Saturday, June 28, 2008

ಹೆಸರಿನ ಕುಸುರು ಪಸರಿಸಿದಾಗ

ಹಿನ್ನೆಲೆಯ ಟಿಪ್ಪಣಿ:
ಶ್ರೀ ಅನಂತ ಕಲ್ಲೋಳರು ಕನ್ನಡದ ಪ್ರಖ್ಯಾತ ಹಾಸ್ಯ ಲೇಖಕರು. ೧೯೯೫ರಲ್ಲಿ ಬೆಳಗಾವಿಯಲ್ಲಿ ಸ್ಥಾಪಿತವಾದ ‘ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ’ದ ಸ್ಥಾಪಕ ಸದಸ್ಯರು. ಕನ್ನಡದ ಅಭಿಮಾನದಿಂದಾಗಿ, ತಮ್ಮ ನೌಕರಿಯಲ್ಲಿ ಹಿಂದೇಟು ಅನುಭವಿಸಿದವರು.
ಕನ್ನಡದ ಕಟ್ಟಾಳುಗಳಾದ ಶ್ರೀ ಅನಂತ ಕಲ್ಲೋಳರು ‘ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ’ದ ದಶಮಾನೋತ್ಸವದ ಸ್ಮರಣ ಸಂಚಿಕೆ (೨೦೦೮)ಯಲ್ಲಿ ಬರೆದ ಲೇಖನವನ್ನು ಇಲ್ಲಿ ಉದ್ಧರಿಸಲಾಗಿದೆ.
ಶ್ರೀ ಅನಂತ ಕಲ್ಲೋಳರಿಗೆ ಧನ್ಯವಾದಗಳನ್ನು ಅರ್ಪಿಸಲಾಗುತ್ತಿದೆ.
-ಸುನಾಥ


”ಹೆಸರಿನ ಕುಸುರು ಪಸರಿಸಿದಾಗ”
------ಅನಂತ ಕಲ್ಲೋಳ

ನನ್ನ ಹಿರಿಯ ಸಾಹಿತಿ ಮಿತ್ರರಾದ ‘ರಂ.ಶಾ’ರವರು ‘ಗಾಂಧಿ ಆಣಿ ಆಂಬೇಡಕರ’ ಎಂಬ ಶೀರ್ಷಿಕೆಯ ತರವಲ್ಲ ಎಂದೆನಿಸಿದರೂ ಹೆಸರಿನ ಬಗ್ಗೆ ಕೊಸರಾಡುವದನ್ನು ತಪ್ಪಿಸಲಾಗಲಿಲ್ಲ. ನಾವು ಕನ್ನಡದಲ್ಲಿ ಬಾಬಾಸಾಹೇಬರ ಅಡ್ಡಹೆಸರನ್ನು ‘ಅಂಬೇಡ್ಕರ್’ ಎಂದೇ ರೂಢಿಸಿದ್ದೇವೆ. ಆದರೆ ಮರಾಠಿಯಲ್ಲಿ ಅದು ‘ಆಂಬೇಡಕರ’ ಎಂದು ಝಳಕಾಯಿಸುತ್ತದೆ. ‘ವ್ಯಕ್ತಿಯು ತನ್ನ ಹೆಸರನ್ನು ಹೇಗೆ ಬರೆಯುತ್ತಾನೋ ಹಾಗೆಯೇ ಉಳಿದರೂ ಬರೆಯುವದು, ಉಚ್ಚರಿಸುವದು ಶಿಷ್ಟಾಚಾರವೆನಿಸುತ್ತದೆ. ಆದ್ದರಿಂದ ನೀವು ಆಂಬೇಡಕರ ಎಂದೇ ಕನ್ನಡದಲ್ಲಿ ಬರೆಯಿರಿ’ ಎಂದು ರಂ.ಶಾ. ಬಜಾಯಿಸಿದ್ದರು.

‘ಹೌದ್ರೀ ಖರೆ; ಅವರು ನಮ್ಮ ‘ಕಾರಂತ’ರನ್ನು ‘ಕಾರಂಥ’ ಎಂದು ಗಿರೀಶ ‘ಕಾರ್ನಾಡ’ರನ್ನು ಗಿರೀಷ ಕರ್ನಾಡರೆಂದು, ‘ಮೈಸೂರ’ನ್ನು ‘ಮ್ಹೈಸೂರೆಂದು, ಅಷ್ಟೇ ಏಕೆ ‘ಕನ್ನಡ’ವನ್ನು ‘ಕಾನ್ಹಡೀ’ ಎಂದು ರೂಢಿಸಿಕೊಂಡು ದೃಢಪಡಿಸಿಬಿಟ್ಟಿದ್ದಾರಲ್ಲ ಮರಾಠಿಯಲ್ಲಿ. ಕನ್ನಡದಲ್ಲಿ ರಾಹುಲ್ ‘ದ್ರಾವಿಡ’ ಅದರೆ ಮರಾಠೀ ಬಂಧುಗಳು ಆತನನ್ನು ‘ದ್ರವಿಡ’ ಎಂದೆನ್ನುತ್ತಾರೆ, ಹಾಗೇ ಬರೆಯುತ್ತಾರೆ. ಸದ್ಯ ಭಾರತದ ಪುಣ್ಯಕ್ಕ ರಾಷ್ಟ್ರಗೀತೆಯಲ್ಲಿಯ ‘ದ್ರಾವಿಡ’ವನ್ನು ಅವರು ದ್ರವಿಡಗೊಳಿಸಿಲ್ಲ! ಶಾಸ್ತ್ರಾತ್ ರೂಢಿರ್ಬಲೀಯಸೀ……..’ ಅಂತ ನಾನು ಕೊಸರಾಟದ ಸುರು ತೆಗೆದಾಗ, ರಂ.ಶಾ.ಮೊಳಕೆಯಲ್ಲಿಯೇ ಚಿವುಟಿ ಹಾಕಿದರು. ‘ಅವರು ತಮ್ಮ ಮಾತೃಭಾಷೆಯಲ್ಲಿ ಹೇಗೆ ತಮ್ಮ ಹೆಸರು ಬರೆಯುತ್ತಿದ್ದರೋ ಹಾಗೇ ಕನ್ನಡದಲ್ಲಿ ಇರಲಿ’ ಎಂದು ಅವರು ಅಪ್ಪಣೆ ಕೊಡಿಸಿದ್ದು ಒಪ್ಪುವಂತೆಯೇ ಇತ್ತು. ನಾನು ಹಾಗೇ ಅದನ್ನು ಅನುಷ್ಠಾನಗೊಳಿಸಿದೆ; ಆದರೆ ಹೆಸರಿನ ಕುರಿತು ಒಡಮೂಡಿದ ಕುಸುರು ಮನಸ್ಸಿನಲ್ಲಿ ಪಸರಿಸುತ್ತಲೇ ಇದೆ.

ಕನ್ನಡ ಭಾಷಾ ಅಕ್ಷರಸಂಪತ್ತು, ಕನ್ನಡ ಭಾಷಾ ಬಳ್ಳಿ ಪುಷ್ಕಳವಾಗಿದೆ. ಕನ್ನಡದವರು ಯಾವುದೇ ಭಾಷೆಯವರ ಹೆಸರುಗಳನ್ನು , ಪದಗಳನ್ನು ಅವರವರ ಉಚ್ಚಾರಣೆಗೆ ತದ್ರೂಪವಾಗಿ ಬರೆಯಬಲ್ಲರು. ಆ ದೃಷ್ಟಿಯಿಂದ ದೇವನಾಗರಿ ಲಿಪಿ ಸಹ ಕನ್ನಡದ ಲಿಪಿಯಷ್ಟು ಸಮೃದ್ಧವಾಗುವದಿಲ್ಲ. ಉದಾಹರಣೆಗೆ ಏಕನಾಥನನ್ನು ಕನ್ನಡದಲ್ಲಿ ಬರೆಯುತ್ತೇವೆ; ಅಂತೆಯೇ ಎಡೆಯೂರೇಶ್ವರನನ್ನು ಉಚ್ಚಾರಾನುಗುಣವಾಗಿ ಬರೆಯುವಾಗ ಹೃಸ್ವ ‘ಎ’ಕಾರದೊಂದಿಗೆ ಆರಂಭಿಸುತ್ತೇವೆ. ಇಂಥ ನಿಷ್ಕೃಷ್ಟತೆ ದೇವನಾಗರಿಗೂ ಸಾಧ್ಯವಿಲ್ಲವಲ್ಲ. ನಮ್ಮಲ್ಲಿ ಎ,ಏ; ಒ, ಓ ಎಂಬ ಭೇದನಿರೂಪಣೆಯ ಉಚ್ಚಾರ ಸಂಕೇತಗಳು ದೇವರ ಭಾಷೆಯಲ್ಲಿಯೂ ಇಲ್ಲ ನೋಡ್ರಿ. ನಮ್ಮ ಬೆಳಗಾವಿಯನ್ನು ಮರಾಠಿಯಲ್ಲಿ ಬರೆದಾಗ ಬೇಳಗಾಂವ ಎಂದು ದೀರ್ಘ ಮಾಡಬೇಕಾಗುತ್ತದೆ. ಅದಕ್ಕಾಗಿಯೇ ಬಹುಶಃ ಇಷ್ಟೊಂದು ದೀರ್ಘಕಾಲದ ಹೋರಾಟ ನಡೆಯಿಸಿದರೂ ಅವರಿಗೆ ಕನ್ನಡದ ಬೆಳಗಾವಿ ಕನ್ನಡಿಯ ಗಂಟಾಗಿಯೇ ಉಳಿದಿದೆ. ‘ಬೆಳಗಾವಿ’ಯ ನಿಖರ ಉಚ್ಚಾರ ಮರಾಠಿಯಲ್ಲಿ ಬರೆಯಲಾಗುವದಿಲ್ಲವಲ್ಲ! TASTEನ್ನು ಮತ್ತು TESTನ್ನು ಅವರು ಒಂದೇ ರೀತಿಯಲ್ಲಿ ತಮ್ಮ ಲಿಪಿಯಲ್ಲಿ ಬರೆಯಬೇಕಾಗುತ್ತದೆ. ಅವರಿಗೆ ದೀರ್ಘದ ದಂಡ ನಾಸ್ತಿ. ಬಹುಶಃ ಅದರಿಂದಾಗಿ ಅವರು ಉಳಿದ ಭಾಷೆಗಳಿಗೆ ದೂರದಿಂದಲೇ ದೀರ್ಘದಂಡ ನಮಸ್ಕಾರ ಹಾಕಿ ತಮ್ಮ ನುಡಿಯ ಬಗ್ಗೆ ವಿಶೇಷ ಪುರಸ್ಕಾರ ನೀಡುತ್ತಾರೇನೋ?

ದೇವನಾಗರಿ ಲಿಪಿಯನ್ನು ಬದಿಗಿಟ್ಟು ತಮಿಳು ಭಾಷೆಯ ಕಡೆಗೆ ಹೊರಳೋಣ. ನಮಗಿಂತ ಮೊದಲೇ ತಮಿಳು ಭಾಷೆ ಶಾಸ್ತ್ರೀಯ ಭಾಷೆಯಾಗಿ ಅಧಿಕೃತ ಪಟ್ಟಗೊಡಿಸಿದೆಯಷ್ಟೇ. ‘ಗಾಂಧಿ’ ಎಂಬ ಸುಲಭದ ಹೆಸರನ್ನು ತಮಿಳು ಭಾಷೆಯಲ್ಲಿ ಬರೆದಾಗ ಅದನ್ನು ಕಾಂತಿ ಎಂದೋ, ಖಾಂತಿ ಎಂದೋ, ಕಾಂಥಿ ಎಂದೋ, ಗಾಂತಿ ಎಂದೋ, ಗಾಂಧಿ ಎಂದೋ, ಖಾಂದಿ ಎಂದೋ, ಘಾಂತಿ ಎಂದೋ, ಖಾಂಧಿ ಎಂದೋ ಹಲವು ಹನ್ನೊಂದು ಬಗೆಯಾಗಿ ಉಚ್ಚರಿಸಬಹುದಾಗಿದೆ. ‘ಪ್ರಭಾಕರ’ನನ್ನು ‘ಪಿರ್ಪಾಗರ್’ ಎಂದು, ಪ್ರತಿಭಾ ಪಾಟೀಲ ಎಂಬ ಹೆಸರನ್ನು ಪಿರಿತಿಪಾ ಬಾಡಿಲ ಎಂದೂ ಓದುವಂತಹ ಅಧ್ವಾನ ಉಂಟಾಗುತ್ತದೆ. ಅವರಲ್ಲಿ ಕ ಆದ ಕೂಡಲೆ ಙ, ಖ ಆದ ಕೂಡಲೇ ಞ್ ಹೀಗೆ ಮಿತಸಂಖ್ಯೆಯಲ್ಲಿ ಲಿಪಿಸಂಕೇತಗಳಿವೆ. ಬರವಣಿಗೆಯಲ್ಲಿ ಮಿತಾಕ್ಷರಿಗಳಿದ್ದರು ಬಾಯಬಡಕತನದಲ್ಲಿ ಅವರ ಬಢಾಯಿ, ಲಢಾಯಿ ಬಲು ಜೋರು. ಒಂದೊಂದೇ ಅಕ್ಷರವು ಹಲವು ಹನ್ನೊಂದು ಉಚ್ಚಾರಣೆಗಳಿಗೆ ಆಸ್ಪದವೀಯುತ್ತದೆ. ಕನ್ನಡದಲ್ಲಿ ಅಕ್ಷರಗಳ ಸಿರಿವಂತಿಕೆ ಇದ್ದರೂ, ನಾವು ದೈವವಿದ್ದೂ ದತ್ತಗೇಡಿಯಂತೆ ಹೆರವರ ಅನುವರ್ತನೆ ಮಾಡುತ್ತೇವೆ. ವಿಶೇಷತಃ ಕರ್ನಾಟಕದ ದಕ್ಷಿಣ ಭಾಗದಲ್ಲಿ ‘P.T.ಉಷಾ’, ‘K.D.ಸತೀಶ್’ ಎಂಬಂಥ ಹಂಡಬಂಡ ಬರವಣಿಗೆ ಕಂಡುಬರುತ್ತದಲ್ಲವೆ! ಅದು ತಮಿಳರಿಂದ ನಾವು ಪಡೆದ ಬಳುವಳಿ. ಪಾಪ; ತಮಿಳಿನಲ್ಲಿ ಈ ಆದ್ಯಾಕ್ಷರಗಳನ್ನು (initials) ಬರೆದಲ್ಲಿ
P.T.ಉಷಾ, B.D. ಉಷಾ, B.T. ಉಷಾ, P.D.ಉಷಾ ಹೀಗೆ ನಾನಾ ತರಹದವಳಾಗಬೇಕಾಗುತ್ತದೆ. ಕನ್ನಡದಲ್ಲಿ ಅಂಥ ಗೊಂದಲವಿಲ್ಲ; ನಮ್ಮ ಅಕ್ಷರಸಂಪತ್ತು ಎಂಥ ಹೆಸರನ್ನೂ, ಇನಿಷಿಯಲ್ಸನ್ನೂ ಅಪ್ಪಟವಾಗಿ ಬರೆಯುವಷ್ಟು ಶ್ರೀಮಂತವಾಗಿದೆ. ಆದರೆ ಹಿರಿಯಣ್ಣ ತಮಿಳು ತನ್ನ ಅಕ್ಷರದಾರಿದ್ರ್ಯದಿಂದ ಅವಲಂಬಿಸಿರುವ ಈ ಹಂಡಬಂಡತನವನ್ನು ಕನ್ನಡದವರು ಕುರುಡರಾಗಿ ಅನುಸರಿಸುತ್ತಾರೆ. ತಲೆ ಬೋಳಾದವನು ಪಾಪ; ವಿಗ್ ಹಾಕಿಕೊಳ್ಳುತ್ತಾನೆಂದು ನೋಡಿದ ಎಬಡ (ಕನ್ನಡಿಗ) ತನ್ನಕೇಶಸಂಪತ್ತನ್ನು ಬೋಳಿಸಿಕೊಂಡು ಟೋಪಣ ಹಾಕಿಕೊಂಡಂತೆ! ಮೈಸೂರು ಕಡೆಗೆ ಕನ್ನಡ ಅಂಕಿಗಳ ಬಳಕೆ ಕಡಿಮೆ. ಇದಕ್ಕೂ ಅದೇ ಕಾರಣ. ತಮಿಳು ಅಂಕೆಗಳು ಅಕ್ಷರ ರೂಪದಲ್ಲಿ ಇವೆ. (ಅ,ಗ……) ಅದರಿಂದ ಬರವಣಿಗೆಯಲ್ಲಿ ಅಧ್ವಾನವಾಗುತ್ತದೆ ಎಂದು ಅವರು ಅರೆಬಿಕ್ ಅಂಕೆ (1,2,3,…) ಅವಲಂಬಿಸಿದರು. ಕನ್ನಡದ ಅಂಕೆಗಳಿಂದ ಅಂಥ ಫಜೀತಿ ಇಲ್ಲ. ಆದರೂ ತ್ಮಿಳರು ಅರೆಬಿಕ್ ಅಂಕೆಗಳಿಗೆ ಆತುಕೊಂಡರು ಎಂದು ಕನ್ನಡಿಗರು ಕನ್ನಡ ಅಂಕೆಗಳನ್ನು ಕೈಬಿಟ್ಟರು. ತಮಿಳರ ಕುರುಡು ಅನುಕರಣ ಮಾಡಿದರು.

