Sunday, July 12, 2015

ನಾಗದೇವತೆಯ ನ್ಯಾಯ



ಅಜ್ಜಿ ಹೇಳುವ ಕತೆಗಳು ಚಿಕ್ಕ ಮಕ್ಕಳಿಗೆ ತುಂಬ ಪ್ರಿಯವಾದ ಕತೆಗಳು. ಈ ಕತೆಗಳಲ್ಲಿ ಬರುವ ಪ್ರಾಣಿ ಹಾಗು ಪಕ್ಷಿಗಳು ಮನುಷ್ಯರಂತೆ ವರ್ತಿಸುತ್ತವೆ, ಮನುಷ್ಯರಂತೆ ಮಾತನಾಡುತ್ತವೆ. ಇಂತಹ ಕತೆಗಳಲ್ಲಿ ಅತಿ ಸುರಮ್ಯವಾದ ಕತೆಯೊಂದು ನಾಗರ ಹಾವಿಗೆ ಸಂಬಂಧಿಸಿದ ಕತೆಯಾಗಿದೆ. ಈ ಕತೆಯನ್ನು ನೀವೆಲ್ಲರೂ ಬಾಲ್ಯದಲ್ಲಿ ಕೇಳಿರಬಹುದು. ಇದೇ ಕತೆಯನ್ನು ಆಧರಿಸಿ ಗಿರೀಶ ಕಾರ್ನಾಡರು ‘ನಾಗಮಂಡಲ’ ಎನ್ನುವ ಚಲನಚಿತ್ರವನ್ನು ನಿರ್ಮಿಸಿದರು. ನನ್ನ ಅಜ್ಜಿಯಿಂದ ನಾನು ಕೇಳಿದ ಕತೆಗೆ ಹಾಗು ಕಾರ್ನಾಡರ ‘ನಾಗಮಂಡಲ’ದ ಕತೆಗೆ ಕೆಲವು ವ್ಯತ್ಯಾಸಗಳಿವೆ. ಆದರೆ ಕತೆಯ ಕೊನೆ ಮಾತ್ರ ಒಂದೇ ಆಗಿದೆ. ಪ್ರಸಿದ್ಧ ನಾಟಕಕಾರ ಹಾಗು ಚಿಂತಕರಾದ ಶ್ರೀ ವ್ಯಾಸ ದೇಶಪಾಂಡೆಯವರು ಕೆಲವು ದಿನಗಳ ಹಿಂದೆ ಈ ಕತೆಯ ಕೊನೆಯಲ್ಲಿ ಅಡಗಿರುವ ನ್ಯಾಯಸೂಕ್ಷ್ಮತೆ ಹಾಗು ಧರ್ಮಸೂಕ್ಷ್ಮತೆಗಳ ಬಗೆಗೆ ಕೆಲವು ಮಾತುಗಳನ್ನು ತಿಳಿಸಿದರು. ಆ ಸೂಕ್ಷ್ಮತೆಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಮೊದಲು ಈ ಕತೆಯ ಸಾರಾಂಶವನ್ನು ಹೇಳುವುದು ಉಚಿತವಾದೀತು.

ಒಂದು ಹಳ್ಳಿ. ಆ ಹಳ್ಳಿಯಲ್ಲಿ ಗಂಡ ಹಾಗು ಹೆಂಡತಿ ಮಾತ್ರ ಇರುವ ಒಂದು ಕುಟುಂಬ. ಗಂಡನಿಗೆ ವಿಪರೀತ ಹೊರಚಾಳಿ. ಹೀಗಾಗಿ ಹೆಂಡತಿಯೊಡನೆ ಆತ ಮಲಗಿಯೇ ಇಲ್ಲ. ಹೆಂಡತಿ ಹಳ್ಳಿಯಲ್ಲಿರುವ ಜಾಣ ಮುದುಕಿಯೊಬ್ಬಳ ಎದುರಿಗೆ ತನ್ನ ಸಂಕಟವನ್ನು ತೋಡಿಕೊಂಡಾಗ, ಆ ಮುದುಕಿಯು ಇವಳಿಗೆ ಒಂದು ವಶೀಕರಣದ ಮದ್ದನ್ನು ತಯಾರಿಸಿ ಕೊಡುತ್ತಾಳೆ. ‘ಈ ಮದ್ದನ್ನು ಹಾಲಿನಲ್ಲಿ ಬೆರಸಿ, ಗಂಡನಿಗೆ ಕುಡಿಸಿದರೆ, ಆತ ಹೆಂಡತಿಯಲ್ಲಿ ಮೋಹಗೊಳ್ಳುತ್ತಾನೆ’ ಎಂದು ಹೇಳುತ್ತಾಳೆ. ಆ ರಾತ್ರಿ ಈ ಹುಡುಗಿ ಹಾಲಿನಲ್ಲಿ ಮದ್ದನ್ನು ಬೆರಸುತ್ತಾಳೆ; ಆದರೆ ತನ್ನ ಗಂಡನಿಗೆ ಕೊಟ್ಟರೆ, ಏನಾದರೂ ಕೆಡುಕಿನ ಪರಿಣಾಮವಾದೀತು ಎನ್ನುವ ಕೊನೆಯ ಗಳಿಗೆಯ ಹೆದರಿಕೆಯಿಂದ, ಆ ಮದ್ದನ್ನು ಹಿತ್ತಲಿನ ಹೊರಗೆ ಹೋಗಿ ಚೆಲ್ಲಿ ಬಿಡುತ್ತಾಳೆ. ಕತ್ತಲಿನಲ್ಲಿ ಅವಳಿಗೆ ತಿಳಿಯದಂತೆ ಆ ಮದ್ದು ಒಂದು ಹುತ್ತದ ಒಳಗೆ ಬೀಳುತ್ತದೆ. ಆ ಹುತ್ತದ ಒಳಗೆ ಒಂದು ನಾಗದೇವತೆ ವಾಸವಾಗಿರುತ್ತದೆ. ಮದ್ದು ಬೆರೆಸಿದ ಆ ಹಾಲು ಅಪ್ರಯತ್ನವಾಗಿ ಆ ನಾಗನ ಬಾಯಿಯಲ್ಲಿ ಬೀಳುತ್ತದೆ.

ಮನುಷ್ಯನಾಗಲಿ, ಹಾವಾಗಲೀ ವಶೀಕರಣದ ಮದ್ದಿನ ಪರಿಣಾಮಕ್ಕೆ ಒಳಗಾಗಲೇ ಬೇಕಲ್ಲ! ಆ ಹೆಣ್ಣಿನಲ್ಲಿ ಮೋಹಗೊಂಡ ಈ ನಾಗದೇವತೆ, ಆ ರಾತ್ರಿ ಅವಳ ಗಂಡನ ರೂಪದಲ್ಲಿ ಅವಳ ಮನೆಗೆ ಹೋಗಿ, ಅವಳ ಜೊತೆಗೆ ಸುಖಿಸುತ್ತದೆ. ಪಾಪ, ಆ ಹುಡುಗಿಗೆ ಈ ವಂಚನೆ ಗೊತ್ತಾಗುವದೇ ಇಲ್ಲ. ತನ್ನ ಗಂಡನ ಸ್ವಭಾವದಲ್ಲಿ ಅಚಾನಕ್ ಆದ ಬದಲಾವಣೆಯಿಂದಾಗಿ, ಅವಳು ಸಂಭ್ರಮ ಪಡುತ್ತಾಳೆ. ಅನೇಕ ರಾತ್ರಿಗಳವರೆಗೆ ಇದು ಹೀಗೆಯೇ ಮುಂದುವರಿಯುತ್ತದೆ. ಕೆಲ ಕಾಲದ ನಂತರ ಈ ಹುಡುಗಿ ಬಸಿರಾಗುತ್ತಾಳೆ.

ಅವಳ ಗಂಡನಿಗೆ ಇದೊಂದು ಆಘಾತಕಾರಿ ಸಮಾಚಾರ. ತನ್ನ ಸಂಪರ್ಕವಿಲ್ಲದೆ ತನ್ನ ಹೆಂಡತಿ ಬಸಿರಾಗಿದ್ದಾಳೆ, ಅರ್ಥಾತ್ ಅವಳು ಹಾದರ ಮಾಡಿದ್ದಾಳೆ ಎಂದು ಅವನು ಸಂಶಯಿಸುತ್ತಾನೆ. ಇವನು ಎಷ್ಟೇ ಸತಾಯಿಸಿದರೂ ಸಹ, ಅವಳು ಕಣ್ಣೀರು ಹಾಕುತ್ತ, ಇದು ನಿಮ್ಮದೇ ಫಲ ಎಂದು ಹೇಳುತ್ತಾಳೆ. ಕೊನೆಗೊಮ್ಮೆ ಆತ ಈ ಜಗಳವನ್ನು ಹಳ್ಳಿಯ ಪಂಚಾಯತಿಗೆ ಒಯ್ಯುತ್ತಾನೆ.

