Monday, March 24, 2008

ಸಂಸ್ಕೃತ-ಅಸಂಸ್ಕೃತ

ಕನ್ನಡಿಗರಿಗೆ ಕಾದಂಬರಿ ಓದುವ ರುಚಿಯನ್ನು ಹಚ್ಚಿದವರೆಂದು ಅ.ನ. ಕೃಷ್ಣರಾಯರನ್ನು ನೆನೆಸಲಾಗುತ್ತಿದೆ. ಸಾಹಿತಿಗಳ ಒಳಜಗಳದಿಂದಾಗಿ ಕೃಷ್ಣರಾಯರ ಕಾದಂಬರಿಗಳಿಗೆ ಅಶ್ಲೀಲ ಸಾಹಿತ್ಯವೆನ್ನುವ ಹಣೆಪಟ್ಟಿಯನ್ನು ಅನ್ಯಾಯವಾಗಿ ಕಟ್ಟಲಾಯಿತು. ಅವರ ಕಾದಂಬರಿಗಳಲ್ಲಿ ಬರುವ ಕೆಲವು ಸ್ತ್ರೀಪಾತ್ರಗಳು ಸರಳವಾಗಿ ಅನೈತಿಕತೆಗೆ ಜಾರಿದ್ದಾರು; ಆದರೆ
ಅ. ನ. ಕೃ. ಅವರು ಎಲ್ಲಿಯೂ ಸ್ತ್ರೀಯರ ಅಂಗಸೌಂದರ್ಯವನ್ನು ವಿವರಿಸಿ ಬರೆದಿಲ್ಲ ಅಥವಾ ಎಲ್ಲಿಯೂ ಶಯನವ್ಯಾಪಾರದ ವರ್ಣನೆ ಮಾಡಿಲ್ಲ.

ಕನ್ನಡ ಕವಿಗಳು ರತಿಕ್ರೀಡೆಯನ್ನು ಸಂಸ್ಕೃತದಲ್ಲಿ ವರ್ಣಿಸಿದರೆ, ಅಶ್ಲೀಲತೆ ಮುಚ್ಚಿ ಹೋಗುವದೆ? ಗಂಗಾಧರ ಚಿತ್ತಾಲರು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ, ಸ್ವಾತಂತ್ರ್ಯ ಹೋರಾಟಕ್ಕೆ ಕೈಗೂಡಿಸಿದವರು. ಅತ್ಯಂತ ಜಾಣ ವಿದ್ಯಾರ್ಥಿ ಎಂದು ಹೆಸರು ಪಡೆದವರು. ಅವರು ಬರೆದ ಕವನ ’ಕಾಮಸೂತ್ರ’ದಲ್ಲಿ ಬಳಸಲಾದ ಸಂಸ್ಕೃತ ಪದಗಳ ಬದಲಾಗಿ, ಕನ್ನಡ ಪದಗಳನ್ನು ಬಳಸಿದರೆ, ಆ ಕವನವನ್ನು ಬಹುಶಃ ಹೋಳಿ ಹುಣ್ಣಿವೆಯಲ್ಲಿ ಹಾಡಲು ಸಹ ಪೋಲಿ ಹುಡುಗರು ನಾಚಿಕೊಳ್ಳಬಹುದು. ಆ ಕವನವನ್ನು ಓದಬಯಸುವರು.
ಮೋಟುಗೋಡೆಯಾಚೆ ಇಣುಕಬಹುದು.


ಕನ್ನಡದಲ್ಲಿ ಹೆಣ್ಣನ್ನು ಬತ್ತಲೆ ಮಾಡಿ, ಸಂಸ್ಕೃತದ ಬಣ್ಣದ ಕನ್ನಡಕ ಹಾಕಿಕೊಂಡು ನೋಡುವವರಲ್ಲಿ ಚಿತ್ತಾಳರೊಬ್ಬರೇ ಪ್ರಮುಖ ಸಾಹಿತಿಯಲ್ಲ. ನಮ್ಮ ರಾಷ್ಟ್ರಕವಿಗಳಾದ ಕುವೆಂಪುರವರ ಅನೇಕ ಕವನಗಳು ’ಸಂಸ್ಕೃತ’ವಾಗಿಯೇ ಇವೆ.
ಉದಾಹರಣೆ ನೋಡಬಯಸುವವರು ಇನ್ನೊಮ್ಮೆ
ಮೋಟುಗೋಡೆಯಾಚೆ ಇಣುಕಬಹುದು.
ಕುವೆಂಪುರವರು ರಚಿಸಿದ ಕವನ (’ಷೋಡಶಿ’)ಯ ಕೆಲವು ಸಾಲುಗಳನ್ನು ನೋಡಿರಿ.

“ದಿನವೊಂದರೊಳೆ ನಿನ್ನ ಎದೆಯ ರಸವನು ಹೀರಿ
ಸರ್ವಸ್ವವನು ನಲ್ಲೆ; ಸುಲಿಯಬಲ್ಲೆ!
…………………………….
…………………………………
ಸಂಯೋಗವೊಂದರೊಳೆ ನಿನ್ನ ನುಣ್ಣನೆ ನೊಣೆದು
ರಸಪೂರ್ಣ ಶೂನ್ಯತೆಗೆ ಕಳುಹಬಲ್ಲೆ?”

ಸಾಕೆ ಇಷ್ಟು, ಗಂಡಸ್ತನ ತೋರಿಸಲು?
ಒಂದು ಮಾತು: ಇಲ್ಲಿ ಕವಿತೆಯ ಭಾವ ಅರ್ಥವಾಗುತ್ತದೆ. ಕವಿ ತನ್ನ ಪೌರುಷವನ್ನು ಹೆಣ್ಣಿನ ಮೇಲೆ ವಿಜೃಂಭಿಸಿ ಅವಳ ಮೇಲೆ ಅಧಿಕಾರ ಸ್ಥಾಪಿಸುತ್ತಿದ್ದಾನೆ. ಆದರೆ ಇಲ್ಲಿ ಬಳಸಿದ ಪದಗಳ ಅರ್ಥವಾಗುತ್ತಿಲ್ಲ. ’ರಸಪೂರ್ಣ ಶೂನ್ಯತೆ’ ಎಂದರೇನು?
ಗಂಡಸಿಗೆ ರಸ ಹಾಗು ಹೆಣ್ಣಿಗೆ ಶೂನ್ಯತೆ ಎಂದರ್ಥವೆ?

ಕುವೆಂಪುರವರ “ಹರ-ಗಿರಿಜಾ” ಎನ್ನುವ ಕವನವನ್ನು ನೋಡಿರಿ:

“ಕ್ಷೀರವಾರ್ಧಿ ಕುಗ್ಗಿತೊ ಎನೆ
ಹಿಗ್ಗಿತಾ ಸರೋವರ;
ಸ್ಪರ್ಧಿಸಿತೆನೆ ಗಿರಿಮಂದಿರ
ವರ್ಧಿಸಿತ್ತು ಕುಂಜರ”

ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆಯೊಂದರ ಉಪಸಂಪಾದಕರೊಬ್ಬರು ಹೊಟ್ಟೆಪಾಡಿಗಾಗಿ ಅಶ್ಲೀಲ ಸಾಹಿತ್ಯ ರಚಿಸುತ್ತಿದ್ದರು. ಅವರ ಕತೆಗಳಲ್ಲಿಯೂ ಸಹ ಶಯನವರ್ಣನೆಗಳು ಸಂಸ್ಕೃತ ಭಾಷೆಯಲ್ಲಿಯೇ ಇರುತ್ತಿದ್ದವು. ಕುವೆಂಪು ಅಂತಹ ವರ್ಣನೆಗಳನ್ನು ಕನ್ನಡದಲ್ಲಿಯೇ ಮಾಡಿದ್ದಾರೆ. ಉದಾಹರಣೆಗೆ ಮತ್ತೊಮ್ಮೆ
ಮೋಟುಗೋಡೆಯಾಚೆ ಇಣುಕಬಹುದು.

ಆದರೆ, ರತಿಕ್ರೀಡೆಯ ವರ್ಣನೆ ಮಾತ್ರ ಅಸಭ್ಯ ಅನ್ನುವದು ತಪ್ಪು. ಪೌರುಷದ ವಿಜೃಂಭಣೆ ಕೂಡ ಅಸಭ್ಯವೇ. ಈ ಮಾತಿಗೆ ಅತಿ ದೊಡ್ಡ ಉದಾಹರಣೆ ಎಂದರೆ ನಮ್ಮ ಜನಪ್ರಿಯ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪನವರು. ಅವರು ತಮ್ಮ ಕಾದಂಬರಿಗಳಲ್ಲಿ ಸ್ತ್ರೀಯರ ಮೇಲಾಗುವ ದೌರ್ಜನ್ಯವನ್ನು ಸರಿಯಾಗಿಯೇ ವರ್ಣಿಸಿದ್ದಾರೆ. ಆದರೆ ನಾಯಕನ ಪೌರುಷದೆದುರು ಭೈರಪ್ಪನವರ ನಾಯಕಿ ನಿರ್ಬಲಳು.

Thursday, March 20, 2008

ಬೇಂದ್ರೆ, ಕುವೆಂಪು---ಕಾವ್ಯದೃಷ್ಟಿ

“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ;
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.”
………………………………………ಅಂಬಿಕಾತನಯದತ್ತ

ಭಾರತೀಯ ಸಾಹಿತ್ಯದ ಸಾಂಪ್ರದಾಯಿಕ ದೃಷ್ಟಿಯಲ್ಲಿ ಓದುಗನೆಂದರೆ ಸಹೃದಯ ರಸಿಕ. ಇದು ಬೇಂದ್ರೆಯವರ ದೃಷ್ಟಿಯೂ ಹೌದು. ಲೇಖಕ ಮತ್ತು ಓದುಗರ ನಡುವೆ ಇರುವ ಈ ಸಹೃದಯ ಸಂಬಂಧ ಬೇಂದ್ರೆಯವರು ಬರೆದ ಮೇಲಿನ ಸಾಲುಗಳಲ್ಲಿ ವ್ಯಕ್ತವಾಗಿದೆ. ಬೇಂದ್ರೆಯವರು ತಮ್ಮ ಓದುಗರಿಗೆ ಕಾವ್ಯಸುಧೆಯನ್ನು ನೀಡಿದರು. ಅವರ ಓದುಗರೂ ಸಹ ಅವರಿಗೆ ತಮ್ಮ ಅಭಿಮಾನ, ಪ್ರೇಮವನ್ನು ನೀಡಿದ್ದಾರೆ.

ಕುವೆಂಪು ದೃಷ್ಟಿಯು ಬೇಂದ್ರೆಯವರ ದೃಷ್ಟಿಗಿಂತ ಭಿನ್ನವಾಗಿದೆ. ಅವರು ತಮ್ಮ ಓದುಗರಿಗೆ ಆಹ್ವಾನ ನೀಡುತ್ತಾರೆ: “ನಾನೇರುವೆತ್ತರಕೆ ನೀನೇರಬಲ್ಲೆಯಾ?” ಎಂದು ಕುವೆಂಪು ಕೇಳುತ್ತಾರೆ. ಆದರೆ ಕುವೆಂಪು ಅಭಿಮಾನಿಗಳೂ ಸಹ ಕುವೆಂಪುರವರಿಗೆ ಗೌರವಾದರಗಳನ್ನು ನೀಡಿದ್ದಾರೆ. In fact ಕನ್ನಡಿಗರು ತಮ್ಮ ನೆಚ್ಚಿನ ಎಲ್ಲ ಸಾಹಿತಿಗಳ ಮೇಲೂ ತಮ್ಮ ಅಭಿಮಾನವನ್ನು ಸೂರೆ ಮಾಡಿದ್ದಾರೆ.