ಈಗ ನೋಡ್ರಿ. ನಮ್ಮ ಕನ್ನಡದಲ್ಲಿ ‘ಸಾರಿಗೆ’ ಎಂದು ಸೂಕ್ತವಾದ ಪದವಿದೆ, Transport ಎಂಬುದಕ್ಕೆ. ನಾವು ಅದನ್ನು ಬಳಸುವದಿಲ್ಲ. ತಮಿಳು ಭಾಷಿಕರು ‘Transport’ ಎಂಬುದಕ್ಕೆ ತಮ್ಮಲ್ಲಿ ಸೂಕ್ತವಾದ ಪದವಿಲ್ಲ ಎಂಬುದನ್ನು ಕಂಡುಕೊಂಡಾಗ ‘ಪೋಕ್ಕುವರುವದು’ ಎಂಬ ಕೃತ್ರಿಮ ಪದವನ್ನು ಸೃಷ್ಟಿಸಿದರು. ಅದರರ್ಥ ‘ಹೋಗಿಬರುವದು’ ಎಂದು. ಈಗ ತಮಿಳಿನಲ್ಲಿ ಅದೇ ಪದ ಪ್ರಚಲಿತಗೊಂಡು ಪ್ರತಿಷ್ಠಾಪಿತವಾಗಿದೆ. ತಮಿಳು ಸರ್ಕಾರ, ತಮಿಳು ಅರಸಾಂಗ ಎನಿಸುತ್ತದೆ. ಗವರ್ನರು ರಾಜ್ಯಪಾಲರಲ್ಲ ತಮಿಳಿನಲ್ಲಿ; ಆಳುವವರ್! ನಾವು ಕನ್ನಡ ಪದಗಳು ಇದ್ದಾಗಲೂ ಬಳಸದೇ ಹೆರವರ ನುಡಿಗಳಲ್ಲಿ ಪದಗಳಿಗೆ ಜೋತು ಬೀಳ್ತೀವಿ. ಎಂಥ ನ್ಯೂನಗಂಡತೆ ಇದು!!

ಮರಾಠಿಗರು ಸಹ ಹೆಚ್ಚೂ ಕಡಿಮೆ ತಮಿಳರಂತೇ ಸ್ವತ್ವದ ಸತ್ವ ಕಾಯ್ದುಕೊಂಡವರು. Airhostessಗೆ ಹವಾಯಿ ಸುಂದರಿ ಎಂಬಂಥ ಅನರ್ಥಕಾರಿ ಪದವನ್ನು ಸೃಷ್ಟಿಸಿ ಬಳಸುತ್ತಾರೆ ಅವರು. ಅವರದೇ ‘ಅಮೃತ’ ಎಂಬ ಡೈಜೆಸ್ಟ್ ದಲ್ಲಿ ಕೆಲವರ್ಷಗಳ ಹಿಂದೆ ಈ ಬಗ್ಗೆ ಒಂದು ಲೇಖನ ಬಂದಿತ್ತು. ‘ಕನ್ನಡಿಗರು ಗಗನಸಖಿ ಎಂಬಂಥ ಅರ್ಥಪೂರ್ಣ ಪದ ಟಂಕಿಸಿದ್ದಾರೆ. ನಮ್ಮ ‘ಹವಾಯೀ ಸೌಂದರಿ’ಯಲ್ಲಿ ಮರಾಠಿತನವೂ ಇಲ್ಲ, ಸೂಕ್ತತೆಯೂ ಇಲ್ಲ’ ಎಂದು ಹಳಹಳಿಕೆ ಇತ್ತು. ಜೀವಾವಧಿ ಶಿಕ್ಷೆ ಕನ್ನಡದಲ್ಲಿದೆ, Life termಗೆ ಸುಸಂವಾದಿಯಾದ ಪದ. ಮೊನ್ನೆ ನಮ್ಮ ಇಲ್ಲಿಯ ಕನ್ನಡದ ಸಾಹಿತಿಗಳೊಬ್ಬರು, ‘ಪ್ರವೀಣ ಮಹಾಜನ್ನಿಗೆ ಜನ್ಮಠೇಪ ಆತಲ್ರಿ’ ಅಂತ ಒರಲಿದ್ರು. ಜೀವಾವಧಿ ಶಿಕ್ಷೆ ಕನ್ನಡದ ನಾಲಗೆಗೆ ಬರದೆ ‘ಜನ್ಮಠೇಪ ಯಾಕೆ ಲೇಪಗೊಳ್ಳಬೇಕು?’ ಭಾಷೆಗೆ ತಪ್ಪುವ ರಾಯರ ಗಂಡ ಹುಟ್ಟಬೇಕಾಗಿದೆ.

ಕನ್ನಡಿಗರ ಲಿಪಿಯಲ್ಲಿ, ಶಬ್ದಕೋಶದಲ್ಲಿ ಎಂಥ ಭಾವನೆಗಳನ್ನೂ ವಿಚಾರಗಳನ್ನೂ ಸಂವಹಿಸುವ ಕ್ಷಮತೆ ಇದೆ. ಸಂಸ್ಕೃತದ ಜೀವಧಾರೆಯು ಪುಷ್ಟಿದಾಯಕವಾಗಿ ಹೊಂದಿಕೊಳ್ಳುವಂತಿದೆ. ಆದರೆ ಕನ್ನಡಿಗರಿಗೆ ಅದನ್ನು ಬಳಸುವಂಥ ಮನಸ್ಸು ಯಾಕೆ ಬಾರದು? ಹೆರವರನ್ನು ಅನುಕರಿಸುವ ರಣಹೇಡಿತನ, ಗತಿಗೇಡಿತನ ಇನ್ನೂ ಎಷ್ಟೊಂದು ಕಾಲ ಇರೋದು?

‘ಕಂಠೀ ಝಳಕೆ ಮಾಳ ಮುಕ್ತಾಫಳಾಚಿ’ ಎಂದರೆ ಏನು? ‘ನುರುವಿ ಪುರುವಿ’ ಎಂದರೇನು? ಮುತ್ತಿನ ಸರ ಇರುತ್ತವೆ ಸರಿ; ಮುಕ್ತಾಫಳ ಎಂಬುದಕ್ಕೆ ಇರುವ ಅರ್ಥ ಏನು? ‘ಮುಕ್ತಾಫಳ’ಕ್ಕೆ ಮರಾಠಿಯಲ್ಲಿಯೇ ವ್ಯಂಗ್ಯಾರ್ಥ ಒಂದಿದೆ. ಅದೇನೆ ಇರಲಿ. ಆರತಿ/ಮಂತ್ರ ಮುಂತಾದವುಗಳು ಭಕ್ತಿ ಭಾವನೆಯಿಂದ ಹಾಡುವದು/ಅನ್ನುವದು ನಮ್ಮ ರೀತಿಯಾಗಿದೆ. ಅದರಲ್ಲೇನೂ ದೋಷವಿಲ್ಲ. ಪ್ರಾರ್ಥನೆಯ, ಸ್ತೋತ್ರದ ರೂಪದಲ್ಲಿಯ ಆರತಿಯು ನಮ್ಮದೇ ಭಾಷೆಯಲ್ಲಿದ್ದರೆ ಅರ್ಥದ ಅರಿವಿನಂದಾಗ ಅದಕ್ಕೆ ಹೆಚ್ಚಿನ ಸಾರ್ಥಕತೆ ಬರುವದಲ್ಲವೇ? ಹಾಗೆ ಮಾಡಿ ನಂತರ ಬೇಕಾದರೆ ಬೇರೆ ಭಾಷೆಯ ಜನಪ್ರಿಯ ಆರತಿ ಅಂದಲ್ಲಿ ಸರಿಯಾದೀತಲ್ಲವೇ? ‘ನುರುವಿ’ಯನ್ನು ಎಲ್ಲಿ ನುರಿಸೋದು ಎಂಬುದನ್ನು ಕೂಡ ಯೋಚಿಸದೇ ಚಪ್ಪಾಳೆ ತಟ್ಟುತ್ತೇವೆ. ಅರ್ಥಪೂರ್ಣವಾದ ಕನ್ನಡದ ಆರತಿಗಳನ್ನು ಅನ್ನಲಿಕ್ಕೆ, ನಮ್ಮ ಬಾಯಿ ಸೆಟಗೊಳ್ಳುತ್ತದೆ. ದ.ರಾ.ಬೇಂದ್ರೆಯವರು ೧೯೩೧ರಷ್ಟು ಹಿಂದೆಯೇ ಬೇರೆ ಭಾಷೆಯ ಗಣಪತಿ ಆರತಿಯನ್ನು ಹಾಡುವ ಕಾಲಕ್ಕೆ ಕನ್ನಡಿಗರನ್ನು ತರಾಟೆಗೆ ತಗೊಂಡಿದ್ದರಲ್ಲದೇ ತಾವೇ ಅನೇಕ ಆರತಿ ಪದಗಳನ್ನು ಬರೆದುಕೊಟ್ಟಿದ್ದರು. (ಅವರ ಮಾತೃಭಾಷೆ ಮರಾಠಿ ಎಂದು ಕನ್ನಡಿಗರು ಮತ್ತೆ ಮತ್ತೆ ಹೇಳುತ್ತಾರೆ.) ಅವರು ನಮ್ಮವರ ಈ ಆರೆತನದ ಮೋಹದ ವಿರುದ್ಧ ಸಿಡಿದು ಹಾಡಿದ್ದು ಏನೆಂದರೆ “ಕನ್ನಡ ದೀಕ್ಷೆಯು ಹೊಂದಿದ ಪ್ರತಿಯೊಬ್ಬನು ಆರ್ಯ, ಕನ್ನಡ ತೇಜವು ಸಾರಲಿ, ಕನ್ನಡಿಗರ ಕಾರ್ಯ,
ಕನ್ನಡ ನಡೆ ಇರದವರೇ ಶೂದ್ರರು ಅನಿವಾರ್ಯ.”

ಮತ್ತೊಬ್ಬ ಆರ್ಯ ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಕೃ.ಗೋಕಾಕರು ತಮ್ಮ ಮರಾಠಿ ಮಡದಿಯ ಮೋಹವನ್ನು ನಿಷ್ಪ್ರಭಗೊಳಿಸಲು ಹಾಕಿದ್ದ ಒಗಟ ಹೀಗಿತ್ತು.

“ಕ್ವಾಟ್ಯಾಗ ಕ್ವಾಟಿ ಕರ್ನಾಟಕದ ಬಾಗಿಲುಕ್ವಾಟಿ
ಮರಾಠಿ ಒಗಟ ಹಾಕಿದ್ರ ತಿವಿತೇನು ಶಾರದಾನ ಸ್ವಾಟಿ.” (ಶಾರದಾಬಾಯಿ ಅವರ ಮಡದಿ). ಹೆಸರುವಾಸಿ ಪಂಡಿತ, ವಿದ್ವಾಂಸರು, ಎಷ್ಟೊಂದು ಕಳಕಳಿಯಿಂದ ಕನ್ನಡದ ಉಸಿರು ಜ್ವಾಪಾಸನೆ ಮಾಡ್ಯಾರ. ಪಾಪ, ಅವರಂಥ ಸಭ್ಯಸ್ತರು, ಶಿಷ್ಟಾಚಾರ ಸಂಪನ್ನರು ಸಹ ಹೊಟ್ಟಿ ಉರಿಸ್ಕೊಂಡು ಹೀಂಗ ಉದ್ಗರಿಸುವಂಥ ಪಾಳಿಯನ್ನು ಮುಖೇಡಿ ಕನ್ನಡಿಗರು ತಂದಾರ. ಹೌದ್ರೀ; ತಮ್ಮತನವನ್ನು ತಾನs ಕಡೆಗಣಿಸಿದರ ಮೂಲೋಕದಲ್ಲಿ ಎಲ್ಲಿಯೂ ತಮಗ ಠಾವು ಉಳ್ಯಾಣಿಲ್ಲ; ಅಂತರ್ ಪಿಶಾಚಿಯಾಗಿ ಉಳಿಯೋದs ಗತಿ ಆದೀತು. ಚೊಕ್ಕ ಮತವನ್ನು ಸಾರಿದ ನಾಡಿನಲ್ಲಿ ಚೊಕ್ಕ ಕನ್ನಡ ಉಳಿಸಿಕೊಳ್ಳೋದು ಹ್ಯಾಂಗ ಅಂಬೋದನ್ನು ಚಿಂತಿಸಬೇಕಾಗೇದ. ಅರುವತ್ತು ವರ್ಷ ಆದ್ವು ನಮ್ಮ ರಾಜ್ಯ ಆಗಿ; ಆದ್ರೂ ಅರಿವು ಬರಲಿಲ್ಲವೋ ಅಥವಾ ಅಳವು ಉಳಿದೇ ಇಲ್ಲವೋ?

