Monday, September 26, 2011

ಡೊಂಕು ಬಾಲದ ನಾಯಕರೆ...


ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?

ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!

ಪುರಂದರದಾಸರ ಜನಪ್ರಿಯ ಗೀತೆಯಿದು. ಈ ಗೀತೆಯಲ್ಲಿ ದಾಸರು ಮನುಷ್ಯನ ಮನಸ್ಸನ್ನು ನಾಯಿಯ ಡೊಂಕು ಬಾಲಕ್ಕೆ ಹೋಲಿಸಿದ್ದಾರೆ. ‘ನಾಯಿಯ ಬಾಲ ಲಳಿಗೆಯಲ್ಲಿ ಹಾಕಿದರೂ ಡೊಂಕೇ’ ಎನ್ನುವ ಗಾದೆ ಮಾತು ಇದೆಯಲ್ಲ! ಅದೇ ತರಹ, ಮನುಷ್ಯನ ಮನಸ್ಸೂ ಸಹ ಮತ್ತೆ ಮತ್ತೆ ವಿಷಯಭೋಗಗಳ ಕಡೆಗೇ ಹರಿಯುತ್ತದೆ. ಕಣಕದ ಅಥವಾ ಹುಗ್ಗಿಯ ವಾಸನೆಯನ್ನು ಹಿಡಿದು ಹೋದ ನಾಯಿಗೆ ಒನಕೆಯ ಅಥವಾ ಸವಟಿನ ಪೆಟ್ಟು ತಪ್ಪಿದ್ದಲ್ಲ. ಅದೇ ರೀತಿ ವಿಷಯವಾಸನೆಯನ್ನು ಹಿಡಿದು ಹೋಗುವ ಮನುಷ್ಯನಿಗೂ ಸಹ ವಿಧಿಯ ಪೆಟ್ಟು ತಪ್ಪಿದ್ದಲ್ಲ. ಈ ಪೆಟ್ಟೇ ಮನುಷ್ಯನಿಗೆ ಸಿಗುವ ಊಟ ಅಥವಾ ಕರ್ಮಫಲ! ಇದು ದಾಸರ ಸಂದೇಶ. ಹಾಗೆಂದ ಮಾತ್ರಕ್ಕೆ ಈ ವಿಷಯದಲ್ಲಿ ಮನುಷ್ಯನನ್ನೇ ಸಂಪೂರ್ಣವಾಗಿ ದೂರುವಂತಿಲ್ಲ. ಮನುಷ್ಯನು ಭಗವಂತನ ಸೂತ್ರದ ಗೊಂಬೆ. ಆದುದರಿಂದ ಪುರಂದರ ವಿಠ್ಠಲನು ತೋರಿದ ಆಟಗಳನ್ನು ಈ ಗೊಂಬೆ ಆಡುತ್ತಿದೆ ಎನ್ನುವದು ದಾಸರು ಕೊಡುವ ಸಮಾಧಾನ.

ಪುರಂದರದಾಸರ ಗೀತೆಗಳೆಲ್ಲವೂ ಸರಳ ಗೀತೆಗಳು. ಅವುಗಳಲ್ಲಿಯ ಸಂದೇಶ ಅಥವಾ ನೀತಿಬೋಧೆ ಸರಳವಾಗಿಯೇ ಇರುತ್ತದೆ. ಆದರೆ ‘ಡೊಂಕು ಬಾಲದ ನಾಯಕರೆ’ ಎನ್ನುವ ಈ  ಗೀತೆಯಲ್ಲಿ ಒಂದು ಸ್ವಾರಸ್ಯಕರವಾದ ಶ್ಲೇಷೆ ಇದೆ. ಅದೇ ಈ ಗೀತೆಗೆ ವಿಶೇಷ ಅರ್ಥವನ್ನು ಕೊಡಲು ಕಾರಣವಾಗಿದೆ. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕ ಎನ್ನುವದು ಎಲ್ಲರಿಗೂ ತಿಳಿದ ಸಂಗತಿ. ಈ ಹಾಡಿನ ಪಲ್ಲವಿಯಲ್ಲಿ ‘ಡೊಂಕು ಬಾಲದ ನಾಯಕರೆ’ ಎನ್ನುವ ಪದಪುಂಜವನ್ನು ಗಮನಿಸಿ. ಈ ಸಂಬೋಧನೆಯು ನಾಯಿಯನ್ನು ಉದ್ದೇಶಿಸಿರುವದು ಎನ್ನುವದು ಸಾಮಾನ್ಯ ಅರ್ಥ. ಅದರ ಜೊತೆಗೇ ದಾಸರು ‘ನಾಯಕರೆ’ ಎಂದು ಶ್ರೀನಿವಾಸ ನಾಯಕರನ್ನು ಅಂದರೆ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿರುವದು ಇಲ್ಲಿಯ ವಿಶೇಷಾರ್ಥ. ಬಹುಶಃ ದಾಸರು ತಮಗೆ ತಾವೇ ಹೀಗೆ ಹೇಳಿಕೊಳ್ಳುತ್ತಿರಬಹುದು:

ನಾಯಕಾ, ನೀನು ವೈರಾಗ್ಯವೃತ್ತಿಯನ್ನು ತಾಳಿ ದಾಸನಾದೆ ಎಂದು ಹೇಳಿಕೊಳ್ಳುತ್ತೀಯಾ. ಆದರೆ ನಿನ್ನ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಇದೆ. ಮತ್ತೆ ಮತ್ತೆ ನಿನ್ನ ಮನಸ್ಸು ಸಂಸಾರದ ಸುಖಗಳ ಕಡೆಗೆ ಹರಿಯುತ್ತದೆ. ಇದನ್ನು ನಿಯಂತ್ರಿಸದಿದ್ದರೆ, ನೀನು ಮತ್ತೆ ಮತ್ತೆ ಪೆಟ್ಟು ತಿನ್ನುತ್ತೀಯಾ!
ಭಗವಂತಾ, ವಿಠ್ಠಲಾ! ನನ್ನ ಮನಸ್ಸಿನ ಆಟಗಳೆಲ್ಲಕ್ಕೂ ನೀನೆ ಹೊಣೆ. ನೀನು ಆಡಿಸಿದಂತೆ ನಾನು ಆಡುತ್ತಿದ್ದೇನೆ.

ಆದುದರಿಂದ ‘ನಾಯಕರೆ’ ಎಂದು ಹೇಳುವ ಮೂಲಕ, ದಾಸರು ಈ ಹಾಡನ್ನು  ಕೇವಲ ಪರರಿಗೆ ನೀತಿಬೋಧೆಯನ್ನು ಮಾಡಲು ಹಾಡಿಲ್ಲ, ತಮಗೆ ತಾವೇ ಆತ್ಮಬೋಧೆಗಾಗಿ ಹಾಡಿದ್ದಾರೆ ಎಂದೆನಿಸುವದು.

ಪುರಂದರದಾಸರ ಪರಿವರ್ತನೆಯ ಬಗೆಗಿರುವ ಜನಜನಿತ ಕತೆಯಿಂದಾಗಿ ಅವರ ವ್ಯಕ್ತಿತ್ವದ ಅನೇಕ ಆಯಾಮಗಳು ಮಸುಕಾಗಿ ಹೋಗಿವೆ. ಶ್ರೀನಿವಾಸ ನಾಯಕರು ಪುರಂದರದಾಸರಾಗಿ ಬದಲಾಗುವದಕ್ಕಿಂತ ಮೊದಲಿನಿಂದಲೂ ಸಂಗೀತವಿದ್ವಾಂಸರು, ಅಧ್ಯಯನಶೀಲರು, ಬಹುಶ್ರುತರು ಹಾಗು ದೇವಭಕ್ತರು ಆಗಿರಬೇಕು. ಅವರ ಕೀರ್ತನೆಗಳಲ್ಲಿ ಬರುವ ಕೆಲವು ಸಾಲುಗಳನ್ನು ಗಮನಿಸಿರಿ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ಹೂವ ತರುವರ ಮನೆಗೆ ಹುಲ್ಲ ತರುವ’, ‘ಉದರವೈರಾಗ್ಯವಿದು’,‘ದಾರಿ ಯಾವುದಯ್ಯಾ ವೈಕುಂಠಕೆ’, ‘ಅಲ್ಲಿರುವದು ನಮ್ಮ ಮನೆ, ಇಲ್ಲಿರುವದು ಸುಮ್ಮನೆ’ ಇಂತಹ ಅನೇಕ ಸಾಲುಗಳಲ್ಲಿ, ಗೀತೆಗಳಲ್ಲಿ ದಾಸರ ಸಾಹಿತ್ಯಪ್ರತಿಭೆ ವ್ಯಕ್ತವಾಗುತ್ತದೆ.  

ಪುರಂದರದಾಸರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯಲಾಗುತ್ತಿದೆ. ದಾಸರಾಗುವ ಮೊದಲೂ ಸಹ ಅವರಿಗೆ ಸಾಹಿತ್ಯದಲ್ಲಿ ಹಾಗು ಸಂಗೀತದಲ್ಲಿ ಪರಿಣತಿ ಇರಲೇ ಬೇಕಲ್ಲವೆ? ಇಲ್ಲದೆ ಹೋದರೆ, ಅವರು ತಮ್ಮ ನೂರಾರು ಕೀರ್ತನೆಗಳನ್ನು ರಾಗಬದ್ಧವಾಗಿ ರಚಿಸಲು ಸಾಧ್ಯವಾಗುತ್ತಿರಲಿಲ್ಲ. ದಾಸರಾಗುವ ಪೂರ್ವದಲ್ಲಿ ಶ್ರೀನಿವಾಸ ನಾಯಕರ ಐಹಿಕ ಆಸೆಗಳು ಏನೇ ಇರಲಿ, ಈ ಲೌಕಿಕಕ್ಕೆ ಅವರ ಮನಸ್ಸು ಎಷ್ಟೇ ಕಟ್ಟು ಬಿದ್ದಿರಲಿ, ತಮ್ಮ ಮನೆಯಲ್ಲಿ, ತಮ್ಮ ಮನದಲ್ಲಿ ಅವರು ದೇವರನ್ನು ಶ್ರದ್ಧಾಪೂರ್ವಕವಾಗಿ ಪೂಜಿಸುತ್ತಿರಬಹುದು. ಆ ಸಮಯದಲ್ಲಿ ಸಂಗೀತದ ಮೂಲಕ ದೇವರನ್ನು ಭಜಿಸುತ್ತಿರಬಹುದು. ಅವರ ಕೀರ್ತನೆಯೊಂದನ್ನು ಗಮನಿಸಿದರೆ ಅವರಿಗಿರುವ ಅಪಾರ ಸಂಗೀತಜ್ಞಾನದ ಕಲ್ಪನೆಯಾಗುತ್ತದೆ:

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ
ಮಂಗಳ ನಾಮವ ಪಾಡಿ ರಂಗನ ಕುಣಿಸುವರು
ಪಾಡಿ ಮಲ್ಹಾರಿ ಭೈರವಿ ಸಾರಂಗಿ ದೇಸಿ
ಗುಂಡಕ್ರಿಯೆ ಗುರ್ಜರಿ ಕಲ್ಯಾಣಿ ರಾಗದಿ
ತಂಡ ತಂಡದಲಿ ನೆರೆದು ರಂಗನ ಉಡಿಯ ಘಂಟೆ
ಘಣ ಘಣ್ ಘಣಿರೆಂದು ಹಿಡಿದು ಕುಣಿಸುವರು

ಅವರು ಲೌಕಿಕರಿದ್ದಾಗ ದೇವರ ಪೂಜೆಯನ್ನು ಬಲು ಆಡಂಬರದಿಂದ ನೆರವೇರಿಸುತ್ತಿರಬಹುದು. ಜ್ಞಾನೋದಯವಾದ ಬಳಿಕ ಈ ಆಡಂಬರದ ವ್ಯರ್ಥತೆಯನ್ನು ಅರಿತ ಅವರು ‘ಉದರವೈರಾಗ್ಯವಿದು ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ’ ಎಂದು ಹಾಡಿರಬಹುದು. ಅಷ್ಟೇ ಏಕೆ, ತಾವೇ ಮೊದಲು ಮಾಡುತ್ತಿರಬಹುದಾದ ‘ಮಡಿ ಆಚರಣೆ’ ವ್ಯರ್ಥವೆಂದು ಅರಿತುಕೊಂಡೇ ಅವರು ‘ಮಡಿ ಮಡಿ ಎಂದು ಅಡಿಗಡಿಗೆ ಹಾರುವಿ’ ಎಂದು ‘ಮಡಿವಂತ’ರನ್ನು ಹೀಯಾಳಿಸಿರಬಹುದು.

ಈ ಆಡಂಬರ, ಈ ಮಡಿ ‘ಈ ಆನೆ, ಕುದುರೆ, ಒಂಟೆ ಎಲ್ಲಾ’ ಲೊಳಲೊಟ್ಟೆ ಎಂದು ಶ್ರೀನಿವಾಸ ನಾಯಕರಿಗೆ ಅರಿವಾದದ್ದು ಹೇಗೆ?  ಜನಪ್ರಿಯ ಕತೆಯು ಹೇಳುವಂತೆ ಶ್ರೀನಿವಾಸ ನಾಯಕರು ಜಿಪುಣಾಗ್ರೇಸರರು. ತಮ್ಮ ಹೆಂಡತಿಯು ತನ್ನ ಮೂಗುತಿಯನ್ನು ದಾನವಾಗಿ ಕೊಟ್ಟಿರಬಹುದು ಎನ್ನುವ ಸಂದೇಹದಿಂದ ಅವಳನ್ನು ಪರೀಕ್ಷಿಸುತ್ತಾರೆ. ವಿಷ ತೆಗೆದುಕೊಳ್ಳಲು ಹೋದ ಅವಳಿಗೆ ವಿಷದ ಬಟ್ಟಲಿನಲ್ಲಿ ಮೂಗುತಿ ದೊರೆತುದರಿಂದ, ಆ ವಿಷಮ ಸನ್ನಿವೇಷದಿಂದ ಅವಳು ಪಾರಾಗುತ್ತಾಳೆ. ಇದು ನಾಯಕರ ಮನಃಪರಿವರ್ತನೆಗೆ ಕಾರಣವಾಗುತ್ತದೆ. ಈ ಪವಾಡವು ನಿಜವೆ? ನಿಜವಾಗಿಯೂ ಏನಾಯಿತು ಎನ್ನುವದನ್ನು ಈಗ ತಿಳಿಯಲು ಸಾಧ್ಯವಾಗಲಿಕ್ಕಿಲ್ಲ. ಆದರೆ ಇದರ ಸಂಭಾವ್ಯತೆಗಳನ್ನು ಹೀಗೆ ಊಹಿಸಬಹುದು:

(೧) ಇದು ನಿಜವಾಗಿಯೂ ಆದಂತಹ ಪವಾಡ.
(೨) ಮನೋಚಲನ ಶಕ್ತಿ ಎನ್ನುವದು ಒಂದು ಇದೆ ಎನ್ನುವದನ್ನು ಪರಾಮನೋವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಮೂಗುತಿಯು ಬಟ್ಟಲಿನಲ್ಲಿ ಬಂದಿದ್ದು ಹಾಗು ಮರಳಿ ನಾಯಕರ ತಿಜೋರಿಗೆ ಹೋಗಿದ್ದು ಅವರ ಸಾಧ್ವಿ ಹೆಂಡತಿಯ ಮನೋಚಲನ ಶಕ್ತಿಯಿಂದ ಆಗಿರಬಹುದು.
(೩) ವಿಷಪ್ರಾಶನ ಮಾಡಲು ಉದ್ಯುಕ್ತಳಾದ ಅಥವಾ ಮಾಡಿದಂತಹ ಹೆಂಡತಿಯನ್ನು ಕಂಡು, ನಾಯಕರ ಮನಸ್ಸಿನ ಮೇಲೆ ವಿಪರೀತ ಪರಿಣಾಮವಾಗಿ ಅವರು ಬದಲಾಗಿರಬಹುದು.

ಏನೇ ಆಗಿರಲಿ, ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ಸಂಭವಿಸಿದೆ. ಈ ಘಟನೆಯ ಪರಿಣಾಮವಾಗಿ ಅವರ ಮೊದಲಿನ ವ್ಯಾವಹಾರಿಕ ನಂಬಿಕೆಗಳು ಅಳಿದು, ಅವರಲ್ಲಿ ಆಧ್ಯಾತ್ಮಿಕ ನಂಬಿಕೆಗಳು ಮೂಡಿವೆ. ಈ ತರಹದ ಪರಿವರ್ತನೆಯನ್ನು ರಶಿಯದ ಖ್ಯಾತ ವರ್ತನಾವಿಜ್ಞಾನಿ ಪಾವ್ಲೋವ್(೧೮೪೯-೧೯೩೬) ಗಮನಿಸಿದ್ದಾನೆ. ಆತನ ಪ್ರಯೋಗಶಾಲೆಗೆ ಒಮ್ಮೆ ಪ್ರವಾಹದ ನೀರು ನುಗ್ಗಿದಾಗ, ಅಲ್ಲಿದ್ದ ನಾಯಿಗಳಲ್ಲಿ ಕೆಲವು ಸತ್ತೇ ಹೋದವು. ಬದುಕುಳಿದ ನಾಯಿಗಳಲ್ಲಿದ್ದ ‘ಸಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ(=strong  conditioned reflexes) ನಶಿಸಿ, ದುರ್ಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ (= weak conditioned reflexes) ಮೇಲೆದ್ದವು’ ಎಂದು ಪಾವ್ಲೋವ್ ದಾಖಲಿಸಿದ್ದಾನೆ.

ಒಟ್ಟಿನಲ್ಲಿ ಶ್ರೀನಿವಾಸ ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ನಡೆಯಿತು. ಆಧ್ಯಾತ್ಮವನ್ನು ನಂಬದವರು ಈ ಘಟನೆಯು ಅವರ ಮೊದಲಿನ ನಂಬುಗೆಗಳನ್ನು ಅಂದರೆ ವ್ಯಾವಹಾರಿಕ ಮನೋಭಾವನೆಯನ್ನು ಬದಲಾಯಿಸಿತು ಎಂದು ಹೇಳಬಹುದು. ಆಧ್ಯಾತ್ಮಜೀವನದಲ್ಲಿ ನಂಬುಗೆ ಇದ್ದವರು ಈ ಘಟನೆಯಿಂದಾಗಿ ನಾಯಕರ ಕಣ್ಣು ತೆರೆಯಿತು ಎಂದು ಹೇಳಬಹುದು. ಏನೇ ಆಗಲಿ, ಈ ಆಘಾತಕಾರಿ ಘಟನೆಯಿಂದಾಗಿ ಕನ್ನಡಿಗರಿಗೆ ಓರ್ವ ಶ್ರೇಷ್ಠ ದಾರ್ಶನಿಕ ಮಾರ್ಗದರ್ಶಕರು ದೊರೆತರು, ಕರ್ನಾಟಕ ಸಂಗೀತ ಪಿತಾಮಹ ದೊರೆತರು. ಇದಕ್ಕೆಲ್ಲ ಕಾರಣಳಾದವರು ನಾಯಕರ ಹೆಂಡತಿ.
‘ಹೆಂಡತಿ ಸಂತತಿ ಸಾವಿರವಾಗಲಿ,
ದಂಡಿಗೆ ಬೆತ್ತ ಹಿಡಿಸಿದಳಯ್ಯ’ ಎಂದು ದಾಸರೇ ತಮ್ಮ ಹೆಂಡತಿಯ ಉಪಕಾರವನ್ನು ಸ್ಮರಿಸಿದ್ದಾರೆ.
ಆ ಸಾಧ್ವಿಗೆ ಕನ್ನಡಿಗರು ಚಿರಕೃತಜ್ಞರು.

