡಿದರ
ಪ್ರೀತಿ ಆಳತದ ಸಂಸಾರಾ
ಪ್ರೀತಿ ಆಳತದ ಸಂಸಾರಾ
ಪ್ರೀತಿ ಆಳತದ ಸಂಸಾರಾ || ೧೦ ||
                                                ---ಶ್ರೀಧರ ಖಾನೋಳಕರ

Monday, April 28, 2014

ಬಿಸಿಲುಗುದುರೆ.................................ದ. ರಾ. ಬೇಂದ್ರೆ

ಹಳ್ಳsದ ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತs
ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ
            ಏರಿಕಿ ನಗಿ ಇತ್ತs       || ಪಲ್ಲ ||
ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ
            ಹೋಗೇತಿ ಎತ್ತೆತ್ತs    || ಅನುಪಲ್ಲ ||

                        ೧
ಕಣ್ಣಾನ ಬೆಳಕೇನs ಮಾರ್ಯಾಗಿನ ತುಳುಕೇನ
            ತುಟಿಯಾಗಿನ ಝುಳುಕೇನ
ಉಡುಗಿಯ ಮಾಟೇನs ನಡಿಗಿಯ ಥಾಟೇನ
            ಹುಡುಗಿ ಹುಡುಗಾಟೇನ !

                        ೨
ಕಂಡ್ಹಾಂಕಾಣsಲಿಲ್ಲ ಅಂದ್ಹಾಂಗನ್ನsಲಿಲ್ಲ
            ಬಂದ್ಹಾಂಗ ಬರಲಿಲ್ಲಾ
ಚಂದಾನ ಒಂದೊಂದ ಅಂದೇನಿ ಬೇರೊಂದ
ಅರಿವನs ಇರಲಿಲ್ಲ !

ಬಡತನದ ಬಲಿಯಾಗ ಕರುಳಿನ ಕೊಲಿಯಾಗ
            ಬಾಳ್ವಿಯ ಒಲಿಮ್ಯಾಗ
ಸುಟ್ಟು ಹಪ್ಪಳದ್ಹಾಂಗ ಸೊರಗಿದಿ ಸೊಪ್ಪ್ಹಾಂಗ
            ಬಂತಂತ ಮುಪ್ಪು ಬ್ಯಾಗ !

ಕಣಕಣ್ಣ ನೆನಸೇನ ಮನಸಿಲೆ ಬಣಿಸೇನ
            ಕಂಡೀತೆಂತೆಣಿಸೇನ
ಬಿಸಿಲುಗುದುರೀ ಏರಿ ನಿನ ನಗೆಯ ಸವ್ವಾರಿ
            ಹೊರಟಿತ್ತು ಕನಸೇನ ?

                        ೫
ಮುಂಗಾರಿ ಕಣಸನ್ನಿ ಹಾಂಗ ನಿನ ನಗಿ ಚೆನ್ನಿ
ಮುಂಚ್ಯೊಮ್ಮೆ ಮಿಂಚಿತ್ತ
ನಿನ ಮಾರಿ ನಿಟ್ಟಿಗೆ ಹಚ್ಚಿ ದಿಟ್ಟಿ ದಿಟ್ಟಿಗೆ
ನೋಡ್ತೇನಿ ನಾನಿತ್ತ !

ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ
ಹೋಗೇತಿ ಎತ್ತೆತ್ತ
ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತs
ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ
            ಏರಿಕಿ ನಗಿ ಇತ್ತ !!

ಎಳೆಹರಯದ ಸೊಗಸೇ ಸೊಗಸು. ನೂರು ಕನಸುಗಳು ಕಣ್ಣಲ್ಲಿ ತುಂಬಿರುತ್ತವೆ, ಅವುಗಳನ್ನು ಸಾಧಿಸುವ ಛಲ ಮನದಲ್ಲಿ ಪುಟಿಯುತ್ತಿರುತ್ತದೆ. ಪರಸ್ಪರ ಒಲಿದ ಗಂಡು ಹೆಣ್ಣುಗಳಂತೂ ಸಂಸಾರಸುಖದ ಕಾಮನಬಿಲ್ಲನ್ನು ಹೆಣೆಯುತ್ತಿರುತ್ತಾರೆ. ಆದರೆ ಕನಸೇ ಬೇರೆ, ವಾಸ್ತವವೇ ಬೇರೆ. ಸುಮಾರು ಎಂಬತ್ತು ವರ್ಷಗಳ ಹಿಂದೆ, ಬೇಂದ್ರೆಯವರು ಕಂಡುಕೊಂಡ ಸತ್ಯವಿದು. ಈಗಲೂ ಸಹ ಇದು ಸತ್ಯವಾಗಿಯೇ ಇದೆ.

ಬೇಂದ್ರೆಯವರ ಪ್ರಣಯಕವನಗಳು ಗ್ರಾಮೀಣ ಶೈಲಿಯ ಕವನಗಳಾಗಿರುವುದನ್ನು ಗಮನಿಸಬೇಕು. ಈ ಕವನಕ್ಕೆ ಪ್ರಥಮಪ್ರಣಯದ ಹಿನ್ನೆಲೆ ಇದ್ದರೂ ಇದು ಪ್ರಣಯಕವನವೇನಲ್ಲ ; ಸಂಸಾರದ ಸಂಕಷ್ಟಗಳಲ್ಲಿ ಸೋತು ಹೋದ ದಂಪತಿಗಳ ನಿಟ್ಟುಸಿರೇ ಇಲ್ಲಿ ಕವನರೂಪ ತಾಳಿದೆ. ಈ ಕವನವೂ ಸಹ ಗ್ರಾಮೀಣಶೈಲಿಯಲ್ಲಿ ಅಭಿವ್ಯಕ್ತವಾಗಿರುವುದು ಇದರ ವೈಶಿಷ್ಟ್ಯವಾಗಿದೆ. ಕವನದ ಮೊದಲಲ್ಲಿ ಕವಿಯು ತನ್ನ ಹಾಗು ತನ್ನ ನಲ್ಲೆಯ ಮೊದಲ ಮುಖಾಮುಖಿಯನ್ನು ನೆನಪಿಸಿಕೊಳ್ಳುತ್ತಾನೆ. ಹೊಸ ಹರೆಯದ ಆ ದಿನಗಳಲ್ಲಿ ಮುಖದಲ್ಲಿ ತುಂಟತನ ತುಳುಕುತ್ತಿರುತ್ತದೆ. ತುಟಿಗಳಲ್ಲಿ ನಗೀನವಿಲು ಕುಣಿಯುತ್ತಿರುತ್ತದೆ. ಇದು ಕವನದ ಮೊದಲ ನಾಲ್ಕು ಸಾಲುಗಳು ಹೇಳುವ ಸುಖದ ಪಲ್ಲ. ಆದರೆ ಈ ಸುಖವನ್ನು ಅನುಸರಿಸಿ, ಸಂಸಾರದ ಸಂಕಷ್ಟಗಳು ಪ್ರಾರಂಭವಾಗುತ್ತವೆ. ಆದುದರಿಂದ ಪಲ್ಲದ ನಂತರದ ಎರಡು ಸಾಲುಗಳು ಈ ಕಷ್ಟಕೋಟಲೆಯ ಅನುಪಲ್ಲವಾಗಿವೆ!

ಹಳ್ಳsದ ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತs
ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ
            ಏರಿಕಿ ನಗಿ ಇತ್ತs       || ಪಲ್ಲ ||
ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ
            ಹೋಗೇತಿ ಎತ್ತೆತ್ತs    || ಅನುಪಲ್ಲ ||

ಹಳ್ಳಿಯ ಹುಡುಗಿಯರು ನೀರು ತರಲು ಪಕ್ಕದಲ್ಲಿ ಹರಿಯುತ್ತಿರುವ ಹಳ್ಳಕ್ಕೆ ಹೋಗುವುದು ಒಂದು ಕಾಲದ ಅನಿವಾರ್ಯತೆಯಾಗಿತ್ತು. ಆ ಹುಡುಗಿಯರನ್ನು ನೋಡಲು ಹರೆಯದ ಹುಡುಗರೂ ಸಹ ಈಜುವ ನೆಪದಲ್ಲಿ ಹಳ್ಳಕ್ಕೆ ಹೋಗುತ್ತಿದ್ದರು. ಹೀಗಾಗಿ ತರುಣ ತರುಣಿಯರ ಕಣ್ಣಾಟ, ಕಳ್ಳಾಟಗಳು ಹಳ್ಳದ ದಂಡೆಯ ಮೇಲೆ ಆಗುತ್ತಿದ್ದವು! ಪರಸ್ಪರನ್ನು ಆಕರ್ಷಿಸಲು ಹಾಗು ಪ್ರೇಮಸಮ್ಮತಿ ನೀಡಲು ನಗುವೇ ಪ್ರಮುಖ ಸಾಧನವಾಗಿರುತ್ತಿತ್ತು. ಆ ನಗೆಯ ಪರಿಯನ್ನು ಬೇಂದ್ರೆ ವಿವರವಾಗಿ ಚಿತ್ರಿಸಿದ್ದಾರೆ. ‘ಏನೊಂದು ನಗಿ’ ಎಂದರೆ  ವರ್ಣಿಸಲು ಸಾಧ್ಯವಾಗದ ರಹಸ್ಯಮಯವಾದ ನಗಿ; ‘ಏಸೊಂದು ನಗಿ’ ಎಂದರೆ ವಿವಿಧ ಭಾವಗಳನ್ನು ಸೂಚಿಸುವ, ಕೊನೆಯಿಲ್ಲದ ನಗೆಗಳು ; ಏರಿಕಿ ನಗಿ ಎಂದರೆ ಉಕ್ಕುವ ಪ್ರಾಯದ ನಗಿ. ಈ ಎಲ್ಲ ನಗೆಗಳು ಬಾಳು ಎಂದರೆ ಚೆಲುವು’ ಎನ್ನುವ ಭಾವವನ್ನು ಸೂಸುವ ನಗೆಗಳು. ಇವೆಲ್ಲವೂ ನಲ್ಲ, ನಲ್ಲೆಯರು ಸಂಸಾರದಲ್ಲಿ ಕಾಲಿರಿಸುವ ಮೊದಲಿನ ಸಂಗತಿ. ಕವಿಯು ಅದನ್ನು ಹಿನ್ನೋಟದಲ್ಲಿ ನೆನಪಿಸಿಕೊಂಡು ತನ್ನ ಕೆಳದಿಗೂ ಸಹ ನೆನಪಿಸುತ್ತಿದ್ದಾನೆ.

ಈ ಕೆಳೆಯರು ಮದುವೆಯ ಬಂಧನಕ್ಕೆ ಒಳಗಾಗಿ ಸಂಸಾರದ ಒಜ್ಜೆಯನ್ನು ಹೊತ್ತುಕೊಂಡ ಬಳಿಕ ಈ ಸೊಗಸಿನ ಭಾವವು ನೀರ್ಗುಳ್ಳೆಯಂತೆ ಒಡೆಯಲು ಎಷ್ಟು ಹೊತ್ತು ಬೇಕು? ‘ಆ ನಗೆ ಈಗ ಎಲ್ಲಿ ಮಾಯವಾಗಿ ಹೋಗಿದೆ?’ ಎಂದು ಕವಿ ತನ್ನ ಜೊತೆಗಾತಿಯನ್ನು ಕೇಳುತ್ತಿದ್ದಾನೆ. ಅವಳನ್ನು ‘ಚೆನ್ನಿ’ ಎಂದು ಸಂಬೋಧಿಸುವ ಮೂಲಕ, ‘ಸುಖದ ಕಾಲದಲ್ಲಿ ನೀನು ನನಗೆ ಚೆನ್ನಿ (=ಪ್ರಿಯಸಖಿ)ಯಾಗಿದ್ದೆ ; ಕಷ್ಟದ ಕಾಲದಲ್ಲಿಯೂ  ನೀನು ನನಗೆ ಚೆನ್ನಿಯೇ ಆಗಿರುವೆ’ ಎನ್ನುವುದನ್ನು affirm ಮಾಡುತ್ತಾನೆ. ‘ನಕ್ಕೊಮ್ಮೆ ಹೇಳು’ ಎನ್ನುವ ಮಾತಿನಲ್ಲಿ ದ್ವಂದ್ವಾರ್ಥವಿದೆ. ‘ನಿನ್ನ ಅಳಲನ್ನು ಮರೆತು ಒಮ್ಮೆ ನಗು ; ಆಮೂಲಕ ನನಗೂ ಸಾಂತ್ವನವನ್ನು ನೀಡು’ ಎನ್ನುವುದು ಒಂದು ಅರ್ಥವಾದರೆ, ‘ಮೊದಲಿನ ನಗುವಿನ ದಿನಗಳೆಲ್ಲ ಒಂದು ಭ್ರಮೆಯಾಗಿದ್ದವು’ ಎನ್ನುವ ಪರಿಹಾಸದ ಮತ್ತೊಂದು ಅರ್ಥವೂ ಇಲ್ಲಿದೆ.  ‘ಹಳ್ಳದ ದಂಡ್ಯಾಗ’ ಎನ್ನುವಾಗ ಈ ಜೀವನವೇ ಒಂದು ಪ್ರವಾಹ, ನಾವೆಲ್ಲರೂ ಈ ಪ್ರವಾಹದ ದಂಡೆಯಲ್ಲಿ ನಿಂತಿರುವ ಪಯಣಿಗರು ಎನ್ನುವ ಸಂಕೇತಾರ್ಥವೂ ಇಲ್ಲಿ ಸೂಚಿತವಾಗಿದೆ.

                        ೧
ಕಣ್ಣಾನ ಬೆಳಕೇನs ಮಾರ್ಯಾಗಿನ ತುಳುಕೇನ
            ತುಟಿಯಾಗಿನ ಝುಳುಕೇನ
ಉಡುಗಿಯ ಮಾಟೇನs ನಡಿಗಿಯ ಥಾಟೇನ
            ಹುಡುಗಿ ಹುಡುಗಾಟೇನ !

