Wednesday, October 29, 2014

ಸಾಹಿತ್ಯಸುಖ -೧


ಚಾಮರಸ ಕವಿ ರಚಿಸಿದ ‘ಪ್ರಭುಲಿಂಗಲೀಲೆ’ಯ ನಾಯಕಿ ಮಾಯಾದೇವಿ.  ಚಾಮರಸನು ಮಾಯಾದೇವಿಯ ಬಾಲ್ಯವನ್ನು ವರ್ಣಿಸುವ ಒಂದು ನುಡಿ ಹೀಗಿದೆ:
ಹಿಡಿಹಿಡಿದುಕೊಂಡರ್ತಿಯಲಿ
ಬೆಂಬಿಡದೆ ಶಿಕ್ಷಾಚಾರ್ಯತನದಲಿ
ಜಡಿದು ಜಂಕಿಸಿ ಮುದ್ದುತನ ಮಿಗೆ ಮಾಯೆ ತನ್ನಂತೆ
ನಡೆಯ ಕಲಿಸಿದಳಂಚೆವಿಂಡಿಗೆ
ನುಡಿಯಕಲಿಸಿದರಗಿಳಿಗೆ
ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ

ಮಾಯಾದೇವಿಯು ತನ್ನ ಅರಮನೆಯ ಪಕ್ಷಿಗಳಿಗೆ ಮುದ್ದು ಮಾಡುತ್ತ, ಹಂಸಗಳಿಗೆ ನಡೆಯುವದನ್ನು, ಗಿಳಿಗೆ ನುಡಿಯುವದನ್ನು ಹಾಗು ನವಿಲುಗಳಿಗೆ ಹಾಡುವದನ್ನು ಕಲಿಸುತ್ತಾಳೆ. ಇದಿಷ್ಟು ಈ ನುಡಿಯ ಮೇಲುಮೇಲಿನ ಅರ್ಥ. ಆದರೆ ಈ ಸಾಲುಗಳ ಒಳಗೆ ಅಡಗಿರುವ ಭಾವ ಏನೆಂದು ಹೇಳುತ್ತದೆ? ನಾನು ಹನ್ನೊಂದನೆಯ ಇಯತ್ತೆಯಲ್ಲಿ ಕಲಿಯುತ್ತಿರುವಾಗ (ಆ ಕಾಲದಲ್ಲಿ ಅದು ಎಸ್.ಎಸ್.ಸಿ.) ನಮ್ಮ ಕನ್ನಡ ಗುರುಗಳಾದ ಶ್ರೀ ಹೋಳಿಕಟ್ಟಿಯವರು ಮೆಲುದನಿಯಲ್ಲಿ ಉಸುರಿದ ಭಾವಾರ್ಥ ನನ್ನ ಕಿವಿಯಲ್ಲಿ ಇನ್ನೂ ಗುನುಗುತ್ತಿದೆ: ‘ಚಾಮರಸನು ಮಾಯಾದೇವಿಯ onset of teenageಅನ್ನು ಸೂಚಿಸುತ್ತಿದ್ದಾನೆ.’

ಈ ಅಪ್ರತ್ಯಕ್ಷ ಭಾವವನ್ನು, ಈ ಸೂಚ್ಯಾರ್ಥವನ್ನು ನಾವು ಒಳ್ಳೆಯ ಸಾಹಿತ್ಯದ ಲಕ್ಷಣ ಎಂದು ಕರೆಯಬಹುದು. ಇದನ್ನೆ ಕೆಲವು ಪಂಡಿತರು reading between the lines ಎಂದೂ ಹೇಳುತ್ತಾರೆ. ಈ ಸಾಹಿತ್ಯಕ ಗುಣವನ್ನು ನಾವು ನಮ್ಮ ಜಾನಪದ ಸಾಹಿತ್ಯದಲ್ಲಿಯೂ ಹೇರಳವಾಗಿ ನೋಡಬಹುದು. ಒಂದು ಉದಾಹರಣೆ ಎಂದರೆ ‘ಗೋವಿನ ಹಾಡು’.

ಪುಣ್ಯಕೋಟಿ ಗೋವು ಹುಲಿಗೆ ‘ಮರಳಿ ಬರುವೆ’ ಎಂದು ಮಾತು ಕೊಟ್ಟಿದೆ. ಆ ಮೇರೆಗೆ ತನ್ನ ಕರುವಿಗೆ ಕೊನೆಯ ಸಲ ಹಾಲು ಕುಡಿಸಿ, ತಾನು ಹೆಬ್ಬುಲಿ ಇದ್ದಲ್ಲಿಗೆ ಹಿಂದಿರುಗಬೇಕು. ತನ್ನ ಕಂದ ತಬ್ಬಲಿಯಾಗುತ್ತದೆ ಎನ್ನುವ ದುಃಖದ ಜೊತೆಗೆ, ತನ್ನ ಸೋದರಿ ಗೋವುಗಳು ತನ್ನ ಕಂದನಿಗೆ ಮಮತೆಯನ್ನು ತೋರಿಸುವದಿಲ್ಲ ಎನ್ನುವ ಒಳದೋಟಿ ಅದಕ್ಕಿದೆ. ಆದರೂ ಸಹ ತನ್ನ ಸೋದರಿಯರಿಗೆ ಅದು ಪ್ರಾರ್ಥಿಸುತ್ತದೆ:
ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಈ ನುಡಿಯ ಮೊದಲೆರಡು ಸಾಲುಗಳ ಕ್ರಮಬದ್ಧತೆಯನ್ನು ಗುರುತಿಸಿರಿ. ತನ್ನ ತಾಯಿಯನ್ನು ಕಳೆದುಕೊಂಡ ಕರುವು, ಇತರ ತಾಯಂದಿರಿಂದ ಅಕ್ಕರೆಯನ್ನು ಪಡೆಯಲು, ಮೊದಲು ಹೋಗುವುದು ಅವುಗಳ ಮುಖಭಾಗದ ಕಡೆಗೆ ತಾನೆ? ಆ ಆವುಗಳು ಈ ಕರುವನ್ನು ಕೋಡುಗಳಿಂದ ದೂರ ಸರಿಸುತ್ತವೆ. ಮುಖಭಂಗದಿಂದ ತ್ರಸ್ತವಾದ ಕರುವು, ‘ಹೋಗಲಿ, ನಾನು ಹಿಂಭಾಗದಲ್ಲಿ ನಿಲ್ಲುವೆ‘ ಎಂದುಕೊಂಡು ಹಿಂದೆ ಹೋದರೆ, ಆ ಆವುಗಳು, ‘ಛೇ! ದೂರ ಸರಿ; ನಿನಗೆ ನಮ್ಮ ಹತ್ತಿರ ಸ್ಥಳವಿಲ್ಲ’ ಎನ್ನುತ್ತ ಒದೆಯುತ್ತವೆ. ಈ ಕಠೋರ ಸತ್ಯದ ಅರಿವು ಪುಣ್ಯಕೋಟಿಗೆ ಇದೆ. ಆದುದರಿಂದಲೇ ಅದು ಆ ಕ್ರಮದಲ್ಲಿಯೇ ತನ್ನ ಪ್ರಾರ್ಥನೆಯನ್ನು ಮಾಡುತ್ತದೆ.

