Monday, March 10, 2008

ಬೇಂದ್ರೆಯವರ ದಾಂಪತ್ಯಗೀತೆಗಳು

ವರಕವಿ ಬೇಂದ್ರೆಯವರು ಪ್ರೇಮಗೀತೆಗಳನ್ನು ಬರೆದಿದ್ದಾರೆಯೆ? ಇದಕ್ಕೆ ಉತ್ತರ ಹೇಳುವದು ಕಷ್ಟ. ಬೇಂದ್ರೆಯವರು ಅನೇಕ ದಾಂಪತ್ಯಗೀತೆಗಳನ್ನು ರಚಿಸಿದ್ದಾರೆ. ಆದರೆ ಈ ಗೀತೆಗಳಿಗೆ ಪ್ರೇಮಗೀತೆ ಅಥವಾ ಪ್ರಣಯಗೀತೆ ಎಂದು ಕರೆಯುವದು ಸಾಹಸದ ಮಾತಾಗುತ್ತದೆ. ಯಾಕೆಂದರೆ ’ಬಡತನ’ ಅಥವಾ ಸಂಕಷ್ಟಸೂಚಿಯಾದ ಪದವಿಲ್ಲದ ಅವರ ದಾಂಪತ್ಯಗೀತೆ ಇಲ್ಲವೇ ಇಲ್ಲ ಎನ್ನಬಹುದು. ಅವರ ಜನಪ್ರಿಯ ಪ್ರೇಮಗೀತೆಯನ್ನೇ ಉದಾಹರಣೆಗಾಗಿ ಗಮನಿಸಿರಿ:

“ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡವದನೆ ನಾವು
ಅದಕು ಇದಕು ಎದುಕೂ”.

ಕವನ ಪ್ರಾರಂಭವಾಗುವದೇ ಬಡತನದಿಂದ. ಈ ಕವನವನ್ನು ಕೆ. ಎಸ್. ನರಸಿಂಹಸ್ವಾಮಿಯವರ ಕವನದೊಂದಿಗೆ ಹೋಲಿಸಿ ನೋಡಿರಿ:

“ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಕೋಟಿ ರುಪಾಯಿ”.

ನರಸಿಂಹಸ್ವಾಮಿಯವರ ಪ್ರೇಮಗೀತೆಗಳಲ್ಲಿ ಬಡತನಕ್ಕೆ ಸ್ಥಾನವೇ ಇಲ್ಲ. ದಂಪತಿಗಳ ಪರಸ್ಪರ ಪ್ರೇಮವೇ ಅವರ ಶ್ರೀಮಂತಿಕೆ.

ಬೇಂದ್ರೆಯವರ ಎಲ್ಲ ಕವನಗಳಲ್ಲೂ ಓದುಗನನ್ನು ಚಕಿತಗೊಳಿಸುವ ಪದಚಾತುರ್ಯವಿದೆ, ಕಲ್ಪನಾವೈಭವವಿದೆ. ಅದರಂತೆ ಅವರ ಪ್ರೇಮಗೀತೆಗಳಲ್ಲೂ ಸಹ ಈ ಜಾಣ್ಮೆ ಕಂಡು ಬರುತ್ತದೆ. ಅದಕ್ಕೆ ಮುಂದಿನ ಸಾಲುಗಳೇ ಸಾಕ್ಷಿ:

“ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬಟ್ಟೆ”.

ದಂಪತಿಗಳಲ್ಲಿ ಸಾಮರಸ್ಯ ಹಾಗು ಸಾಂಗತ್ಯದ ಸಂತೋಷವನ್ನು ತೋರಿಸುವ ಇಂತಹ ಸಾಲುಗಳು ಬೇರೆಲ್ಲೂ ಸಿಗಲಾರವು. ಆದರೆ ಈ ಕವನದಲ್ಲೂ ಬಡತನ ತನ್ನ ಮುಖವನ್ನು ತೋರಿಸದೇ ಬಿಟ್ಟಿಲ್ಲ. ಈ ಕವನವನ್ನು ನರಸಿಂಹಸ್ವಾಮಿಯವರ ಈ ಕವನದೊಂದಿಗೆ ಹೋಲಿಸಿರಿ:

“ತೆಂಗು ಗರಿಗಳ ಮೇಲೆ ತುಂಬ ಚಂದಿರ ಬಂದು
ಬೆಳ್ಳಿ ಹಸುಗಳ ಹಾಲ ಕರೆಯುವಂದು
ಅಂಗಳದ ನಡುವೆ ಬೃಂದಾವನದ ಬಳಿ ನಿಂದು
ಹಾಡುವೆವು ಸಿರಿಯ ಕಂಡು.
ತಾರೆಗಳ ಮೀಟುವೆವು; ಚಂದಿರನ ದಾಟುವೆವು
ಒಲುಮೆಯೊಳಗೊಂದು ನಾವು;
ನಮಗಿಲ್ಲ ನೋವು, ಸಾವು”.

“ಹಾಡುವೆವು ಸಿರಿಯ ಕಂಡು” ಎನ್ನುವ ಸಾಲನ್ನು ಗಮನಿಸಿರಿ. ಪ್ರಕೃತಿಯ ಸಿರಿಯೆ ಈ ಪ್ರೇಮಿಗಳ ಸಿರಿ. ಈ ಕವನದಲ್ಲಿಯ ಪ್ರೇಮಭಾವನೆಯ ಉತ್ಕಟತೆ ಬೇಂದ್ರೆಯವರ ಪ್ರೇಮಕವನಗಳಲ್ಲಿ ಕಾಣಲಾರದು. ನರಸಿಂಹಸ್ವಾಮಿಯವರ ಕವನದ ದಂಪತಿಗಳು ಪ್ರೇಮಜೀವಿಗಳು; ಬೇಂದ್ರೆಯವರ ಕವನದ ದಂಪತಿಗಳು ಸಂಕಟಜೀವಿಗಳು. ಬೇಂದ್ರೆಯವರ ಶ್ರೇಷ್ಠ ದಾಂಪತ್ಯಗೀತೆಗಳು ಸಂಕಟದ ಗೀತೆಗಳೇ ಆಗಿವೆ:

“ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ
ಏನೊಂದು ನಗಿ ಇತ್ತs
ಏನೊಂದು ನಗಿ ಇತ್ತ ಏಸೊಂದು ನಗಿ ಇತ್ತ
ಏರಿಕಿ ನಗಿ ಇತ್ತs
ನಕ್ಕೊಮ್ಮೆ ಹೇಳ ಚೆನ್ನಿ ಆ ನಗಿ ಇತ್ತಿತ್ತ
ಹೋಗೇತಿ ಎತ್ತೆತ್ತs

ಅಥವಾ ಈ ಕವನ ನೋಡಿರಿ:
“ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
ಹುದುಲಾಗ ಸಿಕ್ಕೇನs”

ಅಥವಾ ಈ ಕವನ ನೋಡಿರಿ:
“ತಿಣಿ ತಿಣಿಕಿ
ಇಣಿಕಿಣಕಿ
ಒಳಹೊರಗ ಹಣಿಹಣಿಕಿ
ಸಾಕಾತು ಸುಳ್ಳೆಣಕಿ
ಕುಣಿಯೋಣ ಬಾರs
ಕುಣಿಯೋಣು ಬಾ”

’ಸಖೀಗೀತ’ವಂತೂ ಕನ್ನಡದ ಶ್ರೇಷ್ಠ ದಾಂಪತ್ಯಗೀತೆ. ಆದರೆ ಇಲ್ಲಿಯೂ ಸಹ ಬೇಂದ್ರೆಯವರು ತಮ್ಮ ಕಳೆದ ಜೀವನದ ದುಃಖಗಳನ್ನು ತಮ್ಮ ಹೆಂಡತಿಯೊಡನೆ ಹಂಚಿಕೊಳ್ಳುತ್ತಿದ್ದಾರೆಯೇ ಹೊರತು ಸುಖವನ್ನಲ್ಲ.

“ಸಖಿ ನಮ್ಮ ಸಖ್ಯದ ಆಖ್ಯಾನ ಕಟು-ಮಧುರ
ವ್ಯಾಖ್ಯಾನದೊಡಗೂಡಿ ವಿವರಿಸಲೇ
ಕರುಳಿನ ತೊಡಕನ್ನು ಕುಸುರಾಗಿ ಬಿಡಸಿಟ್ಟು
ತೊಡವಾಗಿ ತಿರುಗೊಮ್ಮೆ ನಾ ಧರಿಸಲೇ?

ಇರುಳು ತಾರೆಗಳಂತೆ ಬೆಳಕೊಂದು ಮಿನುಗುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ;
ಪಟ್ಟ ಪಾಡೆಲ್ಲವು ಹುಟ್ಟು ಹಾಡಾಗುತ
ಹೊಸದಾಗಿ ರಸವಾಗಿ ಹರಿಯುತಿವೆ.”

ಇಷ್ಟು ಹೇಳಿ ಬೇಂದ್ರೆ ಸುಮ್ಮನಾಗುವದಿಲ್ಲ; ಸ್ವಲ್ಪ ಕಟುವಾಗಿಯೇ ಹೆಂಡತಿಗೊಂದು ಸತ್ಯದರ್ಶನ ಮಾಡಿಸುತ್ತಾರೆ:

“ತಾಂಡವ ನಡೆಸಿದ ಝಂಝಾವಾತದ
ಕಾಲಿನ ಹುಲುಗೆಜ್ಜೆ ನಾವಾಗಿರೆ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ!”

(ಹೆಂಡತಿಯನ್ನು ಕಾಮಾಕ್ಷಿ ಎಂದು ಸಂಬೋಧಿಸುವಾಗ, ಕೇವಲ ಅಲಂಕಾರದ ಬಳಕೆಯಾಗಿಲ್ಲ. ಕಾಮ+ಅಕ್ಷ=portal of desire ಎನ್ನುವ ಅರ್ಥವೂ ಇಲ್ಲಿದೆ.
ಕೊನೆ ಅಂದರೆ ಕೇವಲ ’ಅಂತ’ ಅನ್ನುವ ಅರ್ಥವಿರದೇ, ’ಕೊನೆ=ಗೊನೆ=fruit’ ಎನ್ನುವ ಅರ್ಥವೂ ಇದೆ.)

ಹಾಗಿದ್ದರೆ ಬೇಂದ್ರೆಯವರ ದಾಂಪತ್ಯಗೀತೆಗಳೆಲ್ಲವೂ ’ಶೋಕಗೀತೆ(!)ಗಳೇ ಎನ್ನುವ ಸಂಶಯ ಬರಬಹುದು!
’ಬೆಂದರೇ ಅದು ಬೇಂದ್ರೆ’ ಎಂದ ಬೇಂದ್ರೆಯವರ ಬಾಳಿನಲ್ಲಿ ಸಂಕಷ್ಟಗಳ ಕಾರ್ಮೋಡಗಳು ಸುರಿಯುತ್ತಲೇ ಇದ್ದವು. ಈ ಸಂಕಷ್ಟಗಳು ದಂಪತಿಗಳನ್ನು ಮತ್ತಷ್ಟು ಬೆಸೆಯುವ ಕಾರ್ಯವನ್ನು ನಿರ್ವಹಿಸುತ್ತವೆ, ಅಲ್ಲವೆ? ಇವೆಲ್ಲವನ್ನು ದಂಪತಿಗಳಿಬ್ಬರೂ ಕೂಡಿಯೇ ನೆನಸಿಕೊಂಡು ನಗಬೇಕಲ್ಲವೆ? ತಮ್ಮ ಜೀವನ ದರ್ಶನವನ್ನು ಜೊತೆಯಾಗಿಯೆ ಮಾಡಬೇಕಲ್ಲವೆ? ಅಂತೆಯೆ ಬೇಂದ್ರೆ ತಮ್ಮ ಹೆಂಡತಿಗೆ ಹೇಳುತ್ತಾರೆ:

(ಬರುವದೇನೆ ನೆಪ್ಪಿಗೆ)

“ಬರುವದೇನೆ ನೆಪ್ಪಿಗೆ,
ನಮ್ಮ ನಿಮ್ಮ ಒಪ್ಪಿಗೆ
ಎಲ್ಲೊ ಏನೊ ನೋಡಿದೆ
ಹಾಗೆ ಬಂದು ಕೂಡಿದೆ.