ಹಳ್ಳದ ದಂಡೆಯ ಮೇಲೆ ಕಲೆತ ಈ ಹುಡುಗಿಯರ ಹುಡುಗಾಟವು ಅಲ್ಲಿ ನೆರೆದ ಹುಡುಗರನ್ನು ಆಕರ್ಷಿಸುತ್ತದೆ. ತನ್ನ ನಲ್ಲನನ್ನು ಕಂಡ ನಲ್ಲೆಯ ಕಣ್ಣುಗಳಲ್ಲಿ ಪ್ರೀತಿಯ ಬೆಳಕು ತುಂಬುತ್ತದೆ. ಅದು ತುಳುಕಿ ಮುಖದಲ್ಲಿ ಹರಡಿ, ತುಟಿಗಳಲ್ಲಿ ಕಾಂತಿಯಾಗುತ್ತದೆ. ಪ್ರತಿಯೊಬ್ಬ ಹುಡುಗನೂ ತನ್ನ ಹುಡುಗಿಯನ್ನು ಕಂಡು ‘ಅಬ್ಬಾ! ಈ ಹುಡುಗಿ!’ ಎನ್ನುತ್ತಾನೆ.

ತಂದೆ ತಾಯಿಯ ಪೋಷಣೆಯಲ್ಲಿರುವವರೆಗೆ ಈ ಹುಡುಗ ಹುಡುಗಿಯರಿಗೆ ಸಂಸಾರದ ಬಿಸಿ ಇನ್ನೂ ಹತ್ತಿರುವದಿಲ್ಲ. ಬಾಳಿನ ಸುಖವನ್ನು ಹೀರಬೇಕು ಎನ್ನುವ ಉತ್ಸಾಹ ಮನದಲ್ಲಿ ಪುಟಿಯುತ್ತಿರುತ್ತದೆ. ಈ ಉತ್ಸಾಹವು ಇಲ್ಲದ ವ್ಯಕ್ತಿಗಳ ಕಣ್ಣುಗಳನ್ನು ನೋಡಿರಿ. ಅವು ಎಷ್ಟು ಕಳಾಹೀನವಾಗಿರುತ್ತವೆ. ಅದರಂತೆ ಉತ್ಸಾಹ ತುಂಬಿದವರ ಕಣ್ಣುಗಳಲ್ಲಿ ಎಂಥಾ ತೇಜವಿರುತ್ತದೆ ಎನ್ನುವುದನ್ನು ಗಮನಿಸಿರಿ. ಆ ತೇಜವು ಅವರ ಕಣ್ಣುಗಳಿಂದ ಹೊರಸೂಸಿ  ಮುಖದಲ್ಲಿಯೂ ಸಹ ತುಳುಕುತ್ತಿರುತ್ತದೆ. ತನ್ನ ಮನದಲ್ಲಿ ಅಡಗಿರುವ ಅಭಿಲಾಷೆಯನ್ನು ಮಾತಿನಲ್ಲಿ ವ್ಯಕ್ತಪಡಿಸಬಹುದೋ, ಬೇಡವೋ ಎನ್ನುವ ದ್ವಂದ್ವದಿಂದ, ಅವರ ತುಟಿಯಲ್ಲಿ ಮಿಂಚು ಹೊಯ್ದಾಡುತ್ತಿರುತ್ತದೆ. ಆದರೆ ಮಾತಿನಲ್ಲಿ ಹೇಳಲಾಗದ್ದನ್ನು ಹುಡುಗಿಯರು ತಮ್ಮ ಒನಪು, ವೈಯಾರದಿಂದ ಹೇಳಬಹುದಲ್ಲವೆ? ಉಡುವುದನ್ನೇ ಆಕರ್ಷಕವಾಗುವಂತೆ ಮಾಡಬಹುದಲ್ಲವೆ? ತಮ್ಮ ತಮ್ಮಲ್ಲಿಯೇ ತುಂಟತನ, ಹುಡುಗಾಟ ಮಾಡುವ ಮೂಲಕ ಹುಡುಗರಿಗೆ ಸಂದೇಶವನ್ನೂ ನೀಡಬಹುದಲ್ಲವೆ? ಇವೆಲ್ಲವೂ ಪ್ರಾಯಕ್ಕೆ ಕಾಲಿಡುತ್ತಿರುವ ಎಳೆಯರ ಗುಣಲಕ್ಷಣಗಳೇ ಆಗಿವೆ !

ಬೇಂದ್ರೆಯವರು ‘ನಡಿಗಿಯ ಥಾಟೇನ’ ಎನ್ನುವ ಪದಪುಂಜವನ್ನು ಬಳಸಿದ್ದನ್ನು ಗಮನಿಸಿರಿ. ಈ ‘ಥಾಟ’ ಎನ್ನುವ ಪದವು ಕುದುರೆಯ ನಡಿಗೆಗಾಗಿ ಬಳಸಲಾಗುವ ಪದವಾಗಿದೆ. ಕಾಠೇವಾಡಿ ಥಾಟು, ಅರಬ್ಬಿ ಥಾಟು ಎನ್ನುವ ಪದಗಳು ಇದರಿಂದಲೇ ಹುಟ್ಟಿಕೊಂಡಿವೆ. ಥಾಟು ಎನ್ನುವ ಪದದಿಂದಲೇ ಧಾಟಿ ಎನ್ನುವ ಪದವೂ ಹುಟ್ಟಿದೆ.

ಬೇಂದ್ರೆಯವರು ಈ ನುಡಿಯ ಮೊದಲ ಎರಡು ಸಾಲುಗಳಲ್ಲಿ ಏರುಜವ್ವನದ ಅಂಗಲಕ್ಷಣಗಳನ್ನು ಬಣ್ಣಿಸಿ, ಮುಂದಿನ ಎರಡು ಸಾಲುಗಳಲ್ಲಿ ಉಡುಗೆ ಹಾಗು ನಡಿಗೆಗಳನ್ನು ಬಣ್ಣಿಸುತ್ತಾರೆ. ಇದು ಅವರ ಕವನಗಳಲ್ಲಿಯ ಕ್ರಮಬದ್ಧತೆಯನ್ನು ಸೂಚಿಸುತ್ತದೆ.

                        ೨
ಕಂಡ್ಹಾಂಕಾಣsಲಿಲ್ಲ ಅಂದ್ಹಾಂಗನ್ನsಲಿಲ್ಲ
            ಬಂದ್ಹಾಂಗ ಬರಲಿಲ್ಲಾ
ಚಂದಾನ ಒಂದೊಂದ ಅಂದೇನಿ ಬೇರೊಂದ
ಅರಿವನs ಇರಲಿಲ್ಲ !

ಈ ಸಂಪೂರ್ಣ ನುಡಿಯೇ ಎರಡರ್ಥಗಳ ಒಂದು ಶ್ಲೇಷೆಯಾಗಿದೆ.  ಕವನದ ಮೊದಲ ನುಡಿಯನ್ನು ಅನುಸರಿಸಿ ಮುಂದುವರೆದಾಗ ಮೊದಲ ಅರ್ಥ ಈ ರೀತಿಯಾಗುತ್ತದೆ:
ಹಳ್ಳದ ದಂಡೆಯ ಮೇಲಿನ ಬೇಟವು ಇದೀಗ ವಿವಾಹಬಂಧನದಲ್ಲಿ ಕೊನೆಗೊಂಡಿದೆ.
ಸಂಸಾರದ ಪ್ರಾರಂಭದ ದಿನಗಳಲ್ಲಿ ನಲ್ಲ ನಲ್ಲೆಯರ ಶೃಂಗಾರ ಹಾಗು ಪರಸ್ಪರ ಅನ್ವೇಷಣೆ ನಡೆದೇ ಇರುತ್ತದೆ. ಆದುದರಿಂದ ಅವರು ಒಮ್ಮೆ ಕಂಡಂತೆ ಮತ್ತೊಮ್ಮೆ ಕಾಣುವುದಿಲ್ಲ. ಅವರ ನುಡಿ ಹಾಗು ನಡೆ ಯಾವಾಗಲೂ ಹೊಸ ಹೊಸ ರೀತಿಯಲ್ಲಿ ತೋರುತ್ತಿರುತ್ತದೆ. ತನ್ನ ಕೆಳದಿಯ ಚಂದನ್ನ ಹೊಸ ನೋಟಗಳನ್ನು ಕೆಳೆಯನು ಬೆರಗುಬಟ್ಟು ವರ್ಣಿಸುತ್ತಲೇ ಹೋಗುತ್ತಾನೆ. ಅವನಿಗೆ ಬಾಹ್ಯಪ್ರಪಂಚದ ಅರಿವೇ ಇರುವುದಿಲ್ಲ.

ಆದರೆ ಮೂರನೆಯ ನುಡಿಯಲ್ಲಿಯ ಖೇದವನ್ನು ಗಮನಿಸಿದರೆ, ಎರಡನೆಯ ನುಡಿಯನ್ನು ಅದರ ಮುನ್-ನುಡಿಯಂದು ಭಾವಿಸಬಹುದು. ಆವಾಗ ಅದನ್ನು ಹೀಗೆ ಅರ್ಥೈಸಬಹುದು :
ಹಳ್ಳದ ದಂಡೆಯಲ್ಲಿ ಮೊದಲ ಮಿಲನದಲ್ಲಿ ಕಂಡ ನೋಟ ಈಗ ಬದಲಾಗಿದೆ. ಮೊದಲಿನ ನಡೆ, ನುಡಿ ಈಗ ಉಳಿದಿಲ್ಲ. ಆದರೆ ನಲ್ಲನಿಗೆ ಇದರ ಅರಿವೇ ಆಗಿಲ್ಲ. ಆತ ಹಳೆಯ ಸೊಗಸಿನ ಭ್ರಮೆಯಲ್ಲಿಯೇ ಇನ್ನೂ ಉಳಿದುಕೊಂಡಿದ್ದಾನೆ. ಆದರೆ ಆ ಭ್ರಮೆ ಹರಿದು, ಸಂಸಾರದಲ್ಲಿ ಬೆಂದು, ಬಸವಳಿದ ದಂಪತಿಗಳ ಚಿತ್ರವನ್ನು ಮೂರನೆಯ ನುಡಿಯು ತೀಕ್ಷ್ಣವಾಗಿ ಹಾಗು ನೇರವಾಗಿ ಕೊಡುತ್ತದೆ:

ಬಡತನದ ಬಲಿಯಾಗ ಕರುಳಿನ ಕೊಲಿಯಾಗ
            ಬಾಳ್ವಿಯ ಒಲಿಮ್ಯಾಗ
ಸುಟ್ಟು ಹಪ್ಪಳದ್ಹಾಂಗ ಸೊರಗಿದಿ ಸೊಪ್ಪ್ಹಾಂಗ
            ಬಂತಂತ ಮುಪ್ಪು ಬ್ಯಾಗ !

ಬೇಂದ್ರೆಯವರ ನಿರುದ್ಯೋಗ ಪರ್ವ ದೊಡ್ಡದು. ಸರಕಾರದ ಅವಕೃಪೆಗೆ ಒಳಗಾಗಿ ಇವರು ಕೆಲಕಾಲ ನಜರಬಂದಿಯಲ್ಲಿದ್ದರು. ಏಳು ವರ್ಷಗಳವರೆಗೆ ಯಾವ ಸಂಸ್ಥೆಯೂ ಇವರಿಗೆ ಉದ್ಯೋಗ ನೀಡಬಾರದೆಂದು ಸರಕಾರದ ಆದೇಶವಿತ್ತು. ಹೆಂಡತಿ-ಮಕ್ಕಳು ಹಾಗು ಬೇಂದ್ರೆಯವರು ಪರಸ್ಪರ ದೂರವಾಗಿ ಪರಾಶ್ರಯದಲ್ಲಿ ಬದುಕಬೇಕಾಯಿತು.

ಬಡತನದ ಬಲೆಯಲ್ಲಿ ಸಿಲುಕಿದ ಇವರಿಗೆ, ಆ ಬಲೆಯಿಂದ ಹೊರಬರುವ ಉಪಾಯವೇ ತೋಚದಂತಾಯಿತು. ತಮ್ಮ ನೋವನ್ನು ಪರಸ್ಪರ ಹಂಚಿಕೊಳ್ಳುವ ಅವಕಾಶವೂ ಇವರಿಗಿಲ್ಲ. ಅದನ್ನು ‘ಕರುಳಿನ ಕೊಲೆ’ ಎಂದು ಬೇಂದ್ರೆ ಬಣ್ಣಿಸುತ್ತಾರೆ. ಬಾಳೆಂಬುದು ದಿನದಿನವೂ ಭಗಭಗಿಸುವ ಉರಿಯ ಒಲೆಯಾಗಿದೆ. ಇಂತಹ ಬದುಕಿನಲ್ಲಿ ತಮ್ಮ ಹೆಂಡತಿಯು ಸುಟ್ಟ ಹಪ್ಪಳದಂತೆ ಆಗಿದ್ದಾಳೆ, ಬಾಡಿ ಹೋದ ಸೊಪ್ಪಿನಂತೆ ಸೊರಗಿ ಹೋಗಿದ್ದಾಳೆ ಎಂದು ಬೇಂದ್ರೆಯವರು ವ್ಯಥೆ ಪಡುತ್ತಾರೆ. ಈ ಎರಡೂ ಉಪಮೆಗಳು ಊಟದ ಪದಾರ್ಥಗಳು ಆಗಿರುವದನ್ನು ಗಮನಿಸಬೇಕು. (ಬೇಂದ್ರೆಯವರ ಮತ್ತೊಂದು ಕವನದಲ್ಲಿ ‘ಉಪ್ಪಿಗೂ ಹೊರತಾದೆವು ’ ಎನ್ನುವ ಮಾತು ಬರುತ್ತದೆ.) ಇಂತಹ ಪರಿಸ್ಥಿತಿಯಲ್ಲಿ ಮೊದಲಿನ ಹುಡುಗಾಟದ ಹುಡುಗಿಯು, ತಮ್ಮ ಚೆನ್ನಿಯು ಎಷ್ಟು ಬೇಗನೇ ಮುದುಕಿಯಾಗಿಬಿಟ್ಟಳಲ್ಲ , ಪ್ರಾಯದಲ್ಲಿಯೇ ಅಕಾಲವಾರ್ಧಕ್ಯವನ್ನು ಹೊಂದಿದಳಲ್ಲ ಎಂದು ಬೇಂದ್ರೆಯವರು ಹಲಬುತ್ತಾರೆ.

ಕಣಕಣ್ಣ ನೆನಸೇನ ಮನಸಿಲೆ ಬಣಿಸೇನ
            ಕಂಡೀತೆಂತೆಣಿಸೇನ
ಬಿಸಿಲುಗುದುರೀ ಏರಿ ನಿನ ನಗೆಯ ಸವ್ವಾರಿ
            ಹೊರಟಿತ್ತು ಕನಸೇನ ?