ಪಂಚರಿಗೆ ಇದೊಂದು ದೊಡ್ಡ ಸಮಸ್ಯೆ. ಗಂಡ ಹಾಗು ಹೆಂಡತಿ ಇಬ್ಬರೂ ಪ್ರಾಮಾಣಿಕ ಪ್ರತಿಜ್ಞೆಯನ್ನೇ ಮಾಡುತ್ತಿದ್ದಾರೆ. ಆದುದರಿಂದ, ಈ ಸಮಸ್ಯೆಯನ್ನು ಅಗ್ನಿದಿವ್ಯದ ಮೂಲಕ ಬಗೆಹರಿಸುವುದು ಸರಿ ಎಂದುಕೊಂಡ ಪಂಚರು, ಆ ಹುಡುಗಿಗೆ ಕೈಯಲ್ಲಿ ಬೆಂಕಿಯನ್ನು ಹಿಡಿದುಕೊಂಡು ಆಣೆ ಮಾಡಿ ಹೇಳು ಎನ್ನುತ್ತಾರೆ. ಅವಳೇನೋ ತಕ್ಷಣವೇ ಸಿದ್ಧಳಾಗುತ್ತಾಳೆ. ಆದರೆ ಆಕೆಯ ಗಂಡನು ‘ಅಗ್ನಿದಿವ್ಯವು ಈ ಹಾದರಗಿತ್ತಿಯ ಕೈಯನ್ನಷ್ಟೇ ಸುಡುತ್ತದೆ; ಅವಳು ಸಾಯಬೇಕಾದರೆ ನಾಗದಿವ್ಯವೇ ಸರಿಯಾದದ್ದು’, ಎನ್ನುತ್ತಾನೆ. ಸರಿ, ಅಲ್ಲಿಯೇ ಇದ್ದಂತಹ ನಾಗರಹಾವಿನ ಹುತ್ತದಿಂದ ನಾಗರ ಹಾವನ್ನು ಹೊರತೆಗೆದು, ತನ್ನ ಕೈಯಲ್ಲಿ ಹಿಡಿದುಕೊಂಡು ಆಣೆ ಮಾಡಲು ಅವಳಿಗೆ ಸೂಚಿಸಲಾಗುತ್ತದೆ. ಹುಡುಗಿ ಪತಿವ್ರತೆಯೇ ಆಗಿದ್ದರೆ, ಆ ನಾಗರಹಾವು ತನ್ನ ಹೆಡೆಯನ್ನು ಅವಳ ತಲೆಯ ಮೇಲೆ ಕಿರೀಟದಂತೆ ಬಿಚ್ಚುತ್ತದೆ; ಹಾಗಿಲ್ಲದೆ ಹೋದರೆ ಇವಳನ್ನು ಕಡಿದು ಸಾಯಿಸುತ್ತದೆ ಎನ್ನುವುದು ಅಲ್ಲಿಯ ಜನರ ನಂಬಿಕೆ.  ತನ್ನ ಪಾತಿವ್ರತ್ಯದ ಬಗೆಗೆ ಪ್ರಾಮಾಣಿಕ ನಂಬಿಕೆ ಇದ್ದ ಆ ಹುಡುಗಿ, ಹಾಗೆಯೇ ಮಾಡುತ್ತಾಳೆ. “ಈ ಹಾವನ್ನು ಬಿಟ್ಟು ನಾನು ಯಾವ ಪರಪುರುಷನನ್ನು ಮುಟ್ಟಿಲ್ಲ. ನನ್ನ ಮಾತು ಸುಳ್ಳಾಗಿದ್ದರೆ, ಈ ಹಾವು ನನ್ನನ್ನು ಕಡಿದು ಸಾಯಿಸಲಿ” ಎಂದು ಅವಳು ಉದ್ಗರೆಯುತ್ತಾಳೆ. ಅವಳು ಹುತ್ತದಿಂದ ಹೊರತೆಗೆದು ಹಿಡಿದುಕೊಂಡ ನಾಗರಹಾವು ಅವಳ ಜೊತೆಗೆ ಸುಖಿಸಿದ ನಾಗದೇವತೆಯೇ ಆಗಿರುತ್ತದೆ. ಅದು ತನ್ನ ಹೆಡೆಯನ್ನು ಅವಳಿಗೆ ಕೊಡೆ ಮಾಡಿ ಹಿಡಿಯುತ್ತದೆ. ನಾಗದಿವ್ಯವನ್ನು ನೋಡಲು ಕೂಡಿದ ಜನರು ಹರ್ಷೋದ್ಗಾರವನ್ನು ಮಾಡುತ್ತಾರೆ. ಇವಳು ದೈವೀ ಪ್ರಭಾವವುಳ್ಳ ಪತಿವ್ರತೆ ಎನ್ನುತ್ತ ಅವಳಿಗೆ ಭಕ್ತಿಯಿಂದ  ನಮಿಸುತ್ತಾರೆ. ಅವಳ ಗಂಡನಿಗೆ ದಿಗ್ಭ್ರಮೆ. ಬಹುಶಃ ಇವಳು ಪುರುಷಸಂಪರ್ಕವಿಲ್ಲದೆ ಬಸಿರಾದ ಮಹಾತ್ಮಳಿರಬಹುದು ಎಂದುಕೊಂಡ ಗಂಡನು ಪಶ್ಚಾತ್ತಾಪ ಪಟ್ಟು, ಅವಳಲ್ಲಿ ಆತ್ಮೀಯತೆಯನ್ನು ತಳೆಯುತ್ತಾನೆ.

ಮರುದಿನ ತನ್ನ ಹುತ್ತದ ಸಮೀಪದಲ್ಲಿ ಆ ನಾಗರಹಾವು ಸತ್ತು ಬಿದ್ದಿರುತ್ತದೆ. ಈ ಹುಡುಗಿ ಸ್ನಾನ ಮಾಡುವಾಗ, ಹರಿದು ಬಂದ ಅವಳ ಕೂದಲೊಂದನ್ನು ತನ್ನ ಕುತ್ತಿಗೆಗೆ ಬಿಗಿದುಕೊಂಡು ಅದು ಆತ್ಮಹತ್ಯೆ ಮಾಡಿಕೊಂಡಿರುತ್ತದೆ. ಕತೆಯು ಮುಗಿದ ಬಳಿಕ ವ್ಯಾಸ ದೇಶಪಾಂಡೆಯವರು ನನಗೊಂದು ಪ್ರಶ್ನೆಯನ್ನು ಹಾಕಿದರು: ‘ನಾಗದೇವತೆ ಆತ್ಮಹತ್ಯೆಯನ್ನು ಏಕೆ ಮಾಡಿಕೊಂಡಿತು?’
ನಾನು ಸ್ವಲ್ಪ ವಿಚಾರ ಮಾಡಿ ಹೇಳಿದೆ: ’ವಶೀಕರಣದ ಫಲವಾಗಿ ಆ ಹಾವು ಅವಳಲ್ಲಿ ಅತಿಯಾದ  ಮೋಹವನ್ನು ಬೆಳೆಯಿಸಿಕೊಂಡಿತ್ತು. ಇನ್ನು ಮೇಲೆ ಅವಳನ್ನು ಕೂಡುವುದು ಸಾಧ್ಯವಿಲ್ಲ ಎನ್ನುವ ಸಂಕಟದಿಂದ ಆ ಹಾವು ಅವಳದೇ ಕೂದಲಿನಿಂದ ಉರುಲು ಹಾಕಿಕೊಂಡು ಅತ್ಮಹತ್ಯೆಯನ್ನು ಮಾಡಿಕೊಂಡಿರಬಹುದು.’