ಬೆಳಕು ಬೆಂಕಿ ಬೆರೆತುಕೊಂಡು
ಭಾವವು ಹೊರದೂಡಿರೆ
ಬಾಳು ಮೊಳೆತು ಸುಗ್ಗಿ ನನೆತು
ಹೂವಿನಂತೆ ಮಾಡಿರೆ
ಆಹಾ ಚೆಲುವೆ! ಎಂದು ಕುಣಿದೆ
ಮಿಕ್ಕ ಸಂಜೆ ಮಬ್ಬಿಗೆ
ಓಹೊ ಒಲವೆ! ಎಂದು ಕರೆದೆ
ಪಲ್ಲವಿಸಿದ ಹುಬ್ಬಿಗೆ.

ಅಂದ ಏನ ಬೇಡಿದೆ
ಏನ ನೆನಸಿ ಹಾಡಿದೆ
ಬರುವದೇನೆ ನೆಪ್ಪಿಗೆ
ಎದೆಗೆ ಎದೆಯ ಅಪ್ಪಿಗೆ.

ಬರುವದೇನೆ ನೆಪ್ಪಿಗೆ
ಕೂಡಿದೊಂದ ತಪ್ಪಿಗೆ
ಏನೊ ಏನೊ ನೂತೆವು
ಬದುಕಿನೆಳೆಗೆ ಜೋತೆವು.

ಮೋಡದೊಂದು ನಾಡಿನಲ್ಲಿ
ಮಳೆಯ ಮಿಂಚು ಕಂಡೆವು
ಯಾವ ಫಲಕೆ ಇಳಿಯುತಿತ್ತೊ
ಮಣ್ಣ ಬೀಜ ಉಂಡೆವು
ದುಃಖದೊಂದು ಶೂಲೆಯಲ್ಲಿ
ನೋವುಗೊಂಡು ತಿಣುಕಿದೆ
ಸುಖದ ತೊಟ್ಟು ತೊಟ್ಟಿಗಾಗಿ
ಹತ್ತು ಕಡೆಗೆ ಹಣಿಕಿದೆ

ಇಬ್ಬಗೆಗೂ ಸೋತೆವು
ಆಸರಾಗಿ ಆತೆವು
ಬರುವದೇನೆ ನೆಪ್ಪಿಗೆ
ಹೊರತಾದೆವು ಉಪ್ಪಿಗೆ.

ಬರುವದೇನೆ ನೆಪ್ಪಿಗೆ
ನಾವು ಬಿದ್ದ ಟೊಪ್ಪಿಗೆ
ತಲೆಯ ತೆರೆದು ಬಂದಿತು
ಎಚ್ಚರೆಚ್ಚರೆಂದಿತು.

ಯಾವ ಲೋಕದಿಂದಲಿಳಿದೊ
ಹೊಸ ಸುಗಂಧ ಬೀರಿದೆ
ರಣೋತ್ಸಾಹ ಕಹಳೆಯಂತೆ
ನವಚೇತನ ಊರಿದೆ
ಇಬ್ಬರನ್ನೂ ನೂಗಿಕೊಂಡು
ಒಬ್ಬನಾಗಿ ಎದ್ದಿದೆ.
ಚಿತ್ತವೆಲ್ಲಿ ಎನುವಾಗಲೆ
ಕೊಡುವ ಮೊದಲೆ ಕದ್ದಿದೆ.

ಸಲ್ಲುವಲ್ಲಿ ಸಂದಿದೆ
ನಿಲ್ಲುವಲ್ಲಿ ನಿಂದಿದೆ
ಬರುವದೇನೆ ನೆಪ್ಪಿಗೆ
ಜೀವಜೀವದಪ್ಪಿಗೆ.”

ಬೇಂದ್ರೆಯವರ ಕವನದ ಸಾಫಲ್ಯ ಹಾಗು ದಾಂಪತ್ಯದ ಸಾಫಲ್ಯ ಕೊನೆಗೂ ಪರಮಾರ್ಥದಲ್ಲಿಯೆ ಪರಿಣಮಿಸುತ್ತವೆ. ತಮ್ಮ ಬಾಳಗೆಳತಿಯನ್ನು ಬೇಂದ್ರೆ ಆಹ್ವಾನಿಸುವದು ಹೀಗೆ:

“ಫಜಾರಗಟ್ಟಿ ಮುಟ್ಟೋಣು ಬಾ
ಹಿಂದಿನ ಆಟಾ ಮುಗಿಸೋಣು ಬಾ
ಮುಂದಿನ ಆಟಾ ನಡೆಸೋಣು ಬಾ”

ಈ ಕವನವನ್ನು ಓದಿದಾಗ Robert Browning ಬರೆದ ಕವನದ ಸಾಲುಗಳು ನೆನಪಾಗುತ್ತವೆ:
“Grow old along with me, the best is yet to be”.

ಆದರೆ ಬೇಂದ್ರೆಯವರು ಇದಕ್ಕೂ ಮುಂದಿನ ಹಂತದ ಬಗೆಗೆ ತಮ್ಮ ಜೊತೆಗಾತಿಗೆ ಆಹ್ವಾನ ನೀಡುತ್ತಿದ್ದಾರೆ.

ಇಷ್ಟೆಲ್ಲ ಸಾವು ನೋವಿನ ದಾಂಪತ್ಯಗೀತೆಗಳನ್ನು ಬರೆದ ಬೇಂದ್ರೆಯವರೆ, ಕನ್ನಡದ ಅತ್ಯಂತ ಶ್ರೇಷ್ಠ
fantasy ಗೀತೆಯನ್ನು (ಕನಸು-ಗೀತೆ ಅನ್ನಬಹುದೆ?) ಬರೆದಿದ್ದಾರೆ. ಈ ಕವನದಲ್ಲಿ ಮಾತ್ರ ನೋವಿನ ಎಳೆಯೂ ಸಹ ಕಾಣಲಾರದು. ಯಾಕೆಂದರೆ ಇದು fantasy!