ಪ್ರತಿಯೊಬ್ಬ ಮಹಾನುಭಾವನ ಹಿಂದೆ ಒಬ್ಬ ಮಹಾನ್ ಸ್ತ್ರೀ ಇರುತ್ತಾಳೆ ಎನ್ನುವ ಮಾತಿಗೆ ಈ ಘಟನೆ ನಿದರ್ಶನವಾದೀತು. ಕೆಲವು ನಗೆಗಾರರು `ದಾರ್ಶನಿಕರಾಗಲು ಮದುವೆಯಾಗಬೇಕು ಎಂದು ಸಾಕ್ರೆಟೀಸನ ಉದಾಹರಣೆ ಕೊಟ್ಟು ಹಾಸ್ಯ ಮಾಡಲೂ ಬಹುದು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲನ್ನು ಓದಿದಾಗ ನನಗೆ ನೆನಪಾಗುವದು ಇಂಗ್ಲೀಶ ಕವನವೊಂದರ ಸಾಲು:
Abou Ben Adhem
(may his tribe increase)
ಲೀ ಹಂಟ್ ಎನ್ನುವ ಇಂಗ್ಲಿಶ್ ಕವಿ ಈ ಕವನವನ್ನು  ಕ್ರಿ. ಶ. ೧೮೩೪ರಲ್ಲಿ ಬರೆದನು. ದಾಸರು ಕ್ರಿ.ಶ. ೧೪೮೪-೧೫೬೪ರಲ್ಲಿ ಬಾಳಿದವರು. ಇಬ್ಬರೂ ಬೇರೆ ಬೇರೆ ದೇಶ ಹಾಗು ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೆಳೆದವರು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲಿಗೂ ‘may his tribe increase ಎನ್ನುವ ಸಾಲಿಗೂ ಎಂಥಾ ಸಾಮ್ಯತೆ ಇದೆಯಲ್ಲವೆ! ಕಾವ್ಯಕ್ಕೆ ಕಾಲ, ದೇಶ ಹಾಗು ಸಂಸ್ಕೃತಿಯ ಭೇದ ಇದ್ದೀತೆ?

ವೈರಾಗ್ಯವನ್ನು ತಾಳಿ, ಸನ್ಯಾಸವನ್ನು ಸ್ವೀಕರಿಸಿದವರು ಅನೇಕರಿದ್ದಾರೆ. ಇವರೆಲ್ಲ ತಮ್ಮ ಸಂಪತ್ತನ್ನು ತಮ್ಮ ಹೆಂಡತಿ, ಮಕ್ಕಳಿಗೆ ಬಿಟ್ಟು ಸನ್ಯಾಸಿಯಾದವರು. ಆದರೆ ಪುರಂದರದಾಸರು ತಾವಷ್ಟೇ ದಾಸರಾಗಲಿಲ್ಲ. ಅವರ ಜೊತೆಗೆ ಅವರ ಹೆಂಡತಿ ಹಾಗು ಮಕ್ಕಳೂ ಸಹ ಗೋಪಾಳಬುಟ್ಟಿಯನ್ನು ಹಿಡಿದರು. ತಾವು ಕಂಡ ಸತ್ಯದ ದಾರಿಯನ್ನು ತಮ್ಮವರೂ ತುಳಿಯಬೇಕು ಎನ್ನುವದು ಸತ್ಯಪ್ರಜ್ಞರ ತಿಳಿವು. ದಾಸರ ಬಳಿಕ ಐದು ಶತಮಾನಗಳ ನಂತರ ಮತ್ತೊಬ್ಬ ಸಂತ ಇಂತಹ ಸತ್ಯನಿಷ್ಠೆಯನ್ನು ತೋರಿಸಿದ. ಆತ ಮೋಹನದಾಸ ಗಾಂಧೀ.

ಪುರಂದರದಾಸರ ಒಂದು ಕೀರ್ತನೆ  ತುಂಬ ಜನಪ್ರಿಯವಾಗಿದೆ. ಪ್ರತಿ ಶುಕ್ರವಾರವೂ ಅನೇಕರು ಈ ಭಜನೆಯನ್ನು ಹಾಡುತ್ತಾರೆ:
ಭಾಗ್ಯದಾ ಲಕ್ಷ್ಮೀ ಬಾರಮ್ಮಾ, ನಮ್ಮಮ್ಮಾ ನೀ ಸೌ-
ಭಾಗ್ಯದಾ ಲಕ್ಷ್ಮೀ ಬಾರಮ್ಮಾ.

ಲೌಕಿಕ ಸಂಪತ್ತೆನ್ನೆಲ್ಲ ಬಿಸುಟು ಹೋದ ದಾಸರು ಯಾವ ಭಾಗ್ಯಲಕ್ಷ್ಮಿಯನ್ನು ಕರೆಯುತ್ತಿರಬಹುದು?
ಕನಕವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ತೋರೆ
ದಿನಕರಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ
ಈ ನುಡಿಯನ್ನು ನೋಡಿದಾಗ ದಾಸರು ಲೌಕಿಕ ಸಂಪತ್ತಿನ ಲಕ್ಷ್ಮಿಯನ್ನು ಕರೆಯುತ್ತಿರಬಹುದೆ ಎನ್ನುವ ಅನುಮಾನ ಬಾರದಿರದು. ಆದರೆ,
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಗೊಂಬೆ”
ಎನ್ನುವ ಸಾಲುಗಳನ್ನು ನೋಡಿದಾಗ, ದಾಸರು ಕರೆಯುತ್ತಿರುವದು ವೈರಾಗ್ಯಲಕ್ಷ್ಮಿಯನ್ನು ಎಂದು ಭಾಸವಾಗುತ್ತದೆ.
‘ಲಂಗೋಟಿ ಬಲು ದೊಡ್ಡದಣ್ಣ’ ಎಂದು ಹಾಡಿದ ದಾಸರು, ತಾವು ತ್ಯಜಿಸಿದ ಸಿರಿ ಸಂಪತ್ತನ್ನು ವಿಜೃಂಭಿಸಿ ಕೀರ್ತಿಸುವದು ಸಾಧ್ಯವಿಲ್ಲ. ಏನೇ ಆಗಲಿ, ಅವರವರ ಭಾವಕ್ಕೆ ತಕ್ಕಂತಹ ಫಲ ಅವರವರಿಗೆ ಲಭಿಸುತ್ತದೆ. ಆದುದರಿಂದ ಲೌಕಿಕ ಸಂಪತ್ತನ್ನು ಬಯಸುವವರು ದಾಸರ ಗೀತೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವದು ಶ್ರೇಯಸ್ಕರ:

ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?

ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!

Sunday, August 28, 2011

ಸಂಭವಾಮಿ ಯುಗೇ ಯುಗೇ


ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ನಡೆಯಿಸುತ್ತಿರುವ ನಾಗರಿಕ ಆಂದೋಲನಕ್ಕೆ ಮೊದಲ ಹಂತದ ಜಯ ಲಭಿಸಿದೆ. ಇದು ಅರ್ಧ ಜಯ ಮಾತ್ರ ಎಂದು ಅಣ್ಣಾ ಎಚ್ಚರಿಕೆ ನೀಡಿದ್ದಾರೆ. ಯಾಕೆಂದರೆ ನಮ್ಮ ದುಃಶಾಸಕರು ಯಾವ ಧೂರ್ತ ರೀತಿಯಿಂದ ನಾಗರಿಕ ಆಂದೋಲನವನ್ನು ಭಗ್ನಗೊಳಿಸಬಹುದು ಎನ್ನುವದನ್ನು ಯಾರೂ ಹೇಳಲಾರರು.

ಭಾರತದಲ್ಲಿ ಪುರಾಣಕಾಲದಿಂದಲೂ ನಾಗರಿಕ ಆಂದೋಲನಗಳು ನಡೆದಿವೆ. ಬಹುಶ: ಶ್ರೀಕೃಷ್ಣನೇ ಭಾರತದ ನಾಗರಿಕ ಆಂದೋಲನಗಳ ಹರಿಕಾರ ಎನ್ನಬಹುದು. ತನ್ನ ಎಳೆಯ ವಯಸ್ಸಿನಲ್ಲಿಯೇ ಕೃಷ್ಣನು ಗೋಕುಲದ ನಿವಾಸಿಗಳಿಗೆ ಇಂದ್ರ ಮೊದಲಾದ ವೈದಿಕ ದೇವತೆಗಳ ಪೂಜೆಯ ಬದಲಾಗಿ ವೃಕ್ಷಪೂಜೆ ಹಾಗು ಗಿರಿಪೂಜೆಗಳಂತಹ ಅವೈದಿಕ ಪೂಜೆಗೆ ಮರಳಲು ಬೋಧಿಸಿದನು. ಇದರಿಂದ ಮುನಿದ ಇಂದ್ರನು ಗೋಕುಲವಾಸಿಗಳ ವಿರುದ್ಧ ಯುದ್ಧ ಸಾರಿದಾಗ, ತನ್ನೆಲ್ಲ ಬೆಂಬಲಿಗರೊಡನೆ ಕೃಷ್ಣನು ಗೋವರ್ಧನ ಗಿರಿಯ ಗುಹೆಗಳ ಆಶ್ರಯ ಪಡೆದು, ಇಂದ್ರನ ಮೇಲೆ ವಿಜಯ ಸಾಧಿಸಿದನು. ಇದು ಸ್ಥಾಪಿತ ವ್ಯವಸ್ಥೆಯ ವಿರುದ್ಧ ನಡೆದ ಪ್ರಥಮ ನಾಗರಿಕ ಆಂದೋಲನ. ಪ್ರಥಮ ಆಂದೋಲನದಲ್ಲಿ ಸಫಲನಾದ ಕೃಷ್ಣನು ತನ್ನ ವೈರಿಗಳ ವಿರುದ್ಧ ಹೋರಾಡಲಾರದೆ ಸೋತು ಹೋಗುತ್ತಾನೆ. ಹೀಗೆ ಸೋತು ಹೋದ ಕೃಷ್ಣನು ಮಥುರಾಪಟ್ಟಣದಿಂದ ತನ್ನ ಸಹಚರರೊಡನೆ ಪಲಾಯನಗೈದು, ಸುಮಾರು ಸಾವಿರ ಕಿಲೋಮೀಟರಗಳಷ್ಟು ದೂರದಲ್ಲಿರುವ ಪಶ್ಚಿಮತೀರದಲ್ಲಿ ದ್ವಾರಕಾಪಟ್ಟಣವನ್ನು ನಿರ್ಮಿಸುವದು ಈ ನಾಗರಿಕ ಆಂದೋಲನದ ಎರಡನೆಯ ಭಾಗವಾಗಿದೆ.

ಈ ರೀತಿಯಾಗಿ ಕೃಷ್ಣನೇ ಭಾರತದ ಪ್ರಪ್ರಥಮ ನಾಗರಿಕ ಆಂದೋಲನಕಾರ ಎನ್ನಬಹುದು. ತನ್ನ ನಂತರವೂ ಸಹ ಅನಿಷ್ಟ ವ್ಯವಸ್ಥೆಯ ವಿರುದ್ಧ ನಾಗರಿಕ ಆಂದೋಲನಗಳು ನಡೆಯುತ್ತಲೇ ಇರುತ್ತವೆ ಎನ್ನುವದನ್ನು ಕೃಷ್ಣನು ಗ್ರಹಿಸಿರಬಹುದು. ಆದುದರಿಂದಲೇ ಆತನು ತನ್ನ ಸಹಚರನಾದ ಅರ್ಜುನನಿಗೆ ಈ ರೀತಿ ಆಶ್ವಾಸನೆ ನೀಡಿದ್ದಾನೆ:

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||


ಕೃಷ್ಣನ ನಂತರವೂ ಭಾರತದಲ್ಲಿ ನಾಗರಿಕ ಆಂದೋಲನಗಳು ಜರುಗಿವೆ. ಶೂದ್ರಕನು ರಚಿಸಿದ ಮೃಚ್ಛಕಟಿಕಮ್ ಸಂಸ್ಕೃತ ನಾಟಕದ ಕೊನೆಯಲ್ಲಿ ಸಾಮಾನ್ಯ ಪ್ರಜೆಗಳು ( -ಹಿಂದುಳಿದವರು ಎಂದು ಯಾರಿಗೆ ಕರೆಯಲಾಗುತ್ತಿದೆಯೊ ಅಂಥವರು-) ರಾಜನ ವಿರುದ್ಧ ಬಂಡಾಯವೆದ್ದು, ಆತನನ್ನು ಪಟ್ಟದಿಂದ ಕೆಳಗಿಳಿಸಿದ ಪ್ರಸಂಗವಿದೆ. ಈ ನಾಗರಿಕ ಆಂದೋಲನವು ವಾಸ್ತವವಾದದ್ದೊ ಅಥವಾ ನಾಟಕಕಾರನ ಬಯಕೆಯ ಕಲ್ಪನೆಯೊ ತಿಳಿಯದು!

ಕನ್ನಡ ನಾಡಿನಲ್ಲಿಯೇ ನಡೆದ ಶರಣಚಳುವಳಿಯಂತೂ ನಮ್ಮ ಹೃದಯಕ್ಕೆ ಅತ್ಯಂತ ಹತ್ತಿರವಾದ ನಾಗರಿಕ ಆಂದೋಲನ. ಆ ಕಾಲದಲ್ಲಿ ಹುಟ್ಟಿ, ಶರಣಚಳುವಳಿಯಲ್ಲಿ ಭಾಗವಹಿಸಿದವರೇ ಭಾಗ್ಯವಂತರು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಇವರನ್ನು ಕಣ್ಣಾರೆ ಕಂಡವರು, ಇವರ ಉಪದೇಶವನ್ನು ಮನನ ಮಾಡಿಕೊಂಡು ಶರಣರಾಗಿ ಬಾಳಿದವರೇ ನಿಜವಾದ ಪುಣ್ಯವಂತರು. ದುರ್ದೈವದಿಂದ ಈ ನಾಗರಿಕ ಆಂದೋಲನವು ಹಿಂಸಾತ್ಮಕವಾಗಿ ಕೊನೆಯಾಯಿತು. ಆದರೆ ಬಸವಣ್ಣನವರು ಹೊತ್ತಿಸಿದ ಜ್ಯೋತಿ ಶರಣರ ಹೃದಯದಿಂದ ಆರಿಹೋಗಲಿಲ್ಲ. ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ? ಎಂದು ಬಸವಣ್ಣನವರು ಉದ್ಘೋಷಿಸಿದಂತೆ ಆ ಜ್ಯೋತಿ ನಮ್ಮ ಕತ್ತಲನ್ನು ಇನ್ನೂ ದೂರಮಾಡುತ್ತಲೇ ಇದೆ.

ವಿಶ್ವದಲ್ಲಿಯ ಎಲ್ಲ ಆಧುನಿಕ ನಾಗರಿಕ ಆಂದೋಲನಗಳಿಗೆ ಮೂಲರೂಪವಾಗಿದ್ದು ಗಾಂಧೀಜಿವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಿಸಿದ ನಾಗರಿಕ ಆಂದೋಲನ. ಸವಿನಯ ಕಾಯದೆಭಂಗ, ಧರಣಿ, ಉಪವಾಸ ಸತ್ಯಾಗ್ರಹ ಇವೆಲ್ಲ ದಕ್ಷಿಣ ಆಫ್ರಿಕಾದಲ್ಲಿ  ಗಾಂಧೀಜಿಯವರಿಂದಲೇ ರೂಪಗೊಂಡವು.  ಈ ಅಹಿಂಸಾತ್ಮಕ ಅಸ್ತ್ರಗಳನ್ನೇ ನಂತರ ಭಾರತದಲ್ಲಿ ಹಾಗು ವಿಶ್ವದ ಇತರ ಕಡೆಗಳಲ್ಲೂ ಬಳಸಲಾಯಿತು. ಅಮೇರಿಕಾದಲ್ಲಿಯ ಮಾರ್ಟಿನ್ ಲೂಥರ ಕಿಂಗ ಅವರ ನಾಗರಿಕ ಆಂದೋಲನಗಳು ಸಹ (೧೯೫೯-೬೮) ಗಾಂಧೀಜಿಯವರ ಅಹಿಂಸೆ ಹಾಗು ಭ್ರಾತೃತ್ವದ ನೀತಿಯನ್ನೇ ಅವಲಂಬಿಸಿದೆ.

ಅದರಂತೆಯೇ ಪೋಲ್ಯಾಂಡಿನಲ್ಲಿ ಲೆಕ್ ವ್ಯಾಲೇಸಾ ಅವರ `Solidarity' ಆಂದೋಲನವೂ ಸಹ (೧೯೮೦) ಗಾಂಧೀಜಿಯವರ ನಾಗರಿಕ ಆಂದೋಲನದ ಅಸ್ತ್ರಗಳನ್ನು ಬಳಸಿ ಯಶಸ್ವಿಯಾಯಿತು. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಸಹ ಸಶಸ್ತ್ರ ಆಂದೋಲನವನ್ನು ತ್ಯಜಿಸಿ, ಅಹಿಂಸಾತ್ಮಕ ನಾಗರಿಕ ಆಂದೋಲನವನ್ನೇ ಅಪ್ಪಿಕೊಂಡರು.

ಸ್ವತಂತ್ರ ಭಾರತದಲ್ಲಿ ನಡೆದ ನಾಗರಿಕ ಆಂದೋಲನಗಳಲ್ಲಿ ಜಯಪ್ರಕಾಶ ನಾರಾಯಣರ ನಾಗರಿಕ ಆಂದೋಲನವು (೧೯೭೪-೭೭) ಅತ್ಯಂತ ಪ್ರಮುಖವಾದದ್ದು. ಸರ್ವಾಧಿಕಾರದತ್ತ ಸಾಗಿದ್ದ ಇಂದಿರಾ ಗಾಂಧಿಯವರನ್ನು ಸಿಂಹಾಸನದಿಂದ ಕೆಳಗಿಸಿದ ಆಂದೋಲನವಿದು!

೧೯೮೫ರಲ್ಲಿ ಮೇಧಾ ಪಾಟಕರ ಅವರು ಪ್ರಾರಂಭಿಸಿದ ‘ನರ್ಮದಾ ಬಚಾವೋ’ ಆಂದೋಲನವು ಇನ್ನೂ ಮುಕ್ತಾಯವಾಗಿಲ್ಲ. ಅಲ್ಲಿಯ  ಹೋರಾಟವು ಇನ್ನೂ ನಡೆದಿದೆ.