ಕನ್ನಡದಲ್ಲಿ ಮಾತನಾಡುವದಕ್ಕೆ, ಕನ್ನಡದಲ್ಲಿ ಕರೆಯೋಲೆ ಮುದ್ರಿಸಲಿಕ್ಕೆ, ಕನ್ನಡದಲ್ಲಿ ರುಜು ಹಾಕುವದಕ್ಕೆ, ಪತ್ರವ್ಯವಹಾರ ಮಾಡುವದಕ್ಕೆ, ಕನ್ನಡದ ಹಾಡು ಹಾಡುವದಕ್ಕೆ ಕನ್ನಡಿಗರೇ ಹಿಂಜರಿದರೆ, ಹಿಂದೇಟು ಹಾಕಿದರೆ ಕನ್ನಡವನ್ನು ಅರಬರೋ, ಆಂಗ್ಲರೋ, ಅಮೆರಿಕನ್ನರೋ ಬಳಸಿ ಉಳಿಸುವರೇ! ಕನ್ನಡ ತಾಯಿಯ ಮೊಲೆ ಉಂಡ ಮಕ್ಕಳೇ ತಾಯ್ನುಡಿಯನ್ನು ಹೀನಾಯವಾಗಿ ಕಂಡು ಪರಭಾಷೆಗೆ ಪರವಶರಾಗಿ ಹರಕಾಮುರಕಾ ಆದ್ರೂ ಸೈ ‘ನಾವು ಆರೇ ಮಾತಾಡಾವ್ರು, ನಾವು ಇಂಗ್ಲೀಷಿನ್ಯಾಗ ವ್ಯವಹರಿಸಾವ್ರು; ಅರ್ಥ ಆಗಲಿ ಬಿಡಲಿ ಪರಭಾಷೆಯ ಆರತೀ ಪದ ಗಿಳಿಪಾಠ ಮಾಡಿ ದೇವರ ಮೂರ್ತಿಯ ಮುಂದೆ ಧನಿ ತೆಗೆದು ಒದರಾವ್ರು’ ಎಂಬಂಥ ಪರಪ್ರತ್ಯನೇಯ ಬುದ್ಧಿ ಮತ್ತು ತನ್ನತನಕ್ಕೆ ತಿಲಾಂಜಲಿ ತರ್ಪಣಗೈಯುವ ಮನೆಮುರುಕತನ ಮತ್ತು ಕಾರ್ಪಣ್ಯ ಇನ್ನೂ ಎಷ್ಟು ಕಾಲ ಮುಂದುವರಿಸಾವ್ರು? ತಮಿಳು ಮಾತೃಭಾಷಿಕರಾದ ರಾಜರತ್ನಂ, ಮಾಸ್ತಿ; ತೆಲುಗು ತಾಯ್ನುಡಿಯಾಗಿದ್ದ ಡಿ.ಇ.ಜಿ., ಮರಾಠಿ ಮೂಲದವರಾದ ಬೇಂದ್ರೆ, ಶಂ.ಬಾ., ಮಲಯಾಳ ಮಾತೃಭಾಷಿಕರಾದ ಕಸ್ತೂರಿ, ಕೊಂಕಣಿ ಭಾಷಿಕರಾದ ಗೋವಿಂದ ಪೈ ಮುಂತಾದವರು ಕನ್ನಡತನವನ್ನು ದೇವತ್ವವನ್ನು ಆರಾಧಿಸುವಂತೆ ಆರಾಧಿಸಿದ್ದರು. ಕಾನಡಾ ಹೋ ವಿಟ್ಠಲು, ಕರ್ನಾಟಕು ಎಮ್ದು ಜ್ಞಾನೇಶ್ವರರು ಪಾಡಿದ್ದರು. ನಮೋ ಕಾನಡೀ ಭಾಷಾ ಎಂದು ಏಕನಾಥ್ರು ಮಣಿದು ವಂದಿಸಿದ್ದರು; ಪುಲ, ಖಾಂಡೇಕರ್, ಶಿರವಾಡ್ಕರಾದಿಗಳು ಗೌರವದಿಂದ ಕನ್ನಡವನ್ನು ಮನ್ನಿಸಿದವರು. ಅಂಥವರ ಅರಿವಿಗೆ ಬಂದದ್ದು ಸ್ವಂತ ಕನ್ನಡ ಕುವರರ (ಕುವರಿಯರೂ ಸೇರಿದ್ದಾರೆ ಇದರಲ್ಲಿ) ತಲೆಗೆ ಹೊಳೆಯುವದಿಲ್ಲವೇಕೆ? ಕನ್ನಡದ ಕಡೆಗೆ ಬೆನ್ನು ತಿರುಗಿಸಿ ತಮಗರಿವಿಲ್ಲದ ಹೆರವರ ನುಡಿಗಳಲ್ಲಿ ಬಡಬಡಿಸುವ ದರಿದ್ರತನ ಯಾಕೆ?

ಕವಿಗೋಷ್ಠಿ ಅಂತ ಇಟ್ಟುಕೊಂಡರೆ, ನೂರಾರು ‘ಕವಿ’ಗಳು ತಮ್ಮ ತಥಾಕಥಿತ ಕಾವ್ಯ ವಾಚಿಸಿ ಕೊರೆಯಲು ಸಜ್ಜಾಗುತ್ತಾರೆ. ಆದರೆ ಕನ್ನಡದಲ್ಲಿ ನವನವೀನ ರೀತಿಯಲ್ಲಿ ಆರತಿ ಪದಗಳನ್ನು ಬರೆಯುವವರು, ಹಬ್ಬ ಹರಿದಿನಗಳಲ್ಲಿ ಸೂಕ್ತ ಶುಭಾಶಯಗಳನ್ನು ಕನ್ನಡದಲ್ಲಿ ಹೊಸೆದು ಶುಭಾಶಯ ಪತ್ರಗಳನ್ನು ಹೊರತರುವವರು, ಮದುವೆ ಮುಂಜಿವೆಗಳಲ್ಲಿ ಹೊಸ ಬಗೆಯ ಕನ್ನಡ ಒಗಟ ಸಾದರಪಡಿಸುವವರು ಎಷ್ಟು ಜನರಿದ್ದಾರೆ? ಕಲ್ಪನಾಶಕ್ತಿಯ ಕೊರತೆಯೇ, ಅಂಜುಬುರುಕತನದ ಪರಮಾವಧಿಯೋ ಹೆರವರ ಚಾಲ್ತಿಯಲ್ಲಿದ್ದ ಪದಗಳನ್ನು ಪುಟಪುಟಿಸುವ , ಅರ್ಥ ತಿಳಿಯದೇ ಇದ್ದರೂ ಸೈ, ಅಂದು ತೋರಿಸಿ ಬಿಡುಗಡೆಯ ನಿಟ್ಟುಸಿರು ಬಿಡುವ ಗತಿಗೇಡಿತನ, ಮತಿಗೇಡಿತನ ಇನ್ನೂ ಎಷ್ಟು ಕಾಲ ಮುಂದುವರಿಯುವದು?

ದ.ರಾ. ಬೇಂದ್ರೆಯವರು ಅಳ್ನಾವರದ ಕರ್ನಾಟಕ ಸಂಘದಲ್ಲಿ ಗಣೇಶೋತ್ಸವದಲ್ಲಿ (೧೯೩೧)ರಲ್ಲಿ ‘ಸುಖಕರ್ತಾ ದುಃಖಕರ್ತಾ’ ಹಾಡಿದ್ದು ಕೇಳಿ ಕನಲಿ ಕೆಂಡವಾಗಿ ಕನ್ನಡದಲ್ಲಿ ಗಣಪನ ಆರತಿಗಳನ್ನು ಬರೆದರು. ಕವಿಗಳೆಂದು ಹೇಳಿಕೊಳ್ಳುವವರು, ಸಾಹಿತಿಗಳೆಂದು ಮೆರೆಯುವವರು ಈ ಮಾದರಿಯನ್ನ ಮುಂದುವರಿಸಬೇಡವೇ? ಗಣಪತಿಯ ಮುಂದೆ ‘ಗಣಪತಿ ಬಪ್ಪಾ ಮೋರಯಾ ಪುಢಚ್ಯಾ ವರ್ಷೀ ಲೌಕರ್ ಯಾ’ ಅಂತ ಮರಾಠಿ ತಿಳಿಯದ ಕನ್ನಡ ಹುಡುಗರೂ ಕೂಗ್ತಾವೆ. ಈ ಘೋಷಣೆಗೆ ಏನರ್ಥ? ಭಾದ್ರಪದ ಶುದ್ಧ ಚತುರ್ಥಿಯಂದೇ ಮತ್ತೆ ಗಣಪತಿ ಪ್ರತಿಷ್ಠಾಪನೆ ಆಗಬೇಕೆಂದು ನಿಗದಿಯಾಗಿರುವಾಗ ಬೇಗನೇ ಹೇಗೆ ಬರಬಹುದು? ನಡುವೆ ಅಧಿಕಮಾಸ ಬಂದರಂತೂ ಆತ ಬರುವದಕ್ಕೆ ತಡವೇ ಆದೀತು. ಕೇವಲ ಪ್ರಾಸಕ್ಕಾಗಿ ಇಂಥ ಘೋಷಣೆಗಳನ್ನು ಅವರು ಹೊಸೆಯುತ್ತಾರೆ. ‘ಮಾಡಿವರಚೀ ಅಕ್ಕಾ ಮಾರಾ ಪುಲೀಚಾ ಶಿಕ್ಕಾ’, ‘ಚಾಂದೀಚ್ಯಾ ತಾಟಾತ್ ರೂಪಯೆ ಠೇವಿಲೆ ಸತ್ತರ್, ಸಖಾರಾಮರಾವಾನಾ ಲಾವತೇ ಅತ್ತರ್’ ಎಂಬಂಥ ಅರ್ಥವಿರಹಿತ ಘೋಷಣೆ, ಒಗಟ ಅವರಲ್ಲಿ ನಡೆಯಬಹುದು. ಅಂಥವನ್ನು ಆಲಿಂಗಿಸಿ ಅನುಸರಿಸಬೇಕೆ? ಹಾಗೆ ಮಾಡುವದು ‘ಸುಧಾರಕತನವೇ?’

ನಾನಂತೂ ಕಳೆದ ಮೂರು ದಶಕಗಳಿಂದ ಈ ಕೆಳಗಿನ ಆರತಿ ಪದವನ್ನು ನಮ್ಮ ಗಣಪತಿಯ ಮುಂದೆ ಹಾಡುತ್ತೇನೆ.


ಗಜಾನನ ನಿಜ ಆರತಿ
ಸಿದ್ಧಿ ವಿನಾಯಕ ಬುದ್ಧಿ ಪ್ರದಾಯಕ
ಜಯ ಜಯ ಮಂಗಳ ಮೂರುತಿ
ಸಂಕಟಹಾರಕ ಪಾಪವಿನಾಶಕ
ಬೆಳಗುವೆ ನಿನಗೆ ಆರತಿ ನಾ ಬೆಳಗುವೆ ನಿನಗೆ ಆರತಿ ||ಪ||
ಆನೆಯ ಮೊಗದ ಮೊರಗಳ ಕಿವಿಯ
ಒಂದೇ ದಾಢೆಯ ಠೀವಿಯು, ಒಂದೇ ದಾಢೆಯ ಠೀವಿಯು!
ಸಾನುರಾಗದಿ ಭಕ್ತರ ಸಲಹುವ ನಿತ್ಯ ನಿರಂತರ ನೀವಿಯು
ಶಿಷ್ಟರಕ್ಷಕ ಕಷ್ಟನಿವಾರಕ
ಜಯ ಜಯ ಮಂಗಳ ಮೂರುತಿ ಬೆಳಗುವೆ……..||೧||
ಲಂಬೋದರನೆ ಹೇರಂಬದೇವನೆ
ನೀಡೆಮಗೆ ಅವಲಂಬನ, ನೀಡೆಮಗೆ ಅವಲಂಬನ
ಅಂಬೆಯ ತನುಜನೆ ಇಂಬಾಗು ಎನೆ
ತುಡಿಯುತ್ತಿದೆ ಈ ಹೃನ್ಮನ||
ಅನಾಯಕರಿಗೆ ನೀನೇ ನಾಯಕ ಜಯ ಜಯ ಮಂಗಳ ಮೂರುತಿ ಬೆಳಗುವೆ ನಿನಗೆ……..||೨||

ಆರತಿಯ ನಂತರ ಭಜನೆ
ಮಂಗಳ ಮೂರುತಿ ಮೋರಯ್ಯಾ | ನಮ್ಮ ಕಂಗಳಿಗೆ ನೀ ತೋರಯ್ಯ ||
ವರುಷಾ ವರುಷಾ ಬಾರಯ್ಯಾ | ಹರುಷವ ನಮಗೆ ತಾರಯ್ಯ||
ಕಂಗಳು ಕಾಣಲಿ ನಿನ್ನಯ ಮೂರುತಿ | ಕಿವಿಗಳು ಕೇಳಲಿ ನಿನ್ನಯ ಕೀರುತಿ ||
ಭಕ್ತರ ಮನದಲಿ ನಿನ್ನಾವಾಸ | ನಿತ್ಯ ನಿರಂತರ ನಿನ್ನದೇ ಧ್ಯಾಸ ||
ನಿತ್ಯವು ಪೂಜನೆ ನಿತ್ಯವು ಭಜನೆ | ತನುಮನ ಅರ್ಪಿತ ನಿತ್ಯಾರಾಧನೆ ||
ಇದುವೇ ನಮ್ಮಯ ನಿತ್ಯ ಕಾಯಕ | ಶರಣು ಸಿದ್ಧಿ ಶ್ರೀ ವಿನಾಯಕ ||
ಮಂಗಳ ಮೂರುತಿ ಮೋರಯ್ಯ | ನಮ್ಮ ಕಂಗಳಿಗೆ ನೀ ತೋರಯ್ಯ ||
ವರುಷಾ ವರುಷಾ ಬಾರಯ್ಯಾ || ಹರುಷವ ನಮಗೆ ತಾರಯ್ಯ||
*********************************************************
ಇದೇ ತೆರನಾಗಿ ನವರಾತ್ರಿಯಲ್ಲಿ ಶ್ರೀ ವೆಂಕಟೇಶನಿಗೆ, ಶನಿವಾರದಂದು ಮಾರುತಿಯ ಭಜನೆಯ ಕಾಲಕ್ಕೆ ಹಣಮಪ್ಪನಿಗ್ ಕನ್ನಡದಲ್ಲಿಯೇ ಆರತಿ ರಚಿಸಿ ಹಾಡುತ್ತೇನೆ. ಈ ಯಾವ ದೇವರೂ ತಕ್ರಾರು ಮಾಡಿಲ್ಲರಿ ; ಭಾಳ ಖುಷಿಯಿಂದ ಕೇಳಿ ಪ್ರಸನ್ನರಾಗಿ ನನ್ನನ್ನು ಕಾಪಾಡುತ್ತ ಬಂದಿದ್ದಾರೆ. ನಾನು ಹಾಡುವ ಈ ಆರತಿ ಪದಗಳನ್ನು ಕೇಳಿದ ನನ್ನ ಇಷ್ಟಮಿತ್ರರು, ನಂಟರು ಕೂಡ ಕನ್ನಡದ ಆರತಿಗಳನ್ನು ಅನ್ನುವಷ್ಟು ಧೈರ್ಯವನ್ನು , ಪ್ರೇರಣೆಯನ್ನು ಆಯಾ ದೇವರ ದಯದಿಂದ ಹೊಂದಿದ್ದಾರೆ ಎಂದು ಹೇಳಲು ನನಗೆ ಸಂತಸವೆನಿಸುತ್ತದೆ. ಯಾವ ದೇವರ ಬಗ್ಗೆಯೂ ನಾನು ಕನ್ನಡದಲ್ಲಿ ಆರತಿ ಬರೆದು ಕೊಡಬಲ್ಲೆ. ಹಾಡುವ ಧೈರ್ಯವನ್ನು ಮಾಡುವ ಕನ್ನಡ ಭಕ್ತರು ಬೇಕು.

ನೋಡಿ, ಕರ್ನಾಟಕ ರಾಜ್ಯ ನಿರ್ಮಿತಿಯ ಚಿನ್ನದ ಹಬ್ಬದ ಸಂದರ್ಭದಲ್ಲಿಯೂ ‘ಕ್ನ್ನಡಿಗರಲ್ಲಿ ಸ್ವಭಾಷಾ ಅಭಿಮಾನ ತೀರ ಕಡಿಮೆ’ ಎಂಬ ಅದೇ ಹಳೆಯ ಅವಹೇಳನಕಾರಿ ಪದ ಕೇಳುವ ದೌರ್ಭಾಗ್ಯ ಉಳಿದುಕೊಂಡು ಬಂದಿದೆ. ವೈಯ್ಯಕ್ತಿಕ ಮಟ್ಟದಲ್ಲಿಯಾದರೂ ತಿಳಿದವರು, ಸೂಜ್ಞರು, ಸುಶಿಕ್ಷಿತರು ವಿಧಾಯಕ ರೀತಿಯಿಂದ ತಾಯ್ನಾಡಿನ ಹೆಮ್ಮೆಯನ್ನು ದರ್ಶಿಸುವ, ಪ್ರದರ್ಶಿಸುವ ಎಚ್ಚರ ಹೊಂದಿರಬೇಕಲ್ಲವೇ? ‘ದೈವವಿದ್ದೂ ದತ್ತಗೇಡಿ’ ಎನ್ನುವ ನುಡಿಗೆ ಪಕ್ಕಾಗದಿರೋಣ; ಸ್ವಾಭಿಮಾನಿ ಹೆರವರ ಪಕ್ಕದಲ್ಲಿದ್ದೂ ಅವರಿಂದ ಪಕ್ಕಾತನ ಕಲಿಯದಿದ್ದರೂ ಹೇಗೆ? ಕನ್ನಡಿಗರಿಗೆ ಅಭಿಮಾನಿಗಳಾಗಿ ಎಂದು ಹೇಳುವದೇ ಒಂದೇ ಗೊಮ್ಮಟನಿಗೆ ಚಡ್ಡಿ ಏರಿಸೋದು ಒಂದೇ ಎಂದು ಲೇವಡಿ ಮಾತು ಇದೆ. ಅದಕ್ಕೆ ಎಡೆ ನೀಡದಂತೆ ಎದೆಗಾರಿಕೆ ತೋರಿಸಬೇಕಿದೆ. ಪುನಶ್ಚ ‘ಹರಿ ಓಂ’ ಎಂದು ಸಜ್ಜಾಗಬೇಕಿದೆ ಸರೀನಾ?
---ಅನಂತ ಕಲ್ಲೋಳ

35 comments:

Anonymous said...