(ಯಾರಿಗೂ ಹೇಳೋಣು ಬ್ಯಾಡಾ)

ಯಾರಿಗೂ ಹೇಳೋಣು ಬ್ಯಾಡಾ
-------------------ಯಾರಿಗೂ /ಪಲ್ಲ/

ಹಾರಗುದರೀ ಬೆನ್ನ ಏರಿ
ಸ್ವಾರರಾಗಿ ಕೂತು ಹಾಂಗs
ದೂರ ದೂರಾ ಹೋಗೋಣಂತs /ಯಾರಿಗೂ

ಹಣ್ಣು ಹೂವು ತುಂಬಿದಂಥ
ನಿನ್ನ ತೋಟ ಸೇರಿ ಒಂದs
ತಿನ್ನೋಣಂತs ಅದರ ಹೆಸರು /ಯಾರಿಗೂ

ಕುಣಿಯೋಣಂತs ಕೂಡಿ ಕೂಡಿ
ಮಣಿಯೋಣಂತs ಜಿಗಿದು ಹಾರಿ
ದಣಿಯದನs ಆಡೋಣಂತ /ಯಾರಿಗೂ

ಮಲ್ಲಿಗೀ ಮಂಟsಪದಾಗ
ಗಲ್ಲ ಗಲ್ಲ ಹಚ್ಚಿ ಕೂತು
ಮೆಲ್ಲ ದನಿಲೆ ಹಾಡೋಣಂತs /ಯಾರಿಗೂ

ಹಾವಿನಾ ಮರಿಯಾಗಿ ಅಲ್ಲಿ
ನಾವುನೂ ಹೆಡೆಯಾಡಿಸೋಣು
ಹೂವೆ ಹೂವೆ ಹಸಿರೆ ಹಸಿರು /ಯಾರಿಗೂ

ನಿದ್ದೆ ಮಾಡಿ, ಮೈಯ ಬಿಟ್ಟು,
ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೆ ಸಾಗೋಣಂತs /ಯಾರಿಗೂ

32 comments:

ತೇಜಸ್ವಿನಿ ಹೆಗಡೆ said...

ನಿಮ್ಮ ಲೇಖನ ನಿಜಕ್ಕೂ ನನಗೆ ಮತ್ತೊಮ್ಮೆ ಎಂ.ಎ. ಪಾಠಗಳನ್ನು ನೆನೆಪಿಸುವಂತಿದೆ ;-)ಧನ್ಯವಾದಗಳು ನಿಮಗೆ. ನಿಜ ಅವರದ್ದು ನೋವಿನಿಂದ ಕೂಡಿದ ಅದರಲ್ಲೇ ನಲಿವನ್ನರಸುವ ಗೀತೆಗಳು. ಆದರೆ ಅವರ ಮನಸ್ಸು ಯಾವ ರೀತಿ ಹೆಣ್ಣಿನ ನೋವಿಗೆ ಸ್ಪಂದಿಸುತ್ತಿತ್ತು (ಹೆಂಡತಿಯ ಸಂಕಷ್ಟಕ್ಕೆ ಮಾತ್ರವಲ್ಲ) ಎನ್ನಲು ಅವರ ಇನ್ನೊಂದು ಕವನವಾದ "ಇನ್ನೂ ಯಾsಕ ಬರಲಿಲ್ಲವ್ವ ಹುಬ್ಬಳ್ಳಿಯಂವ..." ಕವನವೇ ಸಾಕ್ಷಿ. ಮೇಲ್ನೋಟಕ್ಕೆ ಇದೊಂದು ಸರಸಗೀತೆಯಾಗಿ ಕಾಣಿಸಿದರೂ, ಈ ಕವನದೊಳಗಿನ ಗೂಡಾರ್ಥ ಎಂಥವರಿಗೂ ಕಣ್ಣೀರು ತರಿಸುವಂತಿದೆ. ಇಂಥ ಲೇಖನಗಳು ಬರುತ್ತಲೇ ಇರಲಿ.

ಅಮರ said...

ಸುನಾಥರೇ,

ನಿಮ್ಮ ಮಾತು ಸತ್ಯ, ಕೆ ಎಸ್ ನ ತಮ್ಮ ಬದುಕಿನ ಬವಣೆಗಳ ನೆರಳು ಕೂಡ ಅವರ ಪ್ರೇಮ ಗೀತೆಗಳಲಿ ಬೀಳದಂತೆ ಎಚ್ಚರ ವಹಿಸಿದರು ಅನ್ನಿಸುತ್ತೆ.ಬದುಕಿನ ಮುಸ್ಸಂಜೆಯಲ್ಲಿ ಬರೆದ 'ದೀಪದ ಸಾಲಿನ ನಡುವೆ'ಕವನ ಸಂಕಲನ ಅವರ ಬದುಕಿನ ಕರಿ ಛಾಯೆಯನ್ನ ಸೂಕ್ಷ್ಮವಾಗಿ ಬಿಂಬಿಸುತ್ತೆ ಅನ್ನೊದು ನನ್ನ ಅನಿಸಿಕೆ. ಇಬ್ಬರು ಶ್ರೇಷ್ಟ ಕವಿಗಳ ಕಾವ್ಯದ ಬಗ್ಗೆ ಬೆಳಕು ಚಲ್ಲಿದ ಬರವಣಿಗೆಗೆ ಧನ್ಯವಾದಗಳು.

ಒಲವಿನಿಂದ
-ಅಮರ

sunaath said...