ಇದೀಗ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ನಾಗರಿಕ ಆಂದೋಲನ ನಡೆದಿದೆ. ಈ ಆಂದೋಲನಕ್ಕೆ ಇಡೀ ದೇಶವೇ ಬೆಂಬಲವನ್ನು ಸೂಚಿಸುತ್ತಿದೆ. ಆದರೆ ಅಗಸ್ಟ ೨೭ರಂದು ಜರುಗಿದ ಚರ್ಚೆಯಲ್ಲಿ ಲೋಕಸಭೆಯ ಅನೇಕ ಸದಸ್ಯರು ಅಣ್ಣಾ ಹಜಾರೆಯವರನ್ನು ವೈಯಕ್ತಿಕವಾಗಿ ದೂಷಿಸಿ ತಮ್ಮ ಸಂಸ್ಕೃತಿಯ ಮಟ್ಟವನ್ನು ಪ್ರದರ್ಶಿಸಿದರು. ಶಾಸಕರೂ ಸಹ ಲೋಕಪಾಲರ ಪರಿಶೀಲನೆಗೆ ಒಳಪಡಬೇಕು ಎನ್ನುವ ಅಂಶವನ್ನು ಯಾವ ಶಾಸಕರೂ ಒಪ್ಪಲಿಲ್ಲ. ಯಾವ ಕಳ್ಳನು ತಾನೆ ಪೋಲೀಸರ ಪರಿಶೀಲನೆಗೆ ಒಳಪಡಲು ಒಪ್ಪಿಕೊಳ್ಳುತ್ತಾನೆ?! ರಾಹುಲ ಗಾಂಧಿ ಹಾಗು ಇತರ ಕೆಲವು ಶಾಸಕರಂತೂ ಲೋಕಪಾಲ ಶಾಸನದಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುವದಿಲ್ಲ ಎಂದು ಸಾರುತ್ತಿದ್ದಾರೆ. ಇದು ಅವರ ಅಪೇಕ್ಷೆ ಎಂದಷ್ಟೇ ಹೇಳಬಹುದು!

ಭಾರತದ ಲೋಕಸಭೆಯಲ್ಲಿ ತುಂಬಿದ ಭ್ರಷ್ಟಾಚಾರದ ಕತ್ತಲನ್ನು ದೂರ ಮಾಡಲು ಅಣ್ಣಾ ಹಜಾರೆ ಶ್ರಮಿಸುತ್ತಿದ್ದಾರೆ. ಅವರ ಕನಸು ಇಂದಲ್ಲ ನಾಳೆ ನನಸಾದೀತು.
‘ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?’

Saturday, August 13, 2011

ಕರಡಿ ಕುಣಿತ............ದ.ರಾ.ಬೇಂದ್ರೆ

ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾವಾ ಬಂದಾನ.
ಗುಣುಗುಣು ಗುಟ್ಟುತ, ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ.

                                    ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
                                    ಜಾಂಬುವಂತನ ಹಿಡಿದು ತಂದಾನ
                                    ‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
                                    ಧಣಿ ದಾನ ಕೊಡುವನು’ ಅಂದಾನ

  ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ
  ಕಲಿಯುಗದ ಕಲ್ಕೀನ ಕಂಡಾನ
  ಜಾಂಬುನದಿ ತೀರದ ಜಂಬುನೀರಲ ಹಣ್ಣು
  ಕೃತಯುಗದ ಕೊನೆಗೀವಾ ಉಂಡಾನ

ಬಂದಾರ ಬರ್ರೆವ್ವ, ಕಂದನ ತರ್ರೆವ್ವ
ಅಂಜೀಕಿ ಗಿಂಜೀಕಿ ಕೊಂದಾನ
ರೋಮರೋಮಗಳಲ್ಲಿ ಭೀಮರಕ್ಷಿಯ ಬಲ
ಕೊರಳಾಗ ಕೊಟ್ಟಿರಿ ಒಂದಾನ

  ‘ಕುಣಿಯಲೆ ಮಗನ ನೀ’ ಅನ್ನೋದೊಂದೆ ತಡ
  ತನ್ನsನ ತಾsನನ ತಂದಾs
  ಮುದ್ದುಕೂಸಿನ ಹಾಗೆ ಮುಸುಮುಸು ಮಾಡುತ್ತ
  ಕುಣಿದಾನ ಕುಣಿತವ ಛಂದಾನ

ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು
ನಡೆದಾನ ಪಡೆದಾನ ಬಂಧಾs
`ಕುಣಿಸುವವರ ಹೊಟ್ಟಿ ತಣ್ಣಗಾಗಲಿ’ ಎಂದು
ಮುಗಿಲಿಗೆ ಕೈಮುಗಿದು ನಿಂದಾನ

  ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ
  ಪ್ರಾಣದ ಈ ಪ್ರಾಣಿ ಹಿಂದಾs
  ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ
  ಪರಮಾರ್ಥ ಎಂಬಂತೆ ಬಂದಾನ

ಈ ಮನುಷಾ ಎಂದಿಂದೊ ಕವಲೆತ್ತು, ಕೋಡಗ
ತನಗಾಗಿ ಕುಣಿಸುತ್ತ ನಡೆದಾನ
ಕರಡಿ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ.            
……………………………………………………………………………
೧೯ನೆಯ ಶತಮಾನದಲ್ಲಿ ಬಾಳಿದ ಸಂತ ಶರೀಫರಿಗೂ, ೨೦ನೆಯ ಶತಮಾನದಲ್ಲಿ ಬಾಳಿದ ಬೇಂದ್ರೆಯವರಿಗೂ ಒಂದು ಸಾಮ್ಯವಿದೆ. ಇವರೀರ್ವರೂ ಜನರಿಗಾಗಿ, ಜನರ ನಡುವೆ ಹಾಡಿದ ಕವಿಗಳು. ಈರ್ವರೂ ಒಂದು ಸಾಮಾನ್ಯ ಘಟನೆಯನ್ನು ವರ್ಣಿಸುತ್ತ ಅದರಲ್ಲಿಯ ಅಸಾಮಾನ್ಯ ತಿರುಳನ್ನು ಬೋಧಿಸುತ್ತಿದ್ದರು. ಇವರೀರ್ವರ ನಡುವಿನ ಭೇದವೆಂದರೆ ಶರೀಫರು ಸಂತಕವಿಗಳು, ಬೇಂದ್ರೆಯವರು ಲೋಕಕವಿಗಳು.

 ‘ಸರಳತೆ’ಯು ಲೋಕಕವಿಯಾದ ಬೇಂದ್ರೆಯವರ ಅನೇಕ ಕವನಗಳ ಲಕ್ಷಣವಾಗಿದೆ. ಆಡಂಬರದ ಸಂಸ್ಕೃತಾಲಂಕಾರ ಅವರ ಕವನಗಳಲ್ಲಿ ಕಾಣಸಿಗದು. ಒಂದು ರೀತಿಯಲ್ಲಿ ಇದು  ಅವರ ಶೈಲಿಯ ದೌರ್ಬಲ್ಯ ಎನ್ನಬಹುದೇನೊ? ಏಕೆಂದರೆ ಬಗೆಬಗೆಯ ಸಂಸ್ಕೃತ ಪದಗಳಿಂದ ಅಲಂಕಾರಗೊಂಡ ಕಾವ್ಯವು `ಸುಲಭ ಓದುಗನನ್ನು ಮರಳು ಮಾಡುವಂತೆ, ಸರಳ ದೇಸಿ ಪದಗಳ ಕವನಗಳು ಮಾಡಲಾರವು.  ಬೇಂದ್ರೆಯವರ ಕವನಗಳನ್ನು ಸಹಜಸೌಂದರ್ಯದ ನಿರಾಭರಣ ಸುಂದರಿಗೆ ಹೋಲಿಸಬಹುದು. ನಿಜವಾದ ರಸಿಕಹಂಸರೇ ಈ ಕವನಗಳ ಚೆಲುವನ್ನು ಸವಿಯಬಲ್ಲರು.

‘ಕರಡಿ ಕುಣಿತ’ವು ಬೇಂದ್ರೆಯವರ ‘ಸರಳ ಕವನ’ಗಳಲ್ಲೊಂದು. ಕವನವನ್ನು ಓದುತ್ತ ಹೋದಂತೆ, ಈ ಸರಳ ಕವನದ ಒಡಲಲ್ಲಿರುವ ಶೋಷಣೆಯ ಸಂಕೀರ್ಣತೆಯು ಓದುಗರ ಗಮನಕ್ಕೆ ಬಾರದಿರಲಾರದು.

 ‘ಕರಡಿ ಕುಣಿತ’ ಕವನದ ಮೊದಲ ನುಡಿಯನ್ನು ಗಮನಿಸೋಣ.
ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾವಾ ಬಂದಾನ.
ಗುಣುಗುಣು ಗುಟ್ಟುತ, ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ.
ಕರಡಿಯನ್ನು ಆಡಿಸುವವನ ಚಿತ್ರಣದಿಂದ ಈ ಕವನ ಪ್ರಾರಂಭವಾಗುತ್ತದೆ. ನೋಡುಗನ ಕಣ್ಣಿಗೆ ಮೊದಲು ಕಾಣುವದು ಇವನ ಉಡುಗೆ-ತೊಡುಗೆ. ಈ ವೇಷಭೂಷಣಗಳು ಇವನ ವ್ಯಕ್ತಿತ್ವದ ಪ್ರತೀಕಗಳೂ ಆಗಿವೆ. ಈತನು ಹೆಗಲ ಮೇಲೆ ಕರಿಯ ಕಂಬಳಿಯನ್ನು ಹೊದ್ದುಕೊಂಡಿದ್ದಾನೆ ಹಾಗು ಮಣಿಕಟ್ಟಿನಲ್ಲಿ ಕಬ್ಬಿಣದ ಕಡಗವನ್ನು  ತೊಟ್ಟುಕೊಂಡಿದ್ದಾನೆ. ಅಲ್ಲದೆ ಕೈಯಲ್ಲಿ ಕುಣಿಗೋಲನ್ನೊಂದನ್ನು ಹಿಡಿದುಕೊಂಡಿದ್ದಾನೆ. ಇದು ಕರಡಿಯನ್ನು ತಿವಿಯಲು ಅವನು ಬಳಸುವ ಉಪಕರಣ. ಜೊತೆಗೆ ಕರಡಿಯದೇ ಕೂದಲುಗಳ ಗುಚ್ಛವೊಂದು ಅವನ ಮತ್ತೊಂದು ಕೈಯಲ್ಲಿ. ಇವೆಲ್ಲವು ಈ ಮನುಷ್ಯನ ನಿಷ್ಕರುಣತೆಯನ್ನು ಗಾಢವಾಗಿ ಬಿಂಬಿಸುತ್ತವೆ. ನೋಡುಗರನ್ನು ಆಕರ್ಷಿಸಲು ಈತ ಕಡಗವನ್ನು ಕುಟ್ಟುತ್ತ, ಏನೇನೋ ಗುಣುಗುಟ್ಟುತ್ತ ಕರಡಿಯನ್ನು ಆಡಿಸಲು ಬರುತ್ತಿದ್ದಾನೆ. ಈತನ ಕರ್ಕಶ ವ್ಯಕ್ತಿತ್ವವನ್ನು ನೋಡಿದಾಗ ಕವಿಯ ಮನಸ್ಸು ಕರಡಿಯ ಅಸಹಾಯಕ ಸ್ಥಿತಿಯನ್ನು ಚಿಂತಿಸುತ್ತದೆ. (ಈ ನುಡಿಯ ಸಾಲುಗಳಲ್ಲಿ ಪ್ರಧಾನವಾಗಿರುವ ‘ಕ’ಕಾರವು ಕರ್ಕಶತೆಯನ್ನು ಧ್ವನಿಸುವದನ್ನು ಗಮನಿಸಬೇಕು.)

ಎರಡನೆಯ ನುಡಿ:
ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನ
‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
ಧಣಿ ದಾನ ಕೊಡುವನು’ ಅಂದಾನ
ಅಡವಿಯಲ್ಲಿ ಸ್ವತಂತ್ರವಾಗಿ ಬದಕುತ್ತಿದ್ದ ಪ್ರಾಣಿ ಈ ಕರಡಿ. ಹೇರಳವಾಗಿ ಸಿಗುವ ಜೇನುತುಪ್ಪವನ್ನು ಮೆಲ್ಲುತ್ತ ನೆಮ್ಮದಿಯಿಂದ ಜೀವಿಸುತ್ತಿದ್ದ ಜೀವಿಯಿದು. ಅಲ್ಲದೆ, ಕರಡಿಯೆಂದರೇನು ಸಾಮಾನ್ಯ ಪ್ರಾಣಿಯೆ? ಇದು ಜಾಂಬುವಂತ. ಪರಮಾತ್ಮನು ರಾಮಾವತಾರ ಎತ್ತಿದಾಗ ಅವನಿಗೆ ನೆರವು ನೀಡಿದ ಪ್ರಾಣಿ. ಕೃಷ್ಣಾವತಾರದಲ್ಲಿ ಭಗವಂತನೊಡನೆಯೇ ಸೆಣಸಾಡಿಸಿದಂತಹ ಬಲಿಷ್ಠ ಪ್ರಾಣಿ. ಇದೀಗ ಮಾನವನ ಕುಟಿಲ ಜಾಲದಲ್ಲಿ ಸೆರೆಯಾಗಿ ಅವನ ಕೈಗೊಂಬೆಯಾಗಿದೆ. ಇಂತಹ ಪ್ರಾಣಿಗೆ ಈ ಮಾನವನ ತುಚ್ಛ ಆದೇಶವೇನು?---‘ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ’ ಎನ್ನುವ ಗುಲಾಮಗಿರಿಯ ಆದೇಶ! ಇದಕ್ಕೆ ಪ್ರತಿಫಲವೆಂದರೆ ಧಣಿ ಬಿಸಾಕುವ ‘ದಾನ’. ಈ ದಾನ ದೊರೆಯುವದೂ ಸಹ ಕುಣಿಸುವವನಿಗೇ! ಎಂತಹ ಹೃದಯವಿದ್ರಾವಕ ಚಿತ್ರವಿದು!


ಮೂರನೆಯ ನುಡಿ:
ತ್ರೇತಾಯುಗ ರಾಮನ್ನ, ದ್ವಾಪರದ ಕೃಷ್ಣನ್ನ
ಕಲಿಯುಗದ ಕಲ್ಕೀನ ಕಂಡಾನ
ಜಾಂಬುನದಿ ತೀರದ ಜಂಬುನೀರಲ ಹಣ್ಣು
ಕೃತಯುಗದ ಕೊನೆಗೀವಾ ಉಂಡಾನ
ಕೃತಯುಗ ಅಥವಾ ಸತ್ಯಯುಗದಲ್ಲಿ ಎಲ್ಲ ಜೀವಿಗಳು ನಿಸರ್ಗಸಹಜ ಜೀವನ ನಡೆಯಿಸುತ್ತಿದ್ದರು. ಈ ಯುಗದ ಅಂತ್ಯದವರೆಗೆ ಜಾಂಬುವಂತನು ಅಂದರೆ ಕರಡಿಯು ಜಾಂಬುನದಿಯ ದಂಡೆಯ ಮೇಲೆ ಬೆಳೆಯುತ್ತಿದ್ದ ಜಂಬುನೀರಲ ಹಣ್ಣುಗಳನ್ನು ತಿಂದು ಜೀವಿಸುತ್ತಿತ್ತು. ಆನಂತರದ ತ್ರೇತಾಯುಗ, ದ್ವಾಪರಯುಗ ಹಾಗು ಕಲಿಯುಗಗಳಲ್ಲಿ ಭಗವಂತನು ರಾಮಾವತಾರ, ಕೃಷ್ಣಾವತಾರ ಹಾಗು ಕಲ್ಕಿಯ ಅವತಾರಗಳನ್ನು ಎತ್ತಿ ದುಷ್ಟಸಂಹಾರ ಮಾಡಿದನು. ಇವು ನಾಗರಿಕ ಯುಗಗಳಾಗಿದ್ದುದರಿಂದ ಜಾಂಬುವಂತನು ನಿಸರ್ಗಸಹಜ ಜೀವನಕ್ಕೆ ಕೊನೆ ಹಾಡಿದನು. ಈ ಎಲ್ಲ ಯುಗಗಳನ್ನು ಕಂಡವನಾದುದರಿಂದ ಜಾಂಬುವಂತನು ಪುರಾಣಪುರುಷನು.

[ಟಿಪ್ಪಣಿ: ಹಿಮಾಲಯಪರ್ವತಶ್ರೇಣಿಯ ಭಾಗವಾದ ಕೈಲಾಸ ಶಿಖರದ ಸಮೀಪದಲ್ಲಿರುವ ಮಾನಸ ಸರೋವರದ ಸುತ್ತಲೂ ಏಳು ದ್ವೀಪಗಳಿವೆ ಎಂದು ಪುರಾಣಗಳು ಹೇಳುತ್ತವೆ. ಇವು ಬಹುಶಃ ಏಳು ಖಂಡಗಳು. ದಕ್ಷಿಣ ದಿಕ್ಕಿನಲ್ಲಿರುವ ಖಂಡಕ್ಕೆ ಜಂಬೂದ್ವೀಪ (=ಭಾರತ) ಎಂದು ಕರೆಯುತ್ತಾರೆ. ಈ ಜಂಬೂದ್ವೀಪದಲ್ಲಿ ಹರಿಯುತ್ತಿರುವ ನದಿಯೇ ಜಾಂಬುನದಿ. ಅಲ್ಲಿಯ ನಿವಾಸಿಗಳು ಜಾಂಬುವಂತರು. ಇವರೇ ಭಾರತದ ಮೂಲನಿವಾಸಿಗಳು. ಈ ನದೀತೀರದಲ್ಲಿ ಬೆಳೆಯುವ ವೃಕ್ಷಗಳು ಜಂಬು ನೀರಲ ವೃಕ್ಷಗಳು. ಜಾಂಬುವಂತರು ಈ ಮರದ ನೀರಲ ಹಣ್ಣುಗಳನ್ನು ತಿಂದು ಬದಕುತ್ತಿದ್ದರು. ಮಾನಸ ಸರೋವರದ ನಡುವಿನಲ್ಲಿಯೂ ಸಹ ಒಂದು ಬೃಹತ್ ಜಂಬೂವೃಕ್ಷ ಅಂದರೆ ನೀರಲ ಮರವಿದೆ. ಇದರಿಂದ ಬೀಳುವ ಜಂಬೂಫಲಗಳನ್ನು ಅಲ್ಲಿಯ ವಾಸಿಗಳಾದ ‘ನಾಗ’ರು ತಿಂದು ಜೀವಿಸುತ್ತಿದ್ದರು. ಸ್ವತಂತ್ರವಾಗಿ ಬಾಳುತ್ತಿದ್ದ ಈ ಆದಿವಾಸಿಗಳು ಆಯುಧಕುಶಲವಾದ ಜನಾಂಗಕ್ಕೆ ಸೋತು ಆಳಾಗಿ ಬಾಳಬೇಕಾಯಿತು.

ಜಂಬುದ್ವೀಪದಲ್ಲಿರುವ ಜಾಂಬುನದಿಯ ದಂಡೆಗಳಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಜಂಬುನೀರಲ ಹಣ್ಣುಗಳನ್ನು ತಿನ್ನುತ್ತ ಈ ಜಾಂಬುವಂತರು ಸ್ವತಂತ್ರವಾಗಿ, ಸುಖವಾಗಿ ಇರುತ್ತಿದ್ದರು. ಇದು ಕೃಷಿ ಸಂಸ್ಕೃತಿಗಿಂತಲೂ ಮೊದಲಿನ ಜೀವನಪದ್ಧತಿಯನ್ನು ಸೂಚಿಸುತ್ತದೆ. ಈ ಯುಗದ ಅಂದರೆ ಕೃತಯುಗದ ಲಕ್ಷಣವೇನು? ಈ ಯುಗದಲ್ಲಿ ಕಬ್ಬಿಣದ ಆವಿಷ್ಕಾರವಾಗಿರಲಿಲ್ಲ. ಆದುದರಿಂದ ಕೃಷಿಸಂಸ್ಕೃತಿಯೂ ಪ್ರಾರಂಭವಾಗಿರಲಿಲ್ಲ. ಸಸ್ಯಾಹಾರಿಗಳು ಗಡ್ಡೆ ಗೆಣಸುಗಳನ್ನು ಹಾಗು ಹಣ್ಣು ಹಂಪಲಗಳನ್ನು ತಿಂದು ಬದಕುತ್ತಿದ್ದರು. ಈ ಯುಗದಲ್ಲಿ ‘ಗುಂಪು ಜೀವನ’ವಿತ್ತು. ಯಾವುದೇ ಒಬ್ಬ ವ್ಯಕ್ತಿಯ ಆಳ್ವಿಕೆ ಪ್ರಾರಂಭವಾಗಿರಲಿಲ್ಲ; ಹಾಗು ಈ ಯುಗದ ಮನುಷ್ಯರು ‘ಆಟವಿಕರು’, ಅಂದರೆ ಅಡವಿಯ ನಿವಾಸಿಗಳು.