ನೀವು ಹೇಳುವದು ನಿಜ. ನಾನು ಚೆನ್ನೈನಲ್ಲಿದ್ದೆ. ಮಹಾಬಲಿಪುರಮ್್ಗೆ ಹೋಗಲು "ಕಾರ್" ಬೇಕಾಗಿತ್ತು. ತಮಿಳರು ತಪ್ಪಿಯೂ "ಕಾರ್" ಎನ್ನಲಿಲ್ಲ. ಅದು "ವೆಂಡಿ". ಬಹುಷಃ ಕನ್ನಡದ "ಬಂಡಿ"ಯ ತಮಿಳು ರೂಪವಾಗಿರಬಹುದು.

Bala said...

ಅನಂತ ಕಲ್ಲೋಳರ ಲೇಖನ ತುಂಬಾ ಚೆನ್ನಾಗಿದೆ. ತಮಿಳರು ಹೆಸರನ್ನು ಮಾತ್ರ ತಮಿಳಿನಲ್ಲಿ ಬರೆದು ಇನಿಷಿಯಲ್ಸ್ ಮಾತ್ರ ಇಂಗ್ಲೀಷಿನಲ್ಲಿರುವುದು ಯಾಕೆ ಎಂದು ನನಗೆ ಈಗ ಅರ್ಥವಾಯಿತು. ಅದಕ್ಕೆ ನಿಮಗೆ ಧನ್ಯವಾದಗಳು.

-ಬಾಲ

ಚಿತ್ರಾ said...

ಸುನಾಥರೇ,

ಇಷ್ಟು ಒಳ್ಳೆಯ ಲೇಖನವನ್ನು ಓದುವ ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ಸುಮಾರು ೧೫ ವರ್ಷಗಳಿಂದ ಪುಣೆಯಲ್ಲಿದ್ದು ತಕ್ಕ ಮಟ್ಟಿಗೆ ಮರಾಠೀ ಮಾತನಾಡಬಲ್ಲ ನನಗೆ ,ಎಷ್ಟೋ ಪದಗಳ ಉಚ್ಛಾರ ,ಅಪಭ್ರಂಶ ಎನಿಸಿ ಕಿರಿಕಿರಿಯಾಗುವುದಿದೆ. ಪೆನ್ ಪೇನ್ , ರೆಡ್ -ರೇಡ್, ರೂಪಾ -ರುಪಾ ಗಳನಡುವೆ ವ್ಯತ್ಯಾಸವಿಲ್ಲವೆ ಎಂದು ನಾನು ನನ್ನ ಸಹೋದ್ಯೋಗಿಗಳೊಡನೆ ವಾದಿಸಿದ್ದಿದೆ. ನಾನು ’ ಕಾನಡೀ’ ಅಲ್ಲ ಕನ್ನಡಿಗಳು, ನಾವು ’ ಡೋಸಾ; ಅಲ್ಲ ’ ದೋಸೆ’ ತಿನ್ನುತ್ತೇವೆ ಎಂದೆಲ್ಲಾ ತಕರಾರು ತೆಗೆದಿದ್ದಿದೆ.
ಇನ್ನು ತಮಿಳರ ಬಗ್ಗೆ ಓದುವಾಗ ಶ್ರೀ ಬಿ ಜಿ ಎಲ್ ಸ್ವಾಮಿಯವರ ತಮಿಳು ತಲೆಗಳ ನಡುವೆ, ಪ್ರಾಧ್ಯಾಪಕನ ಪೀಠದಲ್ಲಿ ಇತ್ಯಾದಿ ಪುಸ್ತಕಗಳು ನೆನಪಾದವು.
ಕಲ್ಲೋಳರು ಹೇಳಿದಂತೆ ನಮ್ಮ ಕನ್ನಡ ಅಕ್ಷರ ಸಂಪತ್ತು ಪುಷ್ಕಳವಾಗಿದೆ.ಆ ಬಗ್ಗೆ ನಾವು ಹೆಮ್ಮೆ ಪಟ್ಟುಕೊಳ್ಳಬೇಕು!
ಅಯಾ ಪ್ರದೇಶಕ್ಕೆ ಹೋದೊಡನೆ ಅಲ್ಲಿಯ ಭಾಷೆಯನ್ನು ಹುಮ್ಮಸ್ಸಿನಿಂದ ಕಲಿಯುವ ನಾವು, ಅದೇ ಉತ್ಸಾಹದಿಂದ ಹೊರಗಿನಿಂದ ಬಂದವರಿಗೆ ( ಅಷ್ಟೇ ಏನು ,ಕೆಲವರು ತಮ್ಮ ಮಕ್ಕಳಿಗೂ ಸಹ ) ಕನ್ನಡ ಕಲಿಸದಿರುವುದು ವಿಷಾದನೀಯ ಅಲ್ಲವೆ?

sunaath said...

ಗೀತಾ, ಬಾಲಾ, ಚಿತ್ರಾ,
ಶ್ರೀ ಕಲ್ಲೋಳರಂತಹ ಹೋರಾಟಗಾರರಿಂದಾಗಿ ಗಡಿಪ್ರದೇಶಗಳಲ್ಲಿ ಕನ್ನಡ ಉಳಿದಿದೆ. ಕನ್ನಡದ ಅಭಿಮಾನ ತೋರಿದ್ದಕ್ಕಾಗಿ, ಕೇಂದ್ರ ಅಕೌಂಟ್ಸ್ ಖಾತೆಯಲ್ಲಿದ್ದ ಶ್ರೀ ಕಲ್ಲೋಳರು ತೊಂದರೆ ಅನುಭಸಿದ್ದಾರೆ.

Keshav.Kulkarni said...

ಹಾಗೆ ನೋಡಿದರೆ ಕನ್ನಡಕ್ಕೆ ಇನ್ನೂ ಹೆಚ್ಚು ಅಕ್ಷರಗಳು ಕೂಡಿಕೊಳ್ಳಬೇಕಿದೆ.

ಉದಾ:
೧. Lodge ಅನ್ನು ಲಾಜ್ ಅಂತ ಬರೆದು ಹಾಗೆಯೀ ಓದಲಾಗುವುದಿಲ್ಲ, "ಲಾ" ದ ಮೇಲೊಂದು ಅರ್ಧ ಚಂದ್ರಾಕಾರ ಇಡಬೇಕಾಗುತ್ತದೆ. ಆದರೆ ಈ ಅರ್ಧ ಚಂದ್ರಾಕಾರಕ್ಕೆ ವ್ಯಾಕರಣದಲ್ಲಿ ಏನನ್ನುತ್ತಾರೆ ಎಂದು ತಿಳಿಸುತ್ತೀರಾ? ಮತ್ತು ಈ ಅರ್ಧಚಂದ್ರಾಕಾರ ಯಾಕೆ ಇನ್ನೂ ಕನ್ನಡ ಲಿಪಿಯಲ್ಲಿ ಅಧಿಕೃತವಾಗಿ ಸೇರಿಸಿಲ್ಲ?

೨. ಜ ಮತ್ತು ಚ ಅಕ್ಷರಗಳನ್ನು ಎರಡು ಥರ ಹೇಳಲು ಬರುತ್ತದೆ. ಜಮುನಾ, ಜರಾ (ಹಿಂದಿ). ಇದನ್ನು ಕನ್ನಡದಲ್ಲಿ ಹೇಗೆ ಬರೆಯುವುದು?

ಭಾಷೆ ಬೆಳೆದಂತೆಲ್ಲ ಅಕ್ಷರಗಳು ಜಾಸ್ತಿಯಾಗಬೇಕು ಎಂದು ನನ ಅಭಿಪ್ರಾಯ.

ಕೇಶವ

Anonymous said...

ಕನ್ನಡದಲ್ಲಿ ತಮ್ಮಂತಹ ಶಿಶ್ಟರಿಂದ ಹೊಸಪದಗಳಿಗೆ ಹೇರಳವಾಗಿ ಸಂಸ್ಕೃತಪದಗಳನ್ನು ತುಂಬಿಕೊಂಡಿದ್ದಾರೆ...

ಪಾಪಾ ತಮಗೆ ಅಸುನೀಗಿದರು, ಸತ್ತರು ಅನ್ನೋದು ಚಂದವಿಲ್ಲ ನಿಧನ, ಮೃತ ಅನ್ನಬೇಕು ಎಂದಿರಿ... :) ಇದು ಗನತೆಯಂತೆ!

ಒಟ್ಟಿನಲ್ಲಿ ಕನ್ನಡದಲ್ಲಿ ಒಂದು ಮಣ ಸಂಸ್ಕ್ರುತ ತುಂಬಿಬಿಟ್ಟು ಶ್ರೇಷ್ಠ ಎಂದು ಮರೆದುಬಿಟ್ಟರೆ ಸಾಕು.!!

ನಿಮ್ಮ ಬಾಶೆ ಮೇಲಿನ ಬರಹಗಳು ಯಾಕೋ, ’ಸಂಸ್ಕೃತ ಪ್ರಚಾರ’ ಸಬೆಗಳ ಬಾಶಣದಂತಿದೆ..

ಆಗಮನ ನಿರ್ಗಮನವೇ ಬೇಕಾ? ಬರುವಿಕೆ ತೆರಳುವಿಕೆ ಬೇಡ.
ವಿಮಾನವೇ ಬೇಕು, ಬಾನ್ದೇರು ಬೇಡ
ಆಹಾರವೇ ಬೇಕು, ಕೂಳು ಬೇಡ
ಶಿಶುಪಾಲನೆ ಬೇಕು. ಮಗು ಆರೈಕೆ ಬೇಡ

:) ನಿಮ್ಮದು hypocrisy ಎಂದು ಯಾರಾದರು ಅಂದರೆ ಅದರ ಬೆಂಬಲಕ್ಕೆ ನಿಮ್ಮ ಬರಹಗಳೇ ಸಾಕು..!! :)

ಒಮ್ಮೆ ನೀವು ಎಶ್ಟು ಸಂಸ್ಕ್ರುತ ಪದಗಳನ್ನು ನಿಮ್ಮ ಬರಹದಲ್ಲಿ ಬಳಸಿದ್ದೀರಿ ಎಂದು ಲೆಕ್ಕ ಹಾಕಿ.. ಅದು ೩೦-೪೦%ಗಿಂತ ಹೆಚ್ಚು.. ಅಂದರೆ ೩೦-೪೦% ಕನ್ನಡವಮ್ಮಿ ಕುಲಗೆಡಿಸಿದ್ದು ನೀವು ಕೂಡ.

ಸಂಸ್ಕ್ರುತದಿಂದ ಕನ್ನಡ ಬಂದಿಲ್ಲ.. ಅದಕ್ಕು ಕನ್ನಡಕ್ಕೂ ಇಂಗ್ಲೀಶಿಗೂ ಕನ್ನಡಕ್ಕು ಇರುವ ನಂಟಿನಂತಿನ ನಂಟೆಂದು ತಿಳಿದಿರಬೇಕಲ್ಲ.!

Shriniwas M Katti said...

ಹೆಸರಿಲ್ಲದವರ ಕನ್ನಡದ ಹೆಮ್ಮೆ ಮೆಚ್ಚುವಂತಹದೆ. ಭಾಷೆ ಬೆಳೆಯುವಾಗ ತನ್ನ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಅಳವಡಿಸಿಕೊಂಡು ತನ್ನದಾಗಿಸುತ್ತದೆ. ಕನ್ನಡದಲ್ಲಿ ಮಹಾಪ್ರಾಣಗಳು ಇಲ್ಲವೆಂದು ನಂಬುವವರಲ್ಲಿ ನೀವೂ ಒಬ್ಬರೆಂದು ಕಾಣುತ್ತದೆ. ಸಂಸ್ಕೃತದ ಪರಿಸರದಲ್ಲಿ ಬೆಳೆದ ಕನ್ನಡ ಅದರ ಕೆಲ ಶಬ್ದಗಳನ್ನು ತನ್ನದಾಗಿಕೊಂಡರೆ ತಪ್ಪೇನು ? ಇಂಗ್ಲಿಷ್ ಭಾಷೆ ಈ ರೀತಿಯಲ್ಲಿ ಜಗತ್ತಿನ ಬೇರೆ ಬೇರೆ ಭಾಷೆಗಳ ಎಷ್ಟು ಶಬ್ದಗಳನ್ನು ತನ್ನದಾಗಿಸಿಕೊಂಡಿಲ್ಲ ? ಬೆಳೆಯುವ ಭಾಷೆಗೆ ಇದು ಅನಿವಾರ್ಯವಲ್ಲವೆ ? ಬೇರೆ ಭಾಷೆಯ ಶಬ್ದಗಳನ್ನು ಉಪಯೋಗಿಸಲಾರದ "ಮಡಿವಂತಿಕೆ" ಯಾಕೆ ಬೇಕು ?

Anonymous said...

ಕಟ್ಟಿಯವರ ಮಾತಿಗೂ ಶಂಕರಬಟ್ಟರ ವಾದಕ್ಕೂ ನಂಟಿಲ್ಲ...

ಅದಕ್ಕೆ ಅವರ ಮಾತಿಗೆ ಉತ್ತರ ಕೊಡಬೇಕಾಗಿಲ್ಲ..

ಕನ್ನಡದಲ್ಲಿ ಪ್ರಿಸಂ ನಿಗಂಟಲ್ಲಿ 50% ಹೆಚ್ಚು ಒರೆಗಳು ಸಂಸ್ಕೃತ ಮೂಲದವು..

ಕೆಲವು ಪದಬಳಕೆ ತಪ್ಪಲ್ಲ.. ಆದರೆ ಯಾವಾಗ ಅದು 30% ಮೀರುವುದೋ ಆ ಅದು ತಪ್ಪು..

ಲೆಕ್ಕ ಬಂದರೆ ಹಾಕಿಕೊಳ್ಳಿ.!!

ಸತ್ತ ಸಂಸ್ಕೃತ ಬದುಕು ಇದು ಅನಿವಾರ್ಯ.. ’ಸಂಸ್ಕೃತ ವರ್ಗ’ದ ದಬ್ಬಾಳಿಕಗೆ ಇದು ಅನಿವಾರ್ಯ ಇಲ್ಲ ಅಂತ ಯಾರು ಹೇಳ್ತಾರೆ..

ನೀವು ಆ ವರ್ಗಕ್ಕೆ ಸೇರಿದವರೇ ತಾನೆ..

ಮಹಾಪ್ರಾಣಗಳಿರುವ 25 ಕನ್ನಡದ್ದೇ(ಕನ್ನಡ ಮೂಲದ) ಆದ ಪದಗಳನ್ನು ಪಟ್ಟಿಮಾಡಿ ಕೊಡಿ.. ಆಮೇಲೆ ಮಾತು...