ತೇಜಸ್ವಿನಿ,
ನೀವು ಹೇಳುವದು ನಿಜ. "ಹುಬ್ಬಳ್ಳಿಯಾವಾ .." ಕವನದಲ್ಲಿ ತೋರಿಕೆಗೆ ವಿನೋದವಿದ್ದರೂ ಸಹ,ಆಂತರ್ಯದಲ್ಲಿ ಮರುಕವಿದೆ. ಬೇಂದ್ರೆಯವರ ಕಾವ್ಯವನ್ನು ಒಟ್ಟಾಗಿ ನೋಡಿದಾಗ, ಹೆಣ್ಣಿನ ಬಗೆಗೆ ಅವರಿಗಿದ್ದ ಪೂಜ್ಯ ಭಾವನೆ ಹಾಗು ಹೆಣ್ಣಿನ ನೋವಿಗೆ ಅವರು ಸ್ಪಂದಿಸುವ ರೀತಿ ಹೃದಯವನ್ನು
ತುಂಬುತ್ತದೆ.
ಕಾವ್ಯ ಸೌಂದರ್ಯವನ್ನು ಈ ರೀತಿಯಾಗಿ ಪರಸ್ಪರ ಹಂಚಿಕೊಂಡಾಗ, ಖುಶಿಯಾಗುತ್ತದೆ.

sunaath said...

ಅಮರ,
ಕೆ.ಎಸ್.ಎನ್. ತಮ್ಮ ನಲಿವನ್ನಷ್ಟೇ ತೋರುತ್ತಿದ್ದರೂ ಸಹ, ಅವರ ಕೊನೆಕೊನೆಯ ಕವನಗಳಲ್ಲಿ ಕಾಣಬಹುದಾದ ಕರಿಛಾಯೆಯನ್ನು ಸರಿಯಾಗಿ ಗುರುತಿಸಿದ್ದೀರಿ.

Anonymous said...

ಬೇಂದ್ರೆಯವರ ಸಂಪೂರ್ಣ ಕಾವ್ಯವೇ ಪ್ರೇಮ ಕಾವ್ಯ. ಆ ಪ್ರೇಮ ಗಂಡು-ಹೆಣ್ಣಿನ ಒಲವಿಗೆ ಮಾತ್ರ ಸೀಮಿತವಾಗಿಲ್ಲ. ಅದು ವಿಶ್ವವ್ಯಾಪಿ. ಆ ಪ್ರೇಮಕ್ಕೆ ಯಾವ ಸೀಮೆಯೂ ಇಲ್ಲ. ಆ ಪ್ರೇಮಕ್ಕೆ ಜಗತ್ತಿನ ಎಲ್ಲ ಚರಾಚರ ವಸ್ತುಗಳು ಅಧೀನವಾಗಿವೆ. ಬೇಂದ್ರೆ ಕಾವ್ಯದಲ್ಲಿ ಬಡತನ, ಸಿರಿತನ, ದೇಶ, ಕಾಲ, ಮಾನವ, ಪ್ರಾಣಿ, ಕರಿಮರಿ ನಾಯಿ, ಮುಂಜಾವು, ಪಂಚಭೂತಗಳು, ಸಂಜೆ, ಬಂಧುಗಳು, ಮಿತ್ರರು ಸರ್ವಸ್ವವೂ ಪ್ರೇಮಮಯ. ಈ ಭಾವ ಅವರ ಪ್ರತಿಪದ್ಯದಲ್ಲಿಯೂ ವ್ಯಕ್ತ-ಅವ್ಯಕ್ತ ರೂಪದಲ್ಲಿ ಪ್ರತಿಧ್ವನಿಸಿದೆ.

ಶ್ರೀನಿವಾಸ ಕಟ್ಟಿ, ಬೆಳಗಾವಿ.

Anonymous said...

ಒಳ್ಳೆಯ ಲೇಖನ. ಎಂದಿನಂತೆ ಮತ್ತೊಂದು ದೃಷ್ಟಿಕೋಣ.
ಇವರು "ಯಾರಿಗೂ ಹೇಳೋಣು ಬ್ಯಾಡ..." ಮರೆತೇ ಬಿಟ್ರಲ್ಲ ಅಂದೊಕೋತಿದ್ದ ಹಾಗೆ, ಲೇಖನದ ಕೊನೆ ಬಂದಿತ್ತು.

ನಿಮ್ಮ ತರ್ಕ ಸರಿ ಎನಿಸಿದರೂ ಯಾಕೋ ಪೂರ್ತಿ ಒಪ್ಪಿಕೋಬೇಕು ಅನ್ನಿಸ್ತಾ ಇಲ್ಲ.

"ಒಲವೆಂಬ ಹೊತ್ತಿಗೆಯ ಓದ ಬಯಸುವ ನೀನು....."
"ನಲ್ಲೆ ನಿನ್ನ ಲಲ್ಲೆವಾತು....."

"ಹಿಂದಾ ನೋಡದಾ...." ದುಃಖದ ಚಾಯೆ ಅನ್ನಿಸಬಹುದು, ಆದರೆ ನನಗೇನೋ ಇದರಲ್ಲಿ "strings of sorrow" ಇದೆ ಅಂತ ಅನಿಸುವುದಿಲ್ಲ.

ಬೇಂದ್ರೆಯವರ ಕವಿತೆಗಳನ್ನು ಓದಿ, ಇಷ್ಟು ಆಳವಾಗಿ ಚಿಂತಿಸುವೆ ನಿಂಂಅತಹವರ ಬ್ಲಾಗಿಗೆ ಬರಲು ಬಹಳ ಸಂತೋಷವಾಗುತ್ತದೆ.

Keshav.Kulkarni said...

ಸುನಾಥ್,

ಬೇಂದ್ರೆಯವರನ್ನು ಅರೆದು ಕುಡಿದಿರೋಹಾಗಿದೆ ನೀವು, ಆ ಅಮೃತವನ್ನು ನಮಗೂ ಸ್ವಲ್ಪ ಸ್ವಲ್ಪ ಉಣಿಸಿ ಉಪಕಾರ ಮಾಡಿದಿರಿ. ಅವರ ಕ್ಲಿಷ್ಟ ಕಾವ್ಯದ ವ್ವರಣೆಯೂ ನಿಮ್ಮ ಬ್ಲಾಗಿನಲ್ಲಿ ಬರಲಿ (ಉದಾ: ನಾಕುತಂತಿ).

"ನಾನು ಬಡವಿ"ಯ ಬಗ್ಗೆ ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ. ಕೊಂಡಿ:http://kannada-nudi.blogspot.com/2006/10/bendres-love-is-our-life.html

-ಕೇಶವ

Jagali bhaagavata said...