ವ್ಯಾಸ ದೇಶಪಾಂಡೆಯವರು ಹೇಳಿದರು: “ಸರಿ, ಇದು ಒಂದು ಸಂಭಾವ್ಯತೆ. ಇನ್ನೂ ಒಂದು ಸಂಭಾವ್ಯತೆ ಇರಬಹುದಲ್ಲವೆ? ನೋಡಿ, ಈ ಹಾವು ಸಾಧಾರಣ ಹಾವಲ್ಲ. ಇದು ನಾಗದೇವತೆ. ದೇವತೆಯಾದ ಈ ಹಾವು ಮನುಷ್ಯರೊಡನೆ ಪ್ರಣಯವ್ಯವಹಾರವನ್ನು ಮಾಡಬಾರದು. ಇದು ನಾಗದೇವತೆ ಮಾಡಿದ ಮೊದಲನೆಯ ತಪ್ಪು. ಆ ತಪ್ಪಿನ ಫಲವಾಗಿ ಒಂದು ಬಗೆಹರಿಯದ ಸಮಸ್ಯೆ ಅಲ್ಲಿ ಹುಟ್ಟಿಕೊಂಡಿತು. ಆ ಹುಡುಗಿಯದು ತಪ್ಪಿಲ್ಲವೆಂದು ನಾಗದೇವತೆಗೆ ಗೊತ್ತಿದೆ. ಈ ನಾಗರಹಾವಿನ ಹೊರತಾಗಿ ಬೇರೊಬ್ಬ ಪರಪುರುಷನನ್ನು ಮುಟ್ಟಿಲ್ಲವೆಂದು ಅವಳು ಸತ್ಯವನ್ನೇ ನುಡಿದಿದ್ದಾಳೆ. ಆದುದರಿಂದ ಅವಳನ್ನು ಕಚ್ಚುವಂತಿಲ್ಲ.  ಆದರೂ ಅವಳು ತಿಳಿಯದೆಯೇ ಹಾದರ ಮಾಡಿದ್ದು ನಿಜವಲ್ಲವೆ? ಆ ಪಾಪಕ್ಕೆ ಶಿಕ್ಷೆಯನ್ನು ಕೊಡಲೆಂದು ಅವಳನ್ನು ಕಚ್ಚಿದ್ದರೆ, ತಾನು ಮಾಡಿದ ಅಪರಾಧಕ್ಕಾಗಿ ಅವಳಿಗೆ ಶಿಕ್ಷೆ ಕೊಟ್ಟಂತಾಗುತ್ತಿರಲಿಲ್ಲವೆ? ಅಲ್ಲದೆ ವಾಸ್ತವತೆಯನ್ನು ಅವಳ ಗಂಡನಿಂದ ಹಾಗು ಹಳ್ಳಿಯ ಸಮಸ್ತರಿಂದ ಮರೆಮಾಚಿದ್ದು ನಾಗದೇವತೆ ಮಾಡಿದ ಎರಡನೆಯ ಅನಿವಾರ್ಯ ಅಪರಾಧವಲ್ಲವೆ? ‘ತನ್ನ ಪಾಪಕ್ಕೆ ತಕ್ಕ ಶಿಕ್ಷೆಯನ್ನು ತಾನೇ ಅನುಭವಿಸಬೇಕು. ನಾಗದಿವ್ಯದಂತಹ ವಿಧಿಗೆ ತಾನಿನ್ನು ಅಯೋಗ್ಯ’ ಎನ್ನುವ ಮನೋಕ್ಷೋಭೆಯ ಪರಿಣಾಮವಾಗಿ ಅದು ಆತ್ಮಹತ್ಯೆಯನ್ನು ಮಾಡಿಕೊಂಡಿರಬಹುದು!”

ವ್ಯಾಸ ದೇಶಪಾಂಡೆ ಮುಂದುವರೆಸಿ ಹೇಳಿದರು: “ಇಲ್ಲಿ ಮತ್ತೊಂದು ಪ್ರಶ್ನೆಯೂ ಬರುತ್ತದೆ. ನಾಗದೇವತೆಯು ವಶೀಕರಣಕ್ಕೆ ಒಳಗಾಗಿ ತಪ್ಪನ್ನು ಮಾಡಿತು. ಅದೇನೂ ಸ್ವಇಚ್ಛೆಯಿಂದ ಹಾಗೆ ಮಾಡಿರಲಿಲ್ಲವಲ್ಲ ಎಂದು ತರ್ಕಿಸಬಹುದು. ಇದನ್ನೇ ದೈವಜ್ಞರು ವಿಧಿ ಎಂದು ಕರೆಯುತ್ತಾರೆ. ದೇವತೆಗಳನ್ನು, ಮನುಷ್ಯರನ್ನು, ಪ್ರಾಣಿ-ಪಕ್ಷಿಗಳನ್ನು ಆಟವಾಡಿಸುವುದೇ ಅ ವಿಧಿ, ಅದನ್ನು ಮೀರಲು ಯಾರಿಗೂ ಸಾಧ್ಯವಿಲ್ಲ”

‘ನಮ್ಮ ಅಜ್ಜಿಯ ಕತೆಗಳಲ್ಲೂ ಸಹ ಧರ್ಮಸೂಕ್ಷ್ಮತೆ ಹಾಗು ನ್ಯಾಯಸೂಕ್ಷ್ಮತೆಯನ್ನು ಹೇಗೆ ಅಳವಡಿಸಲಾಗಿರುತ್ತದೆ, ನೋಡಿದಿರಾ? ನಮ್ಮ ಅಜ್ಜಿ ಹೇಳುವ ಜಾನಪದ ಕತೆಗಳಿಂದ ನಾವು ನೀತಿಪಾಠವನ್ನು ಕಲಿತೆವು. ಈಗಿನ ಚಿಕ್ಕ ಮಕ್ಕಳು ಗಣಕಯಂತ್ರದ ಕಾರ್ಟೂನುಗಳಲ್ಲಿ ಕೇವಲ ಅನೀತಿ ಹಾಗು ಹಿಂಸಾಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ,ಅಲ್ಲವೆ?’, ವ್ಯಾಸ ದೇಶಪಾಂಡೆ ಕೇಳಿದರು.
ನನ್ನಲ್ಲಿ ಉತ್ತರವಿರಲಿಲ್ಲ.

Wednesday, July 1, 2015

ವಂದೇ ಭಾರತಮ್-೫.....ವೀರಮಾತೆಯರು



ಐದು ಸಾವಿರ ವರ್ಷಗಳ ಹಿಂದೆ ಇದ್ದ ಮಹಾಭಾರತದ ಕುಂತೀದೇವಿಗೂ, ನಾಲ್ಕುನೂರು ವರ್ಷಗಳ ಹಿಂದೆ ಇದ್ದ ಛತ್ರಪತಿ ಶಿವಾಜಿಯ ತಾಯಿ ಜೀಜಾಬಾಯಿಗೂ ಇರುವ ಸಾಮ್ಯವೇನು?----ಈ ಇಬ್ಬರೂ ತಾಯಂದಿರು ತಮ್ಮ ವೈಯಕ್ತಿಕ ಹಿತಕ್ಕಿಂತ ಸಮಷ್ಟಿಯ ಹಿತವೇ ಹೆಚ್ಚೆಂದು ಬಗೆದು, ತಮ್ಮ ಮಕ್ಕಳನ್ನು ಅಪಾಯದ ಬಾಯಿಗೆ ತಳ್ಳಿದರು.

ನರಭಕ್ಷಕ ಬಕಾಸುರನ ಕತೆ ನಮಗೆಲ್ಲರಿಗೂ ಗೊತ್ತು. ಏಕಚಕ್ರನಗರದ ಹೊರವಲಯದ ಕಾಡಿನಲ್ಲಿ ಇರುತ್ತಿದ್ದ ಈತನಿಗೆ ಆಹಾರವೆಂದು ಪ್ರತಿದಿನವೂ ಒಬ್ಬ ಮನುಷ್ಯನನ್ನು ಹಾಗು ಒಂದು ಬಂಡಿ ಅನ್ನವನ್ನು ನಗರವಾಸಿಗಳು ಪಾಳಿಯ ಪ್ರಕಾರ ಕಳುಹಿಸಿಕೊಡುತ್ತಿದ್ದರು. ಭಿಕ್ಷುಕರ ವೇಷದಲ್ಲಿದ್ದ ಪಾಂಡವರ ತಾಯಿ ಕುಂತಿಗೆ ಅಕಸ್ಮಾತ್ತಾಗಿ ಈ ವ್ಯವಸ್ಥೆಯ ಅರಿವಾಯಿತು. ಅವಳು ತನ್ನ ನೆರೆಮನೆಯ ಹೆಣ್ಣುಮಗಳಿಗೆ ‘ನಿನ್ನ ಮಗನ ಬದಲಾಗಿ ನನ್ನ ಮಗನನ್ನು ಕಳುಹಿಸಿಕೊಡುವೆ, ದುಃಖಿಸಬೇಡ’ ಎಂದು ಸಂತೈಸಿದಳು.

ಕುಂತಿ ಹೀಗೇಕೆ ಮಾಡಿದಳು? ಅವಳದು ಎಂತಹ ಧೈರ್ಯ? ಬಕಾಸುರನೇನು ಕಡಿಮೆ ಬಲಶಾಲಿಯೆ? ತನ್ನ ಮಗ ಭೀಮಸೇನನೆ ಆ ರಾಕ್ಷಸನಿಗೆ ಬಲಿಯಾಗಬಹುದಲ್ಲ ಎನ್ನುವ ಹೆದರಿಕೆ ಬೇಡವೆ ಕುಂತಿಗೆ? ತನ್ನ ಗಂಡನನ್ನು, ತನ್ನ ರಾಜ್ಯವನ್ನು ಕಳೆದುಕೊಂಡ ಕುಂತಿಯು ತನ್ನ ಅತ್ಯಂತ ಬಲಶಾಲಿಯಾದ ಮಗನನ್ನು ಕಳೆದುಕೊಳ್ಳುವ ಅಪಾಯವನ್ನು ಏಕೆ ಎದುರಿಸಿದಳು? ಇಷ್ಟಕ್ಕೂ ಆ ನಗರವಾಸಿಗಳ ರಕ್ಷಣೆಯ ಹೊಣೆಗಾರಿಕೆ ಕುಂತಿಗೆ ಏಕೆ ಬೇಕು? ಏಕಚಕ್ರನಗರಕ್ಕೆ ಒಬ್ಬ ರಾಜನಿದ್ದ. ಅವನಿಗೆ ಒಂದು ಸೈನ್ಯವಂತೂ ಇತ್ತು. ಬಕಾಸುರನೆದುರಿಗೆ ಇವರು ಮಂಡಿಯೂರಿದ್ದರೆ?