‘ಗೋವಿನ ಹಾಡ’ನ್ನು ರಚಿಸಿದ ನಮ್ಮ ಜಾನಪದ ಕವಿಗೆ ಈ ಸೂಕ್ಷ್ಮತೆಯ ಅರಿವಿದೆ. ಆದುದರಿಂದಲೇ ಆತನು ಪುಣ್ಯಕೋಟಿಯ ತಳಮಳವನ್ನು  ಕ್ರಮಬದ್ಧ ಪ್ರಾರ್ಥನೆಯ ಮೂಲಕ ಚಿತ್ರಿಸಿದ್ದಾನೆ. ಈ ವಾಸ್ತವತೆಯನ್ನು ಪುಣ್ಯಕೋಟಿಯ ಕರುವೂ ಸಹ ಊಹಿಸಿರುತ್ತದೆ. ಆದುದರಿಂದಲೇ, ‘ಅಮ್ಮ, ನೀನು ಹೋಗಲೇಕೌ; ನನ್ನ ತಬ್ಬಲಿ ಮಾಡಲೇಕೌ?’ ಎಂದು ಕರುವು ತನ್ನ ಅಮ್ಮನನ್ನು ಆರ್ತವಾಗಿ ಕೇಳುತ್ತದೆ. ಆಗ ಪುಣ್ಯಕೋಟಿಯು ಭಾರತೀಯ ತತ್ವಜ್ಞಾನದ ಚಿರಂತನ ಆದರ್ಶವನ್ನು ತನ್ನ ಕರುವಿಗೆ ಹೇಳುತ್ತದೆ:
ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’.
ಈ ರೀತಿಯಾಗಿ ಗಂಭೀರ ಘೋಷಣೆಯನ್ನು ಮಾಡಿದ ಪುಣ್ಯಕೋಟಿಯು, ‘ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನಾ.’
ಭಾರತೀಯ ತತ್ವಜ್ಞಾನವು ವೇದೋಪನಿಷತ್ತುಗಳಲ್ಲಿ ಮಾತ್ರ ಅಡಕವಾಗಿಲ್ಲ. ಅದು ಭಾರತದ ಸಾಧಾರಣ ಜನಪದರ ರಕ್ತದಲ್ಲಿ ಹರಿಯುತ್ತಿದೆ.

ನಮ್ಮ ಜಾನಪದ ಕವಿಗಳು ಸಾಹಿತ್ಯದ ಈ ಸೂಕ್ಷ್ಮತೆಯನ್ನು ಶ್ಲೇಷೆಯ ಮೂಲಕವೂ ಸಾಧಿಸಿದ್ದಾರೆ. ಈಗ ತಾನೆ ಮಗುವನ್ನು ಹೆತ್ತ ತಾಯಿಯು ತನ್ನ ಕಂದನಿಗೆ ಹೇಳುವ ತ್ರಿಪದಿಯ ಸಾಲೊಂದನ್ನು ಗಮನಿಸಿರಿ:
ಮಗ ನಿನ್ನ ಹಡೆವಾಗ ಮುಗಿಲಿಗೇರ್ಯಾವ ಜೀವ!

 ಜೀವ ಮುಗಿಲಿಗೇರಿವೆ ಎಂದರೆ ಹೆರಿಗೆಯ ಶೂಲೆ ಮಾರಣಾಂತಿಕವಾಗಿತ್ತು ಎನ್ನುವ ಅರ್ಥವನ್ನು ಕೊಡುವುದರ ಜೊತೆಗೇ, ಹೆತ್ತ ನಂತರದ ಆನಂದವು ಮುಗಿಲು ಮುಟ್ಟಿತ್ತು ಎಂದೂ ಸೂಚಿಸುತ್ತದೆ. ಈ ರೀತಿಯಾಗಿ agony and ecstacyಯನ್ನು ಒಂದೇ ಸಾಲಿನಲ್ಲಿ ತಂದ ನಮ್ಮ ಜಾನಪದ ಕವಯಿತ್ರಿ ಯಾವ ಕವಿರಾಜನಿಗೆ ಕಡಿಮೆ? ಈ ಕಾರಣಕ್ಕಾಗಿಯೇ ನೃಪತುಂಗ ಚಕ್ರವರ್ತಿಯು ಕನ್ನಡಿಗರನ್ನು ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್’ ಎಂದು ಮನಸಾರೆ ಹೊಗಳಿದ್ದು!