ಕಾಕಾ,

ನಾಕುತಂತಿಯ ಬಗ್ಗೆ ಬರಿತೀರಾ, ಪ್ಲೀಸ್

ಅಮರ said...

ಪ್ರಿಯ ಸುನಾಥರೇ,

ನಾನು ಕವನಗಳ ಹಿಂದೆ ಬಿದ್ದದ್ದು ಇಚಿನ ೨ ವರ್ಷಗಳಿಂದ, ಕೆ ಎಸ್ ನ, ಬಿ ಆರ್ ಎಲ್, ಭಟ್ಟರ ಕವನಗಳು ತುಂಬಾ ಹಿಡಿಸಿದವು ಅಲ್ಪ ಸ್ವಲ್ಪ ಅರ್ಥವು ಆದವು. ಆಗ ತುಂಬ ಕುತೂಹಲದಿಂದ ಕೊಂಡ "ನಾಕು ತಂತಿ" ನನ್ನಿಂದ ಅರಗಿಕೊಳ್ಳಲು ಅಗಲಿಲ್ಲ, ನಾಕು ತಂತಿಯ ಬಗ್ಗೆ ವಿಸ್ತೃತವಾಗಿ ಬರೆಯಿರಿ ಆದಷ್ಟು ಬೇಗ.

ಒಲವಿನಿಂದ
-ಅಮರ

sunaath said...

ಕಟ್ಟಿಯವರೆ,
ಬೇಂದ್ರೆಯವರ ಕಾವ್ಯ ಸಮಗ್ರವಾಗಿ ಪ್ರೇಮಕಾವ್ಯ ಎಂದು ನೀವು ಹೇಳುವದು ಸರಿ. ಉದಾಹರಣೆಗೆ ಅವರ "ಶ್ರಾವಣ" ಕವನವನ್ನು ನೋಡಬಹುದು.
"ಗುಡ್ಡ ಗುಡ್ಡ ಆಗ್ಯಾವ ಸ್ಥಾವರಲಿಂಗ/
ಅವಕ ಅಭ್ಯಂಗ/
ಎರಿತಾವನ್ನೊ ಹಾಂಗ/
ಕೂಡ್ಯಾವ ಮೋಡ/ಸುತ್ತೆಲ್ಲ ನೋಡ ನೋಡ//

ನಾಡೆಲ್ಲ ಏರಿಯ ವಾರಿ/
ಹರಿತಾವ ಝರಿ/
ಹಾಲಿನ ತೊರಿ/
ಈಗ ಯಾಕs/
ನೆಲಕೆಲ್ಲ ಕುಡಿಸಲಾಕ//
ಶ್ರಾವಣ ಬಂತು//

ಈ ಸಾಲುಗಳನ್ನು ಓದಿದರೆ ಪ್ರಕೃತಿಯೆಲ್ಲ ದೇವಚೇತನವಾಗಿ
ಚರಾಚರದ ಮೇಲೆ ವಾತ್ಸಲ್ಯದ ಧಾರೆಯನ್ನು ಎರೆಯುತ್ತಿರೊವದೊ ಎನ್ನುವ ಭಾಸವಾಗುವದು.

ಆದರೆ, ನಾನು ಬೇಂದ್ರೆಯವರ ದಾಂಪತ್ಯಗೀತೆಗಳ ಸೀಮಿತ ಪರಿಧಿಯಲ್ಲಿ ನರಸಿಂಹಸ್ವಾಮಿಯವರ ದಾಂಪತ್ಯಗೀತೆಗಳೊಡನೆ
ಹೋಲಿಸಿ ಬರೆದಿದ್ದೇನಷ್ಟೆ. ಬೇಂದ್ರೆಯವರ ಇನ್ನೂ ಕೆಲವು ಗೀತೆಗಳಲ್ಲಿ (ಉದಾ: ಶೃಂಗಾರ ಮಾಸ) ದುಃಖಛಾಯೆ ಇಲ್ಲವೆಂದು ಹೇಳಬಹುದು. ಆದರೆ ಅದು Exception proves the rule. ಎರಡನೆಯದಾಗಿ ಬೇಂದ್ರೆಯವರ
ಶೃಂಗಾರ ಗೀತೆಗಳಲ್ಲಿ (-ನರಸಿಂಹಸ್ವಾಮಿಯವರ ಗೀತೆಗಳಲ್ಲಿ
ಇರುವಂತೆ-) ಪ್ರೇಮದ ಉತ್ಕಟತೆ ಇಲ್ಲ. ವಿರಹದ ಉತ್ಕಟತೆ
ಕೆಲವೊಂದರಲ್ಲಿ ಇದೆ. (ಉದಾ: ಗಮಗಮಾ ಗಮಾಡಸ್ತಾವ ಮಲ್ಲಿಗಿ).
ನೀವು ಭಿನ್ನಾಭಿಪ್ರಾಯ ಹೊಂದಿದ್ದರೆ, ದಯವಿಟ್ಟು ಮತ್ತೆ ಬರೆಯಿರಿ. ಚರ್ಚೆಗಳಿಂದಲೇ, ಹೆಚ್ಚಿನ understanding ಹಾಗು ಹೆಚ್ಚಿನ ರಸಾನುಭವ ಸಾಧ್ಯ.

sunaath said...

ಪ್ರಿಯ ಮಾಘಾಶ್ವ (=decemberstud?),
ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ. ಬೇಂದ್ರೆಯವರ ಅನೇಕ ಕವನಗಳಲ್ಲಿ ಕೇವಲ ಒಲವಿನ ಅಭಿವ್ಯಕ್ತಿ ಇದೆ ಎಂದು ಒಪ್ಪಿಕೊಳ್ಳುವೆ. ಆದರೆ ಅವರ ದಾಂಪತ್ಯಗೀತೆಗಳ ಒಟ್ಟಂದದ ಮುಖವು ದುಃಖಿಮುಖ ಎಂದು ಹೇಳಬಹುದೆ?

sunaath said...