ಈ ನಿಸರ್ಗಸಹಜ ಜೀವನ ಕೊನೆಗೊಂಡಿದ್ದು ಕೃತಯುಗದ ಅಂದರೆ ಸತ್ಯಯುಗದ ಕೊನೆಯಲ್ಲಿ. ಸತ್ಯಯುಗದ ಬಳಿಕ ಬಂದದ್ದು ತ್ರೇತಾಯುಗ, ಆನಂತರ ಬಂದದ್ದು ದ್ವಾಪರ ಯುಗ. ತ್ರೇತಾಯುಗದಲ್ಲಿ ಕಬ್ಬಿಣದ ಶೋಧವಾಗಿತ್ತು. ಈ ಯುಗದಲ್ಲಿಯೇ ಸೂರ್ಯವಂಶದವರ ವಂಶಪಾರಂಪರಿಕ ಪ್ರಭುತ್ವ ಬೆಳೆದು ಬಂದಿತು. ಇವರು ನಗರಿಗಳಲ್ಲಿ ಜೀವಿಸುವವರು ಅಂದರೆ ‘ನಾಗರಿಕರು.’ ಶ್ರೀರಾಮಚಂದ್ರನು ಕಬ್ಬಿಣದ ಬಿಲ್ಲು ಬಾಣಗಳನ್ನು ಉಪಯೋಗಿಸಿ, ಶಿಲಾಯುಧ ಹಾಗು ಕಟ್ಟಿಗೆಯ ಗದೆಗಳನ್ನು  ಬಳಸುತ್ತಿದ್ದ ಮೂಲನಿವಾಸಿಗಳನ್ನು ಅಂದರೆ ‘ಆಟವಿಕ’ರನ್ನು ಸೋಲಿಸಿದನು. ಆಯುಧಕುಶಲ ಜನಾಂಗವು ನಿಸರ್ಗಸಹಜ ಜೀವಿಗಳನ್ನು ಮಣಿಸಿತು. ಅವರನ್ನು ತನ್ನ ಅಧೀನರನ್ನಾಗಿ ಮಾಡಿತು. ಸಮಾಜದಲ್ಲಿ ವಿವಿಧ ವರ್ಣಗಳು ಪ್ರಾರಂಭವಾದವು. ಪ್ರಭುತ್ವದಿಂದ ಗುಲಾಮಗಿರಿಯವರೆಗಿನ ಪಿರ್ಯಾಮಿಡ್ ರೂಪುಗೊಂಡಿತು. ಇದು ಯಜಮಾನ ಸಂಸ್ಕೃತಿಯ ಪ್ರಾರಂಭವನ್ನು ಸೂಚಿಸುತ್ತದೆ.

ವಿಭಿನ್ನ ಜನಾಂಗಗಳ ಅಥವಾ ಗುಂಪುಗಳ ನಡುವೆ ಹೋರಾಟ ನಡೆದಾಗ ಗೆದ್ದವನೇ ಯಜಮಾನ, ಸೋತವನೇ ಗುಲಾಮ!
ಸತ್ಯಯುಗದ ಕೊನೆಯಲ್ಲಿ ಸೋತು ಹೋದ ‘ಜಾಂಬುವಂತರು’ ತ್ರೇತಾಯುಗ, ದ್ವಾಪರಯುಗ ಹಾಗು ಕಲಿಯುಗಗಳಲ್ಲಿ ವಿಭಿನ್ನ ಅಧಿಪತಿಗಳನ್ನು ಕಂಡರು. ತಾವು ಮಾತ್ರ ಗುಲಾಮರಾಗಿಯೇ ಉಳಿದರು.]

ನಾಲ್ಕನೆಯ ನುಡಿ:
ಬಂದಾರ ಬರ್ರೆವ್ವ, ಕಂದನ ತರ್ರೆವ್ವ
ಅಂಜೀಕಿ ಗಿಂಜೀಕಿ ಕೊಂದಾನ
ರೋಮರೋಮಗಳಲ್ಲಿ ಭೀಮರಕ್ಷಿಯ ಬಲ
ಕೊರಳಾಗ ಕೊಟ್ಟಿರಿ ಒಂದಾನ
ಮೊದಲನೆಯ ನುಡಿಯಲ್ಲಿ ಕರಡಿಯನ್ನು ಆಡಿಸುವವನ ಚಿತ್ರಣವನ್ನು ಹಾಗು ಎರಡನೆಯ ಮತ್ತು ಮೂರನೆಯ ನುಡಿಗಳಲ್ಲಿ ಕರಡಿಯ ಚರಿತ್ರೆಯನ್ನು ಬಣ್ಣಿಸಿದ ಬೇಂದ್ರೆಯವರು ನಾಲ್ಕನೆಯ ನುಡಿಯಲ್ಲಿ ಕರಡಿಯನ್ನು ಆಡಿಸುವವನ ಮಾಯದ ಮಾತುಗಳನ್ನು ವರ್ಣಿಸುತ್ತಾರೆ.

ಕುಣಿತವನ್ನು ನೋಡಲು ಬರುವವರನ್ನು ಮರಳು ಮಾಡಿ ತನ್ನ ಹೊಟ್ಟೆ ತುಂಬಿಕೊಳ್ಳುವದೇ ಕುಣಿಸುವವನ ಮುಖ್ಯ ಉದ್ದೇಶವಾಗಿರುತ್ತದೆ. ಈ ಉದ್ದೇಶ ಸಾಧಿಸಲು ಆತನು ಅಲ್ಲಿ ನೆರೆದ ತಾಯಂದಿರ ಭಾವನೆಗಳ ಮೇಲೆ ಆಟ ಆಡುತ್ತಾನೆ. ಚಿಕ್ಕ ಮಕ್ಕಳು ಯಾವಾಗಲೋ ಅಳುತ್ತಿರುತ್ತಾರೆ. ಮಗು ಅಂಜಿರಬಹುದು ಅಥವಾ ಅದಕ್ಕೆ ಕೆಟ್ಟ ದೃಷ್ಟಿ ತಾಗಿರಬಹುದು ಎಂದು ಹೆದರಿದ ತಾಯಂದಿರು ‘ದೃಷ್ಟಿಯನ್ನು ನಿವಾಳಿಸಿ’ ಚೆಲ್ಲುತ್ತಾರೆ. ‘ಕಣ್ಣಿಗೆ ಕಾಮನ ರಕ್ಷಿ, ಬೆನ್ನಿಗೆ ಭೀಮನ ರಕ್ಷಿ’ ಎಂದು ದೈವದ ರಕ್ಷಣೆ ಕೋರುತ್ತಾರೆ. ಅಂತಹ ಅಮಾಯಕ ತಾಯಂದಿರ ಎದುರಿಗೆ ಕರಡಿ ಕುಣಿಸುವವನು ‘ಈ ಕರಡಿಯ ಕೂದಲುಗಳಲ್ಲಿ ಭೀಮರಕ್ಷಿಯ ಬಲವಿದೆ’ ಎಂದು ಹೇಳುವಾಗ ಕರಡಿಯ ದೈಹಿಕ ಸಾಮರ್ಥ್ಯದ ಜೊತೆಗೇ ಅದಕ್ಕೊಂದು ದೈವಿಕ ಸಾಮರ್ಥ್ಯವನ್ನು ಆರೋಪಿಸುತ್ತಾನೆ. ಅದು ನಿಜವಿದ್ದರೆ, ಕರಡಿ ಮನುಷ್ಯನ ಆಳಾಗಿ ಬಾಳುತ್ತಿತ್ತೆ!?

ಐದನೆಯ ನುಡಿ:
‘ಕುಣಿಯಲೆ ಮಗನ ನೀ’ ಅನ್ನೋದೊಂದೆ ತಡ
ತನ್ನsನ ತಾsನನ ತಂದಾs
ಮುದ್ದುಕೂಸಿನ ಹಾಗೆ ಮುಸುಮುಸು ಮಾಡುತ್ತ
ಕುಣಿದಾನ ಕುಣಿತವ ಛಂದಾನ
ನೆರೆದವರ ಮನರಂಜನೆಗಾಗಿ ಕರಡಿಯನ್ನು ಕುಣಿಸಬೇಕಲ್ಲವೆ? ಕರಡಿಯಾದರೇನು ಮನುಷ್ಯನಾದರೇನು, ಜೀವಜಗತ್ತಿನಲ್ಲಿ ಎಲ್ಲರೂ ಸಮಾನರೇ. ಆದರೆ ಮನುಷ್ಯನು ತಾನೇ ಜೀವಜಗತ್ತಿನ ಅಂತಿಮ ಸೃಷ್ಟಿ ಎಂದು ಭಾವಿಸಿಬಿಟ್ಟಿದ್ದಾನೆ. ಹಾಗೆಂದುಕೊಂಡು ಕರಡಿಯನ್ನು ತನಗಿಂತ ಕೆಳದರ್ಜೆಯ ಪ್ರಾಣಿಯನ್ನಾಗಿ ಮಾಡಿದ ಮನುಷ್ಯನು ಆ ಜೀವಿಗೆ ‘ಕುಣಿಯಲೆ ಮಗನ ನೀ’ ಎಂದು ಆದೇಶ ನೀಡುತ್ತಾನೆ. ಪಾಪದ ಕರಡಿಗಂತೂ ಮೊದಲೇ ತರಬೇತಿ ಸಿಕ್ಕಿರುತ್ತದೆ. ಕುಣಿಸುವವನಿಂದ ಹೊರಡುವ ಧ್ವನಿ ಹಾಗು ಕುಣಿಗೋಲಿನ ಸನ್ನೆಗೆ ಅದು ಆಳಾಗಿ ಬಿಟ್ಟಿದೆ. ಇಂತಹ ವರ್ತನೆಯನ್ನು ೧೯ನೆಯ ಶತಮಾನದಲ್ಲಿದ್ದ ರಶಿಯಾದ ಖ್ಯಾತ ವರ್ತನಾ-ವಿಜ್ಞಾನಿ ಪಾವ್ಲೋವರು ‘ರೂಢಿಸಿದ ಪ್ರತಿಕ್ರಿಯೆ’ (=Conditioned Reaction) ಎಂದು ಕರೆದಿದ್ದಾರೆ. ಆದುದರಿಂದ  ಅದರ ಕುಣಿತವು ಸುಖದ ಕುಣಿತವಲ್ಲ. ಕುಣಿಗೋಲಿಗೆ ಹೆದರಿಕೊಳ್ಳುವ ಮುಗ್ಧ ಕರಡಿಯ ಕುಣಿತವನ್ನು ಬೇಂದ್ರೆಯವರು ‘ಮುದ್ದು ಕೂಸಿನ ಮುಸುಮುಸು’ ವರ್ತನೆಗೆ ಹೋಲಿಸುತ್ತಿದ್ದಾರೆ. ಕೂಸು ಎಂದರೆ ಅಸಹಾಯಕ ಜೀವಿ. ಅದಕ್ಕೆ ಅಸಮಾಧಾನವಾದಾಗ ಅದು ಮುಸುಮುಸು ಮಾಡುತ್ತದೆ. ಅದರಂತೆ ಕರಡಿಯ ಕುಣಿತವೂ ಸಹ ಅಸಹಾಯಕ ಜೀವಿಯ ಮುಸುಮುಸು ಕುಣಿತ. ಆದರೆ ನೋಡುಗರಿಗೆ ಅದು ‘ಛಂದಾನ ಕುಣಿತ’!

ಆರನೆಯ ನುಡಿ:
ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು
ನಡೆದಾನ ಪಡೆದಾನ ಬಂಧಾs
`ಕುಣಿಸುವವರ ಹೊಟ್ಟಿ ತಣ್ಣಗಾಗಲಿ’ ಎಂದು
ಮುಗಿಲಿಗೆ ಕೈಮುಗಿದು ನಿಂದಾನ
ಕರಡಿಯ ಕುಣಿತವು ತನ್ನ ಹೊಟ್ಟೆಪಾಡಿಗಲ್ಲ. ಅದನ್ನು ಹಿಡಿದುಕೊಂಡು ಬಂದವನ ಹೊಟ್ಟೆಪಾಡಿಗಾಗಿ. ‘ನಡೆದಾನ’ ಎಂದರೆ ಅನಾದಿಕಾಲದಿಂದಲೂ ಇದು ನಡೆದು ಬಂದಿದೆ. ‘ಪಡೆದಾನ ಬಂಧಾsನ’ ಎಂದರೆ ಈ ಬಂಧನವು ಆ ಕರಡಿಯ ಹಣೆಬರಹವಾಗಿದೆ. ಆದುದರಿಂದಲೇ ಆತ ಜನರೆದುರಿಗೆ ಬಂದು ಕುಣಿಯುತ್ತಿದ್ದಾನೆ. ಕರಡಿಯನ್ನು ಆಡಿಸುವವನ ಹೊಟ್ಟೆ ಭಗಭಗ ಎನ್ನುತ್ತಿರುವಷ್ಟು ಸಮಯವೆಲ್ಲ, ಕರಡಿ ಕುಣಿಯುತ್ತಲೇ ಇರಬೇಕು. ಅವನ ಹೊಟ್ಟೆ ತಣ್ಣಗಾದಾಗಲೇ ಕರಡಿ ಪಡುವ ಕಷ್ಟವೂ ಕಡಿಮೆಯಾದೀತು. ಅದಕ್ಕೆಂದೇ ಇದು ಮುಗಿಲಿಗೆ ಕೈ ಮಾಡಿ ದೇವರನ್ನು ಪ್ರಾರ್ಥಿಸುತ್ತದೆ: ನನ್ನನ್ನು ಕುಣಿಸುತ್ತಿರುವವನ ಹೊಟ್ಟೆ ತಣ್ಣಗಿರಲಿ, ದೇವರೆ!
ಅನಾಥೋ ದೇವರಕ್ಷಕಃ!

ಏಳನೆಯ ನುಡಿ:
ಮನಬಲ್ಲ ಮಾನವ ಕುಣಿದಾನ, ಕುಣಿಸ್ಯಾನ
ಪ್ರಾಣದ ಈ ಪ್ರಾಣಿ ಹಿಂದಾs
ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ
ಪರಮಾರ್ಥ ಎಂಬಂತೆ ಬಂದಾನ
ಪ್ರಾಣಿಗಳಿಗೆ ಹಾಗು ಮನುಷ್ಯರಿಗೆ ಇರುವ ಭೇದವೇನು? ಪ್ರಾಣಿಗಳಲ್ಲಿ ಇರುವದು ಪ್ರಾಣಶಕ್ತಿ (vitality). ಮನುಷ್ಯನಲ್ಲಿರುವದು ಬುದ್ಧಿಶಕ್ತಿ. ಬುದ್ಧಿಶಕ್ತಿ ಎನ್ನುವದು ಧೂರ್ತತನವೂ ಆಗಬಲ್ಲದು. ಮನಬಲ್ಲ ಮಾನವ ಎನ್ನುವಾಗ ಬೇಂದ್ರೆಯವರು ಮನುಷ್ಯನ ಈ ಧೂರ್ತ ಬುದ್ಧಿಯನ್ನು ಸೂಚಿಸುತ್ತಿದ್ದಾರೆ ಹಾಗು ಪ್ರಾಣದ ಪ್ರಾಣಿ ಎನ್ನುತ್ತ ಕರಡಿ ಹಾಗು ಇತರ ಪ್ರಾಣಿಗಳ ಪ್ರಾಣಶಕ್ತಿಯನ್ನು ಸೂಚಿಸುತ್ತಿದ್ದಾರೆ. ಈ ಧೂರ್ತಬುದ್ಧಿಯಿಂದಲೇ ಮಾನವನು ಪ್ರಾಣಶಕ್ತಿಯ ಪ್ರಾಣಿಗಳನ್ನು ಸೋಲಿಸಿದ್ದಾನೆ. ಈ ಧೂರ್ತಬುದ್ಧಿಯಿಂದಲೇ ಇತರ ಅಮಾಯಕ ಮಾನವರನ್ನು ಮರಳು ಮಾಡಿದ್ದಾನೆ. ತನ್ನ ಹೊಟ್ಟೆಪಾಡಿಗೆ ಪರಮಾರ್ಥದ ವೇಷವನ್ನು ತೊಡಿಸಿದ್ದಾನೆ.

ಎಂಟನೆಯ ನುಡಿ
ಈ ಮನುಷಾ ಎಂದಿಂದೊ ಕವಲೆತ್ತು, ಕೋಡಗ
ತನಗಾಗಿ ಕುಣಿಸುತ್ತ ನಡೆದಾನ
ಕರಡಿ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ.              

ಬೇಂದ್ರೆಯವರು ಕೊನೆಯಲ್ಲಿ ಕವನದ ತತ್ವಸಾರವನ್ನು ಹೇಳಿದ್ದಾರೆ. ಸಾಧಾರಣವೆಂದು ಕಾಣಿಸುವ ಈ ತತ್ವಸಾರವನ್ನು ಯಾವ ಉದ್ದೇಶಕ್ಕಾಗಿ ಬೇಂದ್ರೆಯವರು ಇಲ್ಲಿ ಹೇಳಿದ್ದಾರೆ? ಕವನಕ್ಕಿಂತ ಹೆಚ್ಚಾಗಿ ಕವಿಯ ಅಸ್ಮಿತೆಯನ್ನು ಗುರುತಿಸುವದು ಈ ಕೊನೆಯ ನುಡಿಯ ಉದ್ದೇಶವಾಗಿದೆ. ಬೇಂದ್ರೆಯವರು ತಮ್ಮನ್ನು ಯಾವಾಗಲೂ ಸಾಧಾರಣ ಜನರ ನಡುವಿನ ಕವಿ ಎಂದು ಗುರುತಿಸಿಕೊಳ್ಳುತ್ತಿದ್ದರು. ಹಳ್ಳಿಯಲ್ಲಿಯ ಕಟ್ಟೆಯೊಂದರ ಮೇಲೆ ಹತ್ತು ಜನರ ನಡುವೆ ಕುಳಿತುಕೊಂಡು ಕೈಯೆತ್ತಿ ಹಾಡುವ ಕವಿಯೊಬ್ಬನನ್ನು ಕಲ್ಪಿಸಿಕೊಳ್ಳಿರಿ. ಬಹುಶಃ ಬೇಂದ್ರೆಯವರ ಸ್ವ-ಕಲ್ಪನೆಯೂ ಅದೇ ಇದ್ದಿತೇನೋ? ಅಂತಹ ಕವಿಯೊಬ್ಬ ತನ್ನ ಕೇಳುಗರಿಗೆ ಕೊನೆಯಲ್ಲಿ ಕವನದ ತಿರುಳನ್ನು ಹೇಳುತ್ತಾನೆ, ಒಂದು ನೀತಿಬೋಧೆಯನ್ನು ಮಾಡುತ್ತಾನೆ. ಆದುದರಿಂದಲೇ ಬೇಂದ್ರೆಯವರು ಕವಿಯಾಗಿ ತನಗೆ ಕಂಡ ದರ್ಶನವನ್ನು ಇಲ್ಲಿ ಇತರರಿಗೂ ತಿಳಿಸುತ್ತಿದ್ದಾರೆ. ತಾವು ‘ಲೋಕಕವಿ’ ಎನ್ನುವ ಅಸ್ಮಿತೆಯನ್ನು ಸಮರ್ಥಿಸಿಕೊಂಡಿದ್ದಾರೆ.