ಎರಡೆರಡು ಭಾವಗಳನ್ನು ಸೂಚಿಸಲು ಶ್ಲೇಷೆಯ ಸಹಾಯವೇ ಬೇಕಂತಿಲ್ಲ. ರೂಪಕಗಳ ಮೂಲಕವೂ ಇದನ್ನು ಹೇಳಬಹುದು. ತನ್ನ ಮಗ ಸಂಗನಬಸವಣ್ಣ ಸತ್ತಾಗ, ಬಸವಣ್ಣನವರು ವಿಲಪಿಸಿದ ರೀತಿಯನ್ನು ನೋಡಿರಿ:
ಪಕ್ವವಾದ ಫಲವಿರಲು ಕಸುಕಾಯನೆತ್ತಿಕೊಂಡನು ಶಿವನು.

ಜೀವನದ ಸಂಧ್ಯೆಯಲ್ಲಿರುವ ತಾನು ಸಾಯಬಹುದಾಗಿತ್ತು; ಬದುಕಿನ ಮುಂಬೆಳಗಿನಲ್ಲಿರುವ ತನ್ನ ಮಗ ಉಳಿಯಬೇಕಾಗಿತ್ತು ಎನ್ನುವ ಶೋಕ ಒಂದು ಕಡೆ; ಇದು ದೈವೇಚ್ಛೆ ಎನ್ನುವ ತಿಳಿವಿನ ಶರಣಾಗತ ಭಾವ ಇನ್ನೊಂದು ಕಡೆ;  anguish and resignation to divine will ಈ ಎರಡೂ ಭಾವಗಳನ್ನು, ಈ ಒಂದೇ ಸಾಲು ಸಮರ್ಥವಾಗಿ ಸೂಚಿಸುತ್ತದೆ.

ಇಂತಹ ಒಂದೇ ಸಾಲಿನ ಮತ್ತೊಂದು ಉದಾಹರಣೆಗಾಗಿ, ಮಸಳಿ ಎನ್ನುವ ಕವಿಗಳು ಬರೆದ ಕವನದ ಈ ಸಾಲನ್ನು ನೋಡಬಹುದು:
ಶಿವ ಬರೆದ ಕಥೆಯ ಪುಟವೊಂದು ತೆರೆದು ನನ್ನ ಮನೆ ಮೂಡಲಲಿ ಬೆಳಕಾಯಿತು
ಸೂರ್ಯೋದಯದ ವರ್ಣನೆ ಇದು. ಆದರೆ ಈ ಸಾಲಿನಲ್ಲಿ ಅದಕ್ಕೂ ಹೆಚ್ಚಿನ ಭಾವವಿದೆ. ಈ ಬಾಳು ಎನ್ನುವುದು ದೈವ ಬರೆದ, ಪೂರ್ವರಚಿತ ಕತೆ ಎನ್ನುವ ನಂಬಿಕೆ, ಈ ಕತೆಯು ಯಾವಾಗಲೂ ಮಂಗಲಕರವಾಗಿ ಇರುತ್ತದೆ ಎನ್ನುವ ಶ್ರದ್ಧೆ, ಈ ದೈವನಿರ್ಣಯವನ್ನು ಸಂತೋಷದಿಂದ ಸ್ವೀಕರಿಸುವ ಮನೋಭಾವ ಇವೆಲ್ಲವೂ ಈ ಒಂದೇ ಸಾಲಿನಲ್ಲಿ ಅಡಕವಾಗಿವೆ.

ಇನ್ನಷ್ಟು ಉದಾಹರಣೆಗಳನ್ನು ನೊಡೋಣ:
ಕನ್ನಡ ಸಾಹಿತ್ಯದ ಮಹಾನ್ ಜೀವಿ ಮಾಸ್ತಿ ವೆಂಕಟೇಶ ಅಯ್ಯಂಗಾರರು ಒಮ್ಮೆ ಕಾಶಿಗೆ ಹೋಗಿದ್ದರು. ಗಂಗಾತೀರದಲ್ಲಿ ಒಬ್ಬ ಮುದುಕ ಗಂಡಸು ತನ್ನ ಮುದುಕಿ ಹೆಂಡತಿಯ ಕೆನ್ನೆಗೆ ಹೊಡೆದದ್ದನ್ನು ಅವರು ನೋಡುತ್ತಾರೆ. ಆ ಘಟನೆ ಒಂದು ಸುನೀತವನ್ನು ರಚಿಸಲು ಅವರಿಗೆ ಪ್ರೇರಣೆ ನೀಡುತ್ತದೆ. ಆ ಸುನೀತದ ಒಂದು ಸಾಲು ಹೀಗಿದೆ:
ಬಹುದೂರ ಕರೆ ತಂದೆ ಎಲೆ ಅಣ್ಣ ಹೊಡೆಯಲಿಕೆ.

