Sunday, June 1, 2008

ಮೂಗ, ಪಣಬ, ಮನ್ನ, ಕಿನ್ನ, ಹಂಗ, ನಲ್ಲ, ಗಂಗ, ಮುಂಬ, ಸಿಂಗ, ಕಂಬ, ಲಾಟ, ಮುರ

ಮೂಗರು ಒಂದು ಕಾಲದಲ್ಲಿ ಕರ್ನಾಟಕದಲ್ಲಿ ನೆಲೆಸಿದ್ದ ದೊಡ್ಡ ಮೂಲನಿವಾಸಿ ಸಮುದಾಯ. ಆಂಧ್ರಪ್ರದೇಶದಲ್ಲಿ ಇರುವ ಮುಖ ಹೆಸರಿನ ಆದಿವಾಸಿಗಳು ಇವರೇ ಆಗಿರಬಹುದು. ಮೂಗ ಅಥವಾ ಮೂಕ ಎನ್ನುವ ಪದದಿಂದ ಪ್ರಾರಂಭವಾಗುವ ೩೫ ಹಳ್ಳಿಗಳು ಕರ್ನಾಟಕದಲ್ಲಿವೆ. ಮಹಾರಾಷ್ಟ್ರದಲ್ಲಿ ಮುಖೇರ ಎನ್ನುವ ಊರಿದೆ. ಈ ಹೆಸರು ‘ಮುಖ+ಹಾರ’ ಎನ್ನುವ ದ್ರಾವಿಡ ಪದದ ಮಹಾರಾಷ್ಟ್ರೀಕರಣವಿರಬಹುದು. ಕರ್ನಾಟಕದ ಕೊಲ್ಲೂರಿನಲ್ಲಿರುವ ಮೂಕಾಂಬಿಕೆ ಸುಪ್ರಸಿದ್ಧ ದೇವಿಯಾಗಿದ್ದಾಳೆ. ಇವಳು ಮೂಕಾಸುರನನ್ನು ಸಂಹರಿಸಿದಳು ಎಂದು ಸ್ಥಳಪುರಾಣಗಳು ಹೇಳುತ್ತವೆ. ಕೋಲ, ಮುಂಡ, ಮಹಿಷ ಮೊದಲಾದ ಮೂಲನಿವಾಸಿ ಸಮುದಾಯಗಳನ್ನು ಸೋಲಿಸಿದ ಮಾತೃಪ್ರಧಾನ ಸೈನ್ಯವೇ, ಈ ಮೂಕಸಮುದಾಯವನ್ನೂ ಸಹ ಸೋಲಿಸಿರಬಹುದು. ಕರ್ನಾಟಕದಲ್ಲಿ ಮೂಕ ಅಥವಾ ಮೂಗ ಹೆಸರಿನಿಂದ ಪ್ರಾರಂಭವಾಗುವ ಕೆಲವು ಸ್ಥಳನಾಮಗಳು ಈ ರೀತಿಯಾಗಿವೆ:
ಮೂಕನಹಾಳ, ಮೂಕನಪಾಳ್ಯ, ಮೂಕಹಳ್ಳಿ, ಮೂಗನಪುರ, ಮೂಗನೂರು, ಮೂಗಬಾಳ, ಮೂಗವಳ್ಳಿ, ಮೂಗವಾಡೆ, ಮೂಗಾಲಿ, ಮೂಗೂರು, ಮುಗಳಿ ಇತ್ಯಾದಿ.

ಕರ್ನಾಟಕದ ಮೂಲನಿವಾಸಿ ಸಮುದಾಯಗಳಲ್ಲಿ ‘ಪಣಬ’ ಜನಾಂಗವು ಮಹತ್ವದ್ದಾಗಿದೆ. ಏಕೆಂದರೆ, ಮೂಗ, ಗೊಂಡ, ಕೋಲ,ಶಿರ ಮೊದಲಾದ ಸಮುದಾಯಗಳು ಕರ್ನಾಟಕದಲ್ಲಿ ಈಗ ಕಾಣಲಾರವು. ಆದರೆ, ಪಣಬ ಅಥವಾ ಹಣಬ ಹೆಸರಿನ ಸಮುದಾಯವು “ಬೀದರ” ಜಿಲ್ಲೆಯನ್ನು ನೆಲೆಯಾಗಿಸಿಕೊಂಡ ಸಮುದಾಯವಾಗಿದೆ. ಕರ್ನಾಟಕ, ತಮಿಳುನಾಡು ಹಾಗು ಕೇರಳ ರಾಜ್ಯಗಳಲ್ಲಿ ”ಪಣಿಯನ್” ಎನ್ನುವ ಪರಿಶಿಷ್ಟ ಜನಾಂಗವಿದೆ. ಮಧ್ಯಪ್ರದೇಶದಲ್ಲಿ “ಪಣಿಕ” ಎನ್ನುವ ಪರಿಶಿಷ್ಟ ಜನಾಂಗವಿದೆ. ಇವರೆಲ್ಲರೂ ಪಣಬ(=ಹಣಬ)ರು ಎನ್ನುವದು ನಿಸ್ಸಂಶಯ. ಕರ್ನಾಟಕದಲ್ಲಿ ‘ಪಣ’ ಹಾಗು ‘ಹನ’ದಿಂದ ಪ್ರಾರಂಭವಾಗುವ ೩೪ ಸ್ಥಳಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ‘ಪಣಂಬೂರು’ ಪ್ರಸಿದ್ಧವೇ ಇದೆ. ಅದೇ ಜಿಲ್ಲೆಯಲ್ಲಿ ಪಣಜೆ ಹಾಗೂ ಪಣಜೆಕಲ್ ಎನ್ನುವ ಇನ್ನೂ ಎರಡು ಊರುಗಳಿವೆ. ಗೋವಾದ ರಾಜಧಾನಿಯಾದ ಪಣಜಿಯೂ ಸಹ ಈ ಪಣಬರ ಪ್ರಾಚೀನ ಗ್ರಾಮವೇ ಸರಿ. ಕನ್ನಡದ ಕರಾವಳಿ ಜಿಲ್ಲೆಗಳಲ್ಲಿ ಹಾಗು ಘಟ್ಟಪ್ರದೇಶಗಳಲ್ಲಿ ‘ಜಿ’ ಅಥವಾ ‘ಜೆ’ ಎನ್ನುವದು ದೇಶವಾಚಕ ಪ್ರತ್ಯಯ. ಹೀಗಾಗಿ ಗೋವಾ ಸಹ ಒಂದು ಕಾಲದಲ್ಲಿ ಕನ್ನಡ ಕರಾವಳಿಯೇ ಆಗಿತ್ತು ಎನ್ನುವದು ‘ಪಣಜಿ’ ಎನ್ನುವ ಈ ಸ್ಥಳನಾಮದಿಂದ ಸಿದ್ಧವಾಗುತ್ತದೆ.
ಬೆಂಗಳೂರು ಜಿಲ್ಲೆಯಲ್ಲಿ ಪಣತೂರು ಎನ್ನುವ ಊರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಣಪಿಳ ಎನ್ನುವ ಊರಿದೆ. ಕೋಲಾರ ಜಿಲ್ಲೆಯಲ್ಲಿ ಪಣಸಮಕ್ಕಳಪಳ್ಳಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಹನಸೋಗೆ ಎನ್ನುವ ಊರುಗಳಿವೆ. ಕರ್ನಾಟಕದ ತುಂಬೆಲ್ಲ ಹರಡಿದ ಈ ಗ್ರಾಮಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ:
ಹನವಾಡಿ, ಹನವಾಳ, ಹನಸೂರು, ಹನಾಪುರ, ಹನಕುಂಟೆ, ಹನಕುಣಿ, ಹನಕೋಡು, ಹನಕೋಣ, ಹನಜೋಗ, ಹನಕೋಲ, ಹನಗಂಡಿ, ಹನಗೆರೆ ಇತ್ಯಾದಿ.

ಕರ್ನಾಟಕದಲ್ಲಿ ಮನ್ನ ಅಥವಾ ಮನ ಪದದಿಂದ ಪ್ರಾರಂಭವಾಗುವ ೮೪ ಸ್ಥಳಗಳಿವೆ. ಕೆಲವು ಉದಾಹರಣೆಗಳು: ಮನಗುಂಡಿ, ಮನಜೋಗ, ಮನಂಗಿ, ಮನಕಟ್ಟಿ, ಮನಖೇಡ, ಮನಗಡಿ, ಮನಚೇರ್ಲಾ, ಮನದೂರು, ಮನಗೂಳಿ, ಮನಜೂರು, ಮನಬೂರು, ಮನಿಲಾ, ಮನ್ನಾಪುರ, ಮನ್ನಿಕಟ್ಟಿ, ಮನ್ನಿಕೇರಿ, ಮನ್ನೆ, ಮನ್ನೇರಹಾಳ, ಮನ್ನೇರಿ ಇತ್ಯಾದಿ. ಕರ್ನಾಟಕದ ಹೊರಗೆ ಇರುವ ಸ್ಥಳಗಳಲ್ಲಿ ದೊಡ್ಡ ಸ್ಥಳವೆಂದರೆ ತಮಿಳುನಾಡಿನಲ್ಲಿರುವ ಮನ್ನಾರಗುಡಿ ಹಾಗು ಕೇರಳದಲ್ಲಿರುವ ಮನ್ನಾರಕ್ಕಾಡ. ಮಹಾರಾಷ್ಟ್ರದಲ್ಲಿ ಮನೋರ ಎನ್ನುವ ಊರಿದೆ.

ಆಂಧ್ರದಲ್ಲಿ ಮನ್ನೇರವರ್ಲು ಹಾಗು ಮನ್ನ ಧೋರ್ಲಾ ಎನ್ನುವ ಪರಿಶಿಷ್ಟ ಪಂಗಡಗಳಿವೆ. ಕೇರಳದಲ್ಲಿ ಮನ್ನನ್ ಎನ್ನುವ ಪರಿಶಿಷ್ಟ ಪಂಗಡವಿದೆ. ಈ ಸಮುದಾಯಗಳು ಕೇರಳ, ತಮಿಳುನಾಡು ಹಾಗು ಆಂಧ್ರಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತಿವೆ.

‘ಕಿನ್ನ’ ಪದದಿಂದ ಪ್ರಾರಂಭವಾಗುವ ಕೇವಲ ೯ ಸ್ಥಳಗಳು ಕರ್ನಾಟಕದಲ್ಲಿವೆ. ಅವುಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಕಿನ್ಹಾಳವು ವೈಶಿಷ್ಟ್ಯಪೂರ್ಣವಾದದ್ದು. ಇಲ್ಲಿಯ ಹಸ್ತಕುಶಲ ಗೊಂಬೆಗಳು “ ಕಿನ್ನಾಳದ ಗೊಂಬೆಗಳು” ಎಂದು ತುಂಬ ಪ್ರಸಿದ್ಧವಾದವು. ಇತರ ಕೆಲವು ಗ್ರಾಮಗಳೆಂದರೆ ಕಿನ್ನಿ, ಕಿನಕನಹಳ್ಳಿ, ಕಿನ್ನಾರ, ಕಿನ್ನರಹಳ್ಳಿ, ಕಿನ್ನಿಗೋಳಿ ಇತ್ಯಾದಿ.

ಕಿನ್ನರ ಇದು ಹಿಮಾಚಲಪ್ರದೇಶದಲ್ಲಿರುವ ಪರಿಶಿಷ್ಟ ಜನಾಂಗ. ಮಹಾಭಾರತದಲ್ಲಿ ಕಿನ್ನರರ ಉಲ್ಲೇಖವಿದೆ. ಆರ್ಯರು ಈ ಸಮುದಾಯವನ್ನು ಮೊದಲ ಬಾರಿಗೆ ನೋಡಿದಾಗ ಇವರಿಗೆ “ ಕಿಮ್? ನರ?” ಇವರು ಮನುಷ್ಯರೋ ಎಂದು ಚಕಿತಗೊಂಡು ಕರೆದಿರಬಹುದು. (ಇದರಂತೆ ವಾ+ನರ=ವಾನರ). ಕಿನ್ನರರು ತಮ್ಮ ಹಾಡುಗಾರಿಕೆಗಾಗಿ ಪ್ರಸಿದ್ಧರಾಗಿದ್ದರು. ಇವರ ವಾದ್ಯವಿಶೇಷಕ್ಕೆ ‘ಕಿನ್ನರಿ’ ಎಂದು ಕರೆಯಲಾಗುತ್ತಿದೆ. ಇವರು ಯಾವ ಕಾಲದಲ್ಲಿ ಕರ್ನಾಟಕಕ್ಕೆ ಬಂದರು ತಿಳಿಯದು. ಭಾರತದ ಇತರ ರಾಜ್ಯಗಳಲ್ಲಿಯೂ ಸಹ ಕಿನ್ನ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ಇದ್ದಿರಬಹುದು.

ಗಂಗ ಪದದಿಂದ ಪ್ರಾರಂಭವಾಗುವ ೧೦೯ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾಹರಣೆ: ಗಂಗಾವತಿ, ಗಂಗೂರ ಇತ್ಯಾದಿ. ‘ಗಂಗ’ ಕುಲವು ಕರ್ನಾಟಕವನ್ನಾಳಿದ ಪ್ರಮುಖ ರಾಜವಂಶಗಳಲ್ಲಿ ಒಂದು.

ನಲ್ಲ ಪದದಿಂದ ಪ್ರಾರಂಭವಾಗುವ ೮೦ ಸ್ಥಳನಾಮಗಳು ಕರ್ನಾಟಕದಲ್ಲಿವೆ. ನಲ್ಲಮ್ಮದೇವಿ ಈ ಸಮುದಾಯದ ಕುಲದೇವತೆ.

ಹಂಗ ಪದದಿಂದ ಪ್ರಾರಂಭವಾಗುವ ೨೬ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾ: ಹಂಗರಕಿ.

ಮುಂಬ ಪದದಿಂದ ಪ್ರಾರಂಭವಾಗುವ ಕೇವಲ ೩ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಮೊದಲನೆಯದು ಮಂಡ್ಯ ಜಿಲ್ಲೆಯಲ್ಲಿರುವ ಮುಂಬಹಳ್ಳಿ, ಎರಡನೆಯದು ಚಾಮರಾಜನಗರ ಜಿಲ್ಲೆಯಲ್ಲಿರುವ ಮುಂಬಳ್ಳಿ ಹಾಗು ಮೂರನೆಯದು ಕಲಬುರ್ಗಿ ಜಿಲ್ಲೆಯಲ್ಲಿರುವ ಮುಂಬಾಪುರ. ಕರ್ನಾಟಕದ ಹೊರಗಿರುವ ಪ್ರಸಿದ್ಧ ಊರೆಂದರೆ, ಮಹಾರಾಷ್ಟ್ರ ರಾಜ್ಯದ ರಾಜಧಾನಿಯಾದ ಮುಂಬಯಿ. ಇದೀಗ ,“ಆಮಚೀ ಮುಂಬಯಿ ” ಎಂದು ಹೇಳುತ್ತ ಬಾಳ ಠಾಕರೆ ಅನುಯಾಯಿಗಳು ಗಲಾಟೆ ಮಾಡುತ್ತಿದ್ದರೂ ಸಹ, ಆ ಮುಂಬಯಿಯು ಮುಂಬ ಸಮುದಾಯಕ್ಕೆ ಸೇರಿದ ಒಂದು ಹಳ್ಳಿಯಾಗಿತ್ತು. Red Indianರ ಆವಾಸಗಳನ್ನು ಬಿಳಿಯರು ಒತ್ತುವರಿ ಮಾಡಿಕೊಂಡ ಹಾಗೆ, ಮುಂಬರ ಆವಾಸಗಳನ್ನು ಇತರರು (--ಇವರಲ್ಲಿ ಆರ್ಯರು ಹಾಗು ಇತರ ಅನಾರ್ಯರು ಸಹ ಸೇರಿದ್ದಾರೆ--) ಒತ್ತುವರಿ ಮಾಡಿಕೊಂಡರು. ಈ ಮುಂಬ ಸಮುದಾಯದವರೊಡನೆ ಕರ್ನಾಟಕಕ್ಕೆ ಇರುವ ಸಂಬಂಧವು , ಕರ್ನಾಟಕದಲ್ಲಿರುವ ಮೂರು ಸ್ಥಳನಾಮಗಳಿಂದ ಸ್ಪಷ್ಟವಾಗುತ್ತದೆ.

ಬೆಂಗಳೂರನ್ನು ‘ಸಿಂಗಾಪುರ’ವನ್ನಾಗಿ ಪರಿವರ್ತಿಸುತ್ತೇನೆಂದು, ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳೊಬ್ಬರು (--ಅವರು ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರೂ ಹೌದು--) ಹೇಳಿಕೊಂಡಿದ್ದರು. ಅದರ ಅವಶ್ಯಕತೆಯೇ ಇಲ್ಲ. ಏಕೆಂದರೆ ಕರ್ನಾಟಕದಲ್ಲಿ ಈಗಾಗಲೇ, ‘ಸಿಂಗಾಪುರ’ ಹೆಸರಿನ ೯ ಊರುಗಳಿವೆ. ಅಲ್ಲದೆ, ‘ಸಿಂಗ’ ಪದದಿಂದ ಪ್ರಾರಂಭವಾಗುವ ೮೮ ಊರುಗಳಿವೆ.
ಉದಾಹರಣೆಗಳು: ಸಿಂಗಾಪುರ, ಸಿಂಗನಕುಪ್ಪೆ, ಸಿಂಗನಹಳ್ಳಿ, ಸಿಂಗಟಾಲೂರ, ಸಿಂಗನಪಾಳ್ಯ, ಸಿಂಗನಹಾಳ, ಸಿಂಗನಳ್ಳಿ, ಸಿಂಗನೋಡಿ, ಸಿಂಗಪಟ್ಣ, ಸಿಂಗದದಿನ್ನಿ, ಸಿಂಗನಕೆರೆ, ಸಿಂಗತೂರು, ಸಿಂಗನಗುತ್ತಿ, ಸಿಂಗನಗುಂಡ, ಸಿಂಗನಕುಪ್ಪೆ,, ಸಿಂಗಸಂದ್ರ ಇತ್ಯಾದಿ.

ಸಿಂಗ ಎನ್ನುವ ಪದ ಉತ್ತರ ಭಾರತದಲ್ಲಿ ವ್ಯಕ್ತಿನಾಮದ ಎದುರಿಗೆ ಜೋಡಿಸಿಕೊಳ್ಳುವ ಪದ, especially ಸಿಖ್ ಸಮುದಾಯದ ಪುರುಷರ ಉತ್ತರಪದ. ಉದಾಹರಣೆ: ಮಿಲ್ಕಾಸಿಂಗ. ಅಸಾಮ ಹಾಗೂ ಮಣಿಪುರ ರಾಜ್ಯಗಳಲ್ಲಿ ಸಿಂಗ ಎನ್ನುವ ಪರಿಶಿಷ್ಟ ಜನಾಂಗವಿದೆ. ಹೀಗಾಗಿ ಈ ಹೆಸರಿನ ಗ್ರಾಮಗಳು ಉತ್ತರ ಭಾರತದಲ್ಲಿ ಇರುವದು ಸಹಜ. ಪಶ್ಚಿಮ ಬಂಗಾಲದಲ್ಲಿ ಸಿಂಗೂರು ಹಾಗು ಸಿಂಗರೇಣಿ ಎನ್ನುವ ಊರುಗಳಿವೆ. ಆದರೆ ಕರ್ನಾಟಕದಲ್ಲಿ ಈ alien(?) ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ದೊರೆಯುವ ಕಾರಣವೇನು? ಸಿಂಗ ಎನ್ನುವ ಸಮುದಾಯ ಇಲ್ಲಿಯೂ ಇದ್ದಿತೆ?

ಮಹಾಭಾರತದಲ್ಲಿ ಅರ್ಜುನನ ದಿಗ್ವಿಜಯದ ಸಮಯದಲ್ಲಿ, ‘ಸಿಂಹಪುರ’ದ ವರ್ಣನೆ ಬರುತ್ತದೆ. ಈ ಸಿಂಹಪುರವು ಈಗಿನ ಕಾಶ್ಮೀರದಲ್ಲಿರುವ ಹಝಾರ ಎನ್ನುವ ಊರಿಗೆ ಹತ್ತಿರವಾಗಿತ್ತು ಎನ್ನಲಾಗುತ್ತಿದೆ. ಬೌದ್ಧರ ಧರ್ಮಗ್ರಂಥ ‘ಮಹಾವಂಶ’ದಲ್ಲಿ ವರ್ಣಿಸಲಾದಂತೆ, ಈ ಸಿಂಹಪುರದ ರಾಜನಾದ ವಿಜಯಸಿಂಹನು ತನ್ನ ೭೦೦ ಜನ ಸಹಚರರೊಡನೆ ತಾಮ್ರಪರ್ಣಿ ಎನ್ನುವ ದ್ವೀಪಕ್ಕೆ ಧರ್ಮಪ್ರಚಾರಕ್ಕಾಗಿ ತೆರಳಿದನು. (ಕ್ರಿ.ಪೂ. ೫೪೩). ಇವನಿಂದಾಗಿಯೆ ಆ ದ್ವೀಪಕ್ಕೆ ಸಿಂಹಳ ದ್ವೀಪವೆನ್ನುವ ಹೆಸರು ಪ್ರಾಪ್ತವಾಯಿತು. ಇವನಂತೆಯೆ ಪೂರ್ವ ಏಶಿಯಾಕ್ಕೆ ತೆರಳಿದ ತಂಡವೊಂದು ಅಲ್ಲಿ ಈಗ ಪ್ರಸಿದ್ಧವಾದ ‘ ಸಿಂಗಾಪುರ ’ವನ್ನು ಸ್ಥಾಪಿಸಿತು. ಅದರಂತೆಯೆ, ಕರ್ನಾಟಕ ಹಾಗು ಭಾರತದ ಇತರತ್ರ ಸಂಚರಿಸಿದ ತಂಡಗಳು ಅಲ್ಲೆಲ್ಲ ಸಿಂಗಾಪುರಗಳನ್ನು ಕಟ್ಟಿರಬಹುದು.

ಕಂಬ ಹೆಸರಿನಿಂದ ಪ್ರಾರಂಭವಾಗುವ ೪೬ ಗ್ರಾಮಗಳು ಕರ್ನಾಟಕದಲ್ಲಿವೆ. (ಉದಾ: ಕಂಬಾಳ, ಕಂಬಂದಿನ್ನೆ, ಕಂಬಗಿ, ಕಂಬದೂರು, ಕಂಬತನಹಳ್ಳಿ, ಕಂಬಳಾಪುರ, ಕಂಬಿಗರ ಇತ್ಯಾದಿ). ಕಂಬ ಎನ್ನುವ ತಮಿಳು ಕವಿಯಿಂದ ಬರೆಯಲಾದ ತಮಿಳು ರಾಮಾಯಣವು ‘ಕಂಬ ರಾಮಾಯಣ’ವೆಂದೇ ಪ್ರಸಿದ್ಧವಿದೆ. ಕಂಬರು ಮೂಲತಃ ಮಧ್ಯ ಏಶಿಯಾದವರು. ವಾಲ್ಮೀಕಿ ರಾಮಾಯಣದಲ್ಲಿ ಶಕ, ಯವನ, ಕಾಂಭೋಜ ಮೊದಲಾದ ಆಕ್ರಮಣಕಾರರ ಬಗೆಗೆ ಉಲ್ಲೇಖವಿದೆ. ಮಹಾಭಾರತ ಮತ್ತು ಗರುಡಪುರಾಣಗಳಲ್ಲಿಯೂ ಸಹ ಇವರ ಬಗೆಗೆ ಉಲ್ಲೇಖವಿದೆ. ಕ್ರಿ.ಪೂ.೬೦ರಲ್ಲಿ ಉಜ್ಜಯನಿಯ ವಿಕ್ರಮಾದಿತ್ಯನು ಈ ಬಾಹ್ಯ ಆಕ್ರಮಣಕಾರರನ್ನು ಪರಾಭವಗೊಳಿಸಿದ ಬಳಿಕ ವಿಕ್ರಮ ಶಕೆಯನ್ನು ಪ್ರಾರಂಭಿಸಿದನು. ಕ್ರಿಸ್ತ ಶಕೆಯ ಆರಂಭದಲ್ಲಿ ಮಥುರೆಯಲ್ಲಿ ತಳವೂರಿದ ಕಂಬ(ಕಾಂಭೋಜ)ರು ದಕ್ಷಿಣಕ್ಕೆ ಚಲಿಸಿದಾಗ ಈಗಿನ ಆಂಧ್ರಪ್ರದೇಶದಲ್ಲಿಯ ‘ಕಮ್ಮ ನಾಡಿನಲ್ಲಿ’ ನೆಲೆಸಿದರೆನ್ನಲಾಗಿದೆ. ಗರುಡ ಪುರಾಣದಲ್ಲಿ ಲಾಟ ಹಾಗು ಕರ್ನಾಟ ದೇಶಗಳಿಗೆ ಹತ್ತಿರವಾಗಿ ‘ಕಾಂಭೋಜ’ ದೇಶವಿದೆ ಎಂದು ವರ್ಣಿಸಲಾಗಿದೆ. ಈ ಜನಾಂಗವೇ ಸಾಗರ ದಾಟಿ ‘ಕಾಂಭೋಜ’ವನ್ನು (ಈಗಿನ ಕಾಂಪೂಚಿಯಾವನ್ನು) ನಿರ್ಮಿಸಿರಬಹುದು.

ಪುರಾಣ ಹಾಗು ಮಹಾಭಾರತಗಳಲ್ಲಿ ವರ್ಣಿತವಾಗಿರುವ ಲಾಟ ದೇಶವು ಈಗಿನ ಗುಜರಾತವನ್ನು ಸೂಚಿಸುತ್ತದೆ. ಆದರೆ, ಈಗಿನ ರಾಜಕೀಯ ಪ್ರದೇಶಗಳಿಗೂ ಪೌರಾಣಿಕ ಕಾಲದ ಸಾಂಸ್ಕೃತಿಕ ಪ್ರದೇಶಗಳಿಗೂ ಸಂಬಂಧವಿಲ್ಲವೆನ್ನುವದನ್ನು ಲಕ್ಷದಲ್ಲಿಡಬೇಕು. ಗುಜರಾತಿ ಭಾಷೆಯು ದ್ರಾವಿಡ ತಳಹದಿಯನ್ನು ಹೊಂದಿದೆ ಎಂದು ಭಾಷಾವಿಜ್ಞಾನಿಗಳು ಹೇಳುತ್ತಾರೆ. ಅಂದ ಮೇಲೆ, ಈಗಿನ ಗುಜರಾತಿಗಳಲ್ಲಿ ಸ್ವಲ್ಪ ಮಟ್ಟಿಗಾದರೂ ಕನ್ನಡ ರಕ್ತವಿರಬಹುದೆಂದು ತೋರುತ್ತದೆ.
ಲಾಟ ಅಥವಾ ಲಾತ ಪದದಿಂದ ಪ್ರಾರಂಭವಾಗುವ ೬ ಗ್ರಾಮಗಳು ಕರ್ನಾಟಕದಲ್ಲಿವೆ. ಮಹಾರಾಷ್ಟ್ರದಲ್ಲಿ ಲಾಢಾ ಲಾತೂರು ಮೊದಲಾದ ಗ್ರಾಮಗಳಿವೆ. ‘ಲಾಡ’ ಎನ್ನುವದು ಕೆಲವು ಕುಟುಂಬಗಳ ಅಡ್ಡ ಹೆಸರೆನ್ನುವದು ಗಮನಾರ್ಹವಾಗಿದೆ.

ಕರ್ನಾಟಕದಲ್ಲಿ ಮುರ ಪದದಿಂದ ಪ್ರಾರಂಭವಾಗುವ ೪೭ ಸ್ಥಳಗಳಿವೆ. ಭಾಗವತದಲ್ಲಿ ಶ್ರೀಕೃಷ್ಣನು ‘ಮುರ’ ಎನ್ನುವ ರಾಕ್ಷಸನನ್ನು ಸಂಹರಿಸಿ ‘ಮುರಾರಿ’ ಎನ್ನುವ ಬಿರುದನ್ನು ಪಡೆದನೆಂದು ಹೇಳಲಾಗಿದೆ. ಕುಲಸಂಘರ್ಷದಲ್ಲಿ ಸೋತು ದಕ್ಷಿಣಕ್ಕೆ ಪಲಾಯನಗೈದ ಈ ಸಮುದಾಯವು ಕರ್ನಾಟಕದಲ್ಲಿಯೂ ಸಹ ಬೀಡು ಬಿಟ್ಟಿರಬಹುದು.
(ಉದಾಹರಣೆಗಳು: ಮುರಕಟ್ಟಿ, ಮುರಕಣಿ, ಮುರಕನಾಳ, ಮುರಕುಂಬಿ, ಮುರಕೋಡಿ, ಮುರಡಿ, ಮುರಕಿ, ಮುರನಾಳ, ಮುರಾಳ, ಮುರ್ಕಿ, ಮುರ್ಗ ಇತ್ಯಾದಿ).

2 comments:

Shriniwas M Katti said...

It is becoming difficult to follow the 'research papers' but they are very interesting. Why not u return to Ambikatanayadatta in between ?

I am unable to trace my books "Gangalahari" and Kannada Meghadoot. I will send them the moment I trace them. Pl excuse me for the delay.

sunaath said...

ಕಟ್ಟಿಯವರೆ, ಇನ್ನು ಕೇವಲ ಒಂದು ಅಥವಾ ಎರಡು ಮಾತ್ರ ಈ ’ಸಂಶೋಧನಾ ಲೇಖನಗಳು’ ಇವೆ.ಆ ಬಳಿಕ ’ಭಾಷಾದೋಷ’ದ ಬಗೆಗೆ ಬರೆಯಬೇಕಾಗಿದೆ. Please
put up with me. 'ಗಂಗಾಲಹರಿ’ ಸಿಕ್ಕ ಮೇಲೆ ಕಳುಹಿಸಿರಿ. ಗಡಿಬಿಡಿಯಿಲ್ಲ.