Sunday, July 17, 2011

ರಾಮರಕ್ಷಾ ಸ್ತೋತ್ರದ ಕಾವ್ಯಸೌಂದರ್ಯ

ಸಾಂಪ್ರದಾಯಕ ರಕ್ಷಾಸ್ತೋತ್ರಗಳಲ್ಲಿ ‘ರಾಮರಕ್ಷಾ ಸ್ತೋತ್ರ’ವು ಅನೇಕ ಭಕ್ತರು ಪಠಿಸುತ್ತಿರುವ ಮಹತ್ವದ ಸ್ತೋತ್ರವಾಗಿದೆ. ಬುಧಕೌಶಿಕ ಋಷಿಗಳು ಈ ಸ್ತೋತ್ರದ ದೃಷ್ಟಾರರು. (ತನ್ನ ಕನಸಿನಲ್ಲಿ ಭಗವಾನ್ ಶಂಕರನು ತನಗೆ ಈ ಸ್ತೋತ್ರವನ್ನು ನೀಡಿದನು ಎಂದು ಬುಧಕೌಶಿಕ ಋಷಿಗಳು ಹೇಳಿದ್ದಾರೆ.) ಅವರ ಈ ರಚನೆಯಲ್ಲಿಯ ಮುಖ್ಯ ಭಾಗವನ್ನು, ಸಾಹಿತ್ಯದ ದೃಷ್ಟಿಯಿಂದ ಗಮನಿಸೋಣ. ಆ ಭಾಗ ಹೀಗಿದೆ:

ಶಿರೋಮೇ ರಾಘವಃ ಪಾತು ಭಾಲಂ ದಶರಥಾತ್ಮಜಃ
ಕೌಸಲ್ಯೇಯೋ ದೃಶೌ ಪಾತು ವಿಶ್ವಾಮಿತ್ರಪ್ರಿಯ: ಶ್ರುತಿ:
ಘ್ರಾಣಂ ಪಾತು ಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ
ಜಿಹ್ವಾ ವಿದ್ಯಾನಿಧಿಃ ಪಾತು ಕಂಠಂ ಭರತವಂದಿತಃ
ಸ್ಕಂಧೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶಕಾರ್ಮುಕ:
ಕರೌ ಸೀತಾಪತಿಃ ಪಾತು ಹೃದಯಂ ಜಾಮದಗ್ನ್ಯಜಿತ್
ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ
ಸುಗ್ರೀವೇಶಃ ಕಟೀ ಪಾತು ಸಕ್ಥಿನೀ ಹನುಮತ್ಪ್ರಭುಃ
ಉರೂ ರಘೂತ್ತಮಃ ಪಾತು ರಕ್ಷಃಕುಲವಿನಾಶಕೃತ್
ಜಾನುನೀ ಸೇತುಕೃತ್ಪಾತು ಜಂಘೇ ದಶಮುಖಾಂತಕ:
ಪಾದೌ ವಿಭೀಷಣಶ್ರೀದಃ ಪಾತು ರಾಮೋsಖಿಲಂ ವಪು:
           
ಈ ಸ್ತೋತ್ರದಲ್ಲಿ ತನ್ನ ಶರೀರದ ವಿವಿಧ ಬಾಗಗಳನ್ನು ಶ್ರೀ ರಾಮಚಂದ್ರನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ. ಮೊದಲಿಗೆ ಪ್ರಾರಂಭವಾಗುವದು ಶಿರಸ್ಸು, ತನ್ನಂತರ ಹಣೆ, ಕಣ್ಣುಗಳು, ಕಿವಿಗಳು. ಇದೇ ರೀತಿಯಾಗಿ ಪಾದಗಳವರೆಗೆ ಈ ಪ್ರಾರ್ಥನೆ ಸಾಗಿದೆ. ಅನೇಕ ಸಂಸ್ಕೃತ ಶ್ಲೋಕಗಳಲ್ಲಿ ಈ ತರಹದ ‘ಮುಡಿಯಿಂದ ಅಡಿಯವರೆಗೆ’ ಅಥವಾ ‘ಅಡಿಯಿಂದ ಮುಡಿಯವರೆಗಿನ’ ಕ್ರಮಬದ್ಧ ವರ್ಣನೆ ಇದ್ದೇ ಇರುತ್ತದೆ. ಬುಧಕೌಶಿಕ ಋಷಿಗಳೂ ಸಹ ಅದನ್ನೇ ಮಾಡಿದ್ದಾರೆ.                                                                     
ಈ ಪ್ರಾರ್ಥನಾಶ್ಲೋಕದ ಹೆಚ್ಚುಗಾರಿಕೆಯಿರುವದು ರಾಮಚಂದ್ರನನ್ನು ಬಣ್ಣಿಸುವ ವಿಶೇಷಣಗಳಲ್ಲಿ.  ಮೇಲಿನ ಶ್ಲೋಕದ ಸಾಲುಗಳನ್ನು ಒಂದೊಂದಾಗಿ ಪರಿಶೀಲಿಸೋಣ:

ಶಿರೋಮೇ ರಾಘವಃ ಪಾತು
(=ರಾಘವನು ನನ್ನ ಶಿರಸ್ಸನ್ನು ರಕ್ಷಿಸಲಿ.)
ರಘು ಎನ್ನುವ ರಾಜನು ರಾಮಚಂದ್ರನ ವಂಶದ ಮೂಲಪುರುಷರಲ್ಲಿ ಹೆಸರಾದವನು. ರಘುವಿನ ನಂತರದವರೆಲ್ಲರೂ ರಾಘವರು. ಆದುದರಿಂದ ರಾಮಚಂದ್ರನನ್ನು ‘ರಾಘವ’ ಎನ್ನಲಾಗಿದೆ.
ಈ ರೀತಿಯಾಗಿ ರಘುವಂಶದ ಮೂಲಪುರುಷನನ್ನು ಇಲ್ಲಿ ಮೊದಲು ಸ್ಮರಿಸಲಾಗಿದೆ. ಆ ಮೂಲಕ ರಾಮಚಂದ್ರನ identityಯನ್ನು ಗುರುತಿಸಲಾಗಿದೆ.

ಭಾಲಂ ದಶರಥಾತ್ಮಜಃ
(=ದಶರಥನ ಪುತ್ರನು ನನ್ನ ಹಣೆಯನ್ನು ರಕ್ಷಿಸಲಿ.)
ನಂತರದ ಸ್ಮರಣೆ ರಾಮಚಂದ್ರನ ಜನಕನಾದ ದಶರಥನದು. ವಂಶವನ್ನು ಹೇಳಿದ ನಂತರ ರಾಮಚಂದ್ರನ ತಂದೆಯ ಹೆಸರನ್ನು ಹೇಳಲಾಗಿದೆ ಆದುದರಿಂದ ಶ್ರೀರಾಮಚಂದ್ರನನ್ನು ಇಲ್ಲಿ ಮೊದಲು ರಾಘವ ಹಾಗು ನಂತರ ದಶರಥಾತ್ಮಜ ಎಂದು ವರ್ಣಿಸಲಾಗಿದೆ.

ಕೌಸಲ್ಯೇಯೋ ದೃಶೌ ಪಾತು
(=ಕೌಸಲ್ಯೆಯ ಕುಮಾರನು ನನ್ನ ಕಣ್ಣುಗಳನ್ನು ರಕ್ಷಿಸಲಿ)
 ತಂದೆಯ ನಂತರ ಬರುವವಳು ತಾಯಿ.
ಉಪನಿಷತ್ತುಗಳಲ್ಲಿ ‘ಮಾತೃದೇವೋ ಭವ’ ಎಂದು ಹೇಳಿದ ಬಳಿಕವೇ ‘ಪಿತೃದೇವೋ ಭವ’ ಹಾಗು ‘ಆಚಾರ್ಯದೇವೋ ಭವ ’ ಎಂದು ಹೇಳಲಾಗಿದೆ. ಆದರೆ ಓರ್ವ ವ್ಯಕ್ತಿಯನ್ನು ಆತನ ವಂಶ ಹಾಗು ತಂದೆಯ ಮೂಲಕವೇ ಗುರುತಿಸಲಾಗುವದರಿಂದ ಇಲ್ಲಿ ರಘು ಹಾಗು ದಶರಥರನ್ನು ಮೊದಲು ಸ್ಮರಿಸಲಾಗಿದೆ. ಆಬಳಿಕ ತಾಯಿಯನ್ನು ಸ್ಮರಿಸಲಾಗಿದೆ.

ವಿಶ್ವಾಮಿತ್ರಪ್ರಿಯ: ಶ್ರುತಿ:
(=ವಿಶ್ವಾಮಿತ್ರನ ಪ್ರಿಯ ಶಿಷ್ಯನು ನನ್ನ ಕಿವಿಗಳನ್ನು ರಕ್ಷಿಸಲಿ.)
‘ಮಾತೃದೇವೋ ಭವ ಹಾಗು ಪಿತೃದೇವೋಭವ’ದ ಬಳಿಕ ‘ಆಚಾರ್ಯದೇವೋಭವ’. ಆದುದರಿಂದ ಈಗ ರಾಮಚಂದ್ರನ ಗುರುವಾದ ವಿಶ್ವಾಮಿತ್ರರನ್ನು ನೆನಸಲಾಗಿದೆ. ಅಲ್ಲದೆ, ಓರ್ವ ವ್ಯಕ್ತಿಯನ್ನು ಆತನ ಗುರುಕುಲದ ಮೂಲಕವೂ ಗುರುತಿಸಲಾಗುತ್ತಿತ್ತು. ಈ ಕಾರಣಗಳಿಗಾಗಿ ಇಲ್ಲಿ ರಾಮಚಂದ್ರನ ಗುರುವಾದ ವಿಶ್ವಾಮಿತ್ರರ ಉಲ್ಲೇಖ ಬಂದಿದೆ.

ಪುರಾಣಕಾಲದಲ್ಲಿ ವಿದ್ಯಾಭ್ಯಾಸವು ಶ್ರುತಿಯ ಮೂಲಕ ಅಂದರೆ ಕೇಳುವದರ ಮೂಲಕವೇ ಆಗುತ್ತಿತ್ತು. ಆದುದರಿಂದಲೇ ವೇದಗಳಿಗೆ ‘ಶ್ರುತಿಗಳು’ ಎನ್ನುತ್ತಾರೆ. ‘ವಿಶ್ವಾಮಿತ್ರರಿಂದ ಶ್ರುತಿಜ್ಞಾನ ಪಡೆದ ಶಿಷ್ಯನು ನನ್ನ ‘ಶ್ರುತಿ’ಗಳನ್ನು ಅಂದರೆ ಕಿವಿಗಳನ್ನು ರಕ್ಷಿಸಲಿ’ ಎಂದು ಪ್ರಾರ್ಥಿಸಲಾಗಿದೆ.

ಘ್ರಾಣಂ ಪಾತು ಮಖತ್ರಾತಾ
(=ಯಜ್ಞರಕ್ಷಕನು ನನ್ನ ನಾಸಿಕವನ್ನು ರಕ್ಷಿಸಲಿ)
ಮಖತ್ರಾತಾ ಅಂದರೆ ಯಜ್ಞರಕ್ಷಕ. ವಿಶ್ವಾಮಿತ್ರನು ತನ್ನ ಪ್ರಿಯಶಿಷ್ಯನನ್ನು ಯಾವ ಕಾರ್ಯಕ್ಕಾಗಿ ಆಯೋಜಿಸಿದ್ದನು ಎನ್ನುವದನ್ನು ಈಗ ತಿಳಿಯಬೇಕಲ್ಲವೆ? ರಾಕ್ಷಸರ ಉಪಟಳದಿಂದ ಯಜ್ಞಗಳನ್ನುರಕ್ಷಿಸುವದೇ ವಿಶ್ವಾಮಿತ್ರನು ರಾಮಚಂದ್ರನಿಗೆ ವಹಿಸಿದ  ಮಹತ್ಕಾರ್ಯವಾಗಿತ್ತು.

ಮುಖಂ ಸೌಮಿತ್ರಿವತ್ಸಲಃ
(=ಮುಖವನ್ನು ಸುಮಿತ್ರೆಯ ಮಗನಾದ ಲಕ್ಷ್ಮಣನು ರಕ್ಷಿಸಲಿ.)
ಈ ಕಾರ್ಯದಲ್ಲಿ ಶ್ರೀರಾಮಚಂದ್ರನಿಗೆ ನೆರವಾಗಿ ನಿಂತವನು ಸುಮಿತ್ರೆಯ ಮಗನಾದ ಲಕ್ಷ್ಮಣ. ಲಕ್ಷ್ಮಣನು ರಾಮಚಂದ್ರನ ಮೊದಲನೆಯ ತಮ್ಮ ಹಾಗು ಸತತ ಸಹಚರ.
ಲಕ್ಷ್ಮಣನನ್ನು ‘ಸೌಮಿತ್ರಿವತ್ಸಲಃ’ ಎಂದು ಕರೆಯುವ ಮೂಲಕ ರಾಮಚಂದ್ರನಿಗೆ ಎರಡನೆಯ ತಾಯಿಯಾದ ಸುಮಿತ್ರೆಯನ್ನೂ ಸಹ ಇಲ್ಲಿ ನೆನಸಲಾಗಿದೆ.

ಜಿಹ್ವಾ ವಿದ್ಯಾನಿಧಿಃ ಪಾತು
(=ನಾಲಿಗೆಯನ್ನು ವಿದ್ಯೆಗಳ ನಿಧಿಯಾದವನು ರಕ್ಷಿಸಲಿ)
ವಿಶ್ವಾಮಿತ್ರನು ತನ್ನ ಪ್ರಿಯಶಿಷ್ಯ ರಾಮಚಂದ್ರನಿಗೆ ಶಸ್ತ್ರವಿದ್ಯೆಯನ್ನಲ್ಲದೇ ಶಾಸ್ತ್ರವಿದ್ಯೆಯನ್ನೂ ಧಾರೆ ಎರೆದಿದ್ದನು. ಶಸ್ತ್ರಗಳು ಹಸ್ತದಲ್ಲಿದ್ದರೆ, ಶಾಸ್ತ್ರವಿದ್ಯೆಯು ನಾಲಿಗೆಯ ಮೇಲೆ ಇರುತ್ತದೆ. ಏಕೆಂದರೆ ನಾಲಿಗೆಯು ವಿದ್ಯಾಧಿದೇವತೆಯಾದ ಸರಸ್ವತಿಯ ಆವಾಸಸ್ಥಾನವಾಗಿದೆ. ಆದುದರಿಂದ ನಾಲಿಗೆಯನ್ನು ರಕ್ಷಿಸಬೇಕಾದವನು ವಿದ್ಯಾನಿಧಿಯಾದ ಶ್ರೀರಾಮಚಂದ್ರನು.

ಕಂಠಂ ಭರತವಂದಿತಃ
(=ಭರತನಿಂದ ವಂದಿತನಾದವನು ಕಂಠವನ್ನು ರಕ್ಷಿಸಲಿ.)
ಸೋದರವತ್ಸಲನಾದ ರಾಮಚಂದ್ರನಿಗೆ ಭರತನೂ ಸಹ ಪ್ರಿಯನಾದ ತಮ್ಮನೇ. ಈ ಭರತನು ರಾಮಚಂದ್ರನಿಗೆ ಸಿಂಹಾಸನವನ್ನು ಮರಳಿ ಒಪ್ಪಿಸಲು ಬಂದು ಅವನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತವನು. ಆದುದರಿಂದ ರಾಮಚಂದ್ರನು ಭರತವಂದಿತನು. ಇಲ್ಲಿ ಇರುವ ಇನ್ನೊಂದು ವಿಶೇಷವೆಂದರೆ ಕೌಸಲ್ಯೆ ಹಾಗು ಸುಮಿತ್ರೆಯರನ್ನು ನೆನಸಿದ ಮೇಲೆ, ಕೈಕೇಯಿಯನ್ನೂ ಸಹ ನೆನಸುವದು ಕ್ರಮಪ್ರಾಪ್ತವಾಗಿದೆ. ಅಲ್ಲದೆ ಶ್ರೀರಾಮಚಂದ್ರನಿಗೆ ತನ್ನ ಮೂವರೂ ತಾಯಂದಿರ ಮೇಲೆ ಸಮಾನವಾದ ಗೌರವವು ಇದ್ದಿತೆನ್ನುವದನ್ನು ಇದು ಸೂಚಿಸುತ್ತದೆ.

ಮನುಷ್ಯಶರೀರದಲ್ಲಿ ಮೂರು ಭಾಗಗಳನ್ನು ಮಾಡಬಹುದು. ಮೊದಲನೆಯ ಭಾಗ ಮುಖ. ಎರಡನೆಯ ಭಾಗವು ಮುಖದಿಂದ ಟೊಂಕದವರೆಗಿನ ಭಾಗ. ಮೂರನೆಯದು ಟೊಂಕದಿಂದ ಪಾದಗಳವರೆಗಿನ ಭಾಗ. ಮುಖಭಾಗದ ರಕ್ಷಣಾಸ್ತೋತ್ರದ ನಂತರ, ಇನ್ನು ಎರಡನೆಯ ಶರೀರಭಾಗ ಪ್ರಾರಂಭವಾಗುತ್ತದೆ.

ಸ್ಕಂಧೌ ದಿವ್ಯಾಯುಧಃ ಪಾತು
(=ದಿವ್ಯಾಯುಧಗಳನ್ನು ಧರಿಸಿದವನು ಹೆಗಲುಗಳನ್ನು ರಕ್ಷಿಸಲಿ)
ಗುರುಗಳಾದ ವಿಶ್ವಾಮಿತ್ರರಿಂದ ಪ್ರಾಪ್ತವಾದ ದಿವ್ಯ ಆಯುಧಗಳನ್ನು ರಾಮಚಂದ್ರನು ಹೆಗಲ ಮೇಲೆ ಧರಿಸಿರುವದರಿಂದ
ಹೆಗಲುಗಳನ್ನು ರಕ್ಷಿಸುವದು ಅಂಥವನ ಹೊಣೆಯೇ ಆಗಿದೆ.

ಭುಜೌ ಭಗ್ನೇಶಕಾರ್ಮುಕ:
(=ಶಿವಧನುಸ್ಸನ್ನು ಮುರಿದವನು ತೋಳುಗಳನ್ನು ರಕ್ಷಿಸಲಿ.)
ಶಿವಧನುಸ್ಸನ್ನು ಮುರಿದವನು ಭುಜಗಳನ್ನು ರಕ್ಷಿಸಲಿ ಎಂದು ಕೋರುವ ಮೂಲಕ ಅನೇಕ ಸೂಚನೆಗಳನ್ನು ಇಲ್ಲಿ ನೀಡಲಾಗಿದೆ. ಮೊದಲನೆಯದು ಶ್ರೀರಾಮಚಂದ್ರನ ಬಾಹುಬಲ ಹಾಗು ರಕ್ಷಣಾಸಾಮರ್ಥ್ಯ. ಎರಡನೆಯದಾಗಿ ಶಿವಧನುಸ್ಸನ್ನು ಎತ್ತುವದೇ ಶ್ರೀರಾಮಚಂದ್ರನ ವಿವಾಹಕ್ಕೆ ಕಾರಣವಾಯಿತು. ಈ ರೀತಿಯಾಗಿ ಸೀತಾದೇವಿಯನ್ನು ನೆನಸಲು ಇಲ್ಲಿ ಪೂರ್ವಪೀಠಿಕೆಯನ್ನು ಹಾಕಲಾಗಿದೆ. ಮುಂದಿನ ಸಾಲಿನಲ್ಲಿ ಸೀತಾದೇವಿಯನ್ನು ನೆನಸಲಾಗಿದೆ.