ಕಣ್ಣುಗಳನ್ನು ಅರೆಮುಚ್ಚಿಕೊಂಡು ಬೇಂದ್ರೆಯವರು ತಮ್ಮ ಹಳೆಯ ನೆನಪುಗಳಿಗೆ ಜಾರುತ್ತಾರೆ. ಸೋತು ಹೋದ ತಮ್ಮ ಜೋಡಿಯನ್ನು ಮನಸ್ಸಿನಲ್ಲಿಯೇ ಮತ್ತೊಮ್ಮೆ ಮೊದಲಿನಿಂದ ನೋಡುತ್ತಾರೆ. ಹಳೆಯ ಕನಸು ಮತ್ತೊಮ್ಮೆ ಕಂಡೀತೆ ಎಂದು ಲೆಕ್ಕಿಸುತ್ತಾರೆ. ತನ್ನ ಕೆಳದಿ ನೆನಸಿದ ಸುಖವು ಬರೀ ಕನಸೆ ಎಂದು ವಿಭ್ರಮಿಸುತ್ತಾರೆ.

‘ಬಿಸಿಲುಗುದುರೆ’ ಎಂದರೆ mirage ಅಥವಾ ಮಾಯಾಮೃಗ. ಬೇಸಿಗೆಯ ಕಾಲದಲ್ಲಿ ಅನತಿ ದೂರದಲ್ಲಿ ನೀರು ಹರಿಯುತ್ತಿರುವಂತೆ ಭಾಸವಾಗುತ್ತದೆ. ಎಷ್ಟೇ ನಡೆದರೂ, ಆ ಮಾಯಾದೃಶ್ಯ ಮತ್ತೆ ಸ್ವಲ್ಪ ಮುಂದಕ್ಕೆ ಕಾಣುತ್ತ ಹೋಗುತ್ತದೆ. ಈ ದೃಶ್ಯಕ್ಕೆ ಬಿಸಿಲುಗುದುರೆ ಎನ್ನುತ್ತಾರೆ. ಸುಖ ಸಿಕ್ಕೀತು ಎನ್ನುವುದು ಸಹ ಇಂತಹ ಬಿಸಿಲುಗುದುರೆಯೇ ಆಗಿದೆ. ತನ್ನ ಕೆಳದಿಯ ಮೊದಲಿನ ಹುಡುಗಾಟದ ನಗೆ ಎಲ್ಲವೂ ಇಂತಹ ಬಿಸಿಲುಗುದುರೆಯನ್ನು ಏರಿದ ಸವಾರಿಯೇ ಅಲ್ಲವೆ? ಅಂತಹ ಭ್ರಮಾತ್ಮಕ ಸುಖಕ್ಕೂ ಸಹ ನಾವು ಎರವಾಗಿ ಬಿಟ್ಟೆವೆ? ಅದೂ ಸಹ ಇದೀಗ ಕನಸಾಗಿ ಬಿಟ್ಟಿದೆಯೆ ಎಂದು ಬೇಂದ್ರೆಯವರು ತಮ್ಮ ಕೆಳದಿಯನ್ನು ಕೇಳುತ್ತಿದ್ದಾರೆ.

[‘ಬಿಸಿಲುಗುದುರೀ ಏರಿ ನಿನ ನಗೆಯ ಸವ್ವಾರಿ, ಹೊರಟಿತ್ತು ಕನಸೇನ ?’ ಎನ್ನುವ ರೂಪಕವು ಆ ಕಾಲದ ಅನೇಕ ತರುಣರ ಬಾಳಿಗೆ ಅನ್ವಯಿಸುವ ವಸ್ತುಸ್ಥಿತಿಯಾಗಿತ್ತು. ಕನ್ನಡದ ಖ್ಯಾತ ನಾಟಕಕಾರರಾದ ಶ್ರೀರಂಗರೂ ಸಹ ಇಂತಹ ಅಗ್ನಿಪರೀಕ್ಷೆಯಲ್ಲಿ ಬದುಕಿದವರೇ. ತಮ್ಮ ಹೆಂಡತಿಗೆ ಔಷಧಿ ತರಲು ದುಡ್ಡು ಇಲ್ಲದ ಶ್ರೀರಂಗರು ಮತ್ತೊಬ್ಬ ಸಾಹಿತಿ ದ.ಬಾ.ಕುಲಕರ್ಣಿಯವರ ಹತ್ತಿರ ಒಂದು ರೂಪಾಯಿ ಸಾಲ ಕೇಳಿದ್ದರು. ಒಬ್ಬ ಭಿಕ್ಷುಕನು ಮತ್ತೊಬ್ಬ ಭಿಕ್ಷುಕನ ಬಳಿ ಬೇಡಿದಂತೆ! ದ.ಬಾ. ರ ಜೇಬೂ ಬರಿದೇ. ಆಗ ದ.ಬಾ.ರವರು ತಮ್ಮ ಗುರುತಿನ ಔಷಧಿಯ ಅಂಗಡಿಯಿಂದ ಶ್ರೀರಂಗರಿಗೆ ಔಷಧಿಯನ್ನು ಉದ್ದರಿ ಕೊಡಿಸಿದರು.]

                     ೫
ಮುಂಗಾರಿ ಕಣಸನ್ನಿ ಹಾಂಗ ನಿನ ನಗಿ ಚೆನ್ನಿ
ಮುಂಚ್ಯೊಮ್ಮೆ ಮಿಂಚಿತ್ತ
ನಿನ ಮಾರಿ ನಿಟ್ಟಿಗೆ ಹಚ್ಚಿ ದಿಟ್ಟಿ ದಿಟ್ಟಿಗೆ
ನೋಡ್ತೇನಿ ನಾನಿತ್ತ !

ಮುಂಗಾರಿ ಮಳೆ ಪ್ರಾರಂಭವಾಗುವ ಪೂರ್ವದಲ್ಲಿ ಮೋಡಗಳು ಮಿಂಚಿನ ಮೂಲಕ ಕಣ್ಣುಸನ್ನಿಯನ್ನು ಅಂದರೆ ಮಳೆ ಪ್ರಾರಂಭವಾಗುವ ಪೂರ್ವಸೂಚನೆಯನ್ನು ನೀಡುತ್ತವೆ. ಆ ಬಳಿಕ ಮಳೆ ಧೋಧೋ ಎಂದು ಪ್ರಾರಂಭವಾಗುತ್ತದೆ. ಸಂಸಾರ ಪ್ರಾರಂಭವಾದ ತರುಣದಲ್ಲಿ ಬೇಂದ್ರೆಯವರ ಕೆಳದಿಯ ಮುಖದಲ್ಲಿ ಒಮ್ಮೆ ನಗು ಮಿಂಚಿತ್ತು. ಆ ನಗುವನ್ನು ಮುಂಗಾರಿನ ಮಿಂಚಿಗೆ ಬೇಂದ್ರೆಯವರು ಹೋಲಿಸುತ್ತಿದ್ದಾರೆ. ಕಷ್ಟಗಳ ಕಾರ್ಮೋಡಗಳು ಕವಿಯುವುದು ನಿಶ್ಚಿತ. ತಮ್ಮ ಕೆಳದಿಯ ಕಣ್ಣುಗಳಿಂದ ಧಾರೆ ಸುರಿಯುವುದು ನಿಶ್ಚಿತ ಎಂದು ಈ ನಗೆಮಿಂಚು ಸೂಚಿಸುತ್ತಿದೆ. ಈ ಮಿಂಚಿಗೆ ಮರುಳಾಗಬಹುದೆ? ಇದು ತನ್ನ ನೋವನ್ನು ಮುಚ್ಚಿಡಲು ಕೆಳದಿ ಉಕ್ಕಿಸುತ್ತಿರುವ ಸುಳ್ಳು ನಗೆಯೆ ಅಥವಾ ನೈಜ ನಗೆಯೆ ಎನ್ನುವುದನ್ನು ಅರಿಯಲು ಬೇಂದ್ರೆಯವರು ತನ್ನ ಕೆಳದಿಯ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುತ್ತಾರೆ. ಅವಳು ಹೇಳದೆ ಇರುವ ಸತ್ಯ ಏನು ಎಂದು ಅರಿಯಲು ಪ್ರಯತ್ನಿಸುತ್ತಾರೆ.

ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ
ಹೋಗೇತಿ ಎತ್ತೆತ್ತ
ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತs
ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ
            ಏರಿಕಿ ನಗಿ ಇತ್ತ !!

ಬೇಂದ್ರೆಯವರಿಗೂ ಗೊತ್ತು, ಅವರ ಕೆಳದಿಗೂ ಗೊತ್ತು: ಆ ಏರಿಕೆಯ ನಗಿ ಈಗ ಎಲ್ಲಿ ಹೋಗಿದೆ ಎನ್ನುವುದು! ಆದರೆ ಒಂದು ಕ್ಷಣವಾದರೂ ಸಹ ಸಂಸಾರದ ಸಂಕಟಗಳನ್ನೆಲ್ಲ ಮರೆತು ಆ ಹಳ್ಳದ ದಂಡೆಯ ಮೊದಲ ಮುಖಾಮುಖಿಯನ್ನು, ಆ ಹುಡುಗಾಟದ ಸುಖದ ನೆನಪನ್ನು ಮಾಡಿಕೊಳ್ಳೋಣ ಎನ್ನುತ್ತಿದ್ದಾರೆ ಬೇಂದ್ರೆಯವರು. 
ಹಳೆಯ ಸುಖದ ನೆನಪು ಸದ್ಯದ ಸಂಕಟವನ್ನು ಮರೆಸಬಹುದು !


‘ಬಿಸಿಲುಗುದುರೆ’ ಕವನವು ಬೇಂದ್ರೆಯವರ ‘ಗರಿ’ ಕವನಸಂಕಲನದಲ್ಲಿ ಅಡಕವಾಗಿದೆ.

Friday, April 4, 2014

ಇದು ಯುಗಾದಿ...........................ಬೇಂದ್ರೆ

ಅವರವರಿಗೆ ಅವರ ಹಾದಿ
ನಿನಗೆ ನನಗೆ ಒಂದೆ ಆದಿ – ಒಂದೆ ದಾದಿ
ಯುಗದ ಮಧ್ಯಬಿಂದು ಒಂದು.

ಇದು ಯುಗಾದಿ
ಆಗಿರು ಸಂವಾದಿ.
ಏಕೆ ವಾದ ಬೀದಿ?
ಸಾದಿ ನಮ್ಮ ಹಾದಿ ತಮ್ಮಾ
ಯಾಕೆ ಕೆಡುವೆ ಕಾದಿ ?
ನಿನ್ನ ಪಾಡು ನಿನ್ನ ಜಾಡು
ವಿರಸ ನಿನಗನಾದಿ.

ಮೊನ್ನೆ ಮೊನ್ನೆ ಬೂದಿಯಾದಾ
ಹೋಳಿಯಲ್ಲಿ ಕಾಮಾ
ಚೈತ್ರಗೌರಿ ಹೂತಳಣ್ಣಾ
ನೆನೆದು ಶಿವನ ನಾಮಾ
ಮಾಧವನಾ ರಾಸಲೀಲೆ-
ಗಿದೇ ಋತುವು ಹದವು
ಸುಂಟ್ರುಗಾಳಿ, ಅಡ್ಡಮಳೆ
ತೆರೆದಿತಕ್ಕಾ ಕದವು.
ಚಿಗುರು ಹಸಿತು, ಬಲಿತು ಹಳಿತು
ಎಲೆ ಎಲೆ ಎಲೆ ಉದುರಿತು
ಫಲ ಸಿಡಿದು ಬೀಜ ಬೀಜ
ಅದು ಎಲ್ಲೋ ಚದುರಿತು.

ಆದಿ ಇಲ್ಲ ; ಅಂತ್ಯ ಇಲ್ಲ
ಮಧ್ಯೆ ಯಾವ ಹಾದಿ ?
ಯುಗ ಯುಗಗಳ ವಿರಹದೊಳಿದೆ
ಪ್ರೀತಿಯಾ ಬುನಾದಿ.
ನನ್ನುಸಿರಿಗೆ ನಿನ್ನುಸಿರನು
ಸಂಗಡಿಸು ಸಮಾಧಿ.

ಶ್ರಾವಣದಲಿ ಶ್ರವಣಸುಖ
ಮಾಘದಲ್ಲಿ ಅನಘಮುಖ
ಆಶ್ವಿನ ರವಿ ಚೈತ್ರ ಚಂದ್ರ
ಪರಸ್ಪರರು ಅಭಿಮುಖ.
ಮಧು ಮಾಸದ ರಾಧಾ ರತಿ
ವೈಶಾಖಿಯ ಸತ್ಕೃತಿ
ನೈಸರ್ಗಿಕ ವೈಸರ್ಗಿಕ
ಛಂದೋಮಯ ಪ್ರತಿಕೃತಿ.

ಕವಿಯಾಗಿಯೆ ಹೇಳುತಿರೋ
ಕಿವಿಯಾಗಿಯೆ ಕೇಳುತಿರೋ
ಭವ ಭವ ಭವ ಮೋಚನವಿದೆ
ಸವಿ ಸವಿ ಸವಿದೇಳುತಿರೋ
ಸಾಯಕನೋ ಈ ಪ್ರಪಂಚಿ
ಗಾಯಕನಿಗೊ ಇದೆ ವಿಪಂಚಿ
ಮಾಯದ ಕಾಯ್ ಮಾಗುವುದೋ
ಅರಸು ಅಂಚೆ ಹಂಚಿ ಹಂಚಿ
ಸರಸಿಯೊಳಗೆ – ಹೊಂಚಿ.

ಹಾದಿಯೆಂದು ಹಾಯಬೇಡ ಯಾವುದೋ ಯುಗಾದಿ
ಯುಗಲ ಯುಗಲ ವಿರಹದೊಳಿದೆ ಪ್ರೀತಿಯೂ ಬುನಾದಿ
ಸತ್ತಿನ ಗತ್ತಿನ ಗಮಕವು ಭಾವರಸ ಸನಾದಿ
ಛಾಂದಸಿಕತೆ ಮುಕ್ತಮಾರ್ಗ ? ಶ್ರುತಿ-ಕೃತಿ ಸಂವಾದಿ.
............................................................................................................

“ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ...”
ಇದು ಬೇಂದ್ರೆಯವರ ಸುಪ್ರಸಿದ್ಧ ಕವನ. ೧೯೩೨ರಲ್ಲಿ ಪ್ರಕಟವಾದ ‘ಗರಿ’ ಕವನಸಂಕಲನದಲ್ಲಿ ಈ ಕವನ ಅಡಕವಾಗಿದೆ.
ಈ ಯುಗಾದಿ’ ಎನ್ನುವುದು ಬೇಂದ್ರೆಯವರ ಮತ್ತೊಂದು ಕವನ. ಈ ಕವನವು ೧೯೬೪ರಲ್ಲಿ ಪ್ರಕಟವಾದ ‘ನಾಕು ತಂತಿ’ ಕವನಸಂಕಲನದಲ್ಲಿ ಅಡಕವಾಗಿದೆ. ಈ ಮೂವತ್ತೆರಡು ವರ್ಷಗಳ ಅವಧಿಯಲ್ಲಿ ಬೇಂದ್ರೆಯವರ ವ್ಯಕ್ತಿತ್ವದಲ್ಲಿ ಆದ ಏಳ್ಗೆಯನ್ನು ಈ ಎರಡು ಕವನಗಳು ಸೂಚಿಸುತ್ತವೆ. ಮೊದಲ ಕವನದಲ್ಲಿ ಅವರು ಪ್ರೌಢ ಕವಿ. ಆದುದರಿಂದಲೇ ಅವರು ಯುಗಾದಿಯು ಪ್ರಕೃತಿಯಲ್ಲಿ ತರುವ ಸಂಭ್ರಮವನ್ನು ಗುರುತಿಸುತ್ತಾರೆ. ಎರಡನೆಯ ಕವನದಲ್ಲಿ ಅವರು ಮಾಗಿದ ಜೀವ, ಆಧ್ಯಾತ್ಮ ಸಾಧಕರು. ಆದುದರಿಂದ ಎರಡನೆಯ ಕವನದಲ್ಲಿ ಅವರು ಬದುಕಿನ ರಹಸ್ಯವನ್ನು ಶೋಧಿಸುತ್ತಿದ್ದಾರೆ.

ಅವರವರಿಗೆ ಅವರ ಹಾದಿ
ನಿನಗೆ ನನಗೆ ಒಂದೆ ಆದಿ – ಒಂದೆ ದಾದಿ
ಯುಗದ ಮಧ್ಯಬಿಂದು ಒಂದು.

ಅನಂತವಾದ ಈ ಕಾಲದಲ್ಲಿ ಜೀವಿಗಳು ಕಾಣುತ್ತವೆ ಹಾಗು ಕಣ್ಮರೆಯಾಗುತ್ತವೆ. (‘ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ, ಭಾರತ’...ಭಗವದ್ಗೀತೆ) ಅವರವರ ಕರ್ಮಾನುಸಾರವಾಗಿ ಅವರವರಿಗೆ ಅವರವರ ಹಾದಿ ತೆರೆದಿರುತ್ತದೆ. ಆದರೆ ಈರ್ವರು ಸ್ನೇಹಿತರು ಮಾತ್ರ ಯಾವುದೋ ಒಂದು ಬಂಧನದಿಂದ ಬೆಸೆದುಕೊಂಡಿರುತ್ತಾರೆ. ಅದು ಸ್ನೇಹದ ಬಂಧನ. ಕವಿಯ ವಿಷಯದಲ್ಲಿ, ಈ ಸ್ನೇಹವು ಕವಿಯ ಹಾಗು ಕಾವ್ಯರಸಿಕನ ನಡುವಿನ ಸ್ನೇಹವಾಗಿದೆ. ಈ ಕಾವ್ಯಸ್ನೇಹದಿಂದಾಗಿ, ಅನಂತಕಾಲದೊಳಗಿನ ಇವರೀರ್ವರ  ಆದಿ ಬಿಂದು ಅಂದರೆ ಇವರು ವ್ಯಕ್ತವಾಗುವ ಬಿಂದು ಒಂದೇ ಆಗಿದೆ. ಇವರಿಗೆ ಪೋಷಣೆ ನೀಡುವ ದಾದಿಯೂ ಒಬ್ಬಳೇ ಅರ್ಥಾತ್ ಇವರೀರ್ವರೂ ಸಮಾನಸ್ನೇಹಿಗಳು. (ಸಮಾನಶೀಲೇಷು ವ್ಯಸನೇಷು ಸಖ್ಯಾ:)

ಅನಂತವಾದ ದೇಶಕ್ಕಾಗಲೀ, ಅನಂತವಾದ ಕಾಲಕ್ಕಾಗಲೀ ಆದಿಬಿಂದುವಾಗಲಿ, ಅಂತ್ಯಬಿಂದುವಾಗಲಿ, ಮಧ್ಯಬಿಂದುವಾಗಲಿ ಇರುವುದಿಲ್ಲ. ನೀವು ಎಲ್ಲಿ ನಿಂತರೂ ಆ ಬಿಂದುವೇ ಮಧ್ಯಬಿಂದು ! ಕವಿಯ ಕಾವ್ಯ ಹುಟ್ಟಿದ ಕ್ಷಣದಲ್ಲಿಯೇ ರಸಿಕನು ಆ ಕಾವ್ಯದ ಸವಿಯನ್ನು ಸವಿದಿರುತ್ತಾನೆ. ಕವಿ ಹಾಗು ಸಹೃದಯ ಇವರೀರ್ವರೂ ಜೊತೆಯಲ್ಲಿಯೇ ಜೀವಿಸುತ್ತಾರೆ. ಆದುದರಿಂದ ಇವರ ಕಾಲದೇಶಗಳ ಆದಿಬಿಂದುವೂ ಒಂದೇ ಆಗಿದೆ.

ಬೇಂದ್ರೆಯವರು ಮೊದಲ ನುಡಿಯಲ್ಲಿ ಕವಿಯ ಹಾಗು ಸಹೃದಯ ರಸಿಕನ ನಡುವಿನ ಸ್ನೇಹಬಂಧವನ್ನು ಗುರುತಿಸುತ್ತಾರೆ. ಇದು ಸಾಹಿತ್ಯದ ಮೂಲಕ ಹುಟ್ಟಿದ ಸ್ನೇಹಬಂಧವಾಗಿದೆ. ಆದರೆ ಈ ಸ್ನೇಹವು ಕೇವಲ ಸಾಹಿತ್ಯದ ಮೂಲಕವೇ ಹುಟ್ಟಬೇಕಿಂದಿಲ್ಲ. ಈರ್ವರು ಸ್ನೇಹಿತರ ನಡುವಿನ ಅವ್ಯಾಜ ಸ್ನೇಹಕ್ಕೆ ಕೆಲವೊಮ್ಮೆ ಯಾವುದೇ ಕಾರಣವು ಬೇಕಾಗಿರುವುದಿಲ್ಲ.

ಇದು ಯುಗಾದಿ
ಆಗಿರು ಸಂವಾದಿ.
ಏಕೆ ವಾದ ಬೀದಿ?
ಸಾದಿ ನಮ್ಮ ಹಾದಿ ತಮ್ಮಾ
ಯಾಕೆ ಕೆಡುವೆ ಕಾದಿ ?
ನಿನ್ನ ಪಾಡು ನಿನ್ನ ಜಾಡು
ವಿರಸ ನಿನಗನಾದಿ.

ಎರಡನೆಯ ನುಡಿಯಲ್ಲಿ ಬೇಂದ್ರೆಯವರು ತಮ್ಮ ಸ್ನೇಹಿತನಿಗೆ ಹೇಳುವ ಆಪ್ತ ಬೋಧನೆಯಿದೆ. ‘ ಗೆಳೆಯಾ, ಕಾಲವು ಪ್ರಾರಂಭವಾಗಿದೆ. ಇಂದು ಯುಗಾದಿಯ ಹಬ್ಬ. ಈ ಶುಭದಿನದಂದು ನಾವು ಪರಸ್ಪರ ಸಮ್ಮುಖರಾಗಿ, ಸುಮುಖರಾಗಿ ಸಂವಾದದ ಸಲ್ಲಾಪದಲ್ಲಿ ತೊಡಗಬೇಕು. ಹಾಗಿರದೆ ಬೀದಿಜಗಳದ ಹಾದಿಯನ್ನು ಆರಿಸಿಕೊಳ್ಳುವದರಲ್ಲಿ ಏನು ಜಾಣತನವಿದೆ? ಇಂತಹ ಮನೋಧರ್ಮವು ಗೆಳೆಯರಲ್ಲಿ ವಿರಸವನ್ನು ಹುಟ್ಟಿಸುತ್ತದೆ.

 ‘ಸಾದಿ’ ಪದಕ್ಕೆ ಎರಡು ಅರ್ಥಗಳನ್ನು ಹೇಳಬಹುದು. ಮೊದಲನೆಯದು ‘ಆದಿ’ ಇದ್ದಂತಹ ಎನ್ನುವ ಅರ್ಥ ; ಎರಡನೆಯದು ‘ಸಾಹಿತ್ಯದ ಹಾದಿ’ ಎನ್ನುವ ಅರ್ಥ. ಬೇಂದ್ರೆಯವರು ಈ ಎರಡೂ ಅರ್ಥಗಳನ್ನು ಬಳಸಿಕೊಳ್ಳುತ್ತಾರೆ. ನಮ್ಮದು ಸಾಹಿತ್ಯದ ಹಾದಿ.
ನಮ್ಮ ಜೀವಿತಾವಧಿಯಲ್ಲಿ ಈ ಹಾದಿಗೆ ಒಂದು ಪ್ರಾರಂಭವಿದೆ (ಹಾಗು ಒಂದು ಅಂತ್ಯವಿದೆ). ಇಂತಹ ಅಲ್ಪಾವಧಿಯಲ್ಲಿ ಜಗಳವನ್ನಾಡುತ್ತ ಜೀವನವನ್ನು ಯಾಕೆ ಕೆಡಸಬೇಕು? ಇದೇ ನಿನ್ನ ಇಚ್ಛೆಯಾಗಿದ್ದರೆ, Good bye! ನಿನ್ನ ಅದೃಷ್ಟ ತೋರಿದತ್ತ ನೀನು ನಡೆ. ಜಗಳಾಟವೇ ನಿನಗೆ ಅನಾದಿಕಾಲದಿಂದ ಬಂದಂತಹ ಮನೋಧರ್ಮವಾಗಿದೆ!

ನಿನ್ನ ಹಾದಿ ಬೇರೆಯಾದರೆ ಅದಕ್ಕೆ ಕಾರಣ ನಿನ್ನ ಮನೋಧರ್ಮ. ‘ಬುದ್ಧಿಃ ಕರ್ಮಾನುಸಾರಿಣಿ’ ಎಂದು ಹೇಳುತ್ತಾರೆ. ನಾವು ಹುಡುಕಿಕೊಂಡು ಹೋಗುವ ಹಾದಿಯು ನಮ್ಮ ಕರ್ಮ ಹಾಗು ನಮ್ಮ ಬುದ್ಧಿಯು ಸೂಚಿಸಿದಂತೆ ಇರುತ್ತದೆ. ಇಷ್ಟೆಲ್ಲವನ್ನು ಬೇಂದ್ರೆಯವರು ‘ನಿನ್ನ ಪಾಡು ನಿನ್ನ ಜಾಡು’ ಎನ್ನುವ ನಾಲ್ಕು ಸರಳ ಪದಗಳ ಮೂಲಕ ಸೂಚಿಸುತ್ತಾರೆ.

 ೩
ಮೊನ್ನೆ ಮೊನ್ನೆ ಬೂದಿಯಾದಾ
ಹೋಳಿಯಲ್ಲಿ ಕಾಮಾ
ಚೈತ್ರಗೌರಿ ಹೂತಳಣ್ಣಾ
ನೆನೆದು ಶಿವನ ನಾಮಾ
ಮಾಧವನಾ ರಾಸಲೀಲೆ-
ಗಿದೇ ಋತುವು ಹದವು
ಸುಂಟ್ರುಗಾಳಿ, ಅಡ್ಡಮಳೆ
ತೆರೆದಿತಕ್ಕಾ ಕದವು.
ಚಿಗುರು ಹಸಿತು, ಬಲಿತು ಹಳಿತು
ಎಲೆ ಎಲೆ ಎಲೆ ಉದುರಿತು
ಫಲ ಸಿಡಿದು ಬೀಜ ಬೀಜ
ಅದು ಎಲ್ಲೋ ಚದುರಿತು.

ಎರಡನೆಯ ನುಡಿಯಲ್ಲಿ ಸ್ನೇಹಕ್ಕೆ ಆಹ್ವಾನವನ್ನು ನೀಡಿದ ಕವಿಯು ಮೂರನೆಯ ನುಡಿಯಲ್ಲಿ ಪ್ರಕೃತಿಯಲ್ಲಿ ಪಸರಿಸಿದ ಸಾಮರಸ್ಯವನ್ನು, ಸಫಲತೆಯನ್ನು ಕಂಡು ಆನಂದಿತರಾಗುತ್ತಾರೆ. ಪ್ರಕೃತಿಯಲ್ಲಿರುವ ಸಾಮರಸ್ಯವೇ ಅದಕ್ಕೊಂದು ಸೌಂದರ್ಯವನ್ನು ತಂದಿದೆ ; ಪ್ರಕೃತಿಗೆ ಹರ್ಷೋಲ್ಲಾಸವನ್ನು ತಂದಿದೆ.