ಮಾಸ್ತಿಯವರು ಆ ಮುದುಕ ದಂಪತಿಗಳು ತಮ್ಮ ದೂರದ ಊರಿನಿಂದ ಕಾಶಿಯವರೆಗೆ ಬಂದದ್ದನ್ನಷ್ಟೇ ಹೇಳುತ್ತಿಲ್ಲ. ದೀರ್ಘದಾಂಪತ್ಯಜೀವನದ ಬಹುದೂರವನ್ನು ಈ ದಂಪತಿಗಳು ಜೊತೆಯಾಗಿ ಕ್ರಮಿಸಿದ್ದಾರೆ. ಇದು ಕಾಲದಲ್ಲಿಯ ದೂರವೂ ಅಹುದು. ಇಷ್ಟು ದೀರ್ಘ ಕಾಲ ಜೊತೆಯಾಗಿದ್ದರೂ ಸಹ ಆ ಮುದುಕನು ದಾಂಪತ್ಯದ ಪಕ್ವತೆಯನ್ನು ಪಡೆದಿಲ್ಲ ಎನ್ನುವ ಬೇಸರ ಈ ಸಾಲಿನಲ್ಲಿದೆ. ಈ ರೀತಿಯಾಗಿ ಒಂದಕ್ಕಿಂತ ಹೆಚ್ಚು ಅರ್ಥವನ್ನು ಸೂಚಿಸುವುದು ಉತ್ತಮ ಸಾಹಿತ್ಯದ ಲಕ್ಷಣವಾಗಿದೆ.

ಇನ್ನು ವರಕವಿ ಬೇಂದ್ರೆಯವರ ಕವನಗಳಲ್ಲಿ ಸೂಚ್ಯಾರ್ಥಕ್ಕೆ ಎಲ್ಲಿಯ ಕೊರತೆ?
‘ಬಾರೊ ಸಾಧನಕೇರಿಗೆ’ ಎನ್ನುವ ಅವರ ಕವನದಲ್ಲಿ ‘ಬೇಲಿಗೂ ಹೂಬೆರಳಿದೆ’ ಎನ್ನುವ ಸಾಲೊಂದು ಬರುತ್ತದೆ. ಬೇಂದ್ರೆಯವರ ಕಾಲದಲ್ಲಿ ಬಹುತೇಕ ಮನೆಗಳ ಆವರಣಗಳಿಗೆ ಕಲ್ಲಿನ ಅಥವಾ ಇಟ್ಟಿಗೆಯ ಪ್ರಾಕಾರದ ಬದಲು ಬೇಲಿಯ ಪ್ರಾಕಾರವಿರುತ್ತಿತ್ತು. ಮೊದಲನೆಯದಾಗಿ ಆ ಕಾಲದ ವಾಸ್ತವತೆಯ documentation ಇಲ್ಲಿದೆ. ಆ ಬೇಲಿಗಳ ಹೂವುಗಳು ಸಹಸಾ tubular ಆಕಾರದಲ್ಲಿದ್ದು, ನೋಡಲು ಹೂವುಗಳ ಬೆರಳುಗಳಂತೆ ಕಾಣುತ್ತಿದ್ದವು ಎನ್ನುವ ಉಪಮಾಲಂಕಾರ ಇಲ್ಲಿದೆ. ಇದಲ್ಲದೆ ಮತ್ತೊಂದು ‘ವಿರೋಧಾಲಂಕಾರ’ವೂ ಇಲ್ಲಿದೆ. Job of fence is defense by keeping the intruders out. ಆದರೆ ಈ ಬೇಲಿಯು ಅವರನ್ನು ಹೂಬೆರಳುಗಳಿಂದ ಸ್ವಾಗತಕಾರಿಣಿಯ ಹಾಗೆ ಸ್ವಾಗತಿಸುತ್ತದೆ. ಇದೆಲ್ಲವನ್ನು ಬೇಂದ್ರೆ ಒಂದು ಸಾಲಿನಲ್ಲಿ ಸಾಧಿಸಿದ್ದಾರೆ. ವಿಶೇಷತಃ ‘ವಿರೋಧಾರ್ಥ ಸೂಚನೆ’ ಬೇಂದ್ರೆಯವರಿಗೆ ಪ್ರಿಯವಾದ ಅಲಂಕಾರವಿರಬಹುದು. ಅಂತಹ ಮೂರು ಉದಾಹರಣೆಗಳನ್ನು ನೋಡೋಣ:

(೧) ‘ಬೆಳಗು’ ಇದು ಬೇಂದ್ರೆಯವರ ಪ್ರಸಿದ್ಧ ಕವನವಾಗಿದೆ. ಅದರಲ್ಲಿಯ ಒಂದು ಸಾಲು ಹೀಗಿದೆ:
ಎಲೆಗಳ ಮೇಲೆ ಹೂಗಳ ಒಳಗೆ ಅಮೃತದಾ ಬಿಂದು
ಇಬ್ಬನಿಯ ಹನಿಗಳು ಅಮೃತದ ಬಿಂದುಗಳಂತೆ ದೈವಿಕ ಸುಖವನ್ನು ನೀಡುತ್ತಿದ್ದವು ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ಅಮೃತ ಎಂದರೆ ಶಾಶ್ವತವಾದದ್ದು. ಈ ಇಬ್ಬನಿಗಳಾದರೋ ಕ್ಷಣಿಕವಾದಂತಹವು. ಇದು ಬೇಂದ್ರೆಯವರ ವಿರೋಧಾಲಂಕಾರ!
(೨) ನಲ್ಲ, ನಲ್ಲೆಯರ ಪ್ರಣಯವನ್ನು ವರ್ಣಿಸುವ ಕವನದ ಸಾಲೊಂದು ಹೀಗಿದೆ:
ಅಮೃತಂತ ಬಾಯಿ ಚಪ್ಪರಿಸತಾವ, ಕೇಳಿ ಕಣ್ಣು ಮಿಟುಕತದ ರಾತ್ರಿ’.
ನಲ್ಲ, ನಲ್ಲೆಯರು ತಮ್ಮ ಮುತ್ತುಗಳನ್ನು ಅಮೃತದಷ್ಟು ಸಿಹಿ ಎಂದು ಭಾವಿಸುತ್ತಾರೆ ಹಾಗು ಈ ಪ್ರಣಯಕೇಲಿಯನ್ನು ಕಂಡ ರಾತ್ರಿಯು ಕಣ್ಣು ಮಿಟುಕಿಸುತ್ತದೆ ಎನ್ನುವುದು ಮೇಲ್ನೋಟದ ಅರ್ಥ. ಅಮೃತ ಎಂದರೆ ಶಾಶ್ವತವಾದದ್ದು; ಕಣ್ಣು ಮಿಟಿಕಿಸುವುದು ಎಂದರೆ ಕ್ಷಣಕ್ಕೆ ಸಮಾನ ಕಾಲ ಎನ್ನುವುದು ಇಲ್ಲಿಯ ವಿರೋಧಾರ್ಥ!
(೩) ಬೇಂದ್ರೆಯವರು ಬರೆಯದೆ ಬಿಟ್ಟ ನಾಟಕದಲ್ಲಿ  ತಿರಸ್ಕೃತಳಾದ ಸೂಳೆಯೊಬ್ಬಳು ತನ್ನ ಒಲವಿನ ಗಿರಾಕಿಗಾಗಿ ವಿಲಪಿಸುತ್ತಿರುವ ಹಾಡೇ  ‘ಹುಬ್ಬಳ್ಳಿಯಾಂವಾ’ ಎನ್ನುವ ಕವನ. ಈ ಕವನದಲ್ಲಿ ಬರುವ ಈ ಸಾಲನ್ನು ನೋಡಿರಿ:
ಜಲ್ಮಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿ ಮ್ಯಾಗಿನ ಗೆಣತಿನ ಮಾಡಿ ಇಟ್ಟುಕೊಂಡಾವಾ
ಎದೆಯ ಮೇಲಿನ ಕೆಂಪು ಅಥವಾ ಕಪ್ಪು ಚುಕ್ಕೆಗೆ ‘ಗೆಳತಿ’ ಎಂದು ಹೇಳುತ್ತಾರೆ.  ‘ಎದಿ ಮೇಲಿನ ಗೆಳತಿ’ ಎಂದರೆ ಅತ್ಯಂತ ಪ್ರೀತಿಯ ಗೆಳತಿ. ಆದರೆ ಇವಳು ಗೆಳತಿಯಲ್ಲ, ಗೆಣತಿ; ಅಂದರೆ ಇಟ್ಟುಕೊಂಡವಳು. ತನ್ನ ಗಿರಾಕಿಯು ತನ್ನನ್ನು ತುಂಬ ಪ್ರೀತಿಸುತ್ತಾನೆ ಎಂದು ಭಾವಿಸುತ್ತಲೆ, ತನಗೆ ಎಂದೂ ಹೆಂಡತಿಯ ಸ್ಥಾನಮಾನ ಸಿಗಲಾರದು ಎನ್ನುವುದು ಇವಳು ತಿಳಿದುಕೊಂಡ ವಾಸ್ತವತೆ. ಇದು ಇಲ್ಲಿಯ ದ್ವಂದ್ವಾರ್ಥ.

ಕನ್ನಡದ ಪ್ರೇಮಕವಿ ಕೆ. ಎಸ್. ನರಸಿಂಹಸ್ವಾಮಿಯವರು ಇಂತಹ ಸೂಚ್ಯಾರ್ಥವನ್ನು ತಮ್ಮ ‘ಬಳೆಗಾರ ಚೆನ್ನಯ್ಯ’ ಕವನದಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೆ?
ನವಿಲೂರಿನಿಂದ ಮಾತೊಂದ ತಂದಿಹೆನು
ಬಳೆಯ ತೊಡಿಸುವದಕ್ಕಲ್ಲ ನಿಮಗೆ.

 ಈ ನುಡಿಯ ಒಂದೊಂದೇ ಸಾಲನ್ನು ಪರಿಶೀಲಿಸಿರಿ:
ಮೊದಲ ಸಾಲಿನಲ್ಲಿ ಬಳೆಗಾರನು, ತಾನು ಬಾಗಿಲಿನಲ್ಲಿ ಬಂದು ನಿಂತಿರುವೆ ಎಂದು ಕವನದ ನಾಯಕನಿಗೆ ಹೇಳುತ್ತಾನೆ. ನಾಯಕನ ಹೆಂಡತಿ ಇಲ್ಲದಾಗ, ಈ ಮನೆಯಲ್ಲಿ ತನ್ನ ಸಲಿಗೆ ಬಾಗಿಲಿನವರೆಗೆ ಮಾತ್ರ ಎನ್ನುವುದನ್ನು ಈ ಸಾಲು ಸೂಚಿಸುತ್ತದೆ.ಎರಡನೆಯ ಸಾಲಿನಲ್ಲಿ ‘ಒಳಗೆ ಬರಲಪ್ಪಣೆಯೆ ದೊರೆಯೆ?’ ಎನ್ನುವ ಬಳೆಗಾರನ ವಿನಯ ತುಂಬಿದ ವಿನಂತಿಯು ನಾಯಕನ ಅಹಂಕಾರವನ್ನು ಸೂಚಿಸುತ್ತದೆ. ಮೂರನೆಯ ಸಾಲು ಬಳೆಗಾರನ ದೌತ್ಯದ ಸೂಚನೆಯನ್ನು ಕೊಡುತ್ತದೆ. ‘ಬಳೆಯ ತೊಡಿಸುವದಕ್ಕಲ್ಲ ನಿಮಗೆ’ ಎನ್ನುವ ನಾಲ್ಕನೆಯ ಸಾಲು ನಾಯಕನಿಗೆ ಮುಸುಕಿನಲ್ಲಿ ಮುಚ್ಚಿದ ಚಾಟಿಯ ಏಟನ್ನು ಕೊಡುತ್ತದೆ.
ಬಳೆಗಾರನ ವ್ಯಂಗ್ಯಭರಿತ tongue-in-cheek ಮಾತುಗಳು ನಾಯಕನ ಧೋರಣೆಯನ್ನು ಹಾಗು ಬಳೆಗಾರನ ಪ್ರತಿಧೋರಣೆಯನ್ನು ಅಪ್ರತ್ಯಕ್ಷವಾಗಿ ವರ್ಣಿಸುತ್ತವೆ. ಅಪ್ರತ್ಯಕ್ಷ ಸೂಚ್ಯಾರ್ಥಕ್ಕೆ ಈ ನುಡಿಯು ಒಂದು ಉತ್ತಮ ಉದಾಹರಣೆಯಾಗಿದೆ.