ಕುವೆಂಪುರವರ ಅನೇಕ ಕವನಗಳಲ್ಲಿ, ಆದೇಶವಾಕ್ಯಗಳು ಹೇರಳವಾಗಿ ಸಿಗುತ್ತವೆ.
ಉದಾಹರಣೆಗಳು:
೧) ಬಾಗಿಲಲಿ ಕೈಮುಗಿದು ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು, ಕಲೆಯ ಬಲೆಯು.

೨) ಕೈಮುಗಿ ಈ ತಂತಿಯ ಕಂಬಕ್ಕೆ
ವಂದಿಸಿ ನಡೆ ಮುಂದಕ್ಕೆ

೩) ನುಗ್ಗಿ ನಡೆ, ನುಗ್ಗಿ ನಡೆ, ನುಗ್ಗಿ ನಡೆ ಮುಂದೆ
ಹಿಗ್ಗದಯೆ, ಕುಗ್ಗದಯೆ, ಜಗ್ಗಿ ನಡೆ ಮುಂದೆ

೪) ನೀ ಮೆಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀಕುಡಿಯುವ ನೀರ್ ಕಾವೇರಿ

೫) ನೂಕಾಚೆ ದೇವರನ್, ನೂರಾರು ದೇವರನ್

ಈ ಎಲ್ಲ ಉದಾಹರಣೆಗಳು ಕುವೆಂಪುರವರ ಕವಿತೆಗಳಲ್ಲಿ ಸಹಜವಾಗಿ ವ್ಯಕ್ತವಾಗುವ ಅಧಿಕಾರ-ಧೋರಣೆಯನ್ನು ವ್ಯಕ್ತಪಡಿಸುತ್ತವೆ. ಹಾಗೆಂದ ಮಾತ್ರಕ್ಕೆ ಇದು ಕವನದ ವಿಮರ್ಶೆಯಲ್ಲ. ಕವಿಯ ಧೋರಣೆಯನ್ನು ತೋರಿಸುವದಷ್ಟೆ ಈ ಉದಾಹರಣೆಗಳ ಕೆಲಸ. ಈ ’ಯಜಮಾನ ಧೋರಣೆ’ಯ ಕೆಲವು ಕವನಗಳು ಯಶಸ್ವಿ ಕವನಗಳಾಗಿವೆ. ಉದಾಹರಣೆ:

“ನುಗ್ಗಿ ನಡೆ, ನುಗ್ಗಿ ನಡೆ, ನುಗ್ಗಿ ನಡೆ ಮುಂದೆ
ಹಿಗ್ಗದಯೆ, ಕುಗ್ಗದಯೆ, ಜಗ್ಗಿ ನಡೆ ಮುಂದೆ
……………………………………
………………………………………..
ನಾನಳಿವೆ, ನೀನಳಿವೆ, ನಮ್ಮೆಲವುಗಳ ಮೇಲೆ
ಮೂಡುವದು, ಮೂಡುವದು ಭಾರತದ ಲೀಲೆ
ನವಭಾರತದ ಲೀಲೆ!”


ಕನ್ನಡದ ಈ ಇಬ್ಬರು ಶ್ರೇಷ್ಠ ಕವಿಗಳಾದ ಬೇಂದ್ರೆ ಮತ್ತು ಕುವೆಂಪು ಇವರು ತಮ್ಮ ಸಾಹಿತ್ಯದಲ್ಲಿ ಹೆಣ್ಣನ್ನು ಯಾವ ದೃಷ್ಟಿಯಿಂದ ನೋಡಿದ್ದಾರೆ ಎಂದು ಪರೀಕ್ಷಿಸುವದು ಕುತೂಹಲಕಾರಿಯಾದ ವಿಷಯವಾಗಿದೆ.
ಕುವೆಂಪುರವರ ಜನಪ್ರಿಯ ರಚನೆಯಾದ “ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ” ಈ ಕವನದ ಕೆಳಗಿನ ಸಾಲುಗಳನ್ನು ಗಮನಿಸಿರಿ:

“ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ, ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ.”

ಪ್ರಾಚೀನ ಕಾಲದಿಂದಲೂ ’ಉಷೆ’ಯನ್ನು ಭಾರತೀಯ ಕವಿಗಳು ’ದೇವತೆ’ ಎಂದು ವರ್ಣಿಸುತ್ತ ಬಂದಿದ್ದಾರೆ. ಅಂದರೆ ಸಮಸ್ತ ಪ್ರಪಂಚಕ್ಕೆ ಇವಳು ಬೆಳಕಿನ ತಾಯಿ. ಓರ್ವ ಮನುಷ್ಯನು ತಾಯಿಯ ದೈಹಿಕ ಸೌಂದರ್ಯದ ಕಡೆಗೆ ಆತ ಲಕ್ಷ್ಯ ಕೊಡುವದಿಲ್ಲ; ಅವಳ ಮಮತೆಗೆ ಆತ ಮರಳಾಗುತ್ತಾನೆ. ಮೇಲಿನ ಸಾಲುಗಳಲ್ಲಿ “ಮೂಡುವೆಣ್ಣಿನ ಮೈಸಿರಿ ರಂಜಿಸುತ್ತಿದೆ” ಎನ್ನುವ ಹೇಳಿಕೆ sensitive ಓದುಗನಿಗೆ ಆಘಾತಕಾರಿಯಾಗುತ್ತದೆ. ಮತ್ತೂ ಅವಳ ಅಂಗಸೌಂದರ್ಯದ ಕಾರಣಕ್ಕಾಗಿ ’ಆಕೆಗೆ ಸುಪ್ರಭಾತವ ಬಯಸಿರಿ’ ಎನ್ನುವದು repugnant ಭಾವನೆಯನ್ನು ಹೊಮ್ಮಿಸುತ್ತದೆ. ಕುವೆಂಪುರವರ ಅನೇಕ ಕವನಗಳಲ್ಲಿ ಇಂತಹ ಬಾಹ್ಯಸೌಂದರ್ಯದ ಆರಾಧನೆ ನೋಡಸಿಗುತ್ತದೆ. ಉದಾಹರಣೆಗೆ ಅವರ ಮತ್ತೊಂದು ಜನಪ್ರಿಯ ಕವಿತೆಯನ್ನು ನೋಡಿರಿ:

“ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ
ಬೃಂದಾವನದಿ ಹಾಲನು ಕೊಳ್ಳುವರಾರಿಹರೆ ಹೇಳಿಂದುಮುಖಿ”

ಈ ಕವನ ಮುಂದುವರಿದಂತೆ, ಗೋಪಿ ತನ್ನ ಸಖಿಗೆ ಹೀಗೆ ಹೇಳುತ್ತಾಳೆ:
“ತೊಂಡೆಯ ಹಣ್ಣನು ತುಟಿಗಳು ನಗಲಿ, ವದನವು ಮೀರಲಿ ತಾವರೆಯ”.

ಕವಿ ಮತ್ತೊಮ್ಮೆ ದೈಹಿಕ ಚೆಲುವಿಗೆ ಮನ್ನಣೆ ಹಾಕುವದನ್ನು ಕಾಣಬಹುದು. ಸರೋಜಿನಿ ನಾಯಡು ಅವರು ಇಂಗ್ಲಿಶ್‌ನಲ್ಲಿ ಬರೆದ ಒಂದು ಕವಿತೆ ಈ ಕವನದ ಮಾತೃಕಾವ್ಯ ಎನ್ನಬಹುದು. ಆದರೆ ಆ ಕವನದಲ್ಲಿ ಸಹ ಗೋಪಿಯ ಅಂತರಾಳದ ಹಂಬಲವನ್ನು ವರ್ಣಿಸಲಾಗಿದೆಯೇ ಹೊರತು, ಗೋಪಿಯ ಬಾಹ್ಯ ಸೌಂದರ್ಯವನ್ನಲ್ಲ.
ಶ್ರೀ ಅರವಿಂದರು ಸೌಂದರ್ಯದ ನಾಲ್ಕು ಬಗೆಗಳನ್ನು ಹೇಳಿದ್ದಾರೆ. ಬಾಹ್ಯಸೌಂದರ್ಯಕ್ಕೆ ಅವರು Sensuous beauty ಎಂದು ಕರೆಯುತ್ತಾರೆ. ಕುವೆಂಪುರವರ ಕಾವ್ಯದಲ್ಲಿಇಂತಹ sensuous beautyಯ ಬಗೆಗೆ ಒಂದು ತರಹದ compulsive obsession ಇರುವದನ್ನು ಗಮನಿಸಬಹುದು.

ಬೇಂದ್ರೆಯವರ ದೃಷ್ಟಿ ಇದಕ್ಕೆ ಸಂಪೂರ್ಣ ವಿರುದ್ಧವಾದ ದೃಷ್ಟಿಯಾಗಿದೆ. ಉದಾಹರಣೆಗಾಗಿ ಅವರು ಬರೆದ “ರಾಧೆಯ ಪಾಡು” ಎನ್ನುವ ಕವನ ರಾಧೆ ಯಾವ ರೀತಿಯಲ್ಲಿ , stage by stage, ಕೃಷ್ಣನಿಗಾಗಿ ಕಾತರಿಸುತ್ತಾಳೆ ಎನ್ನುವದನ್ನು ವಿವರಿಸುತ್ತದೆ:

ಸಖಿ: ’ಮುಂದೇನೆ? / ಸಖಿ/ ಮುಂದೇನೆ?’
ರಾಧೆ: ’ರೂಪ ಗುsಣಕೆ ಮೆಚ್ಚಿ
ಬಂದೆನೆಂದೆನು ಹುಚ್ಚಿ
ಅಂದೆನೇ / ಮನದಿ / ಅಂದೆನೇ’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ’ಕಾಣುವಂತಹನಲ್ಲ
ಕಾಣದಾದನು ಗೊಲ್ಲ
ಚೆಂದೇನೆ? /ಇದು ಚೆಂದೇನೇ?’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ಇವನ ಪಂಥವ ತೊಟ್ಟು
ಬಳಗವೆಲ್ಲವ ಬಿಟ್ಟು
ಬಂದೆನೇ / ಅಲ್ಲಿ ಬಂದೆನೇ’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ’ಒರೆದನಂಗಲಾsಚಿ
ಕರೆದೆ ಜೀವವ ಚಾಚಿ
ನೊಂದೆನೇ / ಬಹಳ ನೊಂದೆನೇ’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ’ಬರನು, ಕೂತಿತು ಧನಿ
ಕಣ್ಣೆಲ್ಲ ಕಂಬನಿ
ತಂದೆನೇ! ಕರಗಿ ತಂದೆನೇ’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ’ಕರಣ ಕಳವಳಿಸೀವೆ
ಹರಣ ತಳಮಳಿಸೀವೆ
ಒಂದೇನೇ / ಸ್ಥಿತಿ ಒಂದೇನೆ?’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ’ಒಗೆದು ಹೂ ದಂಡಿಗೆ
ಯಮುನೆಯ ದಂಡಿಗೆ
ನಿಂದೆನೇ / ದುಃಖಿ ನಿಂದೆನೇ’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ಹೊಳೆಯೊಳು ಹೊತ್ತಾರೆ
ಧುಮುಕಿ ನಾ ಸತ್ತಾರೆ
ಹೊಂದೇನೇ? ಅವನ ಹೊಂದೇನೆ?’
ಸಖಿ: ’ಸಖಿ ಮುಂದೇನೆ ? / ಸಖಿ…….’
ರಾಧೆ: ’ನಲ್ಲ ತೋರಿಸಿಕೊಡು
ಬೇಕಾದ ವರ ಬೇಡು
ಅಂದೇನೇ? ಸಖಿ ಅಂದೇನೇ’
ಸಖಿ: ’ಸಖಿ ಮುಂದೇನೆ ? / ಸಖಿ…….’
ಕೃಷ್ಣ: ನಾನೆಲ್ಲಿ ಹೋಗಿದ್ದೆ
ನಿನ್ನ ಎದೆಯೊಳಗಿದ್ದೆ
ನಿಂದೆನೇ, ಹೊರಗೆ ಬಂದೇನೇ
ಸಖಿ, ಮುಂದೇನೇ/ ನಿನ್ನ ಮುಂದೇನೇ!