ಬಕಾಸುರನ ಜೊತೆ ಮುಖಾಮುಖಿಯಾಗಿ ಸೋತು ಹೋದಾಗ, ಏಕಚಕ್ರನಗರದ ರಾಜನ ಎದುರಿಗೆ ಎರಡು ಆಯ್ಕೆಗಳು ಇದ್ದವು. ಒಂದು ಹೋರಾಟವನ್ನು ಮುಂದುವರೆಸಿ, ಎಲ್ಲರೂ ಸೋತು ಸತ್ತು ಹೋಗುವುದು; ಏಕಚಕ್ರನಗರವನ್ನು ಸ್ಮಶಾನವನ್ನಾಗಿ ಪರಿವರ್ತಿಸುವುದು. ಎರಡನೆಯದು ಅನ್ಯಾಯದ ಜೊತೆಗೆ ಒಪ್ಪಂದವನ್ನು ಮಾಡಿಕೊಂಡು, ತನ್ನ ನಗರವನ್ನು ಉಳಿಸಿಕೊಳ್ಳುವುದು. ಏಕಚಕ್ರನಗರದ ರಾಜ ಎರಡನೆಯ ಆಯ್ಕೆಗೆ ಮೊರೆ ಹೋದ. ಬಹುಶಃ ಆ ನಗರನಿವಾಸಿಗಳೂ ಈ ಆಯ್ಕೆಯನ್ನೇ ಸಮ್ಮತಿಸಿರಬಹುದು(?) ಇಂತಹ ಹೇಡಿತನವನ್ನು ಕಂಡೇ ನಮ್ಮ ಹಳೆಯ ರಾಷ್ಟ್ರಾಧ್ಯಕ್ಷರಾದ ಅಬ್ದುಲ್ ಕಲಾಮರು, “Indians do not have a sense of retaliation” ಎಂದು ವಿಷಾದಿಸಿದ್ದು. ಘೋರಿ ಮಹಮ್ಮದನಂತಹ ಕ್ರೂರ,  ದರೋಡೆಕೋರನನ್ನು ಪೃಥ್ವೀರಾಜನು ೧೬ ಸಲ ಸೋಲಿಸಿ, ಕ್ಷಮಿಸಿ ಬಿಟ್ಟದ್ದೂ ಸಹ ಭಾರತೀಯರ ಒಂದು ಅವಗುಣವೇ ಸರಿ. ಭಾರತದ ತತ್ವಶಾಸ್ತ್ರಗಳೇ ಇಂತಹ ಮೂರ್ಖತನಕ್ಕೆ ಕಾರಣ ಎನ್ನೋಣವೆ? ರಾಜನು ಕ್ಷಮಾಶೀಲನಾಗಿರಬೇಕು, ಶರಣಾಗತರಿಗೆ ರಕ್ಷಣೆ ನೀಡಬೇಕು ಎನ್ನುವ ಪರಂಪರಾಗತ ದೊಡ್ಡಸ್ತನದ ವಿಜೃಂಭಣೆಯೇ ನಮ್ಮ ರಾಜರ ಅಪ್ರಬುದ್ಧ ನಡವಳಿಕೆಗೆ ಕಾರಣವಾಗಿರಬಹುದು. ಆದರೆ ಶತ್ರುವು ಬಲಾಢ್ಯನಾಗಿದ್ದಾಗ, ತನ್ನ ಸ್ವಂತ ಅಭಿಮಾನಕ್ಕಿಂತ ದೇಶದ ಹಿತವೇ ದೊಡ್ಡದಾದಾಗ, ವೈಯಕ್ತಿಕ ಅವಮಾನವನ್ನು ಸಹಿಸಿ, ಬಲಾಢ್ಯ ಶತ್ರುವಿನ ಜೊತೆಗೆ ರಾಜೀಯಾಗುವುದು ಅನಿವಾರ್ಯವಾಗುವುದೇನೊ? ಚಿತ್ತೂರಿನ ರಾಜನಾದ ರಾವಲ ರತನಸಿಂಗ ಇದಕ್ಕೊಂದು ಉತ್ತಮ ನಿದರ್ಶನವಾಗಿದ್ದಾನೆ.

ಅಪೂರ್ವ ರೂಪಸಿಯಾದ ಚಿತ್ತೂರಿನ ರಾಣಿ ಪದ್ಮಿನಿಯನ್ನು ತನ್ನ ಜನಾನಾಗೆ ಸೇರಿಸುವ ಉದ್ದೇಶದಿಂದ ಅಲ್ಲಾಉದ್ದೀನ ಖಿಲಜಿ ಚಿತ್ತೂರಿನ ಮೇಲೆ ದಂಡೆತ್ತಿ ಬಂದ. ಕಾಳಗದಲ್ಲಿ ಯಾರೂ ಸೋಲಲಿಲ್ಲ. ಚಿತ್ತೂರಿನ ವಿಧ್ವಂಸವನ್ನು ತಡೆಗಟ್ಟಲು, ರಾವಲ ರತನಸಿಂಗ ತನ್ನ ಹೆಂಡತಿ ಪದ್ಮಿನಿಯನ್ನು ಖಿಲಜಿಗೆ ಕನ್ನಡಿಯಲ್ಲಿ ತೋರಿಸುವ ಶರತ್ತಿನ ಮೇಲೆ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಪಟ್ಟ. ಒಬ್ಬ ರಾಜನಿಗೆ ಇದು ಅತ್ಯಂತ ಹೇಯಕರವಾದ ಶರತ್ತು. ಆದರೆ ಈ ಶರತ್ತಿಗೆ ಒಪ್ಪದಿದ್ದರೆ, ಖಿಲಜಿಯ ಸೈನಿಕರು ಚಿತ್ತೂರಿನ ಸಂಪೂರ್ಣ ರಾಜ್ಯವನ್ನೇ ಸುಟ್ಟು ಬೂದಿ ಮಾಡುತ್ತಿದ್ದರು. ಅಲ್ಲಿ ಸಿಕ್ಕ ಎಲ್ಲ ಪದ್ಮಿನಿಯರ ಮೇಲೂ ಅತ್ಯಾಚಾರ ನಡೆಯುತ್ತಿತ್ತು. ಇದನ್ನು ತಪ್ಪಿಸುವುದು ರಾಜನ ಕರ್ತವ್ಯವಾಗಿತ್ತು. ಆದುದರಿಂದ ವೈಯಕ್ತಿಕವಾಗಿ ತನಗಾಗುತ್ತಿರುವ ಅವಹೇಳನೆಯನ್ನು ಸಹಿಸಿಕೊಂಡರೂ ಸರಿಯೆ, ಪ್ರಜೆಗಳು ಸಂಕಷ್ಟಕ್ಕೆ ಈಡಾಗದಿರಲಿ ಎಂದು, ರತನಸಿಂಗನು ಈ ಅಪಮಾನಕ್ಕೆ ಒಪ್ಪಿಕೊಂಡಿರಬಹುದು. ಇದರಂತೆಯೇ ಏಕಚಕ್ರನಗರದ ಸಂಪೂರ್ಣ ವಿಧ್ವಂಸವನ್ನು ತಡೆಯಲೆಂದೇ, ಅಲ್ಲಿನ ರಾಜ ಹಾಗು ಪ್ರಜೆಗಳು ಬಕಾಸುರನೊಡನೆ ಒಂದು ಒಪ್ಪಂದಕ್ಕೆ ಬಂದಿರಬಹುದು. ಪರಿಸ್ಥಿತಿಯೇ ಹೀಗಿರುವಾಗ ಕುಂತೀದೇವಿ ತನ್ನ ಮಗನನ್ನು ಸಾವಿನ ಬಾಯಿಗೆ ಏಕೆ ತಳ್ಳಿದಳು? ‘ಕುಲದ ಸಲುವಾಗಿ ಅಂದರೆ ಸಮುದಾಯದ ಸಲುವಾಗಿ ಒಬ್ಬ ವ್ಯಕ್ತಿಯನ್ನು ತ್ಯಜಿಸಬೇಕು’ ಎನ್ನುವ ಸುಭಾಷಿತ ಒಂದಿದೆ. ಅದಕ್ಕಾಗಿ ಅವಳು ಭೀಮಸೇನನನ್ನು ಬಲಿ ಕೊಡಲು ಸಿದ್ಧಳಾದಳೆ? ಅದೂ ಅಲ್ಲದೆ ಕುಂತೀದೇವಿಯು ರಾಣಿಯಾಗಿ ಹಸ್ತಿನಾಪುರವನ್ನು ಆಳಿದವಳು. ಅವಳಲ್ಲಿ ರಾಜಧರ್ಮದ ಹಾಗು ಕ್ಷಾತ್ರಧರ್ಮದ ಪ್ರಜ್ಞೆ ಹೆಡೆಯಾಡುತ್ತಿರಬಹುದು. ಏಕಚಕ್ರನಗರದ ಜನತೆ ಸೋತರೇನಾಯಿತು, ಕುಂತೀದೇವಿ ಸೋಲುವುದಿಲ್ಲ ಎನ್ನುವುದು ಅವಳ ಸಂಕಲ್ಪವಾಗಿರಬಹುದು!