ಕರೌ ಸೀತಾಪತಿಃ ಪಾತು
(=ಸೀತಾಪತಿಯು ಕರಗಳನ್ನು ರಕ್ಷಿಸಲಿ)
ಸೀತಾದೇವಿಯ ಪಾಣಿಗ್ರಹಣ ಮಾಡಿದವನೇ ನಮ್ಮ ಪಾಣಿಗಳನ್ನು ರಕ್ಷಿಸಬೇಕಲ್ಲವೆ?
ಇಲ್ಲಿಯವರೆಗಿನ ವರ್ಣನೆಯಲ್ಲಿ ರಾಮಚಂದ್ರನ ಆಪ್ತರನ್ನು ನೆನಸಲಾಯಿತು.
ಇನ್ನು ಮುಂದೆ ರಾಮಚಂದ್ರನ ವಿಜಯಯಾತ್ರೆ ಪ್ರಾರಂಭವಾಗುತ್ತದೆ.

ಹೃದಯಂ ಜಾಮದಗ್ನ್ಯಜಿತ್
(=ಪರಶುರಾಮನನ್ನು ಸೋಲಿಸಿದವನು ಹೃದಯಭಾಗವನ್ನು ರಕ್ಷಿಸಲಿ.)
ರಾಮಚಂದ್ರನು ಸೀತೆಯನ್ನು ಮದುವೆಯಾಗಿ ಅಯೋಧ್ಯೆಗೆ ಮರಳುವಾಗ, ದಾರಿಯಲ್ಲಿ ಜಮದಗ್ನಿಯ ಮಗನಾದ ಪರಶುರಾಮನ ಜೊತೆಗೆ ಕಾದಾಡಿ, ಅವನನ್ನು ಸೋಲಿಸುತ್ತಾನೆ. ಆದುದರಿಂದ  ಆ ಘಟನೆಯನ್ನು ‘ಹೃದಯಂ ಜಾಮದಗ್ನ್ಯಜಿತ್’ ಎಂದು ಸ್ಮರಿಸಲಾಗಿದೆ.

ಮಧ್ಯಂ ಪಾತು ಖರಧ್ವಂಸೀ
(=ಖರ ರಾಕ್ಷಸನನ್ನು ಕೊಂದವನು ಮಧ್ಯಭಾಗವನ್ನು ರಕ್ಷಿಸಲಿ)
ವನವಾಸದಲ್ಲಿದ್ದಾಗ ಶ್ರೀರಾಮಚಂದ್ರನು ಶೂರ್ಪನಖಾ ಪ್ರಸಂಗದಿಂದಾಗಿ ಖರ ಎನ್ನುವ ರಾಕ್ಷಸನನ್ನು ಸಂಹರಿಸಿದನು. ಇದು ಸೀತಾಪಹರಣಕ್ಕೆ ಹಾಗು ರಾವಣಸಂಹಾರಕ್ಕೆ ಕಾರಣವಾಯಿತು.

ನಾಭಿಂ ಜಾಂಬವದಾಶ್ರಯಃ
(=ಜಾಂಬುವಂತನಿಗೆ ಆಶ್ರಯನಿತ್ತವನು ಹೊಕ್ಕಳುಭಾಗವನ್ನು ರಕ್ಷಿಸಲಿ.)
ರಾಕ್ಷಸಸಂಹಾರದ ಜೊತೆಗೇ, ರಾಮಚಂದ್ರನು ಶರಣಾಗತರಿಗೆ ರಕ್ಷಣೆಯನ್ನೂ ಇತ್ತನು. ಆದುದರಿಂದ ಇಲ್ಲಿ ಜಾಂಬುವಂತನನ್ನು ನೆನಸಲಾಗಿದೆ.

ಸುಗ್ರೀವೇಶಃ ಕಟೀ ಪಾತು
(=ಸುಗ್ರೀವನಿಗೆ ಒಡೆಯನಾದವನು ಟೊಂಕವನ್ನು ರಕ್ಷಿಸಲಿ)
ರಾಮಚಂದ್ರನು ವಾಲಿಯನ್ನು ಸಂಹರಿಸಿದ ಬಳಿಕ ಸುಗ್ರೀವನು ಪಟ್ಟಾಭಿಷಿಕ್ತನಾಗುತ್ತಾನೆ. ರಾಮಚಂದ್ರನು ಸುಗ್ರೀವನನ್ನು ಮಿತ್ರ ಎಂದೇ ಕರೆಯುತ್ತಿದ್ದರೂ ಸಹ, ರಾಮಚಂದ್ರನ ಅನುಗ್ರಹದ ಕಾರಣದಿಂದಾಗಿ ಸುಗ್ರೀವನು ಆತನನ್ನು ತನ್ನ ಒಡೆಯ ಎಂದೇ ಭಾವಿಸಿರುತ್ತಾನೆ.

ಸಕ್ಥಿನೀ ಹನುಮತ್ಪ್ರಭುಃ
(=ಹನುಮಂತನ ಪ್ರಭುವು ಬಸ್ತಿಯನ್ನು ರಕ್ಷಿಸಲಿ.)
ಸುಗ್ರೀವನ ನಂತರ ಅವನ ಅನುಚರನಾದ ಹನುಮಂತನನ್ನು ಇಲ್ಲಿ ಸ್ಮರಿಸಲಾಗಿದೆ.

ಶರೀರದ ಮೂರನೆಯ ಭಾಗದ ರಕ್ಷಣಾಸ್ತೋತ್ರವು ಇನ್ನು ಪ್ರಾರಂಭವಾಗುತ್ತದೆ:
ಉರೂ ರಘೂತ್ತಮಃ ಪಾತು ರಕ್ಷಃಕುಲವಿನಾಶಕೃತ್
(=ರಾಕ್ಷಸಕುಲಸಂಹಾರಕನಾದವನು ಹಾಗು ರಘುವಂಶದಲ್ಲಿ ಶ್ರೇಷ್ಠನಾದವನು ತೊಡೆಗಳನ್ನು ರಕ್ಷಿಸಲಿ.)
ತೊಡೆಗಳು ಧೃತಿಯ ಸಂಕೇತ. ಪುಕ್ಕಲು ಮನುಷ್ಯನನ್ನು ವರ್ಣಿಸಬೇಕಾದರೆ ‘ಅವನ ತೊಡೆಗಳು ನಡುಗಿದವು ಅಥವಾ ಬೆವರಿದವು’ ಎನ್ನುವ ವರ್ಣನೆಯನ್ನು ಮಾಡಲಾಗುತ್ತದೆ ರಾಕ್ಷಸಕುಲವನ್ನೇ ಸಂಹಾರ ಮಾಡುವ ಧೈರ್ಯ ಹಾಗು ಸಾಮರ್ಥ್ಯ ಇರುವದು ರಘುವಂಶದಲ್ಲಿಯೇ ಶ್ರೇಷ್ಠನಾದವನಿಗೆ ಮಾತ್ರ ಸಾಧ್ಯ. ಆದುದರಿಂದ ಅಂತಹ ರಘುಕುಲತಿಲಕನು ನನ್ನ ತೊಡೆಗಳನ್ನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ.

ಜಾನುನೀ ಸೇತುಕೃತ್ಪಾತು
(=ಸಮುದ್ರಕ್ಕೆ ಸೇತುಬಂಧನ ಮಾಡಿದವನು ನನ್ನ ಮೊಣಕಾಲುಗಳನ್ನು ರಕ್ಷಿಸಲಿ)
ಇನ್ನು ಪ್ರಾರಂಭವಾಗುವದು ರಾಮಚಂದ್ರನ ಮಹತ್ವದ ಕಾರ್ಯವಾದ ರಾವಣವಿಜಯ. ಆ ಕಾರ್ಯಕ್ಕಾಗಿ ಆತ ಸಮುದ್ರದ ಮೇಲೆ ಸೇತುಬಂಧನವನ್ನು ಮಾಡಬೇಕು ಹಾಗು ಲಂಕೆಯವರೆಗೆ ಧಾವಿಸಬೇಕು. ಅಂಥವನೇ ಮೊಣಕಾಲುಗಳನ್ನು ರಕ್ಷಿಸಲು ಯೋಗ್ಯನಾದವನು.

ಜಂಘೇ ದಶಮುಖಾಂತಕ:
(=ದಶಮುಖ ರಾವಣನ ಸಂಹಾರ ಮಾಡಿದವನು ನನ್ನ ಮೀನಗಂಡಗಳನ್ನು ರಕ್ಷಿಸಲಿ.)
ರಾವಣಸಂಹಾರವೇನು ಸಾಮಾನ್ಯ ಕಾರ್ಯವೆ? ಇದಕ್ಕೆ ಅಸಾಮಾನ್ಯ ಜಂಘಾಬಲ ಬೇಕು. ಆದುದರಿಂದ ಜಂಘಾಬಲ ಇರುವ ರಾಮಚಂದ್ರನೇ ನಮ್ಮ ಜಂಘೆಗಳನ್ನು ರಕ್ಷಿಸಬೇಕು.

ಪಾದೌ ವಿಭೀಷಣಶ್ರೀದಃ ಪಾತು
 (=ವಿಭೀಶಣನಿಗೆ ವೈಭವವನ್ನು ಕೊಟ್ಟವನು ನನ್ನ ಪಾದಗಳನ್ನು ರಕ್ಷಿಸಲಿ.)
ಶ್ರೀರಾಮಚಂದ್ರನು ಕೇವಲ ದುಷ್ಟಸಂಹಾರವನ್ನಷ್ಟೇ ಮಾಡುವವನಲ್ಲ. ಆತನು ತನ್ನ ಚರಣಭಕ್ತರಿಗೆ ಅನುಗ್ರಹವನ್ನೂ ಮಾಡುವವನು. ಆದುದರಿಂದಲೇ ಶರಣಾಗತ ವಿಭೀಷಣನಿಗೆ ರಾಜ್ಯೈಶ್ವರ್ಯವನ್ನು ಅನುಗ್ರಹಿಸಿದ ರಾಮಚಂದ್ರನು ನಮ್ಮ ಪಾದಗಳನ್ನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ.


ರಾಮೋsಖಿಲಂ ವಪು:
(=ಶ್ರೀರಾಮಚಂದ್ರನು ನನ್ನ ಸಂಪೂರ್ಣ ದೇಹವನ್ನು ರಕ್ಷಿಸಲಿ.)
‘ಮುಡಿಯಿಂದ ಅಡಿಯವರೆಗಿನ ಅಂಗಾಂಗಳನ್ನು ಶ್ರೀರಾಮಚಂದ್ರನು ರಕ್ಷಿಸಲಿ’ ಎನ್ನುವ ಪ್ರಾರ್ಥನೆಯನ್ನು ಈ ರೀತಿ ಕ್ರಮಬದ್ಧವಾಗಿ ಮಾಡಲಾಗಿದೆ. ಜೊತೆಗೇ ರಾಮಚಂದ್ರನ ವಂಶಾವಳಿಯ ಮೂಲದಿಂದ ಪ್ರಾರಂಭಿಸಿ, ತಂದೆ, ತಾಯಿ, ಗುರು ಹಾಗು ಸೋದರರ ಬಗೆಗೆ ಹೇಳಲಾಗಿದೆ. ರಾಮಚಂದ್ರನ ವಿವಾಹವನ್ನು ಉಲ್ಲೇಖಿಸಲಾಗಿದೆ. ತನ್ನಂತರ ರಾಮಚಂದ್ರನ ದುಷ್ಟಸಂಹಾರ ಹಾಗು ಶಿಷ್ಟರಕ್ಷಣೆಯ ವರ್ಣನೆಯನ್ನು ಮಾಡಲಾಗಿದೆ. ಈ ರೀತಿಯಲ್ಲಿ ಈ ಸ್ತೋತ್ರವು ಸಂಕ್ಷಿಪ್ತ ರಾಮಾಯಣವೇ ಆಗಿದೆ. ಆದುದರಿಂದ ಕೊನೆಯಲ್ಲಿ ಶ್ರೀರಾಮಚಂದ್ರನು ‘ನನ್ನ ಸಂಪೂರ್ಣ ಶರೀರವನ್ನು ರಕ್ಷಿಸಲಿ’ ಎನ್ನುವ ಮಂಗಳಪ್ರಾರ್ಥನೆಯನ್ನು ಮಾಡಲಾಗಿದೆ.
...................................................................................................
ರಾಮರಕ್ಷಾ ಸ್ತೋತ್ರದಲ್ಲಿಯ ಮತ್ತೊಂದು ಶ್ಲೋಕ ಹೀಗಿದೆ:
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
ಈ ಶ್ಲೋಕದ ಅರ್ಥ ಹೀಗಿದೆ:
ರಾಮ, ರಾಮಭದ್ರ, ರಾಮಚಂದ್ರ, ರಘುನಾಥ, ನಾಥ, ಸೀತಾಪತಿ ಎನ್ನುವ ಹೆಸರುಗಳಿಂದ ಕರೆಯಲ್ಪಡುತ್ತಿರುವವನಿಗೆ ನಮಸ್ಕಾರವಿರಲಿ.
ಈ ಶ್ಲೋಕಕ್ಕೆ ಸ್ವಾರಸ್ಯಪೂರ್ಣವಾದ ವ್ಯಾಖ್ಯಾನವನ್ನು ಪಂಡಿತರೊಬ್ಬರು ಮಾಡಿದ್ದು, ಅದು ಹೀಗಿದೆ:

ತಂದೆ ದಶರಥನು ಶ್ರೀರಾಮಚಂದ್ರನನ್ನು ‘ರಾಮ!’ ಎಂದು ಸಲಿಗೆಯಿಂದ ಕರೆಯುತ್ತಾನೆ.
ತಾಯಿ ಕೌಸಲ್ಯೆಯು ಪ್ರೀತಿಯಿಂದ ‘ರಾಮಭದ್ರ’ ಎಂದು ಕರೆಯುತ್ತಾಳೆ.
ತಮ್ಮಂದಿರು ಅವನನ್ನು ‘ರಾಮಚಂದ್ರ’ ಎಂದು ಆತ್ಮೀಯತೆಯಿಂದ ಕರೆಯುತ್ತಾರೆ.
ಪುರಜನರು ತಮ್ಮ ರಾಜನನ್ನು ‘ರಘುನಾಥ’ ಎಂದು ಗೌರವಪೂರ್ವಕವಾಗಿ ಕರೆಯುತ್ತಾರೆ.
ಸೀತಾದೇವಿ ತನ್ನ ಪತಿಯನ್ನು ಹೆಸರುಗೊಂಡು ಕರೆಯದೆ, ಕೇವಲ ‘ನಾಥ!’ ಎಂದು ಕರೆಯುತ್ತಾಳೆ.
ಸೀತಾದೇವಿಯ ತವರೂರಿನವರಾದ ಮಿಥಿಲಾಪುರನಿವಾಸಿಗಳಿಗೆ ಈತನು ಕೇವಲ ‘ಸೀತೆಯ ಗಂಡ!’
.............................................................................................................
ಕುತರ್ಕವಾದಿಯೊಬ್ಬರು ‘ಸೀತಾದೇವಿ’ ವನವಾಸದಲ್ಲಿ ಬಸಿರಾಗಲಿಲ್ಲ. ಅವಳು ರಾವಣನ ಸೆರೆಯಲ್ಲಿದ್ದಾಗ ಬಸಿರಾದಳು. ಇದರರ್ಥವೇನೆಂದರೆ ‘ರಾಮನು ನಪುಂಸಕನು’ ಎಂದು ವಾದಿಸಿದ್ದಾರೆ. ಇವರಿಗೆ ವನವಾಸದ ಅರ್ಥವೇ ಗೊತ್ತಿಲ್ಲ. ಭೋಗಜೀವನವನ್ನು ತ್ಯಜಿಸಿ, ಯೋಗಿಯಂತೆ ಬಾಳುವದೇ ನಮ್ಮ ಪುರಾತನರ ಆದರ್ಶವಾಗಿತ್ತು. ರಾಮಾಯಣವೇ ಆಗಲಿ, ಮಹಾಭಾರತವೇ ಆಗಲಿ ವನವಾಸವನ್ನು ಆದರ್ಶವೆಂದೇ ಬಿಂಬಿಸಿದ್ದನ್ನು ಗಮನಿಸಬೇಕು. ರಾಮರಕ್ಷಾ ಸ್ತೋತ್ರದ ಈ ಶ್ಲೋಕವನ್ನು ಗಮನಿಸಿರಿ:
ಫಲಮೂಲಾಶಿನೌ ದಾಂತೌ ತಾಪಸೌ ಬ್ರಹ್ಮಚಾರಿಣೌ
ಪುತ್ರೌ ದಶರಥಸ್ಯೇತೌ ಭ್ರಾತರೌ ರಾಮಲಕ್ಷ್ಮಣೌ

ರಾಮಲಕ್ಷಣರು ವನವಾಸದಲ್ಲಿ ಹೇಗೆ ಇರುತ್ತಿದ್ದರು ಎನ್ನುವದರ ವರ್ಣನೆ ಇದು:
ಫಲಮೂಲಾಶಿನೌ = ಅವರು ಹಣ್ಣು ಮತ್ತು ಗಡ್ಡೆಗೆಣಸುಗಳನ್ನು ಮಾತ್ರ ಭುಂಜಿಸುತ್ತಿದ್ದರು.
ದಾಂತೌ = ಇಂದ್ರಿಯನಿಗ್ರಹ ಮಾಡಿದವರು.
ತಾಪಸೌ = ತಪಸ್ವಿಗಳು
ಬ್ರಹ್ಮಚಾರಿಣೌ = ಬ್ರಹ್ಮಚಾರಿಗಳು

ಈ ಶ್ಲೋಕವನ್ನು ಮೂಲರಾಮಾಯಣದಲ್ಲಿ ಶೂರ್ಪನಖಿಯು ರಾವಣನ ಎದುರಿಗೆ ಹೇಳಿದಳು ಎಂದು ಕೇಳಿದ್ದೇನೆ. ಬುಧಕೌಶಿಕ ಋಷಿಗಳು ಅಲ್ಲಿಂದ ಎತ್ತಿಕೊಂಡಿರಬಹುದು.
................................................................................................
ಕೊನೆಯದಾಗಿ ರಾಮರಕ್ಷಾ ಸ್ತೋತ್ರದ ಕೊನೆಯ ಶ್ಲೋಕವನ್ನು ನೋಡೋಣ:
ರಾಮೋ ರಾಜಮಣಿಃ ಸದಾ ವಿಜಯತೇ
ರಾಮಂ ರಮೇಶಂ ಭಜೇ
ರಾಮೇಣಾಭಿಹತಾ ನಿಶಾಚರಚಮೂ
ರಾಮಾಯ ತಸ್ಮೈ ನಮಃ
ರಾಮಾನ್ನಾಸ್ತಿ ಪರಾಯಣಂ ಪರತರಮ್
ರಾಮಸ್ಯ ದಾಸೋಸ್ಮ್ಯಹಮ್
ರಾಮೇ ಚಿತ್ತಲಯಃ ಸದಾ ಭವತು
ಮೇ ಭೋ ರಾಮ ಮಾಮುದ್ಧರ.