ಹೆಸರು ಯಾಕೆ ಬರೆಯಲ್ಲ ಅಂದರೆ ಹೆಸರು ಬರೆಯದೇ ಇರಲು ಅನುವಿದೆ, ಅದಕ್ಕೆ..

ನಿಮಗೆ ಬರೆಯುವವರ ಹೆಸರು ಇಂಪಾರ್ಟೆಂಟಾ, ಬರೆದ ವಿಶಯ ಮುಕ್ಯವಾ? :)

"ಬೃಹತ್ ಬೆಂಗಳೂರು ಮಹಾನಗರ ಅಭಿವೃದ್ಧಿ ಪ್ರಾಧಿಕಾರ" ಇದರಲ್ಲಿ ಬೆಂಗಳೂರು ಒಂದೇ ಕನ್ನಡದ ಪದ. ಅಯ್ದರಲ್ಲಿ ಮಿಕ್ಕ ನಾಲ್ಕು ಸಂಸ್ಕೃತ.. ಅಂದರೆ ೮೦% ಸಂಸ್ಕೃತ..! ಇದಲು ಕೆಲವಾ? :)

ವಿಶಯ ಗೊತ್ತಿಲ್ಲದೇ ಬಾಯಿ ಹಾಕಬಾರದು.. ಶಂಕರಬಟ್ಟರು ಇಂತಹ ಅತಿ ಸಂಸ್ಕೃತದ ಬಗ್ಗೆ ಬರೆದಿರೋದು..

ಇಂತಹ ಉದಾಹರಣೆಗಳನ್ನು ಸಾವಿರ ಕೊಡಬೋದು.

Anonymous said...

ಇನ್ನು ’ಮಡಿವಂತಿಕೆ’ :)

ಮಡಿ ಸಂಸ್ಕೃತವರ್ಗದ ಸ್ವತ್ತು.. ಅದಕ್ಕೆ ಅದನ್ನು ಮಡಿವಂತರು ಮಾತ್ರ ಕಲಿಯೋದು.

:) ಮಡಿವಂತಿಕೆಯಂತೆ!! ಹೆ ಹೆ

Sree said...

ಅನಂತ ಕಲ್ಲೋಳರ ಲೇಖನಕ್ಕಾಗಿ ಧನ್ಯವಾದಗಳು... ತಮಿಳಿನಲ್ಲಿ P T ಉಷಾ ಅಂತ ಬರಿಯೋದಕ್ಕೆ ಕಾರಣ ಇದು ಅಂತ ಹೊಳೆದಿರಲಿಲ್ಲ!!
ಲೇಖನದಲ್ಲಿ ಕೊಟ್ಟಿರೋ ಕನ್ನಡ ಭಜನೆಯ "ಮಂಗಳ ಮೂರುತಿ ಮೋರಯ್ಯಾ | ನಮ್ಮ ಕಂಗಳಿಗೆ ನೀ ತೋರಯ್ಯ" ಅನ್ನೋ ಸಾಲಿನ ಬಗ್ಗೆ ಸ್ವಲ್ಪ ಗೊಂದಲ - ಮೋರಯ್ಯ ಅಂದ್ರೆ ಏನು ಅರ್ಥ?

Anveshi said...

ಸುನಾಥರೆ,
ಬಾದಾಬಿ ಕನಬದಿಂ ಪಚೇ ಹಂ

ಏನೂಂತ ಗೊತ್ತಾಯಿತಾ?

ಶಂಕರ ಭಟ್ಟರಲ್ಲಿ ಕೇಳಿದರೆ ಗೊತ್ತಾದೀತೇನೋ...

ಅದುವೇ ಸ್ವಾಮೀ... ವಾತಾಪಿ ಗಣಪತಿಂ ಭಜೇ ಹಂ!

ತಮಿಳನ್ನೇ ಮಾದರಿಯಾಗಿಟ್ಟುಕೊಂಡು ಅಕ್ಷರಗಳನ್ನು ಕಡಿತಗೊಳಿಸಿದರೆ
ಭಾಬಿಗಳೆಲ್ಲರೂ ಪಾಪಿಗಳಾಗುತ್ತಾರೆ, ಅತಿಥಿ ಅಂತ ಬರೆಯಲು ಹೋದ್ರೆ... ಆ ಮೂರಕ್ಷರಗಳಲ್ಲಿ ಏನೆಲ್ಲಾ ಸಾಧ್ಯತೆಗಳಿವೆಯೋ ಎಲ್ಲವೂ ಹೊರಬರುತ್ತದೆ... ಅದಿತಿ, ಅತಿದಿ, ಅದಿದಿ, ಅತಿತಿ ಅಥಿಥಿ, ಅಧಿಧಿ... ಈ ಹೆಸರುಗಳನ್ನೆಲ್ಲಾ ಇಂಗ್ಲೀಷಿನಲ್ಲಿ ಬರೀವಾಗಲಾದ್ರೂ ಸರಿಪಡಿಸಬೇಡ್ವೇ? ಅದೂ ಆಗೋದು Adidi/Athidi/Adithi... ಯಾಪ್ಪಾ... ಬೇಡ ಬೇಡ... ಎಷ್ಟು ಬೇಕಾದ್ರೂ ಪದಗಳು ಹುಟ್ಟಿಕೊಳ್ಳುತ್ತವೆ... ಇಷ್ಟೊಂದು ಅನರ್ಥಕಾರಿ ಪದಗಳ ಮೂಲಕವೇ ಭಾಷೆಯನ್ನು ಶ್ರೀಮಂತಗೊಳಿಸಬಹುದು ಎಂಬುದು ಅವರ ವಾದವೋ....

ಜೈ ಕನ್ನಡಾಂಬೆ....

ತಿಳಿಗಣ್ಣ said...

ನನ್ನ ಗೆಳೆಯರು ಈ ಎಳೆಯನ್ನು ನನ್ನ ಗಮನಕ್ಕೆ ತಂದರು...

ಅಸತ್ಯ ಅನ್ವೇಷಿಗಳು ಕಂಡಿತವಾಗಿ ಶಂಕರಬಟ್ಟರ ಹೊತ್ತಗೆಗಳನ್ನು ಓದಿಲ್ಲ....

ಈಗಾಗಲೇ ಹೆಸರಿಲ್ಲದೇ ಬರೆದವರ ಮಾತುಗಳ ಸರಿಯಾಗೇ ಇವೆ. ( ಅನಾಮಿಕ ಅಂತ ಯಾಕೆ ಬಳಸಬೇಕು. ಅದು ಸಂಸ್ಕೃತ.. ಇಲ್ಲಿ ಯಾರು ಸಂಸ್ಕೃತದಲ್ಲಿ ಬರೆಯುತ್ತಿಲ್ಲ )

ಸುನಾತರು ದಯವಿಟ್ಟು ಶಂಕರಬಟ್ಟರ ಮೇಲೆ ಬರೆಯುವುದನ್ನು ನಿಲ್ಲಸಬೇಕೆಂದು ಬೇಡಿಕೆ. ತಮಗೆ ಅವರ ಮಾತಿನ ಹುರುಳು-ತಿರುಳು ಅರಿಯುವಲ್ಲಿ ತೊಡಕಿದೆ.

ಶಂಕರಬಟ್ಟ ಮಾತಿನ ಒಂದೊಂದು ಚೂರಿನ ಮೇಲೆ sampada.net ಅಲ್ಲಿ ಮಾತುಕತೆಗಳು ನಡೆದಿವೆ. ಅಲ್ಲಿ ಹೋಗಿ ನೋಡಿರಿ..

ಅಸತ್ಯ ಅನ್ವೇಷಿಗಳೇ...

ತಮಿಳಲ್ಲಿ "ವಾತಾಪಿ ಗಣಪತಿಂ ಭಜೇsಹಂ" ಅನ್ನೋ ಸಂಸ್ಕೃತ ವಾಕ್ಯವನ್ನು ಬರೆಯುವ ಅಗತ್ಯವಿಲ್ಲ.. ತಮಿಳರು ಸಂಸ್ಕೃತ ಬರೆಯಲೆಂದೇ ಗ್ರಂಥ ಎಂಬ ಲಿಪಿಯನ್ನು ಮಾಡಿಕೊಂಡಿದ್ದಾರೆ.. ಅದನ್ನು ಬಳಸಿ ಬರೆದರೆ ( ಇಂದಿನ ಮಳಯಾಳಂ ತರಹ ) ಎಲ್ಲವನ್ನು ಬರೆಯಬಹುದು.

ತಮಗೆ ತಮಿಳು ವ್ಯಾಕರಣ ಜ್ನಾನ ಎಷ್ಟಿದೆ? ತಮಿಳರು ಇಂದಿಗೂ ಅವರ "ತೋಲ್ಕಾಪ್ಪಿಯಂ" ಅಲ್ಲಿ ಹೇಳಿರುವ ವಿಧಾನವನ್ನೇ ಅನುಸರಿಸಿತ್ತಾರೆ... ತಮಿಳರಿಗೆ ಮೃದು ಮತ್ತು ಕರ್ಕಶ ವ್ಯಂಜನಗಳ ನಡುವೆ ವ್ಯತ್ಯಾಸವಿಲ್ಲ ಗೋಪಿ ಅನ್ನೋ ಅವು ಕೋಬಿ ಎಂದೇ ಹೆಚ್ಚು ಸರತಿ ಉಲಿಯುವುದು..

ಅದು ಅವರ ಸಂಸ್ಕೃತಿ, ಅವರ ಬರಹ ವಿಧಾನ. ಅದಕ್ಕೂ ಶಂಕರಬಟ್ಟರ ವಾದಕ್ಕೂ ಎಳ್ಳಷ್ಟು ಸಂಬಂಧವಿಲ್ಲ.. ಶಂಕರಬಟ್ಟರು ತಮಿಳನ್ನು ಬರೀ ಒಂದು ಮಾದರಿ, ಉದಾಹರಣೆಯಾಗಿ ಕೊಟ್ಟಿದ್ದಾರೆ. ಅವರು ಹಲವು ಕಡೆ ಮಣಿಪುರಿ, ಸಂಸ್ಕೃತವನ್ನೂ ಉದಾಹರಣೆಯಾಗಿ ಕೊಟ್ಟಿದ್ದಾರೆ.

ಒಬ್ಬ ಕನ್ನಡ ಉತ್ತಮ ಭಾಷಾವಿಜ್ಞಾನಿಯ ಬರಹಗಳನ್ನು ನಗೆಪಾಟಲು ಮಾಡಿ ಇವರು ಅವರ ಪಾಂಡಿತ್ಯ ಸಮರೇ?

ತುಸು ಯೋಚಿಸಿ ಜವಾಬ್ದಾರಿಯಿಂದ ಬರೆಯಿರಿ.

ಸುಮ್ಮನೆ ಯಾಕೆ ಇಲ್ಲದ ಗದ್ದಲ ಎಬ್ಬಿಸಿದ್ದೀರಿ.
----ಮಹೇಶ

ತೇಜಸ್ವಿನಿ ಹೆಗಡೆ said...

ಸುನಾಥರೆ,

ಅನಂತ ಕಲ್ಲೋಳರ ಲೇಖನ ತುಂಬಾ ಚೆನ್ನಾಗಿದೆ. ಪ್ರಕಟಿಸಿದ್ದಕ್ಕೆ ಧನ್ಯವಾದಗಳು. ಅನವಶ್ಯಕವಾಗಿ ವಿವಾವದಗಳನ್ನು ಹುಟ್ಟುಹಾಕುತ್ತಿರುವ ಕೆಲ ವ್ಯಕ್ತಿಗಳ ಮಾತುಗಳಿಗೆ ಬೆಲೆಕೊಡದೇ ನಿಮಗೆ ಕಂಡ ಸತ್ಯವನ್ನು ಬರೆಯುತ್ತಿರಿ (ಅದು ಯಾವ ವಿಷಯದ ಕುರಿತೇ ಆಗಿರಲಿ.) ಓದುಗರು ಕುರುಡರೇನಲ್ಲ. ಓದಿ, ಅವರಿಗೆ ಸತ್ಯ ಎಂದೆನಿಸಿದರೆ ಮಾತ್ರ ಒಪ್ಪುವರು. ವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು.

Anonymous said...

ಹೌದು ಬಾಯಿಗೆ ಬಂದ ಹಾಗೆ ಬರೆಯೋ ಪ್ರೀಡಂ ಇರೋ ಹಾಗೆ.. ಅದನ್ನು ತಪ್ಪು ಎಂದು ತೋರುವ ಪ್ರೀಡಮ್ಮೂ ಇದೆ...

ಶಂಕರಬಟ್ಟರಿಗೂ ಅವರಿಗೆ ಕಂಡ ಸತ್ಯವನ್ನು ಹೇಳವ ಹಕ್ಕು ಇದೆ.

ತೇಜಸ್ವನಿ ಹೆಗಡೆಯವರಿಗೆ ಮಾತಿಗೆ ನಾವು ಬೆಲೆಕೊಡಬೇಡಿ ಎಂದು ಹೇಳವ ಪ್ರೀಡಮ್ಮೂ ಇದೆ..
ಅದನ್ನು ಅವರ ಸುನಾತರ ಮೇಲಿನ ಅತಿಮೋಹ ಅನ್ನೋದಕ್ಕೂ ಪ್ರೀಡಂ ಇದೆ.

ಶಂಕರಬಟ್ಟರ ಬಗ್ಗೆ ಅರಿಯದೇ ಬರೆದುದು ದೊಡ್ಡ ಸಾದನೆ.. ಚಪ್ಪಾಳೆ! :)

ಸುನಾತರು ತಮ್ಮ ತಮಿಳ ಬಾಶೆಯ ಜ್ನಾನಪ್ರದರ್ಶನಕ್ಕಾಗಿ ಕೂಡಲೆ ತಿರುಕ್ಕುರಳಿನ ೧೦ ಕುರಳುಗಳನ್ನು ಬಿಡಿಸಿ ತಿಳಿಸಬೇಕು.
ಹಾಗು
ಕನ್ನಡದ ಮೂಲದ ಮಹಾಪ್ರಾಣ ಇರುವ ಇಪ್ಪತ್ತು ಪದಗಳ ಪಟ್ಟಿ ಮಾಡಬೇಕು...

ನಮಗೆ ನಿಮ್ಮ ಯೋಗ್ಯತೆಯ ಮೇಲೆ ಅನುಮಾನ ದಟ್ಟವಾಗಿದ್ದು... ತೆವಲಿಗೆ ಬರೆಯುವ ಚಟ ಅನ್ನಿಸುತ್ತಿದೆ( ತೇಜಸ್ವನಿ ಹೆಗಡೆಯವರ ವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು’ ನಮಗೂ ಇದೆ )

ನಿಮಗೆ ವಿರೋದವಾಗಿ ಬಂದ ಎಲ್ಲ ಕಮೆಂಟುಗಳನ್ನು ಅಳಿಸಿ, ಏನೂ ಆಗಿಲ್ಲ ಎಂದು ಘನತೆ ಮೆರೆಯುವ ಅವಕಾಶ ಇದ್ದೇ ಇದೆ. :)

Anonymous said...

"..ಕನ್ನಡಿಗರು ಗಗನಸಖಿ ಎಂಬಂಥ ಅರ್ಥಪೂರ್ಣ ಪದ .."

ಒಹೊ. 'ಗಗನಸಖಿ' ಕನ್ನಡವೆ. ಯಾಕೆ 'ಬಾಂಗೆಳತಿ' ಅನ್ನಕ್ಕೆ ಬಾಯ್ ಬರಲ್ವೇನೊ.??

ನನ್ನ ಅಯ್ಬು/ಅನುಮಾನ ಇನ್ನು ಹೆಚ್ಚಾಗುತ್ತಿದೆ. ಈ ಬಿಲಾಗು ಬರೆಯುತ್ತಿರುವವರು ಕನ್ನಡಿಗರೇ? ಸಕ್ಕದಿಗರೇ?