ಹೋಳಿಹುಣ್ಣಿವೆಯಲ್ಲಿ ಕಾಮದಹನವಾದ ನಂತರ ಪ್ರಕೃತಿ ಮತ್ತೆ ಹೊಸ ಜೀವನವನ್ನು ಪ್ರಾರಂಭಿಸುತ್ತದೆ. ಈ ಸಂದರ್ಭದಲ್ಲಿ ಬೇಂದ್ರೆಯವರು ತಮ್ಮ ಮೊದಲ ಕವನ ‘ಯುಗಾದಿ’ಯಲ್ಲಿ ಹೇಳಿದ್ದನ್ನು ನೆನಪಿಸಿಕೊಳ್ಳಿ:
ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.
ಈ ನುಡಿಗಳಲ್ಲಿ ಪ್ರಕೃತಿಯ ಸಂಭ್ರಮವಿದೆ. ಸಸ್ಯಸಂಕುಲ ಹಾಗು ಪಕ್ಷಿಸಂಕುಲಗಳಲ್ಲಿ ಇರುವ ಸಾಮರಸ್ಯದ ವರ್ಣನೆ ಇದೆ. ಆದರೆ ಪ್ರಕೃತಿಯನ್ನು ಇಲ್ಲಿ ದೈವೀಕರಿಸಿಲ್ಲ. ಬೇಂದ್ರೆಯವರ ಎರಡನೆಯ ಕವನ ‘ಈ ಯುಗಾದಿ’ಯಲ್ಲಿ ಪ್ರಕೃತಿಯನ್ನು ಬೇಂದ್ರೆಯವರು ಚೈತ್ರಗೌರಿ ಎಂದು ಕರೆದಿದ್ದಾರೆ. ಆ ದೇವಿ ಚೈತ್ರಗೌರಿಯೇ ಹೊಸ ಬದುಕಿಗೆ ರೂಪ ಕೊಡಲು ಹೂವನ್ನು ಹೊತ್ತು ಎಲ್ಲೆಡೆ ಹರಡಿದ್ದಾಳೆ. (‘ಯಾ ದೇವಿ ಸರ್ವಸಸ್ಯೇಷು ಪುಷ್ಪರೂಪೇಣ ಸಂಸ್ಥಿತಾ’ ಎನ್ನೋಣವೆ?) ಚೈತ್ರಮಾಸದ ಗೌರಿ ಕೇವಲ ಮನೆಯಲ್ಲಿ ಪ್ರತಿಷ್ಠೆಗೊಳ್ಳುವ ದೇವತೆಯಲ್ಲ. ಅವಳು ಪ್ರಕೃತಿಯ ದೇವತೆ. ಅವಳು ಶಿವನ ನಾಮವನ್ನು ನೆನೆಯುತ್ತಲೆ  ಸಸ್ಯಸಂಕುಲಕ್ಕೆಲ್ಲ ಹೂವುಗಳನ್ನು ಪ್ರಸಾದಿಸುತ್ತಾಳೆ. (ಶಿವ ಅಂದರೆ ಕಲ್ಯಾಣಕಾರಿ. ಶಕ್ತಿಯು ಸೃಷ್ಟಿಯನ್ನು ಮಾಡುವಾಗ, ಕಲ್ಯಾಣಕ್ಕಾಗಿಯೇ ಮಾಡುತ್ತಾಳೆ. ಅಲ್ಲದೆ, ಕಾಮನನ್ನು ಸುಟ್ಟವನೇ ಶಿವ. ಇದೀಗ ಮತ್ತೊಮ್ಮೆ ಸೃಷ್ಟಿಯನ್ನು ಪ್ರಾರಂಭಿಸಲು ಶಿವನ ಅನುಗ್ರಹ ಬೇಕೇ ಬೇಕು. )

ಈ ಸೃಷ್ಟಿಕ್ರಮದ ಸ್ವರೂಪವನ್ನು ಬೇಂದ್ರೆಯವರು ‘ಮಾಧವನ ರಾಸಲೀಲೆ’ ಎಂದು ವರ್ಣಿಸುತ್ತಾರೆ, ಅರ್ಥಾತ್ ಇದು ದೇವರ ಆನಂದಲೀಲೆ. ಸಂಹಾರಕಾರಿ ಶಿವನ ನಂತರ ಸೃಷ್ಟಿಪಾಲಕ ಮಾಧವನು ಅರ್ಥಾತ್ ವಿಷ್ಣು ಬರುವುದು ಸಮಂಜಸವೇ ಆಗಿದೆ. ಸೃಷ್ಟಿಯ ಪ್ರಾರಂಭಕ್ಕೆ ಯುಗಾದಿ ಅಂದರೆ ವಸಂತ ಋತುವೇ ಸುಯೋಗ್ಯವಾದ ಕಾಲವಾಗಿದೆ. ಪ್ರಕೃತಿಯಂತೂ ಪುಷ್ಪವತಿಯಾಗಿ ನಿಂತಿದ್ದಾಳೆ. ಅವಳು ಫಲವತಿಯಾಗಲು ಸುಂಟರಗಾಳಿ ಹಾಗು ಅಡ್ಡಮಳೆಗಳ ಅವಶ್ಯಕತೆ ಇದೆ.  ಪುಷ್ಪಪರಾಗವನ್ನು ಹರಡುವ ಮೂಲಕ ಹಾಗು ಜೀವಜಲವನ್ನು ಅನುಗ್ರಹಿಸುವ ಮೂಲಕ ಅವು ಸೃಷ್ಟಿಯ ಬಾಗಿಲನ್ನು ತೆರೆದು ನಿಂತಿವೆ.
[ಟಿಪ್ಪಣಿ: ‘ಸುಂಟ್ರಗಾಳಿ, ಅಡ್ಡಮಳೆ ತೆರೆದಿತಕ್ಕಾ ಕದವು’ ಎನ್ನುವ ಒಂದು ಸಾಮಾನ್ಯ ಆಡುಮಾತಿನಲ್ಲಿ ಬೇಂದ್ರೆಯವರು ಎಷ್ಟೆಲ್ಲ ಅರ್ಥವನ್ನು, ಚೆಲುವನ್ನು ತುಂಬಿದ್ದಾರೆ!]

ಈ ಸೃಷ್ಟಿಕ್ರಮದ ಮುಂದಿನ ಭಾಗವೆಂದರೆ, ಹೊಸ ತಳಿರುಗಳು ಮೂಡುವುದು, ಅವು ಬಲಿತು ಹಳೆಯದಾಗಿ ಉದುರಿ ಹೋಗುವುದು. ಹಣ್ಣು ಮಾಗಿ, ಬಿದ್ದು, ಬಿರಿದು ಎಲ್ಲೆಡೆ ಬೀಜಗಳನ್ನು ಹರಡುವುದು, ಆ ಬೀಜಗಳು ನವೀನ ಸೃಷ್ಟಿಗೆ ಕಾರಣವಾಗುವುದು. ಪ್ರಕೃತಿಯು ಅದ್ಭುತವಾಗಿದೆ!

ಆದಿ ಇಲ್ಲ ; ಅಂತ್ಯ ಇಲ್ಲ
ಮಧ್ಯೆ ಯಾವ ಹಾದಿ ?
ಯುಗ ಯುಗಗಳ ವಿರಹದೊಳಿದೆ
ಪ್ರೀತಿಯಾ ಬುನಾದಿ.
ನನ್ನುಸಿರಿಗೆ ನಿನ್ನುಸಿರನು
ಸಂಗಡಿಸು ಸಮಾಧಿ.

ಸೃಷ್ಟಿಕ್ರಮದ ಸಾಮರಸ್ಯವನ್ನು, ಆ ಅದ್ಭುತವನ್ನು ಕಂಡು ಬೆರಗಾದ ಬೇಂದ್ರೆಯವರು ತಮ್ಮ ಗೆಳೆಯನಿಗೆ ಮತ್ತೆ ಹೇಳುತ್ತಾರೆ:
ಈ ಜೀವನಚಕ್ರಕ್ಕೆ ಆದಿ, ಅಂತ್ಯಗಳಿಲ್ಲ. ಇದರ ನಡುವೆ ನೀನು ಯಾವ ಹಾದಿಯನ್ನು ಹುಡುಕುತ್ತಿರುವೆ? ಯಾವ ನಿರರ್ಥಕ ಅನ್ವೇಷಣೆಯನ್ನು ಮಾಡುತ್ತಿರುವೆ? ಈ ಸೃಷ್ಟಿಗೆ ಇರುವುದು ಒಂದೇ ಅರ್ಥ: ಅದು ಪ್ರೀತಿ.  ದೇವ ಮತ್ತು ಸೃಷ್ಟಿ, ಕವಿ ಮತ್ತು ರಸಿಕ, ಗೆಳೆಯ ಮತ್ತು ಗೆಳೆಯ ಇವರ ವಿರಹ ಹಾಗು ಸಂಗಮಗಳೇ ಈ ಬದುಕಿನ ರಹಸ್ಯವಾಗಿವೆ. ಬಾ ಗೆಳೆಯಾ, ನಮ್ಮಿಬ್ಬರ ಉಸಿರನ್ನೇ ಒಂದುಗೊಳಿಸೋಣ. ಆ ರೀತಿಯಲ್ಲಿ ನಾವಿಬ್ಬರು ಒಂದಾದಾಗಲೇ ಮಿಲನದ ಅತ್ಯುಚ್ಚ ಸ್ಥಿತಿಯಾದ ಸಮಾಧಿಯು ಸಾಧ್ಯವಾಗುತ್ತದೆ.

[ಟಿಪ್ಪಣಿ: ಬೇಂದ್ರೆಯವರು compulsive ಸ್ನೇಹಜೀವಿಗಳು. ಅವರಿಗೆ ಎಪ್ಪತ್ತೆರಡು ವರ್ಷಗಳಾದಾಗ ಪ್ರಕಟವಾದ ಅವರ ಕವನಸಂಕಲನದ ಹೆಸರು: ‘ಬಾ ಹತ್ತರ.’  ಈ ಶೀರ್ಷಿಕೆಯು ‘ರಸಿಕ ಮಿತ್ರಾ, ನನ್ನ (ಕಾವ್ಯದ) ಹತ್ತಿರ ಬಾ’ ಎಂದು ಹೇಳುವುದಲ್ಲದೆ, ‘ಬಾಹತ್ತರ’ ಅಂದರೆ (ಹಿಂದಿಯಲ್ಲಿ) ಎಪ್ಪತ್ತೆರಡು ಎನ್ನುವ ಅರ್ಥವನ್ನೂ ಕೊಡುತ್ತದೆ.]

ಶ್ರಾವಣದಲಿ ಶ್ರವಣಸುಖ
ಮಾಘದಲ್ಲಿ ಅನಘಮುಖ
ಆಶ್ವಿನ ರವಿ ಚೈತ್ರ ಚಂದ್ರ
ಪರಸ್ಪರರು ಅಭಿಮುಖ.
ಮಧು ಮಾಸದ ರಾಧಾ ರತಿ
ವೈಶಾಖಿಯ ಸತ್ಕೃತಿ
ನೈಸರ್ಗಿಕ ವೈಸರ್ಗಿಕ
ಛಂದೋಮಯ ಪ್ರತಿಕೃತಿ.

ಬೇಂದ್ರೆಯವರು ಮತ್ತೊಮ್ಮೆ ಪ್ರಕೃತಿಯ ವಿವಿಧ ಸುಮುಖಗಳನ್ನು ನೆನೆಯುತ್ತಾರೆ, ಸುಖಿಸುತ್ತಾರೆ. ಈ ಪ್ರಕೃತಿಯೂ ಸಹ ಬೇಂದ್ರೆಯವರಿಗೆ ಗೆಳತಿಯೇ ಹೌದು. ಶ್ರಾವಣ ಮಾಸವಂತೂ ಬೇಂದ್ರೆಯವರಿಗೆ ಅತ್ಯಂತ ಪ್ರೀತಿಯ ಮಾಸ. ಆ ಮಾಸದ ಸುಖವನ್ನು ಬೇಂದ್ರೆಯವರು ಶ್ರವಣಸುಖ ಎಂದು ಕರೆಯುತ್ತಾರೆ. ಅಲ್ಲದೆ, ‘ಚಾತುರ್ಮಾಸ’ವು ಪ್ರಾರಂಭವಾಗುವುದೂ ಈ ಮಾಸದಿಂದಲೇ. ಆದುದರಿಂದ ಈ ಮಾಸದಲ್ಲಿ ಧಾರ್ಮಿಕ ವಾಚನಗಳ ಶ್ರವಣಸುಖವೂ ದೊರೆಯುತ್ತದೆ. ಮಾಘಮಾಸದಲ್ಲಿ ಮಾಘಸ್ನಾನ ಮಾಡಿ ದೇವತಾರ್ಚನೆಯಲ್ಲಿ ತೊಡಗಿ ಪುಣ್ಯಸಂಪಾದನೆ ಮಾಡಬಹುದು. ಆಶ್ವಿನ ಮಾಸದ ರವಿಯು ಸೌಮ್ಯನಾಗಿ ಸುಖ ನೀಡಿದರೆ, ಚೈತ್ರಮಾಸದ ಚಂದ್ರನು ತನ್ನ ಚೆಲುವಿನಿಂದ, ವಿಸ್ತಾರದಿಂದ, ತಂಪಿನಿಂದ ಸುಖ ನೀಡುತ್ತಾನೆ. ಇವರಿಬ್ಬರು ಪ್ರತಿ ಮಾಸದ ಪೂರ್ಣಿಮೆಯಲ್ಲಿ ಅಭಿಮುಖರಾಗಿಯೇ ಇರುತ್ತಾರೆ. ಇನ್ನು ಉಳಿದ ಮಾಸಗಳು ಯಾವವು? ಮಧುಮಾಸದಲ್ಲಿ (ಚೈತ್ರಮಾಸದಲ್ಲಿ) ಈ ಮೊದಲೇ ವಿವರಿಸಿದಂತೆ ರಾಧಾರತಿ ಎಂದರೆ ಪ್ರಕೃತಿದೇವಿಯ ಸೃಷ್ಟಿಕಾರ್ಯ ನಡೆದಿರುತ್ತದೆ. ವೈಶಾಖ ಮಾಸವು ಬೇಸಗೆಯ ಮಾಸವಾದರೂ ಸಹ ಅದು ಸೃಷ್ಟಿಪೂರ್ವದ ಪ್ರಕ್ರಿಯೆಯನ್ನು ನೆರವೇರಿಸುತ್ತದೆ. ನಿಸರ್ಗದ ಈ ಭಿನ್ನ ಮುಖಗಳನ್ನು ಕಂಡ ಬೇಂದ್ರೆಯವರು ಇದು ಪ್ರಕೃತಿಯ ‘ಛಂದೋಮಯ ಪ್ರತಿಕೃತಿ’ ಎಂದು ಕರೆಯುತ್ತಾರೆ. ಛಂದೋಮಯ ಎಂದರೆ ಚಂದವಾದ ಎನ್ನುವ ಅರ್ಥವಲ್ಲದೆ ಲಯಬದ್ಧವಾದ ಎನ್ನುವ ಅರ್ಥವನ್ನೂ ಹೇಳುತ್ತದೆ.  ನಿಸರ್ಗ ಎಂದರೆ ಸೃಷ್ಟಿ ; ವಿಸರ್ಗ ಎಂದರೆ ವಿಲಯ ; ಛಂದಸ್ ಎಂದರೆ ಕವನದ metre.  ಪ್ರಕೃತಿಯ ಕಾವ್ಯಕ್ಕೆ ಸೃಷ್ಟಿ ಹಾಗು ವಿಲಯ ಇವು ಎರಡೂ ಛಂದಸ್ ಅನ್ನು ಅಂದರೆ metre ಅನ್ನು ರಚಿಸುತ್ತವೆ.