ದ. ಬಾ. ಕುಲಕರ್ಣಿಯವರು ಸಣ್ಣ ವಯಸ್ಸಿನಲ್ಲಿಯೇ ತೀರಿಕೊಂಡರು. ಆಧುನಿಕ  ಶೈಲಿಯ ಅವರ ಕತೆಗಳು ಸ್ವಾರಸ್ಯಪೂರ್ಣವಾಗಿವೆ. ಮೂರೇ ಸಾಲುಗಳ ಅವರ ಕವನವೊಂದನ್ನು ನೋಡಿರಿ. ಇದು ಉತ್ತಮ ಕವನದ ಶ್ರೇಷ್ಠ ಉದಾಹರಣೆಯಾಗಿದೆ:
ಸೋಮವಾರ ಚಿಂತಿ
ಮಂಗಳವಾರ ಸಂತಿ
ಬುಧವಾರ ನಿಶ್ಚಿಂತಿ

ದ. ಬಾ. ಕುಲಕರ್ಣಿಯವರು ಈ ಕವನದಲ್ಲಿ ಎಲ್ಲಿಯೂ ತಮ್ಮ ಬಡತನದ ಬಗೆಗೆ ಒಂದು ಪದವನ್ನೂ ಹೇಳಿಲ್ಲ. ಆದರೆ ಈ ಮೂರು ಸಾಲುಗಳು ಅವರ ಬದುಕಿನ ಕಟು ವಾಸ್ತವನ್ನು ಹಾಗು ಅವರು ಅದನ್ನು ಸ್ವೀಕರಿಸಿ, ನಿರ್ವಹಿಸುವ ರೀತಿಯನ್ನು  ಅನನ್ಯವಾಗಿ ಚಿತ್ರಿಸಿವೆ. ಈ ವಾಸ್ತವಕ್ಕೆ ವಿನೋದದ ತೆಳು ಪರದೆ ಬೇರೆ. ಏನನ್ನೂ ಹೇಳದೆ, ಏನೆಲ್ಲವನ್ನೂ ಹೇಳುವ ಈ ಮೂರು ಸಾಲುಗಳು ದಬಾಕು ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ.

ಇಂತಹ ಸೂಕ್ಷ್ಮ ಸೂಚ್ಯತೆ ಲೌಕಿಕ ಸಾಹಿತ್ಯದಲ್ಲಿ ಮಾತ್ರ ದೊರೆಯುತ್ತದೆ ಎಂದೇನಲ್ಲ. ಪುರಂದರದಾಸರು ರಚಿಸಿದ ಅನೇಕ ಪಾರಮಾರ್ಥಿಕ ಗೀತೆಗಳಲ್ಲಿ ಈ ಸೂಕ್ಷ್ಮತೆ ಇದೆ. ಉದಾಹರಣೆಗೆ ‘ಡೊಂಕು ಬಾಲದ ನಾಯಕರೆ, ನೀವೇನೂಟವ ಮಾಡಿದಿರಿ’ ಎನ್ನುವ ಗೀತೆಯನ್ನು ನೋಡಿರಿ. ಡೊಂಕು ಬಾಲದ ನಾಯಕ ಎಂದರೆ ನಾಯಿ ಎನ್ನುವುದು ಸಹಜವಾದ ಅರ್ಥ; ವಿಷಯಸುಖಕ್ಕೆ ಜೋತು ಬಿದ್ದ ಮಾನವ ಎನ್ನುವುದು ಇಲ್ಲಿಯ ಸಾಂಕೇತಿಕ ಅರ್ಥ. ಇದಲ್ಲದೆ ಮತ್ತೊಂದು ವ್ಯಂಗ್ಯಾರ್ಥವೂ ಇಲ್ಲಿದೆ. ಪುರಂದರದಾಸರ ಪೂರ್ವದ ಹೆಸರು ಶ್ರೀನಿವಾಸ ನಾಯಕ. ಆದುದರಿಂದ ದಾಸರು ತಮ್ಮನ್ನು ತಾವೇ ಪ್ರಸ್ನಿಸಿಕೊಳ್ಳುತ್ತಿದ್ದಾರೆ, ‘ಎಲವೊ, ಡೊಂಕು ಮನಸ್ಸಿನ ಶ್ರೀನಿವಾಸ ನಾಯಕನೆ, ನೀನು ಏನೇನು ಭೋಗಗಳಿಗೆ ಆಸೆಪಟ್ಟೆಯಪ್ಪಾ, ಏನೇನು ಕರ್ಮಗಳನ್ನು ಕಟ್ಟಿಕೊಂಡೆಯಪ್ಪಾ?’ ಎಂದು!