ಇಂತಹ ಮತ್ತೊಬ್ಬ ವೀರಮಾತೆಯ ದರ್ಶನ ನಮಗಾಗುವುದು ಸುಮಾರು ೪೦೦ ವರ್ಷಗಳ ಹಿಂದೆ. ಇವಳು ಜೀಜಾಬಾಯಿ. ಶಹಾಜಿ ಭೋಸಲೆಯ ಹೆಂಡತಿ. ಆದರೆ ಗಂಡ, ಹೆಂಡತಿ ಕೂಡಿ ಇದ್ದದ್ದೇ ಅಪರೂಪ. ಜೀಜಾಬಾಯಿಯ ಮಗ ಶಿವಾಜಿ ತಾಯಿಯ ಪೋಷಣೆ ಹಾಗು ಮಾರ್ಗದರ್ಶನದಲ್ಲಿಯೇ ಬೆಳೆದ. ಭಾರತದ ಗಡಿಯಾಚೆಯಿಂದ ನುಗ್ಗಿದ ಕಟುಕ ದರೋಡೆಖೋರರನ್ನು ಜೀಜಾಬಾಯಿ ನೋಡಿದ್ದಳು. ಇಲ್ಲಿ ರಾಜ್ಯ ಸ್ಥಾಪಿಸಿ, ಇಲ್ಲಿಯ ಜನತೆಯನ್ನು ಹಿಂಡುತ್ತಿದ್ದಂತಹ, ಇಲ್ಲಿಯ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಂತಹ ವಿದೇಶಿ ದಾಳಿಕಾರರ ಅಡಿಯಲ್ಲಿಯೇ ಅವಳ ತಂದೆ ಹಾಗು ಅವಳ ಗಂಡ ಊಳಿಗ ಮಾಡುತ್ತಿದ್ದರು. ನಾಡ ಜನತೆಯ ಮೇಲೆ ನಡೆಯುವ ದಬ್ಬಾಳಿಕೆಯನ್ನು ಪ್ರತ್ಯಕ್ಷವಾಗಿ ಕಂಡ ಜೀಜಾಬಾಯಿ ಈ ನಾಡವರ ರಾಜ್ಯಕ್ಕಾಗಿ, ಭಾರತೀಯರ ಸ್ವರಾಜಕ್ಕಾಗಿ ತನ್ನ ಮಗ ಶಿವಾಜಿಗೆ ಪ್ರೇರಣೆ ಇತ್ತಳು.

ಶಿವಾಜಿಯು ತನ್ನ ಸ್ವರಾಜವನ್ನು ವಿಸ್ತರಿಸುತ್ತ ಹೋದಂತೆ, ವಿಜಯಪುರದ ಆದಿಲಶಾಹಿ ಚಿಂತಿತನಾದ. ಶಿವಾಜಿಯ ನಿಗ್ರಹಕ್ಕಾಗಿ ಆತ ಅಫಝಲಖಾನನನ್ನು ಕಳಿಸಿಕೊಟ್ಟ. ಅಫಝಲಖಾನ ಸಾಮಾನ್ಯನಲ್ಲ. ಅಫಘಾನ ಮೂಲದ ಈತ ಆದಿಲಶಾಹಿಯ ನೆಚ್ಚಿನ ಸೇನಾಪತಿ. ಶಿವಾಜಿಯನ್ನು ಪುಣೆಯಲ್ಲಿ ಎದುರಿಸಿ, ಕೊಚ್ಚಿ ಹಾಕಲು ಅಫಝಲಖಾನ ಬಯಸಿದ್ದ. ಆದರೆ ಶಿವಾಜಿ ಉದ್ದೇಶಪೂರ್ವಕವಾಗಿ ಪ್ರತಾಪಗಡಕ್ಕೆ ತೆರಳಿದ. ಅಫಝಲಖಾನನ ಸೈನ್ಯ ಪ್ರತಾಪಗಡವನ್ನು ದೀರ್ಘ ಕಾಲದವರೆಗೆ ಮುತ್ತಿಗೆ ಹಾಕಿದರೂ ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಮೈತ್ರಿಯ ಒಪ್ಪಂದಕ್ಕೆ ಅಫಝಲಖಾನ ತನ್ನ ದೂತನನ್ನು ಕಳುಹಿದ. ಶಿವಾಜಿ ಈ ಭೇಟಿಗೆ ಒಪ್ಪಿದ. ಇವರಿಬ್ಬರೂ ನಿಶ್ಶಸ್ತ್ರರಾಗಿ ಸಂಧಿಸಬೇಕು. ಜೊತೆಗೆ ಇಬ್ಬರು ಸಶಸ್ತ್ರ ಅಂಗರಕ್ಷಕರು ಮಾತ್ರ ಇರಬೇಕು ಎನ್ನುವ ಶರತ್ತಿನೊಡನೆ ಭೆಟ್ಟಿಯ ಸಿದ್ಧತೆಗಳಾದವು. ಅಫಝಾಲಖಾನ ಈ ಮೊದಲೊಮ್ಮೆ ಕಸ್ತೂರಿರಂಗ ಎನ್ನುವ ರಾಜನನ್ನು ಇಂತಹದೇ ನೆವದಲ್ಲಿ ಮೋಸದಿಂದ ಕೊಂದಿದ್ದ. ಆದುದರಿಂದ ಶಿವಾಜಿಯ ಹಿತವರ್ಗದವರೆಲ್ಲರೂ ಈ ಭೆಟ್ಟಿಗೆ ಒಪ್ಪದಿರಲು ಆತನಿಗೆ ಸಲಹೆ ನೀಡಿದರು. ಜೀಜಾಬಾಯಿ ಮಾತ್ರ ಶಿವಾಜಿಗೆ ಸಮ್ಮತಿ ನೀಡಿದಳು. (ಜೀಜಾಬಾಯಿಯ ಮೊದಲನೆಯ ಮಗ ಸಂಭಾಜಿ ಕಾಳಗವೊಂದರಲ್ಲಿ ಅಫಝಲಖಾನನಿಂದಲೇ ಹತನಾಗಿದ್ದ. ಹೀಗಿದ್ದರೂ ಸಹ ಜೀಜಾಬಾಯಿ ತನ್ನ ಉಳಿದೊಬ್ಬ ಮಗನನ್ನು ಅಫಝಲಖಾನನ ಭೆಟ್ಟಿಗೆ ಕಳುಹಿಸಿಕೊಡುತ್ತಾಳೆ!)

ಭೆಟ್ಟಿಗೆ ಹೋಗುವ ಮುಹೂರ್ತದಲ್ಲಿ ಶಿವಾಜಿಗೆ ಆರತಿ ಬೆಳಗಿ ತಿಲಕವನ್ನಿಡಬೇಕಲ್ಲ. ಶಿವಾಜಿಯ ಹೆಂಡತಿಯ ಕೈ ಆರತಿ ಎತ್ತುವಾಗ ಕಂಪಿಸಿತು. ಜೀಜಾಬಾಯಿ ತಾನೇ ಆರತಿ ಎತ್ತಿ, ತಿಲಕವನ್ನಿತ್ತು, ಆಶೀರ್ವದಿಸಿ ಕಳುಹಿಸಿದಳು. ಮುಂದಿನ ಕತೆ ಎಲ್ಲರಿಗೂ ಗೊತ್ತು. ಆದರೆ ತನ್ನ ಒಬ್ಬನೇ ಮಗನನ್ನು ಒಬ್ಬಂಟಿಯಾಗಿ ಹುಲಿಯ ಬಾಯಿಗೆ ಕಳುಹಿಸಿಲು ಅವಳಿಗೆ ಇದ್ದ ಪ್ರೇರಣೆ ಯಾವುದು?

ಕುಂತಿ ಏಕಚಕ್ರನಗರದ ಪ್ರಜೆಗಳ ಹಿತರಕ್ಷಣೆಗಾಗಿ ಭೀಮಸೇನನನ್ನು ಕಳೆದುಕೊಳ್ಳುವ ಅಪಾಯವನ್ನು ಹೇಗೆ ಎದುರಿಸಿದಳೊ, ಅದೇ ರೀತಿಯಲ್ಲಿ ಜೀಜಾಬಾಯಿಯೂ ಸಹ ಜನಹಿತರಕ್ಷಣೆಗಾಗಿ ತನ್ನ ಒಬ್ಬನೇ ಮಗ ಶಿವಾಜಿಯನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸಿದಳು. ನಮ್ಮ ನಾಡಿನಲ್ಲಿ ಇಂತಹ ಅಸಂಖ್ಯ ವೀರಮಾತೆಯರು ಆಗಿ ಹೋಗಿದ್ದಾರೆ. ಇವರಿಂದಾಗಿಯೇ ಭಾರತ ಇನ್ನೂ ಜೀವಂತವಿದೆ.