ಕವಿಯಾಗಿಯೆ ಹೇಳುತಿರೋ
ಕಿವಿಯಾಗಿಯೆ ಕೇಳುತಿರೋ
ಭವ ಭವ ಭವ ಮೋಚನವಿದೆ
ಸವಿ ಸವಿ ಸವಿದೇಳುತಿರೋ
ಸಾಯಕನೋ ಈ ಪ್ರಪಂಚಿ
ಗಾಯಕನಿಗೊ ಇದೆ ವಿಪಂಚಿ
ಮಾಯದ ಕಾಯ್ ಮಾಗುವುದೋ
ಅರಸು ಅಂಚೆ ಹಂಚಿ ಹಂಚಿ
ಸರಸಿಯೊಳಗೆ – ಹೊಂಚಿ.

ಈ ಸೃಷ್ಟಿರಹಸ್ಯವನ್ನು ಅರಿತುಕೊಳ್ಳುವವನೇ ನಿಜವಾದ ಕವಿ. ಆ ಕಾವ್ಯರಹಸ್ಯವನ್ನು ಮೈಯೆಲ್ಲ ಕಿವಿಯಾಗಿ ಕೇಳಿ, ಅರಿತುಕೊಂಡು, ಸುಖಿಸುವವನೇ ನಿಜವಾದ ರಸಿಕ. ಈ ಪ್ರಕ್ರಿಯೆ ಜರುಗಿದಾಗಲೇ, ಕವಿ ಹಾಗು ರಸಿಕ ಇವರೀರ್ವರು ಲೌಕಿಕವನ್ನು ದಾಟುವರು ಅಂದರೆ ಅವರಿಗೆ ಈ ಭವದಿಂದ ವಿಮೋಚನೆಯಾಗಿ ಅವರು ದೈವೀ ಆನಂದದಲ್ಲಿ ಮುಳುಗುವರು. ‘ಸವಿ ಸವಿ ಸವಿದೇಳುತಿರೋ’ ಎನ್ನುವ ಪದಪುಂಜಕ್ಕೆ ‘ಆನಂದಿಸು’ ಎನ್ನುವ ಅರ್ಥವಿರುವಂತೆಯೇ ‘ನಿನ್ನ ಕರ್ಮಗಳನ್ನು ಸವೆಯಿಸು (ಹಾಗು ಆ ಮೂಲಕ ಭವಮುಕ್ತನಾಗು) ಎನ್ನುವ ಅರ್ಥವೂ ಇದೆ.

ಸಾಯಕ ಅಂದರೆ ಬಾಣ. ಈ ಸಂದರ್ಭದಲ್ಲಿ ಅದು ಕಾಮನ ಬಾಣ. ಈ ಕಾಮನ ಬಾಣಕ್ಕೆ ತುತ್ತಾಗುವವನು ‘ಪ್ರಪಂಚಿ’ ಅಂದರೆ ‘ಭವಿ’. ಈ ಪ್ರಪಂಚದಲ್ಲಿ ದೇವರಹಸ್ಯವನ್ನು ಅನುಭವಿಸಿ, ಸುಖಪಟ್ಟು ಹಾಡುವವನೇ ಗಾಯಕ. ಈ ಗಾಯಕನ ಕೈಗೆ ಸಿಕ್ಕಿರುವುದು ವಿಪಂಚಿ ಅಂದರೆ ಬ್ರಹ್ಮವೀಣೆ ಅರ್ಥಾತ್ ದೇವವೀಣೆ.

ಬೇಂದ್ರೆಯವರಿಗೆ ಪ್ರಶ್ನೆಯೊಂದು ಇಲ್ಲಿ ಎದುರಾಗುತ್ತದೆ. ‘ಈ ಮಾಯದ ಕಾಯ್ ಮಾಗುವುದೋ?’ ಈ ಪ್ರಪಂಚವೇ ಮಾಯಾಸೃಷ್ಟಿ. ಅದರಲ್ಲಿರುವ ಈ ಕಾಯಿಯು ಮಾಗುವುದೋ ಅಂದರೆ ಹಣ್ಣಾಗುವುದೋ? ಕಾಯ್ ಅನ್ನುವ ಪದವನ್ನು ‘ಕಾಯ’ ಅಂದರೆ ‘ದೇಹ’ ಎನ್ನುವ ಅರ್ಥದಲ್ಲಿಯೂ ನೋಡಬಹುದು. ಆ ಸಂದರ್ಭದಲ್ಲಿ ಈ ಮಾಯಾದೇಹವನ್ನು ಧರಿಸಿದ ಜೀವಿಯು ಮಾಗುತ್ತಾನೆಯೆ ಅಂದರೆ ತನ್ನ ಕರ್ಮವನ್ನೆಲ್ಲ ಸವೆಯಿಸಿ, ಸಫಲನಾಗಿ ಮುಕ್ತನಾಗುತ್ತಾನೆಯೆ ಎನ್ನುವ ಅರ್ಥವೂ ಇಲ್ಲಿದೆ.

‘ಅರಸು ಅಂಚೆ’ ಅಂದರೆ ರಾಜಹಂಸ ಅರ್ಥಾತ್ ಆತ್ಮ. ಈ ಆತ್ಮವು ಪರಮಾನಂದದ ಸರಸ್ಸಿನಲ್ಲಿ ತೇಲುತ್ತಿರುತ್ತದೆ. ಅದು ಭವಮುಕ್ತರಿಗೆ ಹೊಂಚು ಹಾಕಿಕೊಂಡು ಕಾಯುತ್ತಿರುತ್ತದೆ ಹಾಗು ಅವರಿಗೆ ಆ ಆತ್ಮಾನಂದವನ್ನು ಹಂಚುತ್ತಿರುತ್ತದೆ.

ಹಾದಿಯೆಂದು ಹಾಯಬೇಡ ಯಾವುದೋ ಯುಗಾದಿ
ಯುಗಲ ಯುಗಲ ವಿರಹದೊಳಿದೆ ಪ್ರೀತಿಯೂ ಬುನಾದಿ
ಸತ್ತಿನ ಗತ್ತಿನ ಗಮಕವು ಭಾವರಸ ಸನಾದಿ
ಛಾಂದಸಿಕತೆ ಮುಕ್ತಮಾರ್ಗ ? ಶ್ರುತಿ-ಕೃತಿ ಸಂವಾದಿ.

ಬೇಂದ್ರೆಯವರು ಸಹೃದಯನೊಡನೆ ಮತ್ತೆ ಸಂವಾದಿಸುತ್ತಾರೆ.  ಒಂದೇ ಯುಗಾದಿ ಈ ಸೃಷ್ಟಿಯಲ್ಲಿ ಇಲ್ಲ. ಯಾವುದೋ ಒಂದು ಕ್ಷಣದಂದು ನೀನು, ‘ಇದು ಯುಗಾದಿ, ನನಗೆ ನನ್ನ ಹಾದಿ ಸಿಕ್ಕಿದೆ’ ಎನ್ನುತ್ತ ಹಾಯಲು ಬರಬೇಡ. ಈ ಎಲ್ಲ ಯುಗಾದಿಗಳ  ಸೃಷ್ಟಿಚಕ್ರದ ಹಿಂದೆ ಪ್ರೀತಿಯ ಬುನಾದಿ ಇದೆ. ಸತ್ ಎಂದರೆ ಒಳ್ಳೆಯದು. ಆ ಸತ್‍ ಎನ್ನುವುದು ಗತ್ತಿನ ಅಂದರೆ ಕುಣಿತದ ನಡಿಗೆಯನ್ನು ಹೊಂದಿದಾಗ ಹುಟ್ಟುವ ಗಮಕದಲ್ಲಿ ಭಾವರಸ ತುಂಬಿರುತ್ತದೆ. ಸತ್ತಾ ಎನ್ನುವುದಕ್ಕೆ ಪ್ರೀತಿಯ ಅಧಿಕಾರ ಎನ್ನುವ ಅರ್ಥವೂ ಇದೆ.  

ಛಾಂದಸಿಕತೆ ಎಂದರೆ ವೇದಗಳು ತೋರಿಸುವ ಜ್ಞಾನಮಾರ್ಗ. ಅದುವೇ ಮುಕ್ತಮಾರ್ಗ ಅರ್ಥಾತ್ ಮುಕ್ತಿಯ ಮಾರ್ಗ. ಅದನ್ನು ಸಾಧಿಸಬೇಕಾದರೆ ಶ್ರುತಿ (=ವೇದಗಳು) ಹೇಳುವ ಜ್ಞಾನವು ನಮ್ಮ ಕೃತಿಯಲ್ಲಿ ಅಂದರೆ ನಡತೆಯಲ್ಲಿ ಏಕರೂಪವಾಗಬೇಕು.
...............................................................................................

ಬೇಂದ್ರೆಯವರ ಮೊದಲ ಕವನವು ಪ್ರಕೃತಿಯನ್ನು ಅರಿತು ಸಂಭ್ರಮಿಸುವ ವರಕವಿಯ ಸಾಧನೆಯಾಗಿದೆ. ಎರಡನೆಯ ಕವನವು ಬದುಕಿನ ರಹಸ್ಯವನ್ನು ಅರಿತ ಸಾಧಕನ ಕಾಣ್ಕೆಯಾಗಿದೆ. ಮೊದಲನೆಯ ಕವನದಲ್ಲಿ ‘ಸ್ವಗತ’ವಿದೆ. ಎರಡನೆಯ ಕವನದಲ್ಲಿ ಸಹೃದಯನಿಗೆ ಆಹ್ವಾನವಿದೆ. ಮೊದಲನೆಯ ಕವನದಲ್ಲಿ ಪ್ರಕೃತಿಯು ಹೊಸಹೊಸದಾಗುವ ಸಂಭ್ರಮವು ಮನುಷ್ಯರಿಗೆ ಏಕಿಲ್ಲ ಎನ್ನುವ ಹಳಹಳಿ ಇದೆ. ಎರಡನೆಯ ಕವನದಲ್ಲಿ ಸೃಷ್ಟಿಸುಖವನ್ನು ಆನಂದಿಸುವ ಮನೋಧರ್ಮವಿದೆ. ಮೊದಲನೆಯ ಕವನದಲ್ಲಿ ಲೌಕಿಕ ಆನಂದವಿದೆ. ಎರಡನೆಯ ಕವನದಲ್ಲಿ ಅಲೌಕಿಕ ಆನಂದವಿದೆ. ಮೊದಲನೆಯ ಕವನದಲ್ಲಿ ಕಾವ್ಯರಸವಿದೆ. ಎರಡನೆಯ ಕವನದಲ್ಲಿ ಮಾಂತ್ರಿಕತೆ ಇದೆ. ಈ ಎರಡೂ ಕವನಗಳು ಬೇಂದ್ರೆಯವರ ವ್ಯಕ್ತಿತ್ವದಲ್ಲಿ ಆದಂತಹ ಉನ್ನತಿಗೆ ಹಿಡಿದ ಕನ್ನಡಿಯಾಗಿವೆ.

Wednesday, March 12, 2014

ಪದವಿನೋದ-೨

ಸಿಂಧು ಸಂಸ್ಕೃತಿಯ ಜನಸಮುದಾಯವು ಆಡುತ್ತಿದ್ದ ಭಾಷೆ ಯಾವುದು ಎಂದು ತಿಳಿಯದು. ಅವರ ಬರಹದ ಅರ್ಥವನ್ನು ಬಿಡಿಸುವುದು ಇನ್ನೂ ಸಾಧ್ಯವಾಗಿಲ್ಲ. ಸಿಂಧು ತೀರದ ಜನರ ಮುದ್ರಿಕೆಗಳಲ್ಲಿ ನಮ್ಮ ಶಿವನನ್ನು ಹೋಲುವ ಚಿತ್ರವನ್ನು ಕಾಣಬಹುದು. ಇದರಿಂದ ಅವರು ನಮ್ಮ ಪೂರ್ವಜರು ಹೌದು ಎನ್ನುವುದು ಅತ್ಯಂತ ಸಂಭವನೀಯ ಸಂಗತಿ. ಇವರು ಆರ್ಯಪೂರ್ವದ ಭಾರತದ ನಿವಾಸಿಗಳು ಆಗಿರಬಹುದು, ಅರ್ಥಾತ್ ಇವರು ಕನ್ನಡಿಗರೇ ಆಗಿರಬಹುದು. ಕಟ್ಟಡಗಳಲ್ಲಿ ಇಟ್ಟಿಗೆಯನ್ನು ಬಳಸಿದ ಇವರು ‘ಇಟ್ಟಿಗೆ’ಗೆ ಏನೆಂದು ಕರೆಯುತ್ತಿದ್ದರು ಎನ್ನುವುದು ತಿಳಿಯದು. ಕನ್ನಡಿಗರು ಸದ್ಯದಲ್ಲಿ ಬಳಸುವ ‘ಇಟ್ಟಿಗೆ’ ಪದವು ಮೂಲತಃ ‘ಇಷ್ಟಕಾ’ ಎನ್ನುವ ಸಂಸ್ಕೃತ ಪದದಿಂದ ಹುಟ್ಟಿದೆ. ಇಷ್ಟಿ ಎಂದರೆ ಯಜ್ಞ. (ದಶರಥ ಮಹಾರಾಜನು ಕೈಕೊಂಡ ಪುತ್ರಕಾಮೇಷ್ಟಿಯನ್ನು ನೆನಪಿಸಿಕೊಳ್ಳಿರಿ.) ಇಷ್ಟಕಾ ಎಂದರೆ ಯಜ್ಞಕುಂಡಗಳಿಗಾಗಿ ಬಳಸುವ ಇಟ್ಟಿಗೆ. ಸಿಂಧು ಜನರು ಯಜ್ಞಗಳನ್ನು ಮಾಡಿದ ಯಾವುದೇ ಕುರುಹುಗಳು ದೊರೆತಿಲ್ಲ. ಆದುದರಿಂದ ಇವರು ಇಷ್ಟಕಾ ಎನ್ನುವ ಪದವನ್ನು ಬಳಸಿರುವುದು ಅಸಂಭವ. ಸದ್ಯಕ್ಕೆ ಕನ್ನಡಿಗರು ಬಳಸುತ್ತಿರುವ ಇಟ್ಟಿಗೆ ಪದವು ಸಂಸ್ಕೃತಜನ್ಯವಾದದ್ದು ಎಂದು ತಿಳಿಯಬಹುದು. ಕನ್ನಡ ನಾಡಿನ ಅನೇಕ ಸ್ಥಳಗಳಲ್ಲಿ ಇಟ್ಟಿಗೆ ಅಥವಾ ಇಟ್ಟಂಗಿಯನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸುತ್ತಿದ್ದರೇನೊ? ಅಂತಹ ಊರುಗಳನ್ನು ಅವುಗಳ ಹೆಸರುಗಳಿಂದ ಗುರುತಿಸಬಹುದು. ಸದ್ಯದ ಕರ್ನಾಟಕದಲ್ಲಿ ಇಂತಹ ಹೆಸರುಗಳು ಬೇರೆ ಬೇರೆ ತಾಲೂಕುಗಳಲ್ಲಿ ಹೀಗಿವೆ:

ಇಟಗಾ ಎನ್ನುವ ನಾಲ್ಕು ಊರುಗಳು: (ಚಿತಾಪುರ ತಾಲೂಕು-೧, ಹುಮನಾಬಾದ ತಾಲೂಕು-೧, ಜೇವರಗಿ ತಾಲೂಕು-೨)
ಇಟಕಲ್ ಎನ್ನುವ ಒಂದು ಊರು: (ಸೇಡಮ್ ತಾಲೂಕು-೧)
ಇಟಕದಿಬ್ಬನಹಳ್ಳಿ  ಎನ್ನುವ ಒಂದು ಊರು: (ಮಧುಗಿರಿ ತಾಲೂಕು-೧)
ಇಟಗಿ ಎನ್ನುವ ಒಂಬತ್ತು ಊರುಗಳು: (ಖಾನಾಪುರ ತಾಲೂಕು-೧, ದೇವದುರ್ಗ ತಾಲೂಕು-೧, ಬಸವನ ಬಾಗೇವಾಡಿ-೧, ಯಲಬುರ್ಗಾ-೧, ರಾಣಿಬೆನ್ನೂರು-೧, ರೋಣ-೧, ಶಿರಹಟ್ಟಿ-೧, ಸಿದ್ದಾಪುರ-೧, ಕುಷ್ಟಗಿ-೧)
ಇಟಗಿಯಾಳ  ಎನ್ನುವ ಒಂದು ಊರು: (ಔರಾದ ತಾಲೂಕ-೧)
ಇಟಗುಳಿ  ಎನ್ನುವ ಒಂದು ಊರು: (ಶಿರಸಿ ತಾಲೂಕ-೧)
ಇಟಿಗಟ್ಟಿ  ಎನ್ನುವ ಒಂದು ಊರು: (ಧಾರವಾಡ ತಾಲೂಕ-೧)
ಇಟ್ಟಂಗಿಹಾಳ  ಎನ್ನುವ ಒಂದು ಊರು: (ಬಿಜಾಪುರ ತಾಲೂಕು-೧)
ಇಟ್ಟಂಗೂರು  ಎನ್ನುವ ಒಂದು ಊರು: (ಆನೇಕಲ್ ತಾಲೂಕ-೧)
ಇಟ್ಟಗಲ್ಲಾಪುರ  ಎನ್ನುವ ಒಂದು ಊರು: (ಬೆಂಗಳೂರು ತಾಲೂಕು-೧)
ಇಟ್ಟಗಳ್ಳಿ  ಎನ್ನುವ ಒಂದು ಊರು: (ಪಿರಿಯಾಪುರ ತಾಲೂಕು-೧)
ಇಟ್ಟಪಟ್ಣ  ಎನ್ನುವ ಒಂದು ಊರು: (ಅರಕಲಗೂಡು ತಾಲೂಕು-೧)
ಇಟ್ಟಮಡು  ಎನ್ನುವ ಒಂದು ಊರು: (ರಾಮನಗರ ತಾಲೂಕು-೧)
ಇಟ್ಟಸಂದ್ರ  ಎನ್ನುವ ಒಂದು ಊರು: (ಹೊಸಕೋಟೆ ತಾಲೂಕ-೧)
ಇಟ್ಟಿಗಿ  ಎನ್ನುವ ಎರಡು ಊರುಗಳು: (ಹಡಗಳಿ ತಾಲೂಕ-೧, ಹೊಸಪೇಟ -೧)
ಇಟ್ಟಗಿಹಾಳ  ಎನ್ನುವ ಒಂದು ಊರು: (ಶಿರಗುಪ್ಪಾ ತಾಲೂಕ-೧)
ಇಟ್ಟಿಗುಡಿ  ಎನ್ನುವ ಒಂದು ಊರು: (ಹರಪನಹಳ್ಳಿ ತಾಲೂಕ-೧)
ಇಟ್ಟಿಗೆ  ಎನ್ನುವ ಎರಡು ಊರುಗಳು: (ಚನ್ನಗಿರಿ ತಾಲೂಕ-೧, ತರಿಕೆರೆ-೧)
ಇಟ್ಟಿಗೆಹಳ್ಳಿ  ಎನ್ನುವ ಐದು ಊರುಗಳು:
(ತುರುವೆಕೆರೆ-೧, ಭದ್ರಾವತಿ-೧, ಶಿಕಾರಿಪುರ-೧, ಶಿವಮೊಗ್ಗಿ-೧, ಹೊಸದುರ್ಗ-೧)
ಇಟ್ನ ಎನ್ನುವ ಒಂದು ಊರು: (ಹೆಗ್ಗಡದೇವನಕೊಟೆ-೧)
ಇಟ್ನಾಳ ಎನ್ನುವ ಮೂರು ಊರುಗಳು: (ಚಿಕ್ಕೋಡಿ-೧, ಸವದತ್ತಿ-೧, ರಾಯಬಾಗ-೧)
 ಒಟ್ಟು ಊರುಗಳು: ೪೦

ಕನ್ನಡದ ಇಟ್ಟಿಗೆ ಮರಾಠಿಯಲ್ಲಿ ವೀಟ, ವೀಠಾ ಆಗಿದೆ. ವೀಟ (ವೀಠಾ)ಗಳನ್ನು ನಿರ್ಮಾಣ ಮಾಡುವ ಊರಿಗೆ ಏನೆಂದು ಕರೆಯಬೇಕು? ಮರಾಠಿ ವೀಟ (ವೀಠಾ) ಹಾಗು ಕನ್ನಡದ ‘ಹಾಳ’ ಎರಡನ್ನು ಜೊತೆ ಮಾಡಿ ‘ವೀಟ(ಠ)ಹಾಳ’ ಎಂದು ಕರೆದರು. ಅದು ಕನ್ನಡ-ಮರಾಠಿ ಮಿಶ್ರ ಉಚ್ಚಾರದಲ್ಲಿ ಕಾಲಕ್ರಮೇಣ ‘ವಿಠ್ಠಲ’ವಾಯಿತು. ಪಂಢರಪುರದ ವಿಠ್ಠಲನು ಇಟ್ಟಿಗೆಯ ಮೇಲೆ ಗಟ್ಟಿಯಾಗಿ ನಿಂತುಕೊಂಡಿರುವುದನ್ನು ಈಗಲೂ ನೋಡಬಹುದು. ಇದನ್ನು ನೋಡಿಯೇ ಬೇಂದ್ರೆಯವರು ‘ಇಟ್ಟಿಗೆಯ ಮೇಲೆ ಅಡಿಯಿಟ್ಟ ವಿಠ್ಠಲ’ ಎಂದು ಹಾಡಿದ್ದಾರೆ.
(ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸಹ ವಿಟ್ಲ ಎನ್ನುವ ಒಂದು ಊರು ಇದೆ. ನರಸಿಂಹರಾಜಪುರ ಹಾಗು ಬಂಟವಾಳ ತಾಲೂಕುಗಳಲ್ಲಿ ವಿಟ್ಟಲ ಎನ್ನುವ ಹೆಸರಿನ ಊರುಗಳಿವೆ. ಇವೆಲ್ಲ ‘ವೀಟಹಾಳ’ಗಳೇ ಆಗಿರಬಹುದು.)

ವಿಷ್ಣು ಎನ್ನುವ ಪದವು ಮರಾಠಿಯಲ್ಲಿ ವಿಷ್ಟೋ ಎಂದಾಗಿ, ಕ್ರಮೇಣ ವಿಠ್ಠೋ ಆಯಿತು. ಬಿಷ್ಟೋ ಎನ್ನುವ ಹೆಸರು ಮರಾಠಿಯಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಆದುದರಿಂದ ಈ ದೇವರು ನೆಲೆಸಿದ ಸ್ಥಲವೂ ಸಹ ವಿಠ್ಠೋಹಾಳ ಅರ್ಥಾತ್ ವಿಠ್ಠಲ ಆಗಿರುವ ಸಂಭವವಿದೆ! ಆದುದರಿಂದಲೇ ಮಹಾರಾಷ್ಟ್ರದ ಮಹಾನ್ ಸಂತ ಜ್ಞಾನದೇವರು ವಿಠ್ಠಲನಿಗೆ ‘ಕಾನಡೀ ವಿಠ್ಠಲಾ’ ಎಂದು ಕರೆದಿದ್ದಾರೆ! ವೀಟಹಾಳದಲ್ಲಿ ಇರುವ ಕುಂಬಾರರ ಮನೆದೇವರು ‘ವಿಠ್ಠಲ’ನಾಗಿರಬಹುದು. ಕರ್ನಾಟಕದಲ್ಲಿ ವಿಠ್ಠಲರೂಪಿ ಹೆಸರನ್ನು ಜೋಡಿಸಿಕೊಂಡ ೪೫ ಹಳ್ಳಿಗಳಿವೆ.

ಸಿಂಧು ಸಂಸ್ಕೃತಿಯ ಜನರಿಗೆ ಹಾಗು ಹಿಮಾಲಯದ ಕೆಳಭಾಗದಲ್ಲಿ ವಾಸಿಸುತ್ತಿದ್ದ ಕನ್ನಡಿಗರಿಗೆ ಭಾರತದ ಪಶ್ಚಿಮದಲ್ಲಿರುವ ದೇಶಗಳೊಡನೆ ವಾಣಿಜ್ಯಸಂಪರ್ಕವಿತ್ತು.  ಇಂತಹ ಸಂಪರ್ಕದಿಂದಾಗಿ ಎರಡೂ ಭಾಷಿಕರಲ್ಲಿ ಪದಗಳ ಕೊಡುಕೊಳ್ಳುವಿಕೆ ಅನಿವಾರ್ಯವಾಗಿ ನಡೆಯುತ್ತಿತ್ತು. ಲ್ಯಾಟಿನ್, ಸಂಸ್ಕೃತ ಹಾಗು ಕನ್ನಡ ಈ ಮೂರು ಭಾಷೆಗಳಲ್ಲಿ ಇಂತಹ ಸಂಪರ್ಕದಿಂದಾಗಿ ಉದ್ಭವಿಸಿದ ಒಂದು ಪದವನ್ನು ನೋಡೋಣ. ಕನ್ನಡದಲ್ಲಿ ಉಣ್ಣೆ ಎಂದು ಕರೆಯಲಾಗುವ ಪದವು ಸಂಸ್ಕೃತದ ಊರ್ಣ ಪದದಿಂದ ಬಂದಿದೆ ಎಂದು ಸಂಸ್ಕೃತ ಪಂಡಿತರು ಹೇಳುತ್ತಾರೆ. ಆದರೆ ಇದು ಹೀಗೂ ಇರಬಹುದು:

ಕನ್ನಡದ ಉಣ್ಣೆ ಪದವು ‘ಊಲ್+ನೆಯ್’ ಎನ್ನುವ ಪದಗಳ ಜೋಡಣೆಯಿಂದ ಬಂದಿದೆ. ಈ ಊಲ್ ಪದವು ಇಂಗ್ಲೀಶಿನಲ್ಲಿ ಬಳಸಲಾಗುವ wool ಪದವೇ ಹೌದು. ಯುರೋಪದ ಅನೇಕ ಭಾಷೆಗಳಲ್ಲಿ ‘ವೂಲ್’ಗೆ ಸಮಾನವಾದ ಉಚ್ಚಾರವಿರುವ ಪದಗಳಿವೆ. ಇನ್ನು ನೆಯ್ ಅನ್ನುವುದು ಅಚ್ಚ ಕನ್ನಡ ಪದ. ಯುರೋಪಿಯನ್ ‘ವೂಲ್’ಅನ್ನು ಕನ್ನಡಿಗರು ನೆಯ್ದು ಉಣ್ಣೆಯನ್ನು ಮಾಡಿದರು. ಇದು ವ್ಯಾಪಾರ ಸಂಪರ್ಕದ ಫಲ. ಈ ಉಣ್ಣೆಯೇ ಸಂಸ್ಕೃತದಲ್ಲಿ ಊರ್ಣ ಎಂದು ಬದಲಾಗಿದೆ! ಆದರೆ ಸಂಸ್ಕೃತ ಪಂಡಿತರು ಊರ್ಣ ಪದದಿಂದಲೇ ಉಣ್ಣೆ ಎನ್ನುವ ಪದ ಬಂದಿದೆ ಎಂದು ಹೇಳುತ್ತಾರೆ. ಇದು ಮಗನಿಂದ ಅಪ್ಪ ಹುಟ್ಟಿದ ಎಂದು ಹೇಳಿದ ಹಾಗೆ!

[ಕನ್ನಡದಲ್ಲಿ ನೆಯ್ ಎನ್ನುವ ಕ್ರಿಯಾಪದದಿಂದ ಸಾಧಿಸಲ್ಪಟ್ಟ ಅನೇಕ ಪದಗಳಿವೆ.
ಎರಡು ಉದಾಹರಣೆಗಳು: ಎಳ್+ನೆಯ್ = ಎಣ್ಣೆ; ಬೆಳ್+ನೆಯ್ = ಬೆಣ್ಣೆ
ಇದರಂತೆಯೇ ‘ಊಲ್+ನೆಯ್’ = ಉಣ್ಣೆ.]