ಕೇಶವ,
ನಿಮ್ಮ blogನಲ್ಲಿ ನೀವು "ನಾನು ಬಡವಿ..."ಕವನದ ಬಗೆಗೆ ಬರೆದ ವಿಶ್ಲೇಷಣೆಯನ್ನು ಓದಿದೆ. ತುಂಬಾ ಖುಶಿಯಾಯಿತು. ಆ ಕವನದಲ್ಲಿ ನೀವು ಕೊಟ್ಟಿರುವ ಚಿತ್ರವೂ ಚೆನ್ನಾಗಿದೆ. ಯಾರು ತೆಗೆದ ಚಿತ್ರ?

sunaath said...

ಮಾಣಿ,
ನಾಕು ತಂತಿಯನ್ನು ನುಡಿಸುವದು ಭಾಳಾ ಕಷ್ಟವಪ್ಪಾ!
-ಕಾಕಾ

sunaath said...

ಅಮರ,
ನಾಕು ತಂತಿಯನ್ನು ಅರಿತುಕೊಳ್ಳುವ ಮಟ್ಟಕ್ಕೆ ನಾನು ಏರಿಲ್ಲ!
ಬೇಂದ್ರೆಯವರ ಒಂದೇ ತಂತಿಯೊಡನೆ ನಾನು ಈಗ ಆಟವಾಡುತ್ತಿದ್ದೇನೆ.

Shriniwas M Katti said...

ನರಸಿಂಹ ಸ್ವಾಮಿಯವರ ಕವನಗಳು ಶುದ್ದ ಮಾನವೀಯ ಸಾತ್ವಿಕತೆಯ ಪ್ರತೀಕವಾಗಿವೆ. ಬೇಂದ್ರೆ ಕಾವ್ಯದ ಒಲವು ಅಧ್ಯಾತ್ಮದೆಡೆ. ಅವರೆದೆಯ ಎತ್ತರಕೆ ಏರುವದು ಬಹು ಕಷ್ಟ. `ಹುಬ್ಬಳ್ಳಿಯಾಂವ' ದಲ್ಲಿ ಕೂಡ ಹುಡುಕಿದರೆ `ಅಧ್ಯಾತ್ಮ' ಕಾಣುತ್ತದೆ. ನಾನು ನಿಮ್ಮಂತೆ ಬೇಂದ್ರೆಯವರನ್ನು ಅಭ್ಯಾಸ ಮಾಡಿದವನಲ್ಲ. ಅದರಲ್ಲೂ 15-16 ವರ್ಷ ಮಧ್ಯಪ್ರದೇಶದಲ್ಲಿರುವಾಗ ಕನ್ನಡ ಓದುವ ಅವಕಾಶವೇ ಇರಲಿಲ್ಲ. ನೀವು `ನಾಕುತಂತಿ' ಯ ಬಗ್ಗೆ ಬರೆಯಲೇ ಬೇಕು. ಒಂದು ತಂತಿ ನಿಮಗೆ ಸಿಕ್ಕಿದೆ. ಅದನ್ನೇ ಭದ್ರವಾಗಿ ಹಿಡಿದರೆ ಉಳಿದ ಮೂರು ತಂತಿ ಸಿಕ್ಕೇಸಿಗುವವು.

ಶ್ರೀನಿವಾಸ ಕಟ್ಟಿ,

sunaath said...

ಪ್ರಿಯ ಕಟ್ಟಿಯವರೆ,
ಮೊದಲು ಒಂದು ತಂತಿಯನ್ನಂತೂ ಎಲ್ಲರೂ ಕೂಡಿ ಮಿಡಿಯೋಣ!

Unknown said...

ಸುನಾಥರೆ ,
"ಗಮ ಗಮಾ ಗಮಾಡಸ್ತಾವ ಮಲ್ಲಿಗಿ..." ಈ ಕವನದ ಹೆಸರನ್ನಷ್ಟೆ ಕೊಟ್ಟಿರುವುರಿ. ಈ ಕವನದ ಪೂರ್ಣ ವಿವರಣೆ ಬರೆದಿದ್ದರೆ ಚೆನ್ನಾಗಿರುತ್ತಿತ್ತು.
ಇದು ನನಗೆ ತುಂಬಾ ಇಷ್ಟವಾದ ಕವನ. ನನ್ನ ಮಗಳು ಈ ಕವನವನ್ನು ಚೆನ್ನಾಗಿ ಹಾಡುತ್ತಾಳೆ.

sunaath said...

ವನಮಾಲಾ,
ಬೇಂದ್ರೆಯವರ ಮಲ್ಲಿಗಿ ಕನ್ನಡದ ಎಲ್ಲ ಮನೆಗಳಲ್ಲಿ ಗಮ ಗಮಾ ಅಂತ ಕಂಪು ಬೀರುತ್ತಿದೆ, ಅಲ್ಲವೆ. ನಿಮ್ಮ ಮಗಳು ಇದನ್ನು ಚೆನ್ನಾಗಿ ಹಾಡುವದನ್ನು ಓದಿ ಸಂತೋಷವಾಯಿತು.

ಮನಸ್ವಿನಿ said...

ನಿಮ್ಮ ಬ್ಲಾಗ್ ಓದಲು ತುಂಬಾ ಖುಶಿಯಾಗುತ್ತೆ. ಒಳ್ಳೆಯ ಲೇಖನ. ಬರೆಯುತ್ತಿರಿ. ಧನ್ಯವಾದಗಳು. :)

Shriniwas M Katti said...

Hi, Sunath
What happened ? U did not write anything today !? I suggest to write a comparative study of " Roopakas" of Bendre and of Kumaravyasa. Kumaravyasa is known as "Roopaka Samrajyada Chakravarti" and Bendre is no less.
Pl try. Best wishes. Of course, this has be in addition to `naku tanti'

Geeta Katti

Anonymous said...

U r kidding !! Have not enjoyed rendering of Bendre's song " gama gama gamdastava malligi" by sou Vanamala's daughter !!! ???

Geeta Katti

Anonymous said...