ಈ ಸಂದರ್ಭದಲ್ಲಿ ಕುವೆಂಪು ರಚಿಸಿದ ಗೀತೆಯೊಂದರ ಸಾಲುಗಳು ನೆನಪಿಗೆ ಬರುತ್ತಿವೆ:
“ನಾನಳಿವೆ, ನೀನಳಿವೆ ನಮ್ಮೆಲವುಗಳ ಮೇಲೆ
ಮೂಡುವುದು, ಮೂಡುವುದು ಭಾರತದ ಲೀಲೆ
ನವಭಾರತದ ಲೀಲೆ!”

ನಾಡಿಗಾಗಿ ಪುತ್ರಬಲಿಯನ್ನು ಅರ್ಪಿಸಲು ಹಿಂಜರಿಯದ ಅನೇಕಾನೇಕ ವೀರಮಾತೆಯರಿಗೆ ನನ್ನ ನಮ್ರ ನಮನಗಳು.

Saturday, June 20, 2015

ನಾನು ಕೇಳಿದ ಬೇಂದ್ರೆಯವರ ಮೊದಲ (ಹಾಗು ಕೊನೆಯ) ಭಾಷಣ!



ದ.ರಾ.ಬೇಂದ್ರೆಯವರಿಗೆ ೧೯೫೬ರಲ್ಲಿ ೬೦ ವರ್ಷಗಳು ತುಂಬಿದವು. ೧೯೫೮ರಲ್ಲಿ ಅವರ ‘ಅರಳು ಮರಳು’ ಎನ್ನುವ ಕವನಸಂಕಲನವು ಪ್ರಕಟಿತವಾಯಿತು. ಆ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನವೂ ದೊರೆಯಿತು. ಈ ಎರಡೂ ಕಾರಣಗಳಿಂದ ಬೇಂದ್ರೆಯವರಿಗೆ ಕರ್ನಾಟಕದ ಅನೇಕ ಕಡೆ ಸನ್ಮಾನಸಮಾರಂಭಗಳು ಜರಗುತ್ತಿದವು. ೧೯೫೯ರಲ್ಲಿ ನಾನು ಸವದತ್ತಿಯ ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿದ್ದೆ. ನಮ್ಮ ಶಾಲೆಯಲ್ಲೂ ಸಹ ಅವರಿಂದ ಒಂದು ಉಪನ್ಯಾಸವನ್ನು ಏರ್ಪಡಿಸಿ, ಅವರಿಗೆ ಸತ್ಕರಿಸಲು ನಿಶ್ಚಯಿಸಲಾಗಿತ್ತು.

ನಿಶ್ಚಿತ ದಿನದಂದು ಬೇಂದ್ರೆ ನಮ್ಮಲ್ಲಿಗೆ ಬಂದರು. ಅತಿ ಸಾದಾ ಧೋತರ, ಕೋಟು ಹಾಗು ರುಮಾಲನ್ನು ಧರಿಸಿದ ಅವರನ್ನು ವರಕವಿ ಎಂದು ಗುರುತಿಸುವುದು ಅಸಾಧ್ಯದ ಸಂಗತಿಯಾಗಿತ್ತು. ಆದರೆ ಅವರ ಭಾಷಣವನ್ನು ಕೇಳುತ್ತಿರುವಂತೆ, ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಮಂತ್ರಮುಗ್ಧರಾದರು.

ಬೇಂದ್ರೆಯವರು ವಿದ್ಯಾರ್ಥಿಗಳಿಗಾಗಿ ಭಾಷಣ ಮಾಡಬೇಕಾಗಿತ್ತಷ್ಟೆ. ತಮ್ಮ ಕೋಟಿನಿಂದ ಚಿಕ್ಕದೊಂದು ಗ್ಲೋಬ್‍ಅನ್ನು ಬೇಂದ್ರೆ ಹೊರತೆಗೆದು ವಿದ್ಯಾರ್ಥಿಗಳಿಗೆ ತೋರಿಸಿದರು. ಕರ್ನಾಟಕ ಹಾಗು ಭಾರತ ಇವು ಈ ವಿಶಾಲವಾದ ಪೃಥ್ವಿಯ ಒಂದು ಭಾಗ ಎಂದು ಹೇಳುತ್ತ, ‘ಕರ್ನಾಟಕದ ವಿಸ್ತಾರವೇನು?’ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ‘ಕಾವೇರಿಯಿಂದ ಗೋದಾವರಿಯವರೆಗೆ’ ಎಂದು  ವಿದ್ಯಾರ್ಥಿಗಳೆಲ್ಲರೂ ಒಕ್ಕೊರಲಿನಿಂದ ಕೂಗಿದರು. ಬೇಂದ್ರೆಯವರು ನಸುನಕ್ಕರು. ‘ನಿಮಗ ಇತಿಹಾಸ ಗೊತ್ತದ, ಭೂಗೋಲ ಗೊತ್ತಿಲ್ಲ’, ಎಂದು ಚೇಷ್ಟೆ ಮಾಡಿದರು. ಆ ಬಳಿಕ ‘ಅರಳು ಮರಳು’ ಕವನಸಂಕಲನದಲ್ಲಿದ್ದ ಒಂದು ಕವನದ ನುಡಿಯೊಂದನ್ನು ನಮ್ಮೆದುರಿಗೆ  ಗಾನಿಸಿದರು:
’ಕನ್ನಡ ನುಡಿದಿತು ಕನ್ನಡ ಹಕ್ಕಿ
ಕನ್ನಡವೆಂದಿತು ಆ-ಗೋದೆ
ಕಾವೇರಿಯು ತಂಪಾಯಿತು, ಕನ್ನಡ
ಗಾಳಿಯು ಉಸಿರಿತು ಈ ಬೋಧೆ.’

ನೋಡಲು ಸರಳವಾಗಿ ಕಾಣುತ್ತಿರುವ ಈ ನುಡಿಯನ್ನು ಅವರು ವಿವರಿಸಿದಾಗಲೇ, ಅದರ ಅರ್ಥ ನಮಗೆ ಹೊಳೆದದ್ದು. ಆ ಸಮಯದಲ್ಲಿ ಅವರು ಹೇಳಿದ ಪೂರ್ಣ ವಿವರಣೆ ನನಗೆ ಈಗ ನೆನಪಿಲ್ಲ. ಆದರೆ ಅದರ ಮುಖ್ಯ ಭಾಗ ಹೀಗಿದೆ:
ಗೋದಾವರಿ ನದಿಯ ದಂಡೆಯ ಮೇಲೆ ‘ಕನ್ನಡ’ ಎನ್ನುವ ಹೆಸರಿನ ಒಂದು ಹಳ್ಳಿ ಇದೆ. ಅಲ್ಲಿಯ ಜನರು ಮಾತನಾಡುವುದು ಕನ್ನಡವನ್ನೇ. ಒಂದು ಕಾಲದಲ್ಲಿ ಕನ್ನಡ ನಾಡು ‘ಕಾವೇರಿಯಿಂದ ಗೋದಾವರಿಯವರೆಗೆ’ ಹರಡಿತ್ತು. ಈಗ ಕನ್ನಡದ ಮರ್ಯಾದೆ ಕುಗ್ಗಿದೆ. ಅದು ಪುನಃ ‘ಆಗೋದೆ!’ ಎನ್ನಬೇಕು; ರಾಜಕೀಯವಾಗಿ ಅಲ್ಲದಿದ್ದರೂ ಸಾಂಸ್ಕೃತಿಕವಾಗಿ ಆಗಬೇಕು. ಈ ಹುಮ್ಮಸ್ಸು ಕನ್ನಡಿಗರಲ್ಲಿ ಬೇಕು. ಆದರೆ ಕನ್ನಡಿಗರ ಸ್ವಭಾವ ಹೇಗಿದೆ ಎಂದರೆ, ‘ಕಾವೇರಿಯು ತಂಪಾಯಿತು’; ಅವರಿಗೆ ತತ್‍ಕ್ಷಣಕ್ಕೆ ಕಾವು ಏರುತ್ತದೆ, ಹಾಗೆಯೇ ಇಳಿದೂ ಬಿಡುತ್ತದೆ.  ಕಾವಿನಲ್ಲಿ ಹುಚ್ಚಾಟ ಮಾಡಬಾರದು ಎನ್ನುವದು ಕನ್ನಡ ಜನತೆಯ ಸ್ವಾಭಾವಿಕ ತಿಳಿವು ಆಗಿದೆ.