ಬೇಂದ್ರೆಯವರ ಈ ಕವನದಲ್ಲಿ ರಾಧೆ ತನ್ನ ಚೆಲುವಿಕೆಯ ಹಮ್ಮನ್ನು ಹಾಗು ತನ್ನ ಅಲಂಕಾರವನ್ನು ತ್ಯಜಿಸಿ ಹಂಬಲಿಸುವದನ್ನು stage by stage ತೋರಿಸಲಾಗಿದೆ. ಕೊನೆಗೊಮ್ಮೆ, ಅವಳು “ಧುಮುಕಿ ’ನಾ’ ಸತ್ತಾರೆ”, ಅಂದರೆ, ಅವಳು ಅಹಂಕಾರಶೂನ್ಯೆಯಾದಾಗ, ಅವಳ ಅಂತರಾಳದಲ್ಲಿದ್ದ ಕೃಷ್ಣ ಅವಳಿಗೆ ಕಾಣಿಸುತ್ತಾನೆ ಎನ್ನುವ ಸತ್ಯದರ್ಶನವಿದೆ.

ಬೇಂದ್ರೆಯವರ ಈ ಕವನವನ್ನು ಕುವೆಂಪುರವರ ಕವನದೊಡನೆ ಹೋಲಿಸಿದಾಗೆ ಕುವೆಂಪುರವರ ಕವಿತೆ ಬಾಲಿಶವಾಗಿ ಕಾಣುತ್ತದೆ.

Sunday, March 16, 2008

ಬೇಂದ್ರೆ, ಕುವೆಂಪು; ಉಪಮಾ-ಪ್ರಯೋಗ

ಭಾರತೀಯ ಸಾಹಿತ್ಯದಲ್ಲಿ ಕಾಳಿದಾಸನು ಔಚಿತ್ಯಪೂರ್ಣ ಉಪಮೆಗಳಿಗಾಗಿ ಪ್ರಸಿದ್ಧನಾಗಿದ್ದಾನೆ. ಅಂತೆಯೇ ’ಉಪಮಾ ಕಾಳಿದಾಸಸ್ಯ’ ಎಂದು ಹೇಳಲಾಗುತ್ತದೆ. ಕನ್ನಡದ ಅನೇಕ ಕವಿಗಳೂ ತಮ್ಮ ಸಾಹಿತ್ಯದಲ್ಲಿ ಸುಂದರವಾದ ಉಪಮೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಉದಾಹರಿಸಬಹುದು:

೧) ಕಾಲೇಜು ಹುಡುಗಿಯರ ನಗೆಯಂತೆ ಹರಡುತಿದೆ ವಿದ್ಯುದ್ವಳ್ಳಿವೆಳಗು (-ಕ.ವೆಂ.ರಾಜಗೋಪಾಲ)
೨) ತೆರೆದ ಅಂಗಡಿ ತೆರದಿ ಮಲಗಿಹಳು ತರಳೆ (-ರಾಮಚಂದ್ರ ಶರ್ಮ)
೩) ಮರದೊಳಗಡಗಿದ ಬೆಂಕಿಯಂತೆ ಎಲ್ಲೊ ಅಡಗಿದೆ ಬೇಸರ (-ಗೋಪಾಲಕೃಷ್ಣ ಅಡಿಗ)
೪) ನೀರೊಳಗೆ ವೀಣೆ ಮಿಡಿದಂತೆ ಆಡುವ ಮಾತು, ಬೇಲಿಯಲಿ ಹಾವು ಹರಿದಂತೆ (-ಕೆ.ಎಸ್. ನರಸಿಂಹಸ್ವಾಮಿ)
೫) ಬರಿದೊ ಬರಿದು, ತೆರವೊ ತೆರವು ಬಡವರ ಬಗ್ಗರ ತುತ್ತಿನ ಚೀಲಾ (-ಬೇಂದ್ರೆ)

ಬೇಂದ್ರೆ ಹಾಗು ಕುವೆಂಪು ಇವರ ಕವನಗಳಲ್ಲಿಯೂ ಅನೇಕ ಉಪಮೆಗಳು ಹರಿದು ಬಂದಿವೆ. ಕಾವ್ಯದಲ್ಲಿ ಉಪಮೆಯ ಉಪಯೋಗ ಸಹಜವಾದದ್ದೆ. ಆದರೆ ಈ ಉಪಮೆಗಳು ಸಹಜವಾಗಿರಬೇಕು ಹಾಗೂ ಹಿತಮಿತವಾಗಿರಬೇಕು. ಕಾವ್ಯಕನ್ನಿಕೆಯನ್ನು ಉಪಮಾಲಂಕಾರದಿಂದಲೇ ಮುಚ್ಚುವದು ಸರಿಯಲ್ಲ. ಕುವೆಂಪುರವರ ಅನೇಕ ಕವನಗಳಲ್ಲಿ ಈ ಆಭಾಸವು ವ್ಯಕ್ತವಾಗುತ್ತದೆ. ಅವರ ಈ ಕವನವನ್ನು ಗಮನಿಸಿರಿ:

“ಶೋಡಷ ಚೈತ್ರದ ಸುಂದರಿ ನೀನು,
ಕಾಮನ ಬಿಲ್ಲಿನ ಬಣ್ಣದ ಬೋನು,
ನಿನ್ನಾ ಕಣ್ಣು ನೀರಲ ಹಣ್ಣು
ನನ್ನೆದೆ ಹಕ್ಕಿಯೂ ಬಲೆಯಲಿ ಮೀನು!”

ಈ ನಾಲ್ಕು ಸಾಲಿನಲ್ಲಿ ಐದು ಉಪಮೆಗಳು ಬಂದಿದ್ದು, ಕುವೆಂಪು ಏನು ಹೇಳುತ್ತಾರೆನ್ನುವದೇ ತಿಳಿಯದಂತಾಗುತ್ತದೆ. ಕಾಮನ ಬಿಲ್ಲಿನಂತೆ ಈ ಶೋಡಷಿ ಮೋಹಕಳಾಗಿರುವಳೆಂದು ಕವಿ ಹೇಳುತ್ತಿದ್ದಾರೆಯೆ? ಸರಿ, ಆದರೆ ಅವಳು “ಬೋನು” ಯಾಕಾಗಬೇಕು? ಪುರುಷಾಮೃಗಗಳನ್ನು ಬಂಧಿಸಲೆಂದೆ? ಮುಂದಿನ ಸಾಲಿನಲ್ಲಿ ಅವಳ ಕಣ್ಣಿಗೆ ನೀರಲ ಹಣ್ಣಿನ ಉಪಮೆ ಕೊಡಲಾಗಿದೆ. ಆಬಳಿಕ ಕವಿಯ ಮನಸ್ಸನ್ನು ಹಕ್ಕಿಗೆ ಹೋಲಿಸಲಾಗಿದೆ. ಆ ಹಕ್ಕಿಯೇ ನೇರವಾಗಿ ಬಲೆಯಲ್ಲಿ ಬೀಳಬಹುದಾಗಿತ್ತಲ್ಲ; ಅದೇಕೆ ಮೀನು ಆಗಬೇಕು? ಉತ್ತರ ಸ್ಪಷ್ಟವಿದೆ. ’ಬೋನು’ ಈ ಪದಕ್ಕೆ ಪ್ರಾಸ ಕೂಡಿಸಲು ’ಮೀನು’ ಅವಶ್ಯವಾಗಿದೆ. ಈ ರೀತಿಯಾಗಿ ಕುವೆಂಪುರವರು ತಮ್ಮ ಉಪಮೆಗಳ ಮೂಲಕ ಇಲ್ಲೊಂದು ಗೋಜಲನ್ನು ಸೃಷ್ಟಿಸಿದ್ದಾರೆ.
“ಶರತ್ಕಾಲದ ಸೂರ್ಯೋದಯದಲಿ” ಎನ್ನುವ ಅವರ ಇನ್ನೊಂದು ಕವನವನ್ನು ಗಮನಿಸಿ:

“ಹಚ್ಚನೆ ಪಚ್ಚನೆ ವೇದಿಕೆಯಲ್ಲಿ
ಸಾಸಿರಗಟ್ಟಲೆ ಮುತ್ತನು ಚೆಲ್ಲಿ
ರನ್ನದ ಕಿರುಹಣತೆಗಳಲ್ಲಿ
ಶ್ಯಾಮಲ ತೈಲದಿ ಹೊನ್ನಿನ ಬತ್ತಿ—
ಕಾಮನ ಬಿಲ್ಲಿನ ಬೆಂಕಿಯು ಹೊತ್ತಿ
ಸೊಡರುರಿಯುತ್ತಿವೆ ಅಲ್ಲಲ್ಲಿ!”

ಈ ಕವನದ ಯಥಾರ್ಥತೆಯನ್ನು ಅರ್ಥ ಮಾಡಿಕೊಳ್ಳಲು ನಾನು ತಿಣುಕಾಡಿ ಸೋತಿದ್ದೇನೆ. ಇಂತಹ ಉಪಮೆಗಳ ಗೊಂದಲವನ್ನು ಸೃಷ್ಟಿಸುವದು ಕುವೆಂಪುರವರಿಗೆ ಸರಳಸಿದ್ಧಿಯಾಗಿದೆ! ಅಲ್ಲದೆ ಕುವೆಂಪುರವರಿಗೆ ’ಬಲೆ’ಯ ಮೇಲೆ ಅದೇನೊ ಪ್ರೀತಿ. ಅವರ ಒಂದು ಜನಪ್ರಿಯ ಕವನದ ಈ most quoted ಸಾಲುಗಳನ್ನು ಗಮನಿಸಿರಿ:

“ಬಾಗಿಲಲಿ ಕೈಮುಗಿದು, ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು!”

ಕುವೆಂಪುರವರ ಶೋಡಷಿ ಪುರುಷರಿಗೆ ’ಬಲೆ’ಯಾಗಿದ್ದಳೆಂದರೆ, ಅವರ ಮಾತುಗಳನ್ನು ಒಪ್ಪಿಕೊಳ್ಳಬಹುದು. ಆದರೆ, ಬೇಲೂರಿನ ಶಿಲ್ಪಸೌಂದರ್ಯದ ಕಲೆ ಯಾವ ರೀತಿಯ ಬಲೆ ಎನ್ನುವದು ಅರ್ಥವಾಗುವದಿಲ್ಲ. ಜೇಡನ ಬಲೆಯೆ, ಮೀನಿನ ಬಲೆಯೆ…………..? ಇದಾವ ಬಲೆ, ದೇವರೆ!

ಕುವೆಂಪುರವರಿಗೆ ಹೋಲಿಸಿದರೆ ಬೇಂದ್ರೆಯವರ ಉಪಮೆಗಳು ಅತಿ ಸರಳ. ಒಂದು ಉದಾಹರಣೆ:

“ಮರವು ನಾವು, ನೀವು ಹೂವು
ನಮಗೆ ನಲಿವು ನೀವಿರೆ
ಇರಲಿ ನೀರು ಕಪ್ಪೆ ಕೆಸರು
ಸಾಕು ಇರಲು ತಾವರೆ!”