ದೇವತಾಸ್ತೋತ್ರಗಳಲ್ಲಿಯೂ ಸಹ ಈ ಸೂಕ್ಷ್ಮಾರ್ಥವನ್ನು ಕಾಣಬಹುದು. ‘ಗಣಪತಿ ಸಹಸ್ರನಾಮ’ದಲ್ಲಿ ಗಣಪತಿಯ ಆಪಾದಮಸ್ತಕ ವರ್ಣನೆ ಇದೆ. ಅದನ್ನು ಭಾಗಶಃ ಇಲ್ಲಿ ಉದ್ಧರಿಸುತ್ತೇನೆ:
………………………..
ಭಗ್ನವಾಮರದಸ್ತುಂಗ, ಸವ್ಯದಂತೊ ಮಹಾಹನುಃ,
ಹೃಸ್ವನೇತ್ರತ್ರಯಃ, ಶೂರ್ಪಕರ್ಣೋ, ನಿಬಿಡಮಸ್ತಕಃ,
ಸ್ತಬಕಾಕಾರ ಕುಂಭಾಗ್ರೋ, ರತ್ನಮೌಲಿಃ, ನಿರಂಕುಶಃ

ಕೊನೆಯ ಸಾಲಿನಲ್ಲಿ ಗಣಪತಿಯ ಶಿರೋಭಾಗವನ್ನು ವರ್ಣಿಸಲಾಗಿದೆ. ಆನೆಯ ತಲೆಗೆ ಕುಂಭಸ್ಥಲ ಎನ್ನುತ್ತಾರೆ. ಗಣಪತಿಯ ತಲೆಯು ಆನೆಯ ತಲೆಯಂತೆ ಇರುವುದರಿಂದ, ಅದನ್ನು ಇಲ್ಲಿ ಕುಂಭ ಎಂದೇ ಕರೆಯಲಾಗಿದೆ. ಈ ಕುಂಭವು ಸ್ತಬಕದಂತೆ ವಿಶಾಲವಾಗಿದೆ. ಮದೋನ್ಮತ್ತ ಆನೆಯ ಕುಂಭದಲ್ಲಿ ರತ್ನಗಳು ಒಸರುವಂತೆ ಇಲ್ಲಿಯೂ ರತ್ನಗಳಿವೆ. ಆನೆಯ ಕುಂಭಕ್ಕೆ ಅಂಕುಶದ ನಿಯಂತ್ರಣವಿರುತ್ತದೆ. ಆದರೆ ಗಣಪತಿಯ ಕುಂಭಕ್ಕೆ ಅಂಕುಶವಿಲ್ಲ; ಅವನು ನಿರಂಕುಶನು! ಈ ರೀತಿಯಾಗಿ, ಗಣಪತಿಯ ಮೇಲೆ ಯಾರ ಅಧಿಕಾರವೂ ನಡೆಯಲಾರದು ಎನ್ನುವುದನ್ನು ಕವಿಯು ಸೂಕ್ಷ್ಮವಾಗಿ ವರ್ಣಿಸುತ್ತಿದ್ದಾನೆ.

ಕನ್ನಡದ ಹಾಸ್ಯಪಿತಾಮಹ ರಾ.ಶಿ.ಯವರು, ‘ಹಾಸ್ಯವು subtle ಪದದಲ್ಲಿಯ b ಹಾಗೆ ಇರಬೇಕು’ ಎಂದು ಹೇಳಿದ್ದರು. ಈ ಮಾತು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಅನ್ವಯಿಸುತ್ತದೆ.

12 comments:

Shashi Dodderi said...

Once again you made my day. Thanks for such a wonderful write up. Are you planning to bring all the blogs in book format?

sunaath said...

ಧನ್ಯವಾದಗಳು, ಶಶಿ. ಬೇಂದ್ರೆ ಹಾಗು ಶರೀಫರ ಬಗೆಗೆ ಬರೆದ ಕೆಲವು ಲೇಖನಗಳು ಈಗಾಗಲೇ ‘ಬೇಂದ್ರೆ-ಶರೀಫ ಕಾವ್ಯಯಾನ’ ಎನ್ನುವ ಪುಸ್ತಕರೂಪದಲ್ಲಿ ಪ್ರಕಟವಾಗಿವೆ. ಇತರ ಲೇಖನಗಳನ್ನು ಪುಸ್ತಕರೂಪದಲ್ಲಿ ತರುವ ವಿಚಾರವಿಲ್ಲ.

Badarinath Palavalli said...

ಅಪ್ರತ್ಯಕ್ಷ ಭಾವವನ್ನು ನಾನೂ ತುಸು ರೂಡಿಸಿಕೊಳ್ಳಬೇಕಿದೆ. ಓದುಗ ದೊರೆಗೆ ಕವನವನು ಹೊಸ ಪರಿಯಲ್ಲಿ ಅರ್ಥೈಸಿಕೊಳ್ಳುವ ಸದುಪಯಾಯ ಹೀಗೆ ಕಲ್ಪಿಸಿದಂತಾಗುತ್ತದೆ.

(ಅಂದಹಾಗೆ, ಈಗ ಮತ್ತು ಹಿಂದಿನ ಕಛೇರಿಗಳಲ್ಲಿ ಕೆಲಸಕ್ಕೆ ಸೇರುವಾಗಲೆಲ್ಲ ನಾನು ಮಾಲಿಕ ಮತ್ತು ಸಹೋದ್ಯೊಗಿಗಳ ಕುರಿತು ಮಾಡಿಕೊಳ್ಳುವ ಮನೋ ಪ್ರಾರ್ಥನೆ:
"ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ")

ಒಂದೇ ಸಾಲಿನಲ್ಲಿ ಹಲವು ಭಾವಗಳನ್ನು ತೋರಿಸುವ ಈ ಉಪಾಯವೂ ನನಗೆ ಹಿಡಿಸಿತು.