ಸ್ವತಃ ವರಕವಿಯ ಬಾಯಿಯಿಂದಲೇ ಅವರ ಕವನದ ವಿವರಣೆಯನ್ನು ಕೇಳಿದ್ದು ನಮ್ಮೆಲ್ಲರ ಭಾಗ್ಯವಾಗಿತ್ತು. ಬೇಂದ್ರೆಯವರ ಕವನಗಳನ್ನು  ಹೇಗೆ ಅರ್ಥೈಸಿಕೊಳ್ಳಬೇಕೆನ್ನುವುದರ ಮೊದಲ ಪಾಠವೂ ಇದಾಗಿತ್ತು.

Tuesday, June 2, 2015

ಪದವಿನೋದ-೩



ನೆಯ್ ಎನ್ನುವ ಪದದಿಂದ ನೆಯ್ಕಾರ ಎನ್ನುವ ಪದವು ಬಂದಿದೆ ಎನ್ನುವದು ನಮಗೆಲ್ಲರಿಗೂ ಗೊತ್ತಿದೆ. ಆದರೆ ನೆಯ್ ಪದದ ಅರ್ಥವು weave ಎನ್ನುವದಕ್ಕಷ್ಟೇ ಸೀಮಿತವಾಗಿಲ್ಲ. ಇನ್ನೂ ಕೆಲವು ಅರ್ಥಗಳು ನೆಯ್ ಪದಕ್ಕೆ ಇವೆ. ಉದಾಹರಣೆಗೆ ‘ಎಣ್ಣೆ’ ಎನ್ನುವ ಪದವನ್ನು ಪರಿಶೀಲಿಸಿರಿ. ಎಣ್ಣೆ ಪದವು ‘ಎಳ್+ನೆಯ್’ ಪದಗಳ ಸಂಯುಕ್ತ ರೂಪವಾಗಿದೆ. ಎಳ್ಳನ್ನು ಹಿಂಡಿ ಎಣ್ಣೆಯನ್ನು ತೆಗೆಯುವದು ಬಹಳ ಹಳೆಯ ಪದ್ಧತಿ. ಕಾಲಕ್ರಮೇಣ ಯಾವುದೇ ಪದಾರ್ಥವನ್ನು ಹಿಂಡಿ ತೆಗೆದರೂ ಅದಕ್ಕೆ ಎಣ್ಣೆ ಎಂದೇ ಕರೆಯುವದು ರೂಢಿಯಾಯಿತು. ಉದಾಹರಣೆಗೆ ಕೊಬ್ಬರಿ ಎಣ್ಣೆ, ಕುಸುಬಿ ಎಣ್ಣೆ, ಸೇಂಗಾ ಎಣ್ಣೆ ಇತ್ಯಾದಿ. ಆದುದರಿಂದ ಇಲ್ಲಿ ನೆಯ್ ಪದವನ್ನು ಹಿಂಡು ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ಇದರಂತೆ ‘ಬೆಣ್ಣೆ’ ಎನ್ನುವ ಪದವು ‘ಬೆಳ್+ನೆಯ್’ ಎನ್ನುವುವರ ಸಂಯುಕ್ತ ರೂಪವಾಗಿದೆ. ಇಲ್ಲಿ ನೆಯ್ ಪದದ ಅರ್ಥ ‘ಕಡೆಯುವುದು’ ಎಂದಾಗುತ್ತದೆ.  ಕನ್ನಡದ ಬೆಣ್ಣೆಯು ತಮಿಳಿನಲ್ಲಿ ವೆಣ್ಣೆಯಾಗಿಯೇ ಉಳಿದಿದೆ. ಈ ವೆಣ್ ಅಥವಾ ‘ವೆಳ್’ದ ವ್ಯಾಪಾರಿಗಳೇ ವೆಳ್ಳರು. ತಮಿಳುನಾಡಿನಲ್ಲಿರುವ ವೆಳ್ಳೂರು (Vellore) ಇದು ಒಂದು ಕಾಲದಲ್ಲಿ ಬೆಣ್ಣೆ ವ್ಯಾಪಾರಿಗಳ ಊರು! ನಮ್ಮ ಬೆಳಗಾವಿಯೂ ಸಹ ‘ವೆಳಗಾವಿ’ಯೇ. ತಮಿಳಿನಲ್ಲಿ ‘ಊರು’ ಪದವೇ ಉಳಿದುಕೊಂಡಿದ್ದರೆ, ಕನ್ನಡದಲ್ಲಿ ಊರು ಪದದ ಬದಲಾಗಿ ‘ಗಾವಿ (=ಗ್ರಾಮ)’ ಪದವು ಬಂದಿದೆ. ಇದು ಆರೇ (=ಆರ್ಯ) ಜನಾಂಗದ ಸಂಪರ್ಕದ ಪರಿಣಾಮ. ಆದರೇನು, ಸಂಸ್ಕೃತಾಭಿಮಾನಿ ಪಂಡಿತರು ಬೆಳಗಾವಿಗೆ ‘ವೇಣುಗ್ರಾಮ’ ಎನ್ನುವ ನಿರುಕ್ತಿಯನ್ನು ಎಳೆದಾಡಿ ಹಚ್ಚುತ್ತಾರೆ!
(ಟಿಪ್ಪಣಿ: ರಾಮಪ್ರಸಾದರು ತಮ್ಮ ಪ್ರತಿಕ್ರಿಯೆಯಲ್ಲಿ Vellore ಇದರ ಸರಿಯಾದ ಹೆಸರು ವೇಲೂರು ಎಂದೂ, ಇದು ವೇಲಾಯುಧನಾದ ಮುರುಗನ್ ಮೂಲಕ ಬಂದಿದೆ ಎಂದೂ ತಿಳಿಸಿದ್ದಾರೆ. ಅವರಿಗೆ ಧನ್ಯವಾದಗಳು. ಆದರೆ ನನ್ನ ಅಭಿಪ್ರಾಯವು ರೂಪಿತವಾಗಿರುವ ಕಾರಣ ಹೀಗಿದೆ:

ನನ್ನ ಅಭಿಪ್ರಾಯವು ಶಂ.ಬಾ. ಜೋಶಿಯವರು ಹೇಳುವ ಸಿದ್ಧಾಂತದ ಮೇಲೆ ರೂಪಿತವಾಗಿದೆ. ಜೋಶಿಯವರ ಹೇಳಿಕೆ ಹಿಗಿದೆ:
“ಮೂಲ ಹಾಲುಮತದವರಲ್ಲಿ ವಿಳ್-ವೆಳ್ಳರೆಂದೂ ನೆಯ್‍ಯವರು ನೆಯ್ಕಾರರೆಂದೂ ಎರಡೂ ಪಂಗಡಗಳಿಗೆ ಹೆಸರು ಬರಲು ಅವರು ಮಾಡಿಕೊಂಡ ವಿಳುದು ಮತ್ತು ನೆಯ್ ವ್ಯಾಪಾರ-ವ್ಯವಹಾರದ ವೈಶಿಷ್ಟ್ಯವೇ ಕಾರಣವಾಗಿರಬೇಕೆಂದು ತೋರುತ್ತದೆ……ವಿಳ್‍ದ ವ್ಯಾಪಾರಿಗಳು ವಿಳ್ಳರು-ವೆಳ್ಳರು; ಇವರೇ ತಮಿಳುನಾಡಿನ ಅಡಿಗಲ್ಲು…”
ಆದುದರಿಂದ ವಿಳ್‍ದ ಮೂಲಕ ವೇಳೂರು = ವೇಲೂರು ಬಂದಿರಬಹುದು. ಅಥವಾ ಇದು ವೇಲಾಯುಧನ ಮೂಲಕವೂ ಬಂದಿರುವ ಸಾಧ್ಯತೆ ಇದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ರಾಮಪ್ರಸಾದರಿಗೆ ಧನ್ಯವಾದಗಳು.) 