ತಂದೆ,ತಾಯಿ ಹಾಗು ಮಕ್ಕಳಿಗೆ ನೀಡಲಾದ ಈ ಹೋಲಿಕೆ ಸಂಸಾರ ಸಾಫಲ್ಯವನ್ನು ಅತ್ಯಂತ ಸರಳವಾಗಿ ಹೇಳುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ( ಕುಮಾರವ್ಯಾಸನ ಒಂದು ರೂಪಕ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ: “ಬಂಧುಗಳ ದರುಶನ ಫಲವಲಾ ಸಂಸಾರ ತರುವಿಂಗೆ!”)


ಬೇಂದ್ರೆಯವರ ಉಪಮೆಗಳು ಕೇವಲ ಅಲಂಕಾರಿಕ ವಸ್ತುಗಳಾಗಿಲ್ಲ. ಅವು ಭಾವಸೃಷ್ಟಿಗೆ ಪೂರಕವಾಗಿವೆ. ಉದಾಹರಣೆಗೆ ಅವರ “ಗಮಗಮಾ ಗಮಾಡಸ್ತಾವ ಮಲ್ಲಿಗಿ” ಕವನದಲ್ಲಿಯ ಈ ಸಾಲುಗಳನ್ನು ನೋಡಿರಿ:

“ಚಿಕ್ಕಿ ತೋರಸ್ತಾವ ಚಾಚಿ ಬೆರಳ
ಚಂದ್ರಾಮ ಕನ್ನಡೀ ಹರಳ”

“ಇಂತಹ ಸುಂದರ ಬೆಳದಿಂಗಳಿನಲ್ಲಿ ನನ್ನನ್ನು ಬಿಟ್ಟು ಎಲ್ಲಿ ಹೋಗುತ್ತಿರುವಿ?” ಎಂದು ನಲ್ಲೆ ತನ್ನ ನಲ್ಲನನ್ನು ಕೇಳುತ್ತಿದ್ದಾಳೆ. ಚಂದ್ರಾಮ ಕನ್ನಡಿ ಹರಳಾಗಿದ್ದಾನೆ ಎನ್ನುವ ಉಪಮೆ ಅನ್ಯೋನ್ಯ ದೇಸಿ ಉಪಮೆಯಾಗಿದೆ. ಅವನನ್ನು ಚಿಕ್ಕಿಗಳು ಬೆರಳು ಚಾಚಿ ತೋರಿಸುತ್ತವೆ (twinkling) ಎನ್ನುವದು , ವಾಸ್ತವತೆಯನ್ನು ಕಲ್ಪನೆಯ ರೂಪದಲ್ಲಿ ತೋರಿಸುವ ಬೇಂದ್ರೆಯವರ ಸಹಜ ಜಾಣ್ಮೆ. ಇದರ ಪರಿಣಾಮವೆಂದರೆ ಉತ್ಕಟವಾದ ಭಾವಸೃಷ್ಟಿ.

ಬೇಂದ್ರೆಯವರ “ನೀ ಹೀಂಗ ನೋಡಬ್ಯಾಡ ನನ್ನ” ಕವಿತೆಯಲ್ಲಿ, ಉಪಮೆಗಳು ಸೃಷ್ಟಿಸುವ emotion ಅದ್ಭುತವಾದದ್ದು:

“ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿ ಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರ ಕಂಡ ಒಮ್ಮಿಗಿಲs
ಹುಣ್ಣಿವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ!”

’ಉಪಮಾ ಅಂಬಿಕಾತನಯದತ್ತಸ್ಯ’ ಎಂದರೆ ತಪ್ಪಾಗಲಿಕ್ಕಿಲ್ಲ , ಅಲ್ಲವೆ?

Friday, March 14, 2008

ಬೇಂದ್ರೆ ಮತ್ತು ಕುವೆಂಪು:

ಬೇಂದ್ರೆ ಮತ್ತು ಕುವೆಂಪು ಇವರಿಬ್ಬರೂ ಕನ್ನಡದ ನವೋದಯ ಕಾಲದ ಶ್ರೇಷ್ಠ ಕವಿಗಳು. ಇಬ್ಬರೂ ಜ್ಞಾನಪೀಠ ಪ್ರಶಸ್ತಿ ವಿಜೇತರು. ಆದರೆ ಇವರೀರ್ವರ ಕಾವ್ಯದೃಷ್ಟಿ ಹಾಗು ಕಾವ್ಯಸೃಷ್ಟಿಯಲ್ಲಿ ಅಪಾರವಾದ ಭಿನ್ನತೆ ಇದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರಿಸರದ ನಿರ್ಮಿತಿಯಾಗಿರುತ್ತಾನೆ. ಬೇಂದ್ರೆ ಹಾಗು ಕುವೆಂಪು ಸಹ ತಮ್ಮ ತಮ್ಮ ಪರಿಸರಗಳ ನಿರ್ಮಿತಿಗಳೇ. ಅವರ ಕಾವ್ಯದ ಅಧ್ಯಯನವು ಈ ಕಾವ್ಯದಿಗ್ಗಜಗಳ ಮೇಲಿನ ಪರಿಸರದ ಪ್ರಭಾವವನ್ನು ವ್ಯಕ್ತಪಡಿಸುತ್ತದೆ.

ಬೇಂದ್ರೆ ಮತ್ತು ಕುವೆಂಪು ಯಾವ ರೀತಿಯಲ್ಲಿ ಭಿನ್ನರಾಗಿದ್ದಾರೆ?...... ಒಂದು ಪರಿಮಿತ ಹೋಲಿಕೆಯ ಮೂಲಕ ಈ ಭಿನ್ನತೆಯನ್ನು ಸ್ವಲ್ಪ ಮಟ್ಟಿಗೆ ವಿವರಿಸಬಹುದು. ಕಾವ್ಯಶೈಲಿಯ ಮಟ್ಟಿಗೆ ಬೇಂದ್ರೆ ಪುರಂದರದಾಸರಾದರೆ, ಕುವೆಂಪು ಕನಕದಾಸರು.

ಬೇಂದ್ರೆಯವರ ಕಾವ್ಯದಲ್ಲಿ ಸರಳತೆ ಎದ್ದು ಕಾಣುವದು. ಕುವೆಂಪುರವರ ಕಾವ್ಯದಲ್ಲಿ ಕ್ಲಿಷ್ಟ ಪದಪುಂಜಗಳು ಸಾಮಾನ್ಯ. ಬೇಂದ್ರೆಯವರಲ್ಲಿ ದೇಸಿ ಪದಗಳೇ ಜಾಸ್ತಿ; ಕುವೆಂಪು ಕಾವ್ಯದಲ್ಲಿ ಸಂಸ್ಕೃತ ಹಾಗು ಹಳಗನ್ನಡ ಪದಗಳೇ ಹೆಚ್ಚು. ಬೇಂದ್ರೆಯವರ ಉಪಮೆಗಳು ನೆಲದ ಮೆಲೆ ನಿಂತಿವೆ. ಕುವೆಂಪುರವರ ಪ್ರತಿಮೆಗಳು ಆಕಾಶದಲ್ಲಿ ಮೋಹಕವಾಗಿ ಹಾರಾಡುತ್ತಿರುತ್ತವೆ. ಬೇಂದ್ರೆ ತಮ್ಮ ಕವನಗಳಲ್ಲಿ ತತ್ವಜ್ಞಾನವನ್ನು ಸಾರುವದಿಲ್ಲ. ಕುವೆಂಪುರವರ ಕವನಗಳಲ್ಲಿ ತತ್ವಜ್ಞಾನ ಹಾಗು ಆದೇಶವಾಕ್ಯ ಸಾಮಾನ್ಯವಾಗಿ ಇದ್ದೇ ಇರುತ್ತದೆ.
ಇವರೀರ್ವರ ಶೈಲಿಯ ವಿಭಿನ್ನತೆಯನ್ನು ತೋರುವ ಕೆಲವು ಉದಾಹರಣೆಗಳು ಇಂತಿವೆ:

೧) ಮೊದಲನೆಯ ಉದಾಹರಣೆ:
ಬೇಂದ್ರೆ ಬರೆದ “ಪಾತರಗಿತ್ತಿ ಪಕ್ಕ” ಹಾಗು ಕುವೆಂಪು ಬರೆದ “ಬಣ್ಣದ ಚಿಟ್ಟೆ” ಈ ಕವನಗಳನ್ನು ಹೋಲಿಸಿರಿ. ’ಪಾತರಗಿತ್ತಿ ಪಕ್ಕ’ ಕವನವನ್ನು ಇದೇ blogದಲ್ಲಿ ಬೇರೆಡೆ ಕೊಡಲಾಗಿದೆ. ಆದುದರಿಂದ ಕುವೆಂಪುರವರ ಕವನ “ಬಣ್ಣದ ಚಿಟ್ಟೆ”ಯಿಂದ ಮಾತ್ರ ಇಲ್ಲಿ ಉದ್ಧರಿಸಲಾಗಿದೆ:

"ಪೂವಿಂ ಪೂವಿಗೆ ಚಿಮ್ಮುತ ಹಾರಿ,
ಸುಮಹೃದಯದ ನವಮಧುವನು ಹೀರಿ,
ಬನಗಳ ಬಣ್ಣದ ಕವಿತೆಯದೊಂದು
ಮುದ್ದನು ಸೂಸಿತು ನನ್ನೆಡೆ ಬಂದು!
ಸುಗ್ಗಿಯ ತಿಂಗಳ ಹೂವುಗಳೆಲ್ಲ,
ಇಂದಿರವಿಲ್ಲಿನ ರಾಗಗಳೆಲ್ಲ
ಬಣ್ಣದ ಚಿಟ್ಟೆಯ ರೆಕ್ಕೆಯ ಮೇಲೆ
ಕುಣಿದವು, ಕಬ್ಬಿಗ ಮುದದಲಿ ತೇಲೆ!
ನೇಸರು ಮೆರೆದನು ಬಾಂದಳದಲ್ಲಿ;
ಹಕ್ಕಿಗಳುಲಿದವು ಬನ ಬನದಲ್ಲಿ!
ಸಾವಿರ ಸುಮಗಳು ತರುಲತೆಗಳಲಿ
ತಲೆದೂಗಿದ್ದವು ತಂಗಾಳಿಯಲಿ!
ಬಾನೂ, ಬನವೂ, ತಿರೆಯೂ, ಗಿರಿಯೂ,
ಎಲ್ಲವು ಚಿಟ್ಟೆಯ ಸಲುವಾಗಿ,
ಯಾರೊ ರಚಿಸಿದ ರಂಗದ ತೆರದಲಿ
ಮೆರೆದವು ಕಣ್ಣಿಗೆ ಚೆಲುವಾಗಿ!"

ಕುವೆಂಪು ಬರೆದ ಈ ಕವಿತೆ ಹಳಗನ್ನಡ ಕವನವೇನೊ ಎಂದು ಭಾಸವಾಗುವದು!

೨) ಎರಡನೆಯ ಉದಾಹರಣೆ:
ಬೇಂದ್ರೆ ’ಮಲೆನಾಡ ಸೆರಗು’ ಎಂದು ಕರೆಯಿಸಿಕೊಳ್ಳುವ ಧಾರವಾಡದ ಪರಿಸರದ ಬಗೆಗೆ ಹೀಗೆ ಹಾಡಿದ್ದಾರೆ:

ಏನು ಅಂದವೋ! ಅಹಹ! ಎನಿತು ಚೆಂದವೋ!!
ಬಟ್ಟ ಬಯಲು ಅತ್ತ ಇತ್ತ
ಹಸಿರು ಹುಲ್ಲು ಮೊತ್ತ ಮೊತ್ತ
ಪಚ್ಚೆಪಯಿರು ಸುತ್ತಮುತ್ತ
ಏನು ಅಂದವೋ! ಅಹಹ! ಎನಿತು ಚೆಂದವೋ!!