ಈ ಶ್ಲೋಕದ ಪ್ರತಿಯೊಂದು ಸಾಲು, ಸಂಸ್ಕೃತ ವ್ಯಾಕರಣದ ವಿಭಕ್ತಿಯನ್ನು ಕ್ರಮಬದ್ಧವಾಗಿ ಸೂಚಿಸುತ್ತದೆ.
ರಾಜರಲ್ಲಿ ಶ್ರೇಷ್ಠನಾದ ರಾಮನು ವಿಜಯಿಯಾಗಲಿ.............(ಪ್ರಥಮಾ ವಿಭಕ್ತಿ)
ರಮಾದೇವಿಯ ಪತಿಯಾದ ರಾಮನನ್ನು ಭಜಿಸುತ್ತೇನೆ...........(ದ್ವಿತೀಯಾ ವಿಭಕ್ತಿ)
ಯಾವ ರಾಮನಿಂದ ರಾಕ್ಷಸಸಂಹಾರವಾಯಿತೊ...................(ತೃತೀಯಾ ವಿಭಕ್ತಿ)
ಅಂತಹ ರಾಮನಿಗೆ ನಮಸ್ಕಾರಗಳು.................................(ಚತುರ್ಥೀ ವಿಭಕ್ತಿ)
ರಾಮನಿಗಿಂತ ಹೆಚ್ಚಿನ ಪಾರಾಯಣವಿಲ್ಲ...........................(ಪಂಚಮೀ ವಿಭಕ್ತಿ)
ರಾಮನ ದಾಸನು ನಾನು.............................................(ಷಷ್ಠೀ ವಿಭಕ್ತಿ)
ರಾಮನಲ್ಲಿ ನನ್ನ ಚಿತ್ತವು ಲಯವಾಗಲಿ...........................(ಸಪ್ತಮೀ ವಿಭಕ್ತಿ)
ಹೇ ರಾಮನೆ, ನನ್ನನ್ನು ಉದ್ಧರಿಸು................................(ಸಂಬೋಧನ ವಿಭಕ್ತಿ)
………………………………………………………………………….

ನಾನೃಷಿ: ಕುರುತೇ ಕಾವ್ಯಮ್ ಎನ್ನುವ ಮಾತಿದೆ, ಋಷಿಯಾದವನು ಮಾತ್ರ ಕಾವ್ಯವನ್ನು ರಚಿಸಬಲ್ಲ ಎಂದು.
ಪ್ರಾಚೇತಸ ಎನ್ನುವ ಬೇಡನು ನಾರದ ಮಹರ್ಷಿಗಳ ಉಪದೇಶದಿಂದ ವಾಲ್ಮೀಕಿ ಮಹರ್ಷಿಗಳಾದರು. ಆದರೆ ಅವರ ಅಂತರಂಗದಲ್ಲಿ ತಮ್ಮ ಹಳೆಯ  ಹಿಂಸಾಜೀವನದ ಬಗೆಗಿನ ದುಃಖ ಕುದಿಯುತ್ತಲೇ ಇತ್ತು. ಮತ್ತೊಬ್ಬ ಬೇಡನು ಕ್ರೌಂಚಮಿಥುನಕ್ಕೆ ಬಾಣ ಎಸೆದು ಅವುಗಳಲ್ಲಿ ಒಂದನ್ನು ಕೊಂದಾಗ, ಈ ಶೋಕವು ಶ್ಲೋಕರೂಪದಲ್ಲಿ ಹೊರಬಂದಿತು:
ಮಾ ನಿಷಾದ ಪ್ರತಿಷ್ಠಾಂ ತ್ವಮಗಮ: ಶಾಶ್ವತೀ: ಸಮಾ:
ಯತ್ಕ್ರೌಂಚಮಿಥುನಾದೇಕಮವಧೀ: ಕಾಮಮೋಹಿತಮ್.

ತಮ್ಮ ಮನದಲ್ಲಿ ಎಡೆಬಿಡದೆ ಕಾಡುತ್ತಿರುವ ಶೋಕವನ್ನು ಉತ್ಸರ್ಜಿಸುವ ಸಲುವಾಗಿಯೇ ಅವರು ರಾಮಾಯಣವನ್ನು ಬರೆಯಬೇಕಾಯಿತು. ಇದನ್ನೇ ಗೋಪಾಲಕೃಷ್ಣ ಅಡಿಗರು, ಕ್ರೌಂಚವಧದುದ್ವೇಗದಳಲ ಬತ್ತಲ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು ಎಂದು ತಮ್ಮ ‘ಭೂಮಿಗೀತೆ’ಯಲ್ಲಿ ವರ್ಣಿಸಿದ್ದಾರೆ. ರಾಮಾಯಣದ ರಚನೆಯ ನಂತರ ವಾಲ್ಮೀಕಿ ಮಹರ್ಷಿಗಳ ಮನಸ್ಸು ಶಾಂತವಾಯಿತು. ಆದುದರಿಂದಲೇ ಬುಧಕೌಶಿಕ ಋಷಿಗಳು ‘ರಾಮರಕ್ಷಾಸ್ತೋತ್ರ’ದಲ್ಲಿ ಹೀಗೆ ಹೇಳಿದ್ದಾರೆ:
ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್.
ವಾಲ್ಮೀಕಿ ಎನ್ನುವ ಕೋಗಿಲೆಯು ಕಾವ್ಯ ಎನ್ನುವ ವೃಕ್ಷದ ಶಾಖೆಗಳ ಮೇಲೆ ಕುಳಿತುಕೊಂಡು ‘ರಾಮ,ರಾಮ’ ಎನ್ನುವ ಮಧುರ ಪದವನ್ನು ಕೂಜಿಸುತ್ತಿದೆ. ಆ ವಾಲ್ಮೀಕಿಕೋಕಿಲಕ್ಕೆ ವಂದನೆಗಳು.

ಆಧ್ಯಾತ್ಮಿಕ ಅಮೃತದ ಜೊತೆಗೆ ಕಾವ್ಯಾಮೃತವನ್ನೂ ಹಂಚುತ್ತಿರುವ ವಾಲ್ಮೀಕಿ ಮಹರ್ಷಿಗಳಿಗೆ ಹಾಗು ಬುಧಕೌಶಿಕ ಋಷಿಗಳಿಗೆ ಸಾಷ್ಟಾಂಗ ನಮಸ್ಕಾರಗಳು.

Friday, July 15, 2011

ನಮ್ಮದೇ ಹಣ- -ನಮ್ಮದೇ ಹೆಣ!

ಭಾರತೀಯ ನಾಗರಿಕರು ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವ ಕಪ್ಪುಹಣವು ೧೬೦೦ ಬಿಲಿಯನ್ ಡಾಲರ್ ಎಂದು ಒಂದು ಅಂದಾಜು ಇದೆ. ಇದು ಕಪ್ಪುಹಣವಾಗಿರುವದರಿಂದ ಅಕ್ರಮ ಮಾರ್ಗದಿಂದಲೇ ಅಂದರೆ ಹವಾಲಾ ಮುಖಾಂತರವೇ ವಿದೇಶವನ್ನು ಸೇರಿರಬೇಕು. ಈ ಹವಾಲಾ ಧಂಧೆಯನ್ನು ನಿಯಂತ್ರಿಸುವವರು ದಾವೂದ ಇಬ್ರಾಹಿಮನಂಥವರು. ಇವರು ಭಯೋತ್ಪಾದಕರ ಸೃಷ್ಟಿಕರ್ತರು ಹಾಗು ಪೋಷಕರು. ಅಂದ ಮೇಲೆ ಭಾರತೀಯರೇ ಈ ಭಯೋತ್ಪಾದಕರನ್ನು ಬೆಳೆಯಿಸುತ್ತಿದ್ದಾರೆ ಎಂದಾಯಿತು. ಯಾರು ಈ ಕಪ್ಪು ಹಣದ ಒಡೆಯರು? ರಾಜಕೀಯದಲ್ಲಿ ಉನ್ನತ ಸ್ಥಾನಗಳನ್ನು ಆಕ್ರಮಿಸಿಕೊಂಡು ಕಮಿಶನ್, ಕಿಕ್‍ಬ್ಯಾಕ್ ಮುಂತಾದವುಗಳನ್ನು ತಿನ್ನುತ್ತಿರುವವರೇ ಈ ಕಪ್ಪು ಹಣವನ್ನು ಸಂಗ್ರಹಿಸುತ್ತಿರುವ ರಾಜಕಾರಣಿಗಳು.

ರಾಜಕಾರಣಿಗಳ ಭ್ರಷ್ಟಾಚಾರ ಭಾರತದಲ್ಲಿ ನಡೆಯುತ್ತಲೇ ಇದ್ದರೂ, ಅಂತರರಾಷ್ಟ್ರೀಯ ಮಟ್ಟದ ಭ್ರಷ್ಟಾಚಾರದ ಮೊದಲ ಸಂಶಯ ಬಂದದ್ದು ‘ಬೋಫೋರ್ಸ್’ ತೋಪುಗಳನ್ನು ಖರೀದಿಸಿದ ಸಂದರ್ಭದಲ್ಲಿ. ಕಾಮನ್‍ವೆಲ್ಥ ಹಗರಣ, ೨-ಜಿ ಹಗರಣ ಇವೆಲ್ಲ
ಇತ್ತೀಚಿನವು. ಸರಿ, ಈ ಹಗರಣಗಳ ಮೂಲಕ ರಾಜಕಾರಣಿಗಳು ಸಂಪಾದಿಸುವ ಅಪಾರ ಸಂಪತ್ತು ಎಲ್ಲಿಂದ ಸಂಗ್ರಹವಾಗುತ್ತದೆ? ಇದಕ್ಕೆ ನೇರ ಹಾಗು ಸರಳ ಉತ್ತರ: ಪ್ರಜೆಗಳು ಕೊಡುವ ತೆರಿಗೆಗಳ ಮುಖಾಂತರ! ಉದಾಹರಣೆಗೆ ಭಾರತದಲ್ಲಿ ಒಂದು ಲಿಟರ ಪೆಟ್ರೋಲಿಗೆ ಸುಮಾರು ೭೦ ರೂಪಾಯಿಗಳನ್ನು ನಾವು ಕೊಡುತ್ತೇವೆ. ಅದೇ ಏಶಿಯಾ ಖಂಡದ ಬಡದೇಶಗಳಾದ ಬಾಂಗ್ಲಾದೇಶ ಹಾಗು ಮಲೆಯೇಶಿಯಾದಲ್ಲಿ ಈ ಬೆಲೆ ೪೫ ರೂಪಾಯಿಗಳ ಆಸುಪಾಸಿನಲ್ಲಿದೆ. ನಮ್ಮ ಹಣಕಾಸು ಮಂತ್ರಿಗಳು ಅಂತರರಾಷ್ಟ್ರೀಯ ದರ ಏರಿದೆ ಎಂದು ನಮ್ಮ ಕಿವಿಯ ಮೇಲೆ ಹೂವನ್ನು ಇಡುತ್ತಿದ್ದಾರೆ. ಇದರಂತೆ ರಾಷ್ಟ್ರಮಟ್ಟದಲ್ಲಿ ರಸಗೊಬ್ಬರ ಸಬ್ಸಿಡಿ, ಕೃಷಿ ಉಪಕರಣಗಳ ಸಬ್ಸಿಡಿ ಮೊದಲಾದವುಗಳ ಮೂಲಕವೂ ರಾಜಕಾರಣಿಗಳು ಕಪ್ಪು ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದರಿಂದಾಗಿ ಬೆಲೆಗಳು ಏರುತ್ತಲೇ ಹೋಗುತ್ತವೆ. ಬೆಲೆ ಏರಿಕೆ ಆದಷ್ಟೂ ರಾಜಕಾರಣಿಗಳಿಗೆ ಕಪ್ಪು ಹಣದ ಸುಗ್ಗಿ. ದುರ್ದೈವದ ಸಂಗತಿ ಎಂದರೆ ಈ ಕಪ್ಪು ಹಣವು ಹವಾಲಾ ಮೂಲಕ ಭಯೋತ್ಪಾದಕರನ್ನೇ ತಲಪುತ್ತಿರುವದು. ಅರ್ಥಾತ್, ನಮ್ಮನ್ನು ಕೊಲ್ಲಿಸಿಕೊಳ್ಳುವ ಸಲುವಾಗಿ ನಾವೇ ಭಯೋತ್ಪಾದಕರಿಗೆ ಹಣ ಪೂರೈಸುತ್ತಿದ್ದೇವೆ. ನಮ್ಮದೇ ಹಣ, ನಮ್ಮದೇ ಹೆಣ!

ನಮ್ಮ ರಾಜಕಾರಣಿಗಳಿಗೆ ಹಾಗು ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಇದೆಲ್ಲವೂ ಗೊತ್ತಿದೆ. ಆದರೂ ಸಹ ಕಪ್ಪು ಹಣವನ್ನು ವಿದೇಶದಿಂದ ಹಿಂಪಡೆಯಲು ಅವರು ತಯ್ಯಾರ ಇಲ್ಲ. ಅಣ್ಣಾ ಹಜಾರೆಯವರ ‘ಜನ ಲೋಕಪಾಲ’ ಶಾಸನದ ಮೂಲಕ ಭ್ರಷ್ಟಾಚಾರವನ್ನು ನಿಗ್ರಹಿಸಬಹುದು. ಅದೇ ಅವರಿಗೆ ಬೇಡವಾಗಿದೆ. ನೋಡುತ್ತಿರಿ, ಲೋಕಪಾಲ ಮಸೂದೆ ಒಂದು ವೇಳೆ ಲೋಕಸಭೆಯಲ್ಲಿ ಮಂಡಿತವಾದರೆ, ಬಹುತೇಕ ಶಾಸಕರುಯಾವುದೇ ಪಕ್ಷದವರಾಗಿರಲಿ---ಅಣ್ಣಾ ಹಜಾರೆಯವರ ಸೂತ್ರಕ್ಕೆ ಬೆಂಬಲ ನೀಡುವದಿಲ್ಲ. ಇಂಥವರನ್ನು ಶಾಸನಸಭೆಗಳಿಗೆ ಚುನಾಯಿಸುತ್ತಿದ್ದೇವಲ್ಲ; ನಾವೇ ಮುಠ್ಠಾಳರು!

ಕಪ್ಪು ಹಣವೆಲ್ಲ ವಿದೇಶಿ ಬ್ಯಾಂಕುಗಳಿಂದ ಭಾರತಕ್ಕೆ ಮರಳಿ ಬಂದರೆ, ಅದನ್ನು ಬಡ ಭಾರತೀಯರಲ್ಲಿ ಹಂಚಬಹುದೆಂದು ಕೆಲ ರಾಜಕಾರಣಿಗಳು ಬುರುಡೆ ಹೊಡೆಯುತ್ತಿದ್ದಾರೆ. ಹಾಗೆ ಹಂಚಿದರೆ ಈಗಿರುವ ಬೆಲೆಗಳು ನೂರು ಪಟ್ಟು ಏರುವದರಲ್ಲಿ ಸಂದೇಹವಿಲ್ಲ! ಆಗ ಗೋಣಿಚೀಲದಲ್ಲಿ ನೋಟುಗಳನ್ನು ಒಯ್ದು ಜೋಬಿನಲ್ಲಿ ಕಾಯಿಪಲ್ಲೆ ತರಬೇಕಾದೀತು. ಅಲ್ಲದೆ, ಅಲ್ಲಿಯೂ ಭ್ರಷ್ಟಾಚಾರ ಮತ್ತೆ ತಲೆ ಎತ್ತುವದೇ! ಆದುದರಿಂದ ಈ ಹಣವನ್ನು ಮುಖ್ಯವಾಗಿ ಶಿಕ್ಷಣಕ್ಕಾಗಿ ಖರ್ಚು ಮಾಡಬೇಕು. ಸೂರಿಲ್ಲದ, ಶಿಕ್ಷಕರಿಲ್ಲದ ಸರಕಾರಿ ಶಾಲೆಗಳು ಎಷ್ಟಿಲ್ಲ? ಇಂಜನಿಯರಿಂಗ ಅಥವಾ ವೈದ್ಯಕೀಯ ಶಿಕ್ಷಣವನ್ನು ಹಣದ ಅಭಾವದಿಂದಾಗಿ ಪಡೆಯಲಾರದ ಎಷ್ಟು ವಿದ್ಯಾರ್ಥಿಗಳಿಲ್ಲ? ಇವರೆಲ್ಲರ ಕಲ್ಯಾಣವನ್ನು ಈ ಕಪ್ಪು ಹಣದಿಂದ ಸಾಧಿಸಬಹುದು. ಇದು ನಾವೇ ತೆರಿಗೆಯೆಂದು ನೀಡಿದ ಹಣ ಎನ್ನುವದನ್ನು ನೆನಪಿಟ್ಟುಕೊಳ್ಳೋಣ.

ಭಯೋತ್ಪಾದಕರ ದಾಳಿ ನಡೆದಾಗೊಮ್ಮೆ, ಮಂತ್ರಿವರ್ಯರು ಎಲ್ಲೆಡೆಯೂ ‘ಕಟ್ಟೆಚ್ಚರ’ವನ್ನು ವಹಿಸುವಂತೆ ಪೋಲೀಸರಿಗೆ ಆದೇಶವೀಯುತ್ತಾರೆ. ಇರುವ ಹತ್ತು ಪೋಲೀಸರು ಎಲ್ಲೆಲ್ಲಿ ‘ಕಟ್ಟೆಚ್ಚೆರ’ವನ್ನು ವಹಿಸಬೇಕು? ಅಲ್ಲದೆ, ಸಂಶಯಾಸ್ಪದ ವ್ಯಕ್ತಿಗಳನ್ನು ಪೋಲೀಸರು ಬಂಧಿಸಿದರೆ, ತಕ್ಷಣವೇ ಸ್ವಾರ್ಥಿ ರಾಜಕಾರಣಿಗಳು ಗಲಾಟೆ ಪ್ರಾರಂಭಿಸುತ್ತಾರೆ. ಮಾನವ ಹಕ್ಕುಗಳ ಹೋರಾಟಗಾರರು ಆಂದೋಲನ ಪ್ರಾರಂಭಿಸುತ್ತಾರೆ. ಈಗಂತೂ ಭಯೋತ್ಪಾದನೆಯ ವಿರುದ್ಧದ ಶಾಸನಗಳನ್ನು ವೋಟು-ರಾಜಕೀಯಕ್ಕಾಗಿ ತೆಗೆದೊಗೆಯಲಾಗಿದೆ. ಇದರರ್ಥ ಏನೆಂದರೆ ‘ನಿಮ್ಮ ಹೆಣಗಳ ಮೇಲೆ ನಾವು ಚುನಾಯಿತರಾಗುತ್ತೇವೆ ಹಾಗು ನಿಮ್ಮ ಹಣವನ್ನು ಲೂಟಿ ಮಾಡುತ್ತೇವೆ.’

ಇದು ತಪ್ಪಬೇಕಾದರೆ, ಮತದಾರರು ಭ್ರಷ್ಟ ರಾಜಕಾರಣಿಗಳನ್ನು ಚುನಾಯಿಸಬಾರದು---(ಅವರು ಯಾವುದೇ ಪಕ್ಷದವರಿರಲಿ.) ಚುನಾವಣೆಯಲ್ಲಿ ನನಗೆ ವೋಟು ಕೇಳಲು ಬರುವ ರಾಜಕಾರಣಿಗೆ ನಾನು ಕೇಳುವ ಪ್ರಶ್ನೆಗಳಿವು:
(೧) ನೀವು ಜನಲೋಕಪಾಲ ಶಾಸನದ ಪರವಾಗಿ ಇರುವಿರೊ ಅಥವಾ ವಿರುದ್ಧವಾಗಿರುವಿರೊ?
(೨) ಒಂದು ವೇಳೆ ನೀವು ಆರಿಸಿ ಬಂದರೆ, ಪೂರ್ಣ ಅವಧಿಯವರೆಗೆ ಪಕ್ಷಕ್ಕೆ ನಿಷ್ಠರಾಗಿ ಉಳಿಯುವಿರೊ, ಇಲ್ಲವೊ?