ನಮ್ಮ ಹಟ್ಟಿಕಾರರು (ಅಂದರೆ ಆರ್ಯಪೂರ್ವ ಕನ್ನಡಿಗರು) ಆಕಳನ್ನು ಹಾಗು ಕುರಿಗಳನ್ನು ಸಾಕುತ್ತಿದ್ದರಷ್ಟೆ. ಇವುಗಳ ಹಾಲಿನಿಂದ ಬೆಣ್ಣೆಯನ್ನು ಕಡೆದು ತೆಗೆಯುವುದು ಇವರ ಪ್ರಥಮ ಉದ್ಯೋಗವಾಗಿರಬಹುದು. ಈ ಸಂಶೋಧನೆಯನ್ನು ಮಾಡಿದವರು ಹೆಣ್ಣುಮಕ್ಕಳೇ ಆಗಿರುವುದು ಸಹಜವಾಗಿದೆ. ಗಂಡುಗಳು ಬೇಟೆಗಾಗಿ ಅಡವಿಯಲ್ಲಿ ಸಂಚರಿಸುತ್ತಿದ್ದಾಗ, ತಮ್ಮ ಗೂಡುಗಳ ಎದುರಿನಲ್ಲಿ ತೋಟಗಾರಿಕೆಯನ್ನು ಪ್ರಾರಂಭಿಸಿದವರೂ ಸಹ ಹೆಣ್ಣುಮಕ್ಕಳೇ. ಇವರು ಇಳೆಯನ್ನು (=ಭೂಮಿಯನ್ನು) ಕಡೆದು ಅಲ್ಲಿ ಗಡ್ಡೆಗಳನ್ನು ನೆಟ್ಟು ತೋಟಗಾರಿಕೆಯನ್ನು ಪ್ರಾರಂಭಿಸಿದರು. (ಇಳೆ ಪದವು ಸಂಸ್ಕೃತ ಪದವಲ್ಲ, ಇದು ಕನ್ನಡ ಪದ ಎನ್ನುವುದು ನಿಮ್ಮ ಗಮನದಲ್ಲಿರಲಿ.) ಆದುದರಿಂದಲೇ ವರಕವಿ ಬೇಂದ್ರೆಯವರು ತಮ್ಮ ‘ಗೃಹಿಣಿ’ ಎನ್ನುವ ಕವನದಲ್ಲಿ “ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು ಅಡವಿಯಲಿ ಹೂದೋಟ ಹೂಡಿದಾಕೆ”ಎಂದು ಹಾಡಿದ್ದಾರೆ. ತೋಟಗಾರಿಕೆಯ ಮುಂದಿನ ಭಾಗವಾಗಿ ಒಕ್ಕಲುತನ ಪ್ರಾರಂಭವಾದಾಗ ನೆಲವನ್ನು ಕಡೆಯಲು ‘ನೇಗಿಲಿ’ನ ಅವಶ್ಯಕತೆ ಕಂಡು ಬಂದಿತು. ‘ನೇಗಿಲು’ ಪದವು ‘ನೆಯ್+ಇಲ್’ ಅಂದರೆ ‘ಇಳೆ(=ಭೂಮಿ)ಯನ್ನು ಕಡೆ’ ಎನ್ನುವ ಅರ್ಥವನ್ನು ಧರಿಸಿದೆ.

ಆದುದರಿಂದ ಒಂದು ‘ನೆಯ್’ ಪದವು ನೆಯ್ಕಾರರಿಗೆ, ಬೆಣ್ಣೆ ಮಾರಾಟ ಮಾಡುವವರಿಗೆ ಹಾಗು ನೇಗಿಲಯೋಗಿ ಒಕ್ಕಲಿಗರಿಗೆ ಜನ್ಮ ಕೊಟ್ಟಿದೆ. ನೇಗಿಲಿಗೆ ಹಲ ಎಂದೂ ಕರೆಯುತ್ತಾರೆ. ನೇಗಿಲನ್ನು ಹೆಗಲ ಮೇಲೆ ಹೊತ್ತ ಬಲರಾಮನು ಹಲಾಯುಧನಾದ. ನಮ್ಮ ಕೃಷ್ಣ-ಕನ್ನಯ್ಯನ ಅಣ್ಣನಾದ ಈ ಬಲರಾಮನು ರೇವಾ(=ಈಗಿನ ನರ್ಮದಾ) ನದಿಯ ದಂಡೆಯ ಮೇಲಿದ್ದ ರೇವಾಪಟ್ಟಣದ ಅರಸುಕುವರಿ ರೇವತಿಯನ್ನು ಮದುವೆಯಾದ. ಕನ್ನಡ ನಾಡು ನರ್ಮದೆಯಿಂದ ಕಾವೇರಿಯವರೆಗೂ ಹಬ್ಬಿತ್ತು ಎನ್ನುವುದನ್ನು ಮುಳಿಯ ತಿಮ್ಮಪ್ಪಯ್ಯ ಹಾಗು ಶಂ. ಬಾ. ಜೋಶಿಯವರು ಸಿದ್ಧ ಪಡಿಸಿದ್ದಾರೆ.

ಕನ್ನಡ ನಾಡಿನಲ್ಲಿ ‘ಹಲ’ ಪದದಿಂದ ಪ್ರಾರಂಭವಾಗುವ ೬೬ ಊರುಗಳಿವೆ. ಉದಾಹರಣೆಗೆ ಹಲಕೂರು, ಹಲಗತ್ತಿ, ಹಲಕುಂಡಿ, ಹಲಗೇರಿ, ಹಲಗಾ, ಹಲಸಂಗಿ, ಹಲಗಣಿ ಇತ್ಯಾದಿ. ಈ ಹಲಗಣಿ ಎನ್ನುವ ಊರಿನ ಹೊರಗೆ ಹನುಮಂತ ದೇವರ ಒಂದು ಗುಡಿಯಿದೆ. (ಊರು ಬೆಳೆದ ಮೇಲೆ ಅದೀಗ ಊರ ಒಳಗೇ ಬಂದಿದೆ.) ಈತನಿಗೆ ‘ಹಲಗಣೀಶ (=ಹಲಗಣಿ ಊರಿನ ಈಶ)’ ಎನ್ನುವ ಅಭಿಧಾನವಿದೆ. ಅನೇಕರು ಹಲಗಣೀಶನನ್ನು ‘ಹಲಗಣೇಶ’ ಎಂದು ತಪ್ಪಾಗಿ ಭಾವಿಸಿ ಹಣಮಪ್ಪನನ್ನು ಗಣಪ್ಪನನ್ನಾಗಿ ಮಾಡಿದ್ದಾರೆ! ಈ ಊರುಗಳು ನೇಗಿಲಿನ ತಯಾರಿಕೆಗೆ ಪ್ರಸಿದ್ಧವಾಗಿರಬಹುದು ಎನ್ನುವ ಕಾರಣದಿಂದ, ಅವುಗಳಲ್ಲಿ ‘ಹಲ’ ಪದವು ಇರಬಹುದೇನೊ?

ಇಂಗ್ಲೀಶಿನಲ್ಲಿ furlong ಎನ್ನುವ ಅಳತೆ ಇದೆಯಷ್ಟೆ. ನೇಗಿಲಿನಿಂದ ಒಂದು furrow ಮಾಡುವಾಗ ಉಂಟಾಗುವ ಅಳತೆಯೇ furlong=furrow+long. ಇದರಂತೆ, ನಮ್ಮಲ್ಲಿ ಹರದಾರಿ ಅಂದರೆ ಒಂದು ದಿನದಲ್ಲಿ ಹರಗಬಹುದಾದ ದಾರಿ ಎನ್ನುವ ಕಾರಣದಿಂದ ಬಂದಿರಬಹುದೆ? (ಒಂದು ಹರದಾರಿ=೪ಕಿಮೀ ಸುಮಾರಾಗಿ). ತಿಳಿದವರು ದಯವಿಟ್ಟು ಈ ವಿಷಯದ ಮೇಲೆ ಬೆಳಕು ಚೆಲ್ಲಲು ವಿನಂತಿಸುತ್ತೇನೆ.

ಟಿಪ್ಪಣಿ :  ನಾನು ದ್ರವಿಡರು ಎನ್ನುವ ಪದವನ್ನು ಬಳಸದೆ, ‘ಆರ್ಯಪೂರ್ವ ಕನ್ನಡಿಗರು’  ಎನ್ನುವ ಪದವನ್ನು ಬಳಸುವುದಕ್ಕೆ ಕೆಲವರು ಹುಬ್ಬೇರಿಸಬಹುದು. ಈ ವಿಷಯಕ್ಕೆ ನನ್ನ ಸಮಾಧಾನ ಈ ರೀತಿಯಾಗಿದೆ:
ಒಂದು ಕಾಲದಲ್ಲಿ ಕನ್ನಡ ಹಾಗು ತಮಿಳು ಭಾಷೆಗಳು ಏಕರೂಪವಾಗಿದ್ದವು. ನಂತರ ಅವು ವಿಭಿನ್ನವಾಗತೊಡಗಿದವು. ಈ ಮೊದಲಿನ ಭಾಷೆಯು ಎರಡೂ ಭಾಷೆಗಳಿಗೆ ಅಂದರೆ ಕನ್ನಡ ಹಾಗು ತಮಿಳು ಭಾಷೆಗಳಿಗೆ ತಾಯಿ ಅಲ್ಲವೆ? ಕನ್ನಡ ಭಾಷೆಯು ಸಂಸ್ಕೃತದ ಸಂಪರ್ಕದಿಂದ ವಿಸ್ತಾರವಾಯಿತು, ಆಧುನಿಕವಾಯಿತು; ತಮಿಳು ಆಗಲಿಲ್ಲ. ಅಂದ ಮೇಲೆ ಆರ್ಯಪೂರ್ವ ಭಾಷೆಗೆ ದ್ರಾವಿಡ ಭಾಷೆ ಎನ್ನದೆ, ‘ಕನ್ನಡ ತಾಯಿ’ ಎಂದು ನಾನು ಕರೆಯುವದರಲ್ಲಿ ಏನು ತಪ್ಪಿದೆ?