ಈಗ ಕುವೆಂಪುರವರ ಕವನ ಮಲೆನಾಡಿನ ಬಗೆಗೆ:

ಸೊಂಡಿಲ ಮೇಗಡೆ ಸೊಂಡಿಲ ಚಾಚಿ
ವಿಶಾಲ ವ್ಯೋಮದ ಕರೆಯನೆ ಬಾಚಿ
ಸ್ಪರ್ಧಿಸುತಿರುವದೊ ಎನೆ ದಿಗ್ದಂತಿ
ಹಬ್ಬಿದೆ ಸುತ್ತಲು ದಿಗಂತ ಪಂಕ್ತಿ
ಗಂತಿ ಗಂತಿ!

ಕುವೆಂಪುರವರ ಕವನಗಳಲ್ಲಿಯ ಸಂಸ್ಕೃತಬಾಹುಳ್ಯ ರಚನೆ ಹಾಗು ಹಳಗನ್ನಡದ ಬಳಕೆಯನ್ನು ಬೇಂದ್ರೆಯವರ ’ದೇಸಿ ಕವನ’ದ ತಿಳಿಗನ್ನಡಕ್ಕೆ ಹೋಲಿಸಬಹುದು.

ಇದಿಷ್ಟು ಒಟ್ಟಾರೆ ಅಧ್ಯಯನದ ಒಂದು ಭಾಗ.

ಕವಿಯ ಅಭಿವ್ಯಕ್ತಿಯನ್ನು ಆಧರಿಸಿ, ಅವನ ಮನೋವೈಜ್ಞಾನಿಕ ಪರಾಮರ್ಶೆ ಮಾಡಲು ಸಾಧ್ಯವಿದೆ. ಆದರೆ ಆ ತರಹ ಮಾಡುವದು ಸುರುಚಿಯಲ್ಲ, ಸುನೀತಿಯೂ ಅಲ್ಲ. ಬೇಂದ್ರೆ ಯಾಕೆ ’ದೇಸಿ’ ಅಭಿವ್ಯಕ್ತಿಗೆ ವಾಲಿದರು ಹಾಗು ಕುವೆಂಪು ’ಅತಿಶಿಷ್ಟ ಶೈಲಿಯ’ ಅಭಿವ್ಯಕ್ತಿಗೆ ಯಾಕೆ ವಾಲಿದರು ಎನ್ನುವದನ್ನು ನಾವೇ ಊಹಿಸಬೇಕಷ್ಟೆ!

Monday, March 10, 2008

ಬೇಂದ್ರೆಯವರ ದಾಂಪತ್ಯಗೀತೆಗಳು

ವರಕವಿ ಬೇಂದ್ರೆಯವರು ಪ್ರೇಮಗೀತೆಗಳನ್ನು ಬರೆದಿದ್ದಾರೆಯೆ? ಇದಕ್ಕೆ ಉತ್ತರ ಹೇಳುವದು ಕಷ್ಟ. ಬೇಂದ್ರೆಯವರು ಅನೇಕ ದಾಂಪತ್ಯಗೀತೆಗಳನ್ನು ರಚಿಸಿದ್ದಾರೆ. ಆದರೆ ಈ ಗೀತೆಗಳಿಗೆ ಪ್ರೇಮಗೀತೆ ಅಥವಾ ಪ್ರಣಯಗೀತೆ ಎಂದು ಕರೆಯುವದು ಸಾಹಸದ ಮಾತಾಗುತ್ತದೆ. ಯಾಕೆಂದರೆ ’ಬಡತನ’ ಅಥವಾ ಸಂಕಷ್ಟಸೂಚಿಯಾದ ಪದವಿಲ್ಲದ ಅವರ ದಾಂಪತ್ಯಗೀತೆ ಇಲ್ಲವೇ ಇಲ್ಲ ಎನ್ನಬಹುದು. ಅವರ ಜನಪ್ರಿಯ ಪ್ರೇಮಗೀತೆಯನ್ನೇ ಉದಾಹರಣೆಗಾಗಿ ಗಮನಿಸಿರಿ:

“ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡವದನೆ ನಾವು
ಅದಕು ಇದಕು ಎದುಕೂ”.

ಕವನ ಪ್ರಾರಂಭವಾಗುವದೇ ಬಡತನದಿಂದ. ಈ ಕವನವನ್ನು ಕೆ. ಎಸ್. ನರಸಿಂಹಸ್ವಾಮಿಯವರ ಕವನದೊಂದಿಗೆ ಹೋಲಿಸಿ ನೋಡಿರಿ:

“ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಕೋಟಿ ರುಪಾಯಿ”.

ನರಸಿಂಹಸ್ವಾಮಿಯವರ ಪ್ರೇಮಗೀತೆಗಳಲ್ಲಿ ಬಡತನಕ್ಕೆ ಸ್ಥಾನವೇ ಇಲ್ಲ. ದಂಪತಿಗಳ ಪರಸ್ಪರ ಪ್ರೇಮವೇ ಅವರ ಶ್ರೀಮಂತಿಕೆ.

ಬೇಂದ್ರೆಯವರ ಎಲ್ಲ ಕವನಗಳಲ್ಲೂ ಓದುಗನನ್ನು ಚಕಿತಗೊಳಿಸುವ ಪದಚಾತುರ್ಯವಿದೆ, ಕಲ್ಪನಾವೈಭವವಿದೆ. ಅದರಂತೆ ಅವರ ಪ್ರೇಮಗೀತೆಗಳಲ್ಲೂ ಸಹ ಈ ಜಾಣ್ಮೆ ಕಂಡು ಬರುತ್ತದೆ. ಅದಕ್ಕೆ ಮುಂದಿನ ಸಾಲುಗಳೇ ಸಾಕ್ಷಿ:

“ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬಟ್ಟೆ”.

ದಂಪತಿಗಳಲ್ಲಿ ಸಾಮರಸ್ಯ ಹಾಗು ಸಾಂಗತ್ಯದ ಸಂತೋಷವನ್ನು ತೋರಿಸುವ ಇಂತಹ ಸಾಲುಗಳು ಬೇರೆಲ್ಲೂ ಸಿಗಲಾರವು. ಆದರೆ ಈ ಕವನದಲ್ಲೂ ಬಡತನ ತನ್ನ ಮುಖವನ್ನು ತೋರಿಸದೇ ಬಿಟ್ಟಿಲ್ಲ. ಈ ಕವನವನ್ನು ನರಸಿಂಹಸ್ವಾಮಿಯವರ ಈ ಕವನದೊಂದಿಗೆ ಹೋಲಿಸಿರಿ:

“ತೆಂಗು ಗರಿಗಳ ಮೇಲೆ ತುಂಬ ಚಂದಿರ ಬಂದು
ಬೆಳ್ಳಿ ಹಸುಗಳ ಹಾಲ ಕರೆಯುವಂದು
ಅಂಗಳದ ನಡುವೆ ಬೃಂದಾವನದ ಬಳಿ ನಿಂದು
ಹಾಡುವೆವು ಸಿರಿಯ ಕಂಡು.
ತಾರೆಗಳ ಮೀಟುವೆವು; ಚಂದಿರನ ದಾಟುವೆವು
ಒಲುಮೆಯೊಳಗೊಂದು ನಾವು;
ನಮಗಿಲ್ಲ ನೋವು, ಸಾವು”.

“ಹಾಡುವೆವು ಸಿರಿಯ ಕಂಡು” ಎನ್ನುವ ಸಾಲನ್ನು ಗಮನಿಸಿರಿ. ಪ್ರಕೃತಿಯ ಸಿರಿಯೆ ಈ ಪ್ರೇಮಿಗಳ ಸಿರಿ. ಈ ಕವನದಲ್ಲಿಯ ಪ್ರೇಮಭಾವನೆಯ ಉತ್ಕಟತೆ ಬೇಂದ್ರೆಯವರ ಪ್ರೇಮಕವನಗಳಲ್ಲಿ ಕಾಣಲಾರದು. ನರಸಿಂಹಸ್ವಾಮಿಯವರ ಕವನದ ದಂಪತಿಗಳು ಪ್ರೇಮಜೀವಿಗಳು; ಬೇಂದ್ರೆಯವರ ಕವನದ ದಂಪತಿಗಳು ಸಂಕಟಜೀವಿಗಳು. ಬೇಂದ್ರೆಯವರ ಶ್ರೇಷ್ಠ ದಾಂಪತ್ಯಗೀತೆಗಳು ಸಂಕಟದ ಗೀತೆಗಳೇ ಆಗಿವೆ:

“ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತs
ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ
ಏರಿಕಿ ನಗಿ ಇತ್ತs
ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ
ಹೋಗೇತಿ ಎತ್ತೆತ್ತs

ಅಥವಾ ಈ ಕವನ ನೋಡಿರಿ:
“ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
ಹುದುಲಾಗ ಸಿಕ್ಕೇನs”

ಅಥವಾ ಈ ಕವನ ನೋಡಿರಿ:
“ತಿಣಿ ತಿಣಿಕಿ
ಇಣಿಕಿಣಕಿ
ಒಳಹೊರಗ ಹಣಿಹಣಿಕಿ
ಸಾಕಾತು ಸುಳ್ಳೆಣಕಿ
ಕುಣಿಯೋಣ ಬಾರs
ಕುಣಿಯೋಣು ಬಾ”

’ಸಖೀಗೀತ’ವಂತೂ ಕನ್ನಡದ ಶ್ರೇಷ್ಠ ದಾಂಪತ್ಯಗೀತೆ. ಆದರೆ ಇಲ್ಲಿಯೂ ಸಹ ಬೇಂದ್ರೆಯವರು ತಮ್ಮ ಕಳೆದ ಜೀವನದ ದುಃಖಗಳನ್ನು ತಮ್ಮ ಹೆಂಡತಿಯೊಡನೆ ಹಂಚಿಕೊಳ್ಳುತ್ತಿದ್ದಾರೆಯೇ ಹೊರತು ಸುಖವನ್ನಲ್ಲ.

“ಸಖಿ ನಮ್ಮ ಸಖ್ಯದ ಆಖ್ಯಾನ ಕಟು-ಮಧುರ
ವ್ಯಾಖ್ಯಾನದೊಡಗೂಡಿ ವಿವರಿಸಲೇ
ಕರುಳಿನ ತೊಡಕನ್ನು ಕುಸುರಾಗಿ ಬಿಡಸಿಟ್ಟು
ತೊಡವಾಗಿ ತಿರುಗೊಮ್ಮೆ ನಾ ಧರಿಸಲೇ?

ಇರುಳು ತಾರೆಗಳಂತೆ ಬೆಳಕೊಂದು ಮಿನುಗುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ;
ಪಟ್ಟ ಪಾಡೆಲ್ಲವು ಹುಟ್ಟು ಹಾಡಾಗುತ
ಹೊಸದಾಗಿ ರಸವಾಗಿ ಹರಿಯುತಿವೆ.”

ಇಷ್ಟು ಹೇಳಿ ಬೇಂದ್ರೆ ಸುಮ್ಮನಾಗುವದಿಲ್ಲ; ಸ್ವಲ್ಪ ಕಟುವಾಗಿಯೇ ಹೆಂಡತಿಗೊಂದು ಸತ್ಯದರ್ಶನ ಮಾಡಿಸುತ್ತಾರೆ:

“ತಾಂಡವ ನಡೆಸಿದ ಝಂಝಾವಾತದ
ಕಾಲಿನ ಹುಲುಗೆಜ್ಜೆ ನಾವಾಗಿರೆ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ!”