ಈ ಪ್ರಶ್ನೆಗಳಿಗೆ ‘ಎಸ್’ ಎಂದು ಉತ್ತರಿಸುವ ರಾಜಕಾರಣಿ ಬಹುಶಃ ಸಿಗಲಿಕ್ಕಿಲ್ಲ. ಹಾಗಾದರೆ, ಭಯೋತ್ಪಾದಕರ ಮತ್ತೊಂದು ದಾಳಿಗಾಗಿ ನಾವು ಸಿದ್ಧರಾಗಿರೋಣ!

Saturday, July 9, 2011

ಜನುಮದ ಜಾತ್ರಿ .............ದ.ರಾ.ಬೇಂದ್ರೆ

ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ
ಜಾತ್ರಿಯೆನಿಸಿತ್ತ ಜನುಮವು.  ||೧||

                                                ಹುಬ್ಬು ಹಾರಸಿದಾಗ ಹಬ್ಬ ಎನಿಸಿತು ನನಗ
                                                ‘ಅಬ್ಬ’ ಎನಬೇಡs ನನ ಗೆಣತಿ | ಸಾವಿರಕ
ಒಬ್ಬ ನೋಡವ್ವ ನನ ನಲ್ಲ.  ||೨||

ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ
ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ
ಕಣ್ಣು ಬರೆಧ್ಹಾಂಗ ಕಂಡಿತ್ತು.  ||೩||

ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು
ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ
ಬೀಸಿ ಕರೆದಾನ ನನಗಂತ. ||೪||

ತಂಬುಲತುಟಿ ನಗಿ ಹೊಂಬಿಸಲೆಂಬಂತೆ
ಬಿಂಬಿಸಿತವ್ವಾ ಎದಿಯಾಗ | ನಂಬೀಸಿ
ರಂಬೀಸಿತವ್ವಾ ಜೀವವ.  ||೫||

‘ಒಲುಮೆಯ ಕಿಚ್ಚು’  ಕವನವು ವಿರಹದಗ್ಧ ಮುಗ್ಧೆಯ ಹಾಡಾದರೆ, ‘ಜನುಮದ ಜಾತ್ರಿ’ ಕವನವು ಪ್ರಣಯಸಂತೃಪ್ತಳಾದ ಹೊಸ ಮದುವಣಗಿತ್ತಿಯ ಹಾಡಾಗಿದೆ.

ಬೇಂದ್ರೆಯವರ ‘ಜನುಮದ ಜಾತ್ರಿ’ ಕವನದಲ್ಲಿ ತನ್ನ ನಲ್ಲನಿಗೆ ಮನಸೋತಿರುವ ಹೊಸ ಮದುವಣಗಿತ್ತಿಯ ಮನ:ಸ್ಥಿತಿಯನ್ನು ವರ್ಣಿಸಲಾಗಿದೆ. ಈ  ಹೊಸ ಮದುವಣಗಿತ್ತಿಯು ತನ್ನ ಆಪ್ತಸಖಿಯ ಜೊತೆಗೆ ತನ್ನ ಹೊಸ ಸಂಸಾರದ ಸುಖವನ್ನು ಹಂಚಿಕೊಳ್ಳುತ್ತಿದ್ದಾಳೆ. ತನ್ನ ನಲ್ಲನ ಒಲವಿಗೆ ಮನಸೋತು ಅವನ ಕೈಯಲ್ಲಿಯ ಸೂತ್ರದ ಗೊಂಬೆಯಂತೆ ಆಗಿರುವದಾಗಿ ಅವಳು ಹೇಳುತ್ತಿದ್ದಾಳೆ. ಆ ನಲ್ಲನಾದರೋ ತನ್ನ ನೇತ್ರಪಲ್ಲವಿಯಿಂದಲೇ ಅಂದರೆ ಕಣ್ಸನ್ನೆಯಿಂದಲೇ ಇವಳನ್ನು ಕುಣಿಸುತ್ತಾನೆ. ಇವನು ನಿರ್ದೇಶಿಸಿದಂತೆ ಕುಣಿಯುವ ಪಾತ್ರವಾಗಿದ್ದಾಳೆ ಅವಳು. ಅವರಿಬ್ಬರನ್ನು ಜೋಡಿಸುತ್ತಿರುವ ಆ ‘ಸೂತ್ರ’ ಯಾವುದು?

ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ
ಜಾತ್ರಿಯೆನಿಸಿತ್ತ ಜನುಮವು. 

ಅವಳಲ್ಲಿ ಇವನಿಗೆ ಇರುವ ಒಲುಮೆ ಹಾಗು ಇವನಲ್ಲಿ ಅವಳಿಗಿರುವ ಒಲುಮೆ ಇವೇ ಅವರ ಬದುಕಿನಾಟದ ಸೂತ್ರ. ಇಂತಹ ಒಲುಮೆಯನ್ನು  ದಿನದಿನವೂ ಈ ಪ್ರಣಯಜೋಡಿಯು ಸೂರೆ ಮಾಡುತ್ತಿರುವಾಗ, ಹೊಸ ಬಾಳು ಹೇಗಿರುತ್ತದೆ?
‘ದಿನದಿನ ಜಾತ್ರಿಯೆನಿಸಿತ್ತ ಜನುಮವು!’

ಆಧುನಿಕ ತಲೆಮಾರಿನ ನಮ್ಮ ಯುವಕ, ಯುವತಿಯರು ಹಳ್ಳಿಯ ಜಾತ್ರೆಗಳನ್ನು ಬಹುಶಃ ನೋಡಿರಲಿಕ್ಕಿಲ್ಲ. ಅದೊಂದು ಸಡಗರದ ಸಮಾವೇಶ. ಜಾತ್ರೆಯಲ್ಲಿ ಚಿಕ್ಕ ಮಕ್ಕಳು ಆಟಿಗೆಗಳನ್ನು ಕೊಡಿಸಿಕೊಳ್ಳಲು ಬಂದಿದ್ದರೆ, ಹುಡುಗ-ಹುಡುಗಿಯರಿಗೆ ತಿರುಗು-ಗಾಲಿಗಳಲ್ಲಿ ಕೂಡುವ ಉಮೇದಿ. ಬಹುಪಾಲು ಯುವಕ-ಯುವತಿಯರು ‘ರಾಜಾ-ರಾಣಿ ದೇಖೋ’ ಅನ್ನುತ್ತ ‘ಕಣ್ಣಾಟ’ಕ್ಕಾಗಿ ಬಂದಿರುತ್ತಾರೆ. ಒಟ್ಟಿನಲ್ಲಿ ಆಬಾಲವೃದ್ಧರಿಗೆ ಇದೊಂದು  ಉತ್ಸಾಹದ, ಸಂಭ್ರಮದ ಸನ್ನಿವೇಶ.

ತನ್ನ ನಲ್ಲನ ಒಲವಿನಲ್ಲಿ ನಮ್ಮ ಹೊಸ ಮದುವಣಗಿತ್ತಿಗೆ ಅವಳ ಬಾಳೆಂಬುದು ಪ್ರತಿದಿನವೂ ಇಂತಹ ಜಾತ್ರೆಯ ಸಂಭ್ರಮವಾಗಿದೆ. ನಿಸಾರ ಅಹಮದರ ಭಾಷೆಯಲ್ಲಿ ಹೇಳುವದಾದರೆ, ಜೀವನವೊಂದು ‘ನಿತ್ಯೋತ್ಸವ!’  

ತನ್ನ ನಲ್ಲೆಯನ್ನು ಕಣ್ಸನ್ನೆಯಿಂದಲೇ ಆಟ ಆಡಿಸುವದು, ರಸಿಕತನದ ಪ್ರಥಮ ಸಂಕೇತವಾದರೆ, ಅವಳನ್ನು  ‘ಹುಬ್ಬು ಹಾರಿಸಿ’ ಕರೆಯುವದು ರಸಿಕ ನಲ್ಲನು ಕೊಡುತ್ತಿರುವ ಎರಡನೆಯ ಸಂಕೇತ. ಇದು ಶೃಂಗಾರದಾಟಕ್ಕೆ ಆತ ನೀಡುತ್ತಿರುವ ನೇರ ಆಹ್ವಾನವೇ ಆಗಿದೆ. ಇದು ಯೌವನದ ಹಬ್ಬ, ಇದು ರಸಿಕರ ಹಬ್ಬ, ಇದು ಶೃಂಗಾರದ ಹಬ್ಬ!

ನಮ್ಮ ಹೊಸ ಮದುವಣಗಿತ್ತಿಯ ಗೆಳತಿಗೆ ಈ ಸಂಕೇತಗಳಲ್ಲಿ, ಈ ಆಟದಲ್ಲಿ ಯಾವ ವಿಶೇಷತೆಯೂ ಕಾಣಿಸಲಿಲ್ಲವೇನೋ. ಅದನ್ನು ಗ್ರಹಿಸಿದ ಈ ಹುಡುಗಿ ತನ್ನ ನಲ್ಲನು ಸಾಮಾನ್ಯನಲ್ಲವೆಂದು ಆಗ್ರಹದಿಂದ ಹೇಳುತ್ತಾಳೆ:

ಹುಬ್ಬು ಹಾರಸಿದಾಗ ಹಬ್ಬ ಎನಿಸಿತು ನನಗ
‘ಅಬ್ಬ’ ಎನಬೇಡs ನನ ಗೆಣತಿ ಸಾವಿರಕ
           ಒಬ್ಬ ನೋಡವ್ವ ನನ ನಲ್ಲ. 

‘ತನ್ನ ನಲ್ಲನು ಸಾವಿರದಲ್ಲಿ ಒಬ್ಬನು; ನನ್ನ ಈ ಮಾತಿಗೆ ನೀನು ‘ಅಬ್ಬಾ!’ ಎಂದು ಹಾಸ್ಯ ಮಾಡದಿರು’ ಎಂದು ತನ್ನ ಗೆಳತಿಯ ಎದುರು ಸಮರ್ಥನೆ ಮಾಡುತ್ತಾಳೆ ಈ ಹುಡುಗಿ. ಅಂತಹ ಅಸಾಮಾನ್ಯತೆ ಏನಿದೆ ಇವಳ ನಲ್ಲನಲ್ಲಿ?
ಬಹುಶ: ಹೊಸದಾಗಿ ಮದುವೆಯಾದ ಎಲ್ಲ ಹುಡುಗಿಯರೂ ತಮ್ಮ ನಲ್ಲನೆಂದರೆ ಅಸಾಮಾನ್ಯ ಎನ್ನುವ ಭಾವನೆಯನ್ನೇ ಇಟ್ಟುಕೊಂಡಿರುತ್ತಾರೊ ಏನೊ? ಈ ಹುಡುಗಿಯ ನಲ್ಲನಲ್ಲಿ ಇರುವ ವಿಶೇಷತೆ ಏನು?

ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ
ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ
ಕಣ್ಣು ಬರೆಧ್ಹಾಂಗ ಕಂಡಿತ್ತು. 

ಕಣ್ಣುಗಳು ಭಾವನೆಯನ್ನು ಪ್ರದರ್ಶಿಸುವ ಅಂಗಗಳಾಗಿವೆ.  ತನ್ನ ನಲ್ಲೆಯ ಬಗೆಗೆ ಆ ನಲ್ಲನಿಗೆ ಎಷ್ಟು ಪ್ರೀತಿ ಇದೆ ಎಂದರೆ ಆತ ತನ್ನ ಕಣ್ಣುರೆಪ್ಪೆಗಳನ್ನು ಎತ್ತಿ ಇವಳೆಡೆಗೆ ನೋಡಿದರೆ ಸಾಕು, ಅಲ್ಲಿ ಪೂರ್ಣಿಮೆಯ ಬೆಳದಿಂಗಳು ಹರಡುತ್ತದೆ. ಆ ಬೆಳದಿಂಗಳಿನಲ್ಲಿ ಒಂದು ಗಂಧರ್ವಲೋಕದ ಸೃಷ್ಟಿಯಾಗುತ್ತದೆ. ‘ಆ ಲೋಕದಲ್ಲಿ ತನ್ನ ಹುಡುಗಿಯನ್ನು ನಲಿಸಬೇಕು’ ಎನ್ನುವ ಅವನ ಚಿತ್ತದೊಳಗಿನ ಬಯಕೆ ಪಾರದರ್ಶಕವಾಗಿ ಅವನ ಕಣ್ಣಿನಲ್ಲಿ ಇವಳಿಗೆ ಕಾಣುತ್ತದೆ. ನಿಜ ಹೇಳಬೇಕೆಂದರೆ, ತನ್ನ ಬಯಕೆಯನ್ನೇ ಇವಳು ಅವನ ಕಣ್ಣುಗಳಲ್ಲಿ ಕಾಣುತ್ತಿದ್ದಾಳೆ. ಇದನ್ನು ಬೇಂದ್ರೆಯವರು ‘ಚಿತ್ತಕ್ಕೆ ಕಣ್ಣು ಬರೆಧ್ಹಾಂಗ ಕಂಡಿತ್ತು’ ಎಂದು ವರ್ಣಿಸುತ್ತಾರೆ.

ಜೀವನವೆಲ್ಲ ಮಾಯಾಲೋಕವಾಗಲು ಸಾಧ್ಯವೆ? ಇಲ್ಲಿ ದೈನಂದಿನ ಸಮಸ್ಯೆಗಳು ಇದ್ದೇ ಇರುತ್ತವೆ. ‘ಸಾಕಪ್ಪಾ ಈ ಬದುಕು!’ ಎಂದೆನಿಸುವದು ಸಹಜ. ಅಂತಹ ಸಮಯದಲ್ಲಿ ಇವಳ ನಲ್ಲನೇ ಇವಳಿಗೆ ಸಮಾಧಾನ ಹೇಳಿ ಬದುಕಿನಲ್ಲಿ ಆಸೆ ಹುಟ್ಟಿಸಬೇಕಲ್ಲವೆ?

ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು
ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ
ಬೀಸಿ ಕರೆದಾನ ನನಗಂತ.

ಸಮಸ್ಯೆಗಳಿಗೆ ಹೆದರಿದ ತನ್ನ ನಲ್ಲೆಗೆ ಈ ನಲ್ಲ ಧೈರ್ಯವನ್ನು ಕೊಡುವ ಬಗೆ ಎಂತಹದು?  ತನ್ನ ಮೀಸೆಯ ಮೇಲೆ ಕಿರಿಬೆರಳನ್ನು ಎಳೆದು, ಈ ಗಂಡಸು ಅವಳಿಗೆ ಅಭಯ ಕೊಡುತ್ತಾನೆ:ನಾನಿದ್ದೇನೆ, ಹೆದರದಿರು! ಬಾ ನನ್ನ ಜೊತೆಗೆ ಬದುಕನ್ನು ಎದುರಿಸಲು!’ ಎನ್ನುವ ಧಾಟಿಯಲ್ಲಿ ತನ್ನ ಕೆಂಚನೆಯ ಕೈಯನ್ನು ಬೀಸಿ ಇವಳನ್ನು ಕರೆಯುತ್ತಾನೆ. ಬೇಂದ್ರೆಯವರು ನಲ್ಲನ ‘ಗಂಡಸುತನ’ವನ್ನು ಎತ್ತಿ ತೋರಿಸುವ ಉದ್ದೇಶದಿಂದ, ‘ಮೀಸಿ ಮೇಲೆಳೆದ ಬೆರಳು, ‘ಕೆಂಗಯ್ಯ ಬೀಸಿ ಕರೆದಾನ’ ಎನ್ನುವ ಎನ್ನುವ ವಿಶೇಷಣಗಳನ್ನು ಬಳಸಿದ್ದಾರೆ.

ರಸಿಕ ನಲ್ಲನ ಆಸರೆಯು ಇರುವಾಗ ಇವಳ ಬದುಕಿನ ಬೇಗುದಿ ಮಾಯವಾಗುತ್ತದೆ, ಆಸೆ ಮತ್ತೆ ಚಿಗುರುತ್ತದೆ, ಪ್ರಣಯ ಮತ್ತೆ ಕೊನರುತ್ತದೆ.  ತಾಂಬೂಲದಿಂದ ಕೆಂಪಾದ ತುಟಿಯ ಈ ರಸಿಕನ ನಗೆಯು ಇವಳಿಗೆ ಬೆಚ್ಚನೆಯ, ಆಹ್ಲಾದಕರವಾದ ಹೊಂಬಿಸಲಂತೆ ಭಾಸವಾಗುತ್ತದೆ. ಅವಳ ಅಂತರಂಗದಲ್ಲಿ ಈ ಭಾವನೆಯು ‘ಬಿಂಬಿಸುತ್ತದೆ’ ಎಂದರೆ ಅವನ ಅಂತರಂಗದಿಂದ ಇವಳ ಅಂತರಂಗಕ್ಕೆ transfer ಆಗುತ್ತದೆ.

ತಂಬುಲತುಟಿ ನಗಿ ಹೊಂಬಿಸಲೆಂಬಂತೆ
ಬಿಂಬಿಸಿತವ್ವಾ ಎದಿಯಾಗ | ನಂಬೀಸಿ
ರಂಬೀಸಿತವ್ವಾ ಜೀವವ. 

ನಿರಂತರ ಪ್ರಣಯವೊಂದೇ ಅಲ್ಲ, ಬದುಕಿಗೆ ಬೇಕಾದದ್ದು ನಿರಂತರ ವಿಶ್ವಾಸವೂ ಅಹುದು. ಇವೆರಡನ್ನೂ ಈತ ತನ್ನ ನಲ್ಲೆಗೆ ಕೊಡುತ್ತಿದ್ದಾನೆ. ಆ ಮಾತನ್ನು ‘ನಂಬೀಸಿ, ರಂಬಿಸಿತವ್ವಾ ಜೀವವ’ ಎನ್ನುವ ಮೂಲಕ ಅಭಿವ್ಯಕ್ತಿಸಲಾಗಿದೆ.

ದೇಸಿ ಪದಗಳನ್ನು ಬೇಂದ್ರೆಯವರು ಎಷ್ಟು ಸಮರ್ಥವಾಗಿ ಬಳಸಬಲ್ಲರು, ತಮಗೆ ಬೇಕಾದ ಅರ್ಥವನ್ನು ಈ ಪದಗಳ ಮೂಲಕ ಹೇಗೆ ಹಿಗ್ಗಿಸಿ ಹೊರತರಬಲ್ಲರು ಎನ್ನುವದಕ್ಕೆ ಈ ಗೀತೆಯು ಶ್ರೇಷ್ಠ ಉದಾಹರಣೆಯಾಗಿದೆ. ಪದಗಳ ಅರ್ಥವನ್ನು ಅರಿಯಬಲ್ಲವನು ಪಂಡಿತ; ಪದಗಳಲ್ಲಿ ಅರ್ಥ ತುಂಬಬಲ್ಲವನು ವರಕವಿ!
‘ಜನುಮದ ಜಾತ್ರಿ’ ಕವನವು ‘ಕಾಮಕಸ್ತೂರಿ’ ಸಂಕಲನದಲ್ಲಿ ಅಡಕವಾಗಿದೆ.