ಸುನಾಥರೇ ನೀವಂದಂತೆ, ಬೇಂದ್ರೆ ಕಾವ್ಯದಲ್ಲಿ ಪ್ರೇಮಗೀತೆಗಳು ಅಲ್ಲಲ್ಲಿ ಕಾಣಬಹುದಾದರೂ, ದಾಂಪತ್ಯ ಗೀತೆಗಳ ಪಾಲು ಅಧಿಕ.
ಬೇಂದ್ರೆ ಕವಿತೆಯ ನಾಯಕ-ನಾಯಕಿಯರು "ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ ನಾನೂನು ನಕ್ಕೇನ" ಎಂದು ಪ್ರಯತ್ನಪೂರ್ವಕವಾಗಿ ನಕ್ಕಿರುವುದೇ ಹೆಚ್ಚು.

ಅಂದ ಹಾಗೆ, ನಾಜೂಕ್ ಸಿಪಾಯಿ ಜಾಣ - ಇದು ಬೇಂದ್ರೆಯವರದೇ ಅಥವಾ ಜನಪದ ಗೀತೆಯೇ? ಗೊತ್ತಿದ್ದರೆ ತಿಳಿಸಿ.

Manjula said...

"ಆವು ಈವಿನ ನಾವು ನೀವಿಗೆ ಆನು ತಾನಾದ ತನನನ..." ಕೇಳಲು ಹಾಡು ಬಲು ಪ್ರಾಸಬದ್ಧವಾಗಿದೆ.. ಆದರೆ ಅರ್ಥ ಇನ್ನೂ ಆಗಿಲ್ಲ.. :-( ಸುನಾಥರೇ ನಾಕುತಂತಿಯನ್ನ ನಾಕು ಜನ ಒಟ್ಟಾಗಿ ಸೇರಿ ಕಲಿಯಬಹುದೇನೋ..
ದಾಂಪತ್ಯ ಗೀತೆಗಳ ಲೇಖನ ಚೆನ್ನಾಗಿ ಮೂಡಿ ಬಂದಿದೆ.. :-)

sunaath said...

ಮನಸ್ವಿನಿ,
ಖುಶಿ ಎನ್ನುವದು ಸಾಂಸರ್ಗಿಕ. ನಮ್ಮೆಲ್ಲರಲ್ಲೂ ಒಟ್ಟಾಗಿ ಹರಡುವದು.

sunaath said...

ಪ್ರಿಯ ಶ್ರೀ ಶ್ರೀನಿವಾಸ,
ನಿಮ್ಮ ಸಲಹೆ (ಕುಮಾರವ್ಯಾಸ ಮತ್ತು ಬೇಂದ್ರೆ) ಅತ್ಯುತ್ತಮ ಸಲಹೆ. ಈ ಮಹಾನ್ ಕವಿಗಳಿಬ್ಬರೂ ರೂಪಕ ಚಕ್ರವರ್ತಿಗಳೆ. ಇವರ ಅಧ್ಯಯನ ಮಾಡೋಣ.

sunaath said...

ಗೀತಕ್ಕ,
ನೀವು ನನ್ನನ್ನು ತಪ್ಪಿನಲ್ಲಿ ಹಿಡಿದು ಬಿಡುತ್ತೀರಾ!

sunaath said...

ತ್ರಿವೇಣಿ,
’ನಾಜೂಕು ಸಿಪಾಯಿ ಜಾಣ’ ಹುಡುಕಿ ನೋಡುತ್ತೇನೆ. ನಿನ್ನಲ್ಲಿಯ ಸಂಗ್ರಹವೂ ಅಪಾರವಿದೆ.
-ಕಾಕಾ

sunaath said...

ಭಾವ-ದರ್ಪಣ,
ನಾಕು ತಂತಿ ಮಿಡಿಯಲು, ನಾಕು ಜನ ಬೇಕೆ ಬೇಕು!

MD said...

ಸುನಾಥ್,
ಬೇಂದ್ರೆಯವರನ್ನು ಅವರ ಮೊದಲನೆ ತಂತಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳೋಣ ಅಂತ ಹೋದಾಗಲೆಲ್ಲ ಅವರು ಜಾರಿ ಜಾರಿ ಹೋಗಿದ್ದಾರೆ.
ನಿಮ್ಮ ಈ ಲೇಖನ ಓದಿದ ಮೇಲೆ ಒಂದು ಮಾತಂತೂ ಖಾತ್ರಿಯಾಯಿತು. ಬೇಂದ್ರೆಯವರ ಬಗ್ಗೆ ಆಳವಾಗಿ ಓದಿರುವವರಲ್ಲೊಬ್ಬರು ನೀವು.
ಎಲ್ಲ ಓದುಗರು ಅಪೇಕ್ಷಿಸಿರುವಂತೆ ನೀವು 'ನಾಲ್ಕು ತಂತಿ' ಯನ್ನು ಎಳೆ ಎಳೆಯಾಗಿ ನಿಮಗೆ ತಿಳಿದ ರೀತಿಯಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.
ಒಂದು ತಂತಿಯನ್ನು ಮೀಟಿದ್ದಕ್ಕೇ ಇಷ್ಟೊಂದು ದುಂಬಿಗಳ ಝೇಂಕಾರವಾಗುತ್ತಿದೆ, ಇನ್ನು ನಾಕೂ ತಂತಿ ನೀವು ನುಡಿಸಿದರೆ!

Anonymous said...

It seems, U and sou Vanamala r talking thru Blog now a days...How sweet and romantic !!!!!

Geeta Katti

sunaath said...

ಪ್ರಿಯ md,
ಒಂದೊಂದೇ ತಂತಿಯನ್ನು ಝೇಂಕರಿಸೋಣ. ನಾಕು ತಂತಿಯ
ನಿನಾದ ನಿಧಾನವಾಗಿಯಾದರೂ ತುಂಬಿಕೊಂಡೀತು.

Keshav.Kulkarni said...

ಸುನಾಥ,

ನನ್ನ ಬ್ಲಾಗಿನಲ್ಲಿರುವ ಚಿತ್ರ ಕೆ.ಕೆ.ಹೆಬ್ಬಾರ ಬರೆದದ್ದು. ನನ್ನ ಬ್ಲಾಗಿನಲ್ಲಿ ಅದನ್ನು ಬರೆಯುವುದನ್ನು ಮರೆತಿದ್ದೆ, ಧನ್ಯವಾದ.

ಕೇಶವ