(ಹೆಂಡತಿಯನ್ನು ಕಾಮಾಕ್ಷಿ ಎಂದು ಸಂಬೋಧಿಸುವಾಗ, ಕೇವಲ ಅಲಂಕಾರದ ಬಳಕೆಯಾಗಿಲ್ಲ. ಕಾಮ+ಅಕ್ಷ=portal of desire ಎನ್ನುವ ಅರ್ಥವೂ ಇಲ್ಲಿದೆ.
ಕೊನೆ ಅಂದರೆ ಕೇವಲ ’ಅಂತ’ ಅನ್ನುವ ಅರ್ಥವಿರದೇ, ’ಕೊನೆ=ಗೊನೆ=fruit’ ಎನ್ನುವ ಅರ್ಥವೂ ಇದೆ.)

ಹಾಗಿದ್ದರೆ ಬೇಂದ್ರೆಯವರ ದಾಂಪತ್ಯಗೀತೆಗಳೆಲ್ಲವೂ ’ಶೋಕಗೀತೆ(!)ಗಳೇ ಎನ್ನುವ ಸಂಶಯ ಬರಬಹುದು!
’ಬೆಂದರೇ ಅದು ಬೇಂದ್ರೆ’ ಎಂದ ಬೇಂದ್ರೆಯವರ ಬಾಳಿನಲ್ಲಿ ಸಂಕಷ್ಟಗಳ ಕಾರ್ಮೋಡಗಳು ಸುರಿಯುತ್ತಲೇ ಇದ್ದವು. ಈ ಸಂಕಷ್ಟಗಳು ದಂಪತಿಗಳನ್ನು ಮತ್ತಷ್ಟು ಬೆಸೆಯುವ ಕಾರ್ಯವನ್ನು ನಿರ್ವಹಿಸುತ್ತವೆ, ಅಲ್ಲವೆ? ಇವೆಲ್ಲವನ್ನು ದಂಪತಿಗಳಿಬ್ಬರೂ ಕೂಡಿಯೇ ನೆನಸಿಕೊಂಡು ನಗಬೇಕಲ್ಲವೆ? ತಮ್ಮ ಜೀವನ ದರ್ಶನವನ್ನು ಜೊತೆಯಾಗಿಯೆ ಮಾಡಬೇಕಲ್ಲವೆ? ಅಂತೆಯೆ ಬೇಂದ್ರೆ ತಮ್ಮ ಹೆಂಡತಿಗೆ ಹೇಳುತ್ತಾರೆ:

(ಬರುವದೇನೆ ನೆಪ್ಪಿಗೆ)

“ಬರುವದೇನೆ ನೆಪ್ಪಿಗೆ,
ನಮ್ಮ ನಿಮ್ಮ ಒಪ್ಪಿಗೆ
ಎಲ್ಲೊ ಏನೊ ನೋಡಿದೆ
ಹಾಗೆ ಬಂದು ಕೂಡಿದೆ.

ಬೆಳಕು ಬೆಂಕಿ ಬೆರೆತುಕೊಂಡು
ಭಾವವು ಹೊರದೂಡಿರೆ
ಬಾಳು ಮೊಳೆತು ಸುಗ್ಗಿ ನನೆತು
ಹೂವಿನಂತೆ ಮಾಡಿರೆ
ಆಹಾ ಚೆಲುವೆ! ಎಂದು ಕುಣಿದೆ
ಮಿಕ್ಕ ಸಂಜೆ ಮಬ್ಬಿಗೆ
ಓಹೊ ಒಲವೆ! ಎಂದು ಕರೆದೆ
ಪಲ್ಲವಿಸಿದ ಹುಬ್ಬಿಗೆ.

ಅಂದ ಏನ ಬೇಡಿದೆ
ಏನ ನೆನಸಿ ಹಾಡಿದೆ
ಬರುವದೇನೆ ನೆಪ್ಪಿಗೆ
ಎದೆಗೆ ಎದೆಯ ಅಪ್ಪಿಗೆ.

ಬರುವದೇನೆ ನೆಪ್ಪಿಗೆ
ಕೂಡಿದೊಂದ ತಪ್ಪಿಗೆ
ಏನೊ ಏನೊ ನೂತೆವು
ಬದುಕಿನೆಳೆಗೆ ಜೋತೆವು.

ಮೋಡದೊಂದು ನಾಡಿನಲ್ಲಿ
ಮಳೆಯ ಮಿಂಚು ಕಂಡೆವು
ಯಾವ ಫಲಕೆ ಇಳಿಯುತಿತ್ತೊ
ಮಣ್ಣ ಬೀಜ ಉಂಡೆವು
ದುಃಖದೊಂದು ಶೂಲೆಯಲ್ಲಿ
ನೋವುಗೊಂಡು ತಿಣುಕಿದೆ
ಸುಖದ ತೊಟ್ಟು ತೊಟ್ಟಿಗಾಗಿ
ಹತ್ತು ಕಡೆಗೆ ಹಣಿಕಿದೆ

ಇಬ್ಬಗೆಗೂ ಸೋತೆವು
ಆಸರಾಗಿ ಆತೆವು
ಬರುವದೇನೆ ನೆಪ್ಪಿಗೆ
ಹೊರತಾದೆವು ಉಪ್ಪಿಗೆ.

ಬರುವದೇನೆ ನೆಪ್ಪಿಗೆ
ನಾವು ಬಿದ್ದ ಟೊಪ್ಪಿಗೆ
ತಲೆಯ ತೆರೆದು ಬಂದಿತು
ಎಚ್ಚರೆಚ್ಚರೆಂದಿತು.

ಯಾವ ಲೋಕದಿಂದಲಿಳಿದೊ
ಹೊಸ ಸುಗಂಧ ಬೀರಿದೆ
ರಣೋತ್ಸಾಹ ಕಹಳೆಯಂತೆ
ನವಚೇತನ ಊರಿದೆ
ಇಬ್ಬರನ್ನೂ ನೂಗಿಕೊಂಡು
ಒಬ್ಬನಾಗಿ ಎದ್ದಿದೆ.
ಚಿತ್ತವೆಲ್ಲಿ ಎನುವಾಗಲೆ
ಕೊಡುವ ಮೊದಲೆ ಕದ್ದಿದೆ.

ಸಲ್ಲುವಲ್ಲಿ ಸಂದಿದೆ
ನಿಲ್ಲುವಲ್ಲಿ ನಿಂದಿದೆ
ಬರುವದೇನೆ ನೆಪ್ಪಿಗೆ
ಜೀವಜೀವದಪ್ಪಿಗೆ.”

ಬೇಂದ್ರೆಯವರ ಕವನದ ಸಾಫಲ್ಯ ಹಾಗು ದಾಂಪತ್ಯದ ಸಾಫಲ್ಯ ಕೊನೆಗೂ ಪರಮಾರ್ಥದಲ್ಲಿಯೆ ಪರಿಣಮಿಸುತ್ತವೆ. ತಮ್ಮ ಬಾಳಗೆಳತಿಯನ್ನು ಬೇಂದ್ರೆ ಆಹ್ವಾನಿಸುವದು ಹೀಗೆ:

“ಫಜಾರಗಟ್ಟಿ ಮುಟ್ಟೋಣು ಬಾ
ಹಿಂದಿನ ಆಟಾ ಮುಗಿಸೋಣು ಬಾ
ಮುಂದಿನ ಆಟಾ ನಡೆಸೋಣು ಬಾ”

ಈ ಕವನವನ್ನು ಓದಿದಾಗ Robert Browning ಬರೆದ ಕವನದ ಸಾಲುಗಳು ನೆನಪಾಗುತ್ತವೆ:
“Grow old along with me, the best is yet to be”.

ಆದರೆ ಬೇಂದ್ರೆಯವರು ಇದಕ್ಕೂ ಮುಂದಿನ ಹಂತದ ಬಗೆಗೆ ತಮ್ಮ ಜೊತೆಗಾತಿಗೆ ಆಹ್ವಾನ ನೀಡುತ್ತಿದ್ದಾರೆ.

ಇಷ್ಟೆಲ್ಲ ಸಾವು ನೋವಿನ ದಾಂಪತ್ಯಗೀತೆಗಳನ್ನು ಬರೆದ ಬೇಂದ್ರೆಯವರೆ, ಕನ್ನಡದ ಅತ್ಯಂತ ಶ್ರೇಷ್ಠ
fantasy ಗೀತೆಯನ್ನು (ಕನಸು-ಗೀತೆ ಅನ್ನಬಹುದೆ?) ಬರೆದಿದ್ದಾರೆ. ಈ ಕವನದಲ್ಲಿ ಮಾತ್ರ ನೋವಿನ ಎಳೆಯೂ ಸಹ ಕಾಣಲಾರದು. ಯಾಕೆಂದರೆ ಇದು fantasy!

(ಯಾರಿಗೂ ಹೇಳೋಣು ಬ್ಯಾಡಾ)

ಯಾರಿಗೂ ಹೇಳೋಣು ಬ್ಯಾಡಾ
-------------------ಯಾರಿಗೂ /ಪಲ್ಲ/

ಹಾರಗುದರೀ ಬೆನ್ನ ಏರಿ
ಸ್ವಾರರಾಗಿ ಕೂತು ಹಾಂಗs
ದೂರ ದೂರಾ ಹೋಗೋಣಂತs /ಯಾರಿಗೂ

ಹಣ್ಣು ಹೂವು ತುಂಬಿದಂಥ
ನಿನ್ನ ತೋಟ ಸೇರಿ ಒಂದs
ತಿನ್ನೋಣಂತs ಅದರ ಹೆಸರು /ಯಾರಿಗೂ

ಕುಣಿಯೋಣಂತs ಕೂಡಿ ಕೂಡಿ
ಮಣಿಯೋಣಂತs ಜಿಗಿದು ಹಾರಿ
ದಣಿಯದನs ಆಡೋಣಂತ /ಯಾರಿಗೂ

ಮಲ್ಲಿಗೀ ಮಂಟsಪದಾಗ
ಗಲ್ಲ ಗಲ್ಲ ಹಚ್ಚಿ ಕೂತು
ಮೆಲ್ಲ ದನಿಲೆ ಹಾಡೋಣಂತs /ಯಾರಿಗೂ

ಹಾವಿನಾ ಮರಿಯಾಗಿ ಅಲ್ಲಿ
ನಾವುನೂ ಹೆಡೆಯಾಡಿಸೋಣು
ಹೂವೆ ಹೂವೆ ಹಸಿರೆ ಹಸಿರು /ಯಾರಿಗೂ

ನಿದ್ದೆ ಮಾಡಿ, ಮೈಯ ಬಿಟ್ಟು,
ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೆ ಸಾಗೋಣಂತs /ಯಾರಿಗೂ

Tuesday, March 4, 2008

ಬೇಂದ್ರೆ: ಅದ್ಭುತ ಪ್ರತಿಭೆಯ ಅನುವಾದಕ

ಬೇಂದ್ರೆಯವರನ್ನು ಅದ್ಭುತ ಪ್ರತಿಭೆಯ ಕವಿ ಎಂದು ವರ್ಣಿಸಲಾಗುತ್ತದೆ. ಅವರು ಅದ್ಭುತ ಪ್ರತಿಭೆಯ ಅನುವಾದಕರೂ ಆಗಿದ್ದರು.