ತಾವು ಉಲ್ಲೇಖುಸಿದ ಮೇರು ಕವಿಗಳೆಲ್ಲರ ಸಾಲುಗಳು ನಿಮ್ಮ ಅಧ್ಯಯನಶೀಲತೆಗೆ ಉದಾಹರಣೆ.

ಇನ್ನೊಂದು ಗಣಪತಿ ಶ್ಲೋಕವಿದೆ,
......
......
ಅನೇಕ ದಂತಂ ಭಕ್ತಾನಾಂ
ಏಕದಂತಂ ಉಪಾಸ್ಮಹೇ! :)

sunaath said...

ಬದರಿನಾಥರೆ,
ನಿಮ್ಮ ಅನೇಕ ಕವನಗಳಲ್ಲಿ ಸೂಚ್ಯಾರ್ಥಗಳು ವಿಭಿನ್ನ ವಿಧಾನದಿಂದ ಈಗಾಗಲೇ ಬಂದಿವೆ. ನೀವು ಹೇಳುತ್ತಿರುವ ಗಣಪತಿ ಶ್ಲೋಕವು ತುಂಬ ಸುಂದರವಾಗಿದೆ. ನೆನಪಿಸಿದ್ದಕ್ಕಾಗಿ ಧನ್ಯವಾದಗಳು.

ಮನಸಿನಮನೆಯವನು said...

ಬರೆಯುವವರು ಅವರವರ ಆಗಿನ ಮನಸ್ಥಿತಿಯಲ್ಲಿ ಬರೆದಿರುತ್ತಾರೆ.. ವಿಭಿನ್ನ ಓದುಗರು ಓದುವಾಗ ಅವರವರ ಸ್ಥಿತಿಗೆ ತಕ್ಕಂತೆ ಅರ್ಥ ಗೋಚರವಾಗುತ್ತದೆ.. ಕೆಲವೊಮ್ಮೆ ಆ ಸಾಲುಗಳ ಹಿಂದಿನಲೇಖಕನ ಮನೋಭಾವ ಅರಿವಿಗೆ ಬಾರದೆಯೂ ಇರಬಹುದು.. ವಿಭಿನ್ನ ಮನಗಳು ಓದಿ ಹೊಸ ಅರ್ಥ ಕೊಡುತ್ತ ಚರ್ಚೆ ಮಾಡಿದರೆ ಹೊಸ ಅರ್ಥಗಳೂ ಹೊಳೆದಾವು.. ಅಂತೆಯೇ ನಾವು ಕೆಲವೊಮ್ಮೆ ರೀತಿಯಲ್ಲಿ ಅರ್ಥಗಳನ್ನು ತಿಳಿಸುತ್ತಿದ್ದೀರಿ ಅರಿವುಮೂಡಿಸುತ್ತಾ ಇದ್ದೀರಿ.. .

sunaath said...

ಗುರುಪ್ರಸಾದರೆ,
ನೀವು ಹೇಳುವುದು ಸರಿಯಾಗಿದೆ. ಬೇಂದ್ರೆಯವರು, "ನನ್ನ ಕವನದ ಅರ್ಥ ನಾನು ತಿಳಿದಂತೆ ಹೀಗಿದೆ; ಓದುಗನಿಗೆ ಬೇರೆ ಅರ್ಥ ಹೊಳೆದರೆ, ಅದೂ ಸರಿಯೆ!" ಎಂದಿದ್ದರು.

'ವಿದ್ಯಾರ್ಥಿ ಕೇಂದ್ರ' said...

ಕವಿತೆಯ ಒಂದು ಸಾಲಿನ ಅರ್ಥವನ್ನ ವಿವಿಧ ಮಗ್ಗಲುಗಳಲ್ಲಿ ಪರಿಚಯಿಸಿದ ನಿಮಗೆ ಧನ್ಯವಾದಗಳು ಕಾಕ

sunaath said...

ನಿಮಗೂ ಧನ್ಯವಾದಗಳು, ವಿದ್ಯಾರ್ಥಿ!

avyaktalakshana said...

ಎಷ್ಟು ಚಂದ ಮಾಡಿ ಕಾವ್ಯಾರ್ಥವನ್ನು ವಿಸ್ತರಿಸುತ್ತೀರಿ ಸರ್!
"ಭಾರತೀಯ ತತ್ವಜ್ಞಾನವು ವೇದೋಪನಿಷತ್ತುಗಳಲ್ಲಿ ಮಾತ್ರ ಅಡಕವಾಗಿಲ್ಲ. ಅದು ಭಾರತದ ಸಾಧಾರಣ ಜನಪದರ ರಕ್ತದಲ್ಲಿ ಹರಿಯುತ್ತಿದೆ" ಇದಂತೂ ಖಂಡಿತಕ್ಕೂ ನಿಜ.

sunaath said...

ಪ್ರಜ್ಞಾ,
ನನಗೆ ಹೊಳೆದದ್ದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಹಂಸಕ್ಷೀರನ್ಯಾಯದಂತೆ ಅದರ ಗುಣಗ್ರಹಣ ಮಾಡುತ್ತಿರುವ ನಿಮಗೆ ಧನ್ಯವಾದಗಳು.

Anil Talikoti said...

ನನ್ನನ್ನಿಷ್ಟು ಸ್ಲೊ ರೀಡರ್ ಮಾಡಿದ್ದಕ್ಕೆ ಶರಣೋ ಶಂಕರ!
~ಅನಿಲ

sunaath said...

ಅನಿಲರೆ,
Slow and steady wins the race, ಅಲ್ಲವೆ?