ಕನ್ನಡದ ಇನ್ನೂ ಕೆಲವು ಪದಗಳು ಯುರೋಪಿಗೆ ತೆರಳಿವೆ. ಉದಾಹರಣೆಗೆ ಕನ್ನಡದ ಬತ್ತ ಪದವು ಇಂಗ್ಲೀಶಿನಲ್ಲಿ paddy ಆಗಿದೆ. ಕಂದಮಿಳಿನ ಅರಿಶಿ ಪದವು ಇಂಗ್ಲೀಶಿನಲ್ಲಿ rice ಆಗಿದೆ. (ಕನ್ನಡದಲ್ಲಿ ಇದು ಅಕ್ಕಿಯಾಗಿ ಬದಲಾವಣೆ ಹೊಂದಿತು.)

ಆರ್ಯಭಾಷಿಕರು ಹಾಗು ಕನ್ನಡಿಗರು ವ್ಯಾಪಾರಕ್ಕಾಗಿ ಸಂಪರ್ಕಿಸಿದಾಗ ಇಬ್ಬರಿಗೂ ಅರ್ಥವಾಗಬೇಕು ಎನ್ನುವ ಉದ್ದೇಶದಿಂದ ದ್ವಿಭಾಷಿಕ ಜೋಡುಪದಗಳು ಹುಟ್ಟಿಕೊಂಡವು. ಉದಾಹರಣೆಗೆ: ಕರ್ಪಟ. ಕರ ಇದು ಸಂಸ್ಕೃತ ಪದವಾಗಿದೆ ಹಾಗು ಪಟ್ಟ ಇದು ಕನ್ನಡದ ಪದವಾಗಿದೆ. (ಪಟ್ಟ ಪದವೇ ಕಾಲಾನುಕ್ರಮದಲ್ಲಿ ಬಟ್ಟೆಯಾಗಿ ಬದಲಾಯಿತು. ಸಂಸ್ಕೃತದ ಮತ್ತೊಂದು ಪದ ‘ಅಂಶು’(=ನೂಲು) ಜೊತೆಗೆ ಕನ್ನಡದ ‘ಪಟ್ಟ’ ಕೂಡಿದಾಗ ‘ಅಂಶುಪಟ್ಟ’ ಎನ್ನುವ ಪದ ಹುಟ್ಟಿತು.)

ಈ ಕರ್ಪಟ ಪದದಿಂದ ಹಿಂದಿ ಭಾಷೆಯಲ್ಲಿ ಕಪಡಾ ಎನ್ನುವ ಪದ ಹುಟ್ಟಿಕೊಂಡಿತು. (ಹತ್ತಿಯ) ಬಟ್ಟೆಗಳನ್ನು ಮಾರುವವನು ‘ಕಪಾಡಿಯಾ’ ಅಥವಾ ‘ಕಪಟಕರ’ ಆದ. ( ಬೆಲ್ಲದ ವ್ಯಾಪಾರಿಯು ಕನ್ನಡದಲ್ಲಿ ‘ಬೆಲ್ಲದ’ ಆಗುತ್ತಾನೆ. ಈತನೇ ಮತಾಂತರಗೊಂಡ ಮೇಲೆ ‘ಗೂಡವಾಲಾ’ ಆಗುತ್ತಾನೆ ಎಂದು ನಾಡೋಜ ಪಾಟೀಲ ಪುಟ್ಟಪ್ಪನವರು ಮುನಿಸಿನಿಂದ ಹೇಳುತ್ತಿದ್ದರು!)

ಈ ‘ಪಟ್ಟ’ ಪದವು ಕನ್ನಡದಲ್ಲಿ ಎಷ್ಟೆಲ್ಲ ರೂಪಗಳಲ್ಲಿ ಬಳಕೆಯಲ್ಲಿ ಇದೆ ಎನ್ನುವುದನ್ನು ಗಮನಿಸಿರಿ:
ತಲೆಗೆ ಸುತ್ತುವ ಬಟ್ಟೆಯ ರುಮಾಲಿಗೆ ಪಟಕಾ(ಗಾ) ಎಂದು ಹೇಳುತ್ತಾರೆ. ಪಗಡೆಯನ್ನು ಆಡುವ ಹಾಸು ಇರುತ್ತದಲ್ಲ, ಅದಕ್ಕೆ ಪಗಡೆಪಟ್ಟ ಎಂದು ಕರೆಯುತ್ತಾರೆ. ವಸ್ತುಗಳನ್ನು ಕಟ್ಟಲು ಬಳಸುವ ಅರಿವೆಗೆ ಕಟ್ಟಾಪಟ್ಟಿ ಎನ್ನುತ್ತಾರೆ. ಬಟ್ಟೆಯ ಸೀರೆಗೆ ಪಟ್ಟೆಸೀರೆ ಎನ್ನುತ್ತಾರೆ. ಈ ಪಟ್ಟೆ ಸೀರೆಗೆ ಬಣ್ಣ ಹಾಕುವ ಸಮುದಾಯವನ್ನು ಪಟ್ಟೆಗಾರರು ಎಂದು ಕರೆಯುತ್ತಾರೆ.

(ಉತ್ತರಭಾರತದಲ್ಲಿ ತುರ್ಕರ ಆಕ್ರಮಣವಾದಾಗ ಕಾಳಗದಲ್ಲಿ ಸೋತಂತಹ ಭಾರತೀಯ ಪಡೆಗಳು ದಕ್ಷಿಣದಲ್ಲಿ ಆಶ್ರಯ ಪಡೆದರು. ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯವಂಶದ ಕೆಲವು ಬಣಗಳು ಈ ಸಮಯದಲ್ಲಿ ಕರ್ನಾಟಕದಲ್ಲಿ ನೆಲೆಸಿದವು. ಇವರ ಕುಲದೇವಿಯಾದ ಹಿಂಗುಲಾಂಬಾ ದೇವಿಯ ಗುಡಿ ಪಾಕಿಸ್ತಾನದಲ್ಲಿ ಇದೆ. ಬಟ್ಟೆಗಳಿಗೆ ಬಣ್ಣ ಹಾಕುವ ಕಾಯಕವನ್ನು ಕೈಗೆತ್ತಿಕೊಂಡ ಈ ಬಣಗಳು ‘ಪಟ್ಟೆ(ಬಟ್ಟೆ)ಗಾರರಾದರು.  ಇದೀಗ ಈ ಕಸಬನ್ನು ಇವರು ಕೈಬಿಟ್ಟಿದ್ದಾರೆ ಹಾಗು ತಮ್ಮನ್ನು ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.)

ಇದೇನಿದು, ಪ(ಬ)ಟ್ಟೆಸೀರೆ ಎಂದು ಯಾಕೆ ಹೇಳುತ್ತೀರಿ? ಸೀರೆ ಬಟ್ಟೆಯದೇ ಆಗಿರಬೇಕಲ್ಲವೆ ಎಂದು ಕೆಲವರು ಕೇಳಬಹುದು. ಇದು ಹಾಗಲ್ಲ. ಹತ್ತಿಯ ಬಟ್ಟೆಗಳು ಬಳಕೆಗೆ ಬರುವ ಪೂರ್ವದಲ್ಲಿ ಜನರು ತೊಗಲನ್ನೇ ಸುತ್ತಿಕೊಳ್ಳುತ್ತಿದ್ದರಲ್ಲವೆ? ದೇಹಕ್ಕೆ ಸುತ್ತಿಕೊಳ್ಳುವ ಹೊದಿಕೆಗೆ ಸಂಸ್ಕೃತದಲ್ಲಿ ‘ಚೀರ’ ಎನ್ನುತ್ತಾರೆ. ಚಿಗರಿಯ ಚರ್ಮವನ್ನು ಧರಿಸಿದವನು ‘ಚೀರಕೃಷ್ಣಾಜಿನಧರ’ನಾಗುತ್ತಾನೆ. ಈ ಚೀರವೇ ಕನ್ನಡದ ಸೀರೆ. ಹಿಂದಿಯಲ್ಲಿ ಇದು ‘ಸಾಡೀ’ ಆಗಿದೆ. ಸುತ್ತಿಕೊಂಡಾಗ ‘ಚೀರ’ವಾಗುವುದು, ಕೈಯಲ್ಲಿ ಹಿಡಿದುಕೊಂಡಾಗ ‘ಚೀಲ’ವಾಗುತ್ತದೆ. ತೊಗಲಿನ ಬದಲು ಹತ್ತಿಯ ಬಟ್ಟೆಯನ್ನು ಬಳಸಿದಾಗ ‘ಪಟ್ಟೆಚೀರ’ ಅಂದರೆ ಪಟ್ಟೆಸೀರೆ ಅರ್ಥಾತ್ ಹತ್ತಿಯ ಬಟ್ಟೆಯ ಸೀರೆ ಆಗುತ್ತದೆ!

ಪದಗಳಷ್ಟೇ ಅಲ್ಲ, ಕೆಲವೊಂದು ಊರುಗಳ ಹೆಸರುಗಳೂ ಸಹ ಇಂತಹ ‘ದ್ವಿಭಾಷಿಕ’ ಪದಗಳೇ ಆಗಿವೆ. ಉದಾಹರಣೆಗೆ ‘ಲಕ್ಷದ್ವೀಪ’ವನ್ನೇ ತೆಗೆದುಕೊಳ್ಳಿರಿ. ಇದರ ಮೂಲ ಹೆಸರು: ಲಕ್‍ದೀವ. ಕನ್ನಡದಲ್ಲಿ ಲಕ್ ಎಂದರೆ ನಡುಗಡ್ಡೆ. ಸಂಸ್ಕೃತದಲ್ಲಿ ದ್ವೀಪ ಎಂದರೆ ನಡುಗಡ್ಡೆ. ಲಕ್ ಮತ್ತು ದ್ವೀಪ(=ದೀವ್)ಗಳನ್ನು ಜೊತೆಗೂಡಿಸಿದಾಗ ಲಕ್‍ದೀವ ಹುಟ್ಟಿಕೊಂಡಿತು. ಅದನ್ನು ಮರುಸಂಸ್ಕೃತೀಕರಣಗೊಳಿಸಿದಾಗ, ಅದೇ ‘ಲಕ್ಷದ್ವೀಪ’ವಾಯಿತು! (‘ಲಂಕಾ’ದ ಅರ್ಥವು ಸಹ ದ್ವೀಪ ಎಂದೇ ಆಗಿದೆ.)

ಆರ್ಯಭಾಷೆಯ ದೀವ್‍ಗೆ ಕನ್ನಡದ ‘ಗಿ’ ಪ್ರತ್ಯಯ ಸೇರಿದಾಗ ದೀವಗಿ ಎನ್ನುವ ಊರು ಹುಟ್ಟುತ್ತದೆ. (ಕನ್ನಡದಲ್ಲಿ ‘ಗಿ’ ಹಾಗು ‘ಜಿ’ ಇವು ಸ್ಥಳವಾಚಕ ಪ್ರತ್ಯಯಗಳು. ಉದಾ: ನೀರಲಗಿ, ಜಂಬಗಿ, ಪಣಜಿ, ಕೊಂಡಜ್ಜಿ ಇತ್ಯಾದಿ.)
ಕನ್ನಡದ ಕೆಲವು ಪದಗಳು ಮಾತ್ರ ಪೂರ್ಣಶಃ ಆರ್ಯಭಾಷೆಗಳಿಂದ ಹುಟ್ಟಿಕೊಂಡತಹವು. ಉದಾಹರಣೆಗೆ ಕನ್ನಡದಲ್ಲಿರುವ ಮಡಕೆ ಹಾಗು ತಂಬಿಗೆ ಎನ್ನುವ ಪದಗಳನ್ನು ನೋಡಬಹುದು. ತಾಮ್ರದ ಉತ್ಖನನ ಹಾಗು ಬಳಕೆ ಪ್ರಾರಂಭವಾದ ನಂತರ, ತಾಮ್ರದಿಂದ ಮಾಡಿದ ಪಾತ್ರೆಗಳಿಗೆ ‘ತಾಂಬಾ’ ಎಂದು ಕರೆದರು. ಅದುವೇ ಕನ್ನಡದ ತಂಬಿಗೆ. ಸಂಸ್ಕೃತದಲ್ಲಿ ಮೃದ್ ಎಂದರೆ ಹಸಿಮಣ್ಣು (clay). (ಇಂಗ್ಲೀಶಿನ mudಅನ್ನು ನೆನಪಿಸಿಕೊಳ್ಳಿ.) ಮೃದ್‍ದಿಂದ ಮಾಡಿದ ಪಾತ್ರೆಯೇ ಮಡಕೆ! ಆರ್ಯಭಾಷೆಗಳಲ್ಲಿ ಇದು ಮಟಕಾ.

ಸಂಸ್ಕೃತದ ಸ್ಥಾಲಿ ಇದು ಕನ್ನಡದಲ್ಲಿ ಥಾಲಿ ಆಯಿತು. ಈ ಸ್ಥಾಲಿಯಲ್ಲಿ ‘ಪಿಷ್ಟ’ ಅಂದರೆ ಹಿಟ್ಟನ್ನು ಕಲಿಸಿ, ಬಡಿದು ಎಣ್ಣೆಯಲ್ಲಿ ಬೇಯಿಸಿದಾಗ ‘ಥಾಲಿಪೀಠ’ ಎನ್ನುವ ಸ್ವಾದಿಷ್ಟ ತಿನಿಸು ತಯಾರಾಗುತ್ತದೆ. ಕನ್ನಡಿಗರ ಬಾಯಿಯಲ್ಲಿ ಅದು ಚರ್ವಿತಚರ್ವಣಗೊಂಡು ‘ಥಾಲಿಪೆಟ್ಟು’ ಎನ್ನುವ ರೂಪವನ್ನು ತಾಳಿತು!

ಅಡುಗೆಯ ತಿನಿಸುಗಳಂತೂ ‘ಸಮಗ್ರ ಭಾರತೀಯ’ವಾಗಿವೆ. ಉದಾಹರಣೆಗೆ: ರೋಟಿ, ಭಾತ್ ಇತ್ಯಾದಿ.

ಅದೇಕೆ, ಜಾಗತೀಕರಣದ ಫಲವಾಗಿ ಪಾಶ್ಚಾತ್ಯರ ಪಿಝಾ ಕೂಡ ಈಗ ಭಾರತೀಯ ಪದವೇ ಆಗಿದೆ!