“ನಾಳೆ ಬೆಳಗ್ಗೆ ಬಂದೈತಿ ಮಹಾಮರಣಾ
ಹಸನುಳದಾssವ ನಮ್ಮಂತಃಕರಣಾS”

ಬೇಂದ್ರೆಯವರು ಬರೆದ ಈ ಸಾಲುಗಳನ್ನು ಓದುತ್ತ ಹೋದಂತೆ , ನೇಣಿಗೆ ಕೊರಳು ಕೊಡಲು ಸಿದ್ಧರಾಗಿ ನಿಂತ ಸ್ವಾತಂತ್ರ್ಯ ಹೋರಾಟಗಾರರ ಸ್ಫೂರ್ತಿಯುತ ಚಿತ್ರ ಕಣ್ಣೆದುರಿಗೆ ಕಟ್ಟುತ್ತದೆ. ಕವನದ ಮುಂದಿನ ಸಾಲುಗಳು ನಮ್ಮಲ್ಲಿ ಇನ್ನಷ್ಟು ಆವೇಶವನ್ನು ತುಂಬುತ್ತವೆ. ಅದರೆ ಈ ಹೋರಾಟಗಾರರು ಯಾರು ಎನ್ನುವದು ಒಮ್ಮೆಲೆ ಅರಿವಾಗುವದಿಲ್ಲ. ಬಹುಶಃ ಬ್ರಿಟಿಶರಿಂದ ಗಲ್ಲಿಗೇರಿಸಲ್ಪಡುತ್ತಿರುವ ಭಾರತೀಯ ಉಗ್ರಗಾಮಿ ಯುವಕರು ಇವರಾಗಿರಬೇಕು. ಅಂದರೆ . . . ಭಗತಸಿಂಗ, ಚಂದ್ರಶೇಖರ ಆಜಾದ ಅಥವಾ ಸಂಗೊಳ್ಳಿ ರಾಯಣ್ಣ? ಬೇಂದ್ರೆಯವರು ಯಾರ ಕಹಳೆಯ ಕೂಗನ್ನು ನಮಗೆ ಕೇಳಿಸುತ್ತಿದ್ದಾರೆ?

ಕವಿತೆಯ ಕೊನೆಕೊನೆಗೆ ಬಂದಂತೆ, ಒಂದು ಸಾಲು ಬರುತ್ತದೆ:
“ಫಿಲಿಪೀನಾ ನಾಡದೇವಿ . . . . “
ಈಗ ಅಚ್ಚರಿ ಹುಟ್ಟುತ್ತದೆ. ಬೇಂದ್ರೆ ಫಿಲಿಪ್ಪೀನ್ಸ್ ದೇಶದ ಹುತಾತ್ಮರ ಬಗೆಗೆ ಕವಿತೆ ರಚಿಸಿರುವರೆ?- ಎಂದು.

ಧಾರವಾಡದ ’ಮನೋಹರ ಗ್ರಂಥಮಾಲೆ’ಯ ರಜತಮಹೋತ್ಸವದ ಅಂಗವಾಗಿ ೧೯೫೯ರಲ್ಲಿ ಬಿಡುಗಡೆಯಾದ ’ನಡೆದು ಬಂದ ದಾರಿ’ಯಲ್ಲಿ ಈ ಕವಿತೆ ಪ್ರಕಟವಾಗಿದೆ. ಓದುತ್ತ ಹೋದಾಗ ಇದು ಅನುವಾದ ಎನ್ನುವದು ಗೊತ್ತಾಗುವದೇ ಇಲ್ಲ. ಈ ಅನುವಾದದ ಹಿಂದೆ ಒಂದು ಕತೆ ಇದೆ.

ಫಿಲಿಪ್ಪೀನ್ಸ್ ಸ್ವತಂತ್ರವಾದ ಬಳಿಕ, ಆ ದೇಶದ ಸ್ವಾತಂತ್ರ್ಯೋತ್ಸವದ ದಿನದಂದು ಭಾರತದಲ್ಲಿಯ ಆಕಾಶವಾಣಿ ಕೇಂದ್ರಗಳು ಈ ಗೀತೆಯ ಅನುವಾದವನ್ನು ಪ್ರಸಾರ ಮಾಡಬೇಕೆಂದು ಕೇಂದ್ರ ಸರಕಾರವು ಏಕಾಏಕಿಯಾಗಿ ಒಂದು ಆದೇಶ ಹೊರಡಿಸಿತು. ಆ ಸಮಯದಲ್ಲಿ ಸಾಹಿತಿ ಶ್ರೀ ಎನ್.ಕೆ. ಕುಲಕರ್ಣಿಯವರು ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಅಧಿಕಾರಿಯಾಗಿದ್ದರು. ಅವರು ಈ ಗೀತೆಯ ಇಂಗ್ಲಿಶ್ ಆವೃತ್ತಿಯನ್ನು ಹಿಡಿದುಕೊಂಡು ಬೇಂದ್ರೆಯವರ ಮನೆಗೆ ಓಡಿದರು. ಬೇಂದ್ರೆ ಆಗ ಸಂಜೆಯ ವಾಯುವಿಹಾರಕ್ಕೆ ಹೋಗಿದ್ದರು. ಎನ್.ಕೆ.ಯವರು ಬೇಂದ್ರೆಯವರ ಶ್ರೀಮತಿಯವರಿಗೆ ಸಂಗತಿಯನ್ನು ವಿವರಿಸಿ, ಅನುವಾದ ನಾಳೆಯೇ ಬೇಕು ಎಂದು ಹೇಳಿ, ಆ ಕಾಗದವನ್ನು ಅಲ್ಲಿಟ್ಟು ಹೋದರು.

ಮುದ್ದಾಮ ಕವಿಗಳು ಇಂತಹ ಅನುವಾದ ಕಾರ್ಯವನ್ನು ತಕ್ಷಣವೇ ಮಾಡಿಕೊಡುತ್ತಾರೆ, ಅದರೆ ಈ ಉದ್ದಾಮ ಕವಿ ಸಿಟ್ಟಿನಿಂದ ಎಲ್ಲಿ ಕಾಗದವನ್ನು ತನ್ನ ಮುಖದ ಮೇಲೆ ಬಿಸಾಡುತ್ತಾನೊ ಎಂದು ಹೆದರುತ್ತಲೆ, ಎನ್.ಕೆ.ಕುಲಕರ್ಣಿ, ಮರುದಿನ ಬೆಳಗ್ಗೆ ಬೇಂದ್ರೆಯವರ ಮನೆಗೆ ಹೊದರು. ಬೇಂದ್ರೆ ಇರಲಿಲ್ಲ, ಬೆಳಗಿನ ವಾಯುವಿಹಾರಕ್ಕೆ ಹೋಗಿದ್ದರು. ಆದರೆ ’ಅನುವಾದ’ ಮಾತ್ರ ಸಿದ್ಧವಾಗಿ ಮೇಜಿನ ಮೇಲೆ ಕುಳಿತುಕೊಂಡಿತ್ತು. ಇತರ ಭಾರತೀಯ ಭಾಷೆಗಳಲ್ಲಿ ಮಾಡಲಾದ ಅನುವಾದಗಳನ್ನು ನೋಡಿದ ಎನ್.ಕೆ. ಕುಲಕರ್ಣಿಯವರು, ಇತರ ಯಾವುದೇ ಅನುವಾದವೂ ಬೇಂದ್ರೆಯವರ ಕನ್ನಡ ಅನುವಾದದ ಮಟ್ಟದಲ್ಲಿಲ್ಲ ಎಂದು ಹೇಳುತ್ತಾರೆ. ಇದು ಕನ್ನಡದ ರಚನೆಯೇ ಎನ್ನುವಷ್ಟು ಸುಂದರವಾಗಿದೆ ಈ ಅನುವಾದ.

ಬೇಂದ್ರೆಯವರ ಅನುವಾದ ಸಾಮರ್ಥ್ಯದ ಉಜ್ವಲ ಉದಾಹರಣೆ ಎಂದರೆ ಕಾಳಿದಾಸನ ’ಮೇಘದೂತ’. ಬೇಂದ್ರೆಯವರಿಗಿಂತಲೂ ಮೊದಲು ಸಹ ಮೇಘದೂತವನ್ನು ಕೆಲವರು ಕನ್ನಡಿಸಿದ್ದಾರೆ. ಶ್ರೀ ಶಾಂತಕವಿ, ವರದಾಚಾರ್ಯ, ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ರೈನಾಪುರ, ಎಸ್.ವಿ. ಪರಮೇಶ್ವರ ಭಟ್ಟ ಇವರು ಅನುವಾದಕರಲ್ಲಿ ಪ್ರಮುಖರು.

ಕಾಳಿದಾಸನ ಮೇಘದೂತವು ನಾಲ್ಕು ಸಾಲುಗಳ ಮಂದಾಕ್ರಾಂತ ವೃತ್ತದಲ್ಲಿ ರಚಿತವಾಗಿದೆ. ಕನ್ನಡ ಅನುವಾದವನ್ನು ಯಾರೂ ಇದೇ ವೃತ್ತದಲ್ಲಿ ನಿರ್ವಹಿಸಿಲ್ಲ. ಆದರೆ ಬೇಂದ್ರೆಯವರು ಇದಕ್ಕೆ ಸಮಸ್ಪಂದಿಯಾದ ನಾಲ್ಕು ಸಾಲುಗಳ ವೃತ್ತದಲ್ಲಿ ಕನ್ನಡ ರಚನೆಯನ್ನು ಮಾಡಿದ್ದಾರೆ. ಉದಾಹರಣೆಗಾಗಿ ಒಂದು ಮೂಲಪದ್ಯವನ್ನು ಹಾಗು ಆ ಪದ್ಯದ ಅನುವಾದಗಳನ್ನು ಇಲ್ಲಿ ನೋಡಬಹುದು:

ಮೂಲಪದ್ಯ:
“ತಸ್ಮಿನ್ನದ್ರೌ ಕತಿಚಿದಬಲಾವಿಪ್ರಯುಕ್ತಸ್ಸಕಾಮೀ
ನೀತ್ವಾಮಾಸಾನ್ ಕನಕವಲಯಭ್ರಂಶರಿಕ್ತಪ್ರಕೋಷ್ಠಃ
ಆಷಾಢಸ್ಯ ಪ್ರಥಮೇ ದಿವಸೇ ಮೇಘಮಾಶ್ಲಿಷ್ಟಸಾನುಮ್
ವಪ್ರಕ್ರೀಡಾಪರಿಣತಗಜಪ್ರೇಕ್ಷಣೀಯಂ ದದರ್ಶ”

ಈಗ ಬೇಂದ್ರೆಯವರ ಅನುವಾದವನ್ನು ನೊಡಿರಿ:
“ಅಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತು ಇಂತು
ಕೆಲವೆ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು
ಕಾರಹುಣ್ಣಿವೆಯ ಮಾರನೆಯ ದಿನವೆ ಮೋಡಕೋಡನಪ್ಪಿ
ಕಂಡಿತೊಡ್ಡಿನೊಡ ಡಿಕ್ಕಿಯಾಡುವಾ ಆನೆಬೆಡಗನೊಪ್ಪಿ”

ಇತರರ ಅನುವಾದ (೧):
ಲಲನೆಯಳಲದು ಮೀರೆ
ಬಲಗುಂದಿ ಮೈ ಸೊರಗಿ
ಬಲದೋಳ ಬಳೆಗಳಚಿ ಬೀಳೆ ಕೈಯಿಂ
ಕೆಲವು ತಿಂಗಳ ಕಳೆದು
ಮಳೆಗಾಲದಾ ಮೊದಲು
ಜಳದವನು ನೋಡಿದನು ಗಿರಿಶಿಖರದೊಳ್