ಮರಾಟಿ, ತಮಿಳು ಅವರಿಗೆ ಬೇಕಂತೆ ಅವರು ಮಾಡಿಕೊಂಡಿದ್ದಾರಂತೆ. ನಮಗೆ ಚೆನ್ನಾಗಿಲ್ಲ ಅಂದ್ರೆ ಅವರಿಗೇನು ಅದರಿಂದ ಯಾವ ಬಳಕೆಯು ಇಲ್ಲ.

"ಮೈಸೂರು ಕಡೆಗೆ ಕನ್ನಡ ಅಂಕಿಗಳ ಬಳಕೆ ಕಡಿಮೆ. ಇದಕ್ಕೂ ಅದೇ ಕಾರಣ.."

ಯಾರು ಹೇಳಿದ್ದು. ಕನ್ನಡದ ಅಂಕಿಗಳ ಹುಟ್ಟು ಹೇಳಿದವನು ಕುಮುದೇಂದು ಎಂಬ ಕಬ್ಬಿಗ. ಇವನ್ನು ಹುಟ್ಟಿದ್ದು ಬೆಂಗಳೂರಿನ ನಂದಿಬೆಟ್ಟದ ಹತ್ತಿರವಿರುವ ಯಲವಳ್ಳಿ (ಸಿರಿಬೂವಲಯ ಓದಿ)
ಅಂದ ಮೇಲೆ ಕನ್ನಡ ಅಂಕಿಗಳು ಹುಟ್ಟಿದ್ದು ಮಯ್ಸೂರಿನ ಕಡೆಯಿಂದನೇ ಗೆಪ್ತಿಯಿರಲಿ.

ಸರಿಯಾಗಿ ತಿಳ್ಕೊಂಡ್ ಬರೀರಿ.

hamsanandi said...

ಸುನಾಥರೆ,

ಟಿಪ್ಪಣಿಗಳನ್ನೋದುತ್ತ ಕೆಲವು ಪ್ರಶ್ನೆಗಳು, ಮತ್ತೆ ಕೆಲವು ಯೋಚನೆಗಳು ಮೂಡುತ್ತಿವೆ..

೧. ಕನ್ನಡ ಅಂಕಿಗಳ ಬಳಕೆ, ಮೈಸೂರು ಕಡೆ ಮಾತ್ರ ಅಲ್ಲ, ಎಲ್ಲಾ ಕಡೆಯಲ್ಲೂ ಕಡಿಮೆಯೇ ಆಗಿದೆ ಎನ್ನಿಸುತ್ತೆ.

೨. ಮೈಸೂರಿನವರ ಮಾತಿನಲ್ಲಿ ತಮಿಳು ಪ್ರಭಾವ ಅನ್ನುವುದೊಂದು ಕಲ್ಪನೆ ಮಾತ್ರ ಅನ್ನಿಸುತ್ತೆ. ಯಾಕಂದರೆ ಕನ್ನಡದಲ್ಲೂ ತಮಿಳಿನಲ್ಲೂ ಬೇರುಗಳು ಒಂದೇ ಆಗಿ, ಪದಗಳು ಒಂದೇ ರೀತಿ ಇವೆ. ಅಲ್ಲವೇ?

೩. ಮೇಲಿನ ಟಿಪ್ಪಣಿಯೊಂದರಲ್ಲಿ ಸಿರಿಭೂವಲಯದಲ್ಲೇ ಮೊದಲ ಬಾರಿಗೆ ಕನ್ನಡ ಅಂಕಿಗಳ ಪ್ರಯೋಗ ಆಗಿದೆ ಎಂದು ಹೇಳಿದೆ - ಆದರೆ, ಅದು ಸರಿಯೇ? (ಕುಮುದೇಂದು ೧೬ ನೇ ಶತಮಾನದವನಾಗಿದ್ದರೆ, ಕನ್ನಡ ಅಂಕೆಗಳ ಹುಟ್ಟಿಗೆ ಅದು ತೀರಾ ತಡವಾದ ಕಾಲ ಎನ್ನಿಸುತ್ತೆ) . ಗೊತ್ತಿದ್ದವರು/ಮೇಲೆ ಟಿಪ್ಪಣಿ ಮಾಡಿದ್ದವರು ತಿಳಿಸುತ್ತೀರಾ?

೪. ಹೊಸ ಹೊಸ ಕವಿಗಳು ಆರತಿ ಪದಗಳನ್ನು ಬರೆದರೆ ತಪ್ಪಿಲ್ಲ :) ಆದರೆ, ನಮ್ಮಲ್ಲಿ ಆಗಲೇ ಇಂತಹ ಸಂದರ್ಭಗಳಲ್ಲಿ ಹಾಡಲು ಸಂಪ್ರದಾಯದ ಹಾಡುಗಳು, ದಾಸರ ದೇವರನಾಮಗಳು ಬೇಕಾದಷ್ಟಿವೆ ಅನ್ನುವುದು ನನ್ನ ಅಭಿಪ್ರಾಯ.

Anonymous said...

ಮಾನ್ಯ ಹಂಸಾನಂದಿಯವರೆ,
ನೀವು ಯಾವ ಕುಮುದೇಂದು ಬಗ್ಗೆ ಮಾತನಾಡುತ್ತಿರುವಿರೊ ತಿಳಿಯದು. ಈ ಕುಮುದೇಂದುವೆ ನಮ್ಮ ಅಮೋಗವರುಶನ ಗುರುವಾಗಿದ್ದ ಅಂತ ಸಿರಿಬೂವಲಯದಲ್ಲಿ ಹೇಳಲಾಗಿದೆ. ಇವನು ಅಮೋಗವರುಶನಗಿಂತ ಹಿರಿಯ. ಅಂದರೆ ಇವನು ೯ ನೇ ಶತಮಾನಕ್ಕಿಂತ ಹಿಂದಿನವನು ಅಂತ ಹೇಳ್ಬಹುದು. ಇವನೇ ಹುಟ್ಟಿಸಿದ ಅಂತ ನಾನು ಹೇಳಲಿಲ್ಲ. ಕನ್ನಡ ಅಂಕಿಗಳ ಹುಟ್ಟು ಹೇಗಾಯಿತು ಅಂತ ಈತನ ಕಬ್ಬದಲ್ಲಿ ಹೇಳಲಾಗಿದೆ.
'೦' ಒಡೆದು ಬೇರೆ ಬೇರೆ ತರದಲ್ಲಿ ಜೋಡಿಸಿದರೆ ನಮಗೆ
೧,೨,೩,೪,೫,೬,೭,೮,೯ ಸಿಗುತ್ತದೆ ಅಂತ ಮೊದಲ ಬಾರಿಗೆ ತೋರಿಸಿಕೊಟ್ಟವನು ಕುಮುದೇಂದು. 'ಸಿರಿಬೂವಲಯ' ಇದನ್ನ ಹಿಂದಿನಿಂದ ಓದಿದರೆ 'ಯಲವಬೂಸಿರಿ' ಅಂತಾಗುತ್ತದೆ. ಇದು ತನ್ನ ಹುಟ್ಟೂರಿನ(ಯಲವಳ್ಳಿ) ಬಗ್ಗೆ ಕುಮುದೇಂದುವಿಗೆ ಇದ್ದ ಹೆಮ್ಮೆಯನ್ನು ತೋರಿಸುತ್ತದೆ.

Anonymous said...

ಹಂಸಾನಂದಿಗಳೇ..

ಕನ್ನಡದ ಎಣಿಕೆಗುರುತುಗಳ ಸಂಗತಿ ಇರಲಿ...

ಇವರು ತಮಿಳಿನ ಬಗ್ಗೆ ಬರೆದಿರು ಹಗೂರ ಮಾತುಗಳು, ಇವರ ತಮಿಳಿನ ಬಗ್ಗೆ ಇರುವ ಅರಿವಿನ ಕೊರೆತೆ ತೋರುವುದಿಲ್ಲ..

ಸಂಸ್ಕೃತದ ದೇವನಾಗರಿಯಲ್ಲಿ ತಮೞ್, ಮಱ್ಱುಂ ಎಂದು ಹೇಗೆ ಬರೀತಾರೆ?

ಹಾಳಾಗಾಗಿ ಹೇಗಲಿ ಕೇರೆ, ಮತ್ತು ಕೆರೆಗಳನ್ನು ಬೇರೆ ಬೇರೆಯಾಗಿ ದೇವನಾಗರಿಯಲ್ಲ ಬರೆಯಲು ಬರುವುದೇ?

ಇವರಿಗೆ ಯಾಕೆ ಶಂಕರಬಟ್ಟರ, ತಮಿಳಿನ ಉಸಾಬರಿ? ಇವರ ಯೋಗ್ಯತೆ ಏನು?

ಇಂತಹ ತೆವಲಿನ ರಂಪಾಟಕ್ಕೆ ನಿಮ್ಮ ಇಂಬು ಸರಿಯಲ್ಲ..

ನಿಮ್ಮ ಬರಹಗಳನ್ನು ಮೆಚ್ಚಿರುವವನು ನಾನು.. ನಿಮಗೆ ನನ್ನ ಮಾತಿನ ಹುರುಳು ಅರಿತಿದೆ ಎಂದು ಅಂದುಕೊಂಡಿದ್ದೀನಿ...

ತಮಿಳಿಗೆ ಅದರದೇ ಆದ ಬರಹ ಕ್ರಮ ಮತ್ತು ಉಚ್ಚಾರಕ್ರಮವಿರುವುದು ನಿಮಗೆ ಗೊತ್ತೇ ಇದೆ.. ೨೫೦೦ ವರುಶದಿಂದ ಬದುಕಿಕೊಂಡು ಬಂದಿರುವ ಮತ್ತು೬ ಕೋಟಿ ಮಂದಿ ಮಾತಾಡುವ ನುಡಿಯದು..

೧೦,೦೦೦ ಮಂದಿಗೂ ಗತಿ ಇಲ್ಲದ ಸಂಸ್ಕೃತವಲ್ಲ!

Anonymous said...

Mr Sunaath and his folks are just a bunch of people who just pass time one their own self proclaimed theories.

Mr Shankara Bhat is a veteran scholar in Sanskrit, Manipuri, Dravidian languages(including Kannada).

He works are highly regarded in the linguistic community.

What is this Sunaath to accuse him?...

Folks, just don't be so nasty in your attitude....

A linguist writes about linguistic just like Mr Shankar Bhat..whats wrong in that...

You must argue on linguistic basis...

Mr Sunaath please do some research on Dravidian linguistics before pen any of the non-sense. Just because you know Sanskrit( He may think so ) that doesn't mean you know everything..

I condemn this irresponsible act.

-Mukesh

sunaath said...

ಕೇಶವ,
ಈ ಅರ್ಧಚಂದ್ರ ಸಂಕೇತಕ್ಕೆ ಅರ್ಧಚಂದ್ರವೆಂದೇ ಹೇಳಲಾಗುತ್ತಿದೆ. ಗಣಪತಿ ಅಥರ್ವಣ ಸ್ತೋತ್ರದಲ್ಲಿಯೂ ಸಹ ಓಂ ಅನ್ನುವ ಮಂತ್ರದ ಬರಹವನ್ನು ತಿಳಿಸುತ್ತ (-ಆ ಕಾಲದಲ್ಲಿ ಬರಹವನ್ನು ತಿಳಿಸುವದು ಅನಿವಾರ್ಯವಾಗಿತ್ತು-)ಅಕಾರದ ಮೇಲೆ ಅರ್ಧಚಂದ್ರ ಹಾಗು ಚುಕ್ಕೆಯನ್ನು ಕೊಡಬೇಕು ಎಂದು ಹೇಳಿದ್ದಾರೆ. ಅರ್ಧಚಂದ್ರ ಸಂಕೇತ ಅಷ್ಟು ಹಳೆಯದು. ಇಂಗ್ಲೀಶಿನ Doctor,Hospital ಮೊದಲಾದ ಪದಗಳನ್ನು ಬರೆಯುವಾಗ ಡಾ ಮತ್ತು ಹಾ ಈ ಅಕ್ಷರಗಳ ಮೇಲ್ಗಡೆಯಲ್ಲಿ ಅರ್ಧಚಂದ್ರ ಸಂಕೇತವನ್ನು ಕನ್ನಡದಲ್ಲಿ ಉಪಯೋಗಿಸುತ್ತಿದ್ದನ್ನು ಸ್ವತಃ ನಾನೇ ಓದಿದ್ದೇನೆ. ನಾಗರಿ ಲಿಪಿಯಲ್ಲಿ ಇದು ಇನ್ನೂ ಬಳಕೆಯಲ್ಲಿದ್ದು ಕನ್ನಡದಿಂದ ಮಾಯವಾಗಿದೆ. ಬಹುಶ: ಕಂಪ್ಯೂಟರ ಲಿಪಿಗಳಲ್ಲಿ ಇದು ಸೇರ್ಪಡೆಯಾಗದೇ ಇದ್ದುದರಿಂದ ಹಾಗೂ ಎಲ್ಲಾ ಮುದ್ರಣಕಾರ್ಯಗಳಲ್ಲೂ ಈಗ ಕಂಪ್ಯೂಟರ ಬಳಕೆಯಾಗುತ್ತಿರುವದರಿಂದ, ಅರ್ಧಚಂದ್ರ ಸಂಕೇತ ಕನ್ನಡದಿಂದ ಸಂಪೂರ್ಣವಾಗಿ ಮಾಯವಾಗಿರಬಹುದು.
ನೀವು ಹೇಳಿದಂತೆ, ವಿಭಿನ್ನ ಧ್ವನಿಯುಳ್ಳ ಜ , ಚ ಮೊದಲಾದ
ಸ್ವರಗಳನ್ನು ಸೂಚಿಸುವಾಗ ಕೆಳಗೆ ಎರಡು ಬಿಂದುಗಳನ್ನು ಕೊಡುವ ಮೂಲಕ ಮಾಡಬಹುದು.
ಗಣಕ ತಂತ್ರಜ್ಞರು ಇದನ್ನು ಸಾಧಿಸಬೇಕು.

sunaath said...

ಕಟ್ಟಿಯವರೆ,
ಕನ್ನಡದಿಂದಲೂ ಅನೇಕ ಪದಗಳು ಸಂಸ್ಕೃತಕ್ಕೆ ಹೋಗಿವೆ. ಈ ತರಹದ ಕನ್ನಡ-ಸಂಸ್ಕೃತ ಅನ್ಯೋನ್ಯತೆ ಗೊತ್ತಿಲ್ಲದವರೇ, ಸಂಸ್ಕೃತವನ್ನು ವಿನಾಕಾರಣ ದೂಷಿಸುತ್ತಿದ್ದಾರೆ. ಮಲಗಿಕೊಂಡವರನ್ನು ಎಚ್ಚರಿಸಬಹುದು. ಕಣ್ಣು ಮುಚ್ಚಿಕೊಂಡವರನ್ನು ಎಚ್ಚರಿಸಲು ಸಾಧ್ಯವೆ?

sunaath said...

sree,
ಮಹಾರಾಷ್ಟ್ರವು ಗಣಪತಿಯ ಆರಾಧನಾ ಸ್ಥಾನ.೧೪ನೆಯ ಶತಮಾನದಲ್ಲಿ ಮೋರೆಗಾವ(-ಕನ್ನಡದಲ್ಲಿ ನವಿಲೂರು ಎಂದಂತೆ-) ಅನ್ನುವ ಊರಿನಲ್ಲಿ 'ಮೋರಾಯ' ಅನ್ನುವ ಗಣಪತಿಯ ಆರಾಧಕರೊಬ್ಬರು ಆಗಿ ಹೋದರು. ಅವರ ಹೆಸರನ್ನು ಸೇರಿಸಿ "ಗಣಪತಿ ಬಾಪಾ ಮೋರಾಯಾ" ಎನ್ನುವ ಘೋಷಣೆ ಮಾಡುತ್ತಾರೆ.ಆ ಊರಿನಲ್ಲಿರುವ ಗಣಪತಿಗೆ "ಮೋರೇಶ್ವರ" ಎನ್ನುವ ಹೆಸರಿದೆ.