ಇತರರ ಅನುವಾದ(೨):
ಅಬಲೆಯನು ತಾನಗಲಿ ಕನಕವಲಯವು ಕಳಚಿ
ಬರಿದಾದ ಮುಂಗೈಯೊಳಾ ಕಾಮಿಯು
ಆದುವೆ ಗಿರಿಯೊಳು ನೆಲಸಿ ಕೆಲವು ತಿಂಗಳು ಕಳೆದು
ಆಷಾಢ ಮಾಸದಲಿ ಮೊದಲ ದಿವಸ
ದಂತದಲಿ ಧರೆಯನೆಗೆದೆರಚುತಿರುವಾಚದಲಿ
ತೊಡಗಿರುವ ಆನೆಯೊಲು ಕಣ್ಗೆಸೆಯುತಿರುವ
ಸಾನುದೇಶವನಪ್ಪಿ ಸೊಬಗನಾಂತಿರುವೊಂದು
ಹಿರಿದಾದ ಮೋಡವನೊಂದು ಕಂಡೆನೆಂದು”

ಬೇಂದ್ರೆಯವರ ಅನುವಾದದಲ್ಲಿ ಕ್ಲಿಷ್ಟತೆ ಇಲ್ಲ. ಮೂಲಕವನದ content ಹಾಗು ಛಂದಸ್ಸಿನ ಸೌಂದರ್ಯ ಉಳಿದುಕೊಂಡಿದೆ. ’ಮಖ್ಖೀ ಕಾ ಮಕ್ಖೀ’ ಶಬ್ದಾನುವಾದವಿಲ್ಲ. ಮೂಲಕವಿ ಹೇಳಬಯಸುವ ಅರ್ಥವನ್ನು ಬೇಂದ್ರೆ ಕನ್ನಡಿಸಿದ್ದಾರೆ. ಉದಾಹರಣೆಗೆ “ಆಷಾಢಸ್ಯ ಪ್ರಥಮೇ ದಿವಸೇ . . . ” ಈ ಸಾಲನ್ನು ಗಮನಿಸಬೇಕು. ಉತ್ತರ ಭಾರತೀಯರು, ಮಾಸಾರಂಭವನ್ನು ಕೃಷ್ಣಪಕ್ಷದ ಪ್ರತಿಪದೆಯಿಂದ ಗಣಿಸುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಶುಕ್ಲಪಕ್ಷದ ಪ್ರತಿಪದೆಯಿಂದ ಗಣಿಸಲಾಗುತ್ತದೆ. ಆದುದರಿಂದ ಬೇಂದ್ರೆ ಈ ಸಾಲನ್ನು ’ಆಷಾಢದ ಮೊದಲ ದಿವಸ” ಎಂದು ಅನುವಾದಿಸದೇ, ’ಕಾರಹುಣ್ಣಿವೆಯ ಮಾರನೆಯ ದಿನವೆ . .’ ಎಂದು ಬದಲಾಯಿಸಿದ್ದಾರೆ. ಚಿನ್ನದ ಕಡಗ ಮುಂಗೈಯಿಂದ ಜಾರಿ ಕೆಳಗೆ ಬಿದ್ದಿತು ಅನ್ನುವದನ್ನು, ಮೊಳಕೈಗೆ ಜಾರಿ ಬಂದಿತು ಎಂದು ಬದಲಾಯಿಸಿಕೊಂಡಿದ್ದಾರೆ.(ಬಹುಶ: ಅದು ಅಶುಭಸೂಚಕ ಎನ್ನುವ ಕಾರಣಕ್ಕಾಗಿ ಇರಬಹುದು.) ಅನುವಾದ-ಪ್ರತಿಭೆಯೆಂದು ಇದಕ್ಕಲ್ಲವೇ ಕರೆಯಬೇಕಾದದ್ದು?

ಬೇಂದ್ರೆಯವರು ಅನೇಕ ರಸಮಯ ಕನ್ನಡ ಪದಗಳನ್ನು ಮೇಘದೂತದ ಅನುವಾದದಲ್ಲಿ ಸೃಷ್ಟಿಸಿ ಬಳಸಿದ್ದಾರೆ. ಉದಾಹರಣೆಗಳು: ಕೊರಳ-ಗೆಳತಿ, ಬಯಕೆ-ಮರುಳ , ದೈವ-ಬಂಧು, ಮಳ್ಳ ಮುರುಕ , ಕಾಲ-ನೀರು, ಕಲ್ಮಾಡ, ತುಂತುಂಬಿ ಮಾಲೆಯಾಗಿ. ಇತ್ಯಾದಿ.

ರಸಸೃಷ್ಟಿಯು ಶ್ರೇಷ್ಠ ಕಾವ್ಯದ ಲಕ್ಷಣವಾಗಿದೆ. ಕಾಳಿದಾಸ ಅದನ್ನು ’ಮೇಘದೂತ’ದಲ್ಲಿ ಮಾಡಿದ್ದಾನೆ. ಕನ್ನಡದಲ್ಲಿ ಬೇಂದ್ರೆ ಅದನ್ನು ಮರುಕಳಿಸಿದ್ದಾರೆ. ಬೇಂದ್ರೆಯವರ ನುಡಿಯಲ್ಲಿಯೆ ಅದನ್ನು ಈ ರೀತಿಯಾಗಿ ಹೇಳಬಹುದು:

“ಕವಿಯ ಕಮಲಕೃತಿಯಲ್ಲಿ ಉಂಡೆ ನಾನೊಬ್ಬ ಭಾವಭೃಂಗ
ಪಕಳೆಮಾತು ಉದಿರಾಡಬಹುದು, ತುಂಬೀತು ಸ್ವಾಂತರಂಗ
ತೋಳುಗೀಳು ಸಡಲೀತು ಪ್ರಿಯರ ಸುಸ್ನಿಗ್ಧ ಬಂಧದಲ್ಲು
ಪ್ರಾಣ ತುಂಬುವಾ ಅಧರಪಾನ ಇಳಿದೀತೆ ಉದರದಲ್ಲು?”

ಬಾಲಾಗಸಿ:
ಬೇಂದ್ರೆಯವರ ಹೆಂಡತಿ, ಬೇಂದ್ರೆಯವರಿಗೆ “ ನೀವು ಬಂಗಾರದ ಒಡವೆಯನ್ನಂತೂ ತೊಡಿಸಲಿಲ್ಲ; ಕೊನೆಯ ಪಕ್ಷ ಒಂದು ಮುತ್ತಿನ ಸರವನ್ನಾದರೂ ಕೊಡಿಸಿ”, ಎಂದು ಕೇಳುತ್ತಿದ್ದರಂತೆ. ಬೇಂದ್ರೆ ’ಪ್ರೀತಿಗಿಂತ ಒಡವೆ ಹೆಚ್ಚಲ್ಲ’ ಎಂದು ಹೇಳಲು ಒಂದು ದೊಡ್ಡ ಕವನವನ್ನೇ ಕಟ್ಟಿದರು ಎಂದು ಹೇಳಲಾಗುತ್ತದೆ:

ಅಷ್ಟು ಪ್ರೀತಿ ಇಷ್ಟು ಪ್ರೀತಿ

“ಅಷ್ಟು ಪ್ರೀತಿ ಇಷ್ಟು ಪ್ರೀತಿ . . .
ಎಣಿಸಿ ಕಷ್ಟ ಬಡದಿರು,
ಒಲೆದು ಒಲಿಸಿ ಸುಖದಿರು
ಎಷ್ಟೆ ಇರಲಿ, ಅಷ್ಟೆ ಮಿಗಿಲು
ತಮ್ಮ ಕಿರಣ ತಮಗೆ ಹಗಲು;
ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು.
ಮುತ್ತಿನೆಕ್ಕ ಸರವನಿಕ್ಕೆ
ಮುದ್ದಿಗೆ ಕಳೆ ಕಟ್ಟಿತೆ?
ತೊಯ್ದ ಎವೆಗೆ ಮುದ್ದನಿಡಲು
ಮುದ್ದಿಗೆ ಅದು ತಟ್ಟಿತೆ?
ಕುದಿದ ಬಂದ ಕಂಬನಿಯೊಲು
ಕಂಪು ಬರದೆ ಬಿಟ್ಟಿತೆ?
ಮುತ್ತು,ರತುನ ಹೊನ್ನು ಎಲ್ಲ
ಕಲ್ಲು, ಮಣ್ಣ ವೈಭವಾ
ಎಲವೊ ಹುಚ್ಚು ಮಾನವಾ
ಒಂದು ಷೋಕು- ಬರಿಯ ಝೋಕು
ಬದಕಿನೊಂದು ಜಂಬವು,
ಒಲವೆ ಮೂಲ ಬಿಂಬವು.
ಸಪ್ತ ನಾಕ ಸಪ್ತ ನರಕ
ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
ಅದರ ಕೋಟೆ ಕತ್ತಲು
ಸಿಂಹಾಸನವನೇರಿ ಕುಳಿತೆ;
ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ ತೋಳಿಗಿಂತ
ಅದರೊಳೇನು ಹೆಚ್ಚಿದೆ?
ಎದೆಯ ಕಣ್ಣ ಮುಚ್ಚಿಕೊಂಡು
ಏಕೊ ಏನೊ ಮೆಚ್ಚಿದೆ
ಮರದ ಅಡಿಗೆ ಗುಡಿಸಲಿರಲಿ
ಅಲ್ಲೆ ಒಲವು ಮೆರೆಯದೇ
ನಲಿವು ಮೇರೆವರಿಯದೇ?


’ಮೇಘದೂತ’ದ ಪ್ರಕಟಣೆಯಿಂದ ಬಂದ ಕಿಂಚಿತ್ ಪ್ರಾಪ್ತಿಯಿಂದ, ಬೇಂದ್ರೆ ತಮ್ಮ ’ಯಕ್ಷಿ’ಗೆ ಮುತ್ತಿನ ಸರವೊಂದನ್ನು ಕೊಡಿಸಿ, ಪ್ರೀತಿಯ ಋಣಮುಕ್ತರಾದರೆಂದು ಹೇಳಲಾಗುತ್ತದೆ. ’ಮೇಘದೂತ’ದ ’ಅರ್ಪಣ’ದಲ್ಲಿಯಂತೂ ಬೇಂದ್ರೆ ಹೀಗೆ ಹೇಳಿದ್ದಾರೆ:

“ಕಾಳಿದಾಸನ ಕಡಲ
ಮುತ್ತು ಮಾಲೆಯನಿತ್ತೆ.
ಮುಡುಪನೊಪ್ಪಿದೆಯೆಂದು ಮುಕ್ತಳಾಗು
ಓ ಯಕ್ಷಿ, ಚೈತ್ಯಾಕ್ಷಿ,
ಚೆನ್ನೆ ಹೃದಯದ ಸಾಕ್ಷಿ,
ನನ್ನ ಕಲ್ಯಾಣಕ್ಕೆ ಯುಕ್ತಳಾಗು”

Saturday, March 1, 2008

The Rainbow

Once a scientist in the darkest room of his lab
Experimented on light with his spectroscope.
He had hit upon the myth of light and colors;
He may get the Nobel prize, he did rightly hope.
All fancies of Nature are merely the play of
The vibrations of energy; nothing is true that
We see, hear and sense; just an impression
On the unsuspecting brain cells, he brooding sat.

When screaming came his little granddaughter,
“Gran’pa, come out and see! There is a beautiful
Rainbow in the sky!” The scientist smiled
At the ignorant child, but pulled by her came out
And “ Believe me”, he swears “I truly saw
A thousand rainbows in her eyes!”