-ಸುನಾಥ ಕಾಕಾ

Anonymous said...

ಕನ್ನಡದಿಂದ ಸಂಸ್ಕೃತಕ್ಕೆ ಪದಗಳು ಹೋಗಿರುವುದು ೧೦೦% ದಿಟ.

ಆದರೆ ನೀವು ಬಾಯಿಗೆ ಬಂದ ಹಾಗೆ ಶಂಕರಬಟ್ಟರ ಮೇಲೆ ಬರೆದುದಕ್ಕೂ ಇದಕ್ಕೂ ಏನು ಸಂಬಂದ?

ಕಾಕಾ ಇದು ಕನ್ನಡವೇ?

ನೀವು ಮರಾಟಿ ಮಂದಿಯೇನು?

ಮರಾಟಿಯಾಗಿದ್ದರೆ.. ನಿಮ್ಮದನ್ನು ನೀವು ನೋಡಿಕೊಳ್ಳಿ ಎಂದೇ ಹೇಳಬೇಕು...

ನಿಮ್ಮ ಬರಹದಲ್ಲಿ ಹೆಚ್ಚು ಮಹಾರಾಷ್ಟ್ರದ ಕಡೆ ಇದೆ ಒಲವು..

ಮೊದಲು ನೀವು ನಿಮ್ಮ ವಾದಕ್ಕೆ ಚಂದ/ಘನತೆಯ ತರ್ಕವನ್ನು ಸರಿಯೆಂದು ತೋರಿಸಿರಿ...

ಕಾಕ ಅಂದರೆ ಸಂಸ್ಕೃತದಲ್ಲಿ ಏನು ಅಂತ ಗೊತ್ತಲ್ಲ..

ಸುನಾತ ಕಾಕ :)

sunaath said...

ಬಾದಾಬಿ ಕನಬದಿಂ ಪಚೇಹಂ!
ಹಃಹಃಹಾ!!

ಅನ್ವೇಷಿಗಳೆ, ಈ ಒಗಟಿನ ಅರ್ಥ ವಾತಾಪಿ ಗಣಪತಿಗೂ ಗೊತ್ತಾಗುವದಿಲ್ಲ, ಶಂಕರ ಭಟ್ಟ್ರು ಹೇಳುವವರೆಗೂ!
ನಿಮಗೊಂದು ಒಗಟನ್ನು ಹೇಳುತ್ತೇನೆ, ಬಿಡಿಸಿ:

ಪಾರತ ಪಾಕ್ಯ ವಿತಾದಾ!

ಗೊತ್ತಾಗಲಿಲ್ಲವೆ?...ನಮ್ಮ ರಾಚ್ಟ್ರಕೀತೆ ಕಣ್ರೀ!

sunaath said...

ಹಂಸಾನಂದಿಯವರೆ,
(೧)ಉತ್ತರ ಭಾರತದಲ್ಲಿ ನಾಗರಿ ಲಿಪಿಯ ಅಂಕಿಗಳನ್ನೇ ಬಳಸುತ್ತಾರೆ; ಇಂಡೋ-ಅರೇಬಿಕ್ ಅಂಕಿಗಳನ್ನು ಬಳಸುವದಿಲ್ಲ.
ಉತ್ತರ ಕರ್ನಾಟಕದಲ್ಲಿ ಕನ್ನಡ ಅಂಕಿಗಳ ಬಳಕೆ ವ್ಯಾಪಕವಾಗಿತ್ತು. ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣದಲ್ಲಿ ಏಕರೂಪತೆಯನ್ನು ತಂದ ಬಳಿಕ, ಉತ್ತರ ಕರ್ನಾಟಕದ ಶಿಕ್ಷಣದಲ್ಲಿ ಕನ್ನಡ ಅಂಕಿಗಳ ಬದಲಾಗಿ ಇಂಡೋ-ಅರೇಬಿಕ್ ಅಂಕಿಗಳು ಬಳಕೆಯಲ್ಲಿ ಬಂದವು.
ಮೊದಲು ಪ್ರಾದೇಶಿಕ ಪತ್ರಿಕೆಗಳಾದ ಉತ್ತರ ಕರ್ನಾಟಕದ ಪತ್ರಿಕೆಗಳು (ಉದಾ: ಸಂಯುಕ್ತ ಕರ್ನಾಟಕ)
ಬೆಂಗಳೂರು editionನ್ನು ಪ್ರಾರಂಭಿಸಿದ ಮೇಲೆ, ಇಂಡೋ-ಅರೇಬಿಕ್ ಅಂಕಿಗಳನ್ನು ಎತ್ತಿಕೊಂಡವು.

ನನ್ನ ಅನುಮಾನವೇನೆಂದರೆ, ಕರ್ನಾಟಕ ಸರಕಾರದ ಆಡಳಿತದಲ್ಲಿದ್ದ ಅನೇಕ ಪ್ರಭಾವಿ ತಮಿಳು ವ್ಯಕ್ತಿಗಳಿಂದ, ಇಂಡೋ-ಅರೇಬಿಕ್ ಅಂಕಿಗಳ ಬಳಕೆಯ ಅನುಕರಣೆಯು ಕರ್ನಾಟಕದಲ್ಲಿ ಪ್ರಾರಂಭವಾಯಿತು.

(೨)ನೀವು ಹೇಳುವದು ಸರಿ. ಕನ್ನಡ ಹಾಗು ತಮಿಳಿನ ಬೇರುಗಳು ಒಂದೇ. ಒಂದು ಕಾಲದಲ್ಲಿ ಒಂದೇ ಆಗಿದ್ದ ಈ ನುಡಿಯನ್ನು ಶ್ರೀ ಶಂ.ಬಾ. ಜೋಶಿಯವರು ’ಕಂದಮಿಳು’ ಎಂದೇ ಗುರುತಿಸಿದ್ದಾರೆ.
ಕಾಲ ಗತಿಸಿದಂತೆ,ಕನ್ನಡ ನುಡಿಯುವಲ್ಲಿ ಹಾಗು ಬರೆಯುವಲ್ಲಿ ಸಾಕಷ್ಟು ವಿಕಾಸವಾಯಿತು. ಈ ವಿಕಾಸ ತಮಿಳಿನಲ್ಲಿ ಆಗಲಿಲ್ಲ.
ಹೀಗಾಗಿ ಅವರ ನುಡಿ ಹಾಗು ಬರಹ ಆದಿಕಾಲದಂತೆಯೇ ಉಳಿದುಕೊಂಡವು.
ಹಳೆಯ ಮೈಸೂರು ಕನ್ನಡ ಅತ್ಯಂತ ಸುಸಂಸ್ಕೃತ ಕನ್ನಡ ಎನ್ನುವದು ನಿಜ; ಆದರೆ, ತಮಿಳು ನಾಡು ಹತ್ತಿರದಲ್ಲಿದ್ದರಿಂದ
ಹಾಗು ತಮಿಳರು ಮೈಸೂರಿನಲ್ಲಿ ಆಡಳಿತ ನಡೆಸಿದ್ದರಿಂದ, ಅಲ್ಲಿಯ ನುಡಿಯಲ್ಲಿ ಮಹಾಪ್ರಾಣಗಳು ಮಾಯವಾದವು. ಮಹಾರಾಷ್ಟ್ರದ ಆಡಳಿತದಲ್ಲಿ ಬಂದಂತಹ ಉತ್ತರ ಕರ್ನಾಟಕದಲ್ಲಿ
ಮಹಾಪ್ರಾಣಗಳು ಉಳಿದುಕೊಂಡವು.

(೩)ಕುಮದೇಂದುವಿನ ಕಾಲಮಾನದ ಬಗೆಗೆ ತಿಳಿದಿಲ್ಲ.

(೪)ಕನ್ನಡದಲ್ಲಿಯೇ ಸಾಕಷ್ಟು ಆರತಿ ಪದಗಳಿವೆ. ಆದರೆ ಉತ್ತರ ಕರ್ನಾಟಕದ ಕನ್ನಡಿಗರು, ಮರಾಠಿಯ ವ್ಯಾಮೋಹದಲ್ಲಿ
ಮರಾಠಿ ಆರತಿ ಪದಗಳನ್ನು ಬಳಸುತ್ತಿದ್ದ ಕಾಲವೊಂದಿತ್ತು. ವಿಶೇಷತಃ, ಗಣಪತಿ ಆರತಿಯ ಸಂದರ್ಭದಲ್ಲಿ ರಾಮದಾಸರು
ರಚಿಸಿದ "ಜಯ ದೇವ ಜಯ ದೇವ ಜಯ ಮಂಗಲಮೂರ್ತೇ"
ತುಂಬಾ ಜನಪ್ರಿಯ ಹಾಡಾಗಿತ್ತು.
ಆ ಕಾಲದಲ್ಲಿ ಬೇಂದ್ರೆ ಮೊದಲಾದವರು ಇದರ ವಿರುದ್ಧ ಹೋರಾಡಲೆಂದು ಹೊಸ ಆರತಿ ಪದಗಳನ್ನು ರಚಿಸಬೇಕಾಯಿತಷ್ಟೆ.

ಹಂಸಾನಂದಿಯವರೆ,
Objective ಚರ್ಚೆಗಾಗಿ ಧನ್ಯವಾದಗಳು

sunaath said...

ತೇಜಸ್ವಿನಿ,
ಧನ್ಯವಾದಗಳು.
ವೈಚಾರಿಕ ಅಸಹಿಷ್ಣುತೆ ಎಲ್ಲೆಲ್ಲೂ ಇದ್ದದ್ದೆ. ಅದನ್ನು ignore
ಮಾಡುವದೇ ಸರಿ.

Anonymous said...

ಕಾಕಾ,

ನಾನೂ ಈ ಮರಾಠಿಗರ ನಡುವೇ ಸಿಕ್ಕಿಹಾಕಿಕೊಂಡು "ಕಾನಡೀ", "ಡೋಸಾ", "ಪೇಣ" ಇತ್ಯಾದಿಗಳನ್ನು ಕೇಳಿ ಕೇಳಿ, ಅವರೊಡನೆ ಜಗಳವಾಡಿ ಈಗ ಒಬ್ಬಿಬ್ಬರಿಂದ "ಕನ್ನಡ", "ದೋಸೆ" , "ಪೆನ್" ಎಂದೆನಿಸುತ್ತಿದ್ದನೆ.

ಅನಂತ ಕಲ್ಲೋಳರಿಗೆ ನನ್ನ ವಂದನೆಗಳನ್ನು ತಿಳಿಸಿ.

-ಶೆಟ್ಟರು

Shriniwas M Katti said...

ಪ್ರೀಯ ಅನಾಮಧೇಯರೆ, ನಿಮ್ಮ ಅಭಿಪ್ರಾಯ ನಿಮಗೇ ಇರಲಿ. ಬಹಳ ತಮಾಸೆ-ಶೆ-ಷೆ ಯಾಗಿ ಬರೆಯುತ್ತೀರಪ್ಪ ! ನಿಮಗೆ "ಸ-ಶ-ಷ" ಗಳ ಭೇದ ಕಷ್ಟವೆಂದು ಕಾಣುತ್ತದಲ್ಲ ! "ಬೆಂಗಳೂರು" ಕನ್ನಡ ಶಬ್ದವೆಂದು ನಿಮಗಾರು ಹೇಳಿದರು ? ಬೆಂಗಳೂರು ಯಾವದೇ ಭಾಷೆಯಲ್ಲಿಯೂ ಬೆಂಗಳೂರು. ಇನ್ನು ನಾಲಿಗೆ ಸಪೂರವಿಲ್ಲದವರು 'ಬ್ಯಾಂಗ್ಲೂರ್'ಎಂದೂ ಹೇಳಬಹುದು. ಸಂಸ್ಕೃತ ಸತ್ತ ಭಾಷೆ ಎನ್ನುವವರ ಬಗ್ಗೆ ಕನಿಕರ ಪಡಬೇಕು. ಸಂಸ್ಕೃತವನ್ನು ತಿಳಿಯದವರಿಗೆ ಅದರಲ್ಲಿ ಏನಿದೆ ಎಂಬ ಅರಿವೇ ಇಲ್ಲ. ಸಂಸ್ಕೃತವನ್ನು ಚೆನ್ನಾಗಿ ಓದಿದವರು ಅದು ಸತ್ತ ಭಾಷೆ ಎಂದು ಹೇಳುವದಿಲ್ಲ. ಸಂಸ್ಕೃತ ಜ್ಞಾನ ಭಂಡಾರವೆಂದೇ ಹೇಳುವದನ್ನು ಕೇಳಿ ಬಲ್ಲೆ. ಇನ್ನು ನಿಮಗೆ ಅನಿಸಿದ್ದನ್ನು ಬರೆಯುವ ಸ್ವಾತಂತ್ರ್ಯ ಅಂದರೆ ನಿಮ್ಮ ಕನ್ನಡದಲ್ಲಿ "ಪ್ರೀಡಂ" ಇದ್ದೇ ಇದೆ.

Shriniwas M Katti said...

ಹಾಂ, ಇನ್ನೊಂದು ಮರೆತೆ ಹೆಸರಿಲ್ಲದವರೆ, "ಮಡಿ" ಎಂದರೆ ಕನ್ನಡದಲ್ಲಿ ಎರಡರ್ಥ. 1. ಶುದ್ಧಮಾಡುವದು, ತೊಳೆಯುವದು 2. ಮರಣಿಸು, ಸಾಯಿ. ಅದಕ್ಕೆ ಮಡಿಗೂ ಸಂಸ್ಕೃತಕ್ಕೂ ಯಾವದೇ ಸಂಬಂಧವಿಲ್ಲ. ಇದೆಯೆಂದು ನಿಮಗೆ ಅನಿಸಿದರೆ, ಹಾಗೆ ಬರೆಯಲು ನಿಮಗೆ "ಪ್ರೀಡಂ" ಇದ್ದೇ ಇದೆ.

Anonymous said...

Mr Anonymous, U r right. Six crore people speak, read and write Tamil. There r not even 1000 ( why 10000 ?) people who can speak, read and write Sanskrit. But, dear sir, why do u forget that Sanskrit has contributes silently to all the Indian languages and enriched them. Please go thru your own writing.....are all words are Kannada ? No !!! You have used Sanskrit, English...all mutilated !!!

sunaath said...

ಶೆಟ್ಟರ,
ಮರಾಠಿ ಮಂದಿ ಕಡಿಂದ ಸರಿಯಾದ ಕನ್ನಡ ಉಚ್ಚಾರ ಮಾಡಿಸಿದ್ದು , ಖರೇವಂದ್ರೂ ದೊಡ್ಡ ಕೆಲಸ. ನನ್ನ ಕಾಕಾ ಒಬ್ಬಾತ, ಮಹಾರಾಷ್ಟ್ರದಾಗ ಸರ್ವೀಸ ಮಾಡಿ, retire ಆದ ಮ್ಯಾಲ ಇಲ್ಲಿ ಮರಳಿ ಬಂದಾನ. ಆತ ಪೆನ್ ಅನ್ನಲಿಕ್ಕೆ ಪೇನ್ ಅಂತಾನ.
"ಬ್ಯಾಡೊ ಮಹಾರಾಯಾ, pain ಮಾಡಬ್ಯಾಡ" ಅಂತ
ಎಷ್ಟು ಹೇಳಿದರೂ ಕೇಳವಲ್ಲ.
ಅಂದ ಮ್ಯಾಲ 'ಕೇಸರಿ' ಗವಿಯೊಳಗ ಕೂತುಕೊಂಡs ನೀವು ಅದಕ್ಕ ಕನ್ನಡ ಕಲಿಸೀರಿ ಅಂದರ, ನಿಮಗ ಅಭಿನಂದನೆ ಹೇಳಲೇ ಬೇಕು.
-ಕಾಕಾ

sunaath said...

ಕಟ್ಟಿಯವರೆ,
ಸರಿಯಾಗಿ ಹೇಳಿದಿರಿ.
ಸಂಸ್ಕೃತ ಭಾಷೆಯನ್ನು ಸತ್ತ ಭಾಷೆ ಎಂದು ಹೇಳುವವರೆ, ತದ್ಭವ ಹಾಗೂ ಅಪಭ್ರಂಶಗಳ ರೂಪದಲ್ಲಾದರೂ ಅನೇಕ ಸಂಸ್ಕೃತ ಪದಗಳನ್ನು ಉಪಯೋಗಿಸುತ್ತಾರಲ್ಲ, 'ಆಂಡಯ್ಯ'ನ ಹಾಗೆ!
ಭಾರತದ ಯೋಗ, ಸಂಸ್ಕೃತ ಭಾಷೆಗಳನ್ನು ವಿದೇಶೀಯರೇ
ಅಪ್ಪಿಕೊಳ್ಳುತ್ತಿರುವ ಸಂದರ್ಭದಲ್ಲಿ, ಇವರು ಅದರ ಜೀವಂತಿಕೆಯನ್ನು ಕಾಣದಿರುವದಕ್ಕೆ ಕುರುಡನ ಹಣೆಬರಹ ಎಂದು
ಕರೆಯಬೇಕಷ್ಟೆ!

sunaath said...

ಸತ್ಯಪ್ಪನವರೆ,
ಇದ್ದುದನ್ನು ಇದ್ದ ಹಾಗೆ ತೋರಿಸಿದ್ದೀರಿ.
ಧನ್ಯವಾದಗಳು.

Unknown said...

ಇಲ್ಲಿ ನೀವು ಬಳಸಿರೋ ಎಲ್ಲಾ ಸಕ್ಕದ ಒರೆಗಳಿಗೂ ಕನ್ನಡ ಒರೆಗಳಿವೆ. ನಿಮಗೆ ಗಂಡಸುತನವಿದ್ದರೆ ಎದೆಗಾರಿಕೆ ಇದ್ದರೆ ಅಚ್ಚಕನ್ನಡದ ಒರೆ ಬಳಸಿ ನಿಮ್ಮ ಕನ್ನಡ ಒಲವು ತೋರಿಸಿ. ನೀವು ಕನ್ನಡಿಗರೇ ಆಗಿರಬಹುದು. ಆದರೆ ನಿಮ್ಮ ಕನ್ನಡ ಒಲವು ಬರಿ ಸೋಗಲಾಡಿ. ಎಲ್ಲದಕ್ಕೂ ಕನ್ನಡದ ಪದ ಇದ್ದಾಗ್ಯೂ ಸಕ್ಕದ ಒರೆ ಬಳಸಬೇಕೆಂದು ಬೊಗಳುವುದು ನಿಮ್ಮ ರಣಹೇಡಿತನ ತೋರಿಸುತ್ತದೆ. ನಿಮಗೆ ಕನ್ನಡದೆಡೆಗೆ ಹಿರಿದಾದ ಒಲವಿರಬಹುದು ಆದರೆ ಅದಕ್ಕಿಂತ ಮೇಲಾಗಿ ನಿಮಗಿರುವುದು "ಕನ್ನಡ ಕೀಳು ಸಕ್ಕ ಮೇಲು" ಎಂಬ ಕೊಳಕು ಕೀಳರಿಮೆ. ಯಾವ ಸಕ್ಕ ಪಂಡಿತ 'ಷ' ಅನ್ನೋ ಪದವನ್ನು ಮೂಲ ಸಕ್ಕದಲ್ಲಿರುವಂತೆ ಉಲಿಯುತ್ತಾರೆ ತಿಳಿಸಿ. 'ಮುಖ್ಯಮಂತ್ರಿ'ಯಲ್ಲಿ ಬರುವ 'ಖ್ಯ' ಪದವನ್ನು ಯಾರು ಕನ್ನಡದಲ್ಲಿ ಉಲಿಯುತ್ತಾರೆ ತೋರಿಸಿ. ಹಾಗೇನಾದರು ನಿಮ್ಮ ಮಹಾಪ್ರಾಣಗಳನ್ನು ಬಾಯಲ್ಲಿ ಉಲಿಯುತ್ತ ಮಾತನಾಡಿದರೆ ತೇಟ್ ನಾಟಕ ಆಡೋರ ಮಾತಿನಂತೆ ಕಾಣಿಸುತ್ತೆ. ಇಲ್ಲವೆ ಪಂಡಿತತನ ತೋರಿಸುತ್ತೆ.

ಇದು ಕನ್ನಡ ಹುಟ್ಟಿ ಬೆಳೆದು ಬದುಕಿ ಬಂದರೀತಿ. ಕನ್ನಡ ಇರುವುದೇ ಹೀಗೆ. ನೀನು ಇನ್ನು ಸಾವಿರ ಏಡು(ವರ್ಷ) ತಿಪ್ಪರಲಾಗ ಹಾಕಿದರು ಬದಲಾಹಿಸಲಾಗದು. ಕನ್ನಡ ನುಡಿ ಇರುವುದೇ ಆಗೆ. ಇದ್ದದ್ದನ್ನು ಒಪ್ಪಿಕೊಳ್ಳುವ ಎದೆಗಾರಿಕೆ ನಿಮಗೆ ಇರಬೇಕು. ಕುರುಡು ಒಲವಿರಬಾರದು. ಅದಕ್ಕೆ ಗಂಡಸುತನ ಅಂತಾರೆ. ನನಗೆ ಈ ಪರಪಂಚದಲ್ಲಿರೋ ಬೇರೆ ಯಾವ ನುಡಿಗಳ ಬಗ್ಗೆ ಹಗೆತನವಿಲ್ಲ. ಆದರೆ ನಮ್ಮದು ಚಂದಾಗಿ ಇದ್ದಾಗಲು ಇನ್ನೊಂದು ಸಂದ ಅನ್ನೋ ತಿಕ್ಕಲು, ಅದೇ ಹೆಚ್ಚು ಅನ್ನೋ ಹುಚ್ಚು ಒಲವು, ಅದಕ್ಕೇ ಅಂಟಿ ಹೇಲು ಹಿಸುಗು ತನಕ್ಕೆ, ಅದೇ ಸರಿ ಅಂತ ಪಟ್ಟುಹಿಡಿದಿರೋರೆಡೆಗೆ ಸಹಿಸಲಾರದ ನಂಜಿದೆ. ಕನ್ನಡ ನುಡಿಗಳನ್ನು ಬಳಸುವುದು ಕೀಳಲ್ಲ. ಬಳಸಲೇ ಬೇಕು. ಸಕ್ಕ ಪಡೆದು ನಮ್ಮ ನುಡಿಯನ್ನು ಸಿಗಿಗೊಳಿಸುವುದು ತಪ್ಪಲ್ಲ. ಆದರೆ ಏಟಂತ ಬೇರೆ ಒರೆ ಬಳಸೋದು. ಅದಕ್ಕೊಂದು ಎಲ್ಲೆ ಇರಬೇಕೋ ಬ್ಯಾಡೋ? ಇದೊಂದೇ ಬರಹ ಸಾಕು ನಿಮ್ಮ ಸಕ್ಕದ ಅಡಿಯಾಳುತನ ತೋರಿಸಲು. ಲೆಕ್ಕ ಇಟ್ಟು ನೋಡಿ ನಿಮ್ಮ ಬರಹದಲ್ಲಿ ನೀವು ಬಳಸಿರೋ ಸಕ್ಕದ ಒರೆಗಳೇಸಿವೆ ಎಂದು. ತಮಿಳು ಇಂಬ್ಲೀಚು ಇನ್ಯಾದೋ ಬಾಸೇನ ಮೂದಲಿಸೋ ನೀವು, ಯಾಕೆ ಸಕ್ಕ ಬಳಸೋಕೆ ಅಟೊಂದು ಹಿಗ್ಗುಪಡುತೀರಿ. ಇದು ತಪ್ಪಲ್ಲೇನು? ಕಗ್ಗುವಾದದ ದಾರಿ ಹಿಡಿದು ಕನ್ನಡ ಹಾಳುಮಾಡಬೇಡಿರಿ.

ನಾವು ಬರೆಯೋ ನುಡಿ ನಮ್ಮ ಜನ ಮಾತನಾಡುವುದಕ್ಕೆ ಹತ್ತಿರ ಇರಬೇಕು. ಅದೇ ನುಡಿಯ ಜೀವಂತಿಕೆ. ಸಕ್ಕ ತುಂಬಾ ಸಿರಿ ನುಡಿ ಇದರಲ್ಲಿ ಎರಡು ಮಾತಿಲ್ಲ. ಆದರೆ ಬದಲಾಗದೇ ಗುಂಡುಕಲ್ಲಿನಂತೆ ಕೂತಿರೋ ಸಕ್ಕ ಜನಗಳ ಬಾಯಲ್ಲಿ ಉಲಿಯಲಾರದು. ನಿಂತನೀರಾಗಿ ನೀಸು ನಾತ ಹೊಡೆಯುತ್ತಿರುವುದು ಅದಕ್ಕೆ. ಕನ್ನಡದೆಡೆಗಿರುವ ನಿಮ್ಮ ಒಲವನ್ನು ಒರೆಯಿಟ್ಟು ನೋಡಿಕೊಳ್ಳಿ. ಆಮೇಲೆ "ಕನ್ನಡಂ ಗೇಳ್ಗೆ" ಎಂದೇಳಿರಂತೆ.

Unknown said...

@@@ ಶ್ರೀನಿವಾಸ್ ಕಟ್ಟಿಯವರೇ,
.........ಪ್ರೀಯ ಅನಾಮಧೇಯರೆ, ನಿಮ್ಮ ಅಭಿಪ್ರಾಯ ನಿಮಗೇ ಇರಲಿ. ಬಹಳ ತಮಾಸೆ-ಶೆ-ಷೆ ಯಾಗಿ ಬರೆಯುತ್ತೀರಪ್ಪ ! ನಿಮಗೆ "ಸ-ಶ-ಷ" ಗಳ ಭೇದ ಕಷ್ಟವೆಂದು ಕಾಣುತ್ತದಲ್ಲ ! "ಬೆಂಗಳೂರು" ಕನ್ನಡ ಶಬ್ದವೆಂದು ನಿಮಗಾರು ಹೇಳಿದರು ? ಬೆಂಗಳೂರು ಯಾವದೇ ಭಾಷೆಯಲ್ಲಿಯೂ ಬೆಂಗಳೂರು. ಇನ್ನು ನಾಲಿಗೆ ಸಪೂರವಿಲ್ಲದವರು 'ಬ್ಯಾಂಗ್ಲೂರ್'ಎಂದೂ ಹೇಳಬಹುದು...................

ಸುಮ್ಮ ಸುಮ್ಮನೆ ಒಡೆದ ಮಡಿಕೆ ತರ ಡೊಕ್ ಡೊಕ್ ಅಂತ ಬಣಗುಟ್ಟೋದು ಬ್ಯಾಡ. ನಾಲಿಗೆ ಸಪೂರ ಇಲ್ಲದೊರು ಅಂದ್ರೆ ಯಾರು? ನಿಮ್ಮದು ಸರಿ ಇದೆಯ? ಪ್ರತಿಯೊಂದು ನುಡಿಗು ತನ್ನಾದೇ ಆದ ಒಳರಚನೆ ಇದೆ. ಅದು ಆಡುವ ಮಾತಿಗೆ ಹೊಂದಿಕೊಂಡಿರುತ್ತೆ. ಮಹಾ ಪ್ರಾಣಗಳಾಗಲಿ, ಷ,ಋ ಗಳಲಾಗಲಿ ಕನ್ನಡದವು ಅಲ್ಲ. ಅವನ್ನು ಸಕ್ಕದಿಂದ ಹೊತ್ತು ತಂದಿದ್ದಾರೆ. ಸಕ್ಕದಲ್ಲಿ ಏನೆಲ್ಲ ಇದ್ದರೆ ನಮಗೇನಾಗಬೇಕು. ಅದರಲ್ಲಿರುವ ಒಳ್ಳೆಯದನ್ನು ಪಡೆಯೋಣ. ಅದಕ್ಕೆ ಆ ಬಾಸೆಯನ್ನಾಕೆ ಕಲಿಯಬೇಕು? ಅದರಲ್ಲಿರುವುದನ್ನು ಕನ್ನಡಕರಿಸಿ. ಎಲ್ಲರೂ ಸಕ್ಕ ಕಲಿತ ಕೂತರೆ ಮಾಡುವುದೇನು? ನಿಮ್ಮಂತ ಸಕ್ಕದ ಚಾರರು ಅದರಲ್ಲಿರುವುದನ್ನು ಕನ್ನಡಕ್ಕೆ ತರಲಾರರೇನು? ಕನ್ನಡದಲ್ಲಿ ನುಡಿಗಳಿಲ್ಲವೇನು ಸಕ್ಕದ ಒರೆಗೆ ಜೊತುಬೀಳುವುದಕ್ಕೆ?
ಸಕ್ಕ ಜೀವಂತ ಬಾಸೆಯಾಗಿದ್ದರೆ ಮರಾಠಿಯಾಕೆ ಹುಟ್ಟಿತು? ಪಂಜಾಬಿ, ಪ್ರಕೃತ, ಇನ್ನೂ ಮುಂತಾದವುಗಳು ಯಾಕೆ ಹುಟ್ಟಿದವು? ಇವೆಲ್ಲ ಸಕ್ಕದ ಹೊರೆ ತಾಳಲಾರದೆ ಹುಟ್ಟಿದ ಬಾಸೆ ನಿಮಗಿದು ನೆನಪಿರಲಿ. ಸಕ್ಕ ಆ ಜನ ಆಡುವ ಮಾತಿಗಿಂತ ಬೇರೆಯಾಗಿದ್ದರಿಂದನೇ ತಾನೆ ಹೊಸದಾಗಿ ಮರಠಿ, ಪಂಜಾಬಿ, ಪ್ರಾಕೃತ ಹುಟ್ಟಿಕೊಂಡಿದ್ದು?
ಬಡಾಯಿ ಕೊಚ್ಚಿಕೊಳ್ಳುವ ಮೊದಲು ಸರಿಯಾಗಿ ತಿಳಿದುಕೊಳ್ಳ ಬೇಕು. ಕುರುಡುಒಲವು ಒಳಿತಲ್ಲ. ಕನ್ನಡ ಬಡವೇನಲ್ಲ ಸಕ್ಕದಿಂದ ಆಸೊಂದು ಪದ ಹೊತ್ತು ತರಲಿಕ್ಕೆ. ಬ್ರಾಹ್ಮಣಾದಿ ಮೇಲ್ಜಾತಿಯ ಜನ ಮಾಡಿದ ಕೀಳು ಕೆಲಸ ಅದು. ಅದಕ್ಕೆ ಜೋತು ಬಿದ್ದ ನಿಮ್ಮಂತ ಇನ್ನೊಂದು ಹಿಂಡು. ಎದೆಯಲ್ಲಿ ಗುಂಡಿಗೆ ಇದ್ದರೆ ಸಕ್ಕದ ಒರೆ ಬಿಟ್ಟು ಕನ್ನಡದಲ್ಲಿ ಬರೆಯುವುದನ್ನು ಕಲಿತು ಕೊಳ್ಳಿ. ಈಗಿರುವ ಕೆಲವನ್ನು ಬಿಟ್ಟು ಎಲ್ಲಾ ಸಕ್ಕದ ಪದಗಳಿಗು ಕನ್ನಡ ನುಡಿ ಇದೆ. ರೆಪ್ಪೆತೆರೆದೊಮ್ಮೆ ನೋಡಿ. ಕುರುಡರಾಗಿ ಬದುಕಬೇಡಿ.

ಕನ್ನಾಡು